Wednesday, December 13, 2017

ಹಾದಿಯ, ಪದ್ಮಾವತಿ ಮತ್ತು ಕೆಲವು ಪ್ರಶ್ನೆಗಳು


ಪದ್ಮಾವತಿ
ಹಾದಿಯ
ಇಬ್ಬರೂ ಹೆಣ್ಮಕ್ಕಳೇ. ಒಂದು- ಐತಿಹಾಸಿಕವಾಗಿ ಪ್ರಬಲ ದಾಖಲೆಗಳಿಲ್ಲದ ಕಾಲ್ಪನಿಕ ಪಾತ್ರವಾದರೆ, ಇನ್ನೊಂದು- ಜೀವಂತ ಪಾತ್ರ. ಈ ಎರಡು ವ್ಯಕ್ತಿತ್ವಗಳ ನಡುವೆ ಸುಮಾರು ಏಳೂಕಾಲು ಶತಮಾನಗಳ ಅಂತರ ಇದೆ. ನಿಜವಾಗಿ, ಪದ್ಮಾವತಿ ಅಥವಾ ಪದ್ಮಿನಿ ಎಂಬೋರ್ವ ರಾಣಿ ಇದ್ದಳೋ ಎಂಬ ಬಗ್ಗೆ ಇತಿಹಾಸ ಕಾರರಲ್ಲಿ ಗೊಂದಲ ಇದೆ. 1540ರಲ್ಲಿ ಸೂಫಿ ಕವಿ ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದ ಮೂಲಕ ಮೊದಲ ಬಾರಿ ಪದ್ಮಿನಿ ಮುನ್ನೆಲೆಗೆ ಬರುತ್ತಾಳೆ. ಕಾವ್ಯವೆಂಬುದು ರೂಪಕ, ಸಂಕೇತ, ಕಲ್ಪಿತ ಪ್ರೇಮ, ವಿರಹ, ಸುಖಗಳ ಗುಚ್ಚವೆಂಬುದನ್ನು ನಮ್ಮೊಳಗೆ ನಾವು ಸ್ಪಷ್ಟಪಡಿಸಿಕೊಂಡರೆ, ಪದ್ಮಿನಿಯನ್ನು ಅರ್ಥೈಸಿಕೊಳ್ಳು ವುದು ಕಷ್ಟವೇನಲ್ಲ. 1303ರಲ್ಲಿ ಚಿತ್ತೂರಿನ ರಾಜ ರಾಣಾ ಜಯಸಿಂಹನ ಮೇಲೆ ಅಲ್ಲಾವುದ್ದೀನ್ ಖಿಲ್ಜಿ ದಾಳಿ ಮಾಡುತ್ತಾನೆ. ಸೋಲಿಸುತ್ತಾನೆ. 1316ರಲ್ಲಿ ಖಿಲ್ಜಿ ಸಾವಿಗೀಡಾಗುತ್ತಾನೆ. ಐತಿಹಾಸಿಕ ದಾಖಲೆಗಳಲ್ಲಿ ಈ ಇಬ್ಬರ ಹೆಸರಿದೆಯೇ ಹೊರತು ಎಲ್ಲೂ ಪದ್ಮಿನಿ ಅಥವಾ ಪದ್ಮಾವತಿಯ ಹೆಸರಿಲ್ಲ. ಆದರೆ ಕವಿ ಜಾಯಿಸಿ ಈ ಇಡೀ ಘಟನೆಗೆ ರಮ್ಯ ಹಿನ್ನೆಲೆಯೊಂದನ್ನು ಒದಗಿಸುತ್ತಾನೆ. `ಖಿಲ್ಜಿಗೆ ರಾಣಿ ಪದ್ಮಾವತಿಯ ಮೇಲೆ ಮೋಹ ಉಂಟಾಗುತ್ತದೆ, ಆ ಕಾರಣದಿಂದಲೇ ಯುದ್ಧ ಏರ್ಪಡುತ್ತದೆ, ಖಿಲ್ಜಿಯ ವಶವಾಗುವುದನ್ನು ತಪ್ಪಿಸುವುದಕ್ಕಾಗಿ ರಾಣಿ ಪದ್ಮಿನಿ ಇತರ 16 ಸಾವಿರ ಮಹಿಳೆಯರೊಂದಿಗೆ ಸಾಮೂಹಿಕ ಸತಿ ಸಹಗಮನ (ಜೋಹರ್) ಮಾಡುತ್ತಾಳೆ..’ ಇದು ಜಾಯಿಸಿಯ ಕಾವ್ಯದ ಸಾರಾಂಶ. ಇನ್ನೋರ್ವಳು ಹಾದಿಯ. ಈಕೆ ದಂತಕತೆಯಲ್ಲ. ನಮ್ಮ ನಡುವಿನ ವಾಸ್ತವ. ಕೇರಳದ ನೆಡುಂಬಾಶ್ಶೇರಿ ವಿಮಾಣ ನಿಲ್ದಾಣದಲ್ಲಿ ತನ್ನನ್ನು ಸುತ್ತುವರಿದಿರುವ ಪೊಲೀಸರ ನಡುವೆ ಮಾಧ್ಯಮದ ಮಂದಿಯನ್ನು ಕೂಗಿ ಕರೆದು- ‘ನಾನು ಮುಸ್ಲಿಮ್, ನನ್ನನ್ನು ಯಾರೂ ಬಲವಂತದಿಂದ ಮತಾಂತರಿಸಿಲ್ಲ, ನನ್ನ ಗಂಡ ಶಫಿನ್ ಜಹಾನ್...’ ಎಂದುದನ್ನು ಕಳೆದ ವಾರ ಟಿವಿ ಚಾನೆಲ್‍ಗಳು ನೇರವಾಗಿ ಪ್ರಸಾರ ಮಾಡಿದುವು. ಹಾಗಂತ, ಆಕೆ ತನ್ನನ್ನು ತಾನು ಹೀಗೆ ಪ್ರಸ್ತುತಪಡಿಸುತ್ತಿರುವುದು ಇದೇ ಮೊದಲಲ್ಲ. ಆಕೆ ಕೇರಳ ಹೈಕೋರ್ಟಿನ ಮುಂದೆ ಅದನ್ನು ಈ ಮೊದಲೇ ವ್ಯಕ್ತಪಡಿಸಿದ್ದಳು. ತನ್ನ ಹೆತ್ತವರ ಮುಂದೆ 2015ರ ನವೆಂಬರ್ ನಲ್ಲೇ ಹೇಳಿಕೊಂಡಿದ್ದಳು. 2016 ಮೇ 24 ರಂದು ಕೇರಳ ಹೈಕೋರ್ಟು ನೀಡಿದ ತೀರ್ಪಿನಲ್ಲಿ ಆಕೆಯ ಇಸ್ಲಾಮ್ ಸ್ವೀಕಾರದ ಬಗ್ಗೆ ವಿವರವಾಗಿ ಹೇಳಲಾಗಿತ್ತು. ತಮಿಳುನಾಡಿನ ಸೇಲಂನಲ್ಲಿರುವ ಶಿವರಾಜ್ ಹೋಮಿಯೋಪತಿ ಮೆಡಿಕಲ್ ಕಾಲೇಜ್‍ನಲ್ಲಿ ಓದುವಲ್ಲಿಂದ ಹಿಡಿದು 2015ರಲ್ಲಿ ದೊಡ್ಡಪ್ಪ ಸತ್ತಾಗ ನಡೆದ ಪ್ರಸಂಗಗಳ ವರೆಗೆ ಅದು ಹಾದಿಯಾಳ ಬದುಕು ಸಾಗಿ ಬಂದ ದೃಶ್ಯಗಳನ್ನು ಕಟ್ಟಿಕೊಟ್ಟಿತ್ತು. ಸೇಲಂನ ಮೆಡಿಕಲ್ ಕಾಲೇಜ್‍ನ ಹತ್ತಿರದಲ್ಲೇ ಇರುವ ಬಾಡಿಗೆ ಮನೆಯೊಂದರಲ್ಲಿ ಇತರ ನಾಲ್ವರು ಹೆಣ್ಣು ಮಕ್ಕಳೊಂದಿಗೆ ಅಖಿಲ ಎಂಬ ಹಾದಿಯ ವಾಸವಾಗಿದ್ದಳು. ನಾಲ್ವರು ರೂಮ್‍ಮೇಟ್‍ಗಳಲ್ಲಿ ಫಸೀನ ಮತ್ತು ಜಸೀನ ಎಂಬಿಬ್ಬರು ಮುಸ್ಲಿಂ ವಿದ್ಯಾರ್ಥಿನಿಯರೂ ಇದ್ದರು. ಜಸೀನಳ ಮನೆಗೆ ಅಖಿಲ ಹಲವು ಬಾರಿ ಹೋಗಿದ್ದಾಳೆ. ಇವರಿಬ್ಬರ ನಡತೆ ಅಖಿಲಳನ್ನು ತೀವ್ರವಾಗಿ ಆಕರ್ಷಿಸಿದೆ. ಅವರು ಮಾಡುತ್ತಿರುವ ನಮಾಝ್‍ನಿಂದ ಅಖಿಲ ಪ್ರಭಾವಿತಳಾಗಿದ್ದಾಳೆ. ಬಹುದೇವತ್ವಕ್ಕಿಂತ ಏಕದೇವತ್ವದ ಪರಿಕಲ್ಪನೆ ಆಕೆಗೆ ಹೆಚ್ಚು ಆಪ್ತವಾಗಿ ಕಂಡಿದೆ. ಇಸ್ಲಾಮ್‍ಗೆ ಸಂಬಂಧಿಸಿದ ಪುಸ್ತಕಗಳು ಮತ್ತು ವೀಡಿಯೋಗಳನ್ನು ಆಕೆ ವೀಕ್ಷಿಸ ತೊಡಗಿದ್ದಾಳೆ. ನಮಾಝನ್ನು ಅಭ್ಯಾಸ ಮಾಡತೊಡಗಿದ್ದಾಳೆ. ಮನೆಯಲ್ಲಿ ತಾನು ನಮಾಝ್ ಮಾಡಿದುದನ್ನು ನೋಡಿ ಅಪ್ಪ ಅಶೋಕನ್ ಗದರಿಸಿಯೂ ಇದ್ದಾರೆ. ಇನ್ನೊಮ್ಮೆ ಈ ಭಂಗಿ ಪುನರಾವರ್ತಿಸಬಾರದು ಎಂದೂ ತಾಕೀತು ಮಾಡಿದ್ದಾರೆ. ಆದರೆ 2015 ನವೆಂಬರ್ ನಲ್ಲಿ ದೊಡ್ಡಪ್ಪ ಮೃತಪಟ್ಟ ಸಮಯದಲ್ಲಿ ಅಖಿಲಳ ನಿಜ ರೂಪ ಮನೆಯವರಿಗೆ ಗೊತ್ತಾಗಿದೆ. ದೊಡ್ಡಪ್ಪರ ಸದ್ಗತಿಗಾಗಿ ಮನೆಯಲ್ಲಿ ಹಮ್ಮಿಕೊಂಡ 40 ದಿನಗಳ ಕಾಲದ ಪೂಜಾ ಕಾರ್ಯಗಳಲ್ಲಿ ಭಾಗವಹಿಸಲು ಅಖಿಲಾ ನಿರಾಕರಿಸಿದ್ದಾಳೆ. ತಂದೆ ಒತ್ತಾಯಿಸಿದಾಗ ಆಕೆ ತನ್ನ ಧರ್ಮ ವಿಶ್ವಾಸವನ್ನು ಬಹಿರಂಗ ಪಡಿಸಿದ್ದಾಳೆ. ‘ತಾನು ಪ್ರೌಢೆ ಮತ್ತು ಅಕ್ಷರಸ್ಥೆ’ ಎಂದು ಆಕೆ ನ್ಯಾಯಾಲಯದ ಮುಂದೆ ಹೇಳಿಕೊಳ್ಳುತ್ತಾಳೆ. ಕೋರ್ಟು ಒಪ್ಪಿಕೊಳ್ಳುತ್ತದೆ. ಇದಾದ ಬಳಿಕ 2016 ಆಗಸ್ಟ್ 16 ರಂದು ಮಗಳ ಸುರಕ್ಷತತೆಯ ಭಯವನ್ನು ಮುಂದಿಟ್ಟುಕೊಂಂಡು ತಂದೆ ಅಶೋಕನ್ ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ಮಗಳನ್ನು ವಿದೇಶಕ್ಕೆ ರವಾನಿಸುವ ಆತಂಕವನ್ನು ಅವರು ತೋಡಿಕೊಳ್ಳುತ್ತಾರೆ. ನಿಜ ಏನೆಂದರೆ, ಆಕೆಯಿನ್ನೂ ಪಾಸ್‍ ಪೋರ್ಟೇ ಮಾಡಿಕೊಂಡಿರಲಿಲ್ಲ. ಅಖಿಲ ತನ್ನ ಹೆತ್ತವರೊಂದಿಗೆ ಹೋಗಲು ನಿರಾಕರಿಸುತ್ತಾಳೆ.  ಮುಂದಿನ ವಿಚಾರಣೆಗಾಗಿ 2016 ಡಿ. 21 ರಂದು ಅಖಿಲ ಕೋರ್ಟ್‍ಗೆ ಹಾಜರಾಗುವಾಗ ತನಗೆ ಮದುವೆಯಾಗಿರುವುದಾಗಿ ಹೇಳಿಕೊಳ್ಳುತ್ತಾಳೆ. ಜೊತೆಗಿದ್ದ ಶಫಿನ್ ಜಹಾನ್ ತನ್ನ ಪತಿ ಎಂದೂ ಸ್ಪಷ್ಟಪಡಿಸುತ್ತಾಳೆ. ಮದುವೆಯಾದ ಸ್ಥಳ, ನೋಂದಣಿಯ ವಿವರಗಳನ್ನು ಆಕೆ ನ್ಯಾಯಾಲಯದ ಮುಂದಿಡುತ್ತಾಳೆ. ಜಸ್ಟೀಸ್ ಕೆ. ಸುರೇಂದ್ರ ಮೋಹನ್ ಮತ್ತು ಕೆ. ಅಬ್ರಹಾಂ ಅವರಿದ್ದ ನ್ಯಾಯಾಂಗೀಯ ಪೀಠ ಈ ಬೆಳವಣಿಗೆಗೆ ಅಚ್ಚರಿ ವ್ಯಕ್ತಪಡಿಸುತ್ತದೆ. ನೋಂದಣಿಯಲ್ಲಿ Shafin Jahan ಎಂಬುದರ ಬದಲು Jefin Jahan  ಎಂದಿರುವುದನ್ನು ಪೀಠ ಗಂಭೀರವಾಗಿ ಪರಿಗಣಿಸಿ ವಿವಾಹವನ್ನೇ ರದ್ದುಪಡಿಸುವ ಅಭೂತಪೂರ್ವ ತೀರ್ಮಾನ ಕೈಗೊಳ್ಳುತ್ತದೆ. ಮಾತ್ರವಲ್ಲ,
    `ಹಾದಿಯ ಪ್ರಬುದ್ಧಳಾಗಿರಬಹುದು, ಆದರೆ 20ರ ಹರೆಯವು ಚಂಚಲವಾದುದು. ಹೆತ್ತವರಿಗೆ ಆಕೆಯ ಸುರಕ್ಷಿತತೆಯ ಬಗ್ಗೆ ಭಯವಿದೆ. ಭಾರತೀಯ ಸಂಸ್ಕೃತಿಯ ಪ್ರಕಾರ ಮಗಳನ್ನು ಮದುವೆ ಮಾಡಿಕೊಡುವ ಹಕ್ಕು ಹೆತ್ತವರಿಗಿದೆ...’ಎಂದೂ ಅದು  ತೀರ್ಪು ನೀಡುತ್ತದೆ. ಇಲ್ಲಿ ಕಾಡುವ ಪ್ರಶ್ನೆ ಏನೆಂದರೆ, ಹಾದಿಯಾಳ ಸ್ಥಾನದಲ್ಲಿ ಓರ್ವ ಗಂಡು ಇರುತ್ತಿದ್ದರೆ ವಿಚಾರಣಾ ಪ್ರಕ್ರಿಯೆಯ ಸ್ವರೂಪ ಹೇಗಿರುತ್ತಿತ್ತು? ಅವನನ್ನು ಹೆತ್ತವರ ಸುಪರ್ದಿಗೆ ಕೊಡಲಾಗುತ್ತಿತ್ತೆ? ಆತನ ವಿವಾಹವನ್ನು ರದ್ದುಪಡಿಸಲಾಗುತ್ತಿತ್ತೆ? ಆತನ ವಿವಾಹದ ಹೊಣೆಗಾರಿಕೆ ಹೆತ್ತವರದ್ದು ಎಂಬ ಸಮರ್ಥನೆ ಲಭಿಸುತ್ತಿತ್ತೆ? ಅಂದಹಾಗೆ, ಪ್ರೌಢರಾದ ಹೆಣ್ಣು ಮತ್ತು ಗಂಡು ತಮ್ಮಗಿಷ್ಟವಾದ ಧರ್ಮವನ್ನು ಸ್ವೀಕರಿಸುವುದು ಮತ್ತು ತಮಗಿಷ್ಟವಾದವರನ್ನು ವರಿಸುವುದನ್ನು ಈ ಸಮಾಜ ಹೇಗೆ ಪರಿಗಣಿಸಬೇಕು? ಒಂದುಕಡೆ, ಮರ್ಯಾದೆಗೇಡು ಹತ್ಯೆ ನಡೆಯುತ್ತಿದೆ. ಕುಟುಂಬ, ಜಾತಿ, ಸಮಾಜದ ಮರ್ಯಾದೆಯೇ ಅದರ ಕೇಂದ್ರ ಬಿಂದು. ಅದನ್ನು ತೀರ್ಮಾನಿಸುವುದು ಪುರುಷರೇ ತುಂಬಿಕೊಂಡಿರುವ ಖಾಪ್ ಪಂಚಾಯತ್. ಅಲ್ಲೂ ಹೆಣ್ಣೇ ಬಲಿಪಶು. ಪದ್ಮಾವತಿ ಪ್ರಕರಣದಲ್ಲಿ ವಿಜೃಂಬಿಸುತ್ತಿರುವುದೂ ಪುರುಷರೇ. ಹಾದಿಯಾಳ ಪ್ರಕರಣದಲ್ಲಿ ‘ಹೆಣ್ಣಿನ ಮೇಲಿನ ಹೆತ್ತವರ ಹಕ್ಕು ಆಕೆಯ ವಿವಾಹದವರೆಗಿದೆ...’ ಎಂಬರ್ಥದಲ್ಲಿ ತೀರ್ಪು ನೀಡಿದ ಹೈಕೋರ್ಟಿನ ನ್ಯಾಯಾಧೀಶರಿಬ್ಬರೂ ಪುರುಷರೇ. ಇದು ಅನುದ್ದೇಶಿತವೇ ಆಗಿರಬಹುದು. ಆದರೂ ಕೆಲವು ಪ್ರಶ್ನೆಗಳಿಗಂತೂ ನಾವು ಉತ್ತರಗಳನ್ನು ಹುಡುಕಲೇಬೇಕು. ಹೆಣ್ಣಿನ ಮೇಲಿನ ಕಾಳಜಿಯ ನೆಪದಲ್ಲಿ ಹೆಣ್ಣನ್ನು ಪುರುಷ ವಿಚಾರಧಾರೆಯು ಆಪೋಶನ ತೆಗೆದುಕೊಳ್ಳುತ್ತಿದೆಯೇ? ಪುರಾತನ ಕಾಲದಲ್ಲಿ ಹೆಣ್ಣು ಹೇಗೆ ದುರ್ಬಲತೆಯ ಸಂಕೇತವೋ ಹಾಗೆಯೇ ಈ 21ನೇ ಶತಮಾನದಲ್ಲೂ ಹೆಣ್ಣು ದುರ್ಬಲಳೇ ಆಗಿರುವುದೇಕೆ? ಇದು ನಿಜಕ್ಕೂ ಅವಳ ಸ್ಥಿತಿಯೋ ಅಥವಾ ಪುರುಷ ಪ್ರಧಾನ ಸಮಾಜವು ಬಲವಂತದಿಂದ ಆಕೆಯ ಮೇಲೆ ಹೇರಿದ ಸ್ಥಿತಿಯೋ? ಒಂದು ಕಡೆ, ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆ... ಇತ್ಯಾದಿಗಳ ಕುರಿತಂತೆ ನ್ಯಾಯಾಲಯವೂ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಕರ್ಣಾನಂದಕರ ಹೇಳಿಕೆಗಳು ಹೊರ ಬೀಳುತ್ತಿವೆ. ಇನ್ನೊಂದೆಡೆ, ಪ್ರೌಢ ಹೆಣ್ಣನ್ನು ಚಂಚಲೆಯೆಂದೋ ನಿರ್ಧಾರ ತಳೆಯುವ ಸಾಮರ್ಥ್ಯ ಇಲ್ಲದವಳೆಂದೋ ಹೇಳಿ ಅದುಮಲಾಗುತ್ತದೆ. ಪದ್ಮಿನಿಯ ವಿಚಾರವಾಗಿ ಬೀದಿಯಲ್ಲಿರುವುದು ಮಹಿಳೆಯರಲ್ಲ, ಪುರುಷರೇ. ಹಾದಿಯಾಳ ಪ್ರಕರಣವನ್ನು ಲವ್ ಜಿಹಾದ್ ಆಗಿ ಪರಿವರ್ತಿಸಿ ಗದ್ದಲ ಎಬ್ಬಿಸುತ್ತಿರುವುದೂ ಪುರು ಷರೇ. ಪುರಾತನ ಕಾಲದ ಪುರುಷ ಪ್ರಧಾನ ಮನಸ್ಥಿತಿಯು ಆಧುನಿಕ ಕಾಲದಲ್ಲಿ ಹೀಗೆ ವೇಷ ಬದಲಿಸಿ ಅಸ್ತಿತ್ವ ಪಡಕೊಳ್ಳುತ್ತಿದೆಯೇ? ಜೊತೆಗೆ, 1829 ಡಿಸೆಂಬರ್ 8 ರಂದು ನಿಷೇಧಕ್ಕೊಳಗಾದ ಸತಿ ಪದ್ಧತಿಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುವ ವಿಚಾರಧಾರೆಯೊಂದು ಈಗಲೂ ಅಸ್ತಿತ್ವದಲ್ಲಿದೆಯೇ? ಪದ್ಮಾವತಿಯನ್ನು `ರಾಷ್ಟ್ರ ಮಾತಾ ಪದ್ಮಾವತಿ' ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಕರೆದಿರುವುದರಲ್ಲಿ ಸತಿ ಸಹಗಮನದ ಆರಾಧನೆಯೂ ಇದೆಯಲ್ಲವೇ? ‘ಯಾಕೆ ಹೆಣ್ಣೇ ಸತಿ ಹೋಗಬೇಕು, ಪುರುಷ ಯಾಕೆ ಸತಿ ಹೋಗಬಾರದು’ ಎಂಬ ಪ್ರಶ್ನೆ ಎತ್ತಬೇಕಾದ ಕಡೆ, ಸತಿಯನ್ನೇ ವೈಭವೀಕರಿಸುವ ಮತ್ತು ಇನ್ನೋರ್ವ ಹೆಣ್ಣಿನ (ದೀಪಿಕಾ ಪಡುಕೋಣೆ) ಮೂಗು ಕೊಯ್ಯುವ, ತಲೆ ಕತ್ತರಿಸುವ ಹೇಳಿಕೆಗಳು ಬರುತ್ತವಲ್ಲ, ಏನಿದರ ಅರ್ಥ? ಹಾದಿಯ ಎತ್ತುವ ಪ್ರಶ್ನೆಯೂ ಬಹುತೇಕ ಇದರ ಸುತ್ತಲೇ ಇದೆ. ಆಕೆ ಯಾವ ಕ್ರಿಮಿನಲ್ ಕಾರ್ಯದಲ್ಲೂ ಭಾಗಿಯಾಗಿಲ್ಲ. ಸಂವಿಧಾನ ಒದಗಿಸಿರುವ ವೈಯಕ್ತಿಕ ಹಕ್ಕನ್ನು ಚಲಾಯಿಸಿದ್ದಾಳೆ ಎಂದ ಮಾತ್ರಕ್ಕೇ ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿ ಒಂದೂವರೆ ಗಂಟೆಗಳ ಕಾಲ ಆಕೆಯ ಪರ, ವಿರುದ್ಧ ಮತ್ತು ಆಕೆ ಇಷ್ಟಪಟ್ಟ ಯುವಕನ ಬಗ್ಗೆ ವಾದಗಳನ್ನು ಆಲಿಸುವಂತೆ ಸುಪ್ರೀಮ್ ಕೋರ್ಟ್ ಆಕೆಯನ್ನು ಬಲವಂತ ಪಡಿಸಿದುದು ಎಷ್ಟು ಸರಿ? ಆಕೆಯ ಮೇಲೆ ಯಾವ ಆರೋಪವೂ ಇಲ್ಲ. ಪ್ರೌಢೆ ಹೆಣ್ಣು ಮಗಳೊಬ್ಬಳು ತನಗಿಷ್ಟ ಬಂದ ಧರ್ಮವನ್ನು ಸ್ವೀಕರಿಸುವುದು ಮತ್ತು ತನಗಿಷ್ಟ ಬಂದವರನ್ನು ವಿವಾಹವಾಗುವುದು ನ್ಯಾಯಿಕ ಭಾಷೆಯಲ್ಲೂ ಅಪರಾಧವಲ್ಲ. ಹೀಗಿದ್ದರೂ ಆಕೆಯನ್ನು ಪೊಲೀಸು ಕಾವಲಿನಲ್ಲಿ ದಿಗ್ಬಂಧನದಲ್ಲಿಟ್ಟುದುದು ಮತ್ತು ದೆಹಲಿವರೆಗೆ ಕೊಂಡೊಯ್ದು ಕೋರ್ಟಿನಲ್ಲಿ ಹಾಜರುಗೊಳಿಸಿದುದನ್ನು ಹೇಗೆಂದು ವ್ಯಾಖ್ಯಾನಿಸಬೇಕು? ಅಷ್ಟಕ್ಕೂ,
     ರಾಣಾ ಮತ್ತು ಖಿಲ್ಜಿಯ ನಡುವೆ 13ನೇ ಶತಮಾನದಲ್ಲಿ ನಡೆದ ಯುದ್ಧದ ಐತಿಹಾಸಿಕ ವಿವರಗಳಲ್ಲಿ ಇರದ ಪದ್ಮಿನಿಯನ್ನು, 21ನೇ ಶತಮಾನದ ಹಾದಿಯಳಿಗೆ ಹೋಲಿಸುವಾಗ ಏನನಿಸುತ್ತದೆ? `ಪೊಲೀಸರ ತನಿಖೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿಲ್ಲ’ ಎಂದು ಸು. ಕೋರ್ಟಿನಲ್ಲಿ ಕೇರಳ ಸರಕಾರವು ಕಳೆದ ಅಕ್ಟೋಬರ್ ನಲ್ಲಿ ಅಫಿದವಿತ್ ಸಲ್ಲಿಸಿದ್ದರೂ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ತನಿಖಿಸುವಂತೆ ಸುಪ್ರೀಮ್ ಕೋರ್ಟ್ ರಾಷ್ಟ್ರೀಯ ತನಿಖಾ ದಳಕ್ಕೆ (NIO) ಆದೇಶಿಸಿರುವುದು ಇಲ್ಲದ ಪದ್ಮಿನಿಯನ್ನು ಹುಡುಕಲು ಹೇಳಿದಂತೆ ಆಗಬಹುದೇ? ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದಲ್ಲಿ ಹುಟ್ಟಿಕೊಂಡವಳು ಪದ್ಮಿನಿಯಾದರೆ ರಾಜಕೀಯ ಹಿತಸಕ್ತಿಗಾಗಿ ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಅದರ ಪರಿವಾರದಿಂದ ಸೃಷ್ಟಿಯಾಗಿರುವುದೇ ಲವ್ ಜಿಹಾದ್. ಇಲ್ಲದ ಪದ್ಮಿನಿಯ ನೆಪದಲ್ಲಿ ಹೆಣ್ಣಿನ ಮೇಲೆ ದಾಳಿ ಎಸಗುವ ಬೆದರಿಕೆ ಒಡ್ಡಿದವರೇ ಹಾದಿಯ ಪ್ರಕರಣವನ್ನು ಲವ್ ಜಿಹಾದ್ ಗೊಳಿಸುವಲ್ಲೂ ಮುಂಚೂಣಿಯಲ್ಲಿದ್ದಾರೆ. ಬಾಹ್ಯ ನೋಟಕ್ಕೆ ಹೆಣ್ಣಿನ ಮೇಲಿನ ಕಾಳಜಿಯಂತೆ ಈ ಎಲ್ಲ ಬೆಳವಣಿಗೆಗಳು ಕಂಡು ಬಂದರೂ ಆಳದಲ್ಲಿ ಇದು ಹೆಣ್ಣನ್ನು ಬಂಧಿಸಿಡುವ ಪುರುಷ ಪ್ರಧಾನ ಮನಸ್ಥಿತಿಯ ಇನ್ನೊಂದು ರೂಪದಂತೆ ಕಾಣಿಸುತ್ತಿದೆ. ಆಯ್ಕೆ ಮಾಡುವ ಸಾಮರ್ಥ್ಯ ಹೆಣ್ಣಿಗಿಲ್ಲ.. ಎಂದು ಸಾರುವುದೇ ಈ ಎಲ್ಲವುಗಳ ಒಟ್ಟು ಸಾರಾಂಶ.
      ಮನಸ್ಥಿತಿ ಪುರಾತನ ಕಾಲದ್ದೇ. ಪಾತ್ರಗಳು ಮಾತ್ರ ಬೇರೆ.

Monday, December 4, 2017

ಅಲೆಕ್ಸಾಂಡರ್‍ನನ್ನು ಕಣ್ಣೀರಾಗಿಸಿದ ಆ ಕ್ಷಮೆ...

    1. ತನ್ನ ಸಂಬಂಧಿಕನನ್ನು ಕೊಲೆಗೈದ ವ್ಯಕ್ತಿಯೊಂದಿಗೆ ಓರ್ವನು ಪ್ರವಾದಿ ಮುಹಮ್ಮದ್‍ರ(ಸ) ಬಳಿಗೆ ಬರುತ್ತಾನೆ. ನಡೆದ ವಿಷಯವನ್ನು ಹೇಳುತ್ತಾನೆ. ಆರೋಪಿ ತಪ್ಪೊಪ್ಪಿಕೊಳ್ಳುತ್ತಾನೆ. ಪ್ರವಾದಿ(ಸ) ಹೇಳುತ್ತಾರೆ, ಅಪರಾಧಿಯನ್ನು ಕ್ಷಮಿಸು. ವ್ಯಕ್ತಿ ಒಪ್ಪಿಕೊಳ್ಳುವುದಿಲ್ಲ. ಪ್ರವಾದಿ(ಸ) ಮತ್ತೆ ಹೇಳುತ್ತಾರೆ, ಆತನಿಂದ ರಕ್ತ ಪರಿಹಾರವನ್ನು ಪಡೆದುಕೊಂಡು ಆತನನ್ನು ಕ್ಷಮಿಸು. ವ್ಯಕ್ತಿ ಅದಕ್ಕೂ ಒಪ್ಪುವುದಿಲ್ಲ. ಆಗ ಪ್ರವಾದಿ(ಸ) ಹೇಳುತ್ತಾರೆ, ಹಾಗಾ ದರೆ ಆತನನ್ನು ವಧಿಸು. ನೀನೂ ಆತನಂತೆ ಆಗಬಯಸುವಿ ಯೆಂದಾದರೆ ಹಾಗೆ ಮಾಡು. (ಅಬೂದಾವೂದ್- 4497)
2. ಓರ್ವ ವ್ಯಕ್ತಿ ಪ್ರವಾದಿಯವರ ಬಳಿಗೆ ಬಂದು ಹೇಳುತ್ತಾನೆ,
ನನ್ನ ಕೆಲಸಗಾರನನ್ನು ನಾನು ಎಷ್ಟು ಬಾರಿ ಕ್ಷಮಿಸಬೇಕು?’
ಪ್ರವಾದಿ ಹೇಳುತ್ತಾರೆ,
ಪ್ರತಿದಿನ 70 ಬಾರಿ (ತಿರ್ಮಿದಿ: 1424).
ಪವಿತ್ರ ಕುರ್‍ಆನ್ ಹೇಳುತ್ತದೆ,
1. ಇತರರ ಅಪರಾಧಗಳನ್ನು ಕ್ಷಮಿಸುವ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು. (3: 134)
2. ಅಲ್ಲಾಹನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. (42: 5)
ಎರಡು ಪ್ರವಾದಿ ವಚನಗಳು ಮತ್ತು ಎರಡು ಕುರ್‍ಆನ್ ವಚನಗಳನ್ನು ಇಲ್ಲಿ ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
ಕಳೆದ ತಿಂಗಳು ಅಮೇರಿಕದ ಕೆಂಟುಕಿಯ ಕೋರ್ಟ್‍ನಲ್ಲಿ ಅಚ್ಚರಿಯ ಘಟನೆಯೊಂದು ನಡೆಯಿತು. 2015 ಎಪ್ರಿಲ್‍ನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಅಂತಿಮ ತೀರ್ಪು ಪ್ರಕಟವಾಗುವುದಕ್ಕೆ ಎಲ್ಲವೂ ಸಿದ್ಧವಾಗಿತ್ತು. ಸಲಾಹುದ್ದೀನ್ ಜಿತ್‍ಮೌದ್ ಎಂಬ 22 ವರ್ಷದ ತರುಣನನ್ನು ಹತ್ಯೆ ಮಾಡಿದ ಪ್ರಕರಣದ ತೀರ್ಪು. ಸಲಾಹುದ್ದೀನನ ತಂದೆ ಅಬ್ದುಲ್ ಮುನೀಮ್ ಸಂಬಾಟ್ ಜಿತ್‍ಮೌದ್ ತನ್ನ ಕುಟುಂಬ ಸಮೇತ ಕೋರ್ಟ್‍ನಲ್ಲಿದ್ದರು. ಅಪರಾಧಿ ಟ್ರೆ ಅಲ್‍ಕ್ಸಾಂಡರ್ ರೆಲ್ ಫೋರ್ಡ್ ಕೂಡ ಕಟಕಟೆಯಲ್ಲಿದ್ದ. ಆತನ ಕುಟುಂಬವು ತೀರ್ಪನ್ನು ನಿರೀಕ್ಷಿಸುತ್ತಾ ನ್ಯಾಯಾಲಯದಲ್ಲಿತ್ತು. ನ್ಯಾಯಾಧೀಶೆ ಕಿಂಬರ್ಲಿ ಬಿನ್ನೆಲ್ ಇನ್ನೇನು ತೀರ್ಪು ಘೋಷಿಸಲು ಮುಂದಾಗುತ್ತಿರುವಂತೆಯೇ, 64 ವರ್ಷದ ಇಸ್ಲಾಮೀ ವಿದ್ವಾಂಸ ಮತ್ತು ಅಮೇರಿಕದ ಲೆಕ್ಸಿಂಗ್ಟನ್ ಯುನಿವರ್ಸಲ್ ಅಕಾಡಮಿ ಮತ್ತು ಸೈಂಟ್ ಲೂಯಿಸ್‍ನ ಅಲ್ ಸಲಾಮ್ ಡೇ ಸ್ಕೂಲ್ ಸೇರಿದಂತೆ ಹಲವಾರು ಇಸ್ಲಾಮಿಕ್ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರಾಗಿರುವ ಮೂಲತಃ ಥಾೈಲೆಂಡ್‍ನವರಾದ ಅಬ್ದುಲ್ ಮುನೀಮ್ ಜಿತ್‍ಮೌದ್ ಅವರು ಎದ್ದು ನಿಂತರಲ್ಲದೇ ತಾನು ಅಲೆಕ್ಸಾಂಡರ್‍ನನ್ನು ಕ್ಷಮಿಸಿದ್ದೇನೆ ಎಂದು ತುಂಬಿದ ಕಣ್ಣೀರಿನೊಂದಿಗೆ ಘೋಷಿಸಿದರು.
“ನಾನು ನಿನ್ನ ಮೇಲೆ ಕೋಪಿಸಲಾರೆ. ನಿನ್ನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿದ ಶೈತಾನನೇ ನಿಜವಾದ ಅಪರಾಧಿ. ನಿನ್ನನ್ನು ಅಂಥ ಕ್ರೂರ ಕೃತ್ಯಕ್ಕೆ ಪ್ರೇರೇಪಿಸಿದ ಶೈತಾನನ ಮೇಲೆ ನಾನು ಸಿಟ್ಟಾಗುವೆ. ಈ ಜಗತ್ತಿನಲ್ಲಿ ಸಂತ್ರಸ್ತನು ಪಾಪಿಯನ್ನು ಕ್ಷಮಿಸದಿದ್ದರೆ ದೇವನೂ ಪಾಪಿಯನ್ನು ಕ್ಷಮಿಸಲಾರ ಅನ್ನುವುದು ನನ್ನ ವಿಶ್ವಾಸ. ಆದ್ದರಿಂದ ನಾನು ನಿನ್ನನ್ನು ಕ್ಷಮಿಸಿದ್ದೇನೆ..” ಎಂದವರು ನಡುಗುವ ದನಿಯೊಂದಿಗೆ ಹೇಳಿದರು. ಜೊತೆಗೇ, ಪವಿತ್ರ ಕುರ್‍ಆನಿನ 9ನೇ ಅಧ್ಯಾಯದ 51ನೇ ವಚನದಲ್ಲಿ ಹೇಳಲಾಗಿರುವ, “ಅಲ್ಲಾಹನು ನಮಗಾಗಿ ಲಿಖಿತಗೊಳಿಸಿರುವುದರ ಹೊರತು ಬೇರಾವುದೂ (ಒಳಿತು ಮತ್ತು ಕೆಡುಕು) ನಮ್ಮನ್ನು ಬಾಧಿಸುವುದಿಲ್ಲ. ಅಲ್ಲಾಹನೇ ನಮ್ಮ ಮಾಲಿಕನಾಗಿದ್ದಾನೆ. ಸತ್ಯವಿಶ್ವಾಸಿಗಳು ಅವನ ಮೇಲೆಯೇ ಭರವಸೆಯನ್ನಿರಿಸಬೇಕು..” ಎಂಬ ವಚನವೇ ನನ್ನ ಈ ನಿರ್ಧಾರಕ್ಕೆ ಕಾರಣ ಎಂದೂ ಹೇಳಿದರು. ಅವರು ಹೀಗೆ ಹೇಳಿ ಮುಗಿಸುತ್ತಿರುವಂತೆಯೇ ನ್ಯಾಯಾಲಯದ ವಾತಾವರಣ ಸಂಪೂರ್ಣ ಬದಲಾಯಿತು. ತೀರ್ಪು ಹುಟ್ಟು ಹಾಕಿದ್ದ ಕುತೂಹಲವು ಭಾವುಕ ಸನ್ನಿವೇಶವಾಗಿ ಮಾರ್ಪಾಟಾಯಿತು. ಸ್ವತಃ ನ್ಯಾಯಾಧೀಶರಾದ ಕಿಂಬರ್ಲಿ ಬಿನ್ನೆಲ್ ಅವರೇ ಭಾವುಕರಾದರು. ಅವರ ಗಂಟಲು ಕಟ್ಟಿಕೊಂಡಿತು. ತೀರ್ಪು ಘೋಷಣೆ ಸಾಧ್ಯವಾಗದೇ ಸ್ವಲ್ಪ ಸಮಯ ಕಲಾಪ ಮುಂದೂಡಿ ಬಳಿಕ ಹಿಂತಿರುಗಿ ಬಂದು ಅಪರಾಧಿ ಅಲೆಕ್ಸಾಂಡರ್‍ಗೆ 31 ವರ್ಷಗಳ ಶಿಕ್ಷೆಯನ್ನು ಘೋಷಿಸಿ ದರು. ಬಳಿಕ ಅಬ್ದುಲ್ ಮುನೀಮ್ ಜಿತ್‍ಮೌದ್‍ರು ಅಲೆಕ್ಸಾಂಡರ್ ನನ್ನು ತಬ್ಬಿಕೊಂಡರು. ಅಲೆಕ್ಸಾಂಡರ್ ಪಶ್ಚಾತ್ತಾಪ ಭಾವದಿಂದ ಕಣ್ಣೀರಿಳಿಸಿದ. ತನ್ನನ್ನು ಕ್ಷಮಿಸುವಂತೆ ಕೋರಿಕೊಂಡ.
2015 ಎಪ್ರಿಲ್ 19ರಂದು 22 ವರ್ಷದ ಸಲಾಹುದ್ದೀನ್‍ನನ್ನು ಅಲೆಕ್ಸಾಂಡರ್ ಸಹಿತ ಒಟ್ಟು ಮೂರು ಮಂದಿ ಸೇರಿ ಇರಿದು ಹತ್ಯೆಗೈದು ದರೋಡೆ ನಡೆಸಿದ್ದರೆಂದು ಆರೋಪಿಸಲಾಗಿತ್ತು. ಲೆಕ್ಸಿಂಗ್ಟನ್ ಕೋರ್ಟ್ ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳು ರೆಸ್ಟೋರೆಂಟ್ ಒಂದಕ್ಕೆ ಪಿಝ್ಝಾಕ್ಕೆ ಆರ್ಡರ್ ಮಾಡಿದ್ದರು. ಪಿಝ್ಝಾ ಡೆಲಿವರಿ ಮಾಡಲು ಸಲಾಹುದ್ದೀನ್ ಬಂದಿದ್ದ. ಪೊಲೀಸರ ಪ್ರಕಾರ ಸಲಾಹುದ್ದೀನ್‍ನ ಧರ್ಮವನ್ನು ನೋಡಿಕೊಂಡು ಈ ಹತ್ಯೆ ನಡೆಸಲಾಗಿದೆ.ಕ್ಷಮೆ ಎಂಬುದು ಎರಡಕ್ಷರಗಳ ಆಚೆಗೆ ಆಲದ ಮರದಂತೆ ವಿಶಾಲವಾಗಿ ಚಾಚಿಕೊಂಡಿರುವ ವಸ್ತು. ಕ್ಷಮೆಯ ಕುರಿತಂತೆ ಗಂಟೆಗಟ್ಟಲೆ ಭಾಷಣ ಮಾಡಿದವರು ಕೂಡ ಕ್ಷಮಿಸಲೇಬೇಕಾದ ನಿರ್ಣಾಯಕ ಸನ್ನಿವೇಶ ಎದುರಾದಾಗ ಸಂದಿಗ್ಧಕ್ಕೆ ಸಿಲುಕಿದ್ದುಂಟು. ಪ್ರವಾದಿ ಮುಹಮ್ಮದ್‍ರ(ಸ) ಬದುಕಿನಲ್ಲಿ ಕ್ಷಮೆಯ ಧಾರಾಳ ಸನ್ನಿವೇಶಗಳು ಸಿಗುತ್ತವೆ. ತಾಯಿಫ್‍ನಿಂದ ಹಿಡಿದು ತನ್ನ ಕತ್ತಿನ ಶಾಲನ್ನು ಹಿಡಿದೆಳೆದ ಬುಡಕಟ್ಟು ವ್ಯಕ್ತಿಯವರೆಗೆ, ಹಿಂದ್‍ಳಿಂದ ಹಿಡಿದು ತನ್ನ ಮೇಲೆ ಕಸ ಎಸೆಯುತ್ತಿದ್ದ ಯುವತಿಯ ವರೆಗೆ. ವೈಯಕ್ತಿಕ ಪ್ರಕರಣಗಳನ್ನು ಅವರು ಕ್ಷಮೆ ಎಂಬ ಚೌಕಟ್ಟಿನೊಳಗಿಟ್ಟು ನೋಡುತ್ತಿದ್ದರು. ಶಿಕ್ಷೆಗೂ ಕ್ಷಮೆಗೂ ನಡುವೆ ಇರುವ ಬಹುದೊಡ್ಡ ವ್ಯತ್ಯಾಸ ಏನೆಂದರೆ, ಶಿಕ್ಷೆಯಿಂದ ಸಂತ್ರಸ್ತ ಕುಟುಂಬ ಪಡೆಯುವ ಸುಖ ತಾತ್ಕಾಲಿಕವಾದುದು. ಸಲಾಹುದ್ದೀನ್ ಪ್ರಕರಣವನ್ನೇ ಎತ್ತಿ ಕೊಳ್ಳೋಣ. 22 ವರ್ಷದ ಯುವಕ ಎಂಬ ನೆಲೆಯಲ್ಲಿ ಆತನ ಮೇಲೆ ಹೆತ್ತವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರಬಹುದು. ವರಮಾನದ ನೆಲೆಯಲ್ಲೂ ಆತನ ಅಗತ್ಯ ಹೆತ್ತವರಿಗೆ ಇದ್ದಿರಬಹುದು. ಏಕೈಕ ಮಗನಾಗಿದ್ದರಂತೂ ಸಲಾಹುದ್ದೀನ್‍ಗೆ ಇನ್ನಷ್ಟು ಮಹತ್ವ ಲಭ್ಯವಾಗುತ್ತದೆ. ಹೀಗಿರುವಾಗ, ಆತನನ್ನು ಕಳಕೊಳ್ಳುವುದು ಸಣ್ಣ ಆಘಾತಕಾರಿ ಸಂಗತಿಯಲ್ಲ. ಮನೆಯಲ್ಲಿ ಸದಾ ಶೂನ್ಯ  ಕಾಡಬಹುದಾದ ಸನ್ನಿವೇಶವನ್ನು ಅದು ಹುಟ್ಟು ಹಾಕುತ್ತದೆ. ಮೆಟ್ಟು, ಪೆನ್ನು, ಶರ್ಟು, ಕನ್ನಡಕ, ಫೋಟೋ, ಪುಸ್ತಕ.. ಹೀಗೆ ಸಲಾಹುದ್ದೀನ್‍ಗೆ ಸಂಬಂಧಿಸಿದ ಪ್ರತಿಯೊಂದೂ ಆತನನ್ನು ಮರು ನೆನಪಿಸುತ್ತಾ ಚುಚ್ಚುತ್ತಿರುತ್ತದೆ. ಸಲಾಹುದ್ದೀನ್‍ನ ಗೆಳೆಯರು ಸಿಕ್ಕಾಗ ಆತ ನೆನಪಾಗುತ್ತಾನೆ. ಆತನ ಇಷ್ಟದ ವಸ್ತುಗಳನ್ನು ನೋಡಿದಾಗ ಆತ ನೆನಪಾಗುತ್ತಾನೆ. ಆತ ದಿನಾ ಕುಳಿತುಕೊಳ್ಳುತ್ತಿದ್ದ ಚಯರೋ, ಸೋಫಾವೋ ಇನ್ನೇನೋ ಆತನನ್ನು ಅನುಕ್ಷಣ ನೆನಪಿಸಿ ಇರಿಯುತ್ತಿರುತ್ತವೆ. ಆದ್ದರಿಂದ ಸಲಾಹುದ್ದೀನ್‍ನ ಹತ್ಯೆಗೆ ಕಾರಣರಾದವರ ಮೇಲೆ ಆತನ ಹೆತ್ತವರಲ್ಲಿ ಅಸಾಧ್ಯ ಸಿಟ್ಟು ಹೊಮ್ಮಲೇ ಬೇಕಾದುದು ಅಸಹಜವಲ್ಲ. ಅವರಿಗೆ ಶಿಕ್ಷೆ ದೊರಕಲೇ ಬೇಕೆಂದು ಹೋರಾಟ ನಡೆಸುವುದೂ ಅಚ್ಚರಿಯದ್ದಲ್ಲ. ಅದೊಂದು ರೀತಿಯಲ್ಲಿ ವಿಚಿತ್ರ ಸುಖ ಕೊಡುವ ಘಳಿಗೆ. ಆರೋಪಿಗಳನ್ನು ದಂಡಿಸಲೇಬೇಕು ಎಂಬ ಹಠದ ಹಿಂದೆ ಇರುವುದು ಇಲ್ಲದ ಮಗನ ನೆನಪು. ಒಂದು ವೇಳೆ ಇವೆಲ್ಲವೂ ನಿರೀಕ್ಷಿಸಿದಂತೆಯೇ ಸಾಗಿ ಅಂತಿಮವಾಗಿ ಆರೋಪಿಗಳ ಕೃತ್ಯ ಸಾಬೀತಾಯಿತು ಎಂಬಲ್ಲಿಗೆ ತಲುಪಿದಾಗಲೇ ನಿಜವಾದ ಸವಾಲು ಎದುರುಗೊಳ್ಳುತ್ತದೆ. ಅಲ್ಲಿಯವರೆಗೆ ಅವರ ಜೊತೆ ಒಂದು ಹಠ ಇತ್ತು. ಮಗನಿಗಾಗಿ ಈ ಹಠ ಎಂಬ ಸಮರ್ಥನೆಯೂ ಇತ್ತು. ಮಾತ್ರವಲ್ಲ, ಮಗನನ್ನು ಪ್ರತಿನಿತ್ಯ ಆ ಹಠ ನೆನಪಿಸುತ್ತಲೂ ಇತ್ತು. ಆದರೆ ಆರೋಪ ಸಾಬೀತಾಗಿ ಶಿಕ್ಷೆ ಘೋಷಿಸಲ್ಪಟ್ಟ ಮೇಲೆ ಉಂಟಾಗುವ ಶೂನ್ಯ ಇದೆಯಲ್ಲ, ಅದು ಅತ್ಯಂತ ಅಸಹನೀಯವಾದುದು. ತನ್ನ ಹೋರಾಟದಲ್ಲಿ ಯಶಸ್ವಿಯಾದೆ ಅನ್ನುವ ನೆಮ್ಮದಿಯ ಜೊತೆಜೊತೆಗೇ ಮಗನಿಗಾಗಿ ಮಾಡುವುದಕ್ಕೆ ಇನ್ನೇನೂ ಉಳಿದಿಲ್ಲವಲ್ಲ ಎಂಬ ಹತಾಶೆ ಆ ಬಳಿಕದ ದಿನಗಳಲ್ಲಿ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಮಗನೂ ಇಲ್ಲ, ಅಪರಾಧಿಯೂ ಇಲ್ಲ ಎಂಬ ಎರಡು ಇಲ್ಲಗಳ ಬದುಕು ಒಟ್ಟಾಗಿ ಕಾಡುವ ಸನ್ನಿವೇಶ ಅದು. ನಿಜವಾಗಿ, ಪ್ರತೀಕಾರ ಭಾವವು ಎಲ್ಲ ಸಂದರ್ಭಗಳಲ್ಲೂ ನೆಮ್ಮದಿಯನ್ನೇ ಕೊಡಬೇಕೆಂದಿಲ್ಲ. ಕೆಲವೊಮ್ಮೆ ಪ್ರತೀಕಾರದ ಬಳಿಕ ಉಂಟಾಗುವ ಭಾವವು ಪ್ರತೀಕಾರಕ್ಕಿಂತ ಮೊದಲಿನ ಭಾವಕ್ಕಿಂತಲೂ ವೇದನಾಜನಕ ವಾಗಿರುತ್ತದೆ. ಅಪರಾಧಿಯ ಕುಟುಂಬವನ್ನು ಒಲಿಸಲಾಗದ ಮತ್ತು ಮಗನನ್ನೂ ಪಡಕೊಳ್ಳಲಾಗದ ವಿಚಿತ್ರ ಸಂಕಟ ಎದುರಾಗುತ್ತದೆ. ಸಲಾಹುದ್ದೀನ್ ಪ್ರಕರಣವು ಇದಕ್ಕೆ ಉತ್ತಮ ನಿದರ್ಶನ. ಸಲಾಹುದ್ದೀನ್ ಮತ್ತು ಅಲೆಕ್ಸಾಂಡರ್‍ನ ಎರಡೂ ಕುಟುಂಬಗಳು ನ್ಯಾಯಾಲಯದ ತೀರ್ಪಿನ ವೇಳೆ ಉಪಸ್ಥಿತವಿದ್ದವು. ಮೂವರು ಆರೋಪಿಗಳಲ್ಲಿ ಇಬ್ಬರನ್ನು ಕೋರ್ಟು ಆ ಮೊದಲೇ ದೋಷಮುಕ್ತ ಗೊಳಿಸಿದ್ದುದರಿಂದ ಅಲೆಕ್ಸಾಂಡರ್ ಕುಟುಂಬ ಮಾತ್ರ ಅಲ್ಲಿ ಉಪಸ್ಥಿತವಿತ್ತು. ಅಬ್ದುಲ್ ಮುನೀಮ್ ಜಿತ್‍ಮೌಂದ್‍ರ ಕ್ಷಮೆ ಆ ಕ್ಷಣದಲ್ಲಿ ಅನಿರೀಕ್ಷಿತವಾಗಿತ್ತು. ಅದು ನ್ಯಾಯಾಲಯ ಮತ್ತು ಅಲೆಕ್ಸಾಂಡರ್ ಕುಟುಂಬದ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, 31 ವರ್ಷದ ಶಿಕ್ಷೆಯನ್ನೇ ನಗಣ್ಯಗೊಳಿಸುವಷ್ಟು. ಅಲೆಕ್ಸಾಂಡರ್‍ನ ಕುಟುಂಬ ಸಲಾಹುದ್ದೀನ್ ಕುಟುಂಬವನ್ನು ಆಲಿಂಗಿಸಿತು. ಅಲೆಕ್ಸಾಂಡರ್ ಮಾದಕ ವ್ಯಸನಿಯಾಗಿದ್ದ ಎಂಬುದನ್ನು ಆ ವೇಳೆ ಆ ಕುಟುಂಬ ಒಪ್ಪಿಕೊಂಡಿತು. ಅಂದಿನವರೆಗೆ ಪೊಲೀಸರಲ್ಲಾಗಲಿ, ನ್ಯಾಯಾಲಯದಲ್ಲಾಗಲಿ ಹೇಳಿರದ ಸತ್ಯ ಅದು. ಅಂಥದ್ದೊಂದು ಸತ್ಯವನ್ನು ಹೇಳಿಸಿದ್ದು ಅಬ್ದುಲ್ ಮುನೀಮ್ ಜಿತ್‍ಮೌಂದ್‍ರ ಕ್ಷಮಾ ಘೋಷಣೆ. ಆ ಕ್ಷಮೆಯು ಕೋರ್ಟಿನ ತೀರ್ಪಿನ ಮೇಲೆ ಯಾವ ಪರಿಣಾಮವನ್ನು ಬೀರದೇ ಇದ್ದರೂ ಅದು ಅಲೆಕ್ಸಾಂಡರ್ ಕುಟುಂಬದ ಮೇಲೆ ಮತ್ತು ಸ್ವತಃ ಅಲೆಕ್ಸಾಂಡರ್‍ನ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಟಿಶ್ಯೂ ಪೇಪರ್‍ನಿಂದ ಮತ್ತೆ ಮತ್ತೆ ಕಣ್ಣುಜ್ಜಿಕೊಳ್ಳುವ ಆತ ಇಡೀ ಘಟನೆಯ ಕೇಂದ್ರ ಬಿಂದುವಾದ. ತನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡ. ಕೋರ್ಟ್‍ನ ಶಿಕ್ಷೆಯಿಂದ ಹೇಳಿಸಲಾಗದ ಮಾತುಗಳನ್ನು 64 ವರ್ಷದ ಗಡ್ಡದಾರಿ ವ್ಯಕ್ತಿಯ ಕ್ಷಮೆ ಹೇಳಿಸಿತು. ಪವಿತ್ರ ಕುರ್‍ಆನ್ ಘೋಷಿಸುವುದೇನೆಂದರೆ, ‘ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ’ (24:22, 22:42), ಓ ಪೈಗಂಬರರೇ ಕ್ಷಮಾಶೀಲರಾಗಿರಿ (7: 199), ಅವರ ವರ್ತನೆಗೆ ಪ್ರತಿಯಾಗಿ ಸೌಜನ್ಯಪೂರ್ಣ ಕ್ಷಮೆಯೊಂದಿಗೆ ವರ್ತಿಸಿರಿ (15: 85) ಎಂದೇ ಆಗಿದೆ. ಹಾಗಂತ,    ಪವಿತ್ರ ಕುರ್‍ಆನ್ ಪ್ರತೀಕಾರದ ಮಾರ್ಗವನ್ನು ಸಂಪೂರ್ಣ ಮುಚ್ಚಿದೆ ಎಂದಲ್ಲ. ಕ್ಷಮೆ ಮತ್ತು ಪ್ರತೀಕಾರ ಎರಡನ್ನೂ ಸಮಾ ನಾಂತರ ರೇಖೆಯಾಗಿ ಗೌರವಿಸುತ್ತಲೇ ಕ್ಷಮೆಗೆ ಒಂದಷ್ಟು ಹೆಚ್ಚು ಒತ್ತು ಕೊಟ್ಟಿರುವುದರಲ್ಲಿ ದೂರದೃಷ್ಟಿಯಿದೆ ಎಂದೇ ಅನಿಸುತ್ತದೆ. ಪವಿತ್ರ ಕುರ್‍ಆನ್‍ನ ಪ್ರಕಾರ, ‘ಪ್ರತೀಕಾರ ಎಸಗುವುದಿದ್ದರೆ ನಿಮ್ಮ ಮೇಲೆ ಅತಿರೇಕ ಎಸಗಿರುವಷ್ಟು ಮಾತ್ರ. ಆದರೆ ನೀವು ತಾಳ್ಮೆ ವಹಿಸಿದರೆ ನಿಶ್ಚಯವಾಗಿಯೂ ಇದು ಸಹನಾಶೀಲರಿಗೆ ಅತ್ಯುತ್ತಮ’ (16: 26), ‘ಯಾರಾದರೂ ಪ್ರತೀಕಾರವನ್ನು ದಾನ ಮಾಡಿದರೆ ಅದು ಅವರ ಪಾಲಿಗೆ ಪ್ರಾಯಶ್ಚಿತ್ತವಾಗುವುದು’ (5: 45), ‘ಕೆಡುಕಿನ ಪ್ರತಿಫಲ ಅದಕ್ಕೆ ಸಮಾನವಾದ ಕೆಡುಕಾಗಿದೆ. ಇನ್ನು ಯಾರಾದರೂ ಕ್ಷಮಿಸಿ ಬಿಟ್ಟರೆ ಹಾಗೂ ಸುಧಾರಿಸಿಕೊಂಡರೆ ಅದರ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ’ (42: 40). ಒಂದು ವೇಳೆ,
    ಕ್ಷಮೆ ಮತ್ತು ಪ್ರತೀಕಾರ-ಎಂಬೆರಡು ಸಹಜ ಆಯ್ಕೆಗಳಲ್ಲಿ ಸಲಾಹುದ್ದೀನ್‍ನ ತಂದೆ ಪ್ರತೀಕಾರವನ್ನೇ ಆಯ್ದುಕೊಂಡಿದ್ದರೆ ಅಲೆಕ್ಸಾಂಡರ್‍ನು ಸುದ್ದಿಗೇ ಒಳಗಾಗುತ್ತಿರಲಿಲ್ಲವೇನೋ..



Monday, November 13, 2017

ಟಿಪ್ಪು ವಿರೋಧಿಗಳಿಗೆ ಧನ್ಯವಾದ

ನಾಲ್ಕು ಪ್ರಶ್ನೆಗಳಿವೆ
1. ಟಿಪ್ಪುವನ್ನು ಮೆಚ್ಚಿಕೊಳ್ಳುವ, ಹೊಗಳುವ, ಸಂತನಾಗಿಸುವ - ಒಂದು ರೀತಿಯಲ್ಲಿ, ಟಿಪ್ಪು ಪರ ಎಂದು ಹೇಳಬಹುದಾದ ಹೇಳಿಕೆ, ದಾಖಲೆ, ವಾದಗಳು ಒಂದು ಕಡೆಯಾದರೆ, ಟಿಪ್ಪುವನ್ನು ಮತಾಂಧ, ಮತಾಂತರಿ, ಕ್ರೂರಿ, ದೇಗುಲ ಭಂಜಕ.. ಹೀಗೆ ಟಿಪ್ಪು ವಿರೋಧಿ ಎಂದು ಮುದ್ರೆಯೊತ್ತಬಹುದಾದ ಹೇಳಿಕೆ, ವಾದ, ದಾಖಲೆಗಳು ಇನ್ನೊಂದು ಕಡೆ. ಈ ಎರಡರಲ್ಲಿ ನಿಜ ಟಿಪ್ಪು ಯಾರು? ಆತನನ್ನು ಪತ್ತೆ ಹಚ್ಚುವುದು ಹೇಗೆ? ಈ ವರ್ತಮಾನದಲ್ಲಿ ಬದುಕುತ್ತಿರುವ ನಮಗೆ ಭೂತಕಾಲದ ಟಿಪ್ಪುವನ್ನು ನಿಜ ನೆಲೆಯಲ್ಲಿ ಅರಿತುಕೊಳ್ಳುವುದಕ್ಕೆ ಯಾವ ದುರ್ಬೀನು ಸೂಕ್ತವಾಗಬಹುದು?
2. ಟಿಪ್ಪುವನ್ನು ನಾವು ನೋಡಬೇಕಾದ ರೀತಿ ಯಾವುದು? (ಅ) ಆಡಳಿತಗಾರ, (ಆ) ಪುರೋಹಿತ, (ಇ) ಧರ್ಮ ಪ್ರಚಾರಕ? ಇದನ್ನೇ ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅಥವಾ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ನೋಡಿದ ರೀತಿಯಲ್ಲಿ ಟಿಪ್ಪುವನ್ನು ನೋಡಬೇಕೇ ಅಥವಾ ಪೇಜಾವರ ಶ್ರೀಯವರನ್ನು ನೋಡುವ ರೀತಿಯಲ್ಲೇ ಅಥವಾ ವಿವೇಕಾನಂದರನ್ನು ನೋಡುವ ರೀತಿಯಲ್ಲೇ ಅಥವಾ ಈ ಮೂರಕ್ಕೂ ಹೊಂದದ ಬೇರೆಯದೇ ಆದ ರೀತಿಯಲ್ಲೇ? ಟಿಪ್ಪು ಬದುಕಿದ್ದು 17ನೇ ಶತಮಾನದ ದ್ವಿತೀಯ ಭಾಗದಲ್ಲಿ. ಟಿಪ್ಪುವಿನ ಪರ ಅಥವಾ ವಿರುದ್ಧ ಅಥವಾ ತಟಸ್ಥ ವಾದವನ್ನು ಮಂಡಿಸುತ್ತಿರುವ ನಾವು ಇರುವುದೋ 21ನೇ ಶತಮಾನದಲ್ಲಿ. ಈ ಶತಮಾನಕ್ಕೂ ಟಿಪ್ಪು ಬದುಕಿದ ಶತಮಾನಕ್ಕೂ ನಡುವೆ ಬಲುದೊಡ್ಡ ವ್ಯತ್ಯಾಸವೊಂದಿದೆ. ಅದುವೇ ಪ್ರಜಾತಂತ್ರ. 19ನೇ ಶತಮಾನದ ದ್ವಿತೀಯ ಭಾಗದಲ್ಲಿ ಚಾಲ್ತಿಗೆ ಬಂದ ಜಾತ್ಯತೀತ ಎಂಬ ಪರಿಕಲ್ಪನೆಯ  ಕನ್ನಡಿಯೊಳಗಿಟ್ಟು 17ನೇ ಶತಮಾನದ ಟಿಪ್ಪುವನ್ನು ಪರಿಶೀಲಿಸುವುದು ಎಷ್ಟು ನೈತಿಕ ಮತ್ತು ನ್ಯಾಯಪೂರ್ಣ? ಒಂದು ಉದಾಹರಣೆ: ತಲೆ ಮರೆಸಿಕೊಂಡಿದ್ದ ಕೊಡಗಿನ ನಾಯಕರಲ್ಲೊಬ್ಬನಾದ ರಂಗ ನಾಯಕ ಎಂಬಾತನು ಟಿಪ್ಪುವಿನ ಆಹ್ವಾನದ ಮೇರೆಗೆ ಹಿಂತಿರುಗಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸುತ್ತಾನೆ (ಸಲ್ದಾನ, ದಿ ಕ್ಯಾಪ್ಟಿವಿಟಿ ಆಫ್ ಕೆನರಾ ಕ್ರಿಶ್ಚಿಯನ್ ಅಂಡರ್ ಟಿಪ್ಪೂ ಇನ್ 1784, ಮಂಗಳೂರು, 933 ಪುಟ 18ರ ಅಡಿ ಟಿಪ್ಪಣಿ ಬಿ ಯಲ್ಲಿ ಹೇಳಲಾಗಿದೆ). ಇನ್ನೊಂದು ಉದಾಹರಣೆ: ಮಲಬಾರ್ ಮತ್ತು ಕೊಡಗು ಪ್ರದೇಶದ ಖಾಝಿಗೆ ಪತ್ರ ಬರೆದ ಟಿಪ್ಪು ತನ್ನ ಪ್ರಭುತ್ವದ ವಿರುದ್ಧ ದಂಗೆ ಏಳುವವರಿಗೆ ಶಿಕ್ಷೆಯಾಗಿ ಮತಾಂತರವನ್ನು ಆದೇಶಿಸುತ್ತಾನೆ. (ಸುಲ್ತಾನುಲ್ ತವಾರಿಖ್, ಪುಟ: 47-51) ಇವೆರಡನ್ನೂ ವಿಶ್ಲೇಷಿಸುವಾಗ ನಾವು 17ನೇ ಶತಮಾನದ ದ್ವಿತೀಯ ಭಾಗದಲ್ಲಿದ್ದುಕೊಂಡೇ ಓದಬೇಕು. ಟಿಪ್ಪುವಿನ ಪ್ರಭುತ್ವದ ವಿರುದ್ಧ ಆಗಾಗ ದಂಗೆಗಳಾಗುತ್ತಿದ್ದ ಪ್ರದೇಶಗಳೆಂದರೆ ಮಲಬಾರ್ ಮತ್ತು ಕೊಡಗು. ಆ ದಂಗೆಯನ್ನು ಅಡಗಿಸುವ ದಾರಿಯಾಗಿ ಆತ ಆಯ್ದುಕೊಂಡ ಮಾರ್ಗ ಮತಾಂತರವೇ ಹೊರತು ಅದು ಆತನ ಮತಾಂಧತೆಗೆ ಪುರಾವೆ ಆಗುವುದಿಲ್ಲ. ಒಂದು ವೇಳೆ ಇದನ್ನೇ ನಾವು ಪುರಾವೆಯಾಗಿ ಎತ್ತಿಕೊಳ್ಳುವುದಾದರೆ ಆತನ ಸಾಮ್ರಾಜ್ಯದ ಇನ್ನಿತರ ಕಡೆ ವ್ಯಾಪಕ ಮಟ್ಟದಲ್ಲಿ ಇದು ಕಾಣಿಸಿಕೊಳ್ಳಬೇಕಿತ್ತು. ದೇವಸ್ಥಾನಗಳ ನೆಲಸಮ ಆಗಬೇಕಿತ್ತು. ಇದರ ಬದಲು ಓರ್ವ ಮತಾಂಧ ಮುಸ್ಲಿಮನಿಂದ ಎಂದೂ ನಿರೀಕ್ಷಿಸಲಾಗದ ಹತ್ತು-ಹಲವು ಉದಾರ ನೀತಿಗಳು ಆತನಲ್ಲಿ ವ್ಯಕ್ತವಾಗಿದೆ. ಅದರಲ್ಲಿ ಒಂದು: ಮರಾಠ ಜನರಲ್ ಪರಶುರಾಂಭು ಎಂಬವ ಶೃಂಗೇರಿಯ ಶ್ರೀ ಶಾರದಾ ಮಂದಿರದ ಮೇಲೆ ದಾಳಿ ಮಾಡಿ, ಶಾರದಾ ದೇವಿ ಮೂರ್ತಿಯನ್ನು ಪಾದ ಪೀಠದಿಂದ ಸ್ಥಳಾಂತರಿಸಿ 60 ಲಕ್ಷ ರೂಪಾಯಿ ದೋಚಿದ ಮತ್ತು ಪೀಠದ ಸ್ವಾಮೀಜಿಯು ಕಾರ್ಕಳಕ್ಕೆ ಪಲಾಯನಗೈದ ಘಟನೆಯ ತರುವಾಯ ಸ್ವಾಮೀಜಿಗೆ ಟಿಪ್ಪು ಒಂದಕ್ಕಿಂತ ಹೆಚ್ಚು ಪತ್ರ ಬರೆಯುತ್ತಾನೆ. ಶಾರದಾ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸುವುದಲ್ಲದೇ ಮಂದಿರದ ಕಾವಲಿಗೆ ಸೇನಾ ತುಕಡಿಯನ್ನು ಇರಿಸುತ್ತಾನೆ. ಮಾತ್ರವಲ್ಲ, ವೈರಿಗಳ ದಮನದ ಉದ್ದೇಶವನ್ನಿಟ್ಟುಕೊಂಡು ಮಠದಲ್ಲಿ ಧಾರ್ಮಿಕ ಕ್ರಿಯೆಗಳಾದ ಶತಚಂಡಿ ಜಪ ಮತ್ತು ಸಹಸ್ರ ಚಂಡಿ ಜಪಗಳನ್ನು ನೆರವೇರಿಸುವಂತೆ ನಿವೇದಿಸಿಕೊಳ್ಳುತ್ತಾನೆ. ಶೃಂಗೇರಿ ಮಠದಲ್ಲಿ 1000 ಬ್ರಾಹ್ಮಣರಿಗೆ ಪ್ರತಿದಿನ ಭೋಜನ ವ್ಯವಸ್ಥೆಯನ್ನು ಏರ್ಪಡಿಸುವಂತೆ ಪತ್ರದಲ್ಲಿ ವಿನಂತಿಸುತ್ತಾನೆ. 1791 ರಲ್ಲಿ ಬರೆದ ಇನ್ನೊಂದು ಪತ್ರದಲ್ಲಿ, ವಿರೋಧಿಗಳು ವಿಫಲಗೊಳ್ಳುವಂತೆ ಪ್ರಾರ್ಥಿಸಿ 48 ದಿನಗಳ ಕಾಲ ಸತತ ಪೂಜೆ ಮತ್ತು ಸಹಸ್ರ ಚಂಡಿಯಾಗ ನಡೆಸುವಂತೆ ಕೋರಿಕೊಳ್ಳುತ್ತಾನೆ. (ಮೈಸೂರು ಆರ್ಡಿಯಾಲಾಜಿಕಲ್ ರಿಪೋರ್ಟ್ 42-75). ಇನ್ನೊಂದು ಉದಾಹರಣೆ: ದೇವಸ್ಥಾನಗಳಿಗೆ ಆತ ಬಿಟ್ಟುಕೊಟ್ಟ ಉಂಬಳಿ, ದಾನ ಮತ್ತು ದತ್ತಿ ನೀಡುವಿಕೆ. 1780ರಲ್ಲಿ ಹೈದರಾಲಿಯು ಕರ್ನಾಟಕವನ್ನು ಮುತ್ತಿದಾಗ ಕಾಂಚೀಪುರದ ದೇವಸ್ಥಾನವೊಂದಕ್ಕೆ ಆಸ್ಥಿಭಾರವನ್ನು ಹಾಕಿದ್ದನಾದರೂ ಅದನ್ನು ಆತ ಮುಗಿಸಿರಲಿಲ್ಲ. ಮೂರನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಅಲ್ಲಿಗೆ ಹೋಗಿದ್ದ ಟಿಪ್ಪು ಆ ದೇವಸ್ಥಾನದ ಕಟ್ಟಡಕ್ಕಾಗಿ 10,000 ಹೊನ್ನುಗಳನ್ನು ಕೊಟ್ಟ. ಅಲ್ಲದೇ ಅವನು ಅಲ್ಲಿನ ರಥೋತ್ಸವದಲ್ಲಿ ಭಾಗವಹಿಸಿ ಆ ಸಂದರ್ಭದ ಬಾಣ ಬಿರುಸುಗಳ ವೆಚ್ಚವನ್ನು ಆತನೇ ವಹಿಸಿದ (ಎಂ.ಎ.ಆರ್. 1938, ಪುಟ: 123-125). ತುಂಗಭದ್ರಾ ದಂಡೆಯ ಮೇಲಿನ ದೇವಾಯಲಗಳಿಗೆ ಮತ್ತು ಅಲ್ಲಿನ ಬ್ರಾಹ್ಮಣರಿಗೆ ಟಿಪ್ಪು ಭೂಮಿಯನ್ನು ದಾನವಾಗಿ ನೀಡಿರುವುದನ್ನು ಕನ್ನಡದಲ್ಲಿರುವ ಸಂಸ್ಕೃತ ಶ್ಲೋಕವು ಹೇಳುತ್ತದೆ. (ಬರ ಮಹಲಿನ ದಾಖಲೆಗಳು, ಭಾಗ:5, ಪುಟ: 39-116). ಊರತೂರು ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ಮೂರ್ತಿ ಸ್ಥಾಪನೆ ಮಾಡಿ, ಅಲ್ಲಿನ ದೈನಂದಿನ ಪೂಜೆಗೆ, ಅರ್ಚಕರಿಗೆ ಮತ್ತು ಇತರ ಸೇವಕರಿಗೆ ಇನಾಮ್ ಭೂಮಿಯನ್ನು ದಾನವಾಗಿ ನೀಡಿದನು (ಎಂ.ಎ.ಆರ್. 1935, ಪುಟ 61). ಅರ್ನಾಡು ತಾಲೂಕಿನ ಚೇಲಾಂಬರ ಅಮಸೋವಿನ ಪುಣ್ಣೂರು ದೇವಾಲಯಕ್ಕೆ 70.42 ಎಕರೆಗಳ ಗದ್ದೆ ಮತ್ತು 3.29 ಎಕರೆ ತೋಟದ ಭೂಮಿ, ಪೊನ್ನವಿ ತಾಲೂಕಿನ ಪೈಲತ್ತೂರು ಅಮತೋಮಿನ ತಿರುವಂಚಿಕುಳದ ಶಿವದೇವಾಲಯಕ್ಕೆ 208.82 ಎಕರೆ ಜಮೀನು ಮತ್ತು 3.20 ಎಕರೆ ತೋಟದ ಭೂಮಿಯನ್ನು ನೀಡಿದನು. ಇಂಥ ಡಜನ್‍ಗಟ್ಟಲೆ ಉಲ್ಲೇಖಗಳು ಐತಿಹಾಸಿಕವಾಗಿ ನಿರೂಪಿತವಾಗಿವೆ. ಒಂದು ವೇಳೆ, ಆತ ಮತಾಂಧನೇ ಆಗಿರುತ್ತಿದ್ದರೆ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದು, ಜಪ-ತಪಗಳನ್ನು ಏರ್ಪಡಿಸುವುದು ಮತ್ತು ದೇವಾಲಯಕ್ಕೆ ಭೂಮಿ ಕೊಡುವುದೆಲ್ಲ ಸಾಧ್ಯವಿತ್ತೇ? ಅಷ್ಟಕ್ಕೂ, ಟಿಪ್ಪುವಿನ ಪ್ರಭುತ್ವವಿದ್ದುದು ಬಹುಸಂಖ್ಯಾತ ಹಿಂದೂಗಳ ನಡುವೆ. ಆಗ ಸಂಖ್ಯೆಯಲ್ಲಿ ಮುಸ್ಲಿಮರು ತೀರಾ ತೀರಾ ನಗಣ್ಯ. ಹೀಗಿರುವಾಗ, ದೇವಸ್ಥಾನಗಳನ್ನು ನೆಲಸಮಗೊಳಿಸುವುದೆಂದರೆ, ತನ್ನ ಪ್ರಭುತ್ವದ ವಿರುದ್ಧ ದಂಗೆಗೆ ಪ್ರಚೋದನೆ ಕೊಡುವುದೆಂದೇ ಅರ್ಥ. ಒಂದು ಕಡೆ, ದೇವಸ್ಥಾನಗಳಿಗೆ ಭೂಮಿ ಕೊಡುತ್ತಾ ಮತ್ತು ಜಪ-ತಪಗಳನ್ನು ಮಾಡಿಸುತ್ತಾ ಇನ್ನೊಂದು ಕಡೆ ಅವುಗಳನ್ನು ಉರುಳಿಸುವುದು ಸಾಧ್ಯವೇ? ಆತನ ಮಂತ್ರಿಮಂಡಲದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಪೂರ್ಣಯ್ಯ, ಕೃಷ್ಣರಾಯ, ಚಾಮಯ್ಯ ಅಯ್ಯಂಗಾರ, ನರಸಿಂಹರಾಯ, ಶ್ರೀನಿವಾಸ ರಾಯ, ಮೂಲಚಂದ್, ಸುಬ್ಬರಾಯ, ಶ್ರೀಪತಿರಾಯ, ರಾಮರಾಯ.. ಇವರೆಲ್ಲ ಈ ಮಂದಿರ ಭಂಜನೆಯನ್ನು ನೋಡುತ್ತಾ ಸುಮ್ಮನಿರುತ್ತಿದ್ದರೆ? ಹಾಗಂತ, ಮಂದಿರ ಧ್ವಂಸ ಕಾರ್ಯ ನಡೆದಿಲ್ಲ ಎಂದಲ್ಲ. ಗಡಿಭಾಗದ ಮಂದಿರಗಳ ಮೇಲೆ ಆತ ದಾಳಿ ಮಾಡಿದ್ದಾನೆ. ಆತನ ಅರಮನೆಯ ಗಜಗಳಷ್ಟು ದೂರದಲ್ಲಿರುವ ರಂಗನಾಥ ದೇವಾಲಯವಾಗಲಿ, ಮೇಲುಕೋಟೆಯ ನರಸಿಂಹ ದೇವಸ್ಥಾನ ಮತ್ತು ಶ್ರೀರಂಗಪಟ್ಟಣದ ನಾರಾಯಣ ಸ್ವಾಮಿ ದೇವಸ್ಥಾನವಾಗಲಿ ಅಥವಾ ಇಂಥ ಹತ್ತಾರು ದೇವಸ್ಥಾನಗಳಿಗೆ ಯಾವ ಹಾನಿಯನ್ನೂ ಮಾಡದ ಮತ್ತು ಯಥೇಚ್ಛ ಉಡುಗೊರೆಗಳನ್ನು ನೀಡಿದ ಟಿಪ್ಪು ಗಡಿಭಾಗದ ಮಂದಿರಗಳ ಮೇಲೆ ದಾಳಿ ಮಾಡಿರುವುದೇಕೆ ಅನ್ನುವ ಪ್ರಶ್ನೆ ಸಹಜ. ಇದಕ್ಕಿರುವ ಉತ್ತರ ರಾಜಕೀಯವೇ ಹೊರತು ಬೇರೆ ಯಾವುದೂ ಕಾಣಿಸುತ್ತಿಲ್ಲ. ಟಿಪ್ಪುವಿನ ಪ್ರಭುತ್ವದ ವಿರುದ್ಧ ಸಂಚು ನಡೆಸಲು ಬಳಕೆಯಾಗುತ್ತಿದ್ದ ಮಂದಿರಗಳನ್ನು ಆತ ಧ್ವಂಸ ಮಾಡಿದ್ದಾನೆ. ಪ್ರಜಾತಂತ್ರ ಭಾಷೆಯಲ್ಲಿ ಹೇಳುವುದಾದರೆ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳನ್ನು ದಮನಿಸುವುದಕ್ಕಾಗಿ ಇಂದಿರಾಗಾಂಧಿಯವರು ಸ್ವರ್ಣ ಮಂದಿರದ ಮೇಲೆ ಹೇಗೆ ಬ್ಲ್ಯೂ ಸ್ಟಾರ್ ಕಾರ್ಯಾಚರಣೆ ನಡೆಸಿದರೋ ಹಾಗೆ. ಬ್ಲ್ಯೂ ಸ್ಟಾರ್ ಕಾರ್ಯಾಚರಣೆ ಸಂಚುಕೋರರ ವಿರುದ್ಧ ಆಗಿತ್ತೇ ಹೊರತು ಸ್ವರ್ಣ ಮಂದಿರದ ವಿರುದ್ಧ ಆಗಿರಲಿಲ್ಲ, ಅಷ್ಟಕ್ಕೂ, ಬರೇ ಲೂಟಿಯನ್ನೇ ಉದ್ದೇಶವಾಗಿಟ್ಟುಕೊಂಡು ಹಿಂದೂ ರಾಜರುಗಳು ದೇವಸ್ಥಾನಗಳ ಮೇಲೆ ಮಾಡಿದ ಹತ್ತು-ಹಲವು ದಾಳಿಗಳ ಬಗ್ಗೆ ಯಾಕೆ ಟಿಪ್ಪು ವಿರೋಧಿಗಳು ಮೌನ ಪಾಲಿಸುತ್ತಾರೆ? ಭಾರತಕ್ಕೆ ಮುಸ್ಲಿಮ್ ದೊರೆಗಳು ಆಗಮಿಸುವುದಕ್ಕಿಂತ ಮೊದಲೇ (1193-1210) ಪರ್ಮರ ರಾಜನಾದ ಸುಭಟ ವರ್ಮನು ಗುಜರಾತ್‍ನ ಮೇಲೆ ದಾಳಿ ಮಾಡಿ ಅನೇಕ ಜೈನ ದೇವಾಲಯಗಳನ್ನು ಲೂಟಿ ಮಾಡಿದನಲ್ಲ, ಯಾಕೆ ಟಿಪ್ಪು ವಿರೋಧಿಗಳಿಗೆ ಸುಭಟ ವರ್ಮನು ದೇಗುಲ ಭಂಜಕನಾಗಿ ಕಾಣಿಸುವುದಿಲ್ಲ? ಕಾಶ್ಮೀರದ ರಾಜನಾದ ಹರ್ಷನು ತನ್ನ ಸಾಮ್ರಾಜ್ಯದೊಳಗೆ ಇದ್ದ 4 ದೇವಾಲಯಗಳನ್ನು ಬಿಟ್ಟು ಉಳಿದೆಲ್ಲ ದೇವಾಲಯಗಳನ್ನು ಸೂರೆ ಮಾಡಿದನಲ್ಲ ಮತ್ತು ದೇವಾಲಯಗಳ ಮೇಲೆ ದಾಳಿ, ಲೂಟಿ ಮತ್ತು ಧ್ವಂಸದ ಪ್ರಕ್ರಿಯೆಯನ್ನು ಸುಗಮವಾಗಿ ನೋಡಿಕೊಳ್ಳಲು ‘ದೇವೋತ್ಪಾಟಕ ನಾಯಕ’ ಎಂಬ ಹೆಸರಿನ ಅಧಿಕಾರಿ  ಯನ್ನೇ ನೇಮಿಸಿದ್ದನಲ್ಲ, ಯಾಕೆ ಟಿಪ್ಪುವನ್ನು ಮಂದಿರ ಭಂಜಕ ಅನ್ನುವವರು ಈ ಬಗ್ಗೆ ಚಕಾರವೆತ್ತುವುದಿಲ್ಲ? ಕೊನೆಗೆ ಜನರು ಈತನ ಕಾಟ ತಾಳಲಾರದೇ ಶ್ರೀನಗರದ ಬೀದಿಯಲ್ಲಿ ಅಟ್ಟಿಸಿಕೊಂಡು ಹೋಗಿ ಕಲ್ಲು ಹೊಡೆದು ಕೊಂದುದು ಏನನ್ನು ಸೂಚಿಸುತ್ತದೆ - ಮಂದಿರ ಧ್ವಂಸದಂಥ ಕೃತ್ಯಗಳನ್ನು ಜನರು ಸಹಿಸುವುದಿಲ್ಲ ಎಂಬುದನ್ನೇ ಅಲ್ಲವೇ? ಹೀಗಿದ್ದೂ ಮುಸಲ್ಮಾನನಾದ ಟಿಪ್ಪು ಧಾರ್ಮಿಕ ಕಾರಣಕ್ಕಾಗಿ ದೇಗುಲ ಭಂಜನೆ ಮಾಡಿದ್ದಿದ್ದರೆ ಅದನ್ನು ಹಿಂದೂಗಳು ಸಹಿಸಿಕೊಳ್ಳುತ್ತಿದ್ದರೇ? ಇಲ್ಲಿ ಇನ್ನೂ ಒಂದು ಪ್ರಶ್ನೆಯನ್ನು ಎತ್ತಬೇಕಿದೆ. ರಾಜ ಅಶೋಕನು ಬೌದ್ಧ ಮತ ಪ್ರಚಾರಕ್ಕಾಗಿ ತನ್ನ ಇಡೀ ಆಡಳಿತ ಯಂತ್ರವನ್ನೇ ಬಳಸಿದನಲ್ಲ, ಹಿಂದೂ ಧರ್ಮೀಯರ ಮೇಲೆ ಬೌದ್ಧ ಮತವನ್ನು ಹೇರಿದನಲ್ಲ, ಇದು ಸಹ್ಯವೇ? ಇದು ಬಲವಂತದ ಮತಾಂತರ ಅನ್ನಿಸಿಕೊಳ್ಳುವುದಿಲ್ಲವೇ? ಪ್ರಭುತ್ವವೇ ಮುಂದೆ ನಿಂತು ಬೌದ್ಧ ಧರ್ಮವನ್ನು ಪ್ರಚಾರ ಮಾಡುವುದು ರಾಜನೀತಿಗೆ ಸೂಕ್ತವೇ? ಮರಾಠರು ಶೃಂಗೇರಿಯ ಶಾರದಾ ದೇವಿ ಮಂದಿರದ ಮೇಲೆ ಮಾಡಿದ ದಾಳಿ ಮತ್ತು ಅನೇಕ ಹಿಂದೂ ರಾಜವಂಶಗಳು ಮಾಡಿದ ಮಂದಿರ ದಾಳಿಗಳೆಲ್ಲ ಯಾಕೆ ಟಿಪ್ಪು ವಿರೋಧಿಗಳು ಉಲ್ಲೇಖಿಸುವ ‘ಮಂದಿರ ಧ್ವಂಸಗಳ ಪಟ್ಟಿಯಲ್ಲಿ’ ಕಾಣಿಸಿಕೊಳ್ಳುವುದಿಲ್ಲ?
3. ಟಿಪ್ಪುವನ್ನು ಇದಮಿತ್ಥಂ ಎಂದು ತೀರ್ಮಾನಿಸುವುದಕ್ಕೆ ನಮ್ಮಲ್ಲಿರುವ ಆಧಾರ ಗ್ರಂಥಗಳು ಯಾವುವು? ಅವನ್ನು ಬರೆದವರು ಯಾರು? ಅವರು ಎಲ್ಲಿಯವರು? ಅವರೆಷ್ಟು ನಿಷ್ಪಕ್ಷಪಾತಿಗಳು? ನಿಜ ಏನೆಂದರೆ, ಟಿಪ್ಪು ಮತ್ತು ಹೈದರಾಲಿಯನ್ನು ಮತಾಂಧ, ದೇಗುಲ ಭಂಜಕ, ಜನಪೀಡಕ, ಮತಾಂತರಿ.. ಇತ್ಯಾದಿ ಇತ್ಯಾದಿಯಾಗಿ ಚಿತ್ರೀಕರಿಸಿದವರು ಒಂದೋ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಹುದ್ದೆಯಲ್ಲಿದ್ದವರು ಅಥವಾ ಕಕಂಪೆನಿಗೆ ಬೆಂಗಾವಲಾಗಿ ನಿಂತ ಇತಿಹಾಸಕಾರರಾದ ಅಲೆಕ್ಸಾಂಡರ್ ಡೌವ್, ಜೇಮ್ಸ್ ಮಿಲ್, ಮೌಂಟಿ ಸ್ಟುವರ್ಟ್ ಎಲ್‍ಫಿನ್‍ಸ್ಟನ್, ಹೆನ್ರಿ ಎಲಿಯಟ್, ಜಾನ್ ಡೌಸನ್ ಮತ್ತು ಇನ್ನಿತರರೇ ಹೊರತು ಬ್ರಿಟಿಷ್ ವಸಾಹತುಶಾಹಿಯನ್ನು ಪ್ರಶ್ನಿಸಿದವರಲ್ಲ ಎಂಬುದು ಬಹಳ ಮುಖ್ಯ. ಬ್ರಿಟಿಷ್ ಇತಿಹಾಸಕಾರರು ಅತ್ಯಂತ ಹೆಚ್ಚು ನಕಾರಾತ್ಮಕವಾಗಿ ಬರೆದಿರುವುದು ಇವರಿಬ್ಬರ ಬಗ್ಗೆ. ಅದಕ್ಕಿರುವ ಕಾರಣ ಇವರು ಈಸ್ಟ್ ಇಂಡಿಯಾ ಕಂಪೆನಿಗೆ ಕೊಟ್ಟಷ್ಟು ಎದಿರೇಟು ಇನ್ನಾರೂ ಕೊಟ್ಟಿರಲಿಲ್ಲ ಎಂಬುದಾಗಿದೆ. ಮೈಸೂರಿನ ಒಡೆಯರ್ ವಂಶದವರು ಬ್ರಿಟಿಷರಿಗೆ ಕಪ್ಪ ಕೊಟ್ಟು ಸಾಮಂತ ರಾಜರಾಗಿ ಬದುಕುತ್ತಿದ್ದ ವೇಳೆ, ಮೈಸೂರು ಸೇನೆಯಲ್ಲಿದ್ದ ಹೈದರ್ ಅದಕ್ಕೆ ತಡೆ ಒಡ್ಡಿದನಲ್ಲದೇ ಬ್ರಿಟಿಷರಿಗೆ ಎದುರಾಡಿದ. ಟಿಪ್ಪೂ ಅದನ್ನೇ ಮಾಡಿದ. ಇವರಿಬ್ಬರ ಪತನದ ಬಳಿಕ ಬ್ರಿಟಿಷ್ ನಿಯೋಜಿತ ಒಡೆಯರ್ ರಾಜವಂಶವು ಕಪ್ಪ ಕೊಡುತ್ತಾ ಸಾಮಂತರಾಗಿ ಮುಂದುವರಿಯಿತು. ಸದ್ಯ ಟಿಪ್ಪುವನ್ನು ಮತಾಂಧ ಅನ್ನುವ ವರ್ಗ ತಮ್ಮ ವಾದಕ್ಕಾಗಿ ಎತ್ತಿಕೊಳ್ಳುತ್ತಿರುವುದು ಇದೇ ಬ್ರಿಟಿಷ್ ಇತಿಹಾಸಕಾರರ ಗ್ರಂಥಗಳನ್ನು. ನಿಜವಾಗಿ, ಇವರ ಉದ್ದೇಶಶುದ್ಧಿಯನ್ನು ಅಳೆಯುವುದಕ್ಕೆ ಇದುವೇ ದಾರಾಳ ಸಾಕು.
4. ಈ ದೇಶದಲ್ಲಿ ಮುಸ್ಲಿಮ್ ದೊರೆಗಳು ಸುಮಾರು 700 ವರ್ಷಗಳ ವರೆಗೆ ಆಧಿಪತ್ಯ ಸ್ಥಾಪಿಸಿದ್ದರು. ಬ್ರಿಟಿಷರು 250 ವರ್ಷಗಳ ವರೆಗೆ ಆಳಿದ್ದರು. ಆದರೆ, ಟಿಪ್ಪುವೂ ಸೇರಿ ಮುಸ್ಲಿಮ್ ದೊರೆಗಳನ್ನೆಲ್ಲ ಸಾರಾಸಗಟು ಮತಾಂಧ ಎಂದೋ ಮತಾಂತರಿ ಎಂದೋ ಹಿಂದೂ ವಿರೋಧಿ ಎಂದೋ ಮುದ್ರೆ ಒತ್ತುವವರು ಬ್ರಿಟಿಷರ ವಿರುದ್ಧ ಒಂದೇ ಒಂದು ಹೇಳಿಕೆಯನ್ನೂ ಕೊಡುತ್ತಿಲ್ಲವಲ್ಲ, ಯಾಕೆ? ಇತ್ತೀಚೆಗೆ ಷಹಜಹಾನ್ ಕೂಡ ಕಪ್ಪುಪಟ್ಟಿಗೆ ಸೇರಿಕೊಂಡ. ಮುಸ್ಲಿಮ್ ದೊರೆಗಳೇ ಯಾಕೆ ಪ್ರತಿಕ್ಷಣವೂ ಅಪಖ್ಯಾತಿಗೆ ಒಳಗಾಗುತ್ತಾರೆ? ಐತಿಹಾಸಿಕ ತಪ್ಪುಗಳು, ಪ್ರಮಾದಗಳು, ಎಡವಟ್ಟುಗಳು ಅವರಿಂದ ಮಾತ್ರ ಸಂಭವಿಸಿವೆಯೇ? ಹಿಂದೂ ದೊರೆಗಳು ಮತ್ತು ಬ್ರಿಟಿಷ್ ವೈಸರಾಯ್‍ಗಳು ಪುಟಕ್ಕಿಟ್ಟ ಚಿನ್ನವೇ? ಈ ಪ್ರಶ್ನೆಯನ್ನು ಇನ್ನಷ್ಟು ವಿಸ್ತರಿಸಿ ನೋಡುವುದಾದರೆ, ಇತ್ತೀಚಿನ ಪಟಾಕಿ ಮತ್ತು ಮೀನು ಪ್ರಕರಣಗಳನ್ನು ಎತ್ತಿಕೊಳ್ಳಬಹುದು. ದೆಹಲಿಯಲ್ಲಿ ದೀಪಾವಳಿಯ ಸಮಯದಲ್ಲಿ ಪಟಾಕಿ ಸಿಡಿಸಬಾರದೆಂದು ಸುಪ್ರೀಮ್ ಕೋರ್ಟ್ ಆದೇಶಿಸಿದಾಗ, ತಕ್ಷಣ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಏನೆಂದರೆ, ಮುಸ್ಲಿಮರ ಪ್ರಾಣಿ ಬಲಿಯ ವಿರುದ್ಧ ಯಾಕೆ ಇಂಥ ನಿಷೇಧವಿಲ್ಲ ಎಂದಾಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೀನೂಟ ಮಾಡಿ ಧರ್ಮಸ್ಥಳದ ಶ್ರೀ ಮಂಜುನಾಥನನ್ನು ಸಂದರ್ಶಿಸಲು ಹೋದುದಕ್ಕೆ ಬಿಜೆಪಿ ಮತ್ತು ಪರಿವಾರ ಎತ್ತಿದ ಆಕ್ಷೇಪ ಏನೆಂದರೆ, ಹಂದಿ ಮಾಂಸವನ್ನು ತಿಂದು ಮಸೀದಿ ಪ್ರವೇಶಿಸಬಹುದೇ ಎಂದು. ಯಾಕೆ ಪ್ರತಿ ಘಟನೆಯನ್ನೂ ಮುಸ್ಲಿಮೀಕರಿಸಲಾಗುತ್ತಿದೆ? ಪಟಾಕಿ ನಿಷೇಧಿಸಿದ್ದು ಮುಸ್ಲಿಮರಲ್ಲ. ಮೀನು ತಿಂದದ್ದೂ ಮುಸ್ಲಿಮರಲ್ಲ. ಆದರೂ ಇವೆರಡನ್ನೂ ಮುಸ್ಲಿಮರಿಗೆ ತಳಕು ಹಾಕುವ ಮತ್ತು ಹಿಂದೂ ವರ್ಸಸ್ ಮುಸ್ಲಿಮ್ ಎಂಬಂತಾಗಿಸುವ ತಂತ್ರ ಇದೆಯಲ್ಲ, ಇದು ಕೊಡುವ ಸೂಚನೆ ಏನು? ಪ್ರತಿ ಘಟನೆಗೂ ಇಂಥದ್ದೊಂದು ತಿರುವು ಕೊಡುವುದರ ಹಿಂದಿನ ಉದ್ದೇಶ ಏನು? ಅವರು ಏನನ್ನು ಬಯಸುತ್ತಿದ್ದಾರೆ? ಏನೇ ಆದರೂ,
           ಟಿಪ್ಪುವಿನ ಬಗ್ಗೆ ಆಳ ಅಧ್ಯಯನ ನಡೆಸಲು ಮತ್ತು ಅದನ್ನು ಜನರಿಗೆ ತಿಳಿಸಲು ಸಂದರ್ಭ ಸೃಷ್ಟಿಸಿದ ‘ಟಿಪ್ಪು ವಿರೋಧಿ’ ಗುಂಪಿಗೆ ಹೃದಯಪೂರ್ವಕ ಧನ್ಯವಾದಗಳು.



Monday, November 6, 2017

ಲೂಟಿಕೋರರು ಇಲ್ಲೇ ಜೀವಂತ ಇರುವಾಗ ಇಲ್ಲದ ಷಹಜಹಾನ್ ಏಕೋ?

      ಸ್ವಾತಂತ್ರ್ಯಪೂರ್ವದಲ್ಲಿ ಭಾರತವನ್ನಾಳಿದ ಮುಸ್ಲಿಮ್ ದೊರೆಗಳನ್ನು ಎತ್ತಿಕೊಂಡು ಸ್ವಾತಂತ್ರ್ಯಾ ನಂತರದ ಭಾರತೀಯ ಮುಸ್ಲಿಮರನ್ನು ಹಳಿಯುತ್ತಿರುವವರೊಂದಿಗೆ ಕೆಲವು ಪ್ರಶ್ನೆಗಳಿವೆ.
1. ಕಲ್ಲಿದ್ದಲು ಹಗರಣ - 1.86 ಲಕ್ಷ ಕೋಟಿ ರೂಪಾಯಿ
2. 2ಜಿ ಸ್ಪೆಕ್ಟ್ರಂ ಹಗರಣ - 1.76 ಲಕ್ಷ ಕೋಟಿ ರೂಪಾಯಿ
3. ಕಾಮನ್‍ವೆಲ್ತ್ ಗೇಮ್ಸ್ ಹಗರಣ - 70 ಸಾವಿರ ಕೋಟಿ
4. ಸತ್ಯಂ ಹಗರಣ - 14 ಸಾವಿರ ಕೋಟಿ
5. ಷೇರು ಹಗರಣ - 1 ಸಾವಿರ ಕೋಟಿ
6. ಹವಾಲಾ ಹಗರಣ - 200 ಕೋಟಿ
7. ಬೋಫೋರ್ಸ್ ಹಗರಣ - 100 ಕೋಟಿ
8. ವಾಯುಪಡೆ ರಹಸ್ಯ ಸೋರಿಕೆ ಹಗರಣ - 18 ಸಾವಿರ ಕೋಟಿ ರೂಪಾಯಿ
         .... ಇತ್ಯಾದಿ ಹಗರಣಗಳಲ್ಲಿ ಭಾಗಿಯಾದವರು ಯಾರು? ಮುಖ್ಯ ರೂವಾರಿಗಳು ಯಾರು? ಆರೋಪಿಗಳು, ಜೈಲು ಪಾಲಾದವರು ಮತ್ತು ಬಿಡುಗಡೆಗೊಂಡವರ ಹೆಸರುಗಳು ಏನೇನು? ಇಷ್ಟವಿಲ್ಲದಿದ್ದರೂ ಇನ್ನೊಂದು ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಇದರಲ್ಲಿ ಭಾರತೀಯ ಮುಸ್ಲಿಮರ ಪಾತ್ರ ಏನು? ಮುಸ್ಲಿಮ್ ಫಲಾನುಭವಿಗಳ ಸಂಖ್ಯೆ ಎಷ್ಟು? ಈ ಹಗರಣಗಳ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ. 2012ರ ಶಸ್ತ್ರಾಸ್ತ್ರ ಹಗರಣ, 2013ರ ಶಾರದಾ ಗ್ರೂಪ್ ಹಣಕಾಸು ಹಗರಣ, 2010ರ ಇಸ್ರೋ ಎಸ್‍ಬ್ರ್ಯಾಂಡ್ ಹಗರಣ, 2009ರ ಗುಜರಾತ್ ಕಬ್ಬು ಹಗರಣ, 2011ರ ಕರ್ನಾಟಕ ಗಣಿ ಹಗರಣ, 2012ರ ಆದರ್ಶ್ ಸೊಸೈಟಿ ಹಗರಣ, 2013ರ ಮಧ್ಯಪ್ರದೇಶ ವ್ಯಾಪಂ ಹಗರಣ, ವೊಡಾಫೋನ್ ತೆರಿಗೆ ವಂಚನೆ ಹಗರಣ, ಮಧ್ಯಪ್ರದೇಶ ಸ್ಕಾಲರ್‍ಶಿಪ್ ಹಗರಣ, ತಾಜ್ ಕಾರಿಡಾರ್ ಹಗರಣ, ಗೋವಾ ವಿಶೇಷ ಆರ್ಥಿಕ ವಲಯ ಹಗರಣ, ವಸುಂದರಾ ರಾಜೆ ದೀನ್‍ದಯಾಳ್ ಉಪಾಧ್ಯಾಯ ಭೂಹಗರಣ, ಮಹಾರಾಷ್ಟ್ರ ನೀರಾವರಿ ಹಗರಣ, ಶವಪೆಟ್ಟಿಗೆ ಹಗರಣ, ಪ್ರಶ್ನೆಗಾಗಿ ಲಂಚ ಹಗರಣ, ಲ್ಯಾವ್ಲಿನ್ ಹಗರಣ.. ಇತ್ಯಾದಿ ಇತ್ಯಾದಿಗಳ ಫಲಾನುಭವಿಗಳು ಯಾರು? ರೂವಾರಿಗಳು ಯಾರು? ಮೊಗಲ್ ಮತ್ತಿತರ ರಾಜವಂಶಗಳು ಈ ದೇಶದ ಸಂಪತ್ತು ಲೂಟಿವೆ ಎಂದು ಹೇಳುತ್ತಾ ಪರೋಕ್ಷವಾಗಿ ಇಲ್ಲಿನ ಮುಸ್ಲಿಮರನ್ನು ಹಳಿಯುತ್ತಿರುವವರು ಯಾಕೆ ಈ ಲೂಟಿಯ ಬಗ್ಗೆ ಮಾತಾಡುತ್ತಿಲ್ಲ? ಈ ದೇಶವನ್ನಾಳಿದ ಮುಸ್ಲಿಮ್ ದೊರೆಗಳು ದೋಚಿದರೆಂದೇ ಹೇಳಲಾಗುವ ಸಂಪತ್ತಿಗೆ ಹೋಲಿಸಿದರೆ ಸ್ವಾತಂತ್ರ್ಯಾನಂತರದ ಈ 70 ವರ್ಷಗಳಲ್ಲಿ ಜನಪ್ರತಿನಿಧಿಗಳೇ ಆಡಳಿತ ನಡೆಸುತ್ತಿರುವ ಈ ದೇಶದಲ್ಲಿ ದೋಚಲಾದ ಸಂಪತ್ತು ಎಷ್ಟು ಪಟ್ಟು ಹೆಚ್ಚಿರಬಹುದು? ಯಾಕೆ ಇಷ್ಟು ದೊಡ್ಡ ಮಟ್ಟದಲ್ಲಿ ದೇಶವನ್ನು ಲೂಟಿದವರ ಹೆಸರು ಮತ್ತು ಅವರ ಧರ್ಮವನ್ನು ಉಲ್ಲೇಖಿಸಿ ಇಲ್ಲಿ ಚರ್ಚೆ ನಡೆಯುವುದಿಲ್ಲ? ಎಂದೋ ಆಗಿ ಹೋದ ಮುಸ್ಲಿಮ್ ದೊರೆಗಳ ಬೆನ್ನ ಹಿಂದೆ ನಿಂತು ಈಗಿನ ಮುಸ್ಲಿಮರ ಮೇಲೆ ಬಾಣ ಎಸೆಯುವವರಿಗೆ ಯಾಕೆ ಈ ಹಗರಣಗಳು ದೇಶದ್ರೋಹಿಯಾಗಿ ಕಾಣಿಸುತ್ತಿಲ್ಲ? ಇದರಲ್ಲಿ ಭಾಗಿಯಾದವರನ್ನು ಮತ್ತು ಅವರ ಧರ್ಮವನ್ನು ಕಪ್ಪುಪಟ್ಟಿಗೆ ಸೇರಿಸುವುದಿಲ್ಲ? ಸುರೇಶ್ ಕಲ್ಮಾಡಿ, ಪ್ರತಾಪ್ ಸಿಂಗ್ ಕೈಲಾಸ್, ಕನ್ನಿಮೋಳಿ, ರಾಜಾ, ಬಾಲಕೃಷ್ಣ ಪಿಳ್ಳೈ, ಸುಖ್‍ರಾಂ, ಜಗನ್ಮೋಹನ್ ರೆಡ್ಡಿ, ಲಾಲೂ ಪ್ರಸಾದ್ ಯಾದವ್, ಯಡಿಯೂರಪ್ಪ, ಜನಾರ್ಧನ್ ರೆಡ್ಡಿ, ಶಿವರಾಜ್ ಸಿಂಗ್ ಚೌಹಾಣ್, ವೀರಭದ್ರ ಸಿಂಗ್, ಜಯಲಲಿತಾ, ಶಶಿಕಲಾ, ವಸುಂಧರಾ, ಚೌಟಾಲ, ಲಲಿತ್ ಮೋದಿ.. ಮುಂತಾದ ಹೆಸರುಗಳು ಮತ್ತು ಇತ್ತೀಚಿನ ಜಯ್‍ಶಾ ಎಂಬ ಹೆಸರು ಯಾವ ಧರ್ಮವನ್ನು ಪ್ರತಿನಿಧಿಸುತ್ತದೆ? ಮೊಗಲರನ್ನೇ, ಟಿಪ್ಪುವನ್ನೇ ಬಾಬರ್‍ನನ್ನೇ?
         ಇನ್ನೂ ಒಂದು ಪ್ರಶ್ನೆಯನ್ನು ಕೇಳಬೇಕು..
1969ರ ಗುಜರಾತ್ ಹತ್ಯಾಕಾಂಡ - 430 ಮುಸ್ಲಿಮರ ಹತ್ಯೆ
1983ರ ನೆಲ್ಲಿ ಹತ್ಯಾಕಾಂಡ - 2,191 ಮುಸ್ಲಿಮರ ಹತ್ಯೆ
1980ರ ಮೊರಾದಾಬಾದ್ ಹತ್ಯಾಕಾಂಡ - 200 ಮುಸ್ಲಿಮರ ಹತ್ಯೆ
1980ರ ಭಾಗಲ್ಪುರ್ ಹತ್ಯಾಕಾಂಡ - 900 ಮುಸ್ಲಿಮರ ಹತ್ಯೆ
2002ರ ಗುಜರಾತ್ ಹತ್ಯಾಕಾಂಡ - 2000 ಮುಸ್ಲಿಮರ ಹತ್ಯೆ
2013ರ ಮುಝಫ್ಫರ್ ನಗರ್ ಹತ್ಯಾಕಾಂಡ - 42 ಮುಸ್ಲಿಮರ ಹತ್ಯೆ
1992ರ ಮುಂಬೈ ಯೋಜಿತ ಗಲಭೆ - 600 ಮುಸ್ಲಿಮರ ಹತ್ಯೆ
..ಇವೆಲ್ಲ ಏನು? ಸ್ವಾತಂತ್ರ್ಯ ಪೂರ್ವದ ದೊರೆಗಳನ್ನು ಎತ್ತಿಕೊಂಡು ಮಾತಾಡುವವರೆಲ್ಲ ಈ ಪ್ರಜಾತಂತ್ರ ಭಾರತದ ಹತ್ಯಾಕಾಂಡಗಳ ಬಗ್ಗೆ ಮತ್ತು ಅದರಲ್ಲಿ ಭಾಗಿಯಾದವರ ಬಗ್ಗೆ ಯಾಕೆ ಮಾತಾಡುವುದಿಲ್ಲ? ಮುಸ್ಲಿಮ್ ದೊರೆಗಳನ್ನು ಕ್ರೂರಿಗಳೋ ವಂಚಕರೋ ಲೂಟಿಕೋರರೋ ಇನ್ನೇನೋ ಅನ್ನಿ. ಆದರೆ ಅದೇ ಉತ್ಸಾಹದಿಂದ ಈ ಮಂದಿಯನ್ನೂ ಲೂಟಿಕೋರರು, ಕ್ರೂರಿಗಳು, ವಂಚಕರು ಎಂದು ಕರೆಯುವುದಕ್ಕೆ ಯಾಕೆ ಈ ಮಂದಿ ಉಮೇದು ತೋರುತ್ತಿಲ್ಲ? ಈ ಹಗರಣ ಮತ್ತು ಹತ್ಯಾಕಾಂಡಗಳಲ್ಲಿ ಭಾಗಿಯಾದವರು ಮುಸ್ಲಿಮರಲ್ಲ ಎಂಬುದು ಇದಕ್ಕೆ ಕಾರಣವೇ? ಮುಸ್ಲಿಮನದ್ದಾದರೂ ಹಿಂದೂವಿನದ್ದಾದರೂ ಹತ್ಯೆ ಹತ್ಯೆಯೇ. ರಾಜ ಕೊಂದರೂ ಪ್ರಜೆ ಕೊಂದರೂ ಸಾವು ಸಾವೇ. ಆದರೂ ರಾಜಪ್ರಭುತ್ವಕ್ಕೂ ಪ್ರಜಾತಂತ್ರಕ್ಕೂ ಹೋಲಿಕೆಗೆ ಸಿಗದಷ್ಟು ವ್ಯತ್ಯಾಸಗಳಿವೆ. ರಾಜ ಯಾರಿಗೂ ಉತ್ತರದಾಯಿಯಲ್ಲ. ಆತನೇ ಸಂವಿಧಾನ. ಆತನೇ ನ್ಯಾಯಾಧೀಶ. ರಾಜ ಸಾವಿಗೀಡಾದರೆ ಆತನ ಮಗ ಉತ್ತರಾಧಿಕಾರಿಯಾಗಬಲ್ಲ/ಳು. ಆತ ಪ್ರಶ್ನಾತೀತ. ಬಹುಶಃ ಇವೆಲ್ಲಕ್ಕೂ ಅಪವಾದವೆಂಬಂತೆ ಕೆಲವೇ ಕೆಲವು ರಾಜರುಗಳು ನಡೆದುಕೊಂಡಿರಬಹುದಾದರೂ ಅದು ಅವರ ವೈಯಕ್ತಿಕ ಹೆಚ್ಚುಗಾರಿಕೆಯೇ ಹೊರತು ರಾಜಪ್ರಭುತ್ವದ ಅನಿವಾರ್ಯತೆಯಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ಆದರೆ ಪ್ರಜಾತಂತ್ರ ಹಾಗಲ್ಲವಲ್ಲ. ಅದಕ್ಕೊಂದು ಸಂವಿಧಾನ, ವ್ಯವಸ್ಥಿತ ಆಡಳಿತ ಯಂತ್ರ, ಆಯ್ಕೆ ವಿಧಾನ, ಸರ್ವರೂ ಸಮಾನರು, ಸರ್ವರೂ ಉತ್ತರದಾಯಿಗಳು.. ಇತ್ಯಾದಿಗಳೂ ಇವೆಯಲ್ಲ. ನರೇಂದ್ರ ಮೋದಿಯವರಾಗಲಿ, ಮನ್‍ಮೋಹನ್ ಸಿಂಗ್ ಆಗಲಿ ಅಥವಾ ದೇವೇಗೌಡರೇ ಆಗಲಿ ಯಾರದಾದರೋ ತಂದೆ, ಮಗ, ವಂಶ, ಕುಲ, ಧರ್ಮ ಇತ್ಯಾದಿಗಳ ಕಾರಣಕ್ಕಾಗಿ ಪ್ರಧಾನಿಗಳಾದುದು ಅಲ್ಲವಲ್ಲ. ಒಂದು ವೇಳೆ ನೆಹರೂರ ಮಗಳು ಇಂದಿರಾಗಾಂಧಿ ಮತ್ತು ಅವರ ಮಗ ರಾಜೀವ್ ಗಾಂಧಿ ಪ್ರಧಾನಿಯಾಗಿ ಆಳ್ವಿಕೆ ನಡೆಸಿದ್ದರೂ ಕೇವಲ ತಂದೆ, ಮಗಳು, ಮಗ ಎಂಬ ಕಾರಣ ವೊಂದರಿಂದಲೇ ಅವರು ಆ ಸ್ಥಾನಕ್ಕೆ ಏರಿದ್ದಲ್ಲ. ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸೋಲನ್ನೂ ಕಂಡಿದ್ದಾರೆ. ವಿಚಾರಣೆಗೂ ಒಳಗಾಗಿದ್ದಾರೆ. ಪ್ರಜೆಗಳಿಗೆ ಅವರನ್ನು ಟೀಕಿಸುವ ಮತ್ತು ಪ್ರಶಂಸಿಸುವ ಸ್ವಾತಂತ್ರ್ಯವೂ ಇತ್ತು. ದೊರೆಗಳ ಜಗತ್ತಿನಿಂದ ಭಾರತವು ಇಂಥ ಪ್ರಜೆಗಳೇ ಪ್ರತಿನಿಧಿಗಳಾಗುವ ಸ್ಥಿತಿಗೆ ಹೊರಳಿಕೊಂಡ ಬಳಿಕವೂ ಈ ದೇಶದ ಮುಸ್ಲಿಮರು ಎಂದೋ ಆಗಿ ಹೋದ ದೊರೆಗಳ ಪಾಪಕೃತ್ಯಗಳಿಗೆ ಹೊಣೆಗಾರರು ಎಂದಾದರೆ, ಈ ಮೇಲಿನ ಹಗರಣ ಮತ್ತು ಹತ್ಯಾಕಾಂಡಗಳಿಗೆ ಯಾರು ಹೊಣೆಯಾಗಬೇಕು? ಯಾವ ಧರ್ಮಾನುಯಾಯಿಗಳನ್ನು ಹೊಣೆಯಾಗಿಸಬೇಕು? ಈ ಹಗರಣದಲ್ಲಿ ಭಾಗಿಯಾದವರು ಕಟ್ಟಿರಬಹುದಾದ ಅಥವಾ ದೇಣಿಗೆಯನ್ನೋ ಉಡುಗೊರೆಯನ್ನೋ ನೀಡಿರಬಹುದಾದ ಎಷ್ಟು ಮಂದಿರಗಳು ‘ಕಪ್ಪು ಚುಕ್ಕೆ’ ಪಟ್ಟಿಯಲ್ಲಿ ಸೇರಬೇಕು? ಎಷ್ಟು ನೆಲಸಮಕ್ಕೆ ಅರ್ಹವಾಗಬೇಕು?
      ನಿಜವಾಗಿ, ಸ್ವಾತಂತ್ರ್ಯಾನಂತರದ ಭಾರತದಲ್ಲಿ 60 ಸಾವಿರಕ್ಕಿಂತ ಹೆಚ್ಚು ಸಣ್ಣ ಮತ್ತು ದೊಡ್ಡ ಮಟ್ಟದ ಕೋಮುಗಲಭೆಗಳು ನಡೆದಿವೆ ಎಂದು ಹೇಳಲಾಗುತ್ತದೆ. ಈ ಕೋಮುಗಲಭೆಗಳ ಅಂತಿಮ ಫಲಿತಾಂಶ ಏನು ಎಂಬುದು ಎಲ್ಲರಿಗೂ ಗೊತ್ತು. ಗಲಭೆ ಎಂಬ ಶೀರ್ಷಿಕೆಯಿದ್ದರೂ ಬಹುತೇಕ ಎಲ್ಲ ಸಂದರ್ಭಗಳಲ್ಲೂ ನಡೆದಿರುವುದು ಏಕಮುಖ ಹಿಂಸಾಚಾರವೇ ಹೊರತು ಗಲಭೆಯಲ್ಲ. 2002ರ ಗುಜರಾತ್ ಹತ್ಯಾಕಾಂಡವನ್ನೂ ಗುರುತಿಸುವುದು ‘ಗುಜರಾತ್ ಗಲಭೆ’ ಎಂದೇ. 1992 ಮುಂಬೈ ಹತ್ಯಾಕಾಂಡಕ್ಕೂ ‘ಮುಂಬೈ ಗಲಭೆ’ ಎಂಬ ಹೆಸರನ್ನೇ ನೀಡಲಾಗಿದೆ. ಒಂದು ವೇಳೆ, ಈ ಎಲ್ಲ ಗಲಭೆ ಅಥವಾ ಹತ್ಯಾಕಾಂಡಗಳಲ್ಲಿ ಮೃತಪಟ್ಟವರು, ಗಾಯಗೊಂಡವರು ಮತ್ತು ನಿರಾಶ್ರಿತರಾದವರ ಪಟ್ಟಿಯನ್ನೊಮ್ಮೆ ಪರಿಶೀಲಿಸಿದರೆ, ರಾಜಪ್ರಭುತ್ವವನ್ನೂ ನಾಚಿಸುವ ಫಲಿತಾಂಶ ಲಭ್ಯವಾದೀತು. ಈ ಹಿಂದಿನ ರಾಜರುಗಳ ತಪ್ಪುಗಳನ್ನು ಉಲ್ಲೇಖಿಸಿಕೊಂಡು ಕೇವಲ 70 ವರ್ಷಗಳೊಳಗೆ ಇಷ್ಟು ದೊಡ್ಡ ಸಂತ್ರಸ್ತರ ಗುಂಪನ್ನು ತಯಾರಿಸಿಯೂ ಇನ್ನೂ ಅದರ ಪ್ರತೀಕಾರ ಮುಗಿದಿಲ್ಲವೆಂಬಂತೆ ಆಡುತ್ತಿರುವವರು ನಿಜಕ್ಕೂ ಏನನ್ನು ಬಯಸುತ್ತಿದ್ದಾರೆ? ತಾಜ್‍ಮಹಲ್ ಈಗಿನ ವಿವಾದ. ಸದ್ಯ ಮುಸ್ಲಿಮ್ ದೊರೆಗಳ ಕ್ರೌರ್ಯವನ್ನು ಪಟ್ಟಿ ಮಾಡುವುದು ಮತ್ತು ಅದರ ಹೊಣೆಯನ್ನು ಈಗಿನ ಮುಸ್ಲಿಮರು ಹೊರಬೇಕೆಂದು ಪರೋಕ್ಷವಾಗಿ ಆಜ್ಞಾಪಿಸುವ ಹೇಳಿಕೆಗಳು ಕೇಳಿಬರುತ್ತಿವೆ. ನಿಜಕ್ಕೂ, ತಾಜ್‍ಮಹಲ್ ಅನ್ನು ವಿವಾದಿತಗೊಳಿಸಿರುವುದಕ್ಕೆ ಕಾರಣ ಹಿಂದೂ ಹಿತಾಸಕ್ತಿಯೇ? ಅದನ್ನು ಕಟ್ಟಿಸಿದ್ದು ಷಹಜಹಾನ್. ಆತ ಬಲವಂತದಿಂದಲೇ ಆ ಭೂಮಿಯನ್ನು ಆಕ್ರಮಿಸಿ ತಾಜ್ ಕಟ್ಟಿದ ಎಂದೇ ಇಟ್ಟುಕೊಳ್ಳೋಣ. ಕೇವಲ ಕರ್ನಾಟಕವೊಂದರಲ್ಲೇ  ಡಿನೋಟಿಫಿಕೇಶನ್ ಮಾಡಿಕೊಂಡು ಭೂಮಿ ಹೊಡೆದ ರಾಜಕಾರಣಿಗಳ ಸಂಖ್ಯೆ ಎಷ್ಟಿಲ್ಲ? ಎಷ್ಟು ಶ್ರೀಮಂತರು ಬಡವರ ಭೂಮಿಯನ್ನು ಅಕ್ರಮಿಸಿ ಅನುಭವಿಸುತ್ತಿಲ್ಲ? ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಲ್ಲ? ಕೇವಲ ಕರ್ನಾಟಕದ ಸ್ಥಿತಿಯೇ ಹೀಗಿರುವಾಗ ಇನ್ನು ಇಡೀ ದೇಶಕ್ಕೆ ಸಂಬಂಧಿಸಿ ಹೇಳುವುದಕ್ಕೇನಿದೆ? ಪ್ರಜಾಪ್ರಭುತ್ವ ರಾಷ್ಟ್ರದಲ್ಲೇ  ಇಷ್ಟೆಲ್ಲ ಸಾಧ್ಯ ಎಂದಾದರೆ ಇನ್ನು ತಾನು ಹೇಳಿದ್ದೇ  ಶಾಸನ ಅನ್ನುವ ಕಾಲದಲ್ಲಿ ಬದುಕಿದ್ದ ಷಹಜಹಾನ್ ಏನು ಮಹಾ?
      ತಾಜ್‍ಮಹಲ್ ಅನ್ನು ವಿವಾದಾಸ್ಪದಗೊಳಿಸಿದವರು ಸದ್ಯ ಮಾಡಬೇಕಿರುವುದೇನೆಂದರೆ, ಪ್ರಜಾತಂತ್ರ ರಾಷ್ಟ್ರದಲ್ಲಿದ್ದೂ ಷಹಜಹಾನ್‍ನನ್ನೂ ಮೀರಿಸುವ ರೀತಿಯಲ್ಲಿ ಭೂಮಿ ಅಕ್ರಮಿಸಿ ಕೊಂಡಿರುವರಲ್ಲ, ಅವರನ್ನು ಮತ್ತು ಅವರು ಪ್ರತಿನಿಧಿಸುವ ಧರ್ಮವನ್ನು ಕಟಕಟೆಯಲ್ಲಿ ನಿಲ್ಲಿಸುವುದು. ಷಹಜಹಾನ್‍ನ ‘ತಪ್ಪಿಗೆ’ ಇಲ್ಲಿನ ಈಗಿನ ಮುಸ್ಲಿಮರನ್ನು ಹೇಗೆ ಹೊಣೆ ಮಾಡ ಲಾಗುತ್ತದೋ ಅದೇ ರೀತಿಯಲ್ಲಿ ಈ ಮಂದಿಯನ್ನು ಮತ್ತು ಅವರ ಧರ್ಮವನ್ನು ಹೊಣೆ ಮಾಡುವುದು. ಇನ್ನೊಂದು ಏನೆಂದರೆ, ಷಹಜಹಾನ್ ಈ ದೇಶದ ಸಂಪತ್ತನ್ನು ಲೂಟಿ ಮಾಡಿದ್ದರೆ ಅದು ರಾಜಪ್ರಭುತ್ವದ ಕಾಲದಲ್ಲಿ. ಆದರೂ ಅದು ತಪ್ಪೇ. ಆದರೆ, ಪ್ರಜಾತಂತ್ರ ಭಾರತದಲ್ಲಿ ಷಹಜಹಾನ್‍ನನ್ನೂ ಮೀರಿಸುವ ಪ್ರಮಾಣದಲ್ಲಿ ಈ ದೇಶದ ಸಂಪತ್ತನ್ನು ಲೂಟಿ ಮಾಡಿದವರಿದ್ದಾರಲ್ಲ, ಅವರನ್ನು ಮತ್ತು ಆ ಮೂಲಕ ಅವರ ಧರ್ಮಾನುಯಾಯಿಗಳನ್ನು ಸಾರ್ವತ್ರಿಕವಾಗಿ ಕಟಕಟೆಯಲ್ಲಿ ನಿಲ್ಲಿಸುವುದು. ಮುಸ್ಲಿಮರ ವಿರುದ್ಧ ಬಳಸುವ ಭಾಷೆ, ಆಕ್ರಮಣಕಾರಿ ಧೋರಣೆ, ವ್ಯಂಗ್ಯಗಳನ್ನು ಅವರ ಮೇಲೆ ಮತ್ತು ಅವರು ಪ್ರತಿನಿಧಿಸುವ ಧರ್ಮಾನುಯಾಯಿಗಳ ಮೇಲೆ ಬಳಸುವುದು. ಇದರ ಸಾಧ್ಯಾಸಾಧ್ಯತೆಯ ಮೇಲೆಯೇ ತಾಜ್ ವಿವಾದದ ಹಿತಾಸಕ್ತಿಯ ಪ್ರಶ್ನೆಯೂ ಪರಿಹಾರವಾಗುತ್ತದೆ. ಆದರೆ, ತಾಜ್ ಆಗಲಿ, ಬಾಬರಿ ಆಗಲಿ ಅಥವಾ ಮಥುರಾವೇ ಆಗಲಿ- ಬರೇ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಪ್ರಚೋದಿಸುವುದಕ್ಕೆ ಉಪಯೋಗಕ್ಕೀಡಾಗಿದೆಯೇ ಹೊರತು ಬೇರೇನಕ್ಕಲ್ಲ ಎಂಬುದು ಅತ್ಯಂತ ಸ್ಪಷ್ಟ. ದೊರೆಗಳ ತಪ್ಪುಗಳಿಗಿಂತ ಎಷ್ಟೋ ಪಟ್ಟು ಅಧಿಕ ಪ್ರಮಾಣದಲ್ಲಿ ತಪ್ಪು ಮಾಡಿದವರು ಈ ದೇಶದಲ್ಲಿ ಈಗ ಬದುಕುತ್ತಿದ್ದರೂ ಅವರನ್ನು ಮತ್ತು ಅವರು ಪ್ರತಿನಿಧಿಸುವ ಧರ್ಮವನ್ನು ಗುರಿಯಾಗಿಸಿ ಒಂದೇ ಒಂದು ಮಾತನ್ನೂ ಇಲ್ಲಿ ಆಡಲಾಗಿಲ್ಲ. ದೇಶದ ಸಂಪತ್ತನ್ನು ಲೂಟಿದವರು ಮತ್ತು ದೊರೆಗಳ ಕಾಲದ ಕ್ರೌರ್ಯಕ್ಕೆ ಸಮಗಟ್ಟುವಂತೆ ಕ್ರೌರ್ಯವೆಸಗಿ ದವರು ನಮ್ಮ ನಡುವೆ ಇದ್ದೂ ಅವರನ್ನು ವಿರೋಧಿಸುವು ದಾಗಲಿ ಅವರ ಧರ್ಮವನ್ನು ಅದಕ್ಕೆ ಹೊಣೆ ಮಾಡುವುದಾಗಲಿ ಎಂದೂ ನಡೆದಿಲ್ಲ. ಇದುವೇ ಈ ಎಲ್ಲ ವಿವಾದ, ಹೇಳಿಕೆ, ಚಳವಳಿಗಳ ಒಟ್ಟು ಸಾರಾಂಶವನ್ನು ಹೇಳುತ್ತದೆ. ಇವುಗಳ ಹಿಂದಿರುವುದು ಧರ್ಮ ಹಿತಾಸಕ್ತಿ ಅಲ್ಲ. ದೇಶಪ್ರೇಮವೂ ಅಲ್ಲ. ಬರೇ ರಾಜಕೀಯ ಹಿತಾಸಕ್ತಿ.
           ಒಂದು ವೇಳೆ ಷಹಜಹಾನ್ ಇವತ್ತು ಸಮಾಧಿಯಿಂದ ಎದ್ದು ಬಂದರೆ ಈ ಮಂದಿ ಆತನನ್ನು ತಮ್ಮ ಪಕ್ಷಕ್ಕೇ ಸೇರ್ಪಡೆ ಗೊಳಿಸಿಯಾರು.


Monday, October 23, 2017

ಕ್ರಿಸ್ಟಾಫ್‍ರ ಉತ್ತರ ಕೊರಿಯದಿಂದ ನಾಂದೇಡ್‍ನ ಭಾರತದ ವರೆಗೆ

        ಅಮೇರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಗಾರ ನಿಕೋಲಸ್ ಕ್ರಿಸ್ಟಾಫ್‍ರು (Nicholas Kristof) ಇತ್ತೀಚೆಗೆ ಉತ್ತರ ಕೊರಿಯಾಕ್ಕೆ ಭೇಟಿ ನೀಡಿ ಕಂಡುಕೊಂಡ ಅನುಭವಗಳು ಮತ್ತು ಕಳೆದವಾರ ಪ್ರಕಟವಾದ ಮಹಾರಾಷ್ಟ್ರದ ನಾಂದೇಡ್-ವಾಘಾಲ ಸಿಟಿ ಮುನ್ಸಿಪಲ್ ಕಾರ್ಪೋರೇಶನ್‍ಗೆ ನಡೆದ ಚುನಾ ವಣೆಯ ಫಲಿತಾಂಶಗಳ ನಡುವೆ ನೇರ ಸಂಬಂಧ ಇಲ್ಲದೇ ಇದ್ದರೂ ಇವೆರಡೂ ಯಾವುದೋ ಒಂದು ಬಿಂದುವಿನಲ್ಲಿ ಜೊತೆಗೂಡುವಂತೆ ಕಂಡವು. ಉತ್ತರ ಕೊರಿಯಕ್ಕೆ ಐದು ದಿನಗಳ ಭೇಟಿ ನೀಡಿರುವ ನಿಕೋಲಸ್ ಕ್ರಿಸ್ಟಾಫ್, ಆ ಕುರಿತಂತೆ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಸರಣಿ ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ Inside North Korea, and feeling the drums of war ಎಂಬುದೂ ಒಂದು. ಅದರಲ್ಲಿ ಉತ್ತರ ಕೊರಿಯದ ವಿವಿಧ ಅಧಿಕಾರಿಗಳು ಮತ್ತು ಜನರೊಂದಿಗೆ ನಡೆಸಿದ ವೀಡಿಯೋ ಸಂದರ್ಶನವೂ ಇದೆ. ಚಿತ್ರಗಳಿವೆ. ಇವನ್ನು ಓದುತ್ತಾ ಮತ್ತು ವೀಕ್ಷಿಸುತ್ತಾ ಹೋದಂತೆ ನನಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಭಕ್ತರು ನೆನಪಾದರು. ಭಕ್ತರು ಎಂಬ ಪದವನ್ನು ನಾನಿಲ್ಲಿ ಉದ್ದೇಶಪೂರ್ವಕವಾಗಿಯೇ ಬಳಸಿದ್ದೇನೆ. ಭಕ್ತರು ಮತ್ತು ಬೆಂಬಲಿಗರ ನಡುವೆ ಒಂದು ಸೂಕ್ಷ್ಮ ವ್ಯತ್ಯಾಸ ಇದೆ. ಭಕ್ತರು ಬದಲಾಗುವುದು ಕಡಿಮೆ. ಅಲ್ಲೊಂದು ಸ್ವಾಮಿನಿಷ್ಠೆಯಿದೆ. ಆ ನಿಷ್ಠೆ ಹೆಚ್ಚಿನ ಬಾರಿ ಎಷ್ಟು ಅಂಧವಾಗಿ ಇರುತ್ತದೆಂದರೆ, ವಾಸ್ತವವನ್ನೂ ಒಪ್ಪಿಕೊಳ್ಳದಷ್ಟು. ಆದರೆ ಬೆಂಬಲಿಗರು ಹಾಗಲ್ಲ. ಅವರ ಬೆಂಬಲವು ಸಂದರ್ಭ, ಸನ್ನಿವೇಶ ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಂಡು ಬದಲಾಗುತ್ತಲೇ ಇರುತ್ತದೆ. ನಿಕೋಲಸ್ ಕ್ರಿಸ್ಟಾಫ್‍ರ ಲೇಖನಗಳು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಹೊತ್ತಿನಲ್ಲೇ  ಮಹಾ ರಾಷ್ಟ್ರದ ನಾಂದೇಡ್ ಮುನ್ಸಿಪಲ್ ಕಾರ್ಪೋರೇಶನ್‍ಗೆ ನಡೆದ ಚುನಾವಣೆಯ ಫಲಿತಾಂಶಗಳೂ ಪ್ರಕಟವಾದುವು. ಅಚ್ಚರಿ ಏನೆಂದರೆ, ಒಟ್ಟು 81 ಸ್ಥಾನಗಳಲ್ಲಿ 73 ಸ್ಥಾನಗಳನ್ನು ‘ರಾಹುಲ್ ಗಾಂಧಿ’ಯ ಕಾಂಗ್ರೆಸ್ ಪಡೆದಿದೆ. ಬಿಜೆಪಿಗೆ ದಕ್ಕಿದ್ದು ಬರೇ 6. ಕಳೆದ ಚುನಾವಣೆಯಲ್ಲಿ 11 ಸ್ಥಾನಗಳನ್ನು ಪಡೆದಿದ್ದ ಓವೈಸಿಯ ಪಕ್ಪವು ಈ ಬಾರಿ ಶೂನ್ಯ ಸಾಧನೆಯನ್ನು ಮಾಡಿದೆ. ಅಂದ ಹಾಗೆ, 578 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದ, 60% ಮತದಾನವಾಗಿದ್ದ ಮತ್ತು ಚುನಾವಣಾ ಆಯೋಗವು ಮೊದಲ ಬಾರಿ 32 ವಾರ್ಡುಗಳಲ್ಲಿ VVPAT  (Voter verifiable paper audit trail )ಯನ್ನು ಅಳವಡಿಸಿದ್ದ ಚುನಾವಣೆ ಎಂಬ ನೆಲೆಯಲ್ಲಿ ಮಾತ್ರ ಈ ಫಲಿತಾಂಶ ಮುಖ್ಯವಲ್ಲ, ಈ ಹಿಂದೆ 16 ಮುನ್ಸಿಪಲ್ ಕಾರ್ಪೋರೇಶನ್‍ಗಳಿಗೆ ನಡೆದ ಚುನಾವಣೆಯಲ್ಲಿ 13ನ್ನು ಗೆದ್ದ ಬಿಜೆಪಿಯ ಫಡ್ನವಿಸ್ ಸರಕಾರಕ್ಕೆ ನೋಟ್ ನಿಷೇಧ ಮತ್ತು ಜಿಎಸ್‍ಟಿಯ ಬಳಿಕ ಎದುರಾದ ಮೊದಲ ಹಿನ್ನಡೆ ಎಂಬ ಕಾರಣಕ್ಕಾಗಿಯೂ ಮುಖ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 3 ವರ್ಷಗಳು ತುಂಬಿವೆ. ಅಧಿ ಕಾರ ನಡೆಸುವ ಪಕ್ಷ ಎಂಬ ನೆಲೆಯಲ್ಲಿ ಜನರು ಲೆಕ್ಕಾಚಾರ ನಡೆಸುವ ಸಂದರ್ಭ ಇದು. ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿಯವರು ಕೊಟ್ಟಿರುವ ಆಶ್ವಾಸನೆ, ಮೂಡಿಸಿದ ಭರವಸೆ ಮತ್ತು ಮಾತಿನ ವಾಗ್ವೈಖರಿಗಳನ್ನೆಲ್ಲ ಒಂದು ಕಡೆ ರಾಶಿ ಹಾಕಿ ಫಲಿತಾಂಶ ಹುಡುಕುವ ಸಮಯವೂ ಹೌದು. ನಾಂದೇಡ್ ನಗರ ಪಾಲಿಕೆಯ ಚುನಾವಣಾ ಫಲಿತಾಂಶವನ್ನು ಬಿಜೆಪಿ ಮತ್ತು ಅದರ ಬೆಂಬಲಿಗರು ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೋ ಅನ್ನುವ ಕುತೂಹಲವೊಂದು ಎಲ್ಲರಂತೆ ನನ್ನಲ್ಲೂ ಇತ್ತು. ಸಾಮಾನ್ಯವಾಗಿ ಆಡಳಿತ ಪಕ್ಷವು ಸ್ಥಳೀಯ ಚುನಾವಣೆಯಲ್ಲಿ ಮೇಲುಗೈ ಸಾಧಿಸುವುದೇ ಹೆಚ್ಚು. ನಾಂದೇಡ್‍ನಲ್ಲಂತೂ ಖುದ್ದು ಮುಖ್ಯಮಂತ್ರಿ ಫಡ್ನವಿಸ್‍ರೇ ರಾಲಿ ನಡೆಸಿದ್ದರು. ಸರಕಾರವೇ ಒಂದಷ್ಟು ದಿನ ನಾಂದೇಡ್‍ನಲ್ಲೇ ಠಿಕಾಣಿ ಹೂಡಿದಂಥ ವಾತಾವರಣವೂ ಸೃಷ್ಟಿಯಾಗಿತ್ತು. ಇಷ್ಟಿದ್ದೂ, ಕಳೆದ ಬಾರಿ ಅಧಿಕಾರವಿದ್ದೂ 40 ಸ್ಥಾನಗಳನ್ನಷ್ಟೇ ಪಡೆದಿದ್ದ ಕಾಂಗ್ರೆಸ್ ಈ ಬಾರಿ 73 ಸ್ಥಾನಗಳನ್ನು ಪಡೆದುದಕ್ಕೆ ಏನು ಕಾರಣ? ಇದು ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿಯುತ್ತಿರುವುದರ ಸೂಚನೆಯೇ? 2014ರ ಬಿಜೆಪಿ 2017ರ ಕೊನೆಯಲ್ಲಿ ಮಸುಕಾಗಲು ಪ್ರಾರಂಭಿಸಿತೇ? ದುರಂತ ಏನೆಂದರೆ, ಇಂಥದ್ದೊಂದು ಚರ್ಚೆಗೆ ಮುಖಾಮುಖಿಯಾಗುವುದಕ್ಕೇ ಬಿಜೆಪಿಯ ನಿಷ್ಠಾವಂತ ಬೆಂಬಲಿಗರು ಸಿದ್ಧರಾಗುತ್ತಿಲ್ಲ. ಉತ್ತರ ಕೊರಿಯಾದ ಈಗಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‍ರ ಬಗ್ಗೆ ಅಲ್ಲಿನ ಜನರ ಅಭಿಪ್ರಾಯಗಳು ಯಾವ ಮಾದರಿಯವೋ ಬಹುತೇಕ ಅವನ್ನೇ ಹೋಲುವಷ್ಟು ಅಂಧ ಅಭಿಮಾನವೊಂದು ಅವರಲ್ಲಿ ವ್ಯಕ್ತವಾಗುತ್ತಿದೆ. ಅಲ್ಲಿನ ಸರ್ಕಾರಿ ಮಾಧ್ಯಮಗಳು ಕಿಮ್ ಜಾಂಗ್ ಉನ್‍ರನ್ನು ಅಪ್ರತಿಮ ಬುದ್ಧಿಮತ್ತೆಯುಳ್ಳವ, ಸೇನಾ ಚತುರ, ಸರಿಸಾಟಿಯಿಲ್ಲದ ಶೂರ ಮತ್ತು ಅದ್ವಿತೀಯ ನಾಯಕತ್ವ ಕೌಶಲ ಇರುವವ (The state media are worshipful about his brilliant intelligence, military acumen, matchless courage , and outstanding art of command ..) ಎಂದು ಹೊಗಳುತ್ತಿವೆ ಎಂದು ನಿಕೋಲಸ್ ಕ್ರಿಸ್ಟಾಫ್ ಹೇಳುತ್ತಾರೆ. ಒಂದು ವೇಳೆ ಕ್ರಿಸ್ಟಾಫ್‍ರು ಭಾರತಕ್ಕೆ ಭೇಟಿ ನೀಡಿರುತ್ತಿದ್ದರೆ ಕೊರಿಯದ ಸರಕಾರಿ ಮಾಧ್ಯಮದ ಕೆಲಸವನ್ನು ಇಲ್ಲಿನ ಖಾಸಗಿ ಮಾಧ್ಯಮಗಳು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ ಎಂದು ಬರೆಯುತ್ತಿದ್ದರೋ ಏನೋ. ಇಡೀ ಕೊರಿಯಾದಲ್ಲಿ ಜನರು ಅಧ್ಯಕ್ಷ ಕಿಮ್ ಜಾಂಗ್ ಉನ್‍ರ ಬಗ್ಗೆ ಅವಾಸ್ತವಿಕ ಮತ್ತು ಅಪೌರುಶೇಯ ಭ್ರಮೆಯಲ್ಲಿ ಮುಳುಗಿ ಹೋಗಿದ್ದಾರೆ. ಉನ್‍ರು ಅಮೇರಿಕವನ್ನು ಚಿಂದಿ ಉಡಾಯಿಸುವ ಕನಸನ್ನು ಅವರು ಕಾಣುತ್ತಿದ್ದಾರೆ. ಸೇನಾ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಅಲ್ಲಿ ಪ್ರತಿದಿನ ಪಥಸಂಚಲನ ನಡೆಸುತ್ತಾರೆ ಮತ್ತು ಅಮೇರಿಕವನ್ನು ಖಂಡಿಸುತ್ತಾರೆ ಎಂದು ಕ್ರಿಸ್ಟಾಫ್ ಬರೆಯುತ್ತಾರೆ. ಉತ್ತರ ಕೊರಿಯಾದ ಕ್ಷಿಪಣಿ ಅಮೇರಿ ಕಕ್ಕೆ ಅಪ್ಪಳಿಸಿ ರಾಷ್ಟ್ರಧ್ವಜವನ್ನು ಧ್ವಂಸ ಮಾಡುವ ಭಿತ್ತಿ ಚಿತ್ರ ಗಳು ರಸ್ತೆಯಂಚಿನಲ್ಲಿವೆ. ಕ್ಷಿಪಣಿಗಳ ಚಿತ್ರಗಳು ಅಲ್ಲಿನ ಶಿಶು ವಿಹಾರ ಮೈದಾನಗಳಲ್ಲಿ, ಪ್ರದರ್ಶನ ತಾಣಗಳಲ್ಲಿ, ಟಿ.ವಿ.ಗಳಲ್ಲಿ ರಾರಾಜಿಸುತ್ತಿವೆ ಎನ್ನುತ್ತಾರೆ ಕ್ರಿಸ್ಟಾಫ್. ಅಮೇರಿಕವನ್ನು ತೀವ್ರವಾಗಿ ವಿರೋಧಿಸುವ ವಾತಾವರಣವೊಂದು ಉತ್ತರ ಕೊರಿಯದಲ್ಲಿದೆ. ಅದನ್ನು ಅತ್ಯಂತ ಬುದ್ಧಿವಂತಿಕೆಯಿಂದ ಅಲ್ಲಿನ ನಾಯಕತ್ವ ಜೀವಂತವಾಗಿಯೂ ಇಡುತ್ತಿದೆ. ಅಮೇರಿಕ ವಿರೋಧಿ ಮನೋ ಭಾವವನ್ನು ಅಲ್ಲಿ ಎಲ್ಲಿಯ ವರೆಗೆ ಬೆಳೆಸಲಾಗಿದೆ ಎಂಬುದಕ್ಕೆ ಒಟ್ಟೋ ವರ್‍ಂಬಿಯರ್ (Votto Warmbier) ಎಂಬ 22ರ ಅಮೇರಿಕನ್ ವಿದ್ಯಾರ್ಥಿಯೇ ಉದಾಹರಣೆ. ಉತ್ತರ ಕೊರಿಯಾಕ್ಕೆ ಭೇಟಿ ನೀಡುವುದಕ್ಕೆ ಅಮೇರಿಕದಲ್ಲಿ ನಿರ್ಬಂಧವಿದೆ. ಈ ಕಾರಣದಿಂದಾಗಿ ಒಟ್ಟೋ ವರ್‍ಂಬಿಯರ್ ಚೀನಾದ ಮೂಲಕ ಉತ್ತರ ಕೊರಿಯಾಕ್ಕೆ 2015ರ ಕೊನೆಯಲ್ಲಿ ತೆರಳುತ್ತಾನೆ. ಆದರೆ ಆತನನ್ನು ಯಾಂಗೂನ್ ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗು ತ್ತದೆ. ಶತ್ರು ಕಾಯ್ದೆಯಡಿ ಕೇಸು ದಾಖಲಾಗುತ್ತದೆ. ಇದಾದ ಎರಡು ತಿಂಗಳ ಬಳಿಕ ಭಿತ್ತಿ ಚಿತ್ರವೊಂದನ್ನು ಕದ್ದ ಆರೋಪದಲ್ಲಿ 15 ವರ್ಷಗಳ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆತನ ಬಗ್ಗೆ ನಡೆದ ಒಂದು ಗಂಟೆಯ ವಿಚಾರಣೆಯನ್ನು ಅಲ್ಲಿನ ಟಿ.ವಿ.ಯಲ್ಲಿ ಬಿತ್ತರಿಸಲಾಗುತ್ತದೆ. ಆತ ಕಣ್ಣೀರಿನೊಂದಿಗೆ ತಪ್ಪೊಪ್ಪಿಕೊಳ್ಳುವ ದೃಶ್ಯ ಪ್ರಸಾರವಾಗುತ್ತದೆ. ಇದಾಗಿ 17 ತಿಂಗಳ ಬಳಿಕ ಕಳೆದ ಜೂನ್‍ನಲ್ಲಿ ಆತನನ್ನು ಬಹುತೇಕ ನಿರ್ಜೀವ ಸ್ಥಿತಿಯಲ್ಲಿ ಅಮೇರಿಕಕ್ಕೆ ಮರಳಿಸಲಾಗುತ್ತದೆ ಮತ್ತು ಇದಾಗಿ ಒಂದೇ ವಾರದೊಳಗೆ ಆತ ಸಾವಿಗೀಡಾಗುತ್ತಾನೆ. ಆತನ ಮೆದುಳಿಗೆ ಆಘಾತವಾಗಿರುವುದು ಮತ್ತು ಕಳೆದ ಒಂದು ವರ್ಷದಿಂದ ಆತ ಕೋಮಾದಲ್ಲಿರುವುದೂ ಬೆಳಕಿಗೆ ಬರುತ್ತದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕೊರಿಯಾದ ಅಧಿಕಾರಿಗಳು ಯಾವ ಬೇಸರವನ್ನೂ ವ್ಯಕ್ತಪಡಿಸದಿರುವುದನ್ನು ಅತ್ಯಂತ ಅಚ್ಚರಿಯಿಂದ ಕ್ರಿಸ್ಟಾಫ್ ಬರೆಯುತ್ತಾರೆ. ಆತನ ಚಿಕಿತ್ಸೆಗೆ ವೆಚ್ಚ ಮಾಡಿ ದುದನ್ನು ಅಮೇರಿಕ ಮರಳಿಸಬೇಕು ಎಂಬ ರೀತಿಯ ಅಲ್ಲಿನ ಅಧಿಕಾರಿಗಳ ವಾದಕ್ಕೆ ಚಕಿತರಾಗುತ್ತಾರೆ. ನಿಜವಾಗಿ ಇದೊಂದು ರೀತಿಯ ಭ್ರಮೆ. ವ್ಯವಸ್ಥೆಯೊಂದು ಜನರನ್ನು ಎಷ್ಟರ ಮಟ್ಟಿಗೆ ತೀವ್ರವಾದಿಗಳಾಗಿಸಬಹುದು ಅನ್ನುವುದಕ್ಕೆ ಉದಾಹರಣೆ. ನಮ್ಮಲ್ಲೇ  ಗೌರಿ ಲಂಕೇಶ್‍ರ ಹತ್ಯೆಗೆ, ಅನಂತಮೂರ್ತಿ, ಕಲ್ಬುರ್ಗಿಯವರ ಹತ್ಯೆಗೆಲ್ಲ ವ್ಯಕ್ತವಾದ ಪ್ರತಿಕ್ರಿಯೆಗಳನ್ನೊಮ್ಮೆ ಅವಲೋಕಿಸಿಕೊಳ್ಳಿ. ಭಿತ್ತಿಪತ್ರವನ್ನು ಕದ್ದ ವ್ಯಕ್ತಿಯನ್ನು ಜೀವಚ್ಛವವಾಗಿ ಮಾಡಿದುದರ ಬಗ್ಗೆ ಪಶ್ಚಾತ್ತಾಪಪಡದ ಮತ್ತು ಚಿಕಿತ್ಸೆಗೆ ಮಾಡಿದ ವೆಚ್ಚದ ಬಗ್ಗೆ ಚಿಂತಿತರಾದ ಉತ್ತರ ಕೊರಿಯನ್ನರಿಗೆ ಹೋಲುವ ರೀತಿಯಲ್ಲಿ ಇಲ್ಲೂ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತಲ್ಲವೇ? ಆ ಪ್ರತಿಕ್ರಿಯೆಗಳ ಮೂಲ ಎಲ್ಲಿತ್ತು? ಪ್ರತಿಕ್ರಿಯಿಸಿದವರು ಯಾರ ಬೆಂಬಲಿಗರಾಗಿದ್ದರು? ಈ ದೇಶದವರೇ ಆದ ಆದರೆ ಪ್ರಧಾನಿ ಮೋದಿಯವರ ವಿಚಾರಧಾರೆಯನ್ನು ಒಪ್ಪದ ಕನ್ಹಯ್ಯ, ಹಾರ್ದಿಕ್ ಪಟೇಲ್, ಜಿಗ್ನೇಶ್, ಪ್ರಕಾಶ್ ರೈ ಅವರ ಬಗ್ಗೆ ಇಲ್ಲಿ ವ್ಯಕ್ತವಾಗುತ್ತಿರುವ ವಿರೋಧಗಳು ಯಾವ ಮಟ್ಟಿನವು? ಒಟ್ಟೋನ ಮೇಲೆ ಶತ್ರು ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿದಂತೆಯೇ ಕನ್ಹಯ್ಯನ ಮೇಲೆ ದೇಶದ್ರೋಹಿ ಕಾಯ್ದೆಯಡಿ ಕೇಸು ದಾಖಲಿಸಲಾಯಿತು. ಮಾತ್ರವಲ್ಲ, ಒಂದಿಡೀ ಮಾಧ್ಯಮ ಗುಂಪು ಆತನ ಮೇಲೆ ಎರಗಿತು. ಬಿಜೆಪಿ ಪ್ರಣೀತ ವಿಚಾರಧಾರೆಯನ್ನೇ ಏಕೈಕ ಮತ್ತು ಪರ್ಯಾಯವಿಲ್ಲದ ವಿಚಾರಧಾರೆಯಾಗಿ ಮಂಡಿಸಲು ಅವೆಲ್ಲ ಹೆಣಗಿದುವು. ಉತ್ತರ ಕೊರಿಯಾದಲ್ಲಿ ಅಮೇರಿಕದ ವಿರುದ್ಧ ಯಾವ ಬಗೆಯ ಅಭಿಪ್ರಾಯವನ್ನು ರೂಪಿಸಲಾಗಿದೆಯೋ ಪ್ರಜಾತಂತ್ರ ಭಾರತದಲ್ಲೂ ಬಿಜೆಪಿ ವಿಚಾರಧಾರೆಯೇ ಸರಿ ಮತ್ತು ಪರಿಪೂರ್ಣ ಎಂಬ ಧಾಟಿಯಲ್ಲಿ ಮಾಧ್ಯಮಗಳ ಒಂದು ಗುಂಪು ಅತ್ಯಂತ ಪ್ರಬಲವಾಗಿ ವಾದಿಸಿತು. ವಿರೋಧಿ ಧ್ವನಿಯನ್ನು ಮೆಟ್ಟುವ ಪ್ರಯತ್ನ ನಡೆಯಿತು. ಆದರೆ,
ನಾಂದೇಡ್ ನಗರ ಪಾಲಿಕಾ ಚುನಾವಣೆಯ ಫಲಿತಾಂಶವು ಈ ವಿಚಾರಧಾರೆಯ ಪ್ರಭಾವ ಕುಸಿಯುತ್ತಿರುವುದನ್ನು ಸೂಚಿಸು ವಂತಿದೆ. ಕಳೆದ 3 ವರ್ಷಗಳಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದ ವಿಚಾರ ಧಾರೆಗೆ ಎದುರಾದ ಪ್ರಬಲ ಸವಾಲು ಇದು. ವ್ಯಕ್ತಿ ವರ್ಚಸ್ಸು ಎಂಬುದು ಸರ್ವಾಧಿಕಾರಿ ಪ್ರಭುತ್ವವೊಂದರಲ್ಲಿ ಸದಾ ಕಾಯ್ದುಕೊಳ್ಳಬಹುದಾದ ಸಂಗತಿಯೇ ಹೊರತು ಪ್ರಜಾತಂತ್ರ ರಾಷ್ಟ್ರದಲ್ಲಲ್ಲ. ಪ್ರಜಾತಂತ್ರ ರಾಷ್ಟ್ರದಲ್ಲಿ ವ್ಯಕ್ತಿ ವರ್ಚಸ್ಸು ಒಂದು ಹಂತವನ್ನು ದಾಟಿದ ಬಳಿಕ ಸವಾಲಿಗೆ ಮುಖಾಮುಖಿಯಾಗಲೇ ಬೇಕಾಗುತ್ತದೆ. ಆ ಮುಖಾಮುಖಿಯಲ್ಲಿ ಗೆಲುವು ಪಡೆಯಬೇಕಾದರೆ ಸಾಧನೆ ಇರಬೇಕಾಗುತ್ತದೆ. ಜನಸ್ನೇಹಿಯಾಗಿ ಗುರುತಿಸಿರಬೇಕಾಗುತ್ತದೆ. ಕೃತಿಯಲ್ಲಿ ಜನರ ಹೃದಯವನ್ನು ತಟ್ಟಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ 3 ವರ್ಷಗಳು ಪ್ರಧಾನಿ ಮೋದಿಯವರನ್ನು ಅವರ ವ್ಯಕ್ತಿ ವರ್ಚಸ್ಸು ಗೆಲ್ಲಿಸುತ್ತಾ ಬಂತು. ಆದರೆ ಈ ಗೆಲುವನ್ನು ಆ ಪಕ್ಷ ತಪ್ಪಾಗಿ ಅರ್ಥೈಸಿತೋ ಎಂಬ ಅನುಮಾನವನ್ನು ನಾಂದೇಡ್ ಫಲಿತಾಂಶವು ಮುಂದಿಡುತ್ತಿದೆ. ಅಷ್ಟಕ್ಕೂ, ಸ್ಥಳೀಯ ಚುನಾವಣೆಯ ಮೇಲೆ ಸ್ಥಳೀಯವಾದ ಅಂಶಗಳು ಮತ್ತು ರಾಜ್ಯ ಸರಕಾರದ ನೀತಿಗಳು ಪ್ರಭಾವ ಬೀರಿರುತ್ತವೆಯೇ ಹೊರತು ಕೇಂದ್ರ ಸರಕಾರದ್ದಲ್ಲ ಎಂದು ವಾದಿಸಬಹುದು. ಬಾಹ್ಯನೋಟಕ್ಕೆ ಅದು ಸರಿಯೆಂದೂ ಅನಿಸಬಹುದು. ಆದರೆ ಇವತ್ತು ಈ ದೇಶದಲ್ಲಿ ಪಂಚಾಯತಿ ಚುನಾವಣೆಯಿಂದ ಹಿಡಿದು ಸಂಸತ್ ಚುನಾವಣೆಯ ವರೆಗೆ ಬಿಜೆಪಿ ಮತ ಯಾಚಿಸುವುದೇ ಪ್ರಧಾನಿ ನರೇಂದ್ರ ಮೋದಿಯವರನ್ನು ಎದುರಿಟ್ಟುಕೊಂಡು. ಅವರ ಹೊರತಾಗಿ ಅದಕ್ಕೆ ವಿಷಯಗಳೂ ಇಲ್ಲ. ಸಾಧನೆಗಳೂ ಇಲ್ಲ. ಆದ್ದರಿಂದಲೇ ನಾಂದೇಡ್ ಫಲಿತಾಂಶ ಮುಖ್ಯವಾಗುವುದು. ಏನೇ ಆಗಲಿ,
    ಭಾರತ ಭ್ರಮೆಯಿಂದ ಕಳಚಿಕೊಳ್ಳುತ್ತಿದೆ. ಭ್ರಮೆಯಲ್ಲಿರುವ ಮಂದಿ ಈ ಬದಲಾವಣೆಯನ್ನು ಒಪ್ಪಿಕೊಂಡರೂ ಇಲ್ಲದಿದ್ದರೂ..

ಬ್ಲ್ಯಾಕ್ ಶರ್ಟ್ಸ್ ಗೆ ಪರ್ಯಾಯವೇ ಈ ಜಾಕೆಟ್?

     ಇಟಲಿಯ ಬರಹಗಾರ್ತಿ ಇಗೆನಿಯ ಪೌಲಿಸೆಲ್ಲಿಯವರು ತಮ್ಮ ‘ಇನ್ ಫ್ಯಾಶನ್ ಅಂಡರ್ ಫ್ಯಾಸಿಸಂ: ಬಿಯಾಂಡ್ ದಿ ಬ್ಲ್ಯಾಕ್ ಶರ್ಟ್’ ಎಂಬ ಬಹುಚರ್ಚಿತ ಕೃತಿಯಲ್ಲಿ ಫ್ಯಾಸಿಸಂನ ಕುರಿತಂತೆ ಒಳನೋಟವನ್ನು ಹರಿಸಿದ್ದಾರೆ. ಇಟಲಿಯ ಉಡುಪು ವಿನ್ಯಾಸಗಳು ಹೇಗೆ ಫ್ಯಾಸಿಸಂನಿಂದ ಪ್ರಭಾವಿತವಾಗಿವೆ ಎಂಬುದನ್ನು ಪ್ರಸಿದ್ಧ ಉಡುಪು ವಿನ್ಯಾಸಕಾರ ಫರ್ನಾಂಡೋ ಗಟ್ಟಿನೋನಿ ಮತ್ತು ಮೈಕಲ್ ಫಂಟಾನಾ ಅವರ ಜೊತೆ ನಡೆಸಿದ ಮಾತುಕತೆಯಿಂದಲೂ ಅವರು ಹೆಕ್ಕಿ ತೋರಿಸಿದ್ದಾರೆ. ಇಟಲಿಯ ಪ್ರಸಿದ್ಧ ಬಟ್ಟೆ ಬ್ರಾಂಡ್‍ಗಳಾದ Gucci, Max, Mara, Prada.. ಮುಂತಾದುವುಗಳಲ್ಲಿ ಅವರು ಫ್ಯಾಸಿಸಂನ ಛಾಯೆಯನ್ನು ಹುಡುಕಿದ್ದಾರೆ. ಚರ್ಚೆಗೊಡ್ಡಿದ್ದಾರೆ. ಅಂದಹಾಗೆ, ಅವರು ಬಟ್ಟೆಯ ಮೇಲೆ ಇಂಥದ್ದೊಂದು ಪತ್ತೆ ಕಾರ್ಯ ನಡೆಸುವುದಕ್ಕೆ ಪ್ರಮುಖ ಕಾರಣ ಇದೆ. ಅದೆಂದರೆ ಮುಸೊಲೋನಿ. 1920ರ ದಶಕದಲ್ಲಿ ಮುಸೊಲೋನಿ ಇಟಲಿಯ ಮೇಲೆ ಪ್ರಾಬಲ್ಯ ಸ್ಥಾಪಿಸಿದ್ದ. ಆತ ಅತ್ಯುತ್ತಮ ಮಾತುಗಾರ. ಸಂಘಟಕ. ಆತನ ‘ರಾಷ್ಟ್ರೀಯ ಫ್ಯಾಸಿಸ್ಟ್ ಪಾರ್ಟಿ’ಯ ಸ್ವಯಂ ಸೇವಕರನ್ನು ಬ್ಲ್ಯಾಕ್‍ ಶರ್ಟ್ಸ್ ಎಂದು ಕರೆಯಲಾಗುತ್ತಿತ್ತು. ಕಪ್ಪು ಶರ್ಟು ಅವರ ಸಮವಸ್ತ್ರ. ಮುಸೊಲೋನಿ ನಿರ್ಗಮಿಸಿದ್ದರೂ ಆತನ ವಿಚಾರಧಾರೆಯ ಕುರುಹು ಈಗಿನ ಬಟ್ಟೆ ವಿನ್ಯಾಸಗಳಲ್ಲಿ ಗೋಚರಿಸುತ್ತವೆ ಎಂಬುದು ಇಗೊನಿಯರ ಅಭಿಪ್ರಾಯ. ನಿಜವಾಗಿ, ಫ್ಯಾಸಿಸಂ ಎಂಬುದು ಒಂದು ವಿಚಾರಧಾರೆ. ಅದಕ್ಕೆ ಶಾಶ್ವತ ಅಳಿವು ಎಂಬುದಿಲ್ಲ. ಆ ವಿಚಾರಧಾರೆಗೆ ಅಧಿಕಾರ ಕೈ ತಪ್ಪಿ ಹೋದ ತಕ್ಷಣ ಅದರ ನಿಧನ ವಾರ್ತೆಯನ್ನು ಶಾಶ್ವತಗೊಳಿಸಬೇಕಾದ ಅಗತ್ಯವೂ ಇಲ್ಲ. ಅದು ವಿವಿಧ ರೀತಿಯಲ್ಲಿ ಪುಟಿಯಲು ಸಿದ್ಧವಾಗುತ್ತಲೇ ಇರುತ್ತದೆ. ಉಡುಪು ಅದರ ಬಹು ದೊಡ್ಡ ಮಾಧ್ಯಮ. ಉಡುಪಿಗೆ ಅದ್ಭುತ ಸಾಮರ್ಥ್ಯ ಇದೆ. ಅದು ಸಮಾಜವನ್ನು ಆಕರ್ಷಿಸುತ್ತದೆ. ಒಂದು ಫ್ಯಾಶನ್ ಸಮಾಜದ ಭಾಗವಾಗುವುದೆಂದರೆ, ಅದು ಬರೇ ಫ್ಯಾಶನ್‍ಗೇ ಸೀಮಿತಗೊಳ್ಳುವುದಿಲ್ಲ. ಆ ಫ್ಯಾಶನ್ ಏನನ್ನು ಅಭಿವ್ಯಕ್ತಿಸುತ್ತದೋ ಅದನ್ನು ಅದರ ಗ್ರಾಹಕರು ಪ್ರತಿನಿಧಿಸುತ್ತಾರೆ. ಖಾಕಿ ಬಟ್ಟೆಯು ಹೊರನೋಟಕ್ಕೆ ಬರೇ  ಒಂದು ಉಡುಪು ಮಾತ್ರ. ಹಾಗಂತ, ಆ ಉಡುಪನ್ನು ಎಲ್ಲರೂ ಧರಿಸುವುದಿಲ್ಲ. ಸಾಮಾನ್ಯವಾಗಿ ಪೊಲೀಸರು ಖಾಕಿಯನ್ನು ಧರಿಸುತ್ತಾರೆ. ಖಾಕಿಗೂ ಪೊಲೀಸರಿಗೂ ನಡುವೆ ಸಂಬಂಧ ಎಷ್ಟು ಪ್ರಬಲವಾಗಿದೆಯೆಂದರೆ, ಬಟ್ಟೆಯಂಗಡಿಯಲ್ಲಿ ಅಪ್ಪಿ-ತಪ್ಪಿ ವಿತರ ಕರು ಖಾಕಿಯನ್ನು ತೋರಿಸಿದರೆ, ‘ನಾನು ಪೊಲೀಸ್ ಇಲಾಖೆ ಯಲ್ಲಿ ಇಲ್ಲ’ ಎಂಬ ಉತ್ತರವನ್ನು ಗ್ರಾಹಕರು ಕೊಡುವುದಿದೆ. ಖಾಕಿ ಎಂದರೆ ಪೊಲೀಸ್ ಇಲಾಖೆ ಎಂದಾಗಿದೆ. ಪೊಲೀಸರು ಯಾರೆಂದರೆ, ಒಂದು ನಿರ್ದಿಷ್ಟ ಕಾನೂನನ್ನು ಮತ್ತು ಸಂವಿಧಾನ ವನ್ನು ಪ್ರತಿನಿಧಿಸುವವರು. ಪೊಲೀಸರಿಂದ ಕಾನೂನು ಭಂಗ ವಾಗಿ ಬಿಟ್ಟರೆ ಸಮಾಜ ಅದನ್ನು ಬಹಳ ದೊಡ್ಡ ಅನ್ಯಾಯವಾಗಿ ಪರಿಗಣಿಸುತ್ತದೆ. ಅದೇ ಕಾನೂನುಭಂಗವನ್ನು ಓರ್ವ ಸಾಮಾನ್ಯ ನಾಗರಿಕ ಮಾಡಿದರೆ ಅದು ಅಷ್ಟು ಸುದ್ದಿಯಾಗುವುದಿಲ್ಲ. ಇದಕ್ಕಿರುವ ಕಾರಣ ಏನೆಂದರೆ, ಪೊಲೀಸರು ಧರಿಸುವ ಖಾಕಿ ಬಟ್ಟೆಯು ಬರೇ ಸಮವಸ್ತ್ರವಷ್ಟೇ ಅಲ್ಲ, ಒಂದು ನಿರ್ದಿಷ್ಟ ವಿಚಾರಧಾರೆ ಅಥವಾ ನಿಯಮ ಸಂಹಿತೆಯನ್ನು ಅದು ಪ್ರತಿಬಿಂಬಿಸುತ್ತದೆ. ಇಟಲಿಯ Gucci, Max, Mara, Prada.. ಬ್ರಾಂಡುಗಳಲ್ಲಿ ಮುಸೊಲೋನಿಯ ಫ್ಯಾಸಿಸ್ಟ್ ವಿಚಾರಧಾರೆಯ ಪ್ರಭಾವವಿದೆ ಎಂಬ ಇಗೆನಿಯರ ಮಾತು ಮುಖ್ಯವಾಗುವುದು ಇಲ್ಲೇ. ಮುಸೊಲೋನಿ ತನ್ನ ಬ್ಲ್ಯಾಕ್ ಶರ್ಟ್ಸ್ ನ ಬೆಂಬಲಿಗರಿಂದ ಇಟಲಿಯಾದ್ಯಂತ ಪೆರೇಡ್ ನಡೆಸುತ್ತಿದ್ದ. ಆತನ ಸುತ್ತ-ಮುತ್ತ ಇದ್ದುದು ಬ್ಲ್ಯಾಕ್ ಶರ್ಟ್‍ಗಳೇ. ಅವನ ಬೆಂಬಲಿಗರು ಬ್ಲ್ಯಾಕ್ ಶರ್ಟ್ ಧರಿಸುವುದನ್ನು ಫ್ಯಾಶನ್ ಆಗಿಸಿಕೊಳ್ಳತೊಡಗಿದರು. ಇಟಲಿಯ ಎಲ್ಲೆಡೆಗೂ ಬ್ಲ್ಯಾಕ್ ಹರಡತೊಡಗಿತು. ನಿಜವಾಗಿ, ಕಪ್ಪು ಎಂಬುದು ಮುಸೊಲೋನಿಯ ವಿಚಾರಧಾರೆಯನ್ನು ಪ್ರತಿನಿಧಿಸುವ ಬಣ್ಣ. ರಸ್ತೆಯಲ್ಲಿ ನೂರೋ ಸಾವಿರವೋ ಮಂದಿ ಶಿಸ್ತುಬದ್ಧವಾಗಿ ಕಪ್ಪು ಸಮವಸ್ತ್ರದೊಂದಿಗೆ ನಡೆಯುವುದೆಂದರೆ, ಅದು ಬರೇ ನಡತೆಯಷ್ಟೇ ಆಗಿರುವುದಿಲ್ಲ. ಆ ಶಿಸ್ತು ಮತ್ತು ಸಮವಸ್ತ್ರವು ಸಮಾಜದಲ್ಲಿ ಭಯ ಮತ್ತು ಬಲವಂತದ ಮೌನವನ್ನು ಉತ್ಪಾದಿಸುತ್ತದೆ. ಹಿಟ್ಲರ್ ಕೂಡ ಕಪ್ಪನ್ನು ಸಮವಸ್ತ್ರವನ್ನಾಗಿ ಬಳಸಿಕೊಂಡಿದ್ದ. ಆ ಸಮವಸ್ತ್ರದಲ್ಲಿ ಪೆರೇಡನ್ನೂ ನಡೆಸುತ್ತಿದ್ದ. ಸಮಾಜದ ಮೇಲೆ ಪ್ರಭಾವ ಬೀರುವುದಕ್ಕೆ ಇಟಲಿ ಮತ್ತು ಜರ್ಮನಿಯ ಫ್ಯಾಸಿಸ್ಟ್ ವಿಚಾರಧಾರೆಗಳು ಪ್ರಮುಖ ಮಾಧ್ಯಮವಾಗಿ ಬಳಸಿಕೊಂಡದ್ದೇ ಬಟ್ಟೆಯನ್ನು. ಸದ್ಯ ಪ್ರಧಾನಿ ನರೇಂದ್ರ ಮೋದಿಯವರು ಇಂಥದ್ದೊಂದು ಪ್ರಯತ್ನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಂತಿದೆ. ‘ಮೋದಿ ಜಾಕೆಟ್’ (MJ) ಎಂಬುದು ಅವರ ಬೆಂಬಲಿಗರ ನೆಚ್ಚಿನ ವಿನ್ಯಾಸವಾಗತೊಡಗಿದೆ. ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‍ರೂ ಮೋದಿ ಜಾಕೆಟ್ ಧರಿಸುವವರಲ್ಲಿ ಓರ್ವರು ಎಂಬುದೇ ಅದು ಬರೇ ಫ್ಯಾಶನ್ ಅಲ್ಲ ಎಂಬುದಕ್ಕಿರುವ ಪುರಾವೆಯಾಗಿದೆ. ಜಾಕೆಟ್ ಒಂದು ವಿಚಾರಧಾರೆಯ ಪ್ರತಿನಿಧಿ. ನರೇಂದ್ರ ಮೋದಿಯವರೇ ಆ ವಿಚಾರಧಾರೆ. ದೇಶದ ಪ್ರತಿ ನಗರ, ಗ್ರಾಮ ಮತ್ತು ಹಳ್ಳಿ ಪ್ರದೇಶಗಳಲ್ಲಿ ಮೋದಿ ಜಾಕೆಟ್  ಜನಪ್ರಿಯವಾಗುವುದನ್ನು ಕಲ್ಪಿಸಿಕೊಳ್ಳಿ. ಪ್ರತಿ ಹೆಣ್ಣು ಮತ್ತು ಗಂಡು ತಮ್ಮ ಬಟ್ಟೆಗೆ ಮೇಲುಡುಗೆಯಾಗಿ ಜಾಕೆಟ್ ಧರಿಸುವ ಸಂದರ್ಭವನ್ನೊಮ್ಮೆ ಊಹಿಸಿ. ಒಂದು ವ್ಯಕ್ತಿತ್ವ ಮತ್ತು ಒಂದು ವಿಚಾರಧಾರೆಯನ್ನು ಪ್ರತಿಷ್ಠಾಪಿಸುವುದಕ್ಕೆ ಸುಲಭ ದಾರಿಯಿದು. ಇತ್ತೀಚೆಗೆ ಬರೋಡಾಕ್ಕೆ ಕಾರ್ಯನಿಮಿತ್ತ ಹೋಗಿದ್ದ ಪ್ರೊಫೆಸರ್ ಸದಾನಂದ ಮೇನನ್ ಅವರು ಈ ಆತಂಕವನ್ನು ತೋಡಿಕೊಂಡಿದ್ದರು. ಬರೋಡದ ಎಲ್ಲೆಡೆಯೂ ಮೋದಿ ಜಾಕೆಟ್ ರಾರಾಜಿಸುತ್ತಿದೆ ಎಂದವರು ಹೇಳಿದ್ದರು. ಪ್ರತಿ ಅಂಗಡಿ, ಮನೆ, ರಸ್ತೆ, ಪಾರ್ಕ್, ಮೈದಾನ, ಚೌಕಿ ಎಲ್ಲೆಂದರಲ್ಲಿ ಮೋದಿ ಜಾಕೆಟ್ ತುಂಬಿ ಹೋಗಿರುವುದನ್ನು ಹಂಚಿಕೊಂಡಿದ್ದರು. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮೋದಿಯವರು ದೇಶವನ್ನುದ್ದೇಶಿಸಿ ಮಾತಾಡುವಾಗ ಧರಿಸಿದ್ದ ಉಡುಪು ವಿಶಿಷ್ಟವಾಗಿತ್ತು. ಅಂಥ ಉಡುಪನ್ನು ಈ ಹಿಂದಿನ ಪ್ರಧಾನಿಗಳಾರೂ ಧರಿಸಿರಲಿಲ್ಲ. ಈ ಹಿಂದಿನ ಎಲ್ಲ ಪ್ರಧಾನಿಗಳಿಗಿಂತಲೂ ವಿಭಿನ್ನವಾಗಿ ಅವರು  ಕೆಂಪು ಕೋಟೆಯಿಂದ ಜನರೊಂದಿಗೆ ಮಾತಾಡಿದರು. ಪ್ರಧಾನಿಯವರ ಸ್ವಾತಂತ್ರ್ಯೋತ್ಸವದ ಭಾಷಣ ಎಂದ ತಕ್ಷಣ ಮೋದಿಯವರ ಮುಖಕ್ಕಿಂತಲೂ ಮೊದಲು ಅವರ ತಲೆಯ ಮುಂಡಾಸು ಮತ್ತು ಅದರ ಬಣ್ಣ ಎದುರು ಬರುತ್ತದೆ. ಉಳಿದ ಪ್ರಧಾನಿಗಳ ಮಟ್ಟಿಗೆ ಅವರ ಮುಖವೇ ಅವರ ಗುರುತು. ಮೋದಿಯವರ ಮಟ್ಟಿಗೆ ಅವರ ಉಡುಪೇ ಅವರ ಗುರುತು. ಇಟಲಿಯ ಮುಸೊಲೋನಿಯಿಂದ ಅತ್ಯಂತ ಹೆಚ್ಚು ಪ್ರಭಾವಿತ ಗೊಂಡ ಸಂಘಟನೆ ಎಂಬ ನೆಲೆಯಲ್ಲಿ ಆರೆಸ್ಸೆಸ್‍ನ ಸಮವಸ್ತ್ರವನ್ನು ಇಲ್ಲಿ ಎತ್ತಿಕೊಳ್ಳಬಹುದು. ನಿರ್ದಿಷ್ಟ ಸಮವಸ್ತ್ರ ಮತ್ತು ಶಿಸ್ತಿನೊಂದಿಗೆ ಅದು ಪೆರೇಡ್ ನಡೆಸುತ್ತದೆ. ಖಾಕಿ ಚಡ್ಡಿ, ಬಿಳಿ ಶರ್ಟು ಮತ್ತು ಟೊಪ್ಪಿ ಧರಿಸಿದವರನ್ನು ಸಾಮಾನ್ಯ ಜನರೂ ಆರೆಸ್ಸೆಸ್ಸಿನವರಾಗಿ ಪರಿಗಣಿಸುತ್ತಾರೆ. ಅದು ಎಷ್ಟರ ಮಟ್ಟಿಗೆ ಆ ಸಂಘಟನೆಯ ಬ್ರ್ಯಾಂಡ್ ಆಗಿಬಿಟ್ಟಿದೆಯೆಂದರೆ, ಆರೆಸ್ಸೆಸ್ಸಿ ಗನಲ್ಲದವನನ್ನೂ ಆ ಉಡುಪು ಆರೆಸ್ಸೆಸ್ಸಿಗನನ್ನಾಗಿ ಮಾಡಿಸುತ್ತದೆ. ನಿಜವಾಗಿ, ಖಾಕಿ ಮತ್ತು ಬಿಳಿ ಬಣ್ಣಗಳು ಹಲವು ಬಣ್ಣಗಳಲ್ಲಿ ಒಂದು ಬಣ್ಣವೇ ಹೊರತು ಅದಕ್ಕೆ ಇನ್ನಾವ ವೈಶಿಷ್ಟ್ಯವೂ ಇಲ್ಲ. ಆದರೆ ಇದನ್ನು ನಿರ್ದಿಷ್ಟ ಆಕಾರದಲ್ಲಿ ಮತ್ತು ನಿರ್ದಿಷ್ಟ ವಿನ್ಯಾಸದೊಂದಿಗೆ ಧರಿಸುವಾಗ ಅದೊಂದು ವಿಚಾರಧಾರೆಯಾಗಿ ಮಾರ್ಪಡುತ್ತದೆ.
      ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಖಾದಿ ಮತ್ತು ಬಿಳಿ ಟೋಪಿಗೆ ಬಹು ಬೇಡಿಕೆಯಿತ್ತು. ಭಾರತೀಯರು ಭಾರೀ ಸಂಖ್ಯೆಯಲ್ಲಿ ಅದನ್ನು ಧರಿಸಿದರು. ಅದನ್ನು ವಿಮೋಚನೆ ಮತ್ತು ಸ್ವಾಭಿಮಾನದ ಸಂಕೇತವಾಗಿ ಬಳಸಿದರು. ಆ ಸಮಯದಲ್ಲಿ ಅದು ಫ್ಯಾಶನ್ ಆಗಿತ್ತು. ಅದೊಂದು ವಿಮೋಚನಾ ವಿಚಾರಧಾರೆ. ಅದರಲ್ಲಿ ಮನುಷ್ಯ ವಿರೋಧಿಯಾದ ಯಾವುದನ್ನೂ ಯಾರೂ ಕಂಡಿರಲಿಲ್ಲ. ಇವತ್ತಿಗೂ ಸರಕಾರಗಳು ಖಾದಿ ಬಟ್ಟೆಯನ್ನು ಜನಪ್ರಿಯಗೊಳಿಸಲು ಪ್ರಯ ತ್ನಿಸುತ್ತಿವೆ. ಆದರೆ ಮೋದಿಯವರ ಜಾಕೆಟ್‍ಗೆ ಇಂಥದ್ದೊಂದು ಹಿನ್ನೆಲೆ ಇದೆಯೇ? ಅವರು ಬೆಳೆದು ಬಂದ ಸಂಘಟನೆಯ ವಿಚಾರಧಾರೆಯು ಈ ದೇಶದ ಬಹುತ್ವಕ್ಕೆ ಅಪಾಯಕಾರಿ ಎಂಬ ನಿಲುವು ಬಹುಸಂಖ್ಯಾತ ಜನರಲ್ಲಿದೆ. ನರೇಂದ್ರ ಮೋದಿಯವರ ನಿಲುವೂ ಅನೇಕ ಬಾರಿ ಈ ದೇಶದಲ್ಲಿ ಪ್ರಶ್ನಾರ್ಹಗೊಂಡಿದೆ. ಬಹುತ್ವವನ್ನು ಒಪ್ಪದ ಮತ್ತು ಫ್ಯಾಸಿಸ್ಟ್ ವಿಚಾರಧಾರೆಯನ್ನು ಪ್ರತಿನಿಧಿಸುವ ಧಾಟಿಯಲ್ಲೇ ಅವರು ಮಾತು, ಪ್ರತಿಕ್ರಿಯೆಗಳಿರುತ್ತವೆ. ಆದ್ದರಿಂದಲೇ ಅವರ ಜಾಕೆಟ್ ಆರೆಸ್ಸೆಸ್‍ನ ಸಮವಸ್ತ್ರಕ್ಕೆ ಹತ್ತಿರವಾಗಬಹುದೇ ಹೊರತು ಸ್ವಾತಂತ್ರ್ಯ ಹೋರಾಟದ ಖಾದಿ, ಬಿಳಿ ಟೋಪಿಗಲ್ಲ. ಇಂದಿನ ಸಮಾಜಕ್ಕೆ ಪ್ರಧಾನಿ ನರೇಂದ್ರ ಮೋದಿ ಯಾರು ಮತ್ತು ಮೋದಿ ಜಾಕೆಟ್ ಏನು ಅನ್ನುವುದು ಗೊತ್ತು. ಆದರೆ ಮೋದಿಯನ್ನು ನೋಡೇ ಇಲ್ಲದ ಮುಂದಿನ ತಲೆಮಾರಿನ ಪಾಲಿಗೆ ಜಾಕೆಟ್ ಎಂಬುದು ಮೋದಿಯವರನ್ನು ನೆನಪಿಸುವ ಒಂದು ಸ್ಮರಣಿಕೆ. ಜಾಕೆಟ್ ಒಂದು ಫ್ಯಾಶನ್ ಆಗಿ ಸಮಾಜದಲ್ಲಿ ಚಲಾವಣೆಯಲ್ಲಿರುವುದೆಂದರೆ, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಆ ವಿಚಾರಧಾರೆಯನ್ನು ಚಲಾವಣೆಯಲ್ಲಿ ಇಟ್ಟಂತೆ ಆಗುತ್ತದೆ. ಆ ಜಾಕೆಟ್ ಅನ್ನು ಧರಿಸುವ ಹೆಣ್ಣು ಮತ್ತು ಗಂಡು ಮೋದಿ ಯನ್ನು ನೆನಪಿಸಿಕೊಳ್ಳುವುದಕ್ಕೆ ಅವಕಾಶ ಒದಗುತ್ತದೆ. ಬಟ್ಟೆ ಅಂಗಡಿಗೆ ತೆರಳಿ ಮೋದಿ ಜಾಕೆಟ್ ಕೊಡಿ ಎಂದು ಕೇಳುವಾಗ ಜಾಕೆಟ್ ಮಾತ್ರ ಮಾರಾಟವಾಗುವುದಲ್ಲ, ಮೋದಿಯೂ ಮಾರಾಟವಾಗುತ್ತಾರೆ. ಹಾಗೆ ಜಾಕೆಟ್ ಖರೀದಿಸಿದವರಲ್ಲಿ ಮತ್ತು ಅದನ್ನು ಖರೀದಿಸದಿದ್ದರೂ ಅದನ್ನು ಧರಿಸಿದವರನ್ನು ನೋಡಿದವರಲ್ಲಿ ಮೋದಿಯವರ ಬಗ್ಗೆ ಕುತೂಹಲ ಹುಟ್ಟಬಾರದೆಂದೇನಿಲ್ಲ. ಗಾಂಧಿ ಟೋಪಿ ಧರಿಸಿದವರಲ್ಲಿ ಗಾಂಧಿಯ ಬಗ್ಗೆ ಹೇಗೆ ಜಿಜ್ಞಾಸೆ ಮೂಡಬಹುದೋ ಹಾಗೆಯೇ ಇದು. ಆ ಕುತೂಹಲ ಕೊನೆಗೆ ಮೋದಿಯವರ ಬಗ್ಗೆ ತಿಳಿದುಕೊಳ್ಳುವುದಕ್ಕೂ ಅವರನ್ನು ಬೆಳೆಸಿದ ಸಂಘಟನೆಯ ವಿಚಾರಧಾರೆಯನ್ನು ಅಧ್ಯಯನ ನಡೆಸುವುದಕ್ಕೂ ಕಾರಣವಾಗಬಹುದು. ಒಂದು ವಿಚಾರಧಾರೆಯನ್ನು ಜನರ ಬಳಿಗೆ ತಲುಪಿಸುವ ಬುದ್ಧಿವಂತಿಕೆಯ ವಿಧಾನ ಇದು. ಮೋದಿ ಜಾಕೆಟ್ ಅನ್ನು ಧರಿಸಿದ ಗುಜರಾತ್‍ನ ಒಂದು ಡಜನ್‍ನಷ್ಟು ಸಚಿವರು ಒಟ್ಟಾಗಿ ನಿಂತಿರುವ ಫೋಟೋವನ್ನು ಬರೋಡ ಭೇಟಿಯ ವೇಳೆ ದಿನ ಪತ್ರಿಕೆಯೊಂದರಲ್ಲಿ ತಾನು ನೋಡಿರುವುದಾಗಿ ಪ್ರೊಫೆಸರ್ ಸದಾನಂದ ಮೆನನ್ ಹೇಳಿಕೊಂಡಿದ್ದರು. ಜಾಕೆಟ್ ಬರೇ ಮೋದಿಯವರ ಖಾಸಗಿ ಉಡುಪಾಗಿಯಷ್ಟೇ ಪರಿಗಣಿತವಾಗಿಲ್ಲ ಎಂಬುದಕ್ಕೆ ಪುರಾವೆ ಇದು. ಬಿಜೆಪಿ ಇದನ್ನು ರಾಜಕೀಯವಾಗಿ ಪ್ರತಿಷ್ಠಾಪಿಸಬಯಸಿದೆ. ತನ್ನ ವಿಚಾರಧಾರೆಯನ್ನು ಜಾಕೆಟ್‍ನ ಮೂಲಕ ಹಂಚಬಯಸಿದೆ. ಆದ್ದರಿಂದಲೇ ಇದು ಆತಂಕಕಾರಿ.

Saturday, October 21, 2017

ದಡ್ಡುಗಟ್ಟಿದ ಮನಸ್ಸಿನ ಸಂಕೇತವೇ ಆ ಫಾರ್ವರ್ಡ್?

      ಹೆಚ್ಚಿನೆಲ್ಲ ಪತ್ರಿಕೆಗಳು ಪ್ರಕಟಿಸಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪೈಪೋಟಿಯಿಂದ ಹಂಚಿಕೆಯಾದ ವೀಡಿಯೋವೊಂದನ್ನು ವೀಕ್ಷಿಸಿದೆ. ಪಶ್ಚಿಮ ಬಂಗಾಲದ ಬಿಜೆಪಿ ನಾಯಕ ದಿಲೀಪ್ ಘೋಷ್‍ರನ್ನು ಹಿಗ್ಗಾ-ಮುಗ್ಗಾ ಥಳಿಸುವ ವೀಡಿಯೋ ಅದು. ಗುಂಪೊಂದು ಈ ನಾಯಕನನ್ನು ಅಟ್ಟಾ ಡಿಸಿಕೊಂಡು ಹೊಡೆಯುತ್ತದೆ. ಒದೆಯುತ್ತದೆ. ಥಳಿಸುತ್ತದೆ. ಮುಷ್ಠಿಯಿಂದ ಗುದ್ದುತ್ತದೆ. ಗುಂಪಿನ ನಡುವೆ ಅಸಹಾಯಕನಾದ ದಿಲೀಪ್ ಘೋಷ್‍ರು ಕುಸಿದು ಬೀಳುತ್ತಾರೆ. ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸುತ್ತಾರೆ. ಇಲಿಯೊಂದು ಬೆಕ್ಕಿನ ಕೈಗೆ ಸಿಕ್ಕರೆ ಹೇಗೆ ಚಡಪಡಿಸಬಹುದೋ ಅಂಥದ್ದೊಂದು ಸನ್ನಿವೇಶ ಅಲ್ಲಿ ನಿರ್ಮಾಣವಾಗುತ್ತದೆ. ಸಿನಿಮಾ ಶೈಲಿಯಲ್ಲಿ ಓಡಿ ಬಂದು ಜಂಪ್ ಮಾಡಿ ಒದೆಯುವ ಘಟನೆಯೂ ನಡೆಯುತ್ತದೆ. ಒಂದು ವೇಳೆ, ಈ ವೀಡಿಯೋವನ್ನು ದಿಲೀಪ್ ಘೋಷ್‍ರ ಮಕ್ಕಳು, ಪತ್ನಿ, ತಾಯಿ, ತಂದೆ ನೋಡಿದರೆ ಏನನಿಸಬಹುದು? ಅವರ ಪ್ರತಿಕ್ರಿಯೆ ಹೇಗಿರಬಹುದು? ಅಪ್ಪ ನಡುಬೀದಿಯಲ್ಲಿ ಯಾರದೋ ಕೈಯಲ್ಲಿ ಥಳಿಸಿಕೊಳ್ಳುವುದನ್ನು ಮಕ್ಕಳಿಂದ ಸಹಿಸಿಕೊಳ್ಳಲು ಸಾಧ್ಯವೇ? ಒಂದು ಕುಟುಂಬದ ಸದಸ್ಯ ಅವಮಾನಿತ ಆಗುವುದೆಂದರೆ, ಅದು ಆತನೊಬ್ಬನ ಅವಮಾನವಷ್ಟೇ ಆಗುವು ದಲ್ಲ. ಆತನೊಂದಿಗೆ ಸಂಬಂಧ ಇರುವ ಎಲ್ಲರ ಅವಮಾನ ವಾಗಿಯೂ ಪರಿವರ್ತಿತವಾಗುತ್ತದೆ. ಅಪ್ಪ ಸದಾ ಮಕ್ಕಳ ಪಾಲಿಗೆ ಗೌರವಾನ್ವಿತ ವ್ಯಕ್ತಿತ್ವ. ಆ ವ್ಯಕ್ತಿತ್ವವನ್ನು ಹಾಗೆ ನೋಡು ವುದೇ ಮಕ್ಕಳ ಪಾಲಿನ ಹೆಮ್ಮೆ. ತುಂಬಿದ ಸಭೆಯಲ್ಲಿ ಮಕ್ಕಳು ಹೊಗಳಿಕೆಗೋ ಬಹುಮಾನಕ್ಕೋ ಅರ್ಹವಾಗುವುದು ಅಪ್ಪನ ಪಾಲಿಗೆ ಹೇಗೆ ಹೆಮ್ಮೆಯ ಸಂಗತಿಯೋ ಅಪ್ಪ ಹಾಗೆ ಗುರು ತಿಸಿಕೊಳ್ಳುವುದು ಮಕ್ಕಳ ಪಾಲಿಗೂ ಹೆಮ್ಮೆ. ಆದ್ದರಿಂದಲೋ ಏನೋ ಇಬ್ಬರ ನಡುವೆ ಜಗಳ ನಡೆಯುವ ಸಂದರ್ಭದಲ್ಲಿ ವಿನಿಮಯವಾಗುವ ಕೆಟ್ಟ ಬೈಗುಳಗಳು ಹೆತ್ತವರನ್ನೇ ಕೇಂದ್ರೀಕರಿಸಿರುತ್ತವೆ. ‘ನನ್ನನ್ನು ಏನು ಬೇಕಾದರೂ ಅನ್ನು, ಆದರೆ ಹೆತ್ತವ ರನ್ನು ಏನಾದರೂ ಅಂದರೆ ಸುಮ್ಮನಿರಲ್ಲ’ ಎಂಬ ಮಾತು ಸಾಮಾನ್ಯವಾಗಿ ಸಿನಿಮಾಗಳಲ್ಲೂ ಅದರ ಹೊರಗೂ ಕೇಳಿ ಬರುವುದಿದೆ. ಇಂಥದ್ದೊಂದು ಗೌರವಾನ್ವಿತ ವ್ಯಕ್ತಿತ್ವ ನಡುಬೀದಿಯಲ್ಲಿ ಅವಮಾನಕ್ಕೊಳಗಾಗುವುದನ್ನು ಯಾವ ಮಗು ತಾನೇ ಸಹಿಸಿಕೊಂಡೀತು? ಈ ಪ್ರಶ್ನೆ ಕೇವಲ ದಿಲೀಪ್ ಘೋಷ್‍ರಿಗೆ ಸಂಬಂಧಿಸಿ ಮಾತ್ರ ಕೇಳಬೇಕಾದುದಲ್ಲ. ಹೀಗೆ ಎಲ್ಲರೆದುರೇ ಅವಮಾನಿತರಾದ ಮತ್ತು ಅವಮಾನಿತರಾಗುತ್ತಲೇ ಸಾವಿಗೀಡಾದ ಹಲವರ ಪಟ್ಟಿ ನಮ್ಮೆಲ್ಲರ ಮುಂದಿದೆ. ಹೈನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಹರ್ಯಾಣದ ಪೆಹ್ಲೂಖಾನ್ ಎಂಬ 50ರ ಆಸುಪಾಸಿನ ವ್ಯಕ್ತಿ ಗುಂಪಿನಿಂದ ಥಳಿತಕ್ಕೊಳಗಾಗಿ ಅಸಹಾಯಕರಾಗಿ ಬೀದಿಯಲ್ಲಿ ಬೀಳುವ ವೀಡಿಯೋವನ್ನು ಬಹುತೇಕರು ವೀಕ್ಷಿಸಿರಬಹುದು. ಅಖ್ಲಾಕ್ ಎಂಬ ವೃದ್ಧನನ್ನು ಉತ್ತರ ಪ್ರದೇಶದಲ್ಲಿ ಗುಂಪೊಂದು ಥಳಿಸಿ ಕೊಲ್ಲುವ ವೀಡಿಯೋವೂ ಬಹುತೇಕ ವೈರಲ್ ಆಗಿತ್ತು. ಇಂಥದ್ದು ಅನೇಕ ಇವೆ. ನೈತಿಕ ಪೊಲೀಸ್‍ಗಿರಿಯ ಹೆಸರಲ್ಲಿ ನಡೆದ ಹಲವು ಥಳಿತದ ವೀಡಿಯೋಗಳು ಅನೇಕರ ಮೊಬೈಲ್ ಗ್ಯಾಲರಿಯಲ್ಲಿ ಈಗಲೂ ಇದ್ದಿರಬಹುದು. ಗೂಗಲ್‍ನಿಂದ ಹೆಕ್ಕಿ ಈಗಲೂ ಇಂಥವುಗಳನ್ನು ರವಾನಿಸುವವರೂ ಇದ್ದಾರೆ. ದಿಲೀಪ್ ಘೋಷ್‍ರನ್ನು ಥಳಿಸುವ ವೀಡಿಯೋವು ನಾನಿರುವ ಅನೇಕಾರು ವಾಟ್ಸಾಪ್ ಗ್ರೂಪ್‍ಗಳಲ್ಲಿ ಮತ್ತೆ ಮತ್ತೆ ಪ್ರತ್ಯಕ್ಪವಾಗುತ್ತಿರುವುದನ್ನು ನೋಡಿ ನೋಡಿ ನಾನು ಒಂದು ರೀತಿಯಲ್ಲಿ ಕಂಗಾಲಾದೆ. ನನ್ನನ್ನು ಮತ್ತೆ ಮತ್ತೆ ಪ್ರಶ್ನೆಗಳು ಕಾಡಿದುವು. ಓರ್ವ ಗೌರವಾನ್ವಿತ ವ್ಯಕ್ತಿ ನಡು ಬೀದಿಯಲ್ಲಿ ಥಳಿತಕ್ಕೊಳಗಾಗುವುದು ಯಾವ ಕೆಟಗರಿಯಲ್ಲಿ ಬರುತ್ತದೆ? ಮನೋರಂಜನೆ, ಅಪರಾಧ, ಹಂಚಿಕೊಳ್ಳಬಾರದ, ವೀಕ್ಷಿಸಬಾರದ.. ಇವುಗಳಲ್ಲಿ ಯಾವ ಕೆಟಗರಿ? ಇದು ಎಲ್ಲರೂ ವೀಕ್ಷಿಸಬೇಕಾದ ಮತ್ತು ಒಬ್ಬರಿಂದೊಬ್ಬರಿಗೆ ಹಂಚಿಕೆ ಮಾಡಬೇಕಾದ ವೀಡಿಯೋ ಹೌದೇ? ಇದನ್ನು ವೀಕ್ಷಿಸಿದ ಬಳಿಕ ವೀಕ್ಪಕನ ಮನಸ್ಸಿನಲ್ಲಿ ಉದ್ಭವವಾಗುವ ಭಾವ ಯಾವುದು? ತೃಪ್ತಿಯೇ, ಅತೃಪ್ತಿಯೇ, ಖುಷಿಯೇ, ಸಿಟ್ಟೇ, ನೋವೇ? ಹಾಗಂತ, ದಿಲೀಪ್ ಘೋಷ್‍ರು ನಾಗರಿಕ ಜಗತ್ತಿನಲ್ಲಿ ಬದುಕದ ಮತ್ತು ಕಾಡಿನಲ್ಲೋ ಇನ್ನೆಲ್ಲೋ  ಭೂಗತರಾಗಿ ಬದುಕುವ ವೀರಪ್ಪನ್ನೋ ದಾವೂದ್ ಇಬ್ರಾಹೀಮೋ ಏನೂ ಅಲ್ಲ. ಅವರ ವಿಚಾರಧಾರೆ, ಚಟುವಟಿಕೆ, ರಾಜಕೀಯ ಕಾರ್ಯ ವಿಧಾನಗಳ ಮೇಲೆ ಅನೇಕರಿಗೆ ಅಸಮಾಧಾನ ಇರಬಹುದು. ಇದು ಅಸಹಜ ಅಲ್ಲ. ಪ್ರಜಾ ತಂತ್ರ ರಾಷ್ಟ್ರವೊಂದರಲ್ಲಿ ಪ್ರತಿಯೊಬ್ಬರಿಗೂ ಭಿನ್ನ ವಿಚಾರಧಾರೆ ಯನ್ನು ಹೊಂದುವ, ವ್ಯಕ್ತಪಡಿಸುವ ಮತ್ತು ಅದರಂತೆ ಬದು ಕುವ ಪೂರ್ಣ ಸ್ವಾತಂತ್ರ್ಯ ಇದೆ. ಅದು ಸಂವಿಧಾನ ವಿರೋಧಿಯಾಗಬಾರದು ಎಂಬುದಷ್ಟೇ ಇಲ್ಲಿರುವ ಷರತ್ತು. ದಿಲೀಪ್ ಘೋಷ್‍ರ ವಿಚಾರಧಾರೆಯನ್ನು ಮತ್ತು ಅವರು ಗುರುತಿಸಿಕೊಂಡಿರುವ ಬಿಜೆಪಿಯನ್ನು ಪ್ರಶ್ನಿಸುವುದಕ್ಕೆ ಈ ದೇಶದಲ್ಲಿ ಅನೇಕರು ಸಂವಿಧಾನಬದ್ಧ ದಾರಿಗಳಿವೆ. ವೇದಿಕೆಗಳಿವೆ.
      ಪಶ್ಚಿಮ ಬಂಗಾಲದ ಡಾರ್ಜಿಲಿಂಗ್‍ನಲ್ಲಿ ಗೋರ್ಖಾಲ್ಯಾಂಡ್ ಜನಮುಕ್ತಿ ಮೋರ್ಚಾವು (GJM) ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಸೆ. 26ರಂದು ಕೈ ಬಿಟ್ಟಿತ್ತು. ಸತತ 104 ದಿನಗಳ ವರೆಗೆ ಸಾಗಿದ ಈ ಪ್ರತಿಭಟನೆಯಿಂದ ಉಎಒ ಹಿಂದೆ ಸರಿಯಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮನವಿ ಕಾರಣ ವಾಗಿತ್ತು. ಪಶ್ಚಿಮ ಬಂಗಾಲದಲ್ಲಿ ಬೇರು ಬಿಡಲು ವಿವಿಧ ಕಸರತ್ತುಗಳನ್ನು ನಡೆಸುತ್ತಿರುವ ಬಿಜೆಪಿಯು ಈ ಬೆಳವಣಿಗೆಯನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಲು ತೀರ್ಮಾನಿಸಿತು. ದಿಲೀಪ್ ಘೋಷ್ ನೇತೃತ್ವದ ಒಂದು ನಿಯೋಗವು GJM ಗುಂಪಿನೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ಅಕ್ಟೋಬರ್ 4ರಂದು ದಾರ್ಜಿಲಿಂಗ್‍ಗೆ ಭೇಟಿ ಕೊಟ್ಟಿತು. ದಾರ್ಜಿಲಿಂಗ್‍ನ ಚೌಕ್ ಬಝಾರ್‍ನಲ್ಲಿ GJM ಬೆಂಬಲಿಗರೊಂದಿಗೆ ಬಿಜೆಪಿ ರಾಲಿ ನಡೆಸಿತು. ಮಾತ್ರವಲ್ಲ, ಗೋರ್ಖಾ ದುಃಖ್ ನಿವಾರಕ್ ಸಭಾಂಗಣದಲ್ಲಿ ‘ವಿಜಯ ಸಮ್ಮಿಲನ ಸಭೆ’ಯನ್ನು ಏರ್ಪಡಿಸಿತು. ಈ ಸಮಯದಲ್ಲಿ GJM ಅನ್ನು ವಿರೋಧಿಸುವ ಗುಂಪೊಂದು ಈ ಸಭೆಗೆ ಅಡ್ಡಿಪಡಿಸಿದೆ. ಕಾರ್ಯಕ್ರಮವನ್ನೇ ರದ್ದುಗೊಳಿಸಬೇಕಾದಷ್ಟು ಪ್ರಬಲವಾಗಿ ವಿರೋಧಿ ಗುಂಪು ಪ್ರತಿಭಟನೆ ನಡೆಸಿದೆ. ಸಭಾಂಗಣದಿಂದ ಹೊರಬಂದ ದಿಲೀಪ್ ಘೋಷ್‍ರನ್ನು ಗುಂಪು ಥಳಿಸಿದೆ. ಹಾಗಂತ, ನಾವು ಈ ಚರ್ಚೆಯನ್ನು ದಿಲೀಪ್ ಘೋಷ್‍ರಿಂದ ಆರಂಭಿಸಿ ಅವರಲ್ಲಿಗೇ ಕೊನೆ ಗೊಳಿಸಬೇಕಾದ ಅಗತ್ಯ ಇಲ್ಲ. ರಾಜಸ್ತಾನದಿಂದ ತನ್ನ ಮನೆಗೆ ಆಕಳುಗಳನ್ನು ಕೊಂಡೊಯ್ಯುತ್ತಿದ್ದ ಹೈನು ಕೃಷಿಕ ಪೆಹ್ಲೂಖಾನ್ ರನ್ನೂ ದಿಲೀಪ್ ಘೋಷ್‍ರ ಸ್ಥಾನದಲ್ಲಿ ಇರಿಸಿ ನೋಡಬಹುದು. ದಿಲೀಪ್ ಘೋಷ್‍ರಿಗೆ ದಾರ್ಜಿಲಿಂಗ್‍ನಲ್ಲಿ ಸಭೆ ನಡೆಸುವ ಮತ್ತು ತನ್ನ ವಿಚಾರವನ್ನು ಹೇಳಿಕೊಳ್ಳುವ ಸ್ವಾತಂತ್ರ್ಯ ಎಷ್ಟು ಇದೆಯೋ ಅಷ್ಟೇ ಸ್ವಾತಂತ್ರ್ಯ ಮತ್ತು ಅರ್ಹತೆ ಪೆಹ್ಲೂಖಾನ್‍ಗೂ ಇತ್ತು. ಅವರು ಕಾನೂನುಬದ್ಧವಾಗಿಯೇ ಆಕಳನ್ನು ಸಾಗಿಸುತ್ತಿದ್ದರು. ಥಳಿಸಲು ಬಂದ ಗುಂಪಿಗೆ ಅಧಿಕೃತ ದಾಖಲೆಗಳನ್ನು ತೋರಿಸಿಯೂ ಇದ್ದರು. ನನಗೆ ದಿಲೀಪ್ ಘೋಷ್‍ರ ವೀಡಿಯೋವನ್ನು ನೋಡನೋಡುತ್ತಾ ಪೆಹ್ಲೂಖಾನ್‍ರ ವೀಡಿಯೋ ನೆನಪಿಗೆ ಬಂತು. ಇಬ್ಬರೂ ಅಸಹಾಯಕರು. ಕಾನೂನಿನ ಪ್ರಕಾರ ಯಾವ ಅಪರಾಧವನ್ನು ಮಾಡಿರದೇ ಇದ್ದರೂ ಇಬ್ಬರೂ ನಡುಬೀದಿಯಲ್ಲಿ ಅವಮಾನಕ್ಕೆ ಒಳಗಾದರು. ಇಲ್ಲಿ ಎರಡು ಪ್ರಮುಖ ವಿಷಯಗಳಿವೆ.
1. ಈ ವೀಡಿಯೋವನ್ನು ಇತರರಿಗೆ ಹಂಚುವ ಗುಂಪು
2. ಇದನ್ನು ಅನುಭವಿಸುವ ಗುಂಪು
     ಪೆಹ್ಲೂಖಾನ್‍ರ ಥಳಿತ ಮತ್ತು ಹತ್ಯೆಗೆ ಸಂಬಂಧಿಸಿ ವ್ಯಕ್ತವಾದ ಪ್ರತಿಕ್ರಿಯೆಗಳಲ್ಲಿ ಎರಡು ರೀತಿಯದ್ದಿದ್ದುವು. ಒಂದು- ಥಳಿತವನ್ನು ಪರೋಕ್ಷವಾಗಿ ಸಮರ್ಥಿಸುವ ಧಾಟಿಯದ್ದಾದರೆ ಇನ್ನೊಂದು ಖಂಡಿಸುವ ಧಾಟಿಯವು. ಪೆಹ್ಲೂಖಾನ್‍ರನ್ನು ದನಕಳ್ಳ ಎಂದು ಸುಳ್ಳು ಸುಳ್ಳೇ ಕರೆದು, ದೇಶದಲ್ಲಿ ಪ್ರತಿದಿನ ಕಳ್ಳತನವಾಗುತ್ತಿರುವ ಗೋಸಂಕುಲಗಳ ಪಟ್ಟಿ ಮಾಡಿ, ಕಸಾಯಿ ಖಾನೆಗಳ ಸಂಖ್ಯೆಯಲ್ಲಿ ವಿವರಿಸಿ, ಕೊನೆಗೆ ಅತ್ತ ಖಂಡನೆಯನ್ನೂ ವ್ಯಕ್ತಪಡಿಸದೇ ಇತ್ತ ಥಳಿತವನ್ನೂ ಹೊಗಳದೇ ಗೋಹತ್ಯೆ ನಿಷೇ ಧಕ್ಕೆ ಕರೆಕೊಡುವ ರೀತಿಯಲ್ಲಿ ಒಂದು ವರ್ಗದ ಪ್ರತಿಕ್ರಿಯೆ ಬಹುತೇಕ ಮುಕ್ತಾಯಗೊಂಡಿತ್ತು. ಅಂಥ ಪ್ರತಿಕ್ರಿಯೆಗಳನ್ನು ಗಮನವಿಟ್ಟು ಓದಿದರೆ ಪೆಹ್ಲೂಖಾನ್‍ರದ್ದೇ ತಪ್ಪು ಎಂದು ಅಂತಿಮ ನಿರ್ಧಾರಕ್ಕೆ ಯಾರೇ ಆಗಲಿ ಬರುವ ಸಾಧ್ಯತೆಯೇ ಹೆಚ್ಚು. ಅದೇ ವೇಳೆ, ಇದೇ ಮಂದಿ ಇವತ್ತು ದಿಲೀಪ್ ಘೋಷ್‍ರ ಮೇಲಿನ ಹಲ್ಲೆಗೆ ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆಯನ್ನು ನೋಡಿದರೆ ದಿಗಿಲಾಗುತ್ತದೆ. ಅವರ ಪ್ರತಿಕ್ರಿಯೆಯಲ್ಲಿ ನೇರ ಖಂಡನೆಯಿದೆ. ಆಕ್ರೋಶ ಇದೆ. ಮಮತಾ ಬ್ಯಾನರ್ಜಿಯವರೇ ಇದಕ್ಕೆ ಹೊಣೆ ಎಂಬ ಸಿಟ್ಟು ಇದೆ. ದಿಲೀಪ್ ಘೋಷ್‍ರ ಹಕ್ಕು, ಸ್ವಾತಂತ್ರ್ಯ, ಘನತೆಯನ್ನು ಎತ್ತಿ ಹಿಡಿಯುವ ಮಾತುಗಳಿವೆ. ಅದೇವೇಳೆ, ಪೆಹ್ಲೂಖಾನ್‍ರ ಮೇಲಿನ ಹಲ್ಲೆಯನ್ನು ಕಟು ಭಾಷೆಯಲ್ಲಿ ಖಂಡಿಸಿದ, ಅವರ ಹೈನುಗಾರಿಕಾ ಮೂಲವನ್ನು ಉಲ್ಲೇಖಿಸಿ ಸಮರ್ಥಿಸಿದ ಮತ್ತು ಅವರ ಘನತೆ, ಗೌರವ, ಸ್ವಾತಂತ್ರ್ಯದ ಬಗ್ಗೆ ಬಲವಾಗಿ ವಾದಿಸಿದವರಲ್ಲಿ ಅನೇಕರು ಇವತ್ತು ದಿಲೀಪ್ ಘೋಷ್‍ರ ಮೇಲಾದ ಹಲ್ಲೆಗೆ ಅತ್ಯಂತ ಮೃದುವಾಗಿ ಮತ್ತು ಅಡ್ಡಗೋಡೆಯ ಮೇಲೆ ದೀಪ ಇಟ್ಟ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಳಗೊಳಗೇ ಸಂತಸ ಪಡುವ ರೀತಿಯಲ್ಲಿರುವ ಪ್ರತಿಕ್ರಿಯೆಗಳೂ ಇವೆ. ಇದರ ಜೊತೆಗೇ ನನ್ನನ್ನು ಕಾಡಿದ ಇನ್ನೊಂದು ಅಂಶವೆಂದರೆ, ಯಾವ ಭಾವ-ವಿಕಾರವೂ ಇಲ್ಲದೇ ಇಂಥ ವೀಡಿಯೋಗಳನ್ನು ಹಂಚುವವರ ಮನಸ್ಥಿತಿ. ವೀಡಿಯೋದಲ್ಲಿ ವೀಕ್ಷಿಸುತ್ತಿರುವುದು ಕ್ರೌರ್ಯ, ಅವ ಮಾನವನ್ನು. ಇದನ್ನು ಇನ್ನೊಬ್ಬರಿಗೆ ಓರ್ವ ವ್ಯಕ್ತಿ ಯಾವೆಲ್ಲ ಕಾರಣಗಳಿಗಾಗಿ ಫಾರ್ವರ್ಡ್ ಮಾಡಬಹುದು? ಇನ್ನೊಬ್ಬ ರೊಂದಿಗೆ ಹಂಚಿಕೊಳ್ಳಬೇಕೆಂದು ಅಥವಾ ಇತರರು ವೀಕ್ಷಿಸ ಬೇಕೆಂದು ಆತ ಯಾವ ಉದ್ದೇಶದಿಂದ ಬಯಸಿರಬಹುದು? ಅದನ್ನು ನೋಡಿ ಆತ ಸಂತಸ ಪಟ್ಟಿರಬಹುದೇ, ದುಃಖಿಸಿರ ಬಹುದೇ, ಕಾನೂನು ಉಲ್ಲಂಘನೆಯ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುವುದು ಆತನ ಉದ್ದೇಶವೇ, ವೀಕ್ಷಿಸುವ ಸಂದರ್ಭದಲ್ಲಿ ವೀಡಿಯೋದಲ್ಲಿರುವ ವ್ಯಕ್ತಿಯ ಮಕ್ಕಳು, ಪತ್ನಿ, ಹೆತ್ತವರು, ಸಂಬಂಧಿಕರ ನೆನಪು ಸುಳಿದಿರಬಹುದೇ? ಅಥವಾ
ಹಾಗೆ ಫಾರ್ವರ್ಡ್ ಮಾಡುವುದಕ್ಕೆ ವೀಡಿಯೋದಲ್ಲಿರುವ ವ್ಯಕ್ತಿಯ ಧರ್ಮ, ರಾಜಕೀಯ ವಿಚಾರಧಾರೆ, ವೈಯಕ್ತಿಕ ದ್ವೇಷ, ಸ್ವಾರ್ಥ.. ಇತ್ಯಾದಿ ಇತ್ಯಾದಿಗಳು ಕಾರಣವೇ? ನಿಜವಾಗಿ,
     ಆತ್ಮಹತ್ಯೆ, ಹತ್ಯೆ, ಅಪಘಾತ, ಹಿಂಸಾಚಾರ, ಥಳಿತ.. ಮುಂತಾದುವುಗಳ ವೀಡಿಯೋಗಳನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಾರೆ ಮತ್ತು ಫಾರ್ವರ್ಡ್ ಮಾಡುತ್ತಿದ್ದಾರೆ ಎಂಬುದೇ ಅಪಾಯದ ಸೂಚನೆ. ಯಾವುದೇ ತಪ್ಪನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾ ಹೋದಂತೆ ಅದು ಕ್ರಮೇಣ ತಪ್ಪುಗಳ ಪಟ್ಟಿಯಿಂದಲೇ ಹೊರಬಿದ್ದು ಸಹಜವಾಗಿ ಕಾಣಿಸತೊಡಗುತ್ತದೆ. ಹುಲಿಯ ವೇಷ ತೊಟ್ಟು ಪುಟ್ಟ ಮಕ್ಕಳ ಎದುರು ನಿಂತರೆ ಆರಂಭದಲ್ಲಿ ಅವು ಬೆದರುತ್ತವೆ. ಕಿರುಚಲೂ ಬಹುದು. ಆದರೆ ಮತ್ತೆ ಮತ್ತೆ ಇದನ್ನು ಪುನರಾವರ್ತಿಸಿದರೆ ಅವು ಆ ಹುಲಿಯನ್ನು ಸಹಜವಾಗಿ ಸ್ವೀಕರಿಸುತ್ತದೆ. ಬಹುಶಃ ನಮ್ಮ ಸಮಾಜ ಹಿಂಸೆ, ಕ್ರೌರ್ಯ, ಕಾನೂನು ಉಲ್ಲಂಘನೆಗೆ ಹೊಂದಿಕೊಳ್ಳುವ ಹಂತಕ್ಕೆ ತಲುಪುತ್ತಿದೆಯೇನೋ ಎಂದು ಭಯವಾಗುತ್ತಿದೆ. ಕ್ರೌರ್ಯದ ವೀಡಿಯೋವನ್ನು ನಿರ್ಲಿಪ್ತವಾಗಿ ವೀಕ್ಷಿಸುವ ಮತ್ತು ಪೂರ್ವಾಪರ ಯೋಚಿಸದೆಯೇ ಫಾರ್ವರ್ಡ್ ಮಾಡುವ ಸ್ಥಿತಿ ನಿಧಾನಕ್ಕೆ ನಿರ್ಮಾಣವಾಗುತ್ತಿರುವಂತೆ ಅನಿಸುತ್ತಿದೆ. ಇದು ಹಿಂಸೆಗೆ ಹೊಂದಿಕೊಳ್ಳುವುದರ ಸೂಚನೆ. ಹಿಂಸೆಯನ್ನು ವೀಕ್ಷಿಸಿ ವೀಕ್ಷಿಸಿ ಮನಸ್ಸು ದಡ್ಡುಗಟ್ಟುತ್ತಿರುವುದರ ಸಂಕೇತ. ಪೆಹ್ಲೂಖಾನ್ ಮತ್ತು ದಿಲೀಪ್ ಘೋಷ್ ಪ್ರಕರಣವು ನಮ್ಮೊಳಗನ್ನು ಅವಲೋಕಿಸಿಕೊಳ್ಳುವುದಕ್ಕೆ ಒಂದೊಳ್ಳೆಯ ಸಂದರ್ಭ.

ರೋಹಿಂಗ್ಯ: ಇತಿಹಾಸ ಮತ್ತು ವರ್ತಮಾನ

      ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ ಕಾರವು ಮ್ಯಾನ್ಮಾರ್ ಆಡಳಿತದ ಪರ ನಿಂತಿರುವುದನ್ನು ಪ್ರಶ್ನಿಸಿ ದಿ ಹಿಂದೂ ಪತ್ರಿಕೆಯು ಸೆ. 22 ರಂದು ‘Dancing with Suu Kyi’ (ಸೂಕಿಯ ಜೊತೆ ನೃತ್ಯ) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಲೇಖನಕ್ಕಿಂತ ಮೂರು ದಿನಗಳ ಮೊದಲು ಮ್ಯಾನ್ಮಾರ್‍ನ ನಾಯಕಿ ಅಂಗ್ ಸಾನ್ ಸೂಕಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಆ ಭಾಷಣದಲ್ಲಿ ಜಗತ್ತು ಅಚ್ಚರಿಪಡಬಹುದಾದ ಪ್ರಸ್ತಾಪಗಳು ಇಲ್ಲದಿದ್ದರೂ ಆ ಭಾಷಣ ಜಾಗತಿಕವಾಗಿ ಚರ್ಚೆಗೆ ಒಳಗಾಯಿತು. ಕಾರಣ ಏನೆಂದರೆ, ಅವರು ತಮ್ಮ ಭಾಷಣದಲ್ಲಿ ಎಲ್ಲೂ ರೋಹಿಂಗ್ಯನ್ ಮುಸ್ಲಿಮರು ಎಂಬ ಪದವನ್ನು ಬಳಸಿಯೇ ಇರಲಿಲ್ಲ. ಈ ಬಗ್ಗೆ ಅವರನ್ನು ಮಾಧ್ಯಮದ ಮಂದಿ ಪ್ರಶ್ನಿಸಿದಾಗಲೂ ಅವರು ತಾನು ಹಾಗೆ ಸಂಬೋಧಿಸುವುದಿಲ್ಲ ಎಂದು ಸಮರ್ಥಿಸಿಕೊಂಡರು. ನಿಜವಾಗಿ, ಇದುವೇ ಸೂಕಿ. ಬೌದ್ಧ ತೀವ್ರವಾದಿ ಸಂಘಟನೆಗಳಾದ 969 ಮೂವ್‍ಮೆಂಟ್, ಮಾ ಬಾ ತಾ ಮುಂತಾದುವುಗಳೊಂದಿಗೆ ಅವರು ಸಹಮತ ಹೊಂದಿರುವರೋ ಇಲ್ಲವೋ, ಆದರೆ ಅವುಗಳಿಗೆ ಎದುರಾಡಬಾರದ ಅನಿವಾರ್ಯತೆಯಲ್ಲಂತೂ ಇದ್ದಾರೆ. 2013ರಲ್ಲಿ ಬಿಬಿಸಿಯು ಅವರ ಸಂದರ್ಶನ ನಡೆಸಿತ್ತು. ಸಂದರ್ಶನ ನಡೆಸಿದವರು ಬಿಬಿಸಿಯ ಮಿಶಲ್ ಹುಸೈನ್. ವಿಶೇಷ ಏನೆಂದರೆ, ಆ ಸಂದರ್ಶನ ಪ್ರಸಿದ್ಧವಾದದ್ದು ಸಂದರ್ಶನದ ಬಳಿಕ ಅವರು ಪೀಟರ್ ಪ್ಲೆಫಂ ಎಂಬವರ ಜೊತೆ ಹಂಚಿಕೊಂಡ ಅನುಭವದಿಂದಾಗಿ. ‘ಓರ್ವ ಮುಸ್ಲಿಮ್ ವ್ಯಕ್ತಿ ತನ್ನ ಸಂದರ್ಶನ ನಡೆಸುವುದಾಗಿ ಮುಂಚಿತವಾಗಿ ತನಗೆ ಯಾರೂ ಮಾಹಿತಿ ನೀಡಲಿಲ್ಲ’ವೆಂದು ಅವರು ಪೀಟರ್ ಜೊತೆ ದೂರಿಕೊಂಡಿದ್ದರು. ಸಂದರ್ಶನ ನಡೆಸಿ ದವನ ಧರ್ಮ ಸೂಕಿಗೆ ಯಾಕೆ ಮುಖ್ಯವಾಯಿತೆಂಬುದು ಆಗ ತೀವ್ರ ಚರ್ಚೆಗೆ ಒಳಗಾಗಿತ್ತು. 2015ರಲ್ಲಿ ಬರ್ಮಾದಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೂಕಿಯ NLD  ಪಕ್ಷವು ಬಹುಮತ ಪಡೆಯಿತು. ಆದರೆ ಅವರ ಪಕ್ಷವು ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟು ನೀಡಿರಲಿಲ್ಲ. ಅಂದಹಾಗೆ, ಬೌದ್ಧ ತೀವ್ರವಾದಿ ಗುಂಪುಗಳು ರೋಹಿಂಗ್ಯ ಎಂಬ ನಾಮಸೂಚಕವನ್ನು ಪ್ರಯೋಗಿಸುವುದೇ ಇಲ್ಲ. ಅವು ರೋಹಿಂಗ್ಯನ್ ಮುಸ್ಲಿಮರನ್ನು ಬಂಗಾಳಿ ಮುಸ್ಲಿಮರು ಎಂದೇ ಕರೆಯುತ್ತವೆ. 2016 ಎಪ್ರಿಲ್‍ನಲ್ಲಿ ಮ್ಯಾನ್ಮಾರ್‍ನ ಅಮೇರಿಕನ್ ರಾಯಭಾರ ಕಚೇರಿಯ ಎದುರು ವಿವಿಧ ಬೌದ್ಧ ಸಂಘಟನೆಗಳಿಗೆ ಸೇರಿದ 300ಕ್ಕೂ ಅಧಿಕ ಯುವಕರು ಮತ್ತು ಬೌದ್ಧ ಬಿಕ್ಷುಗಳು ಪ್ರತಿಭಟನೆ ನಡೆಸಿದರು. ರಾಯಭಾರ ಕಚೇರಿಯು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ರೋಹಿಂಗ್ಯ ಎಂಬ ಪದ ಬಳಸಿದ್ದನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರೋಹಿಂಗ್ಯ ಮುಸ್ಲಿಮರು ಪ್ರಯಾಣಿಸುತ್ತಿದ್ದ ದೋಣಿಯು ಮುಳುಗಿ 9 ಮಕ್ಕಳೂ ಸೇರಿದಂತೆ 22 ಮಂದಿ ಸಾವಿಗೀಡಾದುದಕ್ಕೆ ಸಂತಾಪ ಸೂಚಿಸಿ ಹೊರಡಿಸಿದ ಪ್ರಕಟಣೆ ಅದಾಗಿತ್ತೇ ಹೊರತು ರೋಹಿಂಗ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ನಿರ್ಮೂಲನಕ್ಕೆ ಸಂಬಂಧಿಸಿದ ಪ್ರಕಟಣೆ ಅದಾಗಿರಲಿಲ್ಲ. ರೋಹಿಂಗ್ಯ ಎಂಬ ಪ್ರದೇಶ ಮ್ಯಾನ್ಮಾರ್‍ನಲ್ಲಿ ಇಲ್ಲ ಎಂದು ಪ್ರತಿ ಭಟನಾಕಾರರು ವಾದಿಸಿದರು. ಮ್ಯಾನ್ಮಾರ್ ಸರಕಾರವು ಅಂಗೀ ಕರಿಸಿಲ್ಲದ ಪದ ಪ್ರಯೋಗದೊಂದಿಗೆ ಒಂದು ಪ್ರದೇಶದ ಮಂದಿ ಯನ್ನು ಗುರುತಿಸುವ ಮೂಲಕ ಅಮೇರಿಕವು ಅಂತಾರಾಷ್ಟ್ರೀಯ ರಾಜತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿದೆ ಎಂದವರು ಆರೋ ಪಿಸಿದರು. ಅಮೇರಿಕಕ್ಕೆ ರೋಹಿಂಗ್ಯನ್ನರಲ್ಲಿ ಪ್ರೀತಿ ಇದೆಯೆಂದಾದರೆ ಅವರನ್ನು ಅಮೇರಿಕವೇ ಇಟ್ಟುಕೊಳ್ಳಲಿ ಎಂದವರು ಆಗ್ರಹಿಸಿ ದರು. ಆ ಇಡೀ ಪ್ರತಿಭಟನೆಯ ನೇತೃತ್ವವನ್ನು ಮಾ ಬಾ ತಾ ಎಂಬ ಬೌದ್ಧ ತೀವ್ರವಾದಿ ಸಂಘಟನೆಯು ವಹಿಸಿಕೊಂಡಿತ್ತು. ಒಂದು ರೀತಿಯಲ್ಲಿ, ರೋಹಿಂಗ್ಯ ಎಂಬೊಂದು ಜನಸಮೂಹ ಇದೆ ಎಂಬುದನ್ನೇ ಒಪ್ಪಲು ಸಿದ್ಧವಿಲ್ಲದ ತೀವ್ರ ರಾಷ್ಟ್ರೀಯ ವಾದಿಗಳ ಜೊತೆ ಜಗತ್ತು ಇವತ್ತು ಮಾತಾಡಬೇಕಿದೆ.
      ಸೂಕಿ ಅಧಿಕಾರಕ್ಕೆ ಬಂದದ್ದೇ 2015ರಲ್ಲಿ. ಆದರೆ, ಬೌದ್ಧ ರಾಷ್ಟ್ರೀಯವಾದಿಗಳು ದಶಕಗಳ ಮೊದಲೇ ಮ್ಯಾನ್ಮಾರ್‍ನಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿದ್ದರು. ಖುದ್ದು ಮಿಲಿಟರಿ ಸರಕಾರವೇ ಈ ರಾಷ್ಟ್ರೀಯವಾದವನ್ನು ಪೋಷಿಸುತ್ತಲೂ ಬಂದಿತ್ತು. ‘ಇಸ್ಲಾಮ್ ಬರ್ಮಾದಲ್ಲಿ ವ್ಯಾಪಿಸಿದರೆ ಏನಾಗಬಹುದು..’ ಎಂಬ ಶೀರ್ಷಿಕೆಯ ಕಿರುಹೊತ್ತಗೆಗಳನ್ನು ಮಿಲಿಟರಿ ಸರಕಾರದ ಮೌನ ಸಮ್ಮತಿಯೊಂದಿಗೆ ಹಂಚಲಾಗಿತ್ತು. ಭವಿಷ್ಯದಲ್ಲಿ ಮ್ಯಾನ್ಮಾರ್‍ನಲ್ಲಿ ಬೌದ್ಧರು ಅಲ್ಪಸಂಖ್ಯಾತರಾಗುವರೆಂದೂ ಬಾಂಗ್ಲಾ, ಮಲೇಶ್ಯ, ಇಂಡೋನೇಶ್ಯಾಗಳು ಮ್ಯಾನ್ಮಾರನ್ನು ವಶಪಡಿಸಲಿವೆಯೆಂದೂ ಮಾ ಬಾ ತಾ ಎಂಬ ಸಂಘಟನೆ ಬಹಿರಂಗವಾಗಿ ಪ್ರಚಾರ ಮಾಡುತ್ತಿದೆ. ಮದ್ರಸಗಳ ಹೊರತಾಗಿ ಬೇರೆ ಯಾವುದೇ ಮಾದರಿಯ ಶಿP್ಷÀಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಅನುಮತಿ ನಿರಾಕರಿಸಲಾಗುತ್ತಿರುವುದಕ್ಕೂ ಈ ತೀವ್ರವಾದಿ ಪ್ರಚಾರವೇ ಕಾರಣ. ಮುಖ್ಯವಾಗಿ, ಮುಸ್ಲಿಮರನ್ನೇ ಗುರಿಯಾಗಿಸಿ 2015ರಲ್ಲಿ ‘ಜನಾಂಗ-ಧರ್ಮ ಸಂರಕ್ಷಣಾ ನಿಯಮ’ ಎಂಬ ಕಾನೂನನ್ನು ಜಾರಿಗೆ ತರಲು ಮಿಲಿಟರಿ ಜನರಲ್ ತೇನ್‍ಸೇನ್‍ರ ಮೇಲೆ ತೀವ್ರವಾದಿ ಬೌದ್ಧ ಸಂಘಟನೆಗಳು ಒತ್ತಡ ಹೇರಿ ಯಶಸ್ವಿಯಾದುವು. ಹಾಗೆಯೇ ‘ಪ್ರಸವದ ನಡುವೆ ಕಡ್ಡಾಯ ವಿರಾಮ ಇರಬೇಕು, ಏಕಪತ್ನಿತ್ವ, ಬೌದ್ಧರಲ್ಲದ ಪುರುಷರನ್ನು ವಿವಾಹವಾಗಬಯಸುವ ಬೌದ್ಧ ಮಹಿಳೆಯರು ಮುಂಚಿತವಾಗಿ ನೋಂದಣಿ ಮಾಡುವುದು, ಮತಾಂತರ ನಿಯಂತ್ರಣ ಕಾಯ್ದೆ..’ ಮುಂತಾದುವುಗಳನ್ನು ಜಾರಿಗೆ ತರಲು ಅವು ಒತ್ತಡ ಹೇರಿದುವು. ಹಾಗಂತ, ಮ್ಯಾನ್ಮಾರ್‍ನಲ್ಲಿ ಮುಸ್ಲಿಮರ ಜನಸಂಖ್ಯೆ ಬರೇ 2.3%. ಕ್ರೈಸ್ತರು 6.3% ಮತ್ತು ಬೌದ್ಧರು 89.8% ಇz್ದÁರೆ. ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿರು ವುದು ರಾಖೈನ್ ರಾಜ್ಯದಲ್ಲಿ. ಇಲ್ಲಿನ ಒಟ್ಟು 30 ಲಕ್ಪ ಜನಸಂಖ್ಯೆ ಯಲ್ಲಿ 13 ಲಕ್ಷ ಮಂದಿ ರೋಹಿಂಗ್ಯನ್ನರ ಮುಸ್ಲಿಮರು. ನಿಜವಾಗಿ, ರಾಖೈನ್ ರಾಜ್ಯದ ಮೂಲ ಹೆಸರು ಅರಖಾನ್. ಮುಸ್ಲಿಮ್ ಬಾಹುಳ್ಯದ ರಾಜ್ಯ ಇದಾಗಿತ್ತು. 1989ರಲ್ಲಿAdaption of Expression Lawದ ಪ್ರಕಾರ ಅರಖಾನ್ ಹೆಸರನ್ನು ರಾಖೈನ್ ಆಗಿ ಬದಲಾಯಿಸಲಾಯಿತಲ್ಲದೇ ಬೌದ್ಧ ಪ್ರಾಬಲ್ಯವುಳ್ಳ ರಾಜ್ಯವಾಗಿ ಮರು ರೂಪಿಸಲಾಯಿತು. 2012ರಲ್ಲಿ ಇಲ್ಲಿ ನಡೆದ ಜನಾಂಗೀಯ ಹತ್ಯಾಕಾಂಡದಲ್ಲಿ ಸಂತ್ರಸ್ತರಾದ 1 ಲಕ್ಷದ 40 ಸಾವಿರ ಮಂದಿ ಇಲ್ಲಿ ನಿರಾಶ್ರಿತರಾಗಿ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಅಂದಹಾಗೆ, 1982ರಲ್ಲಿ ಮಿಲಿಟರಿ ಸರಕಾರವು ಜಾರಿಗೆ ತಂದ ಪೌರತ್ವ ಕಾಯ್ದೆಯಲ್ಲಿ ದೇಶದ ನಾಗರಿಕರನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. 1. ಪೂರ್ಣ ನಾಗರಿಕರು, 2. ಸಹ ನಾಗರಿಕರು, 3. ಸಹಜ ನಾಗರಿಕರು ಮತ್ತು 4. ವಿದೇಶಿ ನಾಗರಿಕರು. ಇವರಲ್ಲಿ ರೋಹಿಂಗ್ಯನ್ನರು ವಿದೇಶಿ ವರ್ಗದಲ್ಲಿ ಸ್ಥಾನ ಪಡೆದುಕೊಂಡರು. ಆ ಮೂಲಕ ಅವರನ್ನು ಮ್ಯಾನ್ಮಾರ್‍ನ ಪೌರತ್ವದಿಂದ ಹೊರಗಿಡಲಾಯಿತು. 1970ರಲ್ಲೇ  ಜನರಲ್ ನೆವಿಯವರ ಆಡಳಿತ ಕಾಲದಲ್ಲಿ ರೋಹಿಂಗ್ಯನ್ನ ರನ್ನು ಹೊರಗಿನವರಾಗಿ ನೋಡುವ ಪ್ರಯತ್ನಗಳು ಪ್ರಾರಂಭವಾದುವು. 1982ರಲ್ಲಿ ಬರ್ಮೀಸ್ ಪೌರತ್ವ ನಿಯಮ ಜಾರಿಗೆ ಬಂತು. 2012ರಲ್ಲಿ ರೋಹಿಂಗ್ಯ ನ್ನರಿಗಾಗಿ ‘ವೈಟ್ ಕಾರ್ಡ್’ ಗುರುತು ಚೀಟಿಯನ್ನು ಜಾರಿಗೆ ತರುವ ಮೂಲಕ ಪೌರತ್ವ ನೀಡುವ ಸೂಚನೆ ನೀಡಲಾಯಿತಾದರೂ 2015ರಲ್ಲಿ ವೈಟ್ ಕಾರ್ಡನ್ನೇ ರದ್ದುಪಡಿಸುವುದರೊಂದಿಗೆ ಪೌರತ್ವ ನಿಷೇಧ ನಿಯಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಯಿತು. ನಿಜವಾಗಿ, ಮ್ಯಾನ್ಮಾರ್‍ನಲ್ಲಿ ಇಸ್ಲಾಮ್‍ಗೆ ಬಹಳ ದೀರ್ಘ ಇತಿಹಾಸವಿದೆ.
        8ನೇ ಶತಮಾನದಲ್ಲಿ ಅರಬ್-ಪರ್ಶಿಯನ್ ವ್ಯಾಪಾರಿಗಳ ಮೂಲಕ ಮ್ಯಾನ್ಮಾರ್‍ಗೆ ಇಸ್ಲಾಮ್ ತಲುಪಿತ್ತು ಎಂದು ಹೇಳಲಾಗುತ್ತದೆ. 1430ರಿಂದ 1785ರ ವರೆಗೆ ಮರೋಕು ಎಂಬ ರಾಜವಂಶವು ಆಡಳಿತ ನಡೆಸಿತ್ತು. ಈ ಆಡಳಿತ ವಂಶದ ಸ್ಥಾಪಕನಾಗಿ ಸುಲೈಮಾನ್ ಷಾ ಎಂದು ಗುರುತಿಸಿ ಕೊಂಡಿರುವ ಮಿನ್‍ಸೋ ಮೂನ್ ಎಂಬವನಾಗಿದ್ದ. 17ನೇ ಶತಮಾನದ ವರೆಗೆ ಆಡಳಿತ ನಡೆಸಿದ ಈ ರಾಜವಂಶದ ಮೇಲೆ ಅರಕಾನ್ ಬೌದ್ಧ ರಾಜವಂಶವು ದಾಳಿ ನಡೆಸಿ ಸೋಲಿಸಿತು. ಆ ಪ್ರದೇಶದಿಂದ ಮುಸ್ಲಿಮರು ಮತ್ತು ಹಿಂದೂಗಳು ಜೀವ ಭಯದಿಂದ ಪಲಾಯನ ಮಾಡಿದರು. ಬೌದ್ದೇತರ ಎಲ್ಲ ಆರಾಧನಾಲಯಗಳನ್ನೂ ಅರಕಾನ್ ಆಡಳಿತವು ಧ್ವಂಸಗೊಳಿಸಿತು. ಇದಾಗಿ ಒಂದು ಶತಮಾನದ ಬಳಿಕ 1824ರಲ್ಲಿ ಬ್ರಿಟಿಷರು ಮ್ಯಾನ್ಮಾರ್ ಮೇಲೆ ದಾಳಿ ನಡೆಸಿದರು. ಅಲ್ಲಿನ ಕೃಷಿ ಕೆಲಸಗಳಿಗಾಗಿ ಅವರು ಬಂಗಾಳಿ ಮುಸ್ಲಿಮ ರನ್ನು ಕರೆ ತಂದರು. ಇವರ ಜೊತೆಗೇ ಈ ಹಿಂದೆ ಪಲಾಯಗೈದವರ ತಲೆಮಾರುಗಳೂ ಅರಕಾನ್‍ಗೆ ಬಂದವು. ದುರಂತ ಏನೆಂದರೆ, ಮ್ಯಾನ್ಮಾರ್‍ನ ಬೌದ್ಧ ತೀವ್ರವಾದಿಗಳು ಮುಸ್ಲಿಮ್ ಇತಿಹಾಸವನ್ನು ಪ್ರಾರಂಭಿಸುವುದೇ ಇಲ್ಲಿಂದ. ಅಲ್ಲದೇ ರೋಹಿಂಗ್ಯನ್ನರು ವಾಸವಾಗಿರುವುದು ರಾಖೈನ್ ರಾಜ್ಯದ ಪಶ್ಚಿಮ ಸಮುದ್ರ ತೀರದ ಬಳಿ. ಇದು ತೈಲ ಸಮೃದ್ಧ ಪ್ರದೇಶವಾಗಿಯೂ ಗುರುತಿಸಿಕೊಂಡಿದೆ. ಮಾತ್ರವಲ್ಲ, ಈ ಪ್ರದೇಶವು ಬಾಂಗ್ಲಾದೇಶಕ್ಕೆ ತಾಗಿಕೊಂಡೂ ಇದೆ. ಬಾಂಗ್ಲಾ ದೇಶದ ಚಿತ್ತಗಾಂಗ್‍ನ ಭಾಷೆಗೆ ಸಾಮಿಪ್ಯವುಳ್ಳ ಬಂಗಾಳಿ ಭಾಷೆಯನ್ನು ಹೆಚ್ಚಿನ ರೋಹಿಂಗ್ಯನ್ನರು ಆಡುತ್ತಾರೆ. ಶುದ್ಧ ಬರ್ಮೀಸ್ ಭಾಷೆ ಆಡುವ ರೋಹಿಂಗ್ಯನ್ನರೂ ರಾಖೈನ್‍ನ ಪೂರ್ವ ಭಾಗದಲ್ಲಿ ದ್ದಾರೆ. ದೇಹ ರಚನೆಯಲ್ಲೂ ರೋಹಿಂಗ್ಯನ್ನರು ಬಂಗಾಳಿಯರನ್ನೇ ಹೋಲುತ್ತಾರೆ. ಈ ಸಾಮ್ಯತೆಯೇ ಬೌದ್ಧ ಸಂಘಟನೆಗಳ ಆರೋಪಕ್ಕೆ ಇನ್ನೊಂದು ಆಧಾರ. 1430ರ ಮರೋಕು ರಾಜವಂಶದ ಪ್ರಜೆಗಳು ಇವರು ಎಂದು ಇತಿ ಹಾಸ ಉಲ್ಲೇಖಿಸುತ್ತದಾದರೂ ಇವರಿಗೆ ಬ್ರಿಟಿಷ್ ಇತಿಹಾಸದ ಕಾಲವನ್ನಷ್ಟೇ ಬೌದ್ಧ ತೀವ್ರವಾದಿಗಳು ಮತ್ತು ಈ ಹಿಂದಿನ ಮಿಲಿಟರಿ ಸರಕಾರವು ಒಪ್ಪಿಕೊಳ್ಳುತ್ತಿದೆ. ಬ್ರಿಟಿಷರು ತಮ್ಮ ಜೊತೆ ಕರೆ ತಂದ ಬಂಗಾಳಿ ಮತ್ತು ಮರೋಕು ರಾಜವಂಶದ ಹೊಸ ತಲೆಮಾರಿಗೆ ಅರಕಾನ್ ರಾಜ್ಯದಲ್ಲಿ 99 ವರ್ಷಗಳ ಅವಧಿಗೆ ಭೂಮಿಯನ್ನು ವಿತರಿಸಿತ್ತು. ಒಂದು ರೀತಿಯಲ್ಲಿ, ಅದು ಮರೋಕು ರಾಜವಂಶ ಕಾಲದ ಪ್ರಜೆಗಳ ಜಾಗ. ಅರಕಾನನ್ನು ಬೌದ್ಧ ರಾಜವಂಶವು ವಶಪಡಿಸಿಕೊಳ್ಳುವ ಮೂಲಕ ಅದು ಅವರಿಂದ ಕೈ ತಪ್ಪಿ ಹೋಗಿತ್ತು. ಬ್ರಿಟಿಷರು ಹೀಗೆ ಭೂಮಿ ಹಂಚಿದ್ದೂ ಮತ್ತು ಕೃಷಿ ಕಾರ್ಯಗಳಲ್ಲಿ ಮುಸ್ಲಿಮರನ್ನು ಬಳಸಿಕೊಂಡಿರುವುದರ ಫಲಿತಾಂಶವು ಇವತ್ತು ಮ್ಯಾನ್ಮಾರ್‍ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಇಲ್ಲಿನ ಮುಸ್ಲಿಮರು ತೀರಾ ಬಡವರೇನೂ ಅಲ್ಲ. ಸ್ಥಿತಿ ವಂತರಾಗಿಯೇ ಗುರುತಿಸಿಕೊಂಡಿದ್ದಾರೆ. 1940ರಲ್ಲಿ ಮುಜಾಹಿದ್‍ಗಳೆಂದು ಗುರುತಿಸಿಕೊಂಡ ಸಶಸ್ತ್ರ ಗುಂಪೊಂದು ಅರಕಾನ್ ಅನ್ನು ಪಾಕ್‍ನ ಜೊತೆ ಸೇರಿಸುವ ಉದ್ದೇಶದೊಂದಿಗೆ ಹೋರಾಟ ನಡೆಸಿತ್ತು. ಜಿನ್ನಾರೊಂದಿಗೆ ಮಾತುಕತೆಯನ್ನೂ ನಡೆಸ ಲಾಗಿತ್ತು. ಆಗ ಜನರಲ್ ಅನ್ ಸಾನ್‍ರು ಸ್ವತಂತ್ರ ಬರ್ಮಾದಲ್ಲಿ ಇವರಿಗೆ ಸಂರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಮುಸ್ಲಿಮರು ಬ್ರಿಟಿಷರನ್ನು ಬೆಂಬಲಿಸಿದರು. ಬೌದ್ಧರ ಅರಕಾನ್ ನ್ಯಾಷನಲ್ ಆರ್ಮಿ ಮತ್ತು ಬರ್ಮೀಸ್ ಇಂಡಿಪೆಂಡೆನ್ಸ್ ಆರ್ಮಿಗಳು ಜಪಾನನ್ನು ಬೆಂಬಲಿಸಿದುವು. 1948ರಲ್ಲಿ ಬರ್ಮಾವು ಸ್ವತಂತ್ರವಾಯಿತು. ಅಂದಿನಿಂದಲೇ ರೋಹಿಂಗ್ಯನ್ನರನ್ನು ಪ್ರಜೆಗಳೆಂದು ಒಪ್ಪಿಕೊಳ್ಳುವುದಕ್ಕೆ ಆಡಳಿತ ನಿರಾಕರಿಸತೊಡಗಿತು.
ಬಹುಶಃ ರೋಹಿಂಗ್ಯನ್ ಹತ್ಯಾಕಾಂಡಕ್ಕೆ ಇರುವ ಇನ್ನೊಂದು ಆಯಾಮ ಆರ್ಥಿಕತೆಯದ್ದು.
      ಮ್ಯಾನ್ಮಾರ್‍ನ ರಾಖೈನ್ ಪ್ರದೇಶದಿಂದ ಆರಂಭವಾಗಿ ರೋಹಿಂಗ್ಯನ್ ಪ್ರದೇಶದಲ್ಲಿ ಕೊನೆಗೊಳ್ಳುವ ಕ್ಯೋಕ್‍ಫೂ ರಸ್ತೆ ನಿರ್ಮಾಣವನ್ನು ಚೀನಾ ತ್ವರಿತಗೊಳಿಸಿದ ಸಮಯದಲ್ಲೇ (2012) ರೋಹಿಂಗ್ಯದಲ್ಲಿ ಮೊದಲ ಜನಾಂಗೀಯ ಹತ್ಯಾಕಾಂಡ ಆರಂಭವಾಗಿದ್ದು. ಈ ರಸ್ತೆ ಚೀನಾದ ಪಾಲಿಗೆ ಬಹು ಅಮೂಲ್ಯವಾದುದು. ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಈ ರಸ್ತೆ ನೆರವಾಗುವುದರಿಂದ ಚೀನಾ ಭಾರೀ ಪ್ರಮಾಣದಲ್ಲಿ ಇಲ್ಲಿ ಹೂಡಿಕೆ ಮಾಡಿತ್ತು. ಇದನ್ನು ವಿಫಲಗೊಳಿಸುವ ಉದ್ದೇಶದಿಂದಲೇ ಅಮೇರಿಕ ಚುರುಕಾಯಿತು. 2012ರಲ್ಲಿ ಒಬಾಮ ಎರಡು ಬಾರಿ ಮ್ಯಾನ್ಮಾರ್‍ಗೆ ಭೇಟಿ ಕೊಟ್ಟಿರುವುದೇ ಇದಕ್ಕೆ ಸಾಕ್ಷಿ. ಇದೇ ಸಮಯದಲ್ಲಿ ರೋಹಿಂಗ್ಯ ಹತ್ಯಾಕಾಂಡವೂ ನಡೆದು ಕಾಮಗಾರಿ ಸ್ಥಗಿತಗೊಂಡಿತು. ಅಮೇರಿಕವು ಸೂಕಿ ಮತ್ತು ಮಿಲಿಟರಿ ಜನರಲ್ ತೇನ್‍ಸೇನ್‍ರನ್ನೂ ತನ್ನಲ್ಲಿಗೆ ಕರೆಸಿಕೊಂಡಿತ್ತು. ಹೀಗೆ ಸ್ಥಗಿತಗೊಂಡಿದ್ದ ಕಾಮ ಗಾರಿಯು 5 ವರ್ಷಗಳ ಬಳಿಕ ಪುನಃ ಪ್ರಾರಂಭಗೊಂಡಿತು. ಇದಕ್ಕಾಗಿ ಚೀನಾ-ಮ್ಯಾನ್ಮಾರ್ ಒಪ್ಪಂದ ಮಾಡಿಕೊಂಡವು. ಒಬಾಮರಂತೆ ಟ್ರಂಪ್‍ರಿಗೆ ಮ್ಯಾನ್ಮಾರನ್ನು ಒಲಿಸಿಕೊಳ್ಳಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೇ ಚೀನಾವು ಹತ್ತಿರದ ಎಲ್ಲ ದೇಶಗಳ ಒಲವನ್ನೂ ಗಿಟ್ಟಿಸಿಕೊಂಡಿದೆ. ಈ ನಡುವೆ ಸೂ ಕಿ ಎರಡು ಬಾರಿ ಚೀನಾಕ್ಕೆ ಭೇಟಿ ನೀಡಿದರು. ಹೀಗೆ ರಾಜತಾಂತ್ರಿಕ ಸಮರದಲ್ಲಿ ಅಮೇರಿಕಕ್ಕೆ ತೀವ್ರ ಹಿನ್ನಡೆಯಾಯಿತು. ಈ ನಡುವೆ ಚೀನಾ-ಮ್ಯಾನ್ಮಾರ್ ಪೈಪ್‍ಲೈನ್ ಕಾಮಗಾರಿಯು ಸಂಪೂರ್ಣವಾಯಿತಲ್ಲದೇ ಚೀನಾದ ಬಲುವಾನ್ ಪ್ರದೇಶಕ್ಕೆ ಪ್ರತಿದಿನ 2,60,000 ಬ್ಯಾರಲ್ ತೈಲ ಸಾಗಿಸುವುದಕ್ಕೆ ಬೇಕಾದ ಎಲ್ಲ ಏರ್ಪಾಡುಗಳು ಮುಗಿದಿವೆ. ಈ ಸಂದರ್ಭದಲ್ಲೇ  ಮತ್ತೆ ರೋಹಿಂಗ್ಯ ನರಮೇಧ ಕಾಣಿಸಿಕೊಂಡಿದೆ. ಇದರಲ್ಲಿ ಅಮೇರಿಕದ ಪಾತ್ರವನ್ನು ಶಂಕಿಸುವಂತೆಯೇ ಸ್ವತಃ ಚೀನಾವೇ ತನ್ನ ಪೈಪ್‍ಲೈನ್ ಯೋಜನೆಯ ಕಡೆಗೆ ಜನರ ಗಮನ ಹರಿಯದಂತೆ ಮಾಡುವುದಕ್ಕಾಗಿ ಇಂಥದ್ದೊಂದು ಹತ್ಯಾಕಾಂಡಕ್ಕೆ ಕುಮ್ಮಕ್ಕು ನೀಡಿರಬಹುದೇ ಎಂದೂ ಅನುಮಾನಿಸಬಹುದಾಗಿದೆ. ಹಾಗಂತ,
     ರೋಹಿಂಗ್ಯನ್ ಮುಸ್ಲಿಮರು ತಮ್ಮ ಹಕ್ಕುಗಳ ಬಗ್ಗೆ ಪ್ರಜ್ಞೆಯಿಲ್ಲದವರೋ ಅಥವಾ ಹೋರಾಟ ನಡೆಸದವರೋ ಅಲ್ಲ. ರಾಖೈನ್ ರಾಜ್ಯದ 30 ಲಕ್ಷ ಮಂದಿಯಲ್ಲಿ 13 ಲಕ್ಷದಷ್ಟಿರುವ ರೋಹಿಂಗ್ಯನ್ನರು ರೋಹಿಂಗ್ಯ ಸಾಲಿಡಾರಿಟಿ ಆರ್ಗನೈಝೇಶನ್ (RSA) ಮತ್ತು ಅರಕಾನ್ ಇಸ್ಲಾಮಿಕ್ ಫ್ರಂಟ್ (ARIF) ಸ್ಥಾಪಿಸಿದ್ದರು. 1998ರಲ್ಲಿ ಇವೆರಡನ್ನೂ ಒಟ್ಟುಗೂಡಿಸಿ ಅರಕಾನ್-ರೋಹಿಂಗ್ಯ ನ್ಯಾಶನಲ್ ಆರ್ಗನೈಝೇಶನ್ (ARNA) ಅನ್ನು ರಚಿಸಿದರು ಮತ್ತು ಅದರ ಹೋರಾಟ ವಿಭಾಗವಾಗಿ ರೋಹಿಂಗ್ಯ ನ್ಯಾಶನಲ್ ಆರ್ಮಿ (RNA)ಯನ್ನು ಕಟ್ಟಿದರು. ಈಗ ಮ್ಯಾನ್ಮಾರ್ ಸೇನೆಯ ಜೊತೆ ಹೋರಾಟದಲ್ಲಿ ನಿರತವಾಗಿರುವ ಗುಂಪಿನ ಹೆಸರು ಅರಕಾನ್-ರೋಹಿಂಗ್ಯ ಸಾಲ್ವೇಶನ್ ಆರ್ಮಿ (ARSA).
     ಒಂದು ಕಡೆ, ಬೌದ್ಧ ರಾಷ್ಟ್ರೀಯವಾದಿಗಳು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಸೇನೆಯಿದ್ದರೆ ಇನ್ನೊಂದು ಕಡೆ ಪೌರತ್ವವೇ ನಿರಾಕರಿಸಲ್ಪಟ್ಟು ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿರುವ ರೋಹಿಂಗ್ಯನ್ನರು. ಮಗದೊಂದೆಡೆ ಅಮೇರಿಕ ಮತ್ತು ಚೀನಾದ ಆರ್ಥಿಕ ಹಿತಾಸಕ್ತಿಗಳು. ಬಹುಶಃ, ರೋಹಿಂಗ್ಯ ಹತ್ಯಾಕಾಂಡದ ಹಿಂದೆ ಬರೇ ಪೌರತ್ವಕ್ಕಿಂತ ಹೊರತಾದ ಆರ್ಥಿಕ ಮತ್ತು ರಾಜಕೀಯ ಕಾರಣಗಳಿವೆ. ಸೇನೆಯ ಮೇಲೆ ಅರಕಾನ್-ರೋಹಿಂಗ್ಯ ಸಾಲ್ವೇಶನ್ ಆರ್ಮಿ (ARSA) ದಾಳಿಯೆಸಗಿದುದೇ ಈ ಹತ್ಯಾಕಾಂಡಕ್ಕೆ ಕಾರಣ ಎಂಬುದು ಬರೇ ನೆಪ ಮಾತ್ರ. ಅದಕ್ಕಿಂತ ಮೊದಲೇ,
         ಅತ್ಯಂತ ಯೋಜಿತವಾಗಿ ಈ ಹತ್ಯಾಕಾಂಡದ ನಕ್ಷೆಯನ್ನು ರೂಪಿಸಲಾಗಿತ್ತು ಎಂದೇ ಅನಿಸುತ್ತದೆ.

Wednesday, September 27, 2017

ಗೌರಿಯನ್ನು ಕೊಂದ ವಾದ ಯಾವುದು?

      ಗೌರಿ ಲಂಕೇಶ್ - ಸರ್ವ ದೌರ್ಬಲ್ಯಗಳಿಂದಲೂ ಮುಕ್ತವಾದ, ಯಾವ ವಿವಾದಗಳಿಗೂ ಒಳಗಾಗದ ಸಾಧು ಹೆಣ್ಣು ಮಗಳೇನಲ್ಲ. ಇಂಥದ್ದೊಂದು ವರ್ಚಸ್ಸನ್ನು ಅವರು ಬಯಸಿರುವ ಸಾಧ್ಯತೆಯೂ ಇಲ್ಲ. ಗಾಂಧೀಜಿಯವರ ಜೊತೆ ಅವರ ಸಮಕಾಲೀನರಾದ ಹಲವು ನಾಯಕರಿಗೆ ವೈಚಾರಿಕ ಭಿನ್ನಾಭಿಪ್ರಾಯವಿತ್ತು. ದಲಿತರಿಗೆ ಅವರು ಬಳಸಿದ ‘ಹರಿಜನ’ ಎಂಬ ಪದ ಕಾನೂನುಬಾಹಿರ ಆಗುವಷ್ಟು ಅವರು ಈ ನೆಲದಲ್ಲಿ ಪ್ರಶ್ನೆಗೆ ಒಳಗಾಗಿದ್ದಾರೆ. ಅಂಬೇಡ್ಕರ್‍ವಾದಿಗಳಿಗೆ ಅವರ ಜೊತೆ ಇವತ್ತಿಗೂ ಕೂಡ ತೀರದ ಮುನಿಸಿದೆ. ಬಲಪಂಥೀಯರಿಗೂ ಅವರ ವಿಚಾರಧಾರೆಯ ಮೇಲೆ ತಕರಾರಿದೆ. ಇವರಷ್ಟೇ ಅಲ್ಲ ಬುದ್ಧ, ಬಸವ, ನಾರಾಯಣ ಗುರು  ಎಲ್ಲರೂ ಪ್ರಶ್ನೆಗೆ ಒಳಗಾಗುತ್ತಲೇ ಈ ಮಣ್ಣಿನಲ್ಲಿ ಸ್ವೀಕೃತರಾದವರು. ಹೀಗಿರುವಾಗ, ಗೌರಿಯ ನಿಲುವು ಸರ್ವ ಮಾನ್ಯವಾಗುವುದು, ಪ್ರಶ್ನೆಗಳಿಗೆ ಆಸ್ಪದವನ್ನೇ ಒದಗಿಸದಷ್ಟು ಸಾರ್ವಕಾಲಿಕವಾಗುವುದು ಸಾಧ್ಯವೇ ಇಲ್ಲ. ಅವರು ಆಡಿರಬಹುದಾದ ಮಾತು, ಬರೆದ ಬರಹ, ತೊಡಗಿಸಿಕೊಂಡ ಚಳವಳಿ.. ಇತ್ಯಾದಿಗಳ ಕುರಿತಂತೆಅವರನ್ನು ಮೆಚ್ಚಿಕೊಳ್ಳುವವರಲ್ಲೂ ತಕರಾರು ಇರಬಹುದು. ಇರುವುದೇ ಒಳ್ಳೆಯದು. ತಕರಾರು ರಹಿತ ಬೆಂಬಲ ಎಂಬುದು ಅನೇಕ ಬಾರಿ ಅಂಧ ಅಭಿಮಾನಿಗಳಾಗಿಸಿ ಬಿಡುತ್ತದೆ. ಸದ್ಯ ನರೇಂದ್ರ ಮೋದಿಯವರು ಇಂಥದ್ದೊಂದು ಹಂತಕ್ಕೆ ತಲುಪಿ ಬಿಟ್ಟಿದ್ದಾರೆ. ಗೌರಿಯವರು ಈ ಅಪಾಯದಿಂದ ಸ್ವತಃ ತನ್ನನ್ನು ಪಾರಾಗಿಸಿಕೊಂಡಿದ್ದರು. ತನ್ನನ್ನು ಮೆಚ್ಚಿಕೊಳ್ಳುವ ಗುಂಪಿನಲ್ಲೂ ಸಾತ್ವಿಕ ತಕರಾರಿಗೆ ಜಾಗ ಮೀಸಲಿಟ್ಟಿದ್ದರು. ಇವತ್ತು ಗೌರಿಯವರ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ, ಚರ್ಚೆ, ಸಮಾಲೋಚನೆಗಳಲ್ಲಿ ಭಾಗವಹಿಸುತ್ತಿರುವವರೆಲ್ಲ ‘ನೂರು ಶೇಕಡ’ ಗೌರಿಯನ್ನು ಒಪ್ಪಿಕೊಂಡವರೇನಲ್ಲ. ಅವರು ತಮ್ಮ ಭಾಷಣ, ಬರಹದಲ್ಲಿ ಬಳಸಿದ ಕೆಲವೊಂದು ಪದಪ್ರಯೋಗಗಳನ್ನು ಮೆಚ್ಚಿ ಕೊಳ್ಳದವರೂ ಇವರಲ್ಲಿದ್ದಾರೆ. ಆದರೆ, ಗೌರಿ ಹತ್ಯೆಯ ನಂತರ ದೇಶದಾದ್ಯಂತ ಎದ್ದಿರುವ ಪ್ರತಿಭಟನೆಯ ಅಲೆ ಒಂದು ಮುಖ್ಯ ಸಂದೇಶವನ್ನು ಸಾರುತ್ತದೆ. ಅವರು ಈ ದೇಶದ ಅಗತ್ಯವಾಗಿದ್ದರು. ಅವರ ವಿಚಾರದಲ್ಲಿ ಸುಖವನ್ನು ಕಾಣುವ ಜನಸಮೂಹ ಈ ದೇಶದಲ್ಲಿತ್ತು. ಆದ್ದರಿಂದಲೇ ಅವರ ಹತ್ಯೆ ಯನ್ನು ಸೌಖ್ಯಭಾವದ ಹತ್ಯೆ ಎಂದೂ ಪರಿಗಣಿಸಬಹುದು. ಗೌರಿ ಅಸಂಖ್ಯ ಮಂದಿಗೆ ನೆಮ್ಮದಿ, ನಿರೀಕ್ಷೆ ಮತ್ತು ಧೈರ್ಯ ಆಗಿದ್ದರು. ಅಂದಹಾಗೆ, ನಕ್ಸಲ್ ನಾಯಕನಾಗಿ ಗುರುತಿಸಿಕೊಂಡಿದ್ದ ಮತ್ತು 2005ರಲ್ಲಿ ಪೊಲೀಸ್ ಎನ್‍ಕೌಂಟರ್‍ಗೆ ಬಲಿಯಾದ ಸಾಕೇತ್ ರಾಜನ್ ಜೊತೆಗೆ ಅವರಿಗಿದ್ದ ಗೆಳೆತನವನ್ನು ನಾವು ಏಕಮುಖವಾಗಿ ಚರ್ಚಿಸಬೇಕಿಲ್ಲ. ವೈಚಾರಿಕವಾಗಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು ಅನ್ನುವುದಕ್ಕೆ ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಗೌರಿ ತೋರಿದ ಮುತುವರ್ಜಿಯೇ ಪಕ್ಕಾ ಉದಾಹರಣೆ. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಸೇರಿದಂತೆ ಒಂದು ಡಝನ್‍ನಷ್ಟು ಮಂದಿಯನ್ನು ಅವರು ಕಾಡಿನಿಂದ ನಾಡಿಗೆ ತಂದರು. ಅದೇವೇಳೆ, ಸಾಕೇತ್ ರಾಜನ್ ಈ ಬೆಳವಣಿಗೆಯ ಪರ ಇರದಿದ್ದರೂ ಅವನ ಜೊತೆ ಗೆಳೆತನ ವನ್ನು ಇಟ್ಟುಕೊಂಡರು. ಎಲ್ಲಿಯವರೆಗೆಂದರೆ, ಆತನ ಎನ್ ಕೌಂಟರ್ ಅನ್ನು ಪ್ರತಿಭಟಿಸಿ, ಆತನ ಅಸ್ಥಿಯನ್ನು ಹಿಡಿದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ವೈಚಾರಿಕವಾಗಿ ಒಂದೇ ಬಿಂದುವಿನಲ್ಲಿ ನಿಲ್ಲದ ವ್ಯಕ್ತಿಗಳಿಬ್ಬರು ಮನುಷ್ಯರಾಗಿ ಒಂದಾಗಬಹು ದಾದ ಸಾಧ್ಯತೆಗಳೆಡೆಗೆ ಗೌರಿ ಹೀಗೆ ಸೂಚನೆ ಕೊಟ್ಟರೇನೋ ಎಂದು ಅನಿಸುತ್ತದೆ. ಇದರರ್ಥ ಬಸ್ಸು, ರೈಲು, ಮಸೀದಿ ಮಂದಿರಗಳಲ್ಲಿ ಬಾಂಬಿಟ್ಟು ಸ್ಫೋಟಿಸುವವರ ಜೊತೆ ವೈಚಾರಿಕ ಅಸಮ್ಮತಿಯೊಂದಿಗೆ ಮನುಷ್ಯರೆಂಬ ನೆಲೆಯಲ್ಲಿ ಒಂದಾಗಬಹುದು ಎಂದು ಅಲ್ಲ. ಗೌರಿ ಎಲ್ಲೂ ಬಾಂಬ್ ಸ್ಫೋಟ ಮತ್ತು ಹತ್ಯಾ ಕಾಂಡದ ಭಯೋತ್ಪಾದನೆಯೊಂದಿಗೆ ಈ ಮಟ್ಟದ ಸಹೃದಯತೆ ಯನ್ನು ತೋರಿಲ್ಲ. ಪಶ್ಚಿಮ ಘಟ್ಟದ ನಕ್ಸಲ್ ಚಟುವಟಿಕೆಯ ಬಗ್ಗೆ ಅವರಲ್ಲಿ ಆಳ ತಿಳುವಳಿಕೆಯಿತ್ತು. ಇವತ್ತು ಗೌರಿ ಹತ್ಯೆ ಯನ್ನು ನಕ್ಸಲ್‍ರ ತಲೆಗೆ ಕಟ್ಟುವಲ್ಲಿ ಅತ್ಯುತ್ಸಾಹ ತೋರುತ್ತಿರುವವರು ನಿಜವಾಗಿ ಗೌರಿಯನ್ನು ಓದಿಲ್ಲ ಎಂದೇ ಹೇಳಬೇಕು. ಗೌರಿಯೊಳಗೆ ನಕ್ಸಲಿಸಂ ಇತ್ತು. ಆದರೆ ಅದು ಕಾಡಿನಲ್ಲಿ ಅವಿತು ಕುಳಿತು, ಶಸ್ತ್ರ ಎತ್ತಿ ಮಾಡುವ ನಕ್ಸಲಿಸಂ ಆಗಿರಲಿಲ್ಲ. ಅವರು ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಂಬಿಕೆ ಇರಿಸಿದ್ದರು. ಸಾಕೇತ್ ರಾಜನ್ ಮತ್ತು ಆತನ ತಂಡ ಪಶ್ಚಿಮ ಘಟ್ಟದ ಕಾಡಿನಲ್ಲಿ ಬಂದೂಕು ಎತ್ತಿಕೊಂಡು ಮಾಡುತ್ತಿರುವ ಅದೇ ಉದ್ದೇಶದ ಹೋರಾಟವನ್ನು ಬಂದೂಕಿಲ್ಲದೇ ಮತ್ತು ನಾಗರಿಕರ ನಡುವೆಯೇ ಇದ್ದುಕೊಂಡು ನಾಡಿನಲ್ಲಿಯೇ ಮಾಡಬಹುದು ಎಂಬುದು ಅವರ ನಿಲುವಾಗಿತ್ತು. ಆದ್ದರಿಂದಲೇ, ‘ಶಾಂತಿಗಾಗಿ ನಾಗರಿಕ ವೇದಿಕೆ ಹುಟ್ಟಿಕೊಂಡಿತು’ ಎಂಬುದು ನನ್ನ ನಂಬಿಕೆ. ವ್ಯಂಗ್ಯ ಏನೆಂದರೆ, ನಕ್ಸಲರನ್ನು ಕಾಡಿನಿಂದ ನಾಡಿಗೆ ತರುವ ಗೌರಿಯವರ ಪ್ರಯತ್ನವನ್ನು ಅಣಕದ ಭಾಷೆಯಲ್ಲಿ ವ್ಯಾಖ್ಯಾನಿಸಿದವರೇ ಅಥವಾ ಅವರೊಂದಿಗೆ ಸಹಮತ ಹೊಂದಿರುವವರೇ ಇವತ್ತು ಗೌರಿ ಹತ್ಯೆಗೆ ಸಂಭ್ರಮಿಸುತ್ತಿದ್ದಾರೆ ಮತ್ತು ಅಡ್ಡಗೋಡೆಯಲ್ಲಿ ದೀಪ ಇಟ್ಟ ಹಾಗೆ ಪ್ರತಿಕ್ರಿಯಿಸುತ್ತಿದ್ದಾರೆ. ಗೌರಿ ಹತ್ಯೆಗೆ ಬಲಪಂಥೀಯ ವಿಚಾರಧಾರೆ ಕಾರಣ ಎಂದು ಹೇಳುವುದನ್ನು ತನಿಖೆಗೆ ಮೊದಲೇ ತೀರ್ಪು ಎಂದು ಈ ಗುಂಪು ಖಂಡಿಸುತ್ತಲೇ ನಕ್ಸಲೀಯರು ಈ ಹತ್ಯೆ ನಡೆಸಿರಬಹುದು ಎಂದೂ ಹೇಳುತ್ತಿದೆ. ಒಂದನ್ನು ತಪ್ಪು ಅನ್ನುತ್ತಾ ಇನ್ನೊಂದು ತಪ್ಪನ್ನು ಮಾಡುವ ಈ ದ್ವಂದ್ವವನ್ನು ಏನೆಂದು ಪರಿಗಣಿಸಬೇಕು? ನಕ್ಸಲ್ ಚಟುವಟಿಕೆಯನ್ನು ದಮನಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿವೆ. ಯೋಧರು, ಪೊಲೀಸರ ಬಲಿದಾನ ಆಗುತ್ತಿದೆ. ನಕ್ಸಲ್ ಪ್ರದೇಶಗಳಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವುದಕ್ಕೂ ಅಡಚಣೆಗಳು ಉಂಟಾಗುತ್ತಿವೆ. ಗೌರಿ ಮುಖ್ಯವಾಗುವುದು ಇಲ್ಲೇ.  ಪಶ್ಚಿಮ ಘಟ್ಟದಲ್ಲಿ ಇವತ್ತು ನಕ್ಸಲ್ ಚಟುವಟಿಕೆ ತೀರಾ ತೀರಾ ಕುಗ್ಗಿರು ವುದರಲ್ಲಿ ಗೌರಿಯ ಪಾತ್ರ ಬಹಳ ದೊಡ್ಡದು. ಶ್ರೀ ಶ್ರೀ ರವಿಶಂಕರ್ ಅವರು ಕೊಲಂಬಿಯದ ಭಯೋತ್ಪಾದಕ ಗುಂಪಿನ ಜೊತೆ (FARC) ಮಾತುಕತೆ ನಡೆಸುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವವರೇ ಗೌರಿಯ ಮಾತುಕತೆಯನ್ನು ಅಣಕಿಸುವುದರಲ್ಲಿ ಏನು ತರ್ಕ ಇದೆ?
      ಬಲಪಂಥೀಯ, ನಡುಪಂಥೀಯ ಮತ್ತು ಎಡಪಂಥೀಯ ಎಂದು ನಮ್ಮ ನಡುವೆ ಇರುವ ವಿಚಾರಧಾರೆಯನ್ನು ಬೇರ್ಪಡಿಸಿ ನೋಡಿದರೆ ಗೌರಿ ಎಡಪಂಥೀಯ ಬಿಂದುವಿನಲ್ಲಿ ನಿಲ್ಲುತ್ತಾರೆ ಅನ್ನುವುದು ನಿಜ. ಹಾಗಂತ, ಎಡಪಂಥವನ್ನೇ ಅವರು ಶಾಶ್ವತ ಠಿಕಾಣಿಯನ್ನಾಗಿ ಮಾಡಿಕೊಂಡೂ ಇರಲಿಲ್ಲ. ಸಂದರ್ಭ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ ಅವರು ಈ ಬೇಲಿಯನ್ನು ಜಿಗಿದದ್ದೂ ಇದೆ. ಅಪ್ಪ ಲಂಕೇಶ್‍ರ ‘ಸದಾ ವಿರೋಧ ಪಕ್ಷ’ ಎಂಬ ನೀತಿಯನ್ನು ಅವರು ಅಪ್ಪಿಕೊಂಡೂ ಇರಲಿಲ್ಲ. ಇದಕ್ಕೆ ಕಾರಣಗಳು ಹಲವು ಇರಬಹುದು. ಲಂಕೇಶ್‍ರ ಕಾಲಘಟ್ಟ ಮತ್ತು ಗೌರಿಯವರ ಕಾಲಘಟ್ಟವೂ ಇದಕ್ಕೆ ಒಂದು ಕಾರಣ ಆಗಿರಬಹುದು. ಬಲಪಂಥೀಯ ವಿಚಾರಧಾರೆಯು ಪ್ರಾಬಲ್ಯ ಪಡೆದಿರುವುದೂ ಇದಕ್ಕೆ ಕಾರಣವಾಗಿರಬಹುದು. ಅಷ್ಟಕ್ಕೂ, ಯಾರೇ ಆಗಲಿ ನಿರ್ದಿಷ್ಟ ವಿಚಾರಧಾರೆಯನ್ನು ಹೊಂದುವುದು ತಪ್ಪೇ? ಎಡಪಂಥ ಅಥವಾ ಬಲಪಂಥ ಅಥವಾ ನಡುಪಂಥ ಇವುಗಳಲ್ಲಿ ಯಾವುದಾದರೂ ಒಂದು ಮಾತ್ರವೇ ಇರಬೇಕು ಎಂಬ ವಾದ ಈ ದೇಶವನ್ನು ಎಲ್ಲಿಗೆ ಕೊಂಡೊಯ್ಯಬಹುದು? ಜರ್ಮನಿ, ರಷ್ಯಾ, ಇಟಲಿಗಳೆಲ್ಲ ಏನಾದುವು? ಏಕಪಂಥವನ್ನು ಒಪ್ಪಿಕೊಂಡ ಮತ್ತು ಅನೇಕ ಪಂಥಗಳನ್ನು ಸಹಿಸದ ಆಡಳಿತ ವ್ಯವಸ್ಥೆಗಳೆಲ್ಲ ಹೇಗೆ ನಾಮಾವಶೇಷವಾದುವು ಅನ್ನುವುದನ್ನು ಇತಿಹಾಸ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿರುವುದರ ಹೊರತಾಗಿಯೂ ಗೌರಿಯನ್ನು ಅದೇ ತೀವ್ರವಾದ ಬಲಿ ಪಡೆಯಿತೇ? ಎಡಪಂಥ ಮತ್ತು ಬಲಪಂಥ ಪರಸ್ಪರ ಸಂವಾದಿಸಲಾರದಂಥ ಸ್ಥಿತಿಗೆ ತಲುಪಿರುವುದೇಕೆ? ಎಡಪಂಥವನ್ನು ಒಂದು ವಿಚಾರಧಾರೆಯಾಗಿ ಒಪ್ಪಿಕೊಳ್ಳುವಾಗ ಬಲಪಂಥವನ್ನೂ ಹಾಗೆ ಒಪ್ಪಿಕೊಳ್ಳಬೇಕು. ಯಾವಾಗ ಒಂದು ಪಂಥವು ಇನ್ನೊಂದು ಪಂಥವನ್ನು ಮುಖಾ ಮುಖಿಯಾಗುವುದಕ್ಕೆ ನಿರಾಕರಿಸುತ್ತದೋ ಆಗ ಪಂಥವು ವರ್ಗವಾಗಿ ಮತ್ತು ಭಿನ್ನಾಭಿಪ್ರಾಯವು ಧರ್ಮವಾಗಿ ಮಾರ್ಪಡುವುದಕ್ಕೆ ದಾರಿ ತೆರೆದುಕೊಳ್ಳುತ್ತದೆ. ಬಲಪಂಥದಲ್ಲೂ ಎಡಪಂಥದಲ್ಲೂ ಮತ್ತು ನಡುಪಂಥದಲ್ಲೂ ಇರುವವರೆಲ್ಲ ಮನುಷ್ಯರೇ. ಪಂಥಗಳು ಹುಟ್ಟಿಕೊಂಡಿರುವುದು ವಿಚಾರಗಳ ಕಾರಣಗಳಿಂದಲೇ ಹೊರತು ಮನುಷ್ಯರಾಗಿರುವ ಕಾರಣದಿಂದಲ್ಲ. ಎಡಪಂಥದಲ್ಲಿ ಹಿಂದೂಗಳಿರುವಂತೆಯೇ ಬಲಪಂಥದಲ್ಲೂ ಹಿಂದೂಗಳೇ ಇದ್ದಾರೆ. ಕ್ರೈಸ್ತರು, ಮುಸ್ಲಿಮರೂ ಇವುಗಳಲ್ಲಿ ಹಂಚಿ ಹೋಗಿದ್ದಾರೆ. ನಡುಪಂಥದಲ್ಲೂ ಹಿಂದೂ-ಮುಸ್ಲಿಮ್ ಮತ್ತು ಧರ್ಮದೊಂದಿಗೆ ಗುರುತಿಸಿಕೊಳ್ಳದವರಿದ್ದಾರೆ. ಬಲಪಂಥ ಎಂಬುದು ಹಿಂದೂಗಳಿಗೆ ಮೀಸಲಾಗಿಲ್ಲ. ಎಡಪಂಥ ಅನ್ನುವುದೂ ನಾಸ್ತಿಕರಿಗೆ ಮೀಸಲಾಗಿಯೂ ಇಲ್ಲ. ಒಂದು ಪಂಥಕ್ಕೆ ಓರ್ವರು ಆಕರ್ಷಿತರಾಗುವುದಕ್ಕೆ ಓದು, ಹಿನ್ನೆಲೆ, ಸನ್ನಿವೇಶ, ಸಂದರ್ಭಗಳು ಕಾರಣವೇ ಹೊರತು ಇನ್ನಾವುದೂ ಅಲ್ಲ. ಹೀಗಿರುತ್ತಾ, ಪಂಥಗಳ ನಡುವಿನ ಭಿನ್ನಾಭಿಪ್ರಾಯವು ಹತ್ಯೆಯ ವರೆಗೆ ತಲುಪುವುದೇಕೆ? ಗೌರಿಯವರನ್ನು ಅಂತ್ಯಸಂಸ್ಕಾರಗೊಳಿಸಿರುವುದು ವೀರಶೈವ ಸಂಪ್ರದಾಯದಂತೆ. ಗೌರಿಗೂ ಒಂದು ಧರ್ಮ ಇತ್ತು. ಆ ಧರ್ಮವನ್ನು ಅವರು ಹೇಗೆ ಪರಿಭಾವಿಸಿದ್ದರೋ ಹಾಗೇ ಅದನ್ನು ಪಾಲಿಸಿದರು. ಕೊಂದವನ ಧರ್ಮ ಯಾವುದು ಎಂಬುದು ಈವರೆಗೆ ಗೊತ್ತಿಲ್ಲ. ಆತನಿಗೂ ಒಂದು ಧರ್ಮ ಇದ್ದೀತು. ಅದು ಗೌರಿಯದ್ದೇ  ಧರ್ಮ ಆಗಿರಲೂ ಬಹುದು. ವೈಚಾರಿಕ ಭಿನ್ನಾಭಿಪ್ರಾಯದ ಹೊರಗೆ ಮನುಷ್ಯರಾಗಿ ನಾವು ಒಂದುಗೂಡುವ ಬಿಂದು ಇದು. ಎಡಪಂಥದ ಬಂದೂಕಿಗೆ ಬಲಿಯಾಗುವುದೂ ಮನುಷ್ಯರೇ. ಬಲಪಂಥದ ಬಂದೂಕಿಗೆ ಬಲಿಯಾಗುವುದೂ ಮನುಷ್ಯರೇ. ಮನುಷ್ಯರನ್ನು ಸಾಯಿಸಿ ಒಂದು ಪಂಥವನ್ನು ಬೆಳೆಸಬಹುದು ಎಂದು ಆ ಹಂತಕನಿಗೆ ಯಾರು ಹೇಳಿಕೊಟ್ಟರೋ?
       ಯಾವುದೇ ಪಂಥವು ಸಮಾಜ ಮತ್ತು ದೇಶದ ಹಿತಕ್ಕೆ ಪೂರಕವೋ ಮಾರಕವೋ ಎಂಬುದು ಗೊತ್ತಾಗುವುದು ಪಂಥಗಳ ನಡುವೆ ಸಂವಾದ ಏರ್ಪಡಬಹುದಾದ ವಾತಾವರಣ ನಿರ್ಮಾಣವಾದಾಗ. ಒಂದು ಪಂಥ ಅಂಥ ಸಂವಾದವನ್ನೇ ಇಷ್ಟಪಡುವುದಿಲ್ಲ ಎಂದಾದರೆ, ಆ ಪಂಥ ದುರ್ಬಲವಾಗಿದೆ ಎಂದರ್ಥ. ಸಂವಾದಕ್ಕೆ ತೆರೆದುಕೊಳ್ಳುವುದೆಂದರೆ, ಪ್ರಶ್ನೆಗಳಿಗೆ ತೆರೆದುಕೊಳ್ಳುವುದು. ಸವಾಲುಗಳನ್ನು ಸ್ವೀಕರಿಸುವುದು. ಈ ಸ್ಥಿತಿಗೆ ಪಂಥಗಳು ತೆರೆದುಕೊಂಡಾಗ ಭಯ ಹೊರಟು ಹೋಗು ತ್ತದೆ. ನಾಗರಿಕ ಸಮಾಜವು ಇನ್ನಷ್ಟು ಪ್ರಬುದ್ಧವಾಗಿ ಬೆಳೆಯುವುದಕ್ಕೆ ಅವಕಾಶ ನಿರ್ಮಾಣವಾಗುತ್ತದೆ. ಸದ್ಯದ ಬೆಳವಣಿಗೆಗಳನ್ನು ನೋಡುವಾಗ, ಇಂಥದ್ದೊಂದು  ವಾತಾವರಣಕ್ಕೆ ತೆರೆದುಕೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿವೆಯೇನೋ ಎಂದನಿಸುತ್ತಿದೆ. ಓರ್ವರ ವಿಚಾರಧಾರೆಯನ್ನು ಪ್ರತಿ ವಿಚಾರಧಾರೆಯೊಂದಿಗೆ ಎದುರಿಸುವ ಮತ್ತು ಗಟ್ಟಿ ಆಧಾರಗಳೊಂದಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ದಾರಿಯು ಮುಚ್ಚಿ ಹೋಗುತ್ತಿರುವಂತೆ ಕಾಣಿಸುತ್ತಿದೆ. ‘ತನ್ನ ವಿಚಾರಧಾರೆಗೆ ಅನ್ಯವಾದುದೆಲ್ಲವೂ ಹತ್ಯೆಗೆ ಅರ್ಹವಾದುದು’ ಎಂಬ ತೀವ್ರವಾದವನ್ನು ಪಂಥಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಬೆಳೆಸುತ್ತಿವೆಯೇನೋ ಎಂದು ಭಯವಾಗುತ್ತಿದೆ. ಸದ್ಯ ನಮ್ಮ ನಡುವಿನ ತುರ್ತು ಅಗತ್ಯ ಏನೆಂದರೆ, ಪಂಥಗಳು ಹತ್ಯೆಗೆ ಸ್ಕೆಚ್ ಹಾಕುವ ಸುಪಾರಿ ಗುಂಪುಗಳಾಗಿ ಬದಲಾಗುವುದನ್ನು ತಡೆಯುವುದು. ವೈಚಾರಿಕ ಭಿನ್ನಾಭಿಪ್ರಾಯವನ್ನು ವೈಚಾರಿಕ ಭಿನ್ನಾಭಿಪ್ರಾಯವಾಗಿಯೇ ಪರಿಗಣಿಸುವಂತಹ ವಾತಾವರಣವನ್ನು ನಿರ್ಮಿಸುವುದು. ಎಡಪಂಥ, ಬಲಪಂಥ ಮತ್ತು ನಡುಪಂಥಗಳು ಪರಸ್ಪರ ಮುಖಾಮುಖಿಯಾಗಬಹುದಾದ ಮತ್ತು ಮಾತಿನ ಅಬ್ಬರವಿಲ್ಲದೇ ಮಾತುಕತೆ ನಡೆಸಬಹುದಾದ ಸನ್ನಿವೇಶವನ್ನು ಉಂಟು ಮಾಡುವುದು. ಮಾತ್ರವಲ್ಲ, ಹತ್ಯೆಗೆ ಪ್ರೇರೇಪಿಸುವ ವಾದವನ್ನು ನಿಷ್ಕ್ರಿಯಗೊಳಿಸುವುದು.
     ಗೌರಿಯನ್ನು ಕೊಂದವರು ಯಾರು ಮತ್ತು ಅವರ ವಾದವೇನು ಎಂಬುದು ಸ್ಪಷ್ಟವಾಗಿಲ್ಲದ ಈ ಹೊತ್ತಿನಲ್ಲಿ ಇನ್ನೇನೂ ಹೊಳೆಯುತ್ತಿಲ್ಲ.

Wednesday, September 6, 2017

ತ್ರಿವಳಿ ತಲಾಕ್: ಸಮಾನ ನಾಗರಿಕ ಸಂಹಿತೆಯ ಸೋಲು

    
ತ್ರಿವಳಿ ತಲಾಕ್‍ನ ಬಗ್ಗೆ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪನ್ನು ಎತ್ತಿಕೊಂಡು ಸದ್ಯ ಎರಡು ಸುಳ್ಳುಗಳನ್ನು ತೇಲಿಸಿ ಬಿಡಲಾಗಿದೆ.
1. ಈ ತೀರ್ಪಿಗೆ ಮುಸ್ಲಿಮ್ ಸಮುದಾಯದ ಒಳಗಿನ ಸಂತ್ರಸ್ತ ಮಹಿಳೆಯರ ಹೋರಾಟವೇ ಮುಖ್ಯ ಕಾರಣ. ಶಾಯರಾ ಬಾನು ಇದಕ್ಕೆ ನೇತೃತ್ವ ನೀಡಿದ್ದಾಳೆ.
2. ಶರೀಅತ್‍ನ ಮೇಲೆ ಸುಪ್ರೀಮ್ ಕೋರ್ಟ್ ಹಸ್ತಕ್ಷೇಪ ನಡೆಸಿದೆ.
      ನಿಜವಾಗಿ ಇವೆರಡೂ ಸುಳ್ಳೇ. ತ್ರಿವಳಿ ತಲಾಕ್‍ನ ಬಗ್ಗೆ ಸುಪ್ರೀಮ್ ಕೋರ್ಟ್ ಈ ಹಿಂದೆ ಒಂದಕ್ಕಿಂತ ಹೆಚ್ಚು ಬಾರಿ ಮಾತಾಡಿದೆ. ದಗ್ಡು ಪಠಾಣ್ ಮತ್ತು ರಹೀಂಬಿ ಪ್ರಕರಣದಲ್ಲಿ ಬಾಂಬೇ ಹೈಕೋರ್ಟ್‍ನ ಔರಂಗಾಬಾದ್ ಪೀಠದ ನ್ಯಾಯಮೂರ್ತಿ ಮರ್ಲಪಲ್ಲೆಯವರು ತ್ರಿವಳಿ ತಲಾಕ್‍ನ ಬಗ್ಗೆ ಚರ್ಚಿಸಿದ್ದರು. ಅದಕ್ಕೆ ತಮ್ಮ ವಿರೋಧವನ್ನೂ ವ್ಯಕ್ತಪಡಿಸಿದ್ದರು. 2002ರ ಶಮೀಮ್ ಅರಾ ಪ್ರಕರಣದಲ್ಲೂ ಇದು ಪುನರಾವರ್ತನೆಯಾಯಿತು. ನ್ಯಾಯಮೂರ್ತಿ ಆರ್.ಸಿ. ಲಹೋಟಿಯವರು ತ್ರಿವಳಿ ತಲಾಕ್‍ಗೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನೊಂದು, 1995ರಲ್ಲಿ ನಡೆದ ಸರಳಾ ಮುದ್ಗಳ್ ಪ್ರಕರಣ. ಈ ಸಂದರ್ಭದಲ್ಲಂತೂ ನ್ಯಾಯಾಧೀಶರು ಒಂದು ಹೆಜ್ಜೆ ಮುಂದೆ ಹೋಗಿ, ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಅಗತ್ಯವನ್ನು ಒತ್ತಿ ಹೇಳಿದ್ದರು. ಆದರೆ 2015 ಅಕ್ಟೋಬರ್ 16ರಂದು ಸುಪ್ರೀಮ್ ಕೋರ್ಟಿನ ದ್ವಿಸದಸ್ಯ ಪೀಠ ತಳೆದ ನಿಲುವು ಇವೆಲ್ಲಕ್ಕಿಂತಲೂ ಹೆಚ್ಚು ಪ್ರಭಾವಶಾಲಿಯಾಗಿತ್ತು. ಪ್ರಕಾಶ್ ಮತ್ತು ಪುಲ್ವತಿ ಎಂಬವರ ನಡುವಿನ ಆಸ್ತಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರಾದ ಆದರ್ಶ್ ಕುಮಾರ್ ಗೋಯಲ್ ಮತ್ತು ಅನಿಲ್ ಆರ್. ದವೆಯವರು ತೀರ್ಪು ನೀಡುವ ಸಂದರ್ಭದಲ್ಲಿ ತಲಾಕ್‍ನ ಬಗ್ಗೆಯೂ ಪ್ರಸ್ತಾಪಿಸಿದರು. ಸಂವಿಧಾನದ 14, 15 ಮತ್ತು 21ನೇ ನಿರ್ದೇಶನಗಳನ್ನು ತ್ರಿವಳಿ ತಲಾಕ್ ಉಲ್ಲಂಘಿಸುತ್ತದೆ ಎಂದವರು ಹೇಳಿದ್ದು ಮಾತ್ರವಲ್ಲ, ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಬಹುದು ಹಾಗೂ ಈ ಶೋಷಣೆಯ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಮ್ ಕೋರ್ಟಿನಿಂದ ಪ್ರತ್ಯೇಕ ವಿಭಾಗವನ್ನು ರಚಿಸಬಹುದು ಎಂಬ ಸಲಹೆಯನ್ನೂ ನೀಡಿದರು. ಈ ಬೆಳವಣಿಗೆಯ 6 ತಿಂಗಳ ಬಳಿಕ 2016 ಎಪ್ರಿಲ್‍ನಲ್ಲಿ ಶಾಯರಾ ಬಾನು ಸುಪ್ರೀಮ್ ಕೋರ್ಟ್‍ನಲ್ಲಿ ಮೊಕದ್ದಮೆ ದಾಖಲಿಸಿದಳು. ಇದಕ್ಕೆ ಬೆಂಗಾವಲಾಗಿ ನಿಂತದ್ದು ಬಿಜೆಪಿಯ ಅಂಗಸಂಸ್ಥೆಯಾದ ರಾಷ್ಟ್ರೀಯ ಮುಸ್ಲಿಮ್ ಮಹಿಳಾ ಮಂಚ್. ಶಾಯರಾ ಬಾನು ಪ್ರಕರಣ ದಾಖಲಿಸಿದ ಬಳಿಕ ಇನ್ನೂ ನಾಲ್ವರು ಸಂತ್ರಸ್ತ ಮುಸ್ಲಿಮ್ ಮಹಿಳೆಯರು ಕೇಸು ದಾಖಲಿಸುವಂತೆ ಮಾಡಲು ಮುಸ್ಲಿಮ್ ರಾಷ್ಟ್ರೀಯ ಮಂಚ್ ಯಶಸ್ವಿಯಾಯಿತು. ಇಲ್ಲಿ ಬಾಹ್ಯನೋಟಕ್ಕೆ ಶಾಯರಾ ಬಾನು ಇದ್ದರೂ ಹಿನ್ನೆಲೆಯಲ್ಲಿದ್ದುದು ಬಿಜೆಪಿ ಮತ್ತು ಸಂಘಪರಿವಾರ. 2015 ಅಕ್ಟೋಬರ್‍ನಲ್ಲಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನ ಅಧ್ಯಯನ ನಡೆಸಿದ ಬಿಜೆಪಿ ಮತ್ತು ಸಂಘಪರಿವಾರವು ಸಂತ್ರಸ್ತ ಮುಸ್ಲಿಮ್ ಮಹಿಳೆಯರನ್ನು ಹುಡುಕತೊಡಗಿತು. ರಾಷ್ಟ್ರೀಯ ಮುಸ್ಲಿಮ್ ಮಂಚ್‍ನ ಮೂಲಕ ನಡೆದ ಈ ಹುಡುಕಾಟದಲ್ಲಿ ಸಿಕ್ಕಿದ್ದೇ  ಶಾಯರಾ ಬಾನು. ನಿಜವಾಗಿ, ಬಿಜೆಪಿಯ ಒಳ ಉದ್ದೇಶ ಬೇರೆಯೇ ಇತ್ತು. ತ್ರಿವಳಿ ತಲಾಕ್‍ನ ವಿಚಾರಣೆಯ ವೇಳೆ 1931ರ ಶರಿಯಾ ಆ್ಯಕ್ಟ್ ನ ಮೇಲೆ ಸುಪ್ರೀಮ್ ಕೋರ್ಟು ಹಸ್ತಕ್ಷೇಪ ನಡೆಸಬಹುದು ಎಂದು ಅದು ಭಾವಿಸಿತ್ತು. ಸೆಕ್ಯುಲರ್ ಸಂವಿಧಾನವಿರುವ ಭಾರತಕ್ಕೆ ಸಮಾನ ನಾಗರಿಕ ಸಂಹಿತೆಯೇ ಸೂಕ್ತ ಎಂಬ ನಿಲುವನ್ನು ಮತ್ತು ವೈಯಕ್ತಿಕ ನಿಯಮಗಳನ್ನು ಅನೂರ್ಜಿತಗೊಳಿಸುವ ಇಚ್ಛೆಯನ್ನು ಅದು ಸುಪ್ರೀಮ್ ಕೋರ್ಟ್‍ನಿಂದ ನಿರೀಕ್ಷಿಸಿತ್ತು. 1995ರ ಸರಳಾ ಮುದ್ಗಳ್ ಪ್ರಕರಣದಲ್ಲಿ ನ್ಯಾಯಾಲಯದ ಪರಾಮರ್ಶೆಯೂ ಇಂಥದ್ದೊಂದು ನಿರೀಕ್ಷೆಗೆ ಇನ್ನೊಂದು ಕಾರಣವಾಗಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾಯಾಧೀಶರಾದ ಅಬ್ದುಲ್ ನಝೀರ್, ಆರ್.ಎಫ್. ನಾರಿಮನ್, ಕುರಿಯನ್ ಜೋಸೆಫ್ ಮತ್ತು ಯು.ಯು. ಲಲಿತ್‍ರು ಈ ವಿಷಯವನ್ನು ಇದೀಗ ಹೊಸತೊಂದು ಮಜಲಿಗೆ ತಂದು ಮುಟ್ಟಿಸಿದ್ದಾರೆ. ಸಂವಿಧಾನದ 25ನೇ ಪರಿಚ್ಛೇದವು ಕೊಡಮಾಡಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ನಿಯಮಗಳ ಪಾಲನಾ ಸ್ವಾತಂತ್ರ್ಯದ ಬಗ್ಗೆ ಇವರು ವ್ಯಕ್ತಪಡಿಸಿರುವ ಅಭಿಪ್ರಾಯ ಐತಿಹಾಸಿಕವಾದುದು. ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಮತ್ತು 1937ರ ಶರೀಅತ್ ಕಾಯಿದೆಯನ್ನು ಅನೂರ್ಜಿತಗೊಳಿಸುವಂತೆ ಐದು ಧರ್ಮಗಳನ್ನು ಪ್ರತಿನಿಧಿಸುವ ಈ ಐವರು ನ್ಯಾಯಾಧೀಶರ ಪೀಠ ಆದೇಶಿಸುತ್ತದೆ ಎಂದು ಕಾದವರ ಪಾಲಿಗೆ ಈ ಪೀಠದ ತೀರ್ಪು ಬಲುದೊಡ್ಡ ಹಿನ್ನಡೆ. ನಿಜವಾಗಿ, ಈ ವರ್ತಮಾನ ಕಾಲದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯು ಅಲ್ಪಸಂಖ್ಯಾತ ಸಮುದಾಯದಲ್ಲಿ ಒಂದು ಬಗೆಯ ಅಸ್ತಿತ್ವ ನಾಶದ ಭೀತಿಯನ್ನು ಹುಟ್ಟು ಹಾಕಿತ್ತು. ಬಹುತ್ವವನ್ನು ವಿರೋಧಿಸುವ ಮಂದಿಯ ಕೈಗೆ ಅಧಿಕಾರ ಸಿಕ್ಕಿರುವುದರಿಂದ ಅಸ್ಮಿತೆ ಕಳಕೊಳ್ಳುವ ಭಯವು ಅಲ್ಪಸಂಖ್ಯಾತರು ಮತ್ತು ದಲಿತ-ದಮನಿತ ಸಮುದಾಯದಲ್ಲಿ ಸಹಜವಾಗಿ ಹರಳು ಗಟ್ಟಕೊಡಗಿತ್ತು. ಒಂದು ರೀತಿಯಲ್ಲಿ, ಶಾಯರಾ ಬಾನು ಈ ಭಯವನ್ನು ಹೋಗಲಾಡಿಸುವಲ್ಲಿ ಇದೀಗ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾಳೆ. ಮುಖ್ಯ ನ್ಯಾಯಮೂರ್ತಿ ಖೇಹರ್ ಅವರು ಇಡೀ ಪ್ರಕರಣಕ್ಕೆ ಕೊಟ್ಟಿರುವ ವ್ಯಾಖ್ಯಾನ ಅತಿ ಮಹತ್ವಪೂರ್ಣವಾದುದು. ‘ತ್ರಿವಳಿ ತಲಾಕ್ ಧಾರ್ಮಿಕ ಆಚರಣೆಯಾಗಿದೆ ಮತ್ತು ಅದು ಸಂವಿಧಾನದ 25ನೇ ಪರಿಚ್ಛೇದವು ನೀಡುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಯೊಳಗೆ ಬರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು. ಬಹುಮತದ ತೀರ್ಪಿನಲ್ಲಿ ತ್ರಿವಳಿ ತಲಾಕನ್ನು ಅಮಾನ್ಯ ಮಾಡಲಾಗಿದೆಯೇ ಹೊರತು ಶರೀಅತ್ ಕಾಯ್ದೆಯನ್ನಲ್ಲ. ವಿಶೇಷ ಏನೆಂದರೆ, 375 ಪುಟಗಳಷ್ಟು ದೀರ್ಘವಿರುವ ತೀರ್ಪಿನಲ್ಲಿ ಹನಫಿ ವಿದ್ವಾಂಸ ಅಶ್ರಫಲಿ ಥಾನವಿಯವರನ್ನು ಸ್ಮರಿಸಲಾಗಿದೆ. 1939ರಲ್ಲಿ ವಿವಾಹ ಕಾಯ್ದೆಯ ರಚನೆಯಲ್ಲಿ ಅವರ ಪಾತ್ರವನ್ನು ಗೌರವದಿಂದ ಕಾಣಲಾಗಿದೆ. ತ್ರಿವಳಿ ತಲಾಕ್ ಯಾಕೆ ಶರೀಅತ್‍ನ ಭಾಗವಲ್ಲ ಎಂಬುದಕ್ಕೆ ಸಾಕಷ್ಟು ಆಧಾರಗಳನ್ನು ಕೊಡಲಾಗಿದೆ. ಪವಿತ್ರ ಕುರ್‍ಆನಿನ ಸೂಕ್ತಗಳು, ಹದೀಸ್ ಮತ್ತು ಫಿಕ್ಹ್ ಗ್ರಂಥಗಳಿಂದ ಪುರಾವೆಗಳನ್ನು ನೀಡಲಾಗಿದೆ. ಈ ತೀರ್ಪಿನಲ್ಲಿ ಎಲ್ಲೂ ಸಂವಿಧಾನದ 25ನೇ ಪರಿಚ್ಛೇದ ಕೊಡಮಾಡುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅದರ ವ್ಯಾಪ್ತಿಯೊಳಗೆ ಬರುವ ವೈಯಕ್ತಿಕ ನಿಯಮಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿಲ್ಲ. ಇವುಗಳ ಮೇಲೆ ಹಸ್ತಕ್ಷೇಪವನ್ನೂ ನಡೆಸಲಾಗಿಲ್ಲ. ಶರೀಅತ್‍ನಲ್ಲಿ ಇಲ್ಲದ ಮತ್ತು ಅದರ ಉದ್ದೇಶವನ್ನು ಈಡೇರಿಸದ ತ್ರಿವಳಿ ತಲಾಕ್‍ನ ಬಗ್ಗೆ ಮಾತ್ರ ವಿರೋಧವನ್ನು ವ್ಯಕ್ತಪಡಿಸಲಾಗಿದೆ. ಒಂದು ರೀತಿ ಯಲ್ಲಿ ಮುಸ್ಲಿಮ್ ಸಮುದಾಯವನ್ನು ನಿಜ ಶರೀಅತ್‍ನಡೆಗೆ ಸಾಗುವಂತೆ ಕರೆಕೊಟ್ಟಿರುವ ತೀರ್ಪು ಇದು. ಸಮಾನ ನಾಗರಿಕ ಸಂಹಿತೆಯ ಕಡೆಗೆ ಗಮನ ಹರಿಸುವಂತೆ ಕೋರ್ಟ್ ಸೂಚಿಸಬಹುದು ಎಂದು ನಿರೀಕ್ಷಿಸಿದವರ ಮಟ್ಟಿಗೆ ಇದು ಬಲು ದೊಡ್ಡ ಸೋಲು.
     ವಿಶೇಷ ಏನೆಂದರೆ, ತ್ರಿವಳಿ ತಲಾಕ್ ವಿಷಯದಲ್ಲಿ ಬಿಜೆಪಿ ಮುಂಚೂಣಿಯಲ್ಲಿ ನಿಂತು ಮಾತಾಡಿತು. ಕೇಂದ್ರ ಕಾನೂನು ಆಯೋಗದ ಮೂಲಕ ಅದು 16 ಪ್ರಶ್ನಾವಳಿಯನ್ನು ಬಿಡುಗಡೆ ಗೊಳಿಸಿತು. ಈ 16 ಪ್ರಶ್ನೆಗಳಲ್ಲಿ 80% ಪ್ರಶ್ನೆಗಳೂ ಮುಸ್ಲಿಮರಿಗೆ ಸಂಬಂಧಿಸಿದ್ದಾಗಿದ್ದುವು. 80% ಜನಸಂಖ್ಯೆಯಿರುವ ಹಿಂದೂ ಸಮುದಾಯದಲ್ಲಿ ಧಾರ್ಮಿಕವಾಗಿ 20% ಸಮಸ್ಯೆಗಳಿರುವಾಗ 16% ಇರುವ ಮುಸ್ಲಿಮ್ ಸಮುದಾಯದಲ್ಲಿ 80% ಧಾರ್ಮಿಕ ಅನಿಷ್ಠ ಸಂಪ್ರದಾಯಗಳಿವೆ ಎಂದು ಬಿಂಬಿಸುವುದಕ್ಕೂ ಅದು ಶ್ರಮಿಸಿತು. ಮುಸ್ಲಿಮ್ ಸಮುದಾಯದ ವಿಮೋಚಕನ ಪಾತ್ರದಲ್ಲಿ ತನ್ನನ್ನು ಪ್ರಸ್ತುತಪಡಿಸುವುದಕ್ಕೆ ಅದು ಮುಂದಾಯಿತು. ತ್ರಿವಳಿ ತಲಾಕ್ ಪ್ರಕರಣದಲ್ಲಿ ಉದ್ದಕ್ಕೂ ಅದು ಮಾತಾಡಿದ್ದು ಇದೇ ಭಾಷೆಯಲ್ಲಿ. ಭಾರತಕ್ಕೆ ಬಂದ ಬ್ರಿಟಿಷರು ಈ ಹಿಂದೆ ಇದೇ ತಂತ್ರವನ್ನು ಅನುಸರಿಸಿದ್ದರು. ಅವರು ಸತಿ ಸಹಗಮನ ಪದ್ಧತಿಯ ವಿರುದ್ಧ ಕಾನೂನು ಜಾರಿಗೊಳಿಸಿದರು. ಅದು ಮಹಿಳಾ ಶೋಷಣೆಯ ವಿರುದ್ಧದ ನಡೆಯಾಗಿ ಅಂದು ವ್ಯಾಪಕ ಪ್ರಚಾರ ಪಡೆಯಿತು. ಇಲ್ಲೊಂದು ಕುತೂಹಲಕಾರಿ ವಿಷಯವಿದೆ. ಮಹಿಳೆಯರನ್ನು ಶೋಷಿಸುತ್ತಿದ್ದವರು ಯಾರೆಂದರೆ, ಹಿಂದೂ ಪುರುಷರು. ಶೋಷಣೆಗೆ ಒಳಗಾಗುತ್ತಿರುವವರಾದರೋ ಹಿಂದೂ ಮಹಿಳೆಯರು. ಹಿಂದೂ ಪುರುಷರ ಶೋಷಣೆಯಿಂದ ಹಿಂದೂ ಮಹಿಳೆಯರನ್ನು ಬ್ರಿಟಿಷರು ಪಾರು ಮಾಡಿದರು ಎಂಬ ಸಂದೇಶ ವನ್ನು ಸಮಾಜಕ್ಕೆ ತಲುಪಿಸುವಲ್ಲಿ ‘ಸತಿ ನಿಷೇಧ ಕಾನೂನು’ ಯಶಸ್ವಿಯಾಯಿತು. ಇದನ್ನೇ ಖ್ಯಾತ ಮಹಿಳಾವಾದಿ ಲೇಖಕಿ ಕಲ್ಕತ್ತಾದ ಗಾಯತ್ರಿ ಚಕ್ರವರ್ತಿ ಪ್ರಶ್ನಿಸಿದ್ದರು. ‘ಕಂದು ಬಣ್ಣದ ಪುರುಷರಿಂದ ಕಂದು ಬಣ್ಣದ ಮಹಿಳೆಯರನ್ನು ಬಿಳಿಯ ಪುರುಷರು ರಕ್ಷಿಸುತ್ತಿದ್ದಾರೆ’ ಎಂದು ತನ್ನ Can the subaltern speak ಎಂಬ ಕೃತಿಯಲ್ಲಿ ವಿಶ್ಲೇಷಿಸಿದ್ದರು. ಅದರರ್ಥ ಕಾನೂನು ತಪ್ಪು ಎಂದಲ್ಲ. ಅದನ್ನು ರಚಿಸಿದವರು ಆಳದಲ್ಲಿ ಯಾವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ಚರ್ಚೆಗೊಡ್ಡುವುದಾಗಿತ್ತು. ಬ್ರಿಟಿಷರ ಬಗ್ಗೆ ಹಿಂದೂ ಸಮುದಾಯದ ಮಹಿಳೆಯರಲ್ಲಿ ಒಲವು ಮೂಡಿಸುವ ಮತ್ತು ವಿಮೋಚಕರಂತೆ ಭಾವಿಸುವುದಕ್ಕೆ ಪ್ರೇರೇಪಿಸುವ ನಡೆ ಅದಾಗಿತ್ತು ಎಂಬುದು ಗಾಯತ್ರಿ ಚಕ್ರವರ್ತಿಯವರ ನಿಲುವಾಗಿತ್ತು. ಸದ್ಯ ತ್ರಿವಳಿ ತಲಾಕ್‍ನ ವಿಷಯದಲ್ಲಿ ಬಿಜೆಪಿಯ ಹಾವ-ಭಾವ, ದೇಹ ಭಾಷೆ, ಹೇಳಿಕೆಗಳಲ್ಲಿ ಇವೇ ಅಂಶಗಳು ಗೋಚರಿಸುತ್ತಿವೆ. ‘ಖಾಸಗಿತನವು ವ್ಯಕ್ತಿಯ ಮೂಲಭೂತ ಹಕ್ಕಲ್ಲ’ ಎಂಬ ಬಿಜೆಪಿಯ ವಾದವನ್ನು ತಿರಸ್ಕರಿಸಿದ ಸುಪ್ರೀಮ್ ಕೋರ್ಟ್‍ನ ಮಹತ್ವಪೂರ್ಣ ತೀರ್ಪು ಬಂದು 3 ದಿನಗಳಾದರೂ ಈವರೆಗೂ (ಈ ಲೇಖನ ಬರೆದ ದಿನದ ವರೆಗೆ) ಪ್ರತಿಕ್ರಿಯಿಸದ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ್ ತೀರ್ಪಿಗೆ ಅದೇ ದಿನ ‘Judgement of the Hon ble SC on Triple Talaq is historic. It grants equality to Muslim women and is a powerful measure for women empowerment ’ ಎಂದು ಟ್ವೀಟ್ ಮಾಡಿದುದರ ಅರ್ಥ ಏನು? ನಿಜಕ್ಕೂ ಮುಸ್ಲಿಮ್ ಮಹಿಳೆಯರು ಶೋಷಣೆಯಿಂದ ಮುಕ್ತವಾಗುವುದು ಮತ್ತು ಸಬಲಗೊಳ್ಳುವುದು ಮೋದಿಯವರ ಇಚ್ಛೆಯೇ ಅಥವಾ ಕಂದುಬಣ್ಣದ ಮುಸ್ಲಿಮ್ ಪುರುಷರಿಂದ ಕಂದು ಬಣ್ಣದ ಮುಸ್ಲಿಮ್ ಮಹಿಳೆಯರನ್ನು ರಕ್ಷಿಸಿದ ವಿಮೋಚಕನ ಪಾತ್ರಧಾರಿಯಾಗುವುದು ಅವರ ಉದ್ದೇಶವೇ? ಒಂದು ವೇಳೆ ಈ ಟ್ವೀಟ್ ಪ್ರಾಮಾಣಿಕವೇ ಆಗಿರುತ್ತಿದ್ದರೆ, ಅವರು ಮಾತಾಡಬೇಕೆಂದು ಮುಸ್ಲಿಮ್ ಸಮುದಾಯದ ಮಹಿಳೆಯರು ಬಯಸಿರುವ ಅದೆಷ್ಟೋ ಸಂದರ್ಭಗಳಲ್ಲಿ ಅವರೇಕೆ ಮೌನವಾಗಿದ್ದರು? ಶೋಷಣೆ ಎಂಬುದು ತ್ರಿವಳಿ ತಲಾಕ್‍ಗೆ ಸಂಬಂಧಿಸಿದ್ದು ಮಾತ್ರ ಅಲ್ಲವಲ್ಲ. ಇದೇ ಮುಸ್ಲಿಮ್ ಸಮುದಾಯದ ಸಾವಿರಾರು ಮಹಿಳೆಯರು ಅತ್ಯಾಚಾರ, ಹತ್ಯೆ, ಹಲ್ಲೆ, ಕ್ರೌರ್ಯಕ್ಕೆ ತುತ್ತಾದಾಗ ಮಾತಾಡಲೇಬೇಕಿದ್ದ ನರೇಂದ್ರ ಮೋದಿಯವರು ಮೌನವಾಗಿದ್ದರಲ್ಲ, ಯಾಕೆ? ಬಿಲ್ಕೀಸ್ ಬಾನು, ಝಕಿಯಾ ಜಾಫ್ರಿ ಮತ್ತು 2002ರ ಗುಜರಾತ್ ಹತ್ಯಾಕಾಂಡದ ನೂರಾರು ಸಂತ್ರಸ್ತೆಯರ ಬಗ್ಗೆ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರ ನಿಲುವು ಏನು? ಶಾಯರಾ ಬಾನುಗೆ ಬೆಂಗಾವಲಾಗಿ ನಿಂತಂತೆ ಬಿಲ್ಕೀಸ್ ಬಾನುಗೆ ಮತ್ತು ಝಕಿಯಾ ಜಾಫ್ರಿಗೆ ರಾಷ್ಟ್ರೀಯ ಮುಸ್ಲಿಮ್ ಮಹಿಳಾ ಮಂಚ್ ಬೆಂಗಾವಲಾಗಿ ನಿಲ್ಲಬಹುದಿತ್ತಲ್ಲವೇ? ಬಿಲ್ಕೀಸ್ ಬಾನು ಜೀವಭಯದಿಂದ ಪದೇ ಪದೇ ವಾಸ ಬದಲಿಸದಂತೆ ಕಾವಲು ನಿಲ್ಲಬಹುದಿತ್ತಲ್ಲವೇ? ಗುಜರಾತ್ ಹತ್ಯಾಕಾಂಡದ ಸಂತ್ರಸ್ತರು ವಾಸ ಮಾಡುತ್ತಿರುವ ನಿರಾಶ್ರಿತ ಶಿಬಿರಗಳನ್ನು ‘ಮಕ್ಕಳನ್ನು ಹುಟ್ಟಿಸುವ ಕಾರ್ಖಾನೆಗಳು’ ಎಂದವರು ಮತ್ತು ‘ಹಮ್ ಪಾಂಚ್  ಹಮಾರೆ ಪಚ್ಚೀಸ್’ ಎಂದು ತಮಾಷೆ ಮಾಡಿದವರು ಇವತ್ತು ತ್ರಿವಳಿ ತಲಾಕ್ ಕುರಿತಾದ ತೀರ್ಪನ್ನು ಐತಿಹಾಸಿಕವೆಂದು ಬಣ್ಣಿಸುವುದು ಮತ್ತು ಮುಸ್ಲಿಮ್ ಮಹಿಳಾ ಸಬಲೀಕರಣದ ಭಾಗವಾಗಿ ಕಾಣುವುದು ಯಾವ ಬಗೆಯ ಕಾಳಜಿ? ಗುಜರಾತ್, ಭಾಗಲ್ಪುರ, ಮುಝಫ್ಫರ್ ನಗರ್ ಮತ್ತಿತರ ಕಡೆ ಅತ್ಯಂತ ಯೋಜಿತವಾಗಿ ಮುಸ್ಲಿಮ್ ಮಹಿಳೆಯರ ಮಾನಭಂಗ, ಹತ್ಯೆ, ಶೋಷಣೆ ನಡೆಸಿದವರಿಗೂ ಬಿಜೆಪಿಗೂ ನಡುವೆ ಇರುವ ನಂಟಿನ ಬಗ್ಗೆ ಟ್ವೀಟ್ ಬಿಡಿ ಕನಿಷ್ಠ ಪಶ್ಚಾತ್ತಾಪ ಭಾವವನ್ನಾದರೂ ಪ್ರಧಾನಿಯವರು ಪ್ರಕಟಿಸಿರುವರೇ?
ಈಗಿನ ಬಿಜೆಪಿಯ ವಿಚಾರಧಾರೆಯನ್ನು ಪ್ರತಿನಿಧಿಸುವ ವರ್ಗವು 1940-50ರಲ್ಲಿ ಹಿಂದೂ ಕೋಡ್ ಬಿಲ್ (HCB) ಅನ್ನು ಪ್ರಬಲವಾಗಿ ವಿರೋಧಿಸಿತ್ತು. ಹಿಂದೂ ಸಮುದಾಯಕ್ಕೆ ಸಂಬಂಧಿಸಿ ಕಾನೂನು ಸುಧಾರಣೆ ಮಾಡುವುದನ್ನು ಗೋಲ್ವಾಲ್ಕರ್, ಹಿಂದೂ ಮಹಾಸಭಾ, ಭಾರತೀಯ ಜನಸಂಘ, ರಾಮರಾಜ್ಯ ಪರಿಷತ್ ಮತ್ತು ಈ ವಿಚಾರಧಾರೆಯನ್ನು ಪ್ರತಿನಿಧಿಸುವ ಮಂದಿ ಪಾರ್ಲಿಮೆಂಟ್‍ನಲ್ಲಿ ವಿರೋಧಿಸಿದ್ದರು. ಹಿಂದೂ ಲಾ ಸಮಿತಿಯ ಸಲಹೆಗಳ ಬಗ್ಗೆ ಅಖಿಲ ಭಾರತ ಹಿಂದೂ ಮಹಾಸಭಾದ ನಾಯಕರಾದ ಎಸ್.ಸಿ. ಚಟರ್ಜಿ ಮತ್ತು ಅಖಿಲ ಭಾರತ ಹಿಂದೂ ಮಹಿಳಾ ಸಭಾದ ಪ್ರಧಾನ ಕಾರ್ಯದರ್ಶಿ ಜಾನಕಿ ಭಾೈ ಜೋಶಿಯವರು ಗವರ್ನರ್ ಜನರಲ್ ಆಗಿದ್ದ ಲಿನ್‍ಲಿತ್‍ಗೋ ಮತ್ತು ವೈಸ್‍ರಾಯ್ ಆಗಿದ್ದ ವಾವೆಲ್‍ಗೆ ಪತ್ರ ಬರೆದಿದ್ದರು. 1949-50ರಲ್ಲಿ ಅಖಿಲ ಭಾರತ ಹಿಂದೂ ಮಹಿಳಾ ಸಭಾದ ಸದಸ್ಯೆಯರು ಪ್ರಸ್ತಾವಿತ ಹಿಂದೂ ಕೋಡ್ ಬಿಲ್ ವಿರುದ್ಧ ಚಟರ್ಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಅಂದಹಾಗೆ,
ಮುಸ್ಲಿಮ್ ಪುರುಷರ ಶೋಷಣೆಯಿಂದ ಮುಸ್ಲಿಮ್ ಮಹಿಳೆಯರನ್ನು ರಕ್ಷಿಸಿದ ಭಾವದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರಿಗೆ ಇವೆಲ್ಲ ಗೊತ್ತಿರಬಹುದೆಂದು ನಂಬುತ್ತೇನೆ. 

Thursday, August 31, 2017

ಉಸ್ತಾದ್, ಪ್ರಿನ್ಸ್, ಜೈ, ಬಿಟ್ಟು ಮತ್ತು ...

       ಹುಲಿಗಳಲ್ಲಿ ಸೆಲೆಬ್ರಿಟಿ ಹುಲಿಗಳು ಯಾಕಿವೆ? ಯಾವ ಕಾರಣಕ್ಕಾಗಿ ಒಂದು ಹುಲಿ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುತ್ತದೆ? ಅದಕ್ಕೆ ಮಾನದಂಡಗಳಿವೆಯೇ? ಅದು ಪ್ರತಿಭೆ ಆಧಾರಿತವೇ, ಆಕಾರ ಆಧಾರಿತವೇ ಅಥವಾ ಇನ್ನಾವುದಾದರೂ ವಿಶೇಷತೆ ಒಂದು ಹುಲಿಯನ್ನು ಸೆಲೆಬ್ರಿಟಿಗೊಳಿಸುವುದರಲ್ಲಿದೆಯೇ? ರಾಜಸ್ಥಾನದ ರಾಂತಂಬೋರೆ ರಾಷ್ಟ್ರೀಯ ರಕ್ಷಿತಾರಣ್ಯದ ಉಸ್ತಾದ್ ಅಥವಾ ಮಚಲಿ ಎಂಬ ಹುಲಿ, ಕರ್ನಾಟಕದ ಬಂಡೀಪುರ ರಾಷ್ಟ್ರೀಯ ರಕ್ಷಿತಾರಣ್ಯದ ಪ್ರಿನ್ಸ್ ಎಂಬ ಹುಲಿ, ಮಹಾರಾಷ್ಟ್ರದ ಚಂದ್ರಾಪುರದ ರಕ್ಷಿತಾರಣ್ಯದ ಜೈ ಮತ್ತು ಬಿಟ್ಟು ಎಂಬ ಹುಲಿಗಳು ಇಂಥ ಪ್ರಶ್ನೆಗಳನ್ನು ಆಗಾಗ ಹುಟ್ಟು ಹಾಕುತ್ತಲೇ ಇರುತ್ತವೆ. ಈ ಹಿಂದೆ ಒಮ್ಮೆ ಉಸ್ತಾದ್ ಹುಲಿಯು ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರವಾಗಿತ್ತು. ಚಂದ್ರಾಪುರ್ ಅರಣ್ಯದಿಂದ ಜೈ ಹುಲಿಯು ಕಾಣೆಯಾಗಿದೆ ಎಂಬ ಸುದ್ದಿಯೂ ಮಾಧ್ಯಮಗಳ ಮುಖಪುಟದಲ್ಲಿ ಜಾಗ ಪಡೆಯುವಷ್ಟು ಪ್ರಾಮುಖ್ಯತೆಯನ್ನು ಪಡೆಯಿತು. ಈ ದೇಶದ ರಕ್ಷಿತಾರಣ್ಯಗಳಲ್ಲಿ ನೂರಾರು ಹುಲಿಗಳಿವೆ. ಈ ಹುಲಿಗಳ ನಡುವೆ ಪ್ರಣಯ, ಜಗಳ, ಸಾವು, ಅನಾರೋಗ್ಯ.. ಎಲ್ಲವೂ ನಡೆಯುತ್ತಲೂ ಇರುತ್ತವೆ. ಆದರೆ ಇವುಗಳಲ್ಲಿ ನಾಲ್ಕೈದು ಹುಲಿಗಳನ್ನು ಆಯ್ದು, ಅವುಗಳಿಗೆ ಪ್ರತ್ಯೇಕ ಹೆಸರು ಕೊಟ್ಟು, ಅವುಗಳ ಬಗ್ಗೆ ವಿಶೇಷ ಗಮನ ಹರಿಯುವಂತೆ ಮಾಡುವುದು ಯಾತಕ್ಕಾಗಿ? ಅದರ ಉz್ದÉೀಶವೇನು? ಬಹುಶಃ, ಜನರನ್ನು ಈ ರಕ್ಷಿತಾರಣ್ಯಗಳ ಕಡೆಗೆ ಆಕರ್ಷಿಸಲು ಮತ್ತು ಅವರಲ್ಲಿ ಈ ಹುಲಿಗಳ ಬಗ್ಗೆ ಕುತೂಹಲವನ್ನು ಹುಟ್ಟಿಸುವುದರ ಹೊರತಾಗಿ ಇದಕ್ಕೆ ಬೇರೆ ಕಾರಣಗಳಿರುವ ಸಾಧ್ಯತೆಯಿಲ್ಲ. ಬಹುಶಃ, ಉಸ್ತಾದ್ ನಂಥ ಹುಲಿಗಳು ನಮ್ಮ ದೇಶದ ರಕ್ಷಿತಾರಣ್ಯಗಳಲ್ಲಿ ಅನೇಕ ಇರಬಹುದು ಮತ್ತು ಅವುಗಳಲ್ಲಿ ಉಸ್ತಾದ್‍ಗಿಂತಲೂ ಗಟ್ಟಿಮುಟ್ಟಾದ ಹಾಗೂ ಚೆಲುವಾದ ಹುಲಿಗಳೂ ಇರಬಹುದು. ಮುಂದೊಂದು ದಿನ ಇವುಗಳಲ್ಲಿ ಒಂದು ಹುಲಿಗೆ ಕುತೂಹಲಕಾರಿ ಕತೆಯೊಂದಿಗೆ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುವ ಭಾಗ್ಯವೂ ಸಿಗಬಹುದು. ಆದಾಯ ಹೆಚ್ಚಿಸಿಕೊಳ್ಳುವ ತಂತ್ರ ಇದು. ಜನರನ್ನು ಸೆಳೆಯುವ ಬುದ್ಧಿವಂತಿಕೆಯೂ ಇದರ ಹಿಂದಿದೆ. ಹಾಗಂತ, ಒಂದು ಸರಕಾರವೇ ಇಂಥ ತಂತ್ರವನ್ನು ತನ್ನ ಕಾರ್ಯನೀತಿಯಾಗಿ ಅಳ ವಡಿಸಿಕೊಂಡರೆ ಹೇಗಾಗಬಹುದು? ಕಳೆದ ಮೂರು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಡವಳಿಕೆಗಳು, ವಿದೇಶಾಂಗ ನೀತಿಗಳು, ಉಡುಗೊರೆಗಳು ಮತ್ತು ಕಾರ್ಯಕ್ರಮ ಆಯೋಜನೆಗಳು ಹುಲಿಗಳ ಸೆಲೆಬ್ರಿಟಿ ತಂತ್ರವನ್ನು ನೆನಪಿಸುವಂತಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೇಪಾಳಕ್ಕೆ ಭೇಟಿ ಕೊಟ್ಟರು. ಪ್ರಸಿದ್ಧ ಪಶುಪತಿನಾಥ ದೇವಾಲಯವನ್ನು ಸಂದರ್ಶಿಸಿದರು. ಈ ಸಂದರ್ಶನದ ವೇಳೆ ನರೇಂದ್ರ ಮೋದಿಯವರು ಕೇಸರಿ ಶಾಲು, ರುದ್ರಾಕ್ಷಿ ಮಾಲೆ ಮತ್ತು ಹಣೆಗೆ ಗಂಧವನ್ನು ಹಚ್ಚಿಕೊಂಡಿದ್ದರು. ಇದರಲ್ಲಿ ತಪ್ಪು ಖಂಡಿತ ಇಲ್ಲ. ಇದು ಅವರವರ ಸ್ವಾತಂತ್ರ್ಯ. ಇದೇ ವೇಳೆ, ಸೆಕ್ಯುಲರ್ ಭಾರತದ ಪ್ರಧಾನಿಯೋರ್ವರು ಭಾರತದ ಕೆಲವು ನಿರ್ದಿಷ್ಟ ಸಂಘಟನೆಗಳಲ್ಲಿ ಮಾತ್ರ ಕಡ್ಡಾಯದಂತೆ ಪಾಲಿಸಲಾಗುತ್ತಿರುವ ‘ಕೇಸರಿ ಶಾಲು, ಗಂಧ ಮತ್ತು ರುದ್ರಾಕ್ಷಿ ಮಾಲೆ’ ಧಾರಣೆಯಲ್ಲಿ ಕಾಣಿಸಿಕೊಳ್ಳುವುದನ್ನು ತೀರಾ ಸಹಜವಾಗಿ ಕಾಣಬಹುದೇ? ಅದರ ಹಿಂದೆ ಅಸಹಜವಾದುದು ಇರಲಾರದೇ? ಪ್ರಧಾನಿ ನರೇಂದ್ರ ಮೋದಿಯವರು ಅನುಸರಿಸುತ್ತಿರುವ ಅದೇ ಧರ್ಮವನ್ನು ಅನುಸರಿಸುವವರು ಕಾಂಗ್ರೆಸ್, ಕಮ್ಯುನಿಸ್ಟ್, ಆಪ್, ತೃಣಮೂಲ, ಜನತಾದಳಗಳು, ತೆಲುಗುದೇಶಂ, ಟಿ.ಆರ್.ಎಸ್., ಸಮಾಜವಾದಿ.. ಸಹಿತ ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಅವರೆಲ್ಲ ದೇವಾಲಯ ಪ್ರವೇಶದ ವೇಳೆ ಇದೇ ಉಡುಪು ನೀತಿಯನ್ನು ಅನುಸರಿಸುವುದು ಕಡಿಮೆ. ಮೋದಿಯವರ ಉಡುಗೆ ಪ್ರಾಮುಖ್ಯತೆ ಪಡೆಯುವುದೇ ಇಲ್ಲಿ. ಅವರು ಸೆಕ್ಯುಲರ್ ಭಾರತದಲ್ಲಿರುವ ನಿರ್ದಿಷ್ಟ ಧಾರ್ಮಿಕ ಸಂಘ ಟನೆಗಳನ್ನು ತನ್ನ ಉಡುಗೆಯಲ್ಲಿ ಪ್ರತಿನಿಧಿಸಿದ್ದಾರೆ. ಆ ಮೂಲಕ ಆ ಸಂಘಟನೆಗಳನ್ನು ಮತ್ತು ಅವು ಪ್ರತಿಪಾದಿಸುವ ವಿಚಾರ ಧಾರೆಗಳನ್ನು ನೇಪಾಳಿಗರಲ್ಲಿ ಜನಪ್ರಿಯಗೊಳಿಸುವ ಉದ್ದೇಶ ಇದೆ. ನಿರ್ದಿಷ್ಟ ವಿಚಾರಧಾರೆಗೆ ಓರ್ವ ಪ್ರಧಾನಿ ರಾಯಭಾರಿ ಯಾಗುವ ತಂತ್ರ ಇದು. ಸೆಕ್ಯುಲರ್ ಸಂವಿಧಾನವನ್ನು ತನ್ನ ನಡೆ-ನುಡಿಯಲ್ಲಿ ಪ್ರತಿನಿಧಿಸಬೇಕಾದ ಪ್ರಧಾನಿಯೋರ್ವರು ಆ ಸಂವಿಧಾನಕ್ಕೆ ತೀರಾ ವಿರುದ್ಧವಾದ ವಿಚಾರಧಾರೆಯನ್ನು ಹೇಗೆ ನಾಜೂಕಾಗಿ ಪ್ರಚಾರ ಮಾಡಿದರು ಅನ್ನುವುದಕ್ಕೆ ಸಾಕ್ಷಿ ಇದು. ಇದಕ್ಕೆ ಇನ್ನೊಂದು ಉದಾಹರಣೆ ಅಬುಧಾಬಿ ಭೇಟಿ. 2015ರಲ್ಲಿ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಯುಎಇ ಸರಕಾರವು ಮಹತ್ವದ ಘೋಷಣೆಯೊಂದನ್ನು ಹೊರಡಿಸಿತು. ಅಬುಧಾಬಿಯಲ್ಲಿ ದೇವಾಲಯ ವೊಂದನ್ನು ನಿರ್ಮಿಸುವುದಕ್ಕೆ ಜಾಗ  ಮಂಜೂರು ಮಾಡಲಾಗಿರುವ ಘೋಷಣೆ ಅದು. ಈ ಘೋಷಣೆಗೆ ಕೇಂದ್ರ ವಿದೇಶಾಂಗ ಸಚಿವಾಲಯವು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಹೀಗೆ:
“ಭಾರತೀಯ ಸಮುದಾಯದ ದೀರ್ಘಕಾಲದ ಕಾಯುವಿಕೆ ಕೊನೆಗೊಂಡಿದೆ. ಪ್ರಧಾನಿ ಮೋದಿಯವರ ಯುಎಇ ಭೇಟಿಯ ವೇಳೆ ಅಬುಧಾಬಿಯಲ್ಲಿ ದೇವಾಲಯ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಲು ಯುಎಇ ಸರಕಾರ ನಿರ್ಧರಿಸಿದೆ.”
ಪ್ರಧಾನಿ ನರೇಂದ್ರ ಮೋದಿಯವರು ಹೀಗೆ ಟ್ವೀಟ್ ಮಾಡಿದರು:
“ಅಬುಧಾಬಿಯಲ್ಲಿ ದೇವಾಲಯ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಿದ ಯುಎಇ ಆಡಳಿತಕ್ಕೆ ನಾನು ಕೃತಜ್ಞನಾಗಿದ್ದೇನೆ. ಇದು ಮಹತ್ದದ  ಹೆಜ್ಜೆ.”
      ನಿಜಕ್ಕೂ ಇದು ಮಹತ್ವದ ಹೆಜ್ಜೆಯೇ? ದೇವಾಲಯವನ್ನೋ ಮಸೀದಿಯನ್ನೋ ಅಥವಾ ಚರ್ಚನ್ನೋ ನಿರ್ಮಿಸಿ ಕೊಡುವುದು ಓರ್ವ ಪ್ರಧಾನಿಯ ವಿದೇಶ ಭೇಟಿಯ ಪ್ರಮುಖ ಗುರಿಯೇ? ಅಥವಾ ಒಂದು ಮುಸ್ಲಿಮ್ ರಾಷ್ಟ್ರದಲ್ಲೂ ಮಂದಿರ ನಿರ್ಮಿಸಿದ ವರ್ಚಸ್ಸನ್ನು ಪಡಕೊಳ್ಳುವ ತಂತ್ರದ ಭಾಗವೇ ಈ ಟ್ವೀಟ್? ನಿಜವಾಗಿ ಯಾವುದೇ ದೇಶದ ಆಡಳಿತ ಪ್ರಮುಖರೊಬ್ಬರು ಇನ್ನೊಂದು ದೇಶಕ್ಕೆ ಭೇಟಿ ಕೊಟ್ಟು ಅಲ್ಲಿ ಚರ್ಚನ್ನೋ ಮಸೀದಿ ಯನ್ನೋ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಿಸಿಕೊಳ್ಳು ವುದು ಭೇಟಿಯ ಪ್ರಮುಖ ಗುರಿಯಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಯುಎಇಯಲ್ಲಿ ಭಾರತೀಯ ವಲಸಿಗ ಕುಟುಂಬಗಳು ಧಾರಾಳ ಇವೆ. ಅವರಿಗೆ ಅವರದ್ದೇ  ಆದ ಸಾಕಷ್ಟು ಸಮಸ್ಯೆಗಳೂ ಇವೆ. ಉದ್ಯೋಗ ಭದ್ರತೆ ಮತ್ತು ಸುರಕ್ಷಿತತೆ ಇವುಗಳಲ್ಲಿ ಪ್ರಮುಖವಾದುದು. ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಮೂಲವಾಗಿರುವ ಇವರ ಬಗ್ಗೆ ಯಾವ ಮಹತ್ವಪೂರ್ಣ ಒಪ್ಪಂದವನ್ನೂ ಘೋಷಿಸದೆಯೇ ಮಂದಿರವನ್ನು ಸಾಧನೆಯಾಗಿ ಬಿಂಬಿಸಿಕೊಳ್ಳುವುದೆಂದರೇನು? ಒಂದು ವೇಳೆ ಮೋದಿಯವರ ಸ್ಥಾನದಲ್ಲಿ ಓರ್ವ ಮುಸ್ಲಿಮ್ ಇರುತ್ತಿದ್ದರೆ ಮತ್ತು ಅವರು ಜಪಾನಿಗೋ ನಾರ್ವೆಗೋ ಭೇಟಿ ನೀಡಿ ‘ಮಸೀದಿ ನಿರ್ಮಾಣ’ವನ್ನು ಭೇಟಿಯ ಪ್ರಮುಖ ಸಾಧನೆಯಾಗಿ ಟ್ವೀಟ್ ಮಾಡಿರುತ್ತಿದ್ದರೆ ಅದಕ್ಕೆ ಲಭ್ಯವಾಗುವ ಪ್ರತಿಕ್ರಿಯೆಗಳು ಹೇಗಿರುತ್ತಿತ್ತು? ಬಹುಶಃ, ಈ ದೇಶದಲ್ಲಿ ಮಂದಿರ ನಿರ್ಮಾಣದ ಗುರಿಯೊಂದಿಗೆ ಅಧಿಕಾರಕ್ಕೆ ಬಂದ ಪಕ್ಷವೊಂದರ ಪ್ರತಿನಿಧಿಯಾದ ಮೋದಿಯವರು ಮುಸ್ಲಿಮ್ ರಾಷ್ಟ್ರದಲ್ಲೂ ಮಂದಿರ ನಿರ್ಮಿಸುವಷ್ಟು ಕಾಳಜಿ ಉಳ್ಳವರು ಎಂದು ಸಾರುವುದೇ ಈ ಟ್ವೀಟ್‍ನ ಉದ್ದೇಶ. ಆ ಮೂಲಕ ಬೆಂಬಲಿಗರಲ್ಲಿ ತನ್ನ ಇಮೇಜನ್ನು ಹೆಚ್ಚಿಸಿಕೊಳ್ಳುವ ಶ್ರಮವೂ ಇದರ ಹಿಂದಿದೆ.
ಯಾವುದೇ ರಾಷ್ಟ್ರದ ಆಡಳಿತ ಪ್ರಮುಖರ ವಿದೇಶ ಭೇಟಿ ಮಹತ್ವಪೂರ್ಣವಾಗಬೇಕಾದುದು ಅಲ್ಲಿ ನಡೆಯುವ ಒಪ್ಪಂದಗಳು ಮತ್ತು ಹೇಳಿಕೆಗಳಿಗಾಗಿ ಮಾತ್ರ. ಅಮೇರಿಕದ ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಸೌದಿ ಭೇಟಿ ಇದಕ್ಕೊಂದು ಉದಾಹರಣೆ. ಅವರ ಭೇಟಿಯ ಬಳಿಕ ನಾಲ್ಕು ಗಲ್ಫ್ ರಾಷ್ಟ್ರಗಳು ತಮ್ಮ ಬಹುಕಾಲದ ಮಿತ್ರ ಮತ್ತು ತಮ್ಮ ಗಡಿಯನ್ನೇ ಹಂಚಿಕೊಳ್ಳುವ ಕತರ್ ಮೇಲೆ ದಿಗ್ಬಂಧನ ಹೇರಿದುವು. ಆ ದಿಗ್ಬಂಧನದ ಸರಿ-ತಪ್ಪುಗಳೇನೇ ಇರಲಿ, ಒಂದು ಭೇಟಿಯ ಸ್ಪಷ್ಟ ಫಲಿತಾಂಶವಾಗಿ ಆ ಬೆಳವಣಿಗೆಯನ್ನು ಎತ್ತಿಕೊಳ್ಳಬಹುದಾಗಿದೆ. ವಿಶೇಷ ಏನೆಂದರೆ, ಇವತ್ತು ಮೋದಿಯವರ ವಿದೇಶ ಭೇಟಿಯು ಫಲಿತಾಂಶದ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆಯುವುದರ ಬದಲು ಅವರು ಧರಿಸಿದ ಉಡುಪು, ಆಲಿಂಗನ, ಉಡುಗೊರೆಗಳ ಕಾರಣಕ್ಕಾಗಿಯೇ ಚರ್ಚಿತವಾಗುತ್ತಿವೆ. ಅವರ ಜಪಾನ್ ಭೇಟಿಯ ವೇಳೆ ರಾಜ ಅಕಿಹಿಟೋ ಅವರಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದುದನ್ನು ಭಾರತೀಯ ಮಾಧ್ಯಮಗಳು ವಿಶೇಷ ಕಾಳಜಿ ವಹಿಸಿ ಚರ್ಚಿಸಿದುವು. ಅಲ್ಲದೇ ಜಪಾನ್ ಪ್ರಧಾನಿ ಶಿನೊಝೊ ಅಬೆಯವರಿಗೂ ಭಗವದ್ಗೀತೆ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕವನ್ನು ಉಡುಗೊರೆಯಾಗಿ ನೀಡಿದುದೂ ಚರ್ಚೆಗೊಳಗಾಯಿತು. ‘ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸಬೇಕು’ ಎಂದು 2014ರಲ್ಲಿ ಸುಶ್ಮಾ ಸ್ವರಾಜ್ ಆಗ್ರಹಿಸಿದುದೂ ಈ ಸಂದರ್ಭದಲ್ಲಿ ಪ್ರಚಾರ ಪಡೆಯಿತು. ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್‍ಗೂ ಪ್ರಧಾನಿ ಮೋದಿಯವರು ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದರು. ನಿಜವಾಗಿ, ಭಗವದ್ಗೀತೆ ಭಾರತದ ಸಂವಿಧಾನ ಅಲ್ಲ. ಹೀಗಿದ್ದೂ ಭಾರತದ ಪ್ರಧಾನಿಯೋರ್ವರು ಉಡುಗೊರೆಯಾಗಿ ಸಂವಿಧಾನವನ್ನೋ ಅಥವಾ ತಾಜ್‍ಮಹಲ್ ಮತ್ತಿತರ
ವಾಸ್ತುಶಿಲ್ಪಗಳ ಪ್ರತಿಕೃತಿಗಳನ್ನೋ ನೀಡುವುದರ ಬದಲು ಭಗವದ್ಗೀತೆಯನ್ನೇ ಉಡುಗೊರೆಯಾಗಿ ಆಯ್ದುಕೊಂಡದ್ದೇಕೆ? ಬಹುಶಃ, ಇದೊಂದು ಅಳೆದೂ ತೂಗಿ ಮಾಡಲಾದ ಆಯ್ಕೆ. ಸೆಕ್ಯುಲರ್ ಭಾರತದ ಪ್ರಧಾನಿಯಾಗಿದ್ದೂ ಮೋದಿಯವರು ಹೇಗೆ ಭಗವದ್ಗೀತೆಯನ್ನು ಪ್ರಚಾರಪಡಿಸುತ್ತಿದ್ದಾರೆ ಎಂಬುದನ್ನು ಅತ್ಯಂತ ಬುದ್ಧಿವಂತಿಕೆಯಿಂದ ಸಾರುವ ತಂತ್ರ ಇದು. ಮೋದಿಯವರ ಬೆಂಬಲಿಗರ ಬೆಂಬಲವನ್ನು ತಾಜಾ ಆಗಿ ಇಟ್ಟುಕೊಳ್ಳುವುದಕ್ಕೆ ಇದು ತೀರಾ ಅಗತ್ಯ. 2016ರಲ್ಲಿ ನರೇಂದ್ರ ಮೋದಿ ಸರಕಾರವು ಜಾರಿಗೆ ತಂದ ಪೌರತ್ವ ಕಾಯ್ದೆಯಲ್ಲೂ ಇದನ್ನು ಗುರುತಿಸಬಹುದು. ಅಫಘಾನ್, ಪಾಕ್ ಮತ್ತು ಬಾಂಗ್ಲಾ ದೇಶದಿಂದ ಭಾರತಕ್ಕೆ ವಲಸೆ ಬರುವ ಹಿಂದೂ, ಕ್ರೈಸ್ತ, ಸಿಕ್ಖ್, ಫಾರ್ಸಿಗಳನ್ನು ಕಾನೂನುಬಾಹಿರ ವಲಸಿಗರೆಂದು ಪರಿಗಣಿಸಲಾಗದು ಎಂದು ಈ ಕಾಯ್ದೆ ಹೇಳುತ್ತದೆ. ಆದರೆ ಈ ಪಟ್ಟಿಯಲ್ಲಿ ಮುಸ್ಲಿಮರ ಪ್ರಸ್ತಾಪವೇ ಇಲ್ಲ. ಅಂದರೆ, ಈ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಮುಸ್ಲಿಮ್ ವಲಸಿಗರನ್ನು ಕಾನೂನುಬಾಹಿರವಾಗಿಯೇ ಪರಿಗಣಿಸಲಾಗುತ್ತದೆ ಎಂದರ್ಥ. ನಿಜವಾಗಿ, ಭಾರತದ ಗಡಿಯಲ್ಲಿ ಅತ್ಯಂತ ಹೆಚ್ಚು ನಿರಾಶ್ರಿತರಾಗಿರುವವರೆಂದರೆ ಹಿಂದೂಗಳು ಮತ್ತು ಮುಸ್ಲಿಮರು. ಇಲ್ಲೂ ಮೋದಿಯವರ ಬೆಂಬಲಿಗ ವರ್ಗದ ‘ಮುಸ್ಲಿಮ್ ವಿರೋಧಿ’ ಭಾವನೆಯನ್ನು ತಣಿಸುವ ಶ್ರಮ ನಡೆದಿರುವುದು ಅತ್ಯಂತ ಸ್ಪಷ್ಟ. ತನ್ನ ಬೆಂಬಲಿಗರ ಬೆಂಬಲವನ್ನು ತಾಜಾ ಆಗಿ ಇಟ್ಟುಕೊಳ್ಳುವುದಕ್ಕೆ ಮಂದಿರ, ಭಗವದ್ಗೀತೆ, ದೇವಾಲಯ ಭೇಟಿ, ಮುಸ್ಲಿಮ್ ವಿರೋಧಿ ನೀತಿಗಳಿಂದ ಸಾಧ್ಯವಿದೆ ಎಂದು ಮೋದಿ ಮತ್ತು ಅವರ ಚಿಂತಕ ಛಾವಡಿ ತಿಳಿದುಕೊಂಡಿದೆ. ಒಂದು ರೀತಿಯಲ್ಲಿ, ಇಂಥ ನಿಲುವುಗಳೇ ಈ ಸರಕಾರದ ವರ್ಚಸ್ಸಿನ ಉಳಿವಿನಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ. ಉಸ್ತಾದ್, ಪ್ರಿನ್ಸ್, ಜೈ ಮತ್ತು ಬಿಟ್ಟು ಹುಲಿಗಳಂತೆ ಈ ಸರಕಾರದ ಪಾಲಿಗೆ ಈ ವಿಷಯಗಳೇ ಸೆಲೆಬ್ರಿಟಿಗಳು. ಇವನ್ನು ಆಗಾಗ ಚರ್ಚೆಗೊಳಗಾಗುವಂತೆ ನೋಡಿಕೊಂಡು ಸರಕಾರದ ವರ್ಚಸ್ಸನ್ನು ತಾಜಾ ಆಗಿ ಉಳಿಸಿಕೊಳ್ಳುವ ಶ್ರಮ ನಡೆಯುತ್ತಿದೆ.

Saturday, August 5, 2017

ಪಾತ್ರಕ್ಕೆ ತಕ್ಕ ಉಡುಪು ಯಾಕೆ ಹೆಣ್ಣಿಗೆ ಮಾತ್ರ?

      ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆ, ಪ್ರತಿಭೆ.. ಮುಂತಾದು ವುಗಳನ್ನು ಅತ್ಯಂತ ಹೆಚ್ಚು ಚರ್ಚೆಗೆ ಎತ್ತಿಕೊಳ್ಳುವುದು ಸಿನಿಮಾ ಕ್ಷೇತ್ರ. ಅಲ್ಲಿಂದ ಬಿಡುಗಡೆಯಾಗುವ ಸಿನಿಮಾಗಳಲ್ಲಿ ಪುರುಷರನ್ನು ಸದೆಬಡಿಯುವ ಪಾತ್ರದಲ್ಲಿ ಮಹಿಳೆ ಮಿಂಚುತ್ತಾಳೆ. ಪುರುಷ ನಿಗಿಂತಲೂ ಹೆಚ್ಚು ಐಕ್ಯೂ ಇರುವವಳಾಗಿ ಗುರುತಿಸಿಕೊಳ್ಳುತ್ತಾಳೆ. ಅದ್ಭುತ ತಾಯಿಯಾಗಿ, ಪ್ರೇಮಿಯಾಗಿ, ಸಹನಾಮಯಿಯಾಗಿ, ಬುದ್ಧಿವಂತಳಾಗಿ, ಪ್ರತಿಭಟನಾ ಗುಣವುಳ್ಳವಳಾಗಿ, ಸಮಾನತೆಯ ಪ್ರತಿಪಾದಕಳಾಗಿ.. ಹೀಗೆ ಎಲ್ಲ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಾಳೆ. ಇದೊಂದು ಮುಖ. ಈ ಸುಂದರ ಮುಖದಿಂದ ಆಕರ್ಷಿತರಾಗಿ ಧಾರಾಳ ಮಹಿಳೆಯರು ಈ ಕ್ಷೇತ್ರದಲ್ಲಿ ತಮ್ಮನ್ನು ಪರೀಕ್ಷೆಗೊಡ್ಡಲು ಸಿದ್ಧರಾಗುತ್ತಿದ್ದಾರೆ. ಅಲ್ಲಿ ಸಮಾನತೆಯಿದೆ, ಲಿಂಗ ಬೇಧ ಇಲ್ಲ, ಸುರಕ್ಷಿತತೆಯಿದೆ.. ಇತ್ಯಾದಿ ಇತ್ಯಾದಿ ನಂಬಿಕೆಗಳೂ ಅವರಲ್ಲಿವೆ. ಅದೇ ವೇಳೆ, ಇದಕ್ಕೆ ಇನ್ನೊಂದು ಮುಖವೂ ಇದೆ. ಕೇರಳದ ನಟಿಯರು ಕಳೆದವಾರ ಈ ಕರಾಳ ಮುಖವನ್ನು ಸಾರ್ವಜನಿಕರ ಮುಂದೆ ತೆರೆದಿಟ್ಟರು. Womens collective in Cinema ಎಂಬ ಹೆಸರಲ್ಲಿ ಒಂದು ನಿಯೋಗವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿಗೆ ಒಯ್ದರು. ಮಂಜು ವಾರಿಯರ್, ಬೀನಾ ಮೋಳ್, ರೀಮಾ ಕಲ್ಲಿಂಗಲ್, ಪಾರ್ವತಿ, ಅಂಜಲಿ ಮೆನನ್ ಮುಂತಾದ ಪ್ರಮುಖ ನಟಿಯರು ಆ ನಿಯೋಗದಲ್ಲಿದ್ದರು. ಅವರ ಬೇಡಿಕೆ ಏನೆಂದರೆ, ಸಿನಿಮಾ ಇಂಡಸ್ಟ್ರಿಯಲ್ಲಿ ತಮಗೆ ಸುರಕ್ಷಿತತೆಯನ್ನು ಒದಗಿಸ ಬೇಕು ಎಂಬುದು. ಎಲ್ಲಿ ಮಹಿಳಾ ಸುರಕ್ಷಿತತೆಯ ಬಗ್ಗೆ ಸಾಲು ಸಾಲು ಸಿನಿಮಾಗಳು, ಡಯಲಾಗ್‍ಗಳು ಸೃಷ್ಟಿಯಾಗುತ್ತೋ ಅಲ್ಲೇ  ಮಹಿಳೆ ಅಸುರಕ್ಷಿತಳಾಗಿದ್ದಾಳೆ ಎಂಬುದು. ಅಷ್ಟಕ್ಕೂ, ಈ ಅಸುರಕ್ಷಿತತೆಯ ಭಯ ಇವರನ್ನು ಕಾಡುತ್ತಿರುವುದು ಪ್ರಾಣಿಗಳಿಂದಲ್ಲ, ಪುರುಷರಿಂದ. ಹೆಣ್ಣನ್ನು ಅತ್ಯಾಚಾರಿಗಳಿಂದ, ದರೋಡೆಕೋರರಿಂದ, ಚುಡಾವಣೆದಾರರಿಂದ, ಮಾನವ ಕಳ್ಳ ಸಾಗಾಟಗಾರರಿಂದ.. ಅಮೋಘವಾಗಿ ರಕ್ಷಿಸುವ ಪಾತ್ರದಲ್ಲಿ ಮಿಂಚುತ್ತಿರುವ ಹೀರೋ ಗಳಿಂದ. ಅಂಥ ಚಿತ್ರಕತೆಯನ್ನು ರಚಿಸಿದ ಪುರುಷನಿಂದ. ನಿರ್ದೇಶಕನಿಂದ. ಸಹನಟರಿಂದ. ತಂತ್ರಜ್ಞರಿಂದ. ಈ ಬೆಳವಣಿಗೆ ಗಿಂತ ಕೆಲವು ಸಮಯ ಮೊದಲು ತಮಿಳುನಾಡಿನ ಪ್ರಮುಖ ನಟ ಶರತ್ ಕುಮಾರ್‍ರ ಮಗಳು ವರಲಕ್ಷ್ಮಿ ಒಂದು ಟ್ವೀಟ್ ಮಾಡಿದರು. ಆಕೆಯೂ ಓರ್ವ ಪ್ರಮುಖ ನಟಿ. ಕೇರಳದ  ಪ್ರಸಿದ್ಧ ನಟಿಯನ್ನು ಚಲಿಸುತ್ತಿರುವ ಆಡಿ ಕಾರಿನಲ್ಲಿ ಗಂಟೆಗಳ ವರೆಗೆ ಲೈಂಗಿಕವಾಗಿ ಹಿಂಸಿಸಿದ ಪ್ರಕರಣದ ಬಳಿಕ ಮಾಡಿದ ಟ್ವೀಟ್ ಇದು.
‘ತಮಿಳು ಟಿ.ವಿ. ಚಾನೆಲ್‍ನ ಮುಖ್ಯಸ್ಥನ ಜೊತೆ ಸೀರಿಯಲ್‍ಗೆ ಸಂಬಂಧಿಸಿ ಸಭೆ ನಡೆಸಿದೆ. ಬಳಿಕ ಆತ ಲೈಂಗಿಕವಾಗಿ ಸಹಕರಿಸುವಂತೆ ಕೋರಿದ..’ ಈ ಟ್ವೀಟ್‍ಗೆ ಅನೇಕ ಮಂದಿ ಆಘಾತ ವ್ಯಕ್ತಪಡಿಸಿದರು.
      2015ರಲ್ಲಿ ಲಂಡನ್ನಿನ ಗಾರ್ಡಿಯನ್ ಪತ್ರಿಕೆಯು ಒಂದು ಸಮೀಕ್ಷೆ ಆಧಾರಿತ ಅಭಿಪ್ರಾಯವನ್ನು ಮಂಡಿಸಿತ್ತು. ಸಿನಿಮಾ ಮತ್ತು ಟಿ.ವಿ. ಇಂಡಸ್ಟ್ರಿಯಲ್‍ನ ಶೇ. 99 ಮಂದಿ ಮಹಿಳೆಯರಿಗೂ ಸೆಕ್ಸಿಸಂನ ಅನುಭವ ಆಗಿದೆ ಎಂದು ಅದರಲ್ಲಿ ಹೇಳಲಾಗಿತ್ತು. ಮಹಿಳೆಯನ್ನು ವಸ್ತುವಾಗಿ ನೋಡಬಾರದೆಂದು ಹೇಳಿಕೊಡುವ ಕ್ಷೇತ್ರದಲ್ಲೇ  ಯಾಕೆ ಹೆಣ್ಣು ಮತ್ತೆ ಮತ್ತೆ ವಸ್ತುವಾಗುತ್ತಿದ್ದಾಳೆ? ಈ ದೇಶದ ಯಾವನಾದರೂ ಓರ್ವ ಪ್ರಸಿದ್ಧ ನಟ ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ಶೋಷಣೆಗೆ ಒಳಗಾದದ್ದು ನಡೆದಿದೆಯೇ? ಲೈಂಗಿಕ ಶೋಷಣೆ ಬಿಡಿ, ಕನಿಷ್ಠ ಆತನ ಎದುರು ದನಿಯೇರಿಸಿ ಮಾತನಾಡಿದ ಪ್ರಕರಣಗಳಿವೆಯೇ? ಪಕ್ಕಾ ದರೋಡೆಕೋರರೂ ಆತನನ್ನು ಮುಟ್ಟುವ ಧೈರ್ಯ ಮಾಡಿದ್ದಿದೆಯೇ? ಮತ್ತೇಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಏನೇನೂ ಅಲ್ಲದ ವ್ಯಕ್ತಿಗಳು ಓರ್ವ ಪ್ರಸಿದ್ಧ ನಟಿಯ ಮೇಲೆ ಲೈಂಗಿಕ ಶೋಷಣೆ ನಡೆಸುವ ಪ್ರಕರಣ ನಡೆಯುತ್ತದೆ? ಅದೂ ಚಲಿಸುವ ಕಾರಿನಲ್ಲಿ. ಈ ದೇಶದ ಎಲ್ಲೋ ಮೂಲೆಯಲ್ಲಿ ಯಾವುದೋ ಅಪರಿಚಿತ ಹೆಣ್ಣು ಮಗಳ ಮೇಲೆ ನಡೆಯಬಹುದಾದಂಥ ರೀತಿಯ ಹಿಂಸೆಗೆ ಓರ್ವ ನಟಿ ಒಳ ಗಾಗುತ್ತಾಳೆ ಮತ್ತು ಆ ಹಿಂಸೆಯಲ್ಲಿ ಆಕೆಯ ಸಿನಿಮಾ ಇಂಡಸ್ಟ್ರಿಯ ಒಳಗಿನ ವ್ಯಕ್ತಿಗಳೇ ಪಾಲುಗೊಳ್ಳುತ್ತಾರೆ ಅನ್ನುವುದು ಏನನ್ನು ಸೂಚಿಸುತ್ತದೆ? ಸಿನಿಮಾ ಇಂಡಸ್ಟ್ರಿಯೂ ಹೆಣ್ಣನ್ನು ವಸ್ತುವಾಗಿ ಮತ್ತು ಅಗ್ಗವಾಗಿ ನೋಡುತ್ತಿದೆ ಎಂದಲ್ಲವೇ? ಅಷ್ಟಕ್ಕೂ, ಕೇರಳದ ನಟಿಯನ್ನು ಲೈಂಗಿಕವಾಗಿಯೇ ಯಾಕೆ ಶೋಷಿಸಬೇಕಿತ್ತು? ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬೇರೆ ದಾರಿಗಳೂ ಇತ್ತಲ್ಲವೇ? ಈ ಇಂಡಸ್ಟ್ರಿಯಲ್ಲಿ ನಟರ ಜೊತೆಯಲ್ಲೂ ಭಿನ್ನಾಭಿಪ್ರಾಯ ಉಂಟಾಗುವುದಿಲ್ಲವೇ? ಆಗೆಲ್ಲ ಅವರನ್ನು ಹೀಗೆ ಲೈಂಗಿಕವಾಗಿ ಶೋಷಣೆಗೆ ಒಳಪಡಿಸಲಾಗುತ್ತಿದೆಯೇ?
    ಲೈಂಗಿಕ ಶೋಷಣೆ ಎಂಬುದು ಹೆಣ್ಣನ್ನು ಶರಣುಗೊಳಿಸುವುದಕ್ಕೆ ಪುರುಷ ಸಮಾಜ ಸಾಮಾನ್ಯವಾಗಿ ಬಳಸುತ್ತಿರುವ ಅಸ್ತ್ರ. ಭಾರತದ ಉದ್ದಗಲಕ್ಕೂ ಇದರ ಪ್ರಯೋಗ ನಡೆಯುತ್ತಲೇ ಇದೆ. ತನ್ನನ್ನು ಪ್ರೀತಿಸದ ಹೆಣ್ಣನ್ನು ಪುರುಷ ಲೈಂಗಿಕ ದೌರ್ಜನ್ಯದ ಮೂಲಕ ಪ್ರತೀಕಾರ ತೀರಿಸುವುದಿದೆ. ತನಗೆ ಎದುರಾಡಿದ ಉದ್ಯೋಗಸ್ಥೆಯ ಮೇಲೆ ಮ್ಯಾನೇಜರ್ ಲೈಂಗಿಕ ದೌರ್ಜನ್ಯ ಎಸಗುವುದಿದೆ. ಪುರುಷರ ವಿರುದ್ಧ ದನಿಯೆತ್ತಿದವಳನ್ನು ಇದೇ ವಿಧಾನ ಬಳಸಿ ಪಳಗಿಸುವುದಿದೆ. ಈ ದೇಶದ ಸಾಮಾನ್ಯ ಹೆಣ್ಣು ಮತ್ತು ಗಂಡಿನ ನಡುವಿನ ಜಗಳ-ಭಿನ್ನಾಭಿಪ್ರಾಯಗಳು ಬಹುತೇಕ ಬಾರಿ ಅಂತ್ಯ ಕಾಣುವುದೇ ಲೈಂಗಿಕ ಶೋಷಣೆಯ ಮೂಲಕ. ಹೆಣ್ಣನ್ನು ಅವಮಾನಿಸುವುದಕ್ಕೆ ಪುರುಷ ಸಮಾಜ ಲೈಂಗಿಕ ಹಿಂಸೆಯನ್ನು ಒಂದು ಆಯುಧವಾಗಿ ಬಳಸಿಕೊಳ್ಳುತ್ತಿದೆ. ಇದನ್ನು ಪ್ರಶ್ನಿಸುತ್ತಾ ಮತ್ತು ಹೆಣ್ಣನ್ನು ಲೈಂಗಿಕ ವಸ್ತುವಾಗಿ ನೋಡಬಾರದೆನ್ನುತ್ತಾ ಸಾಗುತ್ತಿರುವ ಕ್ಷೇತ್ರವೇ ಸಿನಿಮಾ ರಂಗ. ಆದರೆ ಆ ಕ್ಷೇತ್ರದ ಪ್ರತಿಪಾದನೆಗೂ ಅದು ಹೆಣ್ಣನ್ನು ನೋಡುವ ವಿಧಾನಕ್ಕೂ ತಾಳಮೇಳವಿಲ್ಲವೆಂದರೆ ಹೇಗೆ? ಆ ಕ್ಷೇತ್ರವೂ ಹೆಣ್ಣನ್ನು ಪಳಗಿಸುವುದಕ್ಕೆ ಲೈಂಗಿಕ ಶೋಷಣೆಯನ್ನೇ ಪರಿಣಾಮಕಾರಿ ಅಸ್ತ್ರವಾಗಿ ಪರಿಗಣಿಸಿದರೆ ಹೇಗೆ? ಹಾಗಂತ, ಅಲ್ಲಿಯ ವೇತನಾ ಕ್ರಮಗಳು ಹೇಗಿವೆ? ಸ್ತ್ರೀ-ಪುರುಷ ಸಮಾ ನತೆಯನ್ನು ಇಲ್ಲಿ ಪಾಲಿಸಲಾಗುತ್ತಿದೆಯೇ? ಹೀರೋಗೆ ಕೊಡುವಷ್ಟೇ ವೇತನವನ್ನು ಹೀರೋಯಿನ್‍ಗೂ ಕೊಡಲಾಗುತ್ತಿದೆಯೇ? ಸಿನಿಮಾ ಅಂದರೆ ಹೀರೋ ಮತ್ತು ಹೀರೋಯಿನ್ ಮಾತ್ರ ಅಲ್ಲ. ನೂರಾರು ಕಾರ್ಮಿಕರನ್ನೊಳಗೊಂಡ ವಿಶಾಲ ಕ್ಷೇತ್ರ ಅದು. ಅಲ್ಲಿ ಕಾರ್ಮಿಕರಾಗಿರುವ ಹೆಣ್ಣು ಮತ್ತು ಗಂಡಿನ ಸ್ಥಿತಿ-ಗತಿಗಳು ಹೇಗಿವೆ? ಕಾರ್ಮಿಕ ಕಾನೂನುಗಳು ಈ ಕ್ಷೇತ್ರಕ್ಕೆ ಅನ್ವಯ ವಾಗುತ್ತಿವೆಯೇ? ವಾರಗಳ ಹಿಂದೆ ಸಂಜನಾ ಎಂಬ ಕನ್ನಡ ನಟಿಯ ಬಗ್ಗೆ ಟಿ.ವಿ. ಮಾಧ್ಯಮಗಳು ಸಾಕಷ್ಟು ಹೊತ್ತು ಚರ್ಚಿಸಿದುವು. ಆಕೆಯ ನಗ್ನ ದೃಶ್ಯದ ವೀಡಿಯೋ ಸೋರಿಕೆ ಯಾಗಿರುವುದನ್ನೂ ಸೋರಿಕೆಗಿರಬಹುದಾದ ಕಾರಣಗಳ ಸಾಧ್ಯಾ ಸಾಧ್ಯತೆಗಳನ್ನೂ ಚರ್ಚಿಸಿದುವು. ದುರಂತ ಏನೆಂದರೆ, ಯಾರೂ ಕೂಡ ನಟಿಯದ್ದೇ  ನಗ್ನ ವೀಡಿಯೋ ಯಾಕೆ ಸೋರಿಕೆಯಾಗಬೇಕು ಎಂದು ಪ್ರಶ್ನಿಸಲಿಲ್ಲ. ನಗ್ನತೆ ಎಂಬುದು ಹೆಣ್ಣಿಗೆ ಸಂಬಂಧಿಸಿ ಮಾತ್ರ ಇರುವ ವಿಶೇಷತೆ ಏನಲ್ಲ. ಪುರುಷನೂ ನಗ್ನನಾಗಬಲ್ಲ. ಆದರೆ ವಿವಾದಾತ್ಮಕ ಸೋರಿಕೆಗಳೆಲ್ಲ ಹೆಣ್ಣನ್ನೇ ಯಾಕೆ ಸುತ್ತಿ ಕೊಂಡಿರುತ್ತವೆ? ಚಿತ್ರ ಬಿಡುಗಡೆಯ ಮೊದಲು ಹೆಣ್ಣಿನ ದೇಹ ವನ್ನು ಕೇಂದ್ರೀಕರಿಸಿ ವೀಡಿಯೋವನ್ನೋ ಚಿತ್ರವನ್ನೋ ಯಾಕೆ ಸೋರಿಕೆಯೋ ಬಿಡುಗಡೆಯೋ ಮಾಡಲಾಗುತ್ತದೆ? ಒಂದು ಕಡೆ ಹೆಣ್ಣು ಬರೇ ದೇಹವಲ್ಲ ಎಂದು ಹೇಳುತ್ತಲೇ ಇನ್ನೊಂದು ಕಡೆ ಬರೇ ದೇಹವನ್ನೇ ಮುಖ್ಯವಾಗಿಸಿಕೊಂಡು ಸಿನಿಮಾ ತಯಾರಾಗುವುದು ಮತ್ತು ಅದೇ ದೇಹದ ಮೂಲಕ ಸಮಾನತೆ, ಹಕ್ಕು, ಸ್ವಾತಂತ್ರ್ಯಗಳ ಡಯಲಾಗ್‍ಗಳನ್ನು ಹೇಳಿಸುವುದರ ಅರ್ಥ ಏನು? ಇದರ ಹಿಂದೆ ಯಾರಿದ್ದಾರೆ? ಪುರುಷರೇ? ಇಂಥವು ಗಳನ್ನು ಮಹಿಳಾ ವಿರೋಧಿ ಎಂದು ಬಹಿರಂಗವಾಗಿ ಹೇಳುವ ನಟಿಯರು ಯಾಕೆ ಕಾಣಿಸುತ್ತಿಲ್ಲ? ಸಿನಿಮಾ ರಂಗದಲ್ಲೂ ಶೋಷಣೆ ಇದೆಯೇ? ಪುರುಷನ ಅಣತಿಯಂತೆ ಹೆಣ್ಣು ಕೆಲಸ ಮಾಡಬೇಕಿದೆಯೇ? ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯದ ಡಯಲಾಗ್‍ಗಳನ್ನು ಹೇಳುತ್ತಾ ಆ ಡಯಲಾಗ್‍ಗಳಿಗೆ ವಿರುದ್ಧವಾಗಿ ಬದುಕಬೇಕಾದ ಕ್ಷೇತ್ರವಾಗಿದೆಯೇ ಸಿನಿಮಾ ಕ್ಷೇತ್ರ? ಇಲ್ಲಿ ಇನ್ನೂ ಒಂದು ಪ್ರಶ್ನೆಯನ್ನು ಎತ್ತಬಹುದು. ಈ ಕ್ಷೇತ್ರಕ್ಕೆ ಹೊಸದಾಗಿ ಬರುವ ನಟಿಯರು ಮತ್ತು ಈಗಾಗಲೇ ತಳವೂರಿರುವ ನಟಿಯರು ಕೂಡ ಆಗಾಗ ಮಾಧ್ಯಮಗಳ ಮುಂದೆ ‘ಪಾತ್ರದ ಬೇಡಿಕೆಯನ್ನು ಅನುಸರಿಸಿ ಉಡುಪು ತೊಡಲು ಸಿದ್ಧ’ ಎಂದು ಹೇಳಿಕೊಳ್ಳುವುದಿದೆ. ಹಾಗಂದರೇನು? ಇದು ಇವರ ಮಾತೋ ಅಥವಾ ಈ ಇಂಡಸ್ಟ್ರೀ ಹೇಳಿಸುವ ಮಾತೋ? ಅಭಿನಯಕ್ಕಿಂತ ತೊಡುವ ಉಡುಪೇ ಯಾಕೆ ಮುಖ್ಯವಾಗಬೇಕು? ಯಾಕೆ ಯಾವ ನಟರೂ ಇಂಥ ಹೇಳಿಕೆಗಳನ್ನು ಕೊಡುವುದಿಲ್ಲ? ‘ಪಾತ್ರಕ್ಕೆ ತಕ್ಕಂತೆ ಉಡುಪು’ ಎಂಬುದು ಬರೇ ಹೆಣ್ಣಿಗೆ ಸಂಬಂಧಿಸಿ ಮಾತ್ರ ಇರುವ ನಿಯಮ ಅಲ್ಲವಲ್ಲ. ಪುರುಷನೂ ಪಾತ್ರಕ್ಕೆ ತಕ್ಕಂತೆ ಉಡುಪು ತೊಡಬೇಕಲ್ಲವೇ? ಮತ್ತೇಕೆ ನಟಿಯರೇ ಪಾತ್ರಕ್ಕೆ ತಕ್ಕಂತೆ ಉಡುಪು ಎಂಬ ಡಯಲಾಗ್‍ಗಳನ್ನು ಉದುರಿಸುತ್ತಾರೆ? ಈ ಕ್ಷೇತ್ರದಲ್ಲಿ ಪಾತ್ರಕ್ಕೆ ತಕ್ಕುದಲ್ಲದ ಉಡುಪನ್ನು ನಟಿಯರ ಮೇಲೆ ಹೇರುತ್ತಾರಾ? ಯಾರು ಅವರು? ಪುರುಷರೇ? ಮಹಿಳೆಯರೇ? ಈ ಕ್ಷೇತ್ರದಲ್ಲಿ ನಟರಿಗಿರುವ ಸ್ವಾತಂತ್ರ್ಯ ನಟಿಯರಿಗಿಲ್ಲವೇ? ನಟರ ಆಯ್ಕೆಗೆ ಪ್ರತಿಭೆ ಆಧಾರವಾಗುವಾಗ ನಟಿಯರ ಆಯ್ಕೆಗೆ ಪ್ರತಿಭೆಯ ಜೊತೆಗೇ ಇತರವುಗಳೂ ಆಧಾರವಾಗುತ್ತದೆಯೇ? ಇದು ಈ ಕ್ಷೇತ್ರ ಪ್ರತಿಪಾದಿಸುವ ಸ್ತ್ರೀ-ಪುರುಷ ಸಮಾನತೆಯ ಚೌಕಟ್ಟಿನೊಳಗಡೆ ಬರುತ್ತದೆಯೇ? ಸಿನಿಮಾ ಜಗತ್ತಿನ ಹೊರಗಡೆ ಸಂಭವಿಸುವ ಮಹಿಳಾ ಶೋಷಣೆಯ ಕುರಿತು ಆಗಾಗ ದಿಗ್ಭ್ರಮೆ ವ್ಯಕ್ತಪಡಿಸುವ ಸಿನಿಮಾ ಕ್ಷೇತ್ರದ ದಿಗ್ಗಜರು ಯಾಕೆ ಒಳಗಿನ ಈ ತೂತುಗಳ ಬಗ್ಗೆ ಯಾವ ದಿಗ್ಭ್ರಮೆಯನ್ನೂ ವ್ಯಕ್ತಪಡಿಸುವುದಿಲ್ಲ?
      ಮಹಿಳಾ ಸಮಾನತೆ, ಸಮಾನ ಪ್ರಾತಿನಿಧ್ಯ, ಸಮಾನ ಸ್ವಾತಂತ್ರ್ಯ.. ಇತ್ಯಾದಿಗಳೆಲ್ಲ ಪುರುಷ ತನ್ನ ಅನುಕೂಲಕ್ಕಾಗಿ ಹುಟ್ಟು ಹಾಕಿರುವ ಪದಪುಂಜಗಳೇನೋ ಅನ್ನುವ ಅನುಮಾನಕ್ಕೆ ಇವು ಮತ್ತು ಇಂಥ ಇನ್ನಿತರ ಸಂಗತಿಗಳು ಪುಷ್ಠಿಯನ್ನು ನೀಡುತ್ತಲೇ ಇವೆ. ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಇಂದಿಗೆ 21 ವರ್ಷಗಳೇ ಸಂದಿವೆ. 1996 ಸೆ. 12ರಂದು ಮಹಿಳೆಯರಿಗೆ ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ 33% ಮೀಸಲಾತಿ ನೀಡುವ ಮಸೂದೆಯನ್ನು ಮೊದಲ ಬಾರಿ ಮಂಡಿಸಲಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲೇ ಸೇರಿಸಿಕೊಂಡ ವಿಷಯ ಇದು. ಆದರೆ ರಾತೋರಾತ್ರಿ ನೋಟು ಅಮಾನ್ಯಗೊಳಿಸಿದ ಬಿಜೆಪಿಗೆ, ಪಾರ್ಲಿಮೆಂಟನ್ನು ವಿಶ್ವಾಸಕ್ಕೆ ಪಡೆದುಕೊಂಡು ಜಿಎಸ್‍ಟಿಯನ್ನು ಜಾರಿಗೊಳಿಸಿದ ಬಿಜೆಪಿಗೆ, ‘ಜಾನುವಾರು ಮಾರಾಟ ಕಾಯ್ದೆ’ಯನ್ನು ತರಾತುರಿಯಿಂದ ಜಾರಿಗೊಳಿಸುವ ಉಮೇದು ವ್ಯಕ್ತಪಡಿಸಿದ ಬಿಜೆಪಿಗೆ ಸ್ವತಃ ಪ್ರಣಾಳಿಕೆಯಲ್ಲೇ  ಭರವಸೆ ನೀಡಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಕಾನೂನಾಗಿಸುವುದಕ್ಕೆ ಈ ವರೆಗೂ ಸಾಧ್ಯವಾಗಿಲ್ಲ. ಪ್ರಣಾಳಿಕೆಯಲ್ಲೇ ಇಲ್ಲದ ನೋಟು ಅಮಾನ್ಯ ಎಂಬ ಅತಿ ಧೈರ್ಯದ ನಿರ್ಧಾರ ತಳೆದ ಬಿಜೆಪಿಯು ಯಾಕೆ 2 ದಶಕಗಳಿಂದ ಕಾಯುತ್ತಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಕಾನೂನಾಗಿಸುವ ಧೈರ್ಯ ತೋರಿಸುತ್ತಿಲ್ಲ? ಇಲ್ಲಿನ ಪ್ರಶ್ನೆ ಧೈರ್ಯದ್ದೋ ಅಥವಾ ಪುರುಷಾಧಿಪತ್ಯಕ್ಕೆ ಹೊಡೆತ ಬೀಳುತ್ತದೆ ಎಂಬ ಭಯದ್ದೋ? ಇಲ್ಲೂ ಮತ್ತದೇ ಶೋಷಣಾತ್ಮಕ ಮನಸ್ಥಿತಿಯೇ ಎದ್ದು ಕಾಣುತ್ತದೆ. ಭಾರತೀಯ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಬಹುತೇಕ ಪುರುಷರಷ್ಟೇ ಇದೆ. ಇದರ ಆಧಾರದಲ್ಲಿ ಹೇಳುವುದಾದರೆ ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ ಅರ್ಧಕ್ಕರ್ಧ ಮಂದಿ ಮಹಿಳೆಯರಿರಬೇಕಿತ್ತು. ಆದರೆ, ಸದ್ಯ ಭಾರತದ ಪಾರ್ಲಿಮೆಂಟ್‍ನಲ್ಲಿ ಮಹಿಳೆಯರ ಸಂಖ್ಯೆ 12%. ಒಂದು ವೇಳೆ 33% ಮೀಸಲಾತಿಯು ಜಾರಿಯಾದರೆ ಕರ್ನಾಟಕದ ವಿಧಾನ ಸಭೆಯಲ್ಲಿ 84 ಶಾಸಕಿಯರಿರಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ನಿಜವಾಗಿ, ಮಹಿಳಾ ಜನಸಂಖ್ಯೆಗೆ ಸಂಬಂಧಿಸಿ ಹೇಳುವುದಾದರೆ ಈ ಸಂಖ್ಯೆಯೂ ಕನಿಷ್ಠವೇ. ಗಂಡಿಗೆ ಹೆಣ್ಣು ಸಮಾನ ಎಂದು ಪ್ರತಿಪಾದಿಸುವ ವ್ಯವಸ್ಥೆಯಲ್ಲಿ ಆ ಸಮಾನತೆಯ ಸಣ್ಣ ಮಾದರಿಯನ್ನೂ ಪ್ರಾಯೋಗಿಕವಾಗಿ ಪ್ರಸ್ತುತಪಡಿಸುವುದು ಅಸಾಧ್ಯವಾಗುತ್ತಿರುವುದೇಕೆ? ಅದೇ ವೇಳೆ, ಮಹಿಳಾ ಸಮಾನತೆ, ಸ್ವಾತಂತ್ರ್ಯ, ಹಕ್ಕು ಗಳನ್ನು ಅತ್ಯಂತ ಪ್ರಬಲವಾಗಿ ಮಂಡಿಸುವ ಸಿನಿಮಾ ಕ್ಷೇತ್ರದಲ್ಲಿ ಹೆಣ್ಣು ದನಿ ರಹಿತಳಾಗಿ ಮತ್ತು ದೇಹ ಕೇಂದ್ರಿತ ವಸ್ತುವಾಗಿ ಪರಿಗಣನೆಗೆ ಒಳಗಾಗುತ್ತಿರುವುದೇಕೆ? ಇದರ ಅರ್ಥವೇನು? ಸದ್ಯ ಪ್ರತಿಪಾದಿಸಲಾಗು ತ್ತಿರುವ ರೀತಿಯ ಮಹಿಳಾ ಸಮಾನತೆಯು ಪ್ರಾಯೋಗಿಕವಾಗಿ ಅಸಾಧ್ಯವೇ? ಇದು ಸಿನಿಮಾಗಳಿಗೆ, ಭಾಷಣಗಳಿಗೆ ಮತ್ತು ಬರಹಗಳಿಗೆ ಮಾತ್ರ ಒಗ್ಗುವ ಮತ್ತು ಬದುಕಿ ತೋರಿಸಲು ಅಸಾಧ್ಯವಾದ ಚಿಂತನೆಯೇ?