Monday, May 27, 2013

ಹಾಗಾದರೆ, ಅವರೆಲ್ಲ ಸ್ವಾತಂತ್ರ್ಯದಿಂದ ಬಂಧನದ ಕಡೆಗೆ ಸಾಗಿದರೆಂದು ಹೇಳುತ್ತೀರಾ?

ಇವಾನ್ ರಿಡ್ಲಿ
   “ಯಹೂದಿ ಧರ್ಮದ ಹಳೆ ಒಡಂಬಡಿಕೆ ಮತ್ತು ಕ್ರೈಸ್ತ ಧರ್ಮದ ಬೈಬಲ್‍ನಲ್ಲಿ ಮಹಿಳೆಯರ ಮೇಲೆ ಹೇರಲಾಗಿರುವ ನಿಯಂತ್ರಣಗಳಿಗೆ ಹೋಲಿಸಿದರೆ ಕುರ್‍ಆನನ್ನು ಅಪರಾಧಿಯಾಗಿ ನೋಡಬೇಕಾದ ಅಗತ್ಯವೇನೂ ಇಲ್ಲ. ಈ ವಿಷಯದಲ್ಲಿ ಮೊದಲೆರಡು ಸ್ಥಾನಗಳು ಈ ಧರ್ಮಗಳಿಗೇ ಸಲ್ಲಬೇಕು. ಅಲ್ಲದೇ ಪರ್ದಾವನ್ನು (ಮೈ ಮುಚ್ಚುವ ಉಡುಪು) ಈ ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿದ್ದು ಕುರ್‍ಆನ್ ಅಲ್ಲ. ಅದು ಪುರಾತನ ಸಂಸ್ಕ್ರಿತಿಯ ಭಾಗವೇ ಆಗಿತ್ತು. ಕುರ್‍ಆನ್ ಅದಕ್ಕೆ ಮಾನ್ಯತೆಯನ್ನಷ್ಟೇ ಕೊಟ್ಟಿದೆ.."
   ಹಾಗಂತ 90ರ ದಶಕದ ಆರಂಭದಲ್ಲಿ ಈಜಿಪ್ಟ್ ನ ಪ್ರಸಿದ್ಧ ಮಹಿಳಾವಾದಿ (Feminist) ಡಾ| ನವಲ್ ಸದಾವಿ ಅಭಿಪ್ರಾಯ ಪಟ್ಟದ್ದು ಮಹಿಳಾ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದುವು. ಪಾಶ್ಚಾತ್ಯ ರಾಷ್ಟ್ರಗಳ ಮಹಿಳಾ ವಾದಿಗಳು ಈ ಅಭಿಪ್ರಾಯದ ಸುತ್ತ ಸಾಕಷ್ಟು ಚರ್ಚಿಸಿದರು. ಸಭೆಗಳು ನಡೆದುವು. ವಿಚಾರಗೋಷ್ಠಿಗಳು ಏರ್ಪಟ್ಟುವು. ಇಷ್ಟಕ್ಕೂ, ಸದಾವಿಯ ನಿಲುವಿಗೆ ಅಷ್ಟೊಂದು ಪ್ರಾಮುಖ್ಯತೆ ಸಿಗಲು ಕಾರಣ ಏನೆಂದರೆ, ಆಕೆಗೆ ಈಜಿಪ್ಟ್ ನಲ್ಲಿ ಮಾತ್ರವಲ್ಲ ಜಾಗತಿಕವಾಗಿಯೇ ಒಂದು ಬಗೆಯ ವರ್ಚಸ್ಸು ಇತ್ತು. ಮುಸ್ಲಿಮರೇ ಹೆಚ್ಚಿರುವ ಈಜಿಪ್ಟ್ ನಲ್ಲಿ ಕುರ್‍ಆನನ್ನು ವಿಮರ್ಶಿಸುತ್ತಾ, ಮಹಿಳಾ ವಾದವನ್ನು ಪ್ರತಿಪಾದಿಸುತ್ತಾ ಇದ್ದುದು ಆಕೆಯನ್ನು ಪ್ರಸಿದ್ಧಿಗೆ ಒಯ್ದಿತ್ತು. ಆದ್ದರಿಂದಲೇ, ‘ಮಹಿಳೆ ಮತ್ತು ಸಾಮರ್ಥ್ಯ’ ಎಂಬ ವಿಷಯದಲ್ಲಿ ಕೆನಡದ ಟೊರೊಂಟೋದಲ್ಲಿ ವಿಚಾರಗೋಷ್ಠಿ ನಡೆಯಿತು. 'ವಿಶ್ವ ತಾಯಂದಿರ ವೇದಿಕೆ' ಎಂಬ ಸಂಘಟನೆಯ ಅಧ್ಯಕ್ಷೆ ಬರ್ನಿಸ್ ಡುಬೋಯಿಸ್ ಮತ್ತು ಇಸ್ರೇಲಿನ ಮಹಿಳಾ ಹೋರಾಟಗಾರ್ತಿ ಅಲೀಸ್ ಶೆಲ್ವಿಯವರು ಈ ವಿಚಾರಗೋಷ್ಠಿಯಲ್ಲಿ ಸದಾವಿಯ ಹೇಳಿಕೆಯನ್ನು ಬಲವಾಗಿ ಖಂಡಿಸಿದರು. ವಿಚಾರಗೋಷ್ಠಿಯಲ್ಲಿ ಗದ್ದಲ, ಗೊಂದಲವೇ ಉಂಟಾಯಿತು. ಮಾತ್ರವಲ್ಲ, ಅಲ್ಲಿ ನಡೆದ ಒಟ್ಟು ಚರ್ಚೆಯ ಸುತ್ತ ಗ್ಯಾನೆ ಡೈಯರ್ ಎಂಬವರು, ‘Islam is not alone in patriarchal doctrines’ ಎಂಬ ಶೀರ್ಷಿಕೆಯಲ್ಲಿ 1990 ಜುಲೈ 3ರಂದು ಟೊರೊಂಟೊ ಸ್ಟಾರ್ ನ್ಯೂಸ್ ಪತ್ರಿಕೆಯಲ್ಲಿ ಲೇಖನ ಬರೆದರು. ಇದಾಗಿ 23 ವರ್ಷಗಳ ಬಳಿಕ ಮೊನ್ನೆ 2013  ಮೇ 24ರಂದು ದಿ ಹಿಂದೂ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟವಾಗಿದೆ. ‘ನಿರ್ವಾತದಲ್ಲಿ ಅಲ್ಲಾಹನನ್ನು ಹುಡುಕುತ್ತಾ..’ (Seeking Allah in the Midlands) ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಆ ಲೇಖನದ ಬೈಲೈನ್ ಹೀಗಿತ್ತು-
Of the thousands of white Britons embracing Islam every year, most are thought to be professionally successful, independent- minded women, says study  - ‘ಬ್ರಿಟನ್ನಿನಲ್ಲಿ ಪ್ರತಿ ವರ್ಷ ಸಾವಿರಾರು ಬಿಳಿಯರು ಇಸ್ಲಾಮ್ ಸ್ವೀಕರಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಒಳ್ಳೆಯ ಉದ್ಯೋಗ- ದುಡ್ಡು ಇರುವ, ಸ್ವತಂತ್ರ ಮನೋಸ್ಥಿತಿಯ ಮಹಿಳೆಯರಾಗಿದ್ದಾರೆ’..
  ಲಾರೆನ್ ಬೂತ್
  ಇವಾನ್ ರಿಡ್ಲಿ
  ಅನಿಸಾ ಅಟ್‍ಕಿನ್ಸನ್
  ಕ್ರಿಸ್ಟಿಯಾನಾ ಬೇಕರ್
  ಕ್ಯಾರೋಲಿನ್ ಬೇಟ್
‘ಇಸ್ಲಾಮ್ ಸ್ವೀಕರಿಸಿದವರ ವೃತ್ತಾಂತಗಳು’ (Narratives of conversion to Islam) ಎಂಬ ಶೀರ್ಷಿಕೆಯಲ್ಲಿ ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಇಸ್ಲಾಮಿಕ್ ಸ್ಟಡೀಸ್ (CIS) ಮತ್ತು ಲೀಸೆಸ್ಟರ್ ಮೂಲದ ನ್ಯೂ ಮುಸ್ಲಿಮ್ಸ್ ಪ್ರೊಜೆಕ್ಟ್ ಎಂಬ ಸಂಸ್ಥೆಗಳು ಹೊರತಂದ 129 ಪುಟಗಳ ವರದಿಯಲ್ಲಿ ಈ ಮೇಲಿನವರ ಸಹಿತ ಹತ್ತಾರು ಮಂದಿಯ ಅನುಭವ ಕಥನಗಳಿವೆ. ಅಂದಹಾಗೆ, ಬ್ರಿಟನ್ನಿನ ಮಾಜಿ ಪ್ರಧಾನಿ ಟೋನಿ ಬ್ಲೇರ್‍ನ ಸೊಸೆ ಲಾರೆನ್ ಬೂತ್, ಅಫಘಾನ್ ಯುದ್ಧದ ಸಂದರ್ಭದಲ್ಲಿ ಮಾರುವೇಷದಲ್ಲಿ ತೆರಳಿ ಯುದ್ಧದ ಪ್ರತ್ಯಕ್ಷ  ವರದಿಯನ್ನು ಮಾಡಲು ಪ್ರಯತ್ನಿಸಿ ಸುದ್ದಿಗೀಡಾದ ಪತ್ರಕರ್ತೆ ಇವಾನ್ ರಿಡ್ಲಿ, MTV  ಉದ್ಘೋಷಕಿ ಕ್ರಿಸ್ಟಿಯಾನಾ ಬೇಕರ್.. ಇವರೆಲ್ಲ ಆಮಿಷಕ್ಕೆ ಒಳಗಾಗುವ ದುರ್ಬಲ ಮಹಿಳೆಯರೇನೂ ಅಲ್ಲವಲ್ಲ. ಅವರಲ್ಲಿ ಪ್ರತಿಭೆ ಇದೆ. ಉದ್ಯೋಗ ಇದೆ, ದುಡ್ಡೂ ಇದೆ. ಇಷ್ಟಿದ್ದೂ ಅವರೆಲ್ಲ ಇಸ್ಲಾಮನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಏನು ಕಾರಣ? ‘ಬ್ರಿಟನ್‍ನಲ್ಲಿ ಪ್ರತಿವರ್ಷ 50 ಸಾವಿರದಷ್ಟು ಮಂದಿ ಇಸ್ಲಾಮ್ ಸ್ವೀಕರಿಸುತ್ತಿದ್ದು, ಅವರಲ್ಲಿ ಪ್ರತಿ ಮೂವರಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ..’ ಎನ್ನುತ್ತದೆ 129 ಪುಟಗಳ ಆ ವರದಿ. ಒಂದು ಕಡೆ ಇಸ್ಲಾಮನ್ನು ಭಯೋತ್ಪಾದನೆಯ ಧರ್ಮವೆಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ, ಮಹಿಳೆಯರಿಗೆ ಕಟು ನಿಯಂತ್ರಣಗಳನ್ನು ಹೇರಿರುವ ಶೋಷಣೆಯ ಧರ್ಮ ಎಂದೂ  ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿನಿಮಾಗಳು, ವ್ಯಂಗ್ಯಚಿತ್ರಗಳು, ಬರಹಗಳೂ ಪ್ರಕಟವಾಗುತ್ತಿವೆ. 2011 ಎಪ್ರಿಲ್‍ನಲ್ಲಿ ಫ್ರಾನ್ಸ್, ಜುಲೈಯಲ್ಲಿ ಬೆಲ್ಜಿಯಂ, ಸೆಪ್ಟೆಂಬರ್‍ನಲ್ಲಿ ನೆದರ್ಲ್ಯಂಡ್ ಗಳು ಬುರ್ಖಾ-ನಿಖಾಬ್‍ಗೆ (ಮುಖ ಪರದೆ) ನಿಷೇಧ ಹೇರಿದುವು. ಅದಕ್ಕೆ ಸಮಾನತೆ, ಐಡೆಂಟಿಟಿಯ ಕಾರಣಗಳನ್ನೂ ಕೊಟ್ಟುವು. ನಿಖಾಬ್ ಸಹಿತವಾದ ಬುರ್ಖಾವನ್ನು ನಿಷೇಧಿಸುವ ಬಗ್ಗೆ 2011 ಆಗಷ್ಟ್ ನಲ್ಲಿ ಇಟಲಿ ಪಾರ್ಲಿಮೆಂಟಲ್ಲಿ ಮಸೂದೆ ಅಂಗೀಕಾರಗೊಂಡಿತು. ಒಂದು ಧರ್ಮದ ಬಗ್ಗೆ; ಅದರ ಆಚಾರ, ಸಂಸ್ಕ್ರಿತಿ, ವೇಷ-ಭೂಷಣಗಳ ಬಗ್ಗೆ ಇಷ್ಟೊಂದು ಪ್ರಮಾಣದಲ್ಲಿ ನಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿದ್ದರೂ ಜನರು ಈ ಧರ್ಮದ ಕಡೆಗೆ ಆಕರ್ಷಿತರಾಗುತ್ತಿರುವುದೇಕೆ? ಅದರಲ್ಲೂ ಮಹಿಳೆಯರೇ ಮುಂದಿರಲು ಕಾರಣವೇನು? ಇಸ್ಲಾಮ್ ಸ್ವೀಕರಿಸಿದ ಬ್ರಿಟನ್ನಿಗರಲ್ಲಿ ಹೆಚ್ಚಿನವರೂ, ‘ಅಪಪ್ರಚಾರಗಳೇ ತಮ್ಮನ್ನು ಇಸ್ಲಾಮ್‍ನೆಡೆಗೆ ಆಕರ್ಷಿಸಿತು, ಕುರ್‍ಆನ್ ಮತ್ತು ಇಸ್ಲಾಮೀ  ಸಾಹಿತ್ಯವನ್ನು ಅಧ್ಯಯನ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಂಡೆವು..’ ಎಂದಿದ್ದಾರಲ್ಲ, ಏನಿದರ ಅರ್ಥ? ಹಾಗಾದರೆ, ಇಸ್ಲಾಮಿನ ವಿರುದ್ಧ ಪ್ರಚಲಿತವಿರುವ ಆರೋಪಗಳ ಕುರಿತಂತೆ ಏನೆನ್ನಬೇಕು? ಅಧ್ಯಯನ ನಡೆಸದವರು ದುರುದ್ದೇಶದಿಂದ ಹಬ್ಬಿಸಿರುವ ಸುಳ್ಳುಗಳು ಎಂದೇ ಅಲ್ಲವೇ? ನಿಜವಾಗಿ, ಇಸ್ಲಾಮ್ ಒಪ್ಪದ ಆದರೆ ಪಾಶ್ಚಾತ್ಯ ಜಗತ್ತು ಸ್ವಾತಂತ್ರ್ಯ, ಸಮಾನತೆಯ ಹೆಸರಲ್ಲಿ ಬಲವಾಗಿ ಪ್ರತಿಪಾದಿಸುವ ಅನೇಕಾರು ಸೌಲಭ್ಯಗಳು ಬ್ರಿಟನ್ನಿನಲ್ಲಿವೆ. ಅಲ್ಲಿ ಲಿವಿಂಗ್ ಟುಗೆದರ್ ಇದೆ. ಹೆಣ್ಣು-ಗಂಡು ಮುಕ್ತವಾಗಿ ಬೆರೆಯುವುದಕ್ಕೆ ಸ್ವಾತಂತ್ರ್ಯ ಇದೆ. ಡ್ರೆಸ್ ಕೋಡ್ ಇಲ್ಲ. ಸಲಿಂಗ ವಿವಾಹಕ್ಕೆ ಬಹುತೇಕ ಅನುಮತಿ ಇದೆ. ಮದ್ಯ ಇದೆ, ಬಡ್ಡಿ ಇದೆ.. ಒಂದು ವೇಳೆ ಮನುಷ್ಯರ ನೆಮ್ಮದಿಗೆ, ಸಂತಸದ ಬದುಕಿಗೆ ಇವು ಅತಿ ಅಗತ್ಯ ಮತ್ತು ಇದನ್ನು ನಿಷೇಧಿಸುವುದು ಮಾನವ ಹಕ್ಕಿನ ಉಲ್ಲಂಘನೆ ಎಂದು ವಾದಿಸುವುದಾದರೆ, ಬ್ರಿಟನ್ನಿನ ಮಂದಿ ಈ ಪ್ರಮಾಣದಲ್ಲಿ ಇಸ್ಲಾಮ್ ಸ್ವೀಕರಿಸುತ್ತಿರುವುದನ್ನು ನಾವು ಹೇಗೆ ವಿಶ್ಲೇಷಿಸಬೇಕು? ಸ್ವಾತಂತ್ರ್ಯದಿಂದ ಬಂಧನದ ಕಡೆಗೆ ಎಂದೇ? ಸಮಾನತೆಯಿಂದ ಅಸಮಾನತೆಯ ಕಡೆಗೆ, ಮುಕ್ತತೆಯಿಂದ ಶೋಷಣೆಯ ಕಡೆಗೆ ಎಂದೇ? ಅಷ್ಟಕ್ಕೂ ಈ ಬೆಳವಣಿಗೆ, ಇದರ ಇನ್ನೊಂದು ಮಗ್ಗುಲನ್ನು ಚರ್ಚಿಸುವುದಕ್ಕೆ ಯಾಕೆ ನಮಗೆ ಪ್ರೇರಕ ಆಗಬಾರದು? ಸದ್ಯ ಜಾಗತಿಕವಾಗಿ ಪ್ರಚಲಿತದಲ್ಲಿರುವ ಸ್ವಾತಂತ್ರ್ಯ, ಸಮಾನತೆಗೂ, ಇಸ್ಲಾಮ್ ನಿರ್ವಚಿಸುವ ಸ್ವಾತಂತ್ರ್ಯ, ಸಮಾನತೆಗೂ ನಡುವೆ ಇರುವ ಅಂತರದ ಬಗ್ಗೆ ನಾವು ಪ್ರಾಮಾಣಿಕವಾಗಿ ಚರ್ಚಿಸಿದರೇನು? ಯಾರೇ ಆಗಲಿ, ಸ್ವಾತಂತ್ರ್ಯದಿಂದ ಬಂಧನ ಕಡೆಗೆ ಪಯಣ ಬೆಳೆಸಿಯಾರೆ? ಮುಕ್ತತೆಯಿಂದ ಶೋಷಣೆಯ ಕಡೆಗೆ ಸಾಗಿಯಾರೇ? ಖುಷಿಯನ್ನು ಕೈಬಿಟ್ಟು ಸಂಕಟವನ್ನು ಆಯ್ಕೆ ಮಾಡಿಕೊಂಡಾರೇ? ಇಲ್ಲ ಎಂದಾದರೆ, ನಾವು ಇಸ್ಲಾಮಿನ ಕುರಿತಂತೆ ಅಂದುಕೊಂಡಿರುವ ನಿಲುವುಗಳೇ ಏಕೆ ತಪ್ಪಾಗಿರಬಾರದು? ಅದರ ಸಮಾನತೆ, ಮಹಿಳಾ ಹಕ್ಕುಗಳು, ತಲಾಕ್, ಬಹುಪತ್ನಿತ್ವ, ಜಿಹಾದ್‍ಗಳ ಬಗ್ಗೆ ನಮ್ಮ ನಿಲುವುಗಳೇಕೆ ಪೂರ್ವಾಗ್ರಹ ಪೀಡಿತವಾಗಿರಬಾರದು?
   ಇಸ್ಲಾಮ್ ಬಹುಪತ್ನಿತ್ವಕ್ಕೆ ಚಾಲನೆ ಕೊಟ್ಟಿದೆಯೆಂಬ ದೊಡ್ಡದೊಂದು ಸುಳ್ಳು ಸಮಾಜದಲ್ಲಿದೆ. ನಿಜವಾಗಿ, ಪ್ರವಾದಿ ಮುಹಮ್ಮದರು(ಸ) ಬದುಕಿದ್ದ ಕಾಲದಲ್ಲಿ ಪುರುಷರು ಧಾರಾಳ ಪತ್ನಿಯರನ್ನು ಹೊಂದಬಹುದಾಗಿತ್ತು. ಅದಕ್ಕೆ ಮಿತಿಯಿರಲಿಲ್ಲ. ಬೇಕಾದಾಗ ವಿಚ್ಛೇದನವನ್ನೂ ಕೊಡಬಹುದಿತ್ತು. ಆದ್ದರಿಂದಲೇ ಇದಕ್ಕೆ ನಿಯಂತ್ರಣವನ್ನು ವಿಧಿಸಲು ಸೂಕ್ತ ಸಂಧರ್ಭಕ್ಕಾಗಿ ಪ್ರವಾದಿಯವರು  ಕಾಯುತ್ತಿದ್ದರು.  ಇದೇ ಸಂದರ್ಭದಲ್ಲಿ ಉಹುದ್ ಎಂಬಲ್ಲಿ ಪ್ರವಾದಿ(ಸ) ಮತ್ತು ಅವರ ವಿರೋಧಿಗಳ ಮಧ್ಯೆ ಕಾಳಗ ನಡೆಯುತ್ತದೆ. ಅದರಲ್ಲಿ ಸಾಕಷ್ಟು ಮುಸ್ಲಿಮ್ ಪುರುಷರು ಮೃತಪಡುತ್ತಾರೆ. ಈ ಹಂತದಲ್ಲಿ, ಪತ್ನಿಯರ ಸಂಖ್ಯೆಗೆ ಮಿತಿಯನ್ನು ಹೇರುವ ಕುರ್‍ಆನಿನ   ಆದೇಶ ಹೊರಬೀಳುತ್ತದೆ. ಅದಕ್ಕೆ ಇನ್ನೊಂದು ಕಾರಣವೂ ಇದೆ. ಯುದ್ಧ ಕಾಲದಲ್ಲಿ ಪುರುಷರು ಸಾವಿಗೀಡಾಗುವುದರಿಂದ ಸಮಾಜದಲ್ಲಿ ವಿಧವೆಯರು ಮತ್ತು ಅನಾಥ ಮಕ್ಕಳ ದೊಡ್ಡದೊಂದು ಗುಂಪೇ ಸೃಷ್ಟಿಯಾಗುತ್ತದೆ. ಅಫಘಾನ್ ಯುದ್ಧ ದಲ್ಲಿ ಸಾವಿಗೀಡಾದ ಸುಮಾರು 1 ಮಿಲಿಯನ್ ಮಂದಿಯಿಂದಾಗಿ ಉದ್ಭವವಾಗಿರಬಹುದಾದ ಸಾಮಾಜಿಕ ಸ್ಥಿತಿಯನ್ನೊಮ್ಮೆ ಅವಲೋಕಿಸಿಕೊಳ್ಳಿ. ವಿಧವೆಯರು, ಮಕ್ಕಳಿಗೆ ಏನು ವ್ಯವಸ್ಥೆಯಿದೆ? ಅವರ ಪೋಷಣೆಯ ಹೊಣೆಯನ್ನು ಯಾರು ವಹಿಸಿಕೊಳ್ಳಬೇಕು? ಕುರ್‍ಆನ್ ಬಹುಪತ್ನಿತ್ವಕ್ಕೆ ಅನುಮತಿ ಕೊಟ್ಟಿರುವುದು ಇಂಥ ಅನಿವಾರ್ಯ ಸಂದರ್ಭಗಳಲ್ಲಿ. ಇಲ್ಲದಿದ್ದರೆ 20 ಪುರುಷರಿಗೆ 80 ಮಹಿಳೆಯರು ಇರಬೇಕಿತ್ತಲ್ಲವೇ? ಆದರೆ, ಬಹುಪತ್ನಿತ್ವವನ್ನು ಟೀಕಿಸುವವರು ಈ ಅನಿವಾರ್ಯ ಸಂದರ್ಭವನ್ನು ಉಲ್ಲೇಖಿಸುವುದೇ ಇಲ್ಲ. ಮಾತ್ರವಲ್ಲ, ತಮ್ಮ ಪರಿಸರದಲ್ಲಿ ಎಷ್ಟು ಮುಸ್ಲಿಮರು ಬಹುಪತ್ನಿತ್ವವನ್ನು ಹೊಂದಿದ್ದಾರೆ ಎಂದು ಹೇಳುತ್ತಲೂ ಇಲ್ಲ. ಹೀಗಿರುವಾಗ, ಬ್ರಿಟನ್ನಿನ ಮಹಿಳೆಯರಿಗೆ ಈ ಸತ್ಯ ಅರ್ಥ ವಾದುದರಿಂದಲೇ ಅವರು ಇಸ್ಲಾಮ್ ಸ್ವೀಕರಿಸಿರಬಹುದು ಎಂದರೆ ಏನು ತಪ್ಪಿದೆ?
   ಪ್ರಥಮ ಮಾನವರಾದ ಆದಮ್ ಮತ್ತು ಹವ್ವಾರು (ಆಡಮ್ ಮತ್ತು ಈವ್) ದೇವನು ನಿಷೇಧಿಸಿದ ಹಣ್ಣನ್ನು ತಿಂದು ನಿಯಮ ಉಲ್ಲಂಘಿಸಿದ ಬಗ್ಗೆ ಕುರ್‍ಆನ್‍ನಲ್ಲಿ ಉಲ್ಲೇಖ ಇದೆ. (7: 19-27) ಇಬ್ಬರೂ ಅವಿಧೇಯತೆ ತೋರಿದರು, ಇಬ್ಬರೂ ಕ್ಷಮೆ ಯಾಚಿಸಿದರು ಮತ್ತು ಇಬ್ಬರನ್ನೂ ಕ್ಷಮಿಸಲಾಯಿತು ಎಂದು ಕುರ್‍ಆನ್ ಹೇಳಿದೆಯೇ ಹೊರತು ಆದಮರು ಹಣ್ಣು ತಿಂದದ್ದಕ್ಕಾಗಿ ಹವ್ವಾರನ್ನು ದೂಷಿಸಲಾಗಿಲ್ಲ. ಹೆಣ್ಣಿನಿಂದಾಗಿ ಆದಮರು ಕಾನೂನು ಉಲ್ಲಂಘಿಸಿದರು ಎಂದೂ ಹೇಳಲಿಲ್ಲ. ಒಂದು ರೀತಿಯಲ್ಲಿ, ಇಸ್ಲಾಮ್ ಹೆಣ್ಣು-ಗಂಡನ್ನು ಸಮಾನ ಭಾವದಿಂದ ನೋಡುತ್ತದೆ (49: 13) ಮತ್ತು ಸಮಾನ ಕ್ರಿಯೆಗೆ ಸಮಾನ ಪ್ರತಿಫಲವನ್ನೂ ನೀಡುತ್ತದೆ (3: 195, 4: 124). ಪುರುಷ ಮಾಡಿದ ಕೆಲಸಕ್ಕೆ ಹೆಚ್ಚು ಪ್ರತಿಫಲ ಎಂದು ಇಸ್ಲಾಮ್ ಎಲ್ಲೂ ಹೇಳಿಲ್ಲ. ಮಾತ್ರವಲ್ಲ, ಹೆಣ್ಣಿನ ಸೇವೆ ಮಾಡಿದರೆ ಸ್ವರ್ಗ, ತಂದೆಯೋರ್ವ ತನ್ನ ಹೆಣ್ಣು ಮಕ್ಕಳನ್ನು ಚೆನ್ನಾಗಿ ಪೋಷಿಸಿ ಬೆಳೆಸಿದರೆ ಸ್ವರ್ಗ.. ಎಂದು ವಿಶೇಷವಾಗಿ ಎತ್ತಿ ಹೇಳಿದೆ. ಈ ಸೌಲಭ್ಯ ಗಂಡು ಮಕ್ಕಳ ತಂದೆಗಿಲ್ಲ. ಹೆಣ್ಣು (ಭ್ರೂಣ) ಹತ್ಯೆಯನ್ನು ಕ್ರೂರ ಅಪರಾಧವೆಂದು ಸಾರಿದ್ದು ಪವಿತ್ರ ಕುರ್‍ಆನೇ (81: 9-10). ಇಷ್ಟಕ್ಕೂ ತಲಾಕ್, ತಲಾಕ್, ತಲಾಕ್ ಎಂದು ಮೂರು ಬಾರಿ ಹೇಳಿದರೆ ವಿಚ್ಛೇದನವಾಗುತ್ತೆಂದು ಕುರ್‍ಆನ್ ಹೇಳಿಯೇ ಇಲ್ಲ. (2: 229) ಅದು ತಲಾಕ್‍ಗೆ ಮೂರ್ನಾಲ್ಕು ಹಂತಗಳನ್ನು ನಿಗದಿಪಡಿಸಿದೆ. ಇನ್ನು, ಒಂದು ವೇಳೆ ವಿಚ್ಛೇದನವೇ ಮಾರ್ಗ ಎಂದಾದರೆ ಪತ್ನಿಗೆ ಒಂದು ಮೊತ್ತವನ್ನು ಪತಿ ಕೊಡಬೇಕೆಂದೂ ಮತ್ತು ಆಕೆಯ ಪೋಷಣೆಯ ಹೊಣೆಯನ್ನು ತಂದೆ-ಸಹೋದರರು ವಹಿಸಿಕೊಳ್ಳಬೇಕೆಂದೂ ಅದು ಆದೇಶಿಸಿದೆ. ಆ ಮೊತ್ತದಿಂದ ಆಕೆ ವ್ಯವಹಾರ ನಡೆಸಬಹುದು. ಉದ್ದಿಮೆಗಳಲ್ಲಿ ಹೂಡಿಕೆ ಮಾಡಬಹುದು. ಮಾಸಾಶನವೆಂಬ ಭಿಕ್ಷೆಗಿಂತ ಒಂದೇ ಸಂದರ್ಭದಲ್ಲಿ ಒಂದು ಮೊತ್ತವನ್ನು ಕೊಟ್ಟು ಆಕೆಯನ್ನು ಸ್ವಾವಲಂಬಿಯಾಗಿಸುವುದು ಇಸ್ಲಾಮಿನ ನಿಲುವಾಗಿದೆ. ಮದುವೆಯ ಸಂದರ್ಭದಲ್ಲಿ ಹೆಣ್ಣಿಗೆ ನಿರ್ದಿಷ್ಟ ಉಡುಗೊರೆಯನ್ನು ವರ ಕಡ್ಡಾಯವಾಗಿ ಕೊಡಲೇಬೇಕೆಂದು ಕುರ್‍ಆನ್ ಪ್ರತಿಪಾದಿಸುತ್ತದೆ (4: 4). ಆ ಉಡುಗೊರೆ ಆಕೆಯದ್ದೇ. ಒಂದು ವೇಳೆ ವರ 5 ಲಕ್ಷ  ರೂಪಾಯಿ ಕೊಟ್ಟನೆಂದರೆ ಅದನ್ನು ವ್ಯವಹಾರದಲ್ಲಿ ತೊಡಗಿಸುವ ಮತ್ತು ಅದರಿಂದ ಬರುವ ಚಿಕ್ಕಾಸನ್ನೂ ಪತಿಗೆ ಕೊಡದಿರುವ ಹಕ್ಕು ಆಕೆಗಿದೆ. ಹೆಣ್ಣಿಗೆ  ಆಸ್ತಿಯ ಹಕ್ಕನ್ನು ಒದಗಿಸುವ, Married Women property Act   ಎಂಬ ಕಾನೂನು ಬ್ರಿಟನ್ನಿನಲ್ಲಿ ಜಾರಿಗೆ ಬಂದದ್ದೇ 1860ರಲ್ಲಿ. ಇದಕ್ಕಿಂತ 1300 ವರ್ಷಗಳ ಹಿಂದೆಯೇ ಪವಿತ್ರ ಕುರ್‍ಆನ್ ಹೆಣ್ಣಿಗೆ ಆಸ್ತಿಯ ಹಕ್ಕನ್ನು ಕೊಟ್ಟಿದೆ (4: 32). ಅಂದಹಾಗೆ, ಸೌಂದರ್ಯ ಪ್ರದರ್ಶನವು ಲೈಂಗಿಕ ದೌರ್ಜನ್ಯಕ್ಕೆ, ಮಹಿಳಾ ಶೋಷಣೆಗೆ, ಪ್ರತಿಭೆಗಿಂತ ಮೈಮಾಟವನ್ನೇ ಆಯ್ಕೆಯ ಮಾನದಂಡವಾಗಿಸುವುದಕ್ಕೆ ಕಾರಣವಾಗ ಬಲ್ಲುದು ಎಂದು ಇಸ್ಲಾಮ್ ವಾದಿಸುವುದನ್ನು ತಪ್ಪು ಎಂದು ಸಮರ್ಥಿಸುವುದಕ್ಕೆ ಆಧುನಿಕ ಜಗತ್ತಿನ ಸ್ವಾತಂತ್ರ್ಯ ಪ್ರತಿಪಾದಕರಲ್ಲಿ ಏನು ಆಧಾರವಿದೆ? ಸೌಂದರ್ಯ ಪ್ರದರ್ಶಿಸಬೇಡಿ (33: 59) ಎಂದು ಇಸ್ಲಾಮ್ ಪ್ರತಿಪಾದಿಸಿದ್ದು ಹೆಣ್ಣಿನ ಮೇಲಿನ ದ್ವೇಷದಿಂದಲ್ಲ, ಪ್ರೀತಿಯಿಂದ. ಹಾಗಂತ, ಸದ್ಯ ಕಾಣಿಸುತ್ತಿರುವ ಕಪ್ಪು ಬುರ್ಖಾ ಎಂಬ ಉಡುಪನ್ನು ಕುರ್‍ಆನ್ ಪ್ರಸ್ತುತಪಡಿಸಿಯೇ ಇಲ್ಲ. ಸೌಂದರ್ಯ ಪ್ರದರ್ಶನವಾಗದಂತೆ ಉಡುಪು ಧರಿಸಿ ಎಂದಷ್ಟೇ ಅದು ಕರೆಕೊಟ್ಟಿದೆ. ಈ ಕರೆ ಯಾಕೆ ಮಹಿಳಾ ಶೋಷಕ ಆಗಬೇಕು? ರಕ್ಷಕ ಯಾಕಾಗಬಾರದು?  ಪ್ರದರ್ಶಿಸುವುದನ್ನು ಸ್ವಾತಂತ್ರ್ಯ, ಮುಚ್ಚುವುದನ್ನು ಶೋಷಣೆ ಅನ್ನುವುದೇಕೆ? ಅದಕ್ಕಿರುವ ಮಾನದಂಡವಾದರೂ ಏನು? ಪುರುಷನಿಗೆ ಪುರುಷನದ್ದೇ ಆದ ಕ್ಷೇತ್ರ ಇರುವಂತೆಯೇ ಮಹಿಳೆಗೆ ಮಹಿಳೆಯದ್ದೇ ಆದ ಕ್ಷೇತ್ರ ಇರಬಾರದೆಂದಿದೆಯೇ? ಸಮಾನತೆ ಮತ್ತು ಗೌರವ ಈ ಎರಡರಲ್ಲಿ ಹೆಣ್ಣಿಗೆ ಸುರಕ್ಷಿತತೆ ಒದಗಿಸುವ ವಿಚಾರ ಯಾವುದು? ಗೌರವ ಕೊಡದೇ ಸಮಾನತೆಯ ಬಗ್ಗೆ ಮಾತಾಡುವುದು ಎಷ್ಟು ಸರಿ? ಹೆಣ್ಣಿಗೆ ಈ ಸಮಾಜದಲ್ಲಿ ಸಿಗಲೇಬೇಕಾದ ಗೌರವವನ್ನು ಸಮಾನತೆ, ಸ್ವಾತಂತ್ರ್ಯದ ಹೆಸರಲ್ಲಿ ಕಿತ್ತುಕೊಳ್ಳುತ್ತಿರುವ ಆಧುನಿಕ ಶೋಷಕರ ಬಗ್ಗೆ ನಾವೇಕೆ ಆಲೋಚಿಸುತ್ತಿಲ್ಲ? ಹೆಣ್ಣಿನ ಹಕ್ಕು, ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಆಧುನಿಕ ಜಗತ್ತು ಮಾರುಕಟ್ಟೆಯ ಉದ್ದೇಶದಿಂದಲೇ ತಿರುಚಿದೆ ಎಂದೂ ವಾದಿಸಬಹುದಲ್ಲವೇ? ಅಷ್ಟಕ್ಕೂ, ಹೆಣ್ಣು ಎದುರುಗೊಂಡಾಗ ಕಣ್ಣು ಕೆಳಗಾಗಿಸಿ ಗೌರವ ಸೂಚಿಸಿ (30:31) ಎಂದು ಪವಿತ್ರ ಕುರ್‍ಆನ್ ಪುರುಷರಿಗೆ ಆದೇಶಿಸಿರುವುದನ್ನು ಯಾರಾದರೂ ಚರ್ಚೆಗೆ ಎತ್ತಿಕೊಂಡಿದ್ದಾರೆಯೇ? ಗೌರವ ಸೂಚಿಸುವಷ್ಟು ಉನ್ನತ ವ್ಯಕ್ತಿತ್ವ ಹೆಣ್ಣಿನದ್ದಾದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾದೀತು ಎಂದಲ್ಲವೇ ಇದರರ್ಥ?
   ವಿವಿಯನ್ ಮಲೋನ್ ಜೋನ್ಸ್ ಮತ್ತು ಜೇಮ್ಸ್ ಹೂಡ್ ಎಂಬಿಬ್ಬರು ಕಪ್ಪು ವಿದ್ಯಾರ್ಥಿಗಳು ಅಲಬಾಮ ವಿಶ್ವವಿದ್ಯಾಲಯ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ 1962ರಲ್ಲಿ ಅಮೇರಿಕದ ಅಲಬಾಮ ರಾಜ್ಯದ ರಾಜ್ಯಪಾಲ ಜಾರ್ಜ್ ವಾಲ್ಲೇಸ್‍ರು ವಿಶ್ವ ವಿದ್ಯಾಲಯದ
ಜಾರ್ಜ್ ವಾಲ್ಲೇಸ್
ಬಾಗಿಲಲ್ಲಿ ನಿಂತಂತೆ ಇವತ್ತು ಕೆಲವರು ಈ ದೇಶದ ವಿವಿಧ ಶಾಲೆಗಳ ಎದುರು ನಿಂತು ಸ್ಕಾರ್ಫ್ ಧರಿಸಿದ ಹೆಣ್ಣು ಮಕ್ಕಳನ್ನು ತಡೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ರಿಡ್ಲಿ, ಬೂತ್, ಬೇಟ್‍ರು ಈ ಸುದ್ದಿಯನ್ನು ಆಲಿಸಿದರೆ ನಗಬಹುದೇನೋ?

Tuesday, May 21, 2013

ಕಸಾಯಿಖಾನೆಗಳನ್ನು ಮುಚ್ಚುವ ಅವಕಾಶವಿದ್ದೂ ಯಾಕೆ ಮೌನ ವಹಿಸಿದಿರಿ, ಹೇಳಿ?

   ಗೋಹತ್ಯೆಗೆ ಸಂಬಂಧಿಸಿ 1959 ಮತ್ತು 1961ರ ಮಧ್ಯೆ ಸುಪ್ರೀಮ್ ಕೋರ್ಟ್‍ ನ  ಮುಂದೆ ಮೂರು ಪ್ರಕರಣಗಳು ದಾಖಲಾಗಿದ್ದುವು. ಮುಹಮ್ಮದ್ ಹನೀಫ್ ಖುರೇಷಿ ಮತ್ತು ಬಿಹಾರ ಸರಕಾರ; ಹಶ್ಮತುಲ್ಲಾ ಮತ್ತು ಮಧ್ಯಪ್ರದೇಶ ಸರಕಾರ; ಅಬ್ದುಲ್ ಹಕೀಮ್ ಮತ್ತು ಬಿಹಾರ ಸರಕಾರಗಳ ನಡುವಿನ ವ್ಯಾಜ್ಯವನ್ನು ವಿಚಾರಣೆಗೆ ಒಳಪಡಿಸುತ್ತಾ ಸುಪ್ರೀಮ್ ಕೋರ್ಟ್ ಅಂತಿಮವಾಗಿ ತೀರ್ಪು ಕೊಟ್ಟದ್ದು ಹೀಗೆ:
A total ban (on Cattle Slaughter) was not permisseble if, Under economic conditions, keeping useless bull or bullock be a burden on the society and therefore not in the public interest -  ಸಮಾಜದ ಮೇಲೆ ಹೊರೆಯಾಗಬಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನೂ ಪ್ರತಿನಿಧಿಸದ ನಿರುಪಯುಕ್ತ ಜಾನುವಾರುಗಳಿರುವಲ್ಲಿ, ಜಾನುವಾರು ಹತ್ಯೆಗೆ ಸಂಪೂರ್ಣ ನಿಷೇಧ ವಿಧಿಸುವುದು ಅನುವದನೀಯವಲ್ಲ.’ (ವಿಕಿಪೀಡಿಯಾ)
   ನಿಜವಾಗಿ, ಕರ್ನಾಟಕದಲ್ಲಿ ಈ ಮೊದಲೇ ಜಾರಿಯಲ್ಲಿದ್ದ 'ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964'ರ ಬದಲು ರಾಜ್ಯ ಬಿಜೆಪಿ ಸರಕಾರವು ಜಾರಿಗೆ ತರಲು ಹೊರಟಿದ್ದ, ‘ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2010’ರಲ್ಲಿ ಇದ್ದದ್ದು ಈ ಗೊಂದಲಗಳೇ. ಒಂದು ಹಸು ಗರಿಷ್ಠ ಅಂದರೆ 14 ವರ್ಷಗಳ ವರೆಗೆ ಹಾಲು ಕೊಡುತ್ತದೆ. ಹಸು ಎಂದಲ್ಲ, ಎಮ್ಮೆ, ಕೋಣ, ಎತ್ತು, ಗೂಳಿಗಳೆಲ್ಲ ಉಪಯೋಗಕ್ಕೆ ಬರುವುದು 14-15 ವರ್ಷಗಳ ವರೆಗೆ ಮಾತ್ರ. ಹಾಗಂತ, ಆ ಬಳಿಕ ಅವು ತಕ್ಷಣ ಸಾಯುತ್ತವೆ ಎಂದಲ್ಲ. ಇನ್ನೂ 10 ವರ್ಷಗಳ ವರೆಗೆ ಬದುಕುವ ಸಾಮರ್ಥ್ಯ  ಅವುಗಳಲ್ಲಿರುತ್ತವೆ. ಆದರೆ ಹಾಲು ಕೊಡದ, ಉಳುಮೆಗೆ ಬಾರದ ಈ ಅಯೋಗ್ಯ ಜಾನುವಾರುಗಳನ್ನು ಸಾಕುವ ಸಾಮರ್ಥ್ಯ  ಎಷ್ಟು ರೈತರಲ್ಲಿದೆ? ಅವುಗಳಿಗೆ ಮೇವು, ಹಿಂಡಿಗಳನ್ನು ಒದಗಿಸುವುದಕ್ಕೆ ವರಮಾನ ಬೇಕಲ್ಲವೇ? ಉಳುಮೆಗೆ ಯೋಗ್ಯವಲ್ಲದ ಎತ್ತು ಕನಿಷ್ಠವೆಂದರೆ, 20ರಿಂದ 30 ಸಾವಿರದಷ್ಟು ಬೆಲೆ ಬಾಳುತ್ತದೆ. ಈ ಎತ್ತನ್ನು ಮಾರದೇ ಓರ್ವ ರೈತ ಉಳುಮೆಗೆ ಯೋಗ್ಯವಾದ ಬೇರೆ ಎತ್ತನ್ನು ಖರೀದಿಸುವುದಾದರೂ ಹೇಗೆ? ಖರೀದಿಸದಿದ್ದರೆ ಉಳುಮೆಗೆ ಏನು ಮಾಡಬೇಕು? ನಿಜವಾಗಿ, ಇದು ಕೇವಲ ಎತ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಹಸು, ಎಮ್ಮೆಗಳ ಸುತ್ತಲೂ ಇರುವುದು ಈ ಲೆಕ್ಕಾಚಾರವೇ. ಓರ್ವರು ಹಸುವನ್ನು ಸಾಕುವುದೇ ಹಾಲಿನ ಉದ್ದೇಶದಿಂದ. ಹಾಲಿಗಿರುವ ಮಾರುಕಟ್ಟೆ, ಸರಕಾರಿ ಸಬ್ಸಿಡಿ, ವರಮಾನಗಳೆಲ್ಲ ಓರ್ವರನ್ನು ಹಸು ಸಾಕುವಂತೆ ಪ್ರೇರೇಪಿಸುತ್ತಿದೆಯೇ ಹೊರತು ಬರೇ 'ಶ್ರದ್ಧೆ'ಯಲ್ಲ. ಕೇವಲ 'ಶ್ರದ್ಧೆ'ಗಾಗಿ ಮಾತ್ರ ಹಸುವನ್ನು ಸಾಕುವವರು ಅದನ್ನು ಮಾರುವುದು ಬಿಡಿ, ಅದರ ಹಾಲಿನಿಂದ ವ್ಯಾಪಾರ ಮಾಡಿ ದುಡ್ಡು ಗಳಿಸುವ ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ, 'ಶ್ರದ್ಧಾಬಿಂದು' ವೊಂದು ತನ್ನ ಗೌರವವನ್ನು ಕಳಕೊಳ್ಳುವುದೇ ವ್ಯಾಪಾರೀಕರಣ ಗೊಂಡಾಗ. ಯಾವಾಗ ಹಾಲು ಲಾಭದಾಯಕ ಉದ್ಯಮ ಅನ್ನಿಸಿ ಕೊಂಡಿತೋ ಆಗಲೇ ಹಸು 'ಶ್ರದ್ಧಾಬಿಂದು'ವಿನಿಂದ ಹೊರಬಂದು ಲಾಭ-ನಷ್ಟದ ಪ್ರಾಣಿಯಾಗಿ ಬಿಟ್ಟಿತು. ಹಾಲು ಕೊಡದ ಹಸುವನ್ನು ಸಾಕುವುದು ನಷ್ಟದ ವ್ಯಾಪಾರವೆಂದು ಪರಿಗಣಿಸಲಾಯಿತು. ಅಂದ ಹಾಗೆ, 1964ರ ಗೋಹತ್ಯಾ ತಡೆ ಕಾಯ್ದೆಯನ್ನು ಊರ್ಜಿತದಲ್ಲಿರಿಸಲು ತೀರ್ಮಾನಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರ ನಿಲುವನ್ನು ಪ್ರಶ್ನಿಸುತ್ತಿರುವವರಲ್ಲಿ ಎಷ್ಟು ಮಂದಿ ಇವತ್ತು ಗೋವನ್ನು ಬರೇ ಶ್ರದ್ಧೆಗಾಗಿ ಸಾಕುತ್ತಿದ್ದಾರೆ? ಅವರ ಮನೆಗಳಲ್ಲಿ ಎಷ್ಟು ಹಾಲು ಕೊಡದ ಹಸುಗಳಿವೆ? ಎಷ್ಟು ಗಂಡು ಕರು ಮತ್ತು ಎತ್ತುಗಳಿವೆ? ಹಸು ಒಂದು ದಿನ ತುಸು ಕಡಿಮೆ ಹಾಲು ಕೊಟ್ಟರೂ ನೆತ್ತಿಯಲ್ಲಿ ನೆರಿಗೆಗಳು ಮೂಡುವ ಈ ದಿನಗಳಲ್ಲಿ ಹಾಲೇ ಕೊಡದ ಹಸುವನ್ನು ಅದು ಸಾಯುವವರೆಗೂ ಸಾಕಬೇಕೆಂದು ಬಯಸುತ್ತಾರಲ್ಲ, ಅದು ಎಷ್ಟು ಪ್ರಾಯೋಗಿಕ? ಹಾಲು ಕೊಡದ ಹಸುವನ್ನು ಮಾರಿ ಇನ್ನಷ್ಟು ಕರುಗಳನ್ನೋ ಹಸುಗಳನ್ನೋ ಖರೀದಿಸಿದರೆ ಮಾತ್ರವೇ ಓರ್ವನಿಗೆ ತನ್ನ ಉದ್ದಿಮೆಯನ್ನು ವಿಸ್ತರಿಸಲು ಸಾಧ್ಯ ಅಲ್ಲವೇ? ಗೊಡ್ಡು ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟುತ್ತಾ ಹೋದರೆ ಸಾಕುವುದು ಹೇಗೆ, ಯಾವ ವರಮಾನದಿಂದ? ಅಷ್ಟಕ್ಕೂ, ಹಸುವನ್ನು ಬರೇ ಶ್ರದ್ಧಾಬಿಂದುವಾಗಿ ಮಾತ್ರ ಸಮಾಜ ಕಾಣುತ್ತದೆಂದಾದರೆ ಕೊಟ್ಟಿಗೆಯಲ್ಲಿ ಕೇವಲ ಹೆಣ್ಣು ಕರುಗಳಷ್ಟೇ ಕಾಣುತ್ತಿರುವುದೇಕೆ? ಗಂಡು ಕರುಗಳೆಲ್ಲ ಏನಾಗುತ್ತವೆ? ಹಾಲು ಕುಡಿಯುವುದನ್ನು ನಿಲ್ಲಿಸಿದ ಕೂಡಲೇ ಅದರ ಪೋಷಕರು ಅದನ್ನು ಮಾರುತ್ತಿದ್ದಾರೆ ಎಂದಲ್ಲವೇ ಇದರರ್ಥ? ಈ ಮಾರಾಟವಾದರೂ ಯಾಕಾಗಿ, ಯಾವ ಉದ್ದೇಶದಿಂದ? ಗಂಡು ಕರುವನ್ನು ಸಾಕಿದರೆ ಲಾಭ ಇಲ್ಲ ಎಂಬುದನ್ನು ಬಿಟ್ಟರೆ ಇದಕ್ಕೆ ಬೇರೆ ಯಾವ ಕಾರಣ ಇದೆ? ಹೀಗಿರುವಾಗ,
   '.. ಗೋವು, ಕರು, ಗೂಳಿ, ಎತ್ತು, ಎಮ್ಮೆ, ಕೋಣ.. ಸಹಿತ ಜಾನುವಾರು ಪಟ್ಟಿಯಲ್ಲಿ ಬರುವ ಪ್ರಾಣಿಯನ್ನು ಹತ್ಯೆ ಮಾಡುವುದು 1 ಲಕ್ಷ  ರೂಪಾಯಿ ದಂಡ ಮತ್ತು 7 ವರ್ಷ ಜೈಲು ಶಿಕ್ಷೆಗೆ ಅರ್ಹವಾಗಬಹುದಾದಷ್ಟು ಭೀಕರ ಅಪರಾಧವಾಗುತ್ತದೆ..' ಎಂಬ ಕಾನೂನನ್ನು ಜಾರಿ ಮಾಡಲು ಹೊರಟಿದ್ದ ಬಿಜೆಪಿ ಸರಕಾರದ ಮಸೂದೆಯನ್ನು ರದ್ದುಪಡಿಸದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಇನ್ನೇನು ಮಾಡಬೇಕಿತ್ತು?  ‘.. 12 ವರ್ಷಕ್ಕಿಂತ ಮೇಲ್ಪಟ್ಟ ನಿರುಪಯುಕ್ತ ಜಾನುವಾರುಗಳ ಹತ್ಯೆಗೆ ಸಮ್ಮತಿ ನೀಡುವ..’ 1964ರ ಮಸೂದೆಯನ್ನು ಊರ್ಜಿತಗೊಳಿಸದೇ ಅವರಿಗೆ ಬೇರೆ ಯಾವ ದಾರಿಯಿತ್ತು?
 ಗುಜರಾತ್
 ಮಧ್ಯಪ್ರದೇಶ
 ಹಿಮಾಚಲ ಪ್ರದೇಶ
   ಈ ಮೂರು ರಾಜ್ಯಗಳನ್ನು ಬಿಟ್ಟರೆ ಉಳಿದಂತೆ ಎಲ್ಲೂ ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿಯೇ ಇಲ್ಲ. ಕೇರಳ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೋರಾಮ್, ನಾಗಾಲ್ಯಾಂಡ್, ತ್ರಿಪುರ, ಲಕ್ಷದ್ವೀಪಗಳಲ್ಲಿ ಜಾನುವಾರು ಹತ್ಯೆಗೆ ಯಾವ ತಡೆಯನ್ನೂ ಹಾಕಲಾಗಿಲ್ಲ. ಉಳಿದ ರಾಜ್ಯಗಳಲ್ಲಿ, ಕರ್ನಾಟಕದಲ್ಲಿ ಸದ್ಯ ಇರುವಂಥ ಕಾನೂನಷ್ಟೇ ಇದೆ. ಗುಜರಾತ್‍ನಲ್ಲಿ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿಗೆ ಬಂದದ್ದೇ  2011ರಲ್ಲಿ. ಇದರ ಆಸು-ಪಾಸಿನಲ್ಲೇ ಉಳಿದೆರಡು ರಾಜ್ಯಗಳಲ್ಲೂ ಇದು ಜಾರಿಗೆ ಬಂದಿದೆ. ಅಷ್ಟಕ್ಕೂ, 'ಮಧ್ಯ ಪ್ರದೇಶದ ಸದ್ಯದ ಸ್ಥಿತಿ ಹೇಗಿದೆಯೆಂದರೆ, ಹಾಲು ಕೊಡದ, ಉಳುಮೆಗೆ ಬಾರದ ಹಸು, ಎತ್ತುಗಳ ಸಹಿತ ದಾರಾಳ ಜಾನು ವಾರುಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..' ಎಂದು ಅನುಷಾ ನಾರಾಯಣ್ ದಿ ಹಿಂದೂವಿನಲ್ಲಿ ಇತ್ತೀಚೆಗೆ (5-5-2013) ಬರೆದಿದ್ದರು. ನಿಜವಾಗಿ, ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷಿದ್ಧಗೊಳಿಸ ಬೇಕಾದರೆ ನಿರುಪಯುಕ್ತ ಜಾನುವಾರುಗಳಿಗೆ ಏನಾದರೂ ವ್ಯವಸ್ಥೆ ಆಗಬೇಕಲ್ಲವೇ? ಒಂದು ರೀತಿಯಲ್ಲಿ, ಇಂಥ ಜಾನುವಾರುಗಳನ್ನು ಪೋಷಕರು ಮಾರಾಟ ಮಾಡದಿರಬೇಕಾದರೆ ಅಥವಾ ರಸ್ತೆಗೆ ಬಿಡಬಾರದೆಂದಾದರೆ ಅವುಗಳನ್ನು ಸೂಕ್ತ ಬೆಲೆ ಕೊಟ್ಟು ಖರೀದಿಸುವ ವ್ಯವಸ್ಥೆ ಸರಕಾರದಿಂದಲೇ ಆಗಬೇಕು. ಗೋಶಾಲೆ, ಮೇವು, ಹಿಂಡಿ..ಗಳ ಸಹಿತ ದೊಡ್ಡದೊಂದು ಬಜೆಟ್ ತಯಾರಾಗಬೇಕು. ಆದರೆ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ತರಲು ಹೊರಟ ಬಿಜೆಪಿ ಸರಕಾರ ಇಂಥದ್ದೊಂದು ಯೋಜನೆಯನ್ನು ತಯಾರಿಸಿರುವ ಬಗ್ಗೆ ಎಲ್ಲಾದರೂ ಹೇಳಿಕೊಂಡದ್ದು ನಿಮಗೆ ಗೊತ್ತೇ? ಇಲ್ಲವಲ್ಲ. ಹಾಗಾದರೆ, ಅದರ ಪೋಷಕರೇ ಅದನ್ನು ಸಾಕಬೇಕು ಎಂದಲ್ಲವೇ ಇದರರ್ಥ? ಇದು ಎಷ್ಟು ಪ್ರಾಯೋಗಿಕ? ಬಿಜೆಪಿ ಯಾರನ್ನು ಮೊರ್ಖರನ್ನಾಗಿಸಲು ಹೊರಟಿದೆ? ಮುಂದೊಂದು ದಿನ, ಜಾನುವಾರುಗಳನ್ನು ರಸ್ತೆಗೆ ಅಟ್ಟಿದ ಆರೋಪ ಹೊರಿಸಿ ಅದರ ಪೋಷಕರನ್ನೇ ಜೈಲಿಗಟ್ಟುವ ಪ್ರಯತ್ನಕ್ಕೂ ಅದು ಮುಂದಾಗಲಾರದು  ಎಂದು ಯಾವ ಆಧಾರದಿಂದ ಹೇಳಬಲ್ಲಿರಿ? ಅಲ್ಲದೇ, 1998ರಲ್ಲಿ ಬಿಜೆಪಿಯ ವಾಜಪೇಯಿ ಯವರೇ ಪ್ರಧಾನಿಯಾಗಿದ್ದರಲ್ಲ, ಆಗ ಈ ದೇಶದಲ್ಲಿರುವ 3500ರಷ್ಟು ಕಸಾಯಿಖಾನೆಗಳನ್ನು ಮುಚ್ಚಿಸಲು ಅವರು ಯಾವ ಕ್ರಮ ಕೈಗೊಂಡಿದ್ದರು? ಕನಿಷ್ಠ ಕಸಾಯಿಖಾನೆಗಳಿಗೆ ನೀಡಲಾಗುವ ಸಬ್ಸಿಡಿಯನ್ನು ನಿಲ್ಲಿಸುತ್ತಿದ್ದರೂ (ದಿ ಹಿಂದೂ, ಮೇ 5, 2013 ) ಹೆಚ್ಚಿನವು ಬಾಗಿಲು ಮುಚ್ಚುತ್ತಿರಲಿಲ್ಲವೇ? ಆದರೆ, ಯಾಕೆ ಹೀಗಾಯಿತೆಂಬುದು ಬಿಜೆಪಿಗರಿಗೆ ಚೆನ್ನಾಗಿ ಗೊತ್ತು. ಇದೊಂದು ಲಾಭದಾಯಕ ಉದ್ಯಮ. ಆದ್ದರಿಂದಲೇ ಸಬ್ಸಿಡಿ ಕೊಟ್ಟು ಅದನ್ನು ಉತ್ತೇಜಿಸಲೇಬೇಕಾಗಿದೆ. ಈ ದೇಶದ ದೊಡ್ಡ ಆದಾಯ ಮೂಲವೇ ಮಾಂಸ. ಕಳೆದ ವರ್ಷ 16,80,000 ಮೆಟ್ರಿಕ್ ಟನ್‍ಗಳಷ್ಟು ಮಾಂಸವನ್ನು ರಫ್ತು ಮಾಡಿರುವ ಭಾರತ, ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಬ್ರೆಝಿಲ್ ಮತ್ತು ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿವೆ. 2013ರಲ್ಲಿ ಈ ರಫ್ತಿನ ಪ್ರಮಾಣವನ್ನು 29%ಕ್ಕೆ ಹೆಚ್ಚಿಸಬೇಕೆಂಬ ಗುರಿಯನ್ನೂ ಸರಕಾರ ಇಟ್ಟುಕೊಂಡಿದೆ. ಅಷ್ಟಕ್ಕೂ, 1988ರಿಂದ ವಿಶ್ವದಲ್ಲೇ ಅತ್ಯಧಿಕ ಹಾಲು ಉತ್ಪಾದಿಸುವ, 2016-17ನೇ ವರ್ಷದ ಅವಧಿಯಲ್ಲಿ 150 ಮಿಲಿಯನ್ ಟನ್‍ಗಳಷ್ಟು ಹಾಲಿನ ಗುರಿಯನ್ನು ಹೊಂದಿದ್ದು, ಮೇವಿಗಾಗಿ 2,242 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವ ಮತ್ತು ಮಿಲಿಯಾಂತರ ಜಾನುವಾರಗಳ ಸೃಷ್ಟಿಗೆ ಯೋಜನೆ ರೂಪುಗೊಂಡಿರುವ ದೇಶವೊಂದರಲ್ಲಿ, ರಾಜಕೀಯ ಲಾಭಕ್ಕಾಗಿ ಜಾನುವಾರುಗಳನ್ನು ಕಟಕಟೆಗೆ ತರುವುದು ಎಷ್ಟು ಸರಿ?
    ನಿಜವಾಗಿ, ಹಸು ಸಹಿತ ಒಟ್ಟು ಜಾನುವಾರುಗಳು ಉಪಯುಕ್ತ ಮತ್ತು ನಿರುಪಯುಕ್ತಗೊಳ್ಳುತ್ತಾ, ಸಮಾಜದ ಭಾಗವಾಗಿ ಅನಾದಿ ಕಾಲದಿಂದಲೂ ಬದುಕುತ್ತಲೇ ಇವೆ. ಅವು ಹಾಲೂ ಕೊಟ್ಟಿವೆ. ಆಹಾರವಾಗಿಯೂ ಬಳಕೆಯಾಗಿವೆ. ವಸಿಷ್ಠ ಮಹರ್ಷಿಗೆ ಕರುವಿನ ಮಾಂಸವನ್ನು ಆಹಾರವಾಗಿ ಕೊಟ್ಟ ಚರಿತ್ರೆಯು ಸಂಸ್ಕ್ರುತ ಮಹಾಕವಿ ಭವಭೂತಿ ಬರೆದ ಉತ್ತರ ರಾಮ ಚರಿತದಲ್ಲಿದೆ. (ಅನು: ಎಸ್.ವಿ. ಪರಮೇಶ್ವರ ಭಟ್ಟ- ಪು 309, 310) ಹೀಗಿದ್ದೂ, ‘ಗೋಹತ್ಯೆಯನ್ನು ಪ್ರಾರಂಭಿಸಿದ್ದು ಮುಸ್ಲಿಮರು, ಅವರ ಬಾಯಿ ಚಪಲಕ್ಕೆ ನಮ್ಮ ಶ್ರದ್ಧಾಬಿಂದುವಿನ ಹತ್ಯೆಯಾಗುತ್ತಿದೆ..’ ಎಂಬ ಸುಳ್ಳನ್ನು ಬಿಜೆಪಿಯ ಕಾರ್ಯಕರ್ತರು ದೇಶದಾದ್ಯಂತ ಹಬ್ಬಿಸುತ್ತಿದ್ದಾರೆ. ಒಂದು ವೇಳೆ, ಮುಸ್ಲಿಮರಿಂದಲೇ ಗೋಹತ್ಯೆಯ ಪ್ರಾರಂಭವಾಯಿತು ಎಂದಾದರೆ ಅದನ್ನು ತಿನ್ನಬೇಕಾದದ್ದು ಯಾರು, ಮುಸ್ಲಿಮರು ಮಾತ್ರ ತಾನೇ? ಆದರೆ ಪರಿಸ್ಥಿತಿ ಹಾಗಿದೆಯೇ? ಇವತ್ತು ಈ ದೇಶದಲ್ಲಿ ಗೋಮಾಂಸದ ದೊಡ್ಡ ಗಿರಾಕಿಗಳು ಬಹುಸಂಖ್ಯಾತರೇ ಎಂಬುದನ್ನು ಯಾರು ಅಲ್ಲಗಳೆಯುತ್ತಾರೆ? ಕೇರಳ ಸಹಿತ ಅನೇಕ ರಾಜ್ಯಗಳ ಹಿಂದೂ ಬಾಂಧವರ ಹೊಟೇಲುಗಳಲ್ಲಿ ಇವತ್ತು ಗೋಮಾಂಸ ಲಭ್ಯವಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಅನಾದಿ ಕಾಲದಿಂದಲೂ ಅದು ಜನರ ಆಹಾರವಾಗಿಲ್ಲದಿರುತ್ತಿದ್ದರೆ ಇದು ಸಾಧ್ಯವಿತ್ತೇ? ಅಷ್ಟಕ್ಕೂ, ಮುಸ್ಲಿಮರು ಗೋಮಾಂಸ ಸೇವಿಸುವುದು ಹಿಂದೂಗಳ ಶ್ರದ್ಧಾಬಿಂದುವಿಗೆ ಅಗೌರವ ತೋರಿಸಬೇಕು ಎಂದು ಖಂಡಿತ ಅಲ್ಲ. ಅದನ್ನು ಸೇವಿಸದಿದ್ದರೆ ಅವರ ವಿಶ್ವಾಸಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಸರಕಾರವೇ ನಡೆಸುತ್ತಿರುವ ಕಸಾಯಿಖಾನೆಗಳಲ್ಲಿ ಮಾಂಸ ಲಭ್ಯವಾಗುತ್ತಿರುವುದರಿಂದಲೇ ಅವರು ಅದನ್ನು ಸೇವಿಸುತ್ತಿರುವುದು. ಹಾಸ್ಯಾಸ್ಪದ ಏನೆಂದರೆ, ಬಿಜೆಪಿಯ ಗೋಹತ್ಯಾ ನಿಷೇಧ ಮಸೂದೆಯನ್ನು ಹಿಂದೂ ಪರ ಮತ್ತು ಮುಸ್ಲಿಮ್ ವಿರೋಧಿಯೆಂಬಂತೆ ಅದರ ಕಾರ್ಯಕರ್ತರು ಬಿಂಬಿಸುತ್ತಿದ್ದಾರೆ. ನಿಜವಾಗಿ, ಅದು ಮುಸ್ಲಿಮ್ ವಿರೋಧಿಯಲ್ಲ, ಹಿಂದೂ ವಿರೋಧಿ. ಒಂದು ರೀತಿಯಲ್ಲಿ, ಗೋವಿಗೆ ಬಿಜೆಪಿ ಕೊಡುತ್ತಿರುವ ವ್ಯಾಖ್ಯಾನವನ್ನು ಈ ದೇಶದ ಜನಸಾಮಾನ್ಯರು ಖಂಡಿತ ಕೊಡುತ್ತಿಲ್ಲ. ಅವರು ಅದನ್ನು ಗೌರವಿಸುವಂತೆಯೇ ಆಹಾರ ಕ್ರಮಗಳ ಒಂದು ಭಾಗವಾಗಿಯೂ ಪರಿಗಣಿಸಿದ್ದಾರೆ. ನಿರುಪಯುಕ್ತ ಜಾನುವಾರುಗಳನ್ನು ಮಾರುವುದಕ್ಕೂ ಆಹಾರವಾಗಿ ಬಳಕೆ ಮಾಡುವುದಕ್ಕೂ ಮತ್ತು ಗೌರವಿಸುವುದಕ್ಕೂ ಅವರು ಸಂಬಂಧವನ್ನು ಕಲ್ಪಿಸುತ್ತಿಲ್ಲ. ಅವೆಲ್ಲವನ್ನೂ ಅವರು ಭಿನ್ನಭಿನ್ನವಾಗಿಯೇ ಪರಿಗಣಿಸುತ್ತಿದ್ದಾರೆ. ಅಷ್ಟಕ್ಕೂ,
   ಗೋವಿನ ಸಹಜ ಗರ್ಭಧಾರಣೆಯ ಹಕ್ಕನ್ನು ಕಸಿದು ಇಂಜಕ್ಷನ್ ಮುಖಾಂತರ ಕೃತಕ ಗರ್ಭಧಾರಣೆ ಮಾಡಿಸಿ ವರ್ಷದುದ್ದಕ್ಕೂ ಹಾಲು ಪಡೆಯಲು ಪ್ರಯತ್ನಿಸುವ ಮತ್ತು ಗೋವನ್ನು ಅಪ್ಪಟ ವ್ಯಾಪಾರದ ಪ್ರಾಣಿಯಾಗಿ ಮಾರ್ಪಡಿಸಿರುವ ಇಂದಿನ ಆಧುನಿಕ ಭಾರತೀಯರ ಬಗ್ಗೆ, ಅವರಿಂದಾಗಿ ಗೋವಿಗಾಗುತ್ತಿರುವ ಹಿಂಸೆಯ ಬಗ್ಗೆ ಏನೊಂದೂ ಹೇಳದೇ, ಬರೇ `ಹತ್ಯೆಯ’ ಬಗ್ಗೆ ಮಾತ್ರ ಮಾತಾಡಿದರೆ ಈ ಬಿಜೆಪಿಯನ್ನು ಯಾರು ನಂಬುತ್ತಾರೆ,  ಹೇಳಿ?

Monday, May 13, 2013

ಆ ಯುವಕ ಕಪಾಳಮೋಕ್ಷ ಮಾಡಿದ್ದನಲ್ಲ, ನೆನಪಿದೆಯೇ ಶೆಟ್ಟರೆ?

https://mail-attachment.googleusercontent.com/attachment/?ui=2&ik=6079291e4d&view=att&th=13e9d973884f395f&attid=0.1&disp=inline&realattid=f_hgnjxndz0&safe=1&zw&saduie=AG9B_P9AdjG_6F_C-d01hjtY4eU8&sadet=1368449737401&sads=MD_g-j028X0Cd5ERihWzTFo6h3Y   ‘ಬಿ.ಎ. ಬಸವರಾಜ್, ವಿಜಯ್ ಕಾಶಪ್ಪನವರ್, ಡಿ.ಕೆ. ಶಿವಕುಮಾರ್, ಅನಿಲ್ ಲಾಡ್, ಮುನಿರತ್ನ.. ಇವರೆಲ್ಲ ಬಿಜೆಪಿಯವರಾ? ಭ್ರಷ್ಟಾಚಾರದ ವಿರುದ್ಧ ರಾಜ್ಯದ ಮಂದಿ ಮತ ಹಾಕಿದ್ದಾರೆ ಎಂದಾದರೆ ಇವರೇಕೆ ಗೆದ್ದು ಬಂದರು? ಇವರೇನು ಸಾಚಾಗಳೇ? ಭಾರತೀಯ ಅಪರಾಧ ಸಂಹಿತೆಯ (ಐ.ಪಿ.ಸಿ.) ಅಡಿಯಲ್ಲಿ ಬಸವರಾಜ್‍ರ ಮೇಲೆ 11 ಪ್ರಕರಣಗಳು ದಾಖಲಾಗಿವೆ. ಕಾಶಪ್ಪನವರ್‍ರ ಮೇಲೆ 5 ಪ್ರಕರಣಗಳಿವೆ. ಡಿ.ಕೆ. ಶಿವಕುಮಾರ್‍ರ ಆಸ್ತಿ ಕಳೆದ 5 ವರ್ಷಗಳಲ್ಲಿ 176 ಕೋಟಿಗೇರಿದೆ. ಗಣಿ ದನಿ ಅನಿಲ್ ಲಾಡ್‍ರ ಮೇಲೆ 86 ಎಕರೆ ಅರಣ್ಯ ಅಕ್ರಮ ಸ್ವಾಧೀನದ ಕೇಸು ಇದೆ. ಇವೆಲ್ಲ ಏನು, ಶಿಷ್ಟಾಚಾರವೇ? ಹೀಗಿದ್ದೂ ಇವರ ನ್ನೆಲ್ಲ 9, 16, 31, 19 ಸಾವಿರ ಮತಗಳ ಅಂತರದಿಂದ ಜನರು ಗೆಲ್ಲಿಸಿದ್ದೇಕೆ? ಕಾಂಗ್ರೆಸಿಗರೆಂದೇ? ನಿಜವಾಗಿ, ಇದು ಕಾಂಗ್ರೆಸ್ಸಿನ ಗೆಲುವಲ್ಲ. ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶವೂ ಅಲ್ಲ. ಯಡಿಯೂರಪ್ಪರ ಕೆಜೆಪಿ ಇಲ್ಲದೇ ಇರುತ್ತಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಕನಸು ಕನಸಾಗಿಯೇ ಉಳಿಯುತ್ತಿತ್ತು..’ ಎಂದೆಲ್ಲ ಬಿಜೆಪಿಯ ಕೆಲವು ಅತೃಪ್ತ ಆತ್ಮಗಳು ಇವತ್ತು ಸಮರ್ಥಿಸಿಕೊಳ್ಳುತ್ತಿವೆ. ಅಷ್ಟಕ್ಕೂ ಯಡಿಯೂರಪ್ಪರೇನು ಕಾಂಗ್ರೆಸ್‍ನಿಂದ ಮುಖ್ಯಮಂತ್ರಿಯಾಗಿದ್ದರೇ? ಬಿಜೆಪಿಯಿಂದ ಸಿಡಿದು ಕೆಜೆಪಿ ಕಟ್ಟುವುದಕ್ಕೆ ಭ್ರಷ್ಟಾಚಾರ ಆರೋಪಗಳ ಹೊರತು ಅವರಿಗೆ ಬೇರೆ ಯಾವುದು ಕಾರಣ ಆಗಿತ್ತು? 2008ರಲ್ಲಿ ಇದೇ ಯಡಿಯೂರಪ್ಪರ ಬಿಜೆಪಿಯು ರಾಜ್ಯ ಜನತೆಯೊಂದಿಗೆ ಮತ ಯಾಚಿಸಿದ್ದು ಯಾವುದನ್ನು ಮುಂದಿಟ್ಟುಕೊಂಡು ಎಂಬುದನ್ನೊಮ್ಮೆ ನೆನಪಿಸಿಕೊಳ್ಳಿ. ಭ್ರಷ್ಟಾಚಾರ, ನೈತಿಕ ಪೊಲೀಸ್‍ಗಿರಿ, ಕೋಮುವಾದ, ಧಾರ್ಮಿಕ ತಾರತಮ್ಯಗಳನ್ನು ತನ್ನ ಚುನಾವಣಾ ಅಜೆಂಡಾವಾಗಿ ಯಡಿಯೂರಪ್ಪರು ಬಿಂಬಿಸಿದ್ದರೇ? ಇಲ್ಲವಲ್ಲ. ಕುಮಾರ ಸ್ವಾಮಿಯ ವಚನಭ್ರಷ್ಟತನವನ್ನು, ಗೋವಿನ ಹಾಡನ್ನು ಅವರು ಅಜೆಂಡಾವಾಗಿಸಿದ್ದರು. ಗೋವಿನಂತೆ ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದಾಗಿ ವಚನ ಕೊಟ್ಟಿದ್ದರು. ಬಿಜೆಪಿ ರೈತರ ಪಕ್ಷ  ಅಂದರು. ಆದರೆ ಬಳಿಕ ಬಿಜೆಪಿ ಗುರುತಿಸಿಕೊಂಡದ್ದಾದರೂ ಯಾವ ಮುಖದೊಂದಿಗೆ? ಗೊಬ್ಬರ ಕೇಳಿದ ರೈತರಿಗೆ ಗುಂಡು ಹಾರಿಸಿದಲ್ಲಿಂದ ತೊಡಗಿ ಹೋಮ್‍ಸ್ಟೇ ದಾಳಿಯ ವರೆಗೆ ಬರೀ ವಿಕಾರ ಮುಖವನ್ನೇ ಅಲ್ಲವೇ? ಇವನ್ನೆಲ್ಲ ಅಡಗಿಸಿಟ್ಟು ಕೇವಲ ಕೆಜೆಪಿಯನ್ನು ಭೂತವಾಗಿ ನೋಡುವುದು ಎಷ್ಟು ಸೂಕ್ತ, ಸಮಂಜಸ?
ಮಿಸ್ಟರ್ ಗೋಲ್ಡನ್ ಸ್ಪೂನ್
ಇಟಲಿ ಮೇಡಮ್
50 ಕೋಟಿಯ ಗರ್ಲ್ ಫ್ರೆಂಡ್..
   ಎಂಬೆಲ್ಲ ಅಸಭ್ಯ ಪದಗಳನ್ನು ಬಳಸಿ ಭಾಷಣ ಮಾಡುವ ಮೋದಿ, ರಾಜ್ಯದ 3 ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಎಪ್ರಿಲ್ 28ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡರು ಬಿಜೆಪಿಯೇ ಹೇಳಿಕೊಂಡಿತ್ತು. ಆದಿತ್ಯವಾರದಂದು ಅದೂ ಸಂಜೆಯ ಸಮಯದಲ್ಲಿ ಬೆಂಗಳೂರಿಗರನ್ನು ಲಕ್ಷಾಂತರ ಸಂಖ್ಯೆಯನ್ನು ಸೆಳೆಯುವ ಸಾಮರ್ಥ್ಯ  ಇರುವುದು ಮೋದಿಗೆ ಮಾತ್ರ ಎಂದೂ ಕೆಲವು ಮಾಧ್ಯಮಗಳು ಬರೆದುವು. ಸೋನಿಯಾ ಗಾಂಧಿ ಮತ್ತು ಅವರ ‘ಬಸ್-ಬಿರಿಯಾನಿ’ ಬೆಂಬಲಿಗರು ಇದರಿಂದ ಪಾಠ ಕಲಿಯಲಿ ಎಂದು ಕೆಲವರು ಟ್ವೀಟ್ ಮಾಡಿದರು. ಮೋದಿಯನ್ನು ವಾಜಪೇಯಿಗೆ, ವಲ್ಲಭಭಾಯಿಗೆ ಹೋಲಿಸಿ ಸಂತಸಪಟ್ಟರು.IRCC (Industrial Reseach and Consultancy Centre); ಗುಜರಾತ್‍ನ ಚುನಾವಣಾ ರಾಲಿಗಳು; ಇಂಡಿಯಾ ಟುಡೇ ಪತ್ರಿಕೆಯ ಸಮಾರಂಭ; FICCI (Federation of Indian Chambers of Commerce and Industry) ಮತ್ತು ಈಗ ಬೆಂಗಳೂರು.. ಎಲ್ಲೆಡೆಯೂ ಜನಸ್ತೋಮವೇ ಜನಸ್ತೋಮ. ಅವರ ಭಾಷಣಕ್ಕೆ ಇನ್ನಾರೂ ಸಾಟಿಯಿಲ್ಲ ಎಂದು ಬಿಜೆಪಿಗರು ಸಂಭ್ರಮಪಟ್ಟರು. ಸದ್ಯದ ಬಿಜೆಪಿ ವಿರೋಧಿ ಅಲೆಯು ಮೋದಿಯ ಪ್ರವಾಸದಿಂದಾಗಿ ಸರಿದು ಬಿಡಬಹುದು ಅನ್ನುವ ಪ್ರಚಾರವೂ ನಡೆಯಿತು. ಇದಕ್ಕೆ ಪೂರಕವಾಗಿ ಮೋದಿಯೂ ಸ್ಪಂದಿಸಿದರು. ರಾಹುಲ್ ಗಾಂಧಿಯನ್ನು ಮಿಸ್ಟರ್ ಗೋಲ್ಡನ್ ಸ್ಪೂನ್ ಎಂದು ಕರೆದು ಚಪ್ಪಾಳೆ ಗಿಟ್ಟಿಸಿಕೊಂಡರು. ಕಳೆದ ಅಕ್ಟೋಬರ್‍ನಲ್ಲಿ ನಡೆದ ಗುಜರಾತ್ ಚುನಾವಣೆಯ ವೇಳೆ ಇದೇ ಮೋದಿ, 'ಬೆಹೆನ್ ಸೋನಿಯಾ ಬೆನ್,  I bet you have lost mental balance - ಸೋನಿಯಾ ಗಾಂಧಿಯವರೇ, ನೀವು ಮಾನಸಿಕ ಸ್ಥಿಮಿತವನ್ನು ಕಳಕೊಂಡಿದ್ದೀರಿ - ಎಂದಿದ್ದರು. ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇಂದ್ರ ಸಚಿವ ಶಶಿ ತರೂರ್ ರನ್ನು ಉದ್ದೇಶಿಸಿ, ‘ತರೂರ್‍ರು ಸುನಂದಾ ಪುಷ್ಕರ್ ಎಂಬ 50 ಕೋಟಿ ರೂಪಾಯಿಯ ಗರ್ಲ್ ಫ್ರೆಂಡನ್ನು ಹೊಂದಿದ್ದಾರೆ..’ ಎಂದು ಲೇವಡಿ ಮಾಡಿದ್ದರು. ನಿಜವಾಗಿ, ಶಶಿ ತರೂರ್‍ಗೂ ಹಿಮಾಚಲ ಪ್ರದೇಶದ ಚುನಾವಣೆಗೂ ಯಾವ ಸಂಬಂಧವೂ ಇರಲಿಲ್ಲ. ಶಶಿ ತರೂರ್ ಅಲ್ಲಿಗೆ ಪ್ರಚಾರಕ್ಕೂ ಹೋಗಿರಲಿಲ್ಲ. ಆದ್ದರಿಂದಲೇ, ಮೋದಿಯ ಅಸಭ್ಯ ಮಾತಿಗೆ ರಾಷ್ಟ್ರಮಟ್ಟದಲ್ಲೇ ಟೀಕೆ ವ್ಯಕ್ತವಾಯಿತು. ಮೋದಿಗಿಂತ ಸುಮಾರು 20 ವರ್ಷ ಕಿರಿಯವನಾಗಿರುವ ರಾಹುಲ್ ಗಾಂಧಿಯ ಭಾಷೆ, ಪದ ಬಳಕೆ, ಮಾತಿನ ಧಾಟಿ, ಆಂಗಿಕ ಹಾವಭಾವಗಳು ಈ ದೇಶಕ್ಕೆ ಆದರ್ಶಪ್ರಾಯ ಅನ್ನಲಾಯಿತು. ಅಂದಹಾಗೆ, ಗುಜರಾತ್‍ನಲ್ಲಿ ಪ್ರಯೋಗಿಸಿ ಯಶಸ್ವಿಯಾಗಿರುವ ಅಸಭ್ಯ ಭಾಷೆ, ಪದ ಬಳಕೆಯನ್ನು ದೇಶದ ಉದ್ದಗಲಕ್ಕೂ ಮೋದಿ ಕೊಂಡೊಯ್ಯುತ್ತಿರುವುದು ಏನನ್ನು ಸೂಚಿಸುತ್ತದೆ? 2002ರ ಹತ್ಯಾಕಾಂಡಕ್ಕೆ ಅವರ ಅಸಭ್ಯ ಆಲೋಚನೆ ಮತ್ತು ಅಸಭ್ಯ ಹೋಲಿಕೆಗಳೇ ಕಾರಣವಾಗಿತ್ತು. ಆ ಬಗ್ಗೆ ಅವರಲ್ಲಿ ಇನ್ನೂ ಪಶ್ಚಾತ್ತಾಪ ಮೂಡಿಲ್ಲ ಎಂದಲ್ಲವೇ ಇದರರ್ಥ? ಮಾತ್ರವಲ್ಲ, ಈ ದೇಶದಲ್ಲಿ ಇಂಥ ಆಲೋಚನಗಳಿಂದ ಮಾತ್ರ ಅಧಿಕಾರ ಗಿಟ್ಟಿಸಲು ಸಾಧ್ಯ ಎಂದು ಅವರು ನಂಬಿರುವುದಕ್ಕೆ ಪುರಾವೆಯಲ್ಲವೇ ಇದು? ಆದರೆ ಹಿಮಾಚಲ ಪ್ರದೇಶದ ಮತದಾರರು ಮೋದಿಯನ್ನು ಅವರ ಕೆಳದರ್ಜೆಯ ಭಾಷೆಯ ಸಮೇತ ಹೊರಕ್ಕಟ್ಟಿದರು. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‍ನ ಕೈ ಹಿಡಿದರು. ಆ ಬಳಿಕ ಮೋದಿ ಬಂದದ್ದು ನೇರ ಕರ್ನಾಟಕಕ್ಕೆ. 37 ವಿಧಾನ ಸಭಾ ಸ್ಥಾನಗಳನ್ನು ಹೊಂದಿರುವ ಬೆಂಗಳೂರು, ಬೆಳಗಾವಿ ಮತ್ತು ದಕ್ಷಿಣ ಕನ್ನಡದಲ್ಲಿ ಭಾಷಣ ಮಾಡಿದರು. ಇದೀಗ ಈ 37ರಲ್ಲಿ ಜುಜುಬಿ ಸ್ಥಾನಗಳಷ್ಟೇ ಬಿಜೆಪಿಗೆ ದಕ್ಕಿವೆ. ಏನಿದರ ಅರ್ಥ? ಮೋದಿ ಗುಜರಾತ್‍ಗಿಂತ ಹೊರಗೆ ಅಸ್ಪೃಶ್ಯ ಎಂದಲ್ಲವೇ? ಮೋದಿಯನ್ನು ಅವರ ಈಗಿನ ವೇಷದಲ್ಲಿ ಈ ದೇಶದ ಮಂದಿ ಪ್ರಧಾನಿಯಾಗಿ ಒಪ್ಪಿಕೊಳ್ಳುವುದಿಲ್ಲ ಅನ್ನುವುದಕ್ಕೆ ಬೇರೆ ಯಾವ ಪುರಾವೆ ಬೇಕು? ರಾಹುಲ್ ಗಾಂಧಿಯ ಸಭ್ಯತನದ ಎದುರು ಮೋದಿಯ ಅಸಭ್ಯತನ ತೀವ್ರ ವೈಫಲ್ಯ ಹೊಂದಿರುವುದಕ್ಕೆ ಈ ಚುನಾವಣೆಯನ್ನು ಯಾಕೆ ಆಧಾರವಾಗಿ ಪರಿಗಣಿಸಬಾರದು?
   ಹಾಗಂತ ಈ ಒಂದೇ ಕಾರಣಕ್ಕೆ ಮೋದಿ ಕನ್ನಡಿಗರಿಂದ ತಿರಸ್ಕøತರಾದರು ಎಂದಲ್ಲ..
2012 ಜುಲೈ 20ರಂದು ಅಮೇರಿಕದ ಅರೋರದಲ್ಲಿರುವ ಸಿನಿಮಾ ಥಿಯೇಟರ್‍ನಲ್ಲಿ 25 ವರ್ಷದ ಜೇಮ್ಸ್ ಹೋಲ್‍ಮ್ಸ್ ಎಂಬ ಯುವಕ ಮನ ಬಂದಂತೆ ಗುಂಡು ಹಾರಿಸುತ್ತಾನೆ. 12 ಮಂದಿ ಸಾವಿಗೀಡಾಗಿ 58 ಮಂದಿ ಗಾಯಗೊಳ್ಳುತ್ತಾರೆ. 2012 ಡಿಸೆಂಬರ್ 14ರಂದು ಕನೆಕ್ಟಿಕಟ್‍ನಲ್ಲಿರುವ ಪ್ರಾಥಮಿಕ ಶಾಲೆಗೆ ನುಗ್ಗಿದ ಆಡಮ್ಸ್ ಲ್ಯಾನ್ಸಾ, 20 ಪುಟ್ಟ ಮಕ್ಕಳ ಸಹಿತ 26 ಮಂದಿಯನ್ನು ಗುಂಡು ಹಾರಿಸಿ ಕೊಲ್ಲುತ್ತಾನೆ. 2012 ಆಗಸ್ಟ್ 5ರಂದು 41 ವರ್ಷದ ವಾಡೆ ಮೈಕೆಲ್ ಪೇಜ್ ಎಂಬಾತ ಓಕ್ರೀಕ್‍ನಲ್ಲಿರುವ ಸಿಕ್ಖ್ ಮಂದಿರಕ್ಕೆ ದಾಳಿಯಿಟ್ಟು 6 ಮಂದಿಯನ್ನು ಕೊಂದು 4 ಮಂದಿಯನ್ನು ಗಾಯಗೊಳಿಸುತ್ತಾನೆ. ಅಮೇರಿಕದಲ್ಲಿ ಪ್ರತಿ ವರ್ಷ 30 ಸಾವಿರ ಮಂದಿ ಕೇವಲ ಬಂದೂಕು ಸಂಸ್ಕ್ರಿತಿಗೇ ಬಲಿಯಾಗುತ್ತಿದ್ದಾರೆ. ಅದರಲ್ಲೂ ಕಳೆದ 4 ತಿಂಗಳುಗಳಲ್ಲಿ 3,531 ಮಂದಿ ಬಂದೂಕಿಗೆ ಬಲಿಯಾಗಿದ್ದಾರೆ. ಇದು 9/11 ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆಗಿಂತಲೂ ಹೆಚ್ಚು (ದಿ ಹಿಂದು, 2013 ಮೇ 3). ಆದರೂ ಅಮೇರಿಕ ಇವನ್ನೆಲ್ಲ ಮಾನಸಿಕ ಅಸ್ವಸ್ಥತೆಗೆ ಒಳಗಾದ ಯುವಕರ ಕೃತ್ಯ ಎಂದು ವ್ಯಾಖ್ಯಾನಿಸಿದೆಯೇ ಹೊರತು ಭಯೋತ್ಪಾದನಾ ಕೃತ್ಯವೆಂದಲ್ಲ. ಯುವಕರು ಗನ್ ಖರೀದಿಸುವಾಗ ಅವರ ಹಿನ್ನೆಲೆಯನ್ನು ತನಿಖಿಸಬೇಕು ಎಂಬ ಮಸೂದೆಗೆ ಅಮೇರಿಕದ ಪಾರ್ಲಿಮೆಂಟಲ್ಲಿ ಮೊನ್ನೆ ಮೊನ್ನೆ ಸೋಲಾದದ್ದು ಇದೇ ಕಾರಣದಿಂದ. ಆದರೆ ಕಳೆದ ಎಪ್ರಿಲ್ 15ರಂದು ಬಾಸ್ಟನ್ ಮ್ಯಾರಥಾನ್‍ನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವುದು ಇಂಥದ್ದೇ ಇಬ್ಬರು ಯುವಕರಾಗಿದ್ದರೂ ಅವರು ಚೆಚೆನ್ ಮೂಲದವರೆಂದು ಗೊತ್ತಾದ ಕೂಡಲೇ ಅಮೇರಿಕ ಇಡೀ ಕೃತ್ಯವನ್ನು ಭಯೋತ್ಪಾದನಾ ಕೃತ್ಯ ಎಂದಿತು. ಅವರು ಈ ಮೊದಲು ತಮ್ಮ ದೇಶವಾದ ಚೆಚೆನ್‍ಗೆ ಭೇಟಿ ಕೊಟ್ಟದ್ದನ್ನೇ ಇದಕ್ಕೆ ಪುರಾವೆಯಾಗಿ ಬಳಸಿಕೊಂಡಿತು. ಅಷ್ಟಕ್ಕೂ ಬಂದೂಕು ಸಿಡಿಸುವವರು ಮಾನಸಿಕ ಅಸ್ವಸ್ಥರು ಮತ್ತು ಬಾಂಬ್ ಸಿಡಿಸುವವರು ಭಯೋತ್ಪಾದಕರು ಅನ್ನುವುದು ಎಷ್ಟು ಸಮರ್ಥನೀಯ? ಹಾಗೆ ಬೇರ್ಪಡಿಸಿ ನೋಡುವುದಕ್ಕೆ ಯಾವುದು ಮಾನದಂಡ? ಮುಸ್ಲಿಮ್ ಹೆಸರೇ, ನಮಾಝೇ, ಮೂಲ ದೇಶವೇ? ಅಮೇರಿಕದ ಗನ್ ಕಲ್ಚರ್‍ನಿಂದ ಪ್ರಭಾವಿತರಾಗಿ ಈ ಯುವಕರು ಬಾಂಬ್ ಇಡಬಾರದೆಂದಿದೆಯೇ? ಸಾಮಾಜಿಕ ಅಸ್ಪೃಶ್ಯತೆ, ಮಾನಸಿಕ ಸಮಸ್ಯೆ ಅಥವಾ ರಾಜಕೀಯೇತರ ಕಾರಣಗಳು ಅವರ ಬಾಂಬ್‍ನ ಹಿಂದಿರಬಾರದೇಕೆ? ಅಲ್ಲದೇ ಬಾಂಬ್ ಭಯೋತ್ಪಾದನೆಯ ವಿರುದ್ಧ ಗಂಭೀರವಾಗುವ ಅಮೇರಿಕ ಬಂದೂಕು ಭಯೋತ್ಪಾದನೆಯ ಕುರಿತಂತೆ ಯಾಕೆ ಮೃದುವಾಗಿದೆ? ಏನಿದರ ಮರ್ಮ? ಮುಸ್ಲಿಮ್ ರಾಷ್ಟ್ರಗಳ ಮೇಲೆ ಏರಿ ಹೋಗುವುದಕ್ಕಾಗಿ ಅಮೇರಿಕ ಈ ಭಯೋತ್ಪಾದನಾ ಗುಮ್ಮವನ್ನು ಬಳಸುತ್ತಿದೆಯೇ? ಯಾಕೆ ಈ ದ್ವಂದ್ವ..’ ಎಂದೆಲ್ಲಾ 2013 ಮೇ 3ರಂದು ದಿ ಹಿಂದೂವಿನಲ್ಲಿ ನಾರಾಯಣ್ ಲಕ್ಷ್ಮಣ್ ಎಂಬ ಹಿರಿಯ ಬರಹಗಾರರು ಪ್ರಶ್ನಿಸಿದ್ದರು.
   ಭಾರತವನ್ನು ಮಾತೆ ಅನ್ನುವ; ಸಂಸ್ಕ್ರಿತಿ, ಅಸ್ಮಿತೆಯ ಬಗ್ಗೆ ಬಾಯಿ ತುಂಬಾ ಮಾತಾಡುವ ಮೋದಿ ಪ್ರದರ್ಶಿಸುತ್ತಿರುವುದೂ ಈ ದ್ವಂದ್ವವನ್ನೇ ಅಲ್ಲವೇ? ಇಲ್ಲದಿದ್ದರೆ, ಪಕ್ಷಕ್ಕಿಂತ ದೇಶ ದೊಡ್ಡದು ಅನ್ನುವ ಮೋದಿ, ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ಭ್ರಷ್ಟಾಚಾರವನ್ನೇಕೆ ಪ್ರಸ್ತಾಪಿಸುತ್ತಿಲ್ಲ? ಬಿಜೆಪಿ ದೇಶಕ್ಕಿಂತ ದೊಡ್ಡದೇ ಅಥವಾ, ಕಾಂಗ್ರೆಸ್ ಭ್ರಷ್ಟಾಚಾರ ಎಸಗಿದರೆ ತಪ್ಪು, ಬಿಜೆಪಿಯಾದರೆ ಸರಿ ಎಂಬ ನಿಲುವೇ? ಇಂಥ ದ್ವಂದ್ವವನ್ನು ಇಟ್ಟುಕೊಂಡ ವ್ಯಕ್ತಿ ಈ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯು ತ್ತೇನೆಂದು ಹೇಳುತ್ತಾರಲ್ಲ, ಯಾವ ಅಭಿವೃದ್ಧಿ? ಯಾರ ಅಭಿವೃದ್ಧಿ? ನಾಳೆ; ಮುಸ್ಲಿಮರಿಗೆ ಒಂದು ನೀತಿ, ಹಿಂದೂಗಳಿಗೆ ಇನ್ನೊಂದು ನೀತಿ ಎಂಬ ಮಾದರಿಯನ್ನು ಅವರು ಜಾರಿ ಮಾಡಿದರೆ? ಈಗಾಗಲೇ ಗುಜರಾತ್‍ನಲ್ಲಿ ಅವರು 'ಮಾದರಿ'ಯಾಗಿ ಒಪ್ಪಿಕೊಂಡಿರುವುದು ಇಂಥ ನಿಲುವನ್ನೇ ತಾನೇ? ಬಹುಶಃ ಇಂಥ ದ್ವಂದ್ವ ನಿಲುವನ್ನು ಪರಿಗಣಿಸಿಯೇ ರಾಜ್ಯದ ಮಂದಿ ಮೋದಿ ವಿರುದ್ಧ ಓಟು ಹಾಕಿರಬಾರದೇಕೆ?
   ಅಷ್ಟಕ್ಕೂ, ಬಿಜೆಪಿಯ ಕೋಮುವಾದದ ವಿರುದ್ಧ ಜನರು ಸಿಡಿದೆದ್ದಿದ್ದಾರೆ ಅನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಫಲಿತಾಂಶವೇ ಪುರಾವೆ.
   ಊರಿನ ಹತ್ತು ಮಂದಿಗೂ ಪರಿಚಯ ಇಲ್ಲದ ನಳಿನ್ ಕುಮಾರ್ ಕಟೀಲ್ ಎಂಬವರನ್ನು ಜನಾರ್ಧನ ಪೂಜಾರಿ ವಿರುದ್ಧ ನಿಲ್ಲಿಸಿ ಸಂಸತ್ತಿಗೆ ಕಳುಹಿಸಿದ್ದು ಇಲ್ಲಿನ ಸಂಘಪರಿವಾರ. ನಿಜವಾಗಿ, ಈ ಜಿಲ್ಲೆಯಲ್ಲಿ ಭ್ರಷ್ಟಾಚಾರ ಇಶ್ಶೂವೇ ಅಲ್ಲ. ಎಲ್ಲ ಇಶ್ಶೂವನ್ನೂ ತಿಂದು ಮುಗಿಸುವಷ್ಟು ಪ್ರಮಾಣದಲ್ಲಿ ಪರಿವಾರ ಇಲ್ಲಿ ಕೋಮುವಾದವನ್ನು ಬೆಳೆಸಿಬಿಟ್ಟಿದೆ. ಈ ಬಾರಿ ಮಟಂದೂರು ಮತ್ತು ರಾಜೇಶ್ ನೈಕ್ ಎಂಬಿಬ್ಬರು ಅಪರಿಚಿತರನ್ನು ಸಂಘಪರಿವಾರವೇ ಅಭ್ಯರ್ಥಿಯಾಗಿ ನಿಲ್ಲಿಸಿತ್ತು. ‘ಇವರು ಯಾರು, ಇವರ ಯೋಗ್ಯತೆ ಏನು ಎಂದೆಲ್ಲ ಪ್ರಶ್ನಿಸಬಾರದು. ಸಂಘ ನಿಲ್ಲಿಸಿದೆ, ಆದ್ದರಿಂದ ಓಟು ಹಾಕಬೇಕು..’ ಎಂಬ ಗುಲಾಮ ಮನಸ್ಥಿತಿಯನ್ನು ಜಿಲ್ಲೆಯಲ್ಲಿ ಸಂಘಪರಿವಾರ ಈ ಮೊದಲು ಬೆಳೆಸಿತ್ತು. ಆದರೆ ಈ ಬಾರಿ ಮತದಾರರು ಅದನ್ನು ಪ್ರಶ್ನಿಸಿದ್ದಾರೆ. ಒಂದು ರೀತಿಯಲ್ಲಿ, ಕರಾವಳಿಯಲ್ಲಿ ಬಿಜೆಪಿಯ ಓಟ್ ಬ್ಯಾಂಕೇ ದನ, ನೈತಿಕ ಪೊಲೀಸ್‍ಗಿರಿಗಳು. ಆದರೆ 2012ರಲ್ಲಿ ನಡೆದ ಹೋಮ್‍ಸ್ಟೇ ದಾಳಿಯು ಕರಾವಳಿಯಲ್ಲಿ ಹೊಸ ಬಗೆಯ ಆಲೋಚನೆಗೆ ದಾರಿ ಮಾಡಿಕೊಟ್ಟಿತು. ದಾಳಿಯ ಆರೋಪದಲ್ಲಿ ಬಂಧಿತರಾದ ಬಿಲ್ಲವ, ಮುಗೇರ ಯುವಕರು ಇನ್ನೂ ಜೈಲಲ್ಲೇ ಇದ್ದಾರೆ. ಈ ಹಿಂದೆ ದನ, ನೈತಿಕತೆಯ ಹೆಸರಲ್ಲಿ ಮುಸ್ಲಿಮ್ ಯುವಕರ ಮೇಲೆ ದಾಳಿ ಮಾಡಿದವರು ಈಗಲೂ ಕೋರ್ಟಿಗೆ ಅಲೆಯುತ್ತಿದ್ದಾರೆ. ಬಹುಶಃ ಸಂಘದ ಹಿಡಿತದಿಂದ ಹೊರಬಂದು ಸ್ವತಂತ್ರವಾಗಿ ಆಲೋಚಿಸಲು ಈ ಭಾಗದ ಜನರನ್ನು ಇದುವೇ ಪ್ರೇರೇಪಿಸಿರಬೇಕು. ಇಲ್ಲದಿದ್ದರೆ, ಜಿಲ್ಲೆಯ 60 ಸಾವಿರದಷ್ಟು ಹೊಸ ಮತದಾರರು ಬಹುತೇಕ ಬಿಜೆಪಿಗೆ ವಿರುದ್ಧವಾಗಿ ಈ ಬಾರಿ ಮತ ಚಲಾಯಿಸಲು ಸಾಧ್ಯವಿತ್ತೇ? ಕಳೆದೆರಡು ದಶಕಗಳಲ್ಲಿ ಇದೇ ಮೊದಲ ಬಾರಿ ಯುವಕರು ಈ ಮಟ್ಟದಲ್ಲಿ ಬಿಜೆಪಿಯನ್ನು ತಿರಸ್ಕರಿಸಲು ಬೇರೆ ಯಾವ ಕಾರಣವಿದೆ? ಮುಸ್ಲಿಮ್ ಮತಗಳು ಕೆಲವು ಮುಸ್ಲಿಮ್ ಅಭ್ಯರ್ಥಿಗಳಲ್ಲಿ ಈ ಬಾರಿ ಈ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲೇ  ಹಂಚಿಹೋಗಿದೆ. ಹಾಗಿದ್ದೂ ಯು.ಟಿ. ಕಾದರ್, ರಮಾನಾಥ ರೈ, ಶಕುಂತಲಾ ಶೆಟ್ಟಿಯೆಲ್ಲಾ  ಈ ಹಿಂದಿಗಿಂತ ಮೂರ್ನಾಲ್ಕು ಪಟ್ಟು ಅಧಿಕ ಅಂತರದಲ್ಲಿ ಗೆದ್ದಿರುವುದು ಏನನ್ನು ಸೂಚಿಸುತ್ತದೆ? ಬಿಜೆಪಿಯನ್ನು ಅದರ ಬೆಂಬಲಿಗರೇ ಕೈ ಬಿಟ್ಟಿದ್ದಾರೆ ಎಂಬುದನ್ನಲ್ಲವೇ? ಬಿಜೆಪಿಯಿಂದ ಎಲೆಕ್ಟ್ರಿಕ್ ಕಂಭವನ್ನು ನಿಲ್ಲಿಸಿದರೂ ಗೆಲುವು ಗ್ಯಾರಂಟಿ ಎಂಬಂತಿದ್ದ ಕರಾವಳಿ ಪ್ರದೇಶದಲ್ಲಿ ಬಿಜೆಪಿ ನೆಲಕಚ್ಚಿದ್ದು ಯಡಿಯೂರಪ್ಪರಿಂದ ಖಂಡಿತ ಅಲ್ಲ. ಕಾಂಗ್ರೆಸ್‍ನಿಂದಲೂ ಅಲ್ಲ. ಹಾಗಾದರೆ ಯಾರಿಂದ? ಸಂಘಪರಿವಾರದಿಂದಲೇ, ಅದರ ನೈತಿಕ ಪೊಲೀಸ್‍ಗಿರಿಯಿಂದಲೇ, ಕೋಮು ಅಜೆಂಡಾದಿಂದಲೇ?
   ಹೋಮ್‍ಸ್ಟೇ ದಾಳಿಯ ವೇಳೆ ಯುವಕನೋರ್ವ ಹೆಣ್ಣು ಮಗಳಿಗೆ ಕಪಾಲಮೋಕ್ಷ  ಮಾಡುವ ದೃಶ್ಯ ಎಲ್ಲ ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು. ಇದೀಗ ರಾಜ್ಯದ ಮಂದಿ ಅದನ್ನು ಬಡ್ಡಿ ಸಮೇತ  ತೀರಿಸಿದ್ದಾರೆ.
ನೆನಪಿರಲಿ ಸಿದ್ಧರಾಮಯ್ಯರೇ...