Monday, October 27, 2014

ನುಡಿಸಿರಿಯನ್ನು ಒಪ್ಪಿಕೊಳ್ಳುವ ಸಿದ್ದಲಿಂಗಯ್ಯ ಮತ್ತು ನೋಬೆಲ್ ಅನ್ನು ತಿರಸ್ಕರಿಸುವ ಸರ್ತೆ

      “ಅಲ್ಜೀರಿಯಾದ ವಿರುದ್ಧ ಫ್ರಾನ್ಸ್ ನಡೆಸುತ್ತಿದ್ದ ಯುದ್ಧದ ಸಂದರ್ಭದಲ್ಲಿ ನಾವು 121 ಹೇಳಿಕೆಗೆ (Declaration of the121) ಸಹಿ ಹಾಕಿದೆವಲ್ಲ, ಆಗ ಈ ನೋಬೆಲ್ ಪಾರಿತೋಷಕವನ್ನು  ನನಗೆ ನೀಡಿರುತ್ತಿದ್ದರೆ ನಾನು ಸ್ವೀಕರಿಸಬಹುದಿತ್ತು. ಯಾಕೆಂದರೆ ಅದು ನನ್ನ ಪಾಲಿಗೆ ಮಾತ್ರವಲ್ಲ, ನಾವು ಯಾರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೆವೋ ಅವರೆಲ್ಲರ ಪಾಲಿಗೆ ಸಲ್ಲುವ ಗವ್ ರವ ವಾಗುತ್ತಿತ್ತು. ಆದರೆ ಆ ಸಂದರ್ಭದಲ್ಲಿ ನನ್ನನ್ನು ಪರಿಗಣಿಸದೆ ಯುದ್ಧ ಮುಗಿದ ಬಳಿಕ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅಲ್ಲದೆ, ಪ್ರಶಸ್ತಿಯು ಪಶ್ಚಿಮದ ಸಾಹಿತಿಗಳಿಗೆ ಇಲ್ಲವೇ ಪೂರ್ವದ ಬಂಡಾಯಗಾರರಿಗೆ ಎಂಬ ರೀತಿಯಲ್ಲಿ ಯಾಕೆ ವಿತರಣೆಯಾಗುತ್ತಿದೆ ಎಂಬುದೂ ನನಗೆ ಅರ್ಥವಾಗುತ್ತಿಲ್ಲ. ನಾನು ಈ ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದೇನೆ..”
   ‘ದಿ ವಾಲ್', ‘ದಿ ಫೈಲ್ಸ್', ‘ನೋ ಎಕ್ಸಿಸ್ಟ್', ‘ದಿ ವಿಕ್ಟರ್ಸ್', ‘ಡರ್ಟಿ ಹ್ಯಾಂಡ್ಸ್', ‘ಟ್ರಬಲ್ಡ್ ಸ್ಲೀಪ್', ‘ದಿ ಡೆವಿಲ್ ಆ್ಯಂಡ್ ಗುಡ್ ಲಾರ್ಡ್', ‘ದಿ ಟ್ರೋಜನ್ ವುಮೆನ್', ‘ದಿ ಕಂಡೆಮ್‍ನ್ಡ್ ಆಫ್ ಅಲ್ ಟೋನಾ..' ಮುಂತಾದ ಮೇರು ಕೃತಿಗಳನ್ನು ಬರೆದ ಫ್ರಾನ್ಸ್ ನ ಖ್ಯಾತ ಸಾಹಿತಿ ಜೀನ್ ಪಾಲ್ ಸರ್ತೆ 1964ರಲ್ಲಿ ತನಗೆ ಸಿಕ್ಕ ನೋಬೆಲ್ ಸಾಹಿತ್ಯ ಪ್ರಶಸ್ತಿಯನ್ನು ತಿರಸ್ಕರಿಸುತ್ತಾ ಹೇಳಿದ ಮಾತುಗಳಿವು. ದಸರಾವನ್ನು ಉದ್ಘಾಟಿಸಿದ ಗಿರೀಶ್ ಕಾರ್ನಾಡ್‍ರ ಕುರಿತಂತೆ ಅಥವಾ ವಿಹಿಂಪ ಸಮ್ಮೇಳನದ ಗೌರವಾಧ್ಯಕ್ಷರಾಗಿದ್ದ ಮೋಹನ್ ಆಳ್ವರ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಒಪ್ಪಿಕೊಂಡ ಕವಿ ಸಿದ್ಧಲಿಂಗಯ್ಯನವರ ಕುರಿತಂತೆ ಉಂಟಾದ ಪರ-ವಿರುದ್ಧ ಅಭಿಪ್ರಾಯಗಳಂತೆ ಸರ್ತೆಯವರ ನಿರ್ಧಾರವೂ ಅಂದು ಸಾಹಿತ್ಯ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು.  ತನ್ನ ಯುದ್ಧ ವಿರೋಧಿ ನಿಲುವನ್ನು ಪ್ರಶಸ್ತಿಯ ಆಯ್ಕೆಗೆ ಮಾನದಂಡವಾಗಿ ಬಳಸಿಕೊಳ್ಳಬೇಕಿತ್ತೆಂದು ಸರ್ತೆ ಒತ್ತಡ ಹಾಕುವುದು ಎಷ್ಟು ಸರಿ ಎಂಬ ವಾದವನ್ನು ಅಂದು ಹಲವರು ಮುಂದಿಟ್ಟಿದ್ದರು. ಪ್ರಶಸ್ತಿಯನ್ನು ಯಾವಾಗ, ಯಾವ ಸಂದರ್ಭದಲ್ಲಿ ನೀಡಬೇಕೆಂದು ಸ್ವತಃ ಸಾಹಿತಿಯೇ ತೀರ್ಮಾನಿಸುವುದು ಅಸಂಬದ್ಧ ಎಂದೂ ಹೇಳಿದವರಿದ್ದರು. ಅದೇ ವೇಳೆ, ಪ್ರಶಸ್ತಿಯನ್ನು ಸ್ವೀಕರಿಸುತ್ತಲೇ ಫ್ರಾನ್ಸಿನ ಅತಿಕ್ರಮಣ ನೀತಿಯನ್ನು ಖಂಡಿಸುವುದಕ್ಕಿಂತ ಪ್ರಶಸ್ತಿಯನ್ನು ತಿರಸ್ಕರಿಸಿ ಪ್ರತಿಭಟಿಸುವುದೇ ಹೆಚ್ಚು ಪ್ರಭಾವಶಾಲಿ ಎಂದು ಸಮರ್ಥಿಸಿದವರೂ ಇದ್ದರು. ಕಳೆದ ವಾರ ಲಂಡನ್ನಿನ ಗಾರ್ಡಿಯನ್ ಪತ್ರಿಕೆಯು, ‘ಜೀನ್ ಪಾಲ್ ಸರ್ತೆ: ಹಿಂದೆಂಗಿಂತಲೂ ಈಗ ಹೆಚ್ಚು ಪ್ರಸ್ತುತ' (Jean Paul Sartre: More relevent now than ever) ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸಿದಾಗಲೂ ಓದುಗ ವಲಯದಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾದುವು. ಪ್ರಶಸ್ತಿಯನ್ನು ತಿರಸ್ಕರಿಸುವುದಕ್ಕಿಂತ ಸ್ವೀಕರಿಸಿ ಪ್ರಶಸ್ತಿ ಮೊತ್ತವಾದ 21 ಸಾವಿರ ಪೌಂಡ್ ಅನ್ನು ಲಂಡನ್ನಿನ ವರ್ಣಭೇದ ಸಮಿತಿಗೆ ನೀಡಿರುತ್ತಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು ಎಂದೂ ಹೇಳಿದವರಿದ್ದಾರೆ. ಅದೇ ವೇಳೆ, ಸರ್ತೆಯವರ ನಿಲುವನ್ನು ಸೈದ್ಧಾಂತಿಕ ಬದ್ಧತೆ ಎಂದು ಕರೆದು ಬೆಂಬಲಿಸಿದವರಿದ್ದಾರೆ. ನೋಬೆಲ್ ಪ್ರಶಸ್ತಿಯನ್ನು ಯುದ್ಧ, ಅತಿಕ್ರಮಣ ಮುಂತಾದುವುಗಳೊಂದಿಗೆ ಜೋಡಿಸಿ ಸಂವೇದನಾಶೀಲ ಗೊಳಿಸಿದುದಕ್ಕಾಗಿ ಅವರನ್ನು ಮೆಚ್ಚಿಕೊಂಡವರಿದ್ದಾರೆ. ನಿಜವಾಗಿ, ಸರ್ತೆಯವರ ನಿರ್ಧಾರಕ್ಕೆ ಬಲವಾದ ಕಾರಣಗಳಿದ್ದುವು.
   1830ರಲ್ಲಿ ಅಲ್ಜೀರಿಯವನ್ನು ಅತಿಕ್ರಮಿಸಿ ವಶಪಡಿಸಿಕೊಂಡ ಫ್ರಾನ್ಸ್, ತನ್ನ ಸೇನಾ ಬಲದ ಮೂಲಕ ಸ್ಥಳೀಯತೆಯ ಮೇಲೆ ದಾಳಿ ನಡೆಸುತ್ತಲೇ ಬಂದಿತು. ಮಾರ್ಶಲ್ ಬುಗೀಡ್‍ರ ನೇತೃತ್ವದಲ್ಲಿ ಹತ್ಯಾಕಾಂಡ, ಅತ್ಯಾಚಾರಗಳೂ ನಡೆದುವು. 1834ರಲ್ಲಿ ಅಲ್ಜೀರಿಯಾವನ್ನು ಫ್ರಾನ್ಸ್ ನ ಮಿಲಿಟರಿ ಕಾಲನಿಯಾಗಿ ಘೋಷಿಸಲಾಯಿತು. 1840ರಲ್ಲಿ ಅಲೆಜೈರ್, ಓರನ್ ಮತ್ತು ಕಾನ್‍ಸ್ಟಾಂಟಿಕ್ ಎಂಬ ಹೆಸರಲ್ಲಿ ಅಲ್ಜೀರಿಯಾವನ್ನು 3 ಭಾಗಗಳಾಗಿ ವಿಭಜಿಸಲಾಯಿತು. ಹಾಗೆಯೇ ಕಾಲನಿಯಾಗಿದ್ದ ಅಲ್ಜೀರಿಯಾವನ್ನು ಫ್ರಾನ್ಸ್ ನ ಭಾಗವೆಂದೂ ಸಾರಲಾಯಿತು. ಹೀಗೆ ಫ್ರಾನ್ಸ್ ನ ಭಾಗವಾದ ಅಲ್ಜೀರಿಯಾದಲ್ಲಿ ಸ್ಪೈನ್, ಇಟಾಲಿಯನ್ ಮುಂತಾದ ಯುರೋಪಿಯನ್ ರಾಷ್ಟ್ರಗಳ ಮಂದಿ ಬಂದು ನೆಲೆಸಿದರು. ಧಾರಾಳ ಸಂಖ್ಯೆಯಲ್ಲಿ ಫ್ರೆಂಚರೂ ಈ ಹೊಸ ನಾಡಲ್ಲಿ ಬೀಡು ಕಟ್ಟತೊಡಗಿದರು. ಹೀಗಿದ್ದೂ ಪ್ರಥಮ ಜಾಗತಿಕ ಯುದ್ಧದ ವೇಳೆ ಅಲ್ಜೀರಿಯನ್ನರು ಫ್ರಾನ್ಸ್ ನ ಜೊತೆಗೂಡಿ ಹೋರಾಡಿದರು. ಒಂದು ರೀತಿಯಲ್ಲಿ, ಅಲ್ಜೀರಿಯಾದ ಮೇಲೆ ತನ್ನ ದೇಶ ನಡೆಸುತ್ತಿರುವ ದಾಳಿ ಮತ್ತು ಆ ಮಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡುತ್ತಾ ಬೆಳೆದವರೇ ಸರ್ತೆ. 1940ರಲ್ಲಿ ಜರ್ಮನಿಯ ಹಿಟ್ಲರ್‍ನ ಸೇನೆಯು ಫ್ರಾನ್ಸ್ ನ ಮೇಲೆ ದಾಳಿ ಮಾಡಿದಾಗ ಅವರಿಗೆ ಅತಿಕ್ರಮಣದ ನೇರ ಪರಿಚಯವಾಗಿತ್ತು. ಅವರನ್ನು ಜರ್ಮನ್ ಸೇನೆ ಬಂಧಿಸಿತು. 9 ತಿಂಗಳ ಕಾಲ ಜೈಲಲ್ಲಿದ್ದ ಅವರು 1941ರಲ್ಲಿ ಬಿಡುಗಡೆಗೊಳ್ಳುವಾಗ ಅವರೊಳಗೆ ಸಾಕಷ್ಟು ಬದಲಾವಣೆಗಳಾಗಿದ್ದುವು. ಆ ಬಳಿಕ ಅವರು ಓರ್ವ ಫ್ರಾನ್ಸಿನ ಪ್ರಜೆಯಾಗಿಯಷ್ಟೇ ಆಲೋಚಿಸಲಿಲ್ಲ. ಅಲ್ಜೀರಿಯನ್ನರೂ ಅವರದಾದರು. ಜಗತ್ತಿನ ಸಕಲ ಅತಿಕ್ರಮಣವನ್ನೂ ಅವರು ದ್ವೇಷಿಸಿದರು. ಆದ್ದರಿಂದಲೇ, 1972ರಲ್ಲಿ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ 11 ಮಂದಿ ಇಸ್ರೇಲಿ ಅಥ್ಲೀಟ್‍ಗಳನ್ನು ಫೆಲೆಸ್ತೀನಿನ ಮಂದಿ ಕೊಂದು ಹಾಕಿದುದನ್ನು ಅವರು ಬೆಂಬಲಿಸಿದ್ದು. ಜಾಗತಿಕವಾಗಿಯೇ ಆ ಘಟನೆಯ ವಿರುದ್ಧ ಖಂಡನೆಗಳು ವ್ಯಕ್ತವಾಗುತ್ತಿದ್ದಾಗ ಅವರು ಆ ಹತ್ಯೆಯ ಪರ ನಿಂತದ್ದು. ಅತಿಕ್ರಮಣ ಮತ್ತು ದೌರ್ಜನ್ಯಕ್ಕೀಡಾದ ಒಂದು ಸಂತ್ರಸ್ತ ಸಮೂಹಕ್ಕೆ ಪ್ರತಿರೋಧದ ಹಕ್ಕಿದೆ ಎಂದವರು ಆ ಸಂದರ್ಭದಲ್ಲಿ ವಾದಿಸಿದರು.
   “ಭಯೋತ್ಪಾದನೆಯು ಭಯಾನಕವೇ ಆಗಿರಬಹುದು. ಆದರೆ ಫೆಲೆಸ್ತೀನಿಯರಿಗೆ ಬೇರೆ ದಾರಿಯಿರಲಿಲ್ಲ. ಆಯುಧ ಮತ್ತು ಬೆಂಬಲದ ಕೊರತೆಯನ್ನು ಎದುರಿಸುತ್ತಿರುವ ಅವರು ತಮ್ಮ ಅತಿಕ್ರಮಣ ವಿರೋಧಿ ನಿಲುವನ್ನು ನಾವೆಣಿಸಿದ ರೀತಿಯಲ್ಲೇ ತೋರಬೇಕೆಂದು ಬಯಸುವುದೇ ತಪ್ಪು. ಅಲ್ಲದೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಇಸ್ರೇಲಿನ ಆ ಅಥ್ಲೀಟ್‍ಗಳು ಸೈನಿಕರಾಗಿದ್ದರೆಂಬುದನ್ನೂ ನಾವು ಪರಿಗಣಿಸಬೇಕು..” ಎಂದು ಸಮರ್ಥಿಸಿಕೊಂಡರು. ಅಂದಿನ ಸಾಹಿತಿಗಳಾದ ಆ್ಯಂಡರ್ಸನ್ ಮತ್ತು ವಾಲ್‍ಝೇರ್‍ರು ಇದನ್ನು ಹಿಪಾಕ್ರಸಿ ಎಂದು ಖಂಡಿಸಿದ್ದರು. ಫ್ರಾನ್ಸಿನಲ್ಲಿ ಅವರ ನಿಲುವಿನ ವಿರುದ್ಧ ತೀವ್ರ ಖಂಡನೆ ವ್ಯಕ್ತವಾದರೂ ಅವರು ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳಲಿಲ್ಲ. ಅವರಿಗೆ ಕಮ್ಯುನಿಸಂನ ಮೇಲೆ ಪ್ರೀತಿ ಇತ್ತಾದರೂ ಫ್ರಾನ್ಸಿನಲ್ಲಿರುವ ಕಮ್ಯುನಿಸ್ಟ್ ಪಾರ್ಟಿಯನ್ನು ಸೇರಿಕೊಳ್ಳಲಿಲ್ಲ. ಹಾಗೆಯೇ ಸೋವಿಯತ್ ಯೂನಿಯನ್‍ನಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ವ್ಯವಸ್ಥೆಯನ್ನು ತೀವ್ರವಾಗಿ ವಿಮರ್ಶೆಗೊಡ್ಡಿದರು. ಅದು ಹಂಗೇರಿಯ ಮೇಲೆ ನಡೆಸಿದ ದಾಳಿಯನ್ನು ಓರ್ವ ಕಮ್ಯುನಿಸ್ಟ್ ಪ್ರೇಮಿಯಾಗಿದ್ದುಕೊಂಡೇ ಖಂಡಿಸಿದರು. ಅಮೇರಿಕವು ವಿಯೆಟ್ನಾಂನ ಮೇಲೆ ದಾಳಿ ಮಾಡಿದುದನ್ನು ಖಂಡಿಸುತ್ತಲೇ ರಶ್ಯದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದರು. ನಿಜವಾಗಿ, ಅವರು ಈ ಜಗತ್ತಿನ ಸಕಲ ಕ್ರೌರ್ಯಗಳಿಗೂ ವಿರೋಧ ಪಕ್ಷ ವಾಗಿದ್ದರು. ಸಂತ್ರಸ್ತರ ಕುರಿತಂತೆ ಅವರಲ್ಲಿ ಅಪಾರ ಕಕ್ಕುಲಾತಿಯಿತ್ತು. ಇಲ್ಲದಿದ್ದರೆ, ಅಲ್ಜೀರಿಯಾದ ಸ್ವಾತಂತ್ರ್ಯಕ್ಕಾಗಿ ಗೆರಿಲ್ಲಾ ದಾಳಿ ನಡೆಸುತ್ತಿದ್ದ ನ್ಯಾಶನಲ್ ಲಿಬರೇಶನ್ ಫ್ರಂಟ್ (FLN) ಅನ್ನು ಅವರು ಬೆಂಬಲಿಸುತ್ತಿರಲಿಲ್ಲ.
   1954ರಲ್ಲಿ ಅಲ್ಜೀರಿಯಾದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ಅದಕ್ಕಾಗಿಯೇ FLN ಸಂಘಟನೆಯನ್ನು ಹುಟ್ಟು ಹಾಕಲಾಯಿತು. 1956ರಲ್ಲಿ 4 ಲಕ್ಷ  ಫ್ರೆಂಚ್ ಯೋಧರು ಅಲ್ಜೀರಿಯಾದಲ್ಲಿದ್ದರು. FLNನ್ನು ನಿರ್ಮೂಲನಗೊಳಿಸುವುದಕ್ಕಾಗಿ ಫ್ರೆಂಚ್ ಸರಕಾರವು ಭೂಸೇನೆ ಮತ್ತು ವಾಯುಸೇನೆಯನ್ನು ಬಳಸಿತು. ಮಾರಕ ನೆಪಾಮ್ ಎಂಬ ರಾಸಾಯನಿಕವನ್ನು ಪ್ರಯೋಗಿಸಿತು. ಆದರೆ ಗೆರಿಲ್ಲಾ ಹೋರಾಟವನ್ನು ಸದೆಬಡಿಯಲು ಅದಕ್ಕೆ ಸಾಧ್ಯವಾಗಲಿಲ್ಲ. ಹೀಗೆ 1961ರಲ್ಲಿ ಅಧ್ಯಕ್ಷ  ಚಾರ್ಲ್ಸ್  ಡಿ ಗಲ್ಲೆಯವರು ಅಲ್ಜೀರಿಯಾಕ್ಕೆ ಸ್ವಾತಂತ್ರ್ಯ ನೀಡಲು ತೀರ್ಮಾನಿಸಿದರು. ಆದರೆ ಇದಕ್ಕೆ ಸೇನೆಯಿಂದ ತೀವ್ರ ಪ್ರತಿರೋಧ ಎದುರಾಯಿತು. ಅಧ್ಯಕ್ಷ  ಡಿ ಗಲ್ಲೆಯವರನ್ನು ಹತ್ಯೆ ಮಾಡುವ ಯತ್ನವೂ ನಡೆಯಿತು. ಅಲ್ಜೀರಿಯನ್ ಸ್ವಾತಂತ್ರ್ಯವನ್ನು ವಿರೋಧಿಸುವ ಯೋಧರು ಒಟ್ಟು ಸೇರಿ OAS  ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅದು ಅಲ್ಜೀರಿಯಾದಲ್ಲಿ ಬಾಂಬು, ಹತ್ಯೆಗಳಲ್ಲಿ ತೊಡಗಿಸಿಕೊಂಡಿತು. ಅಲ್ಜೀರಿಯಾದ ಪರ ಇರುವ  ಫ್ರೆಂಚ್ ಪ್ರಜೆಗಳನ್ನೂ ದಾಳಿಗೆ ಗುರಿಪಡಿಸಲಾಯಿತು. ಸರ್ತೆಯವರು ಎರಡು ಬಾರಿ ಹತ್ಯಾ ಯತ್ನಗಳಿಂದ ಪಾರಾದರು. ಕೊನೆಗೆ 1962ರಲ್ಲಿ ಅಲ್ಜೀರಿಯಾವು ಸ್ವತಂತ್ರಗೊಂಡಿತು. ಆ ಸಂದರ್ಭವನ್ನು ಅತ್ಯಂತ ಖುಷಿಯಿಂದ ಕಣ್ತುಂಬಿಕೊಂಡವರಲ್ಲಿ ಸರ್ತೆ ಕೂಡ ಒಬ್ಬರು. ಅಷ್ಟಕ್ಕೂ,
   ಸ್ವೀಡನ್ನಿನ ಪ್ರಮುಖ 15 ಮಂದಿ ಸಾಹಿತಿಗಳು ಒಟ್ಟು ಸೇರಿ ಆಯ್ಕೆ ಮಾಡುವ ನೋಬೆಲ್ ಪ್ರಶಸ್ತಿಯ ಬಗ್ಗೆ ಈ ಹಿಂದಿನಿಂದಲೂ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಒಂದು ಸಾಹಿತ್ಯವನ್ನು ಆಯ್ಕೆ ಮಾಡುವುದಕ್ಕೆ ಇರುವ ಮಾನದಂಡಗಳು, ಅಲ್ಲಿ ನಡೆಯುವ ಚರ್ಚೆಗಳ ಸ್ವರೂಪ, ಕೊಡುವ ಆದ್ಯತೆ.. ಯಾವುದನ್ನೂ ಸ್ವೀಡನ್ ಹೊರ ಜಗತ್ತಿಗೆ ಯಾವತ್ತೂ ಬಿಟ್ಟು ಕೊಡುವುದಿಲ್ಲ. ಪ್ರಶಸ್ತಿ ಸಮಿತಿಯ ಮೇಲೆ ಒತ್ತಡಗಳಿರುತ್ತವೆಯೇ ಎಂಬುದರಿಂದ ಹಿಡಿದು ಜಗತ್ತಿನ ಎಲ್ಲ ಭಾಷೆಗಳ ಎಲ್ಲ ಕೃತಿಗಳಿಗೂ ಸಮಾನ ಪ್ರಾಶಸ್ತ್ಯ ಲಭ್ಯವಾಗುತ್ತಿವೆಯೇ ಎಂಬಲ್ಲಿವರೆಗೆ ಎಲ್ಲವೂ ರಹಸ್ಯವಾಗಿಯೇ ಇರುತ್ತವೆ. ಈವರೆಗೆ ಒಟ್ಟು 111 ನೋಬೆಲ್ ಪ್ರಶಸ್ತಿ ಗಳನ್ನು ವಿತರಿಸಲಾಗಿದೆ. ಅದರಲ್ಲಿ ಅನೇಕ ಪ್ರಶಸ್ತಿಗಳು ಈಗಲೂ ವಿವಾದಾಸ್ಪದವಾಗಿಯೇ ಉಳಿದಿವೆ. 2004ರಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ವಿಲ್ಫ್ರೆಡ್ ಎಲಿನೋಕ್, 1997ರಲ್ಲಿ ಗೆದ್ದ ಇಟಲಿಯ ಕವಿ ದಾರಿಯ ಫೋ, 1989ರಲ್ಲಿ ಪ್ರಶಸ್ತಿ ಗೆದ್ದ ಸ್ಪಾನಿಶ್ ಸಾಹಿತಿ ಕ್ಯಾಮಿನೊ ಜೋಸ್ ಸೆಲ್ಲಾ.. ಇವರೆಲ್ಲರ ಹಿಂದೆ ಈಗಲೂ ಅಚ್ಚರಿ ಇದೆ. 6 ವರ್ಷಗಳ ಹಿಂದೆ ಜೀನ್ ಮಾರಿಯಾ ಗುಸ್ತಾವೊ ಲಿ ಕ್ಲೇಸಿಯೋ ಎಂಬ ಅಷ್ಟೇನೂ ಪರಿಚಿತವಲ್ಲದ ಫ್ರಾನ್ಸಿನ ಸಾಹಿತಿಗೆ ಈ ಪ್ರಶಸ್ತಿ ಸಿಕ್ಕಾಗ ಹಲವರು ತಗಾದೆ ಎತ್ತಿ ದ್ದರು. ನಿಜವಾಗಿ, ‘ಗೀತಾಂಜಲಿ'ಯು ಇಂಗ್ಲಿಷ್‍ಗೆ ಅನುವಾದಗೊಳ್ಳದೇ ಇರುತ್ತಿದ್ದರೆ ಮತ್ತು ವಿಶ್ವಕವಿ ಡಬ್ಲ್ಯು.ಬಿ. ಯೇಟ್ಸ್ ರು ಮಧ್ಯಪ್ರವೇಶಿಸದೇ ಇರುತ್ತಿದ್ದರೆ ನಮ್ಮ ರವೀಂದ್ರನಾಥ ಠಾಗೋರರಿಗೆ ನೋಬೆಲ್ ಸಿಗುವುದೇ ಅನುಮಾನವಾಗಿತ್ತು. ಅಂದಹಾಗೆ, ಇಂಗ್ಲಿಷ್, ಸ್ಪಾನಿಶ್, ಫ್ರೆಂಚ್, ಜರ್ಮನ್, ಇಟಾಲಿಯನ್, ಪೋರ್ಚುಗೀಸ್, ರಶ್ಯನ್ ಭಾಷೆಗಳ ಸಾಹಿತ್ಯಗಳಿಗೆ ಸಿಗುವ ಆದ್ಯತೆಯು ಏಶ್ಯನ್ ಮತ್ತು ಆಫ್ರಿಕನ್ ಸಾಹಿತ್ಯಗಳಿಗೆ ಇವತ್ತು ಖಂಡಿತ ಸಿಗುತ್ತಿಲ್ಲ. ಪ್ರಶಸ್ತಿ ಸಮಿತಿಯ ಮೇಲೆ ಸಾಹಿತ್ಯಗಳು ಮಾತ್ರವಲ್ಲ, ಸಾಹಿತಿಯ ದೇಶ, ಭಾಷೆ, ಸಾಹಿತ್ಯದ ವಸ್ತು, ರಾಜಕೀಯ ಮುಂತಾದುವುಗಳೆಲ್ಲ ಪ್ರಭಾವ ಬೀರುತ್ತಿರುವುದಕ್ಕೆ ಅವಕಾಶವಿದ್ದೇ ಇದೆ. ಒಬಾಮರಿಗೆ ಸಿಕ್ಕ ನೋಬೆಲ್ ಶಾಂತಿ ಪ್ರಶಸ್ತಿಯು ಈ ಅನುಮಾನವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಒಂದು ವೇಳೆ 1954-62ರ ಮಧ್ಯೆ ಸರ್ತೆಗೆ ನೋಬೆಲ್ ಸಾಹಿತ್ಯ ಪ್ರಶಸ್ತಿ ಸಿಕ್ಕಿರುತ್ತಿದ್ದರೆ ಅದರ ಪರಿಣಾಮ ಏನಾಗಿರುತ್ತಿತ್ತು? ಫ್ರಾನ್ಸ್-ಅಲ್ಜೀರಿಯಾದಲ್ಲಿ ಮತ್ತು ಜಾಗತಿಕವಾಗಿ ಅದು ಮಾಡಬಹುದಾಗಿದ್ದ ಸದ್ದು ಯಾವ ಬಗೆಯದ್ದಾಗಿರುತ್ತಿತ್ತು? ಸರ್ತೆ ಅವರು ಅತಿಕ್ರಮಣ ವಿರೋಧಿ ಐಕಾನ್ ಆಗಿ ಬಿಂಬಿತಗೊಳ್ಳುತ್ತಿರಲಿಲ್ಲವೇ? ಪ್ರಶಸ್ತಿಯು ಅವರ ಯುದ್ಧ ವಿರೋಧಿ ನಿಲುವಿಗೆ ಸಿಕ್ಕ ಪುರಸ್ಕಾರ’ ಎಂಬ ರೀತಿಯಲ್ಲಿ ಚರ್ಚೆ, ವಿಮರ್ಶೆಗಳು ನಡೆಯುತ್ತಿತ್ತಲ್ಲವೇ? ಹಾಗಾಗಿರುತ್ತಿದ್ದರೆ ಇತರ ಅತಿಕ್ರಮಣಕೋರ ರಾಷ್ಟ್ರಗಳ ಮೇಲೂ ಅದು ಪರಿಣಾಮ ಬೀರುತ್ತಿತ್ತೇನೋ. ಮಾತ್ರವಲ್ಲ, ಅಲ್ಜೀರಿಯಾ

ಸ್ವತಂತ್ರಗೊಳ್ಳುವುದಕ್ಕೆ 1962ರ ವರೆಗೆ ಕಾಯಬೇಕಾಗಿಯೂ ಇರುತ್ತಿರಲಿಲ್ಲವೇನೋ. ಸರ್ತೆ ಅವರ ನೋಬೆಲ್ ತಿರಸ್ಕಾರಕ್ಕೆ ಮಹತ್ವ ಬರುವುದು ಈ ಎಲ್ಲ ಕಾರಣಗಳಿಂದಲೇ. ಮಾತ್ರವಲ್ಲ, ಗಿರೀಶ್ ಕಾರ್ನಾಡ್, ಸಿದ್ಧಲಿಂಗಯ್ಯ ಅವರ ಸುತ್ತ ನಡೆದ ಮತ್ತು ಸದ್ಯ ನಡೆಯುತ್ತಿರುವ ಚರ್ಚೆಗಳ ಇತಿ ಮತ್ತು ಮಿತಿಗಳೂ ಇವೇ. ಇವತ್ತು ಕೂಡ ಸರ್ತೆ ಅವರ ನಿಲುವನ್ನು ಪ್ರಶ್ನಿಸುವವರೂ ಮತ್ತು ಬೆಂಬಲಿಸುವವರೂ ಇಬ್ಬರೂ ಇದ್ದಾರೆ. ಅವರು ತಮ್ಮ ನಿಲುವನ್ನು ಪ್ರತಿಪಾದಿಸುವುದಕ್ಕೆ ನೋಬೆಲ್ ಸಾಹಿತ್ಯ ಪ್ರಶಸ್ತಿಯ ವೇದಿಕೆಯನ್ನು ಬಳಸಿಕೊಳ್ಳಬೇಕಿತ್ತು ಎಂದು ವಾದಿಸುವವರು ಇರುವಂತೆಯೇ ಅವರು ಆ ವೇದಿಕೆಯನ್ನು ತಿರಸ್ಕರಿಸುವ ಮೂಲಕ ಅದನ್ನು ಪ್ರತಿಪಾದಿಸಲು ಯಶಸ್ವಿಯಾಗಿದ್ದಾರೆ ಎಂದು ವಾದಿಸುವವರೂ ಇದ್ದಾರೆ. ಹೀಗಿರುವಾಗ, ಇದರಲ್ಲಿ ಒಂದು ಮಾತ್ರ ಸರಿ ಎಂದು ಪಟ್ಟು ಹಿಡಿದು ವಾದಿಸಬೇಕಿಲ್ಲ. ಎರಡರಲ್ಲೂ ಸರಿ ಇರಬಹುದು ಮತ್ತು ಯಾವುದು ಹೆಚ್ಚು ಸರಿ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಬಹುದು. ಸರ್ತೆ ಅವರ ನೋಬೆಲ್ ತಿರಸ್ಕಾರಕ್ಕೆ 50 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಎರಡರಲ್ಲೂ ಸರಿಯನ್ನೇ ಹುಡುಕುತ್ತಾ ಸಂವಾದದ ವೇದಿಕೆಯನ್ನು ನಿರ್ಮಲವಾಗಿಡುವುದೇ ಉತ್ತಮವೆನಿಸುತ್ತದೆ.




Tuesday, October 21, 2014

ಗಾಳಿಯಾಡದ ಪಂಜರದೊಳಗೆ ಧರ್ಮಗಳನ್ನು ಬಚ್ಚಿಟ್ಟಿರುವುದೇಕೆ?

ಮೀರತ್ ಪ್ರೇಮ ಪ್ರಕರಣದ ಯುವತಿ
   “ಲವ್ ಜಿಹಾದ್ ಎಂಬುದು ಮುಸ್ಲಿಮ್ ಕಾನ್ಸ್ ಪರಸಿಯ (ಸಂಚು) ಉತ್ಪನ್ನ ಎಂದು ದೂಷಿಸಲಾಗುತ್ತದೆ. ಇದು ನಿಜವೇ? ಮುಸ್ಲಿಮ್ ಸಮಾಜದಲ್ಲಿ ಅಂಥದ್ದೊಂದು ವಾತಾವರಣ ಇದೆಯೇ? ಯಾವ ಹೆತ್ತವರೂ ತಮ್ಮ ಧರ್ಮ ಅಥವಾ ಜಾತಿಗಿಂತ ಹೊರಗಿನ ಕುಟುಂಬಗಳೊಂದಿಗೆ ಮದುವೆ ಸಂಬಂಧವನ್ನು ಕುದುರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಮದುವೆ ಮತ್ತಿತರ ವಿಷಯಗಳಲ್ಲಿ ಈ ದೇಶದ ಹಿಂದೂ-ಮುಸ್ಲಿಮ್-ಕ್ರೈಸ್ತ ಎಲ್ಲರೂ ಅಪ್ಪಟ ಸಂಪ್ರದಾಯವಾದಿಗಳಾಗುತ್ತಾರೆ. ಹುಡುಗಿಗಾಗಲಿ, ಹುಡುಗನಿಗಾಗಲಿ ತಮ್ಮದೇ ಜಾತಿ, ಭಾಷೆಯ ಸಂಬಂಧಕ್ಕಾಗಿ ಎಷ್ಟು ಸಮಯ ಬೇಕಾದರೂ ಕಾಯುವ ಸ್ಥಿತಿಯೊಂದು ಈ ದೇಶದಲ್ಲಿ ಇವತ್ತೂ ಇದೆ. ಹೀಗಿರುವಾಗ ‘ಸಂಚು’ ಎಂಬ ಪದ ಬಳಕೆ ಎಷ್ಟು ಸರಿ? ತಮ್ಮ ಧರ್ಮವನ್ನು ಬಿಟ್ಟು ಹೊರಗಿನವರನ್ನು ಮದುವೆಯಾದ ಗಂಡು-ಹೆಣ್ಣನ್ನು ಬಹಿಷ್ಕರಿಸುವ ರೂಢಿ ಈ ದೇಶದಲ್ಲಿ ಈಗಲೂ ಅಸ್ತಿತ್ವದಲ್ಲಿದೆ. ಇದಕ್ಕೆ ಹಿಂದೂ-ಮುಸ್ಲಿಮ್ ಎಂಬ ಭೇದವೂ ಇಲ್ಲ. ಆದ್ದರಿಂದಲೇ ಇಂಥ ಪ್ರೇಮಿಗಳು ಇವತ್ತು ನ್ಯಾಯಾಲಯದ್ದೋ ಪೊಲೀಸರದ್ದೋ ನೆರವು ಪಡೆದು ಮದುವೆಯಾಗುತ್ತಿದ್ದಾರೆ. ಒಂದು ವೇಳೆ, ಇದು ಮುಸ್ಲಿಮರ ಸಂಚೇ ಆಗಿರುತ್ತಿದ್ದರೆ ಇಂಥ ಮದುವೆಗಳಲ್ಲಿ ಮುಸ್ಲಿಮರ ಪಾಲುಗೊಳ್ಳುವಿಕೆ ಹೇಗಿರಬೇಕಿತ್ತು? ಮುಸ್ಲಿಮ್ ಸಮುದಾಯವೇ ಇಂಥ ಮದುವೆಗಳಲ್ಲಿ ಭಾಗವಹಿಸಿ ಬೆಂಬಲಿಸ ಬೇಕಿತ್ತಲ್ಲವೇ? ನಿಜ ಏನೆಂದರೆ, ಧರ್ಮವನ್ನೂ ಕುಟುಂಬವನ್ನೂ ಮತ್ತು ಅದರ ತಲ್ಲಣಗಳನ್ನೂ ಲೆಕ್ಕಿಸದ ಓರ್ವ ಯುವಕ ಮತ್ತು ಯುವತಿಯ ಲವ್ ಸ್ಟೋರಿ ಇದು. ಅವರು ನೆರವಿಗಾಗಿ ಕೋರ್ಟು ಮೆಟ್ಟಲೇರುತ್ತಿರುವುದರ ಹಿನ್ನೆಲೆಯೂ ಇದುವೇ. ತನಿಖೆಗಳು ಮತ್ತೆ ಮತ್ತೆ ಇದನ್ನೇ ಸಮರ್ಥಿಸುತ್ತಲೂ ಇವೆ. ಹಾಗಂತ, ತನಿಖೆ ನಡೆಸುವ ಪೊಲೀಸರೆಲ್ಲ ಮುಸ್ಲಿಮರೇನೂ ಅಲ್ಲವಲ್ಲ. ಧರ್ಮದ ವಿಷಯದಲ್ಲಿ ಪೊಲೀಸರ ಸಹಿತ ಎಲ್ಲರೂ ಕಟು ಸಂಪ್ರದಾಯವಾದಿಗಳಾಗುವ ಈ ದೇಶದಲ್ಲಿ ‘ಲವ್ ಜಿಹಾದ್'ನ ವಿಷಯದಲ್ಲಿ ಅವರೆಲ್ಲ ಸುಳ್ಳು ಹೇಳಲು ಸಾಧ್ಯವೇ..?" ಎಂದು ಓರ್ವ ಓದುಗ ಪ್ರತಿಕ್ರಿಯಿಸುವಾಗ,
   "ಹಿಂದೂಗಳು ಅಂತರ್ ಧರ್ಮೀಯ ವಿವಾಹದ ವಿರೋಧಿಗಳಲ್ಲ. ಬೌದ್ಧ, ಕ್ರೈಸ್ತ, ಯಹೂದಿ ಯುವಕರನ್ನು ಹಿಂದೂ ಯುವತಿಯರು ವಿವಾಹವಾಗುವುದನ್ನು ಅವರು ವಿರೋಧಿಸುತ್ತಲೂ ಇಲ್ಲ. ಆದರೆ ಮುಸ್ಲಿಮ್ ಯುವಕರನ್ನು ವಿವಾಹವಾಗುವುದನ್ನು ಅವರು ವಿರೋಧಿಸುತ್ತಾರೆ. ಯಾಕೆಂದರೆ, ಹಿಂದೂಗಳು ಹೆಣ್ಣು ಮಕ್ಕಳನ್ನು ಪ್ರೀತಿಸುತ್ತಾರೆ. ಬೌದ್ಧ, ಕ್ರೈಸ್ತ, ಯಹೂದಿ ಧರ್ಮಗಳು ಮಹಿಳೆಯರನ್ನು ಗೌರವಿಸುವಾಗ ಇಸ್ಲಾಮ್ ಅವರನ್ನು ತಲಾಕ್, ತಲಾಕ್, ತಲಾಕ್ ಎಂದು ಅಟ್ಟುತ್ತದೆ. ಅದರ ವಿರುದ್ಧ ಮಹಿಳೆಯರು ಏನು ಮಾಡುವಂತೆಯೂ ಇಲ್ಲ. ಮುಸ್ಲಿಮರು ಮತಾಂತರ ಮಾಡುತ್ತಾರೆ. ಕುರ್‍ಆನಿನ ದೃಷ್ಟಿಯಲ್ಲಿ ಮುಸ್ಲಿಮ್ ಮಹಿಳೆ ಸೆಕ್ಸ್ ಸ್ಲೇವ್ (ಲೈಂಗಿಕ ಗುಲಾಮಳು) ಆಗಿದ್ದಾಳೆ. ಮಾತ್ರವಲ್ಲ, ಇನ್ನೊಂದು ಧರ್ಮದಿಂದ ಮತಾಂತರ ಆದವಳ ಸ್ಥಿತಿಯಂತೂ ಇದಕ್ಕಿಂತಲೂ ಹೀನಾಯವಾದುದಾಗಿದೆ.." ಎಂದು ಇನ್ನೋರ್ವ ಉತ್ತರಿಸುತ್ತಾನೆ. ಅಕ್ಟೋಬರ್ 15ರಂದು ಇಂಡಿಯಾ ಟುಡೆ ಪತ್ರಿಕೆಯ ಆನ್‍ಲೈನ್ ವಿಭಾಗದಲ್ಲಿ ಪ್ರಕಟವಾದ, 'ಲವ್ ಜಿಹಾದ್‍ನ ನೆಪ: ಮಧ್ಯಪ್ರದೇಶದಲ್ಲಿ ಹಿಂದೂ-ಮುಸ್ಲಿಮ್ ಮದುವೆಯನ್ನು ತಡೆದ ಬಲಪಂಥೀಯ ಗುಂಪು' (Citing Love Jihad, right -wing group stops Hindu -Muslim court marriage in MP) ಎಂಬ ಶೀರ್ಷಿಕೆಯ ಲೇಖನಕ್ಕೆ ಸಂಬಂಧಿಸಿ ವ್ಯಕ್ತವಾದ ಅಭಿಪ್ರಾಯಗಳಲ್ಲಿ ಮೇಲಿನಂಥ ತುತು ಮೆಮೆ ಅನ್ನುವ ಧಾಟಿಯವು ಧಾರಾಳ ಇವೆ. ಇಸ್ಲಾಮಿನಲ್ಲಿ ಮಹಿಳೆಯ ಸ್ಥಾನಮಾನ, ತಲಾಕ್‍ನ ನಿಜವಾದ ರೂಪ, ಮದುವೆ ಮತ್ತು ಮತಾಂತರದ ವಿಧಿ-ವಿಧಾನಗಳನ್ನು ಕರ್ಮಟವಾಗಿ ಚರ್ಚಿಸಿದ ಬರಹಗಳು ಇರುವಂತೆಯೇ ಸತಿ ಹೋಗುವುದು, ಶ್ರೇಣೀಕೃತ ಜಾತಿಪದ್ಧತಿ, ವಿಧವೆಯರನ್ನು ಅಮಂಗಲೆಯರೆಂದು ದೂರ ಇಡುವುದು.. ಸೇರಿದಂತೆ ಹಿಂದೂ ಧರ್ಮದ ವಿವಿಧ ಆಚರಣೆಗಳ ವಿಮರ್ಶೆಗಳೂ ನಡೆದಿವೆ. ಲವ್ ಜಿಹಾದನ್ನು ಓರ್ವ ಅಲ್ಲಗಳೆಯುವಾಗ ಇನ್ನೋರ್ವ ಅದನ್ನು ಭಯೋತ್ಪಾದನೆಯ ಭಾಗವಾಗಿ ಕಾಣುತ್ತಾನೆ. ಅಷ್ಟಕ್ಕೂ,
   ಲವ್‍ಜಿಹಾದ್ (ಈ ಪದ ಪ್ರಯೋಗವೇ ತಪ್ಪು) ಎಂದು ರಾಡಿಯೆಬ್ಬಿಸಲಾದ ಯಾವ ಪ್ರಕರಣವೂ ಅನಕ್ಷರಸ್ಥರಿಗೆ ಸಂಬಂಧಿಸಿದ್ದಲ್ಲ. ಓದು-ಬರಹ ಬಾರದ, ಮುಸ್ಲಿಮ್ ಯುವಕರ 'ಸಂಚು’ಗಳನ್ನು ತಿಳಿಯದ ಮುಗ್ಧ ಹೆಣ್ಣು ಮಕ್ಕಳ ಹೆಸರೇನೂ ಲವ್ ಜಿಹಾದ್‍ನಲ್ಲಿ ಒಳಗೊಂಡವರ ಪಟ್ಟಿಯಲ್ಲಿಲ್ಲ. ಹೆಚ್ಚಿನೆಲ್ಲ ಹೆಣ್ಣು ಮಕ್ಕಳೂ ಓದಿದವರೇ. ತಮ್ಮ ಸುತ್ತಮುತ್ತ ಮತ್ತು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವ ಸಾಮರ್ಥ್ಯ  ಇದ್ದವರೇ. ಇಷ್ಟಿದ್ದೂ, ಮುಸ್ಲಿಮ್ ಯುವಕ ಮತ್ತು ಹಿಂದೂ ಯುವತಿಯರ ಮಧ್ಯೆ ಪ್ರೇಮಾಂಕುರವಾಗುತ್ತದೆಂದರೆ ಮತ್ತು ಅವರು ಪರಸ್ಪರ ಮದುವೆಯಾಗಲು ತೀರ್ಮಾನಿಸುತ್ತಾರೆಂದರೆ, ಅದೇಕೆ ಅಪಾಯಕಾರಿಯಾಗಿ ಗುರುತಿಸಿಕೊಳ್ಳಬೇಕು? ಲವ್ ಜಿಹಾದ್‍ಗೆ ಬಲಿ ಅನ್ನುವ ಪದಪ್ರಯೋಗಗಳಿಗೇಕೆ ಅದು ಗುರಿಯಾಗಬೇಕು? ಓರ್ವ ಹೆಣ್ಣು ಮತ್ತು ಗಂಡು ಪರಸ್ಪರ ಪ್ರೀತಿಸುವ ಮೊದಲು ತಂತಮ್ಮ ಧರ್ಮದ ಪರವಾನಿಗೆ ಪಡೆದುಕೊಂಡು ಮುಂದುವರಿದ ಉದಾಹರಣೆ ಎಲ್ಲೂ ಇಲ್ಲ. ಪ್ರಾಯ ಸಹಜ ಆಕರ್ಷಣೆಯು ಹೆಣ್ಣು-ಗಂಡನ್ನು ಹತ್ತಿರ ತರುತ್ತದೆ. ಅವರು ಪರಸ್ಪರ ಮಾತಾಡುತ್ತಾರೆ. ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆ ಹಂಚಿಕೊಳ್ಳುವಾಗ ತಾನು ಹಿಂದೂ ಎಂದೋ ಮುಸ್ಲಿಮ್ ಎಂದೋ ಇಬ್ಬರಿಗೂ ಗೊತ್ತಾಗುತ್ತದೆ. ಹೆಸರನ್ನು ಅಥವಾ ಧರ್ಮವನ್ನು ಮರೆಮಾಚಿ ಪ್ರೀತಿಸಲು ಸಾಧ್ಯವಿಲ್ಲ. ಯಾಕೆಂದರೆ, ಪ್ರೀತಿಸುವುದು ಮತ್ತು ಮದುವೆಯಾಗುವುದು ದಿನ ಬೆಳಗಾಗುವುದರೊಳಗಾಗಿ ನಡೆಯುವ ಸಂಗತಿಗಳಲ್ಲ. ಅದೊಂದು ದೀರ್ಘ ಪ್ರಕ್ರಿಯೆ. ಓರ್ವ ವಿದ್ಯಾವಂತ ಹೆಣ್ಣು ಮಗಳು ತನ್ನ ಪ್ರಿಯಕರನ ಧರ್ಮವನ್ನು ಮತ್ತು ವಿಚಾರಗಳನ್ನು ತಿಳಿದುಕೊಳ್ಳಲಾರದಷ್ಟು ದುರ್ಬಲಳು ಎಂದು ಹೇಳುವುದು ಆಕೆಯ ವ್ಯಕ್ತಿತ್ವಕ್ಕೆ ಮಾಡುವ ಅವಮಾನವಾಗುತ್ತದೆ. ಹಾಗಂತ, ಇವೆಲ್ಲ ಲವ್ ಜಿಹಾದ್ ಎಂದು ಕೂಗೆಬ್ಬಿಸುವವರಿಗೆ ಗೊತ್ತಿಲ್ಲ ಎಂದಲ್ಲ. 2009 ಅಕ್ಟೋಬರ್‍ನಲ್ಲಿ ಕರ್ನಾಟಕದ ಬಿಜೆಪಿ ಸರಕಾರವು ಲವ್ ಜಿಹಾದ್‍ನ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಆದೇಶಿಸಿತ್ತು. ಲವ್ ಜಿಹಾದ್ ಸಂಘಟಿತವಾಗಿ ನಡೆಯುತ್ತಿದೆಯೇ ಎಂಬ ಅಂಶವನ್ನೂ ತನಿಖೆಯ ವೇಳೆ ಪರಿಗಣಿಸುವಂತೆ ನಿರ್ದೇಶಿಸಿತ್ತು. 2009ರ ಕೊನೆಯಲ್ಲಿ ಸಿಐಡಿ ನಿರ್ದೇಶಕ ಜಾಕೊಬ್ ಪೊನ್ನೂಸೆ ಅವರು ಲವ್ ಜಿಹಾದ್ ಕಲ್ಪನೆಯನ್ನೇ ತಿರಸ್ಕರಿಸಿ ವರದಿ ನೀಡಿದರು. ಅದಕ್ಕೆ ಯಾವ ಪುರಾವೆಯೂ ಇಲ್ಲ ಎಂದೂ ಹೇಳಿದರು. 2012 ಜನವರಿಯಲ್ಲಿ ಕೇರಳದ ಪೊಲೀಸರೂ ಲವ್ ಜಿಹಾದ್‍ನ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಿದರು. ಲವ್ ಜಿಹಾದ್ ಎಂಬುದು ರಾಜ್ಯದಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂದೂ ಹೇಳಿದರು. ಮಾತ್ರವಲ್ಲ, ಲವ್ ಜಿಹಾದ್‍ನ ಹೆಸರಲ್ಲಿ ಅಪಪ್ರಚಾರದಲ್ಲಿ ತೊಡಗಿರುವ ಹಿಂದೂ ಜಾಗೃತಿ ಡಾಟ್ ಆರ್ಗ್ ಮೇಲೆ ಕೇಸು ಹಾಕುವುದಾಗಿಯೂ ಘೋಷಿಸಿದರು. ಅಲ್ಲದೇ 2014 ಸೆಪ್ಟೆಂಬರ್‍ನಲ್ಲಿ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥ ಎ.ಎಲ್. ಬ್ಯಾನರ್ಜಿಯವರೂ ಲವ್ ಜಿಹಾದ್ ಅನ್ನು ತಿರಸ್ಕರಿಸಿದರು. ಹೆಚ್ಚಿನೆಲ್ಲ ಪ್ರೇಮ ವಿವಾಹಗಳೂ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ನಡೆದಿರುವುದಾಗಿ (ರಾಯಿಟರ್ಸ್ ವರದಿ) ಅವರು ಅಭಿಪ್ರಾಯಪಟ್ಟರು. ಇಷ್ಟಿದ್ದೂ, ಮತ್ತೆ ಮತ್ತೆ ಸುಳ್ಳುಗಳನ್ನೇಕೆ ಹಬ್ಬಿಸಲಾಗುತ್ತದೆ? ‘ಮುಸ್ಲಿಮೇತರ ಹೆಸರುಗಳನ್ನು ಬಳಸಿ ಹಿಂದೂ ಯುವತಿಯರನ್ನು ಮುಸ್ಲಿಮ್ ಯುವಕರು ಪ್ರೇಮದ ಬಲೆಗೆ ಬೀಳಿಸುತ್ತಾರೆ, ಆಕೆಯ ಕುಟುಂಬವನ್ನು ಒಪ್ಪಿಸಿಯೋ ಪ್ರೇಮದ ಅಮಲಿನಲ್ಲೋ ಮದುವೆಯಾಗುತ್ತಾರೆ, ಮದುವೆಗಿಂತ ಮೊದಲೇ ಅಥವಾ ನಂತರ ಮತಾಂತರ ಮಾಡುತ್ತಾರೆ, 5-6 ಮಕ್ಕಳನ್ನು ಹುಟ್ಟಿಸಿದ ಬಳಿಕ ತಲಾಕ್ ಹೇಳುತ್ತಾರೆ, ಬಳಿಕ ಅಸಹಾಯಕ ಸ್ಥಿತಿಯಲ್ಲಿ ಭಯೋತ್ಪಾದಕರಿಗೆ ಸಹಾಯಕಿಯಾಗಿ ಅವರು ಬದುಕುತ್ತಾರೆ..' ಎಂಬಂಥ ಅಪ್ಪಟ ಸುಳ್ಳುಗಳನ್ನು ವಿೂರತ್ ಘಟನೆಯ ಬಳಿಕ ಧರ್ಮ ಜಾಗರಣ್ ಮಂಚ್ ತನ್ನ ಮುದ್ರಿತ ನೋಟೀಸುಗಳಲ್ಲಿ ಹೇಳಿರುವುದೇಕೆ? ಯಾವ ತನಿಖೆಯಲ್ಲೂ ಸಾಬೀತಾಗದ ಸಂಗತಿಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸುವುದರ ಕಾನೂನು ವಿಧಿ ಏನು? ಅಲ್ಲದೇ,
   ಮುಸ್ಲಿಮ್ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ ಜಹಾನಾ ಬಾದ್‍ನ ಗೈನೇರಿದಾನ್ ಗ್ರಾಮದ ಜಾಟ್ ಯುವಕನ ಮನೆಗೆ 2014 ಮೇ 20ರಂದು ನುಗ್ಗಿದ ಯುವತಿಯ ಹೆತ್ತವರು, ಆಕೆಯನ್ನು ಬಲವಂತದಿಂದ ಕರೆದುಕೊಂಡು ಹೋಗುತ್ತಾರೆ. ತಕ್ಷಣ ಸ್ಥಳೀಯ ಬಿಜೆಪಿ ನಾಯಕರು ಹಿಂದೂ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಮತ್ತು ಹುಡುಗಿಯನ್ನು ಮರಳಿ ಹಿಂದೂ ಕುಟುಂಬಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಅದರಿಂದಾಗಿ ಆ ಪ್ರದೇಶದಲ್ಲಿ ಉದ್ವಿಘ್ನ ವಾತಾವರಣ ನೆಲೆಸುತ್ತದೆ. ಆದರೆ ಅದೇ ಬಿಜೆಪಿಯ ಮುಖಂಡರು ಮೇ 30ರಂದು ವಿೂರತ್ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಯುವತಿಯನ್ನು ರಕ್ಷಿಸುವಂತೆ ಮತ್ತು ಮುಸ್ಲಿಮ್ ಯುವಕನನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಯುವಕನನ್ನು ಬಂಧಿಸದಿದ್ದರೆ ಮಹಾ ಪಂಚಾಯತ್ ಕರೆಯುವುದಾಗಿ ಬೆದರಿಸುತ್ತಾರೆ (ಇಂಡಿಯನ್ ಎಕ್ಸ್ ಪ್ರೆಸ್). ‘ಹಿಂದೂ ಬಹು-ಬೇಟಿ ಬಚಾವೋ ಸಂಘರ್ಷ್ ಸಮಿತಿ’ಯನ್ನು ರಚಿಸಲಾಗುತ್ತದೆ. ಏನಿವೆಲ್ಲ? ಜಹನಾಬಾದ್‍ನ ಮುಸ್ಲಿಮ್ ಯುವತಿಯನ್ನು ಹಿಂದೂ ಕುಟುಂಬಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸುವ ಇದೇ ರಾಜಕೀಯ ಪಕ್ಷ, ವಿೂರತ್‍ನ ಹಿಂದೂ ಯುವತಿಯನ್ನು ಮುಸ್ಲಿಮ್ ಕುಟುಂಬಕ್ಕೆ ಒಪ್ಪಿಸಿ ಎಂದು ಆಗ್ರಹಿಸದೇ ಇರುವುದನ್ನು ಏನೆಂದು ಕರೆಯಬೇಕು? ದ್ವಂದ್ವ, ಹಿಪಾಕ್ರಸಿ, ಜನಾಂಗಬೇಧ, ಮನುಷ್ಯ ವಿರೋಧಿ.. ಮುಂತಾದ ಪದಗಳಿಂದ ಆ ನಕಲಿತನವನ್ನು ಖಂಡಿಸಿದರೆ ಸಾಕೇ? ನಿಜವಾಗಿ,
   ತನ್ನ ಮಾತಿನಿಂದಲೋ ವಿಚಾರಗಳಿಂದಲೋ ಇನ್ನೋರ್ವರನ್ನು ಪ್ರಭಾವಿತಗೊಳಿಸುವ ಪ್ರಯತ್ನಗಳು ಹೊಸದೇನೂ ಅಲ್ಲ. ಕಂಪೆನಿಯೊಂದು ಹೆಚ್ಚಿನ ಸಂಬಳ, ಭತ್ಯೆಯ ಭರವಸೆಯನ್ನು ನೀಡಿ ಇನ್ನೊಂದು ಕಂಪೆನಿಯ ಉದ್ಯೋಗಿಗಳನ್ನು ಆಕರ್ಷಿಸುವುದಿದೆ. ಫೆಮಿನಿಸಂನ ಪ್ರತಿಪಾದಕರು ತಮ್ಮ ವಾದಗಳ ಮೂಲಕ ಇತರರನ್ನು ಪ್ರಭಾವಿತಗೊಳಿಸುವುದಕ್ಕೆ ಪ್ರಯತ್ನಿಸುವುದಿದೆ. ಪ್ರಗತಿಪರರು ಮತ್ತು ಸಂಪ್ರದಾಯವಾದಿಗಳ ಮಧ್ಯೆ ವೈಚಾರಿಕ ಚರ್ಚೆಗಳು ಸದಾ ನಡೆಯುತ್ತಲೇ ಇವೆ. ಮಾವೋವಾದ, ಮಾರ್ಕ್ಸಿಸಮ್ ನ ವಕ್ತಾರರು ಅದನ್ನು ಇತರರಿಗೂ ಹಂಚುತ್ತಿರುತ್ತಾರೆ. ಇತರೆಲ್ಲ ಆರ್ಥಿಕ ಚಿಂತನೆಗಳಿಗಿಂತ ಬಂಡವಾಳಶಾಹಿತ್ವವು ಹೇಗೆ ಉತ್ತಮ ಎಂಬುದನ್ನು ಹೇಳುವುದಕ್ಕಾಗಿ ಪ್ರತಿದಿನ ಜಾಗತಿಕ ಮಾಧ್ಯಮಗಳ ಮೂಲಕ ಪ್ರಯತ್ನಗಳು ನಡೆಯುತ್ತಲೇ ಇವೆ. ರಾಜಕಾರಣಿಗಳಂತೂ ಭರವಸೆಗಳ ಮೂಲಕ ಜನರ ಮನಪರಿವರ್ತನೆ ಮಾಡಲು ಯತ್ನಿಸುತ್ತಲೇ ಇರುತ್ತಾರೆ. ಒಂದು ರೀತಿಯಲ್ಲಿ, ಇಲ್ಲೆಲ್ಲಾ ನಡೆಯುತ್ತಿರುವುದು ಮನಪರಿವರ್ತನೆಯ ಪ್ರಯತ್ನಗಳೇ. ಫೆಮಿನಿಸ್ಟ್, ಮಾರ್ಕ್ಸಿಸ್ಟ್, ಸೋಶಿಯಲಿಸ್ಟ್, ಇಂಡಸ್ಟ್ರಿಯಲಿಸ್ಟ್, ಪೊಲಿಟಿಶಿಯನ್.. ಎಲ್ಲರೂ ತಂತಮ್ಮ ವಾದಗಳಿಗೆ ಜನರನ್ನು ಸೇರಿಸುವ ಪ್ರಯತ್ನದಲ್ಲಿ ಪ್ರತಿದಿನ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ, ಸಮಾಜವೂ ಇದನ್ನು ಅತ್ಯಂತ ಸ್ಫೂರ್ತಿಯಿಂದಲೇ ಸ್ವೀಕರಿಸಿದೆ. ಹೀಗಿರುವಾಗ ಧರ್ಮಗಳಿಗೇಕೆ ನಾವು ಇಂಥದ್ದೊಂದು ಸ್ಪೇಸ್ ಅನ್ನು ಒದಗಿಸಿಕೊಡುತ್ತಿಲ್ಲ? ಸೋಶಿಯಲಿಸಂ ಅನ್ನು ಚರ್ಚಿಸುವಷ್ಟೇ ಸ್ಫೂರ್ತಿ ಮತ್ತು ಉತ್ಸಾಹದಿಂದ ಧರ್ಮಗಳ ಬಗ್ಗೆಯೂ ಚರ್ಚಿಸುವುದಕ್ಕೇಕೆ ವಾತಾವರಣವನ್ನು ಸಜ್ಜುಗೊಳಿಸುತ್ತಿಲ್ಲ? ಸಮಾಜವಾದವನ್ನು ಪ್ರತಿಪಾದಿಸುತ್ತಿದ್ದ ವ್ಯಕ್ತಿ ಮನಪರಿವರ್ತನೆಗೊಂಡು ಬಂಡವಾಳಶಾಹಿತ್ವ ವನ್ನು ಅಪ್ಪಿಕೊಳ್ಳುವುದು ಎಷ್ಟು ಸಲಿಸಾಗಿ ನಡೆಯಬಲ್ಲುದೋ ಅಷ್ಟೇ ಸಲೀಸಾಗಿ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟ ವ್ಯಕ್ತಿ ಮುಸ್ಲಿಮ್ ಆಗುವುದೂ ಅಥವಾ ಇದಕ್ಕೆ ವಿರುದ್ಧ ಆಗುವುದು ಯಾಕೆ ಸಾಧ್ಯವಾಗುತ್ತಿಲ್ಲ? ಫೆಮಿನಿಸಂ, ಸೋಶಿಯಲಿಸಂಗೆಲ್ಲ ಇರುವ ಅಪಾರ ಸ್ವಾತಂತ್ರ್ಯವು ಹಿಂದೂಯಿಸಂ, ಇಸ್ಲಾಮಿಸಂಗೆಲ್ಲ ನಾವು ನೀಡದಿರುವುದು ಯಾಕಾಗಿ? ಸಮಾಜವಾದ ಮತ್ತು ಬಂಡವಾಳವಾದಗಳ ನಡುವೆ ವೈಚಾರಿಕ ಸಂವಾದ ನಡೆಯುವಂತೆಯೇ ಮತ್ತು ಇಷ್ಟವಿದ್ದವರು ಇಷ್ಟ ಬಂದ ವಾದವನ್ನು ಸ್ವೀಕರಿಸಲು ಸ್ವಾತಂತ್ರ್ಯ ಇರುವಂತೆಯೇ ಇಸ್ಲಾಮ್, ಕ್ರೈಸ್ತ-ಹಿಂದೂ ಧರ್ಮಗಳ ನಡುವೆಯೂ ಸಂವಾದ ನಡೆಯುವಂತಹ ಮತ್ತು ಇಷ್ಟ ಬಂದವರು ಇಷ್ಟ ಬಂದ ಧರ್ಮವನ್ನು ಸ್ವೀಕರಿಸುವುದಕ್ಕೆ ಮುಕ್ತ ಸ್ವಾತಂತ್ರ್ಯ ಇರುವಂತಹ ವಾತಾವರಣಕ್ಕೆ ನಮ್ಮ ಮನಸ್ಸನ್ನು ತೆರೆದಿಟ್ಟರೇನು? ಅಷ್ಟಕ್ಕೂ, ಒಂದು ಕಂಪೆನಿಯ ಭರವಸೆಯು ಸುಳ್ಳು ಎಂದು ಗೊತ್ತಾದರೆ ಅದರಿಂದ ಹಿಂದೆ ಬರುವುದಕ್ಕೆ ಉದ್ಯೋಗಿಗೆ ಸಕಲ ಸ್ವಾತಂತ್ರ್ಯವೂ ಇರುತ್ತದೆ. ಫೆಮಿನಿಸಂ, ಸೋಶಿಯಲಿಸಂ.. ಎಲ್ಲವೂ ಹಾಗೆಯೇ. ಮಾತು, ವಿಚಾರಗಳಿಂದ ಪ್ರಭಾವಿತಗೊಂಡು ಓರ್ವ ವ್ಯಕ್ತಿ ಒಂದು ಇಸಂ ಅನ್ನು ಒಪ್ಪಿಕೊಂಡಾಕ್ಷಣ ಎಲ್ಲವೂ ಮುಗಿದು ಹೋಗುವುದಿಲ್ಲ. ಅದು ಸುಳ್ಳು ಮತ್ತು ಮಾತಿನ ಕಸರತ್ತು ಎಂದು ಗೊತ್ತಾದ ತಕ್ಷಣ ಆತನಿಗೆ/ಳಿಗೆ ತನ್ನ ಹಿಂದಿನ ವಾದಕ್ಕೆ ಮರಳಿ ಬರುವುದಕ್ಕೂ ಅವಕಾಶ ಇರುತ್ತದೆ. ಅಂಥ ಪ್ರಕರಣಗಳು ಇವತ್ತು ಧಾರಾಳ ನಡೆಯುತ್ತಲೂ ಇವೆ. ಈ ಸ್ವಾತಂತ್ರ್ಯ ಧಾರ್ಮಿಕವಾಗಿಯೂ ಇರಬೇಕಾದದ್ದೇ. ಇಸ್ಲಾವಿೂ ವಿಚಾರಗಳಿಂದ ಪ್ರಭಾವಿತನಾದವನಿಗೆ ಅದರ ಒಳಹೊಕ್ಕ ಬಳಿಕ ಅದು ಭ್ರಮೆ ಎಂದು ಅನಿಸಿದರೆ ಮರಳಿ ಹೋಗುವುದಕ್ಕೆ ಯಾವ ನಿರ್ಬಂಧಗಳೂ ಇರಬೇಕಿಲ್ಲ, ಇರಬಾರದು ಕೂಡ. ಈ ನಿಯಮ ಇತರ ಧರ್ಮಗಳಿಗೂ ಅನ್ವಯಿಸುತ್ತದೆ. ಆದರೂ ಈ ಕ್ಷೇತ್ರ ಇನ್ನೂ ಇಂಥ ಮುಕ್ತ ವಾತಾವರಣಕ್ಕೆ ತೆರೆದುಕೊಳ್ಳದೇ ಇರುವುದು ಯಾವ ಕಾರಣದಿಂದ? 
   ಅಂದಹಾಗೆ, ಲವ್ ಜಿಹಾದ್ ಆಗಿ ಬಿಂಬಿತಗೊಂಡಿದ್ದ ವಿೂರತ್‍ನ ಜಾಟ್ ಯುವತಿ ಮತ್ತು ಮುಸ್ಲಿಮ್ ಯುವಕನ ಪ್ರೇಮ ಪ್ರಕರಣವು ಇದೀಗ ಪಡೆದುಕೊಂಡ ತಿರುವನ್ನೇ ಎತ್ತಿಕೊಳ್ಳಿ. ಇದರಿಂದ ಸಿಗುವ ಪಾಠಗಳೇನು? ಧರ್ಮವನ್ನು ಉಸಿರಾಡುವುದಕ್ಕೂ ಸ್ವಾತಂತ್ರ್ಯವಿಲ್ಲದ ಗಾಜಿನ ಪಂಜರವಾಗಿ ಮಾರ್ಪಡಿಸಿದ್ದು ಯಾರು? ಸ್ವಚ್ಛ ಪರಿಸರದಲ್ಲಿ ಮುಕ್ತವಾಗಿ ಬೆಳೆಯಬೇಕಾದ ಧರ್ಮಕ್ಕೆ ಲಂಚ, ಆಮಿಷಗಳ ಬೇಲಿಗಳೇಕೆ? ಒತ್ತಡ, ಬಲವಂತದ ತಿವಿತಗಳೇಕೆ? ಇಷ್ಟವಿದ್ದವರು ಒಪ್ಪಿಕೊಳ್ಳುವ ಮತ್ತು ಇಷ್ಟವಿಲ್ಲದವರು ಒಪ್ಪಿಕೊಳ್ಳದೇ ಇರುವ ಸಹಜ ಸ್ವಾತಂತ್ರ್ಯವನ್ನು ಧರ್ಮಗಳಿಂದ ಕಿತ್ತುಕೊಂಡವರು ಯಾರು? ಅವರ ಉದ್ದೇಶವೇನು?

Wednesday, October 8, 2014

ಜ್ಞಾನಸರ ಮತ್ತು ವಿರತ್ತುರ ಪ್ರತಿಜ್ಞೆ ಧರ್ಮ ರಕ್ಷಣೆಗೋ ಜನಾಂಗ ನಿರ್ಮೂಲನಕ್ಕೋ?


    ಶ್ರೀಲಂಕಾದ ಬೋದು ಬಾಲ ಸೇನಾ (ಬೌದ್ಧ ಸೇನೆ)ದ ನಾಯಕ ಗಲಗೊಡ ಜ್ಞಾನಸರ ಮತ್ತು ಮ್ಯಾನ್ಮಾರ್‍ನ ‘969 ಚಳವಳಿ’ಯ ನಾಯಕ ಆಶಿನ್ ವಿರತ್ತು ಕಳೆದ ವಾರ ಲಂಕಾದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ ಮತ್ತು ಬೌದ್ಧ ಧರ್ಮದ ರಕ್ಷಣೆಗೆ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳು ಹೆಚ್ಚು ಒತ್ತು ಕೊಟ್ಟು ಪ್ರಕಟಿಸಿದ್ದುವು. ಇದಕ್ಕೆ ಕಾರಣವೂ ಇದೆ.  
   2014 ಜೂನ್ 15ರಂದು ಲಂಕಾದ ಕಲುತರ ಜಿಲ್ಲೆಯ ಅಲುತಗಮ, ಬೆರುವಲ ಮತ್ತು ದರ್ಗಾಟೌನ್ ಪ್ರದೇಶಗಳಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ನಡೆಯಿತು. 4 ಮಂದಿ ಸಾವಿಗೀಡಾದರು. ಸಾವಿರಾರು ಮುಸ್ಲಿಮರು ನಿರ್ವಸಿತರಾದರು. 17 ಮಸೀದಿಗಳು ನೆಲಸಮಗೊಂಡವು. ಬೌದ್ಧ ಸನ್ಯಾಸಿ ಅಯಗಮ ಸಮಿತ್‍ರ ಮೇಲೆ ಹಲ್ಲೆ ನಡೆಸಲಾದ ನೆಪದಲ್ಲಿ ಬೌದ್ಧ ಸೇನೆ ಈ ಹಿಂಸಾಚಾರವನ್ನು ಆರಂಭಿಸಿತ್ತು. ಮೂರು ದಿನಗಳ ವರೆಗೆ ನಡೆದ ಈ ಹಿಂಸಾಚಾರದ ಸುದ್ದಿಯು ಹೊರ ಜಗತ್ತಿಗೆ ಅಷ್ಟೇ ತೀವ್ರತೆಯಿಂದ ವರದಿಯಾಗದಿರಲೆಂದು ಸರಕಾರವು ಮಾಧ್ಯಮಗಳ ಮೇಲೆ ಸೆನ್ಸಾರ್ ವಿಧಿಸಿತು. ಟಿ.ವಿ.ಗಳು ಸುಮ್ಮ ನಾದುವು. ಆದರೆ ಮಾಧ್ಯಮಗಳು ತೋರಿಸದಿದ್ದುದನ್ನು ಫೇಸ್‍ಬುಕ್, ಟ್ವಿಟರ್‍ನಂಥ ಸಾಮಾಜಿಕ ಜಾಲತಾಣಗಳು ಜಗತ್ತಿಗೆ ತೋರಿಸಿದುವು. ಬೌದ್ಧಸೇನೆಯ ಪ್ರಮುಖ ಟೀಕಾಕಾರರಾಗಿರುವ ಬೌದ್ಧ ಸನ್ಯಾಸಿ ವಾಟರೇಕ ವಿಜಿತರಿಗೆ ಜೂನ್ 19ರಂದು ಈ ಮಂದಿ ಬಲವಂತದಿಂದ ಸುನ್ನತಿ (ಮುಂಜಿ) ಮಾಡಿಸಿದರು. ಸಂಡೇ ಟೈಮ್ಸ್ ನ ಪತ್ರಕರ್ತ ಶರತ್ ಸಿರಿವರ್ಧನೆಯ ಮೇಲೆ ದಾಳಿ ನಡೆಯಿತು. ಅಲ್ ಜಝೀರಾ ಪತ್ರಿಕಾ ತಂಡ ಮತ್ತು ಪತ್ರಕರ್ತ ಬಿನಯ್ ಸೂರ್ಯರಚಿಯ ಮೇಲೂ ಹಲ್ಲೆ ನಡೆಯಿತು. ಮುಸ್ಲಿಮರ ಆಸ್ತಿ-ಪಾಸ್ತಿಗಳ ಮೇಲೆ ವ್ಯವಸ್ಥಿತ ದಾಳಿ ನಡೆಯಿತು. ಬೊಲಿವಿಯಾದಲ್ಲಿದ್ದ ಅಧ್ಯಕ್ಷ  ರಾಜಪಕ್ಸೆ ಹಿಂತಿರುಗಿ ಬರುವವರೆಗೆ ಸರಕಾರ ಯಾವ ಹೇಳಿಕೆಯನ್ನೂ ಹೊರಡಿಸಲಿಲ್ಲ. ಈ ಮುಸ್ಲಿಮ್ ವಿರೋಧಿ ದಂಗೆಗೆ ರಕ್ಷಣಾ ಮಂತ್ರಿಯ ಸಲಹೆಗಾರ ಕಪಿಲ್ ಹೆಂದವಿತರಣ, ಕರ್ನಲ್ ಸುರೇಶ್ ಸಲ್ಲೆ ಮತ್ತು ಗುಪ್ತಚರ ಇಲಾಖೆಯ ಉಪಮುಖ್ಯಸ್ಥ ಚಂದ್ರ ವಾಕಿಷ್ಟರೇ ಕಾರಣ ಎಂದು ಮುಖ್ಯ ವಿರೋಧ ಪಕ್ಷವಾದ ಯುನೈಟೆಡ್ ನ್ಯಾಶನಲ್ ಪಾರ್ಟಿಯ ನಾಯಕ ಮಂಗಳ ಸಮರವೀರ ಆರೋಪಿಸಿದರು. ವಿಶ್ವಸಂಸ್ಥೆಯ ಕಾರ್ಯದರ್ಶಿ ಬಾನ್‍ಕಿ ಮೂನ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ  ನವಿಪಿಳ್ಳೆ, ಕೊಲಂಬೋದಲ್ಲಿರುವ ಅಮೇರಿಕ ಮತ್ತು ಕೆನಡಾದ ರಾಯಭಾರಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ನಾರ್ವೆ, ಸ್ವೀಡನ್, ತುರ್ಕಿ ಸಹಿತ ಯುರೋಪಿಯನ್ ಯೂನಿಯನ್‍ಗಳ ನಿಯೋಗವೊಂದು ಕೊಲಂಬೋಕ್ಕೆ ಭೇಟಿ ನೀಡಿತು. ಲಂಕಾದ ತಮಿಳರ ಜಾಗದಲ್ಲಿ ಇದೀಗ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಹಲವಾರು ಮಂದಿ ಎತ್ತಿದರು. ತೀವ್ರ ಬಲಪಂಥೀಯ ವಿಚಾರಧಾರೆಯನ್ನು ಹೊಂದಿರುವ ಬೌದ್ಧ ಸೇನೆಯ ಕಾರ್ಯಕ್ರಮಗಳಲ್ಲಿ ಅಧ್ಯಕ್ಷ ರಾಜಪಕ್ಸೆ ಭಾಗಿಯಾಗುತ್ತಿರುವುದನ್ನು ಅನೇಕರು ಪ್ರಶ್ನಿಸಿದರು.
   ಅಂದಹಾಗೆ, ಗಲಭೆ ನಡೆದ ಜೂನ್ ತಿಂಗಳಿನಲ್ಲಿಯೇ ಲಂಕಾದ ಪಾರ್ಲಿಮೆಂಟ್‍ನ 6 ಮಂದಿ ಸದಸ್ಯರ ಸತ್ಯಶೋಧನಾ ಸಮಿತಿಯೊಂದು ದೇಹಿವಾಲಾ ಮೃಗಾಲಯಕ್ಕೆ ಭೇಟಿ ನೀಡಿತು. ಗಲಭೆಯಿಂದ ತತ್ತರಿಸಿದ ಜನರನ್ನು ಭೇಟಿಯಾಗುವುದಕ್ಕೆ ಸಮಿತಿ ರಚಿಸುವ ಬದಲು ಮೃಗಾಲಯದಲ್ಲಿ ನೀರ್ಗುದುರೆ ಮತ್ತು ಸಿಂಹವು ಸಾವಿಗೀಡಾದುದನ್ನು ಪರಿಶೀಲಿಸಲು ಸಮಿತಿ ರಚಿಸಿದುದಕ್ಕೆ ತೀವ್ರ ಟೀಕೆಗಳು ಎದುರಾದುವು. ಗಲಭೆಗ್ರಸ್ತ ಪ್ರದೇಶಕ್ಕೆ ಭೇಟಿ ನೀಡಿದ ರಾಜಪಕ್ಸೆಯವರು, ಬೌದ್ಧ ಧರ್ಮದ ರಕ್ಷಣೆಯ ಅಗತ್ಯವಿದೆ ಎಂದಿದ್ದೂ ಚರ್ಚೆಗೀಡಾಯಿತು. ಅಷ್ಟಕ್ಕೂ, ಜನಾಂಗ ತಾರತಮ್ಯ ಎಂಬುದು ಲಂಕಾಕ್ಕೆ ಹೊಸತಲ್ಲ.
    1948ರಲ್ಲಿ ಲಂಕಾವು ಬ್ರಿಟಿಷ್ ಪ್ರಭುತ್ವದಿಂದ ಸ್ವತಂತ್ರಗೊಂಡ ಕೂಡಲೇ ಸಿಲೋನ್ ಸಿಟಿಝನ್‍ಶಿಪ್ ಆ್ಯಕ್ಟನ್ನು ಪಾರ್ಲಿಮೆಂಟ್ ಜಾರಿಗೆ ತಂದಿತ್ತು. ಈ ಕಾಯ್ದೆಯು ಭಾರತ ಮೂಲದ ತಮಿಳರಿಗೆ ಪೌರತ್ವವನ್ನೇ ನಿಷೇಧಿಸಿತು. ಆಗ 7 ಲಕ್ಷದಷ್ಟು ತಮಿಳು ನಾಗರಿಕರು ಅತಂತ್ರರಾದರು. ಇವರಲ್ಲಿ 3 ಲಕ್ಷ  ಮಂದಿಯನ್ನು ಭಾರತಕ್ಕೆ ಗಡೀಪಾರು ಮಾಡಲಾಯಿತು. 1956ರಲ್ಲಿ ಪ್ರಧಾನಿ ಭಂಡಾರ ನಾಯಿಕೆಯವರು ಸಿಂಹಳ ಓನ್ಲಿ ಆ್ಯಕ್ಟ್ ಅನ್ನು ಜಾರಿಗೆ ತಂದರು. ಈ ಮೂಲಕ ಲಂಕಾದ ಅಧಿಕೃತ ಭಾಷೆಯಾಗಿ ಇಂಗ್ಲಿಷ್‍ನ ಬದಲು ಸಿಂಹಳವು ಆಯ್ಕೆಯಾಯಿತು. ಮಾತ್ರವಲ್ಲ, ಈ ಕಾಯ್ದೆಯನ್ನು ಬಳಸಿಕೊಂಡು ತಮಿಳರನ್ನು ವ್ಯವಸ್ಥಿತವಾಗಿ ಬಗ್ಗುಬಡಿಯಲಾಯಿತು. ಸರಕಾರಿ ಹುದ್ದೆಗಳಲ್ಲಿ ಭಾಷೆಯ ನೆಪವೊಡ್ಡಿ ತಮಿಳರನ್ನು ಹೊರಗಿಡಲಾಯಿತು. ಸಿಂಹಳ ಭಾಷೆಯಲ್ಲಿ ಪರಿಣತರಾಗಿಲ್ಲ ಎಂಬ ಕಾರಣವೊಡ್ಡಿ ತಮಿಳು ಅಧಿಕಾರಿಗಳನ್ನು ಹುದ್ಧೆಯಿಂದ ಕಿತ್ತುಹಾಕಲಾಯಿತು. ನಿಜವಾಗಿ, 1960ರಲ್ಲಿ ಪ್ರತ್ಯೇಕ ತಮಿಳುರಾಷ್ಟ್ರದ ಬೇಡಿಕೆಯನ್ನು ಮುಂದಿಡುವ ಕರಪತ್ರಗಳು ಪ್ರಕಟವಾಗಲು ಪ್ರಾರಂಭವಾದುದಕ್ಕೆ ಕಾರಣ ಇದುವೇ. ಕೊಲಂಬೋದ ಬ್ರಿಟಿಷ್ ರಾಯಭಾರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಆ್ಯಂಟನಿ ಬಾಲಸಿಂಘಂ ಅವರು ಪ್ರತ್ಯೇಕತಾವಾದಿಗಳ ಸಭೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಬಳಿಕ ಅವರು ಇಂಗ್ಲೆಂಡ್‍ಗೆ ತೆರಳಿದರಲ್ಲದೇ ಎಲ್‍ಟಿಟಿಇಯ ಪ್ರಮುಖ ಚಿಂತಕರಲ್ಲಿ ಒಬ್ಬರಾದರು. ಈ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಲಂಕಾ ಸರಕಾರವು ತಾರತಮ್ಯ ನೀತಿಯನ್ನು ಸಡಿಲಗೊಳಿಸಲಿಲ್ಲ. 1970ರಲ್ಲಿ ಪಾಲಿಸಿ ಆಫ್ ಸ್ಟಾಂಡರ್‍ಡೈಸೇಶನ್ ಎಂಬ ಕಾಯ್ದೆಯನ್ನು ಜಾರಿಗೊಳಿಸಿತು. ವಿಶ್ವವಿದ್ಯಾಲಯಗಳ ಆಡಳಿತವನ್ನು ಸರಿಪಡಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ಸರಕಾರ ಸಮರ್ಥಿಸಿಕೊಂಡರೂ ನಿಜ ಅದಾಗಿರಲಿಲ್ಲ. ಈ ಕಾಯ್ದೆಯನ್ನು ಬಳಸಿಕೊಂಡು ಸಿಂಹಳೀಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡ ಲಾಯಿತು. ಈ ಕಾಯ್ದೆಯಂತೆ ವೈದ್ಯಕೀಯ ಸೀಟು ಸಿಗಬೇಕೆಂದರೆ ಸಿಂಹಳೀಯ ವಿದ್ಯಾರ್ಥಿ ಒಟ್ಟು 400 ಅಂಕದಲ್ಲಿ 229 ಅಂಕ ಪಡೆದರೆ ಸಾಕಾಗುತ್ತದೆ. ಆದರೆ ತಮಿಳು ವಿದ್ಯಾರ್ಥಿ 250 ಅಂಕ ಪಡೆಯಬೇಕು. 1978ರಲ್ಲಿ ತಮಿಳು ಮ್ಯಾಗಸಿನ್‍ಗಳ ಆಮದಿಗೆ ನಿಷೇಧ ವಿಧಿಸಲಾಯಿತು. ಹೀಗೆ ಲಂಕಾದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾದ ಸಿಂಹಳೀಯರನ್ನು ಬಿಟ್ಟರೆ ಉಳಿದಂತೆ ಎರಡನೇ ಅತಿದೊಡ್ಡ ಸಮುದಾಯವಾಗಿದ್ದ ತಮಿಳರನ್ನು ವ್ಯವಸ್ಥಿತವಾಗಿ ತುಳಿದುದರ ಫಲಿತಾಂಶವೇ ಎಲ್‍ಟಿಟಿಇಯ ಉಗಮವಾಗಿತ್ತು. 2009 ಮೇ 17ರಂದು ಎಲ್‍ಟಿಟಿಇಯು ಅಂತಿಮವಾಗಿ ಸೋಲೊಪ್ಪಿಕೊಂಡರೂ ಅದು ಹುಟ್ಟುಹಾಕಿದ ಕಾವು ಮತ್ತು ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲ. ಇಂಥ ಹೊತ್ತಿನಲ್ಲಿಯೇ ಲಂಕಾವು ಮತ್ತೊಮ್ಮೆ ಜನಾಂಗೀಯ ನಿರ್ಮೂಲನಾ ಆರೋಪಕ್ಕೆ ಗುರಿಯಾಗಿದೆ.
   ಲಂಕಾಕ್ಕೂ ಮುಸ್ಲಿಮರಿಗೂ ಪ್ರವಾದಿ ಮುಹಮ್ಮದ್ ರ ಕಾಲದಿಂದಲೇ ಸಂಬಂಧ ಇದೆ. 7ನೇ ಶತಮಾನದಲ್ಲೇ ಅರಬ್ ವ್ಯಾಪಾರಿಗಳು ಈ ದ್ವೀಪರಾಷ್ಟ್ರಕ್ಕೆ ಕಾಲಿಟ್ಟರಲ್ಲದೇ ಕೃಷಿ ಮತ್ತು ಜಾನುವಾರು ಸಾಕಣೆ ಮಾಡುತ್ತಿದ್ದ ಸಿಂಹಳೀಯ ನಾಡಿಗೆ ವ್ಯಾಪಾರದ ರುಚಿಯನ್ನು ಹತ್ತಿಸಿದರು. ಆದ್ದರಿಂದಲೇ ಬಹುತೇಕ ಜನರಿಗೆ ಮತ್ತು ಆಡಳಿತಕ್ಕೆ ಹತ್ತಿರವಾದರು. ಅವರು ಬಹುಬೇಗ ತಮಿಳು ಕಲಿತರು. ಸ್ಥಳೀಯರೊಂದಿಗೆ ಬೆರೆತು ಅಲ್ಲೇ ನೆಲೆಸಿದರು. ಮುಸ್ಲಿಮ್ ದೊರೆಗಳು ಲಂಕಾವನ್ನು ಆಳಿದ ಇತಿಹಾಸವೂ ಇದೆ. 1344ರಲ್ಲಿ ಲಂಕಾಕ್ಕೆ ಭೇಟಿ ನೀಡಿದ ಖ್ಯಾತ ಇತಿಹಾಸಕಾರ ಇಬ್ನು ಬತೂತ ಈ ಬಗ್ಗೆ ತನ್ನ ಅನುಭವವನ್ನೂ ಹಂಚಿಕೊಂಡಿದ್ದಾರೆ. ಕ್ರಿಸ್ತಪೂರ್ವ 307-267ರ ಸಮಯದಲ್ಲಿ ರಾಜ ಅಶೋಕ್‍ರಿಂದ ಬೌದ್ಧ ಧರ್ಮಕ್ಕೆ ಧರ್ಮಾಂತರವಾದ ಸಿಂಹಳೀಯರು ಲಂಕಾದಲ್ಲಿ ಇವತ್ತೂ ಬಹುಸಂಖ್ಯಾತರೇ. ಮುಸ್ಲಿಮರು ಬರೇ 10%. ಮುಸ್ಲಿಮರನ್ನು ಸಾಮಾನ್ಯವಾಗಿ ಮಾರ್ಸ್ ಮುಸ್ಲಿಮ್ಸ್ ಮತ್ತು ಮಲಯಾ ಮುಸ್ಲಿಮ್ಸ್ ಎಂದು ವಿಭಜಿಸಲಾಗುತ್ತದೆ. ಸಿಂಹಳೀಯರದ್ದು ಪಾಲಿ ಭಾಷೆಗೆ ಹತ್ತಿರದ ನಂಟಿರುವ ಆರ್ಯನ್ ಭಾಷೆಯಾದರೆ ಮುಸ್ಲಿಮರು ಅರಬಿ ಮತ್ತು ತಮಿಳು ಮಿಶ್ರಿತ ಭಾಷೆ ಮಾತಾಡುತ್ತಾರೆ. ಅವರ ಭಾಷೆಯಲ್ಲಿ ಅತ್ಯಧಿಕ ಅರಬಿ ಪದಗಳು ಒಳಗೊಂಡಿವೆ. ಅಲ್ಲಿನ 99% ಮುಸ್ಲಿಮರು ಕೂಡ ಅಕ್ಷರಸ್ಥರೇ. ಸುಮಾರು 800ರಷ್ಟು ಶಾಲೆಗಳನ್ನು ಅವರು ನಡೆಸುತ್ತಿದ್ದಾರೆ. ಮುಸ್ಲಿಮ್ ಯುನಿವರ್ಸಿಟಿಯೂ ಇದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮುಸ್ಲಿಮರು, ಎಲ್‍ಟಿಟಿಇ ಮತ್ತು ಸರಕಾರದ ನಡುವಿನ ಹೋರಾಟದ ಸಂದರ್ಭದಲ್ಲಿ ಸರಕಾರವನ್ನೇ ಬೆಂಬಲಿಸಿದ್ದರು. ಇದು ಎಲ್‍ಟಿಟಿಇಯ ಮುಖಂಡ ಪ್ರಭಾಕರನ್ ಅವರನ್ನು ತೀವ್ರವಾಗಿ ಸಿಟ್ಟಿಗೆಬ್ಬಿಸಿತ್ತು. 1990ರ ಅವಧಿಯಲ್ಲಿ ಉತ್ತರ ಲಂಕಾದಿಂದ 95 ಸಾವಿರ ಮುಸ್ಲಿಮರನ್ನು ಅವರು ಹೊರಹಾಕಿದ್ದರು. ಮಾತ್ರವಲ್ಲ, ನೂರಾರು ಮಂದಿ ಈ ಸಂದರ್ಭದಲ್ಲಿ ಪ್ರಾಣ ಕಳಕೊಂಡರು. ಈ ಕೃತ್ಯಕ್ಕಾಗಿ 2002ರಲ್ಲಿ ಸ್ವತಃ ಪ್ರಭಾಕರ್ ಅವರೇ ಮುಸ್ಲಿಮರ ಕ್ಷಮೆ ಯಾಚಿಸಿದ್ದರು. ಒಂದು ರೀತಿಯಲ್ಲಿ ತಮಿಳರೊಂದಿಗೆ ಜನಾಂಗೀಯವಾಗಿ ಯಾವ ಸಂಬಂಧ ಇಲ್ಲದಿದ್ದರೂ ಇವತ್ತೂ ತಮಿಳು ಮಾತಾಡುವ ಮುಸ್ಲಿಮರು ಅಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಆರಂಭದಲ್ಲಿ ತಮಿಳರ ವಿರುದ್ಧ ನಿಂತ ಅಲ್ಲಿನ ಸರಕಾರ ಮತ್ತು ಬಲಪಂಥೀಯ ಬೌದ್ಧರು ಇವತ್ತು ಮುಸ್ಲಿಮರ ಜನಾಂಗ ನಿರ್ಮೂಲನಕ್ಕಾಗಿ ವಿವಿಧ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. 2013 ಫೆಬ್ರವರಿಯಲ್ಲಿ ಹಲಾಲ್ ಲೋಗೋದ ನೆಪದಲ್ಲಿ ಬೌದ್ಧ ಸೇನೆಯು ಸರಣಿ ಪ್ರತಿಭಟನೆಯನ್ನು ಹಮ್ಮಿ ಕೊಂಡಿತ್ತು. ಆಲ್ ಸಿಲೋನ್ ಜವಿೂಯತುಲ್ ಉಲೆಮಾ ಎಂಬ ಸಂಘಟನೆಯು ನೀಡುವ ಹಲಾಲ್ (ಧರ್ಮಸಮ್ಮತ) ಸರ್ಟಿಫಿಕೇಟನ್ನು ಅಲ್ಲಿನ ಸಾಕಷ್ಟು ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಬಳಸಿಕೊಳ್ಳುತ್ತಿವೆ. ಆದರೆ ಇಸ್ಲಾವಿೂ ಕಾನೂನಿನಂತೆ ತಯಾರಾಗುವ ಉತ್ಪನ್ನಗಳು ಲಂಕಾದಲ್ಲಿ ಮಾರಾಟವಾಗುವುದು ಮತ್ತು ಅದು ಬೌದ್ಧರ ಆಹಾರವಾಗಿ ಬಳಕೆಗೀಡಾಗುವುದು ತಪ್ಪು ಎಂದು ಬೌದ್ಧ ಸೇನೆ ವಾದಿಸಿತು. ಬಳಿಕ ಅಂಥ ಸರ್ಟಿಫಿಕೇಟ್ ಕೊಡುವುದನ್ನು ಉಲೇಮಾ ಸಂಘಟನೆಯು ರದ್ದುಪಡಿಸಿತು. ನಿಜವಾಗಿ ಬೌದ್ಧ ಸೇನೆಯ ಸಿಟ್ಟು ಹಲಾಲ್ ಉತ್ಪನ್ನದ  ಮೇಲಾಗಿರಲಿಲ್ಲ. ಹಲಾಲ್ ಉತ್ಪನ್ನದ ಕಂಪೆನಿಗಳು ಲಂಕಾದಲ್ಲಿ ಜನಪ್ರಿಯವಾಗಿದ್ದುವು. 10% ಮುಸ್ಲಿಮರಿದ್ದರೂ ಹಲಾಲ್ ಉತ್ಪನ್ನಗಳು ಮಾರುಕಟ್ಟೆಯ 20%ವನ್ನು ಆಕ್ರಮಿಸಿಕೊಂಡಿದ್ದುವು. ಇದುವೇ ಬೌದ್ಧ ಸೇನೆಯನ್ನು ಕುಪಿತಗೊಳಿಸಿತ್ತು. 2014 ಆಗಸ್ಟ್ ನಲ್ಲಿ ಮಸೀದಿಯ ನಿರ್ಮಾಣದ ವಿರುದ್ಧ ಬೌದ್ಧ ಸೇನೆ ಪ್ರತಿಭಟನೆ ಹಮ್ಮಿಕೊಂಡಿತು. ಬಳಿಕ ಅದು ದೊಡ್ಡ ವಿವಾದಕ್ಕೂ ಕಾರಣವಾಯಿತು.
   ಅಂದಹಾಗೆ, ಮ್ಯಾನ್ಮಾರ್‍ನಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿರುವ ‘969 ಚಳವಳಿ' ಹಾಗೂ ಬೋದೋ ಬಾಲ ಸೇನಾಗಳು ಜೊತೆಯಾಗಿರುವುದಕ್ಕೂ ಭಾರತ ಉಪಖಂಡದಲ್ಲಾದ ಬೆಳವಣಿಗೆಗಳಿಗೂ ಸಂಬಂಧ ಇರಬಹುದೇ? ಭಾರತದಲ್ಲಿ ಬಲಪಂಥೀಯ ವಿಚಾರಧಾರೆಗೆ ರಾಜಕೀಯ ಬಲ ಬಂದಿರುವುದು ಮತ್ತು ಬಲಪಂಥೀಯ ಚಟುವಟಿಕೆಗಳು ಹೆಚ್ಚು ವೇಗ ಪಡೆದಿರುವುದನ್ನು ಮ್ಯಾನ್ಮಾರ್ ಮತ್ತು ಲಂಕಾದ ಬೆಳವಣಿಗೆಗಳಿಗೆ ಹೋಲಿಸಿ ನೋಡಿದರೆ ಏನನಿಸುತ್ತದೆ? ವಿರತ್ತು ಮತ್ತು ಜ್ಞಾನಸರರ ಭೇಟಿಯು ರವಾನಿಸುವ ಸೂಚನೆಗಳೇನು? ಭಾರತದಲ್ಲಿ ಮುಸ್ಲಿಮರ ವಿರುದ್ಧ ಬಲಪಂಥೀಯ ಸಂಘಟನೆಗಳು ಯಾವ ಆರೋಪವನ್ನು ಹೊರಿಸುತ್ತಿವೆಯೋ ಅವೇ ಆರೋಪವನ್ನು ಲಂಕಾದಲ್ಲಿ ಬೌದ್ಧ ಸೇನೆ ಮುಸ್ಲಿಮರ ವಿರುದ್ಧ ಹೊರಿಸುತ್ತಿರುವುದರ ಹಿನ್ನೆಲೆ ಏನು? ‘ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ, ಸಿಂಹಳೀಯ ಮಹಿಳೆಯರನ್ನು ವಿವಾಹವಾಗಿ ಜನಸಂಖ್ಯೆ ಹೆಚ್ಚಿಸುತ್ತಾರೆ, ವ್ಯಾಪಾರದ ಮೂಲಕ ಪ್ರಾಬಲ್ಯ ಪಡೆದು ಆಡಳಿತವನ್ನು ಕೈವಶ ಪಡಿಸಬಯಸುತ್ತಾರೆ ಮತ್ತು ಸಿಂಹಳೀಯ ಅಸ್ಮಿತೆಗೆ ಬೆದರಿಕೆ ಯಾಗಿದ್ದಾರೆ..’ ಮುಂತಾದ ಆರೋಪಗಳೊಂದಿಗೆ ಬೌದ್ಧ ಸೇನೆ ಕಾರ್ಯಪ್ರವೃತ್ತವಾಗಿರುವುದನ್ನು ಏನೆಂದು ವ್ಯಾಖ್ಯಾನಿಸಬಹುದು? ಅದರ ಹಿಂದೆ ಯಾರಿದ್ದಾರೆ? ಅವರ ಉದ್ದೇಶವೇನು?
   ಆಶಿನ್ ವಿರತ್ತು ಮತ್ತು ಜ್ಞಾನಸರರ ನಡುವಿನ ಭೇಟಿ ಮತ್ತು ಅವರ ಧರ್ಮರಕ್ಷಣೆಯ ಪ್ರತಿಜ್ಞೆಯು ಸಹಜವಾಗಿಯೇ ಅನುಮಾನ ಗಳನ್ನು ಹುಟ್ಟುಹಾಕುತ್ತದೆ.