Friday, September 2, 2016

ಕಾಶ್ಮೀರದ ಕಲ್ಲು, ಮಾಧ್ಯಮ ಮತ್ತು ಒಂದು ವಿಡಿಯೋ

   
      ಜುಲೈ 11ರಂದು ನ್ಯೂಸ್‍ಲಾಂಡ್ರಿ ಎಂಬ ಪ್ರಮುಖ ಅಂತರ್ಜಾಲ ಮಾಧ್ಯಮದಲ್ಲಿ, Kashmir Unrest: What Delhi and
Kashmiri media saw (ಕಾಶ್ಮೀರದ ಅಶಾಂತಿ: ದೆಹಲಿ ಮತ್ತು ಕಾಶ್ಮೀರಿ ಮಾಧ್ಯಮದಲ್ಲಿ ಕಾಣಿಸಿದ ವ್ಯತ್ಯಾಸ) ಎಂಬ ಶೀರ್ಷಿಕೆಯಲ್ಲಿ ಮನೀಶ್ ಪಾಂಡೆಯವರ ಲೇಖನ ಪ್ರಕಟವಾಯಿತು. ‘ಸ್ಥಳೀಯ ಮಾಧ್ಯಮವಿಲ್ಲದೆ ಹಿಂಸೆಯ ಇನ್ನೊಂದು ಭಾಗ ನಿಮಗೆ ಗೊತ್ತಾಗದು..’ ಎಂಬ ಅಡಿಬರಹವನ್ನೂ ಮನೀಶ್ ಪಾಂಡೆ ಆ ಲೇಖನಕ್ಕೆ ಕೊಟ್ಟಿದ್ದರು. ಜುಲೈ 14ರಂದು ಇಂಡಿಯಾ ಟುಡೇ ಟಿ.ವಿ. ಚಾನೆಲ್‍ನಲ್ಲಿ ಕಾಶ್ಮೀರದ ಬಗ್ಗೆ ವಿಶೇಷ ವರದಿಯೊಂದು ಪ್ರಸಾರವಾಯಿತು. ‘ಕಾಶ್ಮೀರಿ ಕಣಿವೆಯನ್ನು ಪ್ರಕ್ಷುಬ್ಧಗೊಳಿಸುವುದಕ್ಕೆ ಪಾಕ್‍ನಿಂದ 100 ಕೋಟಿ ರೂಪಾಯಿ ಯೋಜನೆ..’ ಎಂಬರ್ಥ ಬರುವ ಶೀರ್ಷಿಕೆಯಲ್ಲಿ ಪ್ರಸಾರವಾದ ಈ 20 ನಿಮಿಷದ ವರದಿಯನ್ನು ತಯಾರಿಸಿದ್ದು ಚಾನೆಲ್‍ನ ಸಂಪಾದಕ ಗೌರವ್ ಸಾವಂತ್. ಇದಾಗಿ ಒಂದು ತಿಂಗಳಾದ ಬಳಿಕ ಆಗಸ್ಟ್ 19ರ ಆವೃತ್ತಿಯಲ್ಲಿ ಫ್ರಂಟ್‍ಲೈನ್ ಪತ್ರಿಕೆಯು ‘ಕಾಶ್ಮೀರದ ಕ್ರೋಧ’ (Wrath of Kashmir) ಎಂಬ ಹೆಡ್‍ಲೈನ್‍ನೊಂದಿಗೆ ಮುಖ್ಯ ಲೇಖನವನ್ನು ಪ್ರಕಟಿಸಿತು.   ಒಂದು ತಿಂಗಳ ಅವಧಿಯೊಳಗೆ ಪ್ರಕಟವಾದ ಈ ಎರಡು ಲೇಖನಗಳು ಮತ್ತು ಒಂದು ಟಿ.ವಿ. ವರದಿಯನ್ನು ಇಲ್ಲಿ ಉಲ್ಲೇಖಿಸಲು ಮುಖ್ಯ ಕಾರಣ ಏನೆಂದರೆ, ಮಾಧ್ಯಮಗಳ ಮೇಲೆ ಈಗಾಗಲೇ ಇರುವ ಪಕ್ಷಪಾತದ ಆರೋಪ, ಶಂಕೆ, ಟಿ.ಆರ್.ಪಿ. ತೆವಲಿನ ಚರ್ಚೆಯನ್ನು ಒಂದಷ್ಟು ಮುಂದಕ್ಕೆ ಕೊಂಡೊಯ್ಯುವುದಕ್ಕೆ. ಜುಲೈ 14ರ ಇಂಡಿಯಾ ಟುಡೇ ಕಾರ್ಯಕ್ರಮದಲ್ಲಿ ಕಾಶ್ಮೀರದ ಪ್ರಕ್ಷುಬ್ಧ ಸ್ಥಿತಿಗೆ ಎರಡು ಮುಖ್ಯ ಅಂಶಗಳನ್ನು ಕಾರಣವಾಗಿ ಕೊಡಲಾಯಿತು.

 1. ಪಾಕಿಸ್ತಾನದ ಕೈವಾಡ         
 2. ನಿರುದ್ಯೋಗ.
        ಇದೇ ವರದಿಯ ಆಧಾರದಲ್ಲಿ ಇನ್ನೆರಡು ಕಾರ್ಯಕ್ರಮಗಳೂ ಪ್ರಸಾರವಾದುವು. ಒಂದು, ಇದೇ ಚಾನೆಲ್‍ನಲ್ಲಿ ರಾಹುಲ್ ಕನ್ವಲ್ ನಡೆಸಿ ಕೊಡುವ ‘ನ್ಯೂಸ್‍ರೂಂ’ ಕಾರ್ಯ ಕ್ರಮವಾದರೆ ಇನ್ನೊಂದು, ಆಜ್‍ತಕ್ ಚಾನೆಲ್ ಈ ಕುರಿತಂತೆ ಚರ್ಚೆಯನ್ನು ಏರ್ಪಡಿಸಿತು. ಈ ಮೂರಕ್ಕೂ ಇವು ಪುರಾವೆಯಾಗಿ ತೋರಿಸಿದ್ದು ಒಂದು ವೀಡಿಯೋ. ಬನಿಯನ್ ಧರಿಸಿರುವ ಓರ್ವ ಹದಿಹರೆಯದ ಯುವಕ ಕ್ಯಾಮರಾದ ಮುಂದೆ ಕಾಣಿಸಿಕೊಳ್ಳುತ್ತಾನೆ. ಮುಖದಲ್ಲಿ ಭಯವೋ ಆತಂಕವೋ ಏನೋ ಮಡುಗಟ್ಟಿರುವಂತೆ ಕಾಣಿಸುತ್ತದೆ. ಸೈನಿಕರ ವಿರುದ್ಧ ಕಲ್ಲೆಸೆಯುವುದಕ್ಕೆ ತನಗೆ ಹಣ ನೀಡಲಾಗಿದೆ ಎಂದು ಆತ ಹೇಳುತ್ತಾನೆ. ಯಾರು ಎಂಬ ಪ್ರಶ್ನೆಗೆ, ಸಯ್ಯದ್ ಅಲೀ ಶಾ ಗೀಲಾನಿ ಎನ್ನುತ್ತಾನೆ. ತಲಾ 500 ರೂಪಾಯಿಯಂತೆ ಕೊಟ್ಟು ಅವರು ಕಲ್ಲೆಸೆತಕ್ಕೆ ನಿಯೋಜಿಸಿದ್ದಾರೆ ಎಂದು ಆತ ಹೇಳುತ್ತಾನೆ.
    ಇಲ್ಲಿಗೇ ಮುಗಿಯುವುದಿಲ್ಲ.
ಆ ಪುಟ್ಟ ವೀಡಿಯೋದ ಬಗ್ಗೆ ಅನುಮಾನಗೊಂಡ ಮನೀಶ್ ಪಾಂಡೆ ಮತ್ತು ಸುಹೈಲ್ ಶಾ ಎಂಬ ನ್ಯೂಸ್‍ಲಾಂಡ್ರಿ ಅಂತರ್ಜಾಲ ಪತ್ರಿಕೆಯ ಪತ್ರಕರ್ತರಿಬ್ಬರು ಸತ್ಯಶೋಧನೆಗೆ ಮುಂದಾಗುತ್ತಾರೆ. ಆ ವೀಡಿಯೋ ಪ್ರಸಾರದ ಮೊದಲು ಇಂಡಿಯಾ ಟುಡೇ ಚಾನೆಲ್ ಪರಿಶೀಲನೆ ನಡೆಸಿದೆಯೇ, ವೀಡಿಯೋದ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿಕೊಂಡಿದೆಯೇ ಎಂದು ಅನ್ವೇಷಣೆ ನಡೆಸುತ್ತಾರೆ. ಸಿಆರ್‍ಪಿಎಫ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಯಾದವ್‍ರನ್ನು ಭೇಟಿಯಾಗುತ್ತಾರೆ. ಪಟ್ಟು ಬಿಡದ ಸತ್ಯಶೋಧನೆಯಿಂದ ಅವರು ಕಂಡುಕೊಂಡ ಸತ್ಯ ಇಷ್ಟು -
1.    ಆ ವೀಡಿಯೋ ತುಂಬಾ ಹಳೆಯದು. 8 ವರ್ಷಗಳಷ್ಟು ಹಳೆಯದು.
2.    ಆ ವೀಡಿಯೋದಲ್ಲಿರುವ ಹೇಳಿಕೆ ಕೂಡ ನಕಲಿ. ಆ ಹದಿಹರೆಯದ ಯುವಕ ಹೇಳಿಕೆ ಕೊಟ್ಟದ್ದು ಸ್ವಇಚ್ಛೆಯಿಂದಲ್ಲ. ಪೊಲೀಸರ ಹಿಂಸೆಯನ್ನು ತಾಳಲಾರದೇ ಬಲವಂತದಿಂದ ಆ ಹೇಳಿಕೆಯನ್ನು ಕೊಟ್ಟಿದ್ದ.
       ನಿಜವಾಗಿ, ಆ ವೀಡಿಯೋದಲ್ಲಿ ಕಾಣಿಸಿಕೊಂಡ ಯುವಕನ ಹೆಸರು ಬಿಲಾಲ್ ಅಹ್ಮದ್ ಡರ್. ಶ್ರೀನಗರದ ಪರ್‍ಪೋರಾ ಎಂಬ ಊರಿನ ಈ ಯುವಕನಲ್ಲಿ ಮನಮಿಡಿಯುವ ನೆನಪೊಂದಿದೆ. 2008ರಲ್ಲಿ (ಆಗ ಈತನಿಗೆ 19 ವರ್ಷ) ಅಮರನಾಥ ದೇವಾಲಯದ ಭೂಮಿಯ ಕುರಿತು ವಿವಾದವೊಂದು ತಲೆದೋರಿತ್ತು. ಪ್ರತಿಭಟನೆ ಏರ್ಪಟ್ಟಿತ್ತು. ಆವತ್ತು ಬಿಲಾಲ್ ಔಷಧ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ. ಪ್ರತಿಭಟನೆಯ ಕಾರಣದಿಂದಾಗಿ ರಿಸರ್ವ್ ಪೊಲೀಸ್ ತುಕಡಿಗಳು ಅಲ್ಲಲ್ಲಿ ಜಮಾವಣೆಯಾಗಿತ್ತು. ಬಿಲಾಲ್ ತನ್ನ ಗೆಳೆಯನ ಬೈಕ್‍ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ಹೊರಟಿದ್ದ. ಪ್ರತಿಭಟನಾಕಾರರ ಗುಂಪನ್ನು ಕಂಡು ಗೆಳೆಯ ಬೈಕ್ ನಿಧಾನಿಸಿದ. ಪೊಲೀಸರು ಹತ್ತಿರ ಬರುವುದನ್ನು ಕಂಡು ಹೆದರಿದ ಆತ ಬೈಕ್ ಬಿಟ್ಟು ಓಡಿದ. ಓಡಲಾಗದ ಬಿಲಾಲ್‍ನ ಮೇಲೆ ಓರ್ವ ಪೊಲೀಸ್ ಲಾಠಿ ಬೀಸಿದ. ಕೈ ಮುರಿಯಿತು. ಬಿಲಾಲ್‍ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತಲ್ಲದೇ, ಸುಮಾರು ಮೂರೂವರೆ ಗಂಟೆಗಳ ಕಾಲ ತೀವ್ರ ಹಿಂಸೆ, ದೌರ್ಜನ್ಯ ಎಸಗಲಾಯಿತು. ಬಳಿಕ ಆತನ ಶರ್ಟ್ ಹರಿದು ಮುರಿದ ಕೈಯನ್ನು ಪೊಲೀಸರು ಎತ್ತಿ ಕಟ್ಟಿದರು. ಆತನ ಎದುರಿಗೆ ವೀಡಿಯೋ ಕ್ಯಾಮರಾ ತಂದರು. ಪೊಲೀಸರು ಹೇಳಿಕೊಟ್ಟಂತೆಯೇ ಕ್ಯಾಮರಾದ ಮುಂದೆ ಹೇಳಬೇಕೆಂದು ಬಲವಂತಪಡಿಸಿದರು. ಒಪ್ಪದಿದ್ದಾಗ ದೌರ್ಜನ್ಯ ನಡೆಸಿದರು. ಆ ಹಿಂಸೆಯಿಂದ ಪಾರಾಗುವುದಕ್ಕಾಗಿ ವೀಡಿಯೋದ ಮುಂದೆ ಅವರು ಹೇಳಿ ಕೊಟ್ಟ ವಿಷಯಗಳನ್ನು ಆತ ಹೇಳಿದ್ದ. ಅಲೀಷಾ ಗೀಲಾನಿಯವರು ಪೊಲೀಸರ ವಿರುದ್ಧ ಕಲ್ಲೆಸೆಯಲು ಹಣ ನೀಡಿದ್ದಾರೆ.. ಎಂದೆಲ್ಲಾ ಹೇಳಿದ್ದು ಹೀಗೆ.
ಶ್ರೀನಗರದ ಲಾಲ್‍ಚೌಕ್‍ನಲ್ಲಿರುವ ಕೆಳಕೋರ್ಟ್‍ನಲ್ಲಿ ಒಂದೂ ವರೆ ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಯಿತು. ಕೊನೆಗೆ ಕೋರ್ಟ್ ಬಿಲಾಲ್‍ನನ್ನು ದೋಷಮುಕ್ತಗೊಳಿಸಿತು. ಆದರೆ ಕಾಶ್ಮೀರ ಪ್ರಕ್ಷುಬ್ಧಗೊಂಡಾಗಲೆಲ್ಲ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ಯುತ್ತಾರೆ. ವಿಚಾರಣೆ ನಡೆಸುತ್ತಾರೆ. ಇಂಡಿಯಾ ಟುಡೇಯಂಥ ಚಾನೆಲ್‍ಗಳು ತಮ್ಮ ಟಿ.ಆರ್.ಪಿ.ಯ ಉ ದ್ದೇಶ ದಿಂದಲೋ ಅಥವಾ ಇನ್ನಾವ ಕಾರಣದಿಂದಲೋ ಪ್ರಸಾರ ಮಾಡಿ ಕೈತೊಳೆದುಕೊಳ್ಳುವಾಗ ಬಿಲಾಲ್‍ನಂಥವರಿಗೆ ಅದನ್ನು ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಾಗುವುದಿಲ್ಲ. ಅಷ್ಟಕ್ಕೂ,

       ಮಾಧ್ಯಮ ಹೊಣೆಗಾರಿಕೆ ಅಂದರೇನು? ತನಗೆ ಸಿಕ್ಕ ವೀಡಿಯೋವನ್ನು ವರದಿಗೆ ಪೂರಕವಾಗಿ ಬಳಸಿಕೊಳ್ಳುವಾಗ ವಹಿಸಿಕೊಳ್ಳಬೇಕಾದ ಎಚ್ಚರಿಕೆಗಳು ಮುಖ್ಯವಾಹನಿಯಲ್ಲಿ ಗುರುತಿಸಿ ಕೊಂಡಿರುವ ಇಂಡಿಯಾ ಟುಡೇಗೆ ಗೊತ್ತಿಲ್ಲವೇ? ವೀಡಿಯೋದ ಮೂಲವನ್ನು ಸ್ಪಷ್ಟಪಡಿಸಿಕೊಳ್ಳದೆಯೇ ವರದಿಗೆ ಆಧಾರವಾಗಿ ಬಳಸಿಕೊಳ್ಳುವುದು ಯಾವ ಬಗೆಯ ನೈತಿಕತೆ? ಈ ಪ್ರಶ್ನೆ ಚಾನೆಲ್ ನಿರೂಪಕಿ ಪದ್ಮಜ ಜೋಶಿಯವರಿಗೂ ಎದುರಾಯಿತು. ವೀಡಿಯೋದ ಅಸಲಿತನವನ್ನು ಖಚಿತಪಡಿಸಿಕೊಳ್ಳಲು ತಮಗೆ ಸಾಧ್ಯವಾಗಿಲ್ಲ ಎಂದವರು ಒಪ್ಪಿಕೊಂಡರು. ನಿಜ ಏನೆಂದರೆ, ಆ ವೀಡಿಯೋವನ್ನು ಒದಗಿಸಿದ್ದೇ ವ್ಯವಸ್ಥೆ. ಕಾಶ್ಮೀರದಲ್ಲಿ ಪ್ರತಿಭಟನೆ ತೀವ್ರತೆಯನ್ನು ಪಡೆಯುತ್ತಿರುವುದನ್ನು ಕಂಡು 8 ವರ್ಷಗಳ ಹಿಂದಿನ ನಕಲಿ ವೀಡಿಯೋವನ್ನು ಸದ್ದಿಲ್ಲದೇ ಬಿಡುಗಡೆಗೊಳಿಸುವ ಏರ್ಪಾಟು ನಡೆಯಿತು. ಜವಾಬ್ದಾರಿ ಮರೆತ ಮಾಧ್ಯಮಗಳು ಸಮಾಜವನ್ನು ಹೇಗೆ ದಿಕ್ಕು ತಪ್ಪಿಸಬಹುದು ಎಂಬುದಕ್ಕೆ ಪುರಾವೆ ಇದು. ನ್ಯೂಸ್‍ಲಾಂಡ್ರಿ ಅಂತರ್ಜಾಲ ತಾಣವು ಇದನ್ನುIndia Today and the curious case of the stone pelters confession (ಇಂಡಿಯಾ ಟುಡೇ ಮತ್ತು ಕಲ್ಲೆಸೆತಗಾರರ ಕುತೂಹಲಕಾರಿ ತಪ್ಪೊಪ್ಪಿಗೆ) ಎಂಬ ಶೀರ್ಷಿಕೆಯಲ್ಲಿ ವಿಸ್ತೃತವಾಗಿ ವಿವರಿಸಿತು. ಒಂದು ರೀತಿಯಲ್ಲಿ, ಸುಮಾರು ಎರಡು ತಿಂಗಳಿನಿಂದ ಕರ್ಫ್ಯೂ ವಿಧಿಸಿಕೊಂಡು ಜರ್ಝರಿತವಾಗಿರುವ ಕಾಶ್ಮೀರವನ್ನು ಮುಖ್ಯವಾಹಿನಿಯ ಮಾಧ್ಯಮಗಳು ನೋಡಿದ್ದು ಬಹುತೇಕ ಸರಕಾರಿ ಕಣ್ಣಲ್ಲೇ. ಕಾಶ್ಮೀರದ ಸ್ಥಳೀಯ ಪತ್ರಿಕೆ ಮತ್ತು ದೆಹಲಿ ಕೇಂದ್ರಿತ ಮುಖ್ಯವಾಹಿನಿ ಪತ್ರಿಕೆಗಳ ಸುದ್ದಿ ಮತ್ತು ವರದಿಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಶುಜಾಅತ್ ಬುಖಾರಿಯವರು ಫ್ರಂಟ್‍ಲೈನ್ ಪತ್ರಿಕೆಯಲ್ಲಿ ಕಾಶ್ಮೀರದ ಕ್ರೋಧ (Wrath of Kashmir) ಎಂಬ ಹೆಸರಲ್ಲಿ ಬರೆದ ಲೇಖನದಲ್ಲಿ ಕಾಶ್ಮೀರದ ಈಗಿನ ಅಶಾಂತಿಗೆ ಕೊಡುವ ಕಾರಣ ಒಂದೇ- ಗೌರವಾರ್ಹವಾಗಿ ಬದುಕಲು ಬಿಡಿ ಎಂಬುದು. ಇಂಡಿಯಾ ಟುಡೇಯ ಗೌರವ್ ಸಾವಂತ್ ಪಟ್ಟಿ ಮಾಡಿರುವ - ಪಾಕ್ ಕೈವಾಡ ಮತ್ತು ನಿರುದ್ಯೋಗ ಎಂಬೆರಡು ಕಾರಣಗಳಿಗೆ ಇದನ್ನು ಹೋಲಿಸಿದರೆ, ಶುಜಾಅತ್ ನಿಲುವು ಸಂಪೂರ್ಣ ವಿರುದ್ಧ. ಸಾವಂತ್ ದೆಹಲಿ ಕೇಂದ್ರಿತ ಪತ್ರಕರ್ತರಾದರೆ ಶುಜಾಅತ್ ಕಾಶ್ಮೀರಿ ಪತ್ರಕರ್ತ. ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ. ಸಾವಂತ್‍ಗಿಂತ ಹೆಚ್ಚು ಶುಜಾಅತ್‍ಗೆ ಕಾಶ್ಮೀರ ಗೊತ್ತಿದೆ. ಅಲ್ಲಿನ ಜನರು, ಜೀವನದ ಅನುಭವವಿದೆ. ಮುಖ್ಯ ವಾಹಿನಿಯ ಮಾಧ್ಯಮಗಳ ಸಮಸ್ಯೆ ಏನೆಂದರೆ, ಅವು ಕಾಶ್ಮೀರದಿಂದ ಬರುವ ಸುದ್ದಿಯನ್ನು ಅಷ್ಟೇ ತೀವ್ರತೆಯೊಂದಿಗೆ ಪರಿಗಣಿಸುವ ಸಂದರ್ಭಗಳು ಕಡಿಮೆ ಇರುತ್ತವೆ. ದೆಹಲಿಯ ರಾಜಕೀಯ ಹಿತಾಸಕ್ತಿಗಳು ಸುದ್ದಿಯ ಮೇಲೆ ಕೈಯಾಡಿಸುವಂತೆ ಒತ್ತಾಯಿಸುತ್ತವೆ. ಸೇನೆಯ ಪೆಲೆಟ್ ದಾಳಿಗಿಂತಲೂ ಜನರ ಕಲ್ಲೆಸೆತವನ್ನೇ ಪ್ರಮುಖ ಸುದ್ದಿಯಾಗಿಸುವುದರಲ್ಲಿ ರಾಜಕೀಯ ಮತ್ತು ಆರ್ಥಿಕ ಸುಖವೂ ಸಿಗುತ್ತದೆ. ಕಾಶ್ಮೀರ ಮತ್ತು ದೆಹಲಿಯ ನಡುವೆ ಎಷ್ಟು ಅಂತರ ಇದೆಯೋ ಅಷ್ಟೇ ಅಂತರವು ಸುದ್ದಿಗಳಿಗೆ ಸಿಗುವ ಪ್ರಾಮುಖ್ಯತೆಯಲ್ಲೂ ಕಾಣಿಸುತ್ತದೆ. ಆದರೆ, ಸ್ಥಳೀಯ ಪತ್ರಿಕೆಗಳ ಮಟ್ಟಿಗೆ ಈ ಸಮಸ್ಯೆಯಿರುವುದಿಲ್ಲ. ಅವು ಸ್ಥಳೀಯವೇ ಆಗಿರುವುದರಿಂದ ಕಲ್ಲು ಮತ್ತು ಪೆಲೆಟ್‍ಗಳ ಸಾಮರ್ಥ್ಯವನ್ನು ಅವು ಚೆನ್ನಾಗಿಯೇ ತಿಳಿದಿರುತ್ತವೆ. ಅವುಗಳ ಮೇಲೆ ರಾಷ್ಟ್ರೀಯ ಮಾಧ್ಯಮ ಎಂಬ ಕೊಂಬೂ ಇರುವುದಿಲ್ಲ. ಕಾಶ್ಮೀರದ ಪ್ರಕ್ಷುಬ್ಧತೆಯನ್ನು ಮುಖ್ಯವಾಹಿನಿಯ ಮಾಧ್ಯಮಗಳಿಗಿಂತ ಹೆಚ್ಚು ಅವು ಅನುಭವಿಸಿರುವುದರಿಂದಾಗಿ ಮುಖಪುಟದಲ್ಲಿ ಕಲ್ಲೆಸೆತದ ಸುದ್ದಿ ಬರಬೇಕೋ ಅಥವಾ ಪೆಲೆಟ್‍ನಿಂದ ಕಣ್ಣು ಕಳಕೊಂಡವರ ಸುದ್ದಿ ಬರಬೇಕೋ ಎಂಬ ಸಂದಿಗ್ಧ ಎದುರಾಗುವುದಿಲ್ಲ. ಕಾಶ್ಮೀರದ, `ಗ್ರೇಟರ್ ಕಾಶ್ಮೀರ್', `ರೈಸಿಂಗ್ ಕಾಶ್ಮೀರ್', `ಕಾಶ್ಮೀರ್ ಒಬ್ಸರ್ವರ್' ಮುಂತಾದ ಸ್ಥಳೀಯ ಪತ್ರಿಕೆಗಳನ್ನು
ಬಿಲಾಲ್ ಅಹ್ಮದ್ ಡರ್
ಮುಖ್ಯವಾಹಿನಿಯ ಪತ್ರಿಕೆಗಳಾದ ದಿ ಹಿಂದೂ, ಇಂಡಿಯನ್ ಎಕ್ಸ್ ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಜೊತೆ ಇಟ್ಟು ನೋಡುವಾಗ ವ್ಯಕ್ತವಾಗುವ ಅನುಭವ ಇದು. `ಕಾಶ್ಮೀರ್ ಬ್ಲೀಡ್ಸ್' (ಕಾಶ್ಮೀರ ರಕ್ತ ಸುರಿಸುತ್ತಿದೆ) ಎಂಬ ಯಾರನ್ನೂ ನೋಯಿಸದ ಆದರೆ ಅತ್ಯಂತ ಭಾವುಕಗೊಳಿಸುವ ಶೀರ್ಷಿಕೆಯನ್ನು ಸ್ಥಳೀಯ ಗ್ರೇಟರ್ ಕಾಶ್ಮೀರ್‍ನಂಥ ಪತ್ರಿಕೆಗಳಿಂದ ನಿರೀಕ್ಷಿಸಬಹುದೇ ಹೊರತು, Fresh Violence: 5 Dead (ಹಿಂಸೆ: 5 ಸಾವು) ಎಂಬ ನಿರ್ಭಾವುಕ ಮತ್ತು ಜನರನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ರಾಷ್ಟ್ರೀಯ ಪತ್ರಿಕೆಗಳಿಂದಲ್ಲ. ನಿಜವಾಗಿ, ಕಾಶ್ಮೀರವನ್ನು ಕಾಶ್ಮೀರದ ಹೊರಗಿನ ಭಾರತವು ಇವತ್ತಿಗೂ ಅಸೂಯೆ ಮತ್ತು ದ್ವೇಷದಿಂದ ನೋಡುವಂಥ ವಾತಾವರಣ ಇದೆ. ಕಾಶ್ಮೀರದಿಂದ ಹೊರಗಿನವರಿಗೆ ಕಾಶ್ಮೀರದಲ್ಲಿ ಭೂಮಿ ಖರೀದಿಸುವುದಕ್ಕೆ ಅವಕಾಶ ಇಲ್ಲ ಎಂದು ದೂರುವುದಿದೆ. ಹೀಗೆ ದೂರುವಾಗಲೂ ಇಂಥದ್ದೇ ನಿಯಮ ಅಂಡಮಾನ್- ನಿಕೋಬಾರ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‍ಗಳಲ್ಲೂ ಇವೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಇಲ್ಲೂ ಹೊರಗಿನವರಿಗೆ ಭೂಮಿ ಖರೀದಿಸುವುದಕ್ಕೆ ಅವಕಾಶ ಇಲ್ಲ. 370ನೇ ವಿಧಿಯನ್ನು ರದ್ದುಪಡಿಸುವುದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ವಾದಿಸುವವರೂ ಇದ್ದಾರೆ. ನಿಜವಾಗಿ, 370ನೇ ವಿಧಿಗೂ ಈ ಭೂಮಿ ಖರೀದಿಗೂ ಯಾವ ಸಂಬಂಧವೂ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲೇ ಈ ನಿಯಮ ಕಾಶ್ಮೀರದಲ್ಲಿ ಜಾರಿಯಲ್ಲಿತ್ತು. ತನ್ನ ಪ್ರತ್ಯೇಕತೆಯನ್ನು ಹಾಗೆಯೇ ಉಳಿಸಿಕೊಂಡು ಭಾರತದೊಂದಿಗೆ ಸೇರ್ಪಡೆಗೊಳ್ಳುವ ಷರತ್ತಿನ ಒಪ್ಪಂದವೇ 370ನೇ ವಿಧಿ. ಅದು ಭೂಮಿ ಖರೀದಿ ಒಪ್ಪಂದ ಅಲ್ಲ. ಈ ವಿಧಿಯನ್ನು ರದ್ದುಗೊಳಿಸುವುದೆಂದರೆ ಭಾರತದೊಂದಿಗೆ ಸೇರ್ಪಡೆಗೊಂಡುದನ್ನೇ ರದ್ದುಗೊಳಿಸಿದಂತೆ. ಆದರೆ, ಕಾಶ್ಮೀರಕ್ಕೆ ಸಂಬಂಧಿಸಿ ಕಾಶ್ಮೀರಿಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸುದ್ದಿಗಳೇ ಪ್ರಾಬಲ್ಯ ಪಡೆಯುತ್ತಿವೆ.
         ಇಂಡಿಯಾ ಟುಡೆ ಪ್ರಸಾರ ಮಾಡಿದ ವೀಡಿಯೋ ಅದಕ್ಕೊಂದು ಉದಾಹರಣೆ ಅಷ್ಟೇ.
      





No comments:

Post a Comment