Wednesday, December 12, 2018

ದ ವೈರ್, ದ ಟ್ರಿಬ್ಯೂನ್, ದ ಸಿಟಿಝನ್ ಮತ್ತು ಮಾನನಷ್ಟ



ದ ಎಕನಾಮಿಕ್ಸ್ ಟೈಮ್ಸ್
ಫಿನಾನ್ಶಿಯಲ್ ಎಕ್ಸ್ ಪ್ರೆಸ್
ದ ವೀಕ್
ದ ಟ್ರಿಬ್ಯೂನ್
ದ ವೈರ್
ಎನ್‍ಡಿಟಿವಿನ್ಯಾಶನಲ್ ಹೆರಾಲ್ಡ್
ಬ್ಲೂಂಬರ್ಗ್ ನ್ಯೂಸ್
2018 ಜನವರಿಯಿಂದ ಈ ವರೆಗೆ ಗುಜರಾತ್‍ನ ಅಹ್ಮದಾಬಾದ್ ನ್ಯಾಯಾಲಯವೊಂದರಲ್ಲೇ  ಮಾನನಷ್ಟ ಮೊಕದ್ದಮೆಯನ್ನು ಜಡಿಸಿಕೊಂಡ  ಪತ್ರಿಕೆಗಳಿವು. ಕೇಸು ಹಾಕಿದ್ದು ಅನಿಲ್ ಅಂಬಾನಿಯ ರಿಲಯನ್ಸ್ ಸಂಸ್ಥೆಗಳು. ಈ ಕೇಸುಗಳಿಗೆ ಕಾರಣ ಒಂದೇ- ರಫೇಲ್ ಒಪ್ಪಂದ.  ಇತ್ತೀಚೆಗಷ್ಟೇ ದ ವೈರ್ ಪತ್ರಿಕೆಯ ಮೇಲೆ 6 ಸಾವಿರ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ. 2018 ಆಗಸ್ಟ್  23ರಂದು ದ ವೈರ್ ಪತ್ರಿಕೆಯು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ನಡೆಸಿದ ಸಂವಾದದ ವೀಡಿಯೋವೊಂದನ್ನು Rafael Deal:  Understanding the controvercy  ಎಂಬ ಹೆಸರಲ್ಲಿ ತನ್ನ ವೆಬ್‍ಸೈಟ್‍ನಲ್ಲಿ ಪ್ರಸಾರ ಮಾಡಿತ್ತು. ಹಾಗಂತ, ದ ವೈರ್  ಎಂಬುದು ಪ್ರಜಾವಾಣಿ, ವಿಜಯ ಕರ್ನಾಟಕ, ವಾರ್ತಾಭಾರತಿಯಂತೆ ಕಾಗದದಲ್ಲಿ ಪ್ರಕಟವಾಗುವ ಪತ್ರಿಕೆಯಲ್ಲ. ಅದೊಂದು ವೆಬ್  ಪೋರ್ಟಲ್. ಇಂಟರ್ ನೇಟ್ ಮಾಧ್ಯಮ. ಅದನ್ನು ಓದಬೇಕಾದರೆ ನಿಮ್ಮಲ್ಲಿ ಇಂಟರ್ ನೆಟ್ ಸಂಪರ್ಕವಿರುವ ಕಂಪ್ಯೂಟರ್ ಅಥವಾ ಸ್ಮಾರ್ಟ್  ಫೋನ್ ಇರಲೇಬೇಕು. ಇಂಟರ್ ನೆಟ್ ಮಾಧ್ಯಮ ಕ್ಷೇತ್ರದಲ್ಲಿ ದ ವೈರ್‍ಗೆ ಬಹುದೊಡ್ಡ ಗೌರವವಿದೆ. ನ್ಯಾಯಪರ ಪತ್ರಿಕೋದ್ಯಮವನ್ನು  ನೆಚ್ಚಿಕೊಂಡವರು ಹುಟ್ಟುಹಾಕಿದ ಮಾಧ್ಯಮ ಎಂದು ಅದು ಗುರುತಿಸಿಕೊಳ್ಳುತ್ತಿದೆ. ಮಾಧ್ಯಮ ರಂಗದ ಹಲವರನ್ನು ಬಿಜೆಪಿ ಖರೀದಿಸಿಕೊಂಡಿದೆ ಎಂಬ ಆರೋಪಗಳ ನಡುವೆ ಕೈ-ಬಾಯಿ ಶುದ್ಧವಾಗಿಟ್ಟುಕೊಂಡಿರುವ ಪತ್ರಿಕೆಯಾಗಿ ದ ವೈರ್ ವಿಶ್ವಾಸಕ್ಕೆ ಪಾತ್ರವಾಗಿದೆ.  ಬಹುಶಃ,

ಇಂಥ ಶುದ್ಧ ಪತ್ರಿಕೋದ್ಯಮವನ್ನು ನಡೆಸಿಕೊಂಡಿರುವುದಕ್ಕೋ ಏನೋ ಅದು ಸದ್ಯ ಮೈಮೇಲೆಳೆದುಕೊಂಡಿರುವ ಕೇಸುಗಳನ್ನು  ನೋಡಿದರೆ ಅಚ್ಚರಿಯಾಗಬಹುದು. ಅನಿಲ್ ಅಂಬಾನಿಯರಂತೆಯೇ ಅದಾನಿ ಕೂಡ ದ ವೈರ್ ನ ಮೇಲೆ ಮೂರು ಕ್ರಿಮಿನಲ್ ಮತ್ತು  ಮೂರು ಸಿವಿಲ್ ಕೇಸುಗಳನ್ನೊಳಗೊಂಡಂತೆ 300 ಕೋಟಿ ರೂಪಾಯಿ ಗಳ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಬಿಜೆಪಿಯ  ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಮಗ ಒಂದು ಕ್ರಿಮಿನಲ್ ಮತ್ತು ಒಂದು ಸಿವಿಲ್ ಕೇಸುಗಳನ್ನು ದಾಖಲಿಸಿದ್ದು 100 ಕೋಟಿ ರೂಪಾಯಿ  ಮಾನನಷ್ಟ ಪರಿಹಾರವನ್ನು ಕೋರಿದ್ದಾರೆ. ಬಿಜೆಪಿಯ ಸಂಸದ ರಾಜೀವ್ ಚಂದ್ರಶೇಖರ್ ರಿಂದ 40 ಕೋಟಿ ರೂಪಾಯಿ ಮತ್ತು ಶ್ರೀ ಶ್ರೀ  ರವಿಶಂಕರ್ ರಿಂದ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಯನ್ನೂ ದ ವೈರ್ ಎದುರಿಸುತ್ತಿದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ  ಸಂವಾದದ ವೀಡಿಯೋವನ್ನು ಪ್ರಸಾರ ಮಾಡಿದುದಕ್ಕಾಗಿ ರಿಲಯನ್ಸ್ ಸಂಸ್ಥೆಯು ದ ವೈರ್‍ ನ  ಸ್ಥಾಪಕ ಸಂಪಾದಕ ಮಂಗಳಂ ಶ್ರೀನಿವಾಸನ್  ವೇಣು, ಚರ್ಚೆಯಲ್ಲಿ ಭಾಗವಹಿಸಿರುವ ರಕ್ಷಣಾ ತಜ್ಞ ಅಜಯ್ ಶುಕ್ಲ ಮತ್ತು ವಿಶ್ಲೇಷಕ ಹಾಪಿಮೋನ್ ಜಾಕಬ್ ಇವರ ಮೇಲೆ ಕೇಸು  ದಾಖಲಿಸಿದೆ. ಹಾಗಂತ,
ಈ ಪ್ರಕ್ರಿಯೆ ತೀರಾ ಸರಳ ಅಲ್ಲ.
ಬೆಂಗಳೂರಿನಲ್ಲೊ , ಚೆನ್ನೈ, ಮುಂಬೈನಲ್ಲೋ  ಕೇಂದ್ರ ಕಚೇರಿಯನ್ನು ಹೊಂದಿರುವ ಪತ್ರಿಕೆಯೊಂದರ ಮೇಲೆ ದೂರದ ಅಹ್ಮದಾಬಾದ್‍ನಲ್ಲಿ  ಕೇಸು ದಾಖಲಿಸುವುದೆಂದರೆ ಅದನ್ನು ಎದುರಿಸುವುದು ಸುಲಭ ಅಲ್ಲ. ಅಹ್ಮದಾಬಾದ್‍ನ ನ್ಯಾಯಾಲಯಕ್ಕೆ ಹಾಜರಾಗುವುದೆಂದರೆ, ಅದಕ್ಕೆ  ಒಂದು ದಿನ ಮೊದಲೇ ತಯಾರಾಗಬೇಕು. ಸಮಯ ಉಳಿತಾಯದ ದೃಷ್ಟಿಯಿಂದ ವಿಮಾನ ಪ್ರಯಾಣ ಉತ್ತಮವಾದರೂ ಖರ್ಚು  ವೆಚ್ಚದ ದೃಷ್ಟಿಯಿಂದ ದುಬಾರಿ. ಯಾವುದೇ ಕೇಸು ಒಂದೆರಡು ಹಾಜರಾತಿಯಲ್ಲಿ ಮುಗಿಯುವುದಿಲ್ಲ. ಅದೊಂದು ದೀರ್ಘ ಕತೆ. ಈ ಕತೆ  ಮುಗಿಯುವಾಗ ವಕೀಲರ ಜೇಬು ತುಂಬಿರುತ್ತದೆ. ಫಿರ್ಯಾದು ದಾರ ಬಸವಳಿದಿರುತ್ತಾನೆ. ಪತ್ರಿಕೆಗೆ ಸಂಬಂಧಿಸಿ ಹೇಳುವು ದಾದರೆ ಕೇಸು  ಗೆದ್ದರೂ ಸಂತಸ ಪಡುವ ಸ್ಥಿತಿಯಲ್ಲಿ ಪತ್ರಿಕೆ ಇರುವುದಿಲ್ಲ. ಅದಾಗಲೇ ವಿಚಾರಣೆ, ಪ್ರಯಾಣ, ಖರ್ಚು-ವೆಚ್ಚದ ಹೆಸರಲ್ಲಿ ಪತ್ರಿಕೆ ಸೋಲನ್ನು  ಒಪ್ಪಿಕೊಂಡಿರುತ್ತದೆ. ಇನ್ನು,
ಕೇಸು ದಾಖಲಾಗುವಾಗ ಒಂದು ಪತ್ರಿಕೆಯಲ್ಲಿದ್ದ ಪತ್ರಕರ್ತ ಕೇಸು ಮುಗಿಯುವಾಗ ಇನ್ನೊಂದು ಪತ್ರಿಕೆಯಲ್ಲಿ  ಕೆಲಸ ಮಾಡುತ್ತಿರುವುದೂ ಇದೆ. ಇದು ಆತ/ಕೆ/ಯ ಪಾಲಿಗೆ ತೀರಾ ಜಟಿಲ ಸಮಸ್ಯೆ. ಆದ್ದರಿಂದ, ಹೀಗೆಲ್ಲ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ಸರಕಾರಕ್ಕೆ ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಇಷ್ಟವಾಗುವ ಸುದ್ದಿ, ವಿಶ್ಲೇಷಣೆಗಳನ್ನು ಮಾಡಿ ಆರಾಮವಾಗಿರುವುದು  ಒಳ್ಳೆಯದಲ್ಲವೇ ಎಂದು ಓರ್ವ ಪತ್ರಕರ್ತ ಮತ್ತು ಒಂದು ಪತ್ರಿಕೆ ಆಲೋಚಿಸಿದರೆ ಅದನ್ನು ಅಸಾಮಾನ್ಯ ಎಂದು ತಳ್ಳಿ ಹಾಕಲಾಗದು.  ಅಂದಹಾಗೆ,
ಅನಿಲ್ ಅಂಬಾನಿಯವರ ರಿಲಯನ್ಸ್ ಸಂಸ್ಥೆಯು ಪತ್ರಿಕೆ ಗಳ ಮೇಲೆ ಮಾತ್ರ ಕೇಸು ದಾಖಲಿಸಿರುವುದಲ್ಲ. ರಾಜಕಾರಣಿಗಳ ಮೇಲೂ  ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. ಒಂದು ಕಡೆ, The Week ಪತ್ರಿಕೆಯ ಪ್ರಕಾಶಕ ಜಾಕಬ್ ಮ್ಯಾಥ್ಯೂ, ಸಂಪಾದಕ ಫಿಲಿಪ್  ಮ್ಯಾಥ್ಯೂ, ವರದಿಗಾರ ನಚಿಕೇತ್ ಕೌಶಿಕ್‍ರ ಮೇಲೆ ಕೇಸು ದಾಖಲಿಸುವಾಗ, ಇನ್ನೊಂದು ಕಡೆ- ಕಾಂಗ್ರೆಸ್‍ನ ಸಂಜಯ್ ನಿರುಪಮ್ ಅವರ  ಮೇಲೆ 5 ಸಾವಿರ ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್  ಸಿಂಗ್, ಕಾಂಗ್ರೆಸ್‍ನ ವಕ್ತಾರ ಪ್ರಿಯಾಂಕ್ ಚತುರ್ವೇದಿ, ಸುನಿಲ್ ಕುಮಾರ್ ಜಾಕ್ಕರ್, ಉಮ್ಮನ್ ಚಾಂಡಿ ಸೇರಿದಂತೆ 8 ಮಂದಿ  ರಾಜಕಾರಣಿಗಳನ್ನು ಅಹ್ಮದಾಬಾದ್ ನ್ಯಾಯಾಲಯದ ಕಟಕಟೆಯಲ್ಲಿ ತಂದು ನಿಲ್ಲಿಸಿದೆ. ನಿಜವಾಗಿ,
ರಿಲಯನ್ಸ್ ಸಂಸ್ಥೆಯ ವತಿಯಿಂದ ಮಾಡಲಾದ ಒಂದು ವ್ಯವಸ್ಥಿತ ತಂತ್ರದ ಭಾಗ ಈ ಕೇಸು. ರಫೇಲ್‍ನ ವಿಷಯದಲ್ಲಿ ರಿಲಯನ್ಸ್ ಅನ್ನು  ಯಾರು ಉಲ್ಲೇಖಿಸುತ್ತಾರೋ ಅವರಿಗೆ ಕೇಸು ಕಾದಿದೆ ಎಂಬ ಸಂದೇಶವನ್ನು ರವಾನಿಸುವ ಜಾಣತನ ಇದರ ಹಿಂದೆ ಕೆಲಸ ಮಾಡಿದೆ  ಎಂಬುದು ನಿಸ್ಸಂಶಯ. ಯಾವಾಗ ಪತ್ರಿಕೆಗಳ ವಿರುದ್ಧ ಸಾವಿರಾರು ಕೋಟಿ ರೂಪಾಯಿಗಳ ಕೇಸು ದಾಖಲಾಗತೊಡಗುತ್ತದೋ ಪತ್ರಕರ್ತ  ಮತ್ತು ಪತ್ರಿಕೆಗೆ ಭಯ ಪ್ರಾರಂಭವಾಗುತ್ತದೆ. ಯಾವುದೇ ಮಾಹಿತಿಯನ್ನೂ ಪ್ರಕಟಿಸುವ ಬಗ್ಗೆ ಹಿಂದೆ-ಮುಂದೆ ನೋಡಬೇಕಾಗುತ್ತದೆ.  ನಮಗ್ಯಾಕೆ ರಿಸ್ಕ್ ಎಂಬ ಮನೋಭಾವ ಬೆಳೆದು ಬಿಡುತ್ತದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ತನಿಖಾ ಬರಹಗಳು  ಕಾಣಿಸಿಕೊಳ್ಳದೇ ಇರುವುದಕ್ಕೆ ರಿಲಯನ್ಸ್ ಸಂಸ್ಥೆಯ ಈ ‘ಮಾನನಷ್ಟ ಕೇಸುಗಳು’ ಒಂದು ಪಾತ್ರವನ್ನು ನಿರ್ವಹಿಸಿರಬಹುದು ಎಂಬ ಸಂಶಯಕ್ಕೆ ಆಧಾರವೂ ಇದುವೇ. ರಫೇಲ್‍ನ ಬಗ್ಗೆ ಚರ್ಚೆ ಮಾಡುವ ಯಾರೇ ಆಗಲಿ, ಡಸಾಲ್ಟ್ ಮತ್ತು ರಿಲಯನ್ಸ್ ಸಂಸ್ಥೆಗಳ ಪಾಲುದಾರಿಕೆಯ ಬಗ್ಗೆ ಮಾತಾಡಲೇಬೇಕಾಗುತ್ತದೆ. ಇಡೀ ಒಪ್ಪಂದ ಪ್ರಶ್ನಾರ್ಹವಾಗಿರುವುದೇ ಈ ಪಾಲುದಾರಿಕೆಯಿಂದಾಗಿ. ಆದರೆ
ಈ  ಪಾಲುದಾರಿಕೆಯನ್ನು ಕೆದಕಬೇಕೆಂದರೆ ರಿಲಯನ್ಸ್‍ಗೆ ಮುಖಾ ಮುಖಿಯಾಗಲೇಬೇಕು. ತನ್ನಲ್ಲಿರುವ ಮಾಹಿತಿಯನ್ನು ಮುಂದಿಟ್ಟು ಕೊಂಡು  ಪತ್ರಕರ್ತ ವಿಶ್ಲೇಷಣೆ ನಡೆಸಲೇಬೇಕು. ಅಂತಹ ಸಂದರ್ಭ ದಲ್ಲಿ ಆತ ರಿಲಯನ್ಸನ್ನು ಪ್ರಶ್ನಿಸಬೇಕಾಗಬಹುದು. ಒಪ್ಪಂದದ ಸಮಯ, ಸಂದರ್ಭ, ಒಕ್ಕಣೆಗಳನ್ನು ಅನುಮಾನಿಸಿ ಮಾತಾಡಬೇಕಾಗಬಹುದು. ಒಟ್ಟು ಬೆಳವಣಿಗೆಯ ಬಗ್ಗೆ ತನ್ನದೇ ಅಭಿಪ್ರಾಯಗಳನ್ನು ಮಂಡಿಸಬೇಕಾಗಿ  ಬರಬಹುದು. ಆದರೆ, ಹಾಗೆ ಮಾಡಿದರೆ ಕೇಸು ಹಾಕುತ್ತೇನೆ ಎಂದು ರಿಲಯನ್ಸ್ ಸಂಸ್ಥೆ ಬೆತ್ತ ಹಿಡಿದು ನಿಂತಿರುವಾಗ ಒಂದು ಪತ್ರಿಕೆ ಮತ್ತು  ಪತ್ರಕರ್ತ ಎರಡೆರಡು ಬಾರಿ ಯೋಚಿಸುತ್ತಾನೆ. ಒಂದು ರೀತಿಯಲ್ಲಿ,
ಬೋಫೋರ್ಸ್, ಶವಪೆಟ್ಟಿಗೆ, 2ಜಿ ಸ್ಪೆಕ್ಟ್ರಂ ಇತ್ಯಾದಿ ಹಗರಣಗಳ ಬಗ್ಗೆ ಈ ದೇಶದ ಮಾಧ್ಯಮಗಳು ನಡೆಸಿರುವ ಚರ್ಚೆ ಮತ್ತು ಬರೆದಿರುವ  ಬರಹಗಳಿಗೆ ಹೋಲಿಸಿದರೆ ರಫೇಲ್‍ನ ಬಗ್ಗೆ ಏನನ್ನೂ ಬರೆದಿಲ್ಲ ಎಂದೇ ಹೇಳಬಹುದು. ಇದಕ್ಕೆ, ಮಾಧ್ಯಮಗಳ ಮೋದಿ ಪ್ರೇಮ ಒಂದು  ಕಾರಣವಾಗಿದ್ದರೆ, ಇನ್ನೊಂದು ಬಲವಾದ ಕಾರಣ- ರಿಲಯನ್ಸ್ ನ ಮಾನನಷ್ಟ ಮೊಕದ್ದಮೆ ಎಂದೇ ಅನಿಸುತ್ತದೆ. ಮಾತ್ರವಲ್ಲ, ಪರದೆಯ  ಹಿಂದೆ ನಿಂತು ಬಿಜೆಪಿಯೇ ಈ ಕೆಲಸ ಮಾಡಿಸುತ್ತಿದೆಯೇ ಎಂಬ ಅನುಮಾನವೂ ಇದೆ. ಅಹ್ಮದಾಬಾದ್ ನ್ಯಾಯಾಲಯದಲ್ಲಿ ರಿಲಯನ್ಸ್  ದಾಖಲಿಸಿರುವ 28 ಕೇಸುಗಳೂ ರಫೇಲ್‍ಗೆ ಸಂಬಂಧಿಸಿದವು. ಒಂದುವೇಳೆ, ಬೋಫೋರ್ಸ್ ಹಗರಣದ ವೇಳೆ ಮಾಧ್ಯಮಗಳ ಮೇಲೆ ಇಂಥದ್ದೊಂದು  ತೂಗುಗತ್ತಿ ನೇತಾಡಿರುತ್ತಿದ್ದರೆ ಏನಾಗುತ್ತಿತ್ತು? ತನಿಖಾ ಬರಹ ಪ್ರಕಟಿಸುವ ಧೈರ್ಯವನ್ನು ಯಾವ ಪತ್ರಿಕೆ ತೋರುತ್ತಿತ್ತು? ತನಿಖಾ  ಬರಹ, ಸುದ್ದಿ ವಿಶ್ಲೇಷಣೆಗಳಲ್ಲಿ ಯಾವ ಬಗೆಯ ಜಾಗ್ರತೆಯನ್ನು ಪಾಲಿಸಲಾಗುತ್ತಿತ್ತು?
21ನೇ ಶತಮಾನದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಬಹುದೊಡ್ಡ ಬದಲಾವಣೆ ಏನೆಂದರೆ, ಕಾರ್ಪೋರೇಟ್ ಸಂಸ್ಥೆಗಳು ಮಾಧ್ಯಮ  ಕ್ಷೇತ್ರವನ್ನು ಒಂದೋ ಕೊಂಡುಕೊಂಡಿರುವುದು ಇಲ್ಲವೇ ಕಾನೂನಿನ ಮೂಲಕ ಬೆದರಿಕೆ ಒಡ್ಡುತ್ತಿರುವುದು. ನಿಜವಾಗಿ, ಕಾರ್ಪೋರೇಟ್ ಸಂಸ್ಥೆಯೊಂದರಿಂದ ಖರೀದಿಗೊಳಗಾಗಿರುವ ಮಾಧ್ಯಮ ಸಂಸ್ಥೆಯು ಇನ್ನೊಂದು ಕಾರ್ಪೋರೇಟ್ ಸಂಸ್ಥೆಯ ವಿರುದ್ಧ ಬರೆಯುವುದಕ್ಕೆ ಸಾಧ್ಯವಿಲ್ಲ.  ಮಾರುಕಟ್ಟೆಯಲ್ಲಿ ಆ ಕಂಪೆನಿಗಳ ನಡುವೆ ಸ್ಪರ್ಧೆಯಿದ್ದರೆ ಮಾತ್ರ ಒಂದು ಸಂಸ್ಥೆ ನಡೆಸುತ್ತಿರುವ ಪತ್ರಿಕೆ ಇನ್ನೊಂದು ಸಂಸ್ಥೆಯ ಒಳಸುಳಿಗಳನ್ನು ಬಿಚ್ಚಿಡಬಲ್ಲುದು. ದೇಶದಲ್ಲಿರುವ ಮಾಧ್ಯಮ ಸಂಸ್ಥೆಗಳನ್ನೇ ಪರಿಶೀಲಿಸಿ. ಮುಖ್ಯವಾಹಿನಿಯ ಹೆಚ್ಚಿನ ಮಾಧ್ಯಮ ಸಂಸ್ಥೆಗಳು  ಯಾವುದಾದರೊಂದು ಕಾರ್ಪೋರೇಟ್ ಕುಲದ ಒಡೆತನದಲ್ಲಿಯೋ ಮುಲಾಜಿನಲ್ಲಿಯೋ ಇರುವುದು ಗೊತ್ತಾಗುತ್ತದೆ. ಮಾತ್ರವಲ್ಲ, ನಿರ್ದಿಷ್ಟ  ರಾಜಕೀಯ ಪಕ್ಷದ ವಕ್ತಾರಿಕೆ ನಡೆಸುವಷ್ಟು ಶರಣಾಗತಿಯ ಮನಸ್ಥಿತಿಯೂ ಇದೆ. ಇಂಥ ಸ್ಥಿತಿಯಲ್ಲಿ,
ಪತ್ರಕರ್ತನೋರ್ವ ಕಾರ್ಪೋರೇಟ್  ಸಂಸ್ಥೆಯ ವಿರುದ್ಧ ಮಾತಾಡುವುದು ಸುಲಭ ಅಲ್ಲ. ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಸಂಪಾದಕ ಝಫರ್ ಅಗಾ ಮತ್ತು ಪತ್ರಕರ್ತ ವಿಶ್ವದೀಪಕ್‍ರು 5000 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಇವತ್ತು ಎದುರಿಸುತ್ತಿದ್ದರೆ ಅದಕ್ಕೆ ರಫೇಲ್ ಒಪ್ಪಂದದ ಬಗ್ಗೆ ಅವರು  ಪತ್ರಿಕೆಯಲ್ಲಿ ವ್ಯಕ್ತ ಪಡಿಸಿರುವ ಅಭಿಪ್ರಾಯಗಳೇ ಕಾರಣ. ದ ಸಿಟಿಝನ್ ವೆಬ್‍ಸೈಟ್‍ನ ಸಂಪಾದಕಿ ಸೀಮಾ ಮುಸ್ತಫಾ 7 ಸಾವಿರ ಕೋಟಿ  ರೂ., ಡಿಎನ್‍ಎ ಪತ್ರಿಕೆಯ ಅತೀಕ್ ಶೇಖ್ 2000 ಕೋಟಿ ರೂಪಾಯಿ ಮಾನ ನಷ್ಟ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಎನ್‍ಡಿಟಿವಿಯ  ಸ್ಥಾಪಕ ಪ್ರಣಯ್ ರಾಯ್, ದ ಟ್ರಿಬ್ಯೂನ್‍ನ ಸಂಪಾದಕ ರಾಜೇಶ್ ರಾಮಚಂದ್ರನ್, ಫಿನಾನ್ಶಿಯಲ್ ಟೈಮ್ಸ್ ನ ಮುಂಬೈ ವರದಿಗಾರ ಸಿಮನ್  ಚುಂಡಿಯಂಥ ಹಲವು ಪತ್ರಕರ್ತರು ರಿಲಯನ್ಸ್ ದಾಖಲಿಸಿರುವ ಕೋಟಿಗಟ್ಟಲೆ ಮಾನನಷ್ಟು ಮೊಕದ್ದಮೆ ಯನ್ನು ಎದುರಿಸುತ್ತಿದ್ದಾರೆ. ನಿಜ,
ಬರೆಯುವುದು ಅಷ್ಟು ಸುಲಭ ಅಲ್ಲ.

Thursday, December 6, 2018

ನಾಲ್ಕೂವರೆ ವರ್ಷಗಳ ಹಿಂದಿನ ಆ ವಾಕ್ಯವೂ ಜುಮ್ಲಾವೇ?



 “BJP believes that political stability, progress and peace in the region are essential for South Asia’s growth and development. The Congress-led UPA [United Progressive Alliance] has failed to establish enduring friendly and cooperative relations with India’s neighbours. India’s relations with traditional allies have turned cold. India and its neighbours have drifted apart. The absence of statecraft has never been felt so acutely as today.”

 2014ರಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ ಚುನಾವಣಾ ಪ್ರಣಾಳಿಕೆಯ ಒಂದು ಭಾಗ ಇದು.
`ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧ ಹಳಸಿದೆ. ಎಷ್ಟೆಂದರೆ- ಈ ಹಿಂದೆಂದೂ ಸಂಬಂಧ ಇಷ್ಟು ತಳಮಟ್ಟಕ್ಕೆ ಹೋಗಿರಲಿಲ್ಲ. `ಬಿಜೆಪಿ ಈ ಬಗೆಯ ವಾತಾವರಣವನ್ನು ಬಯಸುವುದಿಲ್ಲ. ದಕ್ಷಿಣ ಏಶ್ಯಾವು ಅಭಿವೃದ್ಧಿ ಹೊಂದಬೇಕಾದರೆ, ಈ ಪ್ರದೇಶದಲ್ಲಿ ಶಾಂತಿ, ರಾಜಕೀಯ ಸ್ಥಿರತೆ ಇರಬೇಕಾದುದು ಬಹುಮುಖ್ಯ ಎಂಬುದಾಗಿ ಬಿಜೆಪಿ ಭಾವಿಸುತ್ತದೆ ಎಂದು ಇದನ್ನು ಅನುವಾದಿಸಬಹುದು.
ನೇಪಾಳ
ಚೀನಾ
ಭೂತಾನ್
ಮಾಲ್ದೀವ್ಸ್
ಶ್ರೀಲಂಕಾ
ಪಾಕಿಸ್ತಾನ್
ಬಾಂಗ್ಲಾ
ಅಫಘಾನಿಸ್ತಾನ್
ಬಿಜೆಪಿಯ ಪ್ರಣಾಳಿಕೆಗೆ ನಾಲ್ಕೂವರೆ  ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ ಆ ಪ್ರಣಾಳಿಕೆಯ ಉದ್ದೇಶ ಎಷ್ಟಂಶ ಈಡೇರಿದೆ? ಪ್ರಧಾನಿ ನರೇಂದ್ರ ಮೋದಿಯವರ ಆರಂಭ ಅದ್ಭುತವಾಗಿತ್ತು. ಭಾರತದ ಇನ್ಯಾವ ಪ್ರಧಾನಿಗಳೂ ಅಯೋಜಿಸಿರದ ವಿಶಿಷ್ಟ ಪ್ರಮಾಣ ವಚನ ಕಾರ್ಯಕ್ರಮವನ್ನು ಅವರು ಏರ್ಪಡಿಸಿದರು. ಸಾರ್ಕ್ ರಾಷ್ಟ್ರಗಳ ಅಧ್ಯಕ್ಷರನ್ನು ತನ್ನ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಹೊಸತೊಂದು ಕ್ರಮವನ್ನು ಹುಟ್ಟು ಹಾಕಿದರು. ಜಪಾನ್ ಭೇಟಿಯಲ್ಲಿದ್ದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರನ್ನು ಬಿಟ್ಟರೆ ಉಳಿದವರೆಲ್ಲ ಆ ಆಹ್ವಾನವನ್ನು ಸ್ವೀಕರಿಸಿದರು. ಪಾಕ್ ಪ್ರಧಾನಿ ನವಾಝ್ ಶರೀಫ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾದರು. ಆ ಬಳಿಕ ನಾಲ್ಕೂವರೆ ವರ್ಷಗಳು ಉರುಳಿ ಹೋಗಿವೆ. ಬಿಜೆಪಿಯ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಅವರು 2013ರಲ್ಲಿ ಮನಮೋಹನ್ ಸಿಂಗ್ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. `ಚೀನಾ ಬಿಡಿ, ಪುಟ್ಟ ಮಾಲ್ದೀವ್ಸ್ ಅನ್ನು ನಿಭಾಯಿಸಲೂ ಭಾರತಕ್ಕೆ ಸಾಧ್ಯವಾಗುತ್ತಿಲ್ಲ' ಎಂದು ದೂರಿದ್ದರು. ಈಗ ಅವರ ಅಭಿಪ್ರಾಯ ಏನಿರಬಹುದು? ಈಗ ಭಾರತ ಮತ್ತು ಮಾಲ್ದೀವ್ಸ್‍ಗಳ ನಡುವಿನ ಸಂಬಂಧ ಎಷ್ಟು ದುರ್ಬಲ ಆಗಿದೆಯೆಂದರೆ, ಮಾಲ್ದೀವ್ಸ್ ಬಹುತೇಕ ಚೀನಾದ ವಸಾಹತಿನಂತಾಗಿ ಬಿಟ್ಟಿದೆ. ಬಂದರು ಅಭಿವೃದ್ಧಿಯಲ್ಲಿ ಭಾರತದ ಹೂಡಿಕೆಯನ್ನು ರದ್ದು ಪಡಿಸುವಷ್ಟರ ಮಟ್ಟಿಗೆ ಸಂಬಂಧ ಹಳಸಿ ಹೋಗಿದೆ. 2016ರಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಯಮೀನ್ ಅಬ್ದುಲ್ ಗಯ್ಯೂಂ ಭಾರತಕ್ಕೆ ಭೇಟಿ ಕೊಟ್ಟದ್ದು ಮತ್ತು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಮಾಲ್ದೀವ್ಸ್‍ಗೆ ಭೇಟಿ ಕೊಟ್ಟದ್ದು ನಡೆಯಿತಾದರೂ ಅದೊಂದು ಪ್ರವಾಸ ಎಂಬುದಕ್ಕಿಂತ ಹೆಚ್ಚಿಗೇನೂ ಮಹತ್ವ ಪಡೆಯದಾಯಿತು.

     ನೇಪಾಳ ಮತ್ತು ಶ್ರೀಲಂಕಾಗಳು ಭಾರತದ ಪಾಲಿಗೆ ಅತಿ ಮಹತ್ವದ ಎರಡು ನೆರೆ ರಾಷ್ಟ್ರಗಳು. ಇನ್ನೊಂದು ಭೂತಾನ್. ಈ ಮೂರೂ ರಾಷ್ಟ್ರಗಳ ಮೇಲೆ ಪ್ರಾಬಲ್ಯ ಸ್ಥಾಪಿಸಲು ಭಾರತ ಮತ್ತು ಚೀನಾ ಬಹು ಹಿಂದಿನಿಂದಲೂ ಶ್ರಮ ನಡೆಸುತ್ತಲೇ ಬಂದಿದೆ. 1980ರಲ್ಲಿ ಭಾರತದ ಶಾಂತಿ ಪಾಲನಾ ಪಡೆಯನ್ನು ರಾಜೀವ್ ಗಾಂಧಿಯವರು ಲಂಕಾಕ್ಕೆ ಕಳುಹಿಸಿದುದಕ್ಕೆ ಈ ಪೈಪೋಟಿಯೇ ಕಾರಣ. ಎಲ್‍ಟಿಟಿಇಯ ನೆಪದಲ್ಲಿ ಚೀನಾದ ಸೇನೆಯು ಶ್ರೀಲಂಕಾವನ್ನು ಪ್ರವೇಶಿಸಿದರೆ, ಅದರಿಂದ ಲಂಕಾವು ಭಾರತಕ್ಕೆ ಇನ್ನೊಂದು ಮಗ್ಗುಲು ಮುಳ್ಳಾಗಿ ಕಾಡಲಿದೆ ಎಂಬ ಭಯ ರಾಜೀವ್‍ರನ್ನು ಕಾಡಿತ್ತು. ಮನ್‍ಮೋಹನ್ ಸಿಂಗ್ ಅವಧಿಯಲ್ಲಿ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಎನ್ನಬಹುದಾದ ಸಂಬಂಧ ಇತ್ತಾದರೂ ಮೋದಿಯವರ ಅವಧಿಯಲ್ಲಿ ಆ ಸಂಬಂಧವೂ ಹಳಸಿದೆ. ಕಳೆದ ಚುನಾವಣೆಯ ಬಳಿಕವಂತೂ ಶ್ರೀಲಂಕಾದಲ್ಲಿ ಚೀನಾ ಪರ ವಾತಾವರಣವಿದೆ. ಅಲ್ಲಿನ ಅಧ್ಯಕ್ಷ ಸಿರಿಸೇನಾ ಅವರ ಚೀನಾಪ್ರೇಮ ಬಹುತೇಕ ಬಹಿರಂಗವಾಗಿಯೇ ಇದೆ. ಕಳೆದ ಚುನಾವಣೆಯಲ್ಲಿ ಭಾರತದ ಗುಪ್ತಚರ ಏಜೆನ್ಸಿಯ (RAW) ವಿರುದ್ಧ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ವರದಿಯಾಗಿತ್ತು. ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಆರೋಪವನ್ನು ಅದು ಹೊರಿಸಿತ್ತಲ್ಲದೇ RAWದ ಕಚೇರಿಯನ್ನು ತೆರವುಗೊಳಿಸುವಂತೆ ಅದರ ಮುಖ್ಯಸ್ಥರಿಗೆ ಸೂಚನೆ ನೀಡಿತ್ತು ಎಂಬ ವರದಿಗಳಿದ್ದುವು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರೂ ಮತ್ತು ಅಧ್ಯಕ್ಷ ಸಿರಿಸೇನಾ ಭಾರತವನ್ನು ಸಂದರ್ಶಿಸಿದ್ದರೂ ಶ್ರೀಲಂಕಾದಲ್ಲಿ ಚೀನಾದ ಬಹುಕೋಟಿ ಹೂಡಿಕೆಯನ್ನು ತಪ್ಪಿಸಲು ಈ ಇಬ್ಬರಿಗೂ ಸಾಧ್ಯವಾಗಿಲ್ಲ. ವಲಯದ ಸ್ಥಿರತೆಯ ದೃಷ್ಟಿಯಿಂದ ಭಾರತಕ್ಕೆ ಶ್ರೀಲಂಕಾ ಅತಿ ಮುಖ್ಯ ದೇಶ. 2013ರಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯೂ ಇದನ್ನೇ ಹೇಳುತ್ತದೆ. ಆದರೆ,

    ನಾಲ್ಕೂವರೆ ವರ್ಷ ಗಳು ಕಳೆದ ಬಳಿಕವೂ ಮೋದಿಯವರಿಂದ ವಿಶೇಷವಾದುದೇನನ್ನೂ ಮಾಡಲು ಸಾಧ್ಯವಾಗಿಲ್ಲವೆಂದರೆ ಏನೆನ್ನಬೇಕು? ಮೋದಿಯವರು ಭೇಟಿ ನೀಡಿ ಸಾಧಿಸಲಾಗದ್ದನ್ನು ಚೀನಾವು ಭೇಟಿ ನೀಡದೆಯೇ ಮತ್ತು ಬಹಿರಂಗ ಹೇಳಿಕೆಗಳನ್ನು ಕೊಡದೆಯೇ ಸಾಧಿಸುತ್ತಿದೆ. ಇದನ್ನು ನೇಪಾಳಕ್ಕೆ ಸಂಬಂಧಿಸಿಯೂ ಹೇಳಬಹುದಾಗಿದೆ. ಭಾರತ ಮತ್ತು ಚೀನಾಕ್ಕೆ ಹೋಲಿಸಿ ನೋಡುವುದಾದರೆ ಎಲ್ಲ ರೀತಿಯಲ್ಲೂ ನೇಪಾಳಕ್ಕೆ ಅಚ್ಚು-ಮೆಚ್ಚಿನ ರಾಷ್ಟ್ರವಾಗಬೇಕಾದದ್ದು ಭಾರತವೇ. ಭಾರತೀಯ ಸಂಸ್ಕೃತಿ ನೇಪಾಳದಲ್ಲೂ ಇದೆ. ಹಿಂದೂಗಳೇ ಅಧಿಕವಿರುವ ರಾಷ್ಟ್ರ ನೇಪಾಳ. ಧಾರಾಳ ದೇವಾಲಯಗಳು ಇರುವುದೂ ನೇಪಾಳದಲ್ಲೇ. ಆದರೆ, ರಾಜಾಳ್ವಿಕೆ ಪತನಗೊಂಡ ಬಳಿಕದ ನೇಪಾಳವು ಭಾರತ ಸ್ನೇಹಿಯಾಗಿ ಉಳಿದಿಲ್ಲ. 2014ರಲ್ಲಿ ಮೋದಿಯವರು ನೇಪಾಳಕ್ಕೆ ಭೇಟಿ ನೀಡಿದಾಗ ಅದಕ್ಕೆ ಹಲವು ಅರ್ಥಗಳನ್ನು ಕಲ್ಪಿಸಲಾಗಿತ್ತು. ಪರಸ್ಪರ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆ ಎಂದು ಭೇಟಿಯನ್ನು ಕೊಂಡಾಡಲಾಗಿತ್ತು. ಆದರೆ ಆ ಬಳಿಕ ಪರಿಸ್ಥಿತಿ ಎಷ್ಟು ಕೆಟ್ಟಿತೆಂದರೆ, ಮನ್‍ಮೋಹನ್ ಸಿಂಗ್ ಸರಕಾರವೇ ಇದಕ್ಕಿಂತ ಉತ್ತಮ ಎಂದು ಹೇಳುವಂತಾಯಿತು. ಮುಖ್ಯವಾಗಿ,

    ಸಂವಿಧಾನ ರಚನೆಯ ವಿಷಯದಲ್ಲಿ ನೇಪಾಳದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳಲ್ಲಿ ಭಾರತ ಪರೋಕ್ಷವಾಗಿ ಮಧ್ಯ ಪ್ರವೇಶಿಸಿದುದು ಸಂಬಂಧ ಸುಧಾರಣೆಗೆ ಬಹುದೊಡ್ಡ ತೊಡಕಾಗಿ ಪರಿಣಮಿಸಿತು ಎಂದೇ ಹೇಳಬೇಕು. ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ತಾಗಿಕೊಂಡಿರುವ ನೇಪಾಳದ ಭಾಗಗಳಲ್ಲಿ ಮಧೇಸಿ ಮತ್ತು ತಾರು ಎಂಬ ಸಮುದಾಯಗಳು ವಾಸಿಸುತ್ತಿದ್ದು ಹೊಸ ಸಂವಿಧಾನದ ಬಗ್ಗೆ ಈ ಸಮುದಾಯಕ್ಕೆ ತಕರಾರುಗಳಿದ್ದುವು. ಈ ದಾರಿಯಾಗಿ ಭಾರತದಿಂದ ಸರಕುಗಳು ನೇಪಾಳಕ್ಕೆ ರಸ್ತೆ ಮೂಲಕ ಸಾಗಾಟವಾಗುತ್ತಿದ್ದು, ಮಧೇಸಿಗಳು ಈ ದಾರಿಯನ್ನು ಮುಚ್ಚಿದರು. ಹೀಗೆ ನೇಪಾಳದಲ್ಲಿ ದಿಢೀರ್ ಆಹಾರ ವಸ್ತುಗಳ ಕೊರತೆ ಉಂಟಾಯಿತು. ಮಧೇಸಿಗಳನ್ನು ಮುಂದಿಟ್ಟುಕೊಂಡು ಭಾರತವೇ ಹೆಣೆದ ತಂತ್ರ ಇದು ಎಂಬುದು ನೇಪಾಳದ ಅನುಮಾನ. ಅದು ಈ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಿತು. ಚೀನಾದಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ಹೊಸ ದಾರಿಯನ್ನು ಕಂಡುಕೊಂಡಿತು. ಮಾತ್ರವಲ್ಲ, ಭಾರತದ ವಿರುದ್ಧ ವಿಶ್ವಸಂಸ್ಥೆಗೂ ದೂರು ನೀಡಿತು. ನಿಜವಾಗಿ, ನೇಪಾಳದ ಸಂವಿಧಾನ ವಿವಾದವನ್ನು ಭಾರತ ಮಧೇಸಿಗಳ ಕಣ್ಣಲ್ಲಿ ನೋಡಿದುದು ಬಹುದೊಡ್ಡ ತಪ್ಪಾಗಿತ್ತು. ಮಧೇಸಿಯೇ ನೇಪಾಳದ ಒಂದು ಭಾಗವೇ ಹೊರತು ಮಧೇಸಿಯೇ ನೇಪಾಳವಲ್ಲ. ಇದರ ಜೊತೆಗೆ ಭೂತಾನ್, ಪಾಕಿಸ್ತಾನ್ ಮತ್ತು ಚೀನಾಗಳನ್ನು ತೆಗೆದುಕೊಂಡರೆ, ಮೋದಿ ಸರಕಾರದ ವಿದೇಶಾಂಗ ನೀತಿ ಎಷ್ಟು ನಿರಾಶಜನಕವಾದುದು ಎಂಬುದು ಸ್ಪಷ್ಟವಾಗುತ್ತದೆ. ಅಷ್ಟಕ್ಕೂ,

    ಪಾಕ್‍ನೊಂದಿಗೆ ಉತ್ತಮ ಸಂಬಂಧ ಬೆಳೆಸುವುದಕ್ಕೆ ನರೇಂದ್ರ ಮೋದಿಯವರಿಗೆ ಇರುವಷ್ಟು ಅವಕಾಶ ಮನ್‍ಮೋಹನ್ ಸಿಂಗ್‍ರಿಗೆ ಇದ್ದಿರಲಿಲ್ಲ. ಪಾಕ್‍ನ ವಿಷಯ ದಲ್ಲಿ ಮನ್‍ಮೋಹನ್ ಸಿಂಗ್‍ರ ಧೋರಣೆಯನ್ನು ಲವ್ ಲೆಟರ್ ಧೋರಣೆ ಎಂದು ಮೋದಿಯವರು ಲೇವಡಿ ಮಾಡಿದ್ದರು. ಪಾಕ್‍ಗೆ ಕಟು ಭಾಷೆ ಮಾತ್ರ ಅರ್ಥವಾಗುತ್ತದೆ ಎಂಬುದು ಮೋದಿ ಮತ್ತು ಅವರ ಪಕ್ಷದ ನಿಲುವಾಗಿತ್ತು. ಮೋದಿಯವರ ಪ್ರತಿಜ್ಞಾ ಸ್ವೀಕಾರದ ಸಮಯದಲ್ಲಿ ನವಾಝ್ ಶರೀಫ್‍ರು ಉಪಸ್ಥಿತರಿದ್ದುದು ಮತ್ತು ಮೋದಿಯವರು ಪಾಕ್‍ಗೆ ದಿಢೀರ್ ಭೇಟಿ ಕೊಟ್ಟದ್ದು ಏನೋ ಬದಲಾವಣೆಯಾಗುತ್ತದೆ ಎಂಬ ನಿರೀಕ್ಷೆಗೆ ಇಂಬು ನೀಡಿತ್ತು. ಆದರೆ,

    ಅದರಾಚೆಗೆ ಯಾವ ಸ್ವಾಗತಾರ್ಹ ಬೆಳವಣಿಗೆಯೂ ನಡೆದಿಲ್ಲ. ಕಾಶ್ಮೀರವಂತೂ ಉರಿಯುತ್ತಿದೆ. ಪ್ರತ್ಯೇಕತಾವಾದ ಅತ್ಯಂತ ಚರಮಸೀಮೆಗೆ ಮುಟ್ಟಿದ್ದ 80-90ರ ದಶಕದ ಸ್ಥಿತಿಗೆ ಮತ್ತೆ ಕಾಶ್ಮೀರ ಮರಳಿ ಮುಖ ಮಾಡಿ ನಿಂತಿದೆ. ನವಾಝ್ ಶರೀಫ್ ಹೋಗಿ ಇಮ್ರಾನ್ ಖಾನ್ ಬಂದರೂ ಭಾರತದ ನಿಲುವು ಬದಲಾಗಿಲ್ಲ. ಬಹುಶಃ ಸಂಬಂಧ ಸುಧಾರಣೆಗೆ ಒತ್ತು ನೀಡುವುದಕ್ಕಿಂತ ಹಳಸು ವುದಕ್ಕೆ ಒತ್ತು ನೀಡುವುದೇ ರಾಜಕೀಯವಾಗಿ ಹೆಚ್ಚು ಲಾಭದಾಯಕ ಎಂದು ಬಿಜೆಪಿ ತೀರ್ಮಾನಿಸಿದೆಯೇನೋ ಎಂದನಿಸುತ್ತದೆ. ಇನ್ನಾರು ತಿಂಗಳುಗಳಲ್ಲಿ ಪಾರ್ಲಿಮೆಂಟ್ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಶತ್ರು ಪಾಕಿಸ್ತಾನದ ಅಗತ್ಯವಿದೆಯೇ ಹೊರತು ಮಿತ್ರ ಪಾಕಿಸ್ತಾನದ್ದಲ್ಲ. ಕಳೆದ ಚುನಾವಣೆಯಲ್ಲಿ ಪಾಕಿಸ್ತಾನವೂ ಒಂದು ಇಶ್ಯೂ ಆಗಿತ್ತು ಬಿಜೆಪಿಗೆ. ಪಾಕಿಸ್ತಾನದೊಂದಿಗೆ ಮಾತು ಕತೆ ನಡೆಸುವ ಮೂಲಕ ಆ ಅವಕಾಶವನ್ನು ಕಳೆದುಕೊಳ್ಳಲು ಬಿಜೆಪಿ ಸಿದ್ಧವಾಗಲಾರದು. ಇಮ್ರಾನ್ ಖಾನ್ ಮಾತುಕತೆಗೆ ಮತ್ತೆ ಮತ್ತೆ ಆಹ್ವಾನ ನೀಡುತ್ತಿದ್ದರೂ ಮೋದಿಯವರು ಅದನ್ನು ನಿರಾಕರಿಸುತ್ತಿರುವುದಕ್ಕೆ ರಾಷ್ಟ್ರೀಯ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಯೇ ಕಾರಣವಾಗಿದೆಯೆಂದು ಅನಿಸುತ್ತದೆ. ಕಳೆದ 6 ದಶಕಗಳಿಂದ ಭಾರತ ಮತ್ತು ಪಾಕ್‍ಗಳು ಬಂದೂಕಿನಿಂದ ಮಾತಾಡುತ್ತಲೇ ಇವೆ. ಆದರೆ ಫಲ ಶೂನ್ಯ. ಆದ್ದರಿಂದ ಮಾತುಕತೆಯ ಹೊರತು ಭಾರತ-ಪಾಕ್‍ಗಳ ನಡುವಿನ ಸಮಸ್ಯೆ ಬಗೆಹರಿಯಲಾರದು. ಇಮ್ರಾನ್ ಖಾನ್ ಮಾತಿನ ಮೇಜಿಗೆ ಹೊಸಬ. ಈ ಹಿಂದಿನವರ ಕೃತ್ಯಕ್ಕೆ ಅವರು ಹೊಣೆಗಾರನೂ ಅಲ್ಲ. ಈ ಹಿನ್ನೆಲೆಯಲ್ಲಿ ಅವರ ಮಾತು ಕತೆಯ ಆಹ್ವಾನಕ್ಕೆ ಅರ್ಥ ಇದೆ. ಒಂದು ವೇಳೆ, ಲೋಕಸಭಾ ಚುನಾವಣೆಗೆ ಇನ್ನೆರಡು ವರ್ಷಗಳು ಇರುತ್ತಿದ್ದರೆ ಇಮ್ರಾನ್ ಖಾನ್‍ರ ಆಹ್ವಾನವನ್ನು ಮೋದಿಯವರು ಖಂಡಿತ ಸ್ವೀಕರಿಸುತ್ತಿದ್ದರು. ಒಂದು ರೀತಿಯಲ್ಲಿ,

The absence of statecraft has never been felt so acutely as today ಎಂಬ ಬಿಜೆಪಿಯ 2014ರ ಪ್ರಣಾಳಿಕೆಯು ಇವತ್ತಿಗೆ ಬಹಳ ಚೆನ್ನಾಗಿಯೇ ಒಪ್ಪುತ್ತಿದೆ.




Tuesday, November 27, 2018

ಬ್ರಿಟನಿ, ಸುಡಾನಿ ಮತ್ತು ಪೈಗಂಬರ್


    
 ವಾರಗಳ ಹಿಂದೆ ನಾನು ಇನ್ನಿಬ್ಬರು ಗೆಳೆಯರ ಜೊತೆ ಮಾತುಕತೆಯಲ್ಲಿ ತೊಡಗಿದ್ದೆ. ಮಕ್ಕಳ ಶಿಕ್ಷಣ ನಮ್ಮ ಮಾತುಕತೆಯ ಮುಖ್ಯ  ವಿಷಯವಾಗಿತ್ತು. ಸ್ಥಳೀಯವಾಗಿ ಇರುವ ಶಾಲೆಗಳಲ್ಲಿ ಯಾವುದು ಉತ್ತಮ, ಯಾವುದು ಮಧ್ಯಮ, ಯಾವುದು ಅಧಮ ಎಂಬುದೆಲ್ಲ  ಮಾತಿನ ನಡುವೆ ಬಂದು ಹೋಗುತ್ತಿತ್ತು. ಒಂದು ಸಂದರ್ಭದಲ್ಲಿ ಓರ್ವ ಗೆಳೆಯ- ಆ ಶಾಲೆಗಳ ಮಧ್ಯೆ ಸುಡಾನಿ ಹಾಗೂ ಬ್ರಿಟನಿನಷ್ಟು  ವ್ಯತ್ಯಾಸ ಇದೆ ಎಂದು ಹೇಳಿದ. ತಕ್ಷಣ ಇನ್ನೋರ್ವ ಗೆಳೆಯ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ. ನಿನ್ನ ಉದಾಹರಣೆ ಜನಾಂಗೀಯವಾದದಿಂದ  ಕೂಡಿದೆ ಎಂದು ಮುಲಾಜಿ ಲ್ಲದೇ ಹೇಳಿದ. ಸುಡಾನಿ ಕಪ್ಪು. ಬ್ರಿಟನಿ ಬಿಳಿ. ವ್ಯತ್ಯಾಸವನ್ನು ಹೇಳುವುದಕ್ಕೆ ಮೈ ಚರ್ಮವನ್ನು  ಉದಾಹರಣೆಯಾಗಿ ಕೊಡುವುದು ಜನಾಂಗೀಯ ನಿಂದನೆಯಾಗುತ್ತದೆ ಎಂಬುದು ಆತನ ಆಕ್ಷೇಪ. ಗೆಳೆಯ ಕ್ಷಮೆ ಯಾಚಿಸಿದ ಮತ್ತು  ಸುಡಾನಿ ಮತ್ತು ಬ್ರಿಟನಿ ಎಂಬುದರ ಬದಲು ಹಗಲು ಮತ್ತು ರಾತ್ರಿಯಷ್ಟೇ ವ್ಯತ್ಯಾಸ ಇದೆ ಎಂದು ಸರಿಪಡಿಸಿದ. ಅಂದಹಾಗೆ,
ಸುಡಾನಿ ಮತ್ತು ಬ್ರಿಟನಿ ಎಂಬ ಹೋಲಿಕೆಯಲ್ಲಿ ಬಾಹ್ಯನೋಟಕ್ಕೆ ಅಂತಹ ಆಕ್ಷೇಪಾರ್ಹವಾದುದೇನೂ ಇಲ್ಲ. ಕಪ್ಪನ್ನು ಕಪ್ಪು ಎನ್ನದೇ ಬಿಳಿ  ಅನ್ನಲು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಬಿಳುಪನ್ನು ಬಿಳಿ ಅನ್ನದೇ ಇನ್ನೇನನ್ನಬೇಕು ಎಂಬ ಪ್ರಶ್ನೆಯೂ ನಿಮ್ಮಲ್ಲಿದ್ದೀತು.  ನಿಜವಾಗಿ, ಕಪ್ಪನ್ನು ಕಪ್ಪು ಅನ್ನುವುದಕ್ಕೂ ಜನಾಂಗೀಯ ಗುರುತಾಗಿರುವ ಕಪ್ಪನ್ನು ಕಪ್ಪಾಗಿ ಉದಾಹರಿಸುವುದಕ್ಕೂ ವ್ಯತ್ಯಾಸ ಇದೆ. ಜಗಳ  ಮಾಡುತ್ತಿರುವ ಇಬ್ಬರು ವ್ಯಕ್ತಿಗಳು ಪರಸ್ಪರ ಬೈಯುವುದಕ್ಕೂ ಓರ್ವ ಇನ್ನೋರ್ವನನ್ನು ‘ನೀನು ದಲಿತ’ ಎಂದು ಉಲ್ಲೇಖಿಸಿ ಬೈಯುವುದಕ್ಕೂ  ವ್ಯತ್ಯಾಸ ಇದೆ. ದಲಿತ ಅನ್ನುವ ಪದ ಜನಾಂಗೀಯವಾದುದು. ಆ ಗುರುತನ್ನು ಎತ್ತಿ ಹೇಳಿ ಬೈಯುವು ದೆಂದರೆ ನೀನು ‘ಅಧಮ  ಕುಲದವನು’ ಎಂದು ಸಾರಿದಂತೆ. ಇದು ಮನುಷ್ಯನಿಗೆ ಮಾಡುವ ಬಲುದೊಡ್ಡ ಅವಮಾನ. ಮನುಷ್ಯ ಹುಟ್ಟಿನಿಂದ ಉತ್ತಮ ಮತ್ತು  ಅಧಮನಾಗಲು ಸಾಧ್ಯವಿಲ್ಲ. ಹುಟ್ಟು ವಾಗ ಎಲ್ಲರೂ ಉತ್ತಮರೇ. ಮೈಬಣ್ಣ, ಭಾಷೆ, ಆಕಾರ, ಗಾತ್ರ, ಕೆಲಸ ಇತ್ಯಾದಿಗಳು ಯಾರನ್ನೂ  ಉತ್ತಮರೋ ಅಧಮರೋ ಆಗಿ ಮಾರ್ಪಡಿಸಲು ಸಾಧ್ಯವೂ ಇಲ್ಲ.
ದಲಿತರು, ಬುಡಕಟ್ಟು ಜನರು ಮತ್ತು ಆದಿವಾಸಿಗಳು ನಗರ ಪ್ರದೇಶದ ಜನರಿಗೆ ಹೋಲಿಸಿದರೆ ಬಣ್ಣ, ಆಕಾರದಲ್ಲಿ ಭಿನ್ನ. ಈ ವ್ಯತ್ಯಾಸ ಸಹಜವಾದುದು. ಆದರೆ ಈ ಸಹಜ ಗುರುತನ್ನೇ ಜನಾಂಗೀಯ ಗುರುತಾಗಿಸಿ ಅಸಹಜಗೊಳಿಸಿದಾಗ ಉತ್ತಮ ಮತ್ತು ಅಧಮ ಎಂಬ ವಿಭಜನೆ ನಡೆಯುತ್ತದೆ. ಗೆಳೆಯ ಉಲ್ಲೇಖಿಸಿದ ಬ್ರಿಟನಿ-ಸುಡಾನಿ ಉದಾಹರಣೆಯಲ್ಲಿ ಬ್ರಿಟನಿ ಉತ್ತಮರ ಸಂಕೇತವಾಗಿತ್ತು. ಸುಡಾನಿ ಎಂಬುದು  ಅಧಮರ ಸಂಕೇತವಾಗಿತ್ತು. ಯಾಕೆ ಸುಡಾನಿ ಅಧಮರ ಸಂಕೇತವಾಗಬೇಕು? ಬ್ರಿಟನಿ ಯಾಕೆ ಉತ್ತಮರ ಸಂಕೇತವಾಗಬೇಕು? ಗೆಳೆಯ  ಪ್ರಶ್ನಿಸಿದ್ದು ಈ ಬಗೆಯ ವಿಭಜನೆಯನ್ನೇ. ನಿಜವಾಗಿ, ಈ ಪ್ರಶ್ನೆ ಈ ಜಗತ್ತಿಗೆ ಪ್ರವಾದಿ ಮುಹಮ್ಮದ್‍ರ ಬಹುದೊಡ್ಡ ಕೊಡುಗೆಯೂ ಹೌದು.
1. ಧಾರ್ಮಿಕ ಸ್ವಾತಂತ್ರ್ಯ
2. ಜನಾಂಗೀಯ ಅಥವಾ ಜಾತಿ ಸಮಾನತೆ
3. ಶಿಕ್ಷಣ
4. ಮಹಿಳಾ ಹಕ್ಕು
5. ನ್ಯಾಯ
ನಿಜವಾಗಿ, ಓರ್ವ ವ್ಯಕ್ತಿಯ ಯಶಸ್ಸು ಮತ್ತು ಅಪ ಯಶಸ್ಸನ್ನು ಈ ಮೇಲಿನ 5 ವಿಷಯಗಳು ನಿರ್ಧರಿಸುತ್ತವೆ. ಈ ವಿಷಯಗಳನ್ನು ವ್ಯಕ್ತಿಗಳು  ಹೇಗೆ ನಿರ್ವಹಿಸಿದ್ದಾರೆ ಮತ್ತು ಯಾವ ಧೋರಣೆ ತಾಳಿದ್ದಾರೆ ಎಂಬುದನ್ನು ಅವಲಂಬಿಸಿ ಅವರು ಯಶಸ್ವಿಯೋ ವಿಫಲರೋ ಎಂಬುದನ್ನು  ನಿರ್ಧರಿಸ ಲಾಗುತ್ತದೆ. ಪೈಗಂಬರ್ ಯಶಸ್ವಿ ಸುಧಾರಕರಾಗಿ ನಮ್ಮೆದುರು ನಿಲ್ಲುವುದು ಇಲ್ಲೇ.  ಅವರು ಈ 5 ವಿಷಯಗಳನ್ನು ಸವಾ ಲಾಗಿ  ಸ್ವೀಕರಿಸಿದರು ಮತ್ತು ಸಮಾಜ ಅವರನ್ನು ಅಪ್ಪಿಕೊಳ್ಳುವಂತಹ ಸುಧಾರಣೆಯನ್ನು ತಂದರು. ಎಲ್ಲಿಯ ವರೆಗೆಂದರೆ,
ಪರಮ ವಿರೋಧಿಗಳಾಗಿ ಗುರುತಿಸಿಕೊಂಡಿದ್ದ ಮತ್ತು ಅವ ರೊಂದಿಗೆ ದೀರ್ಘಕಾಲ ವಿರೋಧದೊಂದಿಗೇ ಬದುಕಿದ್ದ ಇಕ್ರಿಮಾ ಮತ್ತು ಸುಹೈಲ್ ಎಂಬ ಉನ್ನತ ನಾಯಕರೂ ಪೈಗಂಬರ್‍ರನ್ನು ಒಪ್ಪಿಕೊಂಡರು. ಹಾಗೆ ಒಪ್ಪಿಕೊಳ್ಳುವುದಕ್ಕಿಂತ ಮೊದಲು ಅವರು ಪೈಗಂಬರ್‍ರನ್ನು  ಆಮೂಲಾಗ್ರವಾಗಿ ಪರಿಶೀಲಿಸಿದ್ದರು. ಅವರ ಧೋರಣೆ ಮತ್ತು ಕಾರ್ಯಕ್ರಮಗಳನ್ನು ಈ ಇಬ್ಬರು ನಾಯಕ ರಂತೆಯೇ ಮಕ್ಕಾ ಮತ್ತು ಮದಿ ೀನಾದ ಜನರು ಅತೀವ ಉಮೇದಿನಿಂದ ವೀಕ್ಷಿಸುತ್ತಿದ್ದರು. ಮನುಷ್ಯರು ವಸ್ತುಗಳಂತೆ ಸಂತೆಯಲ್ಲಿ ಮಾರಾಟವಾಗುವ ಸಂದರ್ಭದಲ್ಲಿ,  ಮರ್ಯಾದಾ ಹತ್ಯೆ ಮತ್ತು ಹೆಣ್ಣು ಶಿಶು ಹತ್ಯೆಗಳು ಸಹಜವಾಗಿರುವ ಸನ್ನಿವೇಶ ದಲ್ಲಿ, ಜನಾಂಗೀಯ ಕಲಹಗಳನ್ನು ಬ ದುಕಾಗಿಸಿಕೊಂಡಿರುವ ದಿನಗಳಲ್ಲಿ ಈ ಪೈಗಂಬರ್ ಏನು ಸುಧಾರಣೆ ಮಾಡುವರು ಅನ್ನುವುದು ಜನರ ಕುತೂಹಲವಾಗಿರುವುದರಲ್ಲಿ ಅಚ್ಚರಿ  ಏನಿಲ್ಲ. ಆ ಕುತೂಹಲಕ್ಕೆ ಪ್ರವಾದಿ ನೀಡಿದ ಉತ್ತರ ಅಮೋಘವಾಗಿತ್ತು.
ಅಬಿಸೀನಿಯಾದ ಬಿಲಾಲ್ ಮತ್ತು ಪರ್ಶಿಯಾದ ಸಲ್ಮಾನುಲ್ ಫಾರಿಸಿಯವರನ್ನು ಪೈಗಂಬರ್ ಅಪ್ಪಿಕೊಂಡರು. ಆಫ್ರಿಕಾ ಮೂಲದ ಗುಲಾಮ  ಬಿಲಾಲ್‍ರನ್ನು ಅಪ್ಪಿಕೊಳ್ಳುವುದು ಬಿಡಿ, ಮಾತಾಡಿಸುವುದೂ 7ನೇ ಶತಮಾನದಲ್ಲಿ ಸಾಧ್ಯವಿರಲಿಲ್ಲ. ಅಷ್ಟಕ್ಕೂ,
1960ರ ವರೆಗೆ ಅಮೇರಿಕನ್ ಸಮಾಜದಲ್ಲೇ ಜನಾಂಗೀಯ ವಿಭಜನೆ ತೀವ್ರವಾಗಿಯೇ ಇತ್ತು. ಜಾಗತಿಕ ಸಂತೆಯಲ್ಲಿ ಮಾರಾಟ ಕ್ಕಿದ್ದುದು  ಆಫ್ರಿಕನ್ ಮೂಲದ ಕರಿವರ್ಣೀಯರೇ ಆಗಿದ್ದರು. ಅರಬನಿಗೆ ಅರಬೇತರರಿಗಿಂತ ಯಾವ ಮೇಲ್ಮೆಯೂ ಇಲ್ಲ ಮತ್ತು ಕರಿಯನಿಗೆ ಬಿಳಿಯ ನಿಗಿಂತ ಯಾವ ಮೇಲ್ಮೆಯೂ ಇಲ್ಲ ಎಂದು ಪೈಗಂಬರ್ ಸಾರಿದ್ದು ಮಾತ್ರವಲ್ಲ, ಜಗತ್ತಿನ ಎಲ್ಲ ಮೂಲೆಗಳಿಗೂ ಈ ಸಂದೇಶವನ್ನು ಸಾರುವಂತೆ ತನ್ನ ಸಂಗಾತಿಗಳ ಮೇಲೆ ಒತ್ತಡ ಹೇರಿದರು. 7ನೇ ಶತಮಾನದಲ್ಲಿ ಈ ಬಗೆಯ ನಡೆ-ನುಡಿ ವಿಶೇಷವಾಗಿತ್ತು. ಅವರು ಮಹಿಳೆಯರ ಬಗ್ಗೆ ತಾಳಿದ ನಿಲುವುಗಳಂತೂ ಅವಿಸ್ಮರಣೀಯ. ಅವರು ಮಹಿಳೆಯನ್ನು bold, outspoken, intellectual,  autonomous ಆಗಿ ಪರಿವರ್ತಿಸುವಲ್ಲಿ ದೊಡ್ಡದೊಂದು ಪಾತ್ರವನ್ನು ನಿರ್ವಹಿಸಿದರು. ವೈವಾಹಿಕ ಮಾತು ಕತೆಯಲ್ಲಿ ಹೆಣ್ಣಿಗೆ ವಧುವಿನ  ಪಾತ್ರದ ಹೊರತು ಇನ್ನಾವ ಹಕ್ಕುಗಳೂ ಇಲ್ಲ ಎಂದು ನಂಬಿಕೊಂಡಿದ್ದ ಸಮಾಜಕ್ಕೆ ಹೆಣ್ಣನ್ನು ಬರೇ ವಧುವಿನ ಪಾತ್ರದಿಂದ ಹೊರತಂದದ್ದು  ಪೈಗಂಬರರೇ. ಮದುವೆ ಮಾತುಕತೆಗಿಂತ ಮೊದಲು ಹೆಣ್ಣಿನ ಸಮ್ಮತಿ ಅಗತ್ಯ ಮತ್ತು ಅದು ಅವಳ ಹಕ್ಕು ಎಂಬುದಾಗಿ ಅವರು ಸಾರಿದಾಗ  7ನೇ ಶತಮಾನ ಅದನ್ನು ಸಹಜವಾಗಿ ಸ್ವೀಕರಿಸಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಆವರೆಗೆ ಮಹಿಳಾ ಹಕ್ಕು ಅನ್ನುವುದು ಮನೆಯಿಂದ ಮನೆಗೆ  ಬೇರೆ ಬೇರೆಯದ್ದಾಗಿತ್ತು. ಯಾವ ಮನೆಯಲ್ಲಿ ಯಾವ ಪುರುಷ ಯಾವ ಹಕ್ಕು ಅನುಮತಿಸುತ್ತಾನೋ ಅದುವೇ ಆ ಮಹಿಳೆಯ ಹಕ್ಕು. ಆತ  ಹೆಣ್ಣು ಶಿಶುವಿಗೆ ಬದುಕುವ ಹಕ್ಕು ನೀಡಿದರೆ ಅದು ಆ ಮಗುವಿನ ಹಕ್ಕು. ಇಲ್ಲದಿದ್ದರೆ ಇಲ್ಲ. ಓರ್ವ ಹೆಣ್ಣು ಯಾರನ್ನು ಮದುವೆಯಾಗಬೇಕು ಎಂಬುದು ಅಪ್ಪನ ತೀರ್ಮಾನವನ್ನು ಅವಲಂಬಿಸಿತ್ತು. ಆಕೆ ವಧು ಮಾತ್ರ. ಪೈಗಂಬರರು 7ನೇ ಶತಮಾನದ ಈ ಅರಬ್ ಸಂಸ್ಕೃತಿಯಲ್ಲಿ ಸುಧಾರಣೆಯನ್ನು ತಂದರು. ಯಾರನ್ನು ವಿವಾಹವಾಗಬೇಕು ಮತ್ತು ಆಗಬಾರದು ಎಂಬುದನ್ನು ತೀರ್ಮಾನಿಸುವ ಹಕ್ಕು  ವಧುವಿನದ್ದು ಎಂದು ಸಾರಿದರು. ಹೆತ್ತವರ ಆಸ್ತಿಯಲ್ಲಿ ಮಹಿಳೆಗೂ ಹಕ್ಕಿದೆ ಎಂದರು. ಎಲ್ಲಿಯವರೆಗೆಂದರೆ,
ಆಕೆಯ ಒಪ್ಪಿಗೆ ಇಲ್ಲದೇ ಆ ಆಸ್ತಿಯನ್ನು ಆಕೆಯ ಗಂಡನೂ ಅನುಭವಿಸುವಂತಿಲ್ಲ ಎಂದು ಸಾರಿದರು. ಆಕೆಗೆ ವಿಚ್ಛೇದನದ ಹಕ್ಕನ್ನು  ದೊರಕಿಸಿಕೊಟ್ಟರು. ಹೆಣ್ಣು ಮಗುವನ್ನು ಸ್ವರ್ಗದ ಬಾಗಿಲು ಎಂದು ಕರೆದರು. ಒಂದು ರೀತಿಯಲ್ಲಿ, ಹೆಣ್ಣು ಎಂಬುದು ಗಂಡಿನ ಗುಲಾಮ  ಜೀವಿ ಮತ್ತು ವಸ್ತುರೂಪದ ಉತ್ಪನ್ನ ಎಂಬಲ್ಲಿಂದ ಹೆಣ್ಣು ಪ್ರತ್ಯೇಕ ವ್ಯಕ್ತಿತ್ವವಿರುವ ಗಂಡಿನಂಥದ್ದೇ  ಒಂದು ಜೀವಿ ಎಂಬುದಾಗಿ ಸಾರಲು  ಅವರಿಂದ ಸಾಧ್ಯವಾಯಿತು. ಅಂದಹಾಗೆ, 7ನೇ ಶತಮಾನದಲ್ಲಿ ನಡೆದ ಸುಧಾರಣೆ ಇದು ಎಂಬುದು ಇಲ್ಲಿ ಬಹುಮುಖ್ಯ ಅಂಶ. ಆ  ಕಾಲದಲ್ಲಿ ಹೀಗೆ ಸಾರುವುದು ಸುಲಭವಾಗಿರಲಿಲ್ಲ. ಹೆಣ್ಣಿಗೆ ಹಕ್ಕಿಲ್ಲ ಎಂದು ಬಲ ವಾಗಿ ನಂಬಿರುವ ಸಮಾಜದಲ್ಲಿ ಹೆಣ್ಣನ್ನು ಗಂಡಿನಿಂದ  ಪ್ರತ್ಯೇಕ ಗೊಳಿಸಿ, ಆಕೆಗೆ ವ್ಯಕ್ತಿತ್ವವೊಂದನ್ನು ನೀಡಿ, ಹೆಣ್ಣಿನ ಪಾದದಡಿ ಸ್ವರ್ಗವಿದೆ ಎಂಬ ವಿಶೇಷ ಗೌರವವನ್ನು ಕೊಟ್ಟು ಗಂಡಿಗಿಂತ ಎತ್ತರದ  ಸ್ಥಾನದಲ್ಲಿ ನಿಲ್ಲಿಸುವುದು ಸವಾಲಿನ ಕೆಲಸವಾಗಿತ್ತು.
ಗ್ರೀಕ್, ಪರ್ಶಿಯನ್, ರೋಮನ್ ನಾಗರಿಕತೆಗಳು ಮತ್ತು 7ರಿಂದ 8ನೇ ಶತಮಾನದೊಳಗಿನ ಇಸ್ಲಾಮೀ ನಾಗರಿಕತೆಯನ್ನು ಪರಿಶೀಲಿಸಿದರೆ  ಇಸ್ಲಾಮೀ ನಾಗರಿಕತೆ ವಿಶಿಷ್ಟವಾಗಿ ನಿಲ್ಲುತ್ತದೆ. ಜಗತ್ತಿನಲ್ಲಿ ಲಿಖಿತ ಸಂವಿಧಾನ ಮೊಟ್ಟಮೊದಲು ಜಾರಿಯಾದದ್ದು ಮದೀನಾದಲ್ಲಿ. ಆ ಸಂವಿಧಾನ  ಎಷ್ಟು ಸೆಕ್ಯುಲರ್ ಆಗಿತ್ತೆಂದರೆ, ಇವತ್ತಿನ ಸೆಕ್ಯುಲರ್ ರಾಷ್ಟ್ರಗಳೂ ಸೆಕ್ಯುಲರ್ ಮನಸ್ಸುಗಳೂ ಅಚ್ಚರಿಪಟ್ಟಾವು. ಅವುಗಳಲ್ಲಿ ನಾಲ್ಕು  ಹೀಗಿವೆ.
1. ನಾವೆಲ್ಲ ಒಂದೇ ಸಮುದಾಯ.
2. ಮುಸ್ಲಿಮರಿಗೆ ಅವರ ಧರ್ಮ, ಯಹೂದಿಯರಿಗೆ ಅವರ ಧರ್ಮ
3. ಯಾರಾದರೂ ಮದೀನಾದ ಮೇಲೆ ಆಕ್ರಮಣ ನಡೆಸಿದರೆ ನಾವೆಲ್ಲ ಒಟ್ಟಾಗಿ ಹೋರಾಡುವೆವು.
4. ಓರ್ವ ಯಹೂದಿ ವ್ಯಕ್ತಿ ಮುಸ್ಲಿಮನನ್ನು ಆಕ್ರಮಿಸಿದರೆ  ಅದಕ್ಕೆ ಯಹೂದಿ ಸಮುದಾಯ ಹೊಣೆಯಾಗುವುದಿಲ್ಲ. ಆಕ್ರಮಿಸಿ ದವನೇ  ಹೊಣೆ.
ಇದು 7ನೇ ಶತಮಾನದಲ್ಲಿ ರಚಿಸಲಾದ ಸಂವಿಧಾನ. ಮದೀನಾದ ಯಹೂದಿ ಸಮುದಾಯ ಜೊತೆ ಸೇರಿ ರಚಿಸಲಾದ ಈ ಸಂವಿಧಾನದ  ಒಟ್ಟು ಅಂಶಗಳನ್ನು ಪರಿಶೀಲಿಸಿದರೆ ಪೈಗಂಬರ್ ರನ್ನು ತಾತ್ವಿಕವಾಗಿ ವಿರೋಧಿಸುವವರೂ ಮರು ಅವಲೋಕನಕ್ಕೆ ಇಳಿದಾರು. ಆ ಕಾಲದಲ್ಲಿ  ಇಸ್ಲಾಮಿನ ನಿಜವಾಹಕರು ಪೈಗಂಬರರೇ. ಇಸ್ಲಾಮಿನ ಬಗ್ಗೆ ಅತ್ಯಂತ ಹೆಚ್ಚು ಗೊತ್ತಿರುವವರೂ ಅವರೇ. ಆದರೆ ಈ ಕಾಲದ ಕೆಲವು  ರಾಷ್ಟ್ರಗಳಿಗೂ ರಚಿಸಲು ಸಾಧ್ಯವಿಲ್ಲದ ಮತ್ತು ರಚಿಸಿದರೂ ಪ್ರಾಯೋಗಿಕವಾಗಿ ಜಾರಿಗೊಳಿಸಲು ಯಶಸ್ವಿಯಾಗದ ಸಂವಿಧಾನವನ್ನು ಅವರು  ಆ ಕಾಲದಲ್ಲಿ ರಚಿಸಿದರು. ಮಾತ್ರವಲ್ಲ, ಪ್ರಾಯೋಗಿಕವಾಗಿ ಅನುಷ್ಠಾನಕ್ಕೂ ತಂದರು. ಪೈಗಂಬರರಿಂದ ಮದೀನಾದ ಮಂದಿ ಎಷ್ಟು ಪ್ರಭಾವಿತರಾದರೆಂದರೆ, ಮಕ್ಕಾದಿಂದ ವಲಸೆ ಬಂದ ಅವರ ಅನುಯಾಯಿಗಳನ್ನು ತಮ್ಮ ಸಹೋದರರು ಎಂದು ಕರೆದರು. ತಮ್ಮ ಆಸ್ತಿ,  ವ್ಯಾಪಾರ, ಮನೆ ಎಲ್ಲದರಲ್ಲೂ ಪಾಲು ನೀಡಿದರು. ಮದೀನಾದವರ ಈ ಗುಣವನ್ನು ಮೆಚ್ಚಿಕೊಂಡ ಪ್ರವಾದಿಯವರು ಅವರನ್ನು  ನೆರವಾಗುವವರು (ಅನ್ಸಾರರು) ಎಂದು ಹೊಗಳಿದರು. 21ನೇ ಶತಮಾನದ ಅತ್ಯಂತ ಮುಂದುವರಿದ ಈ ಕಾಲದಲ್ಲೂ ವಲಸಿಗರನ್ನು  ಸ್ವೀಕರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ವಲಸಿಗರನ್ನು ತಡೆಯಲೆಂದು ಅಮೇರಿಕವು ಮೆಕ್ಸಿಕೋದ ಗಡಿಯಲ್ಲಿ ಗೋಡೆ ಕಟ್ಟುತ್ತಿದೆ. ಹಲವು ರಾಷ್ಟ್ರಗಳು ಗಡಿ ಮುಚ್ಚಿ ಕೂತಿವೆ. ಭಾರತ, ಅರಬ್-ಯುರೋಪಿಯನ್  ರಾಷ್ಟ್ರಗಳೆಲ್ಲವೂ ವಲಸಿಗರನ್ನು ಅಕ್ರಮಿಗಳೆಂದು ಹೆಸರಿಸಿ ಗಡಿಯಿಂದಲೇ ಆಚೆ ತಳ್ಳುತ್ತಿದೆ. ವಲಸಿಗರು ತಮ್ಮ ಆಹಾರ, ಉದ್ಯೋಗ, ನೆಮ್ಮದಿಗೆ  ಭಂಗ ತರುವರೆಂಬ ಭಯ ವಲಸಿಗರಲ್ಲದವರಲ್ಲಿ ಕಾಣಿಸಿಕೊಳ್ಳುತ್ತಿದೆ. 7ನೇ ಶತಮಾನದ ಪೈಗಂಬರ್ ಭಿನ್ನವಾಗಿ ಕಾಣಿಸುವುದು ಇಂಥ  ಕಾರಣಗಳಿಗಾಗಿಯೇ.
ಪೈಗಂಬರ್ ರು ಇಸ್ಲಾಮಿನ ಅತಿದೊಡ್ಡ ಶ್ರದ್ಧಾಳುವಾಗಿದ್ದರು. ಅವರಷ್ಟು ನಮಾಝ ನಿರ್ವಹಿಸಿದವರು, ಉಪವಾಸ ಆಚರಿಸಿ ದವರು,  ಪ್ರಾರ್ಥಿಸಿದವರು ಇನ್ನಾರೂ ಇಲ್ಲ. ಕುರ್‍ಆನ್ ಅವತೀರ್ಣ ಗೊಂಡದ್ದೂ ಅವರಿಗೇ. ಅದೇ ಪೈಗಂಬರ್ ನಜ್ರಾನ್‍ನಿಂದ ಬಂದ ಕ್ರೈಸ್ತ ನಿಯೋಗವೊಂದಕ್ಕೆ ಮದೀನಾದ ಮಸ್ಜಿದುನ್ನಬಿಯಲ್ಲಿ ಪ್ರಾರ್ಥಿಸಲು ಅವಕಾಶವನ್ನು ಮಾಡಿಕೊಟ್ಟರು. ಧರ್ಮದಲ್ಲಿ ಬಲಾತ್ಕಾರವಿಲ್ಲ (2:256)  ಎಂದು ಸಾರಿದುದಷ್ಟೇ ಅಲ್ಲ, ಇತರರ ಆರಾಧ್ಯರನ್ನು ತೆಗಳಬಾರದು (6:108) ಎಂದೂ ಕಲಿಸಿದರು. ಅವರು ಯುದ್ಧದಲ್ಲಿ ಭಾಗಿಯಾಗಿದ್ದಾರೆ  ಎಂಬುದು ನಿಜ. ಅವರಿದ್ದುದು 7ನೇ ಶತಮಾನದಲ್ಲಿ. ಆ ಶತಮಾನಕ್ಕೆ ಶಾಂತಿಯ ಪರಿಚಯವಿದ್ದುದು ಬಹಳ ಕಡಿಮೆ. ಆದರೂ ಅವರೆಂದೂ ಧಾರ್ಮಿಕ ಸ್ವಾತಂತ್ರ್ಯ  ಮತ್ತು ಸ್ವರಕ್ಷಣೆಯ ಕಾರಣಕ್ಕಲ್ಲದೇ ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡಿಲ್ಲ. ಈ ಎರಡು ವಿಷಯಗಳಿಗೆ ಅಡ್ಡಿಪಡಿಸದವರನ್ನು ಅವರು ಮುಟ್ಟಿಯೂ  ಇಲ್ಲ. ಯುದ್ಧದ ಸಂದರ್ಭದಲ್ಲೂ ವೃದ್ಧರು, ಸಾಧು-ಸನ್ಯಾಸಿಗಳು, ಮಹಿಳೆಯರು ಮತ್ತು ಮಕ್ಕಳಿಗೆ ಯಾವ ತೊಂದರೆಯೂ ಆಗಬಾರ  ದೆಂದು ಅವರು ಆದೇಶಿಸಿದ್ದರು. ಯುದ್ಧದಲ್ಲಿ ಸೆರೆ ಸಿಕ್ಕ ಕೈದಿಗಳನ್ನು ಅವರು ಅತಿಥಿಗಳಂತೆ ಗೌರವಿಸಿದರು. ಗೆದ್ದವರು ಏನನ್ನು ಉಣ್ಣು ತ್ತಾರೋ ಮತ್ತು ಉಡುತ್ತಾರೋ ಅವನ್ನೇ ಕೈದಿಗಳಿಗೂ ನೀಡಬೇಕೆಂದು ಅವರು ಸಾರಿದರು. ಅಷ್ಟಕ್ಕೂ,
ಬಡ್ಡಿ, ಮದ್ಯ, ಜೂಜು, ಲಂಚ, ವೇಶ್ಯಾವಾಟಿಕೆ ಇತ್ಯಾದಿಗಳ ವರಮಾನವಿಲ್ಲದೇ ಆಡಳಿತ ನಡೆಸಲು ಸಾಧ್ಯವಿಲ್ಲವೆಂದು ನಂಬಿರುವ ಇವತ್ತಿನ  ಸರಕಾರಗಳಿಗೆ ಭಿನ್ನವಾಗಿ ಇವೆಲ್ಲಕ್ಕೂ ನಿಷೇಧ ಹೇರಿಯೂ ಯಶಸ್ವಿ ಆಡಳಿತ ನಡೆಸಲು ಸಾಧ್ಯ ಎಂಬುದನ್ನು ಅವರು ಸಾಧಿಸಿ ತೋರಿಸಿದರು.  ಮದ್ಯದ ಆದಾಯವಿಲ್ಲದೇ ಮತ್ತು ಬಡ್ಡಿಯ ವ್ಯವಸ್ಥೆಯಿಲ್ಲದೇ ಕಲ್ಯಾಣ ರಾಷ್ಟ್ರದ ಕನಸು ಕಂಡರು. ಅದಕ್ಕೆ ಭದ್ರ ಅಡಿಗಲ್ಲು ಹಾಕಿದರು.  ಅನಕ್ಷರಸ್ಥರಿಗೆ ಅಕ್ಷರ ಕಲಿಸುವುದನ್ನೇ ಕೈದಿಗಳಿಗೆ ಶಿಕ್ಷೆಯಾಗಿ ಘೋಷಿಸಿದರು. ಇತಿಹಾಸದಲ್ಲಿ ಕೈದಿಗಳಿಗೆ ಈ ಬಗೆಯ ಶಿಕ್ಷೆಯನ್ನು ವಿಧಿಸಿದವರು ಅವರೊಬ್ಬರೇ. ಆದ್ದರಿಂದಲೇ, ಅವರೋರ್ವ ಸುಧಾರಕ. ಸಮಗ್ರ ಸುಧಾರಕ. ಅಂದಹಾಗೆ,
ಬ್ರಿಟನಿ-ಸುಡಾನಿ ಮಾತಿಗೆ ಸಿಟ್ಟಾದ ಗೆಳೆಯನೂ ಇವರ ಅನುಯಾಯಿಯೇ. ಏ ಕೆ ಕುಕ್ಕಿಲ

Tuesday, October 30, 2018

ಸೂರಃ ಫಾತಿಹಾ ಮತ್ತು ವಿಶ್ವಮಾನವ ಪ್ರಜ್ಞೆ: ಒಂದು ಜಿಜ್ಞಾಸೆ




1. ಏಕ
2. ಅನೇಕ
ಮಾನವ ಜಗತ್ತು ಯಾವಾಗಲೂ ಈ ಎರಡರಲ್ಲಿ ವಿಭಜನೆ ಗೊಂಡಿರುತ್ತದೆ. ಒಂದು- ತನ್ನ ಬಗ್ಗೆ ಮಾತ್ರ ಆಲೋಚಿಸುವ ವರ್ಗ; ತಾನು,  ತನ್ನ ಮಕ್ಕಳು, ತನ್ನ ಸಂಪತ್ತು, ತನ್ನ ಆರೋಗ್ಯ, ತನ್ನ ಯಶಸ್ಸು, ತನ್ನ ಲಾಭ, ತನ್ನ ನಿದ್ದೆ, ತನ್ನ ಕುಟುಂಬ, ತನ್ನ ವಿಶ್ರಾಂತಿ, ತನ್ನ ಮನೆ,  ತನ್ನ ವಾಹನ.. ಹೀಗೆ ತನ್ನತನದಲ್ಲಿ ಮುಂದುವರಿಯುತ್ತಿರುತ್ತದೆ. ಒಂದು ರೀತಿಯಲ್ಲಿ, ಏಕಕೇಂದ್ರಿತ ಬದುಕು. ಏಕಕೇಂದ್ರಿತ ಚಿಂತನೆ.  ಇನ್ನೊಂದು- ಇದರ ವಿರುದ್ಧದ ಚಿಂತನೆ. ಈ ಚಿಂತನೆಯಲ್ಲಿ ನಾನು ಇರುವುದಿಲ್ಲ, ನಾವು ಇರುತ್ತದೆ. ನನ್ನದು ಇರುವುದಿಲ್ಲ, ನಮ್ಮದು  ಇರುತ್ತದೆ. ಸಮಾಜದಲ್ಲಿ ಇವತ್ತು ಈ ಎರಡೂ ಭಾವಗಳು ಏಕಪ್ರಕಾರವಾಗಿ ಅಸ್ತಿತ್ವದಲ್ಲೂ ಇವೆ. ನಿಜವಾಗಿ, ಏಕದಲ್ಲಿ ಸ್ವಾರ್ಥಕ್ಕೆ ಅವಕಾಶ  ಹೆಚ್ಚು. ಅನೇಕದಲ್ಲಿ ನಿಸ್ವಾರ್ಥ ಮತ್ತು ವಿಶಾಲ ಭಾವಕ್ಕೆ ಒತ್ತು ಹೆಚ್ಚು. ಇದಕ್ಕೆ ಪವಿತ್ರ ಕುರ್‍ಆನಿನ ಸೂರಃ ಫಾತಿಹಾ ಉತ್ತಮ ಉದಾಹರಣೆ.  ಫಾತಿಹಾವನ್ನೇ ಇಲ್ಲಿ ಉದಾಹರಣೆಯಾಗಿ ಯಾಕೆ ಆಯ್ಕೆ ಮಾಡಲಾಯಿತು ಎಂದರೆ, ಅದು ಪವಿತ್ರ ಕುರ್‍ಆನಿನ ಒಂದು ಭಾಗವಾಗಿ ಮಾತ್ರ  ಉಳಿದಿರುವುದಲ್ಲ. ಅದು ಐದು ಹೊತ್ತಿನ ಕಡ್ಡಾಯ ನಮಾಝïನಲ್ಲಿ ಮುಸ್ಲಿಮರ ಸಂಗಡ ಇರುತ್ತದೆ. ಎಲ್ಲಿಯ ವರೆಗೆ ಎಂದರೆ,

ಅದನ್ನು  ಪಠಿಸದೇ ಇದ್ದರೆ ನಮಾಝï ಸಿಂಧುವಾಗುವುದಿಲ್ಲ. ಆದರೆ, ಈ ಸೂರಃ ಫಾತಿಹಾ ಏಕವನ್ನು ಪ್ರತಿನಿಧಿಸುವುದಿಲ್ಲ ಬದಲು ಅನೇಕತನವನ್ನು  ಪ್ರತಿ ಪಾದಿಸುತ್ತದೆ. ಮನೆಯ ಏಕಾಂತ ಕೋಣೆಯಲ್ಲಿ ಒಂಟಿಯಾಗಿ ನಮಾಝï ಮಾಡುವ ಮಹಿಳೆಯೋರ್ವಳು ದೇವನೊಂದಿಗೆ ಹೇಗೆ  ಸಂವಾದಿಸಬೇಕು? ಆಕೆ ಒಂಟಿ. ಕೋಣೆಯಲ್ಲಿ ಇನ್ನಾರೂ ಇಲ್ಲ. ಇಂಥ ಸಮಯದಲ್ಲಿ ತನ್ನ ದೇವನೊಂದಿಗೆ ಪ್ರಾರ್ಥಿಸುವಾಗ, ‘ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ’ (ಇಯ್ಯಾಕ ನಅïಬುದು) ಎಂದು ಯಾಕೆ ಹೇಳಬೇಕು? ಇಲ್ಲಿ ಬಹುವಚನದ ಅಗತ್ಯ ಏನಿದೆ? ದೇವರು  ಮತ್ತು ಓರ್ವ ದಾಸಿಯ ನಡುವಿನ ಖಾಸಗಿ ಸಂವಾದದಲ್ಲಿ ನಾನು ನಿನ್ನನ್ನು ಆರಾಧಿಸುತ್ತೇನೆ (ಇಯ್ಯಾಕ ಅಅïಬುದು) ಎಂದೇ ಹೇಳಬೇಕಿತ್ತಲ್ಲವೇ? ನಾನೋರ್ವಳೇ ಇರುವಾಗ ನಾವು ಎಂಬ ಬಹುವಚನ ಪ್ರಯೋಗ ಯಾಕೆ? ಇದು ಇಲ್ಲಿಗೇ ನಿಲ್ಲುವುದಿಲ್ಲ. ಇದರ ನಂತರದ  ವಚನ ಕೂಡ ಹಾಗೆಯೇ ಇದೆ. ‘ನಾವು ಕೇವಲ ನಿನ್ನೊಡನೆ ಸಹಾಯ ಯಾಚಿಸುತ್ತೇವೆ’ (ವ ಇಯ್ಯಾಕ ನಸ್ತಈನ್) ಎಂದು ಆ ಒಂಟಿ  ಮಹಿಳೆ ನಮಾಝïನಲ್ಲಿ ಅರಿಕೆ ಮಾಡಿಕೊಳ್ಳುತ್ತಾಳೆ. ಇಲ್ಲೂ ತಕರಾರು ಎತ್ತಬಹುದು. ‘ನಾನು ನಿನ್ನೊಡನೆ ಸಹಾಯ ಯಾಚಿಸುತ್ತೇನೆ’ (ವ  ಇಯ್ಯಾಕ ಅಸ್ತಈನ್) ಎಂದು ಹೇಳುವುದೇ ಸರಿಯಲ್ಲವೇ? ಒಂಟಿ ಮಹಿಳೆಯೋರ್ವಳು ಬಹುವಚನದಲ್ಲಿ ತನ್ನನ್ನು ನಿವೇದಿಸಿಕೊಳ್ಳುವುದೇಕೆ?

    ಮಾನವ ಸಮೂಹವನ್ನು ಸಮೂಹ ಪ್ರಜ್ಞೆಗೆ ತಳ್ಳುವುದೇ ಈ ಬಗೆಯ ಪದಪ್ರಯೋಗದ ಉz್ದÉೀಶ. ಈ ಸಮಾಜವನ್ನು ನಾನುವಿನಿಂದ  ನಾವಾಗಿ ಪರಿವರ್ತಿಸುವುದು. ನಿಜವಾಗಿ,

     ನಾನು ಅನ್ಯವಲ್ಲ. ನಾವು ಅನ್ಯ. ಅನುಮಾನವಿದ್ದರೆ ನಮ್ಮ ಬದುಕಿನಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯನ್ನೂ ಪರಿಶೀಲಿಸಿ  ನೋಡಿಕೊಳ್ಳಿ. ಎಲ್ಲದರಲ್ಲೂ ನಾನೇ ಇರುತ್ತದೆ.
1. ನಾನು ಇಂತಿಂಥ ಶೀರ್ಷಿಕೆಯಲ್ಲಿ, ಇಂತಿಂಥ ಪತ್ರಿಕೆಯಲ್ಲಿ, ಇಂತಿಂಥ ವಿಷಯದಲ್ಲಿ ಅಂಕಣವನ್ನು ಬರೆದಿದ್ದೇನೆ.
2. ನಾನು ಇಂತಿಂಥ ದಿವಸ ಇಂತಿಂಥ ಕಂಪೆನಿಯ, ಇಂತಿಂಥ ಮಾಡೆಲ್‍ನ ಕಾರು ಖರೀದಿಸಿದ್ದೇನೆ.
3. ನಾನು ಇಂತಿಂಥ ಕಡೆ, ಇಂತಿಂಥ ವಸ್ತುಗಳ ವ್ಯಾಪಾರ ಮಳಿಗೆಯನ್ನು ಪ್ರಾರಂಭಿಸಿದ್ದೇನೆ.
4. ನಾನು ಇಂತಿಂಥ ದಿನ, ಇಂತಿಂಥ ಕಡೆ ಪ್ರಯಾಣ ಹೊರಡಲಿದ್ದೇನೆ.
5. ನನ್ನ ಮನೆ ಇಲ್ಲಿದೆ, ನನ್ನ ಮಗ ಇಂತಿಂಥ ದೇಶದಲ್ಲಿ ದುಡಿಯುತ್ತಿದ್ದೇನೆ, ನಾನು ಇಂಥ ಕಂಪೆನಿಯಲ್ಲಿ ಉದ್ಯೋಗ ದಲ್ಲಿದ್ದೇನೆ. ನಾನು  ಭಾಷಣಗಾರ, ನಾನು ಬರಹಗಾರ, ನಾನು ಹಾಡುಗಾರ, ನಾನು ಕವಿ, ನಾನು ನಿರೂಪಕ, ನಾನು ರಾಷ್ಟ್ರಾಧ್ಯಕ್ಷ, ನಾನು ಛಾಯಾಗ್ರಾಹಕ..
ಹೀಗೆ ಬದುಕಿನ ಪ್ರತಿಯೊಂದು ಕ್ಷಣವೂ ನಾನುವಿನಿಂದ ಪ್ರಾರಂಭವಾಗುತ್ತದೆ. ನಾನುವಿನಲ್ಲೇ  ಅಂತ್ಯವಾಗುತ್ತದೆ. ಆದ್ದರಿಂದ, ಮನುಷ್ಯ  ನಾನಾಗುವುದು ಸುಲಭ. ನಾವಾಗುವುದು ಕಷ್ಟ. ಬಹುಶಃ ನಮಾಝïನಲ್ಲಿ ಫಾತಿಹಾವನ್ನು ಕಡ್ಡಾಯಗೊಳಿಸಿರು ವುದರ ಹಿಂದೆ ಈ ಉದ್ದೇಶವೂ ಇರಬಹುದು. ಮಾನವ ಜೀವನದ ಅನುಕ್ಷಣವನ್ನೂ ನಾನು ಆವರಿಸಿರುವಾಗ ಆ ಭಾವದಿಂದ ಕಳಚಿಕೊಳ್ಳುವ ಒಂದು ದಾರಿ ಮತ್ತು  ಎಚ್ಚರಿಕೆಯಾಗಿ ಅಲ್ಲಾಹನು ಫಾತಿಹಾವನ್ನು ಕಡ್ಡಾಯ ಮಾಡಿರಬಹುದು. ಫಾತಿಹಾ ಅಂದರೆ ಅದು ಬಹುವಚನದ ಗುಚ್ಛ. ನನಗೆ ಸನ್ಮಾರ್ಗವನ್ನು ತೋರಿಸು (ಇಹ್ದಿನಿಸ್ಸಿರಾತುಲ್ ಮುಸ್ತಕೀಮ್) ಎಂದು ಒಂಟಿ ವ್ಯಕ್ತಿಯೋರ್ವ ನಮಾಝïನಲ್ಲಿ ಬೇಡಿದರೆ ಅದು ಅಸಿಂಧು  ಕ್ರಮವಾಗುತ್ತದೆ. ಇಹ್ದಿನಸ್ಸಿರಾತುಲ್ ಮುಸ್ತಕೀಮ್ (ನಮಗೆ ಸನ್ಮಾರ್ಗವನ್ನು ತೋರಿಸು) ಎಂದೇ ಆತ/ಕೆ ಹೇಳಬೇಕಾಗುತ್ತದೆ. ‘ಅಸ್ಸಲಾಮು  ಅಲೈನಾ ವಆಲಾ ಇಬಾದಿಲ್ಲಾಹಿ ಸ್ಸಾಲಿಹೀನ್’ - ಅಲ್ಲಾಹನ ರಕ್ಷಣೆ ಮತ್ತು ಶಾಂತಿಯು ನಮ್ಮ ಮೇಲೆಯೂ ಸಜ್ಜನರಾದ ಎಲ್ಲ ದಾಸರ  ಮೇಲೆಯೂ ಇರಲಿ - ಎಂದು ಪ್ರಾರ್ಥಿಸುವುದು ಸಿಂಧು. ಇಲ್ಲಿ, ನಾವು ಇರುವಲ್ಲಿಗೆ ನಾನು ಸೇರಿಸಿದರೆ ಅದು ಅಸಿಂಧು. ಇನ್ನು ಒಂಟಿ  ವ್ಯಕ್ತಿ ಯೋರ್ವ ನಮಾಝïನಿಂದ ವಿರಮಿಸುವಾಗ, ‘ಅಲ್ಲಾಹನ ಅನುಗ್ರಹ ಮತ್ತು ಶಾಂತಿ ನಮ್ಮ ಮೇಲಿರಲಿ’ (ಅಸ್ಸಲಾಮು ಅಲೈಕುಮ್  ವರಹ್ಮತುಲ್ಲಾಹಿ) ಎಂದು ಬಹುವಚನದಲ್ಲೇ ಎಡ ಮತ್ತು ಬಲಗಡೆಗೆ ಕತ್ತು ತಿರುಗಿಸಿ ಹೇಳಬೇಕು. ಹಿಂದುಗಡೆ ಯಾರು ಇದ್ದರೂ ಇಲ್ಲದಿದ್ದರೂ ಏಕವಚನ ಬಳಕೆ ಮಾಡುವಂತಿಲ್ಲ.

     ಮಾನವನು ಏಕನಾಗಿ ಬದುಕಲು ಸಾಧ್ಯವಿಲ್ಲ ಮತ್ತು ಆ ಬಗೆಯ ಚಿಂತನೆ ಸಲ್ಲ ಅನ್ನುವುದನ್ನು ಸಾರುವುದಕ್ಕಾಗಿ ಈ ಬಗೆಯ ನಿಯಮಗಳನ್ನು ಇಸ್ಲಾಮ್ ವಿಧಿಸಿದೆ ಎಂದೇ ಅನಿಸುತ್ತದೆ. ಇಂಥ ಸೂಚನೆಗಳು ಕೇವಲ ಸೂರಃ ಫಾತಿಹಾ ದಲ್ಲಿ ಮಾತ್ರ ಕಾಣಸಿಗುವುದಿಲ್ಲ. ಪವಿತ್ರ  ಕುರ್‍ಆನಿನ ಬೇರೆ ಬೇರೆ ಕಡೆ ಮತ್ತು ಪ್ರವಾದಿ ಬದುಕಿನ ಅನೇಕಾರು ಸಂದರ್ಭಗಳಲ್ಲಿ ಈ ಭಾವವನ್ನು ಕಂಡುಕೊಳ್ಳಬಹುದು. ಪವಿತ್ರ  ಕುರ್‍ಆನಿನ 107ನೇ ಅಧ್ಯಾಯ- ಅಲ್ ಮಾಊನ್‍ನ ಅರ್ಧ ಭಾಗ ಹೀಗಿದೆ,

     ‘ಕರ್ಮಫಲದ ದಿನವನ್ನು ನಿರಾಕರಿಸುವವನನ್ನು ನೀವು ನೋಡಿದಿರಾ? ಆತನು ಅನಾಥನನ್ನು ನಿರ್ಲಕ್ಷಿಸುವವನು ಮತ್ತು ನಿರ್ಗತಿಕರಿಗೆ  ಆಹಾರ ನೀಡಲು ಪ್ರೇರೇಪಿಸದವನಾಗಿದ್ದಾನೆ.’
      ನಮಾಝï ನಿರ್ವಹಿಸುವ ವ್ಯಕ್ತಿಯನ್ನುದ್ದೇಶಿಸಿ ಹೇಳಲಾದ ಈ ಮಾತುಗಳಲ್ಲಿ ಒಳನೋಟಗಳಿವೆ. ನಮಾಝï ನಿರ್ವಹಿಸು ವವನನ್ನೇ  ಧರ್ಮನಿಷೇಧಿ ಎಂದು ಈ ಪೂರ್ಣ ಅಧ್ಯಾಯವು ಸಾರುತ್ತದಲ್ಲದೇ, ಅದಕ್ಕೆ ಕೊಡುವ ಕಾರಣಗಳಲ್ಲಿ ಎರಡು ಕಾರಣಗಳು ಆತ ನಾನು  ಆಗಿರುವುದು ಎಂದಾಗಿರುತ್ತದೆ ಅಥವಾ ಸೂರಃ ಫಾತಿಹಾ ಪ್ರತಿಪಾದಿಸುವ ನಾವು ಎಂಬ ಸಮೂಹ ಪ್ರಜ್ಞೆಗೆ ಆತ ಬದ್ಧನಾಗಿಲ್ಲ  ಎಂದಾಗಿರುತ್ತದೆ. ನಿರ್ಗತಿಕರು ಮತ್ತು ಅನಾಥರನ್ನು ನಿರ್ಲಕ್ಷಿಸುವ ಮೂಲಕ ಆತ ‘ನಾನು’ ಭಾವಕ್ಕೆ ಅಂಟಿಕೊಂಡಿದ್ದಾನೆ ಮತ್ತು ನಾವು ಭಾವದಿಂದ ದೂರ ಹೋಗಿದ್ದಾನೆ ಎಂದು ಪ್ರತಿಪಾದಿಸುತ್ತದೆ. ನಾವು ಎಂಬ ಭಾವದಲ್ಲಿ ನಿರ್ಗತಿಕರೂ ಇರುತ್ತಾರೆ, ಅನಾಥರೂ ಸೇರುತ್ತಾರೆ.  ಯಾಕೆಂದರೆ, ನಾವು ಎಂಬ ಭಾವ ವ್ಯಕ್ತಿಯನ್ನು ಸಮಾಜ ಜೀವಿಯಾಗಿ ಬದಲಾಯಿಸುತ್ತದೆ. ತನ್ನ ಪರಿಸರದಲ್ಲಿ, ಸಮಾಜದಲ್ಲಿ, ತಾನು  ನಡೆದಾಡುವ ರಸ್ತೆಯಲ್ಲಿ, ಹೀಗೆ ತನ್ನ ಕುಟುಂಬದಲ್ಲಿ ಏನೇ ಸಮಸ್ಯೆಗಳು ಕಂಡರೂ ಅದರಲ್ಲಿ ಆತ/ಕೆ ತನ್ನನ್ನು ಕಂಡು ಕೊಳ್ಳುತ್ತಾನೆ. ಅಲ್ಲಿನ  ಸಂಕಟವನ್ನು ತನ್ನ ಸಂಕಟವಾಗಿ ಪರಿಗಣಿಸು ತ್ತಾನೆ. ರಸ್ತೆಯಲ್ಲಿ ಅಸಹಾಯಕವಾಗಿ ಕುಳಿತ ವ್ಯಕ್ತಿಯನ್ನು ನೋಡಿ ನಿರಾಳಭಾವದಿಂದ  ಮುಂದೆ ಹೋಗಲು ಆತನಿಗೆ ಸಾಧ್ಯವಾಗುವುದಿಲ್ಲ. ಆದರೆ, ನಾನು ಭಾವಕ್ಕೆ ಇದು ಸಾಧ್ಯವಿದೆ. ಆದ್ದ ರಿಂದಲೇ, ಅನಾಥ ಮತ್ತು ನಿರ್ಗತಿಕರ ಬಗ್ಗೆ ನಿರ್ಲಕ್ಷ್ಯ  ತಾಳಿದುದನ್ನೇ ಗಂಭೀರ ಅಪರಾಧವಾಗಿ ಅಲ್ ಮಾಊನ್ ಅಧ್ಯಾಯ ಎತ್ತಿ ಹೇಳುವುದು. ಅಂದಹಾಗೆ,  ಮಗುವಿನ ಅಳು ಕೇಳಿದರೆ, ನಮಾಝನ್ನು ಬೇಗನೇ ಮುಗಿಸುವುದು ಪ್ರವಾದಿ ಯವರ(ಸ) ಸ್ವಭಾವವಾಗಿತ್ತು.

     ನಮಾಝನ್ನು ಸುದೀರ್ಘಗೊಳಿಸಬೇಕೆಂಬ ಭಾವನೆಯಿಂದ ನಾನು ನಿಲ್ಲುತ್ತೇನೆ. ಆಗ ನನಗೆ ಪುಟ್ಟ ಮಗುವಿನ ಅಳು ಕೇಳಿಸುತ್ತದೆ. ಆ  ಮಗುವಿನ ಅಳುವಿನಿಂದ ತಾಯಿಗೆ ಆಗುವ ತಳಮಳವನ್ನು ಗ್ರಹಿಸಿ ನಾನು ನಮಾಝïನಲ್ಲಿ ಕಡ್ಡಾಯ ಕ್ರಿಯೆಗಳನ್ನು ಮಾತ್ರ ನಿರ್ವಹಿಸುತ್ತೇನೆ’  ಎಂದು ಪ್ರವಾದಿ ಯವರು(ಸ) ಹೇಳಿರುವುದಾಗಿ ಬುಖಾರಿ  ಹದೀಸ್ ಗ್ರಂಥದಲ್ಲಿದೆ.

     ಪ್ರವಾದಿಯವರು ‘ನಾನು’ವಿನ ಪ್ರತಿನಿಧಿಯಾಗಿದ್ದರೆ, ಆ ತಾಯಿ ಮತ್ತು ಮಗುವಿಗೆ ಮರುಗಬೇಕಾದ ಅಗತ್ಯ ಇರಲಿಲ್ಲ. ಆದರೆ ಅವರು  ನಾವು ಭಾವದ ಎಷ್ಟು ಪ್ರಬಲ ಪ್ರತಿಪಾದಕರಾಗಿದ್ದರೆಂದರೆ, ಇನ್ನೊಬ್ಬರಿಗಾಗಿ ಕಡ್ಡಾಯ ನಮಾಝನ್ನೂ ಮೊಟಕುಗೊಳಿಸು ವಷ್ಟು. ಅದೇವೇಳೆ,  ಅವರು ನಮಾಝನ್ನು ಸಂಘಟಿತವಾಗಿ ನಡೆಸಲು ಆದೇಶಿಸಿದರು. ಅಷ್ಟಕ್ಕೂ, ವ್ಯಕ್ತಿಯೋರ್ವ ಗುಂಪಿನಲ್ಲಿ ಸೇರುವುದಕ್ಕೂ ಒಂಟಿಯಾಗಿ ನಿ ಲ್ಲುವುದಕ್ಕೂ ಬಾಹ್ಯ ವ್ಯತ್ಯಾಸಗಳಷ್ಟೇ ಇರುವುದಲ್ಲ. ಆಂತರಿಕವಾದ ವ್ಯತ್ಯಾಸಗಳೂ ಇವೆ. ಗುಂಪಿನಲ್ಲಿ ಒಬ್ಬನಾಗುವಾಗ ಆತನೊಳಗಿನ ಹಲವು  ಮೇಲರಿಮೆಗಳು ಕುಸಿದು ಹೋಗುತ್ತವೆ. ತನಗಿಂತ  ದೊಡ್ಡವರು ಇz್ದÁರೆ ಎಂದೋ ತಾನು ಏನೂ ಅಲ್ಲ ಎಂದೋ ಆತನಿಗೆ  ಮನವರಿಕೆಯಾಗುತ್ತದೆ. ಆತ ವಿವೇಚನೆಗೆ ತೊಡಗುತ್ತಾನೆ. ಸದಾ ಒಂಟಿಯಾಗಿರುವವರಿಗೆ ಈ ಭಾವ ಬರಲು ಸಾಧ್ಯವಿಲ್ಲ. ಸತ್ಯನಿಷೇಧಿಗಳೊಂದಿಗೂ ಉತ್ತಮವಾಗಿ ವರ್ತಿಸಿರಿ ಎಂದು ಪ್ರವಾದಿ ಇಬ್ರಾಹೀಮ(ಅ)ರಿಗೆ ಅಲ್ಲಾಹನು ಆದೇಶಿಸಿರುವುದಾಗಿ ಪ್ರವಾದಿ ಮುಹಮ್ಮದ್(ಸ)  ಹೇಳಿದ್ದಾರೆ. ಯಾಕೆಂದರೆ,
      ಅದು ಇಸ್ಲಾಮಿನ ಗುಣ. ಪ್ರವಾದಿಯವರು(ಸ) ಈ ಗುಣದ ಅಪ್ಪಟ ಮಾದರಿಯಾಗಿದ್ದರು. ಅವರ ಕಡು ವೈರಿಗ ಳಾಗಿದ್ದಂತಹವರನ್ನೂ ಅವರು ತಮ್ಮ ನಾವುತನದ ಗುಣದಿಂದಾಗಿ ಮಿತ್ರರಾಗಿಯೂ ಆಪ್ತರನ್ನಾಗಿಯೂ ಮಾಡಿ ಕೊಂಡರು. ಉಮರ್ ಬಿನ್  ಖತ್ತಾಬ್, ಖಾಲಿದ್ ಬಿನ್ ವಲೀದ್, ಅಮ್ರ್ ಬಿನ್ ಆಸ್, ಉರ್ವಾ ಬಿನ್ ಮಸ್‍ಊದ್, ಸುಹೈಲ್ ಬಿನ್ ಅಮ್ರ್, ಅಬೂಸುಫ್‍ಯಾನ್,  ಹಿಂದ್, ತುಫೈಲುದ್ದೂಸಿ, ವಹ್ಶಿ ಇತ್ಯಾದಿ ಇತ್ಯಾದಿ ಅನೇಕರು ಅವರ ಆಪ್ತ ವಲಯದಲ್ಲಿ ಸೇರಿಕೊಂಡದ್ದು ಅವರ ‘ನಾವು’ ನೀತಿಯಿಂದಾಗಿತ್ತು. ಮುಹಮ್ಮದರು ಪ್ರವಾದಿಯಾಗಿ 40ನೇ ಪ್ರಾಯದಲ್ಲಿ ನಿಯುಕ್ತರಾದ ಬಳಿಕದ ಬದುಕನ್ನು ಪರಿಶೀಲಿಸಿದರೆ ಅವರು ನಮಗೆ  ಯಾವ ಕಾರಣಕ್ಕಾಗಿ ಮುಖ್ಯವಾಗಬೇಕು ಅನ್ನುವುದು ಸ್ಪಷ್ಟವಾಗುತ್ತದೆ. ನಾನು ಪ್ರವಾದಿ ಎಂದು ಹೇಳಿಕೊಂಡು ಅವರು ಒಂಟಿಯಾಗಿ ನಿಲ್ಲುತ್ತಿದ್ದರೆ ಅವರ ಬಳಿಗೆ ಯಾರೂ ಬರುವ ಸಾಧ್ಯತೆ ಇರಲಿಲ್ಲ. ಅವರು ‘ನಾವು’ ಅಂದರು. ಎಲ್ಲರನ್ನೂ ಒಳಗೊಳ್ಳುವ ವಿಶಾಲ ಗುಣವನ್ನು  ಪ್ರದರ್ಶಿಸಿದರು. ವೈರಿಯನ್ನೂ ದ್ವೇಷಿಸದೇ ಪ್ರೀತಿಸಿದರು. ತನ್ನನ್ನು ಟೀಕಿಸಿದವರನ್ನೂ ದ್ವೇಷಿಸಲಿಲ್ಲ. ಆದ್ದರಿಂದ,

     ಬರೇ ನಮಾಝïನಲ್ಲಿ ಪಠಿಸಿ ಪುನೀತವಾಗುವುದಕ್ಕಾಗಿ ಇರುವ ಅಧ್ಯಾಯವಲ್ಲ, ಫಾತಿಹಾ. ಅದು ಪಠಿಸುವವರನ್ನು ಸ್ವಾರ್ಥ ಮುಕ್ತ  ರಾಗುವಂತೆ ಮತ್ತೆ ಮತ್ತೆ ಒತ್ತಾಯಿಸುವ ಅಧ್ಯಾಯ. ನಮ್ಮೊಳಗಿನ ನಾನನ್ನು ನಾವಾಗಿ ಪರಿವರ್ತಿಸುವುದಕ್ಕೆ ಒತ್ತಡ ಹೇರುವ ಅಧ್ಯಾಯ.  ಅದನ್ನು ಅರಿತು ಪಠಿಸಿದರೆ ಪಠಿಸಿದವರು ವಿಶ್ವಮಾನವರಾಗುತ್ತಾರೆ.

Tuesday, October 23, 2018

ಎ ಜಿಹಾದ್ ಫಾರ್ ಲವ್ ಮತ್ತು ಲವ್ ಜಿಹಾದ್



    ‘ಲವ್ ಜಿಹಾದ್ ಅನ್ನುವ ಪರಿಕಲ್ಪನೆಯಿಲ್ಲ ಮತ್ತು ಅಂಥದ್ದೊಂದು  ಹೆಸರಲ್ಲಿ ಸಂಘಟಿತ ಚಟುವಟಿಕೆಗಳು ನಡೆಯುತ್ತಿಲ್ಲ’ ಎಂದು ಡಿಜಿಪಿ ಜಾಕೊಬ್ ಪೊನ್ನೊಸೆಯವರು ಕೇರಳ ಹೈಕೋರ್ಟ್‍ಗೆ 2009 ನವೆಂಬರ್ ನಲ್ಲಿ ವರದಿ ಸಲ್ಲಿಸುವುದಕ್ಕಿಂತ ಎರಡು ವರ್ಷಗಳ ಮೊದಲು- 2007ರ ಸೆಪ್ಟೆಂಬರ್ ನಲ್ಲಿ- ಕೆನಡಾದ ಟೊರೆಂಟೋದಲ್ಲಿ ನಡೆದ ‘ಟೊರೆಂಟೋ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಸಿನಿಮಾವೊಂದು ಪ್ರದರ್ಶನಗೊಂಡಿತ್ತು. ಹೆಸರು,

ಎ ಜಿಹಾದ್ ಫಾರ್ ಲವ್    
     ಭಾರತದಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರ, ಮಾಧ್ಯಮಗಳು ಮತ್ತು ಬರಹಗಾರರೂ ‘ಲವ್ ಜಿಹಾದ್’ ಎಂಬ ಪದಪುಂಜವನ್ನು ದೊಡ್ಡ ಮಟ್ಟದಲ್ಲಿ ಬಳಕೆಗೆ ತಂದದ್ದು  ಎ ಜಿಹಾದ್ ಫಾರ್ ಲವ್ ಸಿನಿಮಾ ಪ್ರದರ್ಶನದ ನಂತರ. ಹಾಗಂತ, ಎ ಜಿಹಾದ್ ಫಾರ್ ಲವ್‍ಗೂ ಲವ್ ಜಿಹಾದ್‍ಗೂ ಧ್ಯನ್ಯಾರ್ಥದ ಹೊರತಾಗಿ ಯಾವ ಸಂಬಂಧವೂ ಇಲ್ಲ. ಎ ಜಿಹಾದ್ ಫಾರ್ ಲವ್ ಸಂಪೂರ್ಣವಾಗಿ ಲವ್ ಜಿಹಾದ್‍ಗಿಂತ ಭಿನ್ನ. ಅದು ಹೆಣ್ಣು ಗಂಡಿನ ಪ್ರೇಮ ಪ್ರಕರಣದ ಸುತ್ತ ಹೆಣೆದಿರುವ ಸಿನಿಮಾವೂ ಅಲ್ಲ. ಹಿಂದೂ ಯುವತಿ ಮತ್ತು ಮುಸ್ಲಿಮ್ ಯುವಕನ ನಡುವೆ ಅರಳುವ ಪ್ರೇಮವನ್ನು ಮುಂದಿಟ್ಟುಕೊಂಡು ರಚಿಸಲಾದ ಚಿತ್ರ ಕತೆಯೂ ಅದಕ್ಕಿಲ್ಲ. ಅದು ಸಲಿಂಗರತಿಯ ಸುತ್ತ ಹೆಣೆಯಲ್ಪಟ್ಟ ಚಿತ್ರ. ಮಾತ್ರವಲ್ಲ, ಸಿಂಗಾಪುರವೂ ಸೇರಿದಂತೆ ಹೆಚ್ಚಿನೆಲ್ಲ ಮುಸ್ಲಿಮ್ ರಾಷ್ಟ್ರಗಳು ನಿಷೇಧ ಹೇರಿದ ಸಿನಿಮಾವೂ ಹೌದು. ತಮಾಷೆ ಏನೆಂದರೆ,

      ಈ ಸಿನಿಮಾವನ್ನು ತಯಾರಿಸಿದ್ದು ಹಲಾಲ್ ಫಿಲ್ಮ್ಸ್ ಎಂಬ ಸಂಸ್ಥೆ. ಅಲ್ಲದೇ, ಸುಡಾನಿನ ದಿ ಡಾಕ್ಯುಮೆಂಟರಿ ಫಂಡ್, ಬ್ರಿಟನ್ನಿನ ಚಾನೆಲ್ 4 ಟೆಲಿವಿಷನ್, ಜರ್ಮನಿಯ ZDF, ಫ್ರಾನ್ಸ್ ನ Arte, ಅಮೇರಿಕದ Logo, ಆಸ್ಟ್ರೇಲಿಯಾದ SBS ಸಂಸ್ಥೆಗಳೂ ಈ ಸಿನಿಮಾದ ತಯಾರಿಯಲ್ಲಿ ಬೆನ್ನೆಲುಬಾಗಿ ನಿಂತವು. 6 ವರ್ಷಗಳ ಸತತ ಶ್ರಮ ಮತ್ತು ಇರಾಕ್, ಇರಾನ್, ಸೌದಿ, ಪಾಕ್, ಈಜಿಪ್ಟ್, ಬಂಗ್ಲಾ, ಟರ್ಕಿ, ಭಾರತ, ಫ್ರಾನ್ಸ್, ಅಮೇರಿಕ, ಬ್ರಿಟನ್, ದಕ್ಷಿಣ ಆಫ್ರಿಕಾವೂ ಸೇರಿದಂತೆ 12 ರಾಷ್ಟ್ರಗಳಲ್ಲಿ ನಡೆಸಿದ ಚಿತ್ರೀಕರಣದ ಒಟ್ಟು ಫಲಿತಾಂಶವೇ ಎ ಜಿಹಾದ್ ಫಾರ್ ಲವ್. ಅರಬ್ ರಾಷ್ಟ್ರಗಳಲ್ಲಿ ಚಿತ್ರೀಕರಣಕ್ಕಾಗಿ ಅನುಮತಿಯನ್ನೇ ಪಡೆದಿರಲಿಲ್ಲ. ಅನುಮತಿ ಸಿಗಲ್ಲ ಅನ್ನುವುದು ಚಿತ್ರ ತಂಡಕ್ಕೆ ಖಚಿತವಿತ್ತು. ಆದ್ದರಿಂದ ಕದ್ದು ಮುಚ್ಚಿ, ಅನುಮಾನ ಬರದ ರೀತಿಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಸಿನಿಮಾ ನಿರ್ದೇಶಕನ ಹೆಸರೂ ಚೆನ್ನಾಗಿದೆ - ಪರ್ವೇಝ ಶರ್ಮಾ ಮತ್ತು ಸ್ಯಾಂಡಿ ಡುಬುವೋಸ್ಕಿ. ಅಂದಹಾಗೆ,

    ಸಿನಿಮಾಕ್ಕೆ ಬಿಸ್ಮಿಲ್ಲಾ  ಎಂದು ಹೆಸರಿಡಬೇಕೆಂದು ಆರಂಭದಲ್ಲಿ ಪರ್ವೇಝ ಶರ್ಮಾ ನಿರ್ಧರಿಸಿದ್ದರಂತೆ. ಆದರೆ, ವಿವಾದಾತ್ಮಕವಾದೀತು ಅನ್ನುವ ಭಯವು ಎ ಜಿಹಾದ್ ಫಾರ್ ಲವ್ ಎಂದು ನಾಮಕರಣ ಮಾಡುವುದಕ್ಕೆ ಕಾರಣವಾಯಿತು ಎಂದವರು ಹೇಳಿದ್ದಾರೆ. ಅಷ್ಟಕ್ಕೂ,

     ಎ ಜಿಹಾದ್ ಫಾರ್ ಲವ್ ಎಂಬುದರ ಬದಲು ಬಿಸ್ಮಿಲ್ಲಾ ಎಂದು ನಾಮಕರಣ ಮಾಡಿರುತ್ತಿದ್ದರೆ ಏನಾಗುತ್ತಿತ್ತು? ಲವ್ ಜಿಹಾದ್ ಅನ್ನುವ ಪದಪುಂಜ ಅಸ್ತಿತ್ವಕ್ಕೆ ಬರುತ್ತಿತ್ತೇ? ಲವ್ ಜಿಹಾದ್ ಎಂಬುದು ಎ ಜಿಹಾದ್ ಫಾರ್ ಲವ್‍ನಿಂದ ಉತ್ಪತ್ತಿ ಯಾಗಿರಬಹುದೇ? ಹೇಳಲಾಗದು. ಯಾಕೆಂದರೆ,

     ಹೆಚ್ಚಿನ ಚಳವಳಿಗಳನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದೇ ನುಡಿಗಟ್ಟುಗಳು. ಸೆಕ್ಯುಲರಿಸಮ್‍ಗೆ ಅಡ್ವಾಣಿಯವರು ಸ್ಯೂಡೋ ಅನ್ನುವ ಪದವನ್ನು ಸೇರಿಸಿದರು. ಅವರು ಸೇರಿಸಿದ ಈ ಹೆಚ್ಚುವರಿ ಪದವು ನಿಧಾನವಾಗಿ ಸೆಕ್ಯುಲರಿಸಂನ ಗುಣಮಟ್ಟವನ್ನೇ ಕೆಡಿಸುವಲ್ಲಿ ಯಶಸ್ವಿಯಾಯಿತು. ಜಾತ್ಯತೀತತೆ ಅನ್ನುವುದೇ ತಮಾಷೆಗೆ ಒಳಗಾಯಿತು. ಜಾತ್ಯತೀತರೆಂದರೆ, ಸೋಗಲಾಡಿಗಳು, ಅಲ್ಲೊಂದು -ಇಲ್ಲೊಂದು  ನುಡಿಯುವವರು, ಖಚಿತತೆ ಇಲ್ಲದವರು, ಧರ್ಮ ವಿರೋಧಿಗಳು ಇತ್ಯಾದಿ ಇತ್ಯಾದಿ ಐಬುಗಳುಳ್ಳವರು ಎಂಬುದಾಗಿ ಜನಸಾಮಾನ್ಯರನ್ನು ನಂಬಿಸುವುದಕ್ಕೆ ಸ್ಯೂಡೋ ಯಶಸ್ವಿಯಾಯಿತು. ದಶಕಗಳ ಹಿಂದೆ ಸೆಕ್ಯುಲರಿಸಂ ಎಂಬ ಪದವು ಎಷ್ಟು ಶೇಕಡಾ ಬಳಕೆಯಾಗುತ್ತಿತ್ತೋ ಅದರ ಅರ್ಧ ಶೇಕಡಾವೂ ಇವತ್ತು ಬಳಕೆಯಾಗುತ್ತಿಲ್ಲ. ಅದರ ಜಾಗದಲ್ಲಿ, ‘ನಾನು ಇಂತಿಂಥ ಜಾತಿಯವ, ಇಂತಿಂಥ ಧರ್ಮದವ, ನಾನು ಪೂಜಿಸುವ ದೇವ ಇಂಥವನು’ ಎಂಬುದೆಲ್ಲ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಪ್ರಧಾನಿಯವರು ಏಕಾದಶಿ ಉಪವಾಸ ಆಚರಿಸಿದರೋ ಇಲ್ಲವೋ, ಮಂದಿರ ಪ್ರವೇಶದ ಮೊದಲು ಮುಖ್ಯಮಂತ್ರಿಗಳ ಮೆನು ಏನಾಗಿತ್ತು, ಮಾಂಸಾಹಾರ ಸೇವಿಸುವ ವ್ಯಕ್ತಿ ಮಂದಿರ ಪ್ರವೇಶಿಸಬಹುದೇ, ಮಂದಿರ ಆವರಣದಲ್ಲಿ ನಮಾಝ ಮಾಡಬಹುದೇ ಇತ್ಯಾದಿಗಳು ಚರ್ಚೆಯ ಮುನ್ನೆಲೆಗೆ ಬರುವುದರ ಹಿಂದೆ ಅಡ್ವಾಣಿಯವರ ಸ್ಯೂಡೋ ಪದಪುಂಜಕ್ಕೆ ಪಾತ್ರವಿದೆ. ಅದು ಜಾತ್ಯತೀತತೆಯ ಮೂಲ ಗುಣವನ್ನೇ ಪ್ರಶ್ನಿಸುವ ಆಯುಧವಾಗಿ ಮಾರ್ಪಾಟಾಯಿತು. ಬಲಪಂಥೀಯ ಕಾರ್ಯಕರ್ತರು ಆ ಪದವನ್ನು ಸೆಕ್ಯುಲರಿಸಂಗೆ ಹೊಡೆಯುವ ಮೊನೆಯಾಗಿ ಬಳಸಿಕೊಂಡರು. ನೆಹರೂ, ಗಾಂಧೀಜಿಯನ್ನೂ ಆ ಮೊನೆ ಬಿಡಲಿಲ್ಲ. ಸೆಕ್ಯುಲರಿಸಂ ಅನ್ನು ಪ್ರತಿಪಾದಿಸುವ ಪ್ರತಿಯೊಬ್ಬರ ಹುಳುಕುಗಳಿಗೂ ದುರ್ಬೀನು ಹಿಡಿಯುವುದು ಮತ್ತು ಅವರಿಂದ ಆಗಿರಬಹುದಾದ ಮಾನವ ಸಹಜ ಪ್ರಮಾದಗಳನ್ನು ಎತ್ತಿ ಹಿಡಿದು ಈತ ಸ್ಯೂಡೋ ಎಂದು ಫತ್ವ ಹೊರಡಿಸುವುದು ಇವರ ಕಾಯಕವಾಗತೊಡಗಿತು. ಬರಬರುತ್ತಾ ಈ ಪ್ರತಿಪಾದನೆಗೆ ಮಾನ್ಯತೆಯೂ ಲಭ್ಯವಾಗತೊಡಗಿತು. ಕೋಮು ಸೌಹಾರ್ದ ಅನ್ನುವ ಪದಪುಂಜ ಕೂಡ ಇವತ್ತು ವಿರಳವಾಗಿ ಬಳಕೆಗೀಡಾಗುತ್ತಿದೆ. ಒಂದು ಕಾಲದ ಬಹುಪಯೋಗಿ ಪದ ಇದು. ಆದ್ದರಿಂದ,

ಲವ್ ಜಿಹಾದ್‍ಗೂ ದೀರ್ಘಾಯುಷ್ಯವಿದೆ ಎಂದು ಹೇಳಲಾಗದು.

     ಈಗಾಗಲೇ ರಾಷ್ಟ್ರೀಯ ತನಿಖಾ ಆಯೋಗವು (NIA) ಈ ಬಗ್ಗೆ ಷರಾ ಬರೆದಿದೆ. ಅಂತರ್ ಧರ್ಮೀಯ ವಿವಾಹಗಳಲ್ಲಿ ಲವ್ ಮಾತ್ರ ಇದೆ, ಜಿಹಾದ್ ಇಲ್ಲ ಎಂದು ಅದು ಹೇಳಿರುವುದು ಇದನ್ನೇ ಸೂಚಿಸುತ್ತದೆ. ಮಾತ್ರವಲ್ಲ, ಲವ್ ಜಿಹಾದ್ ಅನ್ನು ರಾಜಕೀಯವಾಗಿ ಬಳಸಿಕೊಂಡ ಪಕ್ಷವೇ ಅಧಿಕಾರದಲ್ಲಿರುವಾಗ ಮತ್ತು ಅದರ ಅಧೀನದಲ್ಲೆ  ಈ NIA  ಇರುವಾಗಲೂ ಇಂಥದ್ದೊಂದು ತನಿಖಾ ವರದಿ ತಯಾರಾಗಿದೆ ಅನ್ನುವುದು ಅತ್ಯಂತ ಮಹತ್ವಪೂರ್ಣ. ಇದರಲ್ಲಿ ಎರಡು ಅಂಶಗಳು ಸ್ಪಷ್ಟವಾಗುತ್ತದೆ.

     1. ಲವ್ ಜಿಹಾದ್ ಇದೆ ಎಂಬುದನ್ನು ಸಾಬೀತುಪಡಿಸುವುದು ಬಿಜೆಪಿಯ ಆದ್ಯತಾ ಪಟ್ಟಿಯಲ್ಲಿ ಸೇರಿಲ್ಲ.
     2. ಲವ್ ಜಿಹಾದ್‍ನಿಂದ ಅದು ಏನನ್ನು ಬಯಸಿತ್ತೋ ಅದು ಈಡೇರಿದೆ. ಈಗ ಈ ವಿಷಯ ಅದಕ್ಕೆ ಮುಖ್ಯವಲ್ಲ.

    ಬಹುಶಃ, ಇವೆರಡೂ ಸರಿ ಅನ್ನಿಸುತ್ತದೆ. 2008ರ ಬಳಿಕ ದಿಂದ 2018ರ ನಡುವಿನ ಅವಧಿಯಲ್ಲಾದ ಬೆಳವಣಿಗೆ, ಚರ್ಚೆ, ಥಳಿತ, ರಾಜಕೀಯ ಭಾಷಣಗಳನ್ನು ಅವಲೋಕಿಸಿದರೆ, ಲವ್ ಜಿಹಾದ್ ಬಿಜೆಪಿಗೆ ಏನನ್ನು ಕೊಟ್ಟಿದೆ ಅನ್ನುವುದು ಗೊತ್ತಾಗುತ್ತದೆ. ಈಗ ಅದರ ಕಾವು ಕಡಿಮೆಯಾಗಿದೆ. ಒಂದು ಕಾಲದಲ್ಲಿ ಮುಸ್ಲಿಮ್ ಭಯೋತ್ಪಾದನೆ ಈ ದೇಶದಲ್ಲಿ ಬಹುದೊಡ್ಡ ಚರ್ಚಾ ವಿಷಯವಾಗಿತ್ತು. ಇಂಡಿಯನ್ ಮುಜಾಹಿದೀನ್, ಲಷ್ಕರೆ ತ್ವಯ್ಯಿಬಾ, ಹಿಝ್ಬುಲ್ ಮುಜಾಹಿದೀನ್ ಇತ್ಯಾದಿ ಹೆಸರುಗಳು ಪತ್ರಿಕೆಗಳಲ್ಲಿ ಉಲ್ಲೇಖವಾಗದ ದಿನಗಳೇ ಇದ್ದಿರಲಿಲ್ಲ. ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರವು ಭಯೋತ್ಪಾದನೆಯನ್ನು ಮುಸ್ಲಿಮರ ಜೊತೆಗಿಟ್ಟು ನೋಡುವುದನ್ನು ಕಾಯಕವನ್ನಾಗಿ ಮಾಡಿಕೊಂಡಿತ್ತು. ‘ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ’ ಎಂದು ಅಡ್ವಾಣಿಯವರು ಹೇಳಿದ್ದೂ ಇವೇ ದಿನಗಳಲ್ಲಿ. ಹಾಗಂತ,

    ಇಂಥದ್ದೊಂದು ಚರ್ಚೆ ಮತ್ತು ಭಯ ಹುಟ್ಟಿಕೊಂಡದ್ದು ಶೂನ್ಯದಿಂದಲ್ಲ. ವಿದೇಶಗಳಲ್ಲಿ ಅದಾಗಲೇ ಭಯೋತ್ಪಾದನೆಯು ಬಹುಮುಖ್ಯ ಚರ್ಚಾ ವಿಷಯವಾಗಿತ್ತು. ಇಸ್ಲಾಮ್, ಮುಸ್ಲಿಮ್, ಜಿಹಾದ್, ಟೆರರಿಸಂಗಳು ಅಲ್ಲಿನ ಮಾಧ್ಯಮಗಳ ಇಷ್ಟದ ಪದಪುಂಜಗಳಾಗಿದ್ದುವು. ಗಡ್ಡ, ಮುಂಡಾಸು, ಪೈಜಾಮ ಧರಿಸಿದ ತಾಲಿಬಾನ್‍ಗಳನ್ನು ಮಾಧ್ಯಮಗಳು ಪ್ರತಿದಿನ ಅಚ್ಚು ಹಾಕುತ್ತಿದ್ದುವು. ಅಫಘಾನಿಸ್ತಾನ ಮಹಿಳೆಯರು ಧರಿಸುವ ಶಟಲ್ ಕಾಕ್ ಬುರ್ಖಾವನ್ನು ತಮಾಷೆಯ ವಸ್ತುವಾಗಿ ಬಿಂಬಿಸಲಾಗುತ್ತಿತ್ತು. ಆ ಬುರ್ಖಾವೇ ಮೂಲಭೂತವಾದಿಯಾಯಿತು. ಆಗ ಭಯೋತ್ಪಾದನೆಯನ್ನೇ ಮುಂದಿಟ್ಟು ಬಿಜೆಪಿ ರಾಜಕೀಯ ತಂತ್ರವನ್ನು ಹೆಣೆಯಿತು. ಮುಸ್ಲಿಮರನ್ನು ಪ್ರಶ್ನೆಯ ಮೊನೆಯನ್ನು ನಿಲ್ಲಿಸುವುದು ಮತ್ತು ಅವರ ದೇಶನಿಷ್ಠೆಯನ್ನು ಪ್ರಶ್ನಾರ್ಹಗೊಳಿಸುವುದನ್ನು ವ್ರತದಂತೆ ನಡೆಸಿಕೊಂಡು ಬಂದಿತು. ಒಂದು ರೀತಿಯಲ್ಲಿ, ಜಾಗತಿಕ ಬೆಳವಣಿಗೆಗಳಿಂದ ಪ್ರೇರಿತಗೊಂಡು ಬಿಜೆಪಿ ಭಾರತದಲ್ಲಿ ಅಳವಡಿಸಿಕೊಂಡ ರಾಜಕೀಯ ತಂತ್ರಗಾರಿಕೆ ಇದು. ಆದ್ದರಿಂದಲೇ, ಲವ್‍ಜಿಹಾದ್ ಎಂಬ ಪದಗುಚ್ಛದ ಹುಟ್ಟಿನ ಬಗ್ಗೆ ಅನುಮಾನ ಮೂಡುವುದು.

      ಎ ಜಿಹಾದ್ ಫಾರ್ ಲವ್ ಎಂಬುದು ಸಂಪೂರ್ಣವಾಗಿ LGBT ಸಮುದಾಯವನ್ನೇ ಕೇಂದ್ರೀಕರಿಸಿ ನಿರ್ಮಿಸಲಾದ ಸಿನಿಮಾ. 2008 ಮೇಯಲ್ಲಿ ನಡೆದ ಟೋಕಿಯೋ ಇಂಟರ್ ನ್ಯಾಶನಲ್ ಲೆಸ್ಬಿಯನ್ ಆ್ಯಂಡ್ ಗೇ ಫಿಲ್ಮ್ ಫೆಸ್ಟಿವಲ್‍ನಲ್ಲಿ ಅದು ಪ್ರದರ್ಶನಗೊಂಡಿರುವುದಕ್ಕೂ ಇದುವೇ ಕಾರಣ. ಬರೇ ಇಷ್ಟೇ ಆಗಿದ್ದರೆ ಎ ಜಿಹಾದ್ ಫಾರ್ ಲವ್ ಹೆಸರಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿರಲಿಲ್ಲ. 2007ರ ಕೊನೆಯಿಂದ 2008ರ  ಕೊನೆಯ ನಡುವೆ ಈ ಸಿನಿಮಾವು ಸುಮಾರು ನೂರರಷ್ಟು  ಫಿಲ್ಮ್ ಫೆಸ್ಟಿವಲ್‍ಗಳಲ್ಲಿ ಪ್ರದರ್ಶನವನ್ನು ಕಂಡಿತು. ಬ್ರಿಟನ್‍ನ ದಿ ಗಾರ್ಡಿಯನ್, ಜರ್ಮನಿಯ ಡೇರ್ ಸ್ಪೈಜಲ್, ಅಮೇರಿಕದ ದಿ ನೇಶನ್, ನ್ಯೂಯಾರ್ಕ್ ಟೈಮ್ಸ್, ಸಿನಿಮಾ ಪೊಲಿಟಿಕಾ, ನ್ಯೂಯಾರ್ಕ್ ಮ್ಯಾಗಸಿನ್, ವಾಲ್‍ಸ್ಟ್ರೀಟ್ ಜರ್ನಲ್, ನ್ಯಾಶನಲ್ ಪಬ್ಲಿಕ್ ರೇಡಿಯೋ, ಬೋಸ್ಟನ್ ಸ್ಲಾಬ್, ಸ್ಯಾನ್ ಫ್ರಾನ್ಸಿಸ್ಕೋ ಕ್ರೋನಿಕಲ್, ಡೈಲಿ ನ್ಯೂಸ್ ಈಜಿಪ್ಟ್, ಫಿಲ್ಮ್ ಜರ್ನಲ್ ಇಂಟರ್ ನ್ಯಾಶನಲ್, ದಿ ಸಂಡೇ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಯುರೋಪಿನ ಬಹುತೇಕ ರಾಷ್ಟ್ರಗಳ ದೈನಿಕಗಳು ಈ ಸಿನಿಮಾದ ಬಗ್ಗೆ ವಿಮರ್ಶೆಗಳನ್ನು ಬರೆದುವು. ಭಾರತದಲ್ಲಿ ಎನ್‍ಡಿಟಿವಿ ಈ ಸಿನಿಮಾವನ್ನು ಪ್ರಸಾರ ಮಾಡುವ ಧೈರ್ಯವನ್ನು ಪ್ರದರ್ಶಿಸಿತು. ಬಹುಶಃ,

     ಒಂದೇ ವರ್ಷದೊಳಗೆ ಎ ಜಿಹಾದ್ ಫಾರ್ ಲವ್ ಸಿನಿಮಾಕ್ಕೆ ದಕ್ಕಿರುವ ಈ ಮಟ್ಟದ ಪ್ರಚಾರವು ‘ಲವ್ ಜಿಹಾದ್’ ಪದದ ಹುಟ್ಟಿಗೆ ಕಾರಣವಾಗಿರಬೇಕೆಂದು ಅನಿಸುತ್ತದೆ. ಪರ್ವೇಝ ಶರ್ಮಾರ ಸಿನಿಮಾದ ಶೀರ್ಷಿಕೆಯಿಂದ ತಮಗೆ ಬೇಕಾದಷ್ಟನ್ನು ಮಾತ್ರ ಪಡೆದುಕೊಂಡ ಇಲ್ಲಿನ ಬಲಪಂಥೀಯ ಚಿಂತಕರು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ತಂತ್ರ ಹೂಡಿದರು. ಪದೇ ಪದೇ ಲವ್ ಜಿಹಾದ್ ಎಂದು ಹೇಳತೊಡಗಿದರು. ಇದರ ಪ್ರಭಾವ ಎಷ್ಟಾಯಿತೆಂದರೆ, ಕೇರಳದ ಡಿಜಿಪಿ ಪೊನ್ನೊಸೆಯವರ ವರದಿಯನ್ನು ನ್ಯಾಯಾಧೀಶರಾದ ಕೆ.ಟಿ. ಶಂಕರನ್ ಅವರು ತಿರಸ್ಕರಿಸಿದರು. ಕರ್ನಾಟಕದಲ್ಲೂ ಲವ್ ಜಿಹಾದ್ ಭಯ ಆವರಿಸಿಕೊಂಡಿತು. ಹಿಂದೂ ಹೆಣ್ಮಕ್ಕಳು ಮತಾಂತರವಾಗುತ್ತಿರುವುದು ನಿಜ ಎಂದು 2010ರಲ್ಲಿ ಕರ್ನಾಟಕ ಸರಕಾರವೇ ಆತಂಕ ತೋಡಿಕೊಂಡಿತು. 2012ರಲ್ಲಿ ಕೇರಳ ಪೊಲೀಸರು ಲವ್ ಜಿಹಾದ್ ಎಂಬ ಹೆಸರಲ್ಲಿ ಸಂಘಟಿತ ಮತಾಂತರ ಷಡ್ಯಂತ್ರವಿರುವುದನ್ನು ಪುನಃ ನಿರಾಕರಿಸಿದರು. 2014ರಲ್ಲಿ ಉತ್ತರ ಪ್ರದೇಶದ ಪೊಲೀಸರೂ ಇದನ್ನೇ ಹೇಳಿದರು. ತನಿಖೆಗೆಂದು ಅವರು ಎತ್ತಿಕೊಂಡ 4 ಲವ್ ಜಿಹಾದ್ ಪ್ರಕರಣಗಳಲ್ಲಿ ಯಾವುದೂ ಜಿಹಾದ್ ವ್ಯಾಪ್ತಿಯಲ್ಲಿಲ್ಲ ಎಂದರು. 2017ರಲ್ಲಿ ಹಾದಿಯಾ-ಶಫಿನ್ ಜಹಾನ್ ಮದುವೆಯನ್ನು ಅಮಾನ್ಯಗೊಳಿಸುವ ಮೂಲಕ ಕೇರಳ ಹೈಕೋರ್ಟು ಲವ್ ಜಿಹಾದನ್ನು ಮತ್ತೊಮ್ಮೆ ಚರ್ಚಾರ್ಹಗೊಳಿಸಿತು. ಇದೀಗ NIA  ಈ ಎಲ್ಲ ಚರ್ಚೆಯನ್ನೂ ಬೋಗಸ್ ಎಂದು ತಳ್ಳಿ ಹಾಕಿದೆ. ಅಂದಹಾಗೆ, ಈ ಚರ್ಚೆಯನ್ನು ಹುಟ್ಟು ಹಾಕಿದವರ ಅಧೀನದಲ್ಲೇ  ಈ ತನಿಖಾ ಸಂಸ್ಥೆ ಇದೆ ಅನ್ನುವುದು ಇಲ್ಲಿನ ಬಹು ದೊಡ್ಡ ತಮಾಷೆ. ನಿಜವಾಗಿ,

   ಕೋಬ್ರಾ ಪೋಸ್ಟ್ 2015ರಲ್ಲಿ ನಡೆಸಿದ ಸ್ಟಿಂಗ್ ಆಪರೇಶನ್ ನಲ್ಲಿ ಉತ್ತರ ಪ್ರದೇಶದ ಬಿಜೆಪಿ ನಾಯಕರಾದ ಸಂಜಯ್ ಅಗರ್‍ವಾಲ್ ಮತ್ತು ಓಂಕಾರ್ ಸಿಂಗ್‍ರು ಈ ಸತ್ಯವನ್ನು ಬಾಯಿ ಬಿಟ್ಟಿದ್ದರು. ಲವ್ ಜಿಹಾದ್ ಅನ್ನುವುದು ಬಿಜೆಪಿಯ ರಾಜಕೀಯ ತಂತ್ರ ಅನ್ನುವುದು ಆಗಲೇ ಗೊತ್ತಾಗಿತ್ತು. ಈಗ NIA ಯೂ ಅದನ್ನೇ ಹೇಳಿದೆ. ಅಂದಹಾಗೆ,

      ಒಂದು ದಶಕವನ್ನು ಮುಸ್ಲಿಮ್ ಭಯೋತ್ಪಾದನೆಯೊಂದಿಗೆ ಕಳೆದ ಬಿಜೆಪಿ, ಆ ಬಳಿಕದ ಒಂದು ದಶಕವನ್ನು ಲವ್ ಜಿಹಾದ್ ನೊಂದಿಗೆ ಮುಗಿಸಿದೆ. ಮಾತ್ರವಲ್ಲ, ಇವೆರಡರಿಂದ ಏನನ್ನು ಪಡೆಯಬೇಕೋ ಅವೆಲ್ಲವನ್ನೂ ಪಡೆದಿದೆ. ಅದರಾಚೆಗೆ ಏನೂ ಇಲ್ಲ.

Tuesday, October 9, 2018

ಅವರನ್ನು ಒಪ್ಪಿಸಿದ್ದು ಸೇನೆಗಲ್ಲ, ಕಸಾಯಿಖಾನೆಗೆ!



ಮುಹಮ್ಮದ್ ಶಬೀರ್ ಅಹ್ಮದ್
ಮುಹಮ್ಮದ್ ಯೂನುಸ್
ಮೆಹಬೂಬ್ ಖಾನ್
ಮುಹಮ್ಮದ್ ಸಲಾಮ್
ರಹೀಮುದ್ದೀನ್
ಜಮಾಲ್ ಹುಸೈನ್
ಮುಹಮ್ಮದ್ ಜಮಾಲ್
ಫೋರ್ಬ್ಸ್  ಪಟ್ಟಿಯಲ್ಲಿರುವ ಹೆಸರುಗಳು ಇವಲ್ಲ. ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದವರೂ ಇವರಲ್ಲ. ಅತ್ಯಾಚಾರ, ಹತ್ಯೆ, ಹಲ್ಲೆ, ದರೋಡೆ, ಬ್ಯಾಂಕ್ ವಂಚನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡ ಖತರ್ನಾಕ್ ಕ್ರಿಮಿನಲ್‍ಗಳೂ ಅಲ್ಲ. ಸೆಲೆಬ್ರಿಟಿಗಳೂ ಅಲ್ಲ. ಮ್ಯಾನ್ಮಾರ್ ನಲ್ಲಿ ಸೇನೆ ಎಸಗುತ್ತಿರುವ ದೌರ್ಜನ್ಯವನ್ನು ತಾಳಲಾಗದೇ ಇವರು 2012ರಲ್ಲಿ ಅಸ್ಸಾಮ್ ಪ್ರವೇಶಿಸಿದರು. ಕಾನೂನಿನ ಪ್ರಕಾರ ಇವರ ಪ್ರವೇಶ ಅಕ್ರಮ. ಜಗತ್ತಿನಲ್ಲಿ ಇವರಂತೆ ಪ್ರತಿದಿನ 34 ಸಾವಿರ ಮಂದಿ ತಮ್ಮ ಊರಿನಿಂದಲೇ ಹೊರದಬ್ಬಲ್ಪಡುತ್ತಾರೆ ಮತ್ತು ಸುರಕ್ಷಿತ ಸ್ಥಳವನ್ನು ಹುಡುಕಿಕೊಂಡು ಅಲೆದಾಡುತ್ತಿದ್ದಾರೆ ಅಥವಾ ಇನ್ನೊಂದು ದೇಶದ ಗಡಿಭಾಗದಲ್ಲಿ ಜಮೆಯಾಗುತ್ತಿದ್ದಾರೆ ಎಂದು ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆಯ ಆಯೋಗವು ಅಂಕಿ ಅಂಶಗಳೊಂದಿಗೆ ಜಗತ್ತಿನ ಮುಂದಿಟ್ಟಿದೆ. ಅಂದರೆ, ಜಗತ್ತಿನಲ್ಲಿ ಪ್ರತಿದಿನ 34 ಸಾವಿರ ಮಂದಿ ನಿರಾಶ್ರಿತರಾಗುತ್ತಾ ಇದ್ದಾರೆ. ಇವರ ನಿರಾಶ್ರಿತ ಬದುಕಿಗೆ ಕಾರಣ ಅವರಲ್ಲ, ಪ್ರಭುತ್ವ ಮತ್ತು ಪ್ರಭುತ್ವವನ್ನು ಬೆಂಬಲಿಸುವ ಜನರು ಅಥವಾ ಸೇನೆ. 2005ರಿಂದ 2016ರ ನಡುವೆ 6 ಕೋಟಿ 53 ಲಕ್ಷದಷ್ಟು ಬೃಹತ್ ಜನಸಂಖ್ಯೆಯೊಂದು ನಿರಾಶ್ರಿತವಾಗಿ ಬದುಕುತ್ತಿವೆ ಎಂದರೆ, ಅದರ ಭೀಕರತೆಯ ಊಹೆ ನಿಮಗೇ ಬಿಟ್ಟದ್ದು.

     ನಿರಾಶ್ರಿತ ಎಂಬ ಪದದ ವಿರುದ್ಧ ಪದ ಆಶ್ರಿತ. ಆಶ್ರಿತರೆಂದರೆ, ಇನ್ನಾರದೋ ಕರುಣೆಯೊಂದಿಗೆ ಬದುಕುತ್ತಿರುವವರು ಎಂದರ್ಥವಲ್ಲ. ತನ್ನ ದೇಶ, ತನ್ನ ಊರು, ತನ್ನ ಭೂಮಿ, ತನ್ನ ಜನರು, ತನ್ನ ಮನೆ, ತನ್ನ ಉದ್ಯಮ... ಹೀಗೆ ಒಂದು ಪ್ರದೇಶದಲ್ಲಿ ನೆಮ್ಮದಿಯಿಂದ ಬದುಕು ಕಟ್ಟಿಕೊಂಡವರು. ಅವರಿಗೆ ಅಲ್ಲಿ ಅವರದೇ ಆದ ಸ್ವಂತ ಭೂಮಿಯಿರುತ್ತದೆ. ಮನೆಯಿರುತ್ತದೆ. ಉದ್ಯಮ ಇರಬಹುದು. ಕುಟುಂಬ, ಪರಿವಾರ ಇರಬಹುದು. ಪೌರತ್ವ ಇರುತ್ತದೆ. ದೇಶದ ಪ್ರತಿಯೊಂದು ಆಗು-ಹೋಗುಗಳಲ್ಲೂ ಭಾಗವಹಿಸುವ ಮತ್ತು ಮಾತಾಡುವ ಅಧಿಕೃತ ಹಕ್ಕೂ ಇರುತ್ತದೆ. ಇಂಥ ಜನರು ಒಂದು ದಿನ ಪ್ರಭುತ್ವದ್ದೋ  ಅಥವಾ ಪ್ರಭುತ್ವದ ಬೆಂಬಲಿಗರದ್ದೋ  ದೌರ್ಜನ್ಯಕ್ಕೆ ಒಳಗಾಗಿ ಊರು ಬಿಡಬೇಕಾಗುತ್ತದೆ. ತಮ್ಮೂರಿನ ಎಲ್ಲವನ್ನೂ ಕಳಕೊಂಡು ಬರಿಗೈಯಲ್ಲಿ ಜೀವ ಉಳಿಸಿಕೊಳ್ಳುವುದಕ್ಕಾಗಿ ಓಡಬೇಕಾಗುತ್ತದೆ. ಇಂಥದ್ದೊಂದು  ಓಟವನ್ನು ತೀರಾ ಸಹಜವಾಗಿ ಸ್ವೀಕರಿಸಲೂ ಸಾಧ್ಯವಿಲ್ಲ. ಹುಟ್ಟಿದ ಊರನ್ನು ತೊರೆಯುವುದೆಂದರೆ, ಅದು ನೋವು, ಕಣ್ಣೀರು, ಆತಂಕ ಎಲ್ಲವನ್ನೂ ತರಿಸುತ್ತದೆ. ಅದರಲ್ಲೂ ಹೋಗುವುದೆಲ್ಲಿಗೆ ಎಂಬುದೇ ಅಸ್ಪಷ್ಟವಾಗಿರುವ ಸ್ಥಿತಿಯಲ್ಲಂತೂ ಅಂಥ ತೊರೆಯುವಿಕೆ ಭಯಾನಕವಾಗಿರುತ್ತದೆ. ಒಂದು ಊರನ್ನು ತೊರೆದ ತಕ್ಷಣ ಅವರನ್ನು ಇನ್ನೊಂದು ಊರು ಸ್ವಾಗತಿಸುತ್ತದೆ ಎಂದು ಹೇಳುವ ಹಾಗಿಲ್ಲ. ಆ ಊರಿಗೆ ಜನದಟ್ಟಣೆ, ಉದ್ಯೋಗ ನಷ್ಟ ಇತ್ಯಾದಿ ಸಮಸ್ಯೆಗಳ ಭಯ ಶುರುವಾಗುತ್ತದೆ. ಹೊಸದೊಂದು ಜನಜಂಗುಳಿಯನ್ನು ಸ್ವಾಗತಿಸಿಕೊಂಡು ಸಮಸ್ಯೆಗಳನ್ನು ಯಾಕೆ ಮೈಮೇಲೆ ಎಳೆದುಕೊಳ್ಳಬೇಕು ಅನ್ನುವ ಭಾವನೆ ಆ ಊರನ್ನು ಕಾಡುವುದು ಸಹಜ. ಇನ್ನು,

    ಹೀಗೆ ಊರು ಬಿಟ್ಟು ಬರುವವರಂತೂ ಉಟ್ಟ ಬಟ್ಟೆಯ ಹೊರತು ಬೇರೇನೂ ಇಲ್ಲದೇ ಬರುವವರು. ಹೊಸದಾಗಿ ‘ಅ’ದಿಂದ ಪ್ರಾರಂಭಿಸಬೇಕಾದವರು. ಅದಂತೂ ಸಣ್ಣ ಸವಾಲಲ್ಲ. ಆರಂಭದಲ್ಲಿ ಉಲ್ಲೇಖಿಸಲಾದ 7 ಮಂದಿ 2012ರಲ್ಲಿ ಅಸ್ಸಾಮನ್ನು ಪ್ರವೇಶಿಸುವಾಗ ಬಹುತೇಕ ಇದೇ ಸ್ಥಿತಿಯಲ್ಲಿದ್ದರು. ಅವರು ಅಸ್ಸಾಮ್ ಪ್ರವೇಶಿಸುವುದಕ್ಕೆ ಕಾರಣ, ಅವರ ಹುಟ್ಟಿದೂರು ಮ್ಯಾನ್ಮಾರ್ ನಲ್ಲಿದ್ದ ಕೊಲೆಪಾತಕ ಸನ್ನಿವೇಶ. ದ್ವಿತೀಯ ವಿಶ್ವಯುದ್ಧದ ಬಳಿಕ ಆ ಸ್ಥಿತಿ ಪ್ರಾರಂಭಗೊಂಡಿತ್ತು. ಭಾಷೆ ಮತ್ತು ವಂಶದ ಹೆಸರಲ್ಲಿ ಪ್ರಭುತ್ವ ಇವರನ್ನು ಅಸ್ಪೃಶ್ಯಗೊಳಿಸಿತು. ಬಂಗಾಳಿಗಳು, ನುಸುಳುಕೋರರು ಮತ್ತು ಬ್ರಿಟಿಷರ ಪರ ನಿಂತ ದೇಶದ್ರೋಹಿಗಳು ಎಂಬ ನಾಮಕರಣದೊಂದಿಗೆ ಈ ದಬ್ಬುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರೋಹಿಂಗ್ಯನ್ ಮುಸ್ಲಿಮರು ಎಂಬ ಹೆಸರಲ್ಲಿ ಗುರುತಿಸಿಕೊಂಡಿದ್ದ ಈ ಸಮುದಾಯವು ಬರಬರುತ್ತಾ ಒಂದೊಂದೇ ಹಕ್ಕುಗಳನ್ನು ಕಳಕೊಳ್ಳತೊಡಗಿತು. 1982ರ ಪೌರತ್ವ ಕಾಯ್ದೆಗೆ ಇವರನ್ನು ಅನ್ವಯಗೊಳಿಸುವ ಮೂಲಕ ಪೌರತ್ವ ನಿರಾಕರಣೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಯಿತು. ನಿಜವಾಗಿ,

      ಈ ಮೇಲಿನ 7 ಮಂದಿ ಒಂಟಿಯಲ್ಲ ಮತ್ತು ಜಗತ್ತಿನಲ್ಲಿರುವ ಒಟ್ಟು ನಿರಾಶ್ರಿತರ ಸಂಖ್ಯೆಗೆ ಹೋಲಿಸಿದರೆ ಮ್ಯಾನ್ಮಾರ್ ನಿರಾಶ್ರಿತರ ಸಂಖ್ಯೆ ಒಂದು ಮುಷ್ಠಿಯಷ್ಟೇ ಸಣ್ಣದು. ಒಂದೇ ಒಂದು ದಶಕದಲ್ಲಿ 7 ಕೋಟಿಗಿಂತಲೂ ಅಧಿಕ ನಿರಾಶ್ರಿತರು ಸೃಷ್ಟಿಯಾದರು ಮತ್ತು ಇವರು ಈ ಜಗತ್ತಿನಲ್ಲಿ ಎಲ್ಲೆಲ್ಲೋ ಹೇಗ್ಹೇಗೋ ಏನೇನೋ ಆಗಿ ಬದುಕುತ್ತಿದ್ದಾರೆ ಎಂದರೆ, ಇನ್ನು ಬಾಂಗ್ಲಾ ದೇಶದ ಚಿತ್ತಗಾಂಗ್‍ನ ಕಾಕ್ಸ್ ಬಝಾರ್ ನಲ್ಲಿ ನಿರಾಶ್ರಿತರಾಗಿ ಬದುಕುತ್ತಿರುವ 10 ಲಕ್ಷ ರೋಹಿಂಗ್ಯನ್ ಮುಸ್ಲಿಮರ ಸಂಖ್ಯೆ ಬಹಳ ದೊಡ್ಡದೇ? ಈ ಮಂದಿ ಬರೇ ಬಾಂಗ್ಲಾದೇಶದಲ್ಲಷ್ಟೇ ಆಶ್ರಯ ಪಡಕೊಂಡಿರುವುದಲ್ಲ. ಮಲೇಶ್ಯಾ, ಇಂಡೋನೇಶ್ಯಾ, ಥಾಯ್‍ಲ್ಯಾಂಡ್, ಆಸ್ಟ್ರೇಲಿಯಾ, ಭಾರತ, ಶ್ರೀಲಂಕಾ ಇತ್ಯಾದಿ ರಾಷ್ಟ್ರಗಳಲ್ಲೂ ನುಸುಳುಕೋರರಾಗಿಯೋ ಅಕ್ರಮ ವಾಸಿಗಳಾಗಿಯೋ ಉಳಿದುಕೊಂಡಿದ್ದಾರೆ. ಹಾಗಂತ,


     ಸಕ್ರಮ ವಾಸಿಗಳಾಗಿ ಗುರುತಿಸಿಕೊಳ್ಳುವುದಕ್ಕೆ ಅವರಲ್ಲಿ ಇರುವುದಾದರೂ ಏನು? ಒಂದು ಪ್ರಭಾತದಲ್ಲಿ ಸೂಟ್‍ಕೇಸ್ ತುಂಬಾ ಬಟ್ಟೆ-ಬರೆಗಳನ್ನು ತುಂಬಿಸಿಕೊಂಡು, ಪ್ಯಾಂಟ್-ಕೋಟು-ಶೂ ಧರಿಸಿಕೊಂಡು, ಮನೆಯವರನ್ನೆಲ್ಲಾ  ಆಲಂಗಿಸಿ, ವಿದಾಯ ಕೋರಿ ವಿಮಾನದಲ್ಲಿ ರುಯ್ಯನೆ ಬಂದವರಲ್ಲವಲ್ಲ ಇವರು. ತಮಿಳ್ನಾಡಿನ ಕೆರಂಬಾರ್ ನಲ್ಲಿ ಇಂಥ 22 ಕುಟುಂಬಗಳಿವೆ. ಇವರು ಕೂಡ ಮ್ಯಾನ್ಮಾರ್ ನಿಂದಲೇ ಬಂದವರು. ಮೇಲಿನ 7 ಯುವಕರನ್ನು ಸುಪ್ರೀಮ್ ಕೋರ್ಟ್‍ನ ಆದೇಶದಂತೆ ಕೇಂದ್ರ ಸರಕಾರವು ಮ್ಯಾನ್ಮಾರ್ ಸೇನೆಗೆ ಒಪ್ಪಿಸಿದಂತೆ ಒಂದು ದಿನ ಈ ಕುಟುಂಬ ಪರಿವಾರವನ್ನೂ ಮ್ಯಾನ್ಮಾರ್ ಗೆ ಒಪ್ಪಿಸಿ ಬಿಡುವ ಎಲ್ಲ ಸಾಧ್ಯತೆಗಳೂ ಇವೆ. ಆದರೆ, ಇವರನ್ನು ಸ್ವೀಕರಿಸಲಿರುವ ಮ್ಯಾನ್ಮಾರ್ ಪ್ರಭುತ್ವ ಹೇಗಿದೆ ಎಂಬುದನ್ನು ಊಹಿಸುವಾಗ ದಿಗಿಲಾಗುತ್ತದೆ.

     ಇವರೂ 2012ರಲ್ಲೇ ಮ್ಯಾನ್ಮಾರ್ ನಿಂದ  ತಪ್ಪಿಸಿಕೊಂಡು ಬಂದವರು. ಮ್ಯಾನ್ಮಾರ್ ಸೇನೆಯನ್ನು ಅಷ್ಟು ಸುಲಭದಲ್ಲಿ ಯಾಮಾರಿಸಲು ಈ ಕುಟುಂಬಗಳಿಗೆ ಸಾಧ್ಯವಾಗಲಿಲ್ಲ. ಅವರಿಗೆ ಆಭರಣಗಳ ಜೊತೆಗೇ ಮಾನವನ್ನೂ ಒಪ್ಪಿಸಬೇಕಾಯಿತು. ಹಾಗೇ, ಮ್ಯಾನ್ಮಾರ್ ಗಡಿಯಿಂದ ಬಾಂಗ್ಲಾದೇಶಕ್ಕೆ ಹೇಗೋ ತಲುಪಿಬಿಟ್ಟರು. ಅಲ್ಲಿಂದ ಕೊಲ್ಕತ್ತಾಕ್ಕೆ ಬರಬೇಕಾದರೆ, ಮಧ್ಯ ವರ್ತಿಗಳಿಲ್ಲದೇ ಸಾಧ್ಯವಿಲ್ಲ ಎಂಬ ಸ್ಥಿತಿಯಿದೆ. ಈ ಮಧ್ಯವರ್ತಿಗಳಿಗೆ ದಲಾಲ್ ಎನ್ನುತ್ತಾರೆ. ಅವರಿಗೆ ಹಣ ನೀಡಿ ಉದ್ಯೋಗ ವನ್ನು ಅರಸುತ್ತಾ ಇವರು ಕೊಲ್ಕತ್ತಾಕ್ಕೆ ಬಂದರು. ಅಲ್ಲಿನ   ಹೌರಾ ರೈಲ್ವೇ ಸ್ಟೇಷನ್‍ನಿಂದ ಚೆನ್ನೈ ರೈಲು ಹತ್ತಿ ಅಲ್ಲಿನ ಚಂಡಮಾರುತದ ಅಪಾಯವಿರುವ ಕೆರಂಬಾರ್ ನಲ್ಲಿ ನೆಲೆಸಿದ್ದಾರೆ. ಅವರಲ್ಲಿ ಒಬ್ಬೊಬ್ಬರಲ್ಲೂ ಒಂದೊಂದು ಕತೆ ಇದೆ. ಮ್ಯಾನ್ಮಾರ್  ಸೇನೆ ಇವರನ್ನು ಹೇಗೆ ನಡೆಸಿಕೊಳ್ಳುತ್ತಿತ್ತು ಅನ್ನುವುದಕ್ಕೆ ಕಣ್ಣೀರ ಸಾಕ್ಷಿಗಳಿವೆ.

   ಮ್ಯಾನ್ಮಾರ್ ನಲ್ಲಿ ರೋಹಿಂಗ್ಯನ್ ಸಮುದಾಯವು ಶಿಕ್ಷಣ ಪಡೆಯುವುದನ್ನು ಪ್ರಭುತ್ವವು ತಡೆಯುತ್ತಿತ್ತು. ಮದ್ರಸ ಬಿಟ್ಟರೆ ಬೇರೆ ಶಿಕ್ಷಣ ಪಡೆಯದಂತೆ ಅದು ನೋಡಿಕೊಂಡಿತ್ತು. ವಿವಾಹವು ಅತ್ಯಂತ ಕಷ್ಟದ ಕೆಲಸ. ವಿವಾಹವಾಗಬೇಕಾದರೆ ಸರಕಾರಕ್ಕೆ ಲಕ್ಷಗಟ್ಟಲೆ ಹಣ ಪಾವತಿಸಬೇಕು. ಹಾಗೆ ಹಣ ಪಾವತಿಸಿ ಮದುವೆಯಾದರೆಂದೇ ಇಟ್ಟುಕೊಳ್ಳೋಣ. ಗರ್ಭ ಧರಿಸಿದರೆ ಪುನಃ ಸಮಸ್ಯೆ ಎದುರಾಗುತ್ತದೆ. ಗರ್ಭಕ್ಕೆ ಮತ್ತೆ ತೆರಿಗೆ ಕಟ್ಟ ಬೇಕು. ಈ ಕುಟುಂಬದ ಮಹಿಳೆಯೊಬ್ಬಳು ವಿವಾಹ ತೆರಿಗೆಯನ್ನು ಪಾವತಿಸದೇ ಮದುವೆಯಾದಳು. ಗರ್ಭ ಧರಿಸಿದಳು. ಇದು ಸರಕಾರದ ಗಮನಕ್ಕೆ ಬಂತು. ಸರಕಾರವು ಆಕೆಯನ್ನು 4 ವರ್ಷಗಳ ಕಾಲ ಜೈಲಿನಲ್ಲಿ ಕೂಡಿ ಹಾಕಿತು. ಒಂದು ರೀತಿಯಲ್ಲಿ, ಜನಸಂಖ್ಯೆ ಬೆಳೆಯದಂತೆ ತಡೆಯುವ ಕ್ರೂರ ವಿಧಾನ ಇದು.

     ಇದು ಮ್ಯಾನ್ಮಾರ್ ಒಂದರ ಕತೆಯಲ್ಲ. ಜಗತ್ತಿನ ಬೇರೆ ಬೇರೆ ಕಡೆ ಕೋಟ್ಯಂತರ ಮಂದಿ ಬೇರೆ ಬೇರೆ ದೂರು-ದುಮ್ಮಾನ ಗಳೊಂದಿಗೆ ಎಲ್ಲೆಲ್ಲಿಗೋ  ಅಲೆಯುತ್ತಿದ್ದಾರೆ. ಕೇರಿ, ಟೆಂಟ್‍ಗಳಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇವರೆಲ್ಲರ ಈಗಿನ ಸ್ಥಿತಿ ಹಿಂದಿನದಲ್ಲ. ಹತ್ತು ವರ್ಷಗಳ ಹಿಂದೆ, ಐದು ವರ್ಷಗಳ ಹಿಂದೆ ಅಥವಾ ತಿಂಗಳ ಹಿಂದೆ ಇವರಲ್ಲಿ ಹೆಚ್ಚಿನವರೂ ಧನಿಕರೋ ಮಧ್ಯಮ ವರ್ಗದವರೋ ಆಗಿದ್ದವರು. ಬದುಕಿನ ಬಗ್ಗೆ ಏನೇನೋ ಕನಸುಗಳನ್ನು ಕಂಡಿದ್ದವರು. ಮಕ್ಕಳನ್ನು ತಮ್ಮ ಕನಸಿನಂತೆ ಬೆಳೆಸುವ ಉಮೇದಿನೊಂದಿಗೆ ದುಡಿದಿದ್ದವರು. ತಮ್ಮ ಆದಾಯದಿಂದ ಒಂದಷ್ಟನ್ನು ಉಳಿಸಿಕೊಂಡು ತಮ್ಮದೇ ಕನಸಿನ ಮನೆಯನ್ನೋ ವಾಹನವನ್ನೋ ಖರೀದಿಸಲು ಆಸೆ ಪಟ್ಟಿದ್ದವರು. ಆದರೆ, ಇವತ್ತು ಅವರೆಲ್ಲ ಯಾವುದಾದರೊಂದು ದೇಶದ ಗಡಿಭಾಗದಲ್ಲಿ ಅಂಡಲೆಯುತ್ತಿದ್ದಾರೆ. ಕೆಲವರು ಗಡಿ ದಾಟಿ ಇನ್ನೊಂದು ದೇಶದೊಳಗೆ ಪ್ರವೇಶಿಸಲು ಯಶಸ್ವಿಯಾದರೂ ನುಸುಳುಕೋರರಾಗಿಯೋ ಆಂತರಿಕ ಸುರಕ್ಷತೆಗೆ ಬೆದರಿಕೆಯವರಾಗಿಯೋ ಹೊರದಬ್ಬಲ್ಪಡಬೇಕಾದವರ ಪಟ್ಟಿಯಲ್ಲಿದ್ದಾರೆ. ಇದೊಂದು ಭಯಾನಕ ಸನ್ನಿವೇಶ.

     ಈ ಜಗತ್ತಿನಲ್ಲಿ ಕೇವಲ 10 ವರ್ಷಗಳೊಳಗೆ 7 ಕೋಟಿಗಿಂತಲೂ ಅಧಿಕ ಮಂದಿ ನಿರಾಶ್ರಿತರಾಗಿ ಬದುಕುವಂತಾಗಿದೆ ಅಂದರೆ, ಅದಕ್ಕೆ ಯಾರು ಹೊಣೆ? ಯಾವ ದೇಶಕ್ಕೂ ಇವರನ್ನು ಒಳಗೆ ಬಿಟ್ಟುಕೊಳ್ಳುವುದಕ್ಕೆ ಇಷ್ಟವಿಲ್ಲ. ಸಿರಿಯಾದಿಂದ ಒಂದು ದೊಡ್ಡ ಜನಸಮೂಹ ಸಿಕ್ಕ ಸಿಕ್ಕ ದೋಣಿಯನ್ನು ಹತ್ತಿ ಹೊರಡುತ್ತವೆ. ಅವುಗಳಲ್ಲಿ ಕೆಲವು ನೀರಿನಲ್ಲಿ ಮುಳುಗುತ್ತವೆ. ದೋಣಿಯಲ್ಲಿ ತೇಲಿಕೊಂಡು ದಡ ಮುಟ್ಟಿದರೂ ಸುಖ ಇಲ್ಲ. ಇನ್ನೊಂದು ರಾಷ್ಟ್ರದ ಗಡಿ ಮುಚ್ಚಿಕೊಂಡಿರುತ್ತದೆ. ಹೀಗೆ ಇರಾಕ್, ಫೆಲೆಸ್ತೀನ್, ಯಮನ್, ಲಿಬಿಯಾ, ಅಫಘಾನ್, ಸುಡಾನ್‍ಗಳಿಂದ ಹೊರಬರುವ ಜನಪ್ರವಾಹ ಒಂದು ಕಡೆಯಾದರೆ, ದೇಶಗಳ ಒಳಗಡೆಯೇ ಸೃಷ್ಟಿಯಾಗುವ ನಿರಾಶ್ರಿತ ಗುಂಪುಗಳು ಇನ್ನೊಂದು ಕಡೆ. ಗುಜರಾತ್‍ನಲ್ಲಿ, ಮುಝಫ್ಫರ್ ನಗರ್, ಭಾಗಲ್ಪುರ್, ಕಾಶ್ಮೀರ ಮತ್ತಿತರ ಪ್ರದೇಶಗಳಲ್ಲಿ ನಡೆದ ಗಲಭೆಗಳಿಂದ ನಿರಾಶ್ರಿತರಾದವರು ದೇಶದ ಇನ್ನೆಲ್ಲೋ  ಅತ್ಯಂತ ದಾರುಣವಾಗಿ ಬದುಕುತ್ತಿದ್ದಾರೆ. ಇವರಿಗೆ ಪೌರತ್ವದ ಸಮಸ್ಯೆ ಇಲ್ಲದೇ ಇರಬಹುದು. ಆದರೆ ತಾವು ಕೂಡಿಟ್ಟಿದ್ದ ಹಣ, ಕಟ್ಟಿಕೊಂಡಿದ್ದ ಮನೆ, ವ್ಯಾಪಾರ, ಉದ್ಯೋಗ, ಕೃಷಿ ಇತ್ಯಾದಿ ಎಲ್ಲವನ್ನೂ ಕೈ ಬಿಟ್ಟು ಇನ್ನೆಲ್ಲೋ ಗುರುತು-ಪರಿಚಯ ಇಲ್ಲದ ಪ್ರದೇಶದಲ್ಲಿ ಹೊಸದೇ ಆದ ಬದುಕನ್ನು ಕಟ್ಟಿಕೊಳ್ಳುವುದೆಂದರೆ, ಅದು ಅತ್ಯಂತ ದೊಡ್ಡ ಸವಾಲು. ಹಳತು ಮತ್ತೆ ಮತ್ತೆ ಕಣ್ಣೆದುರು ಬರುತ್ತಲೇ ಇರುತ್ತದೆ. ಕಳಕೊಂಡ ತನ್ನವರು ನೆನಪಿಗೆ ಬಂದು ರಾತ್ರಿಯನ್ನು ನಿದ್ದೆಯಿಲ್ಲದೇ ಕಳಕೊಳ್ಳಬೇಕಾಗುತ್ತದೆ. ಮಕ್ಕಳ ಭವಿಷ್ಯವನ್ನು ಹೊಸದಾಗಿ ಕಟ್ಟುವ ಸವಾಲು ಎದುರಾಗುತ್ತದೆ. ಅಂದಹಾಗೆ,

     ಸುನಾಮಿಯಿಂದಲೋ ಪ್ರವಾಹದಿಂದಲೋ ಸಂತ್ರಸ್ತರಾದವರಂತೆ ಇವರಲ್ಲ. ಇವರೊಂದಿಗೆ ಮಾನವ ನಿರ್ಮಿತ ಕ್ರೌರ್ಯವೊಂದರ ಸ್ಮರಣೆ ಸದಾ ಜೊತೆಗಿರುತ್ತದೆ. ಮರಳಿ ಊರಿಗೆ ಹೋಗಲಾಗದ ಸ್ಥಿತಿಯೊಂದು ನೆಲೆಸಿರುತ್ತದೆ. ನೆರವಿನ ನಿರೀಕ್ಷೆಯೂ ಕಡಿಮೆ. ಕಳಕೊಂಡ ದಾಖಲೆಗಳನ್ನು ಮರಳಿ ಪಡೆದುಕೊಳ್ಳುವ ದಾರಿಯೂ ಸುಲಭದ್ದಲ್ಲ. ಇವರಿಗೆ ಹೋಲಿಸಿದರೆ ಪ್ರಕೃತಿ ವಿಕೋಪದ ಸಂತ್ರಸ್ತರು ಹೆಚ್ಚು ಸುಖಿಗಳು. ಅವರನ್ನು ವ್ಯವಸ್ಥೆಯೇ ಪೋಷಿಸುತ್ತದೆ. ನೆರವೂ ಹರಿದು ಬರುತ್ತದೆ. ಊರು ತೊರೆಯಬೇಕಾದ ಸಂಕಷ್ಟವೂ ಅವರಿಗಿರುವುದಿಲ್ಲ. ಆದ್ದರಿಂದಲೇ,

      ಮ್ಯಾನ್ಮಾರ್ ನ ಸೇನೆಗೆ ಒಪ್ಪಿಸಲಾದ 7 ಯುವಕರು ಕಸಾಯಿಖಾನೆಗೆ ಸಾಗಿಸಲಾದ ಜಾನುವಾರುಗಳಂತೆ ಕಾಣಿಸುತ್ತಾರೆ.



Wednesday, October 3, 2018

ವಿವಾಹೇತರ ಸಂಬಂಧದ ಸರಿ-ತಪ್ಪುಗಳ ಆಚೆ..



     ಬಯಾಲಜಿ, ಅಂಟೋಲಜಿ ಮತ್ತು ಝುವಾಲಜಿಯಲ್ಲಿ ಪ್ರೊಫೆಸರ್ ಆಗಿರುವ ಹಾಗೂ ಇಂಡಿಯಾನ ಯುನಿವರ್ಸಿಟಿಯಲ್ಲಿ ಲಿಂಗ ಸಂಶೋಧನಾ ವಿಭಾಗವನ್ನು ಸ್ಥಾಪಿಸಿರುವ ಲೈಂಗಿಕ ತಜ್ಞ ಅಮೇರಿಕದ ಅಲ್ಫ್ರೆಡ್ ಕಿನ್ಸೆ ಅವರು ದಶಕಗಳ ಹಿಂದೆ ಅಧ್ಯಯನ ವರದಿಯೊಂದನ್ನು ಬಿಡುಗಡೆಗೊಳಿಸಿದ್ದರು. ಅಮೇರಿಕದ ವಿವಾಹಿತ ದಂಪತಿಗಳ ಪೈಕಿ 50% ಪುರುಷರು ಮತ್ತು 26% ಮಹಿಳೆಯರು ಜೀವನದಲ್ಲಿ ಒಮ್ಮೆಯಾದರೂ ವಿವಾಹೇತರ ಲೈಂಗಿಕ ಸಂಬಂಧವನ್ನು ಅನುಭವಿಸಿದ್ದಾರೆ ಎಂದು ಅವರು ಆ ವರದಿಯಲ್ಲಿ ಹೇಳಿದ್ದರು. ಲೈಂಗಿಕ ಕ್ಷೇತ್ರದಲ್ಲಿ ಸಂಶೋಧಕನಾಗಿ ಮುಂಚೂಣಿಯಲ್ಲಿ ಗುರುತಿಸಿ ಕೊಂಡಿರುವ ಅವರ ಎರಡು ಕೃತಿಗಳು- ಸೆಕ್ಷುವಲ್ ಬಿಹೇವಿಯರ್ ಇನ್ ದ ಹ್ಯೂಮನ್ ಮೇಲ್ ಮತ್ತು ಸೆಕ್ಷುವಲ್ ಬಿಹೇವಿಯರ್ ಇನ್ ದ ಹ್ಯೂಮನ್ ಫಿಮೇಲ್- ಬೆಸ್ಟ್ ಸೆಲ್ಲರ್ ಕೃತಿಗಳಾಗಿ ಜನಪ್ರಿಯವಾಗಿದ್ದುವು. ಹಾಗಂತ,

    ಇವರು ಈ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸುವಾಗ, ಭಾರತದಂತೆ, Adultery is not a crime (ಪರಸಂಗ ಅಪರಾಧ ಅಲ್ಲ) ಎಂದು ಇಡೀ ಅಮೇರಿಕಕ್ಕೆ ಅಮೇರಿಕವೇ ಘೋಷಿಸಿಕೊಂಡಿರಲಿಲ್ಲ. ಅಮೇರಿಕ ಸಂಯುಕ್ತ ಸಂಸ್ಥಾನವೆಂಬ ಅಮೇರಿಕದಲ್ಲಿ 50 ರಾಜ್ಯಗಳಿವೆ. ಈ ರಾಜ್ಯಗಳೆಲ್ಲ ಒಂದು ರೀತಿಯ ಸ್ವಾಯತ್ತ ಸ್ವಾತಂತ್ರ್ಯವನ್ನು ಅನುಭವಿಸುತ್ತಲೂ ಇವೆ. ಅಲ್ಲಿ, ಒಂದು ರಾಜ್ಯದ ಕಾನೂನಿಗೆ ವಿರುದ್ಧವಾದ ಕಾನೂನು ಇನ್ನೊಂದು ರಾಜ್ಯದಲ್ಲಿ ಇವತ್ತಿಗೂ ಚಲಾವಣೆಯಲ್ಲಿ ಇದೆ. ಅಮೇರಿಕದ 20 ರಾಜ್ಯಗಳಲ್ಲಿ ಪರಸಂಗವು ಇವತ್ತೂ ಅಪರಾಧವೇ. ಆದರೆ, ಅಮೇರಿಕನ್ ಜನತೆ ಪರಸಂಗಕ್ಕೆ ಹೇಗೆ ಒಗ್ಗಿ ಹೋಗಿವೆಯೆಂದರೆ, ಪರಸಂಗದ ವಿರುದ್ಧ ಬಗ್ಗೆ ದೂರು ಕೊಡುವವರೇ ಕಡಿಮೆ. ದಕ್ಷಿಣ ಕರೋಲಿನಾ ರಾಜ್ಯದ ರಾಜ್ಯಪಾಲ ಮಾರ್ಕ್ ಸ್ಟಾನ್‍ಫೋರ್ಡ್ ಅವರು 2009ರಲ್ಲಿ ತನ್ನ ವಿವಾಹೇತರ ಸಂಬಂಧವನ್ನು ಬಹಿರಂಗವಾಗಿಯೇ ಒಪ್ಪಿಕೊಂಡರು. ಆ ರಾಜ್ಯದ ಕಾನೂನಿನ ಪ್ರಕಾರ ಇಂಥ ಸಂಬಂಧ ಸ್ವೀಕೃತವಲ್ಲ. ಆದರೆ, ಅವರ ಆ ಒಪ್ಪಿಗೆಗೇ ಆ ಪ್ರಕರಣ ಮುಗಿಯಿತೇ ಹೊರತು ಅದು ಕೋರ್ಟು ವಿಚಾರಣೆಯ ಹಂತಕ್ಕೆ ಬರಲೇ ಇಲ್ಲ. ಕಿನ್ಸೆ ಅವರ ಅಧ್ಯಯನ ವರದಿಯ ಬಳಿಕವಂತೂ ಅನೇಕಾರು ವರದಿಗಳು ಅಮೇರಿಕದಲ್ಲಿ ಬಿಡುಗಡೆಗೊಳ್ಳುತ್ತಲೇ ಇವೆ. ಅಮೇರಿಕದ ವಿವಾಹಿತ ದಂಪತಿಗಳಲ್ಲಿ 85% ಮಹಿಳೆಯರು ತಮ್ಮ ಗಂಡಂದಿರನ್ನು ಮೋಸಗಾರರೆಂದು ಭಾವಿಸುತ್ತಿದ್ದಾರೆ ಮತ್ತು 50% ಪುರುಷರು ತಮ್ಮ ಪತ್ನಿಯರ ಬಗ್ಗೆ ಇಂಥದ್ದೇ ಭಾವನೆಯಲ್ಲಿದ್ದಾರೆಂದು ಕೌಟುಂಬಿಕ ಅಂಕಿ-ಅಂಶಗಳ ವೆಬ್‍ಸೈಟ್ ವರದಿಗಳು ಹೇಳುತ್ತಿವೆ. ವಿವಾಹ ವಿಚ್ಛೇದನಾ ಪ್ರಕರಣಗಳ ಪೈಕಿ 17% ವಿಚ್ಛೇದನಕ್ಕೆ ಪರಸಂಗವೇ ಕಾರಣವೆಂದೂ ವರದಿಗಳು ಹೇಳುತ್ತವೆ. ಅಮೇರಿಕದ ಯುವ ಸಮೂಹದಲ್ಲಿ ಪರಸಂಗ ಮತ್ತು ವ್ಯಭಿಚಾರ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂದೂ ಹೇಳಲಾಗುತ್ತಿದೆ. ಆದ್ದರಿಂದ,

ಪರಸಂಗವನ್ನು ಅಪರಾಧ ಮುಕ್ತಗೊಳಿಸಿದ ಸುಪ್ರೀಮ್ ಕೋರ್ಟಿನ ತೀರ್ಪಿಗೆ ಯಾರಾದರೂ ತಕರಾರು ವ್ಯಕ್ತಪಡಿಸಿದರೆ ಅದನ್ನು ಪುರಾತನ ಮನಃಸ್ಥಿತಿಯಾಗಿ ನೋಡಬೇಕಿಲ್ಲ.

ಸುಪ್ರೀಮ್ ಕೋರ್ಟಿನ ಮುಂದಿದ್ದುದು- ಪರ ಸಂಗಕ್ಕೆ ಸಂಬಂಧಿಸಿ ಪುರುಷನನ್ನು ಮಾತ್ರ ಅಪರಾಧಿಯನ್ನಾಗಿಸುವ 158 ವರ್ಷಗಳ ಪುರಾತನವಾದ ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್ 497ನ್ನು ಅನೂರ್ಜಿತಗೊಳಿಸಬೇಕು ಎಂಬ ಮನವಿ. ಈ ಮನವಿಗೂ ಒಂದು ಕಾರಣ ಇದೆ.

ವಿವಾಹಿತ ಮಹಿಳೆಯರ ಅನುಮತಿ ಪಡೆಯದೇ ಓರ್ವ ವ್ಯಕ್ತಿ ಆಕೆಯನ್ನು ಲೈಂಗಿಕವಾಗಿ ಬಳಸಿದರೆ, ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೆ ಆಕೆ ಶಿಕ್ಷಾರ್ಹಳಾಗುವುದಿಲ್ಲ. ಒಂದು ವೇಳೆ, ಆಕೆಯ ಅನುಮತಿ ಪಡೆದೇ ಓರ್ವ ದೇಹ ಸಂಬಂಧ ಬೆಳೆಸಿದರೂ ಆತ ಶಿಕ್ಷಾರ್ಹ ಅಪರಾಧಿಯಾಗುತ್ತಾನೆ. ಆದರೆ, ಆಕೆ ಅಲ್ಲ. ಇದು ಸೆಕ್ಷನ್ 497ರಲ್ಲಿ ಅಡಕವಾಗಿರುವ ಅಂಶ. ಇದೊಂದು ಅಸಮತೋಲನವುಳ್ಳ ಮತ್ತು ಹೆಣ್ಣು-ಗಂಡಿನ ನಡುವೆ ತಾರತಮ್ಯ ತೋರುವ ವಿಧಿ ಎಂಬುದು ಯಾರಿಗೇ ಆಗಲಿ ಬಾಹ್ಯನೋಟಕ್ಕೇ ಗೊತ್ತಾಗಿ ಬಿಡುತ್ತದೆ. ಒಂದೇ ಕೃತ್ಯಕ್ಕೆ ಬೇರೆ ಬೇರೆ ನಿರ್ಣಯಗಳೇಕೆ ಎಂದು ಮನವಿದಾರರು ಪ್ರಶ್ನಿಸಿದ್ದರು. ಕೋರ್ಟು ಇದನ್ನು ಒಪ್ಪಿಕೊಂಡಿತು ಮತ್ತು ಇಬ್ಬರನ್ನೂ ಅಪರಾಧ ಮುಕ್ತಗೊಳಿಸಿತು. ಇದೇ ವೇಳೆ,

ಇದೊಂದು ಸೂಕ್ಷ್ಮ  ತೀರ್ಪು ಅನ್ನುವುದರಲ್ಲಿ ಎರಡು ಮಾತಿಲ್ಲ. ಇಬ್ಬರನ್ನೂ ಅಪರಾಧ ಮುಕ್ತಗೊಳಿಸುವುದಕ್ಕಿಂತ ಇಬ್ಬರನ್ನೂ ಅಪರಾಧಿಗಳನ್ನಾಗಿಸಿಯೂ ಸಮಾನತೆ ಕಾಯ್ದುಕೊಳ್ಳಬಹುದಿತ್ತಲ್ಲವೇ ಎಂಬ ಜಿಜ್ಞಾಸೆಯೂ ಮುಗ್ಧವಲ್ಲ. ಹೀಗೆ ವಿವಾಹಬಾಹಿರ ಸಂಬಂಧವನ್ನು ಸಿಂಧುಗೊಳಿಸುವುದರಿಂದ ಉದ್ಭವವಾಗಬಹುದಾದ ಕೌಟುಂಬಿಕ, ಸಾಮಾಜಿಕ ಮತ್ತು ಭಾವನಾತ್ಮಕವಾದ ಸಮಸ್ಯೆಗಳ ಕುರಿತಾಗಿ ಕೋರ್ಟಿನ ನಿಲುವು ಏನು, ಅದು ಹೇಗೆ ಈ ಸಮಸ್ಯೆಗಳನ್ನು ನಿಭಾಯಿಸಬಯಸಿದೆ ಎಂಬ ಪ್ರಶ್ನೆಗೂ ಸದ್ಯ ಉತ್ತರ ಸಿಕ್ಕಿಲ್ಲ. ಕಾಗೆಯ ಗೂಡಿನಲ್ಲಿ ಕೋಗಿಲೆಯೊಂದು ಮೊಟ್ಟೆ ಇಟ್ಟಂತಹ ಪ್ರಕೃತಿ ಸಹಜ ಪ್ರಕರಣ ಇದಲ್ಲ. ಈ ವಿವಾಹೇತರ ಸಂಬಂಧ ಭಾವನಾತ್ಮಕವಾದುದು. ವಿಶ್ವಾಸದ್ರೋಹವಾಗಿ ಪರಿಗಣಿತವಾಗುವಂಥದ್ದು. ಕಾನೂನು ಪ್ರಕಾರ ಶಿಕ್ಷೆ ಇಲ್ಲದಿದ್ದರೂ ಗಂಡು ಮತ್ತು ಹೆಣ್ಣು ಇದರ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಬೇಕಾದಂಥದ್ದು. ಇಂಥ ಸಂಬಂಧ ಪತಿ-ಪತ್ನಿಯರ ನಡುವೆ ಹುಟ್ಟು ಹಾಕುವ ಮಾನಸಿಕ ಒತ್ತಡವೂ ನಿರ್ಲಕ್ಷಿಸುವಂಥದ್ದಲ್ಲ. ಹುಟ್ಟಿದ ಮಗುವಿನ ತಂದೆ ಯಾರು ಅನ್ನುವ ಪ್ರಶ್ನೆಯ ಹುಟ್ಟಿಗೂ ಈ ತೀರ್ಪು ಕಾರಣವಾಗಬಹುದು. ನಿಜವಾಗಿ,

ಈಗಾಗಲೇ ಇಂಥ ಸಮಸ್ಯೆ ಯುರೋಪಿಯನ್ ರಾಷ್ಟ್ರಗಳಲ್ಲಿ ದೊಡ್ಡ ಮಟ್ಟದ ತಲೆನೋವಿಗೂ ಕಾರಣವಾಗಿದೆ. ‘ಪರಸಂಗ ಅಪರಾಧವಲ್ಲ’ ಅನ್ನುವ ರಾಷ್ಟ್ರಗಳಾದ ಇಟಲಿ, ಮಾಲ್ಟಾ, ಫ್ರಾನ್ಸ್, ಸ್ಪೈನ್, ಪೋರ್ಚುಗಲ್, ಗ್ರೀಸ್, ಬೆಲ್ಜಿಯಂ, ಸ್ವಿಟ್ಜರ್ಲೆಂಡ್, ಆಸ್ಟ್ರಿಯ, ನಾರ್ವೆ, ಬ್ರೆಝಿಲ್, ಅರ್ಜಂಟೀನ, ನಿಕಾರಾಗ್ವ, ಚಿಲಿ, ಬ್ರಿಟನ್, ಅಮೇರಿಕ ಸಹಿತ ಅನೇಕ ರಾಷ್ಟ್ರಗಳು ಹೊಸ ಹೊಸ ಸಮಸ್ಯೆಗಳನ್ನು ಇವತ್ತು ಕೊರಳಿಗೆ ಹಾಕಿಕೊಂಡಿವೆ. ಇದರಲ್ಲಿ ಬಹುದೊಡ್ಡ ಸಮಸ್ಯೆ ವಿಚ್ಛೇದನದ್ದು. ಒಂದುಕಡೆ, ಹೆಣ್ಣು ಮತ್ತು ಗಂಡಿನ ನಡುವೆ ಲೈಂಗಿಕ ಸಂಬಂಧವನ್ನು ಹೊಂದಲು ಇರುವ ಪರವಾನಿಗೆಯಾಗಿ ಮದುವೆಯನ್ನು ಪರಿಗಣಿಸಲಾಗುತ್ತದೆ. ಧಾರ್ಮಿಕವಾಗಿಯೂ ಪರಂಪರಾಗತ ನಂಬಿಕೆಯಾಗಿಯೂ ಇದು ಅಸ್ತಿತ್ವದಲ್ಲಿದೆ. ಋಗ್ವೇದದ 4.5.5ನೇ ವಚನವು ಪರಸಂಗವನ್ನು ಅಪರಾಧವೆಂದು ಸಾರುತ್ತದೆ. ಬೌದ್ಧ ಧರ್ಮದ ಮೇಲೆ ಅಧ್ಯಯನ ನಡೆಸಿರುವ ವೆಂಡಿ ಡೊನಿಗರ್ ಅವರು, ಬುದ್ಧ ಧರ್ಮದಲ್ಲಿ ಪರಸಂಗವು ಪಾಪಕರ ಎಂದು ಬರೆದಿದ್ದಾರೆ. ಕ್ರಿಸ್ತಪೂರ್ವದ ಹಮ್ಮುರಾಬಿ ಶಾಸನದಲ್ಲಿ, ಮೆಸಪಟೋಮಿಯ- ಬ್ಯಾಬಿಲೋನಿಯನ್ ಕಾನೂನು, ಹರಪ್ಪ-ಮೊಹೆಂಜೋದಾರೋ ಕಾಲದಲ್ಲೂ ಪರಸಂಗವನ್ನು ಶಿಕ್ಷಾರ್ಹವೆಂದೇ ಪರಿಗಣಿಸಲಾಗಿತ್ತು. ಇಸ್ಲಾಮ್, ಕ್ರೈಸ್ತ ಮತ್ತು ಯಹೂದಿ ಧರ್ಮಗಳೂ ವಿವಾಹೇತರ ಸಂಬಂಧವನ್ನು ಅಪರಾಧವೆಂದೇ ಪರಿಗಣಿಸುತ್ತವೆ. ಅಲ್ಲದೇ, ಹೆಣ್ಣು-ಗಂಡು ದೈಹಿಕ ಸಂಬಂಧವನ್ನು ಹೊಂದುವುದಕ್ಕೆ ವಿವಾಹವೇ ರುಜುಮಾರ್ಗ ಎಂಬ ಬಲವಾದ ವಿಶ್ವಾಸ ಇವತ್ತೂ ಇದೆ. ಆದರೆ, ಸುಪ್ರೀಮ್ ಕೋರ್ಟಿನ ತೀರ್ಪು ಈ ನಂಬಿಕೆಯ ಬುಡವನ್ನೇ ಅಲುಗಾಡಿಸುತ್ತದೆ. ಮಾತ್ರವಲ್ಲ, ಗೊಂದಲವನ್ನೂ ಹುಟ್ಟು ಹಾಕುತ್ತದೆ. ಒಂದುವೇಳೆ, ವಿವಾಹದ ಆಚೆಗೆ ಗಂಡು-ಹೆಣ್ಣು ತನ್ನಿಷ್ಟದವರೊಂದಿಗೆ ದೈಹಿಕ ಸಂಬಂಧ ಹೊಂದುವುದು ಸಮ್ಮತ ಎಂದಾದರೆ, ವಿಚ್ಛೇದನಕ್ಕೆ ಈ ಸಂಬಂಧವನ್ನು ಕಾರಣವಾಗಿ ಕೊಡಬಹುದೇ? ಸಮ್ಮತಾರ್ಹವಾದ ಸಂಬಂಧವೊಂದನ್ನು ವಿಚ್ಛೇದನಕ್ಕೆ ಅರ್ಹ ಕಾರಣವಾಗಿ ಪರಿಗಣಿಸಲಾಗುತ್ತದೆಯೇ? ಪತಿಯ ಅಥವಾ ಪತ್ನಿಯ ವಿವಾಹೇತರ ಸಂಬಂಧವನ್ನು ಕಾರಣವಾಗಿ ಕೊಟ್ಟುಕೊಂಡು ಸಂಬಂಧಿತರು ವಿಚ್ಛೇದನಕ್ಕೆ ಮನವಿ ಸಲ್ಲಿಸಬಹುದೇ? ಹಾಗೆ ಮಾಡಿದರೆ ಕೋರ್ಟು ತಪ್ಪಲ್ಲ ಎಂದು ಹೇಳಿದ ಕೃತ್ಯವನ್ನು ತಪ್ಪು ಎಂದು ಪತಿ-ಪತ್ನಿ ಕೋರ್ಟಿನ ಮುಂದೆ ವಾದಿಸಿದಂತಾಗುವುದಿಲ್ಲವೇ? ಅಥವಾ ವಿವಾಹವನ್ನು ಹೆಣ್ಣು-ಗಂಡಿನ ದೈಹಿಕ ಸಂಬಂಧಕ್ಕೆ ಇರುವ ಒಪ್ಪಿಗೆಯಾಗಿ ಸ್ವೀಕರಿಸುವುದಾದರೆ ವಿವಾಹೇತರ ಸಂಬಂಧವು ಅನೈತಿಕವೇ ಆಗಬೇಕಲ್ಲವೇ? ಬಹುಶಃ,

ಪರಸಂಗ ಅಪರಾಧವಲ್ಲ ಎಂದು ತೀರ್ಪು ನೀಡಿದ ಐವರು ನ್ಯಾಯಾಧೀಶರ ಪೀಠದಲ್ಲಿದ್ದ ಇಂದೂ ಮಲ್ಹೋತ್ರರನ್ನು ಇಂಥದ್ದೊಂದು  ಪ್ರಶ್ನೆ ಕಾಡಿರಬೇಕು. ಆದ್ದರಿಂದಲೇ ಅವರು ಪರಸಂಗವು ನೈತಿಕವಾಗಿ ತಪ್ಪು ಎಂದು ಅಭಿಪ್ರಾಯಪಟ್ಟರು.

ದೀಪಕ್ ಮಿಶ್ರಾ
ಅಬ್ದುಲ್ ನಝೀರ್
ಡಿ.ವೈ. ಚಂದ್ರಚೂಡ್
ಇವರೆಲ್ಲ ಬೇರೆ ಬೇರೆ ಸಂದರ್ಭಗಳಲ್ಲಿ ಭಿನ್ನ ನಿಲುವುಗಳನ್ನು ವ್ಯಕ್ತಪಡಿಸಿದವರೇ. ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಎಲ್ಲಾ  ವಯೋಮಾನದ ಮಹಿಳೆಯರು ಪ್ರವೇಶಿಸುವುದು ಸರಿಯೋ ತಪ್ಪೋ ಎಂಬ ವಿಷಯದ ಮೇಲಿನ ತೀರ್ಪಿನಲ್ಲಿ ಇಂದೂ ಮಲ್ಹೋತ್ರ ಇತರೆಲ್ಲ ನ್ಯಾಯಾಧೀಶರಿಗಿಂತ ಭಿನ್ನ ನಿಲುವನ್ನು ತಾಳಿದರು. ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಡಿ.ವೈ. ಚಂದ್ರಚೂಡ್, ಎ.ಎಂ. ಖಾನ್ವಿಲ್ಕರ್ ಅವರು ಏಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ, ನ್ಯಾಯಮೂರ್ತಿ ಇಂದೂ ಮಲ್ಹೋತ್ರ ಅವರು ಪರಂಪರೆಯನ್ನು ಕಾಯ್ದುಕೊಳ್ಳಬೇಕು ಎಂದು ವಾದಿಸಿದರು. ಹೆಣ್ಣಿನ ಮೇಲೆ ಶಬರಿಮಲೆಯಲ್ಲಿ ಯಾವ ನಿರ್ಬಂಧವನ್ನು ಹೇರಲಾಗಿದೆಯೋ ಅದನ್ನು ಗೌರವಿಸಬೇಕು ಮತ್ತು ಧಾರ್ಮಿಕ ವಿಷಯದಲ್ಲಿ ಕೋರ್ಟು ಮಧ್ಯ ಪ್ರವೇಶಿಸುವುದು ಉಚಿತವಲ್ಲ ಎಂಬ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಆಧಾರ್ ಕಾರ್ಡ್‍ನ ವಿಷಯದಲ್ಲಿ ದೀಪಕ್ ಮಿಶ್ರಾ ನೇತೃತ್ವದ ಪಂಚಪೀಠದ ಸದಸ್ಯರಲ್ಲಿ ಒಬ್ಬರಾಗಿದ್ದ ಡಿ.ವೈ. ಚಂದ್ರಚೂಡ್ ಅವರು ಭಿನ್ನ ಧ್ವನಿ ಎತ್ತಿದ್ದರು. ಉಳಿದ ನಾಲ್ಕು ಮಂದಿ ಆಧಾರ್‍ ನ  ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದರೆ, ಚಂದ್ರಚೂಡ್ ಆಕ್ಷೇಪಿಸಿದರು. ಈ ಹಿಂದೆ ತ್ರಿವಳಿ ತಲಾಕ್‍ನ ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆ ಎದುರಾದಾಗಲೂ ಇಂಥದ್ದೊಂದು  ಸನ್ನಿವೇಶ ಎದುರಾಗಿತ್ತು. ಐವರು ನ್ಯಾಯಾಧೀಶರ ಪೀಠದಲ್ಲಿದ್ದ ದೀಪಕ್ ಮಿಶ್ರ ಮತ್ತು ನಝೀರ್ ಅಹ್ಮದ್ ಅವರು ತ್ರಿವಳಿ ತಲಾಕನ್ನು ಅಸಾಂವಿಧಾನಿಕ ಎಂದು ಕರೆಯಲು ನಿರಾಕರಿಸಿದರು. ಆದರೆ ಉಳಿದ ಮೂವರ ಅಭಿಪ್ರಾಯಗಳು ಇದಕ್ಕೆ ವಿರುದ್ಧವಾಗಿದ್ದುದರಿಂದ ತ್ರಿವಳಿ ತಲಾಕನ್ನು ಅಸಾಂವಿಧಾನಿಕವೆಂದು ಘೋಷಿಸಲಾಯಿತು. ಇಂಥದ್ದು ಈ ಹಿಂದೆಯೂ ನಡೆದಿದೆ. ಇದರರ್ಥ,

ಬಹುಮತದ ತೀರ್ಪುಗಳಲ್ಲೂ ಭಿನ್ನಮತಗಳಿವೆ. ತ್ರಿವಳಿ ತಲಾಕ್‍ನ ಸಿಂಧುತ್ವದ ವಿಷಯದಲ್ಲಿ, ಶಬರಿಮಲೆಗೆ ಮಹಿಳಾ ಪ್ರವೇಶ ನಿರ್ಬಂಧದ ವಿಷಯದಲ್ಲಿ, ಪರಸಂಗದ ವಿಷಯದಲ್ಲಿ, ಬೊಕ್ಕಸದ ಕೋಟ್ಯಂತರ ರೂಪಾಯಿಯನ್ನು ಬರಿದು ಮಾಡಿದ ಆಧಾರ್ ಕಾರ್ಡ್‍ನಂಥ ವಿಷಯದಲ್ಲೂ ಉನ್ನತ ನ್ಯಾಯಾಧೀಶರ ನಡುವೆಯೇ ಭಿನ್ನಮತಗಳಿವೆ. ಅಂದರೆ,

ನ್ಯಾಯಾಂಗದ ಯಾವುದೇ ತೀರ್ಪು ಪರಮ ಪವಿತ್ರ ಅಲ್ಲ. ಭಿನ್ನಮತ ವ್ಯಕ್ತಪಡಿಸಬಹುದಾದ ಅಥವಾ ಮಾನವ ಸಹಜ ದೌರ್ಬಲ್ಯಗಳು ನುಸುಳಿರಬಹುದಾದ ಒಂದು ಅದು; ಅಷ್ಟೇ. ಭಾರತೀಯ ದಂಡ ಸಂಹಿತೆಯ 497ನೇ ವಿಧಿಯ ಸಿಂಧುತ್ವವನ್ನು 1985ರಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರಾದ ವೈ.ವಿ. ಚಂದ್ರಚೂಡ್ ಎತ್ತಿ ಹಿಡಿದಿದ್ದರಲ್ಲದೇ, ಪರಸಂಗವನ್ನು ಅಪರಾಧ ಎಂದು ಘೋಷಿಸಿದ್ದರು. ಅದಾದ 33 ವರ್ಷಗಳ ಬಳಿಕ ಅದೇ ಸುಪ್ರೀಮ್ ಕೋರ್ಟ್‍ನಲ್ಲಿ ಅವರದೇ ಮಗ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪರಸಂಗ ಅಪರಾಧವಲ್ಲ ಎಂದು ತೀರ್ಪಿತ್ತರು. ಆ ಮೂಲಕ ಸೆಕ್ಷನ್ 497ನ್ನು ಅನೂರ್ಜಿತಗೊಳಿಸಿದರು. ಖಾಸಗಿತನದ ಹಕ್ಕಿನ ಕುರಿತೂ ಈ ಅಪ್ಪ ಮತ್ತು ಮಗ ತದ್ವಿರುದ್ಧ ನಿಲುವನ್ನು ತಾಳಿದರು. ಈ ವಿಷಯದಲ್ಲಿ ಅಪ್ಪ ಈ ಹಿಂದೆ ಕೊಟ್ಟಿದ್ದ ತೀರ್ಪಿನ ವಿರುದ್ಧ ಮಗ ಇತ್ತೀಚೆಗೆ ತೀರ್ಪು ಕೊಟ್ಟರು. ನಮಾಝ ಮಾಡುವುದಕ್ಕೆ ಮಸೀದಿಯೇ ಬೇಕೆಂದಿಲ್ಲ ಎಂಬ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 1994ರಲ್ಲಿ ನೀಡಿತ್ತು. ಅದಾಗಿ 24 ವರ್ಷಗಳ ಬಳಿಕ ಕಳೆದವಾರ ಈ ಬಗ್ಗೆ ಸುಪ್ರೀಮ್ ಕೋರ್ಟ್‍ನಲ್ಲಿ ಅದರ ಮರು ಅವಲೋಕನ ನಡೆಯಿತು. ಒಂದು ರೀತಿಯಲ್ಲಿ,

ಯಾವ ತೀರ್ಪೂ ಶಾಶ್ವತ ಅಲ್ಲ. ಅಂತಿಮವೂ ಅಲ್ಲ. ಅಲ್ಪಾಯುಷಿ ತೀರ್ಪುಗಳ ಮೇಲೆ ಸಂಭ್ರಮ ಪಡುವ ಅಥವಾ ದುಃಖಿಸುವ ಅಗತ್ಯವೂ ಇಲ್ಲ. ಸಂವಿಧಾನವನ್ನು ರಚಿಸಿದವರೂ ಮನುಷ್ಯರೇ. ಅದನ್ನು ಆಧಾರವಾಗಿಸಿಕೊಂಡು ತೀರ್ಪು ನೀಡುವ ನ್ಯಾಯಾಧೀಶರೂ ಮನುಷ್ಯರೇ. ಹಳೆಯ ತೀರ್ಪನ್ನು ತಪ್ಪು ಎಂದು ಹೇಳಿ ಹೊಸತನ್ನು ಅದರ ಮೇಲೆ ಹೇರುವವರೂ ಮನುಷ್ಯರೇ. ಆದ್ದರಿಂದ, ಇಂಥ ತೀರ್ಪುಗಳ ಮೇಲೆ ವ್ಯಕ್ತವಾಗುವ ಪರ ಮತ್ತು ವಿರುದ್ಧ ಅಭಿಪ್ರಾಯಗಳನ್ನು ಹೀಯಾಳಿಸಬೇಕಿಲ್ಲ. ಉನ್ನತ ನ್ಯಾಯಾಧೀಶರ ನಡುವೆಯೇ ಭಿನ್ನಮತ ಇರುವಾಗ, ಜನಸಾಮಾನ್ಯರಲ್ಲಿ ಪರ-ವಿರುದ್ಧ ಅಭಿಪ್ರಾಯ ಇರುವುದು ಅಸಹಜವೂ ಅಲ್ಲ, ಅಸೂಕ್ಷ್ಮ ವೂ ಅಲ್ಲ. ಪರಸಂಗವನ್ನು ಅಪರಾಧ ಮುಕ್ತಗೊಳಿಸಿದ ಬಗ್ಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ನಾವು ಈ ನೆಲೆಯಲ್ಲೇ  ಪರಿಗಣಿಸಬೇಕು. ಪ್ರಜಾತಂತ್ರವೆಂದರೆ ಇದುವೇ.



Tuesday, September 18, 2018

ಆರೆಸ್ಸೆಸ್ ಆಹ್ವಾನಕ್ಕೆ ತಿರಸ್ಕಾರವೇ ಉತ್ತರವೇ?



ಅಸಹಿಷ್ಣು, ಅತಾರ್ಕಿಕ, ಅಪ್ರಾಯೋಗಿಕ ಮತ್ತು ಅಸಾಂವಿಧಾನಿಕವಾದ ಸಿದ್ಧಾಂತವನ್ನು ಆಶ್ರಯಿಸಿಕೊಂಡಿರುವ ಸಂಘಟನೆಯೊಂದರ ಆಹ್ವಾನವನ್ನು ಸ್ವೀಕರಿಸಬೇಕೇ ಬೇಡವೇ? ಅದು ಆಯೋಜಿಸುವ ಕಾರ್ಯಕ್ರಮದಲ್ಲಿ ಉಪನ್ಯಾಸಕನಾಗಿ ಭಾಗವಹಿಸುವುದು ಉಚಿತವೋ ಅನುಚಿತವೋ?

ಇತ್ತೀಚೆಗೆ ಈ ಬಗೆಯ ಚರ್ಚೆಯೊಂದನ್ನು ಹುಟ್ಟು ಹಾಕಿದವರು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ. ರಾಷ್ಟ್ರೀಯ ಸ್ವಯಂ ಸೇವಕ (ಆರೆಸ್ಸೆಸ್) ಸಂಘವು ನಾಗಪುರದ ತನ್ನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಗೆ ಉಪನ್ಯಾಸಕರಾಗಿ ಮುಖರ್ಜಿ ಯನ್ನು ಆಹ್ವಾನಿಸಿದ್ದು ಮತ್ತು ಅವರು ಆ ಆಹ್ವಾನವನ್ನು ಸ್ವೀಕರಿಸಿದ್ದು ಚರ್ಚೆಯ ಹುಟ್ಟಿಗೆ ಕಾರಣವಾಗಿತ್ತು. ಜೂನ್ 7ರ ಆ ಸಭೆಯಲ್ಲಿ ಮುಖರ್ಜಿಯವರು ಭಾಗವಹಿಸಬಾರದು ಎಂದು ಕಾಂಗ್ರೆಸ್‍ನ ಹಲವು ಪ್ರಮುಖ ನಾಯಕರೇ ಅಭಿಪ್ರಾಯ ಪಟ್ಟರು. ಕೆಲವರು ಮೌನವಾದರು. ಹಲವರು ಬೆಂಬಲಿಸಿದರು. ಆರೆಸ್ಸೆಸ್, ಹಿಂದೂ ಮಹಾಸಭಾ ಮತ್ತು ಮುಸ್ಲಿಮ್ ಲೀಗ್‍ನ ಸದಸ್ಯರಾಗದಂತೆ  ‘ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ’ (AICC) ಸದಸ್ಯರಾಗಿರುವವರಿಗೆ ನಿಷೇಧ ವಿಧಿಸಿ ಸ್ವಾತಂತ್ರ್ಯಪೂರ್ವದ 1934ರಲ್ಲೇ  (ಆಗಿನ್ನೂ ರಾಜಕೀಯ ಪಕ್ಷವಾಗಿರಲಿಲ್ಲ) ನಿಯಮ ಮಾಡಿರುವುದನ್ನು ಕೆಲವರು ನೆನಪಿಸಿದರು. ಇದೇವೇಳೆ, ಪ್ರಣವ್ ಮುಖರ್ಜಿಯವರ ಮಗಳು ಶರ್ಮಿಷ್ಟಾ ಮುಖರ್ಜಿಯವರು ಅಪ್ಪನ ನಿಲುವನ್ನು ಪ್ರಶ್ನಿಸಿ ಚರ್ಚೆಗೆ ಇನ್ನಷ್ಟು ಕಾವು ಕೊಟ್ಟರು. ಆರೆಸ್ಸೆಸ್‍ನ ಆಹ್ವಾನವನ್ನು ಅಪ್ಪ ತಿರಸ್ಕರಿಸಬೇಕು ಎಂದು ಅವರು ಒತ್ತಾಯಿಸಿದರು. ಒಂದುವೇಳೆ, ಅಪ್ಪ ಆ ಸಭೆಯಲ್ಲಿ ಭಾಗವಹಿಸಿದರೆ, ಅದು ಸುಳ್ಳು ಸುದ್ದಿಯನ್ನು ಹರಡಲು ಆರೆಸ್ಸೆಸ್ ಮತ್ತು ಬಿಜೆಪಿಗೆ ನೆರವಾಗಲಿದೆ ಎಂದು ಖಾರವಾಗಿಯೇ ಬರೆದರು. ಮಾತ್ರವಲ್ಲ, ಅಪ್ಪ ಅಲ್ಲಿ ಆಡುವ ಮಾತುಗಳು ಮುಂದಿನ ದಿನಗಳಲ್ಲಿ ಮರೆತು ಹೋಗಲಿದ್ದು, ಅವರು ಭಾಗವಹಿಸಿದ ಚಿತ್ರಗಳಷ್ಟೇ ಶಾಶ್ವತವಾಗಿ ಉಳಿದುಕೊಳ್ಳಲಿವೆ ಎಂದೂ ಹೇಳಿದರು. ವಿಶೇಷ ಏನೆಂದರೆ,

ಆರೆಸ್ಸೆಸ್‍ನ ಸಭೆಯಲ್ಲಿ ಭಾಗವಹಿಸಿದ ಪ್ರಣವ್ ಮುಖರ್ಜಿಯವರ ಚಿತ್ರಗಳನ್ನು ಮಾಧ್ಯಮಗಳು, ಬಿಜೆಪಿ ಮತ್ತು ಅದರ ಬೆಂಬಲಿಗರು ಆ ಬಳಿಕ ಧಾರಾಳವಾಗಿ ಬಳಸುತ್ತಿದ್ದಾರೆ. ಅದರ ಜೊತೆಗೇ, “ಭಾರತ ಮಾತೆಯ ಶ್ರೇಷ್ಠ ಪುತ್ರನಿಗೆ ಗೌರವ ಸಲ್ಲಿಸಲು ನಾನಿಲ್ಲಿಗೆ ಬಂದಿರುವೆ” ಎಂದು ವಿಸಿಟರ್ಸ್ ಪುಸ್ತಕದಲ್ಲಿ ಅವರು ಬರೆದಿರುವುದನ್ನೂ ಉಪಯೋಗಿಸುತ್ತಿದ್ದಾರೆ. ಆರೆಸ್ಸೆಸ್ ಸಂಸ್ಥಾಪಕ ಸರಸಂಘಚಾಲಕ ಕೇಶವ ಬಲಿರಾಂ ಹೆಡಗೇವಾರ್ ಅವರ ಜನ್ಮಸ್ಥಳಕ್ಕೆ ಭೇಟಿ ಕೊಡುವ ವೇಳೆ ಮುಖರ್ಜಿ ಹೀಗೆ ಬರೆದಿರುವುದನ್ನು ಆರೆಸ್ಸೆಸ್ ಮತ್ತು ಬಿಜೆಪಿ ಬೆಂಬಲಿಗರು ತಮಗೆ ಸಿಕ್ಕ ಮಾನ್ಯತೆಯೆಂಬಂತೆ ಇವತ್ತು ಬಿಂಬಿಸುತ್ತಿದ್ದಾರೆ. ಮುಖರ್ಜಿಯವರ ಭೇಟಿಯ ನಂತರದಲ್ಲಿ ಈ ಬೆಳವಣಿಗೆ ನಡೆದಿರುವುದರಿಂದ, ಆರೆಸ್ಸೆಸ್‍ನ ಆಹ್ವಾನವನ್ನು ಸ್ವೀಕರಿಸಬೇಕೋ ಬೇಡವೋ ಎಂಬ ಚರ್ಚೆಗೆ ಇದು ಇನ್ನಷ್ಟು ಮಹತ್ವವನ್ನು ಒದಗಿಸಿದೆ.

ಇದಕ್ಕೆ ಹತ್ತಿರವಾಗಿರುವ ಇನ್ನೊಂದು ಘಟನೆಯನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು.

ಅಮೇರಿಕದ ಶ್ವೇತಭವನದಲ್ಲಿ ಇಫ್ತಾರ್ ಪಾರ್ಟಿಯನ್ನು ಪ್ರಥಮವಾಗಿ ಆಯೋಜಿಸಿದ್ದು ಅಧ್ಯಕ್ಷ ಬಿಲ್ ಕ್ಲಿಂಟನ್. ಅಮೇರಿಕ ದಲ್ಲಿರುವ ವಿವಿಧ ಮುಸ್ಲಿಮ್ ರಾಷ್ಟ್ರಗಳ ರಾಯಭಾರಿಗಳು, ಅಮೇರಿಕದ ಮುಸ್ಲಿಮ್ ವಿದ್ವಾಂಸರು, ಆ್ಯಕ್ಟಿವಿಸ್ಟ್‍ಗಳು, ಸಾಮಾಜಿಕ ಹೋರಾಟಗಾರರು ಮುಂತಾದವರನ್ನು ಈ ಇಫ್ತಾರ್ ಪಾರ್ಟಿಗೆ ಅವರು ಆಹ್ವಾನಿಸಿದ್ದರು. 1990ರಿಂದ ಆರಂಭವಾದ ಈ ಕಾರ್ಯ ಕ್ರಮವನ್ನು ಮುರಿದವರು ಈಗಿನ ಅಧ್ಯಕ್ಷ ಟ್ರಂಪ್. 2017ರಲ್ಲಿ ಶ್ವೇತಭವನವು ಇಫ್ತಾರ್ ಪಾರ್ಟಿ ಆಯೋಜಿಸದೇ ಸುಮ್ಮನಾಯಿತು. ಅದು ತೀವ್ರ ಚರ್ಚೆಗೂ ಕಾರಣವಾಯಿತು. ಟ್ರಂಪ್ ಅವರ ತೀವ್ರ ಬಲಪಂಥೀಯ ವಿಚಾರಧಾರೆಯ ಪ್ರತಿಬಿಂಬ ಇದು ಎಂಬ ಟೀಕೆಯೂ ವ್ಯಕ್ತವಾಯಿತು. ತನ್ನ ಚುನಾವಣಾ ಭಾಷಣಗಳಲ್ಲಿ ಮುಸ್ಲಿಮ್ ವಿರೋಧಿ ನಿಲುವನ್ನು ವ್ಯಕ್ತಪಡಿಸುವ ಮೂಲಕವೇ ಪ್ರಚಾರಕ್ಕೆ ಬಂದಿದ್ದ ಟ್ರಂಪ್‍ರ ಮೇಲೆ ಮತ್ತಷ್ಟು ಆರೋಪಗಳನ್ನು ಹೊರಿಸಲು ಇದು ಅವಕಾಶ ಒದಗಿಸಿತು. ಅದೇವೇಳೆ, ಅವರ ಬೆಂಬಲಿಗರು ಟ್ರಂಪ್‍ರ ನಿಲುವನ್ನು ಸಮರ್ಥಿಸಿಕೊಳ್ಳತೊಡಗಿದರು. ಆದರೆ, 2018ರಲ್ಲಿ ಇದೇ ಟ್ರಂಪ್ ಶ್ವೇತಭವನದಲ್ಲೇ  ಇಫ್ತಾರ್ ಪಾರ್ಟಿಯನ್ನು ಏರ್ಪಡಿಸಿದರು. ಮಾತ್ರವಲ್ಲ, ಬಿಲ್ ಕ್ಲಿಂಟನ್ ಅವರ ಇಫ್ತಾರ್ ಪಾರ್ಟಿ ಹೇಗಿತ್ತೋ ಅದೇ ಮಾದರಿಯನ್ನು ಈ ಪಾರ್ಟಿಗೂ ಅಳವಡಿಸಿಕೊಂಡರು. ಸೌದಿ ರಾಯಭಾರಿ ಖಾಲಿದ್ ಬಿನ್ ಸಲ್ಮಾನ್, ಜೋರ್ಡಾನ್ ರಾಯಭಾರಿ ರಿನಾ ಕವಾರ್ ಸೇರಿದಂತೆ ಇಂಡೋನೇಶಿಯಾ, ಯುಎಇ, ಟುನೀಷ್ಯಾ, ಕತಾರ್, ಬಹ್ರೈನ್, ಮೊರಾಕ್ಕೊ, ಅಲ್ಜೀರಿಯಾ, ಲಿಬಿಯಾ, ಕುವೈತ್, ಝಾಂಬಿಯಾ, ಇತಿಯೋಪಿಯಾ, ಇರಾಕ್, ಬೋಸ್ನಿಯಾ ಮುಂತಾದ ದೇಶಗಳ ರಾಯಭಾರಿಗಳು ಭಾಗವಹಿಸಿದ ಆ ಇಫ್ತಾರ್ ಪಾರ್ಟಿಯೂ ವಿವಾದಮುಕ್ತ ಆಗಿರಲಿಲ್ಲ. ಶ್ವೇತಭವನದಲ್ಲಿ ಇಫ್ತಾರ್ ಪಾರ್ಟಿ ನಡೆಯುತ್ತಿದ್ದರೆ ಹೊರಗೆ ಅಮೇರಿಕದ ಆ್ಯಕ್ಟಿವಿಸ್ಟ್‍ಗಳು, ನಾಗರಿಕ ಹಕ್ಕು ಹೋರಾಟಗಾರರು, ಪ್ರೊಫೆಸರ್‍ಗಳೂ ಸೇರಿದಂತೆ ಅನೇಕಾರು ಮಂದಿ ‘Not Trumps Iftar’  ಎಂಬ ಘೋಷಣೆಯೊಂದಿಗೆ ಪ್ರತಿಭಟಿಸುತ್ತಿದ್ದರು. ಸಿರಿಯಾದ ವಲಸೆಗಾರರನ್ನು ‘ಅಪಾಯಕಾರಿ ಹಾವು’ ಎಂದು ಅವರು ಚುನಾವಣಾ ಪ್ರಚಾರದ ವೇಳೆ ಹೇಳಿರುವುದನ್ನು ಮತ್ತು ಐದು ಮುಸ್ಲಿಮ್ ರಾಷ್ಟ್ರಗಳ ನಾಗರಿಕರಿಗೆ ಅವರು ಪ್ರವೇಶ ನಿಷೇಧಿಸಿರುವುದನ್ನು ಅವರು ಪ್ರಶ್ನಿಸುತ್ತಿದ್ದರು. ಹಾಗಂತ,
ಈ ನಡೆಯನ್ನು ಆರೆಸ್ಸೆಸ್‍ಗೆ ಹೋಲಿಸುತ್ತಿಲ್ಲ. ಟ್ರಂಪ್ ಜನ ಪ್ರತಿನಿಧಿ. ಆರೆಸ್ಸೆಸ್ ಒಂದು ಖಾಸಗಿ ಸಂಘಟನೆ. ಸಮಾನ ರೀತಿಯ ಎರಡು ಘಟನೆಗಳು ಎಂಬುದನ್ನು ಸೂಚಿಸುವುದಕ್ಕಷ್ಟೇ ಈ ಉಲ್ಲೇಖ.

ಸದ್ಯ ಆರೆಸ್ಸೆಸ್ ಮತ್ತೆ ಸುದ್ದಿಯಲ್ಲಿದೆ. ದೆಹಲಿಯಲ್ಲಿ ಅದು ಆಯೋಜಿಸಿರುವ ಮೂರು ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಪರ-ವಿರೋಧಿಗಳೆಲ್ಲರನ್ನೂ ಅದು ಆಹ್ವಾನಿಸಿದೆ. ರಾಹುಲ್ ಗಾಂಧಿಯಿಂದ ಹಿಡಿದು ಕಮ್ಯುನಿಸ್ಟ್ ಸೀತಾರಾಂ ಯೆಚೂರಿಯ ವರೆಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಮುಸ್ಲಿಮ್ ಸಮುದಾಯದ ಪ್ರಮುಖರು ಆಹ್ವಾನಿತರಾಗಿದ್ದಾರೆ. ಮತ್ತದೇ ಪ್ರಶ್ನೆ- ಆರೆಸ್ಸೆಸ್ ಆಹ್ವಾನವನ್ನು ಸ್ವೀಕರಿಸಬೇಕೋ ಬೇಡವೋ? Will he dare to or will he not  ಎಂದು ರಾಹುಲ್ ಗಾಂಧಿಯನ್ನು ಪ್ರಚೋದಿಸುವ ರೀತಿಯಲ್ಲಿ ಮಾಧ್ಯಮಗಳು ಶೀರ್ಷಿಕೆ ಬರೆದಿವೆ. ಹಾಗಂತ,
ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿಗೆ ನೆಲವನ್ನು ಹದಗೊಳಿಸಿ ಕೊಡುವುದು ಆರೆಸ್ಸೆಸ್‍ನ ಉದ್ದೇಶ ಎಂಬುದು ಸ್ಪಷ್ಟವೇ ಆಗಿದ್ದರೂ ಅಷ್ಟಕ್ಕೇ ಈ ಆಹ್ವಾನವನ್ನು ನಾವು ಸೀಮಿತಗೊಳಿಸಿ ನೋಡಬೇಕಿಲ್ಲ. ಈ ಆಹ್ವಾನದಲ್ಲಿ ಒಂದು ಜಾಣತನವಿದೆ. ತನ್ನ ಬಗ್ಗೆ ಅನುಕಂಪ ಭಾವವನ್ನು ಸಾಮಾಜಿಕವಾಗಿ ಸೃಷ್ಟಿಸುವುದೂ ಇದರಲ್ಲಿ ಒಂದು. ‘ತನ್ನ ವಿಚಾರಧಾರೆಯನ್ನು ಒಪ್ಪದವರೊಂದಿಗೆ ಮಾತಾಡಲು ಮತ್ತು  ಅವರ ಮಾತುಗಳನ್ನು ಕೇಳಿಸಿಕೊಳ್ಳಲು ತಾನು ಸಿದ್ಧನಿದ್ದೇನೆ, ಆದರೆ ಅವರೇ ಸಿದ್ಧರಿಲ್ಲ, ಸೈದ್ಧಾಂತಿಕವಾಗಿ ಅವರು ಪುಕ್ಕಲರು...’ ಎಂಬ ಸಂದೇಶವನ್ನು ಸಾರುವುದೂ ಈ ಆಹ್ವಾನದಲ್ಲಿ ಸೇರಿದೆ ಎಂದೇ ಅನಿಸುತ್ತದೆ. ಅಷ್ಟಕ್ಕೂ,

ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸುವುದರಿಂದ ಆರೆಸ್ಸೆಸ್‍ಗೆ ಮಾತ್ರ ಲಾಭ, ಭಾಗವಹಿಸಿದವರಿಗೆ ಯಾವ ಪ್ರಯೋಜನವೂ ಇಲ್ಲ ಎಂಬ ನಿಲುವು ಎಷ್ಟು ಸರಿ? ಈ ಬಗೆಯ ವಾದವನ್ನು ಒರೆಗೆ ಹಚ್ಚಿ ನೋಡಲಾಗಿದೆಯೇ? ಅಥವಾ ಬರಿದೇ ಭಯವೇ? ತನ್ನ ವಿಚಾರಧಾರೆಯಲ್ಲಿ ಸ್ಪಷ್ಟತೆ ಹೊಂದಿರುವ ಮತ್ತು ಅದಕ್ಕೆ ಬದ್ಧನಾಗಿರುವ ವ್ಯಕ್ತಿ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಹೋದರೂ ಮುಸ್ಲಿಮ್ ಲೀಗ್ ಸಭೆಗೆ ಹೋದರೂ ವಿಚಲಿತನಾಗಲಾರ. ರಾಹುಲ್ ಗಾಂಧಿಯವರು ಆರೆಸ್ಸೆಸ್ ಆಹ್ವಾನವನ್ನು ಸ್ವೀಕರಿಸಿ, ಅಲ್ಲಿ  ಸೇರಿರುವ 5 ಸಾವಿರ ಮಂದಿಯ ಎದುರು- ಭಾರತದ ಬಹುತ್ವ, ಸಂವಿಧಾನದ ಅಗತ್ಯ, ಜಾತ್ಯತೀತ ತತ್ವದ ಉಳಿವು, ಭಿನ್ನಾಭಿಪ್ರಾಯಕ್ಕೆ ಸಿಗಬೇಕಾದ ಮನ್ನಣೆ, ಆರೆಸ್ಸೆಸ್‍ನೊಂದಿಗೆ ತನಗಿರುವ ಭಿನ್ನಾಭಿಪ್ರಾಯ, ಅದಕ್ಕಿರುವ ಕಾರಣಗಳು, ಸಮರ್ಥನೆಗಳು, ದೇಶದ ಒಳಿತಿನ ದೃಷ್ಟಿಯಿಂದ ಆರೆಸ್ಸೆಸ್ ಕೈ ಬಿಡಬೇಕಾದ ಸಂಗತಿಗಳು... ಇತ್ಯಾದಿ ಇತ್ಯಾದಿಗಳ ಕುರಿತಂತೆ ಪ್ರಬುದ್ಧ ಭಾಷಣವನ್ನು ಮಾಡಿದರೆ ಅದು ಪರಿಣಾಮ ಬೀರದು ಎಂದು ನಾವೇಕೆ ಭಾವಿಸಬೇಕು? ಆರೆಸ್ಸೆಸ್ಸಿನಲ್ಲಿ ಒಂದು ಸಿದ್ಧಾಂತವಿದೆ. ರಾಹುಲ್ ಗಾಂಧಿಯವರಲ್ಲಿ ಅದಕ್ಕೆ ಪ್ರತಿ ಸಿದ್ಧಾಂತವಿದೆ. ಈ ಎರಡೂ ಸಿದ್ಧಾಂತಗಳು ಪರಸ್ಪರ ಮುಖಾಮುಖಿಯಾಗದೇ ತಪ್ಪಿಸಿಕೊಳ್ಳುತ್ತಾ ಎಲ್ಲಿಯ ವರೆಗೆ ಸಾಗಬಹುದು? ಅದರಿಂದ ಯಾರಿಗೆ ಲಾಭ? ಅಂದಹಾಗೆ,
ರಾಜಕೀಯ ಪಕ್ಷವಾಗಿ ಕಾಂಗ್ರೆಸ್‍ಗೂ ಖಾಸಗಿ ಸಂಘಟನೆಯಾದ ಆರೆಸ್ಸೆಸ್‍ಗೂ ನಡುವೆ ವ್ಯತ್ಯಾಸ ಇದೆ ಎಂಬುದು ನಿಜವೇ ಆಗಿದ್ದರೂ ಬಿಜೆಪಿ ಪ್ರತಿನಿಧಿಸುವುದೇ ಆರೆಸ್ಸೆಸ್‍ನ ಸಿದ್ಧಾಂತವನ್ನು ಎಂಬುದನ್ನೂ ನಾವಿಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಆರೆಸ್ಸೆಸ್ ಸಭೆಯಲ್ಲಿ ಭಾಷಣ ಮಾಡುವುದೆಂದರೆ, ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡುವುದೆಂದೇ ಅರ್ಥ. ಅಲ್ಲದೇ ಈ ದೇಶದ ಮಂದಿ ಅಂಥ ಭಾಷಣವನ್ನು ಗಮನವಿಟ್ಟು ಆಲಿಸುತ್ತಾರೆ. ಎರಡು ಸಿದ್ಧಾಂತಗಳ ನಡುವಿನ ಮುಖಾಮುಖಿ ಎಂಬ ನೆಲೆಯಲ್ಲಿ ಅಂಥ ಭಾಷಣಕ್ಕೆ ದೇಶದಾದ್ಯಂತ ಕುತೂಹಲವೂ ಇರುತ್ತದೆ. ಆದ್ದರಿಂದ, ಆರೆಸ್ಸೆಸ್‍ನ ಆಹ್ವಾನ ತಂತ್ರಕ್ಕೆ ರಾಹುಲ್ ಗಾಂಧಿಯು ಸ್ವೀಕಾರ ಎಂಬ ಪ್ರತಿತಂತ್ರವನ್ನು ಯಾಕೆ ಬಳಸಿಕೊಳ್ಳಬಾರದು? ಇದೊಂದು ಸವಾಲಿನ ನಡೆ ಎಂಬುದು ನಿಜ. ಆದರೆ ಈ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಿದರೆ ಅದರಿಂದಾಗಿ ಬಿಜೆಪಿಯ ವರ್ಚಸ್ಸು ಕುಗ್ಗುವ ಸಾಧ್ಯತೆಯೂ ಇದೆ. ಕಾಂಗ್ರೆಸ್‍ಗೆ ಸೈದ್ಧಾಂತಿಕ ಸ್ಪಷ್ಟತೆ ಇದೆ ಮತ್ತು ಅದು ಪ್ರತಿಪಾದಿಸುವ ಸಿದ್ಧಾಂತವು ಬಿಜೆಪಿಯ ಸಿದ್ಧಾಂತಕ್ಕಿಂತ ಹೆಚ್ಚು ಪ್ರಾಯೋಗಿಕವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುವುದೂ ಇದರಿಂದ ಸಾಧ್ಯವಾಗಬಹುದು. ಅಂದಹಾಗೆ,

ಸಂವಾದ
ಸಂದೇಹ
ಭಿನ್ನಾಭಿಪ್ರಾಯ

ಇವು ಮೂರೂ ಅಪಾಯಕಾರಿಗಳಲ್ಲ. ಮಾತ್ರವಲ್ಲ, ಈ ಮೂರಕ್ಕೆ ಎಲ್ಲಿ ಅವಕಾಶಗಳಿರುವುದಿಲ್ಲವೋ ಅಂತಹ ವಾತಾವರಣ ಖಂಡಿತ ಅಪಾಯಕಾರಿ. ಈ ದೇಶದಲ್ಲಿ ಈ ಮೂರಕ್ಕೂ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ವಾತಾವರಣವನ್ನು ಕೆಡಿಸಲು ಪ್ರಯತ್ನಗಳು ನಡೆಯುತ್ತಿವೆಯಾದರೂ ಅದಕ್ಕೆ ಅದಕ್ಕಿಂತ ತೀವ್ರಮಟ್ಟದಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಸಂವಾದ ಎಂಬುದು ಸಂದೇಹ ಮತ್ತು ಭಿನ್ನಾಭಿಪ್ರಾಯಗಳು ಇದ್ದಾಗಲಷ್ಟೇ ಸಾಧ್ಯ. ಶೂನ್ಯದಲ್ಲಿ ಸಂವಾದ ಹುಟ್ಟುವುದಿಲ್ಲ. ಆರೆಸ್ಸೆಸ್ ಇಂಥದ್ದೊಂದು  ಸಂವಾದಕ್ಕೆ ಸಿದ್ಧ ಎಂದು ಇವತ್ತು ತೋರಿಸಿಕೊಳ್ಳತೊಡಗಿದೆ. ಈ ತೋರಿಕೆಗೆ ತಿರಸ್ಕಾರವನ್ನೇ ಉತ್ತರವಾಗಿ ನೀಡುವಷ್ಟು ದಿನ ಅದರ ತೋರಿಕೆಯು ಬಲ ಪಡೆಯುತ್ತಲೇ ಹೋಗುತ್ತದೆ. ‘ತಾನು ಸದಾ ಮುಕ್ತವಾಗಿದ್ದೇನೆ’ ಎಂದು ಅದು ಪದೇ ಪದೇ ಹೇಳಿಕೊಳ್ಳುವ ಮೂಲಕ ತನ್ನ ವ್ಯಾಪ್ತಿಗೆ ಇನ್ನಷ್ಟು ಮಂದಿಯನ್ನು ಸೇರಿಸಿಕೊಳ್ಳುತ್ತಲೇ ಇರುತ್ತದೆ. ಯಾವಾಗ ಅದರ ಸಂವಾದ ಆಹ್ವಾನವನ್ನು ಸ್ವೀಕರಿಸಲಾಗುತ್ತದೋ ಆವಾಗ ಅದು ನಿಜವಾದ ಸವಾಲನ್ನು ಎದುರಿಸ ತೊಡಗುತ್ತದೆ. ಮಾತ್ರವಲ್ಲ, ಇದರಿಂದಾಗಿ ಕೆಲವೊಮ್ಮೆ ತನ್ನ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಒಂದಷ್ಟು ಮಾರ್ಪಾಟು ಮಾಡಿಕೊಳ್ಳ ಬೇಕಾದ ಒತ್ತಡಕ್ಕೂ ಅದು ಒಳಗಾಗಬಹುದು. ಸಂವಾದ ಎಂಬುದು ಯಾವಾಗಲೂ ಹಾಗೆಯೇ. ಅದು ಎರಡು ಅಲಗಿನ ಕತ್ತಿ. ಸಂವಾದಕ್ಕೆ ಆಹ್ವಾನಿಸಿದವರೇ ಅದರಲ್ಲಿ ಮೇಲುಗೈ ಪಡೆಯ ಬೇಕೆಂದಿಲ್ಲ. ಅತಿಥಿಯೂ ಜನರ ಮನಸ್ಸನ್ನು ಗೆಲ್ಲಬಲ್ಲ.

ಭಿನ್ನಾಭಿಪ್ರಾಯವನ್ನು ದಮನಿಸುವ ಮನಃಸ್ಥಿತಿಯೊಂದು ದೇಶದ ಒಂದು ಯುವ ಗುಂಪಿನಲ್ಲಿ ಬಲಪಡೆಯುತ್ತಿರುವಾಗ ಆ ಗುಂಪಿನ ಬಲವನ್ನು ತಗ್ಗಿಸುವುದಕ್ಕೆ ಯಾವುದರಿಂದ ಸಾಧ್ಯ ಎಂಬ ಬಗ್ಗೆ ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಗಂಭೀರ ಚಿಂತನೆಯೊಂದು ನಡೆಯಬೇಕು. ಸಂವಾದ ಸ್ನೇಹಿ ವಾತಾವರಣವು ಸಂವಾದ ದ್ವೇಷಿ ವಾತಾವರಣಕ್ಕಿಂತ ಎಷ್ಟೋ ಉತ್ತಮ. ವೈರಿಯ ಜೊತೆಗೂ ಸಂವಾದ ಸಾಧ್ಯ ಎಂಬ ವಾತಾವರಣದ ನಿರ್ಮಾಣ ಇವತ್ತಿನ ಅಗತ್ಯ. ಅಷ್ಟಕ್ಕೂ, ಬಿಜೆಪಿಯಲ್ಲಿರುವವರೂ ಕಾಂಗ್ರೆಸ್‍ನಲ್ಲಿರುವವರೂ ಎಲ್ಲರೂ ಮನುಷ್ಯರೇ. ಸಂಘಟನೆಗಳಿಗೂ ಇದೇ ಮಾತು ಅನ್ವಯ. ರಾಜಕೀಯ ಅಧಿಕಾರ, ಸಾಮಾಜಿಕ ಮನ್ನಣೆ ಮತ್ತು ತಪ್ಪಾದ ಓದು ಇತ್ಯಾದಿಗಳು ಈ ಮನುಷ್ಯರಲ್ಲಿ ಹಲವರನ್ನು ಕ್ರೂರಿಗಳನ್ನಾಗಿಯೂ ಮನುಷ್ಯ ವಿರೋಧಿಗಳನ್ನಾಗಿಯೂ ಮಾಡಿಬಿಟ್ಟಿದೆ. ಇಂಥವರೊಂದಿಗೆ ಶಾಶ್ವತ ಗೋಡೆ ಕಟ್ಟಿಕೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ. ಗೋಡೆಯನ್ನು ಬೀಳಿಸಬೇಕು ಮತ್ತು ಸಂವಾದವನ್ನು ಸಾಧ್ಯವಾಗಿಸಬೇಕು- ಇದುವೇ ಸರಿಯಾದ ದಾರಿ. ಒಂದೊಮ್ಮೆ ಸಂವಾದವು ವೈರಿಯನ್ನೂ ಮಿತ್ರರನ್ನಾಗಿಸ ಬಹುದು. ಅದಲ್ಲದಿದ್ದರೆ ವೈರಿಯ ದ್ವೇಷದ ಮಟ್ಟವನ್ನು ತಗ್ಗಿಸಬಹುದು ಅಥವಾ ದ್ವೇಷವನ್ನೇ ಕಿತ್ತೊಗೆಯಬಹುದು. ಇವು ಏನಿದ್ದರೂ ಸ್ವಾಗತಾರ್ಹವೇ.ಅಂದಹಾಗೆ,

ಮನುಷ್ಯಪ್ರೇಮಿ ಸಿದ್ಧಾಂತವನ್ನು ಪ್ರತಿಪಾದಿಸುವ ಮತ್ತು ಸದಾ ಅದಕ್ಕೆ ಬದ್ಧನಾಗಿರುವ ವ್ಯಕ್ತಿ ಯಾವ ಸಭೆಯಲ್ಲಿ ಮಾತಾಡಿದರೂ ಆ ಮಾತುಗಳು ಸುದ್ದಿ ಮಾಡುತ್ತಲೇ ಇರುತ್ತದೆ, ಬರೇ ಚಿತ್ರಗಳಲ್ಲ.

ಏ ಕೆ ಕುಕ್ಕಿಲ

Tuesday, September 4, 2018

ಹುಲಿ-ಇಲಿಗಳ ನಡುವೆ...

  
         ಮೊನ್ನೆ ಫೇಸ್‍ಬುಕ್ ಗೆಳೆಯನೋರ್ವನನ್ನು ಭೇಟಿಯಾದೆ. ವಯಸ್ಸಿಗೆ ಹೋಲಿಸಿದರೆ ನನಗಿಂತ ಕಿರಿಯವ. ಫೇಸ್‍ಬುಕ್‍ನಲ್ಲಿ ಆತ ಹಾಕುತ್ತಿದ್ದ ಪೋಸ್ಟ್ ಮತ್ತು ಬೇರೆ ಬರಹಗಳಿಗೆ ವ್ಯಕ್ತಪಡಿಸುತ್ತಿದ್ದ ಪ್ರತಿಕ್ರಿಯೆಯ ಅರಿವಿದ್ದ ನನಗೆ ಆತ ಈತನೇನಾ ಅನ್ನುವಷ್ಟು ದಂಗಾಗಿ ಹೋದೆ. ಸಾಮಾಜಿಕ ಜಾಲತಾಣಗಳಲ್ಲಿ ಹುಲಿಯಂತೆ ಆರ್ಭಟಿಸುತ್ತಿದ್ದವ ಎದುರು ಸಿಕ್ಕಾಗ ಇಲಿಯಂತೆ ಗೋಚರಿಸಿದ. ಇದು ಈತನ ನಿಜರೂಪವೋ ಅಥವಾ ಸಾಂದರ್ಭಿಕ ಅಭಿವ್ಯಕ್ತವೋ ಅನ್ನುವ ಅನುಮಾನವೂ ಉಂಟಾಯಿತು. ಒಂದಷ್ಟು ಹೊತ್ತು ಮಾತುಕತೆಯೂ ನಡೆಯಿತು. ಜಾಲತಾಣಗಳಲ್ಲಿ ಕಂಡಂತೆ ಆತ ಇರಲಿಲ್ಲ. ಭಾಷೆಯೂ ಚೆನ್ನಾಗಿತ್ತು. ವಿಚಾರಗಳ ಅಭಿವ್ಯಕ್ತಿಯಲ್ಲಿ ಅಪ್ರಬುದ್ಧತೆಯೂ ಇತ್ತು. ಮುಖ್ಯವಾಗಿ, ಆವೇಶದ ಲವಲೇಷವೂ ಇರಲಿಲ್ಲ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡತೊಡಗಿತು.
   
 ಒಂದು ರೀತಿಯಲ್ಲಿ, ಸಾಮಾಜಿಕ ಜಾಲತಾಣವೆಂಬುದು ಸಂಪಾದಕ ಇಲ್ಲದ ಮಾಧ್ಯಮ. ಈ ಮಾಧ್ಯಮ ಇವತ್ತು ನಾಗರಿಕರಿಗೆ ಎಷ್ಟು ಅಪರಿಮಿತ ಸ್ವಾತಂತ್ರ್ಯ ಮತ್ತು ಅವಕಾಶವನ್ನು ನೀಡಿದೆಯೆಂದರೆ ಸ್ಥಾಪಿತ ಮಾಧ್ಯಮ ವ್ಯವಸ್ಥೆಯನ್ನೇ ಬೆದರಿಸುವಷ್ಟು. ಇವತ್ತು, ಕೆಲವು ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳ ಕೊನೆಯುಸಿರಿನಲ್ಲಿ ಸಾಮಾಜಿಕ ಜಾಲತಾಣಗಳಿಗೆ ಮುಖ್ಯ ಪಾತ್ರ ಇದೆ. ಈ ಹಿಂದೆ ಪ್ರತಿಯೊಂದೂ ಸಂಪಾದಕನ ಮರ್ಜಿಯನ್ನು ಅವಲಂಬಿಸಿತ್ತು. ಲೇಖನ, ಕಥೆ, ಕವನ, ಪ್ರಬಂಧ, ವರದಿ ಎಲ್ಲವೂ ಸಂಪಾದಕರ ಮೂಡ್ ಮತ್ತು ಮನಃಸ್ಥಿತಿಯನ್ನು ಅವಲಂಬಿಸಿ ಪುರಸ್ಕಾರ ಅಥವಾ ತಿರಸ್ಕಾರಕ್ಕೆ ಒಳಪಡುತ್ತಿತ್ತು. ಈ ಸ್ಥಿತಿಯನ್ನು ಬದಲಾಯಿಸಿದ್ದೇ  ಸಾಮಾಜಿಕ ಜಾಲತಾಣಗಳು. ಫೇಸ್‍ಬುಕ್, ಟ್ವಿಟರ್, ವಾಟ್ಸ್‍ಆ್ಯಪ್, ಇನ್‍ಸ್ಟಾ ಗ್ರಾಂಗಳು ಮಾಧ್ಯಮ ಪ್ರಪಂಚವನ್ನೇ ಅಲುಗಾಡಿಸಿದುವು. ಸ್ಥಾವರದಂತಿದ್ದ ನೀತಿ-ನಿಯಮಗಳನ್ನು ಹರಿದು ಹಾಕಿದುವು. ಸಂಪಾದಕನ ಸುತ್ತ ಸೃಷ್ಟಿಯಾಗಿದ್ದ ಕೌತುಕ, ಕುತೂಹಲಗಳ ಮೊಟ್ಟೆ ಒಡೆದು ಹೋದುವು. ಪ್ರಶ್ನಾತೀತ ಎಂಬಂಥ ವಾತಾವರಣವೊಂದನ್ನು ತಮ್ಮ ಸುತ್ತ ನಿರ್ಮಿಸಿಕೊಂಡಿದ್ದ ಮಾಧ್ಯಮಗಳ ಜುಟ್ಟು ಹಿಡಿದು ಕಟಕಟೆಯಲ್ಲಿ ನಿಲ್ಲಿಸಿದ್ದು ಇವೇ ಜಾಲತಾಣ. ಬರೇ ಪತ್ರಿಕೆಗಳೇ ಮಾಧ್ಯಮವಾಗಿದ್ದ ಕಾಲದಲ್ಲಿ ಒಂದು ಪತ್ರಿಕೆ ಬರೆದಿದ್ದೇ  ಮಾತು. ಹೇಳಿದ್ದೇ  ವೇದವಾಕ್ಯ. ಒಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಇನ್ನೊಂದು ಪತ್ರಿಕೆ ಪ್ರಶ್ನಿಸುವ ಸಾಧ್ಯತೆ ಶೂನ್ಯವಾಗಿತ್ತು. ಒಂದು ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ತಪ್ಪಾದರೂ ಅದನ್ನು ಪ್ರಶ್ನಿಸುವ ಮತ್ತು ಸಮಾಜಕ್ಕೆ ಅದರ ತಪ್ಪುಗಳನ್ನು ಮನವರಿಕೆ ಮಾಡುವ ಪ್ರಯತ್ನ ವನ್ನು ಇನ್ನೊಂದು ಪತ್ರಿಕೆ ಮಾಡುವುದಕ್ಕೆ ದಾರಿಗಳೇ ಇರಲಿಲ್ಲ. ಒಂದು ಬಗೆಯ ಪರಮ ಪವಿತ್ರ ಮನಃಸ್ಥಿತಿ ಪತ್ರಿಕೆಗಳದ್ದಾಗಿತ್ತು ಅಥವಾ ಓದುಗರಿಗೆ ತಮ್ಮನ್ನು ಹಾಗೆ ಅವು ತೋರ್ಪಡಿಸಿಕೊಂಡಿದ್ದುವು. ಹಾಗಲ್ಲ, ಹೀಗೆ ಎಂದು ಹೇಳಲು ಉಳಿದ ಪತ್ರಿಕೆಗಳು ಪ್ರಯತ್ನಿಸದಿರುವುದರಿಂದ ಮತ್ತು ಜಾಲತಾಣಗಳು ಇನ್ನೂ ಉಗಮವಾಗದಿರುವುದರಿಂದ ಪತ್ರಿಕೆಗಳು ಕೊಟ್ಟದ್ದೇ  ಸುದ್ದಿ ಮತ್ತು ಅದರಾಚೆಗೆ ಏನೂ ಇಲ್ಲ ಅನ್ನುವ ಭಾವವೊಂದು ಸಾರ್ವಜನಿಕವಾಗಿ ನೆಲೆಗೊಂಡಿತ್ತು. ಪತ್ರಿಕೆಗಳು ಮತ್ತು ಟಿ.ವಿ. ಮಾಧ್ಯಮಗಳಿಗೆ ಸಂಬಂಧಿಸಿ ಇವತ್ತೂ ಇದು ಬದಲಾಗಿಲ್ಲ.

    ಒಂದು ಪತ್ರಿಕೆ ಪರಮ ಪ್ರಚೋದಕ ಲೇಖನವನ್ನೋ ಕತೆ, ವರದಿಯನ್ನೋ ಪ್ರಕಟಿಸಿದರೆ ಅದನ್ನು ಪ್ರಶ್ನಿಸಿ ಇನ್ನೊಂದು ಪತ್ರಿಕೆ ಬರೆಯುವ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಅರ್ನಾಬ್ ಗೋಸ್ವಾಮಿಯ ಸರಿ-ತಪ್ಪುಗಳನ್ನು ರಾಜ್‍ದೀಪ್ ಸರ್ದೇಸಾಯಿ  ತನ್ನ ಇಂಡಿಯಾ ಟುಡೇ ಟಿವಿಯಲ್ಲಿ ಚರ್ಚಿಸುವುದಿಲ್ಲ. ಎನ್‍ಡಿಟಿವಿಯಲ್ಲಿ ರವೀಶ್ ಕುಮಾರ್ ಮಾಡುವ ಚರ್ಚೆ ಮತ್ತು ವಿಶ್ಲೇಷಣೆಯನ್ನು ಮೆಚ್ಚಿಕೊಂಡೋ ತೆಗಳಿಕೊಂಡೋ ಟೈಮ್ಸ್ ನೌನಲ್ಲಿ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ. ಕನ್ನಡದ ಚಾನೆಲ್‍ಗಳಿಗೆ ಸಂಬಂಧಿಸಿಯೂ ಇವೇ ಮಾತನ್ನು ಹೇಳಬಹುದು. ಲಿಖಿತವೋ ಅಲಿಖಿತವೋ ಆದ ಅಸ್ಪೃಶ್ಯ ನೀತಿಯೊಂದು ಮಾಧ್ಯಮ ಜಗತ್ತಿನಲ್ಲಿ ನೆಲೆ ನಿಂತಿದೆ. ಇದಕ್ಕೆ ಅಪವಾದದಂತೆ ಪ್ರಸಾರವಾಗುತ್ತಿರುವುದು ಮೀಡಿಯಾ ವನ್ ಎಂಬ ಮಲಯಾಳಂ ಟಿ.ವಿ. ಚಾನೆಲ್. ಅದು ವಾರಕ್ಕೊಮ್ಮೆ ‘ಮೀಡಿಯಾ ಸ್ಕ್ಯಾನ್’ ಎಂಬ ಅರ್ಧಗಂಟೆಯ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಒಂದು ವಾರದವರೆಗೆ ವಿವಿಧ ಮಾಧ್ಯಮಗಳಲ್ಲಿ ಪ್ರಸಾರ ಮತ್ತು ಪ್ರಕಟವಾದ ಸುದ್ದಿಗಳ ಮೇಲೆ ಕಣ್ಣಿಟ್ಟು ವಿಶ್ಲೇಷಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯ. ಅಂತೂ ಮಾಧ್ಯಮ ಜಗತ್ತಿನ ಸ್ಥಾಪಿತ ನಿಲುವುಗಳ ಮೇಲೆ ಮೊದಲ ಬಾರಿ ನಿಷ್ಠುರ ಸವಾರಿ ಮಾಡಿದ್ದು ಸಾಮಾಜಿಕ ಜಾಲತಾಣಗಳು. ಸಂಪಾದಕ ರಹಿತ ಈ ಮಾಧ್ಯಮ ಕ್ಷೇತ್ರವನ್ನು ಜನರು ಹೇಗೆ ಬಳಸಿಕೊಂಡರೆಂದರೆ, ಯಾವ ಸಂಪಾದಕನೂ ಯಾವ ಪತ್ರಿಕೆಯೂ ಯಾವ ಟಿ.ವಿ.ಯೂ ಅವರ ಪ್ರಹಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮಗೆ ಇಷ್ಟವಾದದ್ದನ್ನು ತಡೆರಹಿತವಾಗಿ ಬರೆದರು. ಇಷ್ಟವಾಗದ್ದನ್ನು ಮುಲಾಜಿಲ್ಲದೇ ಹೇಳಿಕೊಂಡರು. ರಾಜಕಾರಣಿ, ಮೌಲಾನಾ, ಸ್ವಾಮೀಜಿ, ಶಿಕ್ಪಕ, ಪತ್ರಕರ್ತ, ಉದ್ಯಮಿ, ವೈದ್ಯ, ಯೋಧ, ಅಧಿಕಾರಿ.. ಎಲ್ಲರನ್ನೂ ಕಟಕಟೆಯಲ್ಲಿ ನಿಲ್ಲಿಸಿದರು. ಸರಿ-ತಪ್ಪುಗಳನ್ನು ಚರ್ಚಿಸಿದರು. ಇಷ್ಟೇ ಅಲ್ಲ,
  
 ಚುನಾವಣೆಯ ಸಮಯದಲ್ಲಿ ಮಾತ್ರ ರಾಜಕೀಯದ ಬಗ್ಗೆ ಮಾತಾಡುತ್ತಿದ್ದ ಸಮಾಜವನ್ನು 24 ಗಟೆಯೂ ರಾಜಕೀಯ ಚರ್ಚಾಪಟುವಾಗಿ ಪರಿವರ್ತಿಸಿದ್ದೂ ಇವೇ ಜಾಲತಾಣ. ಸದ್ಯ ಅತಿದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದೂ ಇದುವೇ. ರಾಜಕೀಯವೆಂಬುದು ಚರ್ಚಿಸಿದಷ್ಟೂ ಮುಗಿಯದ ಗೋದಾಮು. ಧಾರ್ಮಿಕ ಕ್ಷೇತ್ರಗಳಿಗಿಂತ ಹೆಚ್ಚಿನ ಅಂಧ ಭಕ್ತರನ್ನು ಮತ್ತು ಅನು ಯಾಯಿಗಳನ್ನು ದಕ್ಕಿಸಿಕೊಂಡಿರುವ ಕ್ಷೇತ್ರ ಇದು. ಅಲ್ಲದೇ, ರಾಜಕೀಯ ಕ್ಷೇತ್ರದಲ್ಲಿ ಜಿಂಕೆ, ದನ, ಮೇಕೆ ಇತ್ಯಾದಿ ಸಾಧು ಪ್ರಾಣಿಗಳಿಂದ ಹಿಡಿದು ಹುಲಿ, ಸಿಂಹ, ತೋಳ, ನರಿ ಇತ್ಯಾದಿ ಅಸಾಧು ಪ್ರಾಣಿಗಳೂ ಇವೆ. ಅವು ನಿಮಿಷಕ್ಕೊಂದರಂತೆ ಸುದ್ದಿ ಗಳನ್ನು ಸೃಷ್ಟಿಸುತ್ತಲೂ ಇವೆ. ಈ ರಾಜಕೀಯ ಕ್ಷೇತ್ರ ಹೇಗೆಯೋ ಅದರ ಭಕ್ತರಲ್ಲಿ ಹೆಚ್ಚಿನವರೂ ಹಾಗೆಯೇ. ಸಾಮಾಜಿಕ ಜಾಲತಾಣಗಳ ಆವಿಷ್ಕಾರಕ್ಕಿಂತ ಮುಂಚೆ ರಾಜಕೀಯ ಪಕ್ಪಗಳಿಗೆ ಈ ಬಗೆಯ ಭಕ್ತರು ಇದ್ದಿದ್ದರಾದರೂ ಅವರ ಅಭಿಪ್ರಾಯಗಳು ಒಂದು ಸೀಮಿತ ವಲಯಕ್ಕೆ ಸೀಮಿತವಾಗಿದ್ದುವು. ಆದರೆ, ಜಾಲ ತಾಣಗಳು ಈ ಸ್ಥಿತಿಯನ್ನು ದೊಡ್ಡಮಟ್ಟದಲ್ಲಿ ಬದಲಿಸಿದುವು. ಅಸಂಖ್ಯ ಜನರು ನಿರ್ದಿಷ್ಟ ಪಕ್ಪ, ವಿಚಾರ, ಧೋರಣೆಗಳ ಪರ-ವಿರುದ್ಧ ನಿಂತು ಅಭಿಪ್ರಾಯ ಮಂಡಿಸುವ ವಾತಾವರಣಕ್ಕೆ ವೇದಿಕೆ ಒದಗಿಸಿದುವು. ಸದ್ಯ ಫೇಸ್‍ಬುಕ್, ಟ್ವಿಟರ್, ವಾಟ್ಸ್‍ಆ್ಯಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಯಾವುದೇ ಬರಹಗಳನ್ನೊಮ್ಮೆ ಗಂಭೀರವಾಗಿ ಪರಿಶೀಲಿಸಿ ನೋಡಿ. 95% ಬರಹಗಳೂ ನೇರ ವಾಗಿಯೋ ಪರೋಕ್ಪವಾಗಿಯೋ ರಾಜಕೀಯಕ್ಕೆ ಸಂಬಂಧಿಸಿದವೇ ಆಗಿರುತ್ತದೆ. ಪ್ರಕರಣ ಯಾವುದೇ ಇರಲಿ, ಅದಕ್ಕೊಂದು ರಾಜಕೀಯ ಆಯಾಮವನ್ನು ಕಲ್ಪಿಸಿ ಚರ್ಚೆ ನಡೆಸುವುದು ಸಹಜ ನೀತಿಯಾಗಿ ಬಿಟ್ಟಿದೆ. ಯಾವಾಗ ರಾಜಕೀಯ ಚರ್ಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರೀಯ ವಿಷಯವಾಗಿ ಪರಿಗಣಿತವಾಯಿತೋ ಬಳಕೆದಾರರ ಭಾಷೆಗಳೂ ಬದಲಾದುವು. ಬಳಸಲು ಸಂಕೋಚಪಡುತ್ತಿದ್ದ ಪದಗಳು ಎಗ್ಗಿಲ್ಲದೇ ಮತ್ತು ಮಡಿವಂತಿಕೆಯಿಲ್ಲದೇ ಬಳಕೆಗೆ ಬಂದುವು. ಅನಿಸಿದ್ದನ್ನು ಬರೆಯುವುದು ಅನ್ನುವುದೇ ಜಾಲತಾಣದ ನಿಯಮವಾಗಿಬಿಟ್ಟಿತು.
  
  ನಿಜವಾಗಿ, ಆರೋಗ್ಯಕರ ಸಂವಾದಕ್ಕೆ ಪಾಂಡಿತ್ಯ ಮತ್ತು ಬರಹ ಸಾಮರ್ಥ್ಯವಷ್ಟೇ ಮುಖ್ಯವಲ್ಲ. ಮುಖಾಮುಖಿ ಪರಿಚಯವೂ ಬಹಳ ಮುಖ್ಯ. ಸಾಮಾಜಿಕ ಜಾಲತಾಣಗಳ ಬಹುಮುಖ್ಯ ಕೊರತೆಗಳಲ್ಲಿ ಇದು ಒಂದು. ಇದೊಂದು ಬಗೆಯ ವೈಫಲ್ಯ. ಗಾಢ ವೈಫಲ್ಯ. ನನ್ನ ಲೇಖನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವ ವ್ಯಕ್ತಿಗೆ ನಾನು ಯಾರು, ಹಿನ್ನೆಲೆ ಏನು, ವಯಸ್ಸು ಎಷ್ಟು. ವಿಚಾರಧಾರೆ ಯಾವುದು, ಕೆಲಸ ಏನು.. ಇತ್ಯಾದಿ ಇತ್ಯಾದಿಗಳ ಬಗ್ಗೆ ಸ್ಪಷ್ಟ ಅರಿವು ಇರುವುದಿಲ್ಲ. ಫೇಸ್‍ಬುಕ್‍ನಲ್ಲಿ ಇದನ್ನು ತಿಳಿದುಕೊಳ್ಳುವ ಅವಕಾಶ ಇದೆಯಾದರೂ ಅಲ್ಲಿರುವುದು ಎಷ್ಟು ನಿಜ ಅನ್ನುವ ಪ್ರಶ್ನೆಯೂ ಇದೆ. ವಾಟ್ಸ್‍ಆ್ಯಪ್‍ನಲ್ಲಂತೂ ಇದಕ್ಕೆ ಅವಕಾಶವೇ ಇಲ್ಲ. ಹೀಗೆ ಎಲ್ಲೋ  ಕುಳಿತ ವ್ಯಕ್ತಿಯೋರ್ವ ಇನ್ನೆಲ್ಲೋ  ಕುಳಿತ ವ್ಯಕ್ತಿಯೊಂದಿಗೆ ಸ್ಪಷ್ಟತೆಯ ಕೊರತೆಯೊಂದಿಗೆ ಸಂವಾದಕ್ಕಿಳಿಯುತ್ತಾನೆ. ಪ್ರತಿಕ್ರಿಯೆಗಳ ವಿನಿಮಯ ನಡೆಯ ತೊಡಗುತ್ತದೆ. ಈ ಸಂವಾದಕ್ಕೆ ಇನ್ನೆಲ್ಲೋ ಕುಳಿತ ಇನ್ನೆಷ್ಟೋ ಮಂದಿ ಸೇರಿಕೊಳ್ಳುತ್ತಾರೆ. ಈ ಎಲ್ಲರ ಹಿನ್ನೆಲೆ, ಓದು, ವಿಚಾರಧಾರೆ, ಹವ್ಯಾಸ, ವಯಸ್ಸುಗಳನ್ನೆಲ್ಲಾ  ಸ್ಪಷ್ಟ ಪಡಿಸಿಕೊಳ್ಳುವ ವ್ಯವಧಾನ ಹೆಚ್ಚಿನವರಲ್ಲಿ ಇರುವುದೂ ಇಲ್ಲ. ಒಂದು ಪ್ರತಿಕ್ರಿಯೆಗೆ ಇನ್ನೊಂದು ಪ್ರತಿಕ್ರಿಯೆ. ಆರಂಭದ ಪ್ರತಿಕ್ರಿಯೆಯ ಭಾಷೆಯು ಬಳಿಕದ ಪ್ರತಿಕ್ರಿಯೆಯಲ್ಲಿ ಬದಲಾಗುತ್ತದೆ. ಮುಂದಕ್ಕೆ ಭಾಷೆ ಹಳಿ ತಪ್ಪುತ್ತದೆ. ಬೈಗುಳವೇ ಪ್ರತಿಕ್ರಿಯೆಯಾಗುತ್ತದೆ. ಕೊನೆಗೆ ಯಾವ ಬರಹದ ಮೇಲೆ ಈ ಚರ್ಚೆ ಆರಂಭವಾಗಿತ್ತೋ ಆ ಮೂಲ ಬರಹವೇ ನಗಣ್ಯವಾಗಿ ಇನ್ನಾವುದೋ ವಿಷಯವು ಚರ್ಚೆಯ ಕೇಂದ್ರಬಿಂದುವಾಗಿ ಪರಿವರ್ತಿತವಾಗುತ್ತದೆ. ಇಲ್ಲಿ ಕಲಿಯುವುದಕ್ಕಾಗಿ ಚರ್ಚಿಸುವವರು ತೀರಾ ತೀರಾ ಕಡಿಮೆ. ಎಲ್ಲರೂ ಕಲಿಸುವವರೇ. ಎಲ್ಲರೂ ಸರಿಯೇ.

    ನಿಜವಾಗಿ, ಇನ್ನೊಬ್ಬರೂ ಸರಿಯಾಗಿರಬಹುದು ಅನ್ನುವ ಭಾವಕ್ಕೆ ಜಾಗ ಇರುವಲ್ಲಿ ಮಾತ್ರ ಆರೋಗ್ಯಕರ ಸಂವಾದ ಸಾಧ್ಯ. ಸಾಮಾಜಿಕ ಜಾಲತಾಣಗಳು ಈ ಜಾಗವನ್ನೇ ಬಹುತೇಕ ಇವತ್ತು ಮುಚ್ಚಿಬಿಟ್ಟಿವೆ. ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದಲೇ ಅಳೆದು ಚರ್ಚಿಸುವ ಅನಾರೋಗ್ಯಕರ ಸ್ಥಿತಿಗೆ ತಲುಪಿಬಿಟ್ಟಿದೆ. ಇಲ್ಲಿ ಎಲ್ಲರೂ ಫ್ರೆಂಡ್‍ಗಳೇ. ಫೇಸ್‍ಬುಕ್ ಫ್ರೆಂಡ್. ವಾಟ್ಸ್‍ಆ್ಯಪ್  ಗ್ರೂಪ್ ಮೆಂಬರ್, ಟ್ವಿಟರ್ ಫಾಲೋವರ್. ಆದರೆ ಮೌಖಿಕ ಪರಿಚಯ ಹೆಚ್ಚಿನವರಿಗೆ ಇರುವುದೇ ಇಲ್ಲ. ಫೇಸ್‍ಬುಕ್‍ನಲ್ಲಿ ಐದು ಸಾವಿರ ಗೆಳೆಯರನ್ನು ಹೊಂದಿರುವ ವ್ಯಕ್ತಿ, ಇವರಲ್ಲಿ ಮುಖತಃ 50 ಮಂದಿಯನ್ನು ಭೇಟಿಯಾಗಿರುವುದೂ ಇಲ್ಲ. ಗೆಳೆತನದಲ್ಲಿ ಬಹು ಮುಖ್ಯ ಪಾತ್ರ ವಹಿಸುವುದು ಮೌಖಿಕ ಪರಿಚಯ. ಸಾಮಾಜಿಕ ಜಾಲತಾಣಗಳಿಗಿಂತ ಹಿಂದೆ, ಗೆಳೆಯರೆಂದರೆ ಮುಖತಃ ಭೇಟಿಯಾದವರೆಂದೇ ಅರ್ಥ. ಭೇಟಿಯು ಅವರನ್ನು ಗೆಳೆಯರಾಗಿಸುತ್ತದೆ. ವಿಚಾರಗಳ ವಿನಿಮಯಕ್ಕೆ ಅವಕಾಶ ಒದಗಿಸಿಕೊಡುತ್ತದೆ. ದೂರವಾಣಿ ಸಂಖ್ಯೆಗಳ ವಿನಿಮಯ ನಡೆಯುತ್ತದೆ. ಮೊದಲು ಮೌಖಿಕ ಭೇಟಿ. ಆ ಬಳಿಕ ಗೆಳೆತನ. ಹೀಗೆ ಬೆಳೆದ ಗೆಳೆತನದಲ್ಲಿ ಅಪರಿಚಿತತೆ ಇರುವುದಿಲ್ಲ. ಗೆಳೆಯನ ವಿಚಾರದ ಬಗ್ಗೆ ಇನ್ನೊಬ್ಬರಲ್ಲಿ ಮಾತನಾಡುವಾಗ ಗೆಳೆಯನ ಮುಖ ಮತ್ತು ಆತನ ಜೊತೆ ಈ ಹಿಂದೆ ಆದ ಭೇಟಿಯ ನೆನಪುಗಳು ಕಣ್ಣೆದುರು ಬರುತ್ತದೆ. ಆ ಸಂದರ್ಭದಲ್ಲಾದ ಸಂವಾದ ಮತ್ತು ಕ್ರಿಯೆ-ಪ್ರತಿಕ್ರಿಯೆಗಳು ನೆನಪಾಗುತ್ತದೆ. ಇವು ಗೆಳೆಯನ ಬಗ್ಗೆ ಆಡುವ ಮಾತಿನ ಮೇಲೆ ನಿಯಂತ್ರಣವನ್ನು ಹೇರುತ್ತದೆ. ಆದರೆ ಇಂದಿನ ಸ್ಥಿತಿ ಏನೆಂದರೆ,
  
  ಮೊದಲು ಗೆಳೆತನ. ಆ ಬಳಿಕ ಮೌಖಿಕ ಭೇಟಿ. ಅಲ್ಲದೇ, ಈ ಭೇಟಿ ಕೈಗೂಡುವ ಸಾಧ್ಯತೆ ಬಹಳ ಕಡಿಮೆ. ಜಾಲತಾಣಗಳ ಮಿತಿ ಇದು. ಅಲ್ಲಿ ನಡೆಯುವ ಚರ್ಚೆಗಳ ಮಿತಿಯೂ ಹೌದು. ಮುಖತಃ ಭೇಟಿಯ ಮೂಲಕ ಉಂಟಾಗುವ ಗೆಳೆತನಕ್ಕೆ ಹೋಲಿಸಿದರೆ, ಸಾಮಾಜಿಕ ಜಾಲ ತಾಣಗಳ ಮೂಲಕ ಉಂಟಾಗುವ ಗೆಳೆತನಕ್ಕೆ ಅನೇಕ ದೌರ್ಬಲ್ಯಗಳಿವೆ. ಈ ದೌರ್ಬಲ್ಯಗಳ ಫಲಿತಾಂಶವೇ ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವುದು. ಅಲ್ಲಿಯ ಭಾಷೆ, ಅಭಿಪ್ರಾಯ ಮಂಡನೆ, ಅಸಹನೆ, ಅಂಧಾಭಿಮಾನ, ಕ್ರೌರ್ಯ ಪ್ರಚೋದನೆ.. ಎಲ್ಲವೂ ಈ ಗೆಳೆತನದ ಪರಿಮಿತಿಯನ್ನು ಹೇಳುತ್ತದೆ. ಮುಖತಃ ಭೇಟಿಯಾಗಿ ಗೆಳೆತನ ಕುದುರಿಸಿಕೊಂಡ ಯಾವ ಗೆಳೆಯನೂ ವೈಚಾರಿಕ ಭಿನ್ನಮತಕ್ಕಾಗಿ ತನ್ನ ಗೆಳೆಯನನ್ನು ಜಾಲತಾಣಗಳ ಭಾಷೆಯಲ್ಲಿ ನಿಂದಿಸಲಾರ. ಬೈಯಲಾರ. ಅಪಹಾಸ್ಯ ಮಾಡಲಾರ. ಗೆಳೆತನ ಕಡಿದುಕೊಳ್ಳಲಾರ. ಅಂದಹಾಗೆ,
  
  ಫೇಸ್‍ಬುಕ್ ಗೆಳೆಯನನ್ನು ಭೇಟಿಯಾದ ಬಳಿಕ ಮನನ ಮಾಡಿಕೊಂಡ ಪಾಠ ಇದು.


ಲಿಂಚಿಂಗ್ ಮೂಲ ಹುಡುಕುತ್ತಾ ಹೋದರೆ ತಲುಪುವುದು ಟಿವಿ ಸ್ಟುಡಿಯೋದೊಳಗೆ!

   
 
        ಗುಂಪು ಹತ್ಯೆ(Mob lynching)ಯ ಮನೋಸ್ಥಿತಿ ಇರುವುದು ಬರೇ ಬೀದಿಯಲ್ಲಿ ಮಾತ್ರವೇ? ಚಪ್ಪಲಿ ಧರಿಸಿದ, ಮಾಸಿದ ಶರ್ಟು, ಪ್ಯಾಂಟು ಅಥವಾ ಟೀ ಶರ್ಟು ಧರಿಸಿದ ಸಾಮಾನ್ಯ ಜನರಿಗೆ ಮಾತ್ರ ಈ ಮನೋಸ್ಥಿತಿಯನ್ನು ಸೀಮಿತಗೊಳಿಸಿ ನೋಡುವುದು ಎಲ್ಲಿಯವರೆಗೆ ಸರಿ? ಈ ಮನೋಸ್ಥಿತಿಯನ್ನು ಉತ್ಪಾದಿಸಿದ ಲ್ಯಾಬ್ ಯಾವುದು? ಅದು ಎಲ್ಲಿದೆ? ನಮ್ಮ ಟಿವಿ ಸ್ಟುಡಿಯೋಗಳಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ಸುದ್ದಿ-ವಿವರಣೆಗಳ ಸ್ವರೂಪ ಹೇಗಿದೆ? ಅವು ಗುಂಪುಹತ್ಯೆ ಮನಸ್ಥಿತಿಗಿಂತ ಭಿನ್ನವಾಗಿದೆಯೇ? ನಿರೂಪಕನ ದೇಹ ಭಾಷೆ ಮತ್ತು ಚರ್ಚಾಪಟುಗಳ ಆವೇಶದಲ್ಲಿ ನಿಜಕ್ಕೂ ವೀಕ್ಷಕರಿಗೆ ತಲುಪುವ ಸಂದೇಶ ಯಾವ ಬಗೆಯದು? ಕಳೆದ ಐದಾರು ವರ್ಷಗಳಿಂದ ಹೆಚ್ಚಿನ ಟಿವಿ ಚಾನೆಲ್‍ಗಳು ವಾರಕ್ಕೊಮ್ಮೆಯಾದರೂ ಇಸ್ಲಾಮ್, ಮುಸ್ಲಿಮ್ ಅಥವಾ ಪಾಕಿಸ್ತಾನದ ಸುತ್ತ ಚರ್ಚೆಯನ್ನು ಅಯೋಜಿಸುತ್ತಿರುವುದರ ಉದ್ದೇಶ ಏನು? ಇದು ಸಹಜ ಬೆಳವಣಿಗೆಯೇ? ದಿಢೀರ್ ಆಗಿ ಇಂಥದ್ದೊಂದು ಬೆಳವಣಿಗೆ ಹುಟ್ಟಿಕೊಳ್ಳಲು ಕಾರಣವೇನು? ಇಸ್ಲಾಮ್ ಮತ್ತು ಮುಸ್ಲಿಮರ ಸುತ್ತ ನಡೆಯುವ ಚರ್ಚೆಯನ್ನು ನೀವು ಗಮನಿಸಿದ್ದೀರಾ? ತ್ರಿವಳಿ ತಲಾಕ್, ಬಹು ಪತ್ನಿತ್ವ, ಜಿಹಾದ್, ಜನಸಂಖ್ಯೆ, ಪಾಕಿಸ್ತಾನ, ಗೋಹತ್ಯೆ, ಗೋ ಸಾಗಾಟ, ಭಯೋತ್ಪಾದನೆ, ಮಹಿಳಾ ಸಮಾನತೆ, ನಮಾಝ್, ಅದಾನ್, ಮದ್ರಸ, ಗಡ್ಡ, ಬುರ್ಖಾ, ಸ್ಕಾರ್ಫ್ ಮತ್ತಿತರ ಹಲವು ವಿಷಯಗಳ ಮೇಲೆ ಟಿವಿ ಚಾನೆಲ್ ಗಳು ಹಮ್ಮಿಕೊಳ್ಳುವ ಚರ್ಚೆಯು ಹೇಗಿರು ತ್ತದೆ? ಚರ್ಚಾಪಟುಗಳು ಯಾರಿರುತ್ತಾರೆ? ಚರ್ಚೆ ಗಳಲ್ಲಿ ಭಾಗವಹಿಸುವ 6 ಮಂದಿಯಲ್ಲಿ ಒಬ್ಬ ವೌಲವಿ. ಉಳಿದ 5 ಮಂದಿಯಲ್ಲಿ ನಾಲ್ಕು ಮಂದಿ ಮೌಲವಿಯನ್ನು ವಿರೋಧಿಸುವವರು. ನಿರೂಪಕನೂ ಅವರದೇ ಗುಂಪು. ಉಳಿದ ಓರ್ವ ತಟಸ್ಥ. ಇಂಥ ಸ್ಥಿತಿಯಲ್ಲಿ, ಒಂದೋ ಮೌಲವಿ ಸೋಲಬೇಕು ಅಥವಾ ಅರಚಬೇಕು ಅಥವಾ ತನ್ನ ಮೇಲಾಗುವ ನಿರಂತರ ಶಬ್ದ ಮಾಲಿನ್ಯದಿಂದ ಕುದಿದು ಎದ್ದು ಹೋಗಬೇಕು ಇಲ್ಲವೇ ಇವರ ವಿರುದ್ಧ ಕೈ ಎತ್ತಬೇಕು. ಸದ್ಯ ನಡೆಯುತ್ತಿರುವ ಟಿವಿ ಚರ್ಚೆಗಳ ಸ್ವರೂಪ ಇದು. ಹೀಗಿರುತ್ತಾ, ಗುಂಪು ಹತ್ಯೆಯಲ್ಲಿ ತೊಡಗಿರುವ ಜನಸಮೂಹವನ್ನು ಒಂದು ನಿರ್ವಾತ ಸ್ಥಿತಿಯಲ್ಲಿ ಹುಟ್ಟಿಕೊಂಡ ಅನಾಗರಿಕ ಗುಂಪು ಎಂದು ಅಂದುಕೊಳ್ಳುವುದು ಎಷ್ಟು ಸರಿ? ಈ ಗುಂಪಿನ ಆಕ್ರೋಶದ ಹಿಂದೆ ಕಳೆದ ಐದಾರು ವರ್ಷಗಳಿಂದ ಟಿವಿ ಚಾನೆಲ್‍ಗಳು ಆಯೋಜಿಸುತ್ತಿರುವ ಚರ್ಚೆಗೆ ಪಾತ್ರವಿಲ್ಲವೇ? ಬಿತ್ತರಿಸಿದ ಸುದ್ದಿಯ ಬೆಂಬಲವಿಲ್ಲವೇ? ಮೌಲವಿಯನ್ನು ಸ್ಟುಡಿಯೋ ದೊಳಗೆ ಕೂರಿಸಿ ನಿರೂಪಕನೂ ಸೇರಿದಂತೆ ಎಲ್ಲ ಚರ್ಚಾಪಟುಗಳು ನಿರಂತರ ಮಾತಿನ ಬಾಣ ಎಸೆದು, ಬಾಯಿ ಮುಚ್ಚಿಸಿ ಅಪರಾಧಿಯಂತೆ ಕೊಠಡಿಯಿಂದ ಹೊರ ಕಳುಹಿಸಿದುದರ ಫಲಿತಾಂಶವೇ ಇವತ್ತು ಬೀದಿಯಲ್ಲಿ ಗುಂಪು ಹತ್ಯೆಯ ಮೂಲಕ ವ್ಯಕ್ತವಾಗುತ್ತಿದೆ ಎಂದು ಯಾಕೆ ಹೇಳಬಾರದು? ಟಿವಿ ಎಂಬುದು ಸಾರ್ವಜನಿಕವಾಗಿ ಅಭಿಪ್ರಾಯವನ್ನು ರೂಪಿಸುವ ಕೇಂದ್ರ. ಅಲ್ಲಿ ನಡೆಯುವ ಚರ್ಚೆ, ವರದಿ, ಸುದ್ದಿ ಮತ್ತು ನಿರೂಪಣೆಯ ಧಾಟಿ ವೀಕ್ಷಕರ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಈ ಪರಿಣಾಮವು ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವೂ ಆಗಿರುತ್ತದೆ. ಮೌಲವಿ ಅಥವಾ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಯ ಮೇಲೆ ಉಳಿದ ಚರ್ಚಾಪಟುಗಳೆಲ್ಲ ವಾಗ್ದಾಳಿ ಮಾಡುವುದನ್ನು ಆ ನಾಲ್ವರ ಗೆಲುವಾಗಿಯೇ ಸಾಮಾನ್ಯ ವೀಕ್ಷಕನೊಬ್ಬ ಪರಿಗಣಿಸಬಲ್ಲ. ನಿರೂಪಕನೂ ಕೊನೆಗೆ ಆ ನಾಲ್ವರ ಪರವೇ ಅಭಿಪ್ರಾಯ ಮಂಡಿಸಿ ಚರ್ಚೆಗೆ ವಿರಾಮ ಹಾಕುವಾಗ ಈ ನಂಬಿಕೆಗೆ ಇನ್ನಷ್ಟು ಬಲ ಬರುತ್ತದೆ. ಇದು ನಿರಂತರವಾಗಿ ನಡೆಯ ತೊಡಗಿದಾಗ, ಅದು ಸಮಾಜದಲ್ಲಿ ಒಂದು ಬಗೆಯ ಸ್ಟೀರಿಯೋಟೈಡ್ಡ್ ಅಭಿಪ್ರಾಯವನ್ನು ರೂಪಿಸಿ ಬಿಡುವುದಕ್ಕೆ ಅವಕಾಶ ಇದೆ. ಮುಸ್ಲಿಮರೆಂದರೆ ಹೀಗೆಯೇ; ಅವರು ಅತ್ಯಾಚಾರಿಗಳು, ಗೋ ಕಳ್ಳರು, ನಾಲ್ಕು-ನಾಲ್ಕು ಮದುವೆಯಾಗು ವವರು, ನಿರಂತರವಾಗಿ ಮಕ್ಕಳನ್ನು ಹುಟ್ಟಿಸಿ ಜನಸಂಖ್ಯೆ ಹೆಚ್ಚಿಸುವವರು, ಒಂದೇ ಉಸಿರಿಗೆ ತಲಾಕ್ ಹೇಳಿ ಹೆಣ್ಣನ್ನು ಬೀದಿಗಟ್ಟು ವವರು, ಅವರ ನಿಷ್ಠೆ ಪಾಕಿಸ್ತಾನಕ್ಕೆ, ಪಾಕಿಸ್ತಾನ ಭಾರತದ ಶತ್ರು, ಅವರು ಹಿಂದೂಗಳ ವಿರೋಧಿ, ಅವರ ಕೆಲಸ ಗೋ ಹತ್ಯೆ ಮಾಡುವುದು, ಜನಸಂಖ್ಯೆ ಹೆಚ್ಚಿಸುವ ಮೂಲಕ ಹಿಂದೂಗಳನ್ನು ಅಲ್ಪಸಂಖ್ಯಾತರಾಗಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ, ಅವರು ಅನ್ಯ, ಅವರ ಧರ್ಮಗ್ರಂಥ ಅನ್ಯ, ಅವರ ಉಡುಪು ಅನ್ಯ... ಹೀಗೆ ಮುಸ್ಲಿಮರ ಬಗ್ಗೆ ಅಸಹ್ಯ ಪಡುವ ವಾತಾವರಣವೊಂದನ್ನು ಅದು ನಿರ್ಮಿಸಿ ಬಿಡಬಲ್ಲದು. ಅಲ್ಲದೇ, ಬಲಪಂಥೀಯ ರಾಜಕಾರಣಿಗಳು ಕಳೆದ ಎರಡು ದಶಕಗಳಲ್ಲಿ ಆಡಿದ ಮಾತುಗಳನ್ನು ಇದರ ಜೊತೆ ಸೇರಿಸಿ ನೋಡಿದರೆ, ಗುಂಪು ಹತ್ಯೆಗೆ ಸ್ಪಷ್ಟವಾದ ಚೌಕಟ್ಟೊಂದು ಲಭ್ಯವಾಗುತ್ತದೆ. ಉದಾಹರಣೆಗೆ,
 
  `ನ್ಯೂಸ್ 24' ಎಂಬ ಹಿಂದಿ ಚಾನೆಲ್ ಜುಲೈ ಎರಡನೇ ವಾರದಲ್ಲಿ 45 ನಿಮಿಷಗಳ ಚರ್ಚೆಯೊಂದನ್ನು ಏರ್ಪಡಿಸಿತ್ತು. `2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆದ್ದು ಮೋದಿ ಮತ್ತೆ ಪ್ರಧಾನಿಯಾದರೆ, ಭಾರತವು ಹಿಂದೂ ಪಾಕಿಸ್ತಾನವಾಗಲಿದೆ’ ಎಂಬ ಶಶಿ ತರೂರ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು. ಚರ್ಚೆಯ ವಿಷಯ: `ಯಾವುದು ಅಗತ್ಯ: ಹಿಂದೂ ರಾಷ್ಟ್ರವೋ ಸೆಕ್ಯುಲರ್ ಭಾರತವೋ?" ಎಂಬುದು. ಇದರಲ್ಲಿ ಭಾಗವಹಿಸಿದವರು,
1. ಸಂಬಿತ್ ಪಾತ್ರ - ಬಿಜೆಪಿ ವಕ್ತಾರ
2. ಪ್ರೊ. ಕಪಿಲ್ ಕುಮಾರ್ - ಸ್ವತಂತ್ರ ಚರ್ಚಾಪಟು
3. ಪ್ರೇಮ್‍ಚಂದ್ ಮಿಶ್ರ - ಕಾಂಗ್ರೆಸ್ ಪ್ರತಿನಿಧಿ
4. ಶಮ್ಸುಲ್ ಇಸ್ಲಾಮ್ - ದೆಹಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್.
  
 ನೇರ ಪ್ರಸಾರದ ಈ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಈ ಚರ್ಚಾ ವಿಷಯವನ್ನು ಬದಲಿಸಬೇಕೆಂದು ಪ್ರೊ. ಕಪಿಲ್ ಕುಮಾರ್ ಆಗ್ರಹಿಸಿದರು. ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್, ನಿಕಾಹ್ ಹಲಾಲ ಮತ್ತು 5 ಮದುವೆಯ ಬಗ್ಗೆ ಚರ್ಚೆ ನಡೆಯಬೇಕು ಎಂದು ದೊಡ್ಡ ದನಿಯಲ್ಲಿ ಒತ್ತಾಯಿಸಿದರು. ನಿಜವಾಗಿ, ಈ ಮೂರೂ ವಿಷಯಗಳು ಇಸ್ಲಾಮಿಗೆ ಅನ್ಯವಾದುದು. ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯನ್ನು? ಈ ಮೂರಕ್ಕೂ ಎಲ್ಲೂ ಆಧಾರವಿಲ್ಲ. ಆದರೆ ಪ್ರೊ. ಕಪಿಲ್ ಕುಮಾರ್ ಅವರ ವಾದ ಮತ್ತು ದೇಹ ಭಾಷೆ ಎಷ್ಟು ಕೆಟ್ಟದಾಗಿತ್ತೆಂದರೆ, ಇಡೀ ಇಸ್ಲಾಮ್ ಈ ಮೂರರಿಂದ  ತುಂಬಿ ಹೋಗಿದೆ ಎಂದೇ ನಂಬುವಂತಿತ್ತು. ಮುಸ್ಲಿಮರೆಲ್ಲ ಈ ಮೂರನ್ನು ಪರಮ ಪವಿತ್ರ ಕಡ್ಡಾಯ ನಿಯಮವಾಗಿ ತಮ್ಮ ಮೇಲೆ ವಿಧಿಸಿಕೊಂಡಿದ್ದಾರೆ ಎಂದು ಅಂದುಕೊಳ್ಳುವ ರೀತಿಯಲ್ಲಿ ಅವರು ವಾದಿಸುತ್ತಿದ್ದರು. ಅದೇವೇಳೆ, `ಸಂಬಿತ್ ಪಾತ್ರ ಅವರ ಜೊತೆಗೂಡಿದರು. ಹಿಂದೂ ಮತ್ತು ಹಿಂದೂಸ್ತಾನ್ ಎರಡೂ ಸಮಾನಾಂತರ ಪರ್ಯಾಯ ಪದಗಳು' ಎಂದವರು ವಾದಿಸಿದರು. ಅದರ ಮೇಲೆ ಚರ್ಚೆಯ ಅಗತ್ಯವಿಲ್ಲ ಎಂಬ ಧಾಟಿಯಲ್ಲಿ ಮಾತಾಡಿದರು. ಮುಸ್ಲಿಮರಿಂದ ಈ ದೇಶದ ಹಿಂದುಗಳು ಈ ಹಿಂದೆ ಅನುಭವಿಸಿದ ಹಿಂಸೆ-ಅನ್ಯಾಯಗಳತ್ತ ಅವರ ಮಾತು ಹೊರಳಿತು. ತಮಾಷೆ ಏನೆಂದರೆ, ಚರ್ಚೆ ನಡೆಯಬೇಕಾಗಿದ್ದುದು ಶಶಿ ತರೂರ್ ಹೇಳಿಕೆಯ ಮೇಲೆ. ಆದರೆ, ನಡೆಯುತ್ತಿರುವುದು ಇಸ್ಲಾಮ್ ಮತ್ತು ಮುಸ್ಲಿಮರ ಸುತ್ತ. ಪ್ರೊ. ಶಮ್ಸುಲ್ ಇಸ್ಲಾಮ್ ಅವರು ಈ ಬಗ್ಗೆ ತಕರಾರು ಎತ್ತಿದರು. `ಇಲ್ಲೇನು ನಡೆಯುತ್ತಿದೆ' ಎಂದು ನಿರೂಪಕರನ್ನು ಪ್ರಶ್ನಿಸಿದರು. ಆದರೆ ನಿರೂಪಕನಿಂದ ಅವರಿಬ್ಬರ ಮಾತಿನ ಓಘವನ್ನು ತಡೆಯುವ ಪ್ರಬಲ ಪ್ರಯತ್ನವೇನೂ ನಡೆಯಲಿಲ್ಲ. ಮುಸ್ಲಿಮರು ಅದೆಷ್ಟು ಕ್ರೂರಿಗಳು ಅನ್ನುವುದನ್ನು ಪೈಪೋಟಿಯಿಂದ ಅವರಿಬ್ಬರೂ ಹೇಳುತ್ತಲೇ ಇದ್ದರು. ಇದು ಶಮ್ಸುಲ್ ಇಸ್ಲಾಮ್‍ರನ್ನು ಕೆರಳಿಸಿತು. ಭಾರತೀಯ ನಾಗರಿಕತೆಯ 5 ಸಾವಿರದಷ್ಟು ದೀರ್ಘ ಇತಿಹಾಸದಿಂದ ಕೇವಲ ಮುಸ್ಲಿಮ್ ಅಳ್ವಿಕೆಯ ಇತಿಹಾಸವನ್ನಷ್ಟೇ ಆಯ್ಕೆ ಮಾಡಿ ಯಾಕೆ ಚರ್ಚಿಸುತ್ತೀರಿ ಎಂದವರು ಪ್ರಶ್ನಿಸಿದರಲ್ಲದೇ, ಈ ಸೆಲೆಕ್ಟಿವ್ ವಾದವನ್ನು ಖಂಡಿಸಿದರು. ಒಂದು ವೇಳೆ, ಮುಸ್ಲಿಮ್ ರಾಜರ ಅನ್ಯಾಯಕ್ಕೆ ಭಾರತೀಯ ಮುಸ್ಲಿಮರು ಹೊಣೆಗಾರರೆಂದಾದರೆ, ಸೀತಾ ಮಾತೆಯ ಅಪಹರಣಕ್ಕೆ ಮತ್ತು ದ್ರೌಪದಿಯ ಮಾನಹರಣಕ್ಕೆ ಯಾರನ್ನು ಕಟಕಟೆಯಲ್ಲಿ ನಿಲ್ಲಿಸುತ್ತೀರಿ ಎಂದು ಪ್ರಶ್ನಿಸಿದರು. ಭಾರತದ ದೀರ್ಘ ಇತಿಹಾಸದಲ್ಲಿ ನಡೆದಿರುವ ಹಿಂಸೆ, ಅನ್ಯಾಯ, ಅತ್ಯಾಚಾರ, ಹತ್ಯೆ, ಲೂಟಿ, ಕ್ರೌರ್ಯಗಳಾವುದನ್ನೂ ಪ್ರಸ್ತಾಪಿಸದೆ ಮತ್ತು ಅದರ ಹೊಣೆಯನ್ನು ಯಾರ ಮೇಲೂ ಹೊರಿಸದೆ  ಬರೇ ಮುಸ್ಲಿಮ್ ಆಳ್ವಿಕೆಯನ್ನು ಮಾತ್ರ ಪ್ರಸ್ತಾಪಿಸಿ ಇಂದಿನ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸುವ ಪ್ರಯತ್ನ ತಪ್ಪು ಎಂದು ವಾದಿಸಿದರು. ಇದರಿಂದಾಗಿ ಪ್ರೊ. ಕಪಿಲ್ ಕುಮಾರ್ ಮತ್ತು ಸಂಬಿತ್ ಪಾತ್ರ ಅವರ ಧ್ವನಿಯ ಮಟ್ಟ ಏರಿತು. ಆವೇಶ ಹೆಚ್ಚಾಯಿತು. ಪ್ರೊ. ಶಮ್ಸುಲ್ ಇಸ್ಲಾಮ್‍ರನ್ನು ಅತ್ಯಾಚಾರಿ, ಐಸಿಸ್ ಏಜೆಂಟ್, ಪಾಕಿಸ್ತಾನಿ ಬೆಂಬಲಿಗ ಮತ್ತು ಕಾಂಗ್ರೆಸಿಗ ಎಂದು ಜರೆದರು. ತ್ರಿವಳಿ ತಲಾಕ್, ನಿಕಾಹ್ ಹಲಾಲ ಮತ್ತು 5 ಮದುವೆಯ ವಿಷಯದಲ್ಲಿ ಶಮ್ಸುಲ್ ಇಸ್ಲಾಮ್‍ರಿಂದ ಪ್ರತಿಕ್ರಿಯೆಯನ್ನು ಪಡೆಯದ ಹೊರತು ತಾನು ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರೊ. ಕಪಿಲ್ ಕುಮಾರ್ ನಿರೂಪಕನಿಗೆ ಬೆದರಿಕೆ ಹಾಕಿ ದರು. ಚರ್ಚೆ ಮುಂದುವರಿಯಿತು. ಕಪಿಲ್ ಕುಮಾರ್ ಮೌನವಾಗಿಯೇ ಇದ್ದರು. ಕೊನೆಗೆ ಚರ್ಚೆಯನ್ನು ಮುಗಿಸುವ ಹಂತಕ್ಕೆ ಬರುವಾಗ, ನಿರೂಪಕ ಇಡೀ ಚರ್ಚೆಯ ಉದ್ದೇಶವನ್ನೇ ಪ್ರಶ್ನಿಸುವ ರೀತಿಯಲ್ಲಿ ವರ್ತಿಸಿದರು. ಚರ್ಚೆಯನ್ನು ಮುಗಿಸಬೇಕಾದುದು `ಯಾವುದು ಅಗತ್ಯ: ಹಿಂದೂ ರಾಷ್ಟ್ರವೋ ಸೆಕ್ಯುಲರ್ ರಾಷ್ಟ್ರವೋ’ ಎಂಬುದರ ಮೇಲೆ. ಆದರೆ, ಆತ ನಿಕಾಹ್ ಹಲಾಲ, ತಿವ್ರಳಿ ತಲಾಕ್‍ಗಳ ವಿಷಯದಲ್ಲಿ ಶಮ್ಸುಲ್ ಇಸ್ಲಾಮ್‍ರನ್ನು ಉದ್ದೇಶಿಸಿ ಹೀಗೆ ಪ್ರಶ್ನಿಸಿದರು-

   `ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಮುಸ್ಲಿಮರು ಯಾಕೆ ನಿರಾಕರಿಸುತ್ತಾರೆ? ಮುಸ್ಲಿಮರು ತ್ರಿವಳಿ ತಲಾಕ್, ನಿಕಾಹ್ ಹಲಾಲ ಮತ್ತು ಬಹುಪತ್ನಿತ್ವವನ್ನು ಒಪ್ಪುವುದು ಮತ್ತು ಒಂದೇ ದೇಶ ಮತ್ತು ಒಂದೇ ಕಾನೂನನ್ನು ತಿರಸ್ಕರಿಸುವುದು ಯಾಕೆ? ಶಮ್ಸುಲ್ ಇಸ್ಲಾಮ್ ಅವರೆ, ಈ ವಿಷಯದಲ್ಲಿ ನಿಮ್ಮಿಂದ ಉತ್ತರ ಪಡೆಯು ವೆನೆಂದು ನಾನು ಕಪಿಲ್ ಕುಮಾರ್ ಗೆ ಮಾತು ಕೊಟ್ಟಿರುವೆ. ಪ್ರತಿಕ್ರಿಯೆ ವ್ಯಕ್ತಪಡಿಸಿ’ ಎಂದರು.

    ಶಮ್ಸುಲ್ ಇಸ್ಲಾಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರೇನೂ ಅದರ ಬೆಂಬಲಿಗರಾಗಿರಲಿಲ್ಲ. ಭಾರತೀಯ ಸಂವಿಧಾನಕ್ಕೆ ಭಾರತೀಯ ಮುಸ್ಲಿಮರು ಬದ್ಧರಾಗಿರುತ್ತಾರೆ ಎಂದರು. ತಕ್ಷಣ ನಿರೂಪಕ ಹೇಳಿದ:
‘ಕಪಿಲ್ ಸರ್, ನೀವು ಖುಷಿ ಪಡಲೇಬೇಕು. ನಾನು ಶಮ್ಸುಲ್ ಇಸ್ಲಾಮ್‍ರಿಂದ ನಿಮ್ಮ ಪ್ರಶ್ನೆಗೆ ಉತ್ತರವನ್ನು ಪಡೆದಿದ್ದೇನೆ.’
ಹೀಗೆ, `ಯಾವುದು ಅಗತ್ಯ: ಹಿಂದೂ ರಾಷ್ಟ್ರವೋ ಸೆಕ್ಯುಲರ್ ಭಾರತವೋ' ಎಂಬ ಚರ್ಚೆ ಮುಕ್ತಾಯಗೊಂಡಿತು ಎಂದು A TV debate with hindu nation with a muslim name ಎಂಬ ಲೇಖನದಲ್ಲಿ ಶಮ್ಸುಲ್ ಇಸ್ಲಾಮ್ ಇತ್ತೀಚೆಗೆ ಬರೆದುಕೊಂಡಿದ್ದರು.
  
 ಅಂದಹಾಗೆ, ಚರ್ಚೆ ಮುಗಿಯಬೇಕಾದ ರೀತಿಯೇ ಇದು? ಯಾವ ವಿಷಯದ ಮೇಲೆ ಚೆರ್ಚ ನಡೆಯಬೇಕೆಂದು ತೀರ್ಮಾನಿಸ ಬೇಕಾದುದು ಟಿವಿ ಸಂಸ್ಥೆಗಳು. ಒಮ್ಮೆ ಈ ವಿಷಯ ನಿರ್ಧಾರವಾದ ಮೇಲೆ ಚರ್ಚಾಪಟುವೊಬ್ಬ ಬಂದು ಅದನ್ನು ಬದಲಿಸುವುದಕ್ಕೆ ಅವಕಾಶವೇ ಇಲ್ಲ. ಅತಿಥಿಗಳನ್ನು ಚರ್ಚೆಗೆ ಆಹ್ವಾನಿಸುವಾಗ ಅವರಲ್ಲಿ ಚರ್ಚಾ ವಿಷಯವನ್ನು ಹೇಳಲಾಗುತ್ತದೆ. ಆತ ಆ ವಿಷಯದ ಮೇಲೆ ಚರ್ಚಿಸುವುದಕ್ಕಾಗಿಯೇ ಸಿದ್ಧತೆಯೊಂದಿಗೆ ಬರುತ್ತಾನೆ. ಇದು ನಿರೂಪಕನಿಗೂ ಗೊತ್ತಿದೆ. ಚರ್ಚೆಯಲ್ಲಿ ಭಾಗವಹಿಸುವವರಿಗೂ ಗೊತ್ತಿದೆ. ಹೀಗಿದ್ದೂ, ಕಪಿಲ್ ಕುಮಾರ್‍ ರ  ಬೇಡಿಕೆಯನ್ನು ನಿರೂಪಕ ಒಪ್ಪಿಕೊಂಡದ್ದು ಹೇಗೆ ಮತ್ತು ಯಾಕೆ? ನಿಗದಿತ ವಿಷಯದ ಮೇಲೆ ಚರ್ಚೆಯನ್ನು ಹಿಡಿದು ನಿಲ್ಲಿಸದೆ ಮತ್ತು ಅದರ ಮೇಲೆಯೇ ಚರ್ಚೆಯನ್ನು ಕೊನೆಗೊಳಿಸದೆ ಕಪಿಲ್ ಕುಮಾರ್ ರನ್ನು ತೃಪ್ತಿಪಡಿಸುವ ಪ್ರಯತ್ನ ನಡೆದದ್ದು ಹೇಗೆ? ಈ ಬಗೆಯ ಬೆಳ ವಣಿಗೆಗಳು ವೀಕ್ಷಕರಲ್ಲಿ ಯಾವ ಅಭಿಪ್ರಾಯವನ್ನು ಹುಟ್ಟು ಹಾಕಿಯಾವು! ಈ ದೇಶದ ಅತೀ ದೊಡ್ಡ ಸಮಸ್ಯೆ ಎಂದರೆ, ಅದು ತ್ರಿವಳಿ ತಲಾಕ್, ನಿಕಾಹ್ ಹಲಾಲ, ಬಹುಪತ್ನಿತ್ವ ಎಂದು ಅವರು ಅಂದುಕೊಳ್ಳಲಾರರೇ? ಹಾಗಂತ ಇದು, ಒಂಟಿ ಪ್ರಕರಣ ಅಲ್ಲ. ಚರ್ಚೆ ಯಾವ ವಿಷಯದ ಮೇಲೆಯೇ ನಡೆಯಲಿ, ಮುಸ್ಲಿಮ್ ಪ್ರತಿನಿಧಿ ಬಾಯಿ ತೆರೆದ ಕೂಡಲೇ ಭಯೋತ್ಪಾದನೆ, ಪಾಕಿಸ್ತಾನ, ಬಹುಪತ್ನಿತ್ವ ಇತ್ಯಾದಿ ವಿಷಯಗಳನ್ನು ಎತ್ತಿ ಬಾಯಿ ಮುಚ್ಚಿಸುವ ಶ್ರಮ ಬಹುತೇಕ ಟಿವಿ ಚರ್ಚೆಗಳಲ್ಲಿ ನಡೆಯುತ್ತಿದೆ. ಮಾತ್ರವಲ್ಲ, ಈ ಎಲ್ಲ ಸಂದರ್ಭಗಳಲ್ಲಿ ನಿರೂಪಕನ ಮುಖದಲ್ಲಿ ಮಂದಹಾಸ ಇರುತ್ತದೆ. ನಿಜವಾಗಿ ಇದುವೇ ಲಿಂಚಿಂಗ್. ಲಕ್ಷಣವಾಗಿ ನಗಲೂ, ಮಾತಾಡಲೂ ಬರುವ ಮತ್ತು ಸೂಟು-ಬೂಟು ಧರಿಸಿರುವ ಮಂದಿ ಟಿವಿ ಸ್ಟುಡಿಯೋಗಳಲ್ಲಿ ಕುಳಿತು ಹೀಗೆ ಗುಂಪು ದಾಳಿ ನಡೆಸುವುದನ್ನೇ ಬೀದಿಯಲ್ಲಿರುವ ಮಂದಿ ತುಸು ಕ್ರೂರವಾಗಿ ನಡೆಸುತ್ತಿದ್ದಾರೆ. ಆ ಸಂದರ್ಭದಲ್ಲಿ ಅವರಲ್ಲೂ ಮಂದಹಾಸವೇ ಇರುತ್ತದೆ. ಅಂದಹಾಗೆ,
  
  ಝೀ ಹಿಂದೂಸ್ತಾನ್ ಎಂಬ ಟಿವಿ ಚಾನೆಲ್ ಇತ್ತೀಚೆಗೆ ಏರ್ಪಡಿಸಿದ ಚರ್ಚೆಯಲ್ಲಿ ನ್ಯಾಯವಾದಿ ಫರಾ ಫೈಝ್ ಮತ್ತು ಮುಫ್ತಿ ಏಜಾಝ್ ಅರ್ಶದ್ ಖಾಸ್ಮಿ ಎಂಬಿಬ್ಬರು ಪರಸ್ಪರ ಬಾರಿಸಿಕೊಂಡದ್ದನ್ನು ನೀವು ನೋಡಿರಬಹುದು. ಇದು ಸ್ಯಾಂಪಲ್. ಮುಂದೊಂದು ದಿನ ಟಿವಿ ಸ್ಟುಡಿಯೋದಲ್ಲೇ ಗುಂಪು ಹತ್ಯೆಯೂ ನಡೆದೀತು.

ಅದು ಡೈನೋಸಾರ್ ಅಲ್ಲ, ಉಗುರು-ಹಲ್ಲಿಲ್ಲದ ಸಾಧು ಪ್ರಾಣಿ



ಪ್ರಕರಣ ಒಂದು:

ಉತ್ತರ ಪ್ರದೇಶದ ಸಹರಾಣ್‍ಪುರ ನಿವಾಸಿಯಾಗಿದ್ದ ರೆಹೆನುಮಾ ಎಂಬ 30ರ ಹರೆಯದ ಮುಸ್ಲಿಮ್ ಮಹಿಳೆಯು ಪತಿಯಿಂದ ವಿಚ್ಛೇದನವನ್ನು ಕೋರಿ ಕುಟುಂಬ ನ್ಯಾಯಾಲಯದ ಮೊರೆ ಹೋದರು. ಆಕೆ ಗುರ್‍ಗಾಂವ್‍ನಲ್ಲಿ ವೃತ್ತಿಯಲ್ಲಿದ್ದರು. ಅಲ್ಲಿ ಒಬ್ಬರನ್ನು ಪ್ರೀತಿಸುತ್ತಲೂ ಇದ್ದರು. ವಿಚ್ಛೇದನ ಪಡೆಯದೇ ಆತನನ್ನು ಮದುವೆಯಾಗುವಂತಿಲ್ಲ. ಆ ಕಾರಣದಿಂದಾಗಿ ಮದುವೆಯನ್ನು ಮುಂದೂಡುತ್ತಲೇ ಹೋಗಬೇಕಾಯಿತು. ಎರಡು ವರ್ಷ ಕಾದರೂ ಕುಟುಂಬ ನ್ಯಾಯಾಲಯದಲ್ಲಿ ದೂರು ಇತ್ಯರ್ಥವಾಗುವ ಯಾವ ಸೂಚನೆಯೂ ಕಾಣಿಸಲಿಲ್ಲ. ಆಕೆ ಸಹರಾಣ್‍ಪುರದ ದಾರುಲ್ ಕಝಾದ (ಶರಿಯತ್‍ನ ಆಧಾರದಲ್ಲಿ ವಿವಾದ ಇತ್ಯರ್ಥಪಡಿಸುವ ಸಂಸ್ಥೆ) ಬಾಗಿಲು ತಟ್ಟಿದರು. ತ್ವರಿತಗತಿಯಲ್ಲಿ ಆಕೆ ವಿಚ್ಛೇದನವನ್ನೂ ಪಡೆದುಕೊಂಡರು.
ಪ್ರಕರಣ ಎರಡು:

ಉತ್ತರ ಪ್ರದೇಶದ ಬದುವಾನ್‍ನಲ್ಲಿ ಒಂದು ದಾರುಲ್ ಕಝಾ ಇದೆ. ಅದರ ಮುಖ್ಯಸ್ಥರು 80ರ ಹರೆಯದ ಅಬ್ದುಲ್ ಹಮೀದ್ ಮುಹಮ್ಮದ್ ಸಲೀಮುಲ್ ಕಾದ್ರಿ ಎಂಬವರು. ಮುಸ್ಲಿಮ್ ಮಹಿಳೆ ಮತ್ತು ಪುರುಷರು ಸಾಮಾನ್ಯವಾಗಿ ಇಲ್ಲಿ ದೂರು ಸಲ್ಲಿಸುವುದು ವಾಡಿಕೆ. ಒಮ್ಮೆ ಹಿಂದೂ ವ್ಯಾಪಾರಿಯೋರ್ವರು ಈ ದಾರುಲ್ ಕಝಾಗೆ ದೂರು ಕೊಟ್ಟರು. ಮುಸ್ಲಿಮರೆಂದು ಶಂಕಿಸಲಾದ ವ್ಯಕ್ತಿಗಳು ತನ್ನ ವ್ಯಾಪಾರ ಮಳಿಗೆಯನ್ನು ಸುಟ್ಟು ಹಾಕಿz್ದÁರೆ ಎಂದು ಆರೋಪಿಸಿ ದರು. ಈ ಪ್ರಕರಣವು ಆ ಪ್ರದೇಶದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿತ್ತು. ಸಂಭಾವ್ಯ ಕೋಮುಗಲಭೆಯ ಆತಂಕವೂ ಎದುರಾಗಿತ್ತು. ಕಾಝಿಯವರು ಮುಸ್ಲಿಮ್ ಸಮು ದಾಯದ ಪರವಾಗಿ ಪರಿಹಾರದ ಕೊಡುಗೆಯನ್ನು ನೀಡಿದರು ಮತ್ತು ಕ್ಷಮಿಸುವಂತೆ ಕೋರಿಕೊಂಡರು. ಆ ಹಿಂದೂ ವ್ಯಾಪಾರಿ ಭಾವುಕರಾದರು. ಮಾತ್ರವಲ್ಲ, ಪರಿಹಾರ ಪಡೆದುಕೊಳ್ಳದೇ ಹಿಂತಿರುಗಿದರು. ಕಾಝಿಯವರ ಆ ತೀರ್ಪು ಆ ಪ್ರದೇಶದ ಉದ್ವಿಘ್ನತೆಯ ಶಮನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿತು.
‘ಭಾರತದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ದಾರುಲ್ ಕಝಾ ವನ್ನು ಸ್ಥಾಪಿಸಲಾಗುತ್ತದೆ’ ಎಂದು ಮೊನ್ನೆ ಜುಲೈ 15ರಂದು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಘೋಷಿಸಿದ ಬಳಿಕ ಉಂಟಾದ ವಾದ-ವಿವಾದ, ಆರೋಪ, ನಿಂದನೆ, ವದಂತಿಗಳ ಹಿನ್ನೆಲೆಯಲ್ಲಿ ಈ ಮೇಲಿನ ಎರಡು ಘಟನೆಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಈ ಎರಡೂ ಪ್ರಕರಣಗಳು ಅಧಿಕೃತವಾದವು ಮತ್ತು ಸ್ಕ್ರಾಲ್ ಡಾಟ್ ಇನ್ ಎಂಬ ಆನ್‍ಲೈನ್ ಮಾಧ್ಯಮದಲ್ಲಿ ಪ್ರಕಟವಾದವು. ದಾರುಲ್ ಕಝಾ ಸ್ಥಾಪನೆಯ ಕುರಿತು ಪರ್ಸನಲ್ ಲಾ ಬೋರ್ಡ್ ಹೇಳಿಕೆ ನೀಡಿದ್ದೇ  ತಡ, ಬಿಜೆಪಿಯು ಅದನ್ನು ಬಲವಾಗಿ ಖಂಡಿಸಿತು. ಭಾರತವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಗಲು ಬಿಡೆವು ಎಂದು ಆಕ್ರೋಶಿಸಿತು. ಭಾರತೀಯ ನ್ಯಾಯಾಂಗಕ್ಕೆ ಸಡ್ಡು ಹೊಡೆಯುವ ‘ಸಮಾನಾಂತರ ನ್ಯಾಯಾಂಗವಾಗಿ’ ದಾರುಲ್ ಕಝಾವನ್ನು ಅದು ವ್ಯಾಖ್ಯಾನಿಸಿತು. ಭಾರತದ ಸಂವಿಧಾನದಲ್ಲಿ ಇದಕ್ಕೆ ಅವಕಾಶವೇ ಇಲ್ಲ ಎಂದೂ ವಾದಿಸಿತು. ಮುಖ್ಯವಾಹಿನಿಯ ಟಿವಿಗಳಲ್ಲಂತೂ ಅತ್ಯಂತ ಏಕಮುಖ ವಾದ ಮತ್ತು ಏಕಪಕ್ಷೀಯವಾದ ಚರ್ಚೆಗಳು ನಡೆದುವು. ಐಸಿಸ್, ಬೋಕೋ ಹರಾಮ್, ತಾಲಿಬಾನ್ ಇತ್ಯಾದಿ ಇತ್ಯಾದಿಗಳು ನಡೆಸಿವೆಯೆಂದು ಹೇಳಲಾಗುತ್ತಿರುವ ಸರ್ವ ಕ್ರೌರ್ಯಗಳನ್ನೂ ಶರೀಅತ್‍ನ ಮೇಲೆ ಹೊರಿಸಿ ಭಾರತದಲ್ಲೂ ಇದನ್ನು ಜಾರಿ ಮಾಡಲು ಹೊರಟಿದ್ದೀರಾ ಎಂಬಂತಹ ಮೂರ್ಖತನದ ಪ್ರಶ್ನೆ ಗಳನ್ನೂ ಎತ್ತಲಾಯಿತು. ಇದರ ನಡುವೆ ಫೇಸ್‍ಬುಕ್, ಟ್ವಿಟರ್, ವಾಟ್ಸಾಪ್‍ಗಳಂತಹ ಸಾಮಾಜಿಕ ಜಾಲತಾಣಗಳಲ್ಲಂತೂ ಭರಪೂರ ವದಂತಿಗಳು ಹರಡಿದುವು. ಅದರಲ್ಲಿ ಒಂದು ಹೀಗಿದೆ:

‘ಹಮೇ ಶರಿಯಾ ಅದಾಲತ್ ನಹೀಂ ದಿಯಾ ಜಾ ಸಕ್ತಾ ತೊ ಮುಸಲ್ಮಾನೋಂಕೆಲಿಯೆ ಅಲಗ್ ದೇಶ್ ದಿಯಾ ಜಾಯೆ’
ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ನ ಸದಸ್ಯರಾದ ಮೌಲಾನಾ ಖಲೀಲುರ್ರಹ್ಮಾನ್ ಸಜ್ಜಾದ್ ನೂಮಾನಿ, ಖಾಲಿದ್ ಸೈಫುಲ್ಲಾ ರಹ್ಮಾನಿ ಮತ್ತು ಮೌಲಾನಾ ಉವೈಸ್ ಮಹ್‍ಫೂಝ ರಹ್ಮಾನಿ...  ಈ ಮೂವರೂ ಜೊತೆಗಿರುವ ಮತ್ತು ಅದರಲ್ಲಿ ಓರ್ವರು ಮೈಕ್ ಹಿಡಿದಿರುವ ಫೋಟೋ. ಅದರ ಕೆಳಗಡೆ ‘ಪರ್ಸನಲ್ ಲಾ ಬೋರ್ಡ್ ಮತ್ತೊಮ್ಮೆ ದೇಶ ವಿಭಜನೆಗೆ ಕರೆ ಕೊಟ್ಟಿದೆ’ ಎಂಬ ಈ ಮೇಲಿನ ಹಿಂದಿ ಶೀರ್ಷಿಕೆಯ ಒಕ್ಕಣೆ. ಬಲಪಂಥೀಯ ಫೇಸ್‍ಬುಕ್ ಬಳಕೆದಾರನೋರ್ವನ ಪುಟದಲ್ಲಿ ಕಾಣಿಸಿಕೊಂಡ ಈ ಪೋಸ್ಟನ್ನು ಒಂದೇ ದಿನದಲ್ಲಿ 7 ಸಾವಿರ ಮಂದಿ ಹಂಚಿಕೊಂಡ(ಶೇರ್)ರು. 800ಕ್ಕಿಂತಲೂ ಅಧಿಕ ಪ್ರತಿಕ್ರಿಯೆಗಳು ಲಭಿಸಿದುವು. ಅಂತರ್ಜಾಲದಲ್ಲಿ ಸಂಚಲನವನ್ನು ಸೃಷ್ಟಿಸಿದ ಈ ಪೋಸ್ಟ್ ನ ಬಗ್ಗೆ ಇಂಡಿಯಾ ಟುಡೇ ಗ್ರೂಪ್‍ನ ವೈರಲ್ ಟೆಸ್ಟ್ ತಂಡವು ಸತ್ಯಶೋಧನೆಗೆ ಇಳಿಯಿತು. ನಿಜವಾಗಿ ಅಂಥದ್ದೊಂದು ಹೇಳಿಕೆಯನ್ನು ಪರ್ಸನಲ್ ಲಾ ಬೋರ್ಡ್‍ನ ಯಾವ ಸದಸ್ಯರೂ ಕೊಟ್ಟಿರಲೇ ಇಲ್ಲ. ಆ ಫೋಟೋಗೂ ಆ ಹೇಳಿಕೆಗೂ ಸಂಬಂಧವೇ ಇರಲಿಲ್ಲ. ಯಾವುದೋ ಸಂದರ್ಭದ ಫೋಟೋಗೆ ತಮ್ಮದೇ ಬರಹವನ್ನು ಜೋಡಿಸಿ ಪರ್ಸನಲ್ ಲಾ ಬೋರ್ಡ್‍ನ ತೇಜೋವಧೆಗೆ ಪ್ರಯತ್ನಿಸಲಾಗಿತ್ತು. ಅಷ್ಟಕ್ಕೂ,
    
ದಾರುಲ್ ಕಝಾ ಅಥವಾ ಶರಿಯಾ ಕೋರ್ಟ್‍ಗಳ ಕುರಿ ತಂತೆ ಈ ದೇಶದಲ್ಲಿ ಕೆಲವು ಸುಳ್ಳುಗಳು ಚಾಲ್ತಿಯಲ್ಲಿವೆ. ಈ ಸುಳ್ಳುಗಳಲ್ಲಿ ಕೆಲವನ್ನು ಉದ್ದೇಶಪೂರ್ವಕವಾಗಿಯೇ ಚಾಲ್ತಿಗೆ ತರಲಾಗಿದ್ದರೆ ಇನ್ನೂ ಹಲವು ಸುಳ್ಳುಗಳು ದೈನಂದಿನ ಬೆಳವಣಿಗೆಗಳ ಕಾರಣದಿಂದಾಗಿ ಜನ್ಮ ತಳೆದವುಗಳಾಗಿವೆ. ಮತ್ತೊಂದಿಷ್ಟು ಸುಳ್ಳುಗಳಿಗೆ ಮುಸ್ಲಿಮರೇ ಕಾರಣಕರ್ತರಾಗಿದ್ದಾರೆ. ಚಪಾತಿ ಕರಟಿದ್ದಕ್ಕೆ ತಲಾಕ್, ವಾಟ್ಸಾಪ್‍ನಲ್ಲಿ ತಲಾಕ್, ಅಂಚೆ ಪತ್ರದ ಮೂಲಕ ತಲಾಕ್, ಅತ್ಯಾಚಾರಗೈದ ಮಾವನನ್ನೇ ಮದುವೆಯಾಗುವಂತೆ ಸೊಸೆಗೆ ನಿರ್ದೇಶನ, ಕೈ ಕಡಿಯುವುದು, ಕಲ್ಲೆಸೆದು ಕೊಲ್ಲುವುದು, ಹೆಣ್ಮಕ್ಕಳನ್ನು ಗುಲಾಮರಂತೆ ಬಳಸಿಕೊಳ್ಳುವುದು ಇತ್ಯಾದಿ ಇತ್ಯಾದಿ ತರಹೇವಾರಿ ಸುದ್ದಿಗಳು ಮಾಧ್ಯಮಗಳಲ್ಲಿ ಆಗಾಗ ಪ್ರಕಟವಾಗುವುದು ಮತ್ತು ಹೀಗಾಗುವುದಕ್ಕೆ ಶರೀಅತ್ತೇ ಕಾರಣ ಎಂಬ ಭಾವದಲ್ಲಿ ಮಾಧ್ಯಮಗಳು ಸುದ್ದಿಗಳನ್ನು ಹೆಣೆಯುವುದು ಭಾರತೀಯ ಸಮಾಜದ ಮೇಲೆ ಇವತ್ತು ಬಹುದೊಡ್ಡ ಅಡ್ಡ ಪರಿಣಾಮವನ್ನು ಬೀರಿದೆ. ಇಂಥ ಸುದ್ದಿಗಳನ್ನು ಜನರು ಬರೇ ಸುದ್ದಿಗಳಾಗಿಯಷ್ಟೇ ಪರಿಗಣಿಸುವುದಿಲ್ಲ. ಅದು ಸಮುದಾಯವನ್ನು ಅಳೆಯುವ ಮಾಪನವೂ ಆಗುತ್ತದೆ. ಇಂಥ ಸುದ್ದಿಗಳನ್ನು ಎದುರಿಟ್ಟುಕೊಂಡು ಜನರು ಮುಸ್ಲಿಮರನ್ನು ಮತ್ತು ಶರೀಅತನ್ನು ಅಂದಾಜಿಸತೊಡಗುತ್ತಾರೆ. ಅತ್ಯಂತ ಕಠೋರವಾದ, ಸಾಮಾನ್ಯ ಬುದ್ಧಿಮತ್ತೆಗೆ ನಿಲುಕದ ಮತ್ತು ಪುರಾತನವಾದ ಕಾನೂನೊಂದು ಮುಸ್ಲಿಮರ ನಡುವೆ ಚಾಲ್ತಿಯಲ್ಲಿದೆ ಮತ್ತು ಅದನ್ನು ಶರೀಅತ್ ಅನ್ನುತ್ತಾರೆ ಎಂಬ ನಂಬಿಕೆಯೊಂದನ್ನು ಸಾಮಾನ್ಯ ಜನರಲ್ಲಿ ಬಿತ್ತಲು ಇಂಥ ಸುದ್ದಿ ಗಳು ಯಶಸ್ವಿಯಾಗುತ್ತವೆ. ನಿಜವಾಗಿ, ದಾರುಲ್ ಕಝಾಗಳೆಂಬುದು ಕ್ರೂರವೂ ಅಲ್ಲ, ಭಾರತೀಯ ನ್ಯಾಯಾಲಯಗಳಿಗೆ ಸಮಾನಾಂತರ ವಾದ ನ್ಯಾಯಾಲಯವೂ ಇಲ್ಲ. ಹಲ್ಲು-ಉಗುರುಗಳಿಲ್ಲದ ಪರಮ ಸಾಧು ಪ್ರಾಣಿಗಿಂತ ಹೆಚ್ಚಿನ ಯಾವ ಸಾಮರ್ಥ್ಯವೂ ಇದಕ್ಕಿಲ್ಲ. ಅಲ್ಲದೇ ಚಪಾತಿ ಕರಟಿದ್ದಕ್ಕಾಗಿ ವಿಚ್ಛೇದನ, ಮಾವನನ್ನೇ ಮದುವೆಯಾಗುವಂತೆ ಸೊಸೆಗೆ ಹೇಳಲಾದ ಪ್ರಕರಣ, ಅಂಚೆಯಲ್ಲಿ ತಲಾಕ್ ಇತ್ಯಾದಿಗಳೆಲ್ಲ ದಾರುಲ್ ಕಝಾದ ನಿರ್ಣಯಗಳೂ ಅಲ್ಲ. ಅವುಗಳಿಗೂ ಶರೀಅತ್‍ಗೂ ಸಂಬಂಧವೂ ಇಲ್ಲ. ದುರಂತ ಏನೆಂದರೆ, ಮಾಧ್ಯಮ ರಂಗದಲ್ಲಿರುವ 98%ಕ್ಕಿಂತಲೂ ಅಧಿಕ ಮಂದಿಗೆ ಶರೀಅತ್ ಎಂಬ ನಾಲ್ಕಕ್ಷರದ ಪರಿ ಚಯವಿದೆಯೇ ಹೊರತು ಅದರ ಕಾರ್ಯ ವಿಧಾನದ ಬಗ್ಗೆ ಏನೇನೂ ಗೊತ್ತಿಲ್ಲ. ಗೊತ್ತಿರುವುದೆಲ್ಲವೂ ವದಂತಿಗಳು, ಭ್ರಮೆಗಳು ಮತ್ತು ಅಲ್ಲಿ-ಇಲ್ಲಿಂದ ಓದಿಕೊಂಡ ಸುದ್ದಿಗಳ ಮೇಲೆ ಕಟ್ಟಿಕೊಂಡ ಅಭಿಪ್ರಾಯಗಳು ಮಾತ್ರ. ಇವರೇ ಮಾಧ್ಯಮವನ್ನು ಆಳುತ್ತಾರೆ. ಸುದ್ದಿಗಳನ್ನು ತಯಾರಿಸು ತ್ತಾರೆ. ಅಂಕಣಗಳನ್ನು ಬರೆಯುತ್ತಾರೆ. ಚರ್ಚೆಗಳನ್ನು ನಡೆಸಿ ಕೊಡು ತ್ತಾರೆ. ಅಂದಹಾಗೆ,
   
ವಿವಾಹ, ವಿಚ್ಛೇದನ, ವಾರೀಸು ಸೊತ್ತು, ದತ್ತು ಸ್ವೀಕಾರ ಇತ್ಯಾದಿಗಳನ್ನು ಧಾರ್ಮಿಕ ವಿಧಿಯಂತೆ ಪರಿಹರಿಸಿಕೊಳ್ಳುವ ಅವಕಾಶ ಈ ದೇಶದಲ್ಲಿ ಮುಸ್ಲಿಮರಿಗೆ ಮಾತ್ರ ಇರುವುದಲ್ಲ. 1957ರಲ್ಲಿ ರಚನೆಯಾದ The Muslim Personal Law (Shariat) Application Act ಮುಸ್ಲಿಮರಿಗೆ ಈ ಅವಕಾಶವನ್ನು ನೀಡಿದ್ದರೆ 1936ರಲ್ಲಿThe Parsi Marriage and divorce Act ನ ಮೂಲಕ ಪಾರ್ಸಿ ಸಮುದಾಯಕ್ಕೂ ಈ ಅವಕಾಶ ಲಭ್ಯ ವಾಗಿತ್ತು. 1955ರಲ್ಲಿ The Hindu Marriage Act ನ ಮೂಲಕ ಹಿಂದೂ ಸಮುದಾಯಕ್ಕೂ ಈ ಅವಕಾಶವನ್ನು ನೀಡಲಾಯಿತು. 1956ರಲ್ಲಿ ರಚಿಸಲಾದHindu Succession Act ನ ಮೂಲಕ ಹಿಂದೂ, ಸಿಕ್ಖ್, ಬೌದ್ಧ ಮತ್ತು ಜೈನ ಸಮುದಾಯಗಳೂ ತಮ್ಮೊಳಗಿನ ಆಸ್ತಿ ಮತ್ತು ವಾರೀಸು ಸೊತ್ತುಗಳ ವಿತರಣೆಯನ್ನು ಧಾರ್ಮಿಕ ವಿಧಿಯನ್ವಯ ಮಾಡಿಕೊಳ್ಳಲು ಅನುಮತಿ ನೀಡ ಲಾಯಿತು. ಮಾತ್ರವಲ್ಲ, ಸಂವಿಧಾನವು ತನ್ನ ಮೂಲಭೂತ ಹಕ್ಕುಗಳಡಿಯಲ್ಲಿ ಈ ಅವಕಾಶವನ್ನು ಇವತ್ತಿಗೂ ಭದ್ರವಾಗಿ ಕಾಪಾಡಿಕೊಂಡೂ ಬಂದಿದೆ. ಆದ್ದರಿಂದಲೇ,
    
ನ್ಯಾಯವಾದಿ ವಿಶ್ವಲೋಚನ್ ಮದನ್ ಅವರ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ತಳ್ಳಿ ಹಾಕಿರುವುದು. ಶರಿಯಾ ಕೋರ್ಟ್‍ಗಳ ಸಂವಿಧಾನ ಬದ್ಧತೆಯನ್ನು ಅವರು ಪ್ರಶ್ನಿಸಿದ್ದರು ಮತ್ತು ಅವು ಸಮಾನಾಂತರ ನ್ಯಾಯಾಲಯಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದೂ ಆರೋಪಿಸಿದ್ದರು. ‘ಮುಸ್ಲಿಮರ ಮೂಲಭೂತ ಹಕ್ಕುಗಳ ಮೇಲೆ ಮುಸ್ಲಿಮ್ ಸಂಘಟನೆಗಳು ಆಯ್ಕೆ ಮಾಡಿದ ಕಾಝಿ, ಮುಫ್ತಿಗಳು ಫತ್ವಾಗಳ ಮೂಲಕ ನಿಯಂತ್ರಣ ಹೇರಬಾರದು’ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಸುಪ್ರೀಮ್ ಕೋರ್ಟ್ ತಳ್ಳಿ ಹಾಕಿತ್ತು. ನ್ಯಾಯಮೂರ್ತಿ ಸಿ.ಕೆ. ಪ್ರಸಾದ್‍ರನ್ನೊಳ ಗೊಂಡ ಇಬ್ಬರು ನ್ಯಾಯಾಧೀಶರ ನ್ಯಾಯಪೀಠವು ಬಹುಶಃ 2014ರಲ್ಲಿ ನೀಡಿದ ತೀರ್ಪಿನಲ್ಲಿ ದಾರುಲ್ ಕಝಾಗಳನ್ನು ನ್ಯಾಯ ಬಾಹಿರವೆಂದು ಕರೆಯಲು ಮತ್ತು ಅದು ಕೊಡುವ ತೀರ್ಪು(ಫತ್ವಾ) ಗಳ ಮೇಲೆ ನಿಷೇಧ ಹೇರಲು ನಿರಾಕರಿಸಿತ್ತು. ಅದರ ಜೊತೆಗೇ
‘ದಾರುಲ್ ಕಝಾಗಳಿಗೆ ನ್ಯಾಯಾಂಗೀಯ ಅಧಿಕಾರ ಇಲ್ಲ. ಅದರ ಫತ್ವಾಗಳನ್ನು ಒಪ್ಪುವುದು ಬಿಡುವುದು ಜನರಿಗೆ ಬಿಟ್ಟದ್ದು ಮತ್ತು ಅದನ್ನು ಯಾರ ಮೇಲೂ ಹೇರಲಾಗದು’ ಎಂದೂ ಅಭಿಪ್ರಾಯಪಟ್ಟಿತು. 2018 ಫೆಬ್ರವರಿ 25ರಂದು ಸುಪ್ರೀಮ್ ಕೋರ್ಟ್ ಮತ್ತೊಮ್ಮೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ನಿಜವಾಗಿ,
   
 ಶರೀಅತ್ ಎಂಬುದು ಕುರ್‍ಆನ್ ಮತ್ತು ಪ್ರವಾದಿಯವರ ನಡೆ-ನುಡಿಯನ್ನು ಆಧರಿಸಿಕೊಂಡು ರಚಿಸಲಾದ ನಿಯಮ ಸಂಹಿತೆಗಳು. ಅದು ಸ್ಥಾವರವಲ್ಲ, ಜಂಗಮ. ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರಗಳು ಹೇಗೆ ಸತ್ಯವೋ ಮತ್ತು ನಿರೀಕ್ಷಿತವೋ ಈ ನಿಯಮಗಳ ಮೇಲೆ ಹೊಸ ಹೊಸ ವ್ಯಾಖ್ಯಾನಗಳೂ ವಿವರಣೆಗಳೂ ಅಷ್ಟೇ ಸತ್ಯ ಮತ್ತು ನಿರೀಕ್ಷಿತ. ಅದು ಪುರಾತವೂ ಅಲ್ಲ, ಕಾಲಾತೀತವೂ ಅಲ್ಲ. ಕಾಲದ ಪ್ರತಿ ಪ್ರಶ್ನೆಗಳನ್ನೂ ಪರಿಹರಿಸಿಕೊಳ್ಳುವುದಕ್ಕೆ ಆ ನಿಯಮ ಸಂಹಿತೆಯನ್ನು ಆಧಾರವಾಗಿ ಬಳಸಿಕೊಳ್ಳಲಾಗುತ್ತದೆ. ಅದರ ಆಧಾರದಲ್ಲಿ ಸಮಸ್ಯೆಯ ವಿವಿಧ ಮಗ್ಗುಲುಗಳನ್ನೂ ಮತ್ತು ಅದು ತೆರೆದಿಡಬಹುದಾದ ವಿವಿಧ ಸಾಧ್ಯತೆಗಳನ್ನೂ ಅಂದಾಜಿಸಲಾಗುತ್ತದೆ. ಶರೀಅತ್ ಎಂಬುದು ಒಂದು ಸಮಸ್ಯೆಯ ಪರಿಹಾರಕ್ಕೆ ಆಧಾರವಾಗಿ ಬಳಕೆ ಮಾಡಲಾಗುವ ನಿಯಮ ಸಂಹಿತೆಯೇ ಹೊರತು ಬೇರೇನಲ್ಲ. ಅದನ್ನು ಸ್ಥಾವರವೆಂಬಂತೆ ಬಿಂಬಿಸಬೇಕಾದ ಅಗತ್ಯವೂ ಇಲ್ಲ. ದಾರುಲ್ ಕಝಾಗಳು ಈ ಸಂಹಿತೆಯನ್ನು ಆಧಾರವಾಗಿಸಿಕೊಂಡು ವಿವಾದ ವನ್ನು ಬಗೆಹರಿಸಲು ಶ್ರಮಿಸುತ್ತವೆ. ಭಾರತದಲ್ಲಿರುವ ದಾರುಲ್ ಕಝಾಗಳು ಎಷ್ಟು ದುರ್ಬಲವೆಂದರೆ, ಅದಕ್ಕೆ ತನ್ನ ಅಭಿಪ್ರಾಯವನ್ನು ಜಾರಿ ಮಾಡುವ ಯಾವ ಅಧಿಕಾರವೂ ಇಲ್ಲ. ಸಾಮಾನ್ಯವಾಗಿ, ಓರ್ವ ಹೆಣ್ಣು ಅಥವಾ ಗಂಡು ದೂರಿನೊಂದಿಗೆ ದಾರುಲ್ ಕಝಾವನ್ನು ಸಂಪರ್ಕಿಸುತ್ತಾರೆ. ಅದಕ್ಕಾಗಿ ಅವರು ಲಿಖಿತ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ವಾದಿ ಮತ್ತು ಪ್ರತಿವಾದಿಗಳು ವಿಚಾರಣೆಗೆ ಒಪ್ಪಿಕೊಂಡರೆ ನೋಟೀಸು ಜಾರಿಯಾಗುತ್ತದೆ. ಶರೀಅತ್ ನಿಯಮ ಸಂಹಿತೆಯ ಆಧಾರದಲ್ಲಿ ಖಾಝಿ ಅಥವಾ ಮುಖ್ಯಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದನ್ನು ಒಪ್ಪುವ ಮತ್ತು ಬಿಡುವ ಸ್ವಾತಂತ್ರ್ಯ ಎರಡೂ ಪP್ಷÀಗಳಿಗೂ ಸಮಾನವಾಗಿ ಇರುತ್ತವೆ. ಯಾರಿಗೆ ಒಪ್ಪಿತವಲ್ಲವೋ ಅವರು ನ್ಯಾಯಾಲಯದ ಮೊರೆ ಹೋಗಬಹುದು. ಅವರನ್ನು ಹಾಗೆ ಮಾಡದಂತೆ ನಿರ್ಬಂಧಿಸುವ ಮತ್ತು ಖಾಝಿಯ ಅಭಿಪ್ರಾಯವನ್ನೇ ಹೇರುವ ಯಾವ ಅಧಿಕಾರವೂ ಯಾವ ದಾರುಲ್ ಕಝಾಗಳಿಗೂ ಇಲ್ಲ. ಇದು ನ್ಯಾಯಾಲಯವೂ ಅಲ್ಲ, ಖಾಝಿಗಳು ನ್ಯಾಯಾ ಧೀಶರೂ ಅಲ್ಲ. ದಾರುಲ್ ಕಝಾಗಳ ಈ ಅಸಹಾಯಕ ಸ್ಥಿತಿಯು ಸುಪ್ರೀಮ್ ಕೋರ್ಟ್‍ಗೆ ಚೆನ್ನಾಗಿ ಮನವರಿಕೆ ಆಗಿರುವು ದರಿಂದಲೇ ಈ ದೇಶದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 50ಕ್ಕಿಂತಲೂ ಅಧಿಕ ದಾರುಲ್ ಕಝಾಗಳನ್ನು ನ್ಯಾಯಬಾಹಿರವೆಂದು ಕರೆಯಲು ನಿರಾಕರಿಸಿರುವುದು. ಕೇವಲ ಉತ್ತರ ಪ್ರದೇಶವೊಂದರಲ್ಲೇ  40ರಷ್ಟು ದಾರುಲ್ ಕಝಾಗಳಿವೆ. ದಾರುಲ್ ಕಝಾಗಳನ್ನು ಸಮಾನಾಂತರ ನ್ಯಾಯಾಲಯ ಎಂದು ಕರೆದ ಮತ್ತು ಭಾರತದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಘೋಷಿಸಿದ ಬಿಜೆಪಿಗೆ ಇದು ಗೊತ್ತಿಲ್ಲ ಎಂದಲ್ಲ. ಅದೊಂದು ರಾಜಕೀಯ ಹೇಳಿಕೆ. ಗೋರಕ್ಷಣೆಯ ಮಾತಾಡುತ್ತಲೇ ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಅಪಾಯಕಾರಿ ದ್ವಂದ್ವ ನೀತಿಯ ಮುಂದುವರಿಕೆ ಇದು. ಆದರೂ,

ಮುಸ್ಲಿಮ್ ಲಾ ಬೋರ್ಡ್ ತುಸು ಬುದ್ಧಿವಂತಿಕೆಯನ್ನು ಪ್ರದರ್ಶಿಸಬಹುದಿತ್ತು. ದಾರುಲ್ ಕಝಾ ಎಂಬ ಪದ ಪ್ರಯೋಗದ ಬದಲು ಕೌನ್ಸಿಲಿಂಗ್ ಸೆಂಟರ್ ಎಂದು ಹೇಳಬಹುದಿತ್ತು.