Tuesday, June 2, 2015

ಮನ್‍ಕಿ ಬಾತ್ ನಿಂದ ಸೆಲ್ಫಿಯವರೆಗೆ..

   ಧಾಮಿನಿ ಶಾ, ಚಾರ್ಲೆಟ್ ಥಾಮಸ್, ಎ.ಎಸ್. ಬಂದೂಕುವಾಲಾ, ರಾಫೀ ಮಲಿಕ್, ಜಮೀಲಾ ಖಾನ್.. ಇವರೆಲ್ಲ ಗೆಳೆಯರಲ್ಲ. ಪರಸ್ಪರ ಭೇಟಿಯಾಗಿರುವ ಸಾಧ್ಯತೆಯೂ ಕಡಿಮೆ. ಆದರೆ ಇವರೆಲ್ಲ ತೋಡಿಕೊಳ್ಳುವ ನೋವು ಒಂದೇ. ಅವರ ಮಾತುಗಳಲ್ಲಿ ಸ್ಪಷ್ಟತೆ ಮತ್ತು ನಿಖರತೆಯಿದೆ. ಹಸಿ ಹಸಿ ಅನುಭವಗಳಿವೆ. ಗುಜರಾತ್ ವಿದ್ಯಾಪೀಠ ಯುನಿವರ್ಸಿಟಿಯ ಪ್ರೊಫೆಸರ್ ಆದ ಧಾಮಿನಿ ಶಾ ಅವರು ಗುಜರಾತ್‍ನ ಮುಸ್ಲಿಮ್ ಬಾಹುಳ್ಯ ಪ್ರದೇಶಗಳಾದ ಆನಂದ್, ಅಹ್ಮದಾಬಾದ್ ಮತ್ತು ಸಬರ್‍ಕಾಂತ್‍ಗಳಲ್ಲಿ ಅಧ್ಯಯನ ನಡೆಸುತ್ತಾರೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲಾದ ಅಧ್ಯಯನದ ವರದಿಯಲ್ಲಿ ಹೇಳಿರುವುದೇನೆಂದರೆ, ‘ಈ ಮೂರು ಪ್ರದೇಶಗಳ 92% ಮುಸ್ಲಿಮರಿಗೆ ಹಿಂದುಗಳೊಂದಿಗೆ ಸಂಪರ್ಕವೇ ಇಲ್ಲ. 93% ಮುಸ್ಲಿಮರು ಆರ್ಥಿಕ ಸಂಕಷ್ಟ ಮತ್ತು ಉದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗುಜರಾತ್ ಗಲಭೆಯಲ್ಲಿ ನಿರ್ವಸಿತರಾಗಿ ಇಲ್ಲಿ ಸೇರಿಕೊಂಡಿರುವವರಲ್ಲಿ 85% ಮಂದಿ ಮುಸ್ಲಿಮರು ಮರಳಿ ಹೋಗಲು ಪ್ರಯತ್ನಿಸಿಲ್ಲ..’ ಎಂದಾಗಿತ್ತು. ಫ್ರಾನ್ಸ್ ನ ಸೈನ್ಸ್ ಪೋ ಯುನಿವರ್ಸಿಟಿಯ ಥಾಮಸ್‍ರು ಗುಜರಾತ್‍ನಲ್ಲಿ 6 ವರ್ಷಗಳ ಕಾಲ ಅಧ್ಯಯನ ನಡೆಸಿದರು. ಮುಖ್ಯವಾಗಿ ಜುಹಾಪುರ ಮತ್ತು ಅಹ್ಮದಾಬಾದ್‍ಗಳಲ್ಲಿ ನಡೆಸಿದ ಅಧ್ಯಯನ ವರದಿಯನ್ನು ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದರು. ‘ಮುಸ್ಲಿಮರು ಸಾಲ ಮಂಜೂರಾತಿ, ಶಾಲಾ ದಾಖಲಾತಿ ಮತ್ತು ಪೊಲೀಸು ಠಾಣೆಗಳಲ್ಲಿ ದೂರು ದಾಖಲಾತಿ.. ಎಲ್ಲದಲ್ಲೂ ಅಡಚಣೆ ಮತ್ತು ಅಸಮಾನತೆಯನ್ನು ಎದುರಿಸುತ್ತಿದ್ದಾರೆ..’ ಎಂದು ಬರೆದರು. ಬಂದೂಕುವಾಲರು ನಿವೃತ್ತ ಪ್ರೊಫೆಸರ್. ರಾಫೀ ಮಲಿಕ್‍ರು ನಗರ ಯೋಜನೆಗೆ ಸಂಬಂಧಿಸಿದ ಸಂಸ್ಥೆಯೊಂದರ ಮುಖ್ಯಸ್ಥ. ಜವಿೂಲಾ ಖಾನ್ ಸಮಾಜ ಕಾರ್ಯಕರ್ತೆ. (ದಿ ಹಿಂದೂ ಮೇ 25, 2015) ಇವರೆಲ್ಲರ ಕ್ಷೇತ್ರ ಬೇರೆ ಬೇರೆಯಾಗಿದ್ದರೂ ಇವರ ಮಾತು, ದುಗುಡ, ಅಭಿಪ್ರಾಯಗಳೆಲ್ಲ ಒಂದೇ ಆಗಿರಲು ಏನು ಕಾರಣ, ಯಾರು ಕಾರಣ? ಹಾಗಂತ ಪ್ರಧಾನಿ ನರೇಂದ್ರ ಮೋದಿಯವರ ಒಂದು ವರ್ಷದ ಆಡಳಿತವನ್ನು ವಿಶ್ಲೇಷಿಸುವುದಕ್ಕೆ ಗುಜರಾತನ್ನು ಮಾನದಂಡವಾಗಿ ಬಳಸಬೇಕಿಲ್ಲ. ಮುಖ್ಯಮಂತ್ರಿ ನರೇಂದ್ರ ಮೋದಿ ಈಗ ಇತಿಹಾಸ. ಅವರ ಸ್ಥಾನದಲ್ಲಿ ಆನಂದಿ ಬೆನ್ ಇದ್ದಾರೆ. ಗುಜರಾತ್‍ನ ವಿಭಜನಾಕಾರಿ ವಾತಾವರಣಕ್ಕೆ ಮುಖ್ಯಮಂತ್ರಿ ಮೋದಿಯವರ ಆಡಳಿತಾವಧಿಯೇ ಕಾರಣ ಎಂಬುದು ಕಟು ವಾಸ್ತವವೇ ಆಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ಒಂದು ವರ್ಷವನ್ನು ಅದರಿಂದ ಹೊರಗಿಟ್ಟೂ ನೋಡಬಹುದಾಗಿದೆ. ಪ್ರಧಾನ ಮಂತ್ರಿ ಜನ್‍ಧನ್ ಯೋಜನಾ (ಬ್ಯಾಂಕ್ ಖಾತೆ), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನಾ (ಜೀವ ವಿಮೆ), ‘ಪ್ರಧಾನಮಂತ್ರಿ ಸುರಕ್ಷಾ’ ಬೀಮಾ ಯೋಜನಾ (ಅಪಘಾತ ವಿಮೆ), ಅಟಲ್ ಪೆನ್ಶನ್ ಯೋಜನಾ (ಅಸಂಘಟಿತ ವಲಯಕ್ಕೆ ಪಿಂಚಣಿ) ಮುಂತಾದ ಹೊಸತನ್ನು ಅವರು ಈ ಒಂದು ವರ್ಷದಲ್ಲಿ ದೇಶಕ್ಕೆ ಪರಿಚಯಿಸಿದ್ದಾರೆ. ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸುವಂತೆ ವಿಶ್ವಸಂಸ್ಥೆಯ ಮನವೊಲಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಅಮೇರಿಕದ ಅಧ್ಯಕ್ಷ ಒಬಾಮ ಅತಿಥಿಯಾಗುವಂತೆ ನೋಡಿಕೊಂಡಿದ್ದಾರೆ. ‘ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್’ ಸ್ಥಾಪಿತವಾಗುವುದಕ್ಕೆ ಕಾರಣಕರ್ತರಾಗಿದ್ದಾರೆ. ಆದರೂ ಮೋದಿಯವರ 365 ದಿನಗಳೆಂದರೆ ಇಷ್ಟೇ ಅಲ್ಲ- ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಪಂಚಾಯಿತಿ ರಾಜ್ ಸಂಸ್ಥೆಗಳು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಯೋಜನೆಗಳು.. ಸಹಿತ ಹಲವಾರು ಬಡವಸ್ನೇಹಿ ಯೋಜನೆಗಳ ಅನುದಾನವನ್ನು ಕಡಿತಗೊಳಿಸಿದ್ದೂ ಪ್ರಧಾನಿ ಮೋದಿಯೇ. ಇದರ ಮೊತ್ತವೇ 1.75 ಲಕ್ಷ ಕೋಟಿ ರೂಪಾಯಿ. ಈ ಕಡಿತ ಎಷ್ಟು ಏಕಪಕ್ಷೀಯವಾಗಿತ್ತೆಂದರೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿಯವರೇ ಅಪಸ್ವರ ಎತ್ತುವಷ್ಟು. ಭೂಸ್ವಾಧೀನ ಕಾಯ್ದೆ, ಪರಿಸರ ಯೋಜನೆಗಳಿಗೆ ತುರ್ತು ಅನುಮತಿ ಮತ್ತು ಮಾಧ್ಯಮಗಳೊಂದಿಗೆ ಶೂನ್ಯ ಸಂವಾದವು ಅವರ ಒಂದು ವರ್ಷದ ಅವಧಿಯ ಗುರುತುಗಳಾಗಿವೆ. ನಿಜವಾಗಿ, ಮೋದಿಯವರು ಮನ್‍ಮೋಹನ್ ಸಿಂಗ್‍ರನ್ನು ಒಂದಷ್ಟು ಹೆಚ್ಚೇ ಅನುಸರಿಸಿದ್ದಾರೆ. ರಕ್ಷಣಾ ಕ್ಷೇತ್ರ, ಮಾಧ್ಯಮ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು ಮೋದಿಯವರ ಪಕ್ಷ ಈ ಹಿಂದೆ ಬಲವಾಗಿ ವಿರೋಧಿಸಿತ್ತು. ಪಾಕ್ ಮತ್ತು ಚೀನಾದ ಜೊತೆಗಿನ ಮನ್‍ಮೋಹನ್ ಸಿಂಗ್‍ರ ಸಂಬಂಧವನ್ನು ಬಿಜೆಪಿ ಆಗಾಗ ವಿಮರ್ಶಿಸುತ್ತಿತ್ತು. ಗಡಿ ತಂಟೆಗಾಗಿ ಅವೆರಡೂ ರಾಷ್ಟ್ರಗಳನ್ನು ವೈರಿ ಪಟ್ಟದಲ್ಲಿಟ್ಟಿದ್ದು ಬಿಜೆಪಿಯೇ. ಆದರೆ, ತನ್ನ ಪ್ರಮಾಣ ವಚನದ ಸಂದರ್ಭದಲ್ಲಿ ಪಾಕ್ ಪ್ರಧಾನಿಯನ್ನು ಆಹ್ವಾನಿಸಿದ ಮೋದಿಯವರು ಚೀನಾದೊಂದಿಗೆ ಇತ್ತೀಚೆಗಷ್ಟೇ 1000 ಕೋಟಿ ಡಾಲರ್‍ಗಳ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಯಾವ ಸಂದರ್ಭದಲ್ಲೆಂದರೆ, ಅವರು ಚೀನಾಕ್ಕೆ ಭೇಟಿಕೊಟ್ಟಾಗ ಅಲ್ಲಿನ ಪ್ರಮುಖ ಸರಕಾರಿ ಪತ್ರಿಕೆಯು ಅರುಣಾಚಲ ರಹಿತ ಭಾರತದ ಭೂಪಟವನ್ನು ಪ್ರಕಟಿಸಿತ್ತು. ಬಾಂಗ್ಲಾ ದೇಶಕ್ಕೆ 500 ಎಕರೆಯಷ್ಟು ಭಾರತೀಯ ಭೂಮಿಯನ್ನು ಕೊಟ್ಟು ಮೋದಿಯವರು ಗಡಿ ನಿರ್ಣಯಕ್ಕೆ ಮುಂದಾದರು. ಒಂದು ವೇಳೆ, ಮನ್‍ಮೋಹನ್ ಸಿಂಗ್ ಸರಕಾರವು ಇಂಥ ನಿರ್ಧಾರ ಕೈಗೊಳ್ಳುತ್ತಿದ್ದರೆ ‘ಒಂದಿಂಚು ಭೂಮಿಯನ್ನೂ ಬಿಡೆವು’ ಎಂಬ ಘೋಷಣೆಯೊಂದಿಗೆ ಬಿಜೆಪಿ ದೇಶವ್ಯಾಪಿ ಪ್ರತಿಭಟನೆ ಕೈಗೊಳ್ಳುತ್ತಿತ್ತು. ಮೋದಿಯವರ ಒಂದು ವರ್ಷದ ಅವಧಿಯಲ್ಲಿ ಗ್ರೀನ್‍ಪೀಸ್, ಫೋರ್ಡ್ ಫಂಡೇಶನ್ ಸಹಿತ ಅನೇಕಾರು ಎನ್‍ಜಿಓಗಳ ಲೈಸನ್ಸ್ ಗಳು ಒಂದೋ ರದ್ದಾದವು ಅಥವಾ ಶಂಕಿತಗೊಂಡವು.
   1.    ಭಾರತೀಯ ಇತಿಹಾಸ ಸಂಶೋಧನಾ ಸಂಸ್ಥೆ (ICHR)
   2.    ಸಮಾಜ-ವಿಜ್ಞಾನ ಸಂಶೋಧನಾ ಸಂಸ್ಥೆ (ICSSR)
   3.    ನೆಹರೂ ಮೆಮೊರಿಯಲ್ ಮ್ಯೂಸಿಯಂ ಮತ್ತು ಗ್ರಂಥಾಲಯ (NMML)
   4.    ಲಲಿತ ಕಲಾ ಅಕಾಡೆಮಿ
   5.    ಸೆನ್ಸಾರ್ ಮಂಡಳಿ
   6.    ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (NCERT)
ಮುಂತಾದುವುಗಳಲ್ಲಿ ಈಗಾಗಲೇ ಸಂಘಪರಿವಾರದ ಚಿಂತಕರನ್ನು ತುಂಬಲಾಗಿದೆ. ಮೋದಿಯವರು ಪ್ರಧಾನಿಯಾದ ಒಂದು ವಾರದಲ್ಲೇ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮ್ರ್ರಿತಿ ಇರಾನಿಯವರೊಂದಿಗೆ ಸಂಘಪರಿವಾರವು ಸಭೆ ನಡೆಸಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಲಾಗುತ್ತಿರುವ ‘ತಿರುಚಿದ’ ಇತಿಹಾಸವನ್ನು ಸರಿಪಡಿಸುವ ಬಗ್ಗೆ ಆ ಸಭೆಯಲ್ಲಿ ಚರ್ಚಿಸಲಾಗಿತ್ತು. ಒಂದು ರೀತಿಯಲ್ಲಿ, ಸೃಜನಶೀಲತೆ ಮತ್ತು ವೈವಿಧ್ಯತೆಗಳನ್ನು ಶೈಕ್ಷಣಿಕ ಪಠ್ಯಕ್ರಮಗಳಿಂದ ಅಳಿಸುವ ಹಾಗೂ ಸಂಘದ ಚಿಂತಕ ದೀನನಾಥ್ ಬಾತ್ರಾರ ‘ತಿರುಚಿದ’ ಇತಿಹಾಸವನ್ನು ಮಕ್ಕಳಿಗೆ ಬೋಧಿಸುವ ಪ್ರಯತ್ನಗಳಿಗೆ ಈಗಾಗಲೇ ಚಾಲನೆಯನ್ನು ನೀಡಲಾಗಿದೆ. ವೆಂಡಿ ಡೊನಿಗರ್ ಎಂಬ ಇತಿಹಾಸದ ಸಂಶೋಧಕಿಯು ತನ್ನ ‘ಹಿಂದೂ’ ಕೃತಿಯನ್ನು ಮಾರುಕಟ್ಟೆಯಿಂದ ಹಿಂಪಡೆದದ್ದು ಮೋದಿಯವರ ಅವಧಿಯಲ್ಲೇ. ಇತಿಹಾಸ, ಪುರಾಣ, ಐತಿಹ್ಯಗಳಿಗೆ ವಿಜ್ಞಾನದ ಸುಂದರ ಅಂಗಿ ತೊಡಿಸುವ ಶ್ರಮವಂತೂ ಈ ಒಂದು ವರ್ಷದ ಅವಧಿಯಲ್ಲಿ ತೀವ್ರವಾಗಿ ನಡೆದಿದೆ. ಈ ಹಿಂದೆ ಮನ್‍ಮೋಹನ್ ಸಿಂಗ್ ಮಾತ್ರ ಮೌನವಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಸಿಬಲ್, ದಿಗ್ವಿಜಯ್ ಸಿಂಗ್, ಚಿದಂಬರಮ್, ಸೋನಿಯಾ ವಾಚಾಳಿಯಾಗಿದ್ದರು. ಇವತ್ತು ಮೋದಿ ಸಹಿತ ಇಡೀ ಸಚಿವ ಸಂಪುಟವೇ ಮೌನವಾಗಿದೆ. ಮೋದಿಯವರ ವಿದೇಶ ಪ್ರಯಾಣಗಳ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಸುಶ್ಮಾ ಸ್ವರಾಜ್ ಹೇಳಿಕೆ ಕೊಡುವಷ್ಟೂ ಮೋದಿ ಮೌನಿಯಾಗಿದ್ದಾರೆ ಅಥವಾ ಪಾರ್ಲಿಮೆಂಟರಿ ವ್ಯವಸ್ಥೆಯ ಬಗ್ಗೆ ಅನಾದರ ತೋರಿಸುತ್ತಿದ್ದಾರೆ. ಪ್ರಜಾತಂತ್ರ ಮತ್ತು ಪಾರ್ಲಿಮೆಂಟರಿ ಸಂಸ್ಥೆಗಳಿಗೆ ಗೌರವ ಕೊಡುವುದಕ್ಕಿಂತ ಆಧ್ಯಾದೇಶಗಳ ಮೇಲೆ ಅವರು ವಿಪರೀತ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಅವರು ಗುಜರಾತ್‍ನ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ವರ್ಷದಲ್ಲಿ ಹೆಚ್ಚೆಂದರೆ 23 ದಿನಗಳಷ್ಟೇ ವಿಧಾನಸಭಾ ಕಲಾಪಗಳು ನಡೆಯುತ್ತಿದ್ದುವು ಎಂದು ಅಲ್ಲಿನ ವಿರೋಧ ಪಕ್ಷದ ನಾಯಕರಾದ ವಿಜಯ್ ಸಿಂಗ್ ಗೋಯಲ್ ಹೇಳಿರುವುದನ್ನು ಮೋದಿಯವರ ಸದ್ಯದ ವರ್ತನೆಗೆ ಹೋಲಿಸಿ ನೋಡಿದರೆ ಇದು ಹೆಚ್ಚು ಸ್ಪಷ್ಟವಾಗುತ್ತದೆ. ಸಂವಿಧಾನದ ಬೇಡಿಕೆಯನ್ನು ಈಡೇರಿಸುವುದಕ್ಕಾಗಿಯಷ್ಟೇ ಅವರು ಗುಜರಾತ್‍ನಲ್ಲಿ 6 ತಿಂಗಳಿಗೊಮ್ಮೆ ವಿಧಾನಸಭಾ ಅಧಿವೇಶನ ನಡೆಸುತ್ತಿದ್ದರು. ಅಸೆಂಬ್ಲಿಯಲ್ಲಿ ಅವರು ಮಾತಾಡುತ್ತಿದ್ದುದು ತೀರಾ ಕಡಿಮೆ. ರಾಜ್ಯಪಾಲರ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವುದನ್ನೂ ಅವರು ಕೈ ಬಿಟ್ಟಿದ್ದರು. 2009ರಲ್ಲಿ ಕೇವಲ 17 ನಿಮಿಷಗಳಲ್ಲಿ 12 ಮಸೂದೆಗಳನ್ನು ಅವರು ಪಾಸು ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ಅಸೆಂಬ್ಲಿಯಿಂದ ವಜಾಗೊಳ್ಳುವಂತೆ ನೋಡಿಕೊಂಡಿದ್ದರು. ಮೋದಿಯವರಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದ್ದಂತಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪಾರ್ಲಿಮೆಂಟರಿ ವ್ಯವಸ್ಥೆ ತೊಡಕು ಎಂಬ ಭಾವನೆ ಅವರಲ್ಲಿರುವಂತಿದೆ. ಬಹುಸಂಸ್ಕ್ರಿತಿಯ ಸಮಾಜವನ್ನು ಕಟ್ಟುವಲ್ಲಿ ಮತ್ತು ಆಧುನಿಕ ಪ್ರಜಾತಂತ್ರ ರಾಷ್ಟ್ರವನ್ನು ನಿರ್ಮಿಸುವಲ್ಲಿ ಅವರ ದೇಹ ಭಾಷೆ ನಕಾರಾತ್ಮಕ ಸೂಚನೆಗಳನ್ನಷ್ಟೇ ಕೊಡುತ್ತಿದೆ. ಸಂಘಪರಿವಾರದ ತತ್ವಜ್ಞಾನದಂತೆ ಅವರ ದೇಹ ಭಾಷೆಯಿದೆ. ಸೆಕ್ಯುಲರಿಸಂ ಮತ್ತು ಸಾಮಾಜಿಕ ನ್ಯಾಯಗಳ ಬಗ್ಗೆ ಹರಿತ ಒಳ ನೋಟ ಇಲ್ಲದ ವ್ಯಕ್ತಿಯಾಗಿ ಮೋದಿ ಈ 365 ದಿನಗಳಲ್ಲಿ ಗೋಚರಿಸಿದ್ದಾರೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಅವರ ಘೋಷಣೆಯು ಗುಜರಾತ್‍ನಲ್ಲಿ ನಿಜಗೊಂಡಿಲ್ಲ ಅಥವಾ ಸ್ವತಃ ಅವರ ನೇತೃತ್ವದಲ್ಲೇ ಅದನ್ನು ವಿಫಲಗೊಳಿಸಲಾಗಿದೆ. ಅವರದೇ ಪಕ್ಷದ ಸಂಸದರು ‘ಸಬ್ ಕಾ ಸಾಥ್’ಗೆ ವಿರುದ್ಧವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾಗಲೂ ಅವರು ಮೌನ ಮುರಿಯಲಿಲ್ಲ. ಮದರ್ ತೆರೇಸಾ ‘ಮತಾಂತರೀ’ ಸೇವಕಿಯಾದರು. ಬಹುಶಃ, ಮಾತಾಡಲೇಬೇಕಾದ ಸಂದರ್ಭಗಳಲ್ಲೆಲ್ಲಾ ಅವರು ಗಂಭೀರ ಮೌನಕ್ಕೆ ಮೊರೆ ಹೋಗುತ್ತಿದ್ದುದು ಅವರ 365 ದಿನಗಳನ್ನು ಶಂಕಿತಗೊಳಿಸಿಬಿಟ್ಟಿದೆ.  
    ಮನ್‍ಮೋಹನ್ ಸಿಂಗ್ ಹಾಗೂ ನರೇಂದ್ರ ದಾಮೋದರದಾಸ್ ಮೋದಿಯವರನ್ನು ಚುನಾವಣೆಗೆ ಮೊದಲು ಮಾಧ್ಯಮಗಳು ವೀಕೆಸ್ಟ್ (ಅತಿ ದುರ್ಬಲ) ಮತ್ತು ಸ್ಟ್ರಾಂಗೆಸ್ಟ್ (ಅತಿ ಪ್ರಬಲ) ಎಂಬುದಾಗಿ ಬಿಂಬಿಸಿದ್ದುವು. ಇದರಿಂದ ಆದ ದೊಡ್ಡ ಹಾನಿಯೆಂದರೆ, ಪ್ರಜಾತಂತ್ರ ವ್ಯವಸ್ಥೆಯ ಮೂಲ ಗುಣಗಳಾದ ಆಡಳಿತ ವಿಕೇಂದ್ರೀಕರಣವನ್ನೇ ನಗಣ್ಯವಾಗಿಸುವುದಕ್ಕೆ ಮೋದಿಯವರಿಗೆ ಅವಕಾಶ ಒದಗಿಸಿದ್ದು ಮತ್ತು ಅದನ್ನೇ ಅತಿ ಪ್ರಬಲತೆಯ ಸಂಕೇತವಾಗಿ ಜನರು ಭಾವಿಸುವಂತಾದುದು. ಪ್ರಬಲ ಎಂಬುದರಲ್ಲಿ ಎರಡು ವಿಧಗಳಿವೆ. ಒಂದು ಸರ್ವಾಧಿಕಾರಿಯ ಪ್ರಬಲತೆ. ಅದರಲ್ಲಿ ಉಳಿದವರು ಇದ್ದೂ ಇಲ್ಲದಂತಿರುತ್ತಾರೆ. ಅವರು ಮಾತೇ ಆಡುವುದಿಲ್ಲ. ನಾಯಕನ ಮಾತನ್ನು ಸಮರ್ಥಿವಲ್ಲಿ ಮತ್ತು ಆತನ ಅಣತಿಯನ್ನು ಪಾಲಿಸುವಲ್ಲಿ ವಿಪರೀತ ನಿಷ್ಠೆ ತೋರಿಸುವುದಷ್ಟೇ ಅವರ ಜವಾಬ್ದಾರಿ. ಇನ್ನೊಂದು- ನಾಯಕ ಪ್ರಶ್ನಾರ್ಹನಾಗುವುದು. ವಿಮರ್ಶಿಸುವ, ಟೀಕಿಸುವ ಮತ್ತು ಮಾತಾಡುವ ಪ್ರಜಾತಾಂತ್ರಿಕ ವಾತಾವರಣವನ್ನು ಸೃಷ್ಟಿಸುವುದು. ದಟ್ಟ ದಾರಿದ್ರ್ಯದಿಂದ ಬೀದಿಯಲ್ಲಿ ಬದುಕು ಸವೆಸುತ್ತಿದ್ದ ತತ್ವಜ್ಞಾನಿ ಡಯೋಜನಿಸ್ ಈ ಪ್ರಜಾತಾಂತ್ರಿಕ ವಾತಾವರಣದ ಸಂಕೇತ ಆಗಿದ್ದಾನೆ ಅಥವಾ ಖಲೀಫಾ ಉಮರ್ ಅದಕ್ಕೆ ಸಾಕ್ಷಿಯಾಗಿದ್ದಾರೆ. ಡಯೋಜನಿಸ್‍ನನ್ನು ಚಕ್ರವರ್ತಿ ಅಲೆಕ್ಸಾಂಡರ್ ಭೇಟಿಯಾಗಲು ಹೋದಾಗ ಆತ ಬೆಳಗಿನ ಬಿಸಿಲಿಗೆ ಮೈಯೊಡ್ಡಿದ್ದ. ‘ನಿನಗಾಗಿ ನಾನೇನಾದರೂ ಮಾಡಬಹುದೆ..’ ಎಂದು ಅಲೆಕ್ಸಾಂಡರ್ ಕೇಳಿದಾಗ, ‘ಸರಿ, ಆದರೆ ಮೊದಲು ನನ್ನ ಬಿಸಿಲಿನಿಂದ ದೂರ ನಿಲ್ಲು..’ ಎಂದು ನಿಷ್ಠುರವಾಗಿ ಹೇಳಿದ್ದ. ವಿವಾಹ ಧನಕ್ಕೆ  ಮಿತಿಯೊಂದನ್ನು ಹೇರಲು ಹೊರಟಾಗ ಖಲೀಫಾ ಉಮರ್‍ರನ್ನು ಸಾಮಾನ್ಯ ಮಹಿಳೆಯೊಬ್ಬರು ನಿಷ್ಠುರವಾಗಿ ಪ್ರಶ್ನಿಸುವುದಕ್ಕೆ ಸಾಧ್ಯವಾದದ್ದೂ ಇದೇ ಪ್ರಜಾತಾಂತ್ರಿಕ ವಾತಾವರಣದ ಉಳಿವಿನಿಂದಾಗಿ. ಆದರೆ ಮೋದಿಯವರ 365 ದಿನಗಳು ಪ್ರಜಾತಂತ್ರದ ಈ ಸೌಂದರ್ಯವನ್ನೇ ಮಸುಕುಗೊಳಿಸಿದೆ. ಸರಕಾರವನ್ನು ಮನ್‍ಕಿ ಬಾತ್ ಮತ್ತು ಸೆಲ್ಫಿಗಳಿಂದ ನಡೆಸಬಹುದೆಂಬ ಭ್ರಮೆಯೊಂದು ಅವರನ್ನು ಆವರಿಸಿದಂತಿದೆ. ನಿಜವಾಗಿ ಪ್ರಧಾನಿಯವರ ಭಾಷಣಕ್ಕೊಂದು ಘನತೆಯಿದೆ. ನಾಟಕೀಯತೆ ಮತ್ತು ಪೊಳ್ಳು ಪ್ರಭಾವಳಿಗಳಿಂದ ಅದು ಮುಕ್ತವಾಗಿರಬೇಕಾದುದು ಅತೀ ಅಗತ್ಯ.  ಆದರೆ ಮೋದಿಯವರು ದೇಶದ ಬಹುಮುಖ್ಯ ಸಮಸ್ಯೆಗಳಾದ ಸ್ವಚ್ಛತೆ, ಜಾತಿ, ವರ್ಗ, ತಂತ್ರಜ್ಞಾನ ಎಲ್ಲವನ್ನೂ ಈ 365 ದಿನಗಳಲ್ಲಿ ವ್ಯಂಗ್ಯ ಚಿತ್ರದ ಮಟ್ಟಕ್ಕೆ ಇಳಿಸಿದರು. ಸ್ವಚ್ಛತೆಗೆ ಅವರು ಕೊಟ್ಟ ತಾಂತ್ರಿಕ ತಿರುವು ಏನೆಂದರೆ, ಮುಂಬೈಯ ಬೀದಿಯಲ್ಲಿ ಸಚಿನ್ ತೆಂಡುಲ್ಕರ್ ಗುಡಿಸುವುದು ಅಥವಾ ವಾರಣಾಸಿಯ ಸ್ಲಂಗಳನ್ನು ಇಬ್ಬರು ಯುವತಿಯರು ಶುಚಿಗೊಳಿಸುವುದು. ಅಂದಹಾಗೆ, ಇದನ್ನು ಮೋದಿಯವರ ಭಾಷಣದ ಸಾಮರ್ಥ್ಯವಾಗಿ ಕಾಣಬಹುದೇ ಹೊರತು ಪ್ರಾಯೋಗಿಕ ಬದಲಾವಣೆಯನ್ನಲ್ಲ. ಸಚಿನ್ ಗುಡಿಸುವುದು ಮೋದಿಯವರಿಗೆ ಭಾಷಣದ ಸರಕು. ಮೋದಿಯವರು ಕೊಳಕನ್ನು ಮುಚ್ಚುವುದಕ್ಕೆ ಸಾಂದರ್ಭಿಕ ಪದಗಳನ್ನು ಸೃಷ್ಟಿಸಬಲ್ಲರು. ಹಾಗಂತ, ಸಚಿನ್‍ರಿಂದ ಗುಡಿಸಿದಂತೆ ಅಮೀರ್ ಖಾನ್‍ರಿಂದ ಹೊಲದ ಉಳುಮೆಯನ್ನೂ ಮಾಡಿಸಬಹುದಿತ್ತು. 60% ಮಂದಿ ಕೃಷಿಕರಿರುವ ದೇಶದಲ್ಲಿ ಗುಡಿಸುವ ಸಚಿನ್‍ಗಿಂತ ಉಳುವ ಅಮೀರ್ ಖಾನ್ ಮುಖ್ಯವೂ ಆಗಿತ್ತು. ಸಾಲು ಸಾಲು ರೈತರು ನೇಣಿಗೆ ಕೊರಳೊಡ್ಡುತ್ತಿರುವಾಗ ಅಮೀರ್ ಒಂದು ಭರವಸೆಯ ಸಂಕೇತವಾಗುವುದಕ್ಕೆ ಅವಕಾಶವೂ ಇತ್ತು. ಆದರೆ ಸಚಿನ್‍ನ ಕೈಗೆ ಪೊರಕೆ ಕೊಟ್ಟ ಮೋದಿಯವರು ನೇಗಿಲನ್ನು ಕಂಪೆನಿಗಳ ಕೈಗೇ (ಭೂಸ್ವಾಧೀನ) ಕೊಟ್ಟರು. ಬಹುಶಃ ಮೋದಿಯವರ 365 ದಿನಗಳ ಆಡಳಿತವನ್ನು ವಿಶ್ಲೇಷಿಸುವುದಕ್ಕೆ ಈ ನೇಗಿಲು ಮತ್ತು ಪೊರಕೆ ಪರಿಣಾಮಕಾರಿ ರೂಪಕಗಳಾಗಬಹುದು.
    ಅಷ್ಟಕ್ಕೂ, ಭಾರತೀಯ ಪ್ರಜಾಸತ್ತೆಯನ್ನು ‘ಬಹುಸಂಖ್ಯಾತ ಪ್ರಜಾಸತ್ತೆ’ಯಾಗಿ ಬದಲಿಸುವಲ್ಲಿ ಅಥವಾ ಅಂಥದ್ದೊಂದು ಭಾವನೆ ಬಿತ್ತುವಲ್ಲಿ ಮೋದಿಯವರ 365 ದಿನಗಳು ಶ್ರಮಿಸಿವೆ. ಗುಜರಾತ್‍ನಲ್ಲಿ ಇದು ಯಶಸ್ವಿಯಾಗಿದೆ.

No comments:

Post a Comment