Thursday, September 3, 2015

ಹರೆಯದ ಆಕರ್ಷಣೆಗೆ ಕುಸಿದುಹೋಗುವಷ್ಟು ದುರ್ಬಲವೇ ಹಿಂದೂ ಸಂಸ್ಕ್ರಿತಿ?

ಮಂಗಳೂರಿನಲ್ಲಿ  ಕಳೆದವಾರ ನಡೆದ ಅನೈತಿಕ ಗೂಂಡಾಗಿರಿ
  ಇದನ್ನು ಸಂಸ್ಕ್ರಿತಿಯ ರಕ್ಷಣೆ ಎನ್ನಬೇಕೋ ಅಥವಾ ಸಾಂಸ್ಕ್ರಿತಿಕ ಕಾಪಟ್ಯತನ ಎನ್ನಬೇಕೋ?
  1996ರಲ್ಲಿ ‘ವಿಚಾರ್ ವಿೂಮಾಂಸ' ಎಂಬ ಹಿಂದಿ ಪತ್ರಿಕೆಯು ಖ್ಯಾತ ಚಿತ್ರಕಾರ ಎಂ.ಎಫ್. ಹುಸೇನ್‍ರ ಕುರಿತಂತೆ, ‘ಈತ ಚಿತ್ರಕಾರನೋ ಅಥವಾ ಕಸಾಯಿಯೋ’ ಎಂಬ ಅರ್ಥ ಬರುವ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿತು. 1975ರಲ್ಲಿ ಹುಸೇನ್‍ರು ರಚಿಸಿದ್ದ ಚಿತ್ರಗಳು ಆ ಲೇಖನದಲ್ಲಿದ್ದುವು. ಎಲ್ಲವೂ ಹಿಂದೂ ದೇವತೆಗಳನ್ನು ನಗ್ನವಾಗಿ ತೋರಿಸುವ ಚಿತ್ರಗಳೇ. ಈ ಲೇಖನದ ಬಳಿಕ ಅವರ ಚಿತ್ರಗಳ (ಪೇಂಟಿಂಗ್) ಮೇಲೆ ದಾಳಿ ನಡೆಯಿತು. ಅವರಿಗೆ ‘ಹಿಂದೂ ವಿರೋಧಿ' ಎಂಬ ಹಣೆಪಟ್ಟಿಯನ್ನು ಕಟ್ಟಲಾಯಿತು. ದೇಶದ ಸುಮಾರು 8 ಕಡೆಗಳಲ್ಲಿ ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ತಲೆ ಮರೆಸಿಕೊಂಡು ಓಡಾಡಬೇಕಾದ ಸ್ಥಿತಿಗೆ ತಲುಪಿದ ಹುಸೇನ್, ಕೊನೆಗೆ ಸ್ವ ಇಚ್ಛೆಯಿಂದ ದೇಶಾಂತರ ಹೊರಟು ಹೋದರು. 2005 ಮಾರ್ಚ್ 13ರಂದು ಉಡುಪಿ ಜಿಲ್ಲೆಯ ಆದಿ ಉಡುಪಿ ಎಂಬಲ್ಲಿ ಜಾನುವಾರು ವ್ಯಾಪಾರಿಗಳಾದ ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗ ಇಬ್ಬರನ್ನು ಬೆತ್ತಲೆಗೊಳಿಸಿ, ಮೈದಾನದಲ್ಲಿ ಪೆರೇಡ್ ನಡೆಸಲಾಯಿತು. ಬಹುಶಃ, ಕರಾವಳಿ ಭಾಗದಲ್ಲಿ ಗೋವನ್ನು ‘ಪವಿತ್ರ' ಮತ್ತು ಭಾವುಕ ಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಇಲ್ಲಿಂದಲೇ ಎಂದು ಹೇಳಬಹುದು. ಕರಾವಳಿ ಜಿಲ್ಲೆಗಳಲ್ಲಿ ಗೋವಿನ ಹೆಸರಲ್ಲಿ ಹಲ್ಲೆ, ದರೋಡೆ, ಹತ್ಯೆಗಳೆಲ್ಲ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡದ್ದು ಈ ಘಟನೆಯ ಬಳಿಕವೇ. ಹಾಗಂತ, ಅವರಿಬ್ಬರು ಗೋ ಕಳ್ಳ ಸಾಗಾಟಗಾರರೇನೂ ಆಗಿರಲಿಲ್ಲ. ಪರಂಪರಾಗತ ವ್ಯಾಪಾರವನ್ನಷ್ಟೇ ಅವರು ನಡೆಸಿಕೊಂಡು ಬರುತ್ತಿದ್ದರು. ಒಂದು ವೇಳೆ, ಇವರು ನಡೆಸಿದ ವ್ಯಾಪಾರದಲ್ಲಿ ಎಷ್ಟು ಗೋವುಗಳು ಕಸಾಯಿಖಾನೆಗೆ ಹೋಗಿವೆ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದರೆ ಬೆತ್ತಲೆಕೋರರನ್ನೇ ಬೆತ್ತಲೆ ಮಾಡಬೇಕಾದಂತಹ ಸತ್ಯಗಳು ಹೊರಬೀಳುತ್ತಿದ್ದುವು. ಆದರೆ, ಬೆತ್ತಲೆಕೋರರನ್ನು ಪುಣ್ಯಕೋಟಿಗಳಾಗಿಯೂ ಇವರಿಬ್ಬರನ್ನು ಹೆಬ್ಬುಲಿಗಳಂತೆಯೂ ಪ್ರಚಾರ ಮಾಡಲಾಯಿತು. ಹೀಗೆ ಗೋರಕ್ಷಣಾ ಚಳವಳಿಗೆ ಅಭೂತಪೂರ್ವ ಆರಂಭವನ್ನು ಒದಗಿಸಲಾಯಿತು. 2009 ಜನವರಿ 24ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಅಮ್ನೇಶಿಯಾ ಎಂಬ ಹೆಸರಿನ ಪಬ್‍ನ ಮೇಲೆ ದಾಳಿ ನಡೆಯಿತು. ಸಂಘಪರಿವಾರದ ಕಾರ್ಯಕರ್ತರು ಇದರ ನೇತೃತ್ವ ವಹಿಸಿದ್ದರು. ಈ ದಾಳಿಯಲ್ಲಿ ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಹಿಗ್ಗಾ-ಮುಗ್ಗಾ ಥಳಿಸಲಾಯಿತು. ಮಾತ್ರವಲ್ಲ, ಆ ಥಳಿತವನ್ನು ನೈತಿಕತೆಯ ಹೆಸರಲ್ಲಿ ಸಾರ್ವಜನಿಕವಾಗಿಯೇ ಸಮರ್ಥಿಸುವಂಥ ಪ್ರಯತ್ನಗಳು ನಡೆದುವು. ಈ ದಾಳಿಯ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಅವರನ್ನು ಆರತಿ ಎತ್ತಿ ಸ್ವಾಗತಿಸುವಂತಹ ಪ್ರಕ್ರಿಯೆಗಳು ಕಾಣಿಸಿದುವು. ಒಂದು ರೀತಿಯಲ್ಲಿ, ಪುಣ್ಯ ಕೋಟಿಯಿಂದ ಸಮಾಜದ ಗಮನವನ್ನು ಹೆಣ್ಣು-ಗಂಡಿನ ಮೇಲೆ ತಿರುಗುವಂತೆ ಮಾಡಿದ ಅಥವಾ ಯೋಜನಾಬದ್ಧವಾಗಿ ಹಾಗೆ ಮಾಡಲಾದ ಘಟನೆ ಇದು. ಲವ್ ಜಿಹಾದ್ ಭಾರೀ ಸದ್ದು ಮಾಡತೊಡಗಿದ್ದು ಈ ಘಟನೆಯ ಬಳಿಕವೇ. ಹಾಜಬ್ಬ-ಹಸನಬ್ಬರನ್ನು ಬೆತ್ತಲೆಗೊಳಿಸುವ ಮೂಲಕ ಗೋವನ್ನು ಪವಿತ್ರಗೊಳಿಸುವಲ್ಲಿ ಯಶಸ್ವಿಯಾದ ಸಂಘಪರಿವಾರವು ಪಬ್ ದಾಳಿ ಮೂಲಕ ‘ಹಿಂದೂ ಸಂಸ್ಕ್ರಿತಿಯ’ ಚರ್ಚೆಯನ್ನು ಹುಟ್ಟು ಹಾಕಿತು. ಹಿಂದೂ ಯುವತಿ, ಮುಸ್ಲಿಮ್ ಯುವಕನೊಂದಿಗೆ ಮಾತಾಡುವುದು ಅಥವಾ ಸ್ನೇಹಿತೆಯಾಗುವುದು ಸಂಸ್ಕøತಿ ವಿರೋಧಿ ಎಂದು ದೊಡ್ಡ ದನಿಯಲ್ಲೇ ಪ್ರಚಾರ ಮಾಡಲಾಯಿತು. ಅಂಥವರಿಗೆ ಥಳಿಸುವುದನ್ನು ಸಂಸ್ಕ್ರಿತಿಯ ರಕ್ಷಣೆ ಎಂದು ಸಮರ್ಥಿಸಿಕೊಳ್ಳಲಾಯಿತು. ಪ್ರತಿ ಥಳಿತಕ್ಕೂ ಭಾವುಕ ಕತೆಯೊಂದನ್ನು ಹೆಣೆಯುವುದು ಮತ್ತು ಅದರ ಆಧಾರದಲ್ಲಿ ಸಮಾಜವೇ ಥಳಿತವನ್ನು ಸಮರ್ಥಿಸುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುವುದು ಆ ಬಳಿಕ ನಡೆಯತೊಡಗಿತು. 2012 ಜುಲೈ 28ರಂದು ಮಂಗಳೂರಿನಲ್ಲಿ ನಡೆದ ಹೋಮ್‍ಸ್ಟೇ ದಾಳಿಯು ರಾಷ್ಟ್ರೀಯವಾಗಿಯಷ್ಟೇ ಅಲ್ಲ, ಅಂತಾರಾಷ್ಟ್ರೀಯವಾಗಿಯೂ ಸುದ್ದಿಗೀಡಾಯಿತು. 7 ಮಂದಿ ಯುವಕರು ಮತ್ತು 5 ಮಂದಿ ಯುವತಿಯರು ಸೇರಿ ಬರ್ತ್‍ಡೇ ಪಾರ್ಟಿ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಘಪರಿವಾರದ ಮಂದಿ ದಾಳಿ ನಡೆಸಿದ್ದರು. ಬಳಿಕ ಬಂಧಿತ ದಾಳಿಕೋರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಇಡೀ ಘಟನೆಗೆ ಸುಳ್ಳು ಕತೆಯೊಂದನ್ನು ಹೆಣೆದರು. ಅದನ್ನು ಗಾಂಜಾ ಪಾರ್ಟಿ, ಅನೈತಿಕತೆಯ ಪಾರ್ಟಿ ಎಂದೆಲ್ಲಾ ಕರೆದು ಸಮಾಜದ ಅನುಕಂಪವನ್ನು ಪಡೆಯಲು ಯತ್ನಿಸಿದರು. ಇದೀಗ ಮಂಗಳೂರಿನಲ್ಲಿ ಮತ್ತೋರ್ವ ಯುವಕ ಬೆತ್ತಲಾಗಿದ್ದಾನೆ. ಈ ಬೆತ್ತಲೆಗೂ ಸುಳ್ಳು ಚಿತ್ರಕತೆಯೊಂದನ್ನು ರಚಿಸಲಾಗಿದೆ. ಅದನ್ನು  ಯುವತಿಯ ಬಾಯಲ್ಲಿ ಬಲವಂತದಿಂದ ಹೇಳಿಸಲಾಗಿದೆ. ಅಷ್ಟಕ್ಕೂ,
  ಸಂಸ್ಕ್ರಿತಿ ಅಂದರೇನು? ಹಿಂದು ಹೆಣ್ಣು ಮಗಳೊಬ್ಬಳು ಮುಸ್ಲಿಮ್ ಯುವಕನೊಂದಿಗೆ ಮಾತಾಡಿದ ಅಥವಾ ಗೆಳೆತನದಲ್ಲಿ ಏರ್ಪಟ್ಟ ಮಾತ್ರಕ್ಕೇ ಹರಿದುಹೋಗುವಷ್ಟು ತೆಳುವಾದುದೇ ಈ ಸಂಸ್ಕ್ರಿತಿ? ಹಿಂದೂ ಧರ್ಮಕ್ಕೆ ಪುರಾತನ ಇತಿಹಾಸವಿದೆಯೆಂದು ಈ ದಾಳಿಕೋರರೇ ಹೇಳುತ್ತಾರೆ. ಸಿಂಧೂ ನದಿಯ ನಾಗರಿಕತೆಯೊಂದಿಗೆ ಹಿಂದೂ ಧರ್ಮವನ್ನು ತಳಕು ಹಾಕುತ್ತಾ ನೋಡುವ ಪರಿಪಾಠ ಈ ದೇಶದಲ್ಲಿದೆ. ಯೋಗ ಈ ದೇಶದ್ದೇ ಕೊಡುಗೆ, ಆಯುರ್ವೇದ ಇಲ್ಲಿಯೇ ಹುಟ್ಟು ಪಡೆದಿದೆ ಎಂದೂ ಹೇಳಲಾಗುತ್ತದೆ. ಇವತ್ತಿನ ಪ್ರನಾಳ ಶಿಶು ಸಂಶೋಧನೆಯು ಹಿಂದೂ ಇತಿಹಾಸದಲ್ಲಿ ಎಂದೋ ಪ್ರಾಯೋಗಿಕವಾಗಿ ಸಾಬೀತುಗೊಂಡಿದೆ ಎಂದು ಸಂಘ ಪರಿವಾರವು ಹೆಮ್ಮೆ ಪಡುತ್ತದೆ. ಒಂದು ರೀತಿಯಲ್ಲಿ, ಹಿಂದೂ ಇತಿಹಾಸದ ಬಗ್ಗೆ ಈ ಮಂದಿ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ನೋಡಿದರೆ ಗೆಳೆತನ, ಪ್ರೇಮ ಪ್ರಕರಣ ಅಥವಾ ಮಾತುಕತೆಗಳಿಂದ ಕಳೆದು ಹೋಗಬಹುದಾದಷ್ಟು ಜುಜುಬಿ ಸಂಸ್ಕ್ರಿತಿ ಹಿಂದೂ ಧರ್ಮದ್ದಲ್ಲ ಎಂದು ಯಾರೇ ಆಗಲಿ ಹೇಳಿಯಾರು. ಇಷ್ಟಿದ್ದೂ, ಸಂಸ್ಕ್ರಿತಿಯ ಹೆಸರಲ್ಲಿ ಸಂಘಪರಿವಾರ ದಾಳಿ ಮಾಡುತ್ತಿರುವುದನ್ನು ಏನೆಂದು ಪರಿಗಣಿಸಬೇಕು? ಸುಮಾರು 80%ದಷ್ಟು ಹಿಂದೂಗಳೇ ಇರುವ ದೇಶವೊಂದರಲ್ಲಿ ಹಿಂದೂ ಯುವತಿ ಮುಸ್ಲಿಮ್ ಯುವಕನೊಂದಿಗೆ ಗೆಳೆತನ ಬೆಳೆಸಿದರೆ ಸಂಸ್ಕ್ರಿತಿಯ ಬಗ್ಗೆ ಭಯ ಪಡಬೇಕಾದದ್ದು ಯಾರು? ಅಸ್ತಿತ್ವದ ಭಯ ಎದುರಾಗಬೇಕಾದದ್ದು ಯಾರಿಗೆ? 14% ಜನಸಂಖ್ಯೆಯಿರುವ ಮತ್ತು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ಸಮುದಾಯಕ್ಕಲ್ಲದೇ, ರಾಜಕೀಯವಾಗಿಯೂ ಆರ್ಥಿಕವಾಗಿಯೂ ಶೈಕ್ಷಣಿಕವಾಗಿಯೂ ಬಲಾಢ್ಯವಾಗಿರುವ ಸಮುದಾಯಕ್ಕೆ ಭಯ ಎದುರಾಗುತ್ತದೆಯೇ? ಈ ದೇಶವನ್ನು ಇವತ್ತು ಆಳುತ್ತಿರುವುದೇ ಸಂಘಪರಿವಾರ ಬೆಂಬಲಿತ ಬಿಜೆಪಿ ಪಕ್ಷ. ಒಂದು ವೇಳೆ ಬಿಜೆಪಿಯ ಹೊರತಾದ ಕಾಂಗ್ರೆಸ್, ಜೆಡಿಎಸ್, ಶಿವಸೇನೆ, ತೃಣ ಮೂಲಗಳು ಅಧಿಕಾರಕ್ಕೆ ಬಂದರೂ ಅವೇನೂ ಮುಸ್ಲಿಮರೇ ಪ್ರಾಬಲ್ಯ ಪಡೆದಿರುವ ಪಕ್ಷಗಳಲ್ಲವಲ್ಲ. ಪ್ರಾಬಲ್ಯ ಬಿಡಿ, ಕನಿಷ್ಠ, ಸಚಿವ ಸಂಪುಟದಲ್ಲಿ ಒಂದೆರಡು ಸ್ಥಾನಗಳನ್ನು ಪಡೆದುಕೊಳ್ಳುವುದಕ್ಕೂ ತಿಣಕಾಡಬೇಕಾದಷ್ಟು ಜುಜುಬಿ ಪ್ರಭಾವವಷ್ಟೇ ಮುಸ್ಲಿಮರದ್ದಾಗಿದೆ. ಈ ಪಕ್ಷಗಳಲ್ಲಿ ಇರುವವರಲ್ಲಿ ಹೆಚ್ಚಿನವರು ಹಿಂದೂ ಧರ್ಮವನ್ನು ಪಾಲಿಸುವ ಮತ್ತು ಅದರ ಸಂಸ್ಕ್ರಿತಿಯ ಮೇಲೆ ಅಭಿಮಾನ ಪಡುವ ಹಿಂದೂಗಳೇ. ಹೀಗಿದ್ದೂ ಮುಸ್ಲಿಮರಿಂದ ಹಿಂದೂ ಸಂಸ್ಕ್ರಿತಿಗೆ ಅಪಾಯವಿದೆಯೆಂದು ಪ್ರಚಾರ ಮಾಡುವುದು ಎಷ್ಟು ನಿಜ? ವ್ಯವಸ್ಥೆಯ ಯಾವುದೇ ಕ್ಷೇತ್ರದಲ್ಲಿ ಭೂತಗನ್ನಡಿ ಹಿಡಿದರೂ ಕಾಣಿಸದ ಮಂದಿಯಿಂದ ವ್ಯವಸ್ಥೆಯ ಎಲ್ಲ ಕ್ಷೇತ್ರಗಳಲ್ಲೂ ತುಂಬಿ ತುಳುಕುತ್ತಿರುವ ಮಂದಿಗೆ ಅಪಾಯ ಎದುರಾಗುವುದೆಂದರೇನು? ಹಾಗೆ ವಾದಿಸುವುದಕ್ಕೆ ಇರುವ ಆಧಾರಗಳೇನು? ಹರೆಯದ ಯುವಕ-ಯುವತಿಯರ ನಡುವೆ ಉಂಟಾಗಬಹುದಾದ ಪ್ರಾಯ ಸಹಜ ಪ್ರೇಮಕ್ಕೋ ಗೆಳೆತನಕ್ಕೋ ಈ ಸಂಸ್ಕ್ರಿತಿಯನ್ನೇ ಅಳಿಸಿಬಿಡಬಹುದಾದಷ್ಟು ಸಾಮರ್ಥ್ಯ ಇದೆಯೇ? ಹೀಗೆ ಪ್ರೇಮ ಪ್ರಕರಣಗಳು ಒಂದು ಸಂಸ್ಕ್ರಿತಿಯನ್ನೇ ನಾಶ ಮಾಡಿದ ಉದಾಹರಣೆಗಳು ಎಲ್ಲಿವೆ? ಯಾವ ಸಂಸ್ಕ್ರಿತಿಯು ಹೀಗೆ ಹರೆಯದ ಯುವಕ-ಯುವತಿಯರ ಪ್ರಾಯ ಸಹಜ ಆಕರ್ಷಣೆಯಿಂದ ನಾಶವಾಗಿದೆ? ಸಂಸ್ಕ್ರಿತಿ ನಾಶದ ಬಗ್ಗೆ ಭಯ ಬಿತ್ತುವವರು ಯಾಕೆ ಈ ಬಗ್ಗೆ ಯಾವ ಅಂಕಿ ಅಂಶಗಳನ್ನೂ ನೀಡುತ್ತಿಲ್ಲ? ನಿಜವಾಗಿ, ಇಲ್ಲಿ ಅಸ್ತಿತ್ವದ ಮತ್ತು ಸಂಸ್ಕ್ರಿತಿ ನಾಶದ ಭಯ ಎದುರಾಗಬೇಕಾದದ್ದು ಜುಜುಬಿ 14%ದಷ್ಟಿರುವ ಮುಸ್ಲಿಮರಿಗೆ.  ಅವರ ಭಾಷೆ, ಅವರ ಉಡುಪು, ಅವರ ಆಹಾರ, ಅವರ ಮನೆ, ಮದುವೆ, ಶೈಕ್ಷಣಿಕ ಆಲೋಚನೆಗಳು, ಕೌಟುಂಬಿಕ ರೀತಿ-ನೀತಿಗಳು, ಹಣಕಾಸು ವಹಿವಾಟುಗಳು.. ಎಲ್ಲವೂ ಇವತ್ತು ಭಾರತೀಯ ಸಂಸ್ಕ್ರಿತಿಯಿಂದ ಧಾರಾಳ ಪ್ರಭಾವಿತವಾಗಿವೆ. ತಲಾಕ್, ಬಹುಪತ್ನಿತ್ವ, ಮಹಿಳೆಯ ಆಸ್ತಿಯ ಹಕ್ಕು, ಜಿಹಾದ್, ವಧುದಕ್ಷಿಣೆ, ಬಡ್ಡಿರಹಿತ ಹಣಕಾಸು ವ್ಯವಹಾರ.. ಮುಂತಾದುವುಗಳನ್ನು ನಿಜವಾದ ಅರ್ಥದಲ್ಲಿ ಪ್ರತಿನಿಧಿಸಲು ಅವರು ಇನ್ನೂ ಶಕ್ತರಾಗಿಲ್ಲ. ಇವುಗಳ ಬಗ್ಗೆ ಅರ್ಥಕ್ಕಿಂತ ಹೆಚ್ಚು ಅಪಾರ್ಥವೇ ಸಮಾಜದಲ್ಲಿ ತುಂಬಿಕೊಂಡಿದೆ. ಇಸ್ಲಾಮನ್ನು ಪ್ರತಿನಿಧಿಸುವುದಕ್ಕಿಂತ ಭಾರತೀಯ ಸಂಸ್ಕ್ರಿತಿಯನ್ನು ಪ್ರತಿನಿಧಿಸುವ ಮುಸ್ಲಿಮರೇ ಈ ದೇಶದಲ್ಲಿ ಹೆಚ್ಚಿದ್ದಾರೆ. ಇಷ್ಟಿದ್ದೂ, ಸಂಘಪರಿವಾರವು ಹಿಂದೂ ಸಂಸ್ಕ್ರಿತಿಗೆ ಮುಸ್ಲಿಮರಿಂದ ಅಪಾಯವಿದೆಯೆಂದು ಪ್ರಚಾರ ಮಾಡುತ್ತಿರುವುದೇಕೆ? ಸ್ವತಃ ತನ್ನ ಸಂಸ್ಕ್ರಿತಿಯನ್ನೇ ಸರಿಯಾಗಿ ಪಾಲಿಸದ ಸಮುದಾಯವೊಂದು ಇತರ ಸಂಸ್ಕ್ರಿತಿಗೆ ಅಪಾಯಕಾರಿಯಾಗುವುದು ಹೇಗೆ, ಯಾವ ಅರ್ಥದಲ್ಲಿ?
  ಹಾಗಂತ, ಸಂಘಪರಿವಾರ ಇವತ್ತು ಧರ್ಮರಕ್ಷಣೆಯ ಹೆಸರಲ್ಲಿ ಏನೆಲ್ಲ ಕ್ರೌರ್ಯಗಳನ್ನು ಎಸಗುತ್ತಿವೆಯೋ ಅವಕ್ಕೂ ಹಿಂದೂ ಧರ್ಮಕ್ಕೂ ಬಹುತೇಕ ಯಾವ ಸಂಬಂಧವೂ ಇಲ್ಲ. ಹಿಂದೂ ಧರ್ಮ ಅಸ್ತಿತ್ವದ ಭಯವನ್ನು ಎದುರಿಸುತ್ತಲೂ ಇಲ್ಲ, ಅದರ ಸಂಸ್ಕ್ರಿತಿ ಅಪಾಯದ ಅಂಚಿನಲ್ಲೂ ಇಲ್ಲ. ಇದು ಬೆತ್ತಲೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಒಂದೊಮ್ಮೆ ಗೊತ್ತಿಲ್ಲದಿದ್ದರೂ ಆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವವರಿಗೆ ಖಂಡಿತ ಗೊತ್ತು. ಈ ದೇಶದಲ್ಲಿ ಎಲ್ಲೆಲ್ಲ ಕೋಮು ಗಲಭೆಯಾಗಿದೆಯೋ ಅಲ್ಲೆಲ್ಲಾ ರಾಜಕೀಯವಾಗಿ ಬಿಜೆಪಿಗೆ ಲಾಭವಾಗಿದೆ. ಪ್ರತಿ ಬೆತ್ತಲೆಯಿಂದಲೂ ಬಿಜೆಪಿಯ ಕೆಲವು ಸಾವಿರ ಓಟುಗಳು ವೃದ್ಧಿಯಾಗುತ್ತವೆ. ‘ಗೋಸಾಗಾಟದ' ಮೇಲಿನ ಹಲ್ಲೆಗೂ ಈ ಓಟು ವೃದ್ಧಿಸುವ ಸಾಮರ್ಥ್ಯವಿದೆ. ಇದರರ್ಥ, ಸಾಮಾನ್ಯ ಜನರು ಕ್ರೌರ್ಯವನ್ನು ಬೆಂಬಲಿಸುತ್ತಾರೆ ಎಂದಲ್ಲ. ಪ್ರತಿ ‘ಬೆತ್ತಲೆ' ನಡೆದಾಗಲೂ ಆ ಬೆತ್ತಲೆಯನ್ನು ಅನಿ ವಾರ್ಯವೆಂದೂ ಅದುವೇ ಸೂಕ್ತವಾದ ಶಿಕ್ಷೆಯೆಂದೂ ನಂಬಿಸುವಂಥ ಸುಳ್ಳು ಕತೆಯನ್ನು ಬೆತ್ತಲೆಕೋರರು ತೇಲಿಸಿ ಬಿಡುತ್ತಾರೆ. ಹಿಂದೂ ಸಂಸ್ಕ್ರಿತಿ, ಜನಸಂಖ್ಯೆ, ಗೋ ಸಂತತಿಗಳು ತೀವ್ರ ಮಟ್ಟದಲ್ಲಿ ಕುಸಿಯುತ್ತಿರುವ ಬಗ್ಗೆ ಭಾವನಾತ್ಮಕ ಸನ್ನಿವೇಶವನ್ನು ನಿರ್ಮಾಣ ಮಾಡುತ್ತಾರೆ. ಹೆಣ್ಣನ್ನೂ, ಗೋವನ್ನೂ ಅಳಿಯುತ್ತಿರುವ ಪ್ರಬೇಧಗಳಂತೆಯೋ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವ ಸಂಕೇತಗಳಂತೆಯೋ ಬಿಂಬಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಹಿಂದೂ ಹೆಣ್ಣು-ಮುಸ್ಲಿಮ್ ಗಂಡು ವಿವಾಹವಾದ ಮತ್ತು ಮತಾಂತರಗೊಂಡ ಎಲ್ಲಿಯದೋ ಮತ್ತು ಎಂದಿನದೋ ಘಟನೆಯನ್ನು ಈಗ ಮತ್ತು ಇವತ್ತು ನಡೆದ ಘಟನೆಯಂತೆ ವಿವರಿಸಲಾಗುತ್ತದೆ. ಮುಸ್ಲಿಮರ ತಲಾಕ್, ಬಹುಪತ್ನಿತ್ವ, ಜಿಹಾದ್‍ನ ವಿಕೃತ ರೂಪವನ್ನು ಜನರು ಮುಂದಿಡಲಾಗುತ್ತದೆ. ಹೀಗೆ ಧರ್ಮ, ಸಂಸ್ಕ್ರಿತಿ, ಹೆಣ್ಣು, ಗೋವು..ಗಳೆಲ್ಲ ಭಾವುಕವಾಗುತ್ತಾ ಹೋಗುತ್ತದೆ. ಜೊತೆಗೇ ‘ಬೆತ್ತಲೆಗಳು' ಧಾರ್ಮಿಕ ಅಗತ್ಯವಾಗಿ ನಿಧಾನಕ್ಕೆ ಬೆಂಬಲ ಗಿಟ್ಟಿಸಿಕೊಳ್ಳುತ್ತಾ ಹೋಗುತ್ತದೆ. ಇದಕ್ಕಾಗಿಯೇ,
    ಮಂಗಳೂರಿನಲ್ಲಿ ಹಾಡುಹಗಲೇ, ಸಾರ್ವಜನಿಕರೆದುರೇ, ಕವಿೂಷ ನರ್ ಕಚೇರಿಯ ತೀರಾ ಹತ್ತಿರದಲ್ಲೇ ‘ಬೆತ್ತಲೆ' ಶಿಕ್ಷೆ ಜಾರಿಯಾಗಿದೆ. 

No comments:

Post a Comment