Wednesday, July 13, 2016

ಎರಡು ಉಗ್ರ ನಿಲುವುಗಳಾಚೆ- ಝಾಕಿರ್ ನಾಯ್ಕ್ ಏನು?

      'ದೊಗಳೆ ಕೋಟು-ಪ್ಯಾಂಟು, ಅಡ್ಡಾದಿಡ್ಡಿ  ಗಡ್ಡ, ರಿಂಗ್ ಮಾಸ್ಟರ್ ಫೋಸು, ಬಾಲಿವುಡ್ ಹೀರೋನಂತೆ ವೇದಿಕೆಗೆ ಪ್ರವೇಶ, ಭಯೋತ್ಪಾದಕ ಗುರು..' ಎಂಬಲ್ಲಿಂದ ಹಿಡಿದು,
  'ಜ್ಞಾನದ ಸಾಗರ, ಪರ್ಯಾಯವಿಲ್ಲದ ಪ್ರವಚನಕಾರ, ಕುರ್‍ಆನನ್ನು ಕಲಸಿ ಕುಡಿದ ಮಹಾನ್, ಅವರನ್ನು ಟೀಕಿಸುವುದೆಂದರೆ ಕುರ್‍ಆನನ್ನೇ ಟೀಕಿಸಿದಂತೆ...'
         ಎಂಬಲ್ಲಿ ವರೆಗಿನ ಎರಡು ಉಗ್ರ ಅಭಿಪ್ರಾಯಗಳಾಚೆ- ಝಾಕಿರ್ ನಾಯ್ಕ್ ಏನು ಮತ್ತು ಹೇಗೆ? ಈ ಮೇಲಿನ ಉಗ್ರವಾದಗಳ ಹೊರಗೆ ನಿಲ್ಲಿಸಿ ನೋಡಿದರೆ, ಝಾಕಿರ್ ನಾಯ್ಕ್ ಹೇಗೆ ಕಾಣಿಸುತ್ತಾರೆ? ಉಗ್ರ ನಕಾರಾತ್ಮಕತೆ ಮತ್ತು ಉಗ್ರ ಸಕಾರಾತ್ಮಕತೆಯ ನಡುವಿನಲ್ಲೊಂದು ದಾರಿಯಿದೆಯಲ್ಲ, ಅಲ್ಲಿ ಗುರುತಿಸಿಕೊಳ್ಳುವ ಯೋಗ್ಯತೆ ಝಾಕಿರ್ ನಾಯ್ಕ್ ರಿಗೆ ಇದೆಯೇ? ಅವರ ಮೇಲಿನ ಆರೋಪಗಳಲ್ಲಿ ಎಷ್ಟು ಕಾಳಿದೆ ಮತ್ತು ಎಷ್ಟು ಜೊಳ್ಳಿದೆ? 'Ban Peace TV, arrest Zakir Naik- mentor of Dhaka attack Killers’ ಎಂಬ ಶೀರ್ಷಿಕೆಯಲ್ಲಿ ಮತ್ತು Indian Media :Stop the Vilification Campaign against Dr. Zakir Naik'  ಎಂಬ ಶೀರ್ಷಿಕೆಯಲ್ಲಿ ಜುಲೈ 7ರಂದು ಹುಟ್ಟು ಹಾಕಲಾದ ಝಾಕಿರ್ ನಾಯ್ಕ್ ಅವರ ಪರ ಮತ್ತು ವಿರುದ್ಧದ ಎರಡು ಆನ್‍ಲೈನ್ ಪಿಟಿಷನ್‍ಗಳನ್ನೇ ಎತ್ತಿಕೊಳ್ಳಿ ಅಥವಾ ಫೇಸ್‍ಬುಕ್, ಟ್ವಿಟರ್‍ಗಳಲ್ಲಿ ತುಂಬಿಕೊಂಡಿರುವ ಪ್ರತಿಕ್ರಿಯೆಗಳನ್ನೇ ಪರಿಶೀಲಿಸಿ. ಅವೇನು ಕಮ್ಮಿ ಉಗ್ರಗಾಮಿಯೇ? ಝಾಕಿರ್ ನಾಯ್ಕ್ ರ ಪರ ಅಥವಾ ವಿರುದ್ಧ ಇರುವವರನ್ನೆಲ್ಲ ಉಡಾಯಿಸಿ ಬಿಡಬೇಕೆಂಬಷ್ಟು ಕೋಪ-ತಾಪ ಅವುಗಳಲ್ಲಿ ಕಾಣುತ್ತಿರುವುದನ್ನು ಹೇಗೆ ವಿಶ್ಲೇಷಿಸಬಹುದು? ಈ ಉಗ್ರಗಾಮಿತ್ವದ ಹುಟ್ಟು ಎಲ್ಲಿ? ಪ್ರಧಾನಿ ನರೇಂದ್ರ ಮೋದಿಯವ ರನ್ನು ಅತ್ಯಂತ ಮಾನ್ಯ ಭಾಷೆಯಲ್ಲಿ ಮತ್ತು ಅತ್ಯಂತ ತರ್ಕಬದ್ಧ ನೆಲೆಯಲ್ಲಿ ಟೀಕಿಸಿ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದರೂ ಸಿಗುವ ಪ್ರತಿಕ್ರಿಯೆಗಳ ಭಾಷೆ, ವ್ಯಾಕರಣ, ಪದ ಬಳಕೆ, ವಾದ ಸ್ವರೂಪ... ಎಲ್ಲದರಲ್ಲೂ ವೈವಿಧ್ಯತೆ ಇರುತ್ತದೆ. ಕೆಲವು ಅತ್ಯಂತ ನಿಂದನಾತ್ಮಕವಾಗಿದ್ದರೆ ಇನ್ನು ಕೆಲವು ಬೆದರಿಕೆಯ ದಾಟಿಯಲ್ಲಿರುತ್ತದೆ. ಕೆಲವು ಪ್ರತಿಕ್ರಿಯೆಗಳು ‘ಬಿನ್ ಲಾಡೆನ್’ನನ್ನೂ ನಾಲಾಯಕ್ಕು ಗೊಳಿಸುವಷ್ಟು ಉಗ್ರವಾಗಿರುತ್ತದೆ. ಹೆಚ್ಚಿನವು ಓದಬಲ್ಲಷ್ಟು ಚೆನ್ನಾಗಿರುತ್ತವೆ. ಕೆಲವರು ಇನ್‍ಬಾಕ್ಸ್ ನಲ್ಲಿ ಜೀವ ಬೆದರಿಕೆಯ ಸಂದೇಶ ರವಾನಿಸುವುದೂ ಇದೆ. ಒಂದೇ ಸ್ಟೇಟಸ್. ಆದರೆ ಹತ್ತಾರು ಬಗೆಯ ಪ್ರತಿಕ್ರಿಯೆಗಳು! ಇದನ್ನು ಹೇಗೆ ವಿಶ್ಲೇಷಣೆಗೆ ಒಳಪಡಿಸಬಹುದು? ತೀರಾ ಗೌರವಾರ್ಹ ಭಾಷೆಯಲ್ಲಿ ಬರೆಯಲಾದ ಸ್ಟೇಟಸ್‍ಗೂ ಓದುಗನಿಂದ ಜೀವ ಬೆದರಿಕೆಯ ಪ್ರತಿಕ್ರಿಯೆ ಸಿಗುತ್ತದೆಂದಾದರೆ, ಆ ಉಗ್ರ ಮನಸ್ಥಿತಿಯ ಹುಟ್ಟು ಎಲ್ಲಿ? ಈ ಸ್ಟೇಟಸ್‍ನ ಹೊರಗೆ ಇನ್ನಾವುದೋ ಆತನನ್ನು ಹಾಗೆ ತಯಾರುಗೊಳಿಸಿದೆ ಎಂದೇ ಅದರರ್ಥವಲ್ಲವೇ? ನಿಜವಾಗಿ, ಈ ಸ್ಟೇಟಸ್ ಒಂದು ನೆಪ ಮಾತ್ರ. ಅದಕ್ಕಿಂತ ಮೊದಲೇ ಅವರನ್ನು ಹಾಗೆ ಕೆರಳಿಸಿ ಅದಕ್ಕೆ ಸಿದ್ಧಗೊಳಿಸಲಾಗಿದೆ. ಝಾಕಿರ್ ನಾಯ್ಕ್ ರ ಮೇಲಿನ ಆರೋಪಗಳ ಸ್ಥಿತಿಯೂ ಇದುವೇ ಆಗಿದೆಯೇ? ಅವರ ಮೇಲೆ ಹೊರಿಸಲಾಗಿರುವ ಆರೋಪಗಳು ಎಷ್ಟು ತರ್ಕಬದ್ಧ? ಢಾಕಾದ ಹೋಲಿ ಆರ್ಟಿಸನ್ ಬೇಕರಿ ಮೇಲಿನ ದಾಳಿಯಲ್ಲಿ ಭಾಗಿಯಾದ ರೋಹನ್ ಇಮ್ತಿಯಾಝ್ ಮತ್ತು ನಿಬ್ರಸ್ ಇಸ್ಲಾಮ್‍ರು ಝಾಕಿರ್ ನಾಯ್ಕ್ ರ ಅಭಿಮಾನಿಗಳಾಗಿದ್ದರು ಎಂಬುದು ಝಾಕಿರ್ ನಾಯ್ಕ್ ರನ್ನು ಭಯೋತ್ಪಾದಕ ಗುರು ಆಗಿಸಬಲ್ಲುದೆ? ಹಾಗಂತ ಅವರು ಝಾಕಿರ್ ನಾಯ್ಕ್ ರನ್ನು ಮಾತ್ರವಲ್ಲ, ಅಂಜುಮನ್ ಚೌಧರಿ ಮತ್ತು ಮೆಹ್ದಿ ಬಿಸ್ವಾಸ್‍ರನ್ನೂ ಫಾಲೋ (ಅನುಯಾಯಿ) ಮಾಡುತ್ತಿದ್ದರು. ಝಾಕಿರ್ ನಾಯ್ಕ್ ರನ್ನು ಉಲ್ಲೇ ಖಿಸಿ ಕಳೆದ ವರ್ಷ ರೋಹನ್ ಇಮ್ತಿಯಾಝ್ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದ ಎಂದು ಜೂನ್ 27ರಂದು ಬಾಂಗ್ಲಾ ದೇಶದ ಇಂಗ್ಲಿಷ್ ದಿನಪತ್ರಿಕೆ ದಿ ಡೈಲಿ ಸ್ಟಾರ್ ಹೇಳಿಕೊಂಡಿತ್ತು. (ಇದೀಗ ಪತ್ರಿಕೆ ತನ್ನ ಹೇಳಿಕೆಯಿಂದ ಹಿಂದೆ ಸರಿದಿದೆ) ಸದ್ಯ ಝಾಕಿರ್ ನಾಯ್ಕ್ ರನ್ನು ಭಯೋತ್ಪಾದಕರನ್ನಾಗಿಸಿದ್ದು ಇದೇ ಒಂದು ಪೋಸ್ಟ್. ನಿಜವಾಗಿ, ರೋಹನ್ ಫುಟ್ಬಾಲ್ ಅನ್ನು ಇಷ್ಟಪಟ್ಟಿದ್ದ. ಆಡುತ್ತಿದ್ದ. 18 ವರ್ಷದ ಮುಬಶ್ಶಿರ್ ಎಂಬ ಇನ್ನೋರ್ವ ದಾಳಿಕೋರನಂತೂ ಗಿಟಾರ್ ಪ್ರಿಯ. ಝಾಕಿರ್ ನಾಯ್ಕ್ ರನ್ನು ಫಾಲೋ ಮಾಡಿದಂತೆಯೇ ಇವರಿಬ್ಬರೂ ಮೆಸ್ಸಿಯನ್ನೋ, ನೈಮರ್ ಅನ್ನೋ, ಸುಮಿತ್ ರಾಮಚಂದ್ರನ್, ಎಹ್ಸಾನ್ ನೂರಾನಿಯನ್ನೋ ಫಾಲೋ ಮಾಡಿರಬಹುದು. ದೆಹಲಿಯ ಸಿಖ್ಖ್ ಹತ್ಯಾಕಾಂಡದಲ್ಲಿ ಭಾಗಿಯಾ ದವರು, ಗುಜರಾತ್ ಹತ್ಯಾಕಾಂಡ, ಮುಝಫ್ಫರ್ ನಗರ್ ಗಲಭೆ, ಕೇರಳದ ತರುಣಿ ಜಿಶಾಳನ್ನು ಅತ್ಯಾಚಾರಗೈದ ಆಮಿರ್... ಎಲ್ಲರೂ ಯಾರ್ಯಾರದೋ ಫಾಲೋವರ್ ಆಗಿರಬಹುದು. ಅವರಲ್ಲಿ ಧರ್ಮಗುರುಗಳು, ಪರಮ ಪೂಜ್ಯರೂ ಇರಬಹುದು. ಹಾಗಂತ, ಅವರ ಕೃತ್ಯಕ್ಕೆ ಪರಮ ಪೂಜ್ಯರನ್ನು ಅಥವಾ ಧರ್ಮಗುರುಗಳನ್ನು ಹೊಣೆಯಾಗಿಸುವುದು ಎಷ್ಟು ಸರಿ? ಅಷ್ಟಕ್ಕೂ, ಝಾಕಿರ್ ನಾಯ್ಕ್ ರನ್ನು ಪರಮ ಪವಿತ್ರ ಎಂದು ಸಮರ್ಥಿಸುವುದು ಇಲ್ಲಿನ ಉದ್ದೇಶವಲ್ಲ. ನಾನವರ ಫಾಲೋವರೂ ಅಲ್ಲ. ಅವರ ಪ್ರವಚನ ಶೈಲಿಯ ಬಗ್ಗೆ ಭಿನ್ನಾಭಿಪ್ರಾಯಗಳು ನನ್ನಲ್ಲೂ ಇವೆ. ತೆರೆದ ವೇದಿಕೆಯಲ್ಲಿ ಅವರು ನಡೆಸುವ ಧರ್ಮಧೀಕ್ಷೆ, ನಾನು ಸರಿ- ನೀನು ತಪ್ಪು ಎಂಬುದನ್ನು ಸಾಬೀತುಪಡಿಸುವಲ್ಲಿ ಅವರು ತೋರುವ ಆತುರ ಮತ್ತು ಅಬ್ಬರ, ಧರ್ಮಗಳನ್ನು ಎದುರು-ಬದುರಾಗಿ ನಿಲ್ಲಿಸುವ ರೀತಿ-ನೀತಿ... ಇತ್ಯಾದಿ ಇತ್ಯಾದಿಗಳ ಕುರಿತಂತೆ ಖಂಡಿತ ಆಕ್ಷೇಪ ಇದೆ. “ಒಸಾಮ ಬಿನ್ ಲಾಡೆನ್ ಹೋರಾಡುತ್ತಿರುವುದು ಇಸ್ಲಾಮ್‍ನ ವೈರಿಗಳ ಜೊತೆ ಎಂದಾದರೆ ನಾನು ಆತನ ಜೊತೆಗಿದ್ದೇನೆ. ಜಗತ್ತಿನ ಅತಿ ದೊಡ್ಡ ಭಯೋತ್ಪಾದಕ ಅಮೇರಿಕವನ್ನು ಆತ ಭಯ ಪಡಿಸುವುದಾದರೆ ಆತನ ಜೊತೆ ನಾನಿದ್ದೇನೆ. ಆದರೆ ಆತ ಹಾಗೆಯೋ ಎಂಬುದು ನನಗೆ ಗೊತ್ತಿಲ್ಲ. ಬರೇ ಸುದ್ದಿಯ ಆಧಾರದಲ್ಲಿ ನಾನು ತೀರ್ಪು ನೀಡಲಾರೆ. ಮುಸ್ಲಿಮರಾದ ನೀವೂ ಆರೋಪಗಳನ್ನು ಸಾರಾಸಗಟು ನಂಬಬೇಡಿ. ಯಾರು ಕುರ್‍ಆನನ್ನು ಆಧಾರವಾಗಿ ಹಿಡಿದಿರುವರೋ ಅವರ ಜೊತೆ ನಾನಿದ್ದೇನೆ. ಇಡೀ ಜಗತ್ತೇ ಅವರ ವಿರುದ್ಧ ಇದ್ದರೂ ನಾನು ಅವರ ಜೊತೆ ಇದ್ದೇನೆ...” ಮುಂತಾದ ಅವರ ಮಾತುಗಳಲ್ಲಿ ಕ್ಷಣದ ಆವೇಶ ಇದೆ. ಬಾಲಿಶತನವೂ ಇದೆ. ಖ್ಯಾತ ಸಾಹಿತಿ ಖುಶ್ವಂತ್ ಸಿಂಗ್ ಹೇಳಿರುವಂತೆ, ಎಳಸುತನವೂ ಇದೆ. ಅದರಾಚೆಗೆ ಇಂಥ ಮಾತುಗಳಲ್ಲಿ ರೋಹನ್ ಇಮ್ತಿಯಾಝ್ ರಂತಹವರನ್ನು, ನ್ಯೂಯಾರ್ಕ್ ಸಬ್‍ವೇಗೆ ಆತ್ಮಹತ್ಯಾ ದಾಳಿ ನಡೆಸಲು ಯತ್ನಿಸಿದ ಅಫಘಾನ್ ಮೂಲದ ಅಮೇರಿಕನ್ ಪ್ರಜೆ ನಜೀಬುಲ್ಲಾ ಝಾದಿಯನ್ನು, 2006ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ರಾಹಿಲ್ ಶೇಖ್‍ನನ್ನು ಅಥವಾ ವಾರಗಳ ಹಿಂದೆ ಹೈದಾರಾಬಾದ್‍ನಲ್ಲಿ ಬಂಧನಕ್ಕೀಡಾದ ಮುಹಮ್ಮದ್ ಇಬ್ರಾಹೀಮ್ ಯಝ್ದಾನಿಯಂತಹವರನ್ನು ಪ್ರಚೋದಿಸುವಂತಹದ್ದು ಏನೂ ಇಲ್ಲ. ಅಷ್ಟಕ್ಕೂ, ಝಾಕಿರ್ ನಾಯ್ಕ್ ರಿಗೆ ವಿಶ್ವಾದ್ಯಂತ ಫಾಲೋವರ್ಸ್‍ಗಳನ್ನು ಗಿಟ್ಟಿಸಿಕೊಟ್ಟದ್ದು ಮತ್ತು ಅವರ ಪೀಸ್ TV ಗೆ 100 ಮಿಲಿಯನ್ ವೀಕ್ಷಕರು ದಕ್ಕಿದ್ದು ಅವರು ಒಸಾಮನ ಬಗ್ಗೆಯೋ ಅಮೇರಿಕ ಅಥವಾ ಇಸ್ರೇಲ್‍ನ ಕುರಿತೋ ಅಭಿಪ್ರಾಯ ಮಂಡಿಸುತ್ತಿರುವುದಕ್ಕಾಗಿ ಅಲ್ಲ. ಅಲ್ಲದೆ, ಕೇವಲ ಒಸಾಮ, ಅಬೂಬಕರ್ ಬಗ್ದಾದಿ, ಬುಶ್, ಬ್ಲೇರ್, ಸದ್ದಾಮ್, ಐಸಿಸ್‍ಗಳನ್ನೇ ಕೇಂದ್ರೀಯ ವಿಷಯವಾಗಿಸಿ ಅವರು ಕಾರ್ಯಕ್ರಮ ನಡೆಸಿದ್ದೂ ಬಹುತೇಕ ಇಲ್ಲವೇ ಇಲ್ಲ. ಜನರು ಅವರನ್ನು ಇಷ್ಟಪಡುವುದು ಮತ್ತು ಫಾಲೋ ಮಾಡುವುದು ಧರ್ಮಗಳನ್ನು ತುಲನಾತ್ಮಾಕವಾಗಿ ವಿಶ್ಲೇಷಿಸುವ ಅವರ ಜಾಣ್ಮೆಗಾಗಿ. ಆರ್ಟ್ ಆಫ್ ಲಿವಿಂಗ್‍ನ ರವಿ ಶಂಕರ್ ಗುರೂಜಿ ಸಹಿತ ಬೇರೆ ಬೇರೆ ಧರ್ಮಗಳ ವಿದ್ವಾಂಸರನ್ನು ಕರೆದು ಅವರು ನಡೆಸುವ ಚರ್ಚೆಯೇ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಗಾಗುತ್ತಿರುವುದು. ಅವರಲ್ಲಿ ಮಾತುಗಾರಿಕೆಯಿದೆ. ಅಚ್ಚರಿಗೆ ದೂಡುವ ಸ್ಮರಣ ಶಕ್ತಿಯಿದೆ. ಪಾಂಡಿತ್ಯವಿದೆ. ನಿಜವಾಗಿ, ಇಂಥ ಚರ್ಚೆಗಳ ನಡುವೆ ಒಸಾಮನೋ ಬ್ಲೇರೋ ಬಗ್ದಾದಿಯೋ ಬರುತ್ತಾರೆಯೇ ಹೊರತು ಅವರನ್ನೇ ಕೇಂದ್ರೀಕರಿಸಿ ಚರ್ಚೆಗಳು ನಡೆಯುವುದಿಲ್ಲ. ಒಂದಿಡೀ ಕಾರ್ಯಕ್ರಮದಲ್ಲಿ ಬಂದು ಹೋಗುವ ಸಣ್ಣ ಸಣ್ಣ ಉಲ್ಲೇಖವನ್ನು ಮಾತ್ರವೇ ತಮಗೆ ಬೇಕಾದಂತೆ ಮತ್ತು ಬೇಕಾದಷ್ಟೇ ಎತ್ತಿಕೊಂಡು ಇದುವೇ ರೋಹನ್, ಕಫೀಲ್, ರಾಹಿಲ್‍ರನ್ನು ತಯಾರುಗೊಳಿಸಿದೆ ಅಂದರೆ ಅದು ಒಂದೋ ಅಲ್ಪಜ್ಞಾನ ಇಲ್ಲವೇ ಪೂರ್ವಗ್ರಹ ಅಥವಾ ದ್ವೇಷ ಎಂದು ಕರೆಯಲ್ಪಡಬಹುದೇ ಹೊರತು ಇನ್ನೇನೂ ಅಲ್ಲ. ಅವರ ಅಭಿಮಾನಿಗಳ ಪಟ್ಟಿಯಲ್ಲಿ ಮಲೇಶ್ಯಾದ ಉಪ ಪ್ರಧಾನಿ ದಾತುಕ್ ಸೆರಿ ಅವರ ಹೆಸರೂ ಇದೆ. ಇತ್ತೀಚೆಗೆ ಲಂಡನ್‍ನ ಮೇಯರ್ ಆಗಿ ಆಯ್ಕೆಯಾದ ಸಾದಿಕ್ ಖಾನ್‍ರ ಗೆಳೆಯ ಫಾರೂಕ್ ಶೇಖ್‍ರು 1,50,000 ಪೌಂಡ್ ಮೊತ್ತವನ್ನು ಝಾಕಿರ್ ನಾಯ್ಕ್ ರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‍ಗೆ ದೇಣಿಗೆಯಾಗಿ ನೀಡಿದ್ದಾರೆ. ಅಲ್ಲದೇ, ಸಾದಿಕ್ ಖಾನ್‍ರ ಚುನಾವಣಾ ಪ್ರಚಾರಕ್ಕಾಗಿ ಇವರು 15,000 ಪೌಂಡ್ ಮೊತ್ತವನ್ನು ನೀಡಿದ್ದಾರೆ. ಮಾತ್ರವಲ್ಲ, ಪ್ರಿನ್ಸ್ ಚಾರ್ಲ್ಸ್  ಅವರ ಎರಡು ಚಾರಿಟಿ ಸಂಸ್ಥೆಗಳಿಗೂ ಇವರು ಅಪಾರ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಇದೇವೇಳೆ, ಮೂರು ತಿಂಗಳ ಹಿಂದೆ ಮಲೇಶ್ಯಾದಲ್ಲಿ ನಡೆದ ಝಾಕಿರ್ ನಾಯ್ಕ್‍ರ ಕಾರ್ಯಕ್ರಮಕ್ಕೆ ಅಲ್ಲಿನ ಹಿಂದೂಗಳ ಒಂದು ಗುಂಪು ಆಕ್ಷೇಪ ಎತ್ತಿರುವುದನ್ನೂ ಇಲ್ಲಿ ಉಲ್ಲೇಖಿಸಬೇಕು. ಆದರೆ ಈ ಆಕ್ಷೇಪಕ್ಕೆ ಕಾರಣ, ಅವರು ಭಯೋತ್ಪಾದನೆಯನ್ನು ಪ್ರಚೋದಿಸುತ್ತಾರೆ ಎಂಬುದಾಗಿರಲಿಲ್ಲ. ಬದಲು ಅವರು ಹಿಂದೂ ಧರ್ಮವನ್ನು ಅವಮಾನಿಸುತ್ತಾರೆ ಎಂಬುದಾಗಿತ್ತು. ಝಾಕಿರ್ ನಾಯ್ಕ್ ರ ಬಗ್ಗೆ ಮಾತಾಡುವಾಗ ಅವರ ಪರ ಮತ್ತು ವಿರುದ್ಧದ ಇವು ಮತ್ತು ಇಂಥ ಭಿನ್ನ ನಿಲುವುಗಳನ್ನು ಎದುರಿಟ್ಟುಕೊಂಡು ಪ್ರಾಮಾಣಿಕವಾಗಿ ವಿಶ್ಲೇಷಣೆ ನಡೆಸಬೇಕೇ ಹೊರತು, ಬರೇ ವಿರೋಧಿ ಅಭಿಪ್ರಾಯವನ್ನೇ ಉಬ್ಬಿಸಿ, ವೈಭವೀಕರಿಸಿ ಇದಮಿತ್ಥಂ ಎಂದು ತೀರ್ಪು ನೀಡುವುದು ಅತ್ಯಂತ ಅಸಂಬದ್ಧವಾದುದು. ಇದು ಅನೈತಿಕ ಮತ್ತು ಅಸಮರ್ಥನೀಯ.
  ನಿಜ, ಝಾಕಿರ್ ನಾಯ್ಕ್ ಟೀಕಾತೀತರೇನೂ ಅಲ್ಲ. ಅವರನ್ನು ಮತ್ತು ಅವರ ಪ್ರವಚನ ಶೈಲಿಯನ್ನು ಟೀಕಿಸುವುದೆಂದರೆ ಪವಿತ್ರ ಕುರ್‍ಆನನ್ನು ಟೀಕಿಸಿದಂತೆಯೂ ಅಲ್ಲ. ಪೀಸ್ ಟಿವಿಯಲ್ಲಿ ಪ್ರವಚನ ನೀಡುವ ಕೆನಡದ ಡಾ| ಬಿಲಾಲ್ ಫಿಲಿಪ್, ಅಮೇರಿಕದ ಯಾಸಿರ್ ಫಝಗ, ಬ್ರಿಟನ್ನಿನ ಅಬ್ದುರ್ರಹೀಮ್ ಗ್ರೀನ್, ಮಲೇಶ್ಯಾದ ಹುಸೈನ್, ಸುಡಾನಿನ ಜಾಫರ್ ಇದ್ರಿಸ್, ಯುಎಇಯ ಸಲೀಮ್ ಅಲ್ ಅಮ್ರಿ, ಪಾಕಿಸ್ತಾನದ ಇಸ್ರಾರ್ ಅಹ್ಮದ್, ಅಹ್ಮದ್ ದೀದಾತ್... ಮುಂತಾದವರಲ್ಲಿ ಅವರು ಓರ್ವರೇ ಹೊರತು ಅವರನ್ನು ಅತಿಮಾನುಷರಂತೆ ಬಿಂಬಿಸಬೇಕಾದ ಯಾವ ಅಗತ್ಯವೂ ಇಲ್ಲ. ಜುಲೈ 5 ರಂದು, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಭಯೋತ್ಪಾದನೆಯ ಬಗ್ಗೆ ತನ್ನ ನಿಲುವೇನು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ‘ನ್ಯೂಸ್ 18’ ಚಾನೆಲ್‍ಗೆ ನೀಡಿದ ಸಂದರ್ಶನದಲ್ಲಿ, “ಮಾಧ್ಯಮಗಳು ತಿರುಚಿದ ವೀಡಿಯೋಗಳನ್ನು ಪ್ರಸಾರ ಮಾಡುತ್ತಿವೆ..” ಎಂದೂ ಹೇಳಿದ್ದಾರೆ. “ಪೊಲೀಸರನ್ನು ಕಂಡರೆ ಕಳ್ಳ ಹೇಗೆ ಭಯಪಡುತ್ತಾನೋ ಹಾಗೆಯೇ ಮುಸ್ಲಿಮರನ್ನು ಕಂಡರೆ ಸಮಾಜ ವಿರೋಧಿಗಳು ಭಯಪಡಬೇಕು.. ಎಂದಿರುವುದನ್ನುEvery Muslim should be a Terrorist ಎಂದು ಮಾಧ್ಯಮಗಳು ತಿರುಚಿವೆ” ಎಂದೂ ಹೇಳಿದ್ದಾರೆ. ಅಷ್ಟಕ್ಕೂ, ತಿರುಚಿದ ವೀಡಿಯೋವನ್ನು ಹಿಡಿದು ಕನ್ನಯ್ಯ ಕುಮಾರ್‍ನನ್ನು ದೇಶದ್ರೋಹಿಯಾಗಿಸಿದ ಟೈಮ್ಸ್ ನೌನಂಥ ಚಾನೆಲ್‍ಗಳಿಗೆ ಝಾಕಿರ್ ನಾಯ್ಕ್‍ರನ್ನು ಭಯೋತ್ಪಾದಕ ಆಗಿಸುವುದು ಕಷ್ಟವೇನೂ ಅಲ್ಲವಲ್ಲ.
  ಸದ್ಯ ಝಾಕಿರ್ ನಾಯ್ಕ್ ರು ಎರಡು ಉಗ್ರ ನಿಲುವುಗಳ ನಡುವೆ ಸಿಲುಕಿಕೊಂಡಿದ್ದಾರೆ. ಅವರನ್ನು ಭಯೋತ್ಪಾದಕ ಪ್ರವಚನಕಾರ ಎಂದು ಮುದ್ರೆಯೊತ್ತಲು ಮತ್ತು ಅವರನ್ನು ಭಾರತಕ್ಕೆ ಕಾಲಿಡದಂತೆ ತಡೆಯಲು ಒಂದು ಗುಂಪು ಯತ್ನಿಸುತ್ತಿದ್ದರೆ ಇನ್ನೊಂದು ಗುಂಪು ಅವರ ಮಾತು-ಕೃತಿ ಎಲ್ಲವೂ ಪರಮ ಪವಿತ್ರ ಎಂದು ಸಮರ್ಥಿಸುವ ಉಮೇದಿನಲ್ಲಿದೆ. ಆದ್ದರಿಂದ, ಝಾಕಿರ್ ನಾಯ್ಕ್ ರನ್ನು ಸದ್ಯ ಈ ಎರಡು ಉಗ್ರಗಾಮಿತ್ವದ ನಡುವಿನ ಖಾಲಿ ಜಾಗದಲ್ಲಿ ತಂದು ನಾವು ಕೂರಿಸಬೇಕಿದೆ. ಅವರು ತನಿಖಾತೀತರೂ ಅಲ್ಲ, ತಪ್ಪನ್ನೇ ಮಾಡದ ಪ್ರವಾದಿಯೂ ಅಲ್ಲ. ಅವರ ಭಾಷೆಯಲ್ಲಿ, ಹೋಲಿಕೆಯ ಶೈಲಿಯಲ್ಲಿ, ವಿವಾದಿತ ವ್ಯಕ್ತಿಗಳನ್ನು ಸಮರ್ಥಿಸುವ ಅಥವಾ ವಿರೋಧಿಸುವ ರೀತಿ-ನೀತಿಯಲ್ಲಿ ಆಕ್ಷೇಪಗಳೆತ್ತುವವರನ್ನು ಸಾರಾಸಗಟು
              
ರೋಹನ್ ಇಮ್ತಿಯಾಝ್‍
ತಿರಸ್ಕರಿಸಬೇಕಿಲ್ಲ. ಹಾಗೆ ಮಾಡುವವರನ್ನು ಪವಿತ್ರ ಕುರ್‍ಆನಿನ ವಿರೋಧಿಗಳಾಗಿಯೋ, ಇಸ್ಲಾಮ್‍ನ ವೈರಿಗಳಾಗಿಯೋ ಪಟ್ಟ ಕಟ್ಟಬೇಕಾಗಿಯೂ ಇಲ್ಲ. ಪರ ಮತ್ತು ವಿರುದ್ಧ ವಾದಗಳು ಸಹಜ ಮತ್ತು ಅಷ್ಟೇ ಸ್ವಾಗತಾರ್ಹ. ಕೋಟ್ಯಂತರ ಮಂದಿ ವೀಕ್ಷಕರಿರುವ ವ್ಯಕ್ತಿತ್ವವೊಂದಕ್ಕೆ ಬರೇ ಸಮರ್ಥಕರಷ್ಟೇ ಇರಬೇಕು ಎಂಬ ಹಠ ಬಾಲಿಶತನದ್ದು. ಅವರ ಬಗ್ಗೆ ಚರ್ಚೆ ನಡೆಯಲಿ. ಅದೇ ವೇಳೆ, ಭಯೋತ್ಪಾದಕರ ಫೇಸ್‍ಬುಕ್ ಸ್ಟೇಟಸ್‍ನ ಆಧಾರದಲ್ಲಿ ಅವರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸುವುದು ಎಷ್ಟು ಸರಿ ಎಂಬುದೂ ಈ ಚರ್ಚೆಯ ವ್ಯಾಪ್ತಿಗೆ ಒಳಪಡಲಿ. ದೇಶದ ನಿಷ್ಠಾವಂತ ಪ್ರಜೆಯಾಗಿರುವ, ಸಂವಿಧಾನವನ್ನು ಉಲ್ಲಂಘಿಸದ ಮತ್ತು ಯಾವ ಕ್ರಿಮಿನಲ್ ಕೃತ್ಯಗಳಲ್ಲೂ ಭಾಗಿಯಾಗದ ವ್ಯಕ್ತಿ ಯೋರ್ವನಿಗಿಂತ ಭಯೋತ್ಪಾದಕನ ಸ್ಟೇಟಸ್ ಮೇಲೆ ನಂಬಿಕೆಯಿಡುವುದು ನ್ಯಾಯಪೂರ್ಣವೋ ಹಾಸ್ಯಾಸ್ಪದವೋ ಎಂಬುದೂ ಚರ್ಚೆಗೊಳಗಾಗಲಿ. ಒಂದು ವೇಳೆ, ತನ್ನ ಪ್ರತಿ ಚಟುವಟಿಕೆಯನ್ನೂ ತೆರೆದ ವೇದಿಕೆಯಲ್ಲಿ ,ಎಲ್ಲರೆದುರೇ, ಬಹಿರಂಗವಾಗಿ ನಡೆಸುವ ಝಾಕಿರ್ ನಾಯ್ಕ್ ರಿಗಿಂತ ಆರೇಳು ತಿಂಗಳುಗಳ ಹಿಂದೆ ನಾಪತ್ತೆ ಯಾಗಿ ಮೊನ್ನೆ ಢಾಕಾದ ಆರ್ಟಿಸನ್ ಬೇಕರಿಯಲ್ಲಿ ಕೊಲೆಗಡುಕನಾಗಿ ದಿಢೀರ್ ಪತ್ತೆಯಾದ ರೋಹನ್ ಇಮ್ತಿಯಾಝ್‍ನೇ ಹೆಚ್ಚು ನಂಬಲರ್ಹ ಎಂಬುದೇ ಇದಕ್ಕೆ ಉತ್ತರವಾದರೆ, ಈ ಉತ್ತರ ಇನ್ನಷ್ಟು ಪ್ರಶ್ನೆಗಳಿಗೂ ಜನ್ಮಕೊಡುತ್ತದೆ. ಹಾಗಿದ್ದರೆ,
      ಕ್ರಿಯೆಗೆ ಪ್ರತಿಕ್ರಿಯೆ ಎಂದ ನರೇಂದ್ರ ಮೋದಿಯವರಿಗಿಂತ ಗುಜರಾತ್ ಹತ್ಯಾಕಾಂಡದ ಅಪರಾಧಿಗಳಲ್ಲಿ, ಅಖ್ಲಾಕ್ ಕುಟುಂಬಕ್ಕಿಂತ ಕೊಲೆಗಾರರಲ್ಲಿ, ನ್ಯಾಯಾಧೀಶರಿಗಿಂತ ಅಪರಾಧಿಗಳಲ್ಲಿ, ಪೊಲೀಸರಿಗಿಂತ ಕಳ್ಳರಲ್ಲಿ, ಅಶ್ವತಿಗಿಂತ ಆರೋಪಿ ವಿದ್ಯಾರ್ಥಿನಿಯರಲ್ಲಿ... ಹೆಚ್ಚು ನಂಬಿಕೆ ಇಡಬೇಕೆ? ಅವರ ಹೇಳಿಕೆಯನ್ನೇ ನ್ಯಾಯ ನಿರ್ಣಯಕ್ಕೆ ಆಧಾರವಾಗಿ ಪರಿಗಣಿಸಬೇಕೇ?

No comments:

Post a Comment