Showing posts with label ATS ನಲ್ಲಿ ಇರುವವರೇನು ಹುರಿಗಡಲೆ ಮಾರಾಟಗಾರರಾ?. Show all posts
Showing posts with label ATS ನಲ್ಲಿ ಇರುವವರೇನು ಹುರಿಗಡಲೆ ಮಾರಾಟಗಾರರಾ?. Show all posts

Monday, September 10, 2012

ATS ನಲ್ಲಿ ಇರುವವರೇನು ಹುರಿಗಡಲೆ ಮಾರಾಟಗಾರರಾ?


ಅಸಿಮಾನಂದ
ರಾಜಸ್ತಾನದ ಭಯೋತ್ಪಾದನಾ ವಿರೋಧಿ ದಳದ ಪೊಲೀಸರು (ATS) 2010 ನವೆಂಬರ್ 19ರಂದು ಉತ್ತರಖಂಡದ ಹರಿದ್ವಾರದಲ್ಲಿರುವ ಆಶ್ರಮದಿಂದ ಸ್ವಾಮಿ ಅಸೀಮಾನಂದನನ್ನು ಬಂಧಿಸದೇ ಇರುತ್ತಿದ್ದರೆ ಆ 39 ಮಂದಿ ಯುವಕರು ಈಗಲೂ ಜೈಲಲ್ಲೇ ಇರಬೇಕಾಗಿತ್ತು..
            2006 ಸೆ. 8ರಂದು ಮಾಲೆಗಾಂವ್‍ನ ಮಸೀದಿಯೊಂದರ ಕಬರ ಸ್ಥಾನದಲ್ಲಿ 3 ಪ್ರಬಲ ಬಾಂಬ್ ಸ್ಫೋಟಗಳು ನಡೆಯುತ್ತವೆ. 37 ಮಂದಿ ಸಾವಿಗೀಡಾಗುತ್ತಾರಲ್ಲದೇ, 100ಕ್ಕಿಂತಲೂ ಅಧಿಕ ಮಂದಿ ಗಾಯಗೊಳ್ಳುತ್ತಾರೆ. ಮಹಾರಾಷ್ಟ್ರದ ಪೊಲೀಸರು (ATS) ತನಿಖೆ ಕೈಗೆತ್ತಿಕೊಳ್ಳುತ್ತಾರೆ. ಬಾಂಬ್ ಸ್ಫೋಟಗೊಂಡದ್ದು ಮುಸ್ಲಿಮರ ಸ್ಮಶಾನದಲ್ಲಾದರೂ ಅದರ ಹಿಂದಿರುವುದೂ ಮುಸ್ಲಿಮ್ ಉಗ್ರವಾದಿಗಳೇ ಅನ್ನುತ್ತವೆ ಮಾಧ್ಯಮಗಳು. ಅದಕ್ಕೆ ಪೂರಕವೆಂಬಂತೆ ಮುಸ್ಲಿಮ್ ಯುವಕರ ಬಂಧನವೂ ಪ್ರಾರಂಭವಾಗುತ್ತದೆ. ಡಾ| ಫಾರೂಖ್ ಮಕ್ದೂಮಿ, ಡಾ| ಸಲ್ಮಾನ್ ಫಾರ್ಸಿ.. ಮುಂತಾದ ಹತ್ತಾರು ಯುವಕರು ಜೈಲು ಸೇರುತ್ತಾರೆ. ಈ ಮಧ್ಯೆ ತನಿಖೆಯ ಹೊಣೆಗಾರಿಕೆ ATS ನಿಂದ ಸಿಬಿಐಗೆ ಹೋಗುತ್ತದೆ. ಹೀಗಿರುವಾಗಲೇ 2007ರಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಸಂಪರ್ಕದ ಕೊಂಡಿಯಂತಿದ್ದ ಸಂಜೋತಾ ರೈಲು ಎಕ್ಸ್ ಪ್ರೆಸ್‍ನಲ್ಲಿ ಬಾಂಬ್ ಸ್ಫೋಟವಾಗುತ್ತದೆ. 68 ಮಂದಿ ಸಾವಿಗೀಡಾಗುತ್ತಾರೆ. ಅದರ ಆರೋಪವನ್ನೂ ಮುಸ್ಲಿಮರ ಮೇಲೆಯೇ ಹೊರಿಸಲಾಗುತ್ತದೆ. 2007 ಮೇ 18ರಂದು (ಶುಕ್ರವಾರ) ಹೈದರಾಬಾದ್‍ನ ಮಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟವಾಗಿ 14 ಮಂದಿ ಸಾವಿಗೀಡಾಗುತ್ತಾರೆ. ಈ ಎಲ್ಲ ಸಂದರ್ಭಗಳಲ್ಲಿ ಮಾಧ್ಯಮಗಳು ಹರ್ಕತುಲ್ ಮುಜಾಹಿದೀನ್, ಹುಜಿ, ಲಷ್ಕರೆ ತ್ವಯ್ಯಿಬಗಳ ಹೆಸರನ್ನು ತೇಲಿಬಿಡುತ್ತವೆ. ಮಾತ್ರವಲ್ಲ, ಪೊಲೀಸರೂ ಇವನ್ನು ಬಹಿರಂಗವಾಗಿಯೇ ಸಮರ್ಥಿಸ ತೊಡಗುತ್ತಾರೆ. ಆದ್ದರಿಂದಲೇ, ಈ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಮುಸ್ಲಿಮ್ ಸಮುದಾಯದಲ್ಲಿ ಎಷ್ಟರ ಮಟ್ಟಿನ ಭೀತಿ ಹರಡಿತ್ತೆಂದರೆ, ಸ್ಫೋಟದ ಆರೋಪದಲ್ಲಿ ಬಂಧನಕ್ಕೊಳಗಾಗುತ್ತಿದ್ದ ಮುಸ್ಲಿಮ್ ಯುವಕರ ಕುಟುಂಬಿಕರೊಂದಿಗೆ ಮಾತಾಡಲೂ ಹೆದರುವಷ್ಟು. ಇಂಥ ಸ್ಥಿತಿಯಲ್ಲಿ, ಆ ಯುವಕರ ಪರವಾಗಿ ಒಂದು ಪ್ರತಿಭಟನೆ ನಡೆಸುವುದು, ಅಧಿಕಾರಿಗಳನ್ನು ಭೇಟಿಯಾಗುವುದಕ್ಕೆಲ್ಲಾ ಧೈರ್ಯವಾದರೂ ಎಲ್ಲಿರುತ್ತದೆ?  ಸಂತ್ರಸ್ತ ಕುಟುಂಬಗಳ ಕಣ್ಣೀರಿಗೆ ಪಕ್ಕದ ಮನೆಯವರು ಸ್ಪಂದಿಸುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಮಾಧ್ಯಮಗಳು ಸೃಷ್ಟಿಸಿ ಬಿಡುತ್ತವೆ. ನಿಜವಾಗಿ, ಹರ್ಕತ್, ಹುಜಿ, ಲಷ್ಕರ್‍ಗಳನ್ನು ಈ ದೇಶದ ಇತರೆಲ್ಲರಿಗಿಂತ ಹೆಚ್ಚು ಭೀತಿಯಿಂದ ನೋಡಿದ್ದು ಮುಸ್ಲಿಮ್ ಸಮುದಾಯವೇ. ಯಾಕೆಂದರೆ, ಅವುಗಳ ಹೆಸರಲ್ಲಿ ಮುಸ್ಲಿಮ್ ಯುವಕರೇ ಜೈಲಿಗೆ ಹೋಗುತ್ತಿದ್ದರಲ್ಲ. ಇಂಥ ಹೊತ್ತಲ್ಲೇ ಮಹಾರಾಷ್ಟ್ರದ ಮಾಲೆಗಾಂವ್ ಮತ್ತು ಮೊಡಸಾಗಳಲ್ಲಿ 2008ರಲ್ಲಿ ಮತ್ತೆ ಬಾಂಬ್ ಸ್ಫೋಟ ಸಂಭವಿಸುತ್ತದೆ. ಆದರೆ ಈ ಬಾರಿ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳದ (ATS) ನೇತೃತ್ವವನ್ನು ಹೇಮಂತ್ ಕರ್ಕರೆ ವಹಿಸಿಕೊಳ್ಳುತ್ತಾರೆ. ಆ ಬಳಿಕವೇ `ಹಿಂದೂ ಭಯೋತ್ಪಾದನೆ' ಸಾರ್ವಜನಿಕ ಚರ್ಚೆಗೆ ಒಳಗಾದದ್ದು. ಪುರೋಹಿತ್, ಸಾಧ್ವಿ, ದಯಾನಂದ.. ಮುಂತಾದವರ ಬಂಧನವಾಗಿ ಭಯೋತ್ಪಾದನೆಯ ಹೊಸ ಸಾಧ್ಯತೆಗಳು ತೆರೆದುಕೊಂಡದ್ದು..
        ಒಂದು ವೇಳೆ, ದೆಹಲಿಯ ತೀಸ್ ಹಝಾರಿಯಲ್ಲಿರುವ ಮೆಟ್ರೊ ಪಾಲಿಟನ್ ನ್ಯಾಯಾಲಯದ ನ್ಯಾಯಾಧೀಶ ದೀಪಕ್ ದಬಾಸ್‍ರ ಮುಂದೆ 2010 ಡಿ. 18ರಂದು ಅಸೀಮಾನಂದ ತಪ್ಪೊಪ್ಪಿಕೊಳ್ಳದೇ ಇರುತ್ತಿದ್ದರೆ, ಬಂಧಿತ ಮುಸ್ಲಿಮ್ ಯುವಕರ ಪಾಡಾದರೂ ಏನಾಗುತ್ತಿತ್ತು?
          ವಿಭೂತಿ ಭೂಷಣ್ ಸರ್ಕಾರ್ ಎಂಬ ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿರುವ ಅಸೀಮಾನಂದ, ಫಿಸಿಕ್ಸ್ ನಲ್ಲಿ ಪದವೀಧರ. ಬುರ್ದ್ವಾನ್ ವಿಶ್ವವಿದ್ಯಾಲಯದಿಂದ ಉನ್ನತ ಪದವಿಯನ್ನೂ ಪಡೆದವ. ವಿದ್ಯಾರ್ಥಿಯಾಗಿದ್ದಾಗಲೇ ಆರೆಸ್ಸೆಸ್‍ನೊಂದಿಗೆ ಗುರುತಿಸಿಕೊಂಡಿದ್ದ ಈತ, 1977ರಲ್ಲಿ ಅದರ ಪೂರ್ಣಕಾಲಿಕ (Ful  time) ಕಾರ್ಯಕರ್ತನಾಗಿ ನೇಮಕಗೊಂಡ. ವನವಾಸಿ ಕಲ್ಯಾಣ ಆಶ್ರಮ್ (VKA) ಎಂಬ ವಿಭಾಗದ ಹೊಣೆ ವಹಿಸಿಕೊಂಡು 1988ರಲ್ಲಿ ಆತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಹೋದ. ಅಲ್ಲಿನ ಆದಿವಾಸಿಗಳ ಮಧ್ಯೆ ಹಿಂದುತ್ವದ ಪ್ರಚಾರದಲ್ಲಿ ತೊಡಗಿದ. ಆದಿವಾಸಿಗಳು ಮಂಗನನ್ನು ದೇವನೆಂದು ಪೂಜಿಸುತ್ತಿದ್ದುದನ್ನು ಕಂಡು, ಗುಡಿಸಲಿನಂಥ ಸಣ್ಣ ಸಣ್ಣ ದೇಗುಲಗಳನ್ನು ಸ್ಥಾಪಿಸಿ, ಅದರೊಳಗೆ ಹನುಮಾನ್ ವಿಗ್ರಹಗಳನ್ನು ಸ್ಥಾಪಿಸಿದ. 1993ರಲ್ಲಿ ಝಾರ್ಖಂಡ್‍ಗೆ ಮರಳಿದ ಆತ 95ರಲ್ಲಿ ಗುಜರಾತ್‍ನ ದಾಂಗ್ಸ್ ಜಿಲ್ಲೆಯನ್ನು ಕಾರ್ಯಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡ. ರಾಮಾಯಣದ ಕಥಾಪಾತ್ರದಲ್ಲಿ ಬರುವ `ಶಬರಿ'ಗಾಗಿ ದಾಂಗ್ಸ್ ನ ಬೆಟ್ಟದಲ್ಲಿ ಶಬರಿ ದೇಗುಲವನ್ನು ಕಟ್ಟಿ ದಾಂಗ್ಸ್ ನ ಆದಿವಾಸಿಗಳ ನಡುವೆ ಕೆಲಸ ಮಾಡುತ್ತಿದ್ದ ಕ್ರೈಸ್ತ ಸಂಘಟನೆಗಳಿಂದ ಆದಿವಾಸಿಗಳನ್ನು ಪ್ರತ್ಯೇಕಗೊಳಿಸಿದ. (ಮಾಲಿನಿ ಚಟರ್ಜಿ - ಇಂಡಿಯನ್ ಎಕ್ಸ್ ಪ್ರೆಸ್) 2006ರಲ್ಲಿ ಆರೆಸ್ಸೆಸ್ ಇಲ್ಲಿ ಶಬರಿ ಕುಂಭವನ್ನೂ ಏರ್ಪಡಿಸಿತ್ತು. ಆದರೆ 2010 ನವೆಂಬರ್ 19ರಂದು ರಾಜಸ್ತಾನ್ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಿಬ್ಬೆರಗಾಗಿ ಹೋಗಿದ್ದರು. ಅಜ್ಮೀರ್ ದರ್ಗಾ, ಮಕ್ಕಾ ಮಸೀದಿ, ಮಾಲೆಗಾಂವ್, ಸಂಜೋತಾ.. ಈ ಎಲ್ಲ ಭಯೋತ್ಪಾದನಾ ಕೃತ್ಯಗಳ ಹಿಂದೆ ಈತನ ಕೈವಾಡವಿದೆ ಅನ್ನುವುದು ದೃಢಪಟ್ಟ ಕೂಡಲೇ ATS  ತನಿಖೆಯನ್ನು ಚುರುಕುಗೊಳಿಸಿತು. ಆದ್ದರಿಂದಲೇ ಅಸೀಮಾನಂದನನ್ನು ಮಕ್ಕಾ ಮಸೀದಿ ಸ್ಫೋಟದ ಕುರಿತಂತೆ ವಿಚಾರಣೆಗಾಗಿ ಆಂಧ್ರ ಪ್ರದೇಶಕ್ಕೆ ಕರೆತರಲಾಯಿತಲ್ಲದೆ ಅಲ್ಲಿನ ಚಂಚಲಗುಡ ಜೈಲಿನಲ್ಲಿರಿಸಲಾಯಿತು. ವಿಶೇಷ ಏನೆಂದರೆ, ಮಕ್ಕಾ ಮಸೀದಿ ಸ್ಫೋಟದ ಆರೋಪದಲ್ಲಿ ಬಂಧಿತನಾಗಿದ್ದ ಅಬ್ದುಲ್ ಕಲೀಮ್‍ನನ್ನು ಇರಿಸಲಾಗಿದ್ದ ಕೋಣೆಯಲ್ಲೇ ಅಸೀಮಾನಂದನನ್ನು ಇರಿಸಲಾಯಿತು. ಅವರಿಬ್ಬರ ನಡುವೆ ಮಾತುಕತೆಗಳೂ ನಡೆದುವು. ಈ ಕಾರಣದಿಂದಲೇ, 2010 ಡಿ. 16ರಂದು ನ್ಯಾಯಾಧೀಶ ದೀಪಕ್ ದಬಾಸ್‍ರ ಮುಂದೆ ಸ್ವಯಂಪ್ರೇರಿತವಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಲು ಅಸೀಮಾನಂದ ಅನುಮತಿ ಕೋರುತ್ತಾನೆ. ಮಾಡದ ತಪ್ಪಿಗಾಗಿ ಕಲೀಮ್‍ನಂಥ ಯುವಕರು ಜೈಲಲ್ಲಿ ಕೊಳೆಯುತ್ತಿರುವುದನ್ನು ನೋಡಿ ತಾನು ಈ ನಿರ್ಧಾರಕ್ಕೆ ಬರಬೇಕಾಯಿತು ಅನ್ನುತ್ತಾನೆ. ಆದರೆ ದೀಪಕ್ ದಬಾಸ್ ಒಪ್ಪಿಕೊಳ್ಳುವುದಿಲ್ಲ. ನೀನು ಪೊಲೀಸರ ಒತ್ತಡಕ್ಕೆ ಒಳಗಾಗಿ ಇಂಥ ತೀರ್ಮಾನಕ್ಕೆ ಬಂದಿರುವ ಸಾಧ್ಯತೆ ಇದೆ. ಆದ್ದರಿಂದ ಎರಡು ದಿನಗಳ ಸಮಯ ಕೊಡುತ್ತೇನೆ ಅನ್ನುತ್ತಾರೆ. ಆದರೆ ಡಿ. 18ರಂದು ಮತ್ತೆ ತಪ್ಪೊಪ್ಪಿಗೆ ಹೇಳಿಕೆಗೆ ಅನುಮತಿ ಕೋರಿದ ಆತ, ಆ ಬಳಿಕ ದೀರ್ಘ 5 ಗಂಟೆಗಳ ಕಾಲ ತನ್ನ ಭಯೋತ್ಪಾದನಾ ಕೃತ್ಯಗಳನ್ನು ಎಳೆ ಎಳೆಯಾಗಿ ನ್ಯಾಯಾಧೀಶರ ಮುಂದೆ ಬಿಡಿಸಿಡುತ್ತಾನೆ. ಮಾತ್ರವಲ್ಲ, ಭಾರತದ ರಾಷ್ಟ್ರಪತಿ ಮತ್ತು ಪಾಕ್ ಅಧ್ಯಕ್ಷರಿಗೆ ತಲುಪಿಸಬೇಕೆಂದು ಹೇಳಿ ಒಂದು ಪ್ರತ್ಯೇಕ ತಪ್ಪೊಪ್ಪಿಗೆ ಪತ್ರವನ್ನು ಬರೆದು ಡಿ. 20ರಂದು ತನ್ನ ಸಹೋದರನಿಗೆ ಕಳುಹಿಸಿಕೊಡುತ್ತಾನೆ. ಆದರೆ ಆತ ಅದನ್ನು ಅವರಿಬ್ಬರಿಗೆ ತಲುಪಿಸದಿದ್ದರೂ 2011ರ ಜನವರಿಯಲ್ಲಿ ಆ ಪತ್ರವನ್ನು ತೆಹಲ್ಕಾ ಮತ್ತು ಸಿಎನ್‍ಎನ್-ಐಬಿಎನ್‍ಗಳು ಯಥಾರೂಪದಲ್ಲಿ ಪ್ರಕಟಿಸುತ್ತವೆ. ಈ ತಪ್ಪೊಪ್ಪಿಗೆಯ ಬಳಿಕವೇ ಮಕ್ಕಾ ಮತ್ತು ಮಾಲೆಗಾಂವ್ ಸ್ಫೋಟದ ಆರೋಪದಲ್ಲಿ ಬಂಧಿತರಾಗಿ ಜೈಲಲ್ಲಿದ್ದ 39 ಮುಸ್ಲಿಮ್ ಯುವಕರು ಬಿಡುಗಡೆಗೊಂಡದ್ದು. ಇದರ ಅರ್ಥವೇನು? ನಿಜವಾದ ಅಪರಾಧಿ ಸಿಗುವವರೆಗೆ ಬಂಧಿತರೆಲ್ಲ ಅಪರಾಧಿಗಳೇ ಆಗಿರುತ್ತಾರೆ ಎಂದೇ ಅಲ್ಲವೇ? ಒಂದು ವೇಳೆ ಅಸೀಮಾನಂದನ ಬಂಧವಾಗದಿರುತ್ತಿದ್ದರೆ ಈಗಲೂ ಆ ಯುವಕರೆಲ್ಲಾ ಜೈಲಲ್ಲಿರಬೇಕಿತ್ತಲ್ಲವೇ? ಇದು ಯಾವ ಮಾದರಿಯ ತನಿಖೆ? ಮಾಲೆಗಾಂವ್‍ನ ನೆಪದಲ್ಲಿ ಬಂಧನಕ್ಕೊಳಗಾದ ಮುಸ್ಲಿಮ್ ಯುವಕರು 5 ವರ್ಷಗಳ ಬಳಿಕ ಬಿಡುಗಡೆಗೊಂಡರು. ಮಕ್ಕಾ ಸ್ಫೋಟದ ಆರೋಪಿಗಳು 4 ವರ್ಷಗಳ ನಂತರ. ತನಿಖಾಧಿಕಾರಿಗಳಿಗೆ ನಿರಪರಾಧಿಯನ್ನು ಗುರುತಿಸುವುದಕ್ಕೆ ಇಷ್ಟು ವರ್ಷಗಳು ಬೇಕಾಗುತ್ತವೆಯೇ? ಇಷ್ಟಕ್ಕೂATS ನಲ್ಲಿ ಅಥವಾ ರಾಷ್ಟ್ರೀಯ ಸಂಶೋಧನಾ ತಂಡ (NIA) ಅಥವಾ ಭಯೋತ್ಪಾದನೆಯನ್ನು ತನಿಖಿಸುವ ಇನ್ನಾವುದೇ ಸಂಸ್ಥೆಯಲ್ಲಿರುವುದು ಮೀನು, ತರಕಾರಿ, ಹುರಿಗಡಲೆ ಮಾರುವ ವ್ಯಕ್ತಿಗಳೇನೂ ಅಲ್ಲವಲ್ಲ. ಅದರಲ್ಲಿರುವವರಿಗೆ ಆ ಕ್ಷೇತ್ರದಲ್ಲಿ ವಿಶೇಷ ತರಬೇತಿ ಸಿಕ್ಕಿರುತ್ತದೆ. ಅಪರಾಧಿ ಮತ್ತು ಅಮಾಯಕರನ್ನು ಮುಖ ಚಹರೆಯಿಂದಲೇ ಪತ್ತೆ ಹಚ್ಚುವಷ್ಟು ಅವರು ಪರಿಣತರೂ ಆಗಿರುತ್ತಾರೆ. ಇಷ್ಟಿದ್ದೂ 4-5 ವರ್ಷಗಳ ಕಾಲ ಆ ಯುವಕರನ್ನು ಜೈಲಲ್ಲಿಟ್ಟದ್ದೇಕೆ? ಅಸಿಮಾನಂದನ ತಪ್ಪೊಪ್ಪಿಗೆಯ ವರೆಗೆ ಅವರ ಬಿಡುಗಡೆಗೆ ಕಾದದ್ದೇಕೆ? ನಿಜವಾದ ಅಪರಾಧಿ ಸಿಗದಿದ್ದರೆ ಇವರನ್ನೇ ಫಿಕ್ಸ್ ಮಾಡುವುದಕ್ಕಾ?
         ಆದ್ದರಿಂದಲೇ, ಭಯೋತ್ಪಾದನೆಯ ಆರೋಪದಲ್ಲಿ ರಾಜ್ಯದಲ್ಲಿ ಬಂಧನಕ್ಕೊಳಗಾದ ಯುವಕರ ಬಗ್ಗೆ, ಅವರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುವ ಬಗ್ಗೆ ಆತಂಕ ಮೂಡುವುದು. ಆದರೂ..
ತೀಸ್ತಾ ಸೆಟಲ್ವಾಡ್
ಹರ್ಷ್ ಮಂದರ್
ಸಂಜೀವ್ ಭಟ್
ಮುಕುಲ್ ಸಿನ್ಹಾ
ಪ್ರಶಾಂತ್ ಭೂಷಣ್
ರಾಹುಲ್ ಶರ್ಮಾ..
..ಮುಂತಾದವರೆಲ್ಲ ತಮ್ಮ ಪಾಡಿಗೇ ತಾವಿರುತ್ತಿದ್ದರೆ ಗುಜರಾತ್ ಹತ್ಯಾಕಾಂಡದ ರೂವಾರಿಗಳಾದ ಕೊಡ್ನಾನಿಗೆ, ಬಾಬು ಭಜರಂಗಿಗೆ, ಪತ್ನಿ ಮುಸ್ಲಿಮ್ ಆಗಿದ್ದೂ ಹತ್ಯಾಕಾಂಡದಲ್ಲಿ ಭಾಗಿಯಾದ ಸುರೇಶ್ ಚಾಹ್ರನಿಗೆ ಶಿಕ್ಷೆಯಾಗುವುದು ಸಾಧ್ಯವಿತ್ತೇ? ಹತ್ಯಾಕಾಂಡದಲ್ಲಿ ಗುಜರಾತ್ ಸರಕಾರದ ಪಾತ್ರವನ್ನು ಖಂಡಿಸಿ ಸರಕಾರಿ ಹುದ್ದೆಯನ್ನು ತೊರೆದವರು ಇವರಲ್ಲಿದ್ದಾರೆ. ವಿವಿಧ ಕೇಸುಗಳನ್ನು ಜಡಿಸಿಕೊಂಡವರಿದ್ದಾರೆ. ಜೀವ ಬೆದರಿಕೆಗಳಿಗೆ ಒಳಗಾದವರಿದ್ದಾರೆ. ಅಂದಹಾಗೆ, ಮನುಷ್ಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ, ಅವರ ನೋವುಗಳನ್ನು ಧರ್ಮದ ಆಧಾರದಲ್ಲಿ ವಿಂಗಡಿಸುವುದನ್ನು ಪ್ರಬಲವಾಗಿ ಖಂಡಿಸುವ ದೊಡ್ಡದೊಂದು ಮನುಷ್ಯ ಪ್ರೇಮಿ ಗುಂಪು ಈ ದೇಶದಲ್ಲಿದೆ ಎನ್ನುವುದಕ್ಕೆ ಪುರಾವೆಯಲ್ಲವೆ ಇವರೆಲ್ಲ? ನಿಜವಾಗಿ, ಸತ್ಯಕ್ಕೆ ದೊಡ್ಡ ಅಪಾಯ ಇದ್ದದ್ದೇ ಗುಜರಾತ್‍ನಲ್ಲಿ. ಆದರೆ ಈ ದೇಶದಲ್ಲಿ ಈವರೆಗೆ ನಡೆದ ಹತ್ಯಾಕಾಂಡಗಳಿಗೆ ಹೋಲಿಸಿದರೆ ಹೆಚ್ಚು ನ್ಯಾಯ ಸಿಕ್ಕಿರುವುದೂ ಗುಜರಾತ್‍ನಲ್ಲೇ! ಇದೇನನ್ನು ಸೂಚಿಸುತ್ತದೆ?  ಅಧಿಕಾರದಲ್ಲಿ ಯಾರೇ ಇರಲಿ, ಹೋರಾಟವನ್ನು ನಿರಂತರ ಜಾರಿಯಲ್ಲಿರಿಸಿದರೆ, ವಿಚಾರಗೋಷ್ಠಿಗಳು, ಟಿ.ವಿ. ಚಾನೆಲ್‍ಗಳು, ಪತ್ರಿಕೆ, ಫೇಸ್‍ಬುಕ್, ಟ್ವೀಟರ್.. ಮುಂತಾದ ಎಲ್ಲ ಮಾಧ್ಯಮಗಳ ಮೂಲಕ ಅನ್ಯಾಯವನ್ನು ಸದಾ ಜೀವಂತದಲ್ಲಿರಿಸಿದರೆ, ಗೆಲುವು ಸಾಧ್ಯ ಎಂಬುದನ್ನಲ್ಲವೇ?  ಈ ದೇಶದಲ್ಲಿ ನಡೆದ ಹತ್ಯಾಕಾಂಡಗಳಲ್ಲಿ ಗುಜರಾತ್ ಹತ್ಯಾಕಾಂಡವು ಚರ್ಚೆಗೆ, ಮಾಧ್ಯಮ ಸುದ್ದಿಗೆ ಒಳಗಾದಷ್ಟು ಇನ್ನಾವುದೂ ಆಗಿಲ್ಲ. ಕಳೆದ 10 ವರ್ಷಗಳಲ್ಲಿ ಗುಜರಾತ್ ನಿರಂತರ ಸುದ್ದಿಯಲ್ಲಿದ್ದರೆ, ಅದಕ್ಕೆ ಜೈನ ಧರ್ಮೀಯರಾದ ಮಲ್ಲಿಕಾ ಸಾರಾಭಾಯಿ , ಸಿಕ್ಖರಾದ ಹರ್ಷ್ ಮಂದರ್, ಕ್ರೈಸ್ತರಾದ ಸೆಟಲ್ವಾಡ್, ಬ್ರಾಹ್ಮಣರಾದ ಸಂಜೀವ್ ಭಟ್.. ಕಾರಣರೆಂಬುದನ್ನು ಯಾರಿಗೆ ತಾನೇ ಅಲ್ಲಗಳೆಯಲು ಸಾಧ್ಯ? ಹೀಗಿರುವಾಗ ವ್ಯವಸ್ಥೆಯನ್ನು ದೂರುತ್ತಾ ಸಿನಿಕರಾಗುವುದಕ್ಕಿಂತ ನಮ್ಮ ನಡುವೆ ಇರುವ ಇಂಥ ಮನುಷ್ಯ ಪ್ರೇಮಿಗಳನ್ನು ಜೊತೆಗಿಟ್ಟುಕೊಂಡು ಅನ್ಯಾಯದ ವಿರುದ್ಧ ಹೋರಾಟಕ್ಕೆ ಮುಂದಾದರೆ, ಮನುಷ್ಯ ವಿರೋಧಿಗಳು ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾ? ಇವತ್ತು ಗುಜರಾತ್‍ನಲ್ಲಿ ಇದು ಸಾಧ್ಯವಾಗಿದೆ. ಹೀಗಿರುವಾಗ ಉಳಿದೆಡೆಯೇಕೆ ಇದು ಅಸಾಧ್ಯವಾಗಬೇಕು?
        ಅಂದಹಾಗೆ, ನರೋಡಾ-ಪಾಟಿಯಾ ಹತ್ಯಾಕಾಂಡದ ಅಪರಾಧಿಗಳನ್ನು ಬೆಂಬಲಿಸಿ ಗುಜರಾತ್‍ನ ಕರ್ನಾವತಿಯಲ್ಲಿ  ಸೆ. 1ರಂದು 300 ಮಂದಿ ಸಾಧುಗಳೊಂದಿಗೆ ವಿಹಿಂಪದ ತೊಗಾಡಿಯಾ ಮೌನ ಪ್ರತಿಭಟನೆ ನಡೆಸಿದಂತೆ (ದಿ ಹಿಂದೂ, ಸೆ. 2, 2012) ಕಸಬ್‍ನನ್ನೋ ದಾವೂದ್‍ನನ್ನೋ ಬೆಂಬಲಿಸಿ ಈ ದೇಶದ ಮುಸ್ಲಿಮ್ ಸಂಘಟನೆಯೊಂದು ಪ್ರತಿಭಟನೆ ಹಮ್ಮಿಕೊಂಡಿದ್ದರೆ ಏನಾಗುತ್ತಿತ್ತು? ಶಂಕಿತ ಉಗ್ರರ ಹಿಟ್‍ಲಿಸ್ಟ್ ನಲ್ಲಿದ್ದೇವೆಂದು ಹೇಳಿಕೊಳ್ಳುತ್ತಾ ಹುತಾತ್ಮರಂತೆ ತಿರುಗುತ್ತಿರುವವರ ಪ್ರತಿಕ್ರಿಯೆಗಳು ಹೇಗಿರುತ್ತಿತ್ತು?