1993ರಲ್ಲಿ 177, 1996ರಲ್ಲಿ 174, 2002ರಲ್ಲಿ 88, 2007ರಲ್ಲಿ 51 ಮತ್ತು 2012ರಲ್ಲಿ 47 ಸ್ಥಾನಗಳನ್ನು ಪಡೆದಿದ್ದ ಭಾರತೀಯ ಜನತಾ ಪಕ್ಷವು ಈ 2017ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 325 ಸ್ಥಾನಗಳನ್ನು ಪಡೆದುದಕ್ಕೆ ಕಾರಣವೇನು? ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವೇ? ಕೋಮು ಧ್ರುವೀಕರಣವೇ ಅಥವಾ ಮತಯಂತ್ರ ದುರುಪ ಯೋಗವೇ? ಇಲ್ಲಿ ಬಹುಮುಖ್ಯವಾದ ಅಂಶವೊಂದಿದೆ. 92ರ ಬಾಬರಿ ಧ್ವಂಸದ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಸ್ಥಾನಗಳ ಸಂಖ್ಯೆ 177. ಬಾಬರಿ ಇರುವುದೇ ಉತ್ತರ ಪ್ರದೇಶದಲ್ಲಿ. 92ರಲ್ಲಿ ಮಸೀದಿಯನ್ನು ಒಡೆಯುವ ಮೊದಲು ದೇಶದಾದ್ಯಂತ ಬಿಜೆಪಿ ರಥಯಾತ್ರೆ ನಡೆಸಿತ್ತು. ಅಡ್ವಾಣಿ ಮತ್ತು ವಾಜಪೇಯಿಯವರು ಆ ರಥಯಾತ್ರೆಗೆ ನಾಯಕತ್ವವನ್ನು ನೀಡಿದ್ದರು. ದೇಶದಾದ್ಯಂತ ಕೋಮು ಆಧಾರಿತ ವಿಭಜನೆಗಳು ನಡೆಯುತ್ತಿದ್ದ ಕಾಲ. ಉತ್ತರ ಪ್ರದೇಶವಂತೂ ಇದರ ಪ್ರಭಾವದಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಅಲ್ಲದೇ ಬಾಬರಿ ಧ್ವಂಸದ ಸಮಯದಲ್ಲಿ ಉತ್ತರ ಪ್ರದೇಶದಲ್ಲಿದ್ದುದೇ ಬಿಜೆಪಿ ಸರಕಾರ. ಕಲ್ಯಾಣ್ ಸಿಂಗ್ ಆಗ ಮುಖ್ಯಮಂತ್ರಿಯಾಗಿದ್ದರು. ಇವೆಲ್ಲ ಇದ್ದೂ 1993ರ ಚುನಾವಣೆಯಲ್ಲಿ ಬರೇ 177 ಸ್ಥಾನಗಳನ್ನು ಪಡೆದು ಅಧಿಕಾರ ವಂಚಿತವಾಯಿತಲ್ಲ ಮತ್ತು ಸರಿಸುಮಾರು 19 ವರ್ಷಗಳ ಬಳಿಕ ಇದೀಗ 325 ಸ್ಥಾನಗಳೊಂದಿಗೆ ಮತ್ತೆ ಅಧಿಕಾರ ಪಡೆಯಿತಲ್ಲ, ಇವೆರಡೂ ಏನನ್ನು ಸೂಚಿಸುತ್ತವೆ? 92ರಲ್ಲಿ ಇದ್ದಿರಬಹುದಾದ ಕೋಮು ಧ್ರುವೀಕರಣಕ್ಕಿಂತಲೂ ಹೆಚ್ಚಿನ ಕೋಮುಧ್ರುವೀಕರಣವನ್ನು ಈ ಬಾರಿ ಮಾಡಲಾಯಿತೇ? ಅದು ಸಾಧ್ಯವೇ? ರಾಮಮಂದಿರದ ಚರ್ಚೆ ಅತ್ಯಂತ ತಾರಕ ಸ್ಥಿತಿಯಲ್ಲಿದ್ದಾಗಲೂ ಮತ್ತು ವಾಜಪೇಯಿ, ಅಡ್ವಾಣಿಯಂಥ ಅತಿ ಪ್ರಬಲ ನಾಯಕರು ಬಿಜೆಪಿಯ ನೇತೃತ್ವ ಸ್ಥಾನದಲ್ಲಿದ್ದಾಗಲೂ ಸಾಧಿಸಲಾಗದ ಕೋಮುಧ್ರುವೀಕರಣ ವನ್ನು ನರೇಂದ್ರ ಮೋದಿಯವರು ಮಾಡಿದರೇ? ಮಸೀದಿಯನ್ನು ಕೆಡವದೆಯೇ ಮತ್ತು ಮಂದಿರವನ್ನು ಕಟ್ಟದೆಯೇ ಅವರು ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದರೇ? ಅದು ಹೇಗೆ?
ನೋಟು ರದ್ದತಿ
104 ಉಪಗ್ರಹಗಳನ್ನು ಒಮ್ಮೆಲೇ ಕಕ್ಷೆಗೆ ಹಾರಿಸಿದ್ದು
ಕಪ್ಪು ಹಣ
ಆಧಾರ್ ಕಾರ್ಡ್
ಆಹಾರ ವೈವಿಧ್ಯತೆ
ವಿಶ್ವವಿದ್ಯಾಲಯಗಳಲ್ಲಿ ನಡೆದ ಬೆಳವಣಿಗೆ..
.. ಇವು ಮತ್ತು ಇಂಥ ಹಲವಾರು ವಿಷಯಗಳು ಈ ದೇಶದಲ್ಲಿ ಚರ್ಚೆಗೊಳಗಾದ ವಿಧಾನವನ್ನೊಮ್ಮೆ ಪರಿಶೀಲಿಸಿ. ಎಲ್ಲವೂ ದೇಶಪ್ರೇಮ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯಗಳಾಗಿ ಮಾರ್ಪಡುವುದನ್ನು ಕಳೆದ ಎರಡೂವರೆ ವರ್ಷಗಳಲ್ಲಿ ಈ ದೇಶ ಕಂಡಿದೆ. ಬಡತನದಿಂದ (ಭೂಕ್ ಮಾರ್ಸೇ ಆಝಾದಿ) ಆಝಾದಿ ಎಂಬ ಘೋಷಣೆಯು ಯಾವ ರೀತಿಯಲ್ಲಿ ಚರ್ಚೆಗೊಳಗಾಯಿತು ಎಂಬುದು ನಮಗೆ ಗೊತ್ತು. 60% ಬಡವರಿರುವ ದೇಶವೊಂದರ ಅತಿ ಜನಪ್ರಿಯ ಘೋಷಣೆಯಾಗಿ ಭೂಕ್ ಮಾರ್ಸೇ ಆಝಾದಿ ಗುರುತಿಸಬೇಕಿತ್ತು. ದೆಹಲಿಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್ನಿಂದ ಮೊಳಗಿದ ಆ ಘೋಷಣೆಯು ಅತ್ಯಂತ ಕ್ರಾಂತಿಕಾರಿ, ಆಕರ್ಷಕ ಮತ್ತು ಜನನುಡಿಯಾಗುವಷ್ಟು ಶಕ್ತಿಯುತವಾದುದು. ಈ ಘೋಷಣೆ ಕೂಗಿದವರಿಗೆ ಭಾರತದ ದುಡಿಯುವ ವರ್ಗದ ಬಗ್ಗೆ ಅರಿವು ಇತ್ತು. ಅಧ್ಯಯನದ ಅಂಕಿ-ಅಂಶಗಳಿದ್ದುವು. ಆದ್ದರಿಂದ, ನೇರಾತಿನೇರ ಆ ಘೋಷಣೆಯನ್ನು ಎದುರಿಸುವುದು ಯಾವುದೇ ಸರಕಾರಕ್ಕೆ ಸುಲಭವಿರಲಿಲ್ಲ. ನರೇಂದ್ರ ಮೋದಿ ಬಳಗದ ಚಾಣಾಕ್ಷತನ ಗೋಚರವಾಗುವುದೇ ಇಲ್ಲಿ. ಅದು ‘ಆಝಾದಿ’ಯನ್ನು ವಿವಾದಾತ್ಮಕಗೊಳಿಸಿತು. ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತಂದು ನಿಲ್ಲಿಸಿತು. ಭಾರತದಲ್ಲಿ ಬಹುಸಂಖ್ಯಾತರು ಬಡವರಾಗಿದ್ದರೂ ಭಾರತದ ಬಡತನವನ್ನು ಹೇಳುವುದೇ ದೇಶದ್ರೋಹ ಎಂಬ ವಾತಾವರಣ ಸೃಷ್ಟಿಯಾಯಿತು. ಅಂತಿಮವಾಗಿ ನಡೆದz್ದÉೀನೆಂದರೆ, ಆಝಾದಿ ಘೋಷಣೆಯನ್ನು ಕೂಗಿದವರು ದೇಶಪ್ರೇಮಿಗಳೋ ದೇಶದ್ರೋಹಿಗಳೋ ಎಂಬುದು. ದೇಶವಿರೋಧಿ ಘೋಷಣೆಗಳನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ವಿವಿಧ ನಾಯಕರು ಪದೇ ಪದೇ ಹೇಳುತ್ತಲೇ ಹೋದರು. ಹಾಗೆಯೇ, ನೋಟು ರದ್ದತಿಯು ಬಡ ಭಾರತದ ಅತಿದೊಡ್ಡ ಇಶ್ಯೂ ಆಗಬೇಕಿತ್ತು. ನೂರಕ್ಕಿಂತಲೂ ಅಧಿಕ ಮಂದಿ ಬ್ಯಾಂಕಿನೆದುರು ಕ್ಯೂ ನಿಂತು ಸಾವಿಗೀಡಾದರು. ಯಾವುದೇ ಪೂರ್ವ ತಯಾರಿಯಿಲ್ಲದೇ ಮಾಡಲಾದ ಅತ್ಯಂತ ಅಶಿಸ್ತಿತ ಕ್ರಮ ಅದು ಅನ್ನುವುದಕ್ಕೆ ವಿಶೇಷ ಅಧ್ಯಯನವೇನೂ ಬೇಕಾಗಿರಲಿಲ್ಲ. ಆದರೆ ನೋಟು ರದ್ದತಿ ಚರ್ಚೆಯನ್ನು ಮೋದಿಯವರ ಬಳಗವು ರಾಷ್ಟ್ರೀಯತೆಯ ಜೊತೆ ಸೇರಿಸಿ ಬಿಟ್ಟಿತು. ನೋಟು ರದ್ದತಿಗೂ ಭಯೋತ್ಪಾದನೆಗೂ ನಡುವೆ ನಂಟು ಕಲ್ಪಿಸಿತು. ಕಾಶ್ಮೀರದಲ್ಲಿ ಪ್ರತಿಭಟನಾಕಾರರು ಎಸೆಯುತ್ತಿದ್ದ ಕಲ್ಲನ್ನು ನೋಟು ರದ್ದತಿಯ ಜೊತೆ ಜೋಡಿಸಿತು. ನೋಟು ರದ್ದತಿಯನ್ನು ವಿರೋಧಿಸುವವರೆಲ್ಲ ಕಪ್ಪು ಹಣ ಇಟ್ಟುಕೊಂಡವರಂತೆ ಮತ್ತು ದೇಶದ ಅಭಿವೃದ್ಧಿಯ ವಿರೋಧಿಗಳಂತೆ ಚಿತ್ರಿಸಿತು. ಆಧಾರ್ ಕಾರ್ಡ್ ಅನ್ನು ಸಮರ್ಥಿಸಿಕೊಂಡದ್ದೂ ರಾಷ್ಟ್ರೀಯ ಭದ್ರತೆ ಎಂಬ ಗುಮ್ಮವನ್ನು ತೋರಿಸಿಯೇ. ಆಧಾರ್ ಕಾರ್ಡ್ ಅನ್ನು ದೇಶಕ್ಕೆ ಪರಿಚಯಪಡಿಸಿದ್ದು ಕಾಂಗ್ರೆಸ್. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಅದನ್ನು ವಿರೋಧಿಸಿತ್ತು. ಬಾಂಗ್ಲಾ ನುಸುಳುಕೋರರಿಗೆ ಮತ್ತು ಉಗ್ರರಿಗೆ ಪೌರತ್ವವನ್ನು ಒದಗಿಸುವ ಯೋಜನೆ ಎಂದು ಅದು ಖಂಡಿಸಿತ್ತು. ಆಗ ನರೇಂದ್ರ ಮೋದಿಯವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದರು. ಆದರೆ ಅವರು ಯಾವಾಗ ಪ್ರಧಾನ ಮಂತ್ರಿಯಾದರೋ ಅದೇ ಆಧಾರ್ ಕಾರ್ಡ್ ಅನ್ನು ರಾಷ್ಟ್ರೀಯ ಭದ್ರತೆಯ ವಿಷಯವಾಗಿ ಮಾರ್ಪಡಿಸಿದರು. ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸತೊಡಗಿದರು. ಗುರ್ಮೆಹರ್ ಕೌರ್ ಎಂಬ ಹುತಾತ್ಮ ಯೋಧನ ಮಗಳು ಶಾಂತಿಯ ಪರ ಮಾತಾಡಿದಾಗ ಅದನ್ನು ‘ದೇಶದ್ರೋಹಿ’ಯಾಗಿ ಬಿಂಬಿಸಿದ್ದು ಮತ್ತು ಮತ್ತೊಂದು ಸುತ್ತಿನ ದೇಶಪ್ರೇಮಿ ಚರ್ಚೆಯು ಮಾಧ್ಯಮಗಳಲ್ಲಿ ನಡೆಯುವಂತೆ ಮಾಡಿದ್ದು ಇದೇ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯೇ. ಹಾಗಂತ, ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮೊದಲು ಬಿಜೆಪಿಯು ದೇಶಪ್ರೇಮದ ಬಗ್ಗೆ ಮಾತಾಡುತ್ತಿರಲಿಲ್ಲ ಎಂದಲ್ಲ. ವಾಜಪೇಯಿಯವರ ಕಾಲದಲ್ಲೂ ಈ ಮಾತಿತ್ತು. ಜನಸಂಘವೂ ಮಾತಾಡಿತ್ತು. ಆದರೆ ವಿಶ್ವವಿದ್ಯಾಲಯದಿಂದ ಸಿನಿಮಾ ಥಿಯೇಟರ್ಗಳ ವರೆಗೆ, ಯೋಗದಿಂದ ಆಹಾರದ ವರೆಗೆ ಪ್ರತಿಯೊಂದನ್ನೂ ರಾಷ್ಟ್ರೀಯತೆ ಮತ್ತು ದೇಶಪ್ರೇಮದೊಂದಿಗೆ ಜೋಡಿಸಿ ಚರ್ಚಿಸುವ ವಿಧಾನವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡದ್ದು ನರೇಂದ್ರ ಮೋದಿಯೇ. ಉತ್ತರ ಪ್ರದೇಶದಲ್ಲಿ ಅವರು ಒಬ್ಬನೇ ಒಬ್ಬ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಇನ್ನೊಂದು ಕಡೆ, ಅದೇ ಉತ್ತರ ಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ಅಮಿತ್ ಶಾರು ತಮ್ಮ ವಿರೋಧಿಗಳನ್ನು ‘ಕಸಬ್’ಗೆ ಹೋಲಿಸಿದರು. ಕಸಬ್ ಎಂಬುದು ಮುಸ್ಲಿಮ್ ಐಡೆಂಟಿಟಿಯನ್ನು ಸಾರುವ ಹೆಸರು ಮಾತ್ರ ಅಲ್ಲ. ಅದು ವಿದ್ರೋಹಿ ಪದ. ಪಾಕಿಸ್ತಾನಿ ಹಿತಾಸಕ್ತಿಯನ್ನು ಕಾಪಾಡಬಯಸುವ ಪದ. ಫತೇಹ್ಪುರ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ನರೇಂದ್ರ ಮೋದಿಯವರು ಇನ್ನೊಂದು ಹೆಜ್ಜೆ ಮುಂದಿಟ್ಟರು. ಕಬರ್ಸ್ಥಾನದಷ್ಟೇ ಸ್ಮಶಾನಕ್ಕೂ ಸೌಲಭ್ಯಗಳು ಲಭ್ಯವಾಗಬೇಕೆಂದು ಆಗ್ರಹಿಸಿದರು. ಈದ್ಗೆ ವಿದ್ಯುತ್ ಒದಗಿಸಿದವರು ದೀಪಾವಳಿಗೂ ವಿದ್ಯುತ್ ಒದಗಿಸಬೇಕೆಂದು ಹೇಳಿದರು. ಅಖಿಲೇಶ್ ಸರಕಾರದ ಕನ್ಯಾ ವಿದ್ಯಾ ಧನ್ ಯೋಜನೆಯ ಲಾಭ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಲಭ್ಯವಾಗುತ್ತಿದೆ ಎಂದು ದೂರಿದರು. 12ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಮುಂದಿನ ಓದಿಗಾಗಿ 30 ಸಾವಿರ ನೆರವು ನೀಡುವ ಯೋಜನೆ ಇದು. ನಿಜವಾಗಿ, ನರೇಂದ್ರ ಮೋದಿಯವರು ನೀಡಿದ ಈ ಮೂರೂ ಹೇಳಿಕೆಗಳೂ ಸುಳ್ಳಾಗಿದ್ದುವು. ಅಖಿಲೇಶ್ ಸರಕಾರ ಅಂಕಿ-ಅಂಶವನ್ನು ಬಿಡುಗಡೆಗೊಳಿಸುವ ಮೂಲಕ ಸತ್ಯ ಹೇಳುವ ಪ್ರಯತ್ನ ನಡೆಸಿತಾದರೂ ಸುಳ್ಳು ಅದಾಗಲೇ ತಲುಪಬೇಕಾದ ಕಡೆಗೆಲ್ಲ ತಲುಪಿತ್ತು. ವಿಚಿತ್ರ ಏನೆಂದರೆ, ಅಂಕಿ-ಅಂಶ ಬಿಡುಗಡೆ ಗೊಂಡ ಬಳಿಕವೂ ಬಿಜೆಪಿಯ ದ್ವಿತೀಯ ಸ್ತರದ ನಾಯಕರು ಈ ಸುಳ್ಳನ್ನು ಇನ್ನಷ್ಟು ಗಟ್ಟಿಯಾಗಿ ಪುನರಾವರ್ತಿಸುತ್ತಿದ್ದುದು. ಅಲ್ಲದೇ ಮುಸ್ಲಿಮರಿಗೆ ಟಿಕೇಟು ಕೊಡದೇ ಇರುವುದನ್ನು ನಿಷ್ಪಕ್ಷಪಾತ ನೀತಿಯಾಗಿಯೂ ಟಿಕೇಟ್ ನೀಡಿದ ಎಸ್ಪಿ ಮತ್ತು ಬಿಎಸ್ಪಿಗಳ ನೀತಿಯನ್ನು ತುಷ್ಠೀಕರಣವಾಗಿಯೂ ಅದು ಪರೋಕ್ಷವಾಗಿ ವ್ಯಾಖ್ಯಾನಿಸಿತು. ತಾನು ಬಹುಸಂಖ್ಯಾತ ಪರ ಎಂಬ ಸಂದೇಶವನ್ನು ಈ ದೇಶಕ್ಕೆ ಮತ್ತೆ ಮತ್ತೆ ನೀಡುವ ಪ್ರಯತ್ನವನ್ನು ನರೇಂದ್ರ ಮೋದಿಯವರ ಅಧಿಕಾರದುದ್ದಕ್ಕೂ ಮಾಡುತ್ತಲೇ ಬರಲಾಗಿದೆ. ದೇವಾಲಯಗಳಿಗೆ ಭೇಟಿ ಕೊಡುವ ಮೋದಿಯವರು ಮಸೀದಿಗಳಿಗೆ ಭೇಟಿ ಕೊಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಕೊನೆಯ ಹಂತದ ಮತದಾನ ನಡೆದ ಮಾರ್ಚ್ 8ರಂದು ಅವರು ಸೋಮನಾಥ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು. ಕೆಲವು ರಾಷ್ಟ್ರೀಯ ಟಿ.ವಿ. ಚಾನೆಲ್ಗಳು ಅದನ್ನು ನೇರ ಪ್ರಸಾರ ಮಾಡಿತ್ತು. ಅವರು ಬಹುಸಂಖ್ಯಾತರ ಪ್ರತಿನಿಧಿಯಾಗಿ ಗುರುತಿಸಿಕೊಳ್ಳಲು ಬಯಸುತ್ತಾರೆ. ತನ್ನ ದೌರ್ಬಲ್ಯಗಳನ್ನು ಸಾಮಥ್ರ್ಯವೆಂಬಂತೆ ಬಿಂಬಿಸುವ ಕಲೆ ಅವರಿಗೆ ಸಿದ್ಧಿಸಿದೆ. 104 ಕ್ಷಿಪಣಿಗಳನ್ನು ಒಂದೇ ಬಾರಿ ಕಕ್ಷೆಗೆ ಇಸ್ರೋ ಹಾರಿಸಿದುದನ್ನು ಅವರು ಚುನಾವಣೆಯ ಸಂದರ್ಭದಲ್ಲಿ ತನ್ನ ಸಾಧನೆಯಾಗಿ ಬಿಂಬಿಸಿಕೊಂಡರು. ಹಾಗಂತ, ಆ ಸಾಧನೆಯ ಪರಿಶ್ರಮ ಅವರು ಅಧಿಕಾರಕ್ಕೇರಿದ ಬಳಿಕ ಪ್ರಾರಂಭವಾದದ್ದೇ ಎಂದು ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಅದು ದೇಶದ್ರೋಹಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತದೆ. ದೇಶದ ಸಾಧನೆಯನ್ನು ಅನುಭವಿಸಲಾರದ ದೇಶವಿರೋಧಿ ಮನಸಿನವರು ನೀವಾಗುತ್ತೀರಿ. ನಿಜವಾಗಿ, ಇಸ್ರೋದ ಸಾಧನೆಯ ಹಿಂದೆ ದೀರ್ಘ ಪರಿಶ್ರಮದ ಇತಿಹಾಸವಿದೆ. ಅದು ಕಳೆದ ಎರಡೂವರೆ ವರ್ಷಗಳ ಬಳಿಕ ದಿಢೀರ್ ಆಗಿ ಈ ಉಪಗ್ರಹ ಯೋಜನೆಯನ್ನು ಹಾಕಿ ಕೊಂಡಿರುವುದಲ್ಲ. ಆದರೆ, ಉಪಗ್ರಹವನ್ನು ತನ್ನ ಸಾಧನೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದರಿಂದ ರಾಷ್ಟ್ರದ ಬಗ್ಗೆ ಅಪಾರ ಕಾಳಜಿ ಉಳ್ಳ ಪಕ್ಷ ಎಂಬ ಹೆಗ್ಗಳಿಕೆಯನ್ನು ಬಿಜೆಪಿಗೆ ಪಡಕೊಳ್ಳ ಬಹುದಾಗಿದೆ. ಚುನಾವಣಾ ರ್ಯಾಲಿಯಲ್ಲಿ ಮೋದಿಯವರು ಉಲ್ಲೇಖಿಸಿದ ಜಿಡಿಪಿ ಲೆಕ್ಕಾಚಾರವನ್ನು ಕಾಂಗ್ರೆಸ್ ಪ್ರಶ್ನಿಸಿದಾಗ ಮೋದಿಯವರು ಪ್ರತಿಕ್ರಿಯಿಸಿದ ರೀತಿಯನ್ನೊಮ್ಮೆ ಪರಿಶೀಲಿಸಿ. ಕಾಂಗ್ರೆಸ್ ದೇಶದ ಅಭಿವೃದ್ಧಿಯನ್ನು ಬಯಸುತ್ತಿಲ್ಲ. ನಿಜವಾಗಿ, ಚರ್ಚೆ ಆಗಬೇಕಾಗಿದ್ದುದು ಅಂಕಿ-ಅಂಶ ಕೃತ್ರಿಮವೋ ಅಸಲಿಯೋ ಎಂಬುದಾಗಿ. ನೋಟು ಅಮಾನ್ಯೀಕರಣದಿಂದಾಗಿ ಉಂಟಾದ ಉತ್ಪಾದನಾ ಹಿನ್ನಡೆಯ ಹೊರತಾಗಿಯೂ ಜಿಡಿಪಿಯಲ್ಲಿ ಇಷ್ಟು ಹೆಚ್ಚಳ ಹೇಗೆ ಉಂಟಾಯಿತು ಅನ್ನುವುದು ಕಾಂಗ್ರೆಸ್ನ ಪ್ರಶ್ನೆ. ಆದರೆ ಮೋದಿಯವರು ಆ ಪ್ರಶ್ನೆಯನ್ನು ದೇಶದ್ರೋಹಿಯಾಗಿ ಪರಿವರ್ತಿಸಿದರು.
ಖ್ಯಾತ ಪತ್ರಕರ್ತೆ ವಿದ್ಯಾ ಸುಬ್ರಹ್ಮಣ್ಯಮ್ ಅವರು ಕಳೆದ ವಾರ ತನ್ನ ಅನುಭವವನ್ನು ಹೀಗೆ ಹಂಚಿಕೊಂಡಿದ್ದರು- ‘ಅಲಹಾಬಾದ್ ಹೈಕೋರ್ಟ್ನಲ್ಲಿ ನಾನು ಸುಮಾರು 30ಕ್ಕಿಂತಲೂ ಅಧಿಕ ವಕೀಲರನ್ನು ಭೇಟಿಯಾದೆ. ಅವರ ಒಲವು ಮೋದಿ ಪರ. ಆದರೆ ಅವರ ಮಾತುಗಳಲ್ಲಿ ತೀವ್ರ ಮುಸ್ಲಿಮ್ ವಿರೋಧಿ ಭಾವವಿತ್ತು. ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಮಹಿಳಾ ನ್ಯಾಯವಾದಿ ಹೇಳಿದರು, ಮುಸ್ಲಿಮರಿಗೆ ಒಂದೇ ಒಂದು ಟಿಕೆಟ್ ಕೊಡದಿರುವ ಬಿಜೆಪಿಯ ನೀತಿ ಶ್ಲಾಘನಾರ್ಹವಾದುದು.’
ಬಾರಬಂಕಿ ಜಿಲ್ಲೆಯ ಸುರಸಂದ ಗ್ರಾಮದ ರಸ್ತೆಬದಿ ವ್ಯಾಪಾರಿ ರಾಜೇಶ್ ಯಾದವ್ ಹೇಳಿದ,
‘ನನ್ನ ಓಟು ಎಸ್ಪಿಗೆ. ಆದರೆ ರಾಮಮಂದಿರ ನನ್ನ ಆದ್ಯತೆ. ನಾವು ಹಿಂದೂಸ್ತಾನದಲ್ಲಿದ್ದೇವೆ. ಪಾಕಿಸ್ತಾನದಲ್ಲಲ್ಲ ಅಥವಾ ಕಬರಿಸ್ತಾನದಲ್ಲಲ್ಲ.’
ನರೇಂದ್ರ ಮೋದಿಯವರ ಮಾತುಗಳು ನುಡಿಗಟ್ಟಾಗುತ್ತಿವೆ ಅನ್ನುವುದಕ್ಕೆ ಆತನ ಕಬರಿಸ್ತಾನ ಮಾತು ಸಾಕ್ಷಿ.
1977ರಲ್ಲಿ ಇಸ್ರೇಲ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾದ ಬೆಗಿನ್ ಅವರು ಇದೇ ರೀತಿಯ ತಂತ್ರವನ್ನು ಬಳಸಿದ್ದರು ಎಂದು ಹೇಳಲಾಗುತ್ತದೆ. ಅವರು ಬಲಪಂಥೀಯ ವಿಚಾರಧಾರೆಯವರು. ಲಿಕುಡ್ ಪಕ್ಷಕ್ಕೆ ಅವರು ನಾಯಕರಾಗಿದ್ದರು. ಬಹುಶಃ ನರೇಂದ್ರ ಮೋದಿಯವರು ತನ್ನ ವಿಚಾರಧಾರೆಯನ್ನು ಸಮರ್ಥವಾಗಿ ಸಾರುವಲ್ಲಿ ಮತ್ತು ಭಾರತೀಯರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಅದಕ್ಕೆ ಸರಿಯಾದ ಪ್ರತಿರೋಧವನ್ನು ಒಡ್ಡುವಲ್ಲಿ ಅಥವಾ ಜನರಿಗೆ ಸಮರ್ಥವಾಗಿ ತಮ್ಮ ವಾದವನ್ನು ಮನವರಿಕೆ ಮಾಡಿಸುವಲ್ಲಿ ವಿರೋಧಿಗಳು ವಿಫಲವಾಗುತ್ತಿರುವಂತೆ ಕಾಣಿಸುತ್ತಿದೆ. ಇದು ಕಠಿಣ ಸವಾಲು. ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಲ್ಲಬೇಕಾದ ಉನ್ಮತ್ತ ರಾಷ್ಟ್ರೀಯತೆಯೊಂದಿಗೆ ಸೆಣಸುವುದು ಸುಲಭ ಅಲ್ಲ. ನರೇಂದ್ರ ಮೋದಿಯವರು ಈ ಉನ್ನತ್ತ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ದೇಶಕ್ಕೆ ಹಂಚುತ್ತಿದ್ದಾರೆ. ಅದಕ್ಕೆ ಒಂದು ಹಂತದ ವರೆಗೆ ಸ್ವಾಗತವೂ ಲಭ್ಯವಾಗುತ್ತಿದೆ. ಖಾಲಿ ಹೊಟ್ಟೆಯಲ್ಲಿರುವ ಮತ್ತು ಜಾತಿಯ ಹೆಸರಲ್ಲಿ ಅವಮಾನಿತನಾಗುವ ವ್ಯಕ್ತಿಯನ್ನೂ ಕ್ಷಣ ರೋಮಾಂಚಿತ ಗೊಳಿಸುವ ಸಾಮರ್ಥ್ಯ ರಾಷ್ಟ್ರೀಯತೆಗಿದೆ. ಮೋದಿಯವರ ಅಧಿಕಾರಾವಧಿಯಲ್ಲೇ ಅತ್ಯಂತ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ನಡೆದಿದ್ದರೂ ಮತ್ತು ಉನಾ ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ವೇದಿಕೆ ಒದಗಿಸಿದ್ದರೂ ಉತ್ತರ ಪ್ರದೇಶದ ದಲಿತರು ಬಿಜೆಪಿಗೆ ಮತ ಚಲಾಯಿಸಿದರೆಂಬುದು ಏನನ್ನು ಸೂಚಿಸುತ್ತದೆ? ಅವರನ್ನು ಪ್ರಭಾವಿತಗೊಳಿಸಿದ ವಿಚಾರ ಯಾವುದು?
ವಿಶ್ಲೇಷಣೆ ನಡೆಯಲಿ.