Wednesday, February 17, 2016

 ಸುದ್ದಿಯ ಮಧ್ಯೆ ‘ಶುರತ್ ಹಾಡಿನ್’ಗಳನ್ನು ಹೇಗೆ ಪತ್ತೆ ಹಚ್ಚುವಿರಿ?

       2015 ಡಿ. 29ರಂದು, ‘ಇಸ್ರೇಲಿಗರನ್ನು ತಡೆಯಿರಿ’ (Stop Israels) ಎಂಬ ಹೆಸರಿನಲ್ಲಿ ಫೇಸ್‍ಬುಕ್ ಖಾತೆಯೊಂದು (Account) ಪ್ರತ್ಯಕ್ಷವಾಯಿತು. ‘ಅಲ್‍ಅಖ್ಸಾಕ್ಕೆ ಬೆದರಿಕೆ ಒಡ್ಡಿರುವ ಝಿಯೋನಿಸ್ಟ್ ವೈರಿಗಳ ವಿರುದ್ಧ ಪ್ರತೀಕಾರ ತೀರಿಸೋಣ. ಎಲ್ಲ ಯಹೂದಿಗಳೂ ನಾಶವಾಗಲಿ’ (Death to all the Jews) ಎಂಬ ಬರಹವೂ ಅದರಲ್ಲಿ ಕಾಣಿಸಿಕೊಂಡಿತು. ‘ಝಿಯೋನಿಸ್ಟರು ಫೆಲೆಸ್ತೀನಿಯರ ಭೂಮಿಯನ್ನು ಇಂಚಿಂಚಾಗಿ ನುಂಗುತ್ತಿದ್ದಾರೆ. ಆದರೂ ಜಗತ್ತು ಮೌನವಾಗಿದೆ. ನಾವು ಅವರನ್ನು ನಮಗೆ ಸಾಧ್ಯವಿರುವ ಯಾವುದೇ ಮಾರ್ಗದ ಮೂಲಕವಾದರೂ ತಡೆಯುವೆವು..’ ಎಂಬ ಬರಹ ಮತ್ತು ಇದನ್ನು ಸಮರ್ಥಿಸುವ ನಕಾಶೆಯೂ ಪ್ರಕಟವಾಯಿತು. ಆ ನಕಾಶೆ ಎಷ್ಟು ಪ್ರಚೋದನಾತ್ಮಕವಾಗಿತ್ತೆಂದರೆ, ಫೆಲೆಸ್ತೀನಿಯರು ಹಂತಹಂತವಾಗಿ ತಮ್ಮ ಭೂಮಿ ಕಳಕೊಳ್ಳುತ್ತಿರುವುದನ್ನು ಅದು ಚಿತ್ರ ಸಮೇತ ತೋರಿಸುತ್ತಿತ್ತು. ಇಷ್ಟೇ ಅಲ್ಲ, ಓರ್ವ ಫೆಲೆಸ್ತೀನಿ ಯುವತಿ ಇಸ್ರೇಲಿ ಯೋಧನ ಎದುರು ಕೈಯೆತ್ತಿ ನಿಂತಿದ್ದಳು. ಆತ ಬಂದೂಕು ಹಿಡಿದಿದ್ದ. ಆತನ ಸುತ್ತ ಹಲವಾರು ಯೋಧರು ಮುಗುಳು ನಗೆಯೊಂದಿಗೆ ಸೇರಿಕೊಂಡಿದ್ದರು. ಈ ಚಿತ್ರದ ಕೆಳಗಡೆ ಹೀಗೆ ಬರೆದಿತ್ತು:
ನಿತ್ಸಾನಾ ದರ್ಶನ್ ಲಿಂಡರ್
     ‘ಇವತ್ತು ಝಿಯೋನಿಸ್ಟ್ ಯೋಧರು ಈ ಹಿಂದೆಂದಿಗಿಂತಲೂ ಹೆಚ್ಚಾಗಿ ಫೆಲೆಸ್ತೀನಿ ಮಕ್ಕಳ ಮೇಲೆ ಹಿಂಸೆ ಎಸಗುತ್ತಿದ್ದಾರೆ. ಈ ಮಕ್ಕಳ ರಕ್ತವೇ ಮುಂದೊಂದು ದಿನ ಝಿಯೋನಿಸ್ಟ್ ಆಕ್ರಮಣಕಾರರನ್ನು ಧ್ವಂಸಗೊಳಿಸಲಿದೆ...’ ಇನ್ನೊಂದು ಚಿತ್ರವಂತೂ ಭಯಾನಕವಾದುದು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಓರ್ವ ಫೆಲೆ ಸ್ತೀನಿ ಮಗುವನ್ನು ಭಕ್ಷಿಸುವಂಥ ಚಿತ್ರ. ಆ ಫೇಸ್‍ಬುಕ್ ಪುಟ ಎಲ್ಲ ರೀತಿಯಲ್ಲೂ ಪ್ರಚೋದನಕಾರಿಯಾಗಿತ್ತು. ಅಷ್ಟಕ್ಕೂ, ಫೆಲೆಸ್ತೀನ್ ಮತ್ತು ಇಸ್ರೇಲ್‍ಗಳ ನಡುವೆ ಇರುವ ವಿವಾದವೇನೇ ಇರಲಿ, ಓರ್ವ ಪ್ರಧಾನಿಯನ್ನು ನರ ಭಕ್ಷಕನಂತೆ ಚಿತ್ರಿಸುವುದು ಅಸಹ್ಯವಾದುದು. ನಾಗರಿಕ ಸಮಾಜ ಅಂಥದ್ದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಮಾತ್ರವಲ್ಲ, ಅದರಿಂದ ಫೆಲೆಸ್ತೀನಿ ಪ್ರತಿರೋಧ ಚಳವಳಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಕ್ಕೂ ಅವಕಾಶವಿದೆ. ಫೆಲೆಸ್ತೀನಿಯರು ಅನಾಗರಿಕರು ಮತ್ತು ವಿರೋಧಿಗಳನ್ನು ಗೌರವಿಸಲು ತಿಳಿಯದವರು ಎಂಬ ಸಂದೇಶ ರವಾನೆಯಾಗುತ್ತದೆ. ಹೀಗಿರುತ್ತಾ ಈ ಫೇಸ್‍ಬುಕ್ ಖಾತೆಯ ವಿರುದ್ಧ ಡಿ. 31ರಂದು ಫೇಸ್‍ಬುಕ್ ಆಡಳಿತ ವರ್ಗಕ್ಕೆ ದೂರು ಹೋಯಿತು. ಮಾತ್ರವಲ್ಲ, ಫೇಸ್‍ಬುಕ್ ಆಡಳಿತ ಮಂಡಳಿಯು ಆ ಖಾತೆಯನ್ನು ತನ್ನ ಪುಟದಿಂದ ಕಿತ್ತು ಹಾಕಿತು. ವಿಷಯ ಇಲ್ಲಿಗೇ ಮುಗಿಯುವುದಿಲ್ಲ. ಮೂರ್ನಾಲ್ಕು ದಿವಸಗಳ ಬಳಿಕ ವಿಕಿಲೀಕ್ಸ್ ಸ್ಫೋಟಕ ಸುದ್ದಿಯೊಂದನ್ನು ಬಹಿರಂಗಪಡಿಸಿತು. ಆ ಫೇಸ್‍ಬುಕ್ ಖಾತೆಯನ್ನು ಪ್ರಾರಂಭಿಸಿದ್ದು ಫೆಲೆಸ್ತೀನಿಯರಲ್ಲ ಎಂದು ಅದು ಪುರಾವೆ ಸಮೇತ ಜಗತ್ತಿನ ಮುಂದಿರಿಸಿತು. ಆ ಖಾತೆಯನ್ನು ಪ್ರಾರಂಭಿಸಿದ್ದು ಶುರತ್ ಹಾಡಿನ್ ಎಂಬ ಇಸ್ರೇಲ್‍ನ ಸರಕಾರೇತರ ಸಂಸ್ಥೆ. ಅದಕ್ಕೂ ಇಸ್ರೇಲ್‍ನ ಗುಪ್ತಚರ ಸಂಸ್ಥೆ ಮೊಸಾದ್‍ಗೂ ಸಂಬಂಧ ಇದೆ ಎಂದು ಅದು ಹೇಳಿಕೊಂಡಿತು. ತನ್ನ ಹೇಳಿಕೆಗೆ ಪುರಾವೆಯಾಗಿ ಶುರತ್ ಹಾಡಿನ್‍ನ ನಿರ್ದೇಶಕಿ ನಿತ್ಸಾನಾ ದರ್ಶನ್ ಲಿಂಡರ್ ಅವರು ಅಮೇರಿಕನ್ ರಾಜತಾಂತ್ರಿಕ ಅಧಿಕಾರಿ ಚೆಲ್ಸಿಯಾ ಮ್ಯಾನ್ನಿಂಗ್ ಜೊತೆ ನಡೆಸಿದ ಖಾಸಗಿ ಮಾತುಕತೆಯ ಮಾಹಿತಿಯನ್ನು ಬಿಡುಗಡೆಗೊಳಿಸಿತು. ಈ ಮಾಹಿತಿ ಬಹಿರಂಗವಾದದ್ದೇ ತಡ ಶುರತ್ ಹಾಡಿನ್ ವಿಕಿಲೀಕ್ಸ್ ನ ಮಾಹಿತಿಯನ್ನು ಒಪ್ಪಿಕೊಂಡಿತು. Stop Israels ಫೇಸ್‍ಬುಕ್ ಖಾತೆಯನ್ನು ಆರಂಭಿಸಿದ್ದು ಮತ್ತು ಬಳಿಕ ಫೇಸ್‍ಬುಕ್ ಆಡಳಿತ ವರ್ಗಕ್ಕೆ ದೂರು ಕೊಟ್ಟದ್ದು ಎರಡೂ ತಾನೇ ಎಂದಿತು. ಮೊಸಾದ್‍ನ ನಿರ್ದೇಶನದಂತೆ ಇವೆಲ್ಲವನ್ನೂ ನಿರ್ವಹಿಸಿದ್ದಾಗಿ ಅದು ಒಪ್ಪಿಕೊಂಡಿತು. ಆದರೆ ಇದೇ ಸಂದರ್ಭದಲ್ಲಿ ಅದು ತನ್ನ ಈ ಕ್ರಮವನ್ನೂ ಸಮರ್ಥಿಸಿಕೊಂಡಿತು. ತಾನು Stop Israels ಎಂಬ ಖಾತೆಯ ಜೊತೆಗೇ Stop Pelestinians ಎಂಬ ಫೇಸ್‍ಬುಕ್ ಖಾತೆಯನ್ನೂ ತೆರೆದಿದ್ದೇನೆ ಎಂದೂ ಅದು ಹೇಳಿಕೊಂಡಿತು. ಮಾತ್ರವಲ್ಲ ಎರಡಕ್ಕೂ ಸಮಾನ ವಿಷಯಗಳನ್ನು Post  ಮಾಡಿದ್ದೇನೆ ಹಾಗೂ ಎರಡರ ವಿರುದ್ಧವೂ ಫೇಸ್‍ಬುಕ್ ಆಡಳಿತ ಮಂಡಳಿಗೆ ಡಿ. 31ರಂದೇ ದೂರು ಕೊಟ್ಟಿದ್ದೇನೆ ಎಂದೂ ಹೇಳಿತು. ಫೇಸ್‍ಬುಕ್ ನಿಷ್ಪಕ್ಷ ಪಾತಿಯೋ ಪಕ್ಷಪಾತಿಯೋ ಎಂಬುದನ್ನು ಪತ್ತೆಹಚ್ಚುವುದಕ್ಕಾಗಿ ಈ ವಿಧಾನವನ್ನು ಬಳಸಿರುವುದಾಗಿಯೂ ಅದು ವ್ಯಾಖ್ಯಾನಿಸಿತು. ಮಾತ್ರವಲ್ಲ, ಈ ಪರೀಕ್ಷೆಯಲ್ಲಿ ಫೇಸ್‍ಬುಕ್ ಪಕ್ಷಪಾತಿಯೆಂದು ಸಾಬೀತಾಗಿರುವುದಾಗಿ ಅದು ವಾದಿಸಿತು. ತಾನು ಎರಡರ ಬಗ್ಗೆ ದೂರು ಕೊಟ್ಟರೂ ಫೇಸ್‍ಬುಕ್ ಆಡಳಿತ ಮಂಡಳಿಯು Stop Pelestinians ಖಾತೆಯನ್ನು ಮಾತ್ರ ಸ್ತಂಭನಗೊಳಿಸಿದೆ ಎಂದೂ ಅದು ಆರೋಪಿಸಿತು. ನಿಜವಾಗಿ, ಈ ವಾದ ಕೂಡ ಸುಳ್ಳಾಗಿತ್ತು. Stop Pelestinians ಖಾತೆಯನ್ನು ಸ್ತಂಭನಗೊಳಿಸಿದ ದಿನಗಳೊಳಗೇ Stop Israels ಖಾತೆಯನ್ನೂ ಫೇಸ್‍ಬುಕ್ ಆಡಳಿತ ಮಂಡಳಿಯು ರದ್ದುಪಡಿಸಿತ್ತು. ವಿಶೇಷ ಏನೆಂದರೆ, Stop Israels ಮತ್ತು Stop Pelestinians ಎಂಬೆರಡು ಖಾತೆಗಳನ್ನು ಪ್ರಾರಂಭಿಸಿದ್ದು ತಾನೇ ಎಂದು ಶುರತ್ ಹಾಡಿನ್ ಒಪ್ಪಿಕೊಂಡದ್ದೇ ವಿಕಿಲೀಕ್ಸ್ ಸತ್ಯ ಸುದ್ದಿ ಸ್ಫೋಟಿಸಿದ ಬಳಿಕ. ನಿಜವಾಗಿ, ಈ ವಿಷಯದಲ್ಲಿ ಮೊಸಾದ್ ಅತ್ಯಂತ ಜಾಣತನದಿಂದ ಕಾರ್ಯವೆಸಗಿತ್ತು. ಫೆಲೆಸ್ತೀನಿಯರನ್ನು ಜನಾಂಗ ವಿರೋಧಿಗಳು, ಯಹೂದಿಯರ ಸರ್ವನಾಶವನ್ನು ಬಯಸುವವರು ಎಂಬೆಲ್ಲಾ ಭಾವನೆಯನ್ನು ಜಾಗತಿಕವಾಗಿ ಬಿತ್ತುವ ಉದ್ದೇಶವೊಂದು Stop Israels ಖಾತೆ ಆರಂಭಿಸುವುದರ ಹಿಂದೆ ಇತ್ತು. ಆದ್ದರಿಂದಲೇ ಖಾತೆ ಆರಂಭಿಸಿದವರ ವಿಳಾಸವನ್ನು ಅದು ಬಚ್ಚಿಟ್ಟಿತ್ತು. ಯಾರಾದರೂ ಆ ಖಾತೆಯನ್ನು ನೋಡಿದ ತಕ್ಷಣ ಆ ಖಾತೆಯನ್ನು ಫೆಲೆಸ್ತೀನಿಯರೇ ಪ್ರಾರಂಭಿಸಿದ್ದಾರೆ ಎಂದು ನಂಬುವಂಥ ಬರಹಗಳನ್ನು ಅದರಲ್ಲಿ ಅದು ತುಂಬಿಸಿತ್ತು. ಇದರ ಜೊತೆಗೇ ಅಗತ್ಯ ಬಂದಾಗ ಸಮರ್ಥಿಸಿಕೊಳ್ಳುವುದಕ್ಕಾಗಿ ಇರಲಿ ಎಂದು Stop Pelestinians ಎಂಬ ಖಾತೆಯನ್ನೂ ತೆರೆದುಕೊಂಡಿತ್ತು. ಅಂದಹಾಗೆ, ಎರಡೂ ಖಾತೆಗಳಲ್ಲಿ ಪ್ರಕಟವಾದ ವಿಷಯಗಳು ಸಮಾನವಾಗಿ ಇರಲಿಲ್ಲ. Stop Israels ಪುಟದಲ್ಲಿ ಕಾಣಿಸಿಕೊಂಡ ಬರಹಗಳು ಅತ್ಯಂತ ಪ್ರಚೋದನಕಾರಿಯಾಗಿದ್ದರೆ, Stop Pelestinians ನಲ್ಲಿ ಅದರ ತೀವ್ರತೆ ಕಡಿಮೆಯಿತ್ತು. ಅಷ್ಟಕ್ಕೂ, ಮಾಧ್ಯಮ ಕ್ಷೇತ್ರದಲ್ಲಿ ಇಂಥ ಶುರತ್ ಹಾಡಿನ್‍ಗಳ ಸಂಖ್ಯೆ ಎಷ್ಟಿರಬಹುದು? ಅವರು ಎಷ್ಟು ಫೇಸ್‍ಬುಕ್ ಖಾತೆಗಳನ್ನು, ಮಾಧ್ಯಮ ಸಂಸ್ಥೆಗಳನ್ನು ನಿಯಂತ್ರಿಸುತ್ತಿರಬಹುದು? ನಾವು ಪ್ರತಿನಿತ್ಯ ಓದುತ್ತಿರುವ ಸುದ್ದಿಗಳಲ್ಲಿ ಶುರತ್ ಹಾಡಿನ್ ಪ್ರಣೀತ ಸುದ್ದಿಗಳ ಸಂಖ್ಯೆಯ ಪ್ರಮಾಣ ಎಷ್ಟು?
  2016 ಜ. 4ರಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ 'Headmaster beaten, Banned from Madrasa for asking pupil to sing National Anthem' (ರಾಷ್ಟ್ರಗೀತೆ ಹಾಡುವಂತೆ ಕೇಳಿಕೊಂಡದ್ದಕ್ಕಾಗಿ ಮದ್ರಸ ಮುಖ್ಯೋಪಾಧ್ಯಾಯರನ್ನು ಥಳಿಸಿ ಅವರನ್ನು ಮನೆಗಟ್ಟಲಾಯಿತು) ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದು ಪ್ರಕಟವಾಯಿತು. ಕೊಲ್ಕತ್ತಾದ ಪ್ರಮುಖ ಮದ್ರಸದಲ್ಲಿ ಈ ಘಟನೆ ನಡೆದಿರುವುದಾಗಿ ಅದು ಬರೆಯಿತು. ಗಣರಾಜ್ಯ ದಿನದಂದು ರಾಷ್ಟ್ರಗೀತೆಯನ್ನು ಹಾಡಲು ಮಕ್ಕಳನ್ನು ತರಬೇತುಗೊಳಿಸಿದ ಕಾರಣಕ್ಕಾಗಿ ಅಕ್ತರ್ ಎಂಬ ಈ ಮುಖ್ಯೋಪಾಧ್ಯಾಯರನ್ನು ತೀವ್ರವಾಗಿ ಥಳಿಸಲಾಗಿದೆ ಎಂದು ಸುದ್ದಿ ಪ್ರಕಟಿಸಿತು. ಈ ಸುದ್ದಿಯನ್ನು ಎತ್ತಿಕೊಂಡು ಚಾನೆಲ್‍ಗಳು '# National Anthem Insulted' ಎಂಬ ಶೀರ್ಷಿಕೆಯೊಂದಿಗೆ ಚರ್ಚೆ ನಡೆಸಿದುವು. ಈ ಬಗ್ಗೆ ಹಿಂದಿ, ಇಂಗ್ಲಿಷ್ ದೈನಿಕಗಳಲ್ಲಿ ಲೇಖನಗಳು ಪ್ರಕಟವಾದುವು. ಹೀಗಿರುತ್ತಾ, ಈ ಸುದ್ದಿಯ ಸತ್ಯಾಸತ್ಯತೆಯನ್ನು ಹುಡುಕಿಕೊಂಡು ‘ನ್ಯೂಸ್ ಲ್ಯಾಂಡ್ರಿ’ ಎಂಬ ಮಾಧ್ಯಮ ನಿಗಾ ವೆಬ್‍ಸೈಟ್‍ನ ಅರ್ನಾಬ್ ಸೈಕಿಯ ಎಂಬ ಪತ್ರಕರ್ತರು  ಕೊಲ್ಕತ್ತಾದ ಆ ಮದ್ರಸಕ್ಕೆ ಭೇಟಿ ನೀಡಿದರು. ಅದು ಸರಕಾರಿ ಅಂಗೀಕೃತ ಮದ್ರಸ. ಈ ಮದ್ರಸದಲ್ಲಿ 7 ಮಂದಿ ಹಿಂದೂ ಅಧ್ಯಾಪಕರೂ ಇದ್ದಾರೆ. ಫಿರ್‍ದೌಸ್ ಬೇಗಂ ಮತ್ತು ಸುದಿಪ್ತೋ ಕುಮಾರ್ ಮಂಡಲ್ ಎಂಬಿಬ್ಬರು ಶಿಕ್ಷಕರನ್ನು ಸೈಕಿಯಾ ಭೇಟಿಯಾದರು. ಬೇಗಂ ಅವರು ಆ ಮದ್ರಸದ ಮುಖ್ಯ ಶಿಕ್ಷಕಿಯಾದರೆ ಸುದಿಪ್ತೊ ಅವರು ಕಳೆದ 10 ವರ್ಷಗಳಿಂದ ಆ ಮದ್ರಸದಲ್ಲಿ ಅಧ್ಯಾಪಕರಾಗಿ ದುಡಿಯುತ್ತಿದ್ದಾರೆ. ಅವರಿಬ್ಬರೂ ಆ ಸುದ್ದಿಯನ್ನು ಅಪ್ಪಟ ಸುಳ್ಳೆಂದು ವಿವರಿಸಿದರು. ಪ್ರತಿದಿನ ಬೆಳಿಗ್ಗೆ ಆ ಮದ್ರಸದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಮದ್ರಸದ ಡೈರಿಯಲ್ಲಿ ಅದು ನಿತ್ಯ ದಾಖಲಾಗುತ್ತಲೂ ಇದೆ. ಅಕ್ತರ್ ಅಧ್ಯಾಪಕರಾಗಿ ಆ ಮದ್ರಸಕ್ಕೆ ಬರುವುದಕ್ಕಿಂತ ಮೊದಲೇ ರಾಷ್ಟ್ರಗೀತೆ ಹಾಡುವುದು ಅಲ್ಲಿ ರೂಢಿಯಾಗಿತ್ತು. ಹಾಗಂತ, ಅಕ್ತರ್‍ನ ಮೇಲೆ ಹಲ್ಲೆ ನಡೆದಿದ್ದು ನಿಜ. ಆದರೆ ಅದು ಪತ್ರಿಕೆಗಳು ಹೇಳಿದಂತೆ ಶಿಕ್ಷಕರು ಮತ್ತು ಸ್ಥಳೀಯರು ಸೇರಿ ನಡೆಸಿದ ಹಲ್ಲೆ ಅಲ್ಲ. ಮತ್ತೂ ಹೇಳಬೇಕೆಂದರೆ, ರಾಷ್ಟ್ರಗೀತೆಗೂ ಅದಕ್ಕೂ ಸಂಬಂಧವೇ ಇರಲಿಲ್ಲ. ಆ ಘಟನೆ ನಡೆದದ್ದು 2015 ಮಾರ್ಚ್ 26ರಂದು. ಅಖ್ತರ್ ಗೂ ಮದ್ರಸ ವಿದ್ಯಾರ್ಥಿಗಳ ಹೆತ್ತವರಿಗೂ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಸ್ಥಳೀಯರ ಸಾಂಪ್ರದಾಯಿಕ ನಿಲುವುಗಳ ಬಗ್ಗೆ ಆ ಅಧ್ಯಾಪಕ ಪ್ರಚೋದನಕಾರಿ ಶೈಲಿಯಲ್ಲಿ ಟೀಕಿಸುತ್ತಿದ್ದುದು ಜಗಳಕ್ಕೆ ಕಾರಣವಾಗಿತ್ತು. ಜಗಳ ಸಣ್ಣ ಮಟ್ಟದ ಹೊೈಕೈ ಆಗಿತ್ತೇ ಹೊರತು ತೀವ್ರ ರೀತಿಯ ಹಲ್ಲೆ ಆಗಿಯೇ ಇರಲಿಲ್ಲ. ಹೆತ್ತವರಿಂದ ಅಕ್ತರ್‍ರನ್ನು ಬಿಡಿಸಿದ್ದೇ ಇತರ  ಶಿಕ್ಷಕರು. ಅಲ್ಲದೇ 2015 ಮಾರ್ಚ್ 26ರ ಬಳಿಕ ಅಕ್ತರ್ ಆ ಮದ್ರಸಕ್ಕೆ ಬಂದೇ ಇಲ್ಲ. ಹೀಗಿರುತ್ತಾ, 2016 ಜನವರಿಯಲ್ಲಿ ಆತನ ಮೇಲೆ ಹಲ್ಲೆ ನಡೆಯುವುದು ಹೇಗೆ? ಸುಮಾರು 10 ತಿಂಗಳ ಹಿಂದೆ ನಡೆದ ಶಿಕ್ಷಕ ಮತ್ತು ಹೆತ್ತವರ ನಡುವಿನ ಜಗಳವು ಜನವರಿ 4ರಂದು ‘ರಾಷ್ಟ್ರಗೀತೆ’ಯ ಸುದ್ದಿಯಾಗಿ ಪ್ರಕಟಗೊಂಡದ್ದು ಹೇಗೆ? 10 ತಿಂಗಳಿನಿಂದ ಮದ್ರಸಕ್ಕೇ ತಲೆ ಹಾಕದ ವ್ಯಕ್ತಿ ಹೇಗೆ ಆ ಬಗೆಯಲ್ಲಿ ಸುದ್ದಿಗೀಡಾದ? ಸಾಮಾನ್ಯ ಹಲ್ಲೆ ಪ್ರಕರಣಕ್ಕೆ ಈ ರೀತಿಯ ವಿಕೃತ ವ್ಯಾಖ್ಯಾನವನ್ನು ಕರುಣಿಸಿದ್ದು ಯಾರು ಮತ್ತು  ಯಾಕೆ? ಅವರ ಉದ್ದೇಶವೇನು? ಅರ್ನಾಬ್ ಸೈಕಿಯಾ ಚುರುಕಾದರು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‍ನ ವರದಿಗಾರ ಅರೂಚ್ ಚಂದ್‍ರಲ್ಲಿ ಸ್ಪಷ್ಟೀಕರಣ ಕೇಳಿದರು. ಆದರೆ ಅವರು ನುಣುಚಿಕೊಂಡರು. ಈ ಸುದ್ದಿಯನ್ನು ಮಸಾಲೆ ದೋಸೆಯಂತೆ ಹಂಚಿಕೊಂಡ ಇತರ ಪತ್ರಿಕಾ ಮಾಧ್ಯಮಗಳೂ ಕನಿಷ್ಠ ಸ್ಪಷ್ಟೀಕರಣ ಕೊಡುವುದಕ್ಕೂ ಮುಂದೆ ಬರಲಿಲ್ಲ.
  ಹಾಗಂತ, ಮಾಧ್ಯಮ ಜಗತ್ತು ಸಂಪೂರ್ಣ ನಂಬಲನರ್ಹ ಎಂದು ಖಂಡಿತ ಹೇಳುತ್ತಿಲ್ಲ. ಸತ್ಯ ಸುದ್ದಿಗಳ ಜೊತೆಗೇ ಇಂಥ ಶುರತ್ ಹಾಡಿನ್‍ಗಳು, ‘ರಾಷ್ಟ್ರಗೀತೆ’ಗಳು ನುಸುಳಿಕೊಳ್ಳುವುದರ ಕುರಿತಂತೆ ಎಚ್ಚರಿಕೆಯಿಂದಿರಬೇಕು ಎಂದಷ್ಟೇ ಹೇಳುತ್ತಿದ್ದೇನೆ. ಮಾಧ್ಯಮಗಳು ಕೊಡುವ ಎಲ್ಲವೂ ಸುದ್ದಿಗಳಲ್ಲ, ಸುದ್ದಿಗಳಲ್ಲಿ ಎಲ್ಲವೂ ಸತ್ಯವೂ ಅಲ್ಲ. ಆದರೆ ಸುದ್ದಿ ಸುಳ್ಳು ಎಂದು ಗೊತ್ತಾಗುವವರೆಗೆ ಸುದ್ದಿಯನ್ನು ಸತ್ಯ ಎಂದೇ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯೊಂದು ಎಲ್ಲರ ಮುಂದೆಯೂ ಇದೆ. ಅಷ್ಟಕ್ಕೂ, ಶುರತ್ ಹಾಡಿನ್‍ನಂಥ ಗುಂಪುಗಳು ಈ ಜಗತ್ತಿನಲ್ಲಿ ಎಷ್ಟೋ ಇರಬಹುದು. ಪ್ರತಿನಿತ್ಯ ಅವು ಸುದ್ದಿಗಳನ್ನು ಸೃಷ್ಟಿಸುತ್ತಾ, ಹಂಚುತ್ತಾ ಅಂದ ನೋಡುತ್ತಿರಬಹುದು. ಸಿರಿಯ, ಫೆಲೆಸ್ತೀನ್, ಇರಾಕ್, ಈಜಿಪ್ಟ್, ಪಾಕಿಸ್ತಾನ, ಸುಡಾನ್, ಆಫ್ರಿಕಾ, ಇರಾನ್, ಇಸ್ರೇಲ್, ಅಮೇರಿಕ, ಉತ್ತರ ಕೊರಿಯ, ಚೀನಾ, ಬಾಂಗ್ಲಾ, ಭಾರತ.. ಸಹಿತ ಜಗತ್ತಿನ ರಾಷ್ಟ್ರಗಳ ಬಗ್ಗೆ ನಾವು ಈಗಾಗಲೇ ಓದಿರುವ ಸುದ್ದಿಗಳಲ್ಲಿ ಇಂಥ ‘ಶುರತ್ ಹಾಡಿನ್’ಗಳು ತಯಾರಿಸಿದ ಕೃತಕ ಸುದ್ದಿಗಳೂ ಸೇರಿರಬಹುದು. ವಾದಕ್ಕಾಗಿಯೋ ಸಮರ್ಥನೆಗಾಗಿಯೋ ನಾವು ಅವನ್ನು ಬಳಸಿಕೊಂಡಿರಲೂಬಹುದು. ಆದ್ದರಿಂದಲೇ ಸುದ್ದಿಗಳ ಮೇಲೆ ಅನುಮಾನದ ಒಂದು ಕಣ್ಣನ್ನಿಟ್ಟೇ ಓದಬೇಕಾಗಿದೆ. ಸುದ್ದಿಗಳಿಗೆ ಒಂದು ಮಿತಿ ಇದೆ. ಸುದ್ದಿ ಬರೆಯುವವನೂ ಮನುಷ್ಯ. ಅದನ್ನು ಹಂಚುವವನೂ ಮನುಷ್ಯ. ಆದ್ದರಿಂದ,
       ಆ ಮನುಷ್ಯರಲ್ಲಿ ನಿತ್ಸಾನಾ ದರ್ಶನ್ ಲಿಂಡರ್‍ನಂಥವರನ್ನು ಪತ್ತೆ ಹಚ್ಚುವುದು ಸುಲಭವಲ್ಲ.

No comments:

Post a Comment