Wednesday, April 27, 2016

ಈ 'ಅನ್ಯ'ತನ ಎಲ್ಲಿಯವರೆಗೆ?

        “ದಿನಾಂಕ 19-4-2016ರಿಂದ 23-4-2016ರ ತನಕ ನಡೆಯುವ ಶ್ರೀ ಮಹಾ ಗಣಪತಿ ದೇವಸ್ಥಾನ ಗಣೇಶಪುರ, ಕಾಟಿಪಳ್ಳ, ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ವಠಾರದಲ್ಲಿ ಹಿಂದೂಯೇತರ ಬಂಧುಗಳು ಯಾವುದೇ ಅಂಗಡಿ ಅಥವಾ ವ್ಯಾಪಾರ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ..”
  ಏನೆನ್ನಬೇಕು ಇದಕ್ಕೆ? ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಹಾಕಲಾದ ಈ ಬ್ಯಾನರ್ ಎಷ್ಟು ಸಂವಿಧಾನಬದ್ಧ? ಇದಕ್ಕೆ ನ್ಯಾಯಾಂಗದ ಸಮ್ಮತಿ ಇದೆಯೇ? ಶ್ರೀ ಮಹಾ ಗಣಪತಿ ದೇವಸ್ಥಾನದ ಒಪ್ಪಿಗೆಯಿದೆಯೇ? ಜಿಲ್ಲಾಡಳಿತ ಏನು ಹೇಳುತ್ತೆ? ರಾಜಕೀಯ ಪಕ್ಷಗಳ ಅದರಲ್ಲೂ ಬಿಜೆಪಿಯ ಪ್ರತಿಕ್ರಿಯೆ ಏನು? ಬಿಡಿ, ಮಹಾ ಗಣಪತಿ ದೇವಸ್ಥಾನದ ಹೊಣೆಗಾರರು ಅಥವಾ ಸಮಾಜದ ದುರೀಣರು ಏನು ಹೇಳುತ್ತಾರೋ ಬಿಡುತ್ತಾರೋ ಭಾರತೀಯನಾಗಿ ಓರ್ವ ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು? ಜಾತ್ಯತೀತ ರಾಷ್ಟ್ರದಲ್ಲಿ ಇಂಥದ್ದೊಂದು ಬ್ಯಾನರ್‍ನ ಮಹತ್ವವೇನು? ಇದನ್ನು ಜನಬೆಂಬಲವಿಲ್ಲದ ಸಂಘಟನೆಯೊಂದರ ಕಿತಾಪತಿ ಎಂದು ಸಾಮಾನ್ಯೀಕರಿಸಿ ನಿರ್ಲಕ್ಷಿಸಬಹುದೇ ಅಥವಾ ಈ ಸಂಘಟನೆಯ ಮೂಲಕ ಇನ್ನಾವುದೋ ಬಲಶಾಲಿ ಗುಂಪು ಹೆಣೆದ ತಂತ್ರವಾಗಿ ಕಾಣಬಹುದೇ?
  ದಕ್ಷಿಣ ಕನ್ನಡ ಜಿಲ್ಲೆಗೆ ಒಳಪಟ್ಟ ಕಾಟಿಪಳ್ಳದಲ್ಲಿ ಕಾಣಿಸಿಕೊಂಡ ಈ ಬ್ಯಾನರ್‍ಗಿಂತ ಕೆಲವು ದಿನಗಳ ಮೊದಲು ಇದೇ ಜಿಲ್ಲೆಯ ಪುತ್ತೂರು ಎಂಬಲ್ಲಿಯ ಮಹಾಲಿಂಗೇಶ್ವರ ದೇವ ಸ್ಥಾನದ ಜಾತ್ರೋತ್ಸವವು ರಾಷ್ಟ್ರಮಟ್ಟದಲ್ಲಿ ಸುದ್ದಿಗೀಡಾಗಿತ್ತು. ದ.ಕ. ಜಿಲ್ಲೆಯ ಜಿಲ್ಲಾಧಿಕಾರಿ ಮುಸ್ಲಿಮ್ ಆಗಿರುವುದರಿಂದ ಅವರನ್ನು ಆಮಂತ್ರಣ ಪತ್ರಿಕೆಯಲ್ಲಿ ಸೇರಿಸಬಾರದು ಎಂದು ಅಲ್ಲಿ ತಗಾದೆ ಎತ್ತಲಾಗಿತ್ತು. ತಾಂತ್ರಿಕ ಕಾರಣಗಳು ಈ ವಾದಕ್ಕೆ ಪುಷ್ಠಿ ನೀಡು ತ್ತವೆ ಎಂಬುದನ್ನು ಬಿಟ್ಟರೆ, ಉಳಿದಂತೆ ಈ ವಾದ ಅತ್ಯಂತ ಅಸಹಿಷ್ಣು ಎಂಬುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಅಂಬೇಡ್ಕರ್ ಸಂವಿಧಾನಕ್ಕೆ ಪ್ರಾಯ ಸಲ್ಲುತ್ತಾ ಹೋದಂತೆ ಮನುಷ್ಯ ವಿಭಜನೆಯ ಚಿಂತನೆಗಳೇಕೆ ಬಲ ಪಡೆಯುತ್ತಾ ಹೋಗುತ್ತಿವೆ? ಈ ಬ್ಯಾನರ್ ಹಾಕಲಾದ ಕಾಟಿಪಳ್ಳ ಪರಿಸರದ ಪಕ್ಕದೂರಿನ ದೇವಸ್ಥಾನದಲ್ಲಿ ಕೆಲವು ವರ್ಷಗಳ ಹಿಂದೆ ಜಮಾಅತೆ ಇಸ್ಲಾಮೀ ಹಿಂದ್‍ನ ಯೂತ್‍ವಿಂಗ್ ವಿಭಾಗವು ರಮಝಾನಿನಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಗೀಡಾಗಿತ್ತು. ಮುಸ್ಲಿಮರನ್ನು ಈ ಮಟ್ಟದಲ್ಲಿ ಸ್ವಾಗತಿಸಿದ ದೇವಸ್ಥಾನದ ಪರಿಸರವು ಇವತ್ತು ಇಂಥದ್ದೊಂದು ಬ್ಯಾನರ್‍ನ ಮೂಲಕ ಗುರುತಿಸಿಕೊಂಡಿರುವುದಕ್ಕೆ ಏನು ಕಾರಣ? ಇದು ಸಾರ್ವಜನಿಕ ಭಾವನೆಯೇ? ನಿಜವಾಗಿ, ಹಬ್ಬ, ಜಾತ್ರೆ, ಹರಿದಿನ ಮುಂತಾದ ಖುಷಿಯ ಸಂದರ್ಭಗಳೆಲ್ಲ ನಿರ್ದಿಷ್ಟ ಧರ್ಮದ ಆಚರಣೆಗಳಷ್ಟೇ ಅಲ್ಲ, ವಿವಿಧ ಧರ್ಮಗಳಿರುವ ಸಮಾಜದಲ್ಲಿ ಅದಕ್ಕೆ ಸಾರ್ವಜನಿಕವೆಂಬ ಇನ್ನೊಂದು ಮುಖವೂ ಇರುತ್ತದೆ ಮತ್ತು ಇರಬೇಕು ಕೂಡ. ಒಂದೇ ಧರ್ಮ ಇರುವಲ್ಲಿ ಆಚರಿಸುವ ಆಚರಣೆಗೂ ವಿವಿಧ ಧರ್ಮಗಳಿರುವಲ್ಲಿ ಆಚರಿಸುವ ಆಚರಣೆಗೂ ಸಾಂಸ್ಕ್ರತಿಕವಾಗಿಯೇ ವ್ಯತ್ಯಾಸ ಇರುತ್ತದೆ. ಅಷ್ಟಕ್ಕೂ, ಹಿಂದೂಗಳು ಗಣೇಶ ಚತುರ್ಥಿಯನ್ನು ಹಿಂದೂಗಳಿಗೆ ಮಾತ್ರ ಸೀಮಿತಗೊಳಿಸಿ ಆಚರಿಸಬಹುದು ಅಥವಾ ದಲಿತರು ಕೋಲ ವನ್ನು ಅಥವಾ ಬ್ರಾಹ್ಮಣರು ಕೃಷ್ಣಾಷ್ಟಮಿಯನ್ನು ಅಥವಾ ಇತರ ಜಾತಿ-ಉಪಜಾತಿಗಳು ತಮ್ಮದೇ ಆದ ಖುಷಿಯ ಕ್ಷಣಗಳನ್ನು ತಮ್ಮವರ ನಡುವೆಯೇ ಆಚರಿಸಬಹುದು. ಮುಸ್ಲಿಮರಿಗೂ ಕೂಡ ಅಂಥದ್ದೊಂದು ಹಕ್ಕು ಖಂಡಿತ ಇದೆ. ಆದರೆ ಇಂಥ ಗೆಟ್ಟೋಯಿಸಂ ನೀತಿಯು ಬೀರುವ ಪರಿಣಾಮಗಳು ಏನೇನು? ಮುಖ್ಯವಾಗಿ ಇದರಿಂದ ಸಮಾಜ ಒಡೆಯುತ್ತದೆ. ನಮ್ಮ ಹಬ್ಬ - ಅವರ ಹಬ್ಬ, ಅವರ ಸಂಸ್ಕøತಿ - ನಮ್ಮ ಸಂಸ್ಕ್ರತಿ, ಅವರ ಕ್ರೀಡೆ - ನಮ್ಮ ಕ್ರೀಡೆ, ಅವರ ಮದುವೆ - ನಮ್ಮ ಮದುವೆ, ಅವರ ಸಾವು - ನಮ್ಮವರ ಸಾವು, ಅವರ ದುಃಖ - ನಮ್ಮ ದುಃಖ.. ಹೀಗೆ ಪ್ರತಿಯೊಂದನ್ನೂ ವಿಭಜಿಸಿ ಅನುಭವಿಸುವ ವಾತಾವರಣ ಸೃಷ್ಟಿಯಾಗುತ್ತದೆ. ಹೀಗೆ ಇದನ್ನೇ ನೋಡಿಕೊಂಡು ಮತ್ತು ‘ಧರ್ಮ ಅಂದರೆ ಇದುವೇ ಇರಬೇಕು’ ಎಂದು ನಂಬಿಕೊಂಡು ಬೆಳೆಯುವ ಒಂದು ಯುವ ತಲೆಮಾರನ್ನು ಎದುರಿಟ್ಟು ನೋಡಿ. ಆ ಪೀಳಿಗೆಯ ಆಲೋಚನೆಗಳು ಏನಿರಬಹುದು? ನಮ್ಮವರಲ್ಲದ ಇತರರ ಬಗ್ಗೆ ಅವರು ಯಾವ ಅಭಿಪ್ರಾಯವನ್ನು ಹೊಂದಬಹುದು? ನಮ್ಮ ಮೈದಾನಗಳು, ಶಾಲೆಗಳು, ಆಸ್ಪತ್ರೆಗಳು, ಸಾಂಸ್ಕøತಿಕ ಚಟುವಟಿಕೆಗಳೆಲ್ಲ ನಮ್ಮವು ಮತ್ತು ಅವರವು ಎಂದು ವಿಭಜನೆಯಾಗಲಾರದೇ? ಹೀಗಾದರೆ ಸಂಖ್ಯೆಯಲ್ಲಿ ಬಲಾಢ್ಯರಾದ ‘ನಾವು’ ಸಂಖ್ಯೆಯಲ್ಲಿ ದುರ್ಬಲರಾದ ‘ಅವರನ್ನು’ ಬಯಸಿದಂತೆ ನಡೆಸಿಕೊಳ್ಳಬಹುದಲ್ಲವೇ? ನಮ್ಮ ವ್ಯಾಪ್ತಿ ಪ್ರದೇಶದಲ್ಲಿ ಉಳಿಸಿಕೊಳ್ಳುವ ಅಥವಾ ವ್ಯಾಪ್ತಿಯಾಚೆಗೆ ತಳ್ಳುವ ಅವಕಾಶವನ್ನು ಸೃಷ್ಟಿಸಿಕೊಳ್ಳಬಹುದಲ್ಲವೇ? ರಾಜಕೀಯವಾಗಿ ನಮ್ಮವರೇ ಸದಾಕಾಲ ಅಧಿಕಾರದಲ್ಲಿರುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಇನ್ನಾವುದಿದ್ದೀತು? ನಿಜವಾಗಿ, ಅಭಿವೃದ್ಧಿ ಕಾರ್ಯಗಳಿಂದ ಜನರನ್ನು ತೃಪ್ತಿಪಡಿಸುವುದು ಅಷ್ಟು ಸುಲಭವಲ್ಲ. ಎಷ್ಟೇ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಒಂದೇ ಒಂದು ‘ಸಿ.ಡಿ.ಗೆ’ ಎಲ್ಲವನ್ನೂ ನುಂಗುವಂತೆ ಮಾಡುವ ಸಾಮರ್ಥ್ಯವಿದೆ. ನೀರು, ವಿದ್ಯುತ್, ವಸತಿ, ಆಹಾರ, ಮೂಲ ಸೌಲಭ್ಯಗಳೆಲ್ಲ ಸರ್ವರಿಗೂ ಸಹಜವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಾದರೆ ಅದಕ್ಕೆ ಅಪಾರ ಶ್ರಮ ಮತ್ತು ಬದ್ಧತೆಯ ಅಗತ್ಯವೂ ಇದೆ. ಆದರೆ ಈ ಯಾವ ಪರಿಶ್ರಮವೂ ಇಲ್ಲದೇ ಜನರನ್ನು ಒಲಿಸಿಕೊಳ್ಳುವ ಸಾಮರ್ಥ್ಯವಿದ್ದರೆ ಅದು ವಿಭಜನೆಗೆ ಮಾತ್ರ. ಒಂದು ಪುಟ್ಟ ಬ್ಯಾನರ್ ಕೆಲವೊಮ್ಮೆ ನೂರಾರು ಕೋಟಿ ರೂಪಾಯಿ ಯೋಜನೆಗಿಂತ ಪ್ರಭಾವಶಾಲಿಯಾಗಿ ಕೆಲಸ ನಿರ್ವಹಿಸಬಹುದು. ಅಷ್ಟಕ್ಕೂ,
ಮನುಷ್ಯರನ್ನು ವಿಭಜಿಸುವುದು ಮತ್ತು ಅದನ್ನೇ ಆಡಳಿತ ನೀತಿಯಾಗಿ ಅಂಗೀಕರಿಸುವುದೆಲ್ಲ ಬ್ರಿಟಿಷರಿಂದ ಆರಂಭವಾದದ್ದೇನೂ ಅಲ್ಲ. ಅದಕ್ಕೆ ಪುರಾತನವಾದ ಇತಿಹಾಸವಿದೆ. ಟ್ರೈನೋ ಬೊಕಲಿನಿಯವರ ‘ದಿ ಆರ್ಟ್ ಆಫ್ ವಾರ್', ಫ್ಲಾವಿಸ್ ಜೋಸೆಫ್‍ರ ‘ದಿ ವಾರ್ ಆಫ್ ದಿ ಜ್ಯೂಯಿಸ್' ಮತ್ತು ಜಿಯಾಗ್ರಫಿ ಇತ್ಯಾದಿ ಕೃತಿಗಳಲ್ಲಿ ಸಾಮಾಜಿಕ ವಿಭಜನೆಯ ದಟ್ಟ ವಿವರಣೆಗಳಿವೆ. ಒಂದು ಸಮಾಜದ ಮೇಲೆ ಹಿಡಿತ ಸಾಧಿಸಬೇಕಾದರೆ ಅನುಸರಿಸಬೇಕಾದ ಕ್ರಮಗಳು ಮತ್ತು ಅದರಿಂದಾಗಿ ಆಗಬಹುದಾದ ಪರಿಣಾಮಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಮೆಸಿಡೋನಿಯದ ರಾಜ ಎರಡನೇ ಫಿಲಿಪ್ ಅವರು ಈ ‘ವಿಭಜಿಸಿ ಆಳು’ ನೀತಿಯನ್ನು ಪ್ರಥಮವಾಗಿ ಜಾರಿಗೆ ತಂದರು ಎಂದು ಹೇಳಲಾಗುತ್ತದೆ. ಬಳಿಕ ರೋಮನ್ ಚಕ್ರವರ್ತಿ ಸೀಸರ್ ಮತ್ತು ಫ್ರೆಂಚ್ ಚಕ್ರವರ್ತಿ ನೆಪೋಲಿಯನ್ ಈ ನೀತಿಯಂತೆ ಆಡಳಿತ ನಡೆಸಿದರು ಎಂಬುದಾಗಿ ಇತಿಹಾಸ ಹೇಳುತ್ತದೆ. ಧರ್ಮ, ಚರ್ಮ, ವರ್ಣ, ಭಾಷೆ, ಸಂಸ್ಕøತಿ.. ಇವೆಲ್ಲ ಶತಮಾನಗಳ ಹಿಂದೆಯೇ ಭಾರತೀಯ ನಾಗರಿಕತೆಗೆ ದೊಡ್ಡದೊಂದು ಸವಾಲಾಗಿತ್ತು. ಚರ್ಮವನ್ನು ಮನುಷ್ಯನ ಶ್ರೇಷ್ಠತೆಯ ಮಾನದಂಡವಾಗಿಟ್ಟುಕೊಂಡು, ಆ ಶ್ರೇಷ್ಠತೆಯ ವ್ಯಾಪ್ತಿಗೆ ಒಳಪಡದವರನ್ನು ನಿರಂತರವಾಗಿ ದಮನಿಸುತ್ತಾ ಬರಲಾದ ಒಂದು ದೀರ್ಘ ಕಣ್ಣೀರ ಇತಿಹಾಸ ಈ ಮಣ್ಣಿಗಿದೆ. ಅಸಂಖ್ಯಾತ ಜೀವಗಳು ಈ ಕಾರಣದಿಂದಾಗಿ ಮಣ್ಣಾಗಿದೆ. ಇವತ್ತಿಗೂ ಆ ಸರಪಳಿ ಮುಂದುವರಿದಿದೆ. ನಿಜವಾಗಿ, ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಅಥವಾ ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಬ್ರಿಟಿಷರು ಎತ್ತಿ ಕಟ್ಟಿರಬಹುದು. ಪರಸ್ಪರ ದ್ವೇಷ ಮತ್ತು ವಿಭಜನೆಯ ಮನಸ್ಥಿತಿಗೆ ಅವರು ಇಂಬು ನೀಡಿರಬಹುದು. ಮಿಲ್, ವಿಲ್ಸನ್ ಅಥವಾ ವಾರ್ಡ್‍ರಂಥ ಫಿಲಾಸಫರ್‍ಗಳು, ಬರಹಗಾರರು ಬಿಳಿಚರ್ಮ ಶ್ರೇಷ್ಠತೆಗೆ ಒತ್ತುಕೊಟ್ಟು ಬರೆದಿರಬಹುದು. ಆದರೆ ಜನಾಂಗೀಯ ಶ್ರೇಷ್ಠತೆಯನ್ನು ಈ ದೇಶ ಕಲಿತುಕೊಂಡದ್ದು ಬ್ರಿಟಿಷರಿಂದಲ್ಲ. ಅದು ಈ ದೇಶದಲ್ಲಿ ಎಷ್ಟೋ ವರ್ಷಗಳ ಹಿಂದಿನಿಂದಲೇ ಜಾರಿಯಲ್ಲಿತ್ತು. ಬ್ರಿಟಿಷರು ಅದರಿಂದ ಲಾಭ ಎತ್ತಿಕೊಳ್ಳುವ ಪ್ರಯತ್ನವನ್ನಷ್ಟೇ ಮಾಡಿದರು. ಆದರೆ ಅಂಬೇಡ್ಕರ್ ಸಂವಿಧಾನ ಈ ಕ್ರೌರ್ಯವನ್ನು ತೀವ್ರವಾಗಿ ಪ್ರಶ್ನಿಸಿತು. ಇದರ ನಿರ್ಮೂಲನೆಗಾಗಿ ವಿವಿಧ ಉಪಕ್ರಮಗಳನ್ನು ಪರಿಚಯಿಸಿತು. ಸಾಮಾಜಿಕ, ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕವಾಗಿ ಜನರ ನಡುವೆ ಇರುವ ವÉೈವಿಧ್ಯತೆಯನ್ನು ಉಳಿಸಿಕೊಂಡೇ ಸಮಾನ ಸ್ವಾತಂತ್ರ್ಯ, ಹಕ್ಕು, ಕರ್ತವ್ಯಗಳೊಂದಿಗೆ ಬದುಕುವ ಅವಕಾಶವನ್ನು ಪ್ರತಿಪಾದಿ ಸಿತು. ಆದರೆ ಈ ಬಗ್ಗೆ ಒಂದು ವರ್ಗದ ಅಸಮಾಧಾನ ಅಂದೇ ವ್ಯಕ್ತವಾಗಿತ್ತು. ದಲಿತ ನ್ಯಾಯಾಧೀಶರು ನಿವೃತ್ತಿಯಾದ ಬಳಿಕ ಆ ಜಾಗಕ್ಕೆ ಬಂದ ಉಚ್ಚ ಜಾತಿಯ ನ್ಯಾಯಾಧೀಶರು ಗಂಗಾಜಲ ಸಿಂಪಡಿಸಿ ಕುರ್ಚಿ ವಹಿಸಿಕೊಂಡ ನಿದರ್ಶನ ಈ ದೇಶಕ್ಕಿದೆ. ಧರ್ಮ ಮತ್ತು ಚರ್ಮದ ಕಾರಣಕ್ಕಾಗಿ ಹತ್ಯೆ ಮತ್ತು ಹತ್ಯಾಕಾಂಡಗಳು ಅವತ್ತಿನಿಂದ ಈವತ್ತಿನ ವರೆಗೆ ಧಾರಾಳ ನಡೆದಿವೆ. ಆಘಾತಕಾರಿ ಅಂಶ ಏನೆಂದರೆ, ಸಂವಿಧಾನಕ್ಕೆ ವೃದ್ಧಾಪ್ಯ ಆವರಿಸುತ್ತಾ ಬರುತ್ತಿರುವಂತೆಯೇ ಹಳೆಕಾಲದ ಮನುಷ್ಯ ವಿರೋಧಿ ಚಿಂತನೆಗಳು ಪ್ರಬಲವಾಗುತ್ತಾ ಹೋಗುತ್ತಿವೆ ಎಂಬುದು. ಮನುಷ್ಯರನ್ನು ಅನ್ಯರಾಗಿಸುವ ಪ್ರಯತ್ನಗಳು ಇವತ್ತು ಧರ್ಮದ ಹೆಸರಿನಲ್ಲೇ ನಡೆಯುತ್ತಿವೆ. ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಹಿಂದೂ ಗ್ರಾಮಗಳು ಮಾತ್ರ ಇರುವುದಲ್ಲ, ಜಾತ್ರೆಗಳು ಕೂಡ ಮುಸ್ಲಿಮ್ ರಹಿತವಾಗಿ ನಡೆಯುತ್ತಿವೆ. ಫ್ಲ್ಯಾಟುಗಳಲ್ಲಿ ‘ಮುಸ್ಲಿಮರಿಗೆ ಅವಕಾಶವಿಲ್ಲ’ ಎಂಬ ಬೋರ್ಡ್‍ಗಳನ್ನು ತೂಗು ಹಾಕಲಾಗುತ್ತಿದೆ. ಮುಸ್ಲಿಮ್ ವಿರೋಧಿ ಹೇಳಿಕೆಗಳನ್ನು ಜನಪ್ರತಿನಿಧಿ ಗಳೇ ನೀಡತೊಡಗಿದ್ದಾರೆ. ಒಂದು ಬಗೆಯ ಸಾಂಸ್ಕ್ರತಿಕ ಧ್ರುವೀಕರಣದ ಸೂಚನೆಗಳು ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಮುಸ್ಲಿಮರೆಂದರೆ ಹಿಂದೂ ವಿರೋಧಿಗಳು ಎಂಬ ಭಾವನೆ ಉಂಟಾಗುವಂತೆ ಮಾಡಲಾಗುವ ಈ ಪ್ರಕ್ರಿಯೆಯ ದೂರಗಾಮಿ ಪರಿಣಾಮಗಳೇನಾಗಬಹುದು? ಈಗಾಗಲೇ ಈ ದೇಶದ ದಲಿತರು ಅನುಭವಿಸುತ್ತಿರುವ ‘ಅನ್ಯ'ತನಕ್ಕೆ ಮುಸ್ಲಿಮರನ್ನು ಸೇರ್ಪಡೆಗೊಳಿಸುವುದು ಇದರ ಉದ್ದೇಶವೇ? ದೇಶದಲ್ಲಿ ಮುಸ್ಲಿಮರನ್ನು ದಲಿತರ ಸ್ಥಿತಿಗೆ ತಂದು ವ್ಯವಸ್ಥಿತವಾಗಿ ತುಳಿಯುವ ಷಡ್ಯಂತ್ರ ಇದರ ಹಿಂದಿರಬಹುದೇ? ದಲಿತರನ್ನು ಹಿಂದೂ ವಲಯಕ್ಕೆ ಸೇರಿಸಿಕೊಂಡು ಮುಸ್ಲಿಮರಿಂದ ಆ ಜಾಗವನ್ನು ತುಂಬಿಸುವ ತಂತ್ರಗಳು ನಡೆಯುತ್ತಿವೆಯೇ? ಮುಸ್ಲಿಮರನ್ನು ನಿಧಾನವಾಗಿ ಸಾರ್ವಜನಿಕ ವಲಯದಲ್ಲಿ ಒಂಟಿಯಾಗಿಸುತ್ತಾ, ಜಾತ್ರೆ, ಸಂಸ್ಕ್ರತಿ, ಆರಾಧನೆಯ ಹೆಸರಲ್ಲಿ ಬಹಿಷ್ಕಾರ ಹೇರುತ್ತಾ ಮತ್ತು ನಿರಂತರವಾಗಿ ಮುಸ್ಲಿಮರ ವಿರುದ್ಧ ವದಂತಿಗಳನ್ನು ಹಬ್ಬಿಸುತ್ತಾ ‘ಅನ್ಯ'ರಾಗಿಸುವುದು ಇದರ ಹಿಂದಿನ ಮರ್ಮವೇ? ಇವತ್ತು ಜಾತ್ರೆಯಿಂದ ಮುಸ್ಲಿಮರನ್ನು ಹೊರಗಿಟ್ಟ
ವರು ನಾಳೆ, ಹಿಂದೂಗಳು ನಡೆಸುವ ಶಾಲೆಗಳಿಂದ, ಶಾಪ್ ಗಳಿಂದ, ಕ್ಲಿನಿಕ್‍ಗಳಿಂದ ಹೊರಗಿಡುವ ಬ್ಯಾನರ್‍ಗಳನ್ನು ತೂಗುಹಾಕಲಾರರು ಎಂದು ಹೇಗೆ ಹೇಳುವುದು? ಅದರ ಪರಿಣಾಮ ಏನಾದೀತು? 

No comments:

Post a Comment