Wednesday, September 21, 2016

ಉನಾದಿಂದ ಚಲೋ ಉಡುಪಿವರೆಗೆ..

        ಗುಜರಾತ್‍ನ ಗಿರ್ ಸೋಮನಾಥ ಜಿಲ್ಲೆಯ ಉನಾ ಎಂಬ ಪ್ರದೇಶಕ್ಕೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಎಂಬ ಗ್ರಾಮಕ್ಕೂ ನಡುವೆ ನೂರಾರು ಕಿಲೋ ಮೀಟರ್‍ಗಳಷ್ಟು ಅಂತರವಿದೆ. ಉನಾದಲ್ಲಿ ನಾಲ್ವರು ದಲಿತ ಯುವಕರನ್ನು ಕಾರ್‍ಗೆ ಕಟ್ಟಿಹಾಕಿ ಥಳಿಸಲಾದ ಘಟನೆ ಜುಲೈ 11ರಂದು ನಡೆದಿದ್ದರೆ ಹೆಬ್ರಿಯಲ್ಲಿ ಪ್ರವೀಣ್ ಪೂಜಾರಿಯನ್ನು ಥಳಿಸಿ ಕೊಲ್ಲಲಾದ ಘಟನೆ ನಡೆದದ್ದು ಆಗಸ್ಟ್ 17 ರಂದು. ಇವೆರಡರ ನಡುವೆಯೂ ಸುಮಾರು 36 ದಿವಸಗಳ ವ್ಯತ್ಯಾಸ ಇದೆ. ಆದರೆ, ಈ ವ್ಯತ್ಯಾಸಗಳನ್ನು ಹೊರತು ಪಡಿಸಿದರೆ ಉಳಿದಂತೆ ಈ ಎರಡೂ ಘಟನೆಗಳಲ್ಲಿ ಪರಸ್ಪರ ಹೋಲಿಕೆಗೆ ಸಿಗುವ ಒಂದಕ್ಕಿಂತ ಹೆಚ್ಚು ಅಂಶಗಳಿವೆ.
 1. ಎರಡೂ ಕಡೆ ಥಳಿತಕ್ಕೆ ಒಳಗಾದವರು ದಲಿತ ಮತ್ತು ಹಿಂದುಳಿದ ಜಾತಿಗೆ ಸೇರಿದವರು.
2. ಥಳಿಸಿದವರು ಕೂಡ ಅವೇ ಜಾತಿಗಳನ್ನು ಪ್ರತಿನಿಧಿಸುವವರು.
3. ಎರಡೂ ಘಟನೆಗಳಲ್ಲಿ ಸುಮಾರು 50 ರಷ್ಟು ಮಂದಿ ಜೈಲು ಪಾಲಾಗಿದ್ದಾರೆ.
4. ಆದರೆ ಗೋ ರಕ್ಷಣೆ ಎಂಬ ಅಮಲುಭರಿತ ಹೆಸರಿನಲ್ಲಿ ಒಟ್ಟುಗೂಡಿಸಿ ಇವರನ್ನು ಛೂ ಬಿಟ್ಟವರಲ್ಲಿ ಯಾರೂ ಇವರನ್ನು ಸಮರ್ಥಿಸಿ ಚಳವಳಿ ನಡೆಸಿಲ್ಲ. ಪ್ರತಿಭಟನೆಯನ್ನೂ ಏರ್ಪಡಿಸಿಲ್ಲ. ಆದರೆ, ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋರಕ್ಷಕರು ಮುಹಮ್ಮದ್ ಅಖ್ಲಾಕ್ ಎಂಬವರನ್ನು ಹತ್ಯೆ ನಡೆಸಿದ್ದನ್ನು ಬೆಂಬಲಿಸಲು ಮತ್ತು ಸಮರ್ಥಿಸಿಕೊಳ್ಳಲು ಬಿಜೆಪಿಯ ಸಂಸದರೇ ಮುಂದೆ ಬಂದಿದ್ದರು. ಉನಾ ಮತ್ತು ಹೆಬ್ರಿ ಈ ಎರಡೂ ಘಟನೆಗಳಿಗೆ ಗೋವೇ ಕೇಂದ್ರೀಯ ವಿಷಯ ಆಗಿದ್ದರೂ ಬಿಜೆಪಿಯ ಯಾವೊಬ್ಬ ಸಂಸದನೂ ಶಾಸಕನೂ ಗೋರಕ್ಷಕರನ್ನು ಬೆಂಬಲಿಸಿ ಹೇಳಿಕೆ ಕೊಡಲಿಲ್ಲ. ಈ ಮಂದಿಯ ಮನೆಗಳಿಗೆ ಬಹಿರಂಗವಾಗಿ ಭೇಟಿಕೊಡಲಿಲ್ಲ. ಎಲ್ಲೂ ಯಾವ ವೇದಿಕೆಯಲ್ಲೂ ಈ ಮಂದಿಗೆ ಸಾಂತ್ವನವನ್ನು ವ್ಯಕ್ತಪಡಿಸಲಿಲ್ಲ. ಒಂದು ರೀತಿಯಲ್ಲಿ, ಈ ಎರಡೂ ಘಟನೆಗಳಲ್ಲಿ ಜೈಲು ಪಾಲಾದ 50 ರಷ್ಟು ಹಿಂದುಳಿದ- ದಲಿತ ಜನಾಂಗದ ಯುವಕರನ್ನು ಅಸ್ಪೃಶ್ಯಗೊಳಿಸಲಾಗಿದೆ. ಎಲ್ಲಿಯವರೆಗೆ ಅವರು ಸಮಾಜದಿಂದ ತಿರಸ್ಕ್ರತಗೊಂಡರೆಂದರೆ, ಅವರನ್ನು ಈ ಕೃತ್ಯಕ್ಕೆ ದೂಡಿದವರೇ ಬಹಿರಂಗವಾಗಿ ಅವರ ಬೆಂಬಲಕ್ಕೆ ನಿಲ್ಲಲಾರದಷ್ಟು. ಹಾಗಂತ, ಈ ಯುವಕರ ಮನೆ-ಮಂದಿಯೆಲ್ಲಾ ಅವರ ಚಟುವಟಿಕೆಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳುವಂತಿಲ್ಲ. ಗೋವಿನ ಹೆಸರಲ್ಲಿ ಅವರನ್ನು ದುಷ್ಕರ್ಮಕ್ಕೆ ಬಳಸಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಸಂಘಟನೆಗಳ ಬಗ್ಗೆ ಅವರಲ್ಲಿ ದೂರುಗಳಿರಬಹುದು. ತಮ್ಮ ಮಗ ಕ್ರಿಮಿನಲ್ ಆರೋಪದೊಂದಿಗೆ ಜೈಲಿನಲ್ಲೋ ತಲೆಮರೆಸಿಕೊಂಡೋ ಬದುಕುವುದು ಮತ್ತು ಆತನನ್ನು ಅದಕ್ಕೆ ಪ್ರೇರೇಪಿಸಿದವರ ಮಕ್ಕಳು ಪ್ರೊಫೆಸರ್, ಡಾಕ್ಟರ್, ಇಂಜಿನಿಯರ್, ಐಟಿ ತಜ್ಞರಾಗಿ ಎಲ್ಲೋ ದೂರದಲ್ಲಿ ಸುರಕ್ಷಿತವಾಗಿ ಪತ್ನಿ-ಮಕ್ಕಳು-ಕುಟುಂಬ ಎಂದೆಲ್ಲಾ ಆರಾಮವಾಗಿ ಬದುಕುವುದು ಅವರೊಳಗನ್ನು ಕಾಡುತ್ತಿರಬಹುದು. ‘ಗೋರಕ್ಷಣೆಗೆ ತಮ್ಮ ಮಕ್ಕಳೇ ಯಾಕೆ ಬೇಕು..’ ಎಂಬ ಪ್ರಶ್ನೆ ಅವರಲ್ಲೂ ಇರಬಹುದು. ಮಾಧ್ಯಮ ಕ್ಯಾಮರಾದ ಕಣ್ಣಿಗೆ ಸಿಕ್ಕದಂತೆ ಕದ್ದು ಮುಚ್ಚಿ ಅವರ ಮನೆಗೆ ಭೇಟಿ ಕೊಟ್ಟಿರಬಹುದಾದ ನಾಯಕರಲ್ಲಿ ಹೆತ್ತವರು ಈ ಪ್ರಶ್ನೆಯನ್ನು ಕೇಳಿರಲೂಬಹುದು. ಸದ್ಯದ ಸವಾಲು ಏನೆಂದರೆ, ಈ ದಮನಿತರನ್ನು ನಾವು ಒಂದೇ ಬಿಂದುವಿನೊಳಗೆ ಕರೆತರುವುದು ಹೇಗೆ? ಜಾಗತೀಕರಣದ ಯೂಸ್ ಆಂಡ್ ಥ್ರೋ ನೀತಿಯನ್ನು ಅತ್ಯಂತ ಸಮರ್ಪಕವಾಗಿ ತಮ್ಮ ಮೇಲೆ ಪ್ರಯೋಗಿಸಲಾಗುತ್ತಿದೆ ಎಂಬುದನ್ನು ಅವರಿಗೆ ಅರ್ಥಮಾಡಿಸುವುದು ಹೇಗೆ? ಈ ಹಿಂದೆ ಹುಟ್ಟಿನ ಆಧಾರದಲ್ಲಿ ಯಾರು ಅಧಿಕಾರಯುತವಾಗಿ ದಮನಿಸುತ್ತಿದ್ದರೋ ಅವರೇ ಇವತ್ತು ಗೋವಿನ ನೆಪದಲ್ಲಿ ಅದೇ ದಮನ ಕಾರ್ಯವನ್ನು ಚಾಲ್ತಿಯಲ್ಲಿರಿಸಿದ್ದಾರೆ ಎಂಬ ಅರಿವನ್ನು ಮೂಡಿಸು ವುದು ಹೇಗೆ? ಅಷ್ಟಕ್ಕೂ,
       ಉನಾ ಘಟನೆಯನ್ನು ಖಂಡಿಸಿ ಗುಜರಾತ್‍ನಲ್ಲಿ ಜಿಗ್ನೇಶ್ ಮೇವಾನಿ ಆಯೋಜಿಸಿದ ಪ್ರತಿಭಟನಾ ಚಳವಳಿಯ ಯಶಸ್ಸಿನ ಹಿಂದೆ ಅಲ್ಲಿಯದ್ದೇ ಆದ ಸಮಸ್ಯೆಗಳ ಪಾಲು ಖಂಡಿತ ಇದೆ. ಭಾರತದ ಒಟ್ಟು ಜನಸಂಖ್ಯೆಯ 2.33% ಮಂದಿ ದಲಿತರು ಮಾತ್ರವೇ ಗುಜರಾತ್‍ನಲ್ಲಿದ್ದರೂ ದೇಶದಲ್ಲಿಯೇ ಅತ್ಯಂತ ಹೆಚ್ಚು ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿರುವುದು ಅಲ್ಲಿಯೇ ಎಂಬುದೂ ಈ ಕಾರಣಗಳಲ್ಲಿ ಒಂದು ಆಗಿರಬಹುದು. ಗುಜರಾತ್‍ನಲ್ಲಿ ಇವತ್ತಿಗೂ ಶೇ. 90 ರಷ್ಟು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ. 54% ಸರಕಾರಿ ಶಾಲೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವುದಕ್ಕೆ ಪ್ರತ್ಯೇಕ ಸ್ಥಳಗಳಿವೆ. 2010ರಲ್ಲಿ ಅಹ್ಮದಾಬಾದ್‍ನಲ್ಲಿ ನಡೆದ ಸಭೆಯೊಂದರಲ್ಲಿ ಬಹಿರಂಗಪಡಿಸಲಾದ ಮಾಹಿತಿಯೊಂದು ಇದಕ್ಕಿಂತಲೂ ಭಯಾನಕ. ಸೌರಾಷ್ಟ್ರದ ಸುಮಾರು 1500 ದಲಿತ ಮಕ್ಕಳನ್ನು ಶೌಚಾಲಯ ಸ್ವಚ್ಛಗೊಳಿಸಲು ಶಾಲೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಲಾಗಿತ್ತು. ದಲಿತರಿಗೆಂದೇ ಮೀಸಲಿರಿಸಲಾಗಿದ್ದ ಭೂಮಿಯಲ್ಲಿ ಬಹುತೇಕವೂ ಮಿಕ್ಕವರ ಪಾಲಾಗಿದೆ. ಗೋಮಾಳಗಳು ಒತ್ತುವರಿಯಾಗಿವೆ. ಕನಿಷ್ಠ ವೇತನವಾಗಿ ನಿಗದಿಗೊಳಿಸಲಾಗಿರುವ 175 ರೂಪಾಯಿಯ ಬದಲು ದಲಿತರು 50-60 ರೂಪಾಯಿಯನ್ನಷ್ಟೇ ಕೂಲಿಯಾಗಿ ಪಡೆಯುತ್ತಲೂ ಇದ್ದಾರೆ...' ಇವು ಮತ್ತು ಇಂಥ ಇನ್ನಿತರ ತಳ ಮಟ್ಟದ ಕಾರಣಗಳು ಜಿಗ್ನೇಶ್ ಚಳುವಳಿಯನ್ನು ಯಶಸ್ವಿಯಾಗಿಸಿರಬಹುದು. ಹಾಗಂತ, ಕರ್ನಾಟಕವು ಗುಜರಾತ್‍ನ ತದ್ರೂಪವೇನೂ ಅಲ್ಲವಲ್ಲ. ಇಲ್ಲಿ ದಲಿತರು ಮತ್ತು ದಮನಿತರು ಸುಮಾರು ಎರಡು ಕೋಟಿಯಷ್ಟಿದ್ದಾರೆ ಎಂಬುದು ನಿಜ. ಆದರೆ ಈ ಬೃಹತ್ ಜನಸಂಖ್ಯೆಯ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಗುಜರಾತ್‍ಗೆ ಹೋಲಿಸಿದರೆ ವ್ಯತ್ಯಾಸಗಳಿವೆ. ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡಲಾದ ಉಡುಪಿ ಜಿಲ್ಲೆ ಮತ್ತು ಅದರ ಪಕ್ಕದ ದ.ಕ. ಜಿಲ್ಲೆಗಳನ್ನೇ ಎತ್ತಿಕೊಳ್ಳಿ. ಸತ್ತ ದನದ ಚರ್ಮ ಸುಲಿಯುವ ದಲಿತರು ಈ ಎರಡು ಜಿಲ್ಲೆಗಳಲ್ಲಿ ಕಾಣಸಿಗುವುದು ಶೂನ್ಯ ಅನ್ನುವಷ್ಟು ಕಡಿಮೆ. ‘ತಾನು ಕೋಳಿ ಪದಾರ್ಥವನ್ನು ಸೇವಿಸುತ್ತೇನೆ.. ’ ಅನ್ನುವಷ್ಟೇ ಸಹಜವಾಗಿ ‘ತಾನು ದನದ ಮಾಂಸದ ಪದಾರ್ಥವನ್ನು ಸೇವಿಸುತ್ತೇನೆ.. ’ ಎಂದು ಹೇಳುವ ದಲಿತರು ಅಪರೂಪವಾಗುತ್ತಿದ್ದಾರೆ. ಹಾಗಂತ, ಅವರು ಅದನ್ನು ಸೇವಿಸುತ್ತಿಲ್ಲ ಎಂದಲ್ಲ. ಆದರೆ ಹೇಳುವುದಕ್ಕೆ ಎಲ್ಲೋ ಏನೋ ಮುಜುಗರ. ಒಂದು ಬಗೆಯ ಅಪರಾಧಿ ಭಾವ. ಅದೇವೇಳೆ, ಈ ದಮನಿತ ಸಮುದಾಯ ಪರಂಪರಾಗತವಾಗಿ ನಡಕೊಂಡು ಬರುತ್ತಿರುವ ದೈವಗಳು, ಭೂತಗಳು ಇವತ್ತು ಈ ಹಿಂದಿಗಿಂತಲೂ ಅದ್ದೂರಿಯಾಗಿ ಆಚರಣೆಗೆ ಒಳಗಾಗುತ್ತಿವೆ. ಭೂತ ಕೋಲಗಳು  ವಿಜೃಂಭಣೆಯಿಂದ ನಡೆಯುತ್ತಿವೆ. ಆದರೆ ಅದರ ಸ್ವರೂಪ ಬದಲಾಗಿದೆ. ಪರಂಪರೆಯ ಯಾವ ಸಂಬಂಧವೂ ಇಲ್ಲದೇ ಅವೆಲ್ಲ ಇನ್ನಾವುದೋ ಆಚರಣೆಯ ಪ್ರಭಾವಕ್ಕೆ ಒಳಗಾಗಿ ಬಿಟ್ಟಿವೆ. ದಲಿತ ಮತ್ತು ದಮನಿತ ಸಮುದಾಯದ ಒಂದೊಂದೇ ಆಚರಣೆ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳು ತನ್ನ ಹುಟ್ಟು ಸತ್ಯದಿಂದ ಕಳಚಿಕೊಂಡು ದಮನಿಸಿದವರ ಪ್ರಭಾ ವಲಯದೊಳಕ್ಕೆ ಸೇರಿಕೊಳ್ಳುತ್ತಿದೆ. ಅಲ್ಲಿಂದ ಕಡ ತಂದೋ ಅಥವಾ ಅವರ ನಿರ್ದೇಶನದ ಪ್ರಕಾರವೋ ಅಥವಾ ಅವರದೇ ನಾಯಕತ್ವದಲ್ಲೋ ಒಟ್ಟು ಕಾರ್ಯಕ್ರಮಗಳು ನಡೆಯತೊಡಗಿವೆ. ಒಂದು ಕಾಲದಲ್ಲಿ ದನದ ಮಾಂಸ ತಮ್ಮ ಮೆನುವಿನಲ್ಲಿ ಸಹಜವಾಗಿದ್ದರೂ ಇವತ್ತು ಅದನ್ನು ಮೆನುವಿನ ಭಾಗವೆಂದು ಹೇಳಲು ಹಿಂಜರಿಕೆ ಕಾಣಿಸುತ್ತಿರುವುದರ ಹಿಂದೆ ಈ ಪಲ್ಲಟದ ಹಿನ್ನೆಲೆಯಿದೆ. ಆದರೆ ಈ ಸಮುದಾಯದ ಮಲ ಎತ್ತುವ ಪರಂಪರಾಗತ ವೃತ್ತಿಯನ್ನು ಅಧಮ ಎಂದು ಸಾರಲೋ ಅಥವಾ ಅವರನ್ನು ಸಬಲೀಕರಣಗೊಳಿಸಲೋ ಇವತ್ತಿಗೂ ಈ ಬಳಸಿಕೊಳ್ಳುತ್ತಿರುವವರು ಮುಂದಾಗಿಲ್ಲ. ದನದ ಬಗ್ಗೆ ಪವಿತ್ರತೆಯ ಪ್ರಶ್ನೆಯನ್ನು ಬೆಳೆಸಿದಂತೆಯೇ ಮಲ ಎತ್ತುವ ವೃತ್ತಿಗೆ ಬಹಿಷ್ಕಾರ ಹಾಕುವಂತೆ ಅವರು ಹೋರಾಟ ನಡೆಸಿದ ಉದಾಹರಣೆಯಿಲ್ಲ. ದಲಿತ ಸಮುದಾಯದ ಮಕ್ಕಳು ಇವತ್ತಿಗೂ ದೊಡ್ಡ ಸಂಖ್ಯೆಯಲ್ಲಿ ಸರಕಾರಿ ಶಾಲೆಗಳನ್ನೇ ಆಶ್ರಯಿಸಿ ಕೊಂಡಿದ್ದಾರೆ. ಅದೇವೇಳೆ, ಇವರನ್ನು ದೇಶಪ್ರೇಮ ಮತ್ತು ಗೋಪ್ರೇಮದ ಹೋರಾಟಕ್ಕೆ ತಯಾರುಗೊಳಿಸುವವರ ಮಕ್ಕಳು ಖಾಸಗಿ ಶಾಲೆಗೆ ಟೈ-ಕೋಟು, ಬೂಟುಗಳನ್ನು ಏರಿಸಿಕೊಂಡು ಹೋಗುತ್ತಲಿದ್ದಾರೆ. ಸರಕಾರದ ಉನ್ನತ ಹುದ್ದೆಗಳಲ್ಲಿ, ಐಟಿ-ಬಿಟಿ ಉದ್ಯೋಗಿಗಳಲ್ಲಿ ಎಷ್ಟು ಮಂದಿ ದಮನಿತರು ಇದ್ದಾರೆ ಎಂಬ ಬಗ್ಗೆ ನಡೆಸಲಾದ ಅನೇಕಾರು ಸರ್ವೇಗಳು ಹೇಳಿರುವ ಫಲಿತಾಂಶ ಒಂದೇ- ಆ ಉದ್ಯೋಗಗಳೆಲ್ಲ ದಮನಿತರಿಗೆ ದಕ್ಕುತ್ತಲೇ ಇಲ್ಲ.’ ಇವತ್ತು ಕಾಲೇಜಿಗೆ ಹೋಗುವ ದಮನಿತ ಸಮುದಾಯದ ಮಕ್ಕಳ ಮೇಲೂ ಕ್ರಿಮಿನಲ್ ಕೇಸುಗಳಿವೆ. ಶಾಲೆಯಿಂದ ಹೊರಬಂದವರ ಮೇಲೂ ಇದೆ. ಕೆಲವರು ಜೈಲಲ್ಲಿದ್ದಾರೆ. ಅವರನ್ನೇ ನಂಬಿಕೊಂಡ ಮನೆಯವರು ಅತ್ತ ಜೈಲಿಗೂ ಇತ್ತ ಕೋರ್ಟಿಗೂ ನಡೆದು ಚಪ್ಪಲಿ ಸವೆಸುತ್ತಿದ್ದಾರೆ. ಈ ದೇಶದ ಕೋಟ್ಯಾಧಿಪತಿಗಳಲ್ಲಿ ಒಬ್ಬರಾದರೂ ದಲಿತರಿದ್ದಾರೋ ಎಂದು ಹುಡುಕಿದರೆ ಸಿಗಬಹುದಾದ ಫಲಿತಾಂಶ ಏನು? ಭೂಮಾಲಕರಲ್ಲಿ ಎಷ್ಟು ಮಂದಿ ದಲಿತರಿದ್ದಾರೆ? ಕಾಫಿ ತೋಟ, ರಬ್ಬರ್ ಪ್ಲಾಂಟ್, ಗದ್ದೆ, ಅಡಿಕೆ, ತೆಂಗು, ಕಬ್ಬು, ಆಲೂಗಡ್ಡೆ, ನೀರುಳ್ಳಿ... ಮುಂತಾಗಿ ವಿಶಾಲ ಕೃಷಿ ಭೂಮಿಯ ಒಡೆಯರಲ್ಲಿ ಎಷ್ಟು ಮಂದಿ ದಲಿತರು ಮತ್ತು ದಮನಿತರಿದ್ದಾರೆ? ಎಷ್ಟು ಮಂದಿ ದಲಿತ ಉದ್ಯಮಿಗಳಿದ್ದಾರೆ? ಬಿಲ್ಡರ್‍ಗಳಿದ್ದಾರೆ? ಭೂತಗನ್ನಡಿ ಹಿಡಿದು ಹುಡುಕಿದರೂ ದಲಿತರು ನಡೆಸುವ ಹೊಟೇಲ್‍ಗಳೇಕೆ ಕಾಣಿಸುತ್ತಿಲ್ಲ? ದಲಿತರ ಎಷ್ಟು ಕ್ಲಿನಿಕ್‍ಗಳಿವೆ, ಆಸ್ಪತ್ರೆಗಳಿವೆ, ಶಾಲೆಗಳಿವೆ?
      ಬಹುಶಃ ಕರ್ನಾಟಕದಲ್ಲಿ ಅದರಲ್ಲೂ ಗೋರಕ್ಷಣೆಯ ಹೆಸರಲ್ಲಿ ಅತ್ಯಂತ ಹೆಚ್ಚು ಥಳಿತ ಘಟನೆಗಳು ನಡೆಯುತ್ತಿರುವ ದ.ಕ., ಉಡುಪಿ ಜಿಲ್ಲೆಗಳಲ್ಲಿ ದಲಿತ ಮತ್ತು ದಮನಿತ ಸಮುದಾಯಗಳೊಳಗೆ ಒಂದು ಬಗೆಯ ಶ್ಮಶಾನ ಮೌನವಿದೆ. ಈ ಹಿಂದೆ ಇವರನ್ನು ಯಾರು ದಮನಿಸುತ್ತಿದ್ದರೋ ಅವರೇ ಇವತ್ತೂ ಈ ಹಿಂದಿಗಿಂತಲೂ ಚೆನ್ನಾಗಿ ಶೋಷಿಸುತ್ತಿದ್ದಾರೆ. ಅದೇವೇಳೆ, ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ದಮನ ಕಾರ್ಯದಲ್ಲಿ ಅವರು ಕೆಲವು ರಾಜಿಗಳನ್ನೂ ಮಾಡಿಕೊಂಡಿದ್ದಾರೆ. ಈ ಜಿಲ್ಲೆಗಳಲ್ಲಿ ಅಸ್ಪೃಶ್ಯತೆ ಸುದ್ದಿಯಾಗುವುದಿಲ್ಲ. `ದೇವಸ್ಥಾನ ಪ್ರವೇಶಕ್ಕೆ ತಡೆ...' ಎಂಬ ಶೀರ್ಷಿಕೆಯಲ್ಲಿ ಸುದ್ದಿಗಳು ಪ್ರಕಟವಾಗುವುದಿಲ್ಲ. ನಿಜವಾಗಿ, ಮನುಷ್ಯ ಬಯಸುವ ಮೂಲಭೂತ ಸ್ವಾತಂತ್ರ್ಯ ಇದು. ಪ್ರತಿಯೋರ್ವ ವ್ಯಕ್ತಿಯೂ ತನ್ನನ್ನು ಪ್ರೀತಿಸುತ್ತಾನೆ. ಇತರರಿಂದ ಪ್ರೀತಿ ಮತ್ತು ಗೌರವವನ್ನು ಬಯಸುತ್ತಾನೆ. ಸದ್ಯ ದಮನಿತ ಸಮೂಹಕ್ಕೆ ಅವನ್ನು ಈ ಎರಡೂ ಜಿಲ್ಲೆಗಳಲ್ಲಿ ಬಹುತೇಕ ಒದಗಿಸಿಕೊಡಲಾಗಿದೆ. ಆದರೆ, ಅದರ ಬದಲಾಗಿ ಅವರಿಂದ ಗೌರವಾರ್ಹ ಬದುಕಿನ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲಾಗುತ್ತಿದೆ. ಅವರ ಶಿಕ್ಷಣ, ಉದ್ಯೋಗ, ಸಬಲೀಕರಣ... ಎಲ್ಲವೂ ಒಂದು ಬಗೆಯಲ್ಲಿ ಇವಕ್ಕೆ ಅಡವು ಇಟ್ಟಂಥ ಸ್ಥಿತಿ ಇದೆ. ಈ ಹಿಂದೆ ಅವರು ಗೆರಟೆಯಲ್ಲಿ ನೀರನ್ನೋ ಚಾವನ್ನೋ ಕುಡಿಯಬೇಕಾಗಿತ್ತು. ಇವತ್ತಿನ ಹೊಸ ತಲೆಮಾರಿಗೆ ಜೈಲಿನ ಅಲ್ಯೂಮಿನಿಯಂ ತಟ್ಟೆಯನ್ನು ಗೆರಟೆಗೆ  ಪರ್ಯಾಯವಾಗಿ ನೀಡಲಾಗುತ್ತಿದೆ. ಶೈಕ್ಷಣಿಕವಾಗಿ ಅಂದೂ ಹಿಂದೆ, ಇಂದೂ ಹಿಂದೆ. ಅಂದು ರಸ್ತೆಯಲ್ಲಿ ಸರಿದು ನಿಲ್ಲಬೇಕಾದ ಒತ್ತಡ ಇದ್ದಿದ್ದರೆ ಇವತ್ತು ದಮನಿತ ಸಮೂಹದ ಅನೇಕ ಯುವ ತಲೆಮಾರಿಗೆ ಪೊಲೀಸರಿಂದ ತಲೆ ತಪ್ಪಿಸಿಕೊಂಡು ಬದುಕಬೇಕಾದ ಸ್ಥಿತಿ ಇದೆ. ಗೋರಕ್ಷಣೆಗೆ ಇವರನ್ನು ಬಳಸಿಕೊಳ್ಳುತ್ತಿರುವವರಲ್ಲಿ ಯಾರೂ ಕೂಡ ಈ ಯುವಕರ ತಂಗಿಯನ್ನೋ ಅಕ್ಕಳನ್ನೋ ತಮ್ಮ ಮನೆಯ ಸೊಸೆಯಾಗಿಸಿಕೊಂಡ ಯಾವ ಉದಾಹರಣೆಯೂ ಕಾಣಿಸುತ್ತಿಲ್ಲ..
       ಸದ್ಯ ಕರ್ನಾಟಕದಲ್ಲಿ ಈ ಕುರಿತಂತೆ ಗಂಭೀರ ಚರ್ಚೆಯೊಂದು ನಡೆಯಬೇಕಾಗಿದೆ. ದಲಿತ ಮತ್ತು ದಮನಿತ ಸಮುದಾಯದ ಪ್ರತಿ ಮನೆ ಮನೆಯಲ್ಲೂ ಇಂಥದ್ದೊಂದು ಚರ್ಚೆ ಹುಟ್ಟು ಹಾಕುವ ಜನ ಚಳವಳಿ ರೂಪು ಪಡೆಯಬೇಕಾಗಿದೆ. ‘ದುಷ್ಕೃತ್ಯಗಳಿಗೆ ನಮ್ಮ ಮನೆಯ ಮಕ್ಕಳಿಲ್ಲ..’ ಎಂಬ ಬೋರ್ಡು ದಮನಿತ ಸಮುದಾಯದ ಪ್ರತಿ ಮನೆಯಲ್ಲೂ ತೂಗುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ.
        ಅಕ್ಟೋಬರ್ 4 ರಂದು ಬೆಂಗಳೂರಿನಿಂದ ಹೊರಡುವ ಮತ್ತು ಪ್ರವೀಣ್ ಪೂಜಾರಿಯನ್ನು ಹತ್ಯೆ ನಡೆಸಲಾದ ಉಡುಪಿಯಲ್ಲಿ ಅಕ್ಟೋಬರ್ 9  ರಂದು ಒಟ್ಟುಸೇರಲಿರುವ ‘ಚಲೋ ಉಡುಪಿ ಜಾಥಾ’ವು ದಮನಿತರಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಗಲಿ ಎಂಬ ಹಾರೈಕೆ.

Friday, September 2, 2016

ಕಾಶ್ಮೀರದ ಕಲ್ಲು, ಮಾಧ್ಯಮ ಮತ್ತು ಒಂದು ವಿಡಿಯೋ

   
      ಜುಲೈ 11ರಂದು ನ್ಯೂಸ್‍ಲಾಂಡ್ರಿ ಎಂಬ ಪ್ರಮುಖ ಅಂತರ್ಜಾಲ ಮಾಧ್ಯಮದಲ್ಲಿ, Kashmir Unrest: What Delhi and
Kashmiri media saw (ಕಾಶ್ಮೀರದ ಅಶಾಂತಿ: ದೆಹಲಿ ಮತ್ತು ಕಾಶ್ಮೀರಿ ಮಾಧ್ಯಮದಲ್ಲಿ ಕಾಣಿಸಿದ ವ್ಯತ್ಯಾಸ) ಎಂಬ ಶೀರ್ಷಿಕೆಯಲ್ಲಿ ಮನೀಶ್ ಪಾಂಡೆಯವರ ಲೇಖನ ಪ್ರಕಟವಾಯಿತು. ‘ಸ್ಥಳೀಯ ಮಾಧ್ಯಮವಿಲ್ಲದೆ ಹಿಂಸೆಯ ಇನ್ನೊಂದು ಭಾಗ ನಿಮಗೆ ಗೊತ್ತಾಗದು..’ ಎಂಬ ಅಡಿಬರಹವನ್ನೂ ಮನೀಶ್ ಪಾಂಡೆ ಆ ಲೇಖನಕ್ಕೆ ಕೊಟ್ಟಿದ್ದರು. ಜುಲೈ 14ರಂದು ಇಂಡಿಯಾ ಟುಡೇ ಟಿ.ವಿ. ಚಾನೆಲ್‍ನಲ್ಲಿ ಕಾಶ್ಮೀರದ ಬಗ್ಗೆ ವಿಶೇಷ ವರದಿಯೊಂದು ಪ್ರಸಾರವಾಯಿತು. ‘ಕಾಶ್ಮೀರಿ ಕಣಿವೆಯನ್ನು ಪ್ರಕ್ಷುಬ್ಧಗೊಳಿಸುವುದಕ್ಕೆ ಪಾಕ್‍ನಿಂದ 100 ಕೋಟಿ ರೂಪಾಯಿ ಯೋಜನೆ..’ ಎಂಬರ್ಥ ಬರುವ ಶೀರ್ಷಿಕೆಯಲ್ಲಿ ಪ್ರಸಾರವಾದ ಈ 20 ನಿಮಿಷದ ವರದಿಯನ್ನು ತಯಾರಿಸಿದ್ದು ಚಾನೆಲ್‍ನ ಸಂಪಾದಕ ಗೌರವ್ ಸಾವಂತ್. ಇದಾಗಿ ಒಂದು ತಿಂಗಳಾದ ಬಳಿಕ ಆಗಸ್ಟ್ 19ರ ಆವೃತ್ತಿಯಲ್ಲಿ ಫ್ರಂಟ್‍ಲೈನ್ ಪತ್ರಿಕೆಯು ‘ಕಾಶ್ಮೀರದ ಕ್ರೋಧ’ (Wrath of Kashmir) ಎಂಬ ಹೆಡ್‍ಲೈನ್‍ನೊಂದಿಗೆ ಮುಖ್ಯ ಲೇಖನವನ್ನು ಪ್ರಕಟಿಸಿತು.   ಒಂದು ತಿಂಗಳ ಅವಧಿಯೊಳಗೆ ಪ್ರಕಟವಾದ ಈ ಎರಡು ಲೇಖನಗಳು ಮತ್ತು ಒಂದು ಟಿ.ವಿ. ವರದಿಯನ್ನು ಇಲ್ಲಿ ಉಲ್ಲೇಖಿಸಲು ಮುಖ್ಯ ಕಾರಣ ಏನೆಂದರೆ, ಮಾಧ್ಯಮಗಳ ಮೇಲೆ ಈಗಾಗಲೇ ಇರುವ ಪಕ್ಷಪಾತದ ಆರೋಪ, ಶಂಕೆ, ಟಿ.ಆರ್.ಪಿ. ತೆವಲಿನ ಚರ್ಚೆಯನ್ನು ಒಂದಷ್ಟು ಮುಂದಕ್ಕೆ ಕೊಂಡೊಯ್ಯುವುದಕ್ಕೆ. ಜುಲೈ 14ರ ಇಂಡಿಯಾ ಟುಡೇ ಕಾರ್ಯಕ್ರಮದಲ್ಲಿ ಕಾಶ್ಮೀರದ ಪ್ರಕ್ಷುಬ್ಧ ಸ್ಥಿತಿಗೆ ಎರಡು ಮುಖ್ಯ ಅಂಶಗಳನ್ನು ಕಾರಣವಾಗಿ ಕೊಡಲಾಯಿತು.

 1. ಪಾಕಿಸ್ತಾನದ ಕೈವಾಡ         
 2. ನಿರುದ್ಯೋಗ.
        ಇದೇ ವರದಿಯ ಆಧಾರದಲ್ಲಿ ಇನ್ನೆರಡು ಕಾರ್ಯಕ್ರಮಗಳೂ ಪ್ರಸಾರವಾದುವು. ಒಂದು, ಇದೇ ಚಾನೆಲ್‍ನಲ್ಲಿ ರಾಹುಲ್ ಕನ್ವಲ್ ನಡೆಸಿ ಕೊಡುವ ‘ನ್ಯೂಸ್‍ರೂಂ’ ಕಾರ್ಯ ಕ್ರಮವಾದರೆ ಇನ್ನೊಂದು, ಆಜ್‍ತಕ್ ಚಾನೆಲ್ ಈ ಕುರಿತಂತೆ ಚರ್ಚೆಯನ್ನು ಏರ್ಪಡಿಸಿತು. ಈ ಮೂರಕ್ಕೂ ಇವು ಪುರಾವೆಯಾಗಿ ತೋರಿಸಿದ್ದು ಒಂದು ವೀಡಿಯೋ. ಬನಿಯನ್ ಧರಿಸಿರುವ ಓರ್ವ ಹದಿಹರೆಯದ ಯುವಕ ಕ್ಯಾಮರಾದ ಮುಂದೆ ಕಾಣಿಸಿಕೊಳ್ಳುತ್ತಾನೆ. ಮುಖದಲ್ಲಿ ಭಯವೋ ಆತಂಕವೋ ಏನೋ ಮಡುಗಟ್ಟಿರುವಂತೆ ಕಾಣಿಸುತ್ತದೆ. ಸೈನಿಕರ ವಿರುದ್ಧ ಕಲ್ಲೆಸೆಯುವುದಕ್ಕೆ ತನಗೆ ಹಣ ನೀಡಲಾಗಿದೆ ಎಂದು ಆತ ಹೇಳುತ್ತಾನೆ. ಯಾರು ಎಂಬ ಪ್ರಶ್ನೆಗೆ, ಸಯ್ಯದ್ ಅಲೀ ಶಾ ಗೀಲಾನಿ ಎನ್ನುತ್ತಾನೆ. ತಲಾ 500 ರೂಪಾಯಿಯಂತೆ ಕೊಟ್ಟು ಅವರು ಕಲ್ಲೆಸೆತಕ್ಕೆ ನಿಯೋಜಿಸಿದ್ದಾರೆ ಎಂದು ಆತ ಹೇಳುತ್ತಾನೆ.
    ಇಲ್ಲಿಗೇ ಮುಗಿಯುವುದಿಲ್ಲ.
ಆ ಪುಟ್ಟ ವೀಡಿಯೋದ ಬಗ್ಗೆ ಅನುಮಾನಗೊಂಡ ಮನೀಶ್ ಪಾಂಡೆ ಮತ್ತು ಸುಹೈಲ್ ಶಾ ಎಂಬ ನ್ಯೂಸ್‍ಲಾಂಡ್ರಿ ಅಂತರ್ಜಾಲ ಪತ್ರಿಕೆಯ ಪತ್ರಕರ್ತರಿಬ್ಬರು ಸತ್ಯಶೋಧನೆಗೆ ಮುಂದಾಗುತ್ತಾರೆ. ಆ ವೀಡಿಯೋ ಪ್ರಸಾರದ ಮೊದಲು ಇಂಡಿಯಾ ಟುಡೇ ಚಾನೆಲ್ ಪರಿಶೀಲನೆ ನಡೆಸಿದೆಯೇ, ವೀಡಿಯೋದ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿಕೊಂಡಿದೆಯೇ ಎಂದು ಅನ್ವೇಷಣೆ ನಡೆಸುತ್ತಾರೆ. ಸಿಆರ್‍ಪಿಎಫ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಯಾದವ್‍ರನ್ನು ಭೇಟಿಯಾಗುತ್ತಾರೆ. ಪಟ್ಟು ಬಿಡದ ಸತ್ಯಶೋಧನೆಯಿಂದ ಅವರು ಕಂಡುಕೊಂಡ ಸತ್ಯ ಇಷ್ಟು -
1.    ಆ ವೀಡಿಯೋ ತುಂಬಾ ಹಳೆಯದು. 8 ವರ್ಷಗಳಷ್ಟು ಹಳೆಯದು.
2.    ಆ ವೀಡಿಯೋದಲ್ಲಿರುವ ಹೇಳಿಕೆ ಕೂಡ ನಕಲಿ. ಆ ಹದಿಹರೆಯದ ಯುವಕ ಹೇಳಿಕೆ ಕೊಟ್ಟದ್ದು ಸ್ವಇಚ್ಛೆಯಿಂದಲ್ಲ. ಪೊಲೀಸರ ಹಿಂಸೆಯನ್ನು ತಾಳಲಾರದೇ ಬಲವಂತದಿಂದ ಆ ಹೇಳಿಕೆಯನ್ನು ಕೊಟ್ಟಿದ್ದ.
       ನಿಜವಾಗಿ, ಆ ವೀಡಿಯೋದಲ್ಲಿ ಕಾಣಿಸಿಕೊಂಡ ಯುವಕನ ಹೆಸರು ಬಿಲಾಲ್ ಅಹ್ಮದ್ ಡರ್. ಶ್ರೀನಗರದ ಪರ್‍ಪೋರಾ ಎಂಬ ಊರಿನ ಈ ಯುವಕನಲ್ಲಿ ಮನಮಿಡಿಯುವ ನೆನಪೊಂದಿದೆ. 2008ರಲ್ಲಿ (ಆಗ ಈತನಿಗೆ 19 ವರ್ಷ) ಅಮರನಾಥ ದೇವಾಲಯದ ಭೂಮಿಯ ಕುರಿತು ವಿವಾದವೊಂದು ತಲೆದೋರಿತ್ತು. ಪ್ರತಿಭಟನೆ ಏರ್ಪಟ್ಟಿತ್ತು. ಆವತ್ತು ಬಿಲಾಲ್ ಔಷಧ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ. ಪ್ರತಿಭಟನೆಯ ಕಾರಣದಿಂದಾಗಿ ರಿಸರ್ವ್ ಪೊಲೀಸ್ ತುಕಡಿಗಳು ಅಲ್ಲಲ್ಲಿ ಜಮಾವಣೆಯಾಗಿತ್ತು. ಬಿಲಾಲ್ ತನ್ನ ಗೆಳೆಯನ ಬೈಕ್‍ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ಹೊರಟಿದ್ದ. ಪ್ರತಿಭಟನಾಕಾರರ ಗುಂಪನ್ನು ಕಂಡು ಗೆಳೆಯ ಬೈಕ್ ನಿಧಾನಿಸಿದ. ಪೊಲೀಸರು ಹತ್ತಿರ ಬರುವುದನ್ನು ಕಂಡು ಹೆದರಿದ ಆತ ಬೈಕ್ ಬಿಟ್ಟು ಓಡಿದ. ಓಡಲಾಗದ ಬಿಲಾಲ್‍ನ ಮೇಲೆ ಓರ್ವ ಪೊಲೀಸ್ ಲಾಠಿ ಬೀಸಿದ. ಕೈ ಮುರಿಯಿತು. ಬಿಲಾಲ್‍ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತಲ್ಲದೇ, ಸುಮಾರು ಮೂರೂವರೆ ಗಂಟೆಗಳ ಕಾಲ ತೀವ್ರ ಹಿಂಸೆ, ದೌರ್ಜನ್ಯ ಎಸಗಲಾಯಿತು. ಬಳಿಕ ಆತನ ಶರ್ಟ್ ಹರಿದು ಮುರಿದ ಕೈಯನ್ನು ಪೊಲೀಸರು ಎತ್ತಿ ಕಟ್ಟಿದರು. ಆತನ ಎದುರಿಗೆ ವೀಡಿಯೋ ಕ್ಯಾಮರಾ ತಂದರು. ಪೊಲೀಸರು ಹೇಳಿಕೊಟ್ಟಂತೆಯೇ ಕ್ಯಾಮರಾದ ಮುಂದೆ ಹೇಳಬೇಕೆಂದು ಬಲವಂತಪಡಿಸಿದರು. ಒಪ್ಪದಿದ್ದಾಗ ದೌರ್ಜನ್ಯ ನಡೆಸಿದರು. ಆ ಹಿಂಸೆಯಿಂದ ಪಾರಾಗುವುದಕ್ಕಾಗಿ ವೀಡಿಯೋದ ಮುಂದೆ ಅವರು ಹೇಳಿ ಕೊಟ್ಟ ವಿಷಯಗಳನ್ನು ಆತ ಹೇಳಿದ್ದ. ಅಲೀಷಾ ಗೀಲಾನಿಯವರು ಪೊಲೀಸರ ವಿರುದ್ಧ ಕಲ್ಲೆಸೆಯಲು ಹಣ ನೀಡಿದ್ದಾರೆ.. ಎಂದೆಲ್ಲಾ ಹೇಳಿದ್ದು ಹೀಗೆ.
ಶ್ರೀನಗರದ ಲಾಲ್‍ಚೌಕ್‍ನಲ್ಲಿರುವ ಕೆಳಕೋರ್ಟ್‍ನಲ್ಲಿ ಒಂದೂ ವರೆ ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಯಿತು. ಕೊನೆಗೆ ಕೋರ್ಟ್ ಬಿಲಾಲ್‍ನನ್ನು ದೋಷಮುಕ್ತಗೊಳಿಸಿತು. ಆದರೆ ಕಾಶ್ಮೀರ ಪ್ರಕ್ಷುಬ್ಧಗೊಂಡಾಗಲೆಲ್ಲ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ಯುತ್ತಾರೆ. ವಿಚಾರಣೆ ನಡೆಸುತ್ತಾರೆ. ಇಂಡಿಯಾ ಟುಡೇಯಂಥ ಚಾನೆಲ್‍ಗಳು ತಮ್ಮ ಟಿ.ಆರ್.ಪಿ.ಯ ಉ ದ್ದೇಶ ದಿಂದಲೋ ಅಥವಾ ಇನ್ನಾವ ಕಾರಣದಿಂದಲೋ ಪ್ರಸಾರ ಮಾಡಿ ಕೈತೊಳೆದುಕೊಳ್ಳುವಾಗ ಬಿಲಾಲ್‍ನಂಥವರಿಗೆ ಅದನ್ನು ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಾಗುವುದಿಲ್ಲ. ಅಷ್ಟಕ್ಕೂ,

       ಮಾಧ್ಯಮ ಹೊಣೆಗಾರಿಕೆ ಅಂದರೇನು? ತನಗೆ ಸಿಕ್ಕ ವೀಡಿಯೋವನ್ನು ವರದಿಗೆ ಪೂರಕವಾಗಿ ಬಳಸಿಕೊಳ್ಳುವಾಗ ವಹಿಸಿಕೊಳ್ಳಬೇಕಾದ ಎಚ್ಚರಿಕೆಗಳು ಮುಖ್ಯವಾಹನಿಯಲ್ಲಿ ಗುರುತಿಸಿ ಕೊಂಡಿರುವ ಇಂಡಿಯಾ ಟುಡೇಗೆ ಗೊತ್ತಿಲ್ಲವೇ? ವೀಡಿಯೋದ ಮೂಲವನ್ನು ಸ್ಪಷ್ಟಪಡಿಸಿಕೊಳ್ಳದೆಯೇ ವರದಿಗೆ ಆಧಾರವಾಗಿ ಬಳಸಿಕೊಳ್ಳುವುದು ಯಾವ ಬಗೆಯ ನೈತಿಕತೆ? ಈ ಪ್ರಶ್ನೆ ಚಾನೆಲ್ ನಿರೂಪಕಿ ಪದ್ಮಜ ಜೋಶಿಯವರಿಗೂ ಎದುರಾಯಿತು. ವೀಡಿಯೋದ ಅಸಲಿತನವನ್ನು ಖಚಿತಪಡಿಸಿಕೊಳ್ಳಲು ತಮಗೆ ಸಾಧ್ಯವಾಗಿಲ್ಲ ಎಂದವರು ಒಪ್ಪಿಕೊಂಡರು. ನಿಜ ಏನೆಂದರೆ, ಆ ವೀಡಿಯೋವನ್ನು ಒದಗಿಸಿದ್ದೇ ವ್ಯವಸ್ಥೆ. ಕಾಶ್ಮೀರದಲ್ಲಿ ಪ್ರತಿಭಟನೆ ತೀವ್ರತೆಯನ್ನು ಪಡೆಯುತ್ತಿರುವುದನ್ನು ಕಂಡು 8 ವರ್ಷಗಳ ಹಿಂದಿನ ನಕಲಿ ವೀಡಿಯೋವನ್ನು ಸದ್ದಿಲ್ಲದೇ ಬಿಡುಗಡೆಗೊಳಿಸುವ ಏರ್ಪಾಟು ನಡೆಯಿತು. ಜವಾಬ್ದಾರಿ ಮರೆತ ಮಾಧ್ಯಮಗಳು ಸಮಾಜವನ್ನು ಹೇಗೆ ದಿಕ್ಕು ತಪ್ಪಿಸಬಹುದು ಎಂಬುದಕ್ಕೆ ಪುರಾವೆ ಇದು. ನ್ಯೂಸ್‍ಲಾಂಡ್ರಿ ಅಂತರ್ಜಾಲ ತಾಣವು ಇದನ್ನುIndia Today and the curious case of the stone pelters confession (ಇಂಡಿಯಾ ಟುಡೇ ಮತ್ತು ಕಲ್ಲೆಸೆತಗಾರರ ಕುತೂಹಲಕಾರಿ ತಪ್ಪೊಪ್ಪಿಗೆ) ಎಂಬ ಶೀರ್ಷಿಕೆಯಲ್ಲಿ ವಿಸ್ತೃತವಾಗಿ ವಿವರಿಸಿತು. ಒಂದು ರೀತಿಯಲ್ಲಿ, ಸುಮಾರು ಎರಡು ತಿಂಗಳಿನಿಂದ ಕರ್ಫ್ಯೂ ವಿಧಿಸಿಕೊಂಡು ಜರ್ಝರಿತವಾಗಿರುವ ಕಾಶ್ಮೀರವನ್ನು ಮುಖ್ಯವಾಹಿನಿಯ ಮಾಧ್ಯಮಗಳು ನೋಡಿದ್ದು ಬಹುತೇಕ ಸರಕಾರಿ ಕಣ್ಣಲ್ಲೇ. ಕಾಶ್ಮೀರದ ಸ್ಥಳೀಯ ಪತ್ರಿಕೆ ಮತ್ತು ದೆಹಲಿ ಕೇಂದ್ರಿತ ಮುಖ್ಯವಾಹಿನಿ ಪತ್ರಿಕೆಗಳ ಸುದ್ದಿ ಮತ್ತು ವರದಿಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಶುಜಾಅತ್ ಬುಖಾರಿಯವರು ಫ್ರಂಟ್‍ಲೈನ್ ಪತ್ರಿಕೆಯಲ್ಲಿ ಕಾಶ್ಮೀರದ ಕ್ರೋಧ (Wrath of Kashmir) ಎಂಬ ಹೆಸರಲ್ಲಿ ಬರೆದ ಲೇಖನದಲ್ಲಿ ಕಾಶ್ಮೀರದ ಈಗಿನ ಅಶಾಂತಿಗೆ ಕೊಡುವ ಕಾರಣ ಒಂದೇ- ಗೌರವಾರ್ಹವಾಗಿ ಬದುಕಲು ಬಿಡಿ ಎಂಬುದು. ಇಂಡಿಯಾ ಟುಡೇಯ ಗೌರವ್ ಸಾವಂತ್ ಪಟ್ಟಿ ಮಾಡಿರುವ - ಪಾಕ್ ಕೈವಾಡ ಮತ್ತು ನಿರುದ್ಯೋಗ ಎಂಬೆರಡು ಕಾರಣಗಳಿಗೆ ಇದನ್ನು ಹೋಲಿಸಿದರೆ, ಶುಜಾಅತ್ ನಿಲುವು ಸಂಪೂರ್ಣ ವಿರುದ್ಧ. ಸಾವಂತ್ ದೆಹಲಿ ಕೇಂದ್ರಿತ ಪತ್ರಕರ್ತರಾದರೆ ಶುಜಾಅತ್ ಕಾಶ್ಮೀರಿ ಪತ್ರಕರ್ತ. ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ. ಸಾವಂತ್‍ಗಿಂತ ಹೆಚ್ಚು ಶುಜಾಅತ್‍ಗೆ ಕಾಶ್ಮೀರ ಗೊತ್ತಿದೆ. ಅಲ್ಲಿನ ಜನರು, ಜೀವನದ ಅನುಭವವಿದೆ. ಮುಖ್ಯ ವಾಹಿನಿಯ ಮಾಧ್ಯಮಗಳ ಸಮಸ್ಯೆ ಏನೆಂದರೆ, ಅವು ಕಾಶ್ಮೀರದಿಂದ ಬರುವ ಸುದ್ದಿಯನ್ನು ಅಷ್ಟೇ ತೀವ್ರತೆಯೊಂದಿಗೆ ಪರಿಗಣಿಸುವ ಸಂದರ್ಭಗಳು ಕಡಿಮೆ ಇರುತ್ತವೆ. ದೆಹಲಿಯ ರಾಜಕೀಯ ಹಿತಾಸಕ್ತಿಗಳು ಸುದ್ದಿಯ ಮೇಲೆ ಕೈಯಾಡಿಸುವಂತೆ ಒತ್ತಾಯಿಸುತ್ತವೆ. ಸೇನೆಯ ಪೆಲೆಟ್ ದಾಳಿಗಿಂತಲೂ ಜನರ ಕಲ್ಲೆಸೆತವನ್ನೇ ಪ್ರಮುಖ ಸುದ್ದಿಯಾಗಿಸುವುದರಲ್ಲಿ ರಾಜಕೀಯ ಮತ್ತು ಆರ್ಥಿಕ ಸುಖವೂ ಸಿಗುತ್ತದೆ. ಕಾಶ್ಮೀರ ಮತ್ತು ದೆಹಲಿಯ ನಡುವೆ ಎಷ್ಟು ಅಂತರ ಇದೆಯೋ ಅಷ್ಟೇ ಅಂತರವು ಸುದ್ದಿಗಳಿಗೆ ಸಿಗುವ ಪ್ರಾಮುಖ್ಯತೆಯಲ್ಲೂ ಕಾಣಿಸುತ್ತದೆ. ಆದರೆ, ಸ್ಥಳೀಯ ಪತ್ರಿಕೆಗಳ ಮಟ್ಟಿಗೆ ಈ ಸಮಸ್ಯೆಯಿರುವುದಿಲ್ಲ. ಅವು ಸ್ಥಳೀಯವೇ ಆಗಿರುವುದರಿಂದ ಕಲ್ಲು ಮತ್ತು ಪೆಲೆಟ್‍ಗಳ ಸಾಮರ್ಥ್ಯವನ್ನು ಅವು ಚೆನ್ನಾಗಿಯೇ ತಿಳಿದಿರುತ್ತವೆ. ಅವುಗಳ ಮೇಲೆ ರಾಷ್ಟ್ರೀಯ ಮಾಧ್ಯಮ ಎಂಬ ಕೊಂಬೂ ಇರುವುದಿಲ್ಲ. ಕಾಶ್ಮೀರದ ಪ್ರಕ್ಷುಬ್ಧತೆಯನ್ನು ಮುಖ್ಯವಾಹಿನಿಯ ಮಾಧ್ಯಮಗಳಿಗಿಂತ ಹೆಚ್ಚು ಅವು ಅನುಭವಿಸಿರುವುದರಿಂದಾಗಿ ಮುಖಪುಟದಲ್ಲಿ ಕಲ್ಲೆಸೆತದ ಸುದ್ದಿ ಬರಬೇಕೋ ಅಥವಾ ಪೆಲೆಟ್‍ನಿಂದ ಕಣ್ಣು ಕಳಕೊಂಡವರ ಸುದ್ದಿ ಬರಬೇಕೋ ಎಂಬ ಸಂದಿಗ್ಧ ಎದುರಾಗುವುದಿಲ್ಲ. ಕಾಶ್ಮೀರದ, `ಗ್ರೇಟರ್ ಕಾಶ್ಮೀರ್', `ರೈಸಿಂಗ್ ಕಾಶ್ಮೀರ್', `ಕಾಶ್ಮೀರ್ ಒಬ್ಸರ್ವರ್' ಮುಂತಾದ ಸ್ಥಳೀಯ ಪತ್ರಿಕೆಗಳನ್ನು
ಬಿಲಾಲ್ ಅಹ್ಮದ್ ಡರ್
ಮುಖ್ಯವಾಹಿನಿಯ ಪತ್ರಿಕೆಗಳಾದ ದಿ ಹಿಂದೂ, ಇಂಡಿಯನ್ ಎಕ್ಸ್ ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಜೊತೆ ಇಟ್ಟು ನೋಡುವಾಗ ವ್ಯಕ್ತವಾಗುವ ಅನುಭವ ಇದು. `ಕಾಶ್ಮೀರ್ ಬ್ಲೀಡ್ಸ್' (ಕಾಶ್ಮೀರ ರಕ್ತ ಸುರಿಸುತ್ತಿದೆ) ಎಂಬ ಯಾರನ್ನೂ ನೋಯಿಸದ ಆದರೆ ಅತ್ಯಂತ ಭಾವುಕಗೊಳಿಸುವ ಶೀರ್ಷಿಕೆಯನ್ನು ಸ್ಥಳೀಯ ಗ್ರೇಟರ್ ಕಾಶ್ಮೀರ್‍ನಂಥ ಪತ್ರಿಕೆಗಳಿಂದ ನಿರೀಕ್ಷಿಸಬಹುದೇ ಹೊರತು, Fresh Violence: 5 Dead (ಹಿಂಸೆ: 5 ಸಾವು) ಎಂಬ ನಿರ್ಭಾವುಕ ಮತ್ತು ಜನರನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ರಾಷ್ಟ್ರೀಯ ಪತ್ರಿಕೆಗಳಿಂದಲ್ಲ. ನಿಜವಾಗಿ, ಕಾಶ್ಮೀರವನ್ನು ಕಾಶ್ಮೀರದ ಹೊರಗಿನ ಭಾರತವು ಇವತ್ತಿಗೂ ಅಸೂಯೆ ಮತ್ತು ದ್ವೇಷದಿಂದ ನೋಡುವಂಥ ವಾತಾವರಣ ಇದೆ. ಕಾಶ್ಮೀರದಿಂದ ಹೊರಗಿನವರಿಗೆ ಕಾಶ್ಮೀರದಲ್ಲಿ ಭೂಮಿ ಖರೀದಿಸುವುದಕ್ಕೆ ಅವಕಾಶ ಇಲ್ಲ ಎಂದು ದೂರುವುದಿದೆ. ಹೀಗೆ ದೂರುವಾಗಲೂ ಇಂಥದ್ದೇ ನಿಯಮ ಅಂಡಮಾನ್- ನಿಕೋಬಾರ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‍ಗಳಲ್ಲೂ ಇವೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಇಲ್ಲೂ ಹೊರಗಿನವರಿಗೆ ಭೂಮಿ ಖರೀದಿಸುವುದಕ್ಕೆ ಅವಕಾಶ ಇಲ್ಲ. 370ನೇ ವಿಧಿಯನ್ನು ರದ್ದುಪಡಿಸುವುದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ವಾದಿಸುವವರೂ ಇದ್ದಾರೆ. ನಿಜವಾಗಿ, 370ನೇ ವಿಧಿಗೂ ಈ ಭೂಮಿ ಖರೀದಿಗೂ ಯಾವ ಸಂಬಂಧವೂ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲೇ ಈ ನಿಯಮ ಕಾಶ್ಮೀರದಲ್ಲಿ ಜಾರಿಯಲ್ಲಿತ್ತು. ತನ್ನ ಪ್ರತ್ಯೇಕತೆಯನ್ನು ಹಾಗೆಯೇ ಉಳಿಸಿಕೊಂಡು ಭಾರತದೊಂದಿಗೆ ಸೇರ್ಪಡೆಗೊಳ್ಳುವ ಷರತ್ತಿನ ಒಪ್ಪಂದವೇ 370ನೇ ವಿಧಿ. ಅದು ಭೂಮಿ ಖರೀದಿ ಒಪ್ಪಂದ ಅಲ್ಲ. ಈ ವಿಧಿಯನ್ನು ರದ್ದುಗೊಳಿಸುವುದೆಂದರೆ ಭಾರತದೊಂದಿಗೆ ಸೇರ್ಪಡೆಗೊಂಡುದನ್ನೇ ರದ್ದುಗೊಳಿಸಿದಂತೆ. ಆದರೆ, ಕಾಶ್ಮೀರಕ್ಕೆ ಸಂಬಂಧಿಸಿ ಕಾಶ್ಮೀರಿಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸುದ್ದಿಗಳೇ ಪ್ರಾಬಲ್ಯ ಪಡೆಯುತ್ತಿವೆ.
         ಇಂಡಿಯಾ ಟುಡೆ ಪ್ರಸಾರ ಮಾಡಿದ ವೀಡಿಯೋ ಅದಕ್ಕೊಂದು ಉದಾಹರಣೆ ಅಷ್ಟೇ.