Monday, July 22, 2013

ಹಾಗಂತ, ಅಮೀನಳಿಗೆ ಕಣ್ಣು ಮರಳಿಸಲು ನಮ್ಮಿಂದ ಸಾಧ್ಯವಿಲ್ಲವಲ್ಲ..

   ದಿ ನ್ಯೂಯಾರ್ಕ್ ಟೈಮ್ಸ್, ಬಿಬಿಸಿ, ದಿ ಗಾರ್ಡಿಯನ್, ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ.. ಸಹಿತ ಜಗತ್ತಿನ ಹೆಚ್ಚಿನೆಲ್ಲ ಪತ್ರಿಕೆಗಳೂ 2008 ನವೆಂಬರ್‍ನಲ್ಲಿ ಅಮೀನಾ ಬಹ್ರಾಮಿ ಎಂಬ ಯುವತಿಯ ಬಗ್ಗೆ ಬರೆದುವು. ಕಣ್ಣಿಗೆ ಕಣ್ಣು (Eye for an Eye) ಅನ್ನುವ ಇರಾನಿನ ನ್ಯಾಯದ ಕುರಿತು ವಿಮರ್ಶಿಸಿದುವು. ಮಜೀದ್ ಮುವಾಹಿದಿ ಅನ್ನುವ ಯುವಕ ಮಾಧ್ಯಮಗಳ ಕಣ್ಮಣಿ ಆಗಿಬಿಟ್ಟ. ಮುವಾಹಿದಿ ಮತ್ತು ಅಮೀನಾರನ್ನು ಎದುರಿಟ್ಟುಕೊಂಡು ಮಾಧ್ಯಮಗಳು ಮಾನವ ಹಕ್ಕುಗಳ ಸುತ್ತ ಗಂಭೀರ ಚರ್ಚೆಯನ್ನೇ ಹುಟ್ಟು ಹಾಕಿದುವು. ಇರಾನಿನಲ್ಲಿ ಚಾಲ್ತಿಯಲ್ಲಿರುವ ಕಾನೂನುಗಳು ಎಷ್ಟು ಪುರಾತನ ಮತ್ತು ಎಷ್ಟು ಅವೈಜ್ಞಾನಿಕ ಎಂದು ತರ್ಕಿಸಿದುವು. ಮುಲ್ಲಾ ತೀರ್ಪು (Mulla verdict) ಅಂದುವು. ಕಣ್ಣಿಗೆ ಕಣ್ಣು ಶಿಕ್ಷೆಯನ್ನು ರದ್ದುಪಡಿಸುವಂತೆ ಬ್ರಿಟನ್ನಿನ ವಿದೇಶಾಂಗ ಇಲಾಖೆಯು ಇರಾನಿಗೆ ಒತ್ತಾಯಿಸಿತು. ಅಂತಾರಾಷ್ಟ್ರೀಯ ಕಾನೂನುಗಳನ್ನು ಇರಾನ್ ಗೌರವಿಸಬೇಕೆಂದು ಆಮ್ನೆಸ್ಟಿ ಇಂಟರ್ ನ್ಯಾಶನಲ್ ಅಗ್ರಹಿಸಿತು. ಮಾನವಹಕ್ಕು ಕಾರ್ಯಕರ್ತರು ಜಗತ್ತಿನ ಹಲವು ಕಡೆ ಪ್ರತಿಭಟನೆಗಳನ್ನು ನಡೆಸಿದರು. ಒಂದೆಡೆ, ತನ್ನೆರಡೂ ಕಣ್ಣುಗಳನ್ನು ಕಳಕೊಂಡ ಅಮೀನಾ ಬಹ್ರಾಮಿ ಎಂಬ ಯುವತಿ, ಇನ್ನೊಂದೆಡೆ ಜಾಗತಿಕ ಒತ್ತಡಗಳು, ಮತ್ತೊಂದೆಡೆ ತನ್ನ ನೆಲದ ಕಾನೂನು... ಇರಾನ್ ಇಕ್ಕಟ್ಟಿಗೆ ಸಿಲುಕಿತು. ಒಂದು ವೇಳೆ ಕಣ್ಣಿಗೆ ಕಣ್ಣು ಎಂಬ ತೀರ್ಪನ್ನು ಮಜೀದ್ ಮುವಾಹಿದಿಯ ಮೇಲೆ ಪ್ರಯೋಗಿಸದೇ ಇರಬೇಕಾದರೆ ಇರಾನಿನ ಕಾನೂನಿನಂತೆ ಸಂತ್ರಸ್ತ ಯುವತಿಯು ಆತನನ್ನು ಕ್ಷಮಿಸಬೇಕು. ಆದರೆ ಅಮೀನಾ ಕ್ಷಮಿಸುವುದಕ್ಕೆ ಸಾಧ್ಯವೇ ಇಲ್ಲ ಅಂದಳು. ಅದಕ್ಕೆ ಕಾರಣವೂ ಇದೆ..
   ಇರಾನಿನ ರಾಜಧಾನಿ ಟೆಹ್ರಾನಿನ ಯುನಿವರ್ಸಿಟಿಯಲ್ಲಿ ಮಜೀದ್ ಮತ್ತು ಅಮೀನ ಸಹಪಾಠಿಗಳಾಗಿದ್ದರು. ಎಲೆಕ್ಟ್ರಾನಿಕ್ಸ್ ನಲ್ಲಿ ಪದವಿ ಪಡೆದಿದ್ದಲ್ಲದೇ ಮೆಡಿಕಲ್ ಎಂಜಿನಿಯರಿಂಗ್ ಕಂಪೆನಿಯಲ್ಲಿ ಅಮೀನಾ ಕೆಲಸವನ್ನೂ ಗಿಟ್ಟಿಸಿಕೊಂಡಳು. ಇತ್ತ ಮಜೀದ್, ಅಮೀನಳಲ್ಲಿ ವಿವಾಹ ಪ್ರಸ್ತಾಪವನ್ನು ಮುಂದಿಟ್ಟ. ಆತನ ಮನೆಯವರೂ ಬೆಂಬಲಿಸಿದರು. ಆದರೆ ಅಮೀನಾ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಜೀದ್, 2004 ನವೆಂಬರ್‍ನಲ್ಲಿ ಆಕೆಯ ಮುಖವನ್ನು ಗುರಿಯಾಗಿಸಿ ಆಸಿಡ್ ಎರಚಿದ. ಸಲ್ಫರಿಕ್ ಆಸಿಡ್‍ನ ಪ್ರಭಾವ ಆಕೆಯ ಮುಖವನ್ನಿಡೀ ಆವರಿಸಿಕೊಂಡಿತು. ಹೆಚ್ಚಿನ ಚಿಕಿತ್ಸೆಗಾಗಿ ಇರಾನ್ ಸರಕಾರ ಆಕೆಯನ್ನು ಸ್ಪೈನ್‍ಗೆ ವರ್ಗಾಯಿಸಿತು. 17 ಸರ್ಜರಿಗಳು ನಡೆದುವು. ಆಕೆ ಪಡಬಾರದ ಸಂಕಟ ಪಟ್ಟಳು. ವಿರೂಪಗೊಂಡ ಮುಖ, ದೃಷ್ಟಿ ಕಳಕೊಂಡ ಕಣ್ಣುಗಳು, ಹೆತ್ತವರ ಕಣ್ಣೀರು.. ಅಮೀನಾ ಪ್ರತೀಕಾರಕ್ಕೆ ಮುಂದಾದಳು. ತನ್ನನ್ನು ಕುರುಡಾಗಿಸಿದವನ ಕಣ್ಣನ್ನು ಕುರುಡಾಗಿಸುವುದಕ್ಕೆ ತನ್ನ ದೇಶದ ಕಾನೂನಿನಲ್ಲಿ ಅನುಮತಿ ಇರುವುದರಿಂದ, ತನಗೆ ಅವಕಾಶ ನೀಡಬೇಕೆಂದು ನ್ಯಾಯಾಲಯವನ್ನು ಆಗ್ರಹಿಸಿದಳು-
   ‘ಆತ ಕಣ್ಣಿಗೆ ಕಣ್ಣು ಶಿಕ್ಷೆಗೆ ಅರ್ಹನಾಗಿದ್ದಾನೆ. ನನ್ನ ಉದ್ದೇಶ ಬರೇ ಪ್ರತೀಕಾರವಷ್ಟೇ (ಕಿಸಾಸ್) ಅಲ್ಲ, ಇನ್ನಿತರ ಹೆಣ್ಣು ಮಕ್ಕಳಿಗೆ ಇಂಥ ದುರ್ದೆಸೆ ಬರಬಾರದೆಂಬುದೇ ನನ್ನ ನಿಲುವು. ಆದ್ದರಿಂದ, ಈ ಶಿಕ್ಷೆಯು ಇರಾನಿನಲ್ಲಿ ಮಾದರಿಯಾಗಿ ಸದಾ ಸ್ಮರಣೆಯಲ್ಲಿ ಉಳಿಯಬೇಕು’- ಸ್ಪೈನಿನ ABC ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆಕೆ ಅಭಿಪ್ರಾಯಪಟ್ಟಳು.
   ಈ ಮಧ್ಯೆ ಶಿಕ್ಷೆಯ ಜಾರಿಯನ್ನು ಇರಾನ್ ಸರಕಾರವು 2011 ಜುಲೈ 31ಕ್ಕೆ ಮುಂದೂಡಿತು.
ಜುಲೈ 31 ಹತ್ತಿರವಾಗುವಾಗ ಮಾಧ್ಯಮಗಳು ಮತ್ತೆ ಈ ಪ್ರಕರಣವನ್ನು ಚರ್ಚೆಗೆ ತಂದುವು. ಆದರೆ ಆಕೆಯ ವಿರೂಪ ಮುಖವನ್ನು ಮಾಧ್ಯಮಗಳಲ್ಲಿ ಕಂಡ ಅಸಂಖ್ಯ ಮಂದಿ, ‘ಕಣ್ಣಿಗೆ ಕಣ್ಣು’ ಶಿಕ್ಷೆಯ ಬಗ್ಗೆ ಒಂದಿಷ್ಟು ಮೃದುವಾದರು. ಇಂಥ ಹೆಣ್ಣು ಮಕ್ಕಳ ಸಾಲು ಬೆಳೆಯದಿರಬೇಕಾದರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ವಾದಿಸುವಷ್ಟು ಬದಲಾದರು. ಇದರ ಜೊತೆಗೆ, ಶಿರಿನ್ ಜುವಾಲೆ, ಪ್ರೀತಿ ರತಿ, ಲಕ್ಷ್ಮೀಯಂಥ ಅನೇಕಾರು ಹೆಣ್ಣು ಮಕ್ಕಳ ಬರ್ಬರ ಬದುಕಿನ ಕತೆಗಳೂ ಬಿಚ್ಚಿ ಕೊಂಡವು. ಹೀಗೆ ಸರಿ-ತಪ್ಪುಗಳ ಚರ್ಚೆ ಸಾಗುತ್ತಿರುವಂತೆಯೇ ಜಗತ್ತು ಜುಲೈ 31ರ ಅಪರೂಪದ ಶಿಕ್ಷೆಗಾಗಿ ಇರಾನಿನೆಡೆಗೆ ಕಣ್ಣು ನೆಟ್ಟಿತು. ಅಂತಾರಾಷ್ಟ್ರೀಯ ಮಾಧ್ಯಮಗಳ ಅನೇಕಾರು ಪತ್ರಕರ್ತರು ಇರಾನಿನಲ್ಲಿ ತಂಗಿ ಬ್ರೇಕಿಂಗ್ ನ್ಯೂಸ್‍ಗಾಗಿ ಕಾಯ ತೊಡಗಿದರು. ಆದರೆ,
   ‘ನನ್ನ ಧರ್ಮ ನನಗೆ ಪ್ರತೀಕಾರದ ಹಕ್ಕನ್ನು ಒದಗಿಸಿಕೊಟ್ಟಿದೆ. ಅದರಂತೆ ಮಜೀದ್ ಮುವಾಹಿದಿಯ ಕಣ್ಣಿಗೆ 20 ಆಸಿಡ್ ಹನಿಗಳನ್ನು ಸುರಿಸಿ ನನ್ನಂತೆ ಆತನನ್ನೂ ಕುರುಡು ಮಾಡುವುದಕ್ಕೆ ಅವಕಾಶ ಇದೆ. ಆದರೆ ಪ್ರತೀಕಾರಕ್ಕಿಂತ ಕ್ಷಮೆ ಶ್ರೇಷ್ಠವಾದುದು ಎಂದು ನನ್ನ ಧರ್ಮ ನನಗೆ ಕಲಿಸಿದೆ. ನಾನು ಕಳೆದ 7 ವರ್ಷಗಳಿಂದ ಈ ತೀರ್ಪಿಗಾಗಿ ಹೋರಾಡಿದ್ದೇನೆ. ಆಸಿಡ್ ಸುರಿಸುವವರ ಮೇಲೆ ಪ್ರತೀಕಾರ ಪಡೆಯುವ ಹಕ್ಕಿದೆ ಎಂಬುದನ್ನು ನನ್ನ ದೇಶದ ಮಂದಿಗೆ ಸಾಬೀತುಪಡಿಸಿ ತೋರಿಸುವ ಉದ್ದೇಶ ನನಗಿತ್ತು. ಆ ಉದ್ದೇಶ ಈಡೇರಿದೆ. ಆದ್ದರಿಂದ ನಾನಿನ್ನು ಪ್ರತೀಕಾರವನ್ನು ಬಯಸುತ್ತಿಲ್ಲ. ನನ್ನ ಧರ್ಮದ ಆದೇಶದಂತೆ ಕ್ಷಮೆಯನ್ನು ಎತ್ತಿ ಹಿಡಿಯುತ್ತೇನೆ. ಜಗತ್ತಿನ ಎಲ್ಲ ರಾಷ್ಟ್ರಗಳೂ ಇರಾನಿನಲ್ಲಿ ಈ ಘಟನೆ ನಡೆಯುವುದಕ್ಕಾಗಿ ಕಾತರದಿಂದ ಕಾಯುತ್ತಿವೆ ಎಂಬುದೂ ನನಗೆ ಗೊತ್ತು. ನನ್ನ ದೇಶಕ್ಕೆ ಈ ಕ್ಷಮೆಯನ್ನು ಅರ್ಪಿಸುತ್ತೇನೆ’- ಎಂದು ಆಕೆ ಹೇಳಿದಳು. ಅಲ್ ಜಝೀರಾ ಚಾನೆಲ್ ಅದನ್ನು ಪ್ರಸಾರ ಮಾಡಿತು.
   ಚೀನಾ, ದಕ್ಷಿಣ ಆಫ್ರಿಕಾ, ಬ್ರಿಟನ್, ಇಥಿಯೋಪಿಯಾ, ಭಾರತ, ಪಾಕಿಸ್ತಾನ, ಬಂಗ್ಲಾದೇಶ, ನೇಪಾಳ, ಕಾಂಬೋಡಿಯಾ, ಉಗಾಂಡ..
ಜಗತ್ತಿನ ಯಾವ ರಾಷ್ಟ್ರಗಳೂ ಆಸಿಡ್ ಬಾಳಿಯಿಂದ ಮುಕ್ತವಾಗಿಲ್ಲ. ಆಸಿಡ್  ದಾಳಿಗೆ ಒಳಗಾಗುವವರಲ್ಲಿ 90% ಹೆಣ್ಣು ಮಕ್ಕಳೇ. ಅದರಲ್ಲೂ 18ರಿಂದ 28 ವರ್ಷದ ಒಳಗಿನ ಯುವತಿಯರೇ ಹೆಚ್ಚು. ಜಗತ್ತಿನ 20 ರಾಷ್ಟ್ರಗಳಲ್ಲಿ ಪ್ರತಿ ವರ್ಷ 2,500ರಷ್ಟು ಆಸಿಡ್ ದಾಳಿ ಪ್ರಕರಣಗಳು ನಡೆಯುತ್ತವೆ ಎಂದು ಅಧಿಕೃತ ವರದಿಗಳೇ ಹೇಳುತ್ತವೆ. 2002ರಿಂದ 2010ರ ಮಧ್ಯೆ ಭಾರತದಲ್ಲಿ ನೂರಾರು ಆಸಿಡ್ ಪ್ರಕರಣಗಳು ವರದಿಯಾಗಿವೆ. 1915 ಅಕ್ಟೋಬರ್ 17ರಂದು ಕಾಂಗೋದ ರಾಜ ಕಿಂಗ್ ಲಿಯೋ ಫೋಲ್ಡ್ ನ ಮೊಮ್ಮಗ ರಾಜಕುಮಾರ ಕ್ಲೆಮೆಂಟ್‍ನ ಮೇಲೆ ಆತನ ಪತ್ನಿ ಕ್ಯಾಮಿಲಾ ರಿಬಿಕಾ ಆಸಿಡ್ ಎರಚಿದ್ದು ಜಾಗತಿಕವಾಗಿ ಸುದ್ದಿ ಯಾಗಿತ್ತು. ಪತಿಯ ಹಿಂಸೆಯನ್ನು ತಾಳಲಾರದೇ ಆಕೆ ಆಸಿಡ್ ಎರಚಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಳು. ವರ್ಷದ ಹಿಂದೆ ಸೋನಾಲಿ ಮುಖರ್ಜಿ ಎಂಬ ಯುವತಿ ಕೌನ್ ಬನೇಗಾ ಕರೋಡ್ ಪತಿಯಲ್ಲಿ 2.5 ಮಿಲಿಯನ್ ರೂಪಾಯಿಯನ್ನು ಗೆದ್ದಾಗ, ಆಸಿಡ್ ಮತ್ತೊಮ್ಮೆ ಚರ್ಚೆಗೆ ಒಳಗಾಯಿತು. ಯಾಕೆಂದರೆ, ಆಕೆ ಅದಾಗಲೇ, 22 ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಳು. 9 ವರ್ಷಗಳ ಹಿಂದೆ ಈಕೆಯ ಮೇಲೆ ಮೂವರು ಯುವಕರು ಆಸಿಡ್ ಎರಚಿದ್ದರಿಂದ ಆಕೆ ಎಷ್ಟು ವಿರೂಪಗೊಂಡಿದ್ದಳೆಂದರೆ ಚರ್ಮ, ಕಣ್ಣು, ಕಿವಿ, ಮೂಗು, ಬಾಯಿ ಯಾವುದೂ ಇಲ್ಲದ ಮಾಂಸದ ಮುದ್ದೆಯಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಜಾರ್ಖಂಡ್‍ನ ಧನಾಬಾದ್‍ನ ಕಾಲೇಜಿನಲ್ಲಿ ಕಲಿಯುತ್ತಿದ್ದ ವೇಳೆ ಈ ಆಘಾತ ಸಂಭವಿಸಿತ್ತು. ಆದರೆ ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನಾಗಿದ್ದರಿಂದ ಆತನಿಗೆ ಶಿಕ್ಷೆಯೇ ಆಗಲಿಲ್ಲ. ಇನ್ನಿಬ್ಬರು 3 ವರ್ಷ ಜೈಲಲ್ಲಿದ್ದು ಹೊರಬಂದರು. ತನ್ನನ್ನು ವಿರೂಪಗೊಳಿಸಿರುವವರು ತನ್ನೆದುರೇ ಅಡ್ಡಾಡುತ್ತಿದ್ದುನ್ನು ಕಂಡು ಹತಾಶೆಗೊಂಡ ಆಕೆ ಸರಕಾರಕ್ಕೆ ದಯಾಮರಣದ ಅರ್ಜಿಯನ್ನೂ ಸಲ್ಲಿಸಿದ್ದಳು.
   ಒಂದು ರೀತಿಯಲ್ಲಿ,  ಆಸಿಡ್‍ಗೂ ಈ ದೇಶದ ಯುವ ಸಮೂಹಕ್ಕೂ ಸಂಬಂಧ ಇದೆ. ಜಗತ್ತಿನ ಎಲ್ಲೇ ಆಗಲಿ, ಆಸಿಡ್ ಎರಚು ವವರು ಮತ್ತು ಅದಕ್ಕೆ ಬಲಿಯಾಗುವವರೆಲ್ಲ ಯುವಕ ಯುವತಿಯರೇ. ಮಾತ್ರವಲ್ಲ, ವಿದ್ಯಾಭ್ಯಾಸ ಪಡೆದ ಶಿಕ್ಷಿತ ವರ್ಗವೇ ಇಂಥ ಪ್ರಕರಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ. 1982ರಲ್ಲಿ ಭಾರತದಲ್ಲಿ ಮೊತ್ತ ಮೊದಲ ಆಸಿಡ್ ಪ್ರಕರಣ ದಾಖಲಾಯಿತು. ಆ ಬಳಿಕ, ಆಸಿಡ್ ಸಂತ್ರಸ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಇಷ್ಟಕ್ಕೂ, ಆಸಿಡ್ ದಾಳಿಗಳಿಗೆ ಮುಖ್ಯ ಕಾರಣವೇ ಪ್ರೀತಿ, ಪ್ರೇಮ, ದ್ವೇಷಗಳು. ಮಾರುಕಟ್ಟೆಯಲ್ಲಿ ಹೈಡ್ರೋಕ್ಲೋರಿಕ್‍ನಂಥ ಆಸಿಡ್ ಸುಲಭ ದರದಲ್ಲಿ ತರಕಾರಿಗಳಂತೆ ಮಾರಾಟಕ್ಕಿರುವಾಗ, ಮುವಾಹಿದಿಯಂಥ ವ್ಯಕ್ತಿಯೊಬ್ಬ ಹುಚ್ಚು ದ್ವೇಷದಲ್ಲಿ ಅದನ್ನು ಬಳಸಲಾರನೇ? ಒಂದು ಕಡೆ ಮುಕ್ತ ಸಂಸ್ಕøತಿ, ಒಪ್ಪಿತ ಜೀವನ ಶೈಲಿಯು ಈ ದೇಶದಲ್ಲಿ ದಿನೇ ದಿನೇ ಜನಪ್ರಿಯವಾಗುತ್ತಿದೆ. ಇನ್ನೊಂದೆಡೆ, ಮಹಿಳೆಯರ ಪಾಲಿಗೆ ಅಪಾಯಕಾರಿಯಾಗಿರುವ ರಾಷ್ಟ್ರಗಳ ಪೈಕಿ ಭಾರತಕ್ಕೆ 4ನೇ ಸ್ಥಾನವಿದೆ. ನಿಜವಾಗಿ, ಆಸಿಡ್ ಎರಚುವುದರಿಂದ ಒಂದು ಹೆಣ್ಣು ಮಗುವಿನ ಮುಖ ವಿರೂಪವಷ್ಟೇ ಆಗುವುದಲ್ಲ, ಒಂದು ಸಮೂಹದ ವಿರೂಪ ಆಲೋಚನೆಗೂ ಅದು ಸಾಕ್ಷಿ ನುಡಿಯುತ್ತದೆ. ಇಂಥ ಆಲೋಚನೆಗಳನ್ನು ತಡೆಗಟ್ಟಲು ಮೂರು ವರ್ಷಗಳ ಜೈಲು ಶಿಕ್ಷೆಯಿಂದ ಸಾಧ್ಯವೇ? ಕಣ್ಣಿಗೆ ಕಣ್ಣು ಅನ್ನುವ ಶಿಕ್ಷಾ ಮಾದರಿಯನ್ನು ಪುರಾತನ ಕಾಲದ್ದೆಂದು ತಳ್ಳಿ ಹಾಕುವುದು ಸುಲಭ. ಆದರೆ, ಕಳೆದು ಹೋದ ಮುಖ, ಕಣ್ಣು, ಸೌಂದರ್ಯ ಮತ್ತು ಭವಿಷ್ಯವನ್ನು ಅಮೀನಾ ಬಹ್ರಾಮಿಗೆ, ಪ್ರೀತಿರತಿಗೆ, ಮುಖರ್ಜಿಗೆ ಮತ್ತು ಇಂಥ ಅಸಂಖ್ಯ ಹೆಣ್ಣು ಮಕ್ಕಳಿಗೆ ಮರಳಿಸುವವರಾದರೂ ಯಾರು? ಇರಾನಿನಲ್ಲಿ ಇವತ್ತು ಆಸಿಡ್ ಪ್ರಕರಣಗಳು ಇಲ್ಲವೇ ಇಲ್ಲ ಅನ್ನುವಷ್ಟು ಅಪರೂಪವಾಗಿರುವುದಕ್ಕೆ ಅಲ್ಲಿಯ ಶಿಕ್ಷಾ ಮಾದರಿಯೂ ಒಂದು ಕಾರಣ ಎಂಬುದು ಸುಳ್ಳೇ?
   2012ರಲ್ಲಿ ಸೇವಿಂಗ್ ಫೇಸ್ ಎಂಬೊಂದು ಡಾಕ್ಯುಮೆಂಟರಿ ಸಿನಿಮಾ ಪಾಕ್ ಮತ್ತು ಅಮೇರಿಕಾಗಳಲ್ಲಿ ಬಿಡುಗಡೆಯಾಯಿತು. ಶರ್ಮೀನ್ ಮತ್ತು ಡ್ಯಾನಿಯಲ್ ಜಂಗ್ ಎಂಬವರ ನಿರ್ದೇಶನದಲ್ಲಿ ತಯಾರಾದ ಈ 40 ನಿಮಿಷಗಳ ಡಾಕ್ಯುಮೆಂಟರಿಯಲ್ಲಿ ಝಾಕಿಯಾ ಮತ್ತು ರುಕ್ಸಾನ ಎಂಬ ಆಸಿಡ್ ಪೀಡಿತ ಮಹಿಳೆಯರ ಮನಮಿಡಿ ಯುವ ಕಥೆಯಿದೆ. ಲಂಡನ್ನಿನಲ್ಲಿರುವ ಪಾಕಿಸ್ತಾನಿ ಮೂಲದ ಪ್ಲಾಸ್ಟಿಕ್ ಸರ್ಜನ್ ಡಾ| ಮುಹಮ್ಮದ್ ಜವ್ವಾದ್‍ರು ಆಸಿಡ್ ಸರ್ಜರಿ ನಡೆಸಲು ಪಾಕ್‍ಗೆ ಬರುವ ಕಥೆಯ ಸುತ್ತ ಈ ಡಾಕ್ಯುಮೆಂಟರಿ ತಯಾರಾಗಿದೆ. ಅದೇನೇ ಇದ್ದರೂ, ಅಮೀನಾಳಂಥ ಹೆಣ್ಣು ಮಕ್ಕಳು ವಿರೂಪಗೊಂಡ ಮುಖ, ದೃಷ್ಟಿಕಳಕೊಂಡ ಕಣ್ಣು, ಸುಕ್ಕುಗಟ್ಟಿದ ಚರ್ಮದ ಜೊತೆ ಪಡಬಾರದ ಸಂಕಟಗಳೊಂದಿಗೆ ಜಗತ್ತಿನಾದ್ಯಂತ ಬದುಕುತ್ತಿದ್ದಾರೆ. ತಿನ್ನಲಾಗದ, ಕುಡಿಯಲಾಗದ, ಇತರರನ್ನು ಭೇಟಿಯಾಗಲಾಗದ, ಪ್ರತಿಕ್ಷಣ ನೋವನ್ನು ಅನುಭವಿಸುತ್ತಾ ಅವರು ಆಯುಷ್ಯ ಕಳೆಯುತ್ತಿದ್ದಾರೆ. ಇಂಥವರ ಎದುರು ಆಸಿಡ್ ಎರಚಿದವರು 2-3 ವರ್ಷಗಳ ಬಳಿಕ ಯಾವ ಅಂಗ ಊನತೆಯೂ ಇಲ್ಲದೇ ಸ್ವಚ್ಛಂದವಾಗಿ ತಿರುಗಾಡುವುದೆಂದರೆ, ಏನೆನ್ನಬೇಕು? ಅದು ಸಂತ್ರಸ್ತರ ಪಾಲಿಗೆ ಎರಡನೇ ಬಾರಿ ಆಸಿಡ್ ಎರಚಿದಂತಲ್ಲವೇ? ‘ಕಣ್ಣಿಗೆ ಕಣ್ಣು’ ತಪ್ಪು ಅನ್ನುವ ಜಗತ್ತಿನಲ್ಲಿ ಕಣ್ಣೇ ಕಳಕೊಂಡ, ನಾಲಗೆಯೇ ಇಲ್ಲವಾದ ಹೆಣ್ಣು ಮಕ್ಕಳಿಗೆ ಅವುಗಳನ್ನು ಯಾರು ಮರಳಿಸುತ್ತಾರೆ? ಹೇಗೆ ಮರಳಿಸುತ್ತಾರೆ?


Wednesday, July 10, 2013

30 ವರ್ಷಗಳ ದರೋಡೆಯನ್ನು ಒಂದೇ ವರ್ಷದಲ್ಲಿ ತುಂಬಿ ಅಂದರೆ ಹೇಗೆ?

ಬಸೀಮ್ ಯೂಸುಫ್
ಸೌದಿ ಅರೇಬಿಯಾ, ಜರ್ಮನಿ, ಪಾಕಿಸ್ತಾನ, ಭಾರತ, ಸುಡಾನ್, ಬ್ರೆಝಿಲ್..
   ಈಜಿಪ್ಟ್ ನ ಪದಚ್ಯುತ ಅಧ್ಯಕ್ಷ  ಮುಹಮ್ಮದ್ ಮುರ್ಸಿಯವರು 2013 ಜನವರಿ 15ರಿಂದ ಮೇ 8ರ ನಡುವೆ ಈ ಎಲ್ಲ ರಾಷ್ಟ್ರಗಳಿಗೆ ಭೇಟಿ ನೀಡಿದರು. ಮೇ 8ರಂದು ಬ್ರೆಝಿಲ್‍ನ ಅಧ್ಯಕ್ಷೆ ಡೆಲ್ಮಾ ರುಸ್ಸೆಫ್‍ರೊಂದಿಗೆ ಆರ್ಥಿಕ, ಕೈಗಾರಿಕಾ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚಿಸಿದರು. ಬ್ರೆಝಿಲ್‍ನ ಉದ್ಯಮಿಗಳು ಮತ್ತು ಹೂಡಿಕೆದಾರರ ಸಭೆಯನ್ನು ಕರೆದು ಈಜಿಪ್ಟ್ ನಲ್ಲಿ ಬಂಡವಾಳ ಹೂಡುವಂತೆ ಆಹ್ವಾನಿಸಿದರು. ಈಜಿಪ್ಟ್ ಮತ್ತು ಸುಡಾನನ್ನು ಜೋಡಿಸುವಂಥ ರಸ್ತೆ ನಿರ್ಮಾಣದ ಬಗ್ಗೆ ಎಪ್ರಿಲ್ 5ರಂದು ಸುಡಾನ್‍ನ ಅಧ್ಯಕ್ಷ ಉಮರುಲ್ ಬಶೀರ್‍ರೊಂದಿಗೆ ಮಾತುಕತೆ ನಡೆಸಿದರು. ಎರಡೂ ರಾಷ್ಟ್ರಗಳು ಜಂಟಿಯಾಗಿ ಕೈಗಾರಿಕಾ ವಲಯವನ್ನು ಸ್ಥಾಪಿಸುವುದಾಗಿ ಘೋಷಿಸಿಕೊಂಡವು. ಮಾರ್ಚ್ 18ರಿಂದ 20ರ ವರೆಗೆ ಭಾರತಕ್ಕೆ ಭೇಟಿ ನೀಡಿದ ಮುರ್ಸಿಯವರು, 'ಇಂಡಿಯನ್-ಈಜಿಪ್ಟಿಯನ್ ಎಕನಾಮಿಕ್ ಫಾರಮ್'ನ ಸಭೆಯಲ್ಲಿ ಭಾಗವಹಿಸಿ ಮಾತಾಡಿದರು. 2012ರಲ್ಲಿ ಈಜಿಪ್ಟ್ ನಲ್ಲಿ ಹೂಡಿರುವ 300 ಮಿಲಿಯನ್ ಡಾಲರ್ ಬಂಡವಾಳವನ್ನು 2.5 ಬಿಲಿಯನ್ ಡಾಲರ್‍ಗೆ ಏರಿಸುವುದಕ್ಕೆ ಭಾರತವು ಒಪ್ಪಿಕೊಂಡಿತು. ಟಾಟಾ ಸಂಸ್ಥೆಯೊಂದಿಗೂ ಅವರು ಮಾತುಕತೆ ನಡೆಸಿದರು. ಜರ್ಮನಿಯ ಅಧ್ಯಕ್ಷೆ ಏಂಜೆಲೋ ಮಾರ್ಕೆಲ್‍ರನ್ನು ಜನವರಿ 30ರಂದು ಭೇಟಿಯಾಗಿ, ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಯ ಸುತ್ತ ವಿಸ್ತೃತವಾಗಿ ಮಾತಾಡಿದರು. ಜನವರಿ 20ರಂದು ಸೌದಿಯ ದೊರೆ ಅಬ್ದುಲ್ಲ ಬಿನ್ ಅಬ್ದುಲ್ ಅಝೀಝ್‍ರನ್ನು ಸಂಧಿಸಿದರು. ಉಭಯ ದೇಶಗಳ ನಡುವಿನ ಸಹಕಾರ, ಗಲ್ಫ್ ರಾಷ್ಟ್ರಗಳ ಸ್ಥಿತಿ-ಗತಿ, ಸಿರಿಯ ಬಿಕ್ಕಟ್ಟು.. ಎಲ್ಲದರ ಬಗ್ಗೆಯೂ ಮುಕ್ತವಾಗಿ ಮಾತಾಡಿದರು. ಉಭಯ ದೇಶಗಳ ಮಧ್ಯೆ ಸೇತುವೆ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿದರು..
ಅಲ್ಲದೇ
   ಕತರ್‍ನ ಪ್ರಧಾನಿ ಶೈಕ್ ಹಮದ್ ಬಿನ್ ಜಾಸಿಮ್ ಬಿನ್ ಗಬ್ರ್ ಅಲ್ ಥಾನಿ, ಐಎಂಎಫ್‍ನ (International Monitory Fund) ಮಧ್ಯೇಶ್ಯಾದ ನಿರ್ದೇಶಕ ಮಸೂದ್ ಅಹ್ಮದ್, ಫೆಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ  ಮಹಮೂದ್ ಅಬ್ಬಾಸ್, ಅಮೇರಿಕನ್ ನಿಯೋಗದ ಮುಖ್ಯಸ್ಥ ಜಾನ್ ಮೆಕೇನ್, ಮಲೇಶ್ಯಾದ ಪ್ರಧಾನಿ ಮುಹಮ್ಮದ್ ನಜೀಬ್ ತುನ್ ರಝಾಕ್, ಲಿಬಿಯದ ಪ್ರಧಾನಿ ಅಲಿ ಝಿದಾನ್, ನಾರ್ವೆಯ ವಿದೇಶಾಂಗ ಸಚಿವ ಎಸ್ಪೆನ್ ಬರ್ತ್ ಐಡೆ, ಯುರೋಪಿಯನ್ ಯೂನಿಯನ್‍ನ ನಿಯೋಗದ ಮುಖ್ಯಸ್ಥೆ ಕ್ಯಾಥರಿನ್ ಆಸ್ಟೆನ್.. ಈ ಎಲ್ಲ ನಾಯಕರೂ 2013 ಜನವರಿ 8ರಿಂದ ಜೂನ್ 19ರ ಮಧ್ಯೆ ಈಜಿಪ್ಟ್ ಗೆ ಭೇಟಿ ನೀಡಿದರು. ಹೂಡಿಕೆ, ಸಹಕಾರಗಳ ಬಗ್ಗೆ ಚರ್ಚಿಸಿದರು. ಕತರ್ ಅಂತೂ ಈಗಿರುವ 2.5 ಬಿಲಿಯನ್ ಡಾಲರ್ ನೆರವಿನ ಪ್ರಮಾಣವನ್ನು 5 ಬಿಲಿಯನ್ ಡಾಲರ್‍ಗೆ ಏರಿಸುವುದಾಗಿಯೂ 18 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿತು. ಇವಲ್ಲದೇ, ಈಜಿಪ್ಟ್ ನ ಸಚಿವ ಮಟ್ಟದ ನಿಯೋಗಗಳು ಹಲವಾರು ರಾಷ್ಟ್ರಗಳಿಗೆ ಆಗಾಗ ಭೇಟಿ ನೀಡಿದುವು. ಅಮೇರಿಕಕ್ಕೆ ಭೇಟಿ ನೀಡುವಂತೆ ಮುರ್ಸಿಯವರನ್ನು ಒಬಾಮ 2013 ಜನವರಿ 26ರಂದು ದೂರವಾಣಿ ಮೂಲಕ ಆಹ್ವಾನಿಸಿದರು. 2012 ಜೂನ್ ತಿಂಗಳಲ್ಲಿ ಮುರ್ಸಿ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವು ದಿನಗಳಲ್ಲೇ ಇಸ್ರೇಲ್ ಮತ್ತು ಗಾಝಾದ ಮಧ್ಯೆ ಸಂಘರ್ಷ ತಲೆದೋರಿತು. ಮುರ್ಸಿ ಮಧ್ಯಸ್ಥಿಕೆ ವಹಿಸಿದರು. ಉಭಯತ್ರರಿಗೂ ಒಪ್ಪಿಗೆಯಾಗುವ ಪರಿಹಾರ ಸೂತ್ರವೊಂದನ್ನು ಸಿದ್ಧಪಡಿಸಿ ಬಿಕ್ಕಟ್ಟನ್ನು ಬಗೆಹರಿಸಿದರು. ಅನನುಭವಿ ನಾಯಕನೊಬ್ಬನ ಈ ಯಶಸ್ಸನ್ನು ಜಾಗತಿಕವಾಗಿಯೇ ಕೊಂಡಾಡಲಾಯಿತು. ಗಲ್ಫ್ ವಲಯದಲ್ಲಿ ಮುರ್ಸಿ ಪ್ರಭಾವಿ ಮತ್ತು ಚತುರ ನಾಯಕರಾಗಿ ಬೆಳೆದು ಬರುತ್ತಿದ್ದಾರೆಂದು ಮಾಧ್ಯಮಗಳು ಷರಾ ಬರೆದುವು. ಜಗತ್ತಿನ ಪ್ರಮುಖ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳು ಮುರ್ಸಿಯವರ ಸಂದರ್ಶನ ನಡೆಸಿದುವು. ಇವೆಲ್ಲ ಏನು? ಕೇವಲ ಒಂದು ವರ್ಷದ ಅವಧಿಯೊಳಗೆ ಮುರ್ಸಿ ಪ್ರದರ್ಶಿಸಿದ ಈ ಕ್ರಿಯಾಶೀಲತೆಯನ್ನು ಜಗತ್ತಿನ ಬೇರೆ ಯಾವ ದೇಶದ ಅಧ್ಯಕ್ಷರು ಪ್ರದರ್ಶಿಸಿದ್ದಾರೆ? ಇಷ್ಟಿದ್ದೂ, ಅವರನ್ನು ‘ನಾಲಾಯಕ್ಕು’, ‘ಅನರ್ಹ ಮುಂದಾಳು’ ಎಂದೆಲ್ಲಾ ಸೇನೆ ಮತ್ತು ಪ್ರತಿಭಟನಾಕಾರರು ಕರೆದರಲ್ಲ, ಎಷ್ಟು ಸರಿ? ಈಜಿಪ್ಟ್ ನಲ್ಲಿ ಸದ್ಯ ಕಾಣಿಸಿಕೊಂಡಿರುವ ಬೆಲೆಯೇರಿಕೆ, ವಿದ್ಯುತ್ ಮತ್ತು ತೈಲದ ಕೊರತೆ, ಆರ್ಥಿಕ ಕುಸಿತಗಳೆಲ್ಲ ದಿಢೀರ್ ಬೆಳವಣಿಗೆಯೇನಲ್ಲ. ಕಳೆದ 30 ವರ್ಷಗಳಿಂದ ಮುಬಾರಕ್ ಮತ್ತು ಅವರ ಸರ್ವಾಧಿಕಾರಿ ತಂಡವು ನಡೆಸಿದ ದುರಾಡಳಿತದ ಫಲಿತಾಂಶವಿದು. ಕೇವಲ ಒಂದು ವರ್ಷದ ಅವಧಿಯೊಳಗೆ ಇವೆಲ್ಲವನ್ನೂ ಸರಿಪಡಿಸಲು ಮುರ್ಸಿ ಬಿಡಿ, ಯಾವ ರಾಂಬೋಗೂ ಸಾಧ್ಯವಿಲ್ಲ. ಇದು ಸೇನಾ ಮುಖ್ಯಸ್ಥ ಅಲ್ ಸಿಸಿಗೂ ಗೊತ್ತು. ಮುಹಮ್ಮದ್ ಅಲ್ ಬರಾದಿಗೂ ಗೊತ್ತು. ವಿಪಕ್ಷ  ನಾಯಕರಾದ ಅಮನ್ ನೂರ್, ಹಮ್ದೀನ್ ಸಬಾಹಿ, ಅಮ್ರ್ ಮೂಸಾರಿಗೂ ಗೊತ್ತು. ಹೀಗಿರುವಾಗ, ಮುರ್ಸಿಯನ್ನು ಉಚ್ಛಾಟಿಸುವಂತೆ ಒತ್ತಾಯಿಸಿ ತಹ್ರೀರ್ ಚೌಕದಲ್ಲಿ ಸೇರಿರುವ ಪ್ರತಿಭಟನಾಕಾರರ ಉದ್ದೇಶ ಶುದ್ಧಿಯ ಬಗ್ಗೆ ಅನುಮಾನ ಬರುವುದಿಲ್ಲವೇ? ನಿಜವಾಗಿ, ಮುಬಾರಕ್‍ರ ಕಾಲದಲ್ಲಿ IMF(ಅಂತಾರಾಷ್ಟ್ರೀಯ ಹಣಕಾಸು ನಿಧಿ)ನಿಂದ ಸಾಲ ಪಡೆಯುವುದು ತೀರಾ ಸುಲಭವಾಗಿತ್ತು. ಆದರೆ, ಅದೇIMF  ಮುರ್ಸಿಯವರಿಗೆ 4.8 ಬಿಲಿಯನ್ ಡಾಲರ್ ಸಾಲ ಕೊಡಲು ತಿಂಗಳುಗಟ್ಟಲೆ ಕಾಯಿಸಿತು. ವಿವಿಧ ರೀತಿಯ ಷರತ್ತು, ನೆಪಗಳನ್ನು ಮುಂದೊಡ್ಡಿತು. 2011ರ ಕ್ರಾಂತಿಯ ವೇಳೆ 800 ಮಂದಿ ಪ್ರತಿಭಟನಾಕಾರರನ್ನು ಹತ್ಯೆಗೈದ ಅಧಿಕಾರಿಗಳಲ್ಲಿ ಒಬ್ಬರಿಗೂ ಈ ವರೆಗೆ ಶಿಕ್ಷೆಯಾಗಿಲ್ಲ ಎಂಬ ಪ್ರಚಾರವು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡತೊಡಗಿತು. ಜಿಡಿಪಿ ಶೇ. 2ಕ್ಕೆ ಕುಸಿದಿರುವುದು, ನಿರುದ್ಯೋಗ ಪ್ರಮಾಣ ಶೇ. 13ಕ್ಕೆ ಏರಿರುವುದು.. ಎಲ್ಲವೂ ಸಾರ್ವಜನಿಕ ಚರ್ಚೆಯಾಗುವಂತೆ ನೋಡಿಕೊಳ್ಳಲಾಯಿತು. ಜೊತೆಗೇ, ಮುಸ್ಲಿಮ್ ಬ್ರದರ್‍ಹುಡ್‍ನ ಇಸ್ಲಾಮೀ  ಅಜೆಂಡಾವನ್ನು ಮುರ್ಸಿ ಜಾರಿಗೊಳಿಸುತ್ತಿದ್ದಾರೆ ಎಂಬ ಹುಯಿಲನ್ನೂ ಎಬ್ಬಿಸಲಾಯಿತು. ನಿಜವಾಗಿ, ಮುರ್ಸಿ ಅಧ್ಯಕ್ಷರಾಗಿದ್ದರೂ ಅವರ ಸುತ್ತ-ಮುತ್ತ, ಅಧಿಕಾರ ಕೇಂದ್ರಗಳಲ್ಲಿ, ನ್ಯಾಯಾಲಯಗಳಲ್ಲಿ ಇದ್ದದ್ದು ಮುಬಾರಕ್‍ರ ಬಂಟರೇ. ಸರಕಾರಿ ಮತ್ತು ಮಾಧ್ಯಮ ಕಚೇರಿಗಳಲ್ಲಿ ಮುಬಾರಕ್‍ರ ಹಿತೈಷಿಗಳು ಧಾರಾಳ ಇದ್ದರು. ಮುರ್ಸಿ ನೇಮಿಸುವ ಪ್ರತಿ ಅಧಿಕಾರಿಯ ಮೂಲವನ್ನೂ ಮಾಧ್ಯಮಗಳು ಸಂಶೋಧಿಸಿ ಪ್ರಕಟಿಸುತ್ತಿದ್ದುವು. ಅವರಿಗೂ ಬ್ರದರ್‍ಹುಡ್‍ಗೂ ದೂರದ ಸಂಬಂಧವೇನಾದರೂ ಇವೆಯೇ ಎಂದು ತನಿಖಿಸುತ್ತಿದ್ದುವು. ಒಂದು ರೀತಿಯಲ್ಲಿ, ಮುಬಾರಕ್ ಹೋಗಿದ್ದರೂ ಅವರ 'ಹವಾ' ಹೋಗಿರಲಿಲ್ಲ. 30 ವರ್ಷಗಳಿಂದ ಅವರು ಶಾಲೆ, ಕಾಲೇಜು ಸಹಿತ ಎಲ್ಲ ಕ್ಷೇತ್ರಗಳಲ್ಲೂ ಸೃಷ್ಟಿ ಮಾಡಿದ್ದ 'ಸೆಕ್ಯುಲರಿಸಂ'ನ  ವಾತಾವರಣವು ಅವರ ಜೊತೆಗೆ ಹೋಗುವುದಕ್ಕೆ ಸಿದ್ಧವೂ ಇರಲಿಲ್ಲ. ಆದ್ದರಿಂದಲೇ, ಅಧ್ಯಕ್ಷೀಯ ಚುನಾವಣೆಯಲ್ಲಿ ಮುರ್ಸಿ ಶೇ. 52 ಮತಗಳನ್ನು ಪಡೆದಾಗ ವಾಯುದಳದ ಮಾಜಿ ಕಮಾಂಡರ್ ಮತ್ತು ಮುಬಾರಕ್‍ರ ಬೆಂಬಲಿಗರಾಗಿದ್ದ ಶಫೀಕ್ ಅಹ್ಮದ್‍ರು ಶೇ. 48 ಮತಗಳನ್ನು ಪಡೆದದ್ದು. ಇಲ್ಲದಿದ್ದರೆ, ಅಧ್ಯಕ್ಷರಾಗಿ ಆಯ್ಕೆಯಾದ ಕೇವಲ 5 ತಿಂಗಳುಗಳೊಳಗೆ ಮುರ್ಸಿ ವಿರುದ್ಧ ಪ್ರತಿಭಟನೆಗಳು ಕಾಣಿಸಿಕೊಂಡಿರುವುದಕ್ಕೆ ಮುಬಾರಕ್ ಗುಂಪಿನ ಷಡ್ಯಂತ್ರದ ಹೊರತು ಬೇರೆ ಯಾವ ಕಾರಣವಿದೆ? ತಹ್ರೀರ್ ಚೌಕದಲ್ಲಿ ಡಿಸೆಂಬರ್‍ನಲ್ಲಿಯೇ ಕೆಲವು ಯುವಕರು ಪ್ರತಿದಿನ ಮುರ್ಸಿ ವಿರುದ್ಧ ಘೋಷಣೆ ಕೂಗಿ ಹೊರಟು ಹೋಗುತ್ತಿದ್ದುದು ಏನನ್ನು ಸೂಚಿಸುತ್ತದೆ? ಕೇವಲ 5 ತಿಂಗಳೊಳಗೆ ಓರ್ವ ಅಧ್ಯಕ್ಷನ ಕಾರ್ಯಕ್ಷಮತೆಯನ್ನು ಅಂದಾಜಿಸುವುದಕ್ಕೆ ಸಾಧ್ಯವೇ? ಯುವಕರ ಆ ಘೋಷಣೆಗಳೇ ಬಳಿಕ ಪ್ರತಿಭಟನೆಯಾಗಿ ಬದಲಾದದ್ದು. ತಹ್ರೀರ್ ಚೌಕದಲ್ಲಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಿದಂತೆಯೇ ಈಜಿಪ್ಟ್ ನ ದೊಡ್ಡ ಆದಾಯ ಮೂಲವಾದ ಪ್ರವಾಸೋದ್ಯಮದಲ್ಲೂ ಇಳಿಮುಖವಾಯಿತು. ವಿದೇಶಿ ಯಾತ್ರಿಕರು ಈಜಿಪ್ಟ್ ಪ್ರವಾಸವನ್ನು ಮುಂದೂಡತೊಡಗಿದರು. ಬಹುಶಃ ಮುರ್ಸಿ ಅಧಿಕಾರ ವಹಿಸಿದ ಕ್ಷಣದಿಂದಲೇ ಅವರ ವರ್ಚಸ್ಸನ್ನು ಕಳೆಗುಂದಿಸುವ ಮತ್ತು ಅವರನ್ನು ಪದಚ್ಯುತಗೊಳಿಸುವ ಷಡ್ಯಂತ್ರವೊಂದನ್ನು 'ಮುಬಾರಕ್ ತಂಡವು' ಹೆಣೆದಿರಲೇಬೇಕು. ಮುರ್ಸಿ ಪದಚ್ಯುತಗೊಂಡ ಎರಡು ದಿನಗಳ ಬಳಿಕ ಜುಲೈ 4ರಂದು ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ವಿಪಕ್ಷ  ನಾಯಕ ಬರಾದಿಯವರ ಸಂದರ್ಶನ ಪ್ರಕಟಿಸಿತ್ತು. ಅದರಲ್ಲಿ,
Baradei said that, he had worked hard to convince western powers of what he called necessity of forcibly ousting President Morsi .'- ಮುರ್ಸಿಯನ್ನು ಬಲವಂತ ದಿಂದ ಪದಚ್ಯುತಗೊಳಿಸುವುದಕ್ಕಿರುವ ಅನಿವಾರ್ಯ ಕಾರಣಗಳನ್ನು ಪಶ್ಚಿಮದ ಬಲಾಢ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಿಸಿದ್ದೇನೆ'- ಎಂದು ಅವರು ಹೇಳಿರುವುದಾಗಿ ಅದು ಪ್ರಕಟಿಸಿತ್ತು. ಬ್ರದರ್‍ಹುಡ್‍ನ ನಾಯಕರನ್ನು ಬಂಧಿಸುತ್ತಿರುವುದನ್ನೂ ಸಂದರ್ಶನದಲ್ಲಿ ಅವರು ಸಮರ್ಥಿಸಿದ್ದರು. ವಿಶ್ವಸಂಸ್ಥೆಯ ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ  ಮತ್ತು ನೋಬೆಲ್ ಪ್ರಶಸ್ತಿ ವಿಜೇತರಾಗಿರುವ ಅಲ್ ಬರಾದಿಯವರು ಸೇನೆಯ ರಾಯಭಾರಿಯಂತೆ ನಡೆದುಕೊಂಡಿರುವುದನ್ನು ತಕ್ಷಣದ ಬೆಳವಣಿಗೆಯಾಗಿ ಪರಿಗಣಿಸಲು ಖಂಡಿತ ಸಾಧ್ಯವಿಲ್ಲ. ಪಶ್ಚಿಮ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಇರುವ ಬರಾದಿಯನ್ನು ಸೇನೆ ಈ ಮೊದಲೇ ಆ ಕೆಲಸಕ್ಕೆ ನೇಮಿಸಿರಬೇಕು. ಪ್ರಜಾತಂತ್ರ ಸರಕಾರವನ್ನು ಉರುಳಿಸಿದ ಅಪಖ್ಯಾತಿ ಬರದಂತೆ ನೋಡಿಕೊಳ್ಳುವ ಸರ್ವ ಮುನ್ನೆಚ್ಚರಿಕೆಯನ್ನೂ ಅದು ಮಾಡಿಕೊಂಡಿತ್ತು. ಅದಕ್ಕೆ ಪೂರಕವಾಗಿ ತಹ್ರೀರ್ ಚೌಕವನ್ನೂ ಬಸೀಮ್ ಯೂಸುಫ್‍ರಂಥವರನ್ನೂ ಅದು ಬಳಸಿಕೊಂಡಿತು.
   2012 ನವೆಂಬರ್ 23ರ ಬಳಿಕ ಈಜಿಪ್ಟ್ ನ CBC ಟಿ.ವಿ. ಚಾನೆಲ್‍ನಲ್ಲಿ ಬಸೀಮ್ ಯೂಸುಫ್‍ರ ವಿಡಂಬನೆ ಕಾರ್ಯಕ್ರಮ ಪ್ರಸಾರವಾಗತೊಡಗಿತು. ಅಮೇರಿಕದಲ್ಲಿ ಜಾನ್ ಸ್ಟೀವರ್ಟ್ ನಡೆಸಿ ಕೊಂಡು ಬರುತ್ತಿರುವ ದಿ ಡೈಲಿ ಶೋ ಕಾರ್ಯಕ್ರಮದಿಂದ ಪ್ರಭಾವಿತರಾಗಿ ಬಸೀಮ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. 3 ಕಾರ್ಯಕ್ರಮಗಳು ಪ್ರಸಾರವಾದಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾದುವು. ಅವರ ವಿಡಂಬನೆಯ ಶೈಲಿಯನ್ನು ಅಸಂಖ್ಯ ಮಂದಿ ಪ್ರಶ್ನಿಸತೊಡಗಿದರು. ಟೈಮ್ಸ್ ಮ್ಯಾಗಸಿನ್‍ನ 2013ರ ವಿಶ್ವದ ಪ್ರಭಾವಿ 100 ಮಂದಿಯಲ್ಲಿ ಓರ್ವರಾಗಿ ಗುರುತಿಸಿಕೊಂಡಿದ್ದ ಬಸೀಮ್‍ರ ವಿರುದ್ಧ ಮುರ್ಸಿಯವರ ಕಚೇರಿಯು ಮೊಕದ್ದಮೆಯನ್ನು ಹೂಡಿತು. ಅವರ ಕಾರ್ಯಕ್ರಮಗಳು ಸಾರ್ವಜನಿಕ ಶಾಂತಿಯನ್ನು ಕದಡುವ, ಆಡಳಿತ ಯಂತ್ರವನ್ನು ಕೆಟ್ಟದಾಗಿ ಬಿಂಬಿಸುವ ಮತ್ತು ಭದ್ರತೆಗೆ ತೊಡಕಾಗುವ ರೀತಿಯಲ್ಲಿವೆ..’ ಎಂದು ದೂರಿನಲ್ಲಿ ಆರೋಪಿಸಲಾಯಿತು. ‘ಇಸ್ಲಾಮ್ ಮತ್ತು ಅಧ್ಯಕ್ಷ ಮುರ್ಸಿಯವರನ್ನು ಬಸೀಮ್ ಅವಮಾನಿಸಿದ್ದಾರೆ’ ಎಂಬ ಆರೋಪದಲ್ಲಿ 2013 ಮಾರ್ಚ್ 30ರಂದು ಬಂಧನ ವಾರೆಂಟ್ ಹೊರಡಿಸಲಾಯಿತು. ಬಸೀಮ್ ಆ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡರೂ ಈ ಎಲ್ಲ ಬೆಳವಣಿಗೆಗಳನ್ನು ಮುರ್ಸಿ ವಿರೋಧಿಗಳು ಅತ್ಯಂತ ಜಾಣತನದಿಂದ ಬಳಸಿಕೊಂಡರು. ಮುರ್ಸಿಯವರು ವ್ಯಕ್ತಿ ಸ್ವಾತಂತ್ರ್ಯವನ್ನು ಹರಣಗೊಳಿಸುತ್ತಿದ್ದಾರೆ, ಸರ್ವಾಧಿಕಾರಿಯಾಗುತ್ತಿದ್ದಾರೆ.. ಎಂಬುದಾಗಿ ಅವರು ಪ್ರಚಾರ ಮಾಡಿದರು. ಜಾನ್ ಸ್ಟೀವರ್ಟ್ ಕೂಡ ಬಸೀಮ್‍ಗೆ ಬೆಂಬಲ ಸಾರಿದರು. ಮುರ್ಸಿ ವಿರುದ್ಧ ಘೋಷಣೆ ಕೂಗುವುದಕ್ಕೆ ಇಂಥ ಪ್ರಕರಣಗಳು ಮತ್ತು ಅದರ ಸುತ್ತ ಹುಟ್ಟು ಹಾಕಲಾದ ಸುಳ್ಳುಗಳು ಪ್ರಮುಖ ಪಾತ್ರ ವಹಿಸಿದುವು. ಅಂದಹಾಗೆ, ಅಮೇರಿಕದೊಂದಿಗೆ ಮುನಿಸಿಕೊಂಡಿರುವ ಅಫಘಾನ್, ಲಿಬಿಯ, ನೈಜೀರಿಯ, ಇಥಿಯೋಪಿಯ, ಮಾಲಿ.. ಮುಂತಾದ ರಾಷ್ಟ್ರಗಳಲ್ಲಿರುವ 'ಇಸ್ಲಾಮಿಸ್ಟ್'ಗಳನ್ನು ಪ್ರಜಾತಂತ್ರದೆಡೆಗೆ ಕರೆಯುತ್ತಿರುವ ಅಮೇರಿಕವು ಯಾಕೆ ಈಜಿಪ್ಟ್ ನ ಪ್ರಜಾತಂತ್ರ ಪತನದ ಬಗ್ಗೆ ಸ್ಪಷ್ಟ ದನಿಯಲ್ಲಿ ಮಾತಾಡುತ್ತಿಲ್ಲ? ಪ್ರತಿವರ್ಷ ತನ್ನಿಂದ 1.3 ಬಿಲಿಯನ್ ಡಾಲರನ್ನು ನೆರವಿನ ರೂಪದಲ್ಲಿ ಪಡಕೊಳ್ಳುತ್ತಿರುವ ಈಜಿಪ್ಟ್ ಸೇನೆಯ ಬಗ್ಗೆ ಅದರ ನಿಲುವೇನು?
ಅಷ್ಟಕ್ಕೂ,
   ಮುರ್ಸಿಯವರನ್ನು ಪದಚ್ಯುತಗೊಳಿಸಿದ ಸೇನೆಯನ್ನು ಅಭಿನಂದಿಸಿ ಸಂದೇಶ ಕಳುಹಿಸಿದ ರಾಷ್ಟ್ರಗಳಲ್ಲಿ ಯುಎಇ ಮತ್ತು ಸೌದಿ ಮೊದಲಿಗರೆಂದ ಮೇಲೆ ಅಮೇರಿಕವನ್ನೋ ಇಸ್ರೇಲನ್ನೋ ದೂರಿ ಏನು ಪ್ರಯೋಜನವಿದೆ, ಅಲ್ಲವೇ?