Tuesday, June 13, 2017

ರಾತ್ರಿ ಬಿಡಿ, ಹಗಲಲ್ಲಾದರೂ ಸಜ್ಜಾಗಬಾರದೇ?

   ಉಚಿತವಾಗಿ ಸಿಗುವ ಎಲ್ಲದರ ಬಗ್ಗೆಯೂ ಸಮಾಜದಲ್ಲಿ ಒಂದು ಬಗೆಯ ನಿರ್ಲಕ್ಷ್ಯ ಇರುತ್ತದೆ. ನೀರು ಆ ಪಟ್ಟಿಯಲ್ಲಿ
ಸೇರುವಂಥದ್ದು. ನೀರನ್ನು ಬಾಟಲಿಯಲ್ಲಿ ತುಂಬಿಸಿ ಮಾರುವ ಸಣ್ಣ ಮತ್ತು ದೊಡ್ಡದಾದ ಕಂಪೆನಿಗಳು ಅಸಂಖ್ಯ ಇವೆ. ಆದರೆ ಈ ಯಾವ ಕಂಪೆನಿಗಳೂ ನೀರನ್ನು ಸ್ವತಃ ಉತ್ಪಾದಿಸಿ ಮಾರುವುದಿಲ್ಲ. ಯಾವ ಕಂಪೆನಿಯೂ ನೀರನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಬೆಳೆದಿದ್ದರೂ ಮತ್ತು ಮಂಗಳ ಗ್ರಹದಲ್ಲಿ ವರ್ಷಗಟ್ಟಲೆ ಉಳಿದುಕೊಂಡು ನೀರಿದೆಯೋ ಎಂದು ಸಂಶೋಧನೆ ನಡೆಸುವ ಸಾಮರ್ಥ್ಯ ಬಂದಿದ್ದರೂ ಒಂದು ಹನಿ ನೀರನ್ನು ಉತ್ಪಾದಿಸುವ ಶಕ್ತಿ ವಿಜ್ಞಾನಕ್ಕಿನ್ನೂ ದಕ್ಕಿಲ್ಲ. ಒಂದೊಮ್ಮೆ ಮಾನವನು ಮಂಗಳ ಗ್ರಹದಲ್ಲಿ ಬದುಕಲು ತೀರ್ಮಾನಿಸಿದನೆಂದಾದರೆ, ಅದಕ್ಕಾಗಿ ಆಮ್ಲಜನಕವನ್ನು ಕೃತಕವಾಗಿ ತಯಾರಿಸಬಹುದು. ಆದರೆ ನೀರನ್ನು ಪ್ರಯೋಗಾಲಯದಲ್ಲಿ ತಯಾರಿಸಲು ಸಾಧ್ಯವಿಲ್ಲವಲ್ಲ. ಆದ್ದರಿಂದ ಮಂಗಳ ಗ್ರಹದಲ್ಲಿ ಜೀವಿಸಬಹುದೇ ಎಂಬುದು ಅಲ್ಲಿ ನೀರು ಲಭ್ಯವಿದೆಯೇ ಎಂಬುದನ್ನು ಹೊಂದಿಕೊಂಡಿದೆ. ನಮ್ಮ ನಡುವೆ ಬಾಟಲಿಯಲ್ಲಿ ನೀರು ತುಂಬುವ ಕಂಪೆನಿಗಳು ಜಾಸ್ತಿಯಾಗುತ್ತಾ ಹೋದಷ್ಟು ಭೂಮಿಯಲ್ಲಿರುವ ನೀರು ಬಸಿಯುತ್ತಾ ಹೋಗುತ್ತದೆ. ಪ್ರಕೃತಿ ಅಥವಾ ದೇವನು ನಿಯಮಿತವಾಗಿ ಮಳೆ ಸುರಿಸುತ್ತಾನೆ. ಭೂಮಿಯ ಒಡಲು ತುಂಬುತ್ತದೆ. ನಮ್ಮ ದಾಹ ಇಂಗುತ್ತದೆ. ಇಂಥದ್ದೊಂದು ಪ್ರಕ್ರಿಯೆಯಲ್ಲಿ ಸದ್ಯ ಜಗತ್ತು ಬದುಕುತ್ತಿದೆ. ವಿಶೇಷ ಏನೆಂದರೆ, ನೀರು ಮಾನವ ನಿರ್ಮಿತ ಅಲ್ಲ ಎಂಬುದನ್ನು ಮತ್ತು ಅದು ಪ್ರಕೃತಿಯ ಅತ್ಯಮೂಲ್ಯ ಕೊಡುಗೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ‘ನೀವು ಸಮುದ್ರದಲ್ಲಿದ್ದರೂ ನೀರನ್ನು ಪೋಲು ಮಾಡಬಾರದು..’ ಎಂದು ಪ್ರವಾದಿ ಮುಹಮ್ಮದ್ ಹೇಳಿದ್ದಾರೆ. ಎಲ್ಲ ಧರ್ಮಾನುಯಾಯಿಗಳೂ ನೀರಿನ ಅವಲಂಬಿತರು. ನೀರಾದರೋ ದೇವನ ಕೊಡುಗೆ ಎಂದು ಅವರೆಲ್ಲರೂ ಒಪ್ಪುತ್ತಾರೆ. ಆದರೂ ನೀರಿನ ಸಂರಕ್ಷಣೆ ಎಂಬುದು ಯಾಕೆ ಧಾರ್ಮಿಕ ಕರ್ತವ್ಯವಾಗಿ ನಮ್ಮ ನಡುವೆ ಪ್ರಚಲಿತವಾಗಿಲ್ಲ? ಈ ದೇಶದಲ್ಲಿರುವಷ್ಟು ಧಾರ್ಮಿಕ ಸಂಘಟನೆಗಳು ಬಹುಶಃ ಜಗತ್ತಿನಲ್ಲಿ ಎಲ್ಲೂ ಇಲ್ಲ. ಹಿಂದೂ-ಮುಸ್ಲಿಮ್-ಕ್ರೈಸ್ತ-ಬೌದ್ಧ-ಸಿಖ್ಖ್... ಹೀಗೆ ಎಲ್ಲರಿಗೂ ಈ ಮಾತು ಅನ್ವಯ. ಹಾಗಿದ್ದ ಮೇಲೂ ಕನಿಷ್ಠ ಈ ಬಿರು ಬೇಸಿಗೆಯಲ್ಲಾದರೂ ಪ್ರಮುಖ ಧಾರ್ಮಿಕ ಸಂಘಟನೆಗಳು ಜಲ ಜಾಗೃತಿ ಅಭಿಯಾನವನ್ನು ಕೈಗೊಳ್ಳುತ್ತಿಲ್ಲವಲ್ಲ ಯಾಕೆ? ಪ್ರತಿದಿನ ನಾವು ಪತ್ರಿಕೆ, ಟಿ.ವಿ.ಗಳಲ್ಲಿ ಧಾರ್ಮಿಕ ಸಭೆಗಳ ಸುದ್ದಿಗಳನ್ನು ಓದುತ್ತಲೂ ಆಲಿಸುತ್ತಲೂ ಇರುತ್ತೇವೆ. ಧರ್ಮ ಜಾಗೃತಿಯ ಹೆಸರಲ್ಲಿ ನಡೆಯುವ ಚಟುವಟಿಕೆಗಳ ವಿವರಗಳನ್ನು ಆಲಿಸುತ್ತಿರುತ್ತೇವೆ. ಧರ್ಮದ ಅವಹೇಳನ, ಧರ್ಮ ರಕ್ಷಣೆ... ಇತ್ಯಾದಿಗಳ ಹೆಸರಲ್ಲಿ ಜಗಳವಾಗುವುದು, ಹಲ್ಲೆ ಹತ್ಯೆಗಳವರೆಗೂ ಆಕ್ರೋಶ ವ್ಯಕ್ತವಾಗುತ್ತಿರುವುದನ್ನು ನೋಡುತ್ತಿರುತ್ತೇವೆ. ಆದರೆ ಎಲ್ಲೂ ನೀರಿನ ಸಂರಕ್ಷಣೆಯ ಹೆಸರಲ್ಲಿ, ನೀರು ಪೋಲು ಮಾಡಿದ ಕಾರಣದ ನೆಪದಲ್ಲಿ ಹಲ್ಲೆಗಳಾದುದನ್ನು ನೋಡಿದ್ದೇವೆಯೇ? ಯಾಕೆ ನೀರು ನಮ್ಮ ಧರ್ಮದ ಭಾಗವಾಗಿಲ್ಲ? ಧರ್ಮ ರಕ್ಷಣೆಯ ಭಾಗವಾಗಿ ನೀರನ್ನು ನಾವು ಪರಿಗಣಿಸದೇ ಇರುವುದಕ್ಕೆ ಕಾರಣಗಳೇನು? ನೀರು ಮುಕ್ತವಾದ ಇಗರ್ಜಿಗಳು, ದೇವಸ್ಥಾನಗಳು, ಮಠಗಳು, ಮಸೀದಿಗಳು ಎಲ್ಲೂ ಇಲ್ಲ. ನೀರಿಲ್ಲದೇ ಮಸೀದಿಗಳೇ ಇಲ್ಲ ಎಂಬುದು ಸ್ಪಷ್ಟ. ಹೆಚ್ಚಿನ ದೇವಸ್ಥಾನಗಳು ನದಿ ತಟದಲ್ಲೋ, ವಿಸ್ತಾರ ಕೊಳಗಳ ಬಳಿಯೋ ನಿರ್ಮಿಸಲ್ಪಟ್ಟಿವೆ. ಧಾರ್ಮಿಕ ಚಟುವಟಿಕೆಗಳು ನೀರನ್ನು ಅವಲಂಬಿಸಿಕೊಂಡಿವೆ ಎಂಬುದಕ್ಕೆ ಇದು ಅತ್ಯುತ್ತಮ ಪುರಾವೆ. ಇಷ್ಟಿದ್ದೂ ಇಂಥ ಮಸೀದಿ-ದೇವಸ್ಥಾನಗಳಿಂದ ಯಾಕೆ ಜಲ ಜಾಗೃತಿ ಅಭಿಯಾನಗಳು ಪ್ರಾರಂಭವಾಗುತ್ತಿಲ್ಲ? ಇಲ್ಲಿರುವ ವಿವಿಧ ಧರ್ಮಗಳು ಮತ್ತು ನೂರಾರು ಸಂಘಟನೆಗಳು ಒಟ್ಟಾಗಿ ಮನೆ ಮನೆ ಜಾಗೃತಿ ಕಾರ್ಯಕ್ರಮಗಳನ್ನು ಯಾಕೆ ಹಮ್ಮಿಕೊಳ್ಳುತ್ತಿಲ್ಲ? ನೀರು ಎಂಬುದು ಯಾವುದೇ ಒಂದು ಧರ್ಮದ ಚಿಹ್ನೆಯನ್ನೋ ಬಣ್ಣವನ್ನೋ ಅಂಟಿಸಿಕೊಂಡು ಬರದ ಅಪ್ಪಟ ದೇವ ಪ್ರತಿನಿಧಿ. ದೇವನಿಗೆ ಹೇಗೆ ನಾವು ನಿರ್ದಿಷ್ಟ ಬಣ್ಣ, ಆಕಾರ, ಭಾಷೆ, ಜಾತಿ, ವೇಷವನ್ನು ತೋಡಿಸಲಾರವೋ ಹಾಗೆಯೇ ನೀರೂ. ಅದು ಸರ್ವವ್ಯಾಪಿ. ದೇವನು ಹೇಗೆ ಯಾರ ಅವಲಂಬಿತನೂ ಅಲ್ಲವೋ ಮತ್ತು ಎಲ್ಲ ಮನುಷ್ಯರೂ ಅವನ ಅವಲಂಬಿತರೋ ಹಾಗೆಯೇ ನೀರೂ ಕೂಡ. ಅದೂ ಯಾರನ್ನೂ ಅವಲಂಬಿಸಿಕೊಂಡಿಲ್ಲ. ಆದರೆ ಜನರೆಲ್ಲ ಅದನ್ನು ಅವಲಂಬಿಸಿಕೊಂಡಿದ್ದಾರೆ. ಹೀಗಿದ್ದೂ ಧರ್ಮದ ಹೆಸರಲ್ಲಿ ಹುಟ್ಟಿಕೊಂಡ ಯಾವ ಪ್ರಮುಖ ಸಂಘಟನೆಗಳೂ ಜಲ ಜಾಗೃತಿಯನ್ನು ಗಂಭೀರವಾಗಿ ಪರಿಗಣಿಸಿರುವುದನ್ನು ನಾವು ಕಾಣುತ್ತಿಲ್ಲ. ಒಂದುವೇಳೆ ಎಲ್ಲ ಸಂಘಟನೆಗಳು ಒಟ್ಟು ಸೇರಿಕೊಂಡು ನೀರಿನ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾದರೆ, ಯಾವ ‘ಎತ್ತಿನ ಹೊಳೆ’ಯೂ ಇಲ್ಲಿ ಅಗತ್ಯವಿರಲಾರದು.
     ಇಂದಿನ ದಿನಗಳ ಬಹುದೊಡ್ಡ ಅಗತ್ಯ ಏನೆಂದರೆ, ನೀರನ್ನು ಧರ್ಮದ ಭಾಗವಾಗಿ ಕಾಣುವುದು. ಹೊಸ ತಲೆಮಾರಿಗೆ ನೀರಿನ ಸಂರಕ್ಷಣೆಯ ಅಗತ್ಯಗಳನ್ನು ಹೇಳಿಕೊಡುವುದು. ನೀರಲ್ಲಿ ದೇವನನ್ನು ಕಾಣು ಎಂದು ಕಲಿಸಿಕೊಡುವುದು. ನೀರು ಧಾರಾಳವಾಗಿ ಲಭ್ಯವಿರುವ ಪ್ರದೇಶದ ಮಂದಿಯೂ ನೀರಿನ ಬರ ಅನುಭವಿಸುತ್ತಿರುವ ಪ್ರದೇಶದ ಮಂದಿಯೂ ನೀರನ್ನು ಮಿತವಾಗಿಯೇ ಮತ್ತು ಪೋಲಾಗದಂತೆಯೇ ಬಳಸಬೇಕಾದ ಅಗತ್ಯ ಇದೆ. ಅದು ಧಾರ್ಮಿಕ ಆದೇಶ. ಸದ್ಯ ನಾವು ಈ ಆದೇಶವನ್ನು ಉಲ್ಲಂಘಿಸಿ ಬದುಕುತ್ತಿರುವುದರಿಂದಲೇ ನೀರಿನ ಲಭ್ಯತೆಯಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಸದ್ಯ ನಮ್ಮ ನಮ್ಮ ಪ್ರದೇಶದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮಳೆ ನೀರನ್ನು ಇಂಗಿಸುವ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಬೇಕು. ಇದೇನೂ ಕಷ್ಟದ್ದಲ್ಲ. ಎಲ್ಲ ದೇವಸ್ಥಾನ, ಮಠ, ಗುಡಿ, ಮಸೀದಿ, ಚರ್ಚ್‍ಗಳು ಮನಸ್ಸು ಮಾಡಿದರೆ ಇದು ತೀರಾ ತೀರಾ ಸುಲಭ. ತಂತಮ್ಮ ವ್ಯಾಪ್ತಿಯಲ್ಲಿರುವ ಮನೆಗೆ- ಆಯಾ ಸಮುದಾಯದ ಜನರ ಗುಂಪಾದರೂ ಸರಿ-ಭೇಟಿ ಕೊಟ್ಟು ನೀರಿನ ಮಿತವ್ಯಯದ ಅಗತ್ಯವನ್ನು ಹೇಳಬೇಕು. ಜೊತೆಗೇ ನೀರಿಂಗಿಸುವ ಬಗೆಗೂ ತರಬೇತಿಯನ್ನು ನೀಡಬೇಕು. ಬೋರ್‍ವೆಲ್‍ಗಳ ಸುತ್ತ ಗುಂಡಿಕೊರೆದು ನೀರಿಂಗಿಸಲು ಒತ್ತಾಯಿಸಬೇಕು. ನಮ್ಮಲ್ಲಿ ಸಾಕಷ್ಟು ಪಾಳುಬಿದ್ದ ಬೋರ್‍ವೆಲ್‍ಗಳಿವೆ. ನೀರು ಬತ್ತಿಹೋದ ಕಾರಣಕ್ಕಾಗಿ ನಿರ್ಲಕ್ಷ್ಯಕ್ಕೊಳಗಾಗಿ ಹೂಳು ತುಂಬಿಕೊಂಡ ಬಾವಿ, ಕೆರೆಗಳಿವೆ. ಇವುಗಳ ಹೂಳು ಎತ್ತುವ ಬಗ್ಗೆ ಪ್ರಯತ್ನಗಳಾಗಬೇಕು. ಪಾಳು ಬೋರ್‍ವೆಲ್‍ಗಳ ಸುತ್ತ ನೀರಿಂಗಿಸುವಿಕೆಗೆ ವ್ಯವಸ್ಥೆ ಮಾಡಬೇಕು. ಸಾಧ್ಯವಾದರೆ ಸಂಘಟನೆಗಳ ಮಂದಿ ಸ್ವತಃ ಇಂಥದ್ದನ್ನು ಮಾಡಬಹುದು. ಹಾಗೆಯೇ ಪ್ರತಿದಿನ ನೀರು ಪೋಲಾಗುವ ಸಂದರ್ಭಗಳನ್ನು ಪಟ್ಟಿ ಮಾಡಿ ವಿವರಿಸಬೇಕು. ನಳ್ಳಿಯನ್ನು ತೆರೆದಿಟ್ಟು ಬ್ರಶ್ ಮಾಡುವುದೂ ಇದರಲ್ಲಿ ಒಂದು. ಶವರ್‍ನ ಬದಲು ಬಕೆಟ್‍ನಲ್ಲಿ ನೀರು ತುಂಬಿಸಿ ಸ್ನಾನ ಮಾಡುವಂತೆ ವಿನಂತಿಸುವುದೂ ಇನ್ನೊಂದು. ಧರ್ಮದ ಚಟುವಟಿಕೆಗಾಗಿ ಅರ್ಧರಾತ್ರಿಯಲ್ಲೂ ಎದ್ದು ಹೋಗುವಷ್ಟು ಧಾರ್ಮಿಕ ಕಳಕಳಿಯಿರುವವರಿರುವ ಈ ದೇಶದಲ್ಲಿ ಧರ್ಮದ್ದೇ ಭಾಗವಾದ ನೀರಿನ ಸಂರಕ್ಷಣೆಗಾಗಿ ಕನಿಷ್ಠ ಹಗಲಲ್ಲಾದರೂ ಎದ್ದು ನಿಂತರೆ, ಅದಕ್ಕಿಂತ ದೊಡ್ಡದಾದ ಧರ್ಮ ಸೇವೆ ಇನ್ನಾವುದೂ ಇರಲಾರದು.


ಉಮರ್ ಗೆ ಕಲ್ಲೆಸೆದು ತಪ್ಪಿಸಿಕೊಂಡವರ ಬಗ್ಗೆ..


        ಇಂಡಿಯಾ ಟುಡೇ, ಸಿಎನ್‍ಎನ್-ನ್ಯೂಸ್ 18, ಡಿಎನ್‍ಎ, ಝೀ ನ್ಯೂಸ್.. ಮುಂತಾದ ಈ ದೇಶದ ಪ್ರಮುಖ ಸುದ್ದಿ ಚಾನೆಲ್‍ಗಳು ಮೇ 11ರಂದು ಒಂದು ಬ್ರೇಂಕಿಂಗ್ ನ್ಯೂಸನ್ನು ಪ್ರಸಾರ ಮಾಡಿದುವು. ಮರುದಿನ ಈ ದೇಶದ ಪ್ರಮುಖ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪತ್ರಿಕೆಗಳು ಈ ಬ್ರೇಕಿಂಗ್ ನ್ಯೂಸನ್ನು ಮಹತ್ವಪೂರ್ಣ ಸುದ್ದಿಯಾಗಿ ಪ್ರಕಟಿಸಿದುವು. ಸುದ್ದಿ ಹೀಗಿತ್ತು-
ಉಮರ್ ಫಯಾಝರ ಅಂತ್ಯಸಂಸ್ಕಾರದಲ್ಲೂ ಕಲ್ಲೆಸೆತ.
ಇಂಡಿಯಾ ಟುಡೇ ಚಾನೆಲ್ ಹೀಗೆ ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡಿತು-
- Stone pelting during Lt Ummer Fayaz's funeral
- Youths resort to stone pelting in Kulgam
- Clashes erupt between stone pelters, police

   ಸಾಮಾಜಿಕ ಜಾಲತಾಣಗಳಲ್ಲಂತೂ ಈ ಕಲ್ಲೆಸೆತದ ಸುದ್ದಿಗೆ ಆಕ್ರೋಶಿತ ಪ್ರತಿಕ್ರಿಯೆಗಳು ವ್ಯಕ್ತವಾದುವು. ಕಾಶ್ಮೀರಿಗಳು ಎಷ್ಟು ಶೇಕಡಾ ದೇಶದ್ರೋಹಿಗಳು ಎಂಬುದಕ್ಕೆ ಈ ಕಲ್ಲೆಸೆತವನ್ನು ಪುರಾವೆಯಾಗಿ ಅನೇಕರು ಬಳಸಿಕೊಂಡರು. ಪ್ರಾದೇಶಿಕ ಪತ್ರಿಕೆಗಳಲ್ಲಿ ಈ ಕಲ್ಲೆಸೆತವನ್ನು ಕೇಂದ್ರೀಕರಿಸಿಯೇ ಅಂಕಣಗಳು ಪ್ರಕಟವಾದುವು. ರಾಜಕಾರಣಿಗಳು ಮತ್ತು ಪತ್ರಕರ್ತರು ತಂತಮ್ಮ ನೆಲೆಯಲ್ಲಿ ಈ ಸುದ್ದಿಗೆ ಉಪ್ಪು-ಖಾರ ಸೇರಿಸಿದರು. ಆದರೆ ನಿಜಕ್ಕೂ ಇಂಥದ್ದೊಂದು ಕಲ್ಲೆಸೆತದ ಘಟನೆ ನಡೆದಿದೆಯೇ, ಈ ಸುದ್ದಿಯ ಮೂಲ ಯಾವುದು.. ಎಂಬುದನ್ನು ಸ್ಪಷ್ಟಪಡಿಸಿ ಕೊಳ್ಳುವ ಗೋಜಿಗೇ ಈ ಸುದ್ದಿ ಸ್ಫೋಟಕರಲ್ಲಿ ಯಾರೂ ಹೋಗಿರಲೇ ಇಲ್ಲ. ಒಂದು ವೇಳೆ ಎನ್‍ಡಿಟಿವಿಯ ವರದಿಗಾರ ನಾಸಿರ್ ಮಸೂದಿ ಟ್ವೀಟ್ ಮಾಡದೇ ಇರುತ್ತಿದ್ದರೆ ಮತ್ತು ಕುಲ್ ಗಾಂವ್ ಎಸ್.ಪಿ. (ಸುಪರಿಂಟೆಂಡೆಂಟ್ ಆಫ್ ಪೊಲೀಸ್) ಶ್ರೀಧರ್ ಪಾಟೀಲ್ ನಿಜ ಹೇಳದಿರುತ್ತಿದ್ದರೆ ಈ ಸುದ್ದಿಯ ಇನ್ನೊಂದು ಮುಖ ಜನರಿಗೆ ಗೊತ್ತಾಗುವ ಸಾಧ್ಯತೆಯೂ ಇರಲಿಲ್ಲ.
     ಕಾಶ್ಮೀರದ ಕುಲ್‍ಗಾಂವ್‍ನ ನಿವಾಸಿಯಾಗಿದ್ದ 23 ವರ್ಷದ ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಝ ತನ್ನ ಕುಟುಂಬದ ಮದುವೆ ಕಾರ್ಯಕ್ರಮಕ್ಕೆಂದು ಶೋಪಿಯಾನಕ್ಕೆ ಬಂದಿದ್ದರು. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಲ್ಲದೇ ಹತ್ಯೆ ನಡೆಸಿದರು. ಹುಟ್ಟೂರು ಕುಲ್‍ಗಾಂವ್‍ನಲ್ಲಿ ಮೃತದೇಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು. ಸಾವಿರಾರು ಮಂದಿ ಭಾಗವಹಿಸಿದ್ದರು. ವಿಶೇಷ ಏನೆಂದರೆ, ಎನ್‍ಡಿಟಿವಿಯ ನಾಸಿರ್ ಮಸೂದಿಯನ್ನು ಹೊರತುಪಡಿಸಿ ರಾಷ್ಟ್ರೀಯ ಮಾಧ್ಯಮಗಳನ್ನು ಪ್ರತಿನಿಧಿಸುವ ಯಾವ ಪತ್ರಕರ್ತರೂ ಕುಲ್‍ಗಾಂವ್‍ನಲ್ಲಿ ಇರಲಿಲ್ಲ. ಅವರೆಲ್ಲ ಶ್ರೀನಗರದಲ್ಲಿದ್ದುಕೊಂಡೇ ಸುದ್ದಿ ಸಂಗ್ರಹ ಮತ್ತು ರವಾನೆಯಲ್ಲಿ ತೊಡಗಿದ್ದರು. ಕಲ್ಲೆಸೆತದ ಬ್ರೇಕಿಂಗ್ ನ್ಯೂಸ್ ಹುಟ್ಟಿದ್ದೂ ಶ್ರೀನಗರದಲ್ಲೇ. ಇದು ಗೊತ್ತಾದದ್ದೇ  ತಡ, ಎನ್‍ಡಿಟಿವಿಯ ನಾಸಿರ್ ಮಸೂದಿ (@nazir_masoodi) ಹೀಗೆ ಟ್ವೀಟ್ ಮಾಡಿದರು-
Reports of stone throwing at the body of Lt Ummar Fayaz are baseless. I was there in Kulgam. Spoke to people. There is sense of loss and disbelief – ಮೇ 10
(ಉಮರ್ ಫಯಾಝರ ಮೃತದೇಹದ ಮೇಲೆ ಕಲ್ಲೆಸೆಯಲಾಗಿದೆ ಎಂಬ ವರದಿಗಳು ಆಧಾರರಹಿತ. ನಾನು ಅಲ್ಲಿದ್ದೆ ಮತ್ತು ಜನರೊಂದಿಗೆ ಮಾತಾಡಿರುವೆ.) ಆ ಬಳಿಕ ನ್ಯೂಸ್ ಲಾಂಡ್ರಿ ವೆಬ್ ಪತ್ರಿಕೆಯೊಂದಿಗೆ ಮಸೂದಿ ವಿವರವಾಗಿ ಮಾತಾಡಿದರು. ಅಲ್ಲದೇ ಕುಲ್‍ಗಾಂವ್‍ನ ಎಸ್‍ಪಿ ಶ್ರೀಧರ್ ಪಾಟೀಲ್ ಕೂಡ ಕಲ್ಲೆಸೆತದ ಸುದ್ದಿಯನ್ನು ನಿರಾಕರಿಸಿದರು: I was there at the procession and the salutation which was given at his village. It went on very peaceful (ಮೃತದೇಹದ ಮೆರವಣಿಗೆ ಮತ್ತು ಸೇನಾ ಗೌರವ ನೀಡುವ ವೇಳೆ ನಾನು ಅಲ್ಲಿದ್ದೆ. ಅದು ಶಾಂತಿಯುತವಾಗಿ ನೆರವೇರಿತು.) ಎಂದು ನೇರವಾಗಿಯೇ ಹೇಳಿದರು. ಇದಾದ ಬಳಿಕ ಇಂಡಿಯಾ ಟುಡೇ ಚಾನೆಲ್ ತನ್ನ ವೆಬ್‍ಸೈಟ್‍ನಿಂದ ‘ಕಲ್ಲೆಸೆತ’ದ ಅಷ್ಟೂ ಸುದ್ದಿಗಳನ್ನು ಅಳಿಸಿ ಹಾಕಿತು. ಆದರೆ ಪ್ರಾದೇಶಿಕ ಪತ್ರಿಕೆಗಳು ಬಿಡಿ, ರಾಷ್ಟ್ರೀಯ ಪತ್ರಿಕೆಗಳೂ ಈ ಸತ್ಯ ಸುದ್ದಿಯನ್ನು ಜನರಿಗೆ ತಲುಪಿಸಲು ನಿರಾಸಕ್ತಿ ತೋರಿದುವು. ದುರಂತ ಏನೆಂದರೆ, ನಾಲ್ಕು ತಿಂಗಳುಗಳ ಹಿಂದೆ ಹಿಝ್ಬುಲ್ ಮುಜಾಹಿದೀನ್‍ನ ನಾಯಕ ಎಂದು ಹೇಳಲಾಗುತ್ತಿರುವ ಬುರ್ಹಾನ್ ವಾನಿಯ ಅಂತ್ಯ ಸಂಸ್ಕಾರದ ವೇಳೆ ಲಕ್ಷದಷ್ಟು ಕಾಶ್ಮೀರಿಗಳು ಸೇರಿರುವುದನ್ನು ಪ್ರಶ್ನಿಸಿದ್ದ ಮತ್ತು ಅವರನ್ನೆಲ್ಲ ದೇಶದ್ರೋಹಿಗಳ ಪಟ್ಟಿಯಲ್ಲಿಟ್ಟು ವಿಶ್ಲೇಷಿಸಿದ್ದ ಮಾಧ್ಯಮಗಳು, ಉಮರ್ ಫಯಾಝïರ ಅಂತ್ಯಸಂಸ್ಕಾರದ ವೇಳೆ ಸೇರಿದ ಜನಸ್ತೋಮವನ್ನು ಲೆಕ್ಕ ಹಾಕುವುದಕ್ಕೆ ಮುಂದಾಗಲೇ ಇಲ್ಲ. ಆ ಜನಸ್ತೋಮವನ್ನು ಎತ್ತಿ ಕೊಂಡು, ನೋಡಿ - ಕಾಶ್ಮೀರದಲ್ಲಿ ಎಷ್ಟು ದೇಶಪ್ರೇಮಿಗಳಿದ್ದಾರೆ ಎಂದು ಹೇಳುವ ಸಾಹಸ ಮಾಡಲೇ ಇಲ್ಲ. ಸುಳ್ಳು ಸುದ್ದಿಯನ್ನು ಸಿಹಿಯಂತೆ ಹಂಚುವ ಮತ್ತು ಹಂಚಲೇಬೇಕಾದ ಸತ್ಯ ಸುದ್ದಿಯನ್ನು ಅವಗಣಿಸುವ ಈ ದ್ವಂದ್ವಕ್ಕೆ ಏನೆನ್ನಬೇಕು? ಇದು ಉದ್ದೇಶಪೂರ್ವಕವೋ ಅಥವಾ ಪ್ರಮಾದವೋ?
ಇದೇ ಮೇ 13-14ರ ನಡುವೆ @beingSandeep  ಅನ್ನುವ ಹೆಸರಿನ ಟ್ವೀಟರ್ ಬಳಕೆದಾರ ಒಂದು ಫೋಟೊವನ್ನು ಹಂಚಿ ಕೊಂಡ. ಎನ್‍ಡಿಟಿವಿಯ ಮಾಜಿ ಮುಖ್ಯ ಸಂಪಾದಕಿ ಬರ್ಖಾದತ್ ಅವರು ಓರ್ವ ಯುವ ಕಾಶ್ಮೀರಿಯ ಸ್ಕೂಟರ್‍ನ ಹಿಂಬದಿ ಸವಾರಳಾಗಿ ಸಾಗುತ್ತಿರುವ ದೃಶ್ಯ. ಆತ ಆ ದೃಶ್ಯದ ಜೊತೆಗೇ ಒಂದು ಪ್ರಶ್ನೆಯನ್ನೂ ಮುಂದಿಟ್ಟ - ‘ಹಿಝ್ಬುಲ್ ಮುಜಾಹಿದೀನ್‍ನ ಕಮಾಂಡರ್ ಝಾಕಿರ್ ಮೂಸಾನ ಜೊತೆ ನೀವಿರುವುದು ನಿಜವೇ? ಭಯೋತ್ಪಾದಕರ ಜೊತೆ ನಿಮಗೇನು ವ್ಯವಹಾರ?’ (Is it true @BDUTT that you were seen with Hizbul mujahidin commander Zakir Musa? What have you got to do with terrorists?) ನಿಜವಾಗಿ ಇಂಥದ್ದೊಂದು  ಪ್ರಶ್ನೆ ಹುಟ್ಟಿಕೊಂಡದ್ದು 2017ರ ಮೇನಲ್ಲಿ ಅಲ್ಲ. 2016 ಆಗಸ್ಟ್ ನಲ್ಲೇ  ಕೆಲವು ಬಲಪಂಥೀಯ ವೆಬ್ ಪತ್ರಿಕೆಗಳು ಇಂಥದ್ದೊಂದು ಅನು ಮಾನವನ್ನು ಹುಟ್ಟು ಹಾಕಿದ್ದುವು. 2016 ಆಗಸ್ಟ್ 18ರಂದು ಸ್ವತಃ ಬರ್ಖಾದತ್ ಅವರೇ ಆ ಪೋಟೋವನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. 2016 ಜುಲೈಯಲ್ಲಿ ಪೋಲೀಸರು ಬುರ್ಹಾನ್ ವಾನಿಯನ್ನು ಹತ್ಯೆ ನಡೆಸಿದ ಬಳಿಕ ಕಾಶ್ಮೀರ ಉದ್ವಿಘ್ನ ಸ್ಥಿತಿಯಲ್ಲಿತ್ತು. ಅಂದಿನಿಂದ ಆರಂಭವಾದ ಕಲ್ಲು ತೂರಾಟದ ಪ್ರಕರಣಗಳು ಇಂದಿಗೂ ನಿಂತಿಲ್ಲ. ಬರ್ಖಾ ದತ್ತ್ ಅವರು 2016 ಆಗಸ್ಟ್‍ನಲ್ಲಿ ಕಾಶ್ಮೀರಕ್ಕೆ ತೆರಳಿದರು. ಅಲ್ಲಿನ ಉದ್ವಿಘ್ನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ವರದಿ ಮಾಡುವುದು ಅವರ ಉದ್ದೇಶವಾಗಿತ್ತು. ಆದರೆ ಕಾಶ್ಮೀರದಲ್ಲಿ ಪ್ರಯಾಣ ಸುಲಭವಾಗಿರಲಿಲ್ಲ. ವಾಹನಗಳಿಲ್ಲ. ಕರ್ಫ್ಯೂ, ಇಂಟರ್‍ನೆಟ್ ಸೇವೆಗಳ ರದ್ದು, ರಸ್ತೆಗಿಳಿಯದ ಜನರ ಮಧ್ಯೆ ಬರ್ಖಾ ಸಾಗಬೇಕಿತ್ತು. ಆ ಸಂದರ್ಭದಲ್ಲಿ ಅವರು ಓರ್ವ ಸ್ಕೂಟರ್ ಸವಾರನ ಹಿಂಬದಿ ಕೂತು ಪ್ರಯಾಣಿಸಿದರು ಮತ್ತು ಚಿತ್ರವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹೀಗೆ ಹಂಚಿಕೊಂಡರು-
For Kashmir curfew days and car drivers refuse to go further - a scooty and a kind young man to the rescue in Budgam - ಆಗಸ್ಟ್ 18, 2016.
ಬರ್ಖಾ ದತ್ ಅವರ ಈ ಟ್ವೀಟ್‍ಗಿಂತ ಒಂದು ದಿನ ಮೊದಲು ಝಾಕಿರ್ ಮೂಸಾನನ್ನು ಹೊಸ ಕಮಾಂಡರ್ ಆಗಿ ನೇಮಿಸಿರುವುದಾಗಿ ಹಿಝ್ಬುಲ್ ಮುಜಾಹಿದೀನ್ ಘೋಷಿಸಿತ್ತು. ಆತನ ಚಿತ್ರವನ್ನು ಇಂಟಿಯಾ ಟುಡೇ ಸೇರಿದಂತೆ ವಿವಿಧ ಟಿ.ವಿ. ಚಾನೆಲ್‍ಗಳು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದುವು. ಆಗಸ್ಟ್ 17ರಂದು ಹಿಝ್ಬುಲ್ ಮುಜಾಹಿದೀನ್‍ನ ಹೊಸ ಕಮಾಂಡರ್ ಆಗಿ ನೇಮಕಗೊಂಡವ ಆಗಸ್ಟ್ 18ರಂದು ರಸ್ತೆಯಲ್ಲಿ ಬರ್ಖಾ ದತ್‍ರನ್ನು ಸ್ಕೂಟರ್‍ನಲ್ಲಿ ಕೂರಿಸಿಕೊಂಡು ರಾಜಾರೋಷವಾಗಿ ಸಾಗಲು ಸಾಧ್ಯವೇ? ಹಿಝ್ಬುಲ್ ಮುಜಾಹಿದೀನ್ ಅಂದರೆ, ನಮ್ಮ ಸಶಸ್ತ್ರ ದಳದ ಅಂಗಸಂಸ್ಥೆಯೇನೂ ಅಲ್ಲವಲ್ಲ. ಭಯೋತ್ಪಾದಕ ಸಂಘಟನೆಯೆಂದು ಭಾರತ ಸರಕಾರ ಘೋಷಿಸಿರುವ ಹಿಝ್ಬುಲ್ ಮುಜಾಹಿದೀನ್‍ನ ಕಮಾಂಡರ್ ಓರ್ವ ಬರ್ಖಾ ದತ್‍ಗೆ ಸಿಗುವುದು ಮತ್ತು ಆತ ಅವರನ್ನು ಎಲ್ಲೆಡೆ ಸುತ್ತಾಡಿಸುವುದು ಅಸಾಧ್ಯ ಎಂಬುದು ಎಂಥ ಮುಟ್ಠಾಳರಿಗೂ ಗೊತ್ತಾಗಬಹುದಾದ ಸಂಗತಿಯೇ ಆಗಿದ್ದರೂ ಈ 2017ರಲ್ಲಿ ಮತ್ತೆ ಆ ಪೋಟೋವನ್ನು ಅದರ ಜೊತೆಗೇ ಅನುಮಾನಗಳನ್ನೂ ಮುನ್ನೆಲೆಗೆ ತರಲು ಕಾರಣವೇನು? ಈ ಸ್ಕೂಟರ್ ಪ್ರಕರಣದ ಬಗ್ಗೆ Alt News ನ ಪ್ರತೀಕ್ ಸಿನ್ಹ ಅವರು ತನಿಖೆಗಿಳಿದರು ಮತ್ತು Did Hizbul Mujahideen commander give Burkha Dutt a scooter ride or has the right wing been caught lying again ? ಎಂಬ ಶೀರ್ಷಿಕೆಯಲ್ಲಿ ತಾನು ಕಂಡುಕೊಂಡ ಸತ್ಯಗಳನ್ನೂ ಬಹಿರಂಗಪಡಿಸಿದರು. ನಕಲಿ ಸುದ್ದಿಗಳನ್ನು ಉತ್ಪಾದಿಸಿ ಹಂಚುವ ಹಲವು ಬಲಪಂಥೀಯ ವೆಬ್ ಪತ್ರಿಕೆಗಳನ್ನು ಅವರು ಪತ್ತೆ ಹಚ್ಚಿದರು. ಇತ್ತೀಚೆಗೆ ಸಾಹಿತಿ ಅರುಂಧತಿ ರಾಯ್ ಅವರ ಸುತ್ತ ಹುಟ್ಟಿಕೊಂಡ ವಿವಾದದ ಮೂಲವೂ Postcard.news  ಎಂಬ ಬಲಪಂಥೀಯ ವೆಬ್ ಪತ್ರಿಕೆಯೇ ಆಗಿದೆ. ‘ಕಾಶ್ಮೀರದಲ್ಲಿ ಈಗಿರುವ 7 ಲಕ್ಷ ಯೋಧರ ಸಂಖ್ಯೆಯನ್ನು 70 ಲಕ್ಷಕ್ಕೆ ಏರಿಸಿ ದರೂ ಭಾರತದ ಉದ್ದೇಶ ಸಫಲವಾಗದು..’ ಎಂದು ಟೈಮ್ಸ್ ಆಫ್ ಪಾಕಿಸ್ತಾನ್ ಎಂಬ ಪಾಕಿಸ್ತಾನಿ ಪತ್ರಿಕೆಗೆ ಇದೇ ಮೇ 7ರಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆ ಸಂದರ್ಶನದಲ್ಲಿ ಅರುಂಧತಿ ರಾಯ್ ಹೇಳಿರುವರೆಂದು ಪೋಸ್ಟ್ ಕಾರ್ಡ್ ನ್ಯೂಸ್, ಸತ್ಯವಿಜಯ್ ಡಾಟ್ ಕಾಮ್, ಇಂಡಿಯನ್ ವಾಯ್ಸ್ ಡಾಟ್ ಕಾಮ್ ಮುಂತಾದುವುಗಳು ಹೇಳಿಕೊಂಡಿದ್ದುವು. ಈ ಹೇಳಿಕೆಗೆ ಸಿನಿಮಾ ನಟ ಪರೇಶ್ ರಾವಲ್ ಅವರು ಸಿಟ್ಟಾಗಿ - ‘ಕಾಶ್ಮೀರದಲ್ಲಿ ಸೇನಾ ಜೀಪ್‍ಗೆ ಅರುಂಧತಿಯವರನ್ನು ಕಟ್ಟಬೇಕೆಂದು’ ಟ್ವೀಟ್ ಮಾಡಿದರು. ಸಿಎನ್‍ಎನ್ ನ್ಯೂಸ್ 18 ಟಿ.ವಿ. ಚಾನೆಲ್‍ನ ಭೂಪೇಂದ್ರ ಚೌಬೆಯವರು - ಪರೇಶ್ ರಾವಲ್‍ರ ಹೇಳಿಕೆಯನ್ನು ಟೀಕಿಸಿದರು. ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಯಂತೂ –one book winner wonder like Arundhati Roy .. ಎಂದು ತಮಾಷೆ ಮಾಡಿದರು. ಕೊನೆಗೆ Times of pakistan ಅನ್ನುವ ಪತ್ರಿಕೆಯೇ ಪಾಕಿಸ್ತಾನದಲ್ಲಿಲ್ಲ ಎಂಬುದು ಬಹಿರಂಗವಾಯಿತು. ಅದೊಂದು ವೆಬ್ ಪತ್ರಿಕೆ. ಅರುಂಧತಿ ಅಂಥದ್ದೊಂದು ಸಂದರ್ಶನವನ್ನು ಯಾರಿಗೂ ಕೊಟ್ಟೇ ಇಲ್ಲ. ಆದರೂ ನಕಲಿ ಸುದ್ದಿಯೊಂದು ಎಷ್ಟು ದೊಡ್ಡ ಸಂಚಲನವನ್ನು ಹುಟ್ಟು ಹಾಕಿತೆಂದರೆ, ಹಲವು ಪ್ರಮುಖ ಅಸಲಿ ತಲೆಗಳು ಆ ಬಗ್ಗೆ ಪ್ರತಿಕ್ರಿಯಿಸಿದುವು. ನೀಡದೇ ಇರುವ ಹೇಳಿಕೆಯನ್ನು ನೀಡಿರಬಹುದು ಎಂದು ಜನರು ಅನುಮಾನಿಸುವ ವಾತಾವರಣವನ್ನು ಹುಟ್ಟು ಹಾಕಿದುವು. ಅರುಂಧತಿ ರಾಯ್ ಅವರ ಈ ಹಿಂದಿನ ಬಿಚ್ಚು ಮಾತುಗಳಿಗೆ ಈ ಹೇಳಿಕೆಯನ್ನು ತಳುಕು ಹಾಕುವ ಸನ್ನಿವೇಶಗಳೂ ಸೃಷ್ಟಿಯಾದುವು. ಬಲಪಂಥೀಯ ವಿಚಾರಧಾರೆಯನ್ನು ಪ್ರಶ್ನಿಸುವ ವ್ಯಕ್ತಿಗಳನ್ನು ಅತ್ಯಂತ ಯೋಜಿತವಾಗಿ ಮಟ್ಟ ಹಾಕುವ ಶ್ರಮದಲ್ಲಿ ಹಿಂದುತ್ವ ಡಾಟ್ ಇನ್ಫೊ, ನ್ಯೂಸ್ ಸ್ಟೆಂಡ್ ಡಾಟ್ ನ್ಯೂಸ್, ಲಾಜಿಕಲ್ ಭಾರತ್ ಡಾಟ್ ಕಾಮ್, ಹಿಂದೂಯಿಸಂ ನೌ ಡಾಟ್ ಆರ್ಗ್, ಇಂಡಿಯಾ ರೈಸಿಂಗ್ ಡಾಟ್ ಕಾಮ್, ಅಲ್ಟಾ ದಿನ್ ಡಾಟ್ ಕಾಮ್‍ನಂಥ ಕೆಲವು ವೆಬ್ ಪತ್ರಿಕೆಗಳು ನಿರತವಾಗಿರುವುದರ ಫಲಿತಾಂಶವೇ ಈ ಕಲ್ಲೆಸೆತ, ಬರ್ಖಾದತ್, ಅರುಂಧತಿ ರಾಯ್ ಮುಂತಾದ ನಕಲಿ ಸುದ್ದಿಗಳು. ಪ್ರತೀಕ್ ಸಿನ್ಹ ಈ ಕುರಿತಂತೆ ಅಧ್ಯಯನ ನಡೆಸಿದರು. ‘ಭ್ರಷ್ಟಾಚಾರ ಪ್ರಕರಣದಲ್ಲಿ ಎನ್‍ಡಿಟಿವಿಯ ರವೀಶ್ ಕುಮಾರ್‍ರ ಸಹೋದರಿ ಬಂಧನಕ್ಕೊಳಗಾಗಿದ್ದಾರೆ, ಝೀ ನ್ಯೂಸ್‍ನ ರೋಹಿತ್ ಸರ್ಧಾನರ ವಿರುದ್ಧ ಕೆಲವರು ಫತ್ವಾ ಹೊರಡಿಸಿದ್ದಾರೆ, ಪಶ್ಚಿಮ ಬಂಗಾಳದಲ್ಲಿ ಹಿಂದೂ ಯುವಕನಿಗೆ ಮುಸ್ಲಿಮರಿಂದ ಚಿತ್ರಹಿಂಸೆ ನಡೆದಿದೆ.. ಮುಂತಾದುವುಗಳು ಹಿಂದುತ್ವ ಡಾಟ್ ಇನ್ಫೋನಲ್ಲಿ ಇತ್ತೀಚೆಗೆ ಬಂದಿರುವ ಸುದ್ದಿಗಳು. ಇವೆಲ್ಲವೂ ನಕಲಿಯೇ. ಆದರೆ ಈ ಸುದ್ದಿಯ ನಕಲಿತನ ಗೊತ್ತಾಗುವುದಕ್ಕಿಂತ ಮೊದಲು ಅಸಂಖ್ಯ ಮಂದಿಗೆ ಟ್ವೀಟರ್, ವಾಟ್ಸಾಪ್ ಮತ್ತು ಫೇಸ್‍ಬುಕ್, ಇನ್‍ಸ್ಟಾಗ್ರಾಮ್‍ಗಳ ಮೂಲಕ ತಲುಪಿರುತ್ತದೆ. ಪತ್ರಿಕೆ ಮತ್ತು ಟಿವಿ ಚಾನೆಲ್‍ಗಳ ಮೂಲಕವೂ ಅವು ಪ್ರಸಾರ ಭಾಗ್ಯವನ್ನು ಕಂಡಿರುತ್ತವೆ. ಇಷ್ಟೆಲ್ಲ ಆದ ಬಳಿಕ ಒಂದು ದಿನ ಈ ಸುದ್ದಿಗಳು ನಕಲಿ ಎಂದು ಗೊತ್ತಾದರೂ ಅದನ್ನು ಹಂಚಿಕೊಳ್ಳುವುದಕ್ಕೆ ಅನೇಕ ಬಾರಿ ಈ ಮೊದಲು ಸುದ್ದಿ ಪ್ರಕಟಿಸಿದ ಮಾಧ್ಯಮಗಳೇ ತಯಾರಿರುವುದಿಲ್ಲ. ‘ಉಮರ್ ಫಯಾಜ್ ರ ಕಲ್ಲೆಸೆತ’ ಪ್ರಕರಣವು ಇದಕ್ಕೆ ಇತ್ತೀಚಿನ ಉದಾಹರಣೆ.
ಈ ಸುಳ್ಳುಗಾರರನ್ನು ಸೋಲಿಸುವುದು ಹೇಗೆ?