Tuesday, June 23, 2020

ಹಳೆ ಗೋರಿಯನ್ನು ಅಗೆದು ಹೊಸ ಹೆಣಗಳನ್ನು ಹೂತ ಕಾಲದಿಂದ ತೊಡಗಿ...



ಕೊರೋನೋತ್ತರ ಜಗತ್ತು ಹೇಗಿರಬಹುದು?

ಇದು ಬರೇ ಪ್ರಶ್ನೆಯಲ್ಲ. ಈ ಜಗತ್ತನ್ನು ಕೊರೋನಾಕ್ಕಿಂತ ಮೊದಲು ಹಲವು ಕಾಯಿಲೆಗಳು ಆಳಿವೆ. ಅವೆಲ್ಲ ಹಾಗೆ ಬಂದು ಹೀಗೆ ಹೋದದ್ದಿಲ್ಲ. ತಕ್ಷಣದ  ಬದಲಾವಣೆಗೆ ಅದು ಕಾರಣವಾಗಿಲ್ಲದಿದ್ದರೂ  ನಿಧಾನಕ್ಕೆ ಅದೊಂದು ಕ್ರಾಂತಿಕಾರಿ ಬದಲಾವಣೆಗೆ ಹೇತುವಾಯಿತು ಎಂದು ಅಂದಾಜಿಸುವವರಿದ್ದಾರೆ. ಕೊರೋನಾಕ್ಕಿಂತ ಮೊದಲು ಈ ಜಗತ್ತನ್ನು ಇನ್‍ಫ್ಲುವೆಂಜಾ, ಕಾಲರಾ, ಸಿಡುಬು, ಪ್ಲೇಗ್ ಇತ್ಯಾದಿ  ಮಹಾ ಕಾಯಿಲೆಗಳು ಕಾಡಿವೆ. ಊರಿಗೆ ಊರೇ ನಾಶವಾಗಿವೆ. 

1940ರಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಮಲೆ ಮಹದೇಶ್ವರನ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದು ಇವರಲ್ಲಿ 20ರಿಂದ  30 ಸಾವಿರದಷ್ಟು ಮಂದಿ ಭಕ್ತರು ಕಾಲರಾ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಅನ್ನುವ ವರದಿಯಿದೆ. ದೀಪಾವಳಿಯ ಸಮಯದಲ್ಲಿ ಈ ಜಾತ್ರೆ ನಡೆದಿದ್ದು, ಧಾರಾಕಾರ ಮಳೆ ಸುರಿದಿದೆ. ಮಳೆ ನೀರಿನೊಂದಿಗೆ ಬೆರೆತ ಕಸ-ಕಡ್ಡಿ, ಮಲ-ಮೂತ್ರ ಇತ್ಯಾದಿ ಹರಿದು ಬಂದು ಕೆರೆಗೆ ಸೇರಿಕೊಂಡಿದ್ದು, ಅದೇ ನೀರನ್ನು ಜನರು ಕುಡಿದ ಪರಿಣಾಮ ಕಾಲರಾ ಕ್ಷಣಮಾತ್ರದಲ್ಲಿ ಹರಡಿದೆ. 1899ರಲ್ಲಂತೂ ಇಡೀ  ಮೈಸೂರು ಮಹಾರಾಜರ ಕುಟುಂಬವನ್ನೇ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. 1898 ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಪ್ಲೇಗ್, ಬಳಿಕ ಮೈಸೂರಿಗೂ ಕಾಲಿಟ್ಟಿತು. ಮೈಸೂರಿನ ಮಹಾರಾಜ  ಕುಟುಂಬವನ್ನು ಪ್ರತ್ಯೇಕಿಸಿ (ಕ್ವಾರಂಟೈನ್) ಜಗನ್ಮೋಹನ್ ಅರಮನೆಗೆ ಸ್ಥಳಾಂತರಿಸಲಾಯಿತು. ಈ ಕ್ವಾರಂಟೈನ್ ಅವಧಿಯ ನಿಯಮಗಳು ಈಗಿನ ಕೊರೋನಾ ಕಾಲದ ನಿಯಮ ಗಳಂತೆಯೇ ಇತ್ತು.  ರಾಜಕುಟುಂಬದ ಸೇವಕರು ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ಹೋಗಬಾರದು, ರಾಜಮಾತೆಯ ವಾಸಸ್ಥಳದ ಹತ್ತಿರವೇ ಅವರಿಗಾಗಿ ಸಣ್ಣ ಮಾರುಕಟ್ಟೆಯನ್ನು ನಿರ್ಮಿಸಬೇಕು ಮತ್ತು ಅರಮನೆಯ  ಎಲ್ಲ ಸೇವಕರು ರಾತ್ರಿ 9 ಗಂಟೆಗೆ ತಂತಮ್ಮ ಕೋಣೆಯಲ್ಲಿದ್ದಾರೆ ಹಾಗೂ ಮರುದಿನ ಬೆಳಿಗ್ಗೆ 6 ಗಂಟೆಗೆ ಪುನಃ ಅಲ್ಲೇ  ಇದ್ದಾರೆಂಬುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂಬ ಆದೇಶವಿತ್ತು.  ಅಲ್ಲದೇ, ಸೇವಕರ ಉಡುಗೆ ಶುದ್ಧವಾಗಿರಬೇಕು ಮತ್ತು ಪ್ರತಿದಿನವೂ ಅವರು ತಪ್ಪದೇ ಸ್ನಾನ ಮಾಡಬೇಕು ಎಂದೂ ರಾಜಕುಟುಂಬದ ಜ್ಞಾಪನಾ ಪತ್ರದಲ್ಲಿ ಸೂಚಿಸಲಾಗಿತ್ತು.

1874ರಲ್ಲಿ ಈ ದೇಶದಲ್ಲಿ ದಿಕ್ಕುದೆಸೆಯಿಲ್ಲದೇ ಮಳೆ ಸುರಿದುದರಿಂದಾಗಿ ಅತಿವೃಷ್ಟಿ ಉಂಟಾಯಿತು. ಬೆಳೆ-ಧವಸ ಧಾನ್ಯಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದುವು. ದುರಂತ ಏನೆಂದರೆ, 1976-78ರ  ನಡುವೆ ಬರಗಾಲ ಎದುರಾಯಿತು. ಜೊತೆಗೇ ಕಾಲರಾ ಮತ್ತು ಪ್ಲೇಗ್‍ಗಳೂ ದಾಳಿಯಿಟ್ಟವು. ರಾಜ್ಯದ ಬಿಜಾ ಪುರ, ಬಳ್ಳಾರಿ, ಕೋಲಾರ, ಹಾವೇರಿ ಮುಂತಾದ ಕಡೆ ಈ ಬರಗಾಲದ ತೀವ್ರತೆ ಎಷ್ಟಿತ್ತೆಂದರೆ,  ಆಹಾರವಿಲ್ಲದೇ ಜನರು ಬಡಕಲಾದರು. ಅವರ ದೇಹದ ಎಲುಬುಗಳನ್ನು ಎಣಿಸಬಹು ದಾದಷ್ಟು ಅವರು ಎಲುಬುಗೂಡಿನಂತಾಗಿದ್ದರು ಎಂದು ಹೇಳ ಲಾಗುತ್ತದೆ. ಇದರ ಜೊತೆಗೇ ಪ್ಲೇಗ್ ಮತ್ತು  ಕಾಲರಾ ದಾಳಿಯಿಟ್ಟಿದ್ದರಿಂದ ಬ್ರಿಟಿಷ್ ಸರಕಾರವು ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿಗೆ ಇಂಗ್ಲೆಂಡಿನಿಂದ 28ರ ಹರೆಯದ ಇಂಜಿನಿಯರ್ ಎಡ್ಮಂಡ್ ಸಿಬ್ಸನ್‍ರನ್ನು ಕರೆತಂದಿತು. ಆತ ಹೃದಯವಂತ.  ಆಹಾರವಿಲ್ಲದೇ ರಸ್ತೆಯಲ್ಲಿ ಬಿದ್ದುಕೊಂಡಿದ್ದ ಜನರನ್ನು ಕಂಡು ಮಮ್ಮಲ ಮರುಗಿದ ಆತ ಪರಿಸ್ಥಿತಿಯನ್ನು ಬದಲಾಯಿಸಲು ಶಕ್ತಿಮೀರಿ ಯತ್ನಿಸಿದ. ವಿಪರ್ಯಾಸ ಏನೆಂದರೆ, 1877 ಎಪ್ರಿಲ್‍ನಲ್ಲಿ ಸ್ವತಃ ಆತ ನೇ ಕಾಲರಾ ರೋಗಕ್ಕೆ ತುತ್ತಾದ ಮತ್ತು ಸಾವಿಗೀಡಾದ. ಶಿಗ್ಗಾಂವಿಯ ಬಿ.ಬಿ. ದೇಸಾಯಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿರುವ ಮೌಲಾಯಿ ನಗರದ ಸ್ಮಶಾನದಲ್ಲಿ ಇವತ್ತೂ ಆತನ ಸಮಾಧಿ  ಕಾಣುವಂತೆ ಇದೆ.

ಕುವೆಂಪು ಅವರ ‘ನೆನಪಿನ ದೋಣಿಯಲ್ಲಿ’ ಎಂಬ ಆತ್ಮ ಕಥನವು ಬಾಲ್ಯಕಾಲದ ಜ್ವರದ ಘಟನೆಯೊಂದನ್ನು ವಿವರಿಸುತ್ತದೆ. 

ಒಂದು ಸಂಜೆ ಚೆಂಡಾಟ ಮುಗಿಸಿ ಹುಡುಗರೆಲ್ಲ ಮೈದಾನದಲ್ಲಿ ಗುಂಪು ಕುಳಿತು  ಹರಟೆ ಹೊಡೆಯುತ್ತಿದ್ದಾಗ ಒಬ್ಬ ಹೇಳಿದ, “ಇಲ್ಲಿ ಕೇಳಿ. ಜರ್ಮನಿಯಿಂದ ಒಂದು ಕಾಯಿಲೆ ಬಂದಿದೆಯಂತೆ. ಬೀಸು ಬಡಿಗೆ ಜ್ವರ ಅಂತಾರೆ. ಬೀಸು ಬಡಿಗೆ ಹೊಡೆದರೆ ಹೆಂಗೆ ಸಾಯ್ತಾರೋ ಹಂಗೆ  ಸಾಯ್ತಾರಂತೆ ಜನ ಈ ಜ್ವರ ಬಂದರೆ. ಆದರೆ ದೊಡ್ಡೋರಿಗೆ ಅಂತೆ ಕಣೋ ಅದು ಹೆಚ್ಚಾಗಿ ಬಡಿಯೋದು. ನಮ್ಮ ಹಂಗಿರುವ ಹುಡುಗರಿಗೆ ಬೆಳಿಗ್ಗೆ ಜ್ವರ ಬಂದು, ಒಂದು ದಿನ ಇದ್ದು ಬಿಟ್ಟು  ಹೋಗ್ತದಂತೆ.”

ಈ ಇಡೀ ಹೇಳಿಕೆಯು ಕೊರೋನಾಕ್ಕೆ ಸಂಪೂರ್ಣ ಹೋಲುತ್ತದೆ. ಕೊರೋನಾವು ಸಣ್ಣ ಮಕ್ಕಳು ಮತ್ತು 60ರ ವಯಸ್ಸಿಗಿಂತ ಮೇಲ್ಪಟ್ಟವರಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚು ಅನ್ನುವುದನ್ನು ಕುವೆಂಪು  ಕಾಲದ ಜ್ವರದೊಂದಿಗೆ ಹೋಲಿಸಿದರೆ, ಸಾಮಾನ್ಯವಾಗಿ ಸಾಂಕ್ರಾಮಿಕ ಕಾಯಿಲೆಗಳ ಲಕ್ಷಣಗಳು ಏಕಪ್ರಕಾರ ಅನ್ನುವುದು ಸ್ಪಷ್ಟವಾಗುತ್ತದೆ. ಕಾಲರಾ, ಪ್ಲೇಗ್ ಇತ್ಯಾದಿ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ  ಜನರು ಮಾಡಿಕೊಳ್ಳುತ್ತಿದ್ದ ರಕ್ಷಣಾ ಕಾರ್ಯಗಳು ಏನೋ ಅದನ್ನೇ ಈ ಕೊರೋನಾ ಕಾಲದಲ್ಲೂ ಮಾಡಲಾಯಿತು ಅನ್ನುವುದು ಆಧುನಿಕ ಕಾಲದಲ್ಲಿ ಒಂದು ಸೋಜಿಗ. ಪ್ರಾಚೀನ ವೈದ್ಯಗ್ರಂಥಗಳಲ್ಲಿ ತೊನ್ನು ಮತ್ತು ಕುಷ್ಠರೋಗದ ಬಗ್ಗೆ ಇರುವ ವಿವರವಾದ ಮಾಹಿತಿಗಳು ಮತ್ತು ಔಷಧೀಯ ವಿವರಗಳು ಸಾಂಕ್ರಾಮಿಕ ರೋಗದ ಕುರಿತಂತೆ ಇಲ್ಲ. ಇವುಗಳಿಗೆ ಮದ್ದುಗಳೇನು ಅನ್ನುವ ವಿವರಗಳೂ ಇಲ್ಲ  ಎಂಬು ದಾಗಿ ತಜ್ಞರು ಹೇಳುತ್ತಾರೆ. ಇಂಥ ರೋಗಗಳು ಬಾಧಿಸಿದಾಗ ಗ್ರಾಮಗಳಲ್ಲಿ ಇದ್ದ ಏಕೈಕ ಪರಿಹಾರ ಏನೆಂದರೆ, ಊರು ಬಿಡುವುದು. ಈ ರೋಗಗಳು ತಾತ್ಕಾಲಿಕ ಅಂತ ಊರವರಿಗೆ  ಗೊತ್ತಿರುತ್ತದೆ ಮತ್ತು ಅದು ವರ್ಷ ವರ್ಷವೆಂಬಂತೆ ದಾಳಿಯಿಡು ತ್ತಲೂ ಇರುತ್ತದೆ. ಕೆಲವು ಸಮಯದ ಬಳಿಕ ಕುಟುಂಬಗಳು ಮರಳಿ ಊರು ಸೇರುತ್ತವೆ. ಇದರಾಚೆಗೆ ಸಾಂಕ್ರಾಮಿಕ ರೋಗ ಗಳಿಗೆ  ಹಿಂದಿನ ಕಾಲದಲ್ಲಿ ಪರಿಹಾರ ಇರಲಿಲ್ಲ. ಸೀಲ್‍ಡೌನ್, ಕ್ವಾರಂಟೈನ್, ಲಾಕ್‍ಡೌನ್ ಇತ್ಯಾದಿ ಆಧುನಿಕ ಪದಗಳು ಸೂಚಿಸುವುದು ಹಳೆ ಕಾಲದ ಪರಿಹಾರಗಳನ್ನೇ.

ವಿಶೇಷ ಏನೆಂದರೆ, ಯು.ಆರ್. ಅನಂತಮೂರ್ತಿಯವರ ಸಂಸ್ಕಾರ, ರಾವ್ ಬಹಾದ್ದೂರ್‍ರ ಗ್ರಾಮಾಯಣದಲ್ಲಿ ಪ್ಲೇಗ್ ರೋಗದ ಉಲ್ಲೇಖಗಳಿವೆ. ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿಯಲ್ಲಿ  ಪ್ಲೇಗ್ ಮುಖ್ಯ ಭೂಮಿಕೆಯಲ್ಲಿ ಇಲ್ಲದಿದ್ದರೂ ಅದೊಂದು ಗಮನೀಯ ವಸ್ತುವಾಗಿ ಕಾದಂಬರಿ ಉದ್ದಕ್ಕೂ ಕಾಡುತ್ತದೆ. ಕಾದಂಬರಿಯ ಪಾತ್ರವಾದ ನಾರಣಪ್ಪನು ಶಿವಮೊಗ್ಗಕ್ಕೆ ಹೋಗಿ ಸೋಂಕು ತಗು ಲಿಸಿಕೊಂಡು ಬಂದು ಅಗ್ರಹಾರದಲ್ಲಿ ಪ್ಲೇಗ್‍ಗೆ ಬಲಿಯಾದ ಮೊದಲ ವ್ಯಕ್ತಿಯಾಗುತ್ತಾನೆ. ಬಳಿಕ ಅಗ್ರ ಹಾರದಲ್ಲಿ ಇಲಿಗಳು ಸತ್ತು ಬೀಳುವುದರಿಂದ ಹಿಡಿದು ಮಾನವ ಸಾವಿನ ವರೆಗೆ ಕಾದಂಬರಿಯು  ಪ್ಲೇಗ್ ಮತ್ತು ಮಾನವ ಸೃಷ್ಟಿಯಾದ ಮಡಿ ಮೈಲಿಗೆಯ ಸಂಕಟವೊಂದನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರಸಿದ್ಧ ಕಾದಂಬರಿಗಾರ್ತಿ ಮಹಾಶ್ವೇತಾ ದೇವಿಯವರ ರುಡಾಲಿ ಎಂಬ ಕಾದಂಬರಿಯಲ್ಲಿ  ಕಾಲರಾದ ಸನ್ನಿವೇಶ ಇದೆ ಎಂದು ವಿಮರ್ಶಕರು ವಿವರಿಸಿದ್ದಾರೆ. ಬಡವರಾಗಿದ್ದ ಶನಿಚರಿ ಮತ್ತು ಅವಳ ಗಂಡ ಜಾತ್ರೆಗೆ ಬರುವುದು ಮತ್ತು ಅಲ್ಲಿ ವಿಗ್ರಹಕ್ಕೆ ಎರೆದ ಹಾಲನ್ನೇ ಪ್ರಸಾದವಾಗಿ ಸ್ವೀಕರಿಸಿದ ಶ ನಿಚರಿಯ ಗಂಡನಿಗೆ ಕಾಲರಾ ಬರುವುದು ಹಾಗೂ ಅಧಿಕಾರಿಗಳು ಒಂದು ಬೇಲಿ ಹಾಕಿಸಿ ಕಾಲರಾ ಬಂದಿರುವವರನ್ನು ಆ ಬೇಲಿಯೊಳಗೆ ಕ್ವಾರಂಟೈನ್ ಮಾಡುವುದು ನಡೆಯುತ್ತದೆ. ಗ್ರಾಮಾಯಣ ಕೃತಿ  ಯಂತೂ ಕಾಲರಾ ರೋಗದ ಭೀಕರತೆಗೆ ಕನ್ನಡಿ ಹಿಡಿಯುವಂತಿದೆ. ಸಾಯುತ್ತಲೇ ಇರುವ ಜನರನ್ನು ಹೂಳಲು ಸ್ಥಳವಿಲ್ಲದೇ ಗೋರಿ ಗಳನ್ನೇ ಅಗೆದು ಅದರೊಳಗಿನ ಅಸ್ತಿಪಂಜರಗಳನ್ನು ಹೊರಕ್ಕೆಸೆದು  ಹೊಸ ಹೆಣಗಳಿಗೆ ಜಾಗ ಮಾಡಿಕೊಡಲಾಗುತ್ತದೆ. ಶವ ಹೂಳಲು ಗುಂಡಿ ಅಗೆಯುತ್ತಿರುವವರು, ‘ಅಗೆದೂ ಅಗೆದೂ ಸಾಕಾಗಿದೆ, ಇವತ್ತು ಇನ್ನು ಯಾರೂ ಸಾಯದೇ ಇರಲಿ’ ಎಂದು ಹೇಳಿ ಕೊಳ್ಳುತ್ತಾರೆ.  ‘ಗ್ರಾಮಾಯಣ’ದ ಇಂಥದ್ದೊಂದು ಸನ್ನಿವೇಶವನ್ನು ಡಾ| ಎಂ.ಎಸ್. ಆಶಾದೇವಿಯವರು ಚೆನ್ನಾಗಿ ವಿವರಿಸಿದ್ದಾರೆ.

ಸದ್ಯದ ಸವಾಲು ಏನೆಂದರೆ, ಪ್ಲೇಗ್, ಕಾಲರಾ ನಂತರದಲ್ಲಿ ಸಾಮಾಜಿಕ ಸ್ಥಿತಿಗತಿಗಳಲ್ಲಿ ಬದಲಾವಣೆ ಆದಂತೆಯೇ ಕೊರೋನಾ ನಂತರದ ಜಗತ್ತಿನಲ್ಲಿ ಅಂಥದ್ದೊಂದನ್ನು  ನಿರೀಕ್ಷಿಸಲು ಸಾಧ್ಯವೇ? 14ನೇ  ಶತಮಾನ ಮತ್ತು ಆ ಬಳಿಕ ಜಗತ್ತನ್ನು ಪ್ಲೇಗ್, ಕಾಲರಾ ಮತ್ತು ಇನ್‍ಫ್ಲುವೆಂಜಾಗಳು ತೀವ್ರವಾಗಿ ಕಾಡಿದುದರಿಂದಾಗಿ ಗ್ರಾಮಕ್ಕೆ ಗ್ರಾಮಗಳೇ ನಾಶವಾದದ್ದಿದೆ. ಇದರಿಂದಾಗಿ ಕಾರ್ಮಿಕ ಕೊರತೆಯ ಸವಾಲು  ಎದುರಾಯಿತು. ಜಮೀನ್ದಾರಿಕೆ ಪದ್ಧತಿಯನ್ನು ನಿರ್ಮೂಲನಗೊಳಿಸಿದ್ದೇ  ಈ ಕಾಯಿಲೆಗಳು ಎಂದೂ ಹೇಳಲಾಗುತ್ತದೆ. ಕಾರ್ಮಿಕರ ಕೊರತೆ ಎದು ರಾದದ್ದರಿಂದ ಜಮೀನ್ದಾರರು ಏನು ಮಾಡಿದರೆಂದರೆ,  ಇರುವ ಕಾರ್ಮಿಕರಿಗೆ ಉತ್ತಮ ವೇತನ, ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಮುಂದಾದರು. ಅವರನ್ನು ಕೆಲಸ ಬಿಟ್ಟು ಹೋಗದಂತೆ ತಡೆಯಬೇಕಾದ ಮಾರ್ಗೋಪಾಯಗಳನ್ನು ಹುಡುಕತೊಡಗಿದರು.  ಕಾರ್ಮಿಕರು ಅವರ ಪಾಲಿಗೆ ಅಮೂಲ್ಯ ಎನಿಸಿಕೊಂಡದ್ದು ಕಾರ್ಮಿಕರಿಗೂ ಮನದಟ್ಟಾಗತೊಡಗಿದಾಗ ಅವರು ತಮ್ಮ ಹಕ್ಕು, ಸ್ವಾತಂತ್ರ್ಯಗಳ ಬಗ್ಗೆ ಜಾಗೃತರಾಗುವುದಕ್ಕೂ ಮಾತಾಡುವುದಕ್ಕೂ  ಕಾರಣವಾಯಿತು. ಕ್ರಮೇಣ ಭೂಮಾಲಿಕರೆಂದರೆ ಅಲುಗಾಡಿಸಲಾಗದ ಕಂಭವಲ್ಲ ಎಂಬ ಸಂದೇಶ ಕಾರ್ಮಿಕರ ನಡುವೆ ರವಾನೆಯಾಗತೊಡಗಿತು. ಕಾರ್ಮಿಕರಿಲ್ಲದೇ ಭೂಮಾಲಿಕರಿಲ್ಲ ಎಂಬುದು ದಿನ ಗಳೆದಂತೆ ಸ್ಪಷ್ಟವಾಗತೊಡಗಿತು. ಕ್ರಮೇಣ ಕಾರ್ಮಿಕ ಸ್ನೇಹಿ ಕಾಯ್ದೆ ಗಳು ಬಂದುವು. ಎಲ್ಲಿಯ ವರೆಗೆಂದರೆ, ಜಮೀನ್ದಾರರಿಂದ ಬಲ  ವಂತವಾಗಿ ಜಮೀನನ್ನು ಕಸಿದು ಕಾರ್ಮಿಕರಲ್ಲಿ ಹಂಚುವ ವರೆಗೆ ಈ ಪಲ್ಲಟಗಳು ನಿಧಾನಕ್ಕೆ ನಡೆಯತೊಡಗಿದುವು. ಉಳುವವನೇ ಹೊಲದೊಡೆಯ ಎಂಬ ಕಾಯ್ದೆ ನಮ್ಮಲ್ಲೂ ಜಾರಿಗೆ ಬಂದು ಎಂಥೆಂಥ  ಜಮೀನ್ದಾರರು ರಾತೋರಾತ್ರಿ ಭೂರಹಿತವಾದುದರ ಹಿಂದೆ ಸಾಂಕ್ರಾಮಿಕ ರೋಗಗಳು ಸೃಷ್ಟಿಸಿದ ಕ್ರಾಂತಿಕಾರಿ ಬದಲಾ ವಣೆಗಳಿಗೆ ಪಾತ್ರವಿದೆ. ಭೂಮಾಲಿಕರ ಕುರಿತಾದ ಭೀತಿಯ ಚಿತ್ರವನ್ನು  ಕಾರ್ಮಿಕರಿಂದ ಹೊಡೆದೋಡಿಸಿದ್ದೇ  ಸಾಂಕ್ರಾಮಿಕ ರೋಗಗಳು. ಇದೀಗ ಕೊರೋನಾ ಈ ಜಗತ್ತನ್ನು ಆವರಿಸಿಕೊಂಡಿದೆ. ಇದರಿಂದ ಬಿಡುಗಡೆಗೊಂಡ ನಂತರ ಜಗತ್ತಿನ ಸ್ಥಿತಿ ಹೇಗಿರಬಹುದು? ಇದು  ಆಸ್ತಿಗೆ ಮಹತ್ವ ಇದ್ದ 19ನೇ ಶತಮಾನ ಅಲ್ಲವಲ್ಲ. ಆರೋಗ್ಯ, ಶಿಕ್ಷಣ, ಸಮಾನತೆ, ಸಂಪತ್ತಿನ ಸಮಾನ ಬಳಕೆ ಇತ್ಯಾದಿಗಳು ಮುನ್ನೆಲೆಗೆ ಬಂದಿರುವ ಶತಮಾನ. ಜಗತ್ತಿನ ಸಂಪತ್ತನ್ನೆಲ್ಲ ಕೆಲವೇ ಕೆಲವು  ಶ್ರೀಮಂತರು ತಮ್ಮ ಬಳಿ ಇಟ್ಟು ಕೊಂಡಿರುವುದಕ್ಕೆ ಕಾರಣ ವಾಗಿರುವ ಈಗಿನ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಪಲ್ಲಟಕ್ಕೆ ಕೊರೋನಾ ಕಾರಣವಾಗಬಹುದೇ? ತನ್ನ ಕಂಪೆನಿಯ ಉದ್ಯೋಗಿಯ ವೇತ ನಕ್ಕಿಂತ ಸಾವಿರ ಪಟ್ಟು ಅಧಿಕ ವೇತನ ಪಡೆಯುವ ಅದೇ ಕಂಪೆನಿಯ ಸಿಇಓನ ಬಗ್ಗೆ ತಕರಾರು ತೆಗೆಯುವುದಕ್ಕೆ ಇದು ಸನ್ನಿವೇಶ ಸೃಷ್ಟಿಸಬಹುದೇ? ಶ್ರೀಮಂತರ ಬಳಿ ಜಮೆಯಾಗುವ ಅಪರಿಮಿತ ಸಂಪತ್ತಿನ ಲಾಭವನ್ನು ಬಡವರಿಗೂ ಹಂಚಿಕೆಯಾಗುವಂತೆ ಮಾಡಲು ಮತ್ತು ಈಗಿನ ಅರ್ಥವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಲು ಪ್ರೇರಣೆಯೊದಗಿಸಬಹುದೇ?
ವಲಸೆ ಕಾರ್ಮಿಕರ ಪಾದಗಳು ಬೀದಿಯಲ್ಲಿ ಕುದಿಯುತ್ತಿರುವಾಗ ಅವರನ್ನು ಬೀದಿಗೆ ಬಿಟ್ಟವರು ಯಾವ ಸಂವೇದನೆಯೂ ಇಲ್ಲದೆ ಆರಾಮ ಕೋಣೆಯಲ್ಲಿ ಕುಳಿತರಲ್ಲ, ಅವರನ್ನು ಸೃಷ್ಟಿಸಿದ ವ್ಯವಸ್ಥೆ ಯನ್ನು  ಬದಲಿಸಲು ಕೊರೋನಾ ಶಕ್ತವಾಗಬಹುದೇ?

Tuesday, June 9, 2020

ಬಟಾಟೆ, ಮೊಟ್ಟೆ, ಕಾಫಿ ಬೀಜ ಮತ್ತು ನಮ್ಮ ಬದುಕು



ಒಂದು ದಿನ ತಂದೆಯ ಜೊತೆ ಮಗಳು ತನ್ನ ದುಃಖಮಯ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಾಳೆ. ಇದರಿಂದ ತಾನು ಹೊರಬರಲು ಏನು ಮಾಡಬೇಕು ಎಂದು ಪ್ರಶ್ನಿಸುತ್ತಾಳೆ. ತನ್ನ ಸುತ್ತ ಅನೇಕಾರು  ಸಮಸ್ಯೆಗಳಿವೆ. ಸಮಸ್ಯೆಗಳು ಹೇಗೆ ತನ್ನನ್ನು ಮುತ್ತಿಕೊಂಡಿವೆಯೆಂದರೆ, ಒಂದನ್ನು ಬಿಡಿಸಿದರೆ ಇನ್ನೊಂದು ಎದುರಾಗುತ್ತದೆ. ಸುಖ ಎಂಬುದೇ ನಾಪತ್ತೆಯಾಗಿದೆ. ತಾನು ಈ ಸಮಸ್ಯೆಗಳ ಸುಳಿಯಿಂದ  ಹೊರಬಂದು ಸುಖಮಯ ಬದುಕನ್ನು ಕಂಡುಕೊಳ್ಳಲು ಏನು ಮಾಡಬೇಕು ಎಂದು ಕೇಳಿಕೊಳ್ಳುತ್ತಾಳೆ.
ಮಗಳ ಮಾತುಗಳನ್ನೆಲ್ಲ ಅಪ್ಪ ತದೇಕಚಿತ್ತದಿಂದ ಆಲಿಸುತ್ತಾನೆ. ಬಳಿಕ ಆಕೆಯ ಕೈ ಹಿಡಿದು ಅಡುಗೆ ಕೋಣೆಗೆ ಪ್ರವೇಶಿಸುತ್ತಾನೆ. ಮಗಳಲ್ಲಿ ಅಚ್ಚರಿ.
ಆತ ಮೂರು ಕುಡಿಕೆಯನ್ನು ಎತ್ತಿಕೊಳ್ಳುತ್ತಾನೆ. ಅವುಗಳಲ್ಲಿ ನೀರು ತುಂಬಿಸುತ್ತಾನೆ ಮತ್ತು ಮೂರನ್ನೂ ಬೇರೆ ಬೇರೆಯಾಗಿ ಒಲೆಯ ಮೇಲಿಟ್ಟು ಬೆಂಕಿ ಕಾಯಿಸುತ್ತಾನೆ. ಯಾವಾಗ ಕುಡಿಕೆಯಲ್ಲಿರುವ ನೀರು  ಕುದಿಯಲು ಪ್ರಾರಂಭಿಸಿತೋ ಆಗ ಆತ ಒಂದು ಕುಡಿಕೆಗೆ ಬಟಾಟೆಯನ್ನು ಹಾಕುತ್ತಾನೆ. ಇನ್ನೊಂದಕ್ಕೆ ಮೊಟ್ಟೆ ಮತ್ತು ಮತ್ತೊಂದಕ್ಕೆ ಕಾಫಿ ಬೀಜವನ್ನು ಹಾಕುತ್ತಾನೆ. ಇದಾದ ಬಳಿಕ ಆತ ಮೌನವಾಗಿ  ಕುಳಿತುಕೊಳ್ಳುತ್ತಾನೆ. ಮಗಳಲ್ಲಿ ಕಸಿವಿಸಿ ಪ್ರಾರಂಭವಾಗುತ್ತದೆ. ಕುಡಿಕೆಗೆ ನೀರು ತುಂಬಿಸುವಲ್ಲಿಂದ ಹಿಡಿದು ಈವರೆಗೆ ಅಪ್ಪ ಒಂದೇ ಒಂದು ಶಬ್ದವನ್ನೂ ಮಾತಾಡಿಲ್ಲ. ಈಗ ನೋಡಿದರೆ ಸುಮ್ಮನೆ ಕುಳಿತು  ಕೊಂಡಿದ್ದಾರೆ. ತಾನು ಸಮಸ್ಯೆಗೆ ಪರಿಹಾರವನ್ನು ಕೋರಿ ಅಪ್ಪನ ಬಳಿ ಬಂದರೆ ಈಗ ಅಪ್ಪನೇ ಒಂದು ಸಮಸ್ಯೆಯಾಗಿ ಬಿಟ್ಟಿದ್ದಾರೆ ಎಂದು ಚಡಪಡಿಸತೊಡಗುತ್ತಾಳೆ. ಆಕೆ ಅಪ್ಪನ ಗಮನ ಸೆಳೆಯಲು  ಎರಡ್ಮೂರು ಸಲ ಪ್ರಯತ್ನಿಸಿದಳಾದರೂ ಅಪ್ಪ ಮಿಸುಕಾಡದ್ದನ್ನು ಕಂಡು ತಾನೂ ಮೌನಕ್ಕೆ ಜಾರುತ್ತಾಳೆ. ಹೀಗೆ ಸುಮಾರು 20 ನಿಮಿಷಗಳು ಕಳೆಯುತ್ತವೆ. ಅಪ್ಪ ಕುಳಿತಲ್ಲಿಂದ ಎದ್ದು ನಿಲ್ಲುತ್ತಾನೆ ಮತ್ತು ಆ  ಕುಡಿಕೆಯಲ್ಲಿದ್ದ ಬಟಾಟೆ, ಮೊಟ್ಟೆ ಮತ್ತು ಕಾಫಿಯನ್ನು ಮೂರು ಬೇರೆ ಬೇರೆ ಬಟ್ಟಲಿನಲ್ಲಿ ಇಡುತ್ತಾನೆ. ಬಳಿಕ ಮಗಳೊಂದಿಗೆ ಪ್ರಶ್ನಿಸುತ್ತಾನೆ:
ನೀನೀಗ ಏನನ್ನು ನೋಡುತ್ತಿರುವಿ?
ಬಟಾಟೆ, ಮೊಟ್ಟೆ ಮತ್ತು ಕಾಫಿ- ಆಕೆ ಉತ್ತರಿಸುತ್ತಾಳೆ.
ಆತ ಮತ್ತೆ ಹೇಳುತ್ತಾನೆ: ಹಾಗಲ್ಲ ಮಗಳೇ, ಹತ್ತಿರದಿಂದ ನೋಡು ಮತ್ತು ಬಟಾಟೆಯನ್ನು ಸ್ಪರ್ಶಿಸು ಎನ್ನುತ್ತಾನೆ. ಆಕೆ ಹಾಗೆಯೇ ಮಾಡುತ್ತಾಳೆ ಮತ್ತು ಬಟಾಟೆ ಮೃದುವಾಗಿರುವುದು ಅನುಭವಕ್ಕೆ  ಬರುತ್ತದೆ. ಬಳಿಕ ಮೊಟ್ಟೆಯನ್ನು ಒಡೆಯುವಂತೆ ಮತ್ತು ಕಾಫಿಯನ್ನು ಹೀರುವಂತೆ ಮಗಳೊಂದಿಗೆ ಹೇಳುತ್ತಾನೆ. ಆಕೆ ಹಾಗೆಯೇ ಮಾಡುತ್ತಾಳೆ. ಆದರೂ ಆಕೆಗೆ ಇದೆಲ್ಲ ಯಾಕೆ ಎಂದು  ಅರ್ಥವಾಗಿರುವುದಿಲ್ಲ. ಆಕೆ ಅಚ್ಚರಿಯೊಂದಿಗೆ ಪ್ರಶ್ನಿಸುತ್ತಾಳೆ:
ಅಪ್ಪಾ, ಇವೆಲ್ಲ ಏನು? ಏನಿದರ ತಾತ್ಪರ್ಯ?
ಅಪ್ಪ ವಿವರಿಸುತ್ತಾನೆ:
ಬಟಾಟೆ, ಮೊಟ್ಟೆ ಮತ್ತು ಕಾಫಿ ಬೀಜ- ಇವು ಮೂರೂ ಒಂದೇ ರೀತಿಯ ಶಿಕ್ಷೆಗೆ ಒಳಪಟ್ಟರೂ ಅವುಗಳ ಪ್ರತಿಕ್ರಿಯೆ ಮಾತ್ರ ಒಂದೇ ರೀತಿಯಾಗಿಲ್ಲ. ಕುದಿಯುವ ನೀರಿಗೆ ಹಾಕುವ ಮೊದಲು ಬಟಾಟೆ  ಗಡುಸಾಗಿತ್ತು. ಆದರೆ, ಕುದಿದ ಬಳಿಕ ಮೃದುವಾಯಿತು. ಆದರೆ ತನ್ನ ಗಟ್ಟಿತನವನ್ನು ಅದು ಸಂಪೂರ್ಣ ಕಳಕೊಳ್ಳಲಿಲ್ಲ. ಮೊಟ್ಟೆಯನ್ನು ನೋಡು. ಅದರ ಒಳಗಿನ ಪದಾರ್ಥಗಳನ್ನು ರಕ್ಷಿಸುವುದಕ್ಕೆ ಹೊರಗೆ  ಅತಿ ಮೃದುವಾದ ಕವಚವೊಂದು ಇತ್ತು. ಅದು ಅತೀ ಸಣ್ಣ ದಾಳಿಯನ್ನೂ ತಡೆಯಲಾರದಷ್ಟು ದುರ್ಬಲವೂ ಆಗಿತ್ತು. ಕುದಿಯುವ ನೀರಿಗೆ ಹಾಕುವ ಮೊದಲಿನ ಸ್ಥಿತಿ ಇದು. ಈಗ ಹೇಗಿದೆ? ಅದೇ  ದುರ್ಬಲ ಕವಚ ಸಬಲವಾಗಿದೆ. ಹಿಂದಿಗಿಂತ ಹೆಚ್ಚು ಶಕ್ತಿಶಾಲಿಯಾಗಿ ಹೊರಬಂದಿದೆ. ಹಾಗೆಯೇ, ಬಿಸಿನೀರಿಗೆ ಹಾಕುವ ಮೊದಲು ಕಾಫಿ ಬೀಜ ಅನನ್ಯವಾಗಿತ್ತು. ಆದರೆ, ಈಗ ಅದರ ಸ್ವರೂಪವೇ  ಬದಲಾಗಿದೆ. ಇನ್ನು, ಆಯ್ಕೆ ನಿನ್ನ ಕೈಯಲ್ಲಿದೆ. ಸಮಸ್ಯೆ ನಿನ್ನ ಬಾಗಿಲನ್ನು ತಟ್ಟಿದಾಗ ನೀನು ಹೇಗೆ ಪ್ರತಿಕ್ರಿಯಿಸುತ್ತೀ? ಬಟಾಟೆಯಂತೆ, ಮೊಟ್ಟೆಯಂತೆ ಅಥವಾ ಕಾಫಿ ಬೀಜದಂತೆ? ಸಮಸ್ಯೆ ಎಂಬುದು ಅಪರಿಚಿತವಾದ ಒಂದಲ್ಲ. ಅದು ಸದಾ ನಮ್ಮ ಜೊತೆ ಅಥವಾ ಆಸು-ಪಾಸು ಸುತ್ತುತ್ತಲೇ ಇರುತ್ತದೆ. ನಮ್ಮ ಸಮಸ್ಯೆಗಳು ಸಾಮಾನ್ಯವಾಗಿ ಬಟಾಟೆ, ಮೊಟ್ಟೆ ಅಥವಾ ಕಾಫಿ ಬೀಜದಂತೆಯೇ ಇದೆ. ಕೆಲವು  ನಮ್ಮನ್ನು ದುರ್ಬಲವಾಗಿಸುತ್ತದೆ. ಕೆಲವು ಕಠಿಣ ಹೃದಯಿಗಳನ್ನಾಗಿಸುತ್ತದೆ ಮತ್ತು ಇನ್ನೂ ಹಲವು ನಮ್ಮನ್ನು ಶಕ್ತಿಶಾಲಿಯನ್ನಾಗಿಸುತ್ತದೆ. ಸಕಾರಾತ್ಮಕ ಚಿಂತನೆಯ ಹೊರತು ಇನ್ನಾವುದರಲ್ಲೂ ಆನಂದವಿಲ್ಲ...’
ಅಪ್ಪ ಮಗಳ ಮುಖ ನೋಡುತ್ತಾನೆ. ಆಕೆ ಆಲಂಗಿಸುತ್ತಾಳೆ.
ಪವಿತ್ರ ಕುರ್ ಆನಿನ 65ನೇ ಅಧ್ಯಾಯವಾದ ಅತ್ತಲಾಕ್‍ನ 2ನೇ ವಚನದಲ್ಲಿ ಹೀಗೊಂದು ವಾಕ್ಯವಿದೆ, ‘ಅಲ್ಲಾಹನು ಸಂಕಷ್ಟಗಳಿಂದ ಪಾರಾಗುವ ಯಾವುದಾದರೊಂದು ದಾರಿಯನ್ನು ತೆರೆಯುವನು’.  ಇದೊಂದು ಭರವಸೆಯ ವಾಕ್ಯ. ಸಕಾರಾತ್ಮಕವಾಗಿ ಆಲೋಚಿಸುವುದಕ್ಕೆ ಪ್ರೇರೇಪಿಸುವ ವಾಕ್ಯ. ಈ ವಾಕ್ಯಕ್ಕಿಂತ ಮೊದಲು ತಲಾಕ್‍ನ ರೀತಿ-ನೀತಿಗಳ ಬಗ್ಗೆ ವಿವರಿಸಲಾಗಿದೆ. “ಒಂದೋ ಪತ್ನಿಯನ್ನು ನಿಮ್ಮ  ಜೊತೆ ಇರಿಸಿಕೊಳ್ಳಿ ಅಥವಾ ಉತ್ತಮ ರೀತಿಯಲ್ಲಿ ಅವರಿಗೆ ವಿಚ್ಛೇದನವನ್ನು ನೀಡಿ. ನಿಮ್ಮ ಪೈಕಿ ನ್ಯಾಯಶೀಲರಾದ ಇಬ್ಬರು ಸಾಕ್ಷಿಗಳನ್ನು ಇದಕ್ಕೆ ಸಾಕ್ಷಿಗಳನ್ನಾಗಿ ಮಾಡಿಕೊಳ್ಳಿ...” ಎಂದೆಲ್ಲಾ ಆದೇಶಿಸಿದ  ಬಳಿಕ ಮೇಲಿನ ಭರವಸೆಯ ವಾಕ್ಯದೊಂದಿಗೆ ವಚನವನ್ನು ಕೊನೆಗೊಳಿಸಲಾಗಿದೆ. ಅಂದರೆ, ವಿಚ್ಛೇದನ ಎಂಬುದು ಧರಾಶಾಹಿಯಾಗಿ ಬಿಡಬೇಕಾದ ಒಂದಲ್ಲ. ಬದುಕಿನಲ್ಲಿ ಮುಂದೇನೂ ಇಲ್ಲ  ಎಂದೋ ಎಲ್ಲವೂ ಕೊನೆಗೊಂಡಿತು ಎಂದೋ ಹತಾಶರಾಗಬೇಕಾದ ಸಂದರ್ಭವೂ ಅಲ್ಲ. ನೀವು ಸಕಾರಾತ್ಮಕವಾಗಿರಿ. ಒಂದು ಬಾಗಿಲು ಮುಚ್ಚುವಾಗ ದೇವನು ಇನ್ನೊಂದು ಬಾಗಿಲನ್ನು ತೆರೆಯುತ್ತಾನೆ  ಎಂದು ಆ ವಚನದ ಕೊನೆಯಲ್ಲಿ ಭರವಸೆ ತುಂಬಲಾಗಿದೆ.
ತನ್ನ ವಿರೋಧಿಗಳ ಕಿರುಕುಳವನ್ನು ತಡೆಯಲಾರದೆ ಪ್ರವಾದಿ ಮುಹಮ್ಮದ್(ಸ) ಮಕ್ಕಾದಿಂದ ಮದೀನಾಕ್ಕೆ ವಲಸೆ ಹೊರಡುತ್ತಾರೆ. ಅವರ ಜೊತೆಗೆ ಗೆಳೆಯ ಅಬೂಬಕರ್(ರ) ಕೂಡ ಇರುತ್ತಾರೆ. ಈ  ವಾರ್ತೆ ವಿರೋಧಿಗಳಿಗೆ ತಲುಪುತ್ತದೆ. ಅವರು ಇವರಿಬ್ಬರನ್ನೂ ಬೆನ್ನಟ್ಟಿ ಬರುತ್ತಾರೆ. ಪ್ರವಾದಿ ಮುಹಮ್ಮದ್(ಸ) ಮತ್ತು ಅಬೂಬಕರ್ ಅವರು ಮಕ್ಕಾದಲ್ಲೇ  ಇರುವ ಸೌರ್ ಎಂಬ ಹೆಸರಿನ ಗುಹೆಯೊಳಗೆ  ಅಡಗಿ ಕುಳಿತುಕೊಳ್ಳುತ್ತಾರೆ. ಇದು ನಿರಂತರ ಮೂರು ದಿನಗಳ ಕಾಲ ನಡೆಯುತ್ತದೆ. ಈ ನಡುವೆ ವಿರೋಧಿಗಳು ಈ ಗುಹೆಯ ಹೊರಗಡೆ ಅಡ್ಡಾಡುತ್ತಿರುವ ಕಾಲ ಸಪ್ಪಳ ಒಳಗಿರುವ ಅಬೂಬಕರ್ ರಿಗೆ  ಕೇಳಿಸುತ್ತದೆ. ಅವರು ಕಳವಳಗೊಳ್ಳುತ್ತಾರೆ. ಒಂದುವೇಳೆ, ಅವರು ಗುಹೆಯೊಳಗೆ ಇಣುಕಿ ನೋಡಿದರೆ ನಮ್ಮಿಬ್ಬರನ್ನೂ ಕಂಡಾರು ಅನ್ನುವ ಆತಂಕ ಅವರನ್ನು ಕಾಡುತ್ತದೆ. ಆ ಆತಂಕವನ್ನು ಅವರು  ಪ್ರವಾದಿಯವರ ಜೊತೆ ಹಂಚಿಕೊಳ್ಳುತ್ತಾರೆ. ಆಗ ಪ್ರವಾದಿ ಹೇಳುವ ಮಾತೊಂದು ಇತಿಹಾಸದಲ್ಲಿ ಹೀಗೆ ದಾಖಲಾಗಿದೆ,
ನಮ್ಮ ಜೊತೆ ಅಲ್ಲಾಹನಿದ್ದಾನೆ.
ಎಲ್ಲವೂ ಕೊನೆಗೊಂಡಿತು ಅನ್ನುವ ಕಟ್ಟಕಡೆಯ ಸ್ಥಿತಿಯಲ್ಲೂ ಸಕಾರಾತ್ಮಕವಾಗಿ ಆಲೋಚಿಸುವುದೇ ಯಶಸ್ಸಿನ ಸಿದ್ಧಸೂತ್ರ. ಪವಿತ್ರ ಕುರ್ ಆನಿನ 94ನೇ ಅಧ್ಯಾಯವಾದ ಅಲಮ್ ನಶ್‍ರಹ್‍ನ 5 ಮತ್ತು 6ನೇ  ವಚನಗಳಲ್ಲಿ ಒಂದೇ ಮಾತನ್ನು ಎರಡು ಬಾರಿ ಹೇಳಲಾಗಿದೆ. 5ನೇ ವಚನದಲ್ಲಿ, ‘ಜಟಿಲತೆಯ ಜೊತೆಗೆ ವೈಶಾಲ್ಯತೆಯೂ ಇದೆ’ ಎಂದು ಹೇಳಲಾಗಿದ್ದರೆ 6ನೇ ವಚನದಲ್ಲಿ, ‘ಖಂಡಿತವಾಗಿಯೂ’ ಎಂಬ  ಶಬ್ದವನ್ನು ಸೇರಿಸಿ 'ಜಟಿಲತೆಯೊಂದಿಗೆ ವೈಶಾಲ್ಯತೆಯೂ ಇದೆ’ ಎಂದು ಮತ್ತೆ ಹೇಳಲಾಗಿದೆ. ಆದರೆ ಹೀಗೆ ಹೇಳುವುದಕ್ಕಿಂತ ಮೊದಲಿನ 1ರಿಂದ 4ರ ವರೆಗಿನ ವಚನಗಳು ಪ್ರವಾದಿ ಅನುಭವಿಸುತ್ತಿದ್ದ  ಮಾನಸಿಕ ತಳಮಳ, ಸವಾಲು, ಸಂಕಷ್ಟಗಳನ್ನು ಉಲ್ಲೇಖಿಸುತ್ತದೆ. ತನ್ನ ವಿಚಾರಧಾರೆಯನ್ನು ಜನರೊಂದಿಗೆ ಹಂಚಿಕೊಳ್ಳುವ ಆರಂಭಿಕ ಹಂತದಲ್ಲಿ ಪ್ರವಾದಿ(ಸ) ಸವಾಲುಗಳನ್ನು ಸಹಜವಾಗಿಯೇ  ಎದುರಿಸಿದ್ದರು. ಅದು ಅವರನ್ನು ಚಿಂತೆಗೂ ಒಳಪಡಿಸಿತ್ತು. ಅವರು ಪ್ರತಿಪಾದಿಸುತ್ತಿದ್ದ ವಿಚಾರಧಾರೆ ಅಂದಿನ ಮಕ್ಕಾದ ಸಾಮಾಜಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ ನೂತನವಾಗಿತ್ತು. ಜನರು ಆವರೆಗೆ ಯಾವುದನ್ನು ಧರ್ಮ ಅಂದುಕೊಂಡಿದ್ದರೋ ಅದರ ಸರಿ-ತಪ್ಪುಗಳನ್ನು ಪ್ರವಾದಿಯವರು ಮಂಡಿಸುತ್ತಿದ್ದ ವಿಚಾರಧಾರೆ ವಿಶ್ಲೇಷಣೆಗೆ ಒಳಪಡಿಸುತ್ತಿತ್ತು. ಇದರಿಂದಾಗಿ ಅವರು ಕೆರಳುವುದು ಸಹಜವೂ ಆಗಿತ್ತು.  ಪ್ರವಾದಿಯವರ ಪಾಲಿಗೆ ಇದು ಅತ್ಯಂತ ಸವಾಲಿನ ಸಂದರ್ಭ. ಒಂದುಕಡೆ, ತಾನು ಬೆಳೆದು ಬಂದಿರುವ ಸಮಾಜದಲ್ಲಿ ಬೇರು ಬಿಟ್ಟಿರುವ ಅನಾಚಾರ, ಕಂದಾಚಾರ, ಅತಿಕೆಟ್ಟ ಆಚರಣೆಗಳು ಮತ್ತು ಇ ನ್ನೊಂದು ಕಡೆ, ಇವನ್ನೆಲ್ಲ ತಿದ್ದಿ-ನೇರ್ಪುಗೊಳಿಸುವುದು ಹೇಗೆ ಅನ್ನುವ ತಾಕಲಾಟ- ಈ ಎರಡರ ನಡುವೆ ಪ್ರವಾದಿ(ಸ) ಬೆಂದು ಹೋಗಿದ್ದರು. ಹೀಗಿರುತ್ತಾ, ಈ ಎಲ್ಲವುಗಳನ್ನು ದಾಟಿ ನೀವು ಹೇಗೆ  ಹೊರಬಂದಿರಿ ಎಂಬುದನ್ನು ಪವಿತ್ರ ಕುರ್ ಆನ್‍ನ ಈ ವಚನಗಳು ನೆನಪಿಸುತ್ತಲೇ ಜಟಿಲತೆಯೊಂದಿಗೆ ವಿಶಾಲತೆಯೂ ಇದೆ ಎಂಬ ಭರವಸೆಯ ನುಡಿಗಳನ್ನು ಹೇಳಲಾಗಿದೆ. ಸವಾಲು ಎಂಬುದು  ಸ್ಥಿರವಲ್ಲ. ನಾವು ಅದನ್ನು ಹೇಗೆ ಎದುರಿಸುತ್ತೇವೆ ಎಂಬುದರ ಆಧಾರದಲ್ಲಿ ಅದು ಸ್ಥಾವರವೋ ಜಂಗಮವೋ ಆಗುತ್ತದೆ. ಸವಾಲನ್ನು ಮೆಟ್ಟಿ ನಿಲ್ಲಬಲ್ಲೆ ಎಂಬ ಸಕಾರಾತ್ಮಕ ಮನೋಭಾವವು ನಿಮ್ಮನ್ನು  ಗೆಲುವಿನ ಬಾಗಿಲಿನೆಡೆಗೆ ತಂದು ನಿಲ್ಲಿಸುತ್ತದೆ. ಒಂದಷ್ಟು ಶ್ರಮ ಮತ್ತು ಧೈರ್ಯದೊಂದಿಗೆ ಮುನ್ನುಗ್ಗಿದರೆ ಬಾಗಿಲನ್ನು ತೆರೆದು ಒಳಪ್ರವೇಶಿಸಬಹುದು.
ಮಕ್ಕಾದಲ್ಲಿ ಪ್ರವಾದಿ ವಿರೋಧಿ ಚಳವಳಿ ಅತ್ಯಂತ ತಾರಕ ಸ್ಥಿತಿಗೆ ತಲುಪಿದಾಗ ಮತ್ತು ಅವರ ಕುಟುಂಬದ ಅತ್ಯಂತ ಆಪ್ತರೇ ಅವರ ವಿರುದ್ಧ ದ್ವೇಷ ಪ್ರಚಾರಕ್ಕೆ ಇಳಿದಾಗ ಅವರ ಮುಂದೆ ಎರಡು  ಆಯ್ಕೆಗಳಿದ್ದುವು. 1. ತನ್ನ ವಿಚಾರಧಾರೆಯ ಪ್ರಚಾರವನ್ನು ಸ್ಥಗಿತಗೊಳಿಸುವುದು. 2. ಪ್ರತಿರೋಧವನ್ನು ಸಕಾರಾತ್ಮಕವಾಗಿ ಎದುರಿಸುವುದು.
ಪ್ರವಾದಿ(ಸ) ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಅವರು ತನ್ನ ವಿಚಾರಧಾರೆಯ ಪ್ರಚಾರವನ್ನು ಸ್ಥಗಿತಗೊಳಿಸುವುದರ ಬದಲು ತನ್ನ ವಿಚಾರಧಾರೆಯನ್ನು ಒಪ್ಪಿಕೊಂಡವರಿಗೆ ಆಶ್ರಯ ಕೊಡುವ  ಇನ್ನಾವುದಾದರೋ ಪ್ರದೇಶಗಳಿವೆಯೋ ಎಂದು ಹುಡುಕಾಡತೊಡಗಿದರು. ತನ್ನ ಮತ್ತು ತನ್ನನ್ನು ಒಪ್ಪಿಕೊಂಡ ಅನುಯಾಯಿಗಳ ಸುರಕ್ಷಿತತೆಯನ್ನು ಖಚಿತಪಡಿಸಿಕೊಳ್ಳುವುದೂ ಅವರ  ಹೊಣೆಗಾರಿಕೆಯಾಗಿತ್ತು. ಅವರು ಆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು. ಇತಿಯೋಪಿಯಾದ ರಾಜ ನಜ್ಜಾಷಿ ಎಂಬವರ ಪರಮತ ಸಹಿಷ್ಣು ಮನೋಭಾವವನ್ನು ತಿಳಿದುಕೊಂಡು ಅಲ್ಲಿಗೆ ತನ್ನ ಅ ನುಯಾಯಿಗಳನ್ನು ಕಳುಹಿಸಿಕೊಟ್ಟರು. ಆ ಮೂಲಕ ಅತಿ ಸಂಕಷ್ಟದ ಸಂದರ್ಭದಲ್ಲೂ ನಿರಾಶರಾಗದೇ ಅದರಿಂದ ಪಾರಾಗುವ ದಾರಿಗಳನ್ನು ಕಂಡುಕೊಂಡರು. ಅದು ಅಲ್ಲಿಗೇ ನಿಲ್ಲಲಿಲ್ಲ. ತನ್ನ  ವಿಚಾರಧಾರೆಯನ್ನು ಮಂಡಿಸುವುದಕ್ಕಾಗಿ ಸುರಕ್ಷಿತ ಪ್ರದೇಶಗಳ ಹುಡುಕಾಟವನ್ನು ಅವರು ನಿರಂತರ ಜಾರಿಯಲ್ಲಿರಿಸಿದರು. ವಿರೋಧಿಗಳ ದಾಳಿಗೆ ತನ್ನ ಅನುಯಾಯಿಗಳು ತುತ್ತಾಗಬಾರದೆಂಬ  ನೆಲೆಯಲ್ಲೂ ಈ ಹುಡುಕಾಟ ಮುಖ್ಯವಾಗಿತ್ತು. ಕೊನೆಗೆ ಅವರು ಮದೀನಾವನ್ನು ಆಯ್ಕೆ ಮಾಡಿಕೊಂಡರು. ತನ್ನ ಅನುಯಾಯಿಗಳನ್ನು ಮದೀನಾಕ್ಕೆ ರವಾನಿಸಿದರು. ಸಿಕ್ಕುಗಳನ್ನು ಕಂಡು ಕೈ  ಚೆಲ್ಲುವುದಕ್ಕಿಂತ ಅವನ್ನು ಬಿಡಿಸಿ ದಾರಿಯನ್ನು ಕಂಡುಕೊಳ್ಳುವುದು ಪ್ರವಾದಿಯವರ ಮಾದರಿಯಾಗಿತ್ತು. ಪವಿತ್ರ ಕುರ್‍ಆನ್‍ನಲ್ಲಿ ನರಕದ ಬಗ್ಗೆ ಎಲ್ಲೆಲ್ಲಾ ಉಲ್ಲೇಖಿಸಲಾಗಿದೆಯೋ ಬಹುತೇಕ ಅಲ್ಲೆಲ್ಲ  ಸ್ವರ್ಗದ ಸುವಾರ್ತೆಯನ್ನೂ ನೀಡಲಾಗಿದೆ. ಶಿಕ್ಷೆಯ ಬಗ್ಗೆ ಹೇಳುವಲ್ಲೆಲ್ಲ ತೌಬಾದ ಬಗ್ಗೆಯೂ ಹೇಳಲಾಗಿದೆ. ನಕಾರಾತ್ಮಕ ಸಂದೇಶ ಎಂದೂ ರವಾನೆಯಾಗಬಾರದೆಂಬ ಗರಿಷ್ಠ ಎಚ್ಚರಿಕೆಯನ್ನು ಪವಿತ್ರ  ಕುರ್ ಆನ್ ಉದ್ದಕ್ಕೂ ವಹಿಸಿಕೊಂಡಿರುವುದು ನಮಗೆ ಕುರ್ ಆನ್‍ನ  ತುಂಬಾ ಕಾಣಸಿಗುತ್ತದೆ. ಅಲ್ಲಾಹನು ಹೀಗೆ ಹೇಳಿದ್ದಾನೆಂದು ಪ್ರವಾದಿ(ಸ) ಹೇಳಿದ್ದಾರೆ,
ಮಾನವನು ನನ್ನನ್ನು ಸ್ಮರಿಸಿದರೆ ನಾನೂ ಸ್ಮರಿಸುವೆ. ಆತ ನನ್ನನ್ನು ಸಭೆಯಲ್ಲಿ ಸ್ಮರಿಸಿದರೆ ಅದಕ್ಕಿಂತಲೂ ದೊಡ್ಡ ಸಭೆಯಲ್ಲಿ ನಾನು ಆತನನ್ನು ಸ್ಮರಿಸುವೆ. ಆತ ನಡೆದುಕೊಂಡು ನನ್ನ ಬಳಿ ಬಂದರೆ ನಾನು  ಓಡಿಕೊಂಡು ಆತನ ಬಳಿಗೆ ಬರುವೆ.’
ಬೆಳಿಗ್ಗೆ ಪತ್ರಿಕೆಯನ್ನು ತೆರೆದು ನೋಡಿದರೆ ಹತ್ಯೆ, ಆತ್ಮಹತ್ಯೆ, ಉದ್ಯೋಗ ನಷ್ಟ, ಕೊರೋನಾ, ಆರ್ಥಿಕ ಹಿಂಜರಿತ, ಘರ್ಷಣೆ, ವಿಚ್ಛೇದನ, ಹಿಂಸೆ, ಅಪಘಾತ ಇತ್ಯಾದಿಗಳೇ ನಮ್ಮನ್ನು ಎದುರುಗೊಳ್ಳುತ್ತವೆ.  ಟಿ.ವಿ. ವೀಕ್ಷಿಸಿದರೂ ಸುಖ ಇಲ್ಲ. ಸಾಮಾಜಿಕ ಜಾಲತಾಣಗಳಂತೂ ಸುಳ್ಳು ಮತ್ತು ಸತ್ಯವನ್ನು ಬೆರಕೆ ಮಾಡಿಕೊಂಡು ಓದುಗರನ್ನು ಗೊಂದಲಕ್ಕೆ ಸಿಲುಕಿಸುತ್ತಿವೆ. ಇಂಥ ಹೊತ್ತಲ್ಲಿ ಅನಿಶ್ಚಿತತೆ ಕಾಡುವುದು  ಸಹಜ. ಆದರೆ ಇದನ್ನು ಮೀರಿ ನಿಲ್ಲುವುದರಲ್ಲಿ ಬದುಕಿದೆ. ವ್ಯಕ್ತಿ, ಸಮುದಾಯ ಅಥವಾ ದೇಶದ ಯಶಸ್ಸಿನ ಹಿಂದೆ ಭರವಸೆ ಮತ್ತು ಸಕಾರಾತ್ಮಕ ಚಿಂತನೆಗೆ ಬಹುಮುಖ್ಯ ಪಾತ್ರ ಇದೆ. ನಮ್ಮ ಸೋಲು  ಮತ್ತು ಗೆಲುವು ಇನ್ನಾರಲ್ಲೂ ಇಲ್ಲ. ಅದು ನಮ್ಮಲ್ಲೇ  ಇದೆ. ಅಂದಹಾಗೆ,
ವಿಷಮ ಪರಿಸ್ಥಿತಿಗೆ ಬಟಾಟೆ, ಮೊಟ್ಟೆ ಮತ್ತು ಕಾಫಿ ಬೀಜ ಹೇಗೆ ಪ್ರತಿಕ್ರಿಯಿಸಿದುವೋ ಅದುವೇ ಬದುಕು.