Tuesday, October 30, 2012

ಅವರ ಆ 8 ಗಂಟೆ ವಿಳಂಬದಲ್ಲಿ ಹತ್ತಾರು ಅರ್ಥಗಳಿದ್ದುವೇ?

ಇಮ್ರಾನ್ ಖಾನ್‍
      ಲಿವಿಂಗ್ ಅಂಡರ್ ಡ್ರೋನ್ಸ್ (ಡ್ರೋನ್‍ಗಳಡಿಯಲ್ಲಿ ಬದುಕು) ಎಂಬ ಡಾಕ್ಯುಮೆಂಟರಿಯನ್ನು ವೀಕ್ಷಿಸಿದರೆ ಅಥವಾ ಸ್ಟಾನ್‍ ಫೋರ್ಡ್  ಯುನಿವರ್ಸಿಟಿ ಮತ್ತು ನ್ಯೂಯಾರ್ಕ್ ಯುನಿವರ್ಸಿಟಿಗಳು ಜಂಟಿಯಾಗಿ ನಡೆಸಿದ ಅಧ್ಯಯನದ ವರದಿಯನ್ನು ಓದಿದರೆ  ಪಾಕಿಸ್ತಾನದ ಮಲಾಲ ಯೂಸುಫ್‍ಝಾಯಿ ಪ್ರಕರಣದ ಬಗ್ಗೆ ಖಂಡಿತ ಅನುಮಾನಗಳು ಮೂಡುತ್ತವೆ.
       ಲಿವಿಂಗ್ ಅಂಡರ್ ಡ್ರೋನ್ಸ್ ಎಂಬ ಹೆಸರಿನ ಡಾಕ್ಯುಮೆಂಟರಿ ಮತ್ತು 165 ಪುಟಗಳ ಅಧ್ಯಯನ ವರದಿಯು ಕಳೆದ 2012 ಸೆಪ್ಟೆಂಬರ್‍ನಲ್ಲಿ ಅಮೇರಿಕದಲ್ಲಿ ಬಿಡುಗಡೆಯಾಗಿತ್ತು. ಮೇಲಿನೆರಡು ಯುನಿವರ್ಸಿಟಿಗಳ ವಿದ್ಯಾರ್ಥಿಗಳು ಒಂದು ವರ್ಷದ ಕಾಲ ಮಲಾಲಳ ಸ್ವಾತ್ ಕಣಿವೆ ಸಹಿತ ಪಾಕಿಸ್ತಾನದ ತಾಲಿಬಾನ್ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ನಡೆಸಿದ ಅಧ್ಯಯನದ ವರದಿಯದು. ಅಮೇರಿಕದ ಡ್ರೋನ್ ದಾಳಿಯಿಂದ ಬದುಕುಳಿದ 130ಕ್ಕಿಂತಲೂ ಅಧಿಕ ಮಂದಿಯನ್ನು ಭೇಟಿಯಾಗಿ ತಯಾರಿಸಲಾದ ಆ ವರದಿಯಲ್ಲಿ ಹತ್ತಾರು ಕಣ್ಣೀರ ಕತೆಗಳಿವೆ. ಡ್ರೋನ್ ಕ್ಷಿಪಣಿಯ ಸದ್ದು ಕೇಳಿಸುತ್ತಲೇ ಜನರೆಲ್ಲ ಮನೆ, ಹಟ್ಟಿ, ಟಾಯ್ಲೆಟ್ಟು... ಹೀಗೆ ಸಿಕ್ಕ ಸಿಕ್ಕಲ್ಲಿ ನುಸುಳಿಕೊಳ್ಳುತ್ತಾರೆ. ಅಂತ್ಯಸಂಸ್ಕಾರ ನಡೆಸಲೂ ಭಯ. ಅದರಲ್ಲಿ ಭಾಗವಹಿಸಲೂ ಭೀತಿ. ಯಾಕೆಂದರೆ ಎಷ್ಟೋ ಬಾರಿ ಅಂತ್ಯ ಸಂಸ್ಕಾರಕ್ಕೆ ಸೇರಿದವರ ಮೇಲೆಯೇ ಡ್ರೋನ್(ಮಾನವ ರಹಿತ ಕ್ಷಿಪಣಿ)ಗಳು ಎರಗಿವೆ. ಮದುವೆ ನಡೆಸುವಂತಿಲ್ಲ. ಊರ ಪ್ರಮುಖರು ಸಭೆ ಸೇರುವಂತಿಲ್ಲ. ಯಾವ ಸಂದರ್ಭದಲ್ಲೂ ಡ್ರೋನ್ ಎರಗಬಹುದು. ಅಸಂಖ್ಯ ಮಂದಿ ನಿದ್ದೆ ಬಾರದ ಸಮಸ್ಯೆಯಿಂದ (insomnia) ಬಳಲುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಜಾರಿ
ಯಲ್ಲಿರುವ ಡ್ರೋನ್ ದಾಳಿಯಿಂದಾಗಿ ದೈಹಿಕ, ಮಾನಸಿಕ ಕಾಯಿಲೆಗಳಿಗೆ ತುತ್ತಾದವರ ಸಂಖ್ಯೆ ದೊಡ್ಡದಿದೆ. ಅಂದ ಹಾಗೆ, ಯಾವುದಾದರೊಂದು ಸಭೆಗೋ ಅಂತ್ಯ ಸಂಸ್ಕಾರಕ್ಕೋ ಮದುವೆ ಕಾರ್ಯಕ್ರಮಕ್ಕೋ ಡ್ರೋನ್ ದಾಳಿಯಾದರೆ ಅರ್ಧ ತಾಸಿನ  ತನಕ ಯಾರೂ ಹತ್ತಿರ ಧಾವಿಸುವುದೇ ಇಲ್ಲ. ಯಾಕೆಂದರೆ ಮುಂದಿನ ಅರ್ಧ ತಾಸಿನೊಳಗೆ ಇನ್ನೊಂದು ದಾಳಿಯಾಗುವ ಸಾಧ್ಯತೆಯಿರುತ್ತದೆ. ಬುಶ್‍ರ ಆಡಳಿತಾವಧಿಯಲ್ಲಿ 43 ದಿನಗಳಿಗೊಮ್ಮೆ ಡ್ರೋನ್‍ನ ದಾಳಿಯಾಗುತ್ತಿದ್ದರೆ ಒಬಾಮರ ಆಡಳಿತದಲ್ಲಿ ದಿನಕ್ಕೊಂದು ಡ್ರೋನ್ ಸಿಡಿಯುತ್ತಲೇ ಇದೆ..’
       ಇಷ್ಟಕ್ಕೂ, ಪಾಕ್, ಬ್ರಿಟನ್ ಮತ್ತು ಅಮೇರಿಕಗಳಲ್ಲಿ ಇವತ್ತು ಡ್ರೋನ್ ಒಂದು ಚರ್ಚಾ ವಿಷಯವಾಗಿದ್ದರೆ ಅದಕ್ಕೆ ಮಲಾಲ ಖಂಡಿತ ಕಾರಣ ಅಲ್ಲ..
1 ನೂರ್ ಖಾನ್
ಮಲಾಲ
2 ಇಮ್ರಾನ್ ಖಾನ್
        ನೂರ್ ಖಾನ್ ಎಂಬ ಪಾಕ್‍ನ 27ರ ಯುವಕ ಕಳೆದವಾರ ಬ್ರಿಟನ್ನಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ. 2011ರ  ಮಾರ್ಚ್ ನಲ್ಲಿ ಈತನ ತಂದೆ ಮಾಲಿಕ್ ದಾವೂದ್‍ರು ಪೂರ್ವ ವಜೇರಿಸ್ತಾನದಲ್ಲಿ ಬುಡಕಟ್ಟು ಪ್ರಮುಖರ ನಭೆ ನಡೆಸುತ್ತಿದ್ದರು. ಆಗ ಆ ಸಭೆಯ ಮೇಲೆ ಡ್ರೋನ್ ಎರಗುತ್ತದಲ್ಲದೇ ಮಾಲಿಕ್‍ರ ಸಹಿತ ಐವತ್ತು ಮಂದಿ ಬುಡಕಟ್ಟು ಪ್ರಮುಖರನ್ನು ಹತ್ಯೆ ಮಾಡುತ್ತದೆ. ತನ್ನ ತಂದೆ ಟೆರರಿಸ್ಟ್ ಆಗಿರಲಿಲ್ಲ, ತಾಲಿಬಾನೂ ಆಗಿರಲಿಲ್ಲ. ಆದರೆ ಈ ಸಭೆಯ ಬಗ್ಗೆ ಬ್ರಿಟನ್ನಿನ ಗುಪ್ತಚರ ಅಧಿಕಾರಿಗಳು  ಅಮೇರಿಕನ್ ಅಧಿಕಾರಿಗಳಿಗೆ ಸುಳ್ಳು ಮಾಹಿತಿಯನ್ನು ರವಾನಿಸಿದ್ದರಿಂದಲೇ ಡ್ರೋನ್ ದಾಳಿಯಾಗಿದೆ. ಆದ್ದರಿಂದ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದಾತ ಆಗ್ರಹಿಸಿದ್ದಾನೆ. ಇದಕ್ಕಿಂತ ಒಂದು ವಾರದ ಮೊದಲು, 2012 ಅಕ್ಟೋಬರ್ 11ರಂದು ತಹ್ರೀಕೆ ಇನ್ಸಾಫ್ ಪಾರ್ಟಿಯ ನಾಯಕ ಮತ್ತು ಕ್ರಿಕೆಟಿಗ ಇಮ್ರಾನ್ ಖಾನ್‍ರು ಪಾಕ್‍ನಲ್ಲಿ ಬೃಹತ್ ಜಾಥಾ ಸಂಘಟಿಸಿದ್ದರು. ಇಸ್ಲಾಮಾಬಾದ್‍ನಿಂದ ಡ್ರೋನ್‍ಪೀಡಿತ ವಝೀರಿಸ್ತಾನದ ಕೊಟಕೈ  ಪ್ರದೇಶಕ್ಕೆ ಹಮ್ಮಿಕೊಂಡ ಈ ಮೂರು ದಿನಗಳ ಜಾಥಾದ ಉದ್ದೇಶ ಡ್ರೋನ್‍ನ ಬಗ್ಗೆ ಜಾಗತಿಕ ಗಮನ ಸೆಳೆಯುವುದಾಗಿತ್ತು. ಡ್ರೋನ್ ದಾಳಿಯನ್ನು ರದ್ದುಪಡಿಸಬೇಕೆಂದು ಕೋರಿ ಇಸ್ಲಾಮಾಬಾದ್‍ನಲ್ಲಿರುವ ಅಮೇರಿಕನ್ ರಾಯಭಾರಿ ರಿಚರ್ಡ್ ಹಾಗ್‍ಲ್ಯಾಂಡ್‍ಗೆ ಸಲ್ಲಿಸಲಾದ ಮನವಿಗೆ ಖ್ಯಾತ ಅಮೇರಿಕನ್ ಬರಹಗಾರ ಅಲಿಸ್ ಲೂಕರ್, ಸಿನಿಮಾ ನಿರ್ದೇಶಕರುಗಳಾದ ಒಲಿವರ್ ಸ್ಟೋನ್ ಮತ್ತು ಡ್ಯಾನಿ ಗ್ಲೋವರ್ ಸಹಿ ಹಾಕಿದ್ದರು.  ಅಮೇರಿಕದ ಮಾಜಿ ಸೇನಾ ಜನರಲ್ ಅನ್ನಿ  ರೈಟ್ ರು   ಇಮ್ರಾನ್‍ರ ಜಾಥಾಕ್ಕೆ ಬೆಂಬಲ ಸಾರಿದರು. ಹತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿ ಜಾಥಾದಲ್ಲಿ ಪಾಲ್ಗೊಳ್ಳುವುದನ್ನು ಕಂಡು ಪಾಕ್ ಆಡಳಿತ ತಬ್ಬಿಬ್ಬಾಯಿತು. ವಝೀರಿಸ್ತಾನಕ್ಕೆ ಪ್ರವೇಶಿಸಲು ಅವಕಾಶ ಕೊಡಲಾರೆ ಅಂದಿತು. ಅದಕ್ಕೆ ಕಾರಣವೂ ಇದೆ. ಅಮೇರಿಕವು ಏಕಾಏಕಿ  ಪಾಕಿಸ್ತಾನಕ್ಕೆ ಪ್ರವೇಶಿಸಿ ಡ್ರೋನ್ ದಾಳಿ ಪ್ರಾರಂಭಿಸಿದ್ದಲ್ಲ. ಡ್ರೋನ್ ದಾಳಿ ನಡೆಸಲು ತನ್ನ ಶಮ್ಸ್ ವಿಮಾನ ನಿಲ್ದಾಣವನ್ನು ಅಮೇರಿಕಕ್ಕೆ ಬಿಟ್ಟುಕೊಟ್ಟದ್ದೇ ಪಾಕಿಸ್ತಾನ. ಅಮೇರಿಕ ಕೊಡುವ ದೊಡ್ಡ ಪ್ರಮಾಣದ ಬಾಡಿಗೆ ಮೊತ್ತದ ಮೇಲಷ್ಟೇ ಕಣ್ಣಿಟ್ಟಿದ್ದ ಪಾಕಿಸ್ತಾನ, 2004ರಿಂದ 2011 ನವೆಂಬರ್ ವರೆಗೆ ಶಮ್ಸ್ ವಿಮಾನ ನಿಲ್ದಾಣದ ಬಗ್ಗೆ ಮಾತೇ ಆಡಿರಲಿಲ್ಲ. ಆದರೆ 2011 ನವೆಂಬರ್‍ನಲ್ಲಿ ಶಮ್ಸ್ ನಿಂದ ಅಮೇರಿಕ ಹಾರಿಸಿದ ಡ್ರೋನ್ ಕ್ಷಿಪಣಿಗೆ ಸಲಾಲ ಎಂಬ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿದ್ದ ಪಾಕ್‍ನ 24 ಸೈನಿಕರು ಬಲಿಯಾದಾಗ ಎರಡು ತಿಂಗಳುಗಳ ಕಾಲ ಪಾಕ್ ಸರಕಾರ ಶಮ್ಸ್ ಅನ್ನು ಮುಚ್ಚಿಬಿಟ್ಟಿತು. ಇದಕ್ಕೆ ಅಮೇರಿಕದ ವಿರುದ್ಧ  ಪಾಕ್ ಜನತೆಯ ವ್ಯಾಪಕ ಆಕ್ರೋಶವೂ ಕಾರಣವಾಗಿತ್ತು. ಆದರೆ ಯಾವಾಗ ಜನರ ಆಕ್ರೋಶ ತಣ್ಣಗಾಯಿತೋ 2012 ಜನವರಿ 10ರಂದು ಪಾಕ್ ಮತ್ತೆ ತನ್ನ ಶಮ್ಸ್ ವಿಮಾನ ನಿಲ್ದಾಣವನ್ನು ಅಮೇರಿಕಕ್ಕೆ ಬಿಟ್ಟುಕೊಟ್ಟಿತು. ಅಂದಹಾಗೆ, ಪಾಕ್ ಸೈನಿಕರನ್ನು ಗುರುತಿಸುವುದಕ್ಕೂ ಡ್ರೋನ್‍ಗೆ ಸಾಧ್ಯವಾಗುವುದಿಲ್ಲವೆಂದ ಮೇಲೆ ಉಗ್ರರನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಾದರೂ ಹೇಗೆ? ಸೈನಿಕರ ಮೇಲೆಯೇ ಎರಗುವ ಡ್ರೋನ್, ಇನ್ನು ನಾಗರಿಕರ ಮೇಲೆ ಎರಗದೆಂದು ಹೇಗೆ ಹೇಳುವುದು? ನಿಜವಾಗಿ ಡ್ರೋನ್ ದಾಳಿಯನ್ನು ಮಾನವ ವಿರೋಧಿ ಎಂದು ಬೊಟ್ಟು ಮಾಡುತ್ತಿರುವುದು ಪಾಕ್ ಜನತೆಯಷ್ಟೇ ಅಲ್ಲ, 2009 ಎಪ್ರಿಲ್ 9ರಂದು ಫಾದರ್ ಲೂವಿಸ್ ವಿಟಲ್, ಕಾತಿ ಕೆಲ್ಲಿ, ಸ್ಟೀಫನ್ ಕೆಲ್ಲಿ, ಈವ್ ಟೋಟ್ಸ್.. ಮುಂತಾದ ಪ್ರಭಾವಿಗಳು ಡ್ರೋನ್ ದಾಳಿಯನ್ನು ರದ್ದುಪಡಿಸ ಬೇಕೆಂದು ಒತ್ತಾಯಿಸಿ ಅಮೇರಿಕದ ಕ್ರೀಚ್ ವಿಮಾನ ನಿಲ್ದಾಣದ ಬಳಿ ಪ್ರತಿಭಟಿಸಿದ್ದರು. ಬಂಧನಕ್ಕೂ ಒಳಗಾಗಿದ್ದರು. ಡ್ರೋನ್‍ನ ಮೂಲಕ ನಾಗರಿಕರ ಹತ್ಯೆಯಾಗುತ್ತಿರುವುದಕ್ಕೆ 2009 ಜೂನ್ 3ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗವು (UNHRC) ಅಮೇರಿಕವನ್ನು ಖಂಡಿಸಿತು. UNHRCಯ ತನಿಖಾ ತಂಡದ ಮುಖ್ಯಸ್ಥ ಫಿಲಿಪ್ ಆಲ್‍ಸ್ಟನ್‍ರು 2009 ಅಕ್ಟೋಬರ್ 27ರಂದು ಡ್ರೋನ್ ದಾಳಿಯನ್ನು ಮನುಷ್ಯ ವಿರೋಧಿ ಅಂದರು. ಒಂದು ರೀತಿಯಲ್ಲಿ ಡ್ರೋನ್‍ನ ವಿರುದ್ಧ ವ್ಯಾಪಕವಾಗುತ್ತಿರುವ ಪ್ರತಿಭಟನೆಯನ್ನು ಪರಿಗಣಿಸಿಯೇ 2009-10ರಲ್ಲಿ ಅಮೇರಿಕವು ಡ್ರೋನ್‍ನ ಉದ್ದವನ್ನು 21 ಇಂಚಿಗೆ ತಗ್ಗಿಸಿದ್ದು ಮತ್ತು ಭಾರವನ್ನು 16 ಕೆ.ಜಿ.ಗೆ ಇಳಿಸಿದ್ದು. ಅಂದಹಾಗೆ, ಭಾರ ಮತ್ತು ಉದ್ದವನ್ನು ತಗ್ಗಿಸಿದ ಕೂಡಲೇ ಡ್ರೋನ್‍ಗೆ ನಾಗರಿಕರು ಮತ್ತು 'ಉಗ್ರ'ವಾದಿಗಳ ಗುರುತು ಸಿಗುತ್ತದೆಂದೇನೂ ಅಲ್ಲವಲ್ಲ. ಮಲಾಲಳ ಪ್ರಕರಣಕ್ಕಿಂತ ಮೊದಲು ಮತ್ತು ಆ ಬಳಿಕವೂ  ವಾಯುವ್ಯ ಪಾಕ್‍ನ ಮೇಲೆ ಡ್ರೋನ್ ಎರಗಿವೆ. ಹಾಗಂತ, ಮಲಾಲಳಿಗೆ ಗುಂಡು ಹಾರಿಸಿದವರ ವಿರುದ್ಧ ಮಾತಾಡಿದಂತೆ ಡ್ರೋನ್‍ಗೆ ಸಿಲುಕಿ ಸಾವಿಗೀಡಾದವರ ಪರ ಮಾಧ್ಯಮಗಳು ಮಾತಾಡಿವೆಯೇ? ಒಬಾಮ, ಹಿಲರಿ ಕ್ಲಿಂಟನ್, ಬ್ರಿಟನ್ನಿನ ಕ್ಯಾಮರೂನ್, ಮಡೋನ್ನಾ.. ಎಲ್ಲರಿಗೂ ಮಲಾಲ ಗೊತ್ತು. ಬ್ರಿಟನ್ನಿನ ರಾಣಿ ಎಲಿಜಬೆತ್‍ಗೂ ಗೊತ್ತು. ಆದರೆ ಡ್ರೋನ್‍ಗೆ ಸಿಲುಕಿ ಸಾವಿಗೀಡಾಗುತ್ತಿರುವ ‘ಮಲಾಲಗಳು’ ಯಾರಿಗೆಲ್ಲ ಗೊತ್ತಿವೆ? ಅವರ ಪ್ರಾಯ, ಕಲಿಯುತ್ತಿರುವ ಶಾಲೆ, ಅವರಲ್ಲಿರುವ ಪ್ರತಿಭೆಗಳನ್ನು ಇವರಲ್ಲಿ ಒಬ್ಬರಾದರೂ ಉಲ್ಲೇಖಿಸಿಲ್ಲವಲ್ಲ, ಯಾಕೆ?
     ಒಟ್ಟು ಡ್ರೋನ್ ದಾಳಿ     -    349
     ಒಬಾಮರ ಅವಧಿಯಲ್ಲಿ ಆದ ದಾಳಿ     -    297
     ಬುಶ್‍ರ ಅವಧಿಯಲ್ಲಿ     -    52
     ಸಾವಿಗೀಡಾದ ನಾಗರಿಕರು  -    884
     ಮಕ್ಕಳು  -    176
     ಒಟ್ಟು ಗಾಯಗೊಂಡವರು     -    1389
         2004ರಿಂದ 2012 ಅಕ್ಟೋಬರ್ 10ರ ವರೆಗೆ ಪಾಕ್‍ನಲ್ಲಿ ನಡೆದ ಡ್ರೋನ್ ಕಾರ್ಯಾಚರಣೆಯ ವಿವರವಿದು. ನೀವೇ ಹೇಳಿ, ಸಾವಿಗೀಡಾದ 176 ಮಕ್ಕಳಲ್ಲಿ ಒಂದೇ ಒಂದು ಮಗು ಮಲಾಲಳಂತೆ ಸುದ್ದಿಗೀಡಾಗಿದೆಯೇ? ಎಷ್ಟು ಮಂದಿ ಬರಹಗಾರರು ಈ ಮಕ್ಕಳನ್ನು ಎದುರಿಟ್ಟುಕೊಂಡು ಲೇಖನ ಬರೆದಿದ್ದಾರೆ? ಮಲಾಲಳನ್ನು ಎತ್ತಿಕೊಂಡು ತಾಲಿಬಾನ್‍ಗಳನ್ನು ದೂಷಿಸಿದಂತೆ ಈ ಮಕ್ಕಳನ್ನು ಎತ್ತಿಕೊಂಡು ಅಮೇರಿಕವನ್ನು ಮತ್ತು ಅದರ ಯುದ್ಧ ನೀತಿಯನ್ನು ಎಷ್ಟು ಮಂದಿ ಪ್ರಶ್ನಿಸಿದ್ದಾರೆ? ಹತ್ಯೆ ನಡೆಸಿದ್ದು ತಾಲಿಬಾನ್ ಎಂದಾದರೆ ಅದು ಕ್ರೂರ ಅನ್ನಿಸುವುದು ಮತ್ತು ಅಮೇರಿಕ ಎಂದಾದರೆ ಅದು ಭಯೋತ್ಪಾದನಾ ವಿರೋಧಿ ಹೋರಾಟ ಅನ್ನಿಸುವುದೆಲ್ಲ ಯಾಕೆ? ನಿಜವಾಗಿ, ಮಲಾಲ ಪ್ರಕರಣದ ಬಗ್ಗೆ ಅನುಮಾನ ಮೂಡುವುದೇ ಇಲ್ಲಿ. ಆಕೆಯ ಮೇಲಾದ ದಾಳಿಯನ್ನು ಒಬಾಮರ ಮೇಲೋ ರಾಣಿ ಎಲಿಜಬೆತ್‍ರ ಮೇಲೋ ಆದ ದಾಳಿಯಂತೆ ಮಾಧ್ಯಮಗಳು ಬಿಂಬಿಸಿರುವುದರ ಹಿಂದೆ ಅಸಹಜ ಉದ್ದೇಶವೇನೂ ಇಲ್ಲ ಅನ್ನುತ್ತೀರಾ? ಅಮೇರಿಕದ ಯುದ್ಧ ನೀತಿಯನ್ನು ಬೆಂಬಲಿಸುವವರೆಲ್ಲ ಮಲಾಲಳಿಗಾಗಿ ಕಣ್ಣೀರಿಳಿಸಿದ್ದು, ತೀರಾ ಪ್ರಾದೇಶಿಕ ಟಿ.ವಿ. ಚಾನೆಲ್‍ಗಳೂ ಬ್ರೇಕಿಂಗ್ ನ್ಯೂಸ್ ಆಗಿಸುವಷ್ಟು, ಫಾಲೋ ಅಪ್ ನ್ಯೂಸ್ ಬಿತ್ತರಿಸುವಷ್ಟು ಮಲಾಲಳ ಪ್ರಕರಣಕ್ಕೆ ಮಹತ್ವ ದೊರಕಿದ್ದರಲ್ಲಿ ಬರೇ ಮಾಧ್ಯಮ ಧರ್ಮವಷ್ಟೇ  ಕಾಣಿಸುತ್ತದಾ? ತಾಲಿಬಾನ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ತಾಲಿಬಾನ್ ನಿಲುವನ್ನು ಪ್ರಶ್ನಿಸುತ್ತಿರುವ ಹೆಣ್ಣು ಮಗಳ ಮೇಲೆ ದಾಳಿಯಾಗುವುದರಿಂದ ನಷ್ಟವಾಗುವುದು ತಾಲಿಬಾನ್‍ಗೇ ಹೊರತು ಅಮೇರಿಕಕ್ಕೆ ಖಂಡಿತ ಅಲ್ಲ. ಅಮೇರಿಕ ಈಗಾಗಲೇ ಅಫಘಾನ್ ಮತ್ತು ಪಾಕ್‍ಗಳಲ್ಲಿ ಸೈನಿಕ ಕಾರ್ಯಾಚರಣೆಯನ್ನು ಬಹುತೇಕ ನಿಲ್ಲಿಸಿ ಬಿಟ್ಟಿದೆ. ಅಫಘಾನ್ ಮತ್ತು ಇರಾಕ್‍ಗಳಲ್ಲಿ 6 ಸಾವಿರ ಸೈನಿಕರನ್ನು ಕಳಕೊಂಡಿರುವ ಅಮೇರಿಕಕ್ಕೆ (ದಿ ಹಿಂದೂ 2012 ಅಕ್ಟೋಬರ್ 25, ಪಿ. ಸಾಯಿನಾಥ್) ತಾಲಿಬಾನನ್ನು ಬಂದೂಕಿನಿಂದ ಎದುರಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಬಿಟ್ಟಿದೆ. ಅಲ್ಲದೇ, ಅಮೇರಿಕನ್ ಸೇನೆಯಲ್ಲಿ ಪ್ರತಿದಿನ ಒಬ್ಬ ಸೈನಿಕನಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ (ದಿ ಹಿಂದೂ 2012 ಅಕ್ಟೋಬರ್ 25). ಹೀಗಿರುವಾಗ ಕುಳಿತಲ್ಲಿಂದಲೇ ಹಾರಿಸಲಾಗುವ ಡ್ರೋನ್‍ನ ಹೊರತು ಅಮೇರಿಕದ ಬಳಿ ಬೇರೆ ಆಯ್ಕೆಗಳೇ ಇಲ್ಲ. ಆದರೆ ಡ್ರೋನ್‍ಗೆ ಜಾಗತಿಕವಾಗಿ ಬೆಂಬಲಿಗರ ಬದಲು ವಿರೋಧಿಗಳೇ ಹೆಚ್ಚುತ್ತಿದ್ದಾರೆ. 2010 ಜೂನ್ 2ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗವು ಬಿಡುಗಡೆಗೊಳಿಸಿದ (ಪಿಲಿಪ್ ಆಲ್‍ಸ್ಟನ್‍ರ ನೇತೃತ್ವದಲ್ಲಿ ತಯಾರಿಸಲಾದ) ವರದಿಯಲ್ಲಿ ಡ್ರೋನ್ ಕಾರ್ಯಾಚರಣೆಯ ಔಚಿತ್ಯವನ್ನೇ ಪ್ರಶ್ನಿಸಲಾಗಿತ್ತು. ಇದೇ ಆಯೋಗದ ಮುಖ್ಯಸ್ಥ ನವಿ ಪಿಲ್ಲೆ 2012 ಜೂನ್ 7ರಂದು ಪಾಕಿಸ್ತಾನಕ್ಕೆ 4 ದಿನಗಳ ಭೇಟಿ ನೀಡಿದರಲ್ಲದೇ ಡ್ರೋನ್ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದರು. ಇದಾಗಿ ನಾಲ್ಕು ತಿಂಗಳೊಳಗೆ, ಅಕ್ಟೋಬರ್ 11ರಂದು ಡ್ರೋನ್ ವಿರುದ್ಧ  ಇಮ್ರಾನ್ ಖಾನ್‍ರು ಬೃಹತ್ ರಾಲಿ ಸಂಘಟಿಸಿದರು. ಬ್ರಿಟನ್ ಮತ್ತು ಅಮೇರಿಕದ ಸಾಕಷ್ಟು ಬರಹಗಾರರು ಇಮ್ರಾನ್‍ರನ್ನು ಬೆಂಬಲಿಸಿದರು. ಪಾಕಿಸ್ತಾನದ ಜನತೆ ಡ್ರೋನ್‍ನ ವಿರುದ್ಧ ಒಂದಾಗುವ ಸೂಚನೆಗಳು ಕಾಣಿಸತೊಡಗಿದುವು.. ಅಮೇರಿಕದ ಡ್ರೋನ್‍ಗೆ ತನ್ನ ನೆಲವನ್ನು ಕೊಟ್ಟು ಜನರ ಮಧ್ಯೆ ಖಳನಾಗಿ ಗುರುತಿಸಿಕೊಂಡಿರುವ ಪಾಕ್ ಸರಕಾರಕ್ಕೆ ಇಮ್ರಾನ್ ಖಾನ್‍ರನ್ನು ತಡೆಯುವುದು ಅಗತ್ಯವಾಗಿತ್ತು. ಅಷ್ಟೇ ಅಲ್ಲ, ಡ್ರೋನ್‍ನ ಬಗ್ಗೆ ಮೃದು ನಿಲುವು ತಾಳುವಂಥ ಇಶ್ಶೂವೊಂದನ್ನು ಜನರಿಗೆ ಒದಗಿಸುವ ಅನಿವಾರ್ಯತೆಯೂ ಅದಕ್ಕಿತ್ತು. ಬಹುಶಃ ಮಲಾಲಳ ಪ್ರಕರಣವು ಪಾಕ್ ಆಡಳಿತದ ಎಲ್ಲ ಸಂಕಟವನ್ನೂ ಪರಿಹರಿಸಿಬಿಟ್ಟಿತು.
       ಮಲಾಲಳ ಮೇಲೆ ಅಕ್ಟೋಬರ್ 9ರಂದು ಆದ ದಾಳಿಗೆ 8 ಗಂಟೆಗಳಷ್ಟು ವಿಳಂಬವಾಗಿ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್‍ರನ್ನು ಮಾಧ್ಯಮಗಳು ತೀವ್ರವಾಗಿ ಟೀಕಿಸಿದ್ದುವು. ಆದರೆ ಆ ವಿಳಂಬಕ್ಕೆ ಅರ್ಥವಿದೆಯೆಂದು ಈಗ ಅನ್ನಿಸುತ್ತದಲ್ಲವೇ?

Monday, October 15, 2012

ಮಲಾಲಳ ಬ್ಲಾಗ್ ಓದುತ್ತಾ ಮನಸ್ಸು ಆರ್ದ್ರವಾಯಿತು..

ಮಲಾಲ
    2009 ಜನವರಿ 15, ಗುರುವಾರ
     ನಾನು ಮಲಗಿದ್ದೆ. ರಾತ್ರಿ ಹೊತ್ತು. ತೋಪುಗಳ ಸದ್ದು ಕೇಳಿಸುತ್ತಿತ್ತು. ರಾತ್ರಿ ಮೂರು ಬಾರಿ ನನಗೆ ಎಚ್ಚರವಾಯಿತು. ಅಲ್ಲಿಗೇ ಮಲಗಿದೆ. ಯಾಕೆಂದರೆ ಸ್ಕೂಲು ಇಲ್ಲವಲ್ಲ. ಬೆಳಿಗ್ಗೆ 10 ಗಂಟೆಗೆ ಎದ್ದೆ. ಆ ಬಳಿಕ ನನ್ನ ಗೆಳತಿ ಮನೆಗೆ ಬಂದಳು. ನಾವಿಬ್ಬರೂ ಹೋಮ್‍ವರ್ಕ್ ಬಗ್ಗೆ ಚರ್ಚಿಸಿದೆವು. ಇವತ್ತು ಜನವರಿ 15 ತಾನೇ. ಶಾಲೆಗಳನ್ನು ಮುಚ್ಚುವುದಕ್ಕೆ ತಾಲಿಬಾನ್ ನಿಗದಿಪಡಿಸಿದ ಅಂತಿಮ ದಿನಾಂಕ. ಹಾಗಂತ ಒಂದು ವೇಳೆ ತಾಲಿಬಾನ್‍ನ ಆದೇಶ ಜಾರಿಯಾಗದಿದ್ದರೆ ಮತ್ತೆ ಸ್ಕೂಲಿಗೆ ಹೋಗುವುದಕ್ಕೆ ಇದೆಯಲ್ಲ.. ಎಂದೆಲ್ಲಾ ನಾವು ಚರ್ಚಿಸಿದೆವು.
BBC ಗೆ ನಾನು ಬರೆಯುತ್ತಿರುವುದು ಗುಲ್ ಮಕಾಯಿ ಎಂಬ ಹೆಸರಲ್ಲಿ. ನನ್ನ ತಾಯಿಗೆ ಈ ಹೆಸರು ಎಷ್ಟು ಇಷ್ಟ ಆಯ್ತು ಗೊತ್ತಾ? ತಂದೆ ಹೇಳಿದ್ರು, ನಿನ್ನ ಹೆಸರನ್ನು ಗುಲ್ ಮಕಾಯಿ ಎಂದು ಬದಲಿಸಿದರೆ ಹೇಗೆ ಮಗಳೇ?
ಕೆಲವು ದಿನಗಳ ಹಿಂದೆ ಯಾರೋ ಕೆಲವರು ನನ್ನ ಬರಹಗಳನ್ನು ಪ್ರಿಂಟ್ ಔಟ್ ತೆಗೆದು ನನ್ನ ತಂದೆಯವರಿಗೆ ತೋರಿಸಿದರಂತೆ. ಎಷ್ಟು ಚೆನ್ನಾಗಿದೆ ಎಂದರಂತೆ. ಅಪ್ಪ ನಕ್ಕರಂತೆ. ಆದರೆ ಇದನ್ನು ಬರೆದದ್ದು ನನ್ನ ಮಗಳು ಮಲಾಲ ಅಂತ ಅವರು ಹೇಳಲಿಲ್ಲವಂತೆ..
    ಜನವರಿ 14, ಬುಧವಾರ
    ನಾನಿವತ್ತು ಶಾಲೆಗೆ ಹೋಗುವಾಗ ತುಂಬಾ ದುಃಖದಲ್ಲಿದ್ದೆ. ಯಾಕೆ ಗೊತ್ತಾ, ನಾಳೆಯಿಂದ ಶಾಲೆಗೆ ಚಳಿಗಾಲದ ರಜೆ ಶುರುವಾಗುತ್ತೆ. ಹಾಗೆ, ಪ್ರಾಂಶುಪಾಲರು ಸಂಜೆ ರಜೆಯನ್ನು ಘೋಷಿಸಿಯೂ ಬಿಟ್ಟರು. ಆದರೆ ಯಾವಾಗ ಶಾಲೆ ಪ್ರಾರಂಭ ಅಂತನೂ ಹೇಳಬೇಕಲ್ಲವೇ? ಹೇಳಲಿಲ್ಲ. ನಿಜ ಹೇಳ್ತೇನೆ, ಹೀಗೆ ಆಗುವುದು ಇದು ಮೊದಲ ಬಾರಿ. ಜನವರಿ 15ರ ಬಳಿಕ ಹೆಣ್ಣು ಮಕ್ಕಳ ಶಾಲೆ ತೆರೆಯಕೂಡದು ಎಂದು ತಾಲಿಬಾನ್ ಆದೇಶಿಸಿದೆಯಲ್ಲವೇ? ಬಹುಶಃ ಪ್ರಾಂಶುಪಾಲರು ಮೌನವಾಗಿರುವುದಕ್ಕೆ ಇದೇ ಕಾರಣ ಆಗಿರಬಹುದು ಎಂದು ನನ್ನ ಅಂದಾಜು. ಒಂದು ವಿಷಯ ಹೇಳುತ್ತೇನೆ, ನಾವ್ಯಾರೂ ಇವತ್ತು ಖುಷಿಯಾಗಿ ಬೀಳ್ಕೊಳ್ಳಲೇ ಇಲ್ಲ. ಒಂದು ವೇಳೆ ತಾಲಿಬಾನ್ ಆದೇಶ ಜಾರಿಯಾದರೆ ಮತ್ತೆ ನಾವೆಲ್ಲಾ ಶಾಲೆಗೆ ಹೀಗೆಯೇ ಬರುತ್ತೇವೆ, ಒಂದುಗೂಡುತ್ತೇವೆ ಎಂಬ ನಿರೀಕ್ಷೆ ಇಲ್ಲವಲ್ಲ. ಕೆಲವು ಗೆಳತಿಯರ ಪ್ರಕಾರ, ಶಾಲೆ ಫೆಬ್ರವರಿಯಲ್ಲಿ ಆರಂಭವಾಗುತ್ತದಂತೆ. ಇನ್ನೂ ಕೆಲವರು ಸ್ವಾತನ್ನೇ (ಊರನ್ನೇ) ಬಿಟ್ಟು ಹೋಗ್ತಾರಂತೆ. ಶಿಕ್ಷಣ ಪಡೆಯುವುದಕ್ಕೂ ನಿಷೇಧ ಇರುವ ಊರಲ್ಲಿ ಯಾಕೆ ಇರಬೇಕು ಎಂಬುದು ಅವರ ಹೆತ್ತವರ ಪ್ರಶ್ನೆಯಂತೆ.
     ಇವತ್ತು ನಮ್ಮ ಶಾಲೆಯ ಅಂತಿಮ ದಿನ ತಾನೆ. ನಾಳೆಯಿಂದ ನಾವೆಲ್ಲ ಬಯಲಲ್ಲಿ ಹೆಚ್ಚು ಹೊತ್ತು ಆಡಲು ತೀರ್ಮಾನಿಸಿದ್ದೇವೆ. ಈ ಶಾಲೆ ಒಂದು ದಿನ ಮತ್ತೆ ತೆರೆಯುತ್ತೆ ಎಂದೇ ನನ್ನ ನಂಬುಗೆ. ಆದರೆ ತೆರೆಯದಿದ್ರೆ ಎಂಬ ನೋವು ಮನಸ್ಸಿನ ಒಳಗೆಲ್ಲಾ ಚುಚ್ಚುತ್ತಲೇ ಇದೆ. ಆದ್ದರಿಂದಲೇ ಶಾಲೆಯಿಂದ ಮರಳುವಾಗ ನಾನು, ಪ್ರತಿದಿನ ಸಾಗುತ್ತಿದ್ದ ದಾರಿಯನ್ನು, ಕಟ್ಟಡಗಳನ್ನೆಲ್ಲಾ ನೋಡುತ್ತಾ, ಖುಷಿಪಡುತ್ತಾ ಬಂದೆ. ಒಂದು ವೇಳೆ ಮತ್ತೆ ತೆರೆಯದಿದ್ದರೆ ಇನ್ನೊಮ್ಮೆ ಇವನ್ನೆಲ್ಲಾ ನೋಡುತ್ತೇನೋ ಇಲ್ಲವೋ ಹೇಳಲು ಸಾಧ್ಯವಿಲ್ಲವಲ್ಲ..
    ಜನವರಿ 9,ಶುಕ್ರವಾರ
    ಇವತ್ತು ನನ್ನ ಶಾಲೆಯ ಗೆಳತಿಯರಲ್ಲಿ ನಾನು ಬುನೈರ್‍ಗೆ ಪ್ರವಾಸ ಹೋಗಿರುವುದಾಗಿ ಹೇಳಿದೆ. ಅವರೆಲ್ಲ ಮುಖ ಊದಿಸಿದರು. ಬುನೈರ್‍ನ ಹೆಸರು ಕೇಳುವಾಗ ಅವರಿಗೆ ಸುಸ್ತು ಆಗ್ತದಂತೆ.
ಮೌಲಾನಾ ಶಾ ದೌರಾನ್‍ರ ಸಾವಿನ ಬಗ್ಗೆ ಇರುವ ವದಂತಿಯ ಕುರಿತು ನಾವೆಲ್ಲ ಚರ್ಚಿಸಿದೆವು. ಅವರು ಎಫ್.ಎಂ. ರೇಡಿಯೋದಲ್ಲಿ ಭಾಷಣ ಮಾಡ್ತಿದ್ರು. ಸ್ವಾತ್‍ನಲ್ಲಿ ಹೆಣ್ಣು ಮಕ್ಕಳಿಗೆ ಶಾಲಾ ಪ್ರವೇಶವನ್ನು ನಿಷೇಧಿಸಲಾಗಿದೆ ಅಂತ ಘೋಷಿಸಿದವರಲ್ಲಿ ಅವರೂ ಒಬ್ಬರು. ಕೆಲವರು, ಅವರು ಸತ್ತಿದ್ದಾರೆ ಅಂದರು. ಇನ್ನೂ ಕೆಲವರು, ಇಲ್ಲ ಅಂದರು. ಈ ವದಂತಿ ಯಾಕೆ ಹುಟ್ಟಿಕೊಂಡಿದೆ ಎಂದರೆ, ನಿನ್ನೆ ರಾತ್ರಿ ಅವರು ಎಫ್.ಎಂ. ರೇಡಿಯೋದಲ್ಲಿ ಭಾಷಣ ಮಾಡಿಲ್ಲ. ಒಬ್ಬಳ ಪ್ರಕಾರ, ಅವರು ರಜೆಯಲ್ಲಿ ಹೋಗಿದ್ದಾರಂತೆ..
ಶುಕ್ರವಾರದಿಂದ ಟ್ಯೂಷನ್ ಕ್ಲಾಸ್ ಇರಲಿಲ್ಲವಲ್ಲ. ನಾನು ಸಾಕಷ್ಟು ಆಟವಾಡಿದೆ. ಸಂಜೆ ಟಿ.ವಿ. ಆನ್ ಮಾಡಿದೆ. ಲಾಹೋರ್‍ನಲ್ಲಿ ಬಾಂಬ್ ಸ್ಫೋಟ ಆಗಿದೆ ಎಂಬ ಸುದ್ದಿ ಬಂತು. ನಾನು ನನ್ನಷ್ಟಕ್ಕೇ ಹೇಳಿಕೊಂಡೆ, ಯಾಕೆ ನನ್ನ ದೇಶದಲ್ಲಿ ಬಾಂಬ್ ಸ್ಫೋಟ ಆಗ್ತಿದೆ..
    ಜನವರಿ 7, ಬುಧವಾರ
    ನಾನು ಮುಹರ್ರಮ್‍ನ ರಜೆ ಕಳೆಯಲು ಬುನೈರ್‍ಗೆ ಬಂದಿರುವೆ. ನಾನು ಬುನೈರನ್ನು ತುಂಬ ಇಷ್ಟ ಪಡುತ್ತೇನೆ. ಯಾಕೆ ಅಂದರೆ, ಇಲ್ಲಿ ಚಂದದ ಪರ್ವತ ಇದೆ. ಮತ್ತೆ ಹುಲುಸಾಗಿ ಬೆಳೆದಿರುವ ಹಸಿರು ಇದೆ. ನನ್ನ ಸ್ವಾತ್ ಕೂಡ ತುಂಬಾ ಇಷ್ಟ ನಂಗೆ. ಆದರೆ ಅಲ್ಲಿ ಶಾಂತಿ ಇಲ್ವಲ್ಲ. ಆದರೆ ಬುನೈರ್‍ನಲ್ಲಿ ಶಾಂತಿ ಇದೆ. ಇಲ್ಲಿ ಯಾವುದೇ ಬಂದೂಕಿನ ಶಬ್ದ ಇಲ್ಲ. ಭಯ ಇಲ್ಲ. ನಾವೆಲ್ಲ ಇಲ್ಲಿ ತುಂಬಾ ಸಂತೋಷದಿಂದಿದ್ದೇವೆ. ಇವತ್ತು ನಾವು ಪೀರ್ ಬಾಬಾ ಮ್ಯೂಸಿಯಂಗೆ ಹೋದೆವು. ಅಲ್ಲಿ ತುಂಬಾ ಜನರಿದ್ದರು. ಜನರೆಲ್ಲ ಇಲ್ಲಿಗೆ ಬರುವುದು ಪ್ರಾರ್ಥಿಸಲಿಕ್ಕೆ. ಆದರೆ ನಾವು ವಿಹಾರಕ್ಕಾಗಿ ಬಂದವರು ತಾನೆ. ಇಲ್ಲಿ ಬಳೆ, ಕಿವಿಯ
ರಿಂಗು ಮತ್ತಿತರ ಕೃತಕ ಆಭರಣಗಳ ಅಂಗಡಿ ಇದೆ. ಖರೀದಿಸಬೇಕು ಅಂತ ಅತ್ತಿತ್ತ ನೋಡಿದೆ. ಯಾವುದೂ ಇಷ್ಟ ಆಗಲಿಲ್ಲ. ಆದರೆ ನನ್ನ ತಾಯಿ ಬಳೆ ಮತ್ತು ಕಿವಿಯ ರಿಂಗನ್ನು ಖರೀದಿಸಿದರು..
    ಜನವರಿ 5, ಸೋಮವಾರ
    ನಾನು ನನ್ನ ಯುನಿಫಾರ್ಮ್ ಧರಿಸಿ ಶಾಲೆಗೆ ರೆಡಿಯಾಗುತ್ತಿದ್ದೆ. ಆದರೆ ತಕ್ಷಣ, ನಾಳೆಯಿಂದ ಎಲ್ಲರೂ ಸಾಮಾನ್ಯ ಉಡುಪುಗಳನ್ನು ಧರಿಸಿ ಶಾಲೆಗೆ ಬರಬೇಕು, ಯುನಿಫಾರ್ಮು ಧರಿಸುವಂತಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದು ನೆನಪಾಯ್ತು. ಆದ್ದರಿಂದ ನಾನು ನನ್ನ ಇಷ್ಟದ ಪಿಂಕ್ ಡ್ರೆಸ್ ಧರಿಸಿದೆ. ಉಳಿದ ವಿದ್ಯಾರ್ಥಿನಿಯರೂ ತಮ್ಮಿಷ್ಟದ ಬಣ್ಣದ ಉಡುಪುಗಳನ್ನು ಧರಿಸಿದ್ದರು. ಒಂದು ರೀತಿಯಲ್ಲಿ ನಂಗೆ ಖುಷಿಯೇ ಆಯ್ತು. ಶಾಲೆಯಲ್ಲೂ ಮನೆಯಂಥ ವಾತಾವರಣ ಯಾರಿಗೆ ಇಷ್ಟ ಆಗಲ್ಲ ಹೇಳಿ?
     ನನ್ನ ಗೆಳತಿ ನನ್ನ ಹತ್ತಿರ ಬಂದು, ಕಿವಿಯಲ್ಲಿ ಮೆತ್ತಗೆ ಪ್ರಶ್ನಿಸಿದ್ಳು: ಅಲ್ಲಾಹನಾಣೆ, ನಿಜ ಹೇಳು, ನಮ್ಮ ಈ ಸ್ಕೂಲು ತಾಲಿಬಾನಿಗಳ ದಾಳಿಗೆ ಗುರಿಯಾಗಲಿದೆಯಂತೆ ಹೌದೇ? ಬಣ್ಣದ ಡ್ರೆಸ್ಸು ಧರಿಸುವುದು ತಾಲಿಬಾನ್‍ಗೆ ಇಷ್ಟವಾಗಲಿಕ್ಕಿಲ್ಲ ಅಂತ ನನ್ನ ಮನೆಯಲ್ಲಿ ಬೆಳಿಗ್ಗೆ ಹೇಳಿದ್ರು ಅಂತನೂ ಅವಳು ಹೇಳಿದ್ಳು.
    ನಾನು ಶಾಲೆಯಿಂದ ಮರಳಿ ಬಂದೆ ಮತ್ತು ಲಂಚ್‍ನ ಬಳಿಕ ಟ್ಯೂಷನ್ ಪಡೆದೆ. ಸಂಜೆ ಟಿ.ವಿ. ಆನ್ ಮಾಡಿದೆ. ಆಗ ಪ್ರಕಟವಾದ ಸುದ್ದಿ ಏನೆಂದರೆ, ಶಕಾದ್ರಾದಲ್ಲಿ 15 ದಿನಗಳಿಂದ ವಿಧಿಸಲಾಗಿದ್ದ ಕರ್ಫ್ಯೂವನ್ನು ಹಿಂತೆಗೆಯಲಾಗಿದೆ ಎಂದು. ನನಗೆ ತುಂಬಾ ಖುಷಿ ಆಯ್ತು. ಯಾಕೆ ಅಂದರೆ, ನನ್ನ ಇಂಗ್ಲಿಷ್ ಮೇಮ್ ವಾಸಿಸುತ್ತಿರುವುದೇ ಅಲ್ಲಿ. ಕರ್ಫ್ಯೂ ಹಿಂತೆಗೆಯುವುದರಿಂದ ಅವರು ಮತ್ತೆ ಶಾಲೆಗೆ ಬಂದು ಟೀಚ್ ಮಾಡಬಹುದಲ್ವೇ?
    ಜನವರಿ 4, ಆದಿತ್ಯವಾರ
    ಇವತ್ತು ರಜಾದಿನ. ಉದಾಸೀನ, ತಡವಾಗಿ 10 ಗಂಟೆಗೆ ಎದ್ದೆ. ಗ್ರೀನ್ ಚೌಕ್‍ನಲ್ಲಿ ಮೂವರ ಶವಗಳು ಬಿದ್ದಿರುವುದಾಗಿ ನನ್ನ ತಂದೆ ಹೇಳುತ್ತಿರುವುದನ್ನು ನಾನು ಕೇಳಿಸಿಕೊಂಡೆ. ಸುದ್ದಿ ಕೇಳಿ ತುಂಬಾ ಬೇಸರವಾಯ್ತು. ಮಿಲಿಟರಿ ಕಾರ್ಯಾಚರಣೆಗಿಂತ ಮೊದಲು ನಾವು ಮಾರ್ಘಾಝಾರ್, ಫಿಝಾ ಘಾಟ್, ಕನ್‍ಜುಗೆಲ್ಲಾ ರಜಾದಿನದಂದು ಪಿಕ್‍ನಿಕ್ ಹೋಗುತ್ತಿದ್ದೆವು. ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ಪಿಕ್‍ನಿಕ್‍ಗೆ ಹೋಗದೆ ಒಂದೂವರೆ ವರ್ಷಗಳಾದುವು. ಈ ಮೊದಲು ರಾತ್ರಿಯೂಟ ಆದ ಮೇಲೆ ನಾವು ನಡೆಯುತ್ತಿದ್ದೆವು. ಆದರೆ ಈಗ ಸೂರ್ಯ ಮುಳುಗಿದ ಕೂಡಲೇ ಮನೆಯೊಳಗೆ ಕೂರುತ್ತೇವೆ. ಇವತ್ತು ನಾನು ಸ್ವಲ್ಪ ಅಡುಗೆ ಕೆಲಸ ಮಾಡಿದೆ. ನನ್ನ ಹೋಮ್ ವರ್ಕನ್ನೂ ಮಾಡಿದೆ. ತಮ್ಮನ ಜೊತೆ ಆಡಿದೆ. ಆದರೆ ಮನಸ್ಸು ಮಾತ್ರ ಬೇಗನೇ ಬೆಳಗು ಆಗಲಿ, ಶಾಲೆಗೆ ಹೋಗಬೇಕು ಅನ್ನುತ್ತಲೇ ಇದೆ..
    ಜನವರಿ 3, ಶನಿವಾರ
    ನಿನ್ನೆ ನನಗೆ ಭಯಾನಕ ಕನಸು ಬಿತ್ತು. ತಾಲಿಬಾನ್ ಮತ್ತು ಮಿಲಿಟರಿ ಹೆಲಿಕಾಫ್ಟರುಗಳ ನಡುವೆ ಹೋರಾಟ. ಸ್ವಾತ್‍ನಲ್ಲಿ ಮಿಲಿಟರಿ ಕಾರ್ಯಾಚರಣೆ ಪ್ರಾರಂಭವಾದಂದಿನಿಂದ ನನಗೆ ಇಂಥ ಕನಸುಗಳು ಬೀಳುತ್ತಲೇ ಇವೆ. ತಾಯಿ ನನಗೆ ಉಪಹಾರ ಬಡಿಸಿದರು. ನಾನು ಸ್ಕೂಲಿಗೆ ಹೋದೆ. ನನಗೆ ಭಯಾನೂ ಆಯ್ತು. ಯಾಕೆಂದರೆ, ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಿ ತಾಲಿಬಾನ್ ಆದೇಶ ಹೊರಡಿಸಿದೆಯಲ್ಲ. ಆದ್ದರಿಂದಲೋ ಏನೋ, ಒಟ್ಟು 27 ವಿದ್ಯಾರ್ಥಿನಿಯರಲ್ಲಿ 11 ಮಂದಿ ಮಾತ್ರ ಶಾಲೆಗೆ ಬಂದಿದ್ದರು. ನನ್ನ ಮೂವರು ಗೆಳತಿಯರು ಪೇಶಾವರ್, ಲಾಹೋರ್ ಮತ್ತು ರಾವಲ್ಪಿಂಡಿಗಳಿಗೆ ವಾಸ ಬದಲಿಸಿದರು.
     ನಾನು ಶಾಲೆಯಿಂದ ಮನೆಗೆ ಮರಳುವ ಹಾದಿಯಲ್ಲಿ ಓರ್ವ ವ್ಯಕ್ತಿ, 'ನಾನು ನಿನ್ನನ್ನು ಕೊಲ್ಲುತ್ತೇನೆ' ಅನ್ನುವುದು ಕೇಳಿಸಿತು. ನಾನು ಭಯದಿಂದ ಮುಖ ಮುಚ್ಚಿಕೊಂಡೆ. ಸ್ವಲ್ಪ ನಂತರ ಆತ ಬರುತ್ತಿದ್ದಾನಾ ಅಂತ ತಿರುಗಿ ನೋಡಿದೆ. ಇಲ್ಲ, ನನಗೆ ಸಮಾ ಧಾನ ಆಯ್ತು. ನಿಜ ಏನೆಂದರೆ, ಆತ ಮೊಬೈಲ್‍ನಲ್ಲಿ ಯಾರಿಗೋ ಬೆದರಿಕೆ ಹಾಕ್ತಿದ್ದ..’
     ಕಳೆದ ಅಕ್ಟೋಬರ್ 9ರಂದು ತಾಲಿಬಾನ್‍ಗಳಿಂದ ಗುಂಡೇಟು ತಿಂದು ಚಿಂತಾಜನಕ ಸ್ಥಿತಿಯಲ್ಲಿರುವ ಪಾಕಿಸ್ತಾನದ 14ರ ಹುಡುಗಿ ಮಲಾಲ ಯೂಸುಫ್‍ಝಾಯಿಯ ಬರಹಗಳಿವು. 2009 ಜನವರಿ 3ರಂದು ತನ್ನ 11ರ ಪ್ರಾಯದಲ್ಲೇ ಬಿಬಿಸಿ ಉರ್ದುವಿಗಾಗಿ (ಆನ್‍ಲೈನ್) ಈಕೆ ಬರೆಯತೊಡಗುತ್ತಾಳೆ. ಉರ್ದುವಿನಲ್ಲಿ ಬ್ಲಾಗ್ ಪ್ರಾರಂಭಿಸುತ್ತಾಳೆ. ತಾಲಿಬಾನ್‍ಗಳ ಬಿಗಿ ಹಿಡಿತವಿದ್ದ ಸ್ವಾತ್ ಕಣಿವೆಯ ಬಗ್ಗೆ, ತನ್ನ ಸ್ಕೂಲು ದಿನಚರಿಯ ಬಗ್ಗೆ ಜಗತ್ತಿಗೆ ತಿಳಿಸತೊಡಗುತ್ತಾಳೆ. ಈ ಮಧ್ಯೆ ಪಾಕ್ ಸರಕಾರ ಕೈಗೊಂಡ ತಾಲಿಬಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಿಂದ ಮಲಾಲಳ ಕುಟುಂಬ ಸ್ವಾತ್ ಬಿಡಬೇಕಾಗಿ ಬರುತ್ತದೆ. ಅಪ್ಪ ಝೈದುದ್ದೀನ್ ಯೂಸುಫ್‍ಝಾಯಿ ಪೇಶಾವರಕ್ಕೆ ಬರುತ್ತಾರೆ. ಮಲಾಲ ಸಂಬಂಧಿಕರ ಮನೆಯಲ್ಲಿ ಬದುಕ ತೊಡಗುತ್ತಾಳೆ. ಆಕೆಯ ಕುರಿತಂತೆ ಡಾಕ್ಯುಮೆಂಟರಿ ತಯಾರಾಗುತ್ತದೆ. ಯೂಟ್ಯೂಬ್‍ನಲ್ಲಿ ಆಕೆಯ ಸಂದರ್ಶನ ಪ್ರಕಟವಾಗುತ್ತದೆ. ನನಗೆ ಕಲೀಬೇಕು, ಡಾಕ್ಟರ್ ಆಗಬೇಕು, ಕುರ್‍ಆನಿನಲ್ಲಿ  ಹೆಣ್ಣು ಮಕ್ಕಳು ಕಲೀಬಾರದು ಅಂತ ಎಲ್ಲೂ  ಇಲ್ಲವೇ ಇಲ್ಲ.. ಎಂದೆಲ್ಲಾ ಹೇಳುವ ಮಲಾಲನ್ನು ತಾಲಿಬಾನ್ ವಿರೋಧಿಯಂತೆ ಬಿಂಬಿಸಲಾಗುತ್ತದೆ. 2011 ಡಿಸೆಂಬರ್ 19ರಂದು ಪಾಕ್ ಸರಕಾರವು ಮಲಾಲಳಿಗೆ ಪ್ರಥಮ ರಾಷ್ಟ್ರೀಯ ಶಾಂತಿ ಪ್ರಶಸ್ತಿ ನೀಡುತ್ತದೆ. ಸ್ವಾತ್‍ನ ಮಿಶನ್ ರಸ್ತೆಯಲ್ಲಿರುವ ಸರಕಾರಿ ಗರ್ಲ್ಸ್  ಸೆಕೆಂಡರಿ ಸ್ಕೂಲ್‍ಗೆ ಮಲಾಲ ಯೂಸುಫ್‍ಝಾಯಿ ಗರ್ಲ್ಸ್  ಸ್ಕೂಲ್ ಎಂದು ಸರಕಾರ ನಾಮಕರಣ ಮಾಡುತ್ತದೆ. ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಯ  ಪಟ್ಟಿಯಲ್ಲೂ ಆಕೆಯ ಹೆಸರು ಸೇರ್ಪಡೆಗೊಳ್ಳುತ್ತದೆ. ನಿಜವಾಗಿ, ಧರ್ಮದ ಹೆಸರಲ್ಲಿ ತಮ್ಮದೇ ರೂಢಿ, ಸಂಪ್ರದಾಯ, ಆಚರಣೆಗಳನ್ನು ಸಮಾಜದ ಮೇಲೆ ಹೇರುವ ಸಂಕುಚಿತವಾದಿಗಳನ್ನು ಪ್ರಶ್ನಿಸುವ ಸಂಕೇತವಾಗಿ ಮಲಾಲ ಇವತ್ತು ಜಗತ್ತಿನ ಮುಂದಿದ್ದಾಳೆ. ಪಾಕಿಸ್ತಾನದ ಉದ್ದಗಲಕ್ಕೂ ಇದೇ ಮೊದಲ ಬಾರಿಗೆ ಭಾರೀ ಪ್ರತಿಭಟನೆ ಎದ್ದಿದೆ. ಮಗುವಿನ ಎದೆಗೆ ಬಂದೂಕು ಇಡುವ ಮನಸ್ಥಿತಿಯ ವಿರುದ್ಧ ವ್ಯಾಪಕ ಚರ್ಚೆಗಳಾಗುತ್ತಿವೆ. ತಾಲಿಬಾನ್‍ನ ಬಗ್ಗೆ ಮೃದು ನೀತಿ ಹೊಂದಿದ್ದವರನ್ನು ಕೂಡಾ ಮಲಾಲ ಪ್ರಕರಣ ಬದಲಿಸಿ ಬಿಟ್ಟಿದೆ. ಅಂದಹಾಗೆ, ಧರ್ಮದ ವೈಶಾಲ್ಯತೆಯನ್ನು ಒಪ್ಪದ, ತಮ್ಮ ನಿಲುವೇ ಅಂತಿಮ ಎಂದು ಹಠ ಹಿಡಿಯುವ ಮತ್ತು ಭಿನ್ನಾಭಿಪ್ರಾಯಕ್ಕೆ ಬಂದೂಕಿನಿಂದಲೇ ಉತ್ತರಿಸುವ ಧರ್ಮದ್ರೋಹಿಗಳಿಗೆ 14 ರ  ಮಲಾಲ ಆದರೇನು, 80 ರ ವಿದ್ವಾಂಸ ಆದರೇನು, ಎಲ್ಲರೂ ಒಂದೇ..
ಛೇ

Monday, October 8, 2012

ಅಧಿಕಾರ ಸಿಗುವುದಾದರೆ ಇವರು ಕಸಬ್ ಗೂ ಸ್ಮಾರಕ ಕಟ್ಟಲಾರರೆ?

ಬಿಂದ್ರನ್‍ವಾಲೆ
ಕುಲ್ ದೀಪ್ ಸಿಂಗ್ ಬ್ರಾರ್‍
        1984 ಜೂನ್ 5ರಂದು ಭಾರತೀಯ ಸೇನೆಯು ಆಪರೇಶನ್ ಬ್ಲೂಸ್ಟಾರ್ (Operation Blue Star) ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುತ್ತದೆ. ಪ್ರತ್ಯೇಕತಾವಾದಿಗಳ ಹಿಡಿತದಿಂದ ಸಿಕ್ಖರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರವನ್ನು ಬಿಡುಗಡೆಗೊಳಿಸುವುದು ಕಾರ್ಯಾಚರಣೆಯ ಉದ್ದೇಶವೆಂದು ಪ್ರಧಾನಿ ಇಂದಿರಾ ಗಾಂಧಿ ಘೋಷಿಸುತ್ತಾರೆ. ಜನರಲ್ ಎ.ಎಸ್. ವೈದ್ಯ ಮತ್ತು ಲೆಫ್ಟಿನೆಂಟ್ ಜನರಲ್ ಕುಲ್ ದೀಪ್ ಸಿಂಗ್ ಬ್ರಾರ್‍ರ ನೇತೃತ್ವದಲ್ಲಿ ನೂರಾರು ಯೋಧರು ಕಾರ್ಯಾಚರಣೆಗಿಳಿಯುತ್ತಾರೆ. ಜರ್ನೈಲ್ ಸಿಂಗ್ ಬಿಂದ್ರನ್‍ವಾಲೆ ಮತ್ತು ನಿವೃತ್ತ ಮೇಜರ್ ಜನರಲ್ ಶಾಹೆಬ್ ಸಿಂಗ್‍ರ ನೇತೃತ್ವದಲ್ಲಿ ಸ್ವರ್ಣ ಮಂದಿರದೊಳಗೆ ಅಡಗಿ ಕೂತಿದ್ದ ಪ್ರತ್ಯೇಕತಾವಾದಿಗಳು, ಸೇನೆಗೆ ತೀವ್ರ ಪ್ರತಿರೋಧ ಒಡ್ಡುತ್ತಾರೆ. ಟ್ಯಾಂಕ್, ಹೆಲಿಕಾಪ್ಟರ್, ಶಸ್ತ್ರಾಸ್ತ್ರ ವಾಹನಗಳು, ಆರ್ಟಿಲರಿಗಳನ್ನು ಕಾರ್ಯಾಚರಣೆಯ ವೇಳೆ ಸೇನೆ ಬಳಸಿಕೊಂಡರೆ, ಪ್ರತ್ಯೇಕತಾವಾದಿಗಳು ಮೆಶಿನ್ ಗನ್, ಕ್ಷಿಪಣಿಗಳು, ರಾಕೆಟ್ ಲಾಂಚರುಗಳನ್ನು ಬಳಸುತ್ತಾರೆ. ಒಂದು ರೀತಿಯಲ್ಲಿ ಸ್ವರ್ಣ ಮಂದಿರದೊಳಗೆ ಯುದ್ಧವೇ ನಡೆಯುತ್ತದೆ. ಜೂನ್ 3ರಿಂದ 36 ಗಂಟೆಗಳ ಕಾಲ ಇಡೀ ಪಂಜಾಬ್‍ನಲ್ಲೇ ಕಫ್ರ್ಯೂ ವಿಧಿಸಲಾಗಿದ್ದರೂ ಸಂಚಾರ, ವ್ಯಾಪಾರ-ವಹಿವಾಟುಗಳನ್ನು ನಿಷೇಧಿಸಲಾಗಿದ್ದರೂ ವಿದ್ಯುತ್ ಕಡಿತಗೊಳಿಸಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಸಿಕ್ಖರು ಚೌಕ್ ಮೆಹ್ತಾದಲ್ಲಿ, ಹರಿಕ್ ಪಟನ್‍ನಲ್ಲಿ ನೆರೆಯುತ್ತಾರೆ. ಈ ಮಧ್ಯೆ ಸ್ವರ್ಣ ಮಂದಿರದ ಆಸುಪಾಸಿನ ಹೊಟೆಲ್‍ಗಳಲ್ಲಿ ಉಳಕೊಂಡಿದ್ದ ಎಲ್ಲ ಪತ್ರಕರ್ತರನ್ನೂ ಜೂನ್ 5ರ ಬೆಳಿಗ್ಗೆ 5 ಗಂಟೆಗೆ ಮಿಲಿಟರಿ ವಾಹನದಲ್ಲಿ ಹರ್ಯಾಣಕ್ಕೆ ಸಾಗಿಸಿ ಅಲ್ಲಿ ಬಂಧಿಸಿಡಲಾಗುತ್ತದೆ. ಮಾಧ್ಯಮಗಳನ್ನು ಸಂಪೂರ್ಣ ಸೆನ್ಸಾರ್‍ಶಿಪ್‍ಗೆ ಒಳಪಡಿಸಲಾಗುತ್ತದೆ. ಹೀಗೆ ಹೊರ ಜಗತ್ತಿನಿಂದ ಪಂಜಾಬನ್ನು ಸಂಪೂರ್ಣ ಪ್ರತ್ಯೇಕಿಸಿ ನಡೆಸಲಾದ ಆ ಕಾರ್ಯಾಚರಣೆ ಜೂನ್ 7ರಂದು ಕೊನೆಗೊಳ್ಳುವಾಗ 700ರಷ್ಟು ಯೋಧರೇ ಸಾವಿಗೀಡಾಗಿರುತ್ತಾರೆ. ಬಿಂದ್ರನ್‍ವಾಲೆ, ಶಾಹೆಬ್ ಸಿಂಗ್ ಸಹಿತ 400ರಷ್ಟು ಉಗ್ರವಾದಿಗಳು ಹತ್ಯೆಗೊಳಗಾಗುತ್ತಾರೆ. ಇಷ್ಟಕ್ಕೂ ಸಾವಿಗೀಡಾದ ಸಿಕ್ಖರ ನಿಖರ ಸಂಖ್ಯೆ ಎಷ್ಟು, ಎಷ್ಟು ಮಂದಿ ಗಾಯ ಗೊಂಡರು, ಆ ಕಾರ್ಯಾಚರಣೆ ಹೇಗಿತ್ತು ಎಂಬುದನ್ನೆಲ್ಲಾ ಹೇಳುವುದಕ್ಕೆ ಅಲ್ಲಿ ಅಸೋಸಿಯೇಟೆಡ್ ಪ್ರೆಸ್‍ನ (AP) ವರದಿಗಾರ ಬ್ರಹ್ಮ ಚಲ್ಲಾನಿಯ ಹೊರತು ಇನ್ನಾರೂ ಇದ್ದರಲ್ಲವೇ? ಮಿಲಿಟರಿಯ ಕಣ್ತಪ್ಪಿಸಿ ಅವರು ಮಾಡಿದ ಅಷ್ಟಿಷ್ಟು ವರದಿಯನ್ನು ಮುಂದೆ ನ್ಯೂಯಾರ್ಕ್ ಟೈಮ್ಸ್, ದಿ ಟೈಮ್ಸ್ ಆಫ್ ಲಂಡನ್, ದಿ ಗಾರ್ಡಿಯನ್ ಪತ್ರಿಕೆಗಳೆಲ್ಲಾ ಮುಖಪುಟದಲ್ಲಿ ಪ್ರಕಟಿಸುತ್ತವೆ. ಶವಸಂಸ್ಕಾರ ಮಾಡಿದವರ ಪ್ರಕಾರ, ಒಟ್ಟು 3,300 ಮಂದಿ ಆ ಕಾರ್ಯಾಚರಣೆಯಲ್ಲಿ ಸಾವಿಗೀಡಾಗಿದ್ದಾರೆ. ಇಂದಿರಾ ಗಾಂಧಿಯವರ ಕುರಿತಂತೆ ಪುಸ್ತಕ ಬರೆದಿರುವ ಮಾರ್ಕ್ ಟುಲಿಯ ಪ್ರಕಾರ ಸತ್ತವರ ಸಂಖ್ಯೆ 2,093. ಆದರೂ,
          ಸಾವಿಗೀಡಾದ ಯೋಧರ ಬದಲು, ಪ್ರತ್ಯೇಕತಾವಾದಿಗಳ ಸ್ಮಾರಕಕ್ಕೆ ಶಿರೋಮಣಿ ಗುರುದ್ವಾರ್ ಪ್ರಬಂದಕ್ ಸಮಿತಿಯ (SGPC) ಮುಖ್ಯಸ್ಥ ಅವತಾರ್ ಸಿಂಗ್ ಮಕ್ಕರ್ 2012 ಮೇ 20ರಂದು ಅಡಿಗಲ್ಲು ಹಾಕುತ್ತಾರಲ್ಲ, ಬಿಂದ್ರನ್‍ವಾಲೆ ಸಾವಿಗೀಡಾದ ಸ್ಥಳದಲ್ಲೇ ಸ್ಮಾರಕ ನಿರ್ಮಾಣದ ಘೋಷಣೆ ಮಾಡುತ್ತಾರಲ್ಲ, ಪಂಜಾಬ್‍ನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್‍ರ ಸರಕಾರದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಸುಖ ಅನುಭವಿಸುತ್ತಿರುವ ಬಿಜೆಪಿಯೇಕೆ ಈ ಬಗ್ಗೆ ಈ ವರೆಗೆ ಮಾತಾಡಿಲ್ಲ? ಅಖಂಡ ಭಾರತ, ದೇಶಭಕ್ತಿ, ಮಾತೃಭೂಮಿ.. ಎಂದೆಲ್ಲಾ ಗಂಟೆಗಟ್ಟಲೆ ಭಾವಪರವಶವಾಗಿ ಮಾತಾಡುವ ಬಿಜೆಪಿ ನಾಯಕರೆಲ್ಲಾ ತುಟಿ ಬಿಚ್ಚುತ್ತಿಲ್ಲವೇಕೆ? ಅಧಿಕಾರದ ಎದುರು ಯೋಧರ ಸಾವೂ ನಗಣ್ಯವಾಯಿತೇ? ಒಂದು ವೇಳೆ ಸ್ಮಾರಕ ರಚನೆಯ ವಿರುದ್ಧ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್‍ರ ಮೇಲೆ ಬಿಜೆಪಿ ಒತ್ತಡ ಹಾಕುತ್ತಿದ್ದರೆ, ಅವರು ಸ್ಮಾರಕ ರಚನೆಯನ್ನು ತಡೆ ಹಿಡಿಯುವುದಕ್ಕೆ ಸಾಧ್ಯವಿತ್ತಲ್ಲವೇ? ಇಷ್ಟಕ್ಕೂ, ಪ್ರತ್ಯೇಕ ಕಾಶ್ಮೀರಕ್ಕಾಗಿ ಹೋರಾಡಿ ಮಡಿದ ಪ್ರತ್ಯೇಕತಾವಾದಿಗಳ ಸ್ಮಾರಕಕ್ಕಾಗಿ ಮೀರ್‍ವೈಝ್ ಉಮ್ಮರ್ ಫಾರೂಖೋ, ಅಲೀಷಾ ಗೀಲಾನಿಯೋ ಅಥವಾ ಇನ್ನಾರೋ ಕಾಶ್ಮೀರದ ಹಝ್ರತ್ ಬಾಲ್ ಮಸೀದಿ ಬಿಡಿ, ಅಲ್ಲಿನ ಯಾರದಾದರೂ ಖಾಸಗಿ ಭೂಮಿಯಲ್ಲಿ ಅಡಿಗಲ್ಲು ಹಾಕುತ್ತಿದ್ದರೂ ಬಿಜೆಪಿಯ ನಿಲುವು ಹೀಗೆಯೇ ಇರುತ್ತಿತ್ತೇ? ಅಡಿಗಲ್ಲು ಹಾಕಿದ ದೇಶದ್ರೋಹಿಗಳನ್ನು ಬಂಧಿಸಿ ಎಂದು ಅದು ಕರೆ ಕೊಡುತ್ತಿರಲಿಲ್ಲವೇ? ಬಿಜೆಪಿಯ ತೀರಾ ಗ್ರಾಮ ಮಟ್ಟದ ನಾಯಕನೂ, ಕಾಶ್ಮೀರದಲ್ಲಿ ಸಾವಿಗೀಡಾಗುತ್ತಿರುವ ಯೋಧರ ಬಗ್ಗೆ, ಅದರಿಂದಾಗಿ ಅನಾಥರಾಗಿರುವ ಅವರ ಪತ್ನಿ, ಮಕ್ಕಳ ಬಗ್ಗೆ, ಪ್ರತ್ಯೇಕತಾವಾದಿಗಳ ಕ್ರೌರ್ಯದ ಬಗ್ಗೆ... ಮನ ಕಲಕುವ ವಿವರಣೆಯೊಂದಿಗೆ ಭಾಷಣ ಮಾಡುತ್ತಿರಲಿಲ್ಲವೇ?
        ಆಪರೇಶನ್ ಬ್ಲೂಸ್ಟಾರ್ ಕಾರ್ಯಾಚರಣೆಯ ನೇತೃತ್ವ ವಹಿಸಿ, ನಿವೃತ್ತಿಯಾಗಿ ಇದೀಗ ಮುಂಬೈಯಲ್ಲಿ ಬಿಗು ಭದ್ರತೆಯೊಂದಿಗೆ ವಾಸವಾಗಿರುವ ಕೆ.ಎಸ್. ಬ್ರಾರ್‍ರ ಮೇಲೆ ಮೊನ್ನೆ ಸೆ. 30ರಂದು ಲಂಡನ್ನಿನ ಆಕ್ಸ್‍ಫರ್ಡ್ ರಸ್ತೆಯಲ್ಲಿ ದಾಳಿ ನಡೆಯಿತು. ನಿಜವಾಗಿ, ಸ್ಮಾರಕ ರಚನೆ ಸುದ್ದಿಗೊಳಗಾದದ್ದೇ ಆ ಬಳಿಕ.
       1980ರ ಬಳಿಕ ಪಂಜಾಬ್‍ನಲ್ಲಿ ತಲೆ ಎತ್ತಿದ ಪ್ರತ್ಯೇಕತಾವಾದಕ್ಕೂ ಬಿಂದ್ರನ್ ವಾಲೆಗೂ ನಿಕಟ ಸಂಬಂಧ ಇದೆ. ಮಾತ್ರವಲ್ಲ, ಬಿಂದ್ರನ್ ವಾಲೆಯನ್ನು ಮತ್ತು ಆ ಮುಖಾಂತರ ಪ್ರತ್ಯೇಕತಾವಾದವನ್ನು ವಿರೋಧಿಸುವುದಕ್ಕೆ ಬಿಜೆಪಿಗೆ ಅದಕ್ಕಿಂತಲೂ ಹೆಚ್ಚು ಕಾರಣಗಳಿವೆ. ಸಿಕ್ಖರ ಧಾರ್ಮಿಕ ಗುಂಪಾದ ದಮ್‍ದಾಮಿ ತಕ್ಸಲ್‍ನ 14ನೇ ಮುಖಂಡನಾಗಿದ್ದ ಬಿಂದ್ರನ್‍ವಾಲೆ, ಸಿಕ್ಖರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುವುದಕ್ಕಾಗಿ ಮನೆ ಮನೆಗೆ ಭೇಟಿ ನೀಡಿದ. ಮದ್ಯ ವರ್ಜಿಸುವಂತೆ, ಅನೈತಿಕತೆಯಲ್ಲಿ ಪಾಲುಗೊಳ್ಳದಂತೆ ಕರೆಕೊಟ್ಟ. ಸಿಕ್ಖ್ ಯುವಕರು ಕೂದಲು ಕತ್ತರಿಸದಂತೆ ಮತ್ತು ಗಡ್ಡ ಬಿಡುವಂತೆ ಜಾಗೃತಿ ಮೂಡಿಸತೊಡಗಿದ. ಸಿಕ್ಖರು, ಬೌದ್ಧರು, ಜೈನರಂಥ ಅಲ್ಪಸಂಖ್ಯಾತ ವಿಭಾಗಗಳನ್ನು ಹಿಂದೂ ಧರ್ಮದಲ್ಲಿ ಸೇರಿಸುವ ಸಂವಿಧಾನದ 25ನೇ ಪರಿಚ್ಛೇದವನ್ನು ಬಲವಾಗಿ ಖಂಡಿಸಿದ. ಎಲ್ಲ ಹಿಂದೂಗಳು ಪಂಜಾಬ್ ಬಿಟ್ಟು ತೆರಳಬೇಕು ಎಂದು 1983 ನವೆಂಬರ್ 17ರಂದು ಆಗ್ರಹಿಸಿದ. ಅಲ್ಲದೇ ಪಂಜಾಬಿನಲ್ಲಿರುವ ಹಿಂದೂ ಶಾಲೆಗಳಲ್ಲಿ ಪಂಜಾಬ್ ಭಾಷೆಯನ್ನು ಹೇರುವಂತೆ 1980ರಲ್ಲಿ ಅಭಿಯಾನ ನಡೆಯುತ್ತಿತ್ತು. ಪಂಜಾಬ್ ನಲ್ಲಿ ಜನಪ್ರಿಯವಾಗಿದ್ದ ಹಿಂದ್ ಸಮಾಚಾರ್ ಪತ್ರಿಕೆಯ ಸಂಪಾದಕ ಜಗತ್ ನಾರಾಯಣ್‍ರು ಪಂಜಾಬಿ ಹೇರಿಕೆಯ ವಿರುದ್ಧ ಬರೆದರಲ್ಲದೆ, ಜನಗಣತಿಯ ವೇಳೆ ಎಲ್ಲ ಹಿಂದೂಗಳೂ ತಮ್ಮ ತಾಯಿ ಭಾಷೆಯಾಗಿ ಪಂಜಾಬಿಯ ಬದಲು ಹಿಂದಿಯನ್ನು ದಾಖಲಿಸುವಂತೆ ಕರೆಕೊಟ್ಟರು. ಅಷ್ಟೇ ಅಲ್ಲ, ಆನಂದ್‍ಪುರ್ ಸಾಹಿಬ್ ನಿರ್ಣಯವನ್ನೂ ಖಂಡಿಸಿದರು. ನಿಜವಾಗಿ, ಆನಂದ್‍ಪುರ್ ಸಾಹಿಬ್ ನಿರ್ಣಯವನ್ನು ಅಕಾಲಿ ದಳವು ತನ್ನ ರಾಜಕೀಯ ಲಾಭಕ್ಕಾಗಿಯೇ ತಯಾರಿಸಿತ್ತು. ಅಕಾಲಿದಳದೊಂದಿಗೆ ಬಿಂದ್ರನ್‍ವಾಲೆ ಕೈ ಜೋಡಿಸಿ ನಿರ್ಣಯದ ಜಾರಿಗಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದರು. ಹಾಗಂತ ಈ ನಿರ್ಣಯ ಕೈಗೊಳ್ಳುವುದಕ್ಕೂ ಒಂದು ಕಾರಣ ಇದೆ. ಪಂಜಾಬ್‍ನಲ್ಲಿ 1966ರಲ್ಲಿ ಅಕಾಲಿದಳವು ಅಧಿಕಾರಕ್ಕೆ ಬರುತ್ತದೆ. ಆದರೆ 1971ರ ಲೋಕಸಭಾ ಚುನಾವಣೆಯಲ್ಲಿ ಅದರ ಜನಪ್ರಿಯತೆ ಎಷ್ಟು ಕೆಳಮಟ್ಟ ಕ್ಕಿಳಿಯುತ್ತದೆಂದರೆ ಒಟ್ಟು 13 ಲೋಕಸಭಾ ಸ್ಥಾನಗಳಲ್ಲಿ 1 ಸ್ಥಾನವನ್ನಷ್ಟೇ ಪಡೆಯುತ್ತದೆ. 1972 ಮಾರ್ಚ್‍ನಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ 117ರಲ್ಲಿ 24 ಸ್ಥಾನಗಳನ್ನಷ್ಟೇ ಪಡೆಯಲು ಅದು ಶಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಕಾಲಿದಳವು ಸಭೆ ಸೇರುತ್ತದಲ್ಲದೇ 1972 ಡಿ. 11ರಂದು 12 ಮಂದಿಯ ಉಪಸಮಿತಿಯನ್ನು ರಚಿಸಿ ಸೋಲಿನ ಕುರಿತಂತೆ ಅವಲೋಕಿಸಲು ಮತ್ತು ಮುಂದಿನ ಕಾರ್ಯಯೋಜನೆಯ ಬಗ್ಗೆ ಮಾರ್ಗಸೂಚಿಯನ್ನು ತಯಾರಿಸಲು ಸಮಿತಿಯೊಂದಿಗೆ ಕೇಳಿ ಕೊಳ್ಳುತ್ತದೆ. ಹಾಗೆ, 1975ರಲ್ಲಿ ಆನಂದ್‍ಪುರ್ ಸಾಹಿಬ್ ನಿರ್ಣಯ ಮಂಡನೆಯಾಗುತ್ತದೆ. ಒಂದು ರೀತಿಯಲ್ಲಿ ಪಂಜಾಬಿ ಭಾಷಿಕರನ್ನೆಲ್ಲ ಒಂದೆಡೆ ಸೇರಿಸುವ, ಹರ್ಯಾಣವನ್ನು ಪಂಜಾಬ್‍ನಲ್ಲಿ ಲೀನಗೊಳಿಸುವ.. ಮುಂತಾದ 12 ಅಂಶಗಳನ್ನು ಒಳಗೊಂಡ ಠರಾವು, ಪ್ರತ್ಯೇಕತಾ ವಾದಕ್ಕೆ ಇಂಬು ನೀಡುತ್ತದೆ ಎಂಬ ಆರೋಪಕ್ಕೊಳಗಾಗುತ್ತದೆ. ಆದ್ದರಿಂದಲೇ ಈ ಠರಾವನ್ನು ವಿರೋಧಿಸಿದ ಹಿಂದ್ ಸಮಾಚಾರ್‍ನ ಸಂಪಾದಕರನ್ನು 1981 ಸೆ. 9ರಂದು ಹತ್ಯೆ ಮಾಡಲಾಗುತ್ತದೆ. ಬಿಂದ್ರನ್‍ವಾಲೆಯ ಆದೇಶದಂತೆ ತಾನು ನಾರಾಯಣ್‍ರನ್ನು ಕೊಂದಿದ್ದೇನೆ ಎಂದು ಬಂಧಿತ ಆರೋಪಿ ನಚಾತರ್ ಸಿಂಗ್ ಹೇಳಿದರೂ ದೇಶದ ಗೃಹಮಂತ್ರಿಯಾಗಿದ್ದ ಗ್ಯಾನಿ ಜೈಲ್ ಸಿಂಗ್‍ರ ಕೃಪೆಯಿಂದ ಬಿಂದ್ರನ್‍ವಾಲೆ ಬಚಾವಾಗುತ್ತಾನೆ. ಹೀಗಿದ್ದೂ,
ಬಿಂದ್ರನ್‍ವಾಲೆ ಮತ್ತು ಆತನ ಪ್ರತ್ಯೇಕತಾವಾದಿ ಬೆಂಬಲಿಗರ ಸ್ಮಾರಕದ ಬಗ್ಗೆ ಬಿಜೆಪಿ ಮೌನವಾಗಿರುವುದೇಕೆ? ದೇಶವೇ ಮುಖ್ಯ, ಉಳಿದೆಲ್ಲವೂ ಅಮುಖ್ಯ ಎಂಬ ಸ್ಲೋಗನ್ನನ್ನು ಅವಕಾಶ ಸಿಕ್ಕಾಗಲೆಲ್ಲಾ ಉದುರಿಸುವ ಬಿಜೆಪಿಯೇಕೆ ದೇಶಕ್ಕಿಂತ ಅಧಿಕಾರವನ್ನೇ ಆಯ್ಕೆ ಮಾಡಿಕೊಂಡಿದೆ? ಹೀಗಿರುತ್ತಾ, ಒಂದು ವೇಳೆ ಅಧಿಕಾರ ಸಿಗುವುದಾದರೆ ಬಿಂದ್ರನ್‍ವಾಲೆ ಬಿಡಿ, ಕಸಬ್‍ಗೂ ಸ್ಮಾರಕ ರಚಿಸುವುದಕ್ಕೆ ಅದು ಮುಂದಾಗಲಾರದೆಂದು ಹೇಳಲು ಸಾಧ್ಯವೇ?
        ನಿಜವಾಗಿ, ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಪಾಲುಗೊಂಡ 6 ಮಂದಿ ಕಮಾಂಡರ್‍ಗಳಲ್ಲಿ ಬ್ರಾರ್ ಸೇರಿದಂತೆ ನಾಲ್ವರೂ ಸಿಕ್ಖರೇ. ಆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಸಿಕ್ಖರ ಒಂದು ಗುಂಪಿನ ತೀವ್ರ ವಿರೋಧಕ್ಕೆ ಗುರಿಯಾಗುತ್ತಾರೆ. ಸೇನೆಯಲ್ಲೂ ಒಂದು ಹಂತದ ಬಂಡಾಯ ಏರ್ಪಡುತ್ತದೆ. ಹಲವಾರು ಮಂದಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಡುತ್ತಾರೆ. ಸರಕಾರ ನೀಡಿದ ಪದಕಗಳನ್ನು ಹಿಂತಿರುಗಿಸುತ್ತಾರೆ. ಪ್ರತ್ಯೇಕತಾವಾದಕ್ಕೆ ಬೆಂಬಲ ನೀಡುತ್ತಿದ್ದ ಬಿಂದ್ರನ್ ವಾಲೆಯ ದಮ್‍ದಾಮಿ ತಕ್ಸಲ್, ಅಮರ್‍ಜಿತ್ ಕೌರ್ ಸ್ಥಾಪಿಸಿದ ಬಬ್ಬರ್ ಖಾಲ್ಸಾ, ದಲ್‍ಖಾಲ್ಸಾಗಳ ಹಿಟ್‍ಲಿಸ್ಟ್‍ನಲ್ಲಿ ಇವರೆಲ್ಲರ ಹೆಸರು ಸೇರ್ಪಡೆಯಾಗುತ್ತದೆ. ಈ ಮಧ್ಯೆ ಬ್ಲೂಸ್ಟಾರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಇನ್ನೋರ್ವ ಜನರಲ್ ಎ.ಎಸ್. ವೈದ್ಯರನ್ನು 1986ರಲ್ಲಿ ಹರ್‍ಜಿಂದರ್ ಸಿಂಗ್ ಜಿಂಟಾ ಮತ್ತು ಸುಖ್‍ದೇವ್ ಸಿಂಗ್ ಸುಖಾ ಎಂಬಿಬ್ಬರು ಪುಣೆಯಲ್ಲಿ ಹತ್ಯೆ ಮಾಡುತ್ತಾರೆ. ಅವರಿಬ್ಬರಿಗೂ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದಲ್ಲದೇ 1992 ಅಕ್ಟೋಬರ್ 7ರಂದು ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತದೆ. ಒಂದು ರೀತಿಯಲ್ಲಿ, ಕಾರ್ಯಾಚರಣೆಯಲ್ಲಿ ಯಾರೆಲ್ಲ ಭಾಗವಹಿಸಿದ್ದರೋ ಅವರೆಲ್ಲ ಜೀವ ಭಯದಿಂದ ಬದುಕುವಂಥ ಸ್ಥಿತಿಯೊಂದು ಈ ದೇಶದಲ್ಲಿ ನಿರ್ಮಾಣವಾಗಿ ಬಿಡುತ್ತದೆ. ಲಂಡನ್‍ನಲ್ಲಿದ್ದ ಬ್ರಾರ್‍ರ ಚಿಕ್ಕಪ್ಪ, ಬ್ರಾರ್‍ರೊಂದಿಗೆ ಮಾತನ್ನೇ ಬಿಟ್ಟು ಬಿಡುತ್ತಾರೆ. ನಮ್ಮ ಪವಿತ್ರ ಕ್ಷೇತ್ರದ ಮೇಲೆ ಕಾರ್ಯಾಚರಣೆ ಮಾಡಿದ ನಿನ್ನೊಂದಿಗೆ ನನ್ನ ಸಂಬಂಧ ಮುರಿದಿದೆ ಅನ್ನುತ್ತಾರೆ. ಆವರೆಗೆ ಬಹುತೇಕ ನಾಸ್ತಿಕರಂತಿದ್ದ ಚಿಕ್ಕಪ್ಪ, ಈ ಕಾರ್ಯಾಚರಣೆಯ ಬಳಿಕ ಪಕ್ಕಾ ಆಸ್ತಿಕರಾಗಿ ಬದಲಾಗುತ್ತಾರೆ. ಪಬ್‍ಗೆ ಹೋಗುತ್ತಿದ್ದ, ಧೂಮಪಾನ ಮಾಡುತ್ತಿದ್ದ ಅವರು ಬ್ಲೂಸ್ಟಾರ್‍ನ ಬಳಿಕ ಉದ್ದ ಕೂದಲು ಬೆಳೆಸುತ್ತಾರಲ್ಲದೇ ಗಡ್ಡ ಬಿಡುತ್ತಾರೆ. ಖಾಲಿಸ್ತಾನ್ ಪರ ನಡೆಯುತ್ತಿದ್ದ ಸಭೆಗಳಲ್ಲಿ ಭಾಗವಹಿಸತೊಡಗುತ್ತಾರೆ. ಅಂದಹಾಗೆ 1990ರಲ್ಲಿ, 'ಆಪರೇಶನ್ ಬ್ಲೂಸ್ಟಾರ್: ದ ಟ್ರೂ ಸ್ಟೋರಿ' ಎಂಬ ಕೃತಿ ಯನ್ನು ಬ್ರಾರ್ ಬರೆಯದೇ ಇರುತ್ತಿದ್ದರೆ, ಅವರೇಕೆ ಆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು ಮತ್ತು ಬಿಂದ್ರನ್‍ವಾಲೆ ಏನಾಗಿದ್ದ ಎಂಬುದು ಜಗತ್ತಿಗೆ ಗೊತ್ತೂ ಆಗುತ್ತಿರಲಿಲ್ಲ. ಅಷ್ಟಕ್ಕೂ,
         1992 ಮಾರ್ಚ್ 20ರಂದು ಆನಂದ್‍ಪುರ್ ಸಾಹಿಬ್‍ನಲ್ಲಿ ನಡೆದ ಸಭೆಯಲ್ಲಿ ಪ್ರತ್ಯೇಕ ಖಲಿಸ್ತಾನ್ ರಾಷ್ಟ್ರದ  ಬಾವುಟ ಹಾರಿಸಿದ್ದ ದಲ್ ಖಾಲ್ಸಾಕ್ಕೂ ಬಿಂದ್ರನ್‍ವಾಲೆಗೂ ಆಪ್ತ ಸಂಬಂಧ ಇತ್ತು ಎಂಬುದು ಬಿಜೆಪಿಗೆ ಗೊತ್ತಿಲ್ಲವೇ? 2003 ಜೂನ್ 5ರಂದು ಇದೇ ಬಿಂದ್ರನ್‍ವಾಲೆಗೆ ಶಿರೋಮಣಿ ಗುರುದ್ವಾರ್ ಪ್ರಬಂದಕ್ ಸಮಿತಿ (SGPC)ಯ ಮುಖ್ಯಸ್ಥರಾದ ಜೋಗಿಂದರ್ ಸಿಂಗ್ ವೇದಾಂತಿ ಹುತಾತ್ಮ ಪಟ್ಟ ಕಟ್ಟಿದ್ದು, ಬಿಂದ್ರನ್‍ವಾಲೆಯ ಮಗ ಇಶಾರ್ ಸಿಂಗ್‍ನನ್ನು ಅಖಾಲ್ ತಖ್ತ್‍ಗೆ ಕರೆಸಿ ಹುತಾತ್ಮ ಪದವಿ ಪ್ರದಾನ ಮಾಡಿದ್ದನ್ನೆಲ್ಲಾ (ಟೈಮ್ಸ್ ಆಫ್ ಇಂಡಿಯಾ 2003 ಜೂನ್ 6) ಬಿಜೆಪಿಯೇಕೆ ಪ್ರಶ್ನಿಸಿಲ್ಲ? ಅಧಿಕಾರಕ್ಕಾಗಿ ಅದು ದೇಶನಿಷ್ಠೆಯೊಂದಿಗೂ ರಾಜಿ ಮಾಡಿಕೊಳ್ಳುವಷ್ಟು ಕೆಳಮಟ್ಟಕ್ಕೆ ಇಳಿದು ಬಿಟ್ಟಿದೆಯೇ? ಕಾರ್ಗಿಲ್ ದಿನಾಚರಣೆ ಬಂದಾಗಲೆಲ್ಲಾ ಬಿಜೆಪಿ ಪರ ಪತ್ರಕರ್ತರು, ಅಂಕಣಗಾರರೆಲ್ಲಾ ಯೋಧರನ್ನು ಪ್ರಶಂಸಿಸಿ, ಅವರ ಪ್ರಾಣ ತ್ಯಾಗವನ್ನು ಕೊಂಡಾಡಿ ಪತ್ರಿಕೆಗಳ ತುಂಬಾ ಬರೆಯುತ್ತಾರೆ. ಅಸ್ಸಾಮ್‍ನಲ್ಲಿ ನಡೆಯುತ್ತಿರುವ ಜನಾಂಗ ನಿರ್ಮೂಲನವನ್ನು ಖಂಡಿಸಿ ಮುಂಬೈಯಲ್ಲಿ ತಿಂಗಳ ಹಿಂದೆ ನಡೆದ ಪ್ರತಿಭಟನೆಯಲ್ಲಿ ಯೋಧರ ಸ್ಮಾರಕಕ್ಕೆ ಹಾನಿ ಮಾಡಿದ್ದನ್ನು ಎತ್ತಿಕೊಂಡು ಮುಸ್ಲಿಮರನ್ನು ನಿಂದಿಸುವುದಕ್ಕೂ ಆ ಮೂಲಕ ಯೋಧರ ಬಗ್ಗೆ ತಮಗಿರುವ ಅಪಾರ ಗೌರವವನ್ನು ವ್ಯಕ್ತಪಡಿಸುವುದಕ್ಕೂ ಕೆಲವು ಬಿಜೆಪಿ ಪ್ರೇಮಿಗಳು ಬಳಸಿಕೊಂಡಿದ್ದರು. ಆದರೆ ಆ ದೇಶ ಪ್ರೇಮ ಪಂಜಾಬ್‍ನಲ್ಲೇಕೆ ಕಾಣಿಸುತ್ತಿಲ್ಲ? ಬಿಜೆಪಿಯ ದೇಶಭಕ್ತರಲ್ಲಿ ಈ ಬಗೆಯ ದ್ವಂದ್ವವೇಕೆ?
      ಹಾಗಂತ, ಬ್ಲೂಸ್ಟಾರ್ ಕಾರ್ಯಾಚರಣೆಯನ್ನೋ ಅದಕ್ಕೆ ಆದೇಶ ನೀಡಿದ ಇಂದಿರಾ ಗಾಂಧಿಯನ್ನೋ ಸಮರ್ಥಿಸುವುದು ಈ ಲೇಖನದ ಉದ್ದೇಶ ಖಂಡಿತ ಅಲ್ಲ.


Monday, October 1, 2012

ಇವರನ್ನೇ ದೇಶದ್ರೋಹಿಯಾಗಿಸಲು ಸಾಧ್ಯವಿರುವಾಗ, ಉಳಿದವರ ಬಗ್ಗೆ ಹೇಳುವುದಾದರೂ ಏನು?


ನಂಬಿ ನಾರಾಯಣನ್
          28 ವರ್ಷಗಳ ಕಾಲ ಪತ್ನಿ, ಮಕ್ಕಳಿಗೆ ಸಮಯವನ್ನು ಕೊಡದೆ ದೇಶಕ್ಕಾಗಿ, ಇಸ್ರೋದ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ISRO) ಅಭಿವೃದ್ಧಿಗಾಗಿ ದಣಿವರಿಯದೇ ದುಡಿದ ನನ್ನನ್ನೇ ದೇಶದ್ರೋಹಿ ಅಂದರಲ್ಲ, ಅವರನ್ನು ಹೇಗೆ ಸಹಿಸಿಕೊಳ್ಳುವುದು? ದುಡ್ಡಿಗಾಗಿ ದೇಶವನ್ನೇ ಮಾರಿದ ವಂಚಕ ಅಂದದ್ದನ್ನು ಹೇಗೆ ಜೀರ್ಣಿಸಿಕೊಳ್ಳುವುದು? ಪೊಲೀಸರನ್ನು ಬಿಡಿ, ಮಾಧ್ಯಮಗಳು ಬರೆದಿದ್ದಾದರೂ ಏನು? ದೇಶದ್ರೋಹಿ, ವಂಚಕ, ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡಿದವ, ಕಳ್ಳ.. ಎಂಬೆಲ್ಲಾ ಪದಗುಚ್ಛಗಳನ್ನು ಅವು ಎಷ್ಟು ಬಾರಿ ಪ್ರಯೋಗಿಸಿಲ್ಲ? ಹಾಗೆಲ್ಲ ಬರೆಯುವಾಗ ನಿಜವಾಗಿಯೂ ನಾನು ಆ ಪದಗಳಿಗೆ ಅರ್ಹನೇ ಎಂದು ಅವು ಆಲೋಚಿಸದಿದ್ದುದೇಕೆ? ಅಷ್ಟಕ್ಕೂ, ನಾನೇನೂ ಅಪರಿಚಿತ ವ್ಯಕ್ತಿ ಅಲ್ಲವಲ್ಲ. ಇಸ್ರೋದಲ್ಲಿ 28 ವರ್ಷಗಳಿಂದ ಕೆಲಸ ಮಾಡುತ್ತಿರುವ, ಎ.ಪಿ.ಜೆ. ಕಲಾಮ್‍ರ ಜೊತೆ ದುಡಿದಿರುವ ಮತ್ತು ಆವರೆಗೆ ಒಂದೇ ಒಂದು ಆರೋಪವೂ ಇರದ ವ್ಯಕ್ತಿತ್ವವನ್ನು ಅಷ್ಟು ಪಕ್ಕನೆ ದೇಶದ್ರೋಹಿ ಎಂದು ಮುದ್ರೆಯೊತ್ತುವುದಕ್ಕೆ ಮಾಧ್ಯಮಗಳಿಗೆ ಮನಸಾದರೂ ಹೇಗೆ ಬಂತು? ವಿಚಾರಣೆಯ ಹೆಸರಲ್ಲಿ ಮಾಧ್ಯಮಗಳಲ್ಲಿ ದಿನಂಪ್ರತಿ ಬರುತ್ತಿದ್ದ ಸುದ್ದಿಗಳ ಹಿಂದೆ ಯಾರಿದ್ದರು? ಅವರ ಉದ್ದೇಶ ಏನಿತ್ತು? ಚಿಕ್ಕಂದಿನಲ್ಲಿ ನನ್ನ ಅಮ್ಮ ಚಂದ್ರನನ್ನು ತೋರಿಸಿ, ನೀನು ಊಟ ಮಾಡಿದರೆ ಆ ಚಂದ್ರನನ್ನು ಕೊಡುವೆ ಎಂದು ಆಸೆ ಹುಟ್ಟಿಸುತ್ತಿದ್ದರು. ದೊಡ್ಡವನಾದ ಮೇಲೆ ನಾನೇ ಒಂದು ದಿನ ಅಮ್ಮನ ಹೆಗಲು ಮುಟ್ಟಿ, ಆ ಚಂದ್ರನನ್ನು ನಿನಗೆ ನಾನು ಕೊಡುವೆ ಅಂದಿದ್ದೆ. ಚಂದ್ರನ ಬಗ್ಗೆ, ಆಕಾಶಕಾಯಗಳ ಬಗ್ಗೆ ನನ್ನಲ್ಲಿ ಅಷ್ಟೊಂದು ಕುತೂಹಲ ಇತ್ತು. ಈ ದೇಶದ ರಾಕೆಟ್‍ಗಳನ್ನು ಆಕಾಶಕ್ಕೆ ಉಡಾಯಿಸುವ ಕ್ರಯೋಜನಿಕ್ ಎಂಜಿನ್‍ಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ನಾನೇ ಆ ಎಂಜಿನ್‍ಗಳ ರಹಸ್ಯವನ್ನು 'ಶತ್ರು'ಗಳಿಗೆ ಮಾರಾಟ ಮಾಡಿರುವೆನೆಂದು ಹೇಳಿದವರಿಗೆ ಯಾವ ಶಿಕ್ಷೆಯಿದೆ? ಇಸ್ರೋದ ಹೆಮ್ಮೆಯ ವಿಜ್ಞಾನಿ ಎಂಬ ಪಟ್ಟದಿಂದ ದೇಶದ್ರೋಹಿ ವಿಜ್ಞಾನಿ ಎಂಬ ಪಟ್ಟಕ್ಕೆ ಇಳಿಸಿದ ವ್ಯಕ್ತಿಗಳಿಗೆ ಯಾಕೆ ಒಂದು ದಿನದ ಮಟ್ಟಿಗಾದರೂ ಶಿಕ್ಷೆಯಾಗಿಲ್ಲ? ನನಗಾದ ಅವಮಾನ, ಸಂಕಟ, ಬೇಗುದಿಗಳನ್ನು ಆರೋಪ ಹೊರಿಸಿದವರು, ಅದನ್ನು ರಸವತ್ತಾದ ಕತೆಯಾಗಿಸಿ ಮಾರಾಟ ಮಾಡಿದವರೆಲ್ಲ ಹಂಚಿಕೊಳ್ಳಲು ಸಿದ್ಧರಿದ್ದಾರಾ? ಅಮೇರಿಕದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದ 25 ವಿದ್ಯಾರ್ಥಿಗಳಲ್ಲಿ ಮೊದಲಿಗನಾಗಿ ನಾನು ತೇರ್ಗಡೆಗೊಂಡಾಗ ಅಮೇರಿಕವೇ ಪ್ರಭಾವಿತಗೊಂಡಿತ್ತು. ನಾಸಾದಲ್ಲಿ (ಅಮೇರಿಕದ ಬಾಹ್ಯಾಕಾಶ ಸಂಸ್ಥೆ) ಉದ್ಯೋಗದ ಭರವಸೆ ನೀಡಿತ್ತಲ್ಲದೆ, ಅಮೇರಿಕನ್ ಪೌರತ್ವದ ಆಮಿಷವನ್ನೂ ಒಡ್ಡಿತ್ತು. ಅವೆಲ್ಲವನ್ನೂ ತಿರಸ್ಕರಿಸಿ ಇಸ್ರೋದಲ್ಲೇ ಮುಂದುವರಿಯಲು ತೀರ್ಮಾನಿಸಿದ ನಾನು ದೇಶದ್ರೋಹಿಯಾದೇನೇ? ದುಡ್ಡಿಗಾಗಿ ದೇಶದ ರಹಸ್ಯಗಳನ್ನು ಮಾರಲು ಮುಂದಾದೇನೇ..
          ಹಾಗಂತ, ಈ ದೇಶದ ಪ್ರಮುಖ ವಿಜ್ಞಾನಿಗಳಲ್ಲಿ ಓರ್ವರೆಂದು ಗುರುತಿಸಿಕೊಂಡಿರುವ ನಂಬಿ ನಾರಾಯಣನ್ ಪ್ರಶ್ನಿಸುತ್ತಾ ಹೋಗುತ್ತಾರೆ..
       1994 ನವೆಂಬರ್ 30ರಂದು ಓರ್ವ ಉಗ್ರವಾದಿಯ ಮನೆಗೆ ನುಗ್ಗುವಂತೆ ಪೊಲೀಸರು ನನ್ನ ಮನೆಗೆ ನುಗ್ಗಿದರು. ಮಾತಿಗೂ ಅವಕಾಶ ಕೊಡದೇ ಬಂಧಿಸಿದರು. ಹೊರಡುವುದಕ್ಕಿಂತ ಮೊದಲು ನಾನೊಮ್ಮೆ ಪತ್ನಿಯ ಕಡೆಗೆ ತಿರುಗಿ ನೋಡಿದೆ. ಆಘಾತದಿಂದ ಕುಸಿದು ಬೀಳುವ ಹಂತದಲ್ಲಿದ್ದಳು ಆಕೆ. ಮತ್ತೊಮ್ಮೆ ನೋಡುವ ಧೈರ್ಯ ನನ್ನಲ್ಲಿರಲಿಲ್ಲ. ಮಾಲ್ಡೀವ್ಸ್ ನ ಇಬ್ಬರು ಗೂಢಚರರಾದ ಮರ್ಯಮ್ ರಶೀದಾ ಮತ್ತು ಫೌಝಿಯ ಹಸನ್‍ರಿಗೆ ಕ್ರಯೋಜನಿಕ್ ಎಂಜಿನ್‍ಗಳ ರಹಸ್ಯವನ್ನು ಕೋಟ್ಯಂತರ ರೂಪಾಯಿಗೆ ಮಾರಿದ್ದೇನೆಂಬುದು ನನ್ನ ಮೇಲಿನ ಆರೋಪವಾಗಿತ್ತು. ನಿಜವಾಗಿ ರಶೀದಳನ್ನು ನಾನು ನೋಡಿದ್ದೇ ವಿಚಾರಣೆಯ ಸಂದರ್ಭದಲ್ಲಿ. ಪೊಲೀಸರು ಮೊತ್ತಮೊದಲು ನನ್ನನ್ನು ಗೆಸ್ಟ್ ಹೌಸ್‍ನಲ್ಲಿ ಕೂರಿಸಿದರು. ಆ ಬಳಿಕ ಸರಣಿ ದೌರ್ಜನ್ಯಗಳು ಶುರುವಾದುವು. ದೇಹ ಕೆಂಪಾಯಿತು. ಅಂದಹಾಗೆ, ಗೂಂಡಾಗಳಂತಿದ್ದ ಆ ಮನುಷ್ಯರಿಗೆ ಕ್ರಯೋಜನಿಕ್‍ನ ಬಗ್ಗೆ, ವಿಜ್ಞಾನದ ಬಗ್ಗೆ ಗೊತ್ತಿದ್ದರಲ್ಲವೇ? 3 ದಿನಗಳ ಕಾಲ ಅವರ ನಿಂದನೆಯನ್ನು ಸಹಿಸಿದೆ. ಉಣ್ಣದೆ, ಮಲಗದೆ ಕಳೆದೆ. 3 ದಿನಗಳಾಗಿತ್ತಲ್ಲ, ಅಸಾಧ್ಯ ಬಾಯಾರಿಕೆಯಾಗಿತ್ತು. ನೀರು ಕೇಳಿದೆ. ದೇಶದ್ರೋಹಿಗೆ ನೀರಾ ಎಂದು ಸಿಟ್ಟಾಗಿ ಪೊಲೀಸನೊಬ್ಬ ಬೂಟುಗಾಲಿನಿಂದ ನನ್ನನ್ನು ತುಳಿದ. ನೆಲಕ್ಕುರುಳಿದೆ. ಬಿದ್ದಲ್ಲಿಂದ ಏಳಲು ಮತ್ತೆ ಮತ್ತೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಗಂಟೆಗಳ ಬಳಿಕ ಕುಳಿತು ಕೊಳ್ಳಲೆಂದು ಕುರ್ಚಿ ಕೇಳಿದೆ. ದೇಶದ್ರೋಹಿಗೆ ಕುರ್ಚಿ ಇಲ್ಲ ಅಂದ ಪೊಲೀಸನೊಬ್ಬ. ಇದೇ ಕೈಯಿಂದ ನಾನು ಆಕಾಶಕ್ಕೆ ರಾಕೆಟ್‍ಗಳನ್ನು ಹಾರಿಸಿದ್ದೆ. ಆದರೆ ಈಗ ಅಸಹಾಯಕನಾದೆನಲ್ಲ ಅಂತ ಅನಿಸುತ್ತಿದ್ದಾಗ ಕಣ್ಣು ತುಂಬಿ ಬರುತ್ತಿತ್ತು. ಕಾಲುಗಳು ಬಾತುಕೊಂಡವು. ನೀರು ಮತ್ತು ನಿದ್ದೆಯಿಲ್ಲದೇ ನಾನು ಕೋಣೆಯಲ್ಲಿ ಕುಸಿದು ಬಿದ್ದೆ. ಕೋರ್ಟು ನನ್ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರೂ ನಾನು ಪೊಲೀಸ್ ಕಸ್ಟಡಿಯಲ್ಲಿ ಇರಲೇ ಇಲ್ಲ. ವಿಚಾರಣೆಯ ನೆಪದಲ್ಲಿ ಯಾರ್ ಯಾರೋ ನನ್ನನ್ನು ಎಲ್ಲೆಲ್ಲಿಗೋ ಕೊಂಡೊಯ್ದು ದೌರ್ಜನ್ಯ ನಡೆಸಿದರು. ಒಮ್ಮೆ ಕತ್ತಲ ಕೋಣೆಯಲ್ಲಿ ಕೂರಿಸಿ ವಿಚಾರಣೆ ಪ್ರಾರಂಭಿಸಿದರು. ಮಧ್ಯ ಭಾಗದಲ್ಲಿ ಟೆಲಿಪೋನ್ ಇಟ್ಟಿದ್ದರು. ವಿಚಾರಣೆ ಪ್ರಾರಂಭವಾದ ಸಮಯದಿಂದ ಕೊನೆಯ ವರೆಗೂ ಆ ಫೋನ್‍ಗೆ ಒಂದೇ ಒಂದು ಕಾಲ್ ಬಂದಿರಲಿಲ್ಲ. ನಿಜವಾಗಿ, ರಿಸೀವರ್‍ನ ಅಡಿಯಲ್ಲಿ ಮೈಕ್ ಇಟ್ಟು ರಹಸ್ಯವಾಗಿ ನನ್ನ ಮಾತುಗಳನ್ನು ಪೊಲೀಸರು ದಾಖಲಿಸುತ್ತಿದ್ದರೆಂಬುದು ಗೊತ್ತಾಯಿತು. ಆ ಬಳಿಕ ವಿಚಾರಣೆಯ ಹೊಣೆಯನ್ನು ಸಿಬಿಐ ವಹಿಸಿಕೊಂಡಿತು. 50 ದಿನಗಳ ಕಾಲ ನಾನು ವೆಯ್ಯೂರ್ ಜೈಲಿನಲ್ಲಿ ಕಳೆಯಬೇಕಾಯಿತು.. ಅಂದಹಾಗೆ, 1966 ಸೆ. 12ರಂದು ಇಸ್ರೋಗೆ ಸೇರ್ಪಡೆಗೊಳ್ಳುವಾಗ, ಮುಂದೊಂದು ದಿನ ಸುಳ್ಳು ಕೇಸಿನಲ್ಲಿ ಸಿಲುಕಿಕೊಳ್ಳಬಹುದು ಎಂಬುದಾಗಿ ನಾನೆಂದೂ ಊಹಿಸಿರಲಿಲ್ಲ. PSLV  ಉಪಗ್ರಹವನ್ನು ಆಕಾಶಕ್ಕೆ ಹಾರಿಸಲು ಉಪಯೋಗಿಸುವ ವಿಕಾಸ್ ಎಂಜಿನ್‍ಗಳನ್ನು ನಿರ್ಮಿಸುವಾಗ, ಒಂದು ದಿನ ದೇಶದ್ರೋಹಿಯಾಗುವೆ ಎಂಬ ಸಣ್ಣ ಸುಳಿವೂ ನನ್ನಲ್ಲಿರಲಿಲ್ಲ..
        ರಾಕೆಟ್ ತಂತ್ರಜ್ಞಾನ ರೂವಾರಿ ಎಂದೇ ಗುರುತಿಸಿಕೊಂಡಿರುವ ನಾರಾಯಣನ್ ಹೇಳುತ್ತಾ ಹೋಗುತ್ತಾರೆ..
     ನಿಜವಾಗಿ, ಕ್ರಯೋಜನಿಕ್ ಆಧಾರಿತ ಇಂಧನ ತಂತ್ರಜ್ಞಾನದ ಅಭಿವೃದ್ಧಿಗೆ 1992ರಲ್ಲಿ ರಶ್ಯದೊಂದಿಗೆ ಒಪ್ಪಂದಕ್ಕೆ ಭಾರತವು ಸಹಿ ಹಾಕುತ್ತದೆ. 235 ಕೋಟಿ ರೂಪಾಯಿಯ ಈ ಬೃಹತ್ ಒಪ್ಪಂದ ಸಹಜವಾಗಿಯೇ ಅಮೇರಿಕದ ಕಣ್ಣು ಕುಕ್ಕುತ್ತದೆ. ಅಮೇರಿಕವು ಅದಾಗಲೇ ಇದೇ ಮಾದರಿಯ ಒಪ್ಪಂದಕ್ಕೆ 950 ಕೋಟಿ ರೂಪಾಯಿಯ ಬೇಡಿಕೆಯಿಟ್ಟಿತ್ತು. ಫ್ರ್ರಾನ್ಸ್ ಕೂಡಾ 650 ಕೋಟಿ ರೂಪಾಯಿ ಷರತ್ತು ವಿಧಿಸಿತ್ತು. ರಶ್ಯದ ಅಧ್ಯಕ್ಷರಾಗಿದ್ದ ಬೋರಿಸ್ ಯೇಲ್ಸಿನ್‍ರ ಮೇಲೆ ಅಮೇರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಶ್‍ರು ಒಪ್ಪಂದ ರದ್ದುಗೊಳಿಸುವಂತೆ ಒತ್ತಡ ಹೇರುತ್ತಾರೆ. ಈ ಒಪ್ಪಂದ ಜಾರಿಯಾದದ್ದೇ ಆದಲ್ಲಿ ರಶ್ಯವನ್ನು ಕಪ್ಪು ಪಟ್ಟಿಯಲ್ಲಿ (Select Five Club) ಸೇರಿಸುವುದಾಗಿ ಬೆದರಿಕೆ ಹಾಕುತ್ತಾರೆ. ಯೇಲ್ಸಿನ್‍ರು ಒಪ್ಪಂದವನ್ನು ರದ್ದುಗೊಳಿಸುತ್ತಾರೆ. ಬಳಿಕ ರಶ್ಯಾದೊಂದಿಗೆ ಭಾರತ ಹೊಸ ಒಪ್ಪಂದವೊಂದಕ್ಕೆ ಸಹಿ ಹಾಕುತ್ತದೆ. ತಂತ್ರಜ್ಞಾನಗಳನ್ನು ವರ್ಗಾಯಿಸದೇ 4 ಕ್ರಯೋಜನಿಕ್ ಎಂಜಿನ್‍ಗಳನ್ನು ಸ್ವಯಂ ತಯಾರಿಸಿಕೊಡುವುದಕ್ಕೆ ರಶ್ಯಾ ಒಪ್ಪಿಕೊಳ್ಳುತ್ತದೆ. ಅಂದಹಾಗೆ, ಆ ಸಂದರ್ಭದಲ್ಲಿ ಇಸ್ರೋದಲ್ಲಿ ಕ್ರಯೋಜನಿಕ್ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದದ್ದು ಇದೇ ನಂಬಿ ನಾರಾಯಣನ್. ದ್ರವ ಇಂಧನ ಚಾಲಿತ ರಾಕೆಟನ್ನು ಭಾರತಕ್ಕೆ ಮೊತ್ತಮೊದಲು ಪರಿಚಯಿಸಿದ್ದೂ ಇವರೇ. ಆದ್ದರಿಂದಲೇ 1994ರಲ್ಲಿ ಅವರನ್ನು ದೇಶದ್ರೋಹಿಯಂತೆ ಚಿತ್ರಿಸಿ ಬಂಧಿಸಿದ್ದರ ಹಿಂದೆ ಅನುಮಾನಗಳು ಮೂಡುವುದು. ವಿಚಾರಣೆಯ ಪ್ರಥಮ ಹಂತದಲ್ಲೇ ಇದೊಂದು ಪಿತೂರಿ ಎಂಬುದು ಸಿಬಿಐಗೆ ಗೊತ್ತಾಗಿತ್ತು. ಇಡೀ ಪ್ರಕರಣವನ್ನು ಪಿತೂರಿ ಎಂದು ಹೇಳಿದ  ಸಿಬಿಐ, ಈ ಪಿತೂರಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ವರದಿಯನ್ನು 1996ರಲ್ಲಿ ದೇಶದ ಮುಂದಿಟ್ಟಿತು. ಬಳಿಕ, 1998ರಲ್ಲಿ ನಂಬಿ ನಾರಾಯಣನ್‍ರನ್ನು ನಿರ್ದೋಷಿ ಎಂದು ಸುಪ್ರೀಮ್ ಕೋರ್ಟ್ ಹೇಳಿತಲ್ಲದೇ, ಇಡೀ ಪ್ರಕರಣವನ್ನೇ ವಜಾಗೊಳಿಸಿತು. ಅಲ್ಲದೇ ನಂಬಿ ನಾರಾಯಣನ್‍ರಿಗೆ 1 ಕೋಟಿ ರೂಪಾಯಿ ಪರಿಹಾರ ಕೊಡಬೇಕೆಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 2001ರಲ್ಲಿ ಕೇರಳ ಸರಕಾರಕ್ಕೆ ನಿರ್ದೇಶನ ನೀಡಿತು. ಇದಷ್ಟೇ ಅಲ್ಲ,
     ರಶ್ಯ ಇನ್ ಸ್ಪೇಸ್: ದಿ ಫೇಲ್‍ಡ್ ಫ್ರಂಟಿಯರ್' (Russia in Space: The Failed Frontier) ಎಂಬ ಹೆಸರಿನಲ್ಲಿ ಬ್ರಿಯಾನ್ ಹಾರ್ವೆಯ ಪುಸ್ತಕವೊಂದು 2001ರಲ್ಲಿ ಮಾರುಕಟ್ಟೆಗೆ ಬರುತ್ತದೆ. ನಂಬಿ ನಾರಾಯಣನ್ ಪ್ರಕರಣವು ಅಮೇರಿಕದ ಗುಪ್ತಚರ ಸಂಸ್ಥೆ ಸಿಐಎ ಹೆಣೆದ ನಾಟಕವಾಗಿತ್ತೆಂದು ಅದು ಸ್ಪಷ್ಟಪಡಿಸುತ್ತದೆ.
     ..ತನ್ನ ಮೇಲೆ ಸುಳ್ಳು ಕೇಸು ಹಾಕಿದ, ದೇಶದ್ರೋಹಿ ಎಂದು ಜನಸಾಮಾನ್ಯರು ನಂಬುವಂಥ ವಾತಾವರಣವನ್ನು ನಿರ್ಮಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಬಿಐ ಹೇಳಿತ್ತಲ್ಲವೇ? ಆದರೆ ಇವತ್ತು ಆ ಫೈಲೇ ಕಾಣುತ್ತಿಲ್ಲವಲ್ಲ, ಯಾಕೆ? ಹಾಗಾದರೆ ಇದರ ಹಿಂದಿದ್ದವರು ಯಾರು? ನಿಜವಾಗಿ, ನನ್ನ ಮೇಲಿದ್ದದ್ದು ಕೋಟ್ಯಂತರ ರೂಪಾಯಿಯನ್ನು ಪಡಕೊಂಡ ಆರೋಪ. ಹಾಗಿದ್ದರೆ, ತನಿಖಾಧಿಕಾರಿಗಳು ನನ್ನ ಮನೆಯ ಮೇಲೆ ದಾಳಿ ಮಾಡಬೇಕಿತ್ತಲ್ಲವೇ? ದಾಖಲೆಗಳನ್ನು ವಶಪಡಿಸಿಕೊಳ್ಳ ಬೇಕಿತ್ತಲ್ಲವೇ? ನನ್ನ ಅಕೌಂಟ್ ಪುಸ್ತಕಗಳ ತಪಾಸಣೆ ನಡೆಸಬೇಕಿತ್ತಲ್ಲವೇ? ಇವಾವುದನ್ನೂ ಮಾಡದೇ ಕೇವಲ ದೇಶದ್ರೋಹಿ ಎನ್ನುತ್ತಾ ತಿರುಗಿದ್ದುದರ ಹಿಂದಿನ ಗುಟ್ಟೇನು? ಇಸ್ರೋದ ವರ್ಚಸ್ಸನ್ನು ಕೆಡಿಸಲು, ಬಾಹ್ಯಾಕಾಶ ವಿಭಾಗದಲ್ಲಿ ಇಸ್ರೋದ ಸಾಧನೆಗೆ ಅಡ್ಡಿಪಡಿಸಲು ಯಾವುದೋ ಶಕ್ತಿ ಈ ಎಲ್ಲ ಪಿತೂರಿಗಳನ್ನು ನಡೆಸಿರಬಾರದೇಕೆ? ಅಂದಹಾಗೆ, ನನಗೆ ನನ್ನ ಕಳೆದು ಹೋದ ವರ್ಚಸ್ಸನ್ನು ಯಾರು ಕೊಡುತ್ತಾರೆ? ದೇಶದ್ರೋಹಿಯಾಗಿ ತಲೆ ತಗ್ಗಿಸಿ ಮುಖ ಮುಚ್ಚಿಕೊಂಡು ನಡೆದಾಡುವಂತಾಯಿತಲ್ಲ, ಪತ್ನಿ ಕಣ್ಣೀರಿನೊಂದಿಗೆ ನಿತ್ಯ ಬದುಕುವಂತಾಯಿತಲ್ಲ, ಆ ಸಂಕಟಕ್ಕೆ ಸುಪ್ರೀಮ್ ಕೋರ್ಟಿನಲ್ಲಿ ಯಾವ ಪರಿಹಾರವಿದೆ..
     ನಾರಾಯಣನ್ ಹೀಗೆ ಪ್ರಶ್ನಿಸುತ್ತಾ ಹೋಗುವಾಗ ನಮ್ಮೊಳಗೆ ಅನುಮಾನಗಳೂ ಹೆಚ್ಚುತ್ತಾ ಹೋಗುತ್ತವೆ. ದೇಶದ ಪ್ರಸಿದ್ಧ ವಿಜ್ಞಾನಿಯನ್ನೇ ದೇಶದ್ರೋಹಿಯಾಗಿಸುವ ಸಾಮರ್ಥ್ಯ  ನಮ್ಮ ಪೊಲೀಸ್ ವ್ಯವಸ್ಥೆಗೆ ಇದೆಯೆಂದ ಮೇಲೆ, ಪತ್ರಕರ್ತ, ವೈದ್ಯ, ಇಂಜಿನಿಯರ್, ವಿದ್ಯಾರ್ಥಿಗಳೆಲ್ಲ ಯಾವ ಲೆಕ್ಕ? ಅವರನ್ನೆಲ್ಲಾ ಭಯೋತ್ಪಾದಕರಾಗಿಸುವುದಕ್ಕೆ ಏನು ಕಷ್ಟವಿದೆ? ಇಸ್ರೋದ ವಿಜ್ಞಾನಿಗೇ ಬೂಟುಗಾಲಿನಲ್ಲಿ ಒದೆಯುವ, ದೌರ್ಜನ್ಯ ನಡೆಸುವ ಪೊಲೀಸರಿರುವಲ್ಲಿ ಜನಸಾಮಾನ್ಯರ ಪರಿಸ್ಥಿತಿಯಾದರೂ ಹೇಗಿದ್ದೀತು?
     ನಾರಾಯಣನ್‍ರಿಗೆ 1 ಕೋಟಿ ಪರಿಹಾರ ಕೊಡಬೇಕೆಂಬ ಮಾನವ ಹಕ್ಕು ಆಯೋಗದ 2001ರ ನಿರ್ದೇಶನವನ್ನು 10 ಲಕ್ಷಕ್ಕೆ ಇಳಿಸಿ 2012 ಸೆಪ್ಟೆಂಬರ್ ಕೊನೆಯಲ್ಲಿ ಸುಪ್ರೀಮ್ ಕೋರ್ಟು ನೀಡಿದ ಆದೇಶವನ್ನು ಓದುತ್ತಾ, ಇವೆಲ್ಲ ನೆನಪಾಯಿತು.