Thursday, March 17, 2016

ಶ್ರೀ ಶ್ರೀ ಶ್ರೀ ಸ್ಥಾನದಲ್ಲಿ ಓರ್ವ ಮೌಲಾನ ಇರುತ್ತಿದ್ದರೆ?

      Pseudo Secularism
      Muslim Appeasement
  ಈ ಎರಡು ಪದಗಳ ಕೃಪೆಯಿಂದ ಬಿಜೆಪಿಗೆ ಸಾಕಷ್ಟು ಓಟುಗಳು ದಕ್ಕಿವೆ. ನಕಲಿ ಜಾತ್ಯತೀತತೆ ( Pseudo Secularism) ಮತ್ತು ಮುಸ್ಲಿಮ್ ಓಲೈಕೆ (Muslim Appeasement) ಎಂಬ ವಿಷಯದ ಮೇಲೆ ಅದು ಅಸಂಖ್ಯ ಚುನಾವಣಾ ಭಾಷಣಗಳನ್ನು ನಡೆಸಿದೆ. ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದೆ. 2009 ಎಪ್ರಿಲ್ 20ರಂದು ಬಿಜೆಪಿಯ ಅಂದಿನ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಅಡ್ವಾಣಿಯವರು ‘ಸ್ಯೂಡೋ ಸೆಕ್ಯುಲರಿಸಂ' ಎಂಬ ಪದವನ್ನು ಮೊತ್ತಮೊದಲು ಬಳಸಿದರು ಎಂದು ಹೇಳಲಾಗುತ್ತದೆ. ಪ್ರಧಾನಿ ಮನ್‍ಮೋಹನ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಅವರು ಈ ಪದವನ್ನು ಬಳಸಿದ್ದರು. ಆದರೆ, ಮುಸ್ಲಿಮ್ ಓಲೈಕೆ ಎಂಬುದು ಅಡ್ವಾಣಿಯವರ ಸಂಶೋಧನೆ ಅಲ್ಲ. ಸಾವರ್ಕರ್, ಗೋಲ್ವಲ್ಕರ್, ಹೆಗ್ಡೇವಾರ್‍ಗಳಿಗೆ ಅದರ ಕ್ರೆಡಿಟ್ಟನ್ನು ನೀಡಲಾಗುತ್ತದೆ. ದೇಶ ವಿಭಜನೆಗೊಂಡ ನಂತರದಿಂದಲೇ ಮುಸ್ಲಿಮ್ ಓಲೈಕೆ ಪದವನ್ನು ಬಿಜೆಪಿ ಮತ್ತು ಅದರ ಬೆಂಬಲಿಗರು ಬಳಸುತ್ತಲೇ ಬಂದಿದ್ದಾರೆ. ಹಾಗಂತ ಯಾವಾಗ, ಎಲ್ಲಿ ಮತ್ತು ಎಷ್ಟರ ಮಟ್ಟಿಗೆ ಈ ಓಲೈಕೆಗಳು ಮುಸ್ಲಿಮರ ನೆರವಿಗೆ ಬಂದಿವೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರಗಳು ಲಭ್ಯವಾದದ್ದು ಕಡಿಮೆ. 1983ರಲ್ಲಿ ಗೋಪಾಲ್‍ಸಿಂಗ್ ಸಮಿತಿಯು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿಯಿಂದ ಹಿಡಿದು ನಾಲ್ಕೈದು ವರ್ಷಗಳ ಹಿಂದೆ ಸಾಚಾರ್ ಸಮಿತಿ ಸಲ್ಲಿಸಿದ ವರದಿಯ ವರೆಗೆ ಎಲ್ಲದರಲ್ಲೂ ಮುಸ್ಲಿಮರು ಕೊನೆಯ ಬೋಗಿಯಲ್ಲೇ ಇದ್ದಾರೆ. 1964 ಡಿ. 19-20ರಂದು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಮುಸ್ಲಿಮರಿಗೆ ಸಂಬಂಧಿಸಿ ಎರಡು ಲೇಖನಗಳು ಪ್ರಕಟವಾದುವು. ಇದಾಗಿ ಮೂರು ವರ್ಷಗಳ ಬಳಿಕ ದಿ ಸ್ಟೇಟ್ಸ್ ಮನ್ ಪತ್ರಿಕೆಯಲ್ಲಿ ಮೂರು ಪ್ರಮುಖ ಲೇಖನಗಳು ಬೆಳಕು ಕಂಡವು. ಈ ಐದೂ ಲೇಖನಗಳು ಆ ಕಾಲದ ಮುಸ್ಲಿಮರ ಶೋಚನೀಯ ಬದುಕನ್ನು ಅತ್ಯಂತ ವಿವರಣಾತ್ಮಕವಾಗಿ ಮತ್ತು ಪುರಾವೆ ಸಹಿತ ಬಿಂಬಿಸಿದ್ದುವು. ಮುಸ್ಲಿಮರು ಯಾವ್ಯಾವ ವೃತ್ತಿಯಲ್ಲಿ, ಎಷ್ಟೆಷ್ಟು ವೇತನದಲ್ಲಿ, ಯಾವ್ಯಾವ ಪ್ರದೇಶಗಳಲ್ಲಿ ವಾಸಿಸು ತ್ತಿದ್ದಾರೆ ಎಂಬ ಬಗ್ಗೆ ಸಾಕಷ್ಟು ಮಾಹಿತಿಯನ್ನು ಅವುಗಳಲ್ಲಿ ಕೊಡಲಾಗಿತ್ತು. ಕಟ್ಟಕಡೆಯ ವೃತ್ತಿಯಲ್ಲಿ, ಕಟ್ಟಕಡೆಯ ಶಾಲಾ ಬೆಂಚ್‍ನಲ್ಲಿ, ಕಟ್ಟಕಡೆಯ ವೇತನದಾರರ ಸಾಲಿನಲ್ಲಿ ನಿಂತವರೆಲ್ಲ ಮುಸ್ಲಿಮರೇ ಆಗಿದ್ದರು. ಬಿಜೆಪಿ ಹೇಳುವ Appeasementನ ಫಲಾನುಭವಿಗಳು ನಿಜಕ್ಕೂ ಮುಸ್ಲಿಮರು ಆಗಿರುವುದೇ ಆಗಿದ್ದಿದ್ದರೆ, ಸ್ವಾತಂತ್ರ್ಯಾ ನಂತರದ 70 ವರ್ಷಗಳಲ್ಲಿ ಮುಸ್ಲಿಮರ ಸ್ಥಿತಿಗತಿ ಹೇಗಿರ ಬೇಕಿತ್ತು? ಇವತ್ತು ಮುಸ್ಲಿಮರಲ್ಲಿ ಎಷ್ಟು ಮಂದಿ ವೈದ್ಯರಿದ್ದಾರೆ, ನ್ಯಾಯವಾದಿಗಳಿದ್ದಾರೆ, ಉದ್ಯಮಿಗಳಿದ್ದಾರೆ, ಪತ್ರಿಕೆ, ಟಿ.ವಿ. ಮಾಲಿಕರು ಮತ್ತು ಮುಖ್ಯ ಸಂಪಾದಕರುಗಳಿದ್ದಾರೆ? ಸಾಮಾಜಿಕ ಹೋರಾಟಗಾರರಿದ್ದಾರೆ? ಬಡತನ ರೇಖೆಗಿಂತ ಕೆಳಗೆ ಗುರುತಿಸಿ ಕೊಂಡವರಲ್ಲಿ ಮುಸ್ಲಿಮರ ಪಾಲು ಎಷ್ಟು? ಭಾರತದ ಪ್ರಮುಖ 50 ಮಂದಿ ಕೋಟ್ಯಾಧಿಪತಿಗಳಲ್ಲಿ ಎಷ್ಟು ಮುಸ್ಲಿಮ್ ಉದ್ಯಮಿಗಳಿದ್ದಾರೆ? ಈ ದೇಶವನ್ನು ಅತ್ಯಂತ ದೀರ್ಘ ಅವಧಿಯವರೆಗೆ ಆಳಿದ್ದು ಕಾಂಗ್ರೆಸ್. ಮುಸ್ಲಿಮ್ ಓಲೈಕೆಯ ಆರೋಪವನ್ನು ಬಿಜೆಪಿ ಹೊರಿಸುತ್ತಿರುವುದೂ ಕಾಂಗ್ರೆಸ್‍ನ ಮೇಲೆಯೇ. ಇಷ್ಟು ದೀರ್ಘ ಅವಧಿಯಿಂದ ಓಲೈಕೆ ಆಗಿರುತ್ತಿದ್ದರೆ ಅದರ ಪರಿಣಾಮವೂ ಗೋಚರವಾಗಬೇಕಿತ್ತಲ್ಲವೇ? ಆದರೆ ದುರ್ಬೀನು ಹಿಡಿದರೂ ಅದರ ಕುರುಹು ಕಾಣಸಿಗುತ್ತಿಲ್ಲವೆಂದಾದರೆ, ನಿಜಕ್ಕೂ ಆಗಿರುವುದೇನು? ಮುಸ್ಲಿಮರ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮಗಳನ್ನು ಕೈಗೊಳ್ಳದಂತೆ ತಡೆಯುವ ಉದ್ದೇಶದಿಂದಲೇ ಈ ಪದವನ್ನು ಹುಟ್ಟು ಹಾಕಲಾಯಿತೇ? ಮುಸ್ಲಿಮರ ಅಭಿವೃದ್ಧಿಗಾಗಿ ಕೈಗೊಳ್ಳಬಹುದಾದ ಯಾವುದೇ ಕ್ರಮಕ್ಕೂ ಮೊದಲು ಎರಡೆರಡು ಬಾರಿ ಯೋಚಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಇದರ ಹಿಂದಿನ ತರ್ಕವಾಗಿತ್ತೇ? ಹೀಗೆ ಮುಸ್ಲಿಮ್ ಓಲೈಕೆ ಎಂಬ ಪದವನ್ನು ಮತ್ತೆ ಮತ್ತೆ ಬಳಸಿ ಒಂದು ಕಡೆ ಕಾಂಗ್ರೆಸ್ ಅನ್ನೂ ಇನ್ನೊಂದು ಕಡೆ ಮುಸ್ಲಿಮರನ್ನೂ ಕಟಕಟೆಯಲ್ಲಿ ನಿಲ್ಲಿಸಲು ಬಿಜೆಪಿ ಒಂದು ಹಂತದ ವರೆಗೆ ಯಶಸ್ವಿಯಾಯಿತು. ಮುಸ್ಲಿಮರು ‘ಕಾಂಗ್ರೆಸ್ ಕೃಪಾಪೋಷಿತರು' ಎಂಬ ಭಾವನೆಯನ್ನು ಅದು ಹುಟ್ಟುಹಾಕಿತು. ‘ಮುಸ್ಲಿಮರು ದೇಶ ಬಿಡಬೇಕಾದವರು, ಕೊಬ್ಬಿ ದವರು, ಸಂಸ್ಕøತಿ ವಿನಾಶಕರು..’ ಎಂದೆಲ್ಲಾ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಬಿಂಬಿಸುತ್ತಾ ಹೋಯಿತು. ಆದ್ದರಿಂದಲೇ ಶಾರುಖ್ ಖಾನ್, ಆಮಿರ್ ಖಾನ್‍ಗಳ ‘ಅಸಹಿಷ್ಣು' ಹೇಳಿಕೆಗಳು ಅಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾದದ್ದು ಮತ್ತು ‘ಹಿಂದೂ ಅನ್ನಲು ನಾಚಿಕೆಯಾಗುತ್ತೆ' ಎಂದ ಅನುಪಮ್ ಖೇರ್ ಅಥವಾ ‘ದೇಶ ಬಿಡುವೆ' ಎಂದಿದ್ದ ಕಮಲ್ ಹಾಸನ್ ಮತ್ತಿತರರ ಹೇಳಿಕೆ ಯಾವ ಚರ್ಚೆಗೂ ಈಡಾಗದೇ ತಣ್ಣಗಾದದ್ದು. ಅಷ್ಟಕ್ಕೂ, ಶ್ರೀಶ್ರೀ ರವಿಶಂಕರ್ ಜಾಗದಲ್ಲಿ ಓರ್ವ ಮೌಲಾನಾರು ‘ಸಂಸ್ಕೃತಿ ಮೇಳ’ವನ್ನು ಏರ್ಪಡಿಸಿರುತ್ತಿದ್ದರೆ ಮತ್ತು ಮೋದಿಯ ಬದಲು ಸಿಂಗ್ ಪ್ರಧಾನಿಯಾಗಿರುತ್ತಿದ್ದರೆ ಬಿಜೆಪಿಯ ಪ್ರತಿಕ್ರಿಯೆ ಹೇಗಿರುತ್ತಿತ್ತು? ಸೈನಿಕರನ್ನು ಚಾಕರಿಗೆ ಬಳಸಿಕೊಂಡದ್ದಕ್ಕೆ ಅದು ಹೇಗೆ ಪ್ರತಿಕ್ರಿಯಿಸುತ್ತಿತ್ತು? ಪಾಕಿಸ್ತಾನ್ ಜಿಂದಾಬಾದ್ ಎಂದ ಮೌಲಾನರನ್ನು ಅದು ಏನೆಂದು ಕರೆಯುತ್ತಿತ್ತು? ಎಷ್ಟೆಷ್ಟು ಪ್ರತಿಭಟನೆಗಳಾಗುತ್ತಿತ್ತು? ‘ದಂಡ ಕಟ್ಟಲ್ಲ’ ಎಂದ ಮೌಲಾನಾರಿಗೆ ಅದು ಯಾವ ದರ್ಜೆಯ ದೇಶದ್ರೋಹಿ ಪಟ್ಟ ಕೊಡುತ್ತಿತ್ತು? ಕಾಂಗ್ರೆಸ್‍ನ ಮುಸ್ಲಿಮ್ ಓಲೈಕೆಗೆ ಪುರಾವೆಯಾಗಿ ಯಾವೆಲ್ಲ ವೇದಿಕೆಯಲ್ಲಿ ಈ ಮೇಳ ಬಳಕೆಯಾಗುತ್ತಿತ್ತು?
  ಅಂದಹಾಗೆ, ಜಾತ್ಯತೀತತೆ ಅಂದರೇನು? ನಕಲಿ ಜಾತ್ಯತೀತತೆಯ ಲಕ್ಷಣಗಳು ಯಾವುವು? ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಸರ್ದಾರ್ ಪಟೇಲರನ್ನು ಜಾತ್ಯತೀತ ವ್ಯಕ್ತಿಯಾಗಿ ಬಿಂಬಿಸಿದರು. ಪಟೇಲರ ಬದಲು ನೆಹರೂರರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದುದಕ್ಕಾಗಿ ಅವರು ಕಾಂಗ್ರೆಸ್ ಅನ್ನು ಟೀಕಿಸಿದರು. ನೆಹರೂ, ಗಾಂಧಿ ಮತ್ತು ಕಾಂಗ್ರೆಸ್ ಸ್ಯೂಡೋ ಸೆಕ್ಯುಲರಿಸ್ಟ್ ಗಳಾಗಿಯೂ ಪಟೇಲ್, ಬಿಜೆಪಿ ಮತ್ತು ಸಂಘಪರಿವಾರ ರಿಯಲ್ ಸೆಕ್ಯುಲರಿಸ್ಟ್ ಗಳಾಗಿಯೂ ಒತ್ತಿ ಹೇಳುವುದು ಅವರ ಉದ್ದೇಶವಾಗಿತ್ತು. ನೆಹರೂರನ್ನು ಪ್ರಧಾನಿಯಾಗಿ ಸೂಚಿಸಿದ ಗಾಂಧೀಜಿಯ ವರ್ಚಸ್ಸನ್ನು ತೆಳ್ಳಗಾಗಿಸುವ ತಂತ್ರವೂ ಇದರ ಹಿಂದಿತ್ತು. ನಿಜವಾಗಿ, ಬಿಜೆಪಿಯ ಈ ರಿಯಲ್ ಸೆಕ್ಯುಲರ್ ಮತ್ತು ಸ್ಯೂಡೋ ಸೆಕ್ಯುಲರ್ ವಿಭಜನೆಯೇ ಅತ್ಯಂತ ಹಾಸ್ಯಾಸ್ಪದ. ಒಂದು ವೇಳೆ ಗಾಂಧೀಜಿ, ಕಾಂಗ್ರೆಸ್, ನೆಹರೂಗಳು ಸ್ಯೂಡೋ ಸೆಕ್ಯುಲರ್‍ಗಳ ಪಟ್ಟಿಯಲ್ಲಿ ಸೇರಬೇಕಾದವರೆಂದಾದರೆ, ಅದೇ ಪಟ್ಟಿಯಲ್ಲಿ ಸಂಘಪರಿವಾರ, ಮೋದಿ ಮತ್ತು ಬಿಜೆಪಿಯೂ ಸೇರ ಬೇಕಾಗುತ್ತದೆ. ಯಾಕೆಂದರೆ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿ ‘ಸರ್ದಾರ್ ಪಟೇಲ್’ ಆಗಿದ್ದುದು ಅಡ್ವಾಣಿ. ಬಿಜೆಪಿಯ ಪೋಸ್ಟರ್ ಬಾಯ್ ಆಗಿ ದಶಕಗಳ ಕಾಲ ಪಕ್ಷವನ್ನು ಕಟ್ಟಿದವರು ಅವರು. ಉಕ್ಕಿನ ಮನುಷ್ಯ ಆಗಿದ್ದವರು. 2009ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಗುರುತಿಸಿಕೊಂಡು 2014ರಲ್ಲಿ ಆ ಉಮೇದುವಾರಿಕೆಯನ್ನು ಉಳಿಸಿಕೊಳ್ಳಲು ಎಲ್ಲ ರೀತಿಯಲ್ಲೂ ಅರ್ಹತೆ ಇದ್ದವರು. ಆದರೆ, ಅಡ್ವಾಣಿಯ ಬದಲು ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿಸಿತು. ಸರ್ದಾರ್‍ರ ಬದಲು ನೆಹರೂರನ್ನು ಗಾಂಧೀಜಿ ಸೂಚಿಸಿದಂತೆ ಅಡ್ವಾಣಿಯ ಬದಲು ಮೋದಿಯನ್ನು ಸಂಘಪರಿವಾರ ಸೂಚಿಸಿತು. ಹೀಗಿರುವಾಗ ನೆಹರೂ ಗುಂಪನ್ನು ಮೋಸಗಾರರಂತೆಯೂ ಮೋದಿ ಗುಂಪನ್ನು ಸಾಚಾಗಳಂತೆಯೂ ವ್ಯಾಖ್ಯಾನಿಸುವುದು ಎಷ್ಟು ಸರಿ? ಸರ್ದಾರ್ ಪಟೇಲ್‍ರು ನೆಹರೂರಿಗಿಂತ 14 ವರ್ಷ ಹಿರಿಯರಾಗಿದ್ದರು. ನೆಹರೂ ಪ್ರಧಾನಿಯಾಗುವಾಗ ಸರ್ದಾರ್‍ರಿಗೆ 71 ವರ್ಷ. ಅಲ್ಲದೇ, ವಯೋ ಸಹಜ ದಣಿವೂ ಅವರಲ್ಲಿತ್ತು. ಅಡ್ವಾಣಿ ಮತ್ತು ಮೋದಿಯವರಿಗೆ ಹೋಲಿಸಿದರೆ ಇವೇ ವ್ಯತ್ಯಾಸಗಳು ಗೋಚರವಾಗುತ್ತವೆ. ಆದರೆ ಸರ್ದಾರ್‍ರಿಗೆ ಸಂಬಂಧಿಸಿ ಹೇಳುವಾಗ, ‘ಹಿರಿತನವನ್ನು ಗಾಂಧೀಜಿ ಕಡೆಗಣಿಸಿದರು' ಎಂದು ಹೇಳುತ್ತಾ ಅಡ್ವಾಣಿಯವರಿಗೆ ಸಂಬಂಧಿಸಿ ಈ ಹೋಲಿಕೆ ಮಾಡದೇ ಇರುವುದು ಏನನ್ನು ಸೂಚಿಸುತ್ತದೆ? ಯಾವುದು ನಕಲಿ? ಯಾವುದು ಅಸಲಿ?
  ನೆಹರೂ ಅವರ ಒಂದು ಮಾತಿದೆ
  “ಹಿಂದೂ ಮತ್ತು ಮುಸ್ಲಿಮ್ ಎರಡರ ಕೋಮುವಾದವೂ ಕೆಟ್ಟದೇ. ಆದರೆ ಮುಸ್ಲಿಮ್ ಕೋಮುವಾದವು ಭಾರತೀಯ ಸಮಾಜದ ಮೇಲೆ ಪ್ರಾಬಲ್ಯ ಪಡೆಯಲು ಸಾಧ್ಯವಿಲ್ಲ. ಆದರೆ ಹಿಂದೂ ಕೋಮುವಾದಕ್ಕೆ ಅದು ಸಾಧ್ಯವಾಗಬಹುದು.” ಬಹುಶಃ, ಇವತ್ತು ಬಿಜೆಪಿ ಅಧಿಕಾರದಲ್ಲಿರುವುದಕ್ಕೆ ಬಹುದೊಡ್ಡ ಕೊಡುಗೆ ಅದು ನಿರ್ಮಿಸಿರುವ ಕೋಮುವಾದಿ ವಾತಾವರಣವೇ. ಸದ್ಯ ಬಿಜೆಪಿಯ ಲೋಕಸಭಾ ಸದಸ್ಯರಲ್ಲಿ ಶೇ. 75ರಷ್ಟು ಮಂದಿ ಕೋಮುಗಲಭೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಯಾಗಿ ಕ್ರಿಮಿನಲ್ ದೂರನ್ನು ಹೊತ್ತವರಾಗಿದ್ದಾರೆ. ಗುಜರಾತ್, ಭಾಗಲ್ಪುರ, ಮುಂಬೈ, ಮೊರಾದಾಬಾದ್, ಮುಝಫ್ಫರ್‍ನಗರ್ ಮುಂತಾದ ಯಾವ ಸಂಘರ್ಷವನ್ನೇ ಎತ್ತಿಕೊಳ್ಳಿ.. ಎಲ್ಲದರಲ್ಲೂ ಅಪಾರ ಸಾವು-ನೋವು-ನಾಶ-ನಷ್ಟಕ್ಕೆ ಒಳಗಾಗಿರುವವರು ಮುಸ್ಲಿಮರೇ ಆಗಿದ್ದಾರೆ. ನಿರಾಶ್ರಿತ ಶಿಬಿರಗಳಲ್ಲಿ ವರ್ಷಗಳಿಂದ ಜೀವಿಸುತ್ತಿರುವವರೂ ಅವರೇ. ಅಥವಾ ಯೋಗಿ ಆದಿತ್ಯನಾಥ್ ಮತ್ತು ಅಕ್ಬರುದ್ದೀನ್ ಓವೈಸಿಯವರ ನಡುವಿನ ವ್ಯತ್ಯಾಸವೂ ಇದುವೇ. ಓವೈಸಿಯ ಮಾತಿನಿಂದ ಯಾವ ಪರಿಣಾಮವೂ ಉಂಟಾಗದು. ಹೆಚ್ಟೆಂದರೆ, ಚಪ್ಪಾಳೆ ಗಿಟ್ಟಬಹುದು. ನಾಲ್ಕು ಯುವಕರು ಪ್ರಚೋದಿತರಾಗಬಹುದು. ಅದರಾಚೆಗೆ ಆ ಭಾಷಣ ಇಡೀ ಮುಸ್ಲಿಮ್ ಸಮುದಾಯವನ್ನು ಧರ್ಮಾಧಾರಿತವಾಗಿ ಧ್ರುವೀಕರಿಸಿ, ಆ ಧ್ರುವೀಕರಣ ಓಟಾಗಿ ಪರಿವರ್ತಿತವಾಗಿ, ಆ ಬಳಿಕ ಅದು ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿವರೆಗೆ ತಲುಪಲು ಸಾಧ್ಯವೇ ಇಲ್ಲ. ಮುಸ್ಲಿಮ್ ಕೋಮುವಾದಕ್ಕೆ ನೂರು ಮನೆಗಳಿರುವ ಒಂದು ಪುಟ್ಟ ಗಲ್ಲಿಯ ಮೇಲೆ ಪ್ರಾಬಲ್ಯ ಸ್ಥಾಪಿಸಲಾಗದಷ್ಟೂ ಅಸಮರ್ಥತೆ ಇದೆ. ಆದರೆ ಯೋಗಿ ಆದಿತ್ಯನಾಥ್‍ರ ಕೋಮುವಾದಕ್ಕೆ ಈ ಸೀಮಿತತೆಯಿಲ್ಲ. ಅವರ ಕೋಮುವಾದಿ ನಿಲುವು ಬಹುಸಂಖ್ಯಾತರನ್ನು ಧಾರ್ಮಿಕವಾಗಿ ಧ್ರುವೀಕರಣಗೊಳಿಸಿ, ಆ ಧ್ರುವೀಕರಣ ಓಟಾಗಿ ಪರಿವರ್ತನೆಗೊಂಡು, ಬಳಿಕ ಅದು ಅಧಿಕಾರ ಪಡೆಯುವಲ್ಲಿ ವರೆಗೆ ತಲುಪಬಹುದು. ಅದಕ್ಕೆ ಈಗಿನ ಮೋದಿ ನೇತೃತ್ವದ ಕೇಂದ್ರ ಸರಕಾರವೇ ಅತ್ಯುತ್ತಮ ಉದಾಹರಣೆ. ಈ ಸತ್ಯ ಗೊತ್ತಿರುವುದರಿಂದಲೇ ಬಿಜೆಪಿ ತನ್ನ ಮುಖ್ಯ ಅಜೆಂಡಾವಾಗಿ ಕೋಮು ಆಧಾರಿತ ವಿಭಜನೆಯನ್ನೇ ಆರಿಸಿಕೊಂಡಿದೆ. ಸಂದರ್ಭ ಸಿಕ್ಕಾಗಲೆಲ್ಲ ಅಥವಾ ಸಂದರ್ಭವನ್ನು ಸೃಷ್ಟಿಸಿಕೊಂಡಾದರೂ ಅದು ಆಗಾಗ ಹಿಂದೂಗಳಿಂದ ಮುಸ್ಲಿಮರನ್ನು ಬೇರ್ಪಡಿಸಿ ಹೊಡೆಯುವ ಮಾತುಗಳನ್ನು ಆಡುತ್ತಲೇ ಇದೆ. ಬಹುಶಃ, ಬಿಜೆಪಿಯ ಈ ಧರ್ಮಾಧಾರಿತ ರಾಜಕೀಯಕ್ಕೆ ಇವತ್ತು ಅತ್ಯಂತ ಪ್ರಬಲ ಮತ್ತು ನಿರ್ಣಾಯಕ ಸವಾಲನ್ನು ಒಡ್ಡಿರುವುದು ವೇಮುಲ ಮತ್ತು ಕನ್ಹಯ್ಯ ನೇತೃತ್ವದ Nationalism (ದೇಶಪ್ರೇಮ) ಚರ್ಚೆ ಎಂದೇ ಹೇಳಬೇಕು. ಈವರೆಗೆ ಸ್ಯೂಡೋ ಸೆಕ್ಯುಲರಿಸಂ, ಮುಸ್ಲಿಮ್ ಅಪೀಸ್‍ಮೆಂಟ್ ಎಂದು ಹೇಳಿ ವಿರೋಧಿಗಳನ್ನು ರಕ್ಷಣಾತ್ಮಕ ಆಟಕ್ಕೆ ದೂಡುತ್ತಿದ್ದ ಬಿಜೆಪಿ ಇದೀಗ ಮೊದಲ ಬಾರಿ ವಿದ್ಯಾರ್ಥಿಗಳು ರಚಿಸಿದ ದೇಶಪ್ರೇಮದ ಚಕ್ರವ್ಯೂಹದೊಳಗೆ ಸಿಲುಕಿಕೊಂಡಿದೆ. ನೈಜ ದೇಶಪ್ರೇಮ ಮತ್ತು ಸ್ಯೂಡೋ (ನಕಲಿ) ದೇಶಪ್ರೇಮದ ಚರ್ಚೆಯೊಂದಕ್ಕೆ ಈ ವಿದ್ಯಾರ್ಥಿಗಳು ವೇದಿಕೆಯೊಂದನ್ನು ಒದಗಿಸಿದ್ದಾರೆ ಮತ್ತು ಬಿಜೆಪಿಗೆ ಅದನ್ನು ಮುಖಾಮುಖಿಗೊಳಿಸಿದ್ದಾರೆ. ದುರ್ಗೆಯನ್ನು ಪೂಜಿಸುವುದು ದೇಶಪ್ರೇಮ ಮತ್ತು ಮಹಿಷಾಸುರನನ್ನು ಆರಾಧಿಸುವುದು ದೇಶದ್ರೋಹ ಎಂದು ಪಾರ್ಲಿಮೆಂಟ್‍ನಲ್ಲಿ ಸ್ಮೃತಿ ಇರಾನಿ ತೀರ್ಪು ನೀಡಿದ್ದರು. ಹೌದೇ, ಇದು ದೇಶಪ್ರೇಮವೇ? ದೇಶಪ್ರೇಮಕ್ಕೆ ಈ ಬಗೆಯ ವ್ಯಾಖ್ಯಾನ ಇದೆಯೇ? ಬಿಜೆಪಿ ಪ್ರತಿಪಾದಿಸುತ್ತಿರುವ ದೇಶಪ್ರೇಮ ನಿಜಕ್ಕೂ ಯಾವುದು, ನಕಲಿಯೋ ಅಸಲಿಯೋ? ಕನ್ಹಯ್ಯ ಕುಮಾರ್ ನೇತೃತ್ವ ದಲ್ಲಿ ಕೇಳಿಬರುತ್ತಿರುವ ದೇಶಪ್ರೇಮದ ಪರಿಭಾಷೆಗೂ ಸ್ಮೃತಿ ಇರಾನಿಯ ಮಹಿಷಾಸುರ-ದುರ್ಗಾ ಆಧಾರಿತ ದೇಶಪ್ರೇಮದ ಪರಿಭಾಷೆಗೂ ನಡುವಿನ ಮುಖಾಮುಖಿಯಲ್ಲಿ ಯಾವುದು ಸರಿ, ಯಾವುದು ತಪ್ಪು? ದೇಶಪ್ರೇಮವೆಂಬುದು ಪೂಜೆ-ಆರಾಧನೆ ಆಧಾರಿತವೇ ಅಥವಾ ಬಡವರು ಮತ್ತು ಬಡತನ ರೇಖೆಗಿಂತ ಕೆಳಗಿರುವ ಬಹುಸಂಖ್ಯಾತ ಜನರ ಬದುಕು-ಭಾವನೆ ಆಧಾರಿತವೇ? ಯಾವುದು ನೈಜ, ಯಾವುದು ಸ್ಯೂಡೋ?
      2009ರಲ್ಲಿ ಅಡ್ವಾಣಿ ಚರ್ಚೆಗೆ ತಂದ ಸ್ಯೂಡೋ ಚರ್ಚೆಯನ್ನು 2016ರಲ್ಲಿ ಕನ್ಹಯ್ಯ ನೇತೃತ್ವ ವಿದ್ಯಾರ್ಥಿಗಳ ಗುಂಪು ಮುಂದುವರಿಸಿದೆ. ಅಂದು ಜಾತ್ಯತೀತತೆ ಯಾಗಿದ್ದರೆ ಇಂದು ದೇಶಪ್ರೇಮ. ಸ್ಯೂಡೋಗಳ ಮುಖ ಅನಾವರಣಗೊಳ್ಳಲಿ. 

No comments:

Post a Comment