Wednesday, July 24, 2019

ಗೆಳೆಯನ ಮೋಬ್ ಲಿಂಚಿಂಗ್ ಆಕ್ರೋಶದ ಒಳ-ಹೊರಗೆ



ಮೊನ್ನೆ ಗೆಳೆಯ ಒಂದು ಬಗೆಯ ಅಸಹನೆ, ಸಿಟ್ಟಿನಿಂದ ಹೇಳಿದ,
“ಇವರನ್ನೆಲ್ಲ ಹಿಡಿದು ಥಳಿಸ್ಬೇಕು. ಗುಂಪು ದಾಳಿ (Mob lynching) ಅನ್ತೇವಲ್ಲ, ಅದು. ಥಳಿತ ಎಷ್ಟು ತೀವ್ರವಾಗಿರಬೇಕು ಅಂದರೆ, ಇನ್ನೊಮ್ಮೆ ಇವರು ರೆಸಾರ್ಟ್ ರಾಜಕಾರಣ ಮಾಡ ಬಾರದು. ಮತದಾರರನ್ನು ಅವಮಾನಿಸುವ ರೀತಿಯಲ್ಲಿ  ರಾಜೀನಾಮೆ ಕೊಡಬಾರದು. ಇನ್ನೊಂದು ಪಕ್ಷ ಸೇರಬಾರದು..”
ಕೇವಲ ಕರ್ನಾಟಕದ ರಾಜಕೀಯ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತ್ರ ವ್ಯಕ್ತವಾದ ಸಿಟ್ಟು ಇದಲ್ಲ. ರಾಜಕಾರಣಿ ಕರ್ನಾಟಕದಲ್ಲಿ ಮಾತ್ರ ಇರುವುದಲ್ಲವಲ್ಲ. ಈ ದೇಶದ ಹಣೆಬರಹ ಅವಲಂಬಿಸಿರುವುದೇ ರಾಜಕಾರಣಿ ಎಂಬ  ಬಹುವೇಷಧಾರಿ ಪ್ರಾಣಿಯ ಕೈಯಲ್ಲಿ. ಕರ್ನಾಟಕದ 13 ಮಂದಿ ಜನಪ್ರತಿನಿಧಿಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈಯ ಹೊಟೇಲ್‍ಗೆ ವಾಸ ಬದಲಿಸಿದ ಆಸುಪಾಸಿನಲ್ಲೇ  ತೆಲಂಗಾಣ ಮತ್ತು ಗೋವಾ ದಲ್ಲೂ ಇದೇ ಬಗೆಯ ಅಚ್ಚರಿಗಳು  ನಡೆದುವು. ತೆಲಂಗಾಣದ 18 ಮಂದಿ ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಟಿ.ಆರ್.ಎಸ್. ಪಕ್ಷವನ್ನು ಸೇರಿಕೊಂಡರು. ಗೋವಾದ 15 ಮಂದಿ ಕಾಂಗ್ರೆಸ್ ಶಾಸಕರಲ್ಲಿ 10 ಮಂದಿ ಬಿಜೆಪಿಗೆ ಸೇರ್ಪಡೆಗೊಂಡರು. ಪ್ರಶ್ನೆ ಇರುವುದೂ ಇಲ್ಲೇ. ಓರ್ವ  ವ್ಯಕ್ತಿ, ತನ್ನ ಏಕಮಾತ್ರ ಮತದಿಂದ ಶಾಸಕನಾಗಿ ಆಯ್ಕೆಯಾಗಲಾರ. ಆತನಿಗಿರುವುದು ಜುಜುಬಿ ಒಂದೇ ಒಂದು ಓಟು. ಆದ್ದರಿಂದ ಆತ ಶಾಸಕನಾಗಿ ಆಯ್ಕೆ ಯಾಗುವುದು ಮತ್ತು ಆಗದೇ ಇರುವುದು- ಇವೆರಡೂ ಆತನ ಕ್ಷೇತ್ರದ ಮತದಾರರನ್ನು  ಅವಲಂಬಿಸಿರುತ್ತದೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಎರಡರಿಂದ ಎರಡೂವರೆ ಲಕ್ಷ ಮತದಾರರಿರುತ್ತಾರೆ. ಇವರು ಅತ್ಯಂತ ಹೆಚ್ಚು ಮತವನ್ನು ಯಾವ ಅಭ್ಯರ್ಥಿಗೆ ನೀಡಿರುತ್ತಾರೋ ಅವರು ಜನಪ್ರತಿನಿಧಿಯಾಗಿ ಆಯ್ಕೆಯಾಗುತ್ತಾರೆ. ಆ ಬಳಿಕ  ಜನರಿಗೆ ಆತ/ಕೆ ಉತ್ತರದಾಯಿ. ಪ್ರಜಾತಂತ್ರದ ಸರಳ ವ್ಯಾಖ್ಯಾನ ಇದು. ಆದರೆ, ಇಷ್ಟಕ್ಕೇ ಈ ವ್ಯಾಖ್ಯಾನ ಮುಗಿಯುವುದಿಲ್ಲ. ಪ್ರಜಾತಂತ್ರದಲ್ಲಿ ಇದರಾಚೆಗೆ ಕೆಲವು ಸತ್ಯಗಳಿವೆ. ಈ ಪ್ರಜಾತಂತ್ರದ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಓರ್ವ ಅಭ್ಯರ್ಥಿ  ಜಯಶಾಲಿಯಾಗಬಹುದೇ ಎಂಬ ಪ್ರಶ್ನೆಗೆ ಉತ್ತರ- ‘ಸಾಧ್ಯವಿದೆ’ ಎಂಬುದು ನಿಜವೇ ಆದರೂ ಹಾಗೆ ಹೇಳುವಾಗ ತುಟಿ ಒಂದಿಷ್ಟು ಅದುರುತ್ತದೆ ಅನ್ನುವುದೂ ಅಷ್ಟೇ ನಿಜ. ಯಾಕೆಂದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳೇ  ನಿರ್ಣಾಯಕ. ಅವು ಒಂದು ರೀತಿಯಲ್ಲಿ ಆಲದ ಮರದಂತೆ. ವಿಶಾಲವಾಗಿ ಚಾಚಿಕೊಳ್ಳುವ ಸಾಮರ್ಥ್ಯ ಆಲದ ಮರಗಳಿವೆ. ಮಾತ್ರವಲ್ಲ, ತನ್ನ ಅಡಿಯಲ್ಲಿ ಇತರ ಗಿಡ ಮರಗಳು ಬೆಳೆಯದಂತೆ ತಡೆಯುವ ತಾಕತ್ತೂ ಅವುಗಳಿಗಿವೆ. ಆದ್ದರಿಂದ,  ವ್ಯಕ್ತಿಯೋರ್ವ ಪಕ್ಷೇತರನಾಗಿ ಸ್ಪರ್ಧಿಸು ವುದೆಂದರೆ, ಆ ಆಲದ ಮರವನ್ನು ಎದುರು ಹಾಕಿಕೊಂಡಂತೆ. ಅದರ ಬುಡದಲ್ಲಿ ಚಿಗುರಿಕೊಳ್ಳುವುದು ಸುಲಭದ ಸಾಹಸ ಅಲ್ಲ. ಹಣದ ಹೊರತಾದ ಹಲವಾರು ಅಗತ್ಯಗಳು ಮತ್ತು ಅನೇಕಾರು ಅರ್ಹತೆಗಳು  ಆತನಲ್ಲಿರಬೇಕಾಗುತ್ತದೆ. ಮಾತ್ರವಲ್ಲ, ಇವೆಲ್ಲ ಇದ್ದೂ ಸೋಲಾಗುವ ಸಾಧ್ಯತೆಯೇ ಹೆಚ್ಚು. ಈ ದೇಶದ ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಪಕ್ಷೇತರರ ಸಂಖ್ಯೆ ಜುಜುಬಿಯಾಗಿರುವುದೇ ಇದಕ್ಕೆ ಉತ್ತಮ ಪುರಾವೆ. ಈ ದೇಶದ ಯಾವ ರಾಜ್ಯ ವ ನ್ನೂ ಪಕ್ಷೇತರರು ಆಳುತ್ತಿಲ್ಲ. ಪಕ್ಷೇತರರು ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಬಹುಮತ ಪಡೆದದ್ದಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದಾದರೆ, ಚುನಾವಣೆಯಲ್ಲಿ ಓರ್ವ ಅಭ್ಯರ್ಥಿಯ ಗೆಲುವಿಗೂ ಆತನ ಸ್ಪರ್ಧಾ ರೀತಿಗೂ ಸಂಬಂಧವಿರುತ್ತದೆ.  ಯಾವುದಾದರೊಂದು ರಾಜಕೀಯ ಪಕ್ಷದ ಅಭ್ಯರ್ಥಿಯಾಗಿದ್ದು ಕೊಂಡು ಸ್ಪರ್ಧಿಸುವುದು ಪಕ್ಷೇತರನಾಗಿ ಸ್ಪರ್ಧಿಸುವುದಕ್ಕಿಂತ ಹೆಚ್ಚು ಸುರಕ್ಷಿತ. ಅದರಲ್ಲೂ ಬಲಾಢ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಗೆಲುವಿನ  ದೃಷ್ಟಿಯಿಂದ ಇನ್ನೂ ಸುರಕ್ಷಿತ. ಅಂದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ಮತವೇ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಎಂದು ಹೇಳಬಹುದು. ಆದರೆ, ಇದು ಮೇಲು ಮೇಲಿನ ವ್ಯಾಖ್ಯಾನ ಅಷ್ಟೇ. ಈ ವ್ಯಾಖ್ಯಾನದ ಒಳಗಡೆ ಕತ್ತಲೆಯಿದೆ.  ಒಂದುವೇಳೆ, ಈ ಬಗೆಯ ವ್ಯಾಖ್ಯಾನವೇ ಪರಮ ಸತ್ಯ ಎಂದಾಗಿರುತ್ತಿದ್ದರೆ ಪಕ್ಷೇತರ ಅಭ್ಯರ್ಥಿಗಳ ಗೆಲುವು ಯಾಕೆ ಕಠಿಣ ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಈ ವ್ಯವಸ್ಥೆಯಲ್ಲಿ ಜನರ ಮತ ನಿರ್ಣಾಯ ಕವೇ ಆಗಿರಬಹುದು. ಆದರೆ ಜನರ ಮತವನ್ನು  ನಿರ್ದಿಷ್ಟ ಚೌಕಟ್ಟಿನೊಳಗಡೆ ಕೇಂದ್ರೀಕರಿಸುವಲ್ಲಿ ಮತ್ತು ಪಕ್ಷೇತರ ಇತ್ಯಾದಿಗಳಿಗೆ ಚದುರಿ ಹೋಗದಂತೆ ತಡೆಯುವಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ರಾಜಕೀಯ ಪಕ್ಷಗಳೆಂದರೆ, ಮೇಜು-ಕುರ್ಚಿಗಳಲ್ಲವಲ್ಲ. ಅದೊಂದು  ಜನರ ಗುಂಪು. ತಮ್ಮವರ ಗೆಲುವಿಗೆ ಸಂಘಟಿತವಾಗಿ ಪ್ರಯತ್ನಿಸುವುದೇ ಈ ಗುಂಪಿನ ಗುರಿ. ಪಕ್ಷೇತರ ಅಭ್ಯರ್ಥಿಯ ಪಾಲಿಗೆ ಇಂಥ ಸಂಘಟಿತ ವ್ಯವಸ್ಥೆ ಇರುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಎದುರು ಪಕ್ಷೇತರ ಅಭ್ಯರ್ಥಿ  ಯಾಕೆ ವಿಫಲವಾಗುತ್ತಾನೆ ಅನ್ನುವುದಕ್ಕೆ ಉತ್ತರ ಇಲ್ಲೆಲ್ಲೋ  ಇದೆ. ಮತದಾರರೂ ಅಷ್ಟೇ. ಪಕ್ಷೇತರ ಅಭ್ಯರ್ಥಿಗಿಂತ ರಾಜಕೀಯ ಪಕ್ಷಗಳ ಮೂಲಕ ಸ್ಪರ್ಧಿಸುವ ಅಭ್ಯರ್ಥಿಯ ಮೇಲೆಯೇ ಹೆಚ್ಚು ವಿಶ್ವಾಸ ತಾಳುತ್ತಾರೆ. ಆದ್ದರಿಂದ ಓರ್ವ ವ್ಯಕ್ತಿ ಒಂದು  ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದೆಂದರೆ, ಅದು ಬಲುದೊಡ್ಡ ಜವಾಬ್ದಾರಿ. ಪಕ್ಷೇತರನಾಗಿ ಸ್ಪರ್ಧಿಸಿದರೆ ಲಭ್ಯವಾಗದ ಗೆಲುವನ್ನು ರಾಜಕೀಯ ಪಕ್ಷದ ಮೂಲಕ ಸ್ಪರ್ಧಿಸು ವಾಗ  ಲಭ್ಯವಾಗಿಸುತ್ತದೆ. ಜನರು ಆತನಿಗೆ ಮತ ಹಾಕುವುದಕ್ಕಿಂತ ಆತ ಪ್ರತಿನಿಧಿಸುವ ಬಿಜೆಪಿಗೋ ಕಾಂಗ್ರೆಸ್ಸಿಗೋ ಮತ ಹಾಕುತ್ತಾರೆ. ಆ ಮತ ಆತನನ್ನು ಗೆಲ್ಲಿಸುತ್ತದೆ. ಇಲ್ಲಿ ಆತನ ವೈಯಕ್ತಿಕ ವರ್ಚಸ್ಸಿಗಿಂತ ಹೆಚ್ಚು ಆತ ಪ್ರತಿನಿಧಿಸುವ ಪಕ್ಷ ಮತ್ತು ಪಕ್ಷದ  ಮೇಲೆ ವಿಶ್ವಾಸ ತಾಳಿರುವ ಮತದಾರರು ಮುಖ್ಯವಾಗುತ್ತಾರೆ. ಕರ್ನಾಟಕದ ರೆಸಾರ್ಟ್ ರಾಜಕೀಯ ಮತ್ತು ತೆಲಂಗಾಣ ಹಾಗೂ ಗೋವಾದ ಪಕ್ಷಾಂತರ ರಾಜಕೀಯ ಪ್ರಶ್ನಾರ್ಹವಾಗುವುದು ಈ ಕಾರಣದಿಂದಲೇ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ  ಸ್ಪರ್ಧಿಸಿ ಆಯ್ಕೆಯಾದ 12 ಮಂದಿ ಶಾಸಕರು ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್.)ಯನ್ನು ಸೇರಿಕೊಂಡಿರುವುದು ಪ್ರಜಾತಾಂತ್ರಿಕವಾಗಿ ಎಷ್ಟು ಸರಿ? ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯ ವೇಳೆ ಈ ಅಭ್ಯರ್ಥಿಗಳು ಇಂಥದ್ದೊಂದು   ಸುಳಿವನ್ನು ಮತದಾರರಿಗೆ ನೀಡಿದ್ದರೆ? ತಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರೂ ಸಂದರ್ಭ ಬಂದಾಗ ಟಿ.ಆರ್.ಎಸ್. ಸೇರಿಕೊಳ್ಳುವೆವು ಎಂದು ಮತದಾರರಿಗೆ ಮಾತು ಕೊಟ್ಟಿದ್ದರೆ? ಬಿಜೆಪಿಗೆ ಸೇರ್ಪಡೆಗೊಂಡ ಗೋವಾದ 10 ಮಂದಿ ಕಾಂಗ್ರೆಸ್  ಶಾಸಕರಿಗೂ ಇವೇ ಪ್ರಶ್ನೆಗಳು ಅನ್ವಯಿಸುತ್ತವೆ. ಪ್ರಜಾತಂತ್ರ ಅಂದರೆ ಮೋಸ ಎಂದು ಅರ್ಥವಲ್ಲವಲ್ಲ. ಪ್ರಜೆಗಳೇ ಆರಿಸುವ ಅಭ್ಯರ್ಥಿ ಎಂಬ ನೆಲೆಯಲ್ಲಿ ಪ್ರತಿ ಪ್ರತಿನಿಧಿಯೂ ಮತದಾರರಿಗೆ ಉತ್ತರದಾಯಿಯಾಗಿರುತ್ತಾನೆ. ಒಂದುವೇಳೆ, ಸ್ಪರ್ಧೆಯ  ಸಂದರ್ಭದಲ್ಲೇ  ತನ್ನ ಪಕ್ಷಾಂತರದ ಬಗ್ಗೆ, ಅತೃಪ್ತಿ ಹೊಂದಿ ರಾಜೀನಾಮೆ ನೀಡುವುದರ ಬಗ್ಗೆ, ಬಂಡಾಯ ಏಳುವುದರ ಬಗ್ಗೆ ಮತದಾರರೊಂದಿಗೆ ಹೇಳಿಕೊಂಡಿರುತ್ತಿದ್ದರೆ ಒಂದು ಹಂತದವರೆಗೆ ಇಂಥ ಪಕ್ಷಾಂತರ ಮತ್ತು ಅತೃಪ್ತಿ ರಾಜೀನಾಮೆಯ ನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ, ಯಾವ ಅಭ್ಯರ್ಥಿಯೂ ಇಂಥದ್ದೊಂದು  ಸಣ್ಣ ಸೂಚನೆಯನ್ನೂ ಚುನಾ ವಣೆಯ ಸಂದರ್ಭದಲ್ಲಿ ಮತದಾರರೊಂದಿಗೆ ಹಂಚಿಕೊಂಡಿರುವುದಿಲ್ಲ. ತಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದೇ ಚುನಾವಣಾ  ಭಾಷಣವನ್ನು ಆರಂಭಿಸಿರುತ್ತಾನೆ. ಜನರು ಈತನಿಗೆ ಮತ ಚಲಾಯಿಸುವುದಕ್ಕೂ ಈ ನಿಷ್ಠಾವಂತಿಕೆಗೆ ಪಾತ್ರ ಇರುತ್ತದೆ. ಸ್ಪರ್ಧೆಯ ಸಂದರ್ಭದಲ್ಲೇ  ಮುಂದೊಂದು ದಿನ ತಾನು ಇನ್ನೊಂದು ಪಕ್ಷಕ್ಕೆ ಪಕ್ಷಾಂತರವಾಗಬಹುದು ಅಥವಾ ಅತೃಪ್ತಿ ಯಿಂದ  ರಾಜೀನಾಮೆ ಕೊಟ್ಟು ರೆಸಾರ್ಟಲ್ಲಿ ತಂಗಬಹುದು ಎಂದು ಹೇಳಿರುತ್ತಿದ್ದರೆ ಆತ ತಕ್ಷಣ ತನ್ನ ಅಭ್ಯರ್ಥಿತನವನ್ನು ಕಳಕೊಳ್ಳುತ್ತಿದ್ದ. ಅಂದರೆ, ಆತನ ಗೆಲುವಿನಲ್ಲಿ ಪಕ್ಷನಿಷ್ಠೆಗೆ ಪ್ರಮುಖ ಪಾತ್ರ ಇರುತ್ತದೆ. ಆತ ಯಾವ ಪಕ್ಷದಿಂದ ಸ್ಪರ್ಧಿಸಿರುತ್ತಾನೋ  ಅದರಲ್ಲೇ  ಉಳಿಯುತ್ತಾನೆ ಅನ್ನುವ ವಿಶ್ವಾಸದಿಂದ ಜನರು ಮತ ಚಲಾಯಿಸಿರುತ್ತಾರೆ. ಹೀಗಿರುವಾಗ, ಪಕ್ಷಾಂತರ ಎಂಬುದು ಜನರಿಗೆ ಮಾಡುವ ಮೋಸ ಅಲ್ಲದೇ ಇನ್ನೇನು? ಯಾವುದೇ ಜನಪ್ರತಿನಿಧಿಗೆ ತನ್ನ ಪಕ್ಷದ ಮೇಲೆ ಅತೃಪ್ತಿ ಉಂಟಾಗಿದ್ದರೆ ಆತ  ಕ್ಷೇತ್ರದ ಮತದಾರರೊಂದಿಗೆ ಸಮಾ ಲೋಚಿಸಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕೇ ಹೊರತು ರೆಸಾರ್ಟಲ್ಲಿ ಉಳಿಯುವುದಲ್ಲ. ಅಷ್ಟಕ್ಕೂ, ಈ ರಾಜೀನಾಮೆ ಕೊಟ್ಟು ರೆಸಾರ್ಟಲ್ಲಿ ಉಳಿದಿರುವ ಶಾಸಕರ ಅತೃಪ್ತಿ ಯಾವ ವಿಷಯದಲ್ಲಿ? ಕ್ಷೇತ್ರದ  ಅಭಿವೃದ್ಧಿಯ ವಿಷಯದಲ್ಲಿಯೇ? ತನ್ನ ಕ್ಷೇತ್ರಕ್ಕೆ ಅನುದಾನ ಪಡಕೊಳ್ಳುವ ವಿಷಯದಲ್ಲೇ? ಸರಕಾರದ ಮೇಲೆಯೇ? ಪಕ್ಷದ ಕಾರ್ಯ ನಿರ್ವಹಣೆಯ ಕುರಿತೇ? ಅತೃಪ್ತಿಗೆ ಇವುಗಳಲ್ಲಿ ಯಾವುದೇ ಕಾರಣ ಆಗಿದ್ದರೂ ಅದಕ್ಕೆ ಪರಿಹಾರ ಯಾವುದು?  ಮುಂಬೈಯ ಹೊಟೇಲಲ್ಲಿ ತಂಗುವುದು ಯಾರ ಹಿತಕ್ಕಾಗಿ? ಅಂದಹಾಗೆ,
ಅರಬ್ ರಾಷ್ಟ್ರಗಳಲ್ಲಿ ಅಥವಾ ಸರ್ವಾಧಿಕಾರಿಗಳ ಹಿಡಿತದಲ್ಲಿರುವ ರಾಷ್ಟ್ರಗಳಲ್ಲಿ ಇವತ್ತು ಪ್ರಜಾತಂತ್ರದ ಕೂಗು ಎಷ್ಟು ದೊಡ್ಡ ಮಟ್ಟದಲ್ಲಿ ಕೇಳುತ್ತಿದೆಯೆಂದರೆ, ಪ್ರಜಾತಂತ್ರ ಎಂಬುದು ಸರ್ವರೋಗ ನಿವಾರಕ ಎಂದು ಯಾರೇ ಆಗಲಿ ಅಂದುಕೊಳ್ಳಬೇಕು.  ಈ ಕೂಗಿಗೆ ಆ ಜನರು ತೆರುತ್ತಿರುವ ದಂಡವಂತೂ ಅತ್ಯಂತ ಆಘಾತಕಾರಿಯಾದುದು. ಪ್ರಜಾತಂತ್ರ ಇರುವ ರಾಷ್ಟ್ರಗಳಿಗೆ ಓಡಿ ಬರುತ್ತಿರುವ ಅವರಲ್ಲಿ ಅಸಂಖ್ಯ ಮಂದಿ ನೀರಿನಲ್ಲಿ ಮುಳುಗಿಯೋ ಮರಳುಗಾಡಿನಲ್ಲಿ ಹೂತೋ ಗಡಿಯ ಬಾಗಿಲುಗಳು  ತೆರೆಯದೆಯೋ ಸಾವಿಗೀಡಾಗುತ್ತಿದ್ದಾರೆ. ಆದರೂ ಅವರ ಪ್ರಜಾತಂತ್ರ ಪರ ಕೂಗು ನಿಂತಿಲ್ಲ. ಚೀನಾದ ತಿಯೆನ್ಮಾನ್ ಚೌಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರಜಾತಂತ್ರವನ್ನು ಆಗ್ರಹಿಸಿ 1989ರಲ್ಲಿ ಬಿಡಾರ ಹೂಡಿದರು. ಅವರನ್ನೆಲ್ಲ ಚೀನಾದ ಸರಕಾರ  ಸೇನಾ ಟ್ಯಾಂಕರ್‍ಗಳನ್ನು ಹರಿಸಿ ಕೊಂದು ಹಾಕಿತು. ಆದರೂ ಅಲ್ಲಿನ ಜನರ ಪ್ರಜಾತಂತ್ರ ಪರ ಬಯಕೆ ಕೊನೆಗೊಂಡಿಲ್ಲ. ಸುಡಾನ್‍ನ ಜನರು ಈಗ ಬೀದಿಯಲ್ಲಿದ್ದಾರೆ. ಅವರಿಗೂ ಸರ್ವಾಧಿಕಾರದಿಂದ ಮುಕ್ತಿ ಸಿಗಬೇಕೆಂಬ ಹಠ; ಪ್ರಜಾತಂತ್ರ  ಬರಬೇಕೆಂಬ ಆಸೆ. ಇದೇವೇಳೆ, ಪ್ರಜಾತಂತ್ರ ಅನ್ನುವ ಪರಿಕಲ್ಪನೆ ಎಷ್ಟು ಯಶಸ್ವಿ ಅನ್ನುವ ಪ್ರಶ್ನೆಯನ್ನು ಭಾರತೀಯ ಪ್ರಜಾತಂತ್ರವಂತೂ ಖಂಡಿತ ಎತ್ತುತ್ತಿದೆ. ಜನಪ್ರತಿನಿಧಿಯ ಮೇಲೆ ಜನರಿಗೆ ನಿಯಂತ್ರಣವೇ ಇಲ್ಲದ ವ್ಯವಸ್ಥೆಯೊಂದು ಸರ್ವಾಧಿಕಾರಿ  ವ್ಯವಸ್ಥೆಗಿಂತ ಎಷ್ಟು ಭಿನ್ನ ಮತ್ತು ಹೇಗೆಲ್ಲ ಭಿನ್ನ ಅನ್ನುವ ಚರ್ಚೆಯೊಂದಕ್ಕೆ ಭಾರತೀಯ ಪ್ರಜಾತಂತ್ರ ತೆರೆದುಕೊಳ್ಳ ಬೇಕಾದ ಜರೂರತ್ತು ಇವತ್ತಿನದು. ಅತ್ಯಂತ ಬಲಾಢ್ಯ ರಾಜಕೀಯ ಪಕ್ಷವು ತೀರಾ ಅಯೋಗ್ಯ ವ್ಯಕ್ತಿಯನ್ನೂ ಅಭ್ಯರ್ಥಿಯನ್ನಾಗಿ ಚುನಾವಣಾ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಹೋಗಬಹುದಾದ ಸ್ಥಿತಿ ಭಾರತೀಯ ಪ್ರಜಾತಂತ್ರದಲ್ಲಿ ನಿರ್ಮಾಣವಾಗಿರುವುದು ಹೇಗೆ? ಈ ಸ್ಥಿತಿಗೆ ಪರ್ಯಾಯ ಏನು? ನಾವೀಗ ಒಪ್ಪಿಕೊಂಡಿರುವ ಪ್ರಜಾತಂತ್ರ ವ್ಯವಸ್ಥೆಯೇ ಅಂತಿಮವೇ? ಇದರಾಚೆಗೆ  ಪರ್ಯಾಯ ವ್ಯವಸ್ಥೆಯೊಂದನ್ನು ಕನಸಬಹುದೇ? ಈಗಿನ ವ್ಯವಸ್ಥೆಯಲ್ಲಿ  ಯಾವೆಲ್ಲ ಮಾರ್ಪಾಡುಗಳನ್ನು ತರಬಹುದು? ಪ್ರಜಾತಂತ್ರ ವ್ಯವಸ್ಥೆಯನ್ನು ಜನರ ನಿಜವಾದ ಪ್ರಾತಿನಿಧಿಕ ವ್ಯವಸ್ಥೆಯನ್ನಾಗಿಸಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳು  ಯಾವುವು? ಹಾಗಂತ,
ಅತೃಪ್ತಿಯ ಹೆಸರಲ್ಲಿ ರಾಜೀನಾಮೆ ಕೊಟ್ಟು ಮುಂಬೈಯ ಹೊಟೇಲಲ್ಲಿ ತಂಗಿರುವ ಶಾಸಕರ ಮೇಲೆ ಮೋಬ್ ಲಿಂಚಿಂಗ್ (ಗುಂಪು ಥಳಿತ) ನಡೆಯಬೇಕು ಎಂದ ಗೆಳೆಯನ ಆಕ್ರೋಶದಲ್ಲಿ ಒರಟುತನವಿದ್ದರೂ ಮತ್ತು ಅದು ಕಾನೂನುಬಾಹಿರ  ಬಯಕೆಯೇ ಆಗಿದ್ದರೂ ಆ ಆಕ್ರೋಶಕ್ಕೆ ಈಗಿನ ರಾಜಕೀಯವೇ ಮೂಲ ಕಾರಣ ಅನ್ನುವುದನ್ನು ನಿರಾಕರಿಸುವ ಹಾಗಿಲ್ಲ.

Tuesday, July 16, 2019

ಬುರ್ಖಾ, ಸೀರೆ, ಸಲ್ವಾರ್ ಏನೇ ತೊಟ್ಟಿದ್ದರೂ ಆಕೆ ಬರೇ ಹೆಣ್ಣು



ದಕ್ಷಿಣ ಕನ್ನಡ ಜಿಯ ಪುತ್ತೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿಯೋರ್ವಳ ಸಾಮೂಹಿಕ ಅತ್ಯಾಚಾರವು ಕೆಲವು ಮೂಲಭೂತ ಪ್ರಶ್ನೆಗಳನ್ನು ಹುಟ್ಟು ಹಾಕಿದೆ:
1. ಈ ಕ್ರೌರ್ಯವು ಒಂದು ದಿನದ ಸೆನ್ಸೇಶನಲ್ ಸುದ್ದಿಯಾಗಿ ಆ ಬಳಿಕ ಠುಸ್ಸಾದುದು ಏಕೆ? ಇದರ ಹಿಂದಿರುವ ಲೆಕ್ಕಾಚಾರವೇನು?
2. ಅತ್ಯಾಚಾರಕ್ಕೊಳಗಾದ ಯುವತಿ ದಲಿತ ಸಮುದಾಯದವ ಳಾಗಿದ್ದೂ ದಲಿತ ಸಂಘಟನೆಗಳಿಂದ ಈ ಬಗ್ಗೆ ದೊಡ್ಡ ದನಿಯಲ್ಲಿ ಪ್ರತಿಭಟನೆ ವ್ಯಕ್ತವಾಗದಿರುವುದಕ್ಕೆ ಕಾರಣಗಳೇನು? ಕನಿಷ್ಠ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಲಿತ ಸಂಘಟನೆಗಳು ಬೀದಿಯಲ್ಲಿರಬೇಕಾದ ಈ ಹೊತ್ತು, ಯಾಕೆ ಅವು ಮನೆಯಲ್ಲಿವೆ?
3. ಪುತ್ತೂರಿನ ಶಾಸಕರು ಬಿಜೆಪಿಯವರು. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರೇ ಇದ್ದಾರೆ. ಇಲ್ಲಿನ ಸಂಸದರೂ ಬಿಜೆಪಿಯವರೇ. ಪಕ್ಕದ ಉಡುಪಿಯ ಸಂಸದರಾಗಿರುವವರೂ ಬಿಜೆಪಿಯವರೇ-  ಶೋಭಾ ಕರಂದ್ಲಾಜೆ. ಹೀಗೆಲ್ಲಾ  ಇದ್ದೂ ಬಿಜೆಪಿ ಈ ಅತ್ಯಾಚಾರದ ವಿರುದ್ಧ ಪ್ರತಿಭಟನೆ, ರಾಲಿ, ಧರಣಿ ಇತ್ಯಾದಿಗಳನ್ನು ಹಮ್ಮಿಕೊಳ್ಳದಿರುವುದೇಕೆ?
ಹೀಗೆಲ್ಲಾ  ಪ್ರಶ್ನಿಸುವುದಕ್ಕೆ ಕಾರಣಗಳಿವೆ.
ಅತ್ಯಾಚಾರ ಈ ದೇಶಕ್ಕೆ ಹೊಸತಲ್ಲ. ಈ ರಾಜ್ಯಕ್ಕೂ ಹೊಸತಲ್ಲ. ಆದರೆ, ಹೆಣ್ಣು ಮಗಳೊಬ್ಬಳನ್ನು ನಾಲ್ವರು ಸಾಮೂಹಿಕವಾಗಿ ಅತ್ಯಾಚಾರಗೈಯುವುದು, ಅದನ್ನು ಚಿತ್ರೀಕರಿಸುವುದು ಮತ್ತು ಆ ವೀಡಿಯೋವನ್ನು ಸಾರ್ವಜನಿಕವಾಗಿ ಹಂಚುವುದು  ಹೊಸತು. ಅತ್ಯಾಚಾರವನ್ನು ಚಿತ್ರೀಕರಿಸಿ ತಮ್ಮ ಮೊಬೈಲ್‍ನಲ್ಲಿ ಕಾಪಿಟ್ಟುಕೊಳ್ಳುವ ಮನಸ್ಥಿತಿ ಸಹಜವಾದುದಲ್ಲ. ಅದು, ಆ ಅತ್ಯಾಚಾರದ ಬಳಿಕವೂ ಆ ಅತ್ಯಾಚಾರವನ್ನು ಮತ್ತೆ ಮತ್ತೆ ಅನು ಭವಿಸುವ ದುಷ್ಟತನವನ್ನು ಸೂಚಿಸುತ್ತದೆ. ಅಲ್ಲದೇ,  ಅತ್ಯಾಚಾರಕ್ಕೊಳಗಾದ ಯುವತಿಯನ್ನು ಬೆದರಿಸಿ ಮತ್ತೆ ಮತ್ತೆ ಅತ್ಯಾಚಾರಕ್ಕೆ ಒಗ್ಗುವಂತೆ ಮಾಡುವ ಕಟುಕತನವೂ ಅದರಲ್ಲಿದೆ. ಈ ಮನಸ್ಥಿತಿ ಅತ್ಯಾಚಾರಕ್ಕಿಂತ ಹೇಯವಾದುದು ಮತ್ತು ಆ ಅತ್ಯಾಚಾರಿಗಳು ಕ್ರಿಮಿನಲ್ ಮನಸ್ಥಿತಿಯವರು ಎಂಬುದನ್ನು  ಸಾಬೀತುಪಡಿಸು ವಂಥದ್ದು. ದೆಹಲಿಯ ನಿರ್ಭಯ ಪ್ರಕರಣವು ರಾಷ್ಟ್ರೀಯ ಸಂಚಲನ ಸೃಷ್ಟಿಸಿದುದಕ್ಕೆ ಇದ್ದ ಹಲವು ಕಾರಣಗಳಲ್ಲಿ ಒಂದು ಏನೆಂದರೆ, ಅದು ಒಳಗೊಂಡಿದ್ದ ಪೈಶಾಚಿಕತೆ. ಅದು ಅತ್ಯಾಚಾರ ವಷ್ಟೇ ಆಗಿರಲಿಲ್ಲ. ಅತ್ಯಾಚಾರಿಗಳು ಯಾವ  ಮನಸ್ಥಿತಿಯವರು ಮತ್ತು ಆ ಮನಸ್ಥಿತಿ ಈ ಜಗತ್ತಿನ ಪಾಲಿಗೆ ಎಷ್ಟು ಅಪಾಯಕಾರಿ ಅನ್ನುವುದನ್ನು ಸ್ಪಷ್ಟಪಡಿಸುವ ಸನ್ನಿವೇಶವೂ ಆಗಿತ್ತು. ಅವರು ನಿರ್ಭಯಳ ದೇಹವನ್ನು ಇಂಚಿಂಚೂ ತಿವಿದರು. ಚಿತ್ರಹಿಂಸೆ ಕೊಟ್ಟರು. ರಕ್ತದಿಂದ ತೋಯುತ್ತಿದ್ದ  ಜೀವವನ್ನು ರಸ್ತೆಗೆಸೆದರು. ಇದರಲ್ಲಿ ಎರಡು ಮನಸ್ಥಿತಿಯ ಪರಿಚಯವಾಗುತ್ತದೆ.
1. ಹೆಣ್ಣನ್ನು ಭೋಗ ವಸ್ತು ಮತ್ತು ತಮ್ಮ ಇಚ್ಛೆಗೆ ತಕ್ಕಂತೆ ಬಳಸಿಕೊಳ್ಳಬಹುದಾದ ವಸ್ತು ಎಂಬಂತೆ ಪರಿಗಣಿಸುವುದು.
2. ತಮ್ಮ ಇಚ್ಛೆಯನ್ನು ತಿರಸ್ಕರಿಸುವ ಹೆಣ್ಣನ್ನು ಮೃಗಗಳಂತೆ ಹಂಚಿ ತಿನ್ನುವುದು.
ಪುತ್ತೂರಿನ ಪ್ರಕರಣಕ್ಕೂ ನಿರ್ಭಯ ಪ್ರಕರಣಕ್ಕೂ ನಡುವೆ ಇರುವ ಸಾಮ್ಯತೆ ಏನೆಂದರೆ, ಎರಡೂ ಕಡೆಯೂ ಸಾಮೂಹಿಕ ಅತ್ಯಾಚಾರ ನಡೆದಿದೆ. ಆದರೆ ನಿರ್ಭಯ ಪ್ರಕರಣದಲ್ಲಿ ಚಿತ್ರೀಕರಣ ನಡೆದಿರಲಿಲ್ಲ. ಪುತ್ತೂರಿನ ಪ್ರಕರಣದಲ್ಲಿ ಅತ್ಯಾಚಾರದ ಜೊತೆ ಚಿತ್ರೀಕರಣವೂ ನಡೆದಿದೆ. ನಿರ್ಭಯಳ ಮೇಲೆ ಅತ್ಯಾಚಾರದ ಜೊತೆ ದೈಹಿಕ ಹಿಂಸೆಯನ್ನೂ ಎಸಗಲಾಗಿತ್ತು. ಪುತ್ತೂರಿನ ಅತ್ಯಾಚಾರವು ಈ ದೈಹಿಕ ಹಿಂಸೆಯಿಂದ ಹೊರತಾಗಿದೆ. ನಿಜವಾಗಿ, ಇಲ್ಲಿರುವ ವ್ಯತ್ಯಾಸ ತೆಳುವಾದುದು. ದೈಹಿಕ ಹಿಂಸೆಯು  ಒಂದು ಬಾರಿ ನೋವನ್ನು ಕೊಟ್ಟರೆ, ಅತ್ಯಾಚಾರದ ವೀಡಿಯೋವು ಅಸಂಖ್ಯ ಬಾರಿ ನೋವನ್ನು ಕೊಡುತ್ತಲೇ ಇರುತ್ತದೆ. ಪರಿಣಾಮದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಸಂಗತಿಯಿದು. ನಿರ್ಭಯಳ ವಿಷಯದಲ್ಲಿ ಆಯುಧಗಳು ಬಳಕೆಯಾಗಿದ್ದರೆ,  ಇಲ್ಲಿ ಕ್ಯಾಮರಾ ಬಳಕೆಯಾಗಿದೆ. ಇದರಾಚೆಗೆ ನೋಡುವುದಾದರೆ ಎರಡೂ ಹಿಂಸೆಯೇ. ಆದರೂ ರಾಷ್ಟ್ರಮಟ್ಟದಲ್ಲಿ ಬಿಡಿ, ರಾಜ್ಯಮಟ್ಟದಲ್ಲಾದರೂ ತೀವ್ರ ಪ್ರತಿಭಟನೆ, ಕ್ಯಾಂಡಲ್ ಲೈಟ್ ನಡಿಗೆ, ಧರಣಿ, ಮನವಿ ಸಲ್ಲಿಕೆ ಇತ್ಯಾದಿ ಇತ್ಯಾದಿಗಳು ಭಾರೀ  ಮಟ್ಟದಲ್ಲಿ ಕಾಣಿಸಿಕೊಳ್ಳದಿರಲು ಕಾರಣವೇನು? ಜಾತಿಯೇ? ನಿರ್ಭಯ ಮೇಲ್ಜಾತಿಯ ಹೆಣ್ಣು ಮಗಳು ಮತ್ತು ಪುತ್ತೂರಿನ ಸಂತ್ರಸ್ತೆ ದಲಿತ ಹೆಣ್ಣು ಮಗಳು ಎಂಬುದು ಇದಕ್ಕಿರುವ ಕಾರಣವೇ? ಅತ್ಯಾಚಾರದ ಆರೋಪ ಹೊತ್ತ ಯುವಕರು ಬಿಜೆಪಿಯ  ಬೆಂಬಲಿಗರು ಎಂಬುದೂ ಇನ್ನೊಂದು ಕಾರಣವೇ? ಹಾಗಿದ್ದರೆ, ದಲಿತ ಸಂಘಟನೆಗಳನ್ನು ಮೌನವಾಗಿಸಿದ್ದು ಯಾವುದು? ಇದಕ್ಕೂ ರಾಜಕೀಯ ಆಯಾಮವಿದೆಯೇ?
2012ರಲ್ಲಿ ಪ್ರಧಾನಿಯಾಗಿದ್ದುದು ಮನ್‍ಮೋಹನ್ ಸಿಂಗ್. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಆಗ ಅಧಿಕಾರದಲ್ಲಿತ್ತು. ಹಾಗಿದ್ದೂ, ನಿರ್ಭಯಳಿಗಾಗಿ ದೇಶವನ್ನೇ ಒಂದಾಗಿಸಲು ಮತ್ತು ಬೀದಿಗಿಳಿಯುವಂತೆ ಮಾಡಲು ಬಿಜೆಪಿ ಯಶಸ್ವಿಯಾಗಿತ್ತು.  ಅಂದಮೇಲೆ, ಪುತ್ತೂರಿನ ಘಟನೆಯನ್ನು ನಾಗರಿಕ ಆಕ್ರೋಶವಾಗಿ ಪರಿವರ್ತಿಸುವುದು ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಕಷ್ಟವೇ ಅಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಹಿಂದೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ  ಚಳವಳಿಯ ಪಾಲು ಇರುವಂತೆಯೇ ನಿರ್ಭಯ ಪ್ರಕರಣದಲ್ಲಿ ಬಿಜೆಪಿ ಹುಟ್ಟು ಹಾಕಿದ ಸಾರ್ವಜನಿಕ ಆಕ್ರೋಶಕ್ಕೂ ಪಾಲು ಇದೆ. ಒಂದು ಭೀಕರ ಅತ್ಯಾಚಾರವನ್ನು ಹೇಗೆ ರಾಷ್ಟ್ರೀಯ ಇಶ್ಶೂ ಆಗಿ ಬದಲಾಯಿಸಬಹುದು ಎಂಬುದನ್ನು ಅತ್ಯಂತ  ಪರಿಣಾಮಕಾರಿ ಯಾಗಿ ಬಿಜೆಪಿ ಅಂದು ತೋರಿಸಿಕೊಟ್ಟಿತ್ತು. ಶಾಲಾ ಮಕ್ಕಳನ್ನು ಅದು ಬೀದಿಗಿಳಿಸಿತ್ತು. ಸರಕಾರಿ ನೌಕರರು, ಮಹಿಳಾ ಸಂಘಟನೆಗಳು, ಸರಕಾರೇತರ ಸಂಸ್ಥೆಗಳು ಇತ್ಯಾದಿ ಎಲ್ಲರೂ ಎಲ್ಲವೂ ಒಂದು ಯುದ್ಧದಲ್ಲಿ ಪಾಲ್ಗೊಳ್ಳುವ  ರೀತಿಯಲ್ಲಿ ಅಂದು ಪ್ರತಿಭಟಿಸಿದ್ದರೆ, ಅದನ್ನು ಪ್ರಚೋದಿಸಿದ್ದು ಬಿಜೆಪಿಯೇ. ಹೀಗಿರುವಾಗ, ಬಿಜೆಪಿಯ ಈಗಿನ ಮೌನವನ್ನು ಅನುಮಾನಿಸುವುದು ಯಾವ ರೀತಿಯಲ್ಲೂ ಅಪರಾಧವಾಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇದೆ.  ಈ ಸರಕಾರವನ್ನು ಉರುಳಿಸಿ ಯಡಿಯೂರಪ್ಪರ ನೇತೃತ್ವದಲ್ಲಿ ಸರಕಾರವನ್ನು ರಚಿಸಬೇಕೆಂಬುದು ಬಿಜೆಪಿಯ ಬಯಕೆ. ಬಹುಮತ ಇಲ್ಲದೆಯೂ ಈ ಮೊದಲು ಸರಕಾರ ರಚಿಸಿದ್ದು ಈ ಬಯಕೆಗೆ ಪುರಾವೆಯಾದರೆ, ಆ ಬಳಿಕದ ಹಲವು ಆಪರೇಶನ್  ಕಮಲ ಪ್ರಯತ್ನಗಳು ಇದಕ್ಕೆ ಇನ್ನಷ್ಟು ಪುರಾವೆಗಳಾಗಿವೆ. ಇಷ್ಟಿದ್ದೂ ಬಿಜೆಪಿಯೇಕೆ ಮೌನ ವ್ರತದಲ್ಲಿದೆ? ಮನ್‍ಮೋಹನ್ ಸಿಂಗ್ ಸರಕಾರವನ್ನು ಅಲುಗಾಡಿಸಲು ಮತ್ತು ಯುಪಿಎ ಸರಕಾರದ ವಿರುದ್ಧ ಜನಾಕ್ರೋಶವನ್ನು ಪ್ರಚೋದಿಸಲು ನಿರ್ಭಯ  ಪ್ರಕರಣವನ್ನು ಬಳಸಿಕೊಂಡಿದ್ದ ಬಿಜೆಪಿಯು ಕನಿಷ್ಠ ಕುಮಾರಸ್ವಾಮಿ ಸರಕಾರದ ಪತನಕ್ಕೆ ವೇದಿಕೆಯಾಗಿ ಪುತ್ತೂರು ಘಟನೆಯನ್ನು ಉಪಯೋಗಿಸದಿರಲು ಕಾರಣವೇನು? ಯಾವ ಲೆಕ್ಕಾಚಾರ ಹೀಗೆ ಮಾಡದಿರಲು ಬಿಜೆಪಿಗೆ ತಡೆಯಾಗಿದೆ? ಜಾತಿ  ಲೆಕ್ಕಾಚಾರವೇ? ಆರೋಪಿಗಳು ತಮ್ಮ ಬೆಂಬಲಿಗರು ಎಂಬ ಲೆಕ್ಕಾಚಾರವೇ? ಅಥವಾ ನಿರ್ಭಯ ಪ್ರಕರಣವನ್ನು ರಾಷ್ಟ್ರಮಟ್ಟದ ಚಳವಳಿಯಾಗಿ ಮಾರ್ಪಡಿಸುವುದಕ್ಕೆ ಆಕೆಯ ಮೇಲ್ಜಾತಿ ಕಾರಣವಾಗಿತ್ತೇ? ಪುತ್ತೂರಿನ ಸಂತ್ರಸ್ತ ವಿದ್ಯಾರ್ಥಿನಿ  ಕೆಳಜಾತಿಯವಳಾಗಿರುವುದು ಬಿಜೆಪಿಯ ನಿರಾಸಕ್ತಿಗೆ ಕಾರಣವೇ?
ಅತ್ಯಾಚಾರಕ್ಕೆ ಜಾತಿ-ಧರ್ಮಗಳ ಹಂಗಿಲ್ಲ. ಮೇಲ್ಜಾತಿ ಯುವ ತಿಯ ಮೇಲೆ ನಡೆಯುವ ಅತ್ಯಾಚಾರ ಅಕ್ಷಮ್ಯವೂ ಕೆಳಜಾತಿ ಯುವತಿಯ ಮೇಲೆ ನಡೆಯುವ ಅತ್ಯಾಚಾರ ಕ್ಷಮ್ಯವೂ ಆಗುವುದಕ್ಕೆ ಸಾಧ್ಯವೂ ಇಲ್ಲ. ಅತ್ಯಾಚಾರದ ನೋವು, ಸಂಕಟ,  ಅವಮಾನ, ಭಯಾನಕತೆ ಎಲ್ಲವೂ ಎಲ್ಲ ಜಾತಿಯ ಹೆಣ್ಣು ಮಕ್ಕಳ ಪಾಲಿಗೂ ಸಮಾನ. ಪುತ್ತೂರಿನ ಸಂತ್ರಸ್ತೆ ಮತ್ತು ದೆಹಲಿಯ ನಿರ್ಭಯ ನಮ್ಮ ಪಾಲಿಗೆ ಮುಖ್ಯವಾಗಬೇಕಾದುದು ಈ ಹಿನ್ನೆಲೆಯಲ್ಲಿ. ಅವರಿಬ್ಬರೂ ಹೆಣ್ಣು ಮಕ್ಕಳು. ಬರೇ ಹೆಣ್ಣು  ಮಕ್ಕಳು. ಮೇಲ್ಜಾತಿ ಮತ್ತು ಕೆಳಜಾತಿ ಎಂಬುದು ಅತ್ಯಾ   ಚಾರಕ್ಕೆ ಸಂಬಂಧಿಸಿ ನಗಣ್ಯ. ದುರಂತ ಏನೆಂದರೆ, ನಿರ್ಭಯ ಪ್ರಕರಣದಲ್ಲಿ ಜಾತಿಯನ್ನೂ ಮೀರಿದ ಮತ್ತು ಪಕ್ಷವನ್ನೂ ಲೆಕ್ಕಿಸದ ಏಕೀಕೃತ ದನಿಯೊಂದು ರಾಷ್ಟ್ರದಾದ್ಯಂತ ಮೊಳಗಿದ್ದರೆ,  ಪುತ್ತೂರು ಪ್ರಕರಣಕ್ಕೆ ಅದರ ಒಂದಂಶ ಮಹತ್ವವೂ ಲಭ್ಯವಾಗಿಲ್ಲ. ಟಿ.ವಿ. ಮಾಧ್ಯಮವು ಅದನ್ನು ಒಂದು ದಿನದ ಬ್ರೇಕಿಂಗ್ ನ್ಯೂಸ್ ಆಗಿಸಿ ಚಪ್ಪರಿಸಿ ಕೈ ತೊಳೆದುಕೊಂಡಿತೇ ಹೊರತು ಈ ಪ್ರಕರಣಕ್ಕೆ ಚಳವಳಿಯ ಸ್ವರೂಪವನ್ನು ಕೊಡುವ ಪ್ರಮುಖ  ಜವಾಬ್ದಾರಿ ಯಿಂದ ಹಿಂಜರಿಯಿತು. ವಿರೋಧ ಪಕ್ಷವಾದ ಬಿಜೆಪಿಯ ಮೌನವನ್ನು ಪರಿಣಾಮಕಾರಿಯಾಗಿ ಪ್ರಶ್ನಿಸುವಲ್ಲೂ ಅವು ಜಾಣತನ ತೋರಿತು. ಬಿಜೆಪಿಯಂತೂ ಮಾತನ್ನೇ ಮರೆತು ಮೌನವಾಯಿತು. ನಿಜವಾಗಿ, ಯಾವುದೇ ಕ್ರೌರ್ಯದ ಇತಿ  ಮತ್ತು ಮಿತಿ ಇದು. ಬಿಜೆಪಿಯ ಯಾವುದೇ ಪ್ರತಿಭಟನೆಯಲ್ಲಿ ಹೊರಗೆ ಕಾಣುವುದಕ್ಕಿಂತ ಬೇರೆಯದೇ ಆದ ಲೆಕ್ಕಾಚಾರ ಇರುತ್ತದೆ ಅನ್ನುವ ಆರೋಪಕ್ಕೆ ಬಲ ನೀಡಿದ ಘಟನೆ ಇದು. ಅತ್ಯಾಚಾರವು ಬಿಜೆಪಿಯ ಪಾಲಿಗೆ ಕ್ರೌರ್ಯ ಮತ್ತು ಪ್ರತಿಭಟ ನಾರ್ಹ ಕೃತ್ಯವಾಗಬೇಕಿದ್ದರೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಜಾತಿ ಮತ್ತು ಅತ್ಯಾಚಾರಿಗಳ ಧರ್ಮ ಮುಖ್ಯ ವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಮುನ್ನೆಲೆಗೆ ತಂದ ಕೃತ್ಯವೂ ಇದುವೇ. ಒಂದುವೇಳೆ, ಅಲ್ಲಿನ  ಆರೋಪಿಗಳ ಧರ್ಮ ಬೇರೆಯಾಗಿರುತ್ತಿದ್ದರೆ ಬಿಜೆಪಿಯ ನಿಲುವು ಏನಿರುತ್ತಿತ್ತು ಅನ್ನುವ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ನಿಜವಾಗಿ, ಈ ಪ್ರಶ್ನೆ ಅಪ್ರಸ್ತುತ ಅಲ್ಲ, ಅಕಾರಣವೂ ಅಲ್ಲ. ಇಂಥ ಪ್ರಶ್ನೆಯ ಹುಟ್ಟಿಗೆ ಬಿಜೆಪಿಯ ಈ ಹಿಂದಿನ ನಿಲುವುಗಳೇ  ಮುಖ್ಯ ಆಧಾರ. ಪುತ್ತೂರಿನ ಸಂತ್ರಸ್ತೆಯು ಈ ಪ್ರಶ್ನೆಯನ್ನು ಮತ್ತೊಮ್ಮೆ ಪ್ರಸ್ತುತಗೊಳಿಸಿದ್ದಾಳೆ ಅಷ್ಟೇ. ಅಂದಹಾಗೆ,
ಅತ್ಯಾಚಾರದಂಥ ಅತಿಹೀನ ಮತ್ತು ಅತಿ ಅಪಾಯಕಾರಿ ಕ್ರೌರ್ಯವೂ ಜಾತಿ-ಧರ್ಮಗಳ ಕನ್ನಡಕದಲ್ಲಿ ಪರಿಶೀಲನೆಗೆ ಒಳಗಾಗುವುದು ಮತ್ತು ಅವುಗಳ ಆಧಾರದಲ್ಲೇ  ಅದು ಪ್ರಶ್ನಾರ್ಹವೋ ಕ್ಷಮ್ಯವೋ ಎಂದು ನಿರ್ಧರಿಸಲ್ಪಡುವುದು ಅತ್ಯಂತ  ಆಘಾತಕಾರಿ ಬೆಳವಣಿಗೆ. ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣು ಬರೇ ಹೆಣ್ಣು ಮಾತ್ರ ಆಗಿರುತ್ತಾಳೆ. ಬರೇ ಹೆಣ್ಣು. ಆ ಸಂದರ್ಭದಲ್ಲಿ ಆಕೆ ಬುರ್ಖಾ, ಸಲ್ವಾರ್, ಸೀರೆ, ಲಂಗ-ಧಾವಣಿ ಏನನ್ನೂ ಧರಿಸಿರಬಹುದು. ಅದು ಅತ್ಯಾಚಾರಕ್ಕೆ ಕಾರಣ ಅಲ್ಲ. ಆಕೆ  ಹೆಣ್ಣಾಗಿರುವುದೇ ಅತ್ಯಾಚಾರಕ್ಕೆ ಕಾರಣ. ಬಟ್ಟೆ ಸೆಕೆಂಡರಿ. ಆದರೆ ಅತ್ಯಾಚಾರಿ ಗಂಡು ಬರೇ ಗಂಡಷ್ಟೇ ಆಗಿರಬೇಕಿಲ್ಲ. ಆತ ಮತಾಂಧ ಗಂಡೂ ಆಗಿರಬಲ್ಲ. ಮೃಗೀಯ ಗಂಡೂ ಆಗಿರಬಲ್ಲ. ಪರಮತ ದ್ವೇಷ ವನ್ನು ಮನತುಂಬಾ ತುಂಬಿಕೊಂಡ  ಗಂಡೂ ಆಗಿರಬಲ್ಲ. ಮತ್ಸರಿ, ಪ್ರೇಮ ವಂಚಿತ, ವಿಕೃತ ಕಾಮಿ ಏನೇನೋ ಆಗಿರಬಲ್ಲ. ಅತ್ಯಾಚಾರಿ ಗಂಡಿನ ಮನಸ್ಥಿತಿಯನ್ನು ಹೊಂದಿಕೊಂಡು ಅತ್ಯಾಚಾರ ಕ್ಕೊಳಗಾಗುವ ಹೆಣ್ಣಿನ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಆಕೆ ಒಂದೋ  ನಿರ್ಭಯಳಂತೆ ಮೃಗೀಯ ಹಿಂಸೆಗೆ ತುತ್ತಾಗುವಳು ಅಥವಾ ಪುತ್ತೂರಿನ ಸಂತ್ರಸ್ತೆಯಂತಾಗುವಳು. ಇಲ್ಲವೇ ಇವೆರಡೂ ಆಗದೇ ಒಳಗೊಳಗೇ ಕುದಿಯುತ್ತಾ, ಸಾಯುತ್ತಾ ಬದುಕುತ್ತಿರುವ ಅಸಂಖ್ಯ ಯುವತಿಯರಂತಾಗುವಳು. ಈ ಸ್ಥಿತಿಗಳೆಲ್ಲವೂ  ಅತ್ಯಾಚಾರಿ ಯನ್ನು ಹೊಂದಿಕೊಂಡಿದೆ. ಆದ್ದರಿಂದಲೇ, ಅತ್ಯಾಚಾರ ಪ್ರಕರಣವನ್ನು ಜಾತಿ-ಧರ್ಮದ ಲೆಕ್ಕಾಚಾರಕ್ಕಿಂತ ಹೊರಗಿಟ್ಟು ನೋಡಬೇಕಾಗಿದೆ. ಇಲ್ಲಿ ಹೆಣ್ಣೇ ಸಂತ್ರಸ್ತೆ. ಬರೇ ಹೆಣ್ಣು. ಆಕೆ ತೊಟ್ಟಿರುವ ಉಡುಪು ಮತ್ತು ಪ್ರತಿನಿಧಿಸುವ ಧರ್ಮ  ಮುಖ್ಯವೇ ಅಲ್ಲ.
ಪುತ್ತೂರಿನ ಪ್ರಕರಣ ಮುಖ್ಯವಾಗುವುದು ಈ ಕಾರಣದಿಂದ. ಆಕೆ ಹೆಣ್ಣು. ಬರೇ ಹೆಣ್ಣು. ಅಷ್ಟೇ.

Thursday, July 11, 2019

ಬುರ್ಖಾ ನಿಷೇಧಿಸಬೇಕು ಎಂಬ ಆಗ್ರಹದ ಹಿಂದೆ-ಮುಂದೆ



ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಸರಿಸುಮಾರು ಒಂದು ತಿಂಗಳ ಬಳಿಕ ಸುಪ್ರೀಮ್ ಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಾಂಡೇಯ ಕಾಟ್ಜು ಅವರ ಬರಹವೊಂದು ದಿ ಹಿಂದೂ ಪತ್ರಿಕೆಯಲ್ಲಿ (ಜೂನ್ 27, 2019)  ಪ್ರಕಟವಾಗಿದೆ. ಅದರಲ್ಲಿ ಮುಸ್ಲಿಮರಿಗೆ ಸಂಬಂಧಿಸಿ ಮೂರು ಸಲಹೆಗಳಿವೆ.
1. ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು ಮತ್ತು ಶರಿಯಾ ನಿಯಮಗಳು ರದ್ದುಗೊಳ್ಳಬೇಕು.
2. ಬುರ್ಖಾಕ್ಕೆ ನಿಷೇಧ ಹೇರಬೇಕು. ಬುರ್ಖಾ ಧರಿಸುವ ಮಹಿಳೆಯರಿಗೆ ಭಾರೀ ಮೊತ್ತದ ದಂಡ ವಿಧಿಸಬೇಕು. ಬುರ್ಖಾವು ಮಹಿಳೆಯರ ಆಯ್ಕೆಯ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿದೆಯಾದರೂ ಅದು ನಕಾರಾತ್ಮಕ ಸ್ವಾತಂತ್ರ್ಯ.
3. ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡನ್ನು (AIMPLB ) ರದ್ದುಪಡಿಸಬೇಕು.
ಈ ಬರಹಕ್ಕಿಂತ ಎರಡು ತಿಂಗಳ ಮೊದಲು- ಎಪ್ರಿಲ್‍ನಲ್ಲಿ - ಕೇಂದ್ರದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋವು (NCRB) 2016ರ ವರದಿಯನ್ನು ಬಿಡುಗಡೆಗೊಳಿಸಿತ್ತು. ಅದರಲ್ಲಿ Prisoners statistics India (ಭಾರತದಲ್ಲಿರುವ  ಕೈದಿಗಳ ಅಂಕಿ ಅಂಶ) ಎಂಬ ಹೆಸರಲ್ಲಿ ಅಂಕಿ ಅಂಶಗಳೂ ಇದ್ದುವು. ಚುನಾವಣೆಯ ಸಂದರ್ಭದಲ್ಲಿ ಈ ವರದಿಯನ್ನು ಬಿಡುಗಡೆ ಗೊಳಿಸಲಾದ ಕಾರಣದಿಂದಲೋ ಏನೋ ಈ ವರದಿ ಹೆಚ್ಚು ಚರ್ಚೆಗೆ ಒಳಗಾಗಲಿಲ್ಲ. 2017 ಮತ್ತು 18ರ ವರದಿ  ಎಲ್ಲಿದೆ ಮತ್ತು ಯಾಕೆ ಅದನ್ನು ಬಿಡುಗಡೆಗೊಳಿಸಿಲ್ಲ ಅನ್ನುವ ಪ್ರಶ್ನೆಯೂ ದೊಡ್ಡ ಮಟ್ಟದಲ್ಲಿ ಕೇಳಿಸಿಕೊಂಡಿಲ್ಲ. ಈ ವರದಿಯಲ್ಲಿರುವ ಅಚ್ಚರಿ ಏನೆಂದರೆ, ಕೈದಿಗಳ ಜಾತೀವಾರು ಮತ್ತು ಧರ್ಮವಾರು ಲೆಕ್ಕಾಚಾರವನ್ನೇ ಉಲ್ಲೇಖಿಸದಿರುವುದು. ಜೈಲಿನಲ್ಲಿರುವ ಕೈದಿಗಳಲ್ಲಿ ಯಾವ ಜಾತಿ, ಜನಾಂಗ, ಪಂಗಡದವರು ಎಷ್ಟಿದ್ದಾರೆ ಮತ್ತು ಯಾವ ಧರ್ಮದವರು ಎಷ್ಟೆಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಈ ಹಿಂದಿನ ಎಲ್ಲ ವರದಿಗಳೂ ಸ್ಪಷ್ಟಪಡಿಸುತ್ತಿದ್ದುವು. ಭಾರತ ದಂತಹ ಬಹುಧರ್ಮೀಯ ಮತ್ತು  ಬಹು ಜಾತೀಯ ದೇಶದಲ್ಲಿ ಇಂಥದ್ದೊಂದು  ವಿಂಗಡನೆಯಾಧಾರಿತ ವರದಿ ಯಾಕೆ ಮುಖ್ಯ ವಾಗುತ್ತದೆ ಎಂದರೆ, ಅದರಿಂದಾಗಿ ಸಾಮಾಜಿಕ ನ್ಯಾಯದ ಸ್ಥಿತಿ-ಗತಿ ಅರ್ಥ ವಾಗುತ್ತಿತ್ತು. ನಮ್ಮ ಪೊಲೀಸ್ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಮತ್ತು  ಜಾತಿ-ಧರ್ಮಗಳ ಪಕ್ಷಪಾತದಿಂದ ಅವೆಷ್ಟು ಮುಕ್ತವಾಗಿವೆ ಎಂಬುದಕ್ಕೂ ಅವು ಉತ್ತರ ನೀಡುತ್ತಿತ್ತು. ಬಡವರು, ಅಲ್ಪಸಂಖ್ಯಾತರು, ದಲಿತ-ದುರ್ಬಲ ವರ್ಗದವರ ಮೇಲೆ ಪೊಲೀಸರು ಕಾನೂನು ಪ್ರಯೋಗಿಸುವಷ್ಟು ಸಲೀಸಾಗಿ ಶ್ರೀಮಂತರು ಮತ್ತು  ಮೇಲ್ಜಾತಿಯವರ ಮೇಲೆ ಕಾನೂನು ಪ್ರಯೋಗಿಸುವುದಿಲ್ಲ ಅನ್ನುವ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕೂ ಇಂಥ ವರದಿಗಳಿಂದ ಅನುಕೂಲವಿತ್ತು.
ಭಾರತದ ನ್ಯಾಯಾಂಗ ಪ್ರಕ್ರಿಯೆಯು ಉಳ್ಳವರಿಗೂ ಇಲ್ಲ ದವರಿಗೂ ಏಕರೂಪದಲ್ಲಿ ದಕ್ಕುತ್ತಿಲ್ಲ. ಉಳ್ಳವರಿಗೆ ನ್ಯಾಯಾಂಗ ವ್ಯವಸ್ಥೆಯನ್ನು ದಾರಿ ತಪ್ಪಿಸುವ ಇಂಚಿಂಚು ಮಾಹಿತಿಗಳೂ ಗೊತ್ತಿರುತ್ತವೆ. ದುಬಾರಿ ವಕೀಲರನ್ನು ನೇಮಿಸಿಕೊಳ್ಳುವ  ಸಾಮಥ್ರ್ಯವೂ ಇರುತ್ತದೆ. ಕೆಳ ಕೋರ್ಟಿನ ತೀರ್ಪಿನ ವಿರುದ್ಧ ಹೈಕೋರ್ಟ್‍ಗೆ ಹೋಗುವುದು ಮತ್ತು ತಮ್ಮ ಪರ ಮಾಧ್ಯಮ ಗಳಲ್ಲಿ ವರದಿ ಪ್ರಕಟವಾಗುವಂತೆ ಮತ್ತು ಆ ಮೂಲಕ ಸಾರ್ವಜನಿಕರ ಭಾವನೆಗಳನ್ನು ತಮ್ಮ ಪರ ಒಲಿಯುವಂತೆ  ಮಾಡಿಕೊಳ್ಳುವ ಪ್ರಾಬಲ್ಯವೂ ಅವರಲ್ಲಿರುತ್ತದೆ. ಆದರೆ, ಈ ಯಾವ ಸವಲತ್ತುಗಳೂ ಇಲ್ಲದೇ ಇರುವುದು- ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗದವರಿಗೆ ಮತ್ತು ಅವರಲ್ಲಿ ಪೊಲೀಸ್ ವ್ಯವಸ್ಥೆಯ ದಾಹವನ್ನು  ತಣಿಸುವ ಬಲ ಇರುವುದಿಲ್ಲ. ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ಸಮರ್ಥ ವಕೀಲರ ನೇಮಕವೇ ಅವರಿಗೆ ತ್ರಾಸದಾಯಕ. 2015ರ ವರದಿಯಂತೆ, ವಿಚಾರಣಾಧೀನ ಕೈದಿಗಳ ಪೈಕಿ 55% ಮಂದಿ ಮುಸ್ಲಿಮ್, ದಲಿತ ಮತ್ತು  ಆದಿವಾಸಿ ಪಂಗಡಗಳಿಗೆ ಸೇರಿದವರಿದ್ದರು. ವಿಚಾರಣಾಧೀನ ಕೈದಿಗಳು ಎಂದರೆ- ಆರೋಪ ಹೊರಿಸಲ್ಪಟ್ಟವರು ಮತ್ತು ಅಪರಾಧ ಸಾಬೀತಾಗಿಲ್ಲದವರು. ಈ ವರದಿ ಕೆಲವು ಆಘಾತಕಾರಿ ಸತ್ಯಗಳನ್ನು ಹೇಳುತ್ತದೆ. ಕೆಲವು ಪ್ರಶ್ನೆಗಳನ್ನೂ ಹುಟ್ಟು  ಹಾಕುತ್ತವೆ. ವಿಚಾರಣಾಧೀನ ಕೈದಿಗಳಲ್ಲಿ ಯಾಕೆ ಮುಸ್ಲಿಮರು, ದಲಿತರು, ಪರಿಶಿಷ್ಟ ಜಾತಿ-ಪಂಗಡ ಮತ್ತು ಆದಿವಾಸಿ ವರ್ಗಕ್ಕೆ ಸೇರಿದ ವರೇ ಹೆಚ್ಚಿದ್ದಾರೆ? ಅವರು ಹುಟ್ಟು ಅಪರಾಧಿಗಳೇ? ಅವರ ಡಿಎನ್‍ಎಯೇ ಹಾಗೆಯೇ? ಅಥವಾ ಪೊಲೀಸ್  ವ್ಯವಸ್ಥೆಯಲ್ಲಿರುವ ಪಕ್ಷಪಾತಿ ಮನೋಭಾವವು ಇವರನ್ನು ಕೈದಿಗಳಾಗಿ ಮಾರ್ಪಡಿ ಸುತ್ತಿದೆಯೇ? ಭಾರತೀಯ ಪೆÇಲೀಸ್ ಠಾಣೆಗಳು ಪರಮ ಜಾತ್ಯತೀತ ಸ್ಥಳಗಳಾಗಿ ಉಳಿದಿಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ  ಪ್ರಬಲವಾಗಿ ಎರಗುವ ಇಲ್ಲಿನ ಕಾಯ್ದೆಗಳು ಇತರರ ಮೇಲೆ ಅಷ್ಟೇ ನಯವಾಗಿಯೂ ನಡೆದುಕೊಳ್ಳುತ್ತವೆ ಎಂಬುದೂ ಗೊತ್ತು. ಭಾರತೀಯ ದಂಡಸಂಹಿತೆ ಸೆಕ್ಷನ್ 436A ಪ್ರಕಾರ, ವಿಚಾರಣಾಧೀನ ಕೈದಿಗಳ ಮೇಲೆ ಇರುವ ಆರೋಪ ಸಾಬೀತಾದರೆ  ಎಷ್ಟು ವರ್ಷ ಜೈಲಲ್ಲಿರಬೇಕಾಗುತ್ತದೋ ಅದರ ಅರ್ಧದಷ್ಟು ಅವಧಿಯನ್ನು ಅವರು ವಿಚಾರಣಾಧೀನ ಕೈದಿಯಾಗಿ ಕಳೆದಿದ್ದರೆ ವೈಯಕ್ತಿಕ ಬಾಂಡ್‍ನ ಮೂಲಕ ಅವರನ್ನು ಬಿಡುಗಡೆಗೊಳಿಸ ಬಹುದು. ವಿಷಾದ ಏನೆಂದರೆ, ಜೈಲಿನ ಅಧಿಕಾರಿಗಳಿಗೂ ಈ  ಕುರಿತಂತೆ ಹೆಚ್ಚಿನ ತಿಳುವಳಿಕೆ ಇಲ್ಲ. ಇದರಿಂದಾಗಿ ವಿಚಾರಣಾ ಧೀನ ಕೈದಿಗಳ ಪೈಕಿ ದೊಡ್ಡದೊಂದು ಸಂಖ್ಯೆ ಬಿಡುಗಡೆಗೆ ಅರ್ಹರಿದ್ದೂ ಬಿಡುಗಡೆಗೊಂಡಿಲ್ಲ.
2016ರ ವರದಿಯಂತೆ 4,33,033 ಮಂದಿ ಕೈದಿಗಳು ಜೈಲಲ್ಲಿದ್ದಾರೆ. ಅವರಲ್ಲಿ 68% ಮಂದಿ ವಿಚಾರಣಾಧೀನ ಕೈದಿಗಳು. ಹಾಗೆಯೇ ಪ್ರತಿಬಂಧಕ ಬಂಧನ ಕಾನೂನಿನ ಪ್ರಕಾರ ವಿನಾ ಕಾರಣ ಬಂಧಿಸಿ ಜೈಲಲ್ಲಿಡುವ ಕ್ರಮವೂ ಈ ದೇಶದಲ್ಲಿದೆ. ಈ  ಕಾನೂನು ಜಮ್ಮು ಕಾಶ್ಮೀರ ಸಹಿತ ಕೆಲವು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಜಮ್ಮು ಕಾಶ್ಮೀರದಲ್ಲಿ ಈ ಕಾಯ್ದೆಯ ಪ್ರಕಾರ, 2015ರಲ್ಲಿ 90 ಮಂದಿಯನ್ನು ಬಂಧಿಸಿ ಜೈಲಲ್ಲಿಡಲಾಗಿದ್ದರೆ, 2016ರ ವರದಿಯಲ್ಲಿ ಇಂಥ ಬಂಧನಗಳ ಸಂಖ್ಯೆ 431ಕ್ಕೆ ಹೆಚ್ಚಿದೆ. ಈ  ಕಾನೂನಿನ ಪ್ರಕಾರ ಯಾವುದೇ ವಿಚಾರಣೆ ನಡೆಸದೇ, ಯಾವುದೇ ಆರೋಪ ಹೊರಿಸದೇ ಮತ್ತು ಯಾವುದೇ ನ್ಯಾಯಿಕ ಪ್ರಕ್ರಿಯೆಗೆ ಒಳಪಡದೆಯೇ ಅನಿರ್ದಿಷ್ಟಾವಧಿಗೆ ಜೈಲಲ್ಲಿಡಬಹುದು. 2015 ಮತ್ತು 2016ರ ವರದಿಯನ್ನು ಹೋಲಿಸಿ ನೋಡಿದರೆ  ಕೈದಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯಲ್ಲೂ ತೀವ್ರ ಮಟ್ಟದ ಏರಿಕೆಯಾಗಿದೆ. 2015ರಲ್ಲಿ ಒಟ್ಟು 115 ಮಂದಿ ಕೈದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2016ರಲ್ಲಿ ಆತ್ಮಹತ್ಯೆಯ ಸಂಖ್ಯೆ 231ಕ್ಕೆ ಏರಿದೆ. ಕೈದಿಗಳಲ್ಲಿ ಮಾನಸಿಕ ಅಸ್ವಸ್ಥರ  ಸಂಖ್ಯೆಯಂತೂ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿದೆ. 2016ರ ವರದಿಯಂತೆ, 6013 ಮಂದಿ ಕೈದಿಗಳು ಮಾನಸಿಕ ಅಸ್ವಸ್ಥರಾಗಿ ಜೈಲಲ್ಲಿದ್ದಾರೆ. ಈ ಕುರಿತಾದ ಕುತೂಹಲಕಾರಿ ಅಂಕಿ ಅಂಶ ಏನೆಂದರೆ, ಪ್ರತಿ 21,550 ಕೈದಿಗಳಿಗೆ ಓರ್ವ  ಮಾನಸಿಕ ಆರೋಗ್ಯ ತಜ್ಞನನ್ನು ಸರಕಾರ ನೇಮಿಸಿರುವುದು. ಅದರಲ್ಲೂ ಕೈದಿಗಳ ಮಾನಸಿಕ ಆರೋಗ್ಯವನ್ನು ತಪಾಸಿಸುವುದಕ್ಕೆಂದು ಕೇವಲ 6 ರಾಜ್ಯಗಳು ಮಾತ್ರ ತಜ್ಞರನ್ನು ನೇಮಿಸಿವೆ. ಮಾನ ಸಿಕ ಅಸ್ವಸ್ಥ ಕೈದಿಗಳು ಅತ್ಯಂತ ಹೆಚ್ಚಿರುವ ಉತ್ತರ  ಪ್ರದೇಶ, ಒಡಿಸ್ಸಾ, ಮಧ್ಯಪ್ರದೇಶದ ಜೈಲುಗಳಲ್ಲಿ ಒಬ್ಬನೇ ಒಬ್ಬ ಮಾನಸಿಕ ಆರೋಗ್ಯ ತಜ್ಞರಿಲ್ಲ.
ಕೈದಿಗಳು ಎಂದ ತಕ್ಷಣ ನಾವು ಅವರನ್ನು ಸಾರಾಸಗಟು ಅಪರಾಧಿಗಳು, ಶಿಕ್ಷೆಗೆ ಅರ್ಹರಾದವರು, ಜೈಲಲ್ಲೇ ಕೊಳೆಯಬೇಕಾದವರು ಎಂದು ತೀರ್ಮಾನಿಸಿಬಿಡುವ ಹಾಗಿಲ್ಲ. ಭಾರತೀಯ ಸಾಮಾಜಿಕ ಜೀವನ ವ್ಯವಸ್ಥೆಯಲ್ಲಿ ಜಾತಿ ಹೇಗೆ ಬಹುಮುಖ್ಯ  ಅಂಗವೋ, ಧಾರ್ಮಿಕ ಪಕ್ಷಪಾತವೂ ಅಷ್ಟೇ ಪ್ರಾಮುಖ್ಯವಾದುದು. ದಲಿತರು, ಆದಿವಾಸಿಗಳು, ದುರ್ಬಲ ವರ್ಗದವರು ಮತ್ತು ಮುಸ್ಲಿಮರಿಗೆ ಇಲ್ಲಿನ ಪೊಲೀಸ್ ಠಾಣೆಗಳ ಗೇಟು ಸುಲಭವಾಗಿ ತೆರೆಯುವುದಿಲ್ಲ. ಒಂದುವೇಳೆ ತೆರೆದರೂ ಅವು ನಯವಾಗಿ  ತೆರೆದುಕೊಳ್ಳುವುದಿಲ್ಲ. ಬಡವರು ಮತ್ತು ದುರ್ಬಲರ ವಿಷಯದಲ್ಲಿ ಅತ್ಯಂತ ಕ್ರೂರಿಯಾಗುವ ಅನೇಕ ಠಾಣೆಗಳು ಅವೇ ಮಾದರಿ ಯನ್ನು ಮೇಲ್ಜಾತಿಗಳು ಮತ್ತು ಶ್ರೀಮಂತರ ವಿಷಯದಲ್ಲಿ ಅಳವಡಿಸುವುದಿಲ್ಲ. ಕೋಟಿಗಟ್ಟಲೆ ಹಣ ಸಾಲ ಪಡೆದು  ಮರಳಿಸದವರು ಮತ್ತು ಕೆಲವು ಸಾವಿರ ಸಾಲ ಪಡೆದು ಮರಳಿಸದವರು ಈ ಇಬ್ಬರನ್ನೂ ನಮ್ಮ ಬ್ಯಾಂಕುಗಳು ಹೇಗೆ ನಡೆಸಿಕೊಳ್ಳುತ್ತವೆ ಅನ್ನುವುದನ್ನೊಮ್ಮೆ ಪರಿಶೀಲಿಸಿ ನೋಡಿಕೊಳ್ಳಿ. ಕೋಟಿಗಟ್ಟಲೆ ಸಾಲ ಪಡೆದವನಿಗೆ ಬ್ಯಾಂಕಿನಲ್ಲಿ ಭಾರೀ ಗೌರವ  ಸಿಗುತ್ತದೆ. ಆತ ಹಣ ಮರಳಿಸುವುದಕ್ಕೆ ವಿಳಂಬ ಮಾಡಿದರೂ ಸಹಿಸಿಕೊಳ್ಳಲಾಗುತ್ತದೆ. ಆದರೆ ಇದೇ ಸ್ವೀಕೃತಿ ಬಡ ರೈತನ ಪಾಲಿಗೆ ಲಭ್ಯವಾಗುವುದಿಲ್ಲ. ಸಾಲ ಮರುಪಾವತಿಸುವ ದಿನಾಂಕದಲ್ಲಿ ತುಸು ಏರು-ಪೇರಾದರೂ ಬ್ಯಾಂಕುಗಳಿಗೆ ಆತನ ಮೇಲೆ  ಸಿಟ್ಟು ಬರುತ್ತದೆ. ಶ್ರೀಮಂತರ ಎದುರು ಕುಂಯ್‍ಗುಡುವ ಅವೇ ಕಾನೂನುಗಳು ಬಡವನ ಮುಂದೆ ಉಗುರು-ಹಲ್ಲುಗಳನ್ನು ಬಿಡಿಸಿ ಕೊಂಡು ಭಯಾನಕ ರೂಪ ಪಡೆಯುತ್ತವೆ. ನಮ್ಮ ಪೊಲೀಸ್ ಠಾಣೆಗಳೂ ಬಹುತೇಕ ಹೀಗೆಯೇ. ಅವು ಮೇಲ್ಜಾತಿ  ಮತ್ತು ಶ್ರೀಮಂತರ ಮುಂದೆ ಎಷ್ಟು ನಯ-ವಿನಯದಿಂದ ಬಾಗಿ ಕೊಂಡಿರುತ್ತದೋ ಅಷ್ಟೇ ಅವಿನಯ ಮತ್ತು ಅಹಮಿಕೆಯೊಂದಿಗೆ ಬಡವರ ಮುಂದೆ ಎದೆಯುಬ್ಬಿಸಿ ನಿಲ್ಲುತ್ತದೆ. ಆದ್ದರಿಂದ ಬಡವರು, ಮುಸ್ಲಿಮರು, ದಲಿತ-ಆದಿವಾಸಿ ಜನಾಂಗಗಳು  ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರುವುದು ಸುಲಭ.  ಆದರೆ ಇಷ್ಟೇ ಅನಾಯಾಸವಾಗಿ ಮೇಲ್ಜಾತಿ ಮತ್ತು ಶ್ರೀಮಂತ ವರ್ಗ ಜೈಲು ಪಾಲಾಗಲು ಸಾಧ್ಯ ಇಲ್ಲ. ವಿಚಾರಣಾಧೀನ ಕೈದಿಗಳ ಪೈಕಿ ಅತ್ಯಧಿಕ ಮಂದಿ ಅಲ್ಪಸಂಖ್ಯಾತ ಮತ್ತು  ದಲಿತ ವರ್ಗದವರೇ ಯಾಕಿದ್ದಾರೆ ಎಂಬ ಪ್ರಶ್ನೆಗೆ ಉತ್ತರವೂ ಇಲ್ಲೆಲ್ಲೋ ಇದೆ. ಅಂದಹಾಗೆ,
ಕೈದಿಗಳ ಜಾತೀವಾರು ಮತ್ತು ಧರ್ಮವಾರು ವಿವರಗಳನ್ನು ಸರಕಾರದಿಂದ ಅಡಗಿಸಬಹುದೇ ಹೊರತು ವಾಸ್ತವ ಸಂಗತಿಯನ್ನಲ್ಲ. ವಿಚಾರಣಾಧೀನ ಕೈದಿಗಳಾಗಿ ದಲಿತರು ಮತ್ತು ಅಲ್ಪಸಂಖ್ಯಾತ ವರ್ಗಗಳೇ ಯಾಕಿವೆ ಎಂಬ ಪ್ರಶ್ನೆಗೆ ಹೀಗೆ  ಅಡಗಿಸುವುದು ಉತ್ತರವೂ ಅಲ್ಲ. ಇದಕ್ಕೆ ಸಾಮಾಜಿಕ ಮತ್ತು ರಾಜಕೀಯವಾದ ಕಾರಣಗಳಿವೆ. ಮುಸ್ಲಿಮರು ಮತ್ತು ದಲಿತರನ್ನು ನಮ್ಮನ್ನಾಳುವ ವ್ಯವಸ್ಥೆ ಯಾವತ್ತೂ ಗೌರವದಿಂದ ನೋಡಿಲ್ಲ. ಒಂದು ಬಗೆಯ ಪಕ್ಷಪಾತಿತನ ಮತ್ತು ನಗಣ್ಯ ಭಾವವನ್ನು  ಅದು ಪ್ರದರ್ಶಿಸುತ್ತಲೇ ಬಂದಿವೆ. ಈ ಮನೋಭಾವಕ್ಕೆ ಚಿಕಿತ್ಸೆ ನೀಡುವುದರ ಹೊರತು ಈ ಸ್ಥಿತಿಯ ಬದಲಾವಣೆ ಸಾಧ್ಯವಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ವರದಿಯಿಂದ ಕೈದಿಗಳ ಜಾತೀವಾರು, ಧರ್ಮವಾರು ಮಾಹಿತಿಯನ್ನು  ಅಡಗಿಸುವುದು ಹೇಗೆ ಸಮಸ್ಯೆಗೆ ಪರಿಹಾರ ಅಲ್ಲವೋ ಹಾಗೆಯೇ ಸಮಾನ ನಾಗರಿಕ ಸಂಹಿತೆಯ ಜಾರಿ, ಬುರ್ಖಾ ಮತ್ತು ಂIಒPಐಃಗಳ ನಿಷೇಧವೂ ಮುಸ್ಲಿಮರ ಸಮಸ್ಯೆಗೆ ಪರಿಹಾರ ಅಲ್ಲ. ಇವೆರಡೂ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳಿಂದ  ಸಾರ್ವಜನಿಕ ಗಮನವನ್ನು ಬೇರೆಡೆಗೆ ಸರಿಸುವ ವಾದಗಳಷ್ಟೇ. ಮುಸ್ಲಿಮರು ಭಾರತದಲ್ಲಿ ಎದುರಿಸುತ್ತಿರುವ ಸಮಸ್ಯೆ ಗಳ ಆಳ-ಅಗಲ ಮತ್ತು ಅದಕ್ಕಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಮಗ್ಗುಲುಗಳ ತಿಳುವಳಿಕೆ ಇಲ್ಲದವರು ಮಾತ್ರ ಕಾಟ್ಜು  ಅವರಂತೆ ವಾದಿಸುತ್ತಾರೆ. ಅವರ ಮೇಲೆ ಅಪಾರ ಗೌರವವನ್ನಿಟ್ಟು ಕೊಂಡೇ ಈ ಮಾತನ್ನು ಹೇಳಬೇಕಾಗುತ್ತದೆ.