Tuesday, February 26, 2013

ಆ ಸುದ್ದಿಯನ್ನು ಓದಿದ ಬಳಿಕ ಅವರ ಬಗ್ಗೆ ಬರೆಯಬೇಕೆನಿಸಿತು..

   2002 ಜೂನ್ 18
   “ತಿಹಾರ್ ಜೈಲಿನ ‘ವಿಚಾರಣಾಧೀನ ಕೈದಿ'ಗಳ ಕೋಣೆಗೆ ನನ್ನನ್ನು ಕೊಂಡು ಹೋದರು. ಅಲ್ಲೊಂದು ಮೇಜು. ಅದರ ಬಳಿ ಜೈಲು ವರಿಷ್ಠಾಧಿಕಾರಿ ಕುಳಿತಿದ್ದರು. ಅಲ್ಲದೇ ಆ ಕೋಣೆಯಲ್ಲಿ 10-12 ಮಂದಿಯೂ ಇದ್ದರು. ವರಿಷ್ಠಾಧಿಕಾರಿ ನನ್ನ ಹೆಸರು ಕೇಳಿದರು. ನಾನು ಹೇಳಿ ಮುಗಿಸುವುದಕ್ಕಿಂತ ಮೊದಲೇ ಓರ್ವ ನನ್ನ ಕಪಾಳಕ್ಕೆ ಹೊಡೆದ. ಅದರ ಬೆನ್ನಿಗೇ ಏಟುಗಳ ಸುರಿಮಳೆಯಾಯಿತು. ತುಳಿದರು. ಒಬ್ಬಾತ ನನ್ನ ತಲೆಗೂದಲನ್ನು ಹಿಡಿದು ನನ್ನ ಮುಖವನ್ನು ಮೇಜಿಗೆ ಗುದ್ದಿದ. ಕಿವಿ, ಬಾಯಿ, ಮೂಗುಗಳಿಂದ ರಕ್ತ ಸುರಿಯಲಾರಂಭಿಸಿತು. ‘ಸಾಲಾ, ಗದ್ದಾರ್, ಪಾಕಿಸ್ತಾನಿ.. ನಿನ್ನಂಥವರನ್ನು ಬದುಕಿರಲು ಬಿಡಬಾರದು. ದೇಶದ್ರೋಹಿಗಳನ್ನು ಗಲ್ಲಿಗೇರಿಸಬೇಕು..' ಎಂದೆಲ್ಲಾ ಕಿರುಚಾಡಿದರು. ಸುಮಾರು ಅರ್ಧಗಂಟೆಗಳ ಕಾಲ ನಡೆದ ಸಾಮೂಹಿಕ ದೌರ್ಜನ್ಯದಲ್ಲಿ ನಾನು ಪ್ರಜ್ಞೆ ತಪ್ಪಿ ಬಿದ್ದೆ. ಎಚ್ಚರವಾದಾಗ ಮುಖದ ತುಂಬಾ ರಕ್ತದ ಕಲೆಗಳಿದ್ದವು. ಮುಖ ತೊಳೆದು ಬರುವಂತೆ ಆಜ್ಞಾಪಿಸಲಾಯಿತು. ಜೊತೆಗೇ ಇನ್ನೊಂದು ಆಜ್ಞೆ - ಪಾಯಿಖಾನೆ ಸ್ವಚ್ಛ ಮಾಡು. ಆ ಪಾಯಿಖಾನೆ ಎಷ್ಟು ಕೊಳಕಾಗಿತ್ತೆಂದರೆ ಬಸ್ ನಿಲ್ದಾಣಗಳಲ್ಲಿರುವ ಸಾರ್ವಜನಿಕ ಪಾಯಿಖಾನೆಗಳಿಗಿಂತಲೂ ಹೆಚ್ಚು. ಸ್ವಚ್ಛ ಮಾಡುವುದಕ್ಕೆ ಒಂದು ತುಂಡು ಬಟ್ಟೆಗಾಗಿ ಅತ್ತಿತ್ತ ನೋಡಿದೆ. ಶರ್ಟು ಬಿಚ್ಚಿ ಸ್ವಚ್ಛ ಮಾಡು ಎಂಬ ಇನ್ನೊಂದು ಆಜ್ಞೆ ಬಂತು. ಮಾಡದೇ ವಿಧಿ ಇರಲಿಲ್ಲ. ಸ್ವಚ್ಛತಾ ಕಾರ್ಯ ಪೂರ್ಣಗೊಳ್ಳುವುದಕ್ಕೆ ಒಂದು ಗಂಟೆಯಷ್ಟು ದೀರ್ಘ ಕಾಲ ಹಿಡಿಯಿತು. ಬಳಿಕ ನನ್ನನ್ನು ಜೈಲಿನ ವೈದ್ಯನ ಬಳಿಗೆ ಕರೆತರಲಾಯಿತು. ಆತನ ಕೆಲಸ ಏನೆಂದರೆ, ನನ್ನ ದೇಹದ ಮೇಲೆ ಏನಾದರೂ ಗಾಯಗಳಾಗಿದ್ದರೆ ಅದನ್ನು ದಾಖಲಿಸುವುದು. ವೈದ್ಯನು ತನ್ನ ಹತ್ತಿರ ಇದ್ದ ವ್ಯಕ್ತಿಯಲ್ಲಿ, ನನ್ನ ಅಪರಾಧವೇನೆಂದು ಕೇಳಿದ. ಐಎಸ್‍ಐ ಏಜೆಂಟ್ ಎಂದು ಆತ ಉತ್ತರಿಸಿದಾಗ ವೈದ್ಯನೂ ಥಳಿಸಿದ. ಬಳಿಕ ಪಾಯಿಖಾನೆ ಸ್ವಚ್ಛ ಮಾಡಿದ ಅದೇ ಶರ್ಟನ್ನು ಧರಿಸಿಕೊಳ್ಳುವಂತೆ ಆದೇಶಿಸಿದ. ಇಷ್ಟಕ್ಕೂ, ಧರಿಸುವುದು ಬಿಡಿ, ಹತ್ತಿರ ಇಟ್ಟುಕೊಳ್ಳುವುದಕ್ಕೂ ಆ ಶರ್ಟು ಅಯೋಗ್ಯವಾಗಿತ್ತು. ನಾನು ಮೂರು ದಿನಗಳ ಕಾಲ ಅದನ್ನೇ ಧರಿಸಿದೆ. ಜೈಲಿನಲ್ಲಿ ನನ್ನ ದಿನಚರಿ ಹೇಗಿರಬೇಕೆಂದು ಅಧಿಕಾರಿಗಳು ನಿರ್ಧರಿಸಿದ್ದರು. ಬೆಳಗ್ಗೆದ್ದು ಎಲ್ಲ ಸಾಮಾನ್ಯ ಪಾಯಿಖಾನೆಗಳನ್ನೂ ಸ್ವಚ್ಛಗೊಳಿಸಬೇಕು. ಬಳಿಕ ಸ್ನಾನದ ಕೋಣೆ ಮತ್ತು ನೆಲವನ್ನು ಗುಡಿಸಿ ಚೊಕ್ಕವಾಗಿಡಬೇಕು. ಇಷ್ಟೇ ಅಲ್ಲ, ಊಟದ ಬಳಿಕ ಉಳಿದೆಲ್ಲ ಕೈದಿಗಳನ್ನು ಅವರವರ ಕೋಣೆಯಲ್ಲಿ ಕೂಡಿ ಹಾಕಿ ವಿಶ್ರಾಂತಿ ಪಡೆಯಲು ಬಿಡಲಾಗುತ್ತಿದ್ದರೆ, ನನಗೆ ಅದಕ್ಕೂ ಅವಕಾಶ ಇರಲಿಲ್ಲ. ನನ್ನನ್ನು ಮತ್ತು ಇತರ ಕೆಲವು ಮಂದಿಯನ್ನು ಜೈಲಿನೊಳಗಿನ ಕಾಂಕ್ರೀಟು ಕಟ್ಟಡವೊಂದರ ನಿರ್ಮಾಣ ಕೆಲಸದಲ್ಲಿ ದುಡಿಸಲಾಗುತ್ತಿತ್ತು. ಕೈ ತುಂಬಾ ಗಾಯಗಳು.. ಗೀರುಗಳು.. ಬಹುಶಃ ನನಗೆ ಎಷ್ಟು ಕಷ್ಟ ಕೊಡಲು ಸಾಧ್ಯವೋ ಅಷ್ಟನ್ನೂ ಕೊಡಬೇಕೆಂದು ಅಧಿಕಾರಿಗಳಿಗೆ ಯಾರೋ ನಿರ್ದೇಶಿಸಿದಂತೆ ಕಾಣುತ್ತಿತ್ತು..
   ಪತ್ರಕರ್ತ ಇಫ್ತಿಕಾರ್ ಗೀಲಾನಿಯ ಬರಹವನ್ನು ಓದುತ್ತಾ ಹೋದಂತೆ ವ್ಯವಸ್ಥೆಯ ದಾರುಣ ಮುಖವೊಂದು ಅನಾವರಣಗೊಳ್ಳುತ್ತಾ ಹೋಗುತ್ತದೆ.
   2002 ಜೂನ್ 9 - ರವಿವಾರ
ಸಂಸತ್ತಿನ ಮೇಲೆ ದಾಳಿ ನಡೆದು ಐದಾರು ತಿಂಗಳುಗಳಷ್ಟೇ ಆಗಿತ್ತು. ಜೂನ್ 9ರಂದು ಮುಂಜಾನೆ ಆದಾಯ ತೆರಿಗೆ ವಿಭಾಗದ ಅಧಿಕಾರಿಗಳ ವೇಷದಲ್ಲಿ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಬಾಗಿಲು ತಟ್ಟಿದರು. ದೆಹಲಿಯ ಸಣ್ಣ ಫ್ಲಾಟೊಂದರಲ್ಲಿ ಬದುಕುತ್ತಿದ್ದ ನಾನು ಮತ್ತು ಪತ್ನಿ ಅನಿಸಾ, ಬಾಗಿಲು ತೆರೆದೆವು. ತಕ್ಷಣ ನನ್ನೆಡೆಗೆ ಬಂದೂಕು ತೋರಿಸಿ ಅಧಿಕಾರಿಗಳು ಒಳಗಡೆ ಬಂದರು. ಮನೆಯನ್ನಿಡೀ ಜಾಲಾಡಿದರು. ಬೇಕಾದ ಯಾವ ವಸ್ತುವೂ ಸಿಗದೇ ಇದ್ದದ್ದು ಅವರ ಚಿಂತೆಯನ್ನು ಹೆಚ್ಚಿಸಿತು. ಆದರೆ ದಾಳಿಯ ಸುದ್ದಿ ಎಲ್ಲೆಡೆಯೂ ಹಬ್ಬಿರುವುದರಿಂದ ಏನಾದರೂ ಮಾಡಲೇ ಬೇಕೆಂದು ಅಧಿಕಾರಿಗಳು ಪರಸ್ಪರ ಮಾತಾಡುತ್ತಿದ್ದರು. ಒಂದು ರೀತಿಯಲ್ಲಿ, ಯಾವುದೋ ಒಂದು ಯೋಜನೆಯನ್ನು ಇಟ್ಟುಕೊಂಡೇ ಬಂದಿರಬೇಕೆಂದು ಭಾವಿಸುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸುತ್ತಿದ್ದರು. ಕೊನೆಗೆ ದಾಳಿಯ ತಂಡದ ನಾಯಕ ನನ್ನ ಕಾರಿನ ಕೀ ಕೇಳಿದ. ನಾನು ಮೇಜಿನ ಮೇಲಿದ್ದ ಬಸ್ ಪಾಸನ್ನು ನೀಡಿದೆ. ಆತ ತಬ್ಬಿಬ್ಬಾದ. ನನ್ನಲ್ಲಿ ಕಾರಿಲ್ಲ, ದೆಹಲಿ ಸಂಚಾರ ನಿಗಮದ ಬಸ್‍ಗಳಲ್ಲಿ ನನ್ನ ಪ್ರಯಾಣ ಅನ್ನುವುದನ್ನು ಆತ ನಂಬಲಿಲ್ಲ. ಅಕ್ಕಪಕ್ಕದ ಮನೆ ಗಳಲ್ಲಿ ಈ ಬಗ್ಗೆ ವಿಚಾರಿಸುವಂತೆ ಅಧಿಕಾರಿಗಳನ್ನು ಕಳುಹಿಸಿದ. ಬಳಿಕ ಮೊಬೈಲ್ ಕೇಳಿದ. ಅದೂ ನನ್ನಲ್ಲಿರಲಿಲ್ಲ. ನನ್ನ ಪತ್ನಿಯಲ್ಲಿ ಆಭರಣ ತೋರಿಸುವಂತೆ ವಿನಂತಿಸಿದರು. ಆಕೆ ಕಪಾಟನನ್ನು ತೆರೆದು ಸಣ್ಣದೊಂದು ಆಭರಣವನ್ನು ಅವರ ಕೈಗಿತ್ತಳು. ಅವರಿಗೆ ನಂಬಲಾಗಲಿಲ್ಲ. ನನ್ನ ಇಂಟರ್‍ನೆಟ್ ಪಾಸ್‍ವರ್ಡನ್ನೂ ಕೇಳಿದರು. ಕೊಟ್ಟೆ. ನನ್ನ ಮನೆಯನ್ನಿಡೀ ಜಾಲಾಡಿದ ಬಳಿಕ ಅವರಿಗೆ ಸಿಕ್ಕಿದ್ದು ಬರೇ 3,650 ರೂಪಾಯಿ. ಬೆಳಗ್ಗಿನಿಂದ ಸಂಜೆಯ ವರೆಗೆ ನಮ್ಮಿಬ್ಬರನ್ನು ಮನೆಯಲ್ಲೇ ಕೂಡಿ ಹಾಕಿ ತಪಾಸಿಸಿದ ಸುಮಾರು 60 ಮಂದಿಯ ತಂಡ ಸಂಜೆ 7ರ ಹೊತ್ತಿಗೆ ಮನೆಯ ಟಿ.ವಿ.ಯನ್ನು ಚಾಲನೆಗೊಳಿಸಿತು. ನನ್ನ ಮನೆ ಮೇಲೆ ನಡೆದ ದಾಳಿಯ ವಿವರಗಳು ವಿವಿಧ ಚಾನೆಲ್‍ಗಳಲ್ಲಿ ಬಿತ್ತರವಾಗುತ್ತಿತ್ತು. ನನ್ನ ಮನೆ ಮುಂದೆ ನಿಂತ ಆಜ್‍ತಕ್ ಚಾನೆಲ್‍ನ ದೀಪಕ್ ಚೌರಾಸಿಯ, ನಾನು ತಪ್ಪಿತಸ್ಥನೆಂದು ವರದಿ ಮಾಡುತ್ತಿದ್ದ. ನನ್ನ ಅಪರಾಧವನ್ನು ಸಾಬೀತು ಪಡಿಸಬಲ್ಲಂಥ ಸಾಕ್ಷ್ಯಾಧಾರಗಳಿರುವ ಲ್ಯಾಪ್‍ಟಾಪನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆಂದು ಘೋಷಿಸುತ್ತಿದ್ದ. ನಿಜವಾಗಿ ನನ್ನಲ್ಲಿ ಲ್ಯಾಪ್‍ಟಾಪೇ ಇರಲಿಲ್ಲ. ಪೊಲೀಸರು ದಾಖಲೆಗಳನ್ನೂ ವಶಪಡಿಸಿ ಕೊಂಡಿರಲಿಲ್ಲ. ಅಧಿಕಾರಿಗಳು ಹೇಗೆ ಮಾಧ್ಯಮ ಮಿತ್ರರನ್ನು ದಾರಿ ತಪ್ಪಿಸುವರೆಂಬುದನ್ನು ನೋಡಿ ದಿಗ್ಮೂಢನಾದೆ..
   ಮೈ ಡೇಸ್ ಇನ್ ಪ್ರಿಝನ್ (ನನ್ನ ಜೈಲಿನ ದಿನಗಳು) ಎಂಬ ತನ್ನ ಕೃತಿಯಲ್ಲಿ ಗೀಲಾನಿ ಹೇಳುತ್ತಾ ಹೋಗುತ್ತಾರೆ.
   ಇಷ್ಟಕ್ಕೂ, ಇಫ್ತಿಕಾರ್ ಗೀಲಾನಿಗೂ ಸಂಸತ್‍ನ ಮೇಲೆ ದಾಳಿ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಎಸ್.ಎ.ಆರ್. ಗೀಲಾನಿಗೂ ಯಾವ ಸಂಬಂಧವೂ ಇಲ್ಲ. ಇಫ್ತಿಕಾರ್ ಗೀಲಾನಿ ಕಳೆದ 16 ವರ್ಷಗಳಿಂದಲೂ ದೆಹಲಿಯಲ್ಲಿ ಪ್ರಮುಖ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಬಂಧನದ ಸಂದರ್ಭದಲ್ಲಿ ಅವರು ಕಾಶ್ಮೀರ್ ಟೈಮ್ಸ್ ನ ದೆಹಲಿಯ ಬ್ಯೂರೋದ ಮುಖ್ಯಸ್ಥರಾಗಿದ್ದರು. ಅಲ್ಲದೇ ಡೈಲಿ ಟೈಮ್ಸ್ ಮತ್ತು ಫ್ರೈಡೇ ಟೈಮ್ಸ್ ಎಂಬೆರಡು ಪಾಕಿಸ್ತಾನಿ ಪತ್ರಿಕೆಗಳ ಭಾರತದ ವರದಿಗಾರರೂ ಆಗಿದ್ದರು. ಜೊತೆಗೇ ಡಾಯ್ಜಿವೆಲ್ ಎಂಬ ರೇಡಿಯೋಕ್ಕೂ ವರದಿಗಾರರಾಗಿ ದ್ದರು. ಹುರಿಯತ್ ಕಾನ್ಫರೆನ್ಸನ ನೇತಾರ ಸಯ್ಯದ್ ಅಲಿಷಾ ಗೀಲಾನಿಯವರ ಮಗಳು ಅನಿಸಾರನ್ನು ಮದುವೆಯಾಗಿರುವ ಗೀಲಾನಿಯ ಮೇಲೆ ಪೊಲೀಸರು ಸಿಟ್ಟಾಗುವುದಕ್ಕೆ ಕೆಲವು ಕಾರಣಗಳಿದ್ದವು. ಮುಖ್ಯವಾಗಿ, ಗೀಲಾನಿ  ಕೆಲಸ ಮಾಡುತ್ತಿದ್ದ ಕಾಶ್ಮೀರ್ ಟೈಮ್ಸ್ ಪತ್ರಿಕೆಯು ಕಾಶ್ಮೀರದಲ್ಲಿ ಪೊಲೀಸರ ನಡೆಸುತ್ತಿದ್ದ  ದೌರ್ಜನ್ಯಗಳನ್ನು ಯಾವ ಮುಲಾಜೂ ಇಲ್ಲದೆ ಬಹಿರಂಗಪಡಿಸುತ್ತಿತ್ತು. ಗುಪ್ತಚರ ವಿಭಾಗದ ಮಟ್ಟಿಗೆ ಕಾಶ್ಮೀರ್ ಟೈಮ್ಸ್ ಎಂಬುದು ಪ್ರತಿಸ್ಪರ್ಧಿಯಾಗಿ ಬಿಟ್ಟಿತ್ತು. ಟೈಮ್ಸ್ ಪ್ರಕಟಿಸಿದ ಹತ್ತಾರು ಸತ್ಯ ಘಟನೆಗಳು ವ್ಯವಸ್ಥೆಯ ಇನ್ನೊಂದು ಮುಖವನ್ನು ದೇಶದ ಮುಂದಿಟ್ಟಿತ್ತು. ಆದ್ದರಿಂದಲೇ ಪತ್ರಿಕೆಯ ಸಂಪಾದಕ ವೇದ್ ಬಾಸಿನ್‍ರಿಗೆ ಜೀವ ಬೆದರಿಕೆಯ ಕರೆಗಳೂ  ಬರುತ್ತಿದ್ದುವು. ಕಾಶ್ಮೀರದಲ್ಲಾಗುವ ಮಾನವ ಹಕ್ಕುಗಳ ಹರಣದ ಬಗ್ಗೆ, ಅದರಲ್ಲಿ ಪೊಲೀಸ್ ಮತ್ತು ಸೇನೆಯ  ಪಾತ್ರದ ಬಗ್ಗೆ ಕಾಶ್ಮೀರ್ ಟೈಮ್ಸ್ ಹತ್ತು-ಹಲವು ವರದಿಗಳನ್ನು ಪ್ರಕಟಿಸುತ್ತಲೇ ಇತ್ತು. ಇಂಥ ಪತ್ರಿಕೆಯನ್ನು ಹದ್ದುಬಸ್ತಿನಲ್ಲಿಡಬೇಕಾದರೆ ಯಾರನ್ನಾದರೂ ‘ಫಿಕ್ಸ್' ಮಾಡಲೇಬೇಕಾದುದು ವ್ಯವಸ್ಥೆಯ ತುರ್ತು ಅಗತ್ಯವಾಗಿತ್ತು. ಎರಡನೆಯದಾಗಿ, ಪ್ರತ್ಯೇಕತಾವಾದದ ಪ್ರಬಲ ಪ್ರತಿಪಾದಕ ಸಯ್ಯದ್ ಅಲಿಷಾ ಗೀಲಾನಿಯ ಮೇಲೆ ಒತ್ತಡ ಹೇರುವುದಕ್ಕಾಗಿ ಇಫ್ತಿಕಾರ್ ಗೀಲಾನಿಯನ್ನು ‘ಫಿಕ್ಸ್' ಮಾಡುವ ಅಗತ್ಯವೂ ವ್ಯವಸ್ಥೆಗಿತ್ತು.
   ಆದ್ದರಿಂದಲೇ,
    14 ವರ್ಷ ಜೈಲಲ್ಲೇ ಕೊಳೆಯಿಸಬಹುದಾದ, ‘ಅಧಿಕೃತ ರಹಸ್ಯ ಕಾಯ್ದೆ 1923’ರ ಸೆಕ್ಷನ್ 3 ಮತ್ತು 9ರನ್ವಯ ಪೊಲೀಸರು ನನ್ನ ಮೇಲೆ ಕೇಸು ಹಾಕಿದರು. ‘ಪಡೆಗಳು’ (FORCESS ) ಎಂಬ ಹೆಸರಿನಲ್ಲಿ ನಾನು ಕಂಪ್ಯೂಟರಿನಲ್ಲಿ ಡೌನ್ ಲೋಡ್ ಮಾಡಿ ಇಟ್ಟುಕೊಂಡಿದ್ದ ದಾಖಲೆಗಳನ್ನು ನನ್ನ ದೇಶದ್ರೋಹಿತನಕ್ಕೆ ಪುರಾವೆಯಾಗಿ ಮಂಡಿಸಲು ಅವರು ನಿರ್ಧರಿಸಿದರು. ನಿಜವಾಗಿ, ನಾನು ಸಂಗ್ರಹಿಸಿಟ್ಟುಕೊಂಡಿದ್ದ ಆ ದಾಖಲೆಗಳು 48 ಪುಟಗಳದ್ದಾಗಿದ್ದು, 10 ಅಧ್ಯಾಯಗಳು ಮತ್ತು 7 ಅನುಬಂಧಗಳಿಂದ
ಕೂಡಿದ್ದಾಗಿತ್ತು. ಇಷ್ಟಕ್ಕೂ, ಅದೇನೂ ರಹಸ್ಯ ದಾಖಲೆ ಆಗಿರಲಿಲ್ಲ. ಕಾಶ್ಮೀರದಲ್ಲಾಗುತ್ತಿರುವ ಮಾನವ ಹಕ್ಕುಗಳ ದಮನ, ಅಲ್ಲಿ ನಿಯೋಗಿಸಲಾಗಿರುವ ಸೇನಾ ವಿವರ, ನಾಪತ್ತೆಯಾಗಿರುವವರ ಸಹಿತ ಹತ್ತಾರು ಮಾಹಿತಿಗಳುಳ್ಳ ಈ ದಾಖಲೆಗಳನ್ನು ಇನ್‍ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ಸಂಸ್ಥೆಯು 1996ರಲ್ಲಿ ಕಿರು ಹೊತ್ತಗೆಯ ರೂಪದಲ್ಲಿ ಪ್ರಕಟಿಸಿತ್ತು. ಮಾತ್ರವಲ್ಲ, ಇಂಟರ್‍ನೆಟ್‍ನಲ್ಲೂ ಹಾಕಿತ್ತು. ಆದರೆ ನನ್ನನ್ನು ಮತ್ತು ಪತ್ನಿಯನ್ನು ಮನೆಯ ಕೋಣೆಯಲ್ಲಿ ಕೂಡಿ ಹಾಕಿದ ಪೊಲೀಸರು, ನನ್ನ ಆ ದಾಖಲೆಯನ್ನು ಸೂಕ್ಷ್ಮವಾಗಿ ತಿದ್ದಿದರು. ಆ ದಾಖಲೆಯ ಆರಂಭದಲ್ಲಿ, ‘ಕೇವಲ ಉಲ್ಲೇಖದ ಉದ್ದೇಶಕ್ಕೆ ಮಾತ್ರ, ಪ್ರಕಟಣೆ ಅಥವಾ ಪ್ರಸಾರ ಕಡ್ಡಾಯವಾಗಿ ನಿಷಿದ್ಧ..’ ಎಂಬ ವಾಕ್ಯವನ್ನು ಸೇರಿಸಿದರು. ಭಾರತದ ಅಧೀನದಲ್ಲಿರುವ ಕಾಶ್ಮೀರ (ಐ.ಎಚ್.ಕೆ.) ಎಂಬಲ್ಲಿ ಜಮ್ಮು ಕಾಶ್ಮೀರ ಎಂದು ತಿದ್ದಿದರು. ಅಲ್ಲದೇ ಏಳು ಅನುಬಂಧಗಳಲ್ಲಿ ಮೂರನ್ನು ಮಾತ್ರ ಉಳಿಸಿ ಉಳಿದವುಗಳನ್ನು ಅಳಿಸಿಬಿಟ್ಟರು. ಹಾಗೆ ತಿದ್ದಿದ ದಾಖಲೆಗಳ ಭಾಗವನ್ನು ಮಾತ್ರ ಪರಿಶೀಲಿಸುವಾಗ ಅದೊಂದು ರಹಸ್ಯ ದಾಖಲೆಯಂತೆ ಮೇಲುನೋಟಕ್ಕೆ ಕಾಣುವ ಸಾಧ್ಯತೆ ಖಂಡಿತ ಇತ್ತು. ಮಾತ್ರವಲ್ಲ, ಇದರ ಒಂದು ಪ್ರತಿಯನ್ನು ಕಾಶ್ಮೀರದಲ್ಲಿರುವ ನನ್ನ ಮಾವ ಅಲಿಷಾ ಗೀಲಾನಿಯವರ ಮನೆಯಲ್ಲೂ ಇರಿಸಿದರು. ಆ ಮೂಲಕ ನಮ್ಮಿಬ್ಬರ ಮಧ್ಯೆ ಯಾವುದೋ ಗುಪ್ತ ಸಂಬಂಧ ಇರುವುದನ್ನು ಸಾಬೀತುಪಡಿಸಲು ಯತ್ನಿಸಿದರು. ಪೊಲೀಸರು ನನ್ನ ಮೇಲೆ ಹೊರಿಸಿದ ಆರೋಪ ಏನೆಂದರೆ- ನಾನೋರ್ವ ಐಎಸ್‍ಐ ಗೂಢಚರನಾಗಿದ್ದು, ಕಾಶ್ಮೀರದಲ್ಲಿರುವ ಭೂಸೇನೆಯ ಮಾಹಿತಿಗಳನ್ನು ಐಎಸ್‍ಐಗೆ ರವಾನಿಸುತ್ತಿದ್ದೇನೆ, ಹಿಜ್ಬುಲ್ ಮುಜಾಹಿದೀನ್‍ನ ಅಂತರಂಗದ ಸದಸ್ಯನಾಗಿದ್ದೇನೆ.. ಎಂಬುದಾಗಿತ್ತು. ಅಲ್ಲದೇ ನನ್ನ ಬ್ಯಾಂಕ್ ಖಾತೆಯಲ್ಲಿ 1.40 ಕೋಟಿ ರೂ. ಮತ್ತು ಪತ್ನಿಯ ಖಾತೆಯಲ್ಲಿ 1.50 ಕೋಟಿ ರೂ.ಗಳಿವೆಯೆಂದೂ ಹೇಳಲಾಯಿತು. ಆ ಬಗ್ಗೆ ಕೂಡಲೇ ತನಿಖೆಯಾಗಬೇಕೆಂದು ನಾನು ನ್ಯಾಯಾಲಯದಲ್ಲಿ ಕೋರಿದೆ. ತಕ್ಷಣ, ಆರೋಪಗಳೆಲ್ಲ ಅದೃಶ್ಯವಾಗಿ ಬಿಟ್ಟವು. ಅಲ್ಲದೇ ಪಾಕ್‍ನ ಎರಡು ಪತ್ರಿಕೆಗಳಿಗೆ ನಾನು ವರದಿಗಾರನಾಗಿರುವುದರಿಂದ ಸಹಜವಾಗಿ ಕರೆ ಮಾಡುತ್ತಿದ್ದೆ. ಆ ಕರೆಯ ನಕಲು ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಗೊಳಿಸಿ ನನ್ನ ಮತ್ತು ಪಾಕ್‍ನ ಗುಪ್ತ ಸಂಬಂಧಕ್ಕೆ ಪುರಾವೆ ಹುಡುಕಲಾಯಿತು. ವಿಶೇಷ ಏನೆಂದರೆ, ಪೊಲೀಸರ ಈ ಷಡ್ಯಂತ್ರಕ್ಕೆ ನನ್ನ ಮಾಧ್ಯಮ ಮಿತ್ರರು ಬಲಿಯಾದದ್ದು. ಪತ್ರಿಕಾ ವರದಿಗಳು ಹೇಗಿತ್ತೆಂದರೆ- ನನ್ನ ಬಳಿ ಅಪಾರ ಪ್ರಮಾಣದ ವಿದೇಶಿ ಹಣವಿತ್ತು. ನಾನು ವಾಲ್ ಮೀಡಿಯಾ ಪ್ರೊಡಕ್ಷನ್ ಎಂಬ ಸಂಸ್ಥೆಯೊಂದರ ಮಾಲಿಕ. 13 ಲಕ್ಷ  ರೂಪಾಯಿ ತೆತ್ತು ಮೂರು ಬೆಡ್‍ರೂಮಿನ ಫ್ಲಾಟನ್ನು ಖರೀದಿಸಿದ್ದೇನೆ. 22 ಲಕ್ಷ  ರೂಪಾಯಿ ಅನಧಿಕೃತ ಆಸ್ತಿ ಸಂಪಾದಿಸಿದ್ದೇನೆ. 79 ಲಕ್ಷ  ರೂ. ಆದಾಯ ತೆರಿಗೆಯನ್ನು ತಪ್ಪಿಸಿದ್ದೇನೆ. ನನ್ನ ಹೆಸರಲ್ಲಿದ್ದ ಬ್ಯಾಂಕ್ ಅಕೌಂಟ್‍ಗಳಿಗೆ ಆಗಾಗ ಅಪಾರ ದುಡ್ಡು ಬರುತ್ತಿತ್ತು.. ಹೀಗೆ. ಒಂದು ಪ್ರಮುಖ ಇಂಗ್ಲಿಷ್ ಪತ್ರಿಕೆಯ ವರದಿಗಾರ್ತಿಯಂತೂ ಅಪ್ಪಟ ಸುಳ್ಳುಗಳನ್ನೇ ಬರೆದಿದ್ದಳು. ‘ಜಿಹಾದ್ ಧ್ಯೇಯಕ್ಕೆ ನಾನು ತೋರಿಸಿದ ಸಮರ್ಪಣಾ ಮನೋಭಾವನೆಯಿಂದ ನನ್ನ ಮಾವ ಎಷ್ಟು ಪ್ರಭಾವಿತರಾದರೆಂದರೆ ತನ್ನ ಮಗಳನ್ನೇ ನನಗೆ ಮದುವೆ ಮಾಡಿ ಕೊಟ್ಟರು. ನನಗೆ ಅನೇಕ ಐಎಸ್‍ಐ ಬೇಹುಗಾರರ ಸಂಪರ್ಕವಿತ್ತು, ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದೆ..’ ಎಂದೆಲ್ಲ  ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿರುವುದಾಗಿ ಆಕೆ ಬರೆದಿದ್ದಳು. ನಿಜವಾಗಿ, ಆ ಸಂದರ್ಭದಲ್ಲಿ ಪೊಲೀಸರು ತನಿಖೆಯನ್ನೇ ಆರಂಭಿಸಿರಲಿಲ್ಲ. ಗುಪ್ತಚರ ವಿಭಾಗವು ಮಾಧ್ಯಮ ಮಿತ್ರರನ್ನು ಹೇಗೆ ದಾರಿ ತಪ್ಪಿಸುತ್ತದೆ ಎಂಬುದಕ್ಕೆ ಇದೊಂದು ಒಳ್ಳೆಯ ಪುರಾವೆ. ಕೊನೆಗೂ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ತಿದ್ದಲ್ಪಟ್ಟ ದಾಖಲೆಗಳು ರಹಸ್ಯವಲ್ಲವೆಂದೂ ಅದು ಈ ಮೊದಲೇ ಅಸಲಿ ರೂಪದಲ್ಲಿ ಪ್ರಕಟವಾಗಿತ್ತೆಂದೂ ನನ್ನ ವಕೀಲರು ನ್ಯಾಯಾಲಯದಲ್ಲಿ ಹೇಳಿದಾಗ ಮತ್ತು ಅದನ್ನು ಹಾಜರುಪಡಿಸುವ ಮಾತನ್ನಾಡಿದಾಗ ಗುಪ್ತಚರ ವಿಭಾಗದಲ್ಲಿ ಚಡಪಡಿಕೆ ಪ್ರಾರಂಭವಾಯಿತು. ವ್ಯವಸ್ಥೆಯ ಸುಳ್ಳುಗಳನ್ನು ಒಂದು ಹಂತದ ವರೆಗೆ ನಂಬಿದ್ದ ನ್ಯಾಯಾಲಯ, ಇಲಾಖೆಗೆ ನೋಟೀಸ್ ಜಾರಿಗೊಳಿಸಿತು. ಈ ಮಧ್ಯೆ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫರ್ನಾಂಡಿಸ್ ಮತ್ತಿತರರು ನನ್ನ ಪರವಾಗಿ ಗೃಹ ಸಚಿವ ಅಡ್ವಾಣಿಯವರ ಮೇಲೆ ತೀವ್ರ ಒತ್ತಡ ತಂದರು. ಕೊನೆಗೂ ಸರಕಾರ ನನ್ನ ವಿರುದ್ಧದ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿತು. ಹೀಗೆ ಯಾವ ತಪ್ಪನ್ನೂ ಮಾಡದೇ ತಿಹಾರ್ ಜೈಲಿನಲ್ಲಿ 7 ತಿಂಗಳನ್ನು ಕಳೆದು ನಾನು ಬಿಡುಗಡೆಗೊಂಡೆ..”
..ಹೀಗೆ ಇಫ್ತಿಕಾರ್ ಗೀಲಾನಿ ಬರೆಯುತ್ತಾ ಹೋಗುತ್ತಾರೆ..
   ಅಂದಹಾಗೆ, ಗೀಲಾನಿಯಂಥ ಪ್ರಭಾವಿ ಪತ್ರಕರ್ತನನ್ನೇ ವ್ಯವಸ್ಥೆಗೆ ಈ ಮಟ್ಟದಲ್ಲಿ ನಡೆಸಿಕೊಳ್ಳಲು ಸಾಧ್ಯವೆಂದ ಮೇಲೆ, ಇತರರ ಬಗ್ಗೆ ಹೇಳುವುದಾದರೂ ಏನು? ಯಾರನ್ನೂ 'ಫಿಕ್ಸ್' ಮಾಡುವ ಸಾಮರ್ಥ್ಯ  ವ್ಯವಸ್ಥೆಗಿದೆ ಎಂದಲ್ಲವೇ ಇದರರ್ಥ? ತನ್ನ ತಪ್ಪುಗಳನ್ನು ಬಹಿರಂಗಪಡಿಸುವವರಿಗೆ ಒಂದು ಎಚ್ಚರಿಕೆಯ ಕ್ರಮವಾಗಿ ವ್ಯವಸ್ಥೆ ಈ 'ಫಿಕ್ಸ್'ನ್ನು ನಡೆಸುತ್ತಾ ಬಂದಿರಬಹುದಲ್ಲವೇ? ಈಗ ಬಂಧಿತರಾಗಿರುವವರಲ್ಲಿ ಎಷ್ಟು ಮಂದಿ ಇಂಥ ‘ಫಿಕ್ಸ್'ನಲ್ಲಿ ಸಿಲುಕಿರಬಹುದು? ಮುಂದಿನ ದಿನಗಳಲ್ಲಿ ಯಾರೆಲ್ಲ ಬಲಿಯಾಗಬಹುದು?
   ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ ದಿನದಂದು ಇಫ್ತಿಕಾರ್ ಗೀಲಾನಿಯನ್ನು 5 ಗಂಟೆಗಳ ಕಾಲ ದೆಹಲಿ ಪೊಲೀಸರು ಗೃಹ ಬಂಧನದಲ್ಲಿರಿಸಿದ ಸುದ್ದಿಯನ್ನು ಓದುತ್ತಾ ಅವರ ಬಗ್ಗೆ ಬರೆಯಬೇಕೆನಿಸಿತು.

Tuesday, February 19, 2013

ಆತ್ಮೀಯ ಮಿತ್ರರೇ, ನೀವು ಈ ಆಂದೋಲನದಲ್ಲಿ ಏನಾಗಿದ್ದೀರಿ?


   1941 ಆಗಸ್ಟ್ 26ರಂದು ಸೈಯದ್ ಮೌದೂದಿ ಸಹಿತ 75 ಮಂದಿ ವಿದ್ವಾಂಸರು ಒಟ್ಟು ಸೇರಿ ಜಮಾಅತೆ ಇಸ್ಲಾಮಿಯನ್ನು ಸ್ಥಾಪಿಸುವುದಕ್ಕೆ ಬಲವಾದ ಕಾರಣ ಇತ್ತು.
   ಬ್ರಿಟಿಷರು ಭಾರತಕ್ಕೆ ಬಂದು ಅದಾಗಲೇ 200 ವರ್ಷಗಳು ಕಳೆದಿತ್ತು. ಆದ್ದರಿಂದಲೇ ಅವರ ಇಂಗ್ಲಿಷು, ಅವರ ಪ್ಯಾಂಟು, ಶರ್ಟು, ಆಲೋಚನೆ, ಸಿದ್ಧಾಂತಗಳೆಲ್ಲ ಭಾರತೀಯ ಮುಸ್ಲಿಮರ ಮೇಲೆ ಗಾಢ ಪ್ರಭಾವವನ್ನು ಬೀರತೊಡಗಿದ್ದುವು. ದೇಹ ಭಾರತದ್ದಾದರೂ ಬ್ರಿಟಿಷ್ ಮನಸನ್ನು ಹೊಂದಿದ ಹುಸೇನ್, ಸಾರಾರು ತಯಾರಾಗತೊಡಗಿದರು. ಇವರಿಗೆ ಇಸ್ಲಾಮಿನೊಂದಿಗೆ ದ್ವೇಷ ಇತ್ತು ಎಂದಲ್ಲ. ಆದರೆ ಜಾತ್ಯತೀತತೆ, ಸಮಾಜವಾದ, ಕಮ್ಯುನಿಝಮ್, ಬಂಡವಾಳಶಾಹಿತ್ವದಂಥ ಆಧುನಿಕ ಸಿದ್ಧಾಂತಗಳ ಮುಂದೆ ಇಸ್ಲಾಮ್ ಎಂಬುದು ತೀರಾ ಕಾಲಬಾಹಿರ ಮತ್ತು ಪುರಾತನ ಸಿದ್ಧಾಂತದಂತೆ ಅವರಿಗೆ ಕಾಣತೊಡಗಿತು. ಬಡ್ಡಿಯನ್ನು ಪ್ರಬಲವಾಗಿ ಪ್ರತಿಪಾದಿಸುವ ಬಂಡವಾಳಶಾಹಿತ್ವ, ಜಾತ್ಯತೀತ ಸಿದ್ಧಾಂತಗಳ ಎದುರು ಬಡ್ಡಿಯನ್ನು ಹರಾಮ್ ಎಂದು ಘೋಷಿಸುವುದು ಅಜ್ಞಾನದಂತೆ, ಅವಮಾನದಂತೆ ಅನಿಸತೊಡಗಿತು. ಬ್ರಿಟಿಷರ ಸಂಸ್ಕ್ರಿತಿಯೇ ಕುಡಿಯುವುದು, ಮಾತ್ರವಲ್ಲ ಭಾರತದಲ್ಲೂ ಅದು ನಿಷಿದ್ಧವಲ್ಲ. ಹೀಗಿರುವಾಗ ಅದರ ವಿರುದ್ಧ ಮಾತಾಡುವುದರಿಂದ ತಮ್ಮ ಇಮೇಜಿಗೆ ಎಲ್ಲಿ  ಧಕ್ಕೆ ಬಂದೀತೋ ಅಂತ ಮುಸ್ಲಿಮರು ಅಂದುಕೊಳ್ಳತೊಡಗಿದರು. ಒಂದು ರೀತಿಯಲ್ಲಿ ನಮಾಝ್‍ಗೆ, ಉಪವಾಸಕ್ಕೆ, ಮದುವೆಗೆ, ಕೆಲವು ತಸ್ಬೀಹ್‍ಗೆ, ಹಜ್ಜ್ ಗೆ ಇಸ್ಲಾಮನ್ನು ಸೀಮಿತಗೊಳಿಸಿ ಬದುಕಿನ ಉಳಿದ ಚಟುವಟಿಕೆಗಳಿಗೆ ಕಮ್ಯುನಿಝಮನ್ನು, ಜಾತ್ಯತೀತ ಸಿದ್ಧಾಂತವನ್ನು ಆಶ್ರಯಿಸತೊಡಗಿದರು. ಹೆಸರು ಮುಹಮ್ಮದ್, ಉಮರ್, ಇಬ್ರಾಹೀಮ್ ಅಂತ ಇದ್ದರೂ ಗಣೇಶ, ನವೀನ, ಮೋತಿಲಾಲ್‍ಗಿಂತ ಭಿನ್ನವಾದ ಬದುಕೇನೂ ಇವರದ್ದಾಗಿರಲಿಲ್ಲ. ಅವರು ದೇವಾಲಯಕ್ಕೆ ಹೋಗುವಾಗ ಇವರು ಮಸೀದಿಗೆ ಹೋಗುತ್ತಿದ್ದರು. ಉಳಿದಂತೆ ಇವರ ವ್ಯಾಪಾರ, ಮಾತು, ಆಟ, ಆಲೋಚನೆಗಳೆಲ್ಲ್ಲಾ ಸಮಾನವಾಗಿತ್ತು. ಭಾರತೀಯ ಸಮಾಜದಲ್ಲಿದ್ದ ಜಾತಿಪದ್ಧತಿ ಮುಸ್ಲಿಮರ ಮೇಲೆ ಎಷ್ಟರ ಮಟ್ಟಿನ ಪ್ರಭಾವ ಬೀರಿತ್ತೆಂದರೆ ಶಾಫಿಈ, ಹನಫಿ, ಹಂಬಲಿ, ಮಾಲಿಕಿ ಗಳೆಲ್ಲ ಒಂದೊಂದು ಜಾತಿಯಾಗಿ, ಪರಸ್ಪರ ಮದುವೆ ಸಂಬಂಧ ಏರ್ಪಡಿಸಲಾರದಷ್ಟು ಅವರ ಮಧ್ಯೆ ಅಂತರ ಏರ್ಪಟ್ಟಿದ್ದುವು.
   ಹೀಗಿರುವಾಗ ರಂಗೀಲಾ ರಸೂಲ್ ಅನ್ನುವ ಕೃತಿಯೊಂದು ಪ್ರಕಟವಾಯಿತು.
ರಾಜಪಾಲ್ ಅನ್ನುವ ವ್ಯಕ್ತಿಯೊಬ್ಬ ಅದನ್ನು ಪ್ರಕಟಿಸಿದ್ದ. ಪ್ರವಾದಿಯವರನ್ನು(ಸ) ನಿಂದಿಸುವ, ಗೇಲಿ ಮಾಡುವ ಆ ಕೃತಿಯನ್ನು ಬರೆದಿರುವುದು ಸ್ವಾಮಿ ಶ್ರದ್ಧಾನಂದ ಅನ್ನುವ ಅನುಮಾನವೊಂದು ಎಲ್ಲೆಡೆ ಕಾಣಿಸತೊಡಗಿತು. ಮುಸ್ಲಿಮರನ್ನು ಶುದ್ಧಗೊಳಿಸಿ ಹಿಂದೂ ಧರ್ಮಕ್ಕೆ ಮತಾಂತರಿಸುವ 'ಶುದ್ಧಿ  ಚಳವಳಿ'ಗೆ ಅವರು ನೇತೃತ್ವ ನೀಡಿರುವುದು ಈ ಅನುಮಾನವನ್ನು ಇನ್ನಷ್ಟು ಬಲಗೊಳಿಸಿತು. ಇದಕ್ಕಿಂತ ಎರಡು ವರ್ಷಗಳ ಹಿಂದೆ 1923ರಲ್ಲಿ 'ಯಾರು ಹಿಂದು' ಅನ್ನುವ ವಿಷಪೂರಿತ ಕೃತಿಯೊಂದನ್ನು ಹಿಂದೂ ಮಹಾಸಭಾದ ನಾಯಕ ವಿ.ಡಿ. ಸಾವರ್ಕರ್ ಹೊರ ತಂದಿದ್ದರು. ಮುಸ್ಲಿಮರನ್ನು ನಿಂದಿಸುವ, ಅವರ ವಿರುದ್ಧ ಹಿಂದೂಗಳನ್ನು ಎತ್ತಿ ಕಟ್ಟುವ ಪ್ರಯತ್ನವೊಂದು ಹೀಗೆ ಬಹಿರಂಗವಾಗಿ ನಡೆಯುತ್ತಿರುವಾಗಲೇ, ಅಬ್ದುರ್ರಶೀದ್ ಅನ್ನುವ ವ್ಯಕ್ತಿಯೊಬ್ಬ 1926ರಲ್ಲಿ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆ ಮಾಡಿದ. ಇದು ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ಒಡೆಯುವುದಕ್ಕೆ ಕಾರಣವಾಯಿತು. ಮುಸ್ಲಿಮರನ್ನು ಜಿಹಾದಿಗಳು, ಅಸಹಿಷ್ಣುಗಳು, ಅತಿಕ್ರಮಣಕೋರರು, ಜಗಳಗಂಟರು.. ಎಂದೆಲ್ಲಾ ಟೀಕಿಸುವ, ಅವರ ವಿಶ್ವಾಸವನ್ನು ಪ್ರಶ್ನಿಸುವ ಪ್ರಯತ್ನಗಳು ಧಾರಾಳ ನಡೆದುವು. 1927 ಎಪ್ರಿಲ್‍ನಲ್ಲಿ ನಾಗ್ಪುರದಲ್ಲಿ ಕೋಮುಗಲಭೆ ಸ್ಫೋಟಿಸಿತು. ಆ ಬಳಿಕ ಅದು ಇಡೀ ದೇಶಕ್ಕೇ ಹರಡಿತು. ಇಸ್ಲಾಮಿನ ಜಿಹಾದ್‍ನ ಕಾನ್ಸೆಪ್ಟನ್ನು ಕ್ರೂರ, ಸಮಾಜದ್ರೋಹಿ ಎಂದು ಟೀಕಿಸಲಾಯಿತಲ್ಲದೇ ಅದನ್ನು ಮುಸ್ಲಿಮರು ಕೈಬಿಡಬೇಕೆಂದು ಬಲವಾಗಿ ಒತ್ತಾಯಿಸಲಾಯಿತು. ಈ ಹಂತದಲ್ಲಿ 'ಜಿಹಾದ್' ಅಂದರೆ ಏನು ಎಂಬುದನ್ನು ಈ ದೇಶಬಾಂಧವರಿಗೆ ಸ್ಪಷ್ಟವಾಗಿ ತಿಳಿಸುವ ಸಣ್ಣ ಕೃತಿ ಕೂಡ ಈ ಸಮುದಾಯದಲ್ಲಿರಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದ 24ರ ಹರೆಯದ ಸೈಯದ್ ಮೌದೂದಿ, 'ಇಸ್ಲಾಮ್‍ನಲ್ಲಿ ಜಿಹಾದ್' ಅನ್ನುವ ಕೃತಿಯನ್ನು ಬರೆದು ದೇಶದ ಮುಂದಿಟ್ಟರು. ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಜಿಹಾದನ್ನು ಮುಂದಿಟ್ಟು ಮುಸ್ಲಿಮರನ್ನು ನಿಂದಿಸುತ್ತಿದ್ದವರೆಲ್ಲ ಆ ವಿಷಯವನ್ನೇ ಕೈಬಿಟ್ಟು ಇತರ ಸಂಗತಿಗಳನ್ನು ಆಯ್ದುಕೊಳ್ಳಬೇಕಾಯಿತು.
   ಇಸ್ಲಾಮನ್ನು ಸಮಗ್ರ ಜೀವನ ಕ್ರಮ ಎಂದು ಈ ದೇಶದಲ್ಲಿ ಮೊತ್ತಮೊದಲು ಘೋಷಿಸಿದ್ದೇ ಜಮಾಅತೆ ಇಸ್ಲಾಮೀ .
   ಅಖಂಡ ಭಾರತ ಇಬ್ಭಾಗಗೊಂಡಾಗ ಭಾರತದಲ್ಲಿ ಉಳಿದುಕೊಂಡ ಜಮಾಅತ್‍ನ ಕಾರ್ಯಕರ್ತರು ಒಟ್ಟು ಸೇರಿ 1948 ಎಪ್ರಿಲ್ 15ರಂದು ಜಮಾಅತೆ ಇಸ್ಲಾಮೀ  ಹಿಂದನ್ನು (ಭಾರತದ ಇಸ್ಲಾಮೀ  ಸಂಘಟನೆ) ರಚಿಸಿದಾಗ ಈ ದೇಶದಲ್ಲಿ ಕೋಮುಭಾವನೆ ಅತ್ಯಂತ ಭೀಕರ ಸ್ವರೂಪದಲ್ಲಿತ್ತು. ಇಸ್ಲಾಮ್ ಧರ್ಮವು ಕೋಮು ಸೌಹಾರ್ದತೆಗೆ ವಿರುದ್ಧ ಅನ್ನುವ ಭಾವನೆಯು ಈ ದೇಶದಲ್ಲಿ ಸಾರ್ವತ್ರಿಕವಾಗಿತ್ತು. ಇಂಥ ವಾತಾವರಣದಲ್ಲಿ, ಮುಸ್ಲಿಮರು ಮತ್ತು ಹಿಂದೂಗಳು ಜೊತೆಯಾಗಿ ಬದುಕಬಹುದು ಮತ್ತು ಇಸ್ಲಾಮ್ ಬಹು ಸಂಸ್ಕ್ರಿತಿಯನ್ನು ಪ್ರೀತಿಸುವ, ಗೌರವಿಸುವ ಧರ್ಮ ಎಂದು ಈ ದೇಶದಲ್ಲಿ ಜಮಾಅತೆ ಇಸ್ಲಾಮೀ  ಹಿಂದ್ ಅತ್ಯಂತ ಪ್ರಬಲವಾಗಿ ಪ್ರತಿಪಾದಿಸಿತು. 65 ವರ್ಷಗಳ ಹಿಂದೆ ಇಂಥದ್ದೊಂದು ಪ್ರಯತ್ನ ನಡೆಸುವುದು, ಕೋಮು ಸೌಹಾರ್ದತೆಯ ಕುರಿತಂತೆ ಕುರ್‍ಆನ್-ಹದೀಸ್‍ಗಳನ್ನು ಉಲ್ಲೇಖಿಸಿಕೊಂಡು ಸಮುದಾಯವನ್ನು ಜಾಗೃತಗೊಳಿಸುವುದೆಲ್ಲ  ಸಣ್ಣ ಸವಾಲೇನೂ ಆಗಿರಲಿಲ್ಲ. ಹಿಂದೂ ಕೋಮುವಾದಕ್ಕೆ ಮುಸ್ಲಿಮ್ ಕೋಮುವಾದ ಮದ್ದು ಎಂದು ಅಂದುಕೊಂಡವರು; ಅವರ ತಲವಾರಿಗೆ, ನಮ್ಮ ತಲವಾರು ತಕ್ಕ ಉತ್ತರ ಅಂತ ವಾದಿಸುವವರು ಮುಸ್ಲಿಮರಲ್ಲಿ ದ್ದರು. ಹಾಗೆಯೇ ಮುಸ್ಲಿಮರನ್ನು ಅಸಹಿಷ್ಣುಗಳು, ದೇಶದ್ರೋಹಿಗಳೆಂದೂ, ಪ್ರವಾದಿಯನ್ನು(ಸ) ಈ ಎಲ್ಲದರ ಪ್ರಚೋದಕ ಎಂದೂ ಪ್ರಚಾರ ಮಾಡುವ ಹಿಂದೂಗಳಿದ್ದರು. ಇಂಥ ವೇಳೆ ಜಮಾಅತ್, ಏಟಿಗೆ ಪ್ರತಿಯೇಟು ಅನ್ನುವ ನಿಲುವನ್ನು ವಿರೋಧಿಸಿತು. 'ಮುಸ್ಲಿಮ್ ವ್ಯಕ್ತಿಯೊಬ್ಬ ತನ್ನ ಬಳಿ ಕೆಲಸಕ್ಕಿರುವ ಮುಸ್ಲಿಮೇತರರನ್ನು ಅವಧಿಗಿಂತ ಒಂದು ಸೆಕೆಂಡ್ ಹೆಚ್ಚು ದುಡಿಸಿದರೂ ನಾನು ಪರಲೋಕದಲ್ಲಿ ಆ ಮುಸ್ಲಿಮೇತರನ ಪರ ನಿಲ್ಲುವೆ.. ' ಎಂದ ಕರುಣಾಮಯಿ ಪ್ರವಾದಿಯನ್ನು ಜಮಾಅತ್ ಸಮಾಜಕ್ಕೆ ಪರಿಚಯಿಸಿತು. 'ನಾವೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು, ಪರಸ್ಪರ ಸಹೋದರರು.. ' ಎಂದ ಮನುಷ್ಯ ಪ್ರೇಮಿಯನ್ನು(ಸ) ಸಮಾಜದ ಮುಂದಿಟ್ಟಿತು. ಅನ್ಯರ ಆರಾಧ್ಯರನ್ನು, ಅವರ ಆರಾಧನಾಲಯಗಳನ್ನು ತೆಗಳಬಾರದು ಎಂದ ಕುರ್‍ಆನನ್ನು, ಕೋಮುವಾದಿ ನನ್ನವನಲ್ಲ ಎಂದ ಮುಹಮ್ಮದ್‍ರನ್ನು(ಸ), ಮುಸ್ಲಿಮೇತರರ ಶವವನ್ನು ಕೊಂಡೊಯ್ಯುತ್ತಿದ್ದಾಗ ಎದ್ದು ನಿಂತು ಗೌರವಿಸಿದ ಪ್ರವಾದಿಯನ್ನು..  ಸಮಾಜಕ್ಕೆ ಮಾಡೆಲ್ ಆಗಿ ತೋರಿಸಿತು. ನಿಜವಾಗಿ, ಆವತ್ತು ಆ ಸಮಾಜದ ಪಾಲಿಗೆ ಅದು ಹೊಚ್ಚ ಹೊಸತಾದ ಕಾನ್ಸೆಪ್ಟು. ಮುಸ್ಲಿಮರು ಬಹುಸಂಸ್ಕ್ರಿತಿಯನ್ನು ಸಹಿಸುವುದಿಲ್ಲ, ಕಾಫಿರರನ್ನು (ಹಿಂದೂಗಳನ್ನು) ಕೊಲ್ಲುವುದನ್ನು ಜಿಹಾದ್ ಅನ್ನುತ್ತಾರೆ, ಮತಾಂತರ ಮಾಡುತ್ತಾರೆ ಎಂಬೆಲ್ಲಾ ಪ್ರಚಾರಗಳಿದ್ದ ಸಂದರ್ಭದಲ್ಲಿ ಜಮಾಅತ್ ಕಾಫಿರ್‍ಗೆ, ಜಿಹಾದ್‍ಗೆ, ಮತಾಂತರಕ್ಕೆ ಇಸ್ಲಾಮೀ  ಹಿನ್ನೆಲೆಯಲ್ಲಿ ಸ್ಪಷ್ಟ ವ್ಯಾಖ್ಯಾನವನ್ನು ಕೊಟ್ಟು, ದೊಡ್ಡದೊಂದು ಅನುಮಾನದ ವಾತಾವರಣವನ್ನು ತಿಳಿಗೊಳಿಸುವಲ್ಲಿ ಅಪಾರ ಯಶಸ್ಸು ಪಡೆಯಿತು. ಆ ಕುರಿತಂತೆ ಅನೇಕ ಕೃತಿಗಳನ್ನು ಪ್ರಕಟಿಸಿತು. ಕುರ್‍ಆನನ್ನು ಕೊಲೆಪಾತಕ ಎಂಬಂತೆ ಕಾಣು ತ್ತಿದ್ದ, ಅರ್ಥವಾಗದ ಅರಬಿ ಲಿಪಿ ಮತ್ತು ಭಾಷೆಯನ್ನು ಅನು ಮಾನದಿಂದ ನೋಡುತ್ತಿದ್ದ ಈ ದೇಶದ ಮಂದಿಗೆ ಅವರ ಭಾಷೆಯಲ್ಲಿ ಕುರ್‍ಆನನ್ನು ಅನುವಾದಿಸಿ ಕೊಟ್ಟು ಕಣ್ಣು ತೆರೆಸಿದ್ದೇ ಜಮಾಅತೆ ಇಸ್ಲಾಮೀ . ಆ ವರೆಗೆ ಕುರ್‍ಆನನ್ನು ರಾಗಬದ್ಧವಾಗಿ ಓದಲು, ಚುಂಬಿಸಿ ಮನೆಯ ಎತ್ತರದ ಜಾಗದಲ್ಲಿಟ್ಟು ಕಾಪಾಡಲು ಬಳಸುತ್ತಿದ್ದ ಮುಸ್ಲಿಮ್ ಸಮೂಹ, ಮೊತ್ತಮೊದಲು ಅದರ ಅರ್ಥವನ್ನು ಓದಿ ರೋಮಾಂಚನಗೊಂಡಿತು. ಪ್ರವಾದಿ ಮತ್ತು ಅವರ ಅನುಯಾಯಿಗಳ ಕುರಿತಂತೆ ನೂರಾರು ಪುಸ್ತಕಗಳನ್ನು ಜಮಾಅತ್ ಸಮಾಜದ ಮುಂದಿಟ್ಟಾಗ ಇಸ್ಲಾಮನ್ನು ಪ್ರೀತಿಸುವ ವರ್ಗವೊಂದು ಬೆಳೆಯತೊಡಗಿತು. ದೇಶಬಾಂಧವರು ಮಾತ್ರವಲ್ಲ, ಸ್ವತಃ ಮುಸ್ಲಿಮರೇ ಆ ವರೆಗೆ ಪ್ರವಾದಿಯವರನ್ನು ನಮಾಝ್, ಉಪವಾಸ ಇತ್ಯಾದಿಗಳನ್ನು ಕಲಿಸಿದ ಓರ್ವ ಧಾರ್ಮಿಕ ನಾಯಕ ಎಂದಷ್ಟೇ ಅಂದುಕೊಂಡಿದ್ದರು. ಆದರೆ ನೆರೆಯವರನ್ನು ಅವರ ಧರ್ಮ ನೋಡದೇ ಪ್ರೀತಿಸಲು ಕಲಿಸಿದ ಪ್ರವಾದಿ, ಬಡ್ಡಿಮುಕ್ತ ಅರ್ಥವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಪ್ರವಾದಿ; ಮದ್ಯಮುಕ್ತ, ಭ್ರಷ್ಟ ಮುಕ್ತ ಆಡಳಿತ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದ ಆಡಳಿತಾಧಿಕಾರಿ.. ಹೀಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದ ಸಮಗ್ರ ನಾಯಕರಾಗಿ ಮೊತ್ತಮೊದಲು ಪ್ರವಾದಿಯನ್ನು ಜಮಾಅತೆ ಇಸ್ಲಾಮೀ  ಸಮಾಜಕ್ಕೆ ಪರಿಚಯಿಸಿತು. ಆದರೆ ಈ ಸಂದರ್ಭದಲ್ಲಿ ಪತ್ರಿಕೆಗಳ ದೊಡ್ಡದೊಂದು ಅಭಾವ ಸಮಾಜದಲ್ಲಿತ್ತು. ಈ ಸಮಾಜದಲ್ಲಿ ದಿನಂಪ್ರತಿ ನಡೆಯುವ ವಿದ್ಯಮಾನಗಳಿಗೆ ತಕ್ಷಣ ಇಸ್ಲಾಮೀ  ಆಧಾರದಲ್ಲಿ ಪರಿಹಾರವನ್ನು ಸೂಚಿಸುವ ಭಾರೀ ಅಗತ್ಯ ಕಂಡುಬಂತು. ಆದ್ದರಿಂದಲೇ ಎಲ್ಲ ಭಾಷೆಗಳಲ್ಲೂ ಪತ್ರಿಕೆಗಳನ್ನು ಹೊರತರಲು ಜಮಾಅತ್ ನಿರ್ಧರಿಸಿತು. ಆ ಮೂಲಕ ಸಮುದಾಯದಲ್ಲಿ ಬರಹಗಾರರನ್ನು ತಯಾರಿಸಲೂ ಮುಂದಡಿಯಿಟ್ಟಿತು. ನಿಜವಾಗಿ, 65 ವರ್ಷಗಳ ಹಿಂದೆ ಮುಸ್ಲಿಮ್ ಸಮುದಾಯದಲ್ಲಿ ಬರಹಗಾರರು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಸಂಖ್ಯೆಯಲ್ಲಿದ್ದರು. ಇರುವ ಬರಹಗಾರರಾದರೋ ಸೆಕ್ಯಲರ್ ಮತ್ತು ಕಮ್ಯುನಿಸ್ಟ್ ಸಿದ್ಧಾಂತದಿಂದ ಪ್ರಭಾವಿತರಾಗಿದ್ದರು. ಆದ್ದರಿಂದಲೇ ಇಸ್ಲಾಮಿನ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುಳ್ಳು ಸುದ್ದಿಗಳಿಗೆ ಬರಹಗಳ ಮೂಲಕವೇ ಸಮರ್ಪಕ ಉತ್ತರಕೊಡುವ ಇಸ್ಲಾಮೀ  ಬರಹಗಾರರಿಗಾಗಿ ಸಮುದಾಯ ಕಾತರದಿಂದ ಕಾಯುತ್ತಿತ್ತು. ಇಂಥ ಸಮಯದಲ್ಲಿ ಜಮಾಅತ್ ಬರಹಗಾರರ ಸೃಷ್ಟಿಗೆ ತಯಾರಿ ನಡೆಸಿತು. ಮಾಧ್ಯಮ ಕ್ಷೇತ್ರದಲ್ಲಿ ಮುಸ್ಲಿಮ್ ಬರಹಗಾರರ ಶೂನ್ಯ ಪಾತ್ರವನ್ನು ಇಲ್ಲವಾಗಿಸಬೇಕೆಂದು ಪಣ ತೊಟ್ಟಿತು. ಇದರ ಭಾಗವಾಗಿಯೇ 35 ವರ್ಷಗಳ ಹಿಂದೆ ಕನ್ನಡಿಗರಿಗಾಗಿ ಸನ್ಮಾರ್ಗ ವಾರಪತ್ರಿಕೆಯನ್ನು ಜಮಾಅತ್ ಹುಟ್ಟುಹಾಕಿತು. ಮುಸ್ಲಿಮ್ ಸಮುದಾಯವನ್ನು  ತರಬೇತುಗೊಳಿಸುವುದು ಮತ್ತು ದೇಶಬಾಂಧವರಿಗೆ ಇಸ್ಲಾಂನ ಸರಿಯಾದ ಸಂದೇಶವನ್ನು ಪರಿಚಯ ಪಡಿಸುವುದು ಪತ್ರಿಕೆಯ ಉದ್ದೇಶವಾಗಿತ್ತು. ಅಲ್ಲದೆ ಈ ಮೂಲಕ ಮುಸ್ಲಿಮ್ ಸಮುದಾಯದಲ್ಲಿ ಕನ್ನಡ ಬರಹಗಾರರನ್ನು ತಯಾರಿಸುವ ಗುರಿಯನ್ನೂ ಇಟ್ಟುಕೊಂಡಿತು. ಇಬ್ರಾಹೀಮ್ ಸಈದ್ ಪತ್ರಿಕೆಯ ಪ್ರಥಮ ಸಂಪಾದಕರಾದರು. ಅದರ ಬೆನ್ನಲ್ಲೇ ಶಾಂತಿ ಪ್ರಕಾಶನ ಎಂಬ ಕನ್ನಡ ಸಾಹಿತ್ಯ ಪ್ರಕಾಶನ ಸಂಸ್ಥೆಯನ್ನು ಜಮಾಅತ್ ಸ್ಥಾಪಿಸಿತು. ಈಗಾಗಲೇ ಶಾಂತಿ ಪ್ರಕಾಶನದಿಂದ 250ರಷ್ಟು ಕೃತಿಗಳು ಪ್ರಕಟವಾಗಿವೆ. ಲಕ್ಷಾಂತರ ಇಸ್ಲಾಮೀ  ಸಾಹಿತ್ಯ ಕೃತಿಗಳು ಮಾರಾಟವಾಗಿವೆ. ಎರಡು ಸಂಚಾರಿ ವಾಹನಗಳು ರಾಜ್ಯದಾದ್ಯಂತ ಇಸ್ಲಾಮೀ  ಸಾಹಿತ್ಯವನ್ನು ಜನರ ಬಳಿಗೆ ತಲುಪಿಸುವಲ್ಲಿ ನಿರತವಾಗಿವೆ. ಹಾಗೆಯೇ ಇದೀಗ ಕಳೆದ 11 ವರ್ಷಗಳಿಂದ ಮಹಿಳೆಯರಿಗಾಗಿಯೇ ‘ಅನುಪಮ’ ಮಾಸಿಕವನ್ನು ಜಮಾಅತ್  ಹೊರತರುತ್ತಿದೆ. ಇದಲ್ಲದೇ, ಮಂಗಳೂರಿನಲ್ಲಿ ‘ಹಿರಾ ಮೀಡಿಯಾ’ ಎಂಬ ಭವಿಷ್ಯದ ಟಿ.ವಿ. ಚಾನೆಲ್‍ಗಾಗಿ 2012ರಲ್ಲಿ ರಾಜ್ಯ ಘಟಕಾಧ್ಯಕ್ಷ ಅಬ್ದುಲ್ಲಾ ಜಾವೇದ್‍ರು ಚಾಲನೆ ಕೊಟ್ಟಿದ್ದಾರೆ. ನೆರೆಯ ರಾಜ್ಯವಾದ ಕೇರಳದಲ್ಲಿ ಈಗಾಗಲೇ ಮೀಡಿಯಾ ಒನ್ ಎಂಬ ಹೆಸರಿನಲ್ಲಿ ಟಿ.ವಿ. ಚಾನೆಲ್ ಪ್ರಾರಂಭವಾಗಿದೆ. ಮಾಧ್ಯಮಂ ಅನ್ನುವ ದಿನ ಪತ್ರಿಕೆಯು ಕಳೆದ 10 ವರ್ಷಗಳಿಂದ ಕೇರಳದಲ್ಲಿ ಯಶಸ್ವಿಯಾಗಿ ಪ್ರಕಟವಾಗುತ್ತಿವೆ. ಒಂದು ಕಾಲದಲ್ಲಿ ಇಸ್ಲಾಮೀ ವಿಚಾರಧಾರೆಗಳನ್ನೊಳಗೊಂಡ ಪತ್ರಿಕೆಗಳು ಬಿಡಿ, ಇಸ್ಲಾಮೀ  ಬರಹಗಾರರೇ ಇಲ್ಲದ ಸಮಯದಲ್ಲಿ ಪತ್ರಿಕೆಗಳನ್ನು ಹುಟ್ಟು ಹಾಕುವ ಮೂಲಕ ಜಮಾಅತ್, ಪತ್ರಿಕೆಗಳನ್ನಷ್ಟೇ ಅಲ್ಲ, ಬರಹಗಾರರನ್ನೂ ಸೃಷ್ಟಿಸಿತು. ಇವತ್ತು ವಿವಿಧ ದಿನ ಪತ್ರಿಕೆ, ಟಿ.ವಿ. ಚಾನೆಲ್‍ಗಳಲ್ಲಿ ಜಮಾಅತ್ ತಯಾರಿಸಿದ ಬರಹಗಾರರು ಕೆಲಸ ಮಾಡುತ್ತಿದ್ದಾರೆ ಅನ್ನುವುದು ಅತ್ಯಂತ ಹೆಮ್ಮೆಯ ಸಂಗತಿ.
   80ರ ದಶಕದಲ್ಲಿ ಇಸ್ಲಾಮೀ  ಶರೀಅತ್‍ನ ಬಗ್ಗೆ ಈ ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟಿಕೊಂಡಿತು. ಶಬಾನೋ ಪ್ರಕರಣ ಇದಕ್ಕೆ ಮೂಲ ಕಾರಣವಾಗಿತ್ತು. ಶರೀಅತ್‍ನ ಮೇಲೆ ಸವಾರಿ ಮಾಡುವುದಕ್ಕೆ ಈ ಪ್ರಕರಣವನ್ನು ಮಾಧ್ಯಮಗಳು ನೆಪವಾಗಿ ಬಳಸಿಕೊಂಡವು. ಶರೀಅತ್ ಎಂಬುದು ಈ ಕಾಲಕ್ಕೆ ಸಲ್ಲದ, ಪುರಾತನ ಕಾಲದ ಕಾನೂನು ಎಂದು ಅವು ವ್ಯಾಖ್ಯಾನಿಸಿದುವು. ಅಂಥ ಹೊತ್ತಲ್ಲಿ, ಇಸ್ಲಾಮೀ  ಶರೀಅತ್ ಅಂದರೆ ಏನು, ಅದಕ್ಕಿರುವ ಮಹತ್ವ, ಅದರ ಸಾರ್ವಕಾಲಿಕತೆಯ ಬಗ್ಗೆ ತಾರ್ಕಿಕವಾಗಿ ಮತ್ತು ಅತ್ಯಂತ ಆಧುನಿಕ ರೂಪದಲ್ಲಿ ಈ ದೇಶಕ್ಕೆ ಮನವರಿಕೆ ಮಾಡಿಸಿದ್ದೇ ಜಮಾಅತೆ ಇಸ್ಲಾಮೀ  ಹಿಂದ್.  ಶರೀಅತ್ ಎಂಬುದು ಕಾಲ ಬಾಹಿರ ಸಿದ್ಧಾಂತ ಎಂದು ಮುಸ್ಲಿಮರೂ ನಂಬುವಂತಾಗಿದ್ದ ಮತ್ತು ಶರೀಅತ್‍ನ ಕುರಿತಂತೆ ಯಾರಾದರೂ ಟೀಕೆಯ ಮಾತಾಡಿದರೆ ಅದಕ್ಕೆ ಉತ್ತರ ಕೊಡಲು ಏನೇನೂ ಜ್ಞಾನವಿಲ್ಲದ ಮುಸ್ಲಿಮ್ ಸಮುದಾಯದಲ್ಲಿ ಶರೀಅತ್‍ನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಜಮಾಅತ್ ತೀವ್ರವಾಗಿ ಶ್ರಮಿಸಿತು. ಮಾತ್ರವಲ್ಲ, ಈ ದೇಶದಲ್ಲಿ ಶರೀಅತ್‍ನ ಕುರಿತಂತೆ ಹರಡಲಾಗಿದ್ದ ಸುಳ್ಳುಗಳ ಪರದೆಯನ್ನು ಬಹುವಂಶ ಹರಿದು ಹಾಕುವಲ್ಲಿ ಯಶಸ್ವಿಯಾಯಿತು. ಒಂದು ಕಾಲದಲ್ಲಿ, ಶರೀಅತ್ ಅಂದರೆ ತಲೆ, ಕೈ, ಕಾಲು ತುಂಡರಿಸುವ ಶಿಕ್ಷೆಯೊಂದರ ಹೆಸರು ಎಂದು ವಾದಿಸುವಷ್ಟರ ಮಟ್ಟಿಗೆ ಅಜ್ಞಾನಿಯಾಗಿದ್ದ ಮುಸ್ಲಿಮ್ ಸಮುದಾಯವನ್ನು, ಶರೀಅತ್ ಕಾನೂನುಗಳ ಅಗತ್ಯ  ಈ ದೇಶಕ್ಕೆ ಇದೆ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ನಿಂತು ಆಗ್ರಹಿಸುವಷ್ಟರ ಮಟ್ಟಿಗೆ ಜ್ಞಾನಿಯಾಗಿಸಿದ ಕೀರ್ತಿ ಜಮಾಅತ್‍ಗೆ ಸಲ್ಲುತ್ತದೆ. ಇದರ ಜೊತೆಗೇ ಶರೀಅತ್ ಕಾನೂನುಗಳ ರಕ್ಷಣೆಗಾಗಿಯೇ ರಾಷ್ಟ್ರಮಟ್ಟದಲ್ಲಿ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ ನ  ಸ್ಥಾಪನೆಗಾಗಿ ಮುಂಚೂಣಿಯಲ್ಲಿ ನಿಂತು ಜಮಾಅತ್ ಶ್ರಮಿಸಿತಲ್ಲದೇ ಇವತ್ತೂ ಅದರ ಚಾಲಕ  ಶಕ್ತಿಯಾಗಿ ಕೆಲಸ ಮಾಡುತ್ತಿದೆ. ಹಲವು ಪಂಗಡ, ಗುಂಪುಗಳಲ್ಲಿ ವಿಭಜಿಸಿ ಹೋಗಿರುವ ಮುಸ್ಲಿಮ್ ಸಮುದಾಯವನ್ನು ಒಟ್ಟು ಸೇರಿಸಿ, ಅವುಗಳೊಳಗೆ ಐಕ್ಯತೆಯನ್ನು ಸೃಷ್ಟಿ ಮಾಡುವುದಕ್ಕಾಗಿ ಮುಸ್ಲಿಮ್ ಮಜ್ಲಿಸೆ ಮುಶಾವರತನ್ನು ಜಮಾಅತ್ ಹುಟ್ಟು ಹಾಕಿತು.
    ಇಷ್ಟಕ್ಕೂ 6 ದಶಕಗಳ ಹಿಂದೆ ಮುಸ್ಲಿಮ್ ಸಮುದಾಯದಲ್ಲಿ ಮಹಿಳೆಯ ಸ್ಥಾನ-ಮಾನ ಭಾರೀ ಆಧುನಿಕವಾಗಿಯೇನೂ ಇದ್ದಿರಲಿಲ್ಲ. ಮಹಿಳೆಯರನ್ನು ಮಸೀದಿಯಿಂದ ಶಾಲೆಯಿಂದ, ಉದ್ಯೋಗದಿಂದ ಮತ್ತು ಸಂಘಟನೆಗಳಿಂದ ಸಮುದಾಯಿ ದೂರ ಇಟ್ಟಿತ್ತು. ಮಹಿಳೆ ‘ಮನೆಯಿಂದ ಹೊರಬರುವುದು ಫಿತ್ನಕ್ಕೆ ದಾರಿಯಾಗುತ್ತದೆ' ಎಂದು ಬಲವಾಗಿ ನಂಬಿದ್ದ ಉಲೆಮಾಗಳು ಧಾರಾಳ ಇದ್ದರು. ಇಂಥ ಹೊತ್ತಲ್ಲಿ ಜಮಾಅತ್ ಮಹಿಳೆಯರ ನಿಜವಾದ ಸ್ಥಾನ-ಮಾನವನ್ನು ಇಸ್ಲಾಮಿನ ಅಧಿಕೃತ ಪುರಾವೆಗಳೊಂದಿಗೆ ಸಮಾಜದ ಮುಂದಿರಿಸಿತು. ಮಹಿಳೆಯಿಲ್ಲದೆ ಸಮುದಾಯದ ಅಭಿವೃದ್ಧಿ ಮತ್ತು ಬೌದ್ಧಿಕ ಬೆಳವಣಿಗೆ ಸಾಧ್ಯವಾಗಲಾರದು ಎಂದು ಜಮಾಅತ್ ಪ್ರತಿಪಾದಿಸಿತು. ಆಕೆಗೆ ಮನೆ ನಿರ್ವಹಣೆಯ ಜೊತೆಗೇ ಸಮಾಜ ನಿರ್ವಹಣೆಯಲ್ಲೂ ಪಾತ್ರ ಇದೆ ಎಂದು ಬಹಿರಂಗವಾಗಿ ಪ್ರತಿಪಾದಿಸಿತು. ಅಂದಿನ ವಾತಾವರಣದಲ್ಲಿ ಇಂಥದ್ದೊಂದು ಕರೆ ಸುಲಭದ್ದಾಗಿರಲಿಲ್ಲ. ಜಮಾಅತನ್ನು ಬಂಡುಕೋರ ಸಂಘಟನೆ’ ಎಂದು ಮೂದಲಿಸುವುದರಿಂದ ಹಿಡಿದು, ಹತ್ತು ಹಲವು ಆರೋಪಗಳಿಗೆ ಗುರಿ ಮಾಡಬಹುದಾದ ದೊಡ್ಡದೊಂದು ಸವಾಲು ಅದಾಗಿತ್ತು. ಆದರೆ ಜಮಾಅತ್ ಹಿಂಜರಿಯಲಿಲ್ಲ. ಸಮುದಾಯದಲ್ಲಿ ಮುಸ್ಲಿಮ್ ಮಹಿಳೆಯ ಸಬಲೀಕರಣಕ್ಕಾಗಿ, ಅವರಿಗೆ ಇಸ್ಲಾಮ್ ಒದಗಿಸಿರುವ ಗೌರವಾರ್ಹ ಸ್ಥಾನ-ಮಾನವನ್ನು ದೊರಕಿಸುವುದಕ್ಕಾಗಿ ನಿರಂತರವಾಗಿ ಶ್ರಮಿಸಿತು. ಇಸ್ಲಾಮಿನಲ್ಲಿ ಹೆಣ್ಣು ಹೇಗಿರಬೇಕು, ಆಕೆಯ ಕಾರ್ಯಕ್ಷೇತ್ರ ಯಾವುದು, ಪರ್ದಾದ ಅಗತ್ಯ, ವ್ಯಾಖ್ಯಾನಗಳೇನು.. ಎಂದು ಮುಂತಾಗಿ ಸಮಾಜವನ್ನು ತಿದ್ದುವ ತೀವ್ರ ಪ್ರಯತ್ನವನ್ನೂ ನಡೆಸಿತು. ಹೆಣ್ಣು ಮಕ್ಕಳಿಗಾಗಿಯೇ ಶಿಕ್ಷಣ ಸಂಸ್ಥೆಗಳನ್ನು ತೆರೆಯಿತು. ಲೌಕಿಕ ಮತ್ತು ಧಾರ್ಮಿಕ ಶಿಕ್ಷಣಗಳನ್ನು ಶಾಲಾ-ಕಾಲೇಜುಗಳಲ್ಲಿ ಜೊತೆಯಾಗಿ ಕೊಡುವ ಮೂಲಕ ಸಮಾಜಕ್ಕೆ ಹೊಸ ಮಾದರಿಯೊಂದನ್ನು ತೋರಿಸಿತು. ಇವೆಲ್ಲದರ ಪರಿಣಾಮವಾಗಿ ಕ್ರಮೇಣ ಮುಸ್ಲಿಮ್ ಸಮುದಾಯದಲ್ಲಿ ಮಾದರಿ ಮಹಿಳೆಯರು ತಯಾರಾಗ ತೊಡಗಿದರು. ಶಿಕ್ಷಿತ ಹೆಣ್ಣು ಮಕ್ಕಳು ಬೆಳೆಯ ತೊಡಗಿದರು. ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಅತ್ತೆಯಾಗಿ... ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾದರಿ ಹೆಣ್ಣು ಮಕ್ಕಳನ್ನು ತಯಾರಿಸಿ ಜಮಾಅತ್ ಸಮಾಜದ ಮುಂದಿಟ್ಟಿತು. ಜಮಾಅತ್‍ನ ಈ ಪ್ರಯತ್ನಗಳು ಸಮುದಾಯದ ಮೇಲೆ ಯಾವ ಬಗೆಯ ಪರಿಣಾಮ ಬೀರಿತೆಂದರೆ, ಜಮಾಅತನ್ನು ಒಪ್ಪದ ಸಂಘಟನೆಗಳು ಕೂಡ ಇದೇ ಮಾದರಿಯನ್ನು ಕ್ರಮೇಣ ಅವಳಡಿಸಿಕೊಂಡವು. ಸೆಕ್ಯುಲರ್ ಶಾಲೆಗಳು ಕೂಡ ಜಮಾಅತ್‍ನ ಶೈಕ್ಷಣಿಕ ಕಾರ್ಯ ಸೂಚಿಯನ್ನು ನಕಲು ಮಾಡಿಕೊಂಡವು.
   ಅಂದ ಹಾಗೆ, ಜಮಾಅತ್ ದೇಶೀಯವಾಗಿ ಮಾತ್ರ ಗಮನಹರಿಸಿದ್ದಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಾಗುವ ಸಕಲ ಬೆಳವಣಿಗೆಗಳ ಬಗ್ಗೆಯೂ ಜಮಾಅತ್ ಸದಾ ವೀಕ್ಷಿಸುತ್ತಲೇ ಕಾರ್ಯವೆಸಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಇಸ್ಲಾಮೀ  ಸಂಘಟನೆಗಳೊಂದಿಗೆ ಜಮಾಅತ್‍ಗೆ ಅತ್ಯುತ್ತಮ ಸಂಬಂಧ ಇದೆ. ಇಖ್ವಾನುಲ್ ಮುಸ್ಲಿಮೂನ್, ಟ್ಯುನೀಶ್ಯಾದ ಅನ್ನಹ್ದ್, ಟರ್ಕಿಯ ಏ.ಕೆ. ಪಾರ್ಟಿ.. ಸಹಿತ ಜಗತ್ತಿನ ಎಲ್ಲ ಇಸ್ಲಾಮೀ  ವಿಚಾರಧಾರೆಗಳುಳ್ಳ ಪಕ್ಷ ಮತ್ತು ವ್ಯಕ್ತಿಗಳೊಂದಿಗೆ ಜಮಾಅತ್ ವಿಚಾರ- ವಿನಿಮಯಗಳನ್ನು ನಡೆಸುತ್ತಿದೆ. ಫೆಲೆಸ್ತೀನ್, ಇರಾಕ್, ಸಿರಿಯಾ, ಇರಾನ್, ಅಮೇರಿಕ, ಬ್ರಿಟನ್... ಮುಂತಾಗಿ ಜಗತ್ತಿನ ಎಲ್ಲೇ ಮಾನವ ಹಕ್ಕುಗಳ ಮೇಲೆ ಹಲ್ಲೆ ನಡೆದರೂ ಜಮಾಅತ್  ತಕ್ಷಣ ಪ್ರತಿಭಟನೆ ಸಲ್ಲಿಸುತ್ತದೆ. ಮೌಲ್ಯಗಳ ಪ್ರತಿಪಾದನೆಯಲ್ಲಿ ಜಮಾಅತ್‍ಗೆ ಅತ್ಯಂತ ಎತ್ತರದ ಸ್ಥಾನವಿದೆ. ಒಂದು ರೀತಿಯಲ್ಲಿ, ಜಮಾಅತ್ ಈ ದೇಶದ ಮುಸ್ಲಿಮರಷ್ಟೇ ಅಲ್ಲ, ಸರ್ವ ಧರ್ಮೀಯರೂ ಮೆಚ್ಚುವ ಪ್ರಭಾವಿ ಸಂಘಟನೆಯಾಗಿ ಇವತ್ತು ಬೆಳೆದು ನಿಂತಿದೆ. ಅದರ ಸಂವಿಧಾನ ಅತ್ಯಂತ ಪಾರದರ್ಶಕವಾಗಿದೆ. ಸರ್ವರಿಗೂ ಓದಲು ಸಿಗುವಷ್ಟು ಮುಕ್ತವಾಗಿದೆ. ಅದರಲ್ಲಿ ನಿಗೂಢವೆಂಬುದು ಯಾವುದೂ ಇಲ್ಲ. ಆದ್ದರಿಂದಲೇ, ಈ ದೇಶದ ಎಲ್ಲಾ ಧರ್ಮೀಯರೂ ಜಮಾಅತನ್ನು ಮುಂಚೂಣಿಯ ಸಂಘಟನೆಯಾಗಿ ಇವತ್ತು ಪರಿಗಣಿಸುತ್ತಿರುವುದು.ಈ ದೇಶಕ್ಕೆ ಪರ್ಯಾಯ ರಾಜಕೀಯ ವ್ಯವಸ್ಥೆಯೊಂದನ್ನು ಶಿಫಾರಸ್ಸು ಮಾಡಿದ ಸಂಘಟನೆಯಿದ್ದರೆ ಅದು ಜಮಾಅತೆ ಇಸ್ಲಾಮೀ  ಹಿಂದ್ ಮಾತ್ರ. ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕ, ನೈತಿಕ... ಮುಂತಾದ ಎಲ್ಲಾ ಕ್ಷೇತ್ರಗಳಿಗೂ ಇಸ್ಲಾಮೀ  ವಿಚಾರಧಾರೆಗಳನ್ನೊಳಗೊಂಡ ಪರ್ಯಾಯ ವ್ಯವಸ್ಥೆಯನ್ನು ಅತಿ ಪ್ರಬಲವಾಗಿ ಮಂಡಿಸಲು ಜಮಾಅತ್‍ಗೆ ಸಾಧ್ಯವಾಗಿದೆ. ಇಸ್ಲಾಮ್ 1500 ವರ್ಷಗಳ ಹಿಂದಿನ ಕಾಲಕ್ಕೆ ಮಾತ್ರವಲ್ಲ ಈ 21ನೇ ಶತನಮಾನಕ್ಕೂ ಅತ್ಯಂತ ಯೋಗ್ಯ, ಅತ್ಯಂತ ಪ್ರಸ್ತುತ ಮತ್ತು ಅತ್ಯಂತ ಅನಿವಾರ್ಯವೆಂದು ಪುರಾವೆಗಳ ಮೂಲಕ ಸಾಬೀತುಪಡಿಸುವ ಶ್ರಮದಲ್ಲಿ ಜಮಾಅತ್ ಇವತ್ತು ಸಫಲವಾಗಿದೆ. ವಿಚಾರಗೋಷ್ಠಿ, ಸಂವಾದಗಳು, ನಾಟಕ, ಬರಹಗಳು.. ಮುಂತಾದ ವಿವಿಧ ಮಾಧ್ಯಮಗಳನ್ನು ಬಳಸಿ ಅದು ಕಳೆದ 65 ವರ್ಷಗಳಿಂದ ಇಸ್ಲಾಮಿನ ಸಂದೇಶವನ್ನು ನೀಡುತ್ತಾ ಬಂದಿರುವುದು ಇವತ್ತಿನ ದಿನಗಳಲ್ಲಿ ಭಾರೀ ಫಲವನ್ನು ಕೊಡುತ್ತಿದೆ. ನಮ್ಮ ವೇದಿಕೆಗಳಿಗೆ ಬರುತ್ತಿರುವ ಸಮಾಜದ ಪ್ರಭಾವಿ ವ್ಯಕ್ತಿಗಳೇ ಒಂದು ಹಂತದವರೆಗೆ ಇಸ್ಲಾಮೀ  ಪರ್ಯಾಯವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬಡ್ಡಿ ಮುಕ್ತ ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿವಿಧ ರಾಜ್ಯಗಳಲ್ಲಿ ಸಣ್ಣ ಮಟ್ಟದಲ್ಲಾದರೂ ಪ್ರಾಯೋಗಿಕವಾಗಿ ಜಾರಿಗೊಳಿಸಿ ಯಶಸ್ವಿಯಾಗಿರುವುದನ್ನು ಕಂಡು ಅಸಂಖ್ಯಾತ ಮಂದಿ ಬೆರಗಾಗಿದ್ದಾರೆ. ಬಡ್ಡಿಮುಕ್ತ ವ್ಯವಸ್ಥೆ ಸಾಧ್ಯವೇ ಇಲ್ಲ ಅನ್ನುವ ವಾತಾವರಣದಲ್ಲಿ ಅದು ಸಾಧ್ಯ ಎಂದು ವಾದಿಸಿದ್ದಲ್ಲದೇ ಪ್ರಾಯೋಗಿಕವಾಗಿ ತೋರಿಸಿಕೊಡುವಲ್ಲೂ ಜಮಾಅತ್ ಸಫಲವಾಗಿರುವುದು ಸಮಾಜವನ್ನು ಆಕರ್ಷಿಸಿದೆ. ಆದ್ದರಿಂದಲೇ ಮದ್ಯ ಮುಕ್ತ, ಜೂಜು ಮುಕ್ತ, ಅನೈತಿಕತೆ ಮುಕ್ತ, ಅತ್ಯಾಚಾರ ಮುಕ್ತ.. ಮುಂತಾದ ಕೆಡುಕು ಮುಕ್ತ ಸಮಾಜದ ಕಲ್ಪನೆಯನ್ನು ಜಮಾಅತ್ ಮುಂದಿಟ್ಟಾಗ ಸಮಾಜದಿಂದ ಭಾರೀ ಬೆಂಬಲ ಸಿಕ್ಕಿದ್ದು. ಇವೆಲ್ಲ ಜಮಾಅತ್‍ನ ಕಳೆದ 65 ವರ್ಷಗಳ ನಿರಂತರ ಪ್ರಾಮಾಣಿಕ, ಪಾರದರ್ಶಕ ನಡೆ-ನುಡಿಗಳಿಂದ ಸಾಧ್ಯವಾಯಿತು ಅನ್ನುವುದರಲ್ಲಿ ಅನುಮಾನಗಳಿಲ್ಲ.
   ಅಷ್ಟೇ ಅಲ್ಲ
   ಮದೀನಕ್ಕೆ ಹೋಗುವಂತೆ ಪ್ರವಾದಿಯವರನ್ನು ನಿರ್ಬಂಧಿಸಿದ, ತರತರದ ಹಿಂಸೆ ಕೊಟ್ಟ ಅದೇ ಮಕ್ಕಾದ ಮಂದಿ ಬರಗಾಲಕ್ಕೆ ತುತ್ತಾದಾಗ ಅವರಿಗೆ ಆಹಾರ ಧಾನ್ಯಗಳನ್ನು ಕಳುಹಿಸಿ ಕೊಟ್ಟ ಕರುಣಾಮಯಿ ಪ್ರವಾದಿಯವರ ನಿಲುವನ್ನು ಮಾದರಿಯಾಗಿಟ್ಟುಕೊಂಡು ಜಮಾಅತ್ ಈ ದೇಶದಲ್ಲಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದು ಪ್ರವಾದಿಯನ್ನು ಎಲ್ಲರ ಪ್ರವಾದಿ ಎಂದು ಪರಿಚಯಿಸುವಂತೆಯೇ , ಸೇವೆಯನ್ನು ಕೂಡಾ ಎಲ್ಲರ ಸೇವೆ ಎಂದೇ ಪರಿಚಯಿಸಿತು. ನಿಜವಾಗಿ 6 ದಶಕಗಳ ಹಿಂದೆ ಮುಸ್ಲಿಮ್ ಸಮುದಾಯದಲ್ಲಿ ಸಮಾಜಸೇವೆಯ ಕಲ್ಪನೆ ಬಹುತೇಕ ಇದ್ದಿರಲೇ ಇಲ್ಲ. ಒಂದು ಕಡೆ, ಸಮುದಾಯವು ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದರೆ ಇನ್ನೊಂದು ಕಡೆ, ಸಮುದಾಯದ ಶ್ರೀಮಂತರು ತಮ್ಮ ಪಾಡಿಗೆ ತಾವಿದ್ದರು. ತಮಗೂ ಸಮುದಾಯಕ್ಕೂ ಏನಾದರೂ ಸಂಬಂಧ ಇದೆ ಎಂಬ ಪ್ರಜ್ಞೆ ಬಹುತೇಕ ಅವರಲ್ಲಿ ಸತ್ತುಹೋಗಿತ್ತು. ಇಂಥ ಹೊತ್ತಲ್ಲಿ ಸಮಾಜ ಸೇವೆಯ ಬಗ್ಗೆ, ಝಕಾತ್‍ನ ಕುರಿತಂತೆ ದೊಡ್ಡ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಜಮಾಅತ್ ಹಮ್ಮಿಕೊಂಡಿತು. ಝಕಾತ್‍ನ ನಿಜವಾದ ಪರಿಚಯವನ್ನು ಸಮುದಾಯಕ್ಕೆ ತಿಳಿಯಪಡಿಸಿತು. ಶ್ರೀಮಂತರ ದುಡ್ಡಿನಲ್ಲಿ ಬಡವರಿಗೆ ಕಡ್ಡಾಯವಾದ ಪಾಲು ಇದೆ ಅನ್ನುವ ಸಿದ್ಧಾಂತವನ್ನು ಸಮುದಾಯದ ಮುಂದಿಟ್ಟಾಗ ಮೊದ ಮೊದಲು ಮುಸ್ಲಿಮ್ ಸಮುದಾಯ ಇದನ್ನು ಹೊಸ ವಿಚಾರವೆಂಬಂತೆ ಅಚ್ಚರಿಯಿಂದ ನೋಡಿತ್ತು. ಝಕಾತನ್ನು  ಸಮುದಾಯದಲ್ಲಿ ಹೇಗೆ ಸದುಪಯೋಗಪಡಿಸಬಹುದು ಎಂಬುದನ್ನು ಅತ್ಯಂತ ಕ್ರಾಂತಿಕಾರಿ ರೂಪದಲ್ಲಿ ಈ ದೇಶದಲ್ಲಿ ವ್ಯಾಖ್ಯಾನಿಸಿದ್ದೇ ಜಮಾಅತೆ ಇಸ್ಲಾಮೀ . ಆ ವರೆಗೆ ಝಕಾತ್ ಎಂಬುದನ್ನು ಸಮುದಾಯದ ಶ್ರೀಮಂತರು ಸುನ್ನತ್‍ನಂತೆ ಪರಿಗಣಿಸಿದ್ದರು. ರಮಝಾನ್‍ನಲ್ಲಿ ಭಿಕ್ಷುಕರಿಗೆ ಕೊಡುವ ದುಡ್ಡನ್ನೇ ಝಕಾತ್ ಎಂದು ನಂಬಿದ್ದರು. ಜಮಾಅತ್ ಝಕಾತ್‍ನ ನಿಜವಾದ ಪರಿಚಯವನ್ನು ಬರಹ, ಭಾಷಣಗಳ ಮೂಲಕ ದೇಶಾದ್ಯಂತ ಮಾಡಿತಲ್ಲದೆ ಸಮಾಜ ಸೇವಾ ವಿಭಾಗವನ್ನು ದೇಶದೆಲ್ಲೆಡೆ ತೆರೆದು ಆಪದ್ಬಾಂದವನ ಪಾತ್ರ ನಿರ್ವಹಿಸಿತು. ಇವತ್ತಿಗೂ ಇದು ಮುಂದುವರಿಯುತ್ತಿದೆ. 21ನೇ ಶತನಮಾನದಲ್ಲಿ ಜಮಾಅತ್‍ನ ಅತಿದೊಡ್ಡ ಸೇವಾ ಯೋಜನೆಯೆಂದರೆ ವಿಷನ್ 2016. ಇದು 5000 ಕೋಟಿ ರೂಪಾಯಿಯ ಯೋಜನೆ ಆಗಿದ್ದು ಈ ಮೂಲಕ ಸಮುದಾಯವನ್ನು ಸರ್ವ ರೀತಿಯಲ್ಲೂ ಸಬಲೀಕರಣಗೊಳಿಸಲು ಜಮಾಅತ್ ತೀವ್ರವಾಗಿ ಶ್ರಮಿಸುತ್ತಿದೆ. ಶಾಲೆ, ಆಸ್ಪತ್ರೆ, ಮನೆ ಮುಂತಾದವುಗಳ ನಿರ್ಮಾಣ ಕಾರ್ಯಕ್ಕಾಗಿ ಈ ಯೋಜನೆಯ ಮೂಲಕ ಪ್ರಯತ್ನಿಸಲಾಗುತ್ತಿದೆ. 
    ಸಣ್ಣ ಪುಟ್ಟ ದೌರ್ಬಲ್ಯಗಳಿದ್ದರೂ ಪ್ರವಾದಿಯನ್ನು ಅತ್ಯಂತ ಸಮಗ್ರವಾಗಿ ಅನುಸರಿಸುವ ಮಾದರಿ ತಂಡವೊಂದನ್ನು ಕಟ್ಟಲು ಜಮಾಅತೆ ಇಸ್ಲಾಮೀ  ಹಿಂದ್‍ಗೆ ಇವತ್ತು ಸಾಧ್ಯವಾಗಿದೆ ಎಂಬುದು ಹೆಮ್ಮೆಯ ಸಂಗತಿ.
   ಬಡ್ಡಿ ವ್ಯವಹಾರ ಮಾಡುವ, ವರದಕ್ಷಿಣೆ ಪಡೆಯುವ, ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಒಬ್ಬನೇ ಒಬ್ಬ ಸದಸ್ಯ ಜಮಾಅತ್‍ನಲ್ಲಿಲ್ಲ. ಅದು ಮಾದರಿ ಸಮಾಜವೊಂದನ್ನು ಕಟ್ಟುವ ಗುರಿಯೊಂದಿಗೆ ಸ್ಥಾಪನೆಗೊಂಡಿದೆ. ಮದೀನದ 80% ಯಹೂದಿಯರು 20% ಇದ್ದ ಮುಸ್ಲಿಮರನ್ನು ಪ್ರೀತಿಸಿದ್ದರೆ, ಪ್ರವಾದಿಯನ್ನು ತಮ್ಮ ಆಡಳಿತಾಧಿಕಾರಿಯಾಗಿ ಅವರು ನೇಮಿಸಿದ್ದರೆ ಅದು ಈ ದೇಶದಲ್ಲೂ ಸಾಧ್ಯ ಎಂದು ಜಮಾಅತ್ ಬಲವಾಗಿ ನಂಬುತ್ತದೆ. ಅಂದು ಯಹೂದಿಯರು ಮುಸ್ಲಿಮರನ್ನು ಪ್ರೀತಿಸಿದ್ದು ಅವರ ಮಾದರಿ ಬದುಕಿಗಾಗಿ. ಅವರನ್ನು ಆಡಳಿತ ನಡೆಸುವಂತೆ ಆಹ್ವಾನಿಸಿದ್ದು ಭ್ರಷ್ಟ ಮುಕ್ತ ಜೀವನ ಕ್ರಮಕ್ಕಾಗಿ. 20% ಇದ್ದ ಮುಸ್ಲಿಮರು 80% ಇದ್ದ ಯಹೂದಿಯರ ವಿರುದ್ಧ ಅಂದು ಬಾಂಬ್ ಸ್ಫೋಟಿಸಿದ್ದಾಗಲಿ, ಕೋಮುಗಲಭೆ ನಡೆಸಿದ್ದಾಗಲಿ ಒಮ್ಮೆಯೂ ನಡೆದಿಲ್ಲ. ಇದನ್ನೇ ಈ ದೇಶಕ್ಕೆ ಮಾದರಿ ಎಂದು ಜಮಾಅತ್ ಪ್ರತಿಪಾದಿಸುತ್ತದೆ. ನಿಜವಾಗಿ ಸಮಾಜವನ್ನು ಪ್ರವಾದಿಯವರು(ಸ) ಸಬಲೀಕರಣಗೊಳಿಸಿದ ವಿಧಾನ ಅದು. ಜಮಾಅತ್ ಆ ವಿಧಾನವನ್ನೇ ಅಳವಡಿಸಿಕೊಂಡಿದೆ. ಮುಸ್ಲಿಮರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಧಾರ್ಮಿಕವಾಗಿ ಸುಶಿಕ್ಷಿತರು ಮತ್ತು ಪ್ರಬಲರಾದಾಗ ಮಾತ್ರ ಅವರಿಂದ ಆರೋಗ್ಯಪೂರ್ಣ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಅದು ನಂಬುತ್ತದೆ. ಆರ್ಥಿಕವಾಗಿ ತೀರಾ ದುರ್ಬಲವಾಗಿರುವ, ಧಾರ್ಮಿಕವಾಗಿ ಅತ್ಯಲ್ಪವಷ್ಟೇ ತಿಳಿದಿರುವ ಮತ್ತು ಸಾಮಾಜಿಕವಾಗಿ ಕುಸಿದು ಹೋಗಿರುವ ಸಮೂಹವೊಂದನ್ನು ಕೇವಲ ರಾಜಕೀಯವಾಗಿ ಮೇಲೆತ್ತಲು ಯತ್ನಿಸುವುದು ಅವೈಜ್ಞಾನಿಕ ಎಂದು ಜಮಾಅತ್ ಪ್ರತಿಪಾದಿಸುತ್ತದೆ. ಆದ್ದರಿಂದಲೇ ಜಮಾಅತ್ ಆರ್ಥಿಕ ಕ್ಷೇತ್ರದ ಸಬಲೀಕರಣಕ್ಕಾಗಿ ಬಡ್ಡಿಮುಕ್ತ ಸಾಲ ನಿಧಿಗಳನ್ನು, ಅಸಂಖ್ಯ ಶಿಕ್ಷಣ ಸಂಸ್ಥೆಗಳನ್ನು, ಧಾರ್ಮಿಕ ಜಾಗೃತಿಯನ್ನು ಒಟ್ಟೊಟ್ಟಿಗೆ ಬೆಳೆಸುತ್ತಾ, ಈ ಎಲ್ಲ ರಂಗಗಳಲ್ಲಿ ಸಬಲರಾಗುವ ಜೊತೆಜೊತೆಗೇ ರಾಜಕೀಯ ರಂಗದಲ್ಲೂ ಪ್ರಜ್ಞಾವಂತರಾಗುವ ಸಮೂಹವೊಂದನ್ನು ಕಟ್ಟಲು ಶ್ರಮಿಸುತ್ತಿದೆ.
    ನಿಜವಾಗಿ, ಮುಸ್ಲಿಮರು ಅಲ್ಪಸಂಖ್ಯಾತರಾಗಿರುವ ದೇಶದಲ್ಲಿ ಶಾಂತಿಯ ವಾತಾವರಣ ಇದ್ದರಷ್ಟೇ ಅವರಿಗೆ ಅಲ್ಲಾಹನ ಧರ್ಮವನ್ನು, ಅವನ ಪ್ರವಾದಿಯನ್ನು ಪರಿಚಯಿಸಲು ಸಾಧ್ಯ ಎಂಬುದು ಜಮಾಅತ್‍ನ ನಿಲುವು. ಹುದೈಬಿಯಾ ಒಪ್ಪಂದದ ಸಂದರ್ಭದಲ್ಲಿ ಬಿಸ್ಮಿಲ್ಲಾಹಿರ್ರಹ್‍ಮಾನಿರ್ರಹೀಮ್ ಮತ್ತು ಮುಹಮ್ಮದು ರ್ರಸೂಲುಲ್ಲಾಹ್ ಎಂಬೆರಡು ಪದಗಳನ್ನು ಒಪ್ಪಂದ ಪತ್ರದಲ್ಲಿ ಬರೆಯುವುದನ್ನು ವಿರೋಧಿಗಳು ನಿರಾಕರಿಸಿದಾಗ ಪ್ರವಾದಿ ಅವೆರಡೂ ಪದಗಳನ್ನು ಕಾಗದದಿಂದ ಅಳಿಸಿ ಹಾಕಿದ್ದರು. ನಿಜವಾಗಿ ಆ ಎರಡು ಪದಗಳನ್ನು  ಭೂಮಿಯಲ್ಲಿ ನೆಲೆ ನಿಲ್ಲಿಸುವುದಕ್ಕಾಗಿಯೇ ಆಗಮಿಸಿದ್ದ ಪ್ರವಾದಿ, ಶಾಂತಿಯ ವಾತಾವರಣದ ನಿರ್ಮಾಣಕ್ಕಾಗಿ ಒಂದು ಹಂತದ ವರೆಗೆ ಅದರಲ್ಲಿ ರಾಜಿಯಾಗಲು ಮುಂದಾದರು. ಆ ರಾಜಿ ಆ ಬಳಿಕ ಅಭೂತ ಪೂರ್ವ ಬದಲಾವಣೆಗೆ ನಾಂದಿ ಹಾಡಿತು. ಇಸ್ಲಾಮನ್ನು ಅರಿತುಕೊಳ್ಳುವುದಕ್ಕೆ ವಿರೋಧಿಗಳಿಗೆ ಶಾಂತಿಯ ವಾತಾವರಣ ಅವಕಾಶ ಒದಗಿಸಿತು. ಇದನ್ನೇ ಅಲ್ಲಾಹನು ಸ್ಪಷ್ಟವಾದ ವಿಜಯ ಎಂದು ಸಾರಿದ್ದು. (48:1) ಜಮಾಅತೆ ಇಸ್ಲಾಮೀ  ಹಿಂದ್ ಇಂಥದ್ದೊಂದು ವಾತಾವರಣದಲ್ಲಿ ಕೆಲಸ ಮಾಡಲು ಬಯಸುತ್ತದೆ. ಇಸ್ಲಾಮನ್ನು ಪರಿಚಯಿಸಲು, ಮದೀನದ ಯಹೂದಿ ಸಮೂಹದಂಥ ಇಸ್ಲಾಮ್ ಪ್ರೇಮಿ ಸಮಾಜ ಇಲ್ಲಿ ಬೆಳೆದು ಬರಲು ಬಿಗುವಿನ ವಾತಾವರಣಕ್ಕಿಂತ ಶಾಂತ ವಾತಾವರಣ ಯೋಗ್ಯ ಎಂದು ಅದು ನಂಬುತ್ತದೆ. ಆ ಮಾದರಿಯನ್ನು ಎದುರಿಟ್ಟು ಕೊಂಡೇ ಅದು ಯೋಜನೆಯನ್ನು ರೂಪಿಸುತ್ತದೆ.
   ಏನೇ ಆಗಲಿ, ಜಮಾಅತೆ ಇಸ್ಲಾಮೀ  ಹಿಂದ್ ಎಂಬ ಭಾರತದ ಇಸ್ಲಾಮೀ  ಸಂಘಟನೆಯು ಇವತ್ತು ಈ ದೇಶದ ಸರಕಾರಕ್ಕೇ ಸಲಹೆ ಕೊಡುವಷ್ಟು, ಈ ದೇಶದ ಮುಸ್ಲಿಮ್ ಸಂಘಟನೆಗಳಿಗೆ ನೇತೃತ್ವ ಕೊಡುವಷ್ಟು, ದೇಶದ ನಾಗರಿಕರ ಮುಂದೆ ಇಸ್ಲಾಮೀ  ವಿಚಾರಧಾರೆಗಳನ್ನು ಸಮರ್ಥ ಪರ್ಯಾಯವಾಗಿ ಬಿಂಬಿಸುವಷ್ಟು ಬೃಹತ್ತಾಗಿ ಬೆಳೆದು ನಿಂತಿದೆ. ಈ ಸಮುದಾಯದ ಸಬಲೀಕರಣದ ಪ್ರಶ್ನೆ ಬಂದಾಗ, ಕೋಮು ಸಾಮರಸ್ಯದ ಬಗ್ಗೆ ಪ್ರಶ್ನೆಗಳು ಎದ್ದಾಗ, ಸಾಮಾಜಿಕ, ನೈತಿಕ ಪಿಡುಗುಗಳ ಬಗ್ಗೆ ಚರ್ಚೆ ಉದ್ಭವವಾದಾಗ.. ಹೀಗೆ ಎಲ್ಲ ಸಂದರ್ಭಗಳಲ್ಲೂ ಜಮಾಅತ್ ಮಂಡಿಸುವ ಅಭಿಪ್ರಾಯಗಳಿಗಾಗಿ ದೇಶದ ಮಂದಿ ಕಾಯುವಷ್ಟು ತನ್ನ ಇಮೇಜನ್ನು ಜಮಾಅತೆ ಇಸ್ಲಾಮೀ  ಹಿಂದ್ ವೃದ್ಧಿಸಿಕೊಂಡಿದೆ. ಭ್ರಷ್ಟಾಚಾರ ಮುಕ್ತ, ವರದಕ್ಷಿಣೆ ಮುಕ್ತ, ಮದ್ಯ, ಬಡ್ಡಿ, ಜೂಜು ಮುಕ್ತ.. ಬೃಹತ್ ಕಾರ್ಯಕರ್ತರ ಗುಂಪನ್ನು ಜಮಾಅತ್ ಇವತ್ತು ಈ ದೇಶದಾದ್ಯಂತ ತಯಾರಿಸಿದೆ. ಅಂಥದ್ದೊಂದು ಮಾದರಿ ಗುಂಪನ್ನು ಈ ದೇಶದಲ್ಲಿ ಇತರ ಯಾವ ಸಂಘಟನೆಗಳಿಗೂ ತಯಾರಿಸಲು ಈ ವರೆಗೂ ಸಾಧ್ಯವಾಗಿಲ್ಲ  ಎಂಬುದೇ ಜಮಾಅತ್‍ನ ಹೆಗ್ಗಳಿಕೆ. ಈ ಕಾರಣದಿಂದಲೇ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಲಯದಲ್ಲೂ ಇದು ಸಾಧ್ಯ ಎಂದು ಜಮಾಅತ್ ಪ್ರತಿಪಾದಿಸುವುದು. ದೇವಭಯವನ್ನು ವ್ಯವಸ್ಥೆಯ ಅಡಿಗಲ್ಲಾಗಿ ಒಪ್ಪಿಕೊಂಡು ದೇವ ನಿಯಮಗಳನ್ನು ಪಾಲಿಸುವ ವ್ಯವಸ್ಥೆಯೊಂದು ಜಾರಿಗೆ ಬಂದರೆ, ಸರ್ವ ಕೆಡುಕುಗಳಿಂದಲೂ ಮುಕ್ತವಾದ ಕಲ್ಯಾಣ ರಾಷ್ಟ್ರವೊಂದು ನಿರ್ಮಾಣವಾಗಲು ಸಾಧ್ಯ ಎಂದು ಜಮಾಅತ್ ಪ್ರತಿಪಾದಿಸುತ್ತಾ ಬಂದಿದೆ. ಮುಂದೆಯೂ ಅದರ ನಿಲುವು ಇದುವೇ.
 

Tuesday, February 5, 2013

ಮುಸ್ಲಿಮರನ್ನು ನಿಂದಿಸುವುದಕ್ಕೆ ಯಾಕೆ ಅವಕಾಶ ಮಾಡಿಕೊಟ್ಟಿರಿ ಕಮಲ್?

ಫೈರ್
ಪರ್ಝಾನಿಯಾ
ಡಾ ವಿನ್ಸಿ ಕೋಡ್
ಆರಕ್ಷಣ್
ಒರೇ ಒರು ಗ್ರಾಮತ್ತಿಲ್..
  ಮುಂತಾದ ಸಿನಿಮಾಗಳೆಲ್ಲ ಈ ದೇಶದಲ್ಲಿ ಈ ಹಿಂದೆ ನಿಷೇಧಕ್ಕೆ ಒಳಗಾಗಿತ್ತಲ್ಲ, ಅದಕ್ಕೆ ಯಾರು ಕಾರಣ; ಮುಸ್ಲಿಮರೇ? ವಿಶ್ವರೂಪಮ್ ಸಿನಿಮಾದ ಸುತ್ತ ಎದ್ದಿರುವ ವಿವಾದದ ಹೊಣೆಯನ್ನು ಮುಸ್ಲಿಮರ ತಲೆಗೆ ಕಟ್ಟಿ, ಕಮಲ್ ಹಾಸನ್‍ರನ್ನು ದಿವಾಳಿಯ ಅಂಚಿಗೆ ನೂಕಿದ ಖಳರಂತೆ ಚಿತ್ರಿಸುವವರೆಲ್ಲ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ನೋಡಿದರೇನು? ಹಾಗಾದರೆ, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಪ್ರಾರಂಭಿಸಲಾದ 'ಸೇತು ಸಮುದ್ರ' ಯೋಜನೆಯನ್ನು ಕೇಂದ್ರ ಸರಕಾರ ಕೈ ಬಿಟ್ಟಿರುವುದಕ್ಕೆ ಯಾವ ವ್ಯಾಖ್ಯಾನ ಕೊಡಬೇಕು? ಈ ದೇಶದ ಬೊಕ್ಕಸಕ್ಕೆ ಬಿಜೆಪಿ ಮತ್ತು ಪರಿವಾರವು ಕೋಟ್ಯಂತರ ರೂಪಾಯಿಗಳನ್ನು ನಷ್ಟ ಮಾಡಿದೆ ಎಂದು ಹೇಳಲಾದೀತೇ? ಇಷ್ಟಕ್ಕೂ, ವಿಶ್ವರೂಪಮ್ ಸಿನಿಮಾದ ವಿರುದ್ಧ ಮಾಡಲಾದ ಪ್ರತಿಭಟನೆ ಮತ್ತು ನಿಷೇಧದ ಕ್ರಮವನ್ನು, 'ತಾಲಿಬಾನ್ ಮನಸ್ಥಿತಿ' ಎಂದು ವ್ಯಾಖ್ಯಾನಿಸಿದ ಬಿಜೆಪಿಯು (ಸಂಸದ ತರುಣ್ ವಿಜಯ್) 1996ರಲ್ಲಿ ಮಾಡಿದ್ದಾದರೂ ಏನು?
  ಶಬಾನಾ ಆಝ್ಮಿ ಮತ್ತು ನಂದಿತಾ ದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ‘ಫೈರ್’ ಚಿತ್ರದ ವಿರುದ್ಧ 1996ರಲ್ಲಿ ಬಿಜೆಪಿ ಮತ್ತು ಶಿವಸೇನೆಗಳು ಬೀದಿಗಿಳಿದವು. ಚಿತ್ರವು ಸಲಿಂಗ ಕಾಮಕ್ಕೆ ಸಂಬಂಧಿಸಿದ್ದಾಗಿದ್ದು, ಇದು ಭಾರತೀಯತೆಗೆ ವಿರುದ್ಧ ಎಂದು ಅವು ಸಾರಿದುವು. ದೆಹಲಿ ಮತ್ತು ಮುಂಬೈಯ ಸಿನಿಮಾ ಮಂದಿರದೊಳಗೆ ನುಗ್ಗಿ ಅಲ್ಲಿರುವುದನ್ನೆಲ್ಲಾ ಧ್ವಂಸ ಮಾಡಿದುವು. ಫೆಬ್ರವರಿ 2000ದಲ್ಲಿ  ವಾರಣಾಸಿಯಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ  ದೀಪಾ ಮೆಹ್ತಾರ ವಾಟರ್ ಸಿನಿಮಾದ ವಿರುದ್ಧ ಇದೇ ಬಿಜೆಪಿ ಮತ್ತು ಸಂಘ ಪರಿವಾರದ ಮಂದಿ ಪ್ರತಿಭಟಿಸಿದರು. ಉತ್ತರ ಪ್ರದೇಶದ ಬಿಜೆಪಿ ಶಾಸಕ ಶ್ಯಾಮ್ ದೇವ್ ಚೌಧರಿ, ರಾಜ್ಯ ಘಟಕದ ಕೋಶಾಧಿಕಾರಿ ಅಶೋಕ್ ಧವನ್ ಮತ್ತು ಆಗಿನ ಉತ್ತರ ಪ್ರದೇಶ ಸರಕಾರದ ಹಣಕಾಸು ಸಚಿವರ ಪತ್ನಿ ಜ್ಯೋತ್ಸ್ನಾ ಶ್ರೀವಾಸ್ತವ್‍ರ ನೇತೃತ್ವದಲ್ಲಿದ್ದ 500 ಮಂದಿಯ ಗುಂಪು ವಾಟರ್ ಸಿನಿಮಾದ ಚಿತ್ರೀಕರಣಕ್ಕೆ ಅಡ್ಡಿಪಡಿಸಿತ್ತಲ್ಲದೇ, ಸೆಟ್ ಅನ್ನು ಧ್ವಂಸ ಮಾಡಿತು. ‘ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸದಿದ್ದರೆ ಶವವನ್ನು ಕೊಂಡೊಯ್ಯ ಬೇಕಾದೀತು’ ಎಂದು ವಿಹಿಂಪದ ನಾಯಕ ಅಶೋಕ್ ಸಿಂಘಾಲ್ ಎಚ್ಚರಿಸಿದರು. ಇವೆಲ್ಲ ಏನು, ಯಾವ ಮನಸ್ಥಿತಿ? ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಈ ಮಟ್ಟದ ದ್ವಂದ್ವವೇಕೆ?
  ಇದೊಂದೇ ಅಲ್ಲ,
ಒರೇ ಒರು ಗ್ರಾಮತ್ತಿಲ್ ಎಂಬ ಸಿನಿಮಾ 1989ರಲ್ಲಿ ಬಿಡುಗಡೆಯಾಗುತ್ತದೆ. ತಮಿಳುನಾಡಿನ ವಿದ್ಯಾಸಂಸ್ಥೆಗಳಲ್ಲಿರುವ ಜಾತಿಯಾಧಾರಿತ ಮೀಸಲಾತಿಯನ್ನು ಪ್ರಶ್ನಿಸುವ ಈ ಸಿನಿಮಾದ ವಿರುದ್ಧ ಅಂಬೇಡ್ಕರ್ ಪೀಪಲ್ಸ್ ಮೊವ್‍ಮೆಂಟ್ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗಳು ತೀವ್ರ ಪ್ರತಿಭಟನೆ ನಡೆಸುತ್ತವೆ. ಸಿನಿಮಾಕ್ಕೆ ತಮಿಳುನಾಡಿನಲ್ಲಿ ನಿಷೇಧ ಹೇರಲಾಗುತ್ತದೆ. 2006ರಲ್ಲಿ ಡಾ ವಿನ್ಸಿ ಕೋಡ್ ಎಂಬ ಸಿನಿಮಾದ ವಿರುದ್ಧ ಕ್ರೈಸ್ತರು ಪ್ರತಿಭಟನೆ ನಡೆಸುತ್ತಾರೆ. ಟಾಮ್ ಹಾರಿಕ್ಸ್ ಮತ್ತು ಆಂಡ್ರಿ  ಟಾಟೂರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಸಿನಿಮಾವು ಕ್ರೈಸ್ತ ವಿರೋಧಿ ನಿಲುವನ್ನು ಹೊಂದಿದೆ ಎಂದು ಅವರು ಆರೋಪಿಸುತ್ತಾರೆ. ಈ ಕಾರಣದಿಂದಾಗಿಯೇ ಪಂಜಾಬ್, ಗೋವಾ, ನಾಗಾಲ್ಯಾಂಡ್, ಮೇಘಾಲಯ, ಮಹಾರಾಷ್ಟ್ರ, ತಮಿಳ್ನಾಡು, ಆಂಧ್ರಪ್ರದೇಶಗಳಲ್ಲಿ ಸಿನಿಮಾವನ್ನು ನಿಷೇಧಿಸಲಾಗುತ್ತದೆ. 2002ರಲ್ಲಿ ಬಿಡುಗಡೆಯಾದ ಮತ್ತು ಗುಜರಾತ್ ಹತ್ಯಾಕಾಂಡದ ಕತೆಯನ್ನೊಳಗೊಂಡ ಪರ್ಝಾನಿಯ ಚಿತ್ರವನ್ನು ಗುಜರಾತ್‍ನ ಮೋದಿ ಸರಕಾರ ನಿಷೇಧಿಸುತ್ತದೆ. ನಸೀರುದ್ದೀನ್ ಶಾ ಪ್ರಮುಖ ಪಾತ್ರದಲ್ಲಿದ್ದ ಈ ಸಿನಿಮಾದ ಮೇಲಿನ ನಿಷೇಧವನ್ನು ಬಿಜೆಪಿ ಮತ್ತು ಪರಿವಾರ ಸ್ವಾಗತಿಸುತ್ತದೆ. ಪ್ರಕಾಶ್ ಝಾ ನಿರ್ದೇಶಿಸಿದ ಮತ್ತು ಅಮಿತಾಬ್ ಬಚ್ಚನ್ ನಟಿಸಿದ್ದ ಆರಕ್ಷಣ್ ಸಿನಿಮಾವು 2011ರಲ್ಲಿ ವಿವಾದಕ್ಕೆ ಗುರಿಯಾಗುತ್ತದೆ. ಉದ್ಯೋಗ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಜಾತಿ ಆಧಾರಿತವಾಗಿ ನೀಡಲಾಗುವ ಮೀಸಲಾತಿಯನ್ನು ಸಿನಿಮಾ ವಿರೋಧಿಸುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಾರೆ. ಕೊನೆಗೆ ಉತ್ತರ ಪ್ರದೇಶ, ಆಂಧ್ರ, ಪಂಜಾಬ್‍ಗಳಲ್ಲಿ, 'ಆರಕ್ಷಣ್' ನಿಷೇಧಕ್ಕೆ ಒಳಗಾಗುತ್ತದೆ.. ಇವೆಲ್ಲ ಏನು? ಈ ಎಲ್ಲ ನಿಷೇಧಗಳಲ್ಲಿ ಮುಸ್ಲಿಮರ ಪಾತ್ರವಿತ್ತೇ? ಹೀಗಿದ್ದೂ, ವಿಶ್ವರೂಪಮ್ ಎಂಬ ಏಕೈಕ ಘಟನೆಯನ್ನು ಎತ್ತಿಕೊಂಡು; ಮುಸ್ಲಿಮರನ್ನು ಅಸಹಿಷ್ಣುಗಳಂತೆ, ವಾಕ್ ಸ್ವಾತಂತ್ರ್ಯದ ವೈರಿಗಳಂತೆ ಮಾಧ್ಯಮಗಳು ಬಿಂಬಿಸುತ್ತಿರುವುದಾದರೂ ಏತಕ್ಕೆ? ಈ ಹಿಂದೆ ಎಂದೂ ನಡೆಯದ 'ನಷ್ಟದ' ಚರ್ಚೆಗಳೆಲ್ಲ ಇವತ್ತು ನಡೆಯುತ್ತಿರುವುದೇಕೆ? ಕಮಲ್ ಹಾಸನ್‍ರಿಗೆ ಅಭಿಮಾನಿಗಳು ಚೆಕ್, ಡಿಡಿಗಳನ್ನು ಕಳುಹಿಸುತ್ತಿರುವ ಸುದ್ದಿಗೆ ಮತ್ತು ನಷ್ಟವನ್ನು ಭರಿಸುವುದಕ್ಕಾಗಿ ಕಮಲ್ ಸಿನಿಮಾದಲ್ಲಿ ಪುಕ್ಕಟೆಯಾಗಿ ನಟಿಸುವೆನೆಂದ ರಜನೀಕಾಂತ್‍ರ ಹೇಳಿಕೆಗಳಿಗೆ ಭಾರೀ ಕವರೇಜ್ ಕೊಡುವ ಮೂಲಕ ಮಾಧ್ಯಮಗಳು ಪ್ರಕರಣವನ್ನು ಭಾವನಾತ್ಮಕಗೊಳಿಸುತ್ತಿವೆಯೆಂಬುದು ಸುಳ್ಳೇ? ಅಂದಹಾಗೆ, ಕೋಟ್ಯಂತರ ರೂಪಾಯಿಗಳನ್ನು ಬಂಡವಾಳವಾಗಿ ಹೂಡಿರುವ ಸಿನಿಮಾವೊಂದು ನಿಗದಿತ ಯೋಜನೆಯಂತೆ ಬಿಡುಗಡೆಗೊಳ್ಳದಿದ್ದರೆ ನಷ್ಟಕ್ಕೆ ಒಳಗಾಗುತ್ತದೆ ಅನ್ನುವುದೇನು ಹೊಸ ಸಂಗತಿಯಲ್ಲ. ಸಿನಿಮಾ ಎಂದಲ್ಲ, ಉದ್ಯಮಕ್ಕೂ ಇದು ಅನ್ವಯಿಸುತ್ತದೆ. ಅಷ್ಟಕ್ಕೂ, ಇವತ್ತು ಇಡೀ ಸಿನಿಮಾ ಕ್ಷೇತ್ರವೇ ದೊಡ್ಡದೊಂಡು ಉದ್ಯಮವಾಗಿ ಮಾರ್ಪಟ್ಟಿಲ್ಲವೇ? ಉದ್ಯಮ ಕ್ಷೇತ್ರದಲ್ಲಿ ನಡೆಯುವ ಎಲ್ಲ ಬಗೆಯ ಲಾಭ-ನಷ್ಟದ ಲೆಕ್ಕಾಚಾರಗಳು ಈ ಕ್ಷೇತ್ರದಲ್ಲೂ ನಡೆಯುತ್ತದಲ್ಲವೇ? ಹೀಗಿರುವಾಗ ಕೆಲವೊಮ್ಮೆ ವಿವಾದಗಳ ಅಗತ್ಯವೂ ಬೀಳುತ್ತದೆ. ತೀರಾ ಕಳಪೆ ಚಿತ್ರವೊಂದು ವಿವಾದಗಳಿಂದಾಗಿಯೇ ದುಡ್ಡು ಬಾಚುವುದೂ ಇದೆ. ಹಾಗಂತ, ಕಮಲ್ ಹಾಸನ್ ಆ ವರ್ಗದ ನಟ ಅಲ್ಲದೇ ಇರಬಹುದು. ಆದರೆ, ಉದ್ಯಮ ಕ್ಷೇತ್ರದಿಂದ ಹೊರ ಬರುವ ಕಳಪೆ ವಸ್ತುಗಳಂತೆ ಸಿನಿಮಾ ಕ್ಷೇತ್ರದಿಂದಲೂ ಕಳಪೆ ಸಿನಿಮಾಗಳು ಬರುತ್ತಿರುವಾಗ, ಜನಸಾಮಾನ್ಯರಲ್ಲಿ ಅನುಮಾನಗಳು ಮೊಡಲಾರದೆಂದು ಹೇಗೆ ಹೇಳುವುದು? ಆದ್ದರಿಂದಲೇ, ವಿಶ್ವ ರೂಪಮ್ ವಿವಾದವನ್ನು ‘ಪ್ರಚಾರದ ಸ್ಟಂಟ್' ಎಂದು ಹೇಳುವ ಮಂದಿ ಸಮಾಜದಲ್ಲಿ ಧಾರಾಳ ಇರುವುದು. ಸಿನಿಮಾ ಕ್ಷೇತ್ರವು ತನ್ನ ಇಮೇಜನ್ನು ಈ ಮಟ್ಟದಲ್ಲಿ ಕೆಡಿಸಿಕೊಂಡಿರುವಾಗ ಕಮಲ್ ಹಾಸನ್‍ರು ಅದರಿಂದ ರಿಯಾಯಿತಿ ಬಯಸುವುದು ಎಷ್ಟು ಸರಿ? ಅಂದಹಾಗೆ, ಈ ದೇಶದಲ್ಲಿ ರಾಜ್ಯಗಳು ವಿಧಿಸುವ ನಿಷೇಧಕ್ಕೆ ಹೆಚ್ಚಿನ ವೇಳೆ ಸುಪ್ರೀಮ್ ಕೋರ್ಟು ಮನ್ನಣೆಯನ್ನೇ ಕೊಟ್ಟಿಲ್ಲ. ಒರೇ ಒರು ಗ್ರಾಮತ್ತಿಲ್, ಆರಕ್ಷಣ್, ಫೈರ್.. ಮುಂತಾದ ಎಲ್ಲ ಸಿನಿಮಾಗಳೂ ನಿಷೇಧವನ್ನು ಕಳಚಿಕೊಂಡು ಆ ಬಳಿಕ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನಗೊಂಡಿವೆ. ವಿಶ್ವರೂಪಮ್‍ನ ವಿಷಯದಲ್ಲೂ ಹೀಗಾಗಬಹುದು. ಇದು ಕಮಲ್ ಹಾಸನ್‍ರಿಗೂ ಗೊತ್ತು,  ಅವರನ್ನು ಭಾವನಾತ್ಮಕವಾಗಿ ಕಟ್ಟಿಕೊಡುವ ಮಾಧ್ಯಮಗಳಿಗೂ ಗೊತ್ತು. ಒಂದು ರೀತಿಯಲ್ಲಿ ಈ ವಿವಾದದ ಮೂಲಕ ಮುಸ್ಲಿಮರನ್ನು ಅಸಹಿಷ್ಣುಗಳಂತೆ, ಭಯೋತ್ಪಾದಕರ ಬೆಂಬಲಿಗರಂತೆ ಚಿತ್ರಿಸಲು ನೆಪ ಹುಡುಕುತ್ತಿರುವವರಿಗೆ ಲಾಭವಾಗಿದೆ ಎಂದಷ್ಟೇ ಹೇಳಬಹುದೇನೋ.
   ಭಯೋತ್ಪಾದನೆಯ ವಿಷಯದಲ್ಲಿ ಇವತ್ತು ಜಾಗತಿಕವಾಗಿಯೇ ಅತ್ಯಂತ ಹೆಚ್ಚು ದೌರ್ಜನ್ಯಕ್ಕೆ ಒಳಗಾಗಿರುವುದು ಮುಸ್ಲಿಮರೇ. ಭಾರತೀಯ ಮುಸ್ಲಿಮರಂತೂ ಇಸ್ಲಾಮೋಫೋಬಿಯದಿಂದಾಗಿ ಹಲವು ಬಗೆಯ ನಿಂದನೆ, ಅನುಮಾನಗಳಿಗೆ ನಿತ್ಯ ಗುರಿಯಾಗುತ್ತಿದ್ದಾರೆ. ಎಲ್ಲೇ ಬಾಂಬ್ ಸ್ಫೋಟಗೊಂಡರೂ, 'ಅದನ್ನು ನಾವು ಖಂಡಿಸುತ್ತೇವೆ..' ಎಂಬ ಹೇಳಿಕೆಯನ್ನು ಭಾರತೀಯ ಮುಸ್ಲಿಮ್ ನಾಯಕರು ತಕ್ಷಣ ಹೊರಡಿಸುವ ಒತ್ತಡಕ್ಕೆ ಗುರಿಯಾಗಿದ್ದಾರೆ. ಖಂಡನೆ ವ್ಯಕ್ತಪಡಿಸುವುದಕ್ಕೆ ಒಂದು ದಿನ ತಡವಾದರೂ ಅದನ್ನು ಎತ್ತಿಕೊಂಡು, ಮುಸ್ಲಿಮರನ್ನು ಭಯೋತ್ಪಾದಕರ ಬೆಂಬಲಿಗರಂತೆ ಬಿಂಬಿಸುವ ಹೇಳಿಕೆಗಳು ಮಾಧ್ಯಮಗಳಲ್ಲಿ ತುಂಬಿಕೊಳ್ಳುತ್ತವೆ. ಮಾಲೆಗಾಂವ್, ಮಕ್ಕಾ ಮಸೀದಿ, ಸಮ್‍ಜೋತಾ ಎಕ್ಸ್ ಪ್ರೆಸ್.. ಸಹಿತ ಮಾಡದ ಹತ್ತಾರು ಭಯೋತ್ಪಾದನಾ ಸ್ಫೋಟಗಳ ಆರೋಪಗಳನ್ನು ಹೊತ್ತುಕೊಂಡು ಹಲವಾರು ವರ್ಷಗಳನ್ನು ಜೈಲಲ್ಲಿ ಕಳೆದಿರುವುದೂ ಮುಸ್ಲಿಮ್ ಯುವಕರೇ. ಈ ಎಲ್ಲ ಸಂದರ್ಭಗಳಲ್ಲಿ ಮುಸ್ಲಿಮ್ ಸಮುದಾಯದ ಮನಸ್ಥಿತಿ ಹೇಗಿತ್ತೆಂದರೆ, ತಪ್ಪು ಮಾಡಿ ಸಿಕ್ಕಿ ಬಿದ್ದ ಅಪರಾಧಿಯಂತೆ. ಯಾಕೆಂದರೆ, ಪ್ರತಿ ಸಂದರ್ಭದಲ್ಲೂ ಇಲ್ಲಿನ ಮಾಧ್ಯಮಗಳು ಮುಸ್ಲಿಮರನ್ನೇ ಬೊಟ್ಟು ಮಾಡುತ್ತಿದ್ದುವು. ಕುರ್ತಾ, ಪೈಜಾಮ ಧರಿಸಿ; ದಾಡಿ, ಕೂದಲು ಬಿಟ್ಟು; ಮುಂಡಾಸು ಕಟ್ಟಿ, ಹೆಗಲಿಗೊಂದು ಬಂದೂಕು ನೇತಾಡಿಸಿದ ಅಫಘಾನ್ ವ್ಯಕ್ತಿಯ ಚಿತ್ರವನ್ನು ತೋರಿಸಿ, ಇವನಿಗೂ ಭಾರತೀಯ ಮುಸ್ಲಿಮರಿಗೂ ವ್ಯತ್ಯಾಸವಿಲ್ಲ ಎಂಬ ಧಾಟಿಯಲ್ಲಿ ಮಾಧ್ಯಮಗಳು ಮಾತಾಡುತ್ತಿದ್ದುವು. ಅಫಘಾನಿನಲ್ಲೋ ಚೆಚನ್ಯಾ, ಇರಾಕ್‍ನಲ್ಲೋ ನಡೆದ ಘಟನೆಯನ್ನು ಎತ್ತಿಕೊಂಡು 'ಭಾರತೀಯ ಮುಸ್ಲಿಮರೇ ಏನಂತೀರಿ'.. ಎಂದು ಪ್ರಶ್ನಿಸುತ್ತಿದ್ದುವು. ಈ ಮಧ್ಯೆ ಹೇಮಂತ್ ಕರ್ಕರೆಯವರ ತಂಡ ಹಿಂದೂ ಹೆಸರಿನ ಭಯೋತ್ಪಾದಕತೆಯನ್ನು ಬಯಲಿಗೆಳೆದರೂ, ಮುಸ್ಲಿಮರನ್ನು ಅಪಮಾನಿಸುವ, ಸುಳ್ಳು ಆರೋಪವನ್ನು ಹೊರಿಸಿ ಜೈಲಿಗಟ್ಟುವ ಘಟನೆಗಳಿಗೇನೂ ತೆರೆ ಬೀಳಲಿಲ್ಲ. ಶಬಾನಾ ಆಜ್ಮಿ, ಸೈಫ್ ಆಲಿ ಖಾನ್‍ರಂಥ ಸುಪರಿಚಿತ ವ್ಯಕ್ತಿಗಳಿಗೇ ಮುಂಬೈಯಲ್ಲಿ ಬಾಡಿಗೆಗೆ ಮನೆ ಸಿಗುತ್ತಿಲ್ಲವೆಂದ ಮೇಲೆ ಜನಸಾಮಾನ್ಯರ ಬಗ್ಗೆ ಹೇಳುವುದಾದರೂ ಏನನ್ನು? ಅಧಿಕಾರಿಗಳು ತಪಾಸಣೆಯ ಹೆಸರಲ್ಲಿ ಬಟ್ಟೆಯನ್ನೆಲ್ಲಾ ಕಳಚಿದರೂ ಮಾತಾಡದಷ್ಟು ಮುಸ್ಲಿಮ್ ಸಮುದಾಯವನ್ನು ಅಪರಾಧಿ ಮನಸ್ಥಿತಿಗೆ ದೂಡಲಾಗಿತ್ತು. ಈ ಮಧ್ಯೆ ಮದ್ರಸಾಗಳ ಬಗ್ಗೆ ತೀವ್ರ ಅಪಪ್ರಚಾರಗಳು ನಡೆದುವು. ಮದ್ರಸಕ್ಕೆ ತೆರಳುವ ಮಕ್ಕಳ ಬ್ಯಾಗಿನಲ್ಲಿ ಆರ್‍ಡಿಎಕ್ಸ್ ಇದೆಯೋ ಎಂದು ಹುಡುಕುವ ಪ್ರಯತ್ನಕ್ಕೆ ಹಲವು ಪತ್ರಕರ್ತರು ಭಾರೀ ಉತ್ಸಾಹ ತೋರಿದರು. ಭಯೋತ್ಪಾದನೆಯ ಕುರಿತಂತೆ ಟಿ.ವಿ. ಚಾನೆಲ್‍ಗಳು ಕ್ರೈಮ್ ನ್ಯೂಸ್ ಪ್ರಸಾರ ಮಾಡುವಾಗ, ಅಲ್ಲಾಹು ಅಕ್ಬರ್.. ಎಂಬ ಆದಾನ್ ಕರೆಯನ್ನು ಹಿಮ್ಮೇಳದಲ್ಲಿ ನುಡಿಸುವಷ್ಟು ಮುಂದುವರಿದಿದ್ದುವು. ಈಗಲೂ ಪರಿಸ್ಥಿತಿ ಭಾರೀ ಭಿನ್ನವಾಗೇನೂ ಇಲ್ಲ. ಮುಸ್ಲಿಮ್ ಸಮುದಾಯದ ಸಾಕಷ್ಟು ಯುವಕರು ಭಯೋತ್ಪಾದನೆಯ ಆರೋಪ ಹೊತ್ತುಕೊಂಡು ಜೈಲಲ್ಲಿದ್ದಾರೆ.. ಆದ್ದರಿಂದಲೇ, ಇಂಥ ಸ್ಥಿತಿಯಲ್ಲಿ, ಮುಸ್ಲಿಮರು ಭಯೋತ್ಪಾದನೆಯಲ್ಲಿ ತೊಡಗಿರುವ ಕಥಾವಸ್ತುವನ್ನು ಇಟ್ಟುಕೊಂಡು ಕಮಲ್ ಹಾಸನ್ ಸಿನಿಮಾ ಮಾಡಬಾರದಿತ್ತು. ‘ಅಫಘನ್ನಿನ ಅಲ್‍ಕಾಯ್ದಾದ ಭಯೋತ್ಪಾದಕ ಉಮರ್‍ನು ತನ್ನ ಜೊತೆಗಾರ ಸಲೀಮ್ ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದಕ ನೆಟ್‍ವರ್ಕ್ ನೊಂದಿಗೆ ಸೇರಿಕೊಂಡು ಅಮೇರಿಕದ ನ್ಯೂಯಾರ್ಕ್ ನಗರದ ಮೇಲೆ ಸೀಝಿಯಮ್ ಬಾಂಬು ದಾಳಿ ನಡೆಸಲು ಹಾಕುವ ಯೋಜನೆ ಮತ್ತು ಭಾರತದ ಗುಪ್ತಚರ ಸಂಸ್ಥೆಯ (ROW) ಏಜೆಂಟಾಗಿ ಅಮೇರಿಕಕ್ಕೆ ಹೋಗುವ ಕಮಲ್ ಹಾಸನ್ ಅದನ್ನು ಪತ್ತೆ ಹಚ್ಚುವ..’ ಕತೆಯುಳ್ಳ ವಿಶ್ವರೂಪಮ್ ಸಿನಿಮಾದಲ್ಲಿ ಬರೇ ಅಫಘಾನ್, ಅಮೇರಿಕಗಳಷ್ಟೇ ಇರುವುದಲ್ಲ. ಅದರಲ್ಲಿ ಭಾರತದ ಮಧುರೈ, ಕೊಯಂಬತ್ತೂರುಗಳೂ ಪ್ರಸ್ತಾಪವಾಗುತ್ತವೆ. ಉರ್ದು ಭಾಷೆಯ ಬಳಕೆಯಾಗುತ್ತದೆ. ಆದ್ದರಿಂದಲೇ ವಿಶ್ವ ರೂಪಮ್ ಸಿನಿಮಾದ ಬಗ್ಗೆ ಆತಂಕ ಮೂಡುವುದು. ವಿಶ್ವದಾದ್ಯಂತದ ಭಯೋತ್ಪಾದನೆಗೆ ಮುಸ್ಲಿಮರೇ ಕಾರಣ ಅನ್ನುವ ಸಂದೇಶವೊಂದು ವಿಶ್ವರೂಪಮ್‍ನ ಮೂಲಕ ಬಿತ್ತರಗೊಳ್ಳುವುದನ್ನು ಹೇಗೆ ಪ್ರೀತಿಯಿಂದ ಸ್ವಾಗತಿಸುವುದು? ‘..ತಾಲಿಬಾನ್‍ಗಳನ್ನು ಭಯೋತ್ಪಾದಕರೆಂದು ಕರೆದರೆ ಭಾರತೀಯ ಮುಸ್ಲಿಮರಿಗೇನು ತೊಂದರೆ..’ ಎಂಬ ಅರ್ಧಸತ್ಯವನ್ನು ಹೇಳುತ್ತಾ ಕೆಲವರು ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಪ್ರತ್ಯಕ್ಷಗೊಳ್ಳುತ್ತಿರುವುದಕ್ಕೆ ವಿಶ್ವರೂಪಮ್ ನೆಪವಾಗುತ್ತಿಲ್ಲವೇ? ಕುರ್ತಾ-ಪೈಜಾಮ ತೊಟ್ಟ, ಗಡ್ಡ ಬಿಟ್ಟ, ಟೊಪ್ಪಿ ಧರಿಸಿದ ಮುಸ್ಲಿಮ್ ಗುಂಪುಗಳನ್ನು ತೋರಿಸಿ, ಭಯೋತ್ಪಾದನೆಯ ಕತೆ ಹೇಳುವ ಅವಕಾಶವನ್ನು ಟಿ.ವಿ. ಚಾನೆಲ್‍ಗಳಿಗೆ ಮತ್ತೆ ಒದಗಿಸಿಕೊಟ್ಟದ್ದು ವಿಶ್ವರೂಪಮ್ ಅಲ್ಲವೇ? ಮುಸ್ಲಿಮ್ ವಿರೋಧವನ್ನೇ ತಮ್ಮ ಅಜೆಂಡಾವಾಗಿ ಒಪ್ಪಿಕೊಂಡಿರುವ ರಾಜಕೀಯ ಪಕ್ಷಗಳು ವಿಶ್ವ ರೂಪಮ್ ವಿವಾದದಿಂದ ಲಾಭ ಎತ್ತಲಾರವೇ..
  ಇಷ್ಟಿದ್ದೂ, ಬುದ್ಧಿವಂತ, ಜಾತ್ಯತೀತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಕಮಲ್ ಹಾಸನ್‍ರೇ.. ನೀವು ಹೀಗೇಕೆ ಮಾಡಿದಿರಿ?