Tuesday, January 15, 2013

ಪ್ರವಾದಿ ಪ್ರೇಮಿಗಳೇ, ಕರಗುವ ಕಂದಮ್ಮಗಳ ದಾವೆಗೆ ಏನುತ್ತರ ಕೊಡುತ್ತೀರಿ?

  ಆಕೆಯ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಹೇಳುವುದೋ ಬೇಡವೋ ಎಂಬ ಅನುಮಾನ. ಹೇಳಿಬಿಟ್ಟರೆ ಎಲ್ಲಿ ತನ್ನನ್ನು ತರಾಟೆಗೆತ್ತಿ ಕೊಳ್ಳುತ್ತಾರೋ ಎಂಬ ಭೀತಿ. ಕೊನೆಗೆ ಆಕೆ ಹೇಳಿಯೇ ಬಿಟ್ಟಳು-
  ‘ಈ ವರೆಗೂ ನಾನು ನಿಮ್ಮಿಂದ ಮುಚ್ಚಿಟ್ಟಿದ್ದೆ. ನನ್ನನ್ನು ಕ್ಷಮಿಸಿ. ನಿಜವಾಗಿ, ನಿನ್ನೆಯೇ ನಾನು ಗರ್ಭ ಕರಗಿಸುವ ಮದ್ದು ಸೇವಿಸಿದ್ದೇನೆ..’
  ದುರ್ಬಲ ಗುಡಿಸಲು
ತಂದೆ(ಮಲ), ತಾಯಿ, ತಮ್ಮ(ಮಲ) ಮತ್ತು ಆಕೆ ಆ ದುರ್ಬಲ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ತಂದೆ ಬಹುತೇಕ ಕಿವುಡರಾಗಿದ್ದು, ದುಡಿಯುವ ಸಾಮರ್ಥ್ಯ ಅಷ್ಟಕ್ಕಷ್ಟೇ. ತಾಯಿ ಅವರಿವರ ಮನೆಯಲ್ಲಿ ಮನೆಗೆಲಸ ಮಾಡುತ್ತಾರೆ. ತಮ್ಮ ದುಡಿಯುವ ಪ್ರಾಯಕ್ಕೆ ಇನ್ನೂ ತಲುಪಿಲ್ಲ. 6ರ ಒಳಗಿನ ಇಬ್ಬರು ಮಕ್ಕಳನ್ನು ಜೊತೆಯಲ್ಲಿಟ್ಟುಕೊಂಡು ಅತ್ತ  ಶೌಚಾಲಯವೂ ಇಲ್ಲದ, ಗಾಳಿ ಜೋರಾಗಿ ಬೀಸಿದರೆ ಹಾರಿ ಹೋಗುವಂತಿರುವ ಗುಡಿಸಲಿನಲ್ಲಿ ಆಕೆ ಬೀಡಿ ಕಟ್ಟುತ್ತಾ ಬದುಕುತ್ತಿದ್ದಾಳೆ. ತನ್ನ ಇಬ್ಬರು ಪುಟ್ಟ ಮಕ್ಕಳ ಮೇಲೆ ಅಪಾರ ಭರವಸೆ ಆಕೆಗೆ. ಇಷ್ಟಕ್ಕೂ, ಅವರ ಮೇಲಲ್ಲದೇ ಆಕೆ ಭರವಸೆ ಇಟ್ಟುಕೊಳ್ಳುವುದಾದರೂ ಬೇರೆ ಯಾರ ಮೇಲೆ? ತಂದೆ ತೀರಿ ಹೋಗಿರುವ, ಮಲ ತಂದೆ ಮತ್ತು ಅವರ ಕಿರಿಪ್ರಾಯದ ಮಗನ ಆಶ್ರಯದಲ್ಲಿರುವ ಓರ್ವ ಹೆಣ್ಣು ಮಗಳಿಗೆ ಸಾಮಾಜಿಕವಾಗಿ ಇರುವ ಭದ್ರತೆಯಾದರೂ ಏನು? ಯಾವ ಸಮಯದಲ್ಲೂ ಮನೆಯಿಂದ ಹೊರದಬ್ಬಿಸಿಕೊಳ್ಳ ಬಹುದಾದ ಭೀತಿಯಲ್ಲಿ ಸದಾ ಬದುಕುತ್ತಿರುವ ಇಂಥ ಹೆಣ್ಣು ಮಕ್ಕಳು ನಮ್ಮ ಸಮಾಜದಲ್ಲಿ ಎಷ್ಟಿಲ್ಲ ಹೇಳಿ? ವಿಶೇಷ ಏನೆಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಈ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಟ್ಟಿರುವುದು ದೂರದ ಘಟ್ಟ ಪ್ರದೇಶದ ಹಾಸನಕ್ಕೆ. ಇದೊಂದೇ ಅಲ್ಲ, ಈ ಜಿಲ್ಲೆಯಿಂದ ಹಲವಾರು ಹೆಣ್ಣು ಮಕ್ಕಳನ್ನು ಗುಜರಾತ್‍ಗೂ ಮದುವೆ ಮಾಡಿ ಕೊಡಲಾಗಿದೆ. ಹಾಗಂತ, ಈ ಹೆಣ್ಣು ಮಕ್ಕಳ ಮೇಲೆ ಹೆತ್ತವರಿಗೆ ದ್ವೇಷವಿತ್ತು ಎಂದಲ್ಲ. ಊರಿನಲ್ಲಿ, ಕೈಗೆಟಕುವ ದರದಲ್ಲಿ ಯುವಕರು ಸಿಗದೇ ಇರುವಾಗ ಬಡ ಹೆತ್ತವರ ಮುಂದೆ ಬೇರೆ ಆಯ್ಕೆಗಳಾದರೂ ಯಾವುದಿರುತ್ತದೆ? ಅಲ್ಲದೇ, ಯುವಕರೆಲ್ಲಾ ಹೀಗೆ ದರ ನಿಗದಿಪಡಿಸಿಕೊಂಡು ಓಡಾಡುತ್ತಿರುವಾಗ ಬಡ ಹೆತ್ತವರಿಗೆ ದರದ ಹೊರತು ಗುಣನಡತೆಯನ್ನು ಆಯ್ಕೆಯ ಮಾನದಂಡವನ್ನಾಗಿ ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲವಲ್ಲವೇ? ನಿಜವಾಗಿ, ಯಾವ ಹೆತ್ತವರಿಗೂ ತಮ್ಮ ಮಗಳನ್ನು ದೂರದೂರಿಗೆ ಕಳುಹಿಸಿಕೊಡಲು ಇಷ್ಟವಿರುವುದಿಲ್ಲ. ಯಾಕೆಂದರೆ, ಹೆಣ್ಣು ಮಕ್ಕಳು, ಗಂಡು ಮಕ್ಕಳಂತೆ ಅಲ್ಲವಲ್ಲ. ಅವರು ಮನೆಯ ಎಲ್ಲವೂ ಆಗಿರುತ್ತಾರೆ. ಗಂಡು ಮಕ್ಕಳು ಬೆಳೆದಂತೆ ಮನೆಯೊಂದಿಗಿನ ಸಂಪರ್ಕವನ್ನು ಕಡಿಮೆಗೊಳಿಸುತ್ತಾ ಹೋದರೆ ಹೆಣ್ಣು ಮಕ್ಕಳು ಬೆಳೆದಂತೆ ಇಡೀ ಮನೆಯನ್ನೇ ಆವರಿಸುತ್ತಾ ಹೋಗುತ್ತಾರೆ. ಬೆಳಗ್ಗೆ ಮನೆಯಿಂದ ಅಣ್ಣನೋ ತಂದೆಯೋ ಕೆಲಸದ ನಿಮಿತ್ತ ಹೊರಗೆ ಹೋಗುವಾಗ ಅವರನ್ನು ಬಾಗಿಲ ವರೆಗೆ ಬೀಳ್ಕೊಡುವುದು ಹೆಣ್ಣು ಮಕ್ಕಳೇ. ಮನೆಯಲ್ಲಿ ಒಬ್ಬಳು ತಂಗಿಯಿದ್ದರೆ ಅಣ್ಣನಿಗೆ ಬೇರೆ ಪರ್ಸನಲ್ ಸೆಕ್ರೆಟರಿಯ ಅಗತ್ಯವೇ ಇರುವುದಿಲ್ಲ. ಬೆಳಗ್ಗೆ ಬ್ರಶ್ ಮಾಡಿ ಬರುವ ಅಣ್ಣನ ಮುಂದೆ ನೀಟಾಗಿ ಇಸ್ತ್ರಿ ಹಾಕಿದ ಬಟ್ಟೆ ಇರುತ್ತದೆ. ಶೂವಿಗೆ ಪಾಲಿಶ್ ಹಾಕಿರುತ್ತದೆ. ಅಣ್ಣನ ಪೆನ್ನು, ದುಡ್ಡು, ಕರ್ಚೀಪು.. ಎಲ್ಲವನ್ನೂ ತಂಗಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿರುತ್ತಾಳೆ. ಟೇಬಲ್ಲಿನ ಮುಂದೆ ಬಂದು ಕೂತರೆ ಆರ್ಡರ್ ಮಾಡುವುದಕ್ಕಿಂತ ಮೊದಲೇ ಆಕೆ ಆಹಾರವನ್ನು ತಂದಿಡುತ್ತಾಳೆ. ಡ್ರೆಸ್ ಸೆನ್ಸ್ ಇಲ್ಲದ ಅಣ್ಣನನ್ನು ತರಾಟೆಗೆತ್ತಿಕೊಂಡು, ‘ಇಂಥ ಪ್ಯಾಂಟ್‍ಗೆ ಇಂಥ ಷರಟು ಹಾಕು.. ಅಂಥ ಬಲವಂತಪಡಿಸುವುದು ಅವಳೇ. ಅಣ್ಣನಿಗೆ ಜ್ವರ ಬಂದರೆ, ತಂದೆಯ ಆರೋಗ್ಯದಲ್ಲಿ ಏರು-ಪೇರಾದರೆ ವೈದ್ಯರಂತೆ ಶುಶ್ರೂಷೆ ನಡೆಸುವುದು ಹೆಣ್ಣು ಮಕ್ಕಳೇ. ಬೆಳಗ್ಗೆ ಹೊರಟು ನಿಂತ ಅಪ್ಪನಿಗೆ ಅದು ತಗೊಂಡ್ರಾ, ಇದು ಅಗತ್ಯವಿದೆಯಾ, ಏನಾದ್ರೂ ಮರೆತು ಬಿಟ್ರಾ.. ಎಂದೆಲ್ಲಾ ನೆನಪಿಸಿಕೊಡುವ ಹೊಣೆಗಾರಿಕೆಯನ್ನು ಮಗಳೇ ವಹಿಸಿಕೊಂಡಿರುತ್ತಾಳೆ. ಅಪ್ಪನ ಮೊಬೈಲು, ಕನ್ನಡಕ, ವಾಚು, ಪರ್ಸು.. ಎಲ್ಲವನ್ನೂ ಒಂದೇ ಕಡೆ ಜೋಡಿಸಿಟ್ಟು, ಪ್ರತಿದಿನ ಸೇವಿಸುವ ಔಷಧಿಯನ್ನು ಸಮಯಕ್ಕೆ ಸರಿಯಾಗಿ ಕೊಡುವ ಜವಾಬ್ದಾರಿಯೂ ಮಗಳದ್ದೇ. ಒಂದು ರೀತಿಯಲ್ಲಿ, ಬೆಳಗ್ಗಿನಿಂದ ಹಿಡಿದು ರಾತ್ರಿಯ ವರೆಗೆ ಹೆಣ್ಣು ಮಕ್ಕಳು ಮನೆಯ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರಿರುತ್ತಾರೆ. ಅವರಿಲ್ಲದ ಊಟವಿಲ್ಲ, ಮಾತುಕತೆಯಿಲ್ಲ, ತಮಾಷೆಯಿಲ್ಲ, ಆಟವಿಲ್ಲ, ಕಾರ್ಯಕ್ರಮವಿಲ್ಲ.. ಅಣ್ಣ, ತಮ್ಮ, ಅಪ್ಪ, ಅಮ್ಮ.. ಎಲ್ಲರಿಗೂ ‘ಮಗಳು’ ಬೇಕೇ ಬೇಕು ಅಥವಾ ಇವರೆಲ್ಲರ ಬದುಕು ‘ಮಗಳನ್ನು' ಅವಲಂಬಿಸಿಕೊಂಡೇ ಇರುತ್ತದೆ. ಹೀಗಿರುತ್ತಾ ಯಾವ ಹೆತ್ತವರು ತಾನೇ ತಮ್ಮ ಹೆಣ್ಣು ಮಕ್ಕಳನ್ನು ದೂರದೂರಿಗೆ ಕೊಡಲು ಇಚ್ಛಿಸುತ್ತಾರೆ? ಆರಂಭದಲ್ಲಿ ಉಲ್ಲೇಖಿಸಲಾದ ಹೆಣ್ಣು ಮಗಳ ಹೆತ್ತವರ ಎದುರೂ ಈ ಸವಾಲಿತ್ತು. ಹಾಗಂತ, ಬೆಳೆದ ಹೆಣ್ಣು ಮಗಳನ್ನು ಮನೆಯಲ್ಲಿಟ್ಟುಕೊಳ್ಳಲು ಆಗುವುದಿಲ್ಲವಲ್ಲವೇ? ಊರಿನ ಯುವಕರಂತೂ ಸಿಕ್ಕಾಪಟ್ಟೆ ತುಟ್ಟಿ. ಆದ್ದರಿಂದಲೇ ಕಡಿಮೆ ಬೆಲೆಗೆ ಸಿಕ್ಕ ಹಾಸನದ ಯುವಕನಿಗೆ ಆಕೆಯನ್ನು ಮದುವೆ ಮಾಡಿಸಿಕೊಟ್ಟರು. ಆದರೆ ಆತನ ಬೆಲೆ ಮಾತ್ರ ಕಡಿಮೆ ಅಲ್ಲ, ಆತನ ಸ್ವಭಾವದಲ್ಲೂ ಕೊರತೆಯಿದೆ ಅನ್ನುವುದು ಆ ಬಳಿಕ ಅವರಿಗೆ ಗೊತ್ತಾಯಿತು. ಆತ ಕುಡುಕನಾಗಿದ್ದ. ಹೇಗೂ ಎರಡು ಮಕ್ಕಳಾಗುವ ವರೆಗೆ ಸಹಿಸಿದ ಆಕೆ ಕೊನೆಗೆ, ತಿರುಗಿ ತಾಯಿ ಮನೆಗೆ ಬಂದಳು. ಆ ಬಳಿಕ ಆತ ಯಾವಾಗಲಾದರೊಮ್ಮೆ ಆಕೆಯ ಬಳಿಗೆ ಬರುತ್ತಿದ್ದ..
  ಮಂಗಳೂರು ಜಮಾಅತೆ ಇಸ್ಲಾಮೀ  ಹಿಂದ್‍ನ ಸಮಾಜ ಸೇವಾ ಘಟಕದ ಸದಸ್ಯರಾದ ನನ್ನ ಮಿತ್ರರು ಆಕೆಯ ಮನೆಗೆ ತೆರಳಿ ನೋವು, ಸಂಕಟಗಳನ್ನು ಆಲಿಸಿದರು. ಶೌಚಾಲಯ ಕಟ್ಟಿಸಿ ಕೊಡುವ ಭರವಸೆ ನೀಡಿದರು. ಈ ನಡುವೆ, ಆಕೆ 3ನೇ ಮಗುವಿನ ಗರ್ಭ ಹೊತ್ತಿರುವ ಸಂಗತಿ ಸೂಚ್ಯವಾಗಿ ಪ್ರಸ್ತಾಪವಾಯಿತು. ಮಾತ್ರವಲ್ಲ, ಇಬ್ಬರು ಮಕ್ಕಳನ್ನೇ ಸಾಕಲು ಅಸಾಧ್ಯವಾಗಿರುವಾಗ ಮೂರನೆಯದೊಂದನ್ನು ಸಾಕುವುದಾದರೂ ಹೇಗೆ ಅನ್ನುವ ಧಾಟಿಯ ಮಾತುಗಳೂ ತೇಲಿ ಬಂದುವು. ಆಗ ಘಟಕದ ಸದಸ್ಯರು ಆ ಹೆಣ್ಣು ಮಗಳನ್ನು ಸಾಂತ್ವನಿಸಿದರು. ಔಷಧ ಮತ್ತು ಆಹಾರದ ವ್ಯವಸ್ಥೆ ಮಾಡುವುದಾಗಿಯೂ ಒಂದು ವೇಳೆ ಮಗು ಬೇಡವೆಂದಾದರೆ, ಮಕ್ಕಳು ಇಲ್ಲದವರಿಗೆ ಮಗುವನ್ನು ಕೊಡುವ ವ್ಯವಸ್ಥೆ ಮಾಡುತ್ತೇವೆಂದೂ ಅವರು ಭರವಸೆ ನೀಡಿದರು. ಆಗ, ಆಕೆಗೆ ತನ್ನೊಳಗಿನ ಸಂಕಟವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಣ್ಣು ತುಂಬಿ ಬಂತು. ಆಗಲೇ ಆಕೆ ಸತ್ಯ ಹೇಳಿದ್ದು,
  ‘ನಿನ್ನೆಯೇ ಔಷಧಿ ಸೇವಿಸಿದ್ದೇನೆ..'
ಇಷ್ಟಕ್ಕೂ, ಈ ಒಂಟಿ ಘಟನೆಯನ್ನು ಎತ್ತಿಕೊಂಡು ಇಡೀ ಮುಸ್ಲಿಮ್ ಸಮುದಾಯವೇ ಹೀಗೆ ಎಂದು ಖಂಡಿತ ಹೇಳುತ್ತಿಲ್ಲ. ಒಂಟಿ ಘಟನೆಯನ್ನು ಸಾರ್ವತ್ರೀಕರಣಗೊಳಿಸಬೇಕಾದ (ಜನರಲೈಸ್) ಅಗತ್ಯವೂ ಇಲ್ಲ. ಹಾಗಂತ, ಇಂಥದ್ದು ಮುಸ್ಲಿಮ್ ಸಮುದಾಯದಲ್ಲಿ ಬೇರೆ ಇರಲು ಸಾಧ್ಯವೇ ಇಲ್ಲ ಎಂದೂ ಯಾರಾದರೂ ಹೇಳುತ್ತಾರಾ? ಇದು ಬಿಡಿ, ಇದಕ್ಕಿಂತಲೂ ಕ್ರೂರ ಸಂಗತಿಗಳು ಮುಸ್ಲಿಮ್ ಸಮುದಾಯದಲ್ಲಿವೆ ಅನ್ನುವುದನ್ನು ತಿರಸ್ಕರಿಸಲು ಸಾಧ್ಯವೇ? ಅಂದಹಾಗೆ, ಬಡತನದ ಕಾರಣದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ, ಅವರಿಗೂ ನಿಮಗೂ ಅಲ್ಲಾಹನೇ ಆಹಾರ ಕೊಡುತ್ತಾನೆ (17:31) ಎಂಬ ಪವಿತ್ರ ಕುರ್‍ಆನಿನ ವಚನವನ್ನು ಈ ಸಮುದಾಯ ಎಷ್ಟು ಬಾರಿ ಕೇಳಿಲ್ಲ? ಭಾಷಣ, ಬರಹಗಳ ಮೂಲಕ ಇಂಥ ವಚನಗಳು ಸಮುದಾಯದ ಬಳಿಗೆ ಎಷ್ಟು ಬಾರಿ ತಲುಪಿಲ್ಲ? ಹೀಗಿದ್ದೂ ಸಮುದಾಯದ ಮೇಲೆ ಪರಿಣಾಮ ಬೀರುವಲ್ಲಿ ಇವೆಲ್ಲ ಯಾಕೆ ವಿಫಲವಾಗುತ್ತಿವೆ? ನಿಜವಾಗಿ, ಸಮುದಾಯದಲ್ಲಿ ಮಸೀದಿಗಳ ಕೊರತೆಯಿಲ್ಲ. ಸಂಘಟನೆಗಳಿಗೂ ಕೊರತೆಯಿಲ್ಲ. ವಿದ್ವಾಂಸರೂ ಧಾರಾಳ ಇದ್ದಾರೆ. ಆದರೂ ಸಮುದಾಯದಲ್ಲಿ ತಳಮಟ್ಟದ ಸಮಸ್ಯೆಗಳೇಕೆ ಬಗೆಹರಿಯುತ್ತಿಲ್ಲ?
  ವರದಕ್ಷಿಣೆ
  ಬಡತನ
  ನಿರುದ್ಯೋಗ
  ಕಂದಾಚಾರಗಳು
  ಕೊಲೆ, ದರೋಡೆ
  ಕೆಡುಕುಗಳು..
..ಪಟ್ಟಿ ಇನ್ನೂ ಉದ್ದ ಇದೆ. ಅಲ್ಲದೇ, ಹೆಚ್ಚುವರಿಯಾಗಿ ಭಯೋತ್ಪಾದನೆಯ ಆರೋಪಕ್ಕೂ ಈ ಸಮುದಾಯ ಗುರಿಯಾಗಿ ಬಿಟ್ಟಿದೆ. ಫರ್ಲಾಂಗು ಫರ್ಲಾಂಗಿಗೂ ಮಸೀದಿ ಇರುವ ಮತ್ತು ಯಾವುದಾದರೊಂದು ಮಸೀದಿಯೊಂದಿಗೆ ಗುರುತಿಸಿಕೊಂಡು ಸಂಘಟಿತವಾಗಿರುವ ಮುಸ್ಲಿಮ್ ಸಮುದಾಯಕ್ಕೆ ತನ್ನ ಕೊರತೆಗಳನ್ನು ನಿವಾರಿಸಿಕೊಳ್ಳುವುದಕ್ಕೇಕೆ ಸಾಧ್ಯವಾಗುತ್ತಿಲ್ಲ? ಹಾಗೆ ನೋಡಿದರೆ, ಇಡೀ ಜಗತ್ತಿನಲ್ಲಿಯೇ ಅತ್ಯಂತ ಸಂಘಟಿತವಾಗಿರುವುದು ಮುಸ್ಲಿಮ್ ಸಮುದಾಯವೇ. ಮುಸ್ಲಿಮರು ವಾರಕ್ಕೊಮ್ಮೆಯಾದರೂ ಕಡ್ಡಾಯವಾಗಿ ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ಅಲ್ಲಿ ವಿದ್ವಾಂಸರಿಂದ ಧಾರ್ಮಿಕ ಹಿತವಚನಗಳನ್ನು ಆಲಿಸುತ್ತಾರೆ. ಮಸೀದಿಗೆ ತಿಂಗಳು ತಿಂಗಳು ವಂತಿಗೆ ಕೊಡುತ್ತಾರೆ. ಅಲ್ಲದೇ, ಒಂದು ಮಸೀದಿಯ ವ್ಯಾಪ್ತಿಯಲ್ಲಿ ಬರುವವರ ಹೆಸರು, ಮನೆಯ ಸದಸ್ಯರ ಸಂಖ್ಯೆ, ಗಂಡು-ಹೆಣ್ಣಿನ ವಿವರ.. ಎಲ್ಲವೂ ಆಯಾ ಮಸೀದಿಯಲ್ಲಿ ಬಹುತೇಕ ನಮೂದಾಗಿರುತ್ತವೆ. ಯಾವ ಮನೆಯಲ್ಲಿ ಮದುವೆ ಪ್ರಾಯದ ಎಷ್ಟು ಯುವತಿಯರಿದ್ದಾರೆ, ಎಷ್ಟು ವಿಧವೆಯರಿದ್ದಾರೆ, ರೋಗಿಗಳೆಷ್ಟು, ದುಡಿಯುವವರೆಷ್ಟು, ಮಕ್ಕಳೆಷ್ಟು.. ಎಂಬುದೆಲ್ಲಾ ಒಂದು ಮಸೀದಿಗೆ ಒಳಪಟ್ಟವರಲ್ಲಿ ಹೆಚ್ಚಿನವರಿಗೆ ಗೊತ್ತಿರುತ್ತದೆ. ಮಸೀದಿಯ ಆಡಳಿತ ಸಮಿತಿಯು ಒಂದೊಂದು ಮನೆಯ ಸಾಮರ್ಥ್ಯವನ್ನು ತಿಳಿದುಕೊಂಡೇ ವಂತಿಗೆಯನ್ನು ನಿಗದಿಪಡಿಸುತ್ತದೆ. ಒಂದು ರೀತಿಯಲ್ಲಿ, ಮಸೀದಿಯ ಆಡಳಿತ ಸಮಿತಿಗೆ ತನ್ನ ವ್ಯಾಪ್ತಿಯೊಳಗಿನ ಮನೆಗಳ ಪರಿಸ್ಥಿತಿಯ ಬಗ್ಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಹೀಗಿರುವಾಗ, ಮಸೀದಿಯ ಆಡಳಿತ ಮಂಡಳಿಯು ತುಸು ಜಾಗೃತವಾದರೂ ಸಾಕು, ಅವಕಾಶಗಳ ದೊಡ್ಡದೊಂಡು ಬಾಗಿಲೇ ತೆರೆದು ಬಿಡುವ ಸಾಧ್ಯತೆಯಿದೆ. ಇವತ್ತು ಸಮುದಾಯದಲ್ಲಿ ದಾನಿಗಳಿಗೆ ಕೊರತೆಯೇನೂ ಇಲ್ಲ. ಕೊರತೆ ಇರುವುದು ಇಚ್ಛಾಶಕ್ತಿಯದ್ದು ಮಾತ್ರ. ನಿಜವಾಗಿ, ನೆರವಿಗೆ ಅರ್ಹರಾದವರನ್ನು ಗುರುತಿಸುವ ಮತ್ತು ದಾನವನ್ನು ಅವರಿಗೆ ತಲುಪಿಸುವ ಪ್ರಯತ್ನಗಳು ಬಹುತೇಕ ಆಗುತ್ತಲೇ ಇಲ್ಲ. ಒಂದು ವೇಳೆ ಪ್ರತಿ ಜಮಾಅತ್ ತನ್ನ ವ್ಯಾಪ್ತಿಯಲ್ಲಿರುವ ಬಡ ಮನೆಗಳ ಪಟ್ಟಿಯೊಂದನ್ನು ತಯಾರಿಸಿ ದಾನಿಗಳನ್ನೋ ಸಮಾಜ ಸೇವಾ ಸಂಘಟನೆಗಳನ್ನೋ ಸಂಪರ್ಕಿಸಿದರೆ, ಹೊಟ್ಟೆಯಲ್ಲೇ ಮಗುವನ್ನು ಕರಗಿಸುವ ತಾಯಂದಿರ ಸಂಖ್ಯೆ ಖಂಡಿತ ಕಡಿಮೆಯಾಗಬಹುದು. ಅಂದಹಾಗೆ, ಪ್ರತಿ ಮಸೀದಿಯ ಜಮಾಅತ್‍ನಲ್ಲೂ ಶ್ರೀಮಂತರು, ವಿದೇಶದಲ್ಲಿ ಉದ್ಯೋಗದಲ್ಲಿರುವವರು ಖಂಡಿತ ಇರುತ್ತಾರೆ. ಹಾಗಂತ, ತಮ್ಮ ಮಸೀದಿಯಲ್ಲಿರುವ ಬಡವರ ಕುರಿತಂತೆ ಅವರಿಗೆ ಅಷ್ಟಾಗಿ ಮಾಹಿತಿ ಇರಬೇಕೆಂದೇನೂ ಇಲ್ಲ. ಒಂದು ವೇಳೆ ಇದ್ದರೂ ನೆರವು ನೀಡಬೇಕಾದುದು ತನ್ನ ಧಾರ್ಮಿಕ ಕರ್ತವ್ಯ ಎಂಬ ಪ್ರಜ್ಞೆ ಅವರಲ್ಲಿ ಇಲ್ಲದಿರಲೂಬಹುದು. ವರ್ಷಕ್ಕೊಮ್ಮೆ ನಡೆಯುವ 'ಗಂಭೀರ' ಮತ ಪ್ರವಚನಕ್ಕೆ ಇಲ್ಲವೇ ಇನ್ನಿತರ 'ವಾರ್ಷಿಕ'ಗಳಿಗೆ ದುಡ್ಡು ಕೊಡುವುದರಿಂದ ತನ್ನ ಹೊಣೆಗಾರಿಕೆ ಮುಗಿಯಿತೆಂದು ಅವರು ಭಾವಿಸಿರಲೂ ಬಹುದು. ಇಂಥವರಿಗೆ ದಾನದ ಮತ್ತು ಝಕಾತ್‍ನ ಮಹತ್ವವನ್ನು ತಿಳಿಸಿಕೊಡುವ ಹೊಣೆಗಾರಿಕೆ ಮಸೀದಿಯ ಉಸ್ತಾದ್‍ರದ್ದು. ಇದು ಕೇವಲ ಭಾಷಣಗಳ ಮುಖಾಂತರ ಆಗಬೇಕಾದ್ದಲ್ಲ. ತನ್ನ ವ್ಯಾಪ್ತಿಯ ಬಡವರ ಪಟ್ಟಿಯನ್ನು ಹಿಡಿದು ಈ ಶ್ರೀಮಂತರನ್ನು ಮುಖತಃ ಭೇಟಿಯಾಗಿ ಅವರ ಹೊಣೆಗಾರಿಕೆಯನ್ನು ಉಸ್ತಾದರು ಮನವರಿಕೆ ಮಾಡಿಸಿದರೆ, ಎಷ್ಟೇ ಜಿಪುಣನಾದರೂ ನೆರವು ನೀಡಲು ಮುಂದಾಗುವ ಸಾಧ್ಯತೆಯಿದೆ. ಮಸೀದಿಯ ಉಸ್ತಾದರು ಮತ್ತು ಆಡಳಿತ ಸಮಿತಿಯು ಒಂದು ವೇಳೆ ಪ್ರತಿ ಮನೆಯ ಸಮಸ್ಯೆಯನ್ನೂ ತಮ್ಮದೇ ಸಮಸ್ಯೆ ಎಂದು ಭಾವಿಸಿ ಕಾರ್ಯಪ್ರವೃತ್ತವಾದರೆ ಸಮುದಾಯ ಯಾರ ಮುಂದೆಯೂ ತಲೆ ತಗ್ಗಿಸಿ ನಿಲ್ಲಬೇಕಾದ ಅಗತ್ಯವೇ ಇಲ್ಲ.
  ಅಲ್ಲದೇ
ಸಮುದಾಯದಲ್ಲಿ ದೊಡ್ಡದೊಂದು  ಯುವ ಪಡೆಯಿದೆ. ಮಾತ್ರವಲ್ಲ, ಇವತ್ತು ಈ ಯುವ ಪಡೆಯ ಮೇಲಿರುವ ದೊಡ್ಡ ಆರೋಪ ಏನೆಂದರೆ, ಸಮಾಜಬಾಹಿರ ಕೃತ್ಯಗಳಲ್ಲಿ ಇವರ ಹೆಸರೇ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದೆ ಎಂಬುದು. ನಿಜವಾಗಿ, ಮಸೀದಿಯು ಸಕ್ರಿಯವಾದರೆ ಸಮುದಾಯದ ಯುವಕರನ್ನು ಸಂಪನ್ಮೂಲವಾಗಿ ಬದಲಿಸಲು ಖಂಡಿತ ಸಾಧ್ಯವಿದೆ. ಯುವಕರು ಎಷ್ಟೇ ಕೆಟ್ಟವರಾಗಿದ್ದರೂ ಮಸೀದಿಯ ಉಸ್ತಾದರನ್ನು ಗೌರವಿಸುತ್ತಾರೆ. ಆದ್ದರಿಂದ, ಯುವಕರೊಂದಿಗೆ ಸಲುಗೆ ಬೆಳೆಸಿ, ಅವರನ್ನು ಮಸೀದಿಯಲ್ಲಿ ಒಟ್ಟುಗೂಡಿಸಿ, ಅವರನ್ನು ಪ್ರಯೋಜನಕಾರಿ ಕೆಲಸಗಳಲ್ಲಿ ತೊಡಗಿಸುವಂತೆ ಮಾಡಲು ಉಸ್ತಾದರಿಗೆ ಸಾಧ್ಯವಿದೆ. ಮುಖ್ಯವಾಗಿ, ಮಸೀದಿಯ ವ್ಯಾಪ್ತಿಗೊಳಪಟ್ಟ ಪ್ರತಿ ಮನೆಗಳ ಸರ್ವೇ ನಡೆಸುವುದಕ್ಕೆ ಒಂದು ತಂಡ; ರೋಗಿಗಳು, ವಿಧವೆಯರು, ಯುವತಿಯರ ಪಟ್ಟಿ ತಯಾರಿಸುವುದಕ್ಕೆ ಇನ್ನೊಂದು ತಂಡ; ಪಟ್ಟಣಗಳಲ್ಲಿನ ದಾನಿಗಳು ಮತ್ತು ಸಮಾಜ ಸೇವಾ ಸಂಘಟನೆಗಳನ್ನು ಸಂಪರ್ಕಿಸುವುದಕ್ಕೆ ಮತ್ತೊಂದು ತಂಡ.. ಹೀಗೆ ಮೊರ್ನಾಲ್ಕು ಯುವಕರ ಬೇರೆ ಬೇರೆ ತಂಡಗಳನ್ನು ರಚಿಸಿ, ಆಯಾ ತಂಡಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟರೆ ಮತ್ತು ಉಸ್ತಾದರು ಸಕ್ರಿಯವಾಗಿ ಈ ಇಡೀ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ದೊಡ್ಡದೊಂದು  ಬದಲಾವಣೆ ಸಾಧ್ಯವಾದೀತು. ಮಾತ್ರವಲ್ಲ, ಯುವಕರನ್ನು ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿದ ಪ್ರತಿಫಲವೂ ಸಿಕ್ಕೀತು..
  ಅಂದಹಾಗೆ, ಪ್ರವಾದಿ ಮುಹಮ್ಮದ್‍ರನ್ನು(ಸ) ಪ್ರೀತಿಸುವ ನೆಪದಲ್ಲಿ ಭಾರೀ ಮೆರವಣಿಗೆಗಳು; ಹಾಡು, ಭಾಷಣ, ತಳಿರು-ತೋರಣಗಳ ಭರ್ಜರಿ ಸಿದ್ಧತೆಯಲ್ಲಿ ಬಿಝಿಯಾಗಿರುವ ಮಂದಿ, ಹೊಟ್ಟೆಯಲ್ಲೇ ಮಗುವನ್ನು ಕರಗಿಸುವಂಥ ತಾಯಂದಿರನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಪ್ರವಾದಿಯವರನ್ನು ಪ್ರೀತಿಸಬೇಕೆಂದು ಭಾಷಣ ಮಾಡುವ ಉಸ್ತಾದ್ ಮತ್ತು ಅದಕ್ಕೆ ವೇದಿಕೆ ಸಜ್ಜುಗೊಳಿಸುವ ಮಸೀದಿಯ ಆಡಳಿತ ಸಮಿತಿಯು ಪ್ರವಾದಿ ಪ್ರೇಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದಕ್ಕೆ ಯೋಜನೆಯನ್ನು ಸಿದ್ಧಪಡಿಸಬೇಕು. ಮುಂದಿನ ರಬೀಉಲ್ ಅವ್ವಲ್‍ನ ಒಳಗೆ ತಮ್ಮ ಮಸೀದಿಯ ವ್ಯಾಪ್ತಿಯಲ್ಲಿರುವ ಬಡವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಕ್ರಾಂತಿಕಾರಿ ನೀಲನಕ್ಷೆಯನ್ನು ರೂಪಿಸಬೇಕು. ಈ ಯೋಜನೆ ಜಾರಿಗೊಳ್ಳಬೇಕಾದರೆ ಯಾರ್ಯಾರನ್ನು ಸಂಪರ್ಕಿಸಬೇಕು, ಎಷ್ಟು ತಂಡಗಳನ್ನು ರೂಪಿಸಬೇಕು ಎಂಬ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಬೇಕು. ಪ್ರವಾದಿಯನ್ನು ಪ್ರೀತಿಸುವುದೆಂದರೆ, ವರದಕ್ಷಿಣೆ ರಹಿತ ಮದುವೆಯನ್ನು ಜಾರಿಗೆ ತರುವುದು; ಬಡತನದಿಂದ ಜನರನ್ನು ಮುಕ್ತಗೊಳಿಸುವುದು; ಕೆಡುಕುಗಳಿಂದ ಸಮಾಜವನ್ನು ರಕ್ಷಿಸುವುದು; ರೋಗಿಗಳಿಗೆ ನೆರವಾಗುವುದು; ದೇವ ಮತ್ತು ವ್ಯಕ್ತಿಯ ನಡುವಿನ ವಿಶ್ವಾಸವನ್ನು ಬಲಿಷ್ಠಗೊಳಿಸುವುದು; ದೇಶಬಾಂಧವರಿಗೆ ಪ್ರವಾದಿಯನ್ನು ಪರಿಚಯಿಸುವುದು.. ಮುಂತಾದ ಸ್ಪಷ್ಟ ಸಂದೇಶ ಎಲ್ಲ ಮಸೀದಿಗಳಿಂದಲೂ ಹೊರಡುವಂತಾಗಬೇಕು..
  ಇಲ್ಲದಿದ್ದರೆ, ಹೊಟ್ಟೆಯಲ್ಲೇ  ಕರಗಿ ಹೋಗುವ ಪುಟ್ಟ ಕಂದಮ್ಮಗಳು ನಾಳೆ ಈ ಉಸ್ತಾದರು ಮತ್ತು ಈ ಪ್ರವಾದಿ ಪ್ರೇಮಿಗಳ ವಿರುದ್ಧ ಅಲ್ಲಾಹನ ನ್ಯಾಯಾಲಯದಲ್ಲಿ ದಾವೆ ಹೂಡಬಹುದು..

Tuesday, January 8, 2013

ತಪ್ಪು ಮಾಡುವುದಕ್ಕಿಂತ ಮೊದಲು ಎಲ್ಲರೂ ಈ ತಾಯಿ - ಮಗನನ್ನು ಸ್ಮರಿಸಿಕೊಳ್ಳಿ..

ಅರ್‍ಪ್ಪುದಮ್ ಅಮ್ಮಾಳ್
ಪೇರರಿವಾಲನ್‍
  “ನನ್ನ ಮಗನ ಕೋಣೆಯನ್ನು ಕಂಡು ನಾನು ದಂಗಾಗಿ ಹೋಗಿದ್ದೆ. ಕರುಳು ಕಿತ್ತು ಬಂತು. ಕಣ್ಣು ತುಂಬಿಕೊಂಡವು. ಸರಿಯಾಗಿ ಕಾಲು ಚಾಚಿ ಮಲಗಲೂ ಸಾಧ್ಯವಿಲ್ಲದಂಥ ಚಿಕ್ಕ ಕೋಣೆ. 'ನೋಡಮ್ಮ ನನ್ನ ಮನೆಯನ್ನು..' ಅಂತ ಆತ ಹೇಳಿದಾಗ ನನ್ನ ಗಂಟಲು ಕಟ್ಟಿತ್ತು. 20 ವರ್ಷಗಳಿಂದ ಆತ ಈ ಕೋಣೆಯಲ್ಲಿ ಬದುಕುತ್ತಿದ್ದಾನಲ್ಲ, ಹೇಗೆ ಆ ಸಂಕಟವನ್ನು ವಿವರಿಸುವುದು? ಇಷ್ಟಕ್ಕೂ, ಬೆಲೆ ಎಂಬುದು ರಾಜೀವ್ ಗಾಂಧಿಯವರ ಜೀವಕ್ಕೆ ಮಾತ್ರ ಇರುವುದು ಅಲ್ಲವಲ್ಲ. ನನ್ನ ಮಗನದ್ದೂ ಜೀವವೇ ಅಲ್ಲವೇ? ಇದರರ್ಥ ಕೊಲೆಗಾರರಿಗೆ ಶಿಕ್ಷೆಯಾಗಬಾರದು ಎಂದಲ್ಲ. ಆಗಲೇಬೇಕು. ಆದರೆ ನಿರಪರಾಧಿಯಾದ ನನ್ನ ಮಗ ನನ್ನೇಕೆ ಈ ರೀತಿ ದಂಡಿಸುತ್ತಿದ್ದಾರೆ? ಆ ಇಡೀ ಷಡ್ಯಂತ್ರದ ಸೂತ್ರದಾರರನ್ನು ಪತ್ತೆ ಹಚ್ಚದೇ, ಯಾವ ರಾಜಕೀಯ ಬಲವೂ ಇಲ್ಲದ, ಶ್ರೀಮಂತರ ಸಾಲಿನಲ್ಲೂ ಗುರುತಿಸಿಕೊಳ್ಳದ ಬಡ ಗುಡಿಸಲಿನ ಮಕ್ಕಳನ್ನೇಕೆ ಶಿಕ್ಷಿಸಲಾಗುತ್ತದೆ? ಇವೆಲ್ಲವನ್ನು ನೋಡುವಾಗ, ದೇವನಲ್ಲಿ ವಿಶ್ವಾಸವಿಡದೇ ಇರುವ ನನ್ನ ನಿಲುವು ಸರಿಯೆಂದೇ ನನಗನಿಸುತ್ತದೆ. ದೇವನಿರುತ್ತಿದ್ದರೆ, ತಪ್ಪು ಮಾಡದ ನನ್ನ ಮಗ ಶಿಕ್ಷೆಗೊಳಗಾಗುತ್ತಿದ್ದನೇ? ನನ್ನ ಮಗ ಒಳ್ಳೆಯವನೆಂದು ನನಗೂ ನನ್ನ ಮನೆಯವರಿಗೂ ಮತ್ತು ಪರಿಸರದವರಿಗೂ ಗೊತ್ತಿದೆ. ದೇವನಿಗೇಕೆ ಗೊತ್ತಾಗುತ್ತಿಲ್ಲ? ಅಂದಹಾಗೆ ಈ ಜಗತ್ತಿನಲ್ಲಿ ಎಷ್ಟು ಮರಣ ದಂಡನೆಗಳು ಜಾರಿಯಾಗುತ್ತಿಲ್ಲ? ಹಾಗಂತ ಅಪರಾಧ ಕೃತ್ಯಗಳು ಕಡಿಮೆಯಾಗುತ್ತಿವೆಯೇ? ಮರಣ ದಂಡನೆಯಿಂದ ಅಪರಾಧ ಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲ. ಮನಸ್ಸಾಕ್ಷಿಯೆಂಬ ಕೋರ್ಟಿಗೆ ಭಯಪಡುವವರು ಮಾತ್ರ ಇತರರಿಗೆ ಅನ್ಯಾಯ ಮಾಡಲಾರರು..
   65 ವರ್ಷದ ಅರ್‍ಪ್ಪುದಮ್ ಅಮ್ಮಾಳ್ ಹೇಳುತ್ತಾ ಹೋಗುತ್ತಾರೆ. ಅವರ ಮಾತಿನಲ್ಲಿ ಗೊಂದಲ, ವಿಷಾದ, ಸಿಟ್ಟು, ನಿರೀಕ್ಷೆ.. ಎಲ್ಲವೂ ವ್ಯಕ್ತವಾಗುತ್ತಲೇ ಇರುತ್ತದೆ. ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾದ ಆರೋಪದೊಂದಿಗೆ ಮರಣ ದಂಡನೆ ಶಿಕ್ಷೆಗೀಡಾಗಿ ಸದ್ಯ ವೆಲ್ಲೂರು ಜೈಲಿನಲ್ಲಿರುವ ಪೇರರಿವಾಲನ್‍ನ ತಾಯಿ ಈ ಅರ್‍ಪ್ಪುದಮ್ ಅಮ್ಮಾಳ್. ತನ್ನ ಮಗನನ್ನು ಉಳಿಸಿಕೊಳ್ಳುವುದಕ್ಕಾಗಿ ಕಳೆದ 21 ವರ್ಷಗಳಿಂದ ಅವರು ಹತ್ತದ ಬಸ್‍ಗಳಿಲ್ಲ. ಏರದ ಕಚೇರಿ ಮೆಟ್ಟಿಲುಗಳಿಲ್ಲ. ಭೇಟಿಯಾಗದ ರಾಜಕಾರಣಿಗಳು, ನ್ಯಾಯವಾದಿಗಳಿಲ್ಲ. 1991 ಜೂನ್ 11ರಂದು ತನ್ನ ಕೈಯಾರೆ ಪೇರರಿವಾಲನ್‍ನನ್ನು ಪೊಲೀಸರ ಕೈಗೊಪ್ಪಿಸಿದ ಈ ತಾಯಿ ಅಂದಿನಿಂದ ಈ ವರೆಗೂ ಮಗನಿಗಾಗಿ ಕಾಯುತ್ತಿದ್ದಾರೆ..
  ಅದೊಂದು ದಿನ
ಈಗ ವಿಚಾರಣೆ ನಡೆಸಿ ಸಂಜೆಯ ಹೊತ್ತಿಗೆ ಬಿಡುತ್ತೇವೆ ಎಂದು ಭರವಸೆ ನೀಡಿ ಪೇರರಿವಾಲನ್‍ನನ್ನು ಕರಕೊಂಡು ಹೋಗಿದ್ದ ಪೊಲೀಸರು ಮರುದಿನವಾದರೂ ಬಿಡಲಿಲ್ಲ. ನಾವು ಹೋದಾಗ ಮಗನನ್ನು ಭೇಟಿಯಾಗಲೂ ಬಿಡಲಿಲ್ಲ. ವಿಚಾರಣೆ ಮುಗಿದಿಲ್ಲ, ನಾಳೆ ಬಿಡುತ್ತೇವೆ ಎಂದರು. ಮರುದಿನವೂ ಬಿಡಲಿಲ್ಲ. ಹೀಗೆ ದಿನಗಳು ಉರುಳಿದ ಬಳಿಕ ಒಂದು ದಿನ ಯಾರನ್ನಾದರೂ ವಕೀಲರನ್ನು ಕರಕೊಂಡು ಬನ್ನಿ ಎಂದು ಪೊಲೀಸರೇ ಸಲಹೆ ಕೊಟ್ಟರು. ನಮಗೆ ಭಯ ಶುರುವಾಯಿತು. ದ್ರಾವಿಡ ಕಳಗಂ (ಡಿ.ಕೆ.) ಪಕ್ಷದ ವಕೀಲ ದೊರೆ ಸ್ವಾಮಿಯವರಲ್ಲಿ ನಾವು ಕೇಳಿಕೊಂಡೆವು. ನಿಜವಾಗಿ, ನನ್ನ ಗಂಡ ತನ್ನ 8ನೇ ವಯಸ್ಸಿನಿಂದಲೇ ಈ ಪಕ್ಷದ ಕಾರ್ಯಕರ್ತರು. ಪೆರಿಯಾರ್ ಚಿಂತನೆಯೊಂದಿಗೆ ನಮಗೆ ಬಲವಾದ ನಂಟಿತ್ತಾದ್ದರಿಂದ ಮತ್ತು ಅವರ ಸಿದ್ಧಾಂತದಡಿಯಲ್ಲೇ ಡಿ.ಕೆ. ಪಕ್ಷ  ಸ್ಥಾಪಿತವಾದ್ದರಿಂದ ನಮ್ಮ ಸಂಬಂಧ ಸಹಜವಾಗಿತ್ತು. ಅಲ್ಲದೇ 1991ರಲ್ಲಿ ಇಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೋಮಾ ಮಾಡಿ ಪಾರ್ಟ್ ಟೈಮಲ್ಲಿ ಎಂಜಿನಿಯರಿಂಗ್ ಕಲಿಯಲಿಕ್ಕಾಗಿ ಚೆನ್ನೈಗೆ ತೆರಳಿದ್ದ ಪೇರರಿವಾಲನ್ ವಾಸಿಸುತ್ತಿದ್ದುದು ಇದೇ ಪಕ್ಷದ ಕಚೇರಿಯಲ್ಲಿ. ಈ ಪಕ್ಷದ ಮುಖವಾಣಿಯಾದ ವಿಡುತಲೈ ಪತ್ರಿಕೆಯಲ್ಲಿ ಪಾರ್ಟ್ ಟೈಂ ಕೆಲಸವನ್ನೂ ಮಾಡುತ್ತಿದ್ದ. ಇಷ್ಟಿದ್ದೂ ಮಗನ ಬಂಧನದ ಬಳಿಕ ಇದೇ ಪತ್ರಿಕೆ, ಡಿ.ಕೆ. ಪಕ್ಷಕ್ಕೂ ನನ್ನ ಮಗನಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಂಪಾದಕೀಯದಲ್ಲೇ ಬರೆದುಬಿಟ್ಟಿತು. ಅದು ಬಿಡಿ, ಮಗನ ಬಿಡುಗಡೆಗಾಗಿ ಚೆನ್ನೈಯಲ್ಲಿ ಕಾದು ಕಾದು ಸುಸ್ತಾದ ನಾವು ಕೊನೆಗೆ ನಮ್ಮ ಊರಾದ ಜೋಲಾರ್ ಪೇಟೆಗೆ ಮರಳಿದೆವು. ಬಳಿಕ ಮಗನನ್ನು ಚೆಂಗಲ್ ಪೇಟೆಯ ಕೋರ್ಟಿಗೆ ಹಾಜರುಪಡಿಸಿದಾಗ ಕುಟುಂಬದ ಜೊತೆ ಕೋರ್ಟಿಗೆ ಹೋದೆವು. ಕೋರ್ಟಿನಲ್ಲಿ ಅವನನ್ನು ನೋಡಲೋ ಮಾತಾಡಲೋ ಪೊಲೀಸರು ಬಿಡಲಿಲ್ಲ. ಅಷ್ಟಕ್ಕೂ ಮುಖ ಮುಚ್ಚಿದ ಹಲವು ವ್ಯಕ್ತಿಗಳಲ್ಲಿ ನನ್ನ ಮಗ ಯಾರೆಂದು ಪತ್ತೆ ಹಚ್ಚುವುದಾದರೂ ಹೇಗೆ? ನಾವು ಹೊರಗಿನಿಂದ ಮಗನ ಹೆಸರು ಕೂಗುತ್ತಿದ್ದೆವು. ಕಣ್ಣೀರು ಒತ್ತಿ ಬರುತ್ತಿತ್ತು. ರಾಬರ್ಟ್ ಪಾಯಸ್, ಷಣ್ಮುಗಂ ಮತ್ತು ನನ್ನ ಮಗನನ್ನು ಅವತ್ತು ಕೋರ್ಟಿಗೆ ಹಾಜರುಪಡಿಸಿದ್ದರಲ್ಲವೇ? ಷಣ್ಮುಗನನ್ನೇ ನಾವು ಪೇರರಿವಾಲನ್ ಎಂದು ಭ್ರಮಿಸಿ ಕೂಗುತ್ತಿದ್ದೆವು.
   ನೀವೇ ಹೇಳಿ, ತಪ್ಪು ಒಪ್ಪಿಕೊಳ್ಳದಿದ್ದರೆ ನಿನ್ನ ತಂಗಿ ಮತ್ತು ಅಕ್ಕಳನ್ನು ಅತ್ಯಾಚಾರ ಮಾಡುತ್ತೇವೆಂದು 19 ವರ್ಷದ ಯುವಕನನ್ನು ಬೆದರಿಸಿದರೆ ಆತ ಏನು ತಾನೇ ಮಾಡಿಯಾನು? ತಪ್ಪು ಒಪ್ಪಿಕೊಂಡರೆ ಭವಿಷ್ಯದಲ್ಲಿ ಏನಾಗಬಹುದೆಂದು ಆಲೋಚಿಸುವಷ್ಟು ಅನುಭವಸ್ಥ ಪ್ರಾಯ ಅದಲ್ಲವಲ್ಲ. ಆತನಿಗೆ ಕೊಟ್ಟ ಹಿಂಸೆಯನ್ನು ನೆನಪಿಸುವಾಗ ಹೃದಯ ತುಂಬಿ ಬರುತ್ತದೆ. ನನ್ನ ನಿರಪರಾಧಿ ಮಗನನ್ನು ಆ ಪೊಲೀಸರು ಮನ ಬಂದಂತೆ ನಡೆಸಿಕೊಂಡರಲ್ಲ, ನಾನು ಹೇಗೆ ಅದನ್ನು ಸಹಿಸಲಿ?
ರಾಜೀವ್ ಗಾಂಧಿಯನ್ನು ಕೊಂದ ಆರೋಪಿ ಶಿವರಸನ್‍ಗೆ ಬ್ಯಾಟರಿಯನ್ನು ಖರೀದಿಸಿಕೊಟ್ಟ ಆರೋಪವನ್ನು ಪೊಲೀಸರು ನನ್ನ ಮಗನ ಮೇಲೆ ಹೊರಿಸಿದ್ದಾರೆ. ಹೀಗೆ ಬ್ಯಾಟರಿ ಖರೀದಿಸಿ ಕೊಟ್ಟದ್ದು ನನ್ನ ಮಗನೊಬ್ಬನೇ ಅಲ್ಲ, ರವಿಚಂದ್ರನ್ ಎಂಬವನೂ ಬ್ಯಾಟರಿ ಖರೀದಿಸಿಕೊಟ್ಟಿದ್ದಾನೆ. ಆದರೆ ಅವನಿಗೆ ಈ ದೇಶದ ನ್ಯಾಯಾಲಯ ವಿಧಿಸಿದ್ದು ಜೀವಾವಧಿ ಶಿಕ್ಷೆ. ನನ್ನ ಮಗನಿಗೆ ಮಾತ್ರ ಮರಣ ದಂಡನೆ. ಇದು ಯಾವ ಬಗೆಯ ನ್ಯಾಯ? ಶಿವರಸನ್ ನನ್ನ ಮಗ ಖರೀದಿಸಿಕೊಟ್ಟ ಬ್ಯಾಟರಿಯನ್ನೇ ಉಪಯೋಗಿಸಿದ್ದಾನೆ ಎಂದು ಯಾವ ಆಧಾರದಲ್ಲಿ ಹೇಳುವುದು? ಅದಕ್ಕೇ ನಾನು ಹೇಳ್ತಾ ಇರುವುದು, ಇಡೀ ಪ್ರಕರಣದ ವಿಚಾರಣೆ ಮುಕ್ತವಾಗಿ ನಡೆಯಲಿ ಎಂದು. ದೇಶದ ಮಾಜಿ ಪ್ರಧಾನಿಯ ಕೊಲೆಯ ವಿಚಾರಣೆಯನ್ನು ಯಾಕೆ ರಹಸ್ಯವಾಗಿ ನಡೆಸಬೇಕು? ಯಾಕೆ ನನ್ನ ಮಗನ ಮೇಲಿನ ಆರೋಪ ಮತ್ತು ಅದರ ವಿಚಾರಣೆಯನ್ನು ನಾನು ಆಲಿಸಬಾರದು? ಇಷ್ಟಕ್ಕೂ ಟಾಡಾ ಕೋರ್ಟಿನಲ್ಲಿ ವಿಚಾರಣೆ ಹೇಗೆ ನಡೆಯುತ್ತದೆಂಬುದು ನಿಮಗೂ ಗೊತ್ತಲ್ಲವೇ? ನ್ಯಾಯಾಂಗ ಕಸ್ಟಡಿಯಲ್ಲಿ ಆರೋಪಿಯಿಂದ ಪಡಕೊಂಡ ತಪ್ಪೊಪ್ಪಿಗೆಯನ್ನೇ ಅಲ್ಲಿ ಪುರಾವೆಯೆಂದು ಪರಿಗಣಿಸಲಾಗುತ್ತದಲ್ಲವೇ? ನನ್ನ ಮಗ ಈ ವರೆಗೆ ಆರು ಬಾರಿ ನೇಣುಗಂಭದ ಹತ್ತಿರ ಬಂದು ಪಾರಾಗಿದ್ದಾನೆ. ಪ್ರತಿ ಸಂದರ್ಭವೂ ಅದು ನನ್ನ ಪಾಲಿನ ನೇಣುಗಂಭವೇ ಆಗಿತ್ತು. ನಾನೇ ನೇಣಿಗೆ ಕೊರಳೊಡ್ಡಿದಂತೆ ಪ್ರತಿ ಸಂದರ್ಭವನ್ನೂ ಅನುಭವಿಸಿದ್ದೇನೆ. ಒಂದು ರೀತಿಯಲ್ಲಿ ಸಾಯುತ್ತಾ ಬದುಕುತ್ತಿರುವ ಓರ್ವ ಅಮ್ಮ ನಾನು. 2011ರಲ್ಲಿ ವೆಲ್ಲೂರು ಜೈಲಿನಿಂದ ಪತ್ರವೊಂದು ಬಂದಿತ್ತು. ‘ಮಗನನ್ನು ಸೆ. 9ಕ್ಕೆ ನೇಣಿಗೇರಿಸಲಾಗುವುದು, ಮೃತದೇಹವನ್ನು ಪಡಕೊಳ್ಳಿ..' ಎಂದು ಅದರಲ್ಲಿ ತಿಳಿಸಲಾಗಿತ್ತು. ಓರ್ವ ಅಮ್ಮನಾಗಿ ಆ ಪತ್ರವನ್ನು ನಾನು ಹೇಗೆ ಓದಲಿ? ಕೈಯಾರೆ ಬೆಳೆಸಿದ ಮಗ ನೇಣಿಗೇರುವುದನ್ನು ಕಲ್ಪಿಸಿ ಕೊಳ್ಳುವುದಾದರೂ ಹೇಗೆ? ಜಯಲಲಿತಾರು ವಿಧಾನಸಭೆಯಲ್ಲಿ ವಿಶೇಷ ಪ್ರಸ್ತಾವನೆಯನ್ನು ಮಂಡಿಸಿದ್ದರಿಂದ ಸದ್ಯ ಮಗ ನೇಣುಗಂಭದಿಂದ ಪಾರಾಗಿದ್ದಾನೆ. ಆದರೂ ನನ್ನಲ್ಲಿ ಭರವಸೆ ಕ್ಷೀಣಿಸುತ್ತಾ ಇದೆ. ನ್ಯಾಯದ ಬಗ್ಗೆಯೇ ಜಿಗುಪ್ಸೆ ಮೂಡತೊಡಗಿದೆ. ಅಂದಹಾಗೆ, ನನ್ನ ಮಗನಿಗೆ ಮರಣ ದಂಡನೆ ವಿಧಿಸಿರುವುದನ್ನು ಪ್ರಸಿದ್ಧ ನ್ಯಾಯವಾದಿ ಕೃಷ್ಣಯ್ಯರ್ ಅವರೇ ಪ್ರಶ್ನಿಸಿದ್ದಾರೆ. ಅವರಿಗೆ ಗೊತ್ತಿಲ್ಲದ ನ್ಯಾಯ ಇನ್ನಾರಿಗೆ ಗೊತ್ತಿದೆ..
    ಒಂದು ಕಡೆ ಮಗನನ್ನು ತಪ್ಪಿತಸ್ಥ ಎಂದು ಎಲ್ಲೋ ಒಂದು ಕಡೆ ಒಪ್ಪಿಕೊಳ್ಳುತ್ತಲೇ ಇನ್ನೊಂದು ಕಡೆ ನಿರಪರಾಧಿ ಎಂದು ಹೇಳುತ್ತಾ ಹೋಗುವ ಆ ಅಮ್ಮನ ಬಗ್ಗೆ ಮರುಕವಾಗುತ್ತದೆ. ಎಲ್‍ಟಿಟಿಇಯ ಪ್ರಭಾಕರನ್‍ನನ್ನು ಬೆಂಬಲಿಸುತ್ತಿದ್ದ, ಅವನ ಪೋಟೋವನ್ನು ಟಿ.ವಿ. ಮೇಲೆ ಸದಾ ಇಟ್ಟಿರುತ್ತಿದ್ದ ಮನೆಯಾಗಿತ್ತು ಈ ಅರ್‍ಪ್ಪುದಮ್ ಅಮ್ಮಾಳ್‍ರದ್ದು. ಮರಣದಂಡನೆ ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಇಳಿಸಲಾದ ನಳಿನಿಯ ಸಹೋದರ ಭಾಗ್ಯನಾಥನಿಗೂ ಅಮ್ಮಾಳ್‍ರ ಕುಟುಂಬಕ್ಕೂ ಉತ್ತಮ ಸಂಬಂಧವಿತ್ತು..
  ಪೂಂದಮಲ್ಲಿ ವಿಶೇಷ ಕೋರ್ಟಿನಲ್ಲಿ ಮಗನ ವಿಚಾರಣೆ ನಡೆಯುತ್ತಿತ್ತು. ಜೈಲಿನ ಬಳಿಯೇ ವಿಶೇಷ ಕೋರ್ಟು. ಅಲ್ಲಿಗೆ ಹೋಗಲು ನಮಗಾರಿಗೂ ಅವಕಾಶ ಇರಲಿಲ್ಲ. ನಾನು ಮನಸ್ಸಾದಾಗಲೆಲ್ಲ ಪೂಂದಮಲ್ಲಿಗೆ ಹೋಗುತ್ತಿದ್ದೆ. ಮಗನನ್ನು ತೋರಿಸದಿದ್ದರೆ ಕೂಗಾಡುತ್ತಿದ್ದೆ. ಅಲ್ಲೇ ಕೂರುತ್ತಿದ್ದೆ. ಜಗಳ ಮಾಡುತ್ತಿದ್ದೆ. ಪೊಲೀಸರನ್ನು ಕೆಟ್ಟ ಪದಗಳಿಂದ ಬೈಯುತ್ತಿದ್ದೆ. ಹೀಗೆ 8 ವರ್ಷಗಳ ವರೆಗೆ ನನಗೆ ಆತನನ್ನು ಸರಿಯಾಗಿ ನೋಡಲು ಅವಕಾಶವೇ ಸಿಗಲಿಲ್ಲ. ನನ್ನನ್ನು ಅತ್ಯಂತ ಸಂಕಟಕ್ಕೆ ಒಳಪಡಿಸಿದ್ದು ಯಾವುದು ಗೊತ್ತೇ, ಬಂಧನದ ದಿನದಿಂದಲೇ ನನ್ನ ಮಗನಿಗೆ ಕೈದಿಯ  ಉಡುಪು (ಬಿಳಿ) ತೊಡಿಸಿದ್ದು. ಆ ವೇಷದಲ್ಲಿ ನನ್ನ ಮಗನನ್ನು ನೋಡಿ ನಾನು ಅತ್ತು ಬಿಟ್ಟೆ. ದೂರು ಕೊಟ್ಟ ಮೇಲೆ ಮಗನಿಗೆ ಸಾಮಾನ್ಯ ಉಡುಪು ಸಿಕ್ಕಿತು. ಪೂಂದಮಲ್ಲಿ ಜೈಲಿನಲ್ಲಿ ನಾನು ಮತ್ತು ನನ್ನ ಮಗ ಭೇಟಿಯಾಗುತ್ತಿದ್ದುದು ಫೈಬರ್ ಗ್ಲಾಸಿನ ಆಚೆ-ಈಚೆ. ಪರಸ್ಪರ ಮಾತು ಕೇಳುತ್ತಿಲ್ಲವಾದ್ದರಿಂದ ಫೋನಿನಲ್ಲಿ ಮಾತಾಡಬೇಕಿತ್ತು. ನಾನು ದೂರು ಕೊಟ್ಟ ಬಳಿಕ ಫೈಬರ್ ಗ್ಲಾಸಿನಲ್ಲಿ ಸಣ್ಣದೊಂದು ತೂತು ಕೊರೆಯಲಾಯಿತು. ಅದರ ಮೂಲಕ ಆತನ ಬೆರಳನ್ನು ಮುಟ್ಟಲು ಮಾತ್ರ ನನಗೆ ಸಾಧ್ಯವಾಗುತ್ತಿತ್ತು. ಮತ್ತೆ ದೂರು ಕೊಟ್ಟೆವು. ಬಳಿಕ ಜೈಲರ್ ಕೋಣೆಯ ಮಾಡಿನಿಂದ ಕೆಳಕ್ಕೆ ನೋಡಿ ಮಾತಾಡುವುದಕ್ಕೆ ಮಗನಿಗೆ ಅವಕಾಶ ಸಿಕ್ಕಿತು. ನಾನು ನೆಲದಿಂದ ಮೇಲಕ್ಕೆ ನೋಡಿ ಮಾತಾಡುತ್ತಿದ್ದೆ.. 8 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ನನ್ನ ಮಗನಿಗೆ ಕೋರ್ಟು ಮರಣ ದಂಡನೆಯನ್ನು ವಿಧಿಸಿತು. ನಾನು ಮೇಲ್ಮನವಿ ಸಲ್ಲಿಸಿದೆ. ಅದನ್ನು ಎತ್ತಿಕೊಂಡದ್ದೂ ಮರಣದಂಡನೆ ವಿಧಿಸಿದ ನ್ಯಾಯಾಧೀಶರೇ. ಆದ್ದರಿಂದ ಅವರು ಭಿನ್ನ ತೀರ್ಪು ಕೊಡುವುದಕ್ಕೆ ಸಾಧ್ಯವೂ ಇರಲಿಲ್ಲ. ಆದರೂ ಒಂದು ಮಾತು ಹೇಳಲೇಬೇಕು,
   ನಾನು ಜೈಲಿಗೆ ಭೇಟಿ ಕೊಡುವಾಗ ನನ್ನ ಮಗಳ ಮಗಳನ್ನೂ ಎಷ್ಟೋ ಬಾರಿ ಕರಕೊಂಡು ಹೋದದ್ದಿದೆ. ಆಗೆಲ್ಲಾ 'ಮಾಮ (ಪೇರರಿವಾಲನ್) ಯಾವಾಗ ಬರುತ್ತಾರೆ..' ಎಂದು ಆಕೆ ಕೇಳುತ್ತಿದ್ದಳು. ಮುಂದಿನ ವರ್ಷ ಮಗಳೇ ಅನ್ನುತ್ತಿದ್ದೆ. ಆದರೆ ಕ್ರಮೇಣ ಅವಳು ಕೇಳುವುದನ್ನೇ ಬಿಟ್ಟುಬಿಟ್ಟಳು. ಅಜ್ಜಿ ಸುಳ್ಳು ಹೇಳುತ್ತಿದ್ದಾಳೆ ಎಂದು ದೂರ ತೊಡಗಿದಳು. ಅಷ್ಟಕ್ಕೂ ಈ ಸ್ಥಿತಿಯಲ್ಲಿ ನೀವಿರುತ್ತಿದ್ದರೆ ನೀವಾದರೂ ಏನು ಹೇಳುತ್ತಿದ್ದಿರಿ? ಇದು ಸುಳ್ಳಲ್ಲ ಮಗಳೇ, ತಾಯಿಯೋರ್ವಳ ಭರವಸೆ.. ಎಂದು ಹೇಳಲು ಪ್ರಯತ್ನಿಸುತ್ತಿದ್ದಿರಲ್ಲವೇ? ನಾನೂ ಪ್ರಯತ್ನಿಸಿದ್ದೇನೆ. ಆದರೆ ಕಟ್ಟಿ ಬರುವ ಗಂಟಲು, ಪದಗಳನ್ನು ಅರ್ಧದಲ್ಲೇ ತಡೆದಿರಿಸುತ್ತದೆ. ನಾನು ಇನ್ನಾವ ರೀತಿಯಲ್ಲಿ ಮಗಳಿಗೆ ಉತ್ತರ ಕೊಡಲಿ..'
   ಅರ್‍ಪ್ಪುದಮ್ ಅಮ್ಮಾಳ್‍ರನ್ನು ಆಲಿಸುವಾಗ ಮರಣ ದಂಡನೆಗೆ ಒಳಗಾದ ಮಗನ ತಾಯಿಯ ಸಂಕಟ ಅರ್ಥವಾಗುತ್ತಾ ಹೋಗುತ್ತದೆ. ಮಾತ್ರವಲ್ಲ, ಮಕ್ಕಳ ತಪ್ಪುಗಳು ಹೆತ್ತವರನ್ನು ಹೇಗೆ ಪ್ರತಿದಿನವೂ ಸಾಯಿಸುತ್ತಿರುತ್ತವೆ ಅನ್ನುವುದೂ ಗೊತ್ತಾಗುತ್ತದೆ. ಅಂದಹಾಗೆ,
  'ಅತ್ಯಾಚಾರಿಗಳಿಗೆ ಮರಣ ದಂಡನೆಯಾಗಲಿ' ಎಂಬ ಆಗ್ರಹಗಳು ಬಲವಾಗಿ ಕೇಳಿ ಬರುತ್ತಿರುವ ಈ ದಿನಗಳಲ್ಲಿ, 'ತಪ್ಪು' ಮಾಡುವುದಕ್ಕಿಂತ ಮೊದಲು ಸರ್ವರೂ ಈ ತಾಯಿ  ಮತ್ತು ಮಗನನ್ನು ನೆನಪಿಸಿಕೊಳ್ಳುವುದು ಉತ್ತಮವೆನಿಸುತ್ತದೆ, ಅಲ್ಲವೇ?