Tuesday, October 30, 2018

ಸೂರಃ ಫಾತಿಹಾ ಮತ್ತು ವಿಶ್ವಮಾನವ ಪ್ರಜ್ಞೆ: ಒಂದು ಜಿಜ್ಞಾಸೆ




1. ಏಕ
2. ಅನೇಕ
ಮಾನವ ಜಗತ್ತು ಯಾವಾಗಲೂ ಈ ಎರಡರಲ್ಲಿ ವಿಭಜನೆ ಗೊಂಡಿರುತ್ತದೆ. ಒಂದು- ತನ್ನ ಬಗ್ಗೆ ಮಾತ್ರ ಆಲೋಚಿಸುವ ವರ್ಗ; ತಾನು,  ತನ್ನ ಮಕ್ಕಳು, ತನ್ನ ಸಂಪತ್ತು, ತನ್ನ ಆರೋಗ್ಯ, ತನ್ನ ಯಶಸ್ಸು, ತನ್ನ ಲಾಭ, ತನ್ನ ನಿದ್ದೆ, ತನ್ನ ಕುಟುಂಬ, ತನ್ನ ವಿಶ್ರಾಂತಿ, ತನ್ನ ಮನೆ,  ತನ್ನ ವಾಹನ.. ಹೀಗೆ ತನ್ನತನದಲ್ಲಿ ಮುಂದುವರಿಯುತ್ತಿರುತ್ತದೆ. ಒಂದು ರೀತಿಯಲ್ಲಿ, ಏಕಕೇಂದ್ರಿತ ಬದುಕು. ಏಕಕೇಂದ್ರಿತ ಚಿಂತನೆ.  ಇನ್ನೊಂದು- ಇದರ ವಿರುದ್ಧದ ಚಿಂತನೆ. ಈ ಚಿಂತನೆಯಲ್ಲಿ ನಾನು ಇರುವುದಿಲ್ಲ, ನಾವು ಇರುತ್ತದೆ. ನನ್ನದು ಇರುವುದಿಲ್ಲ, ನಮ್ಮದು  ಇರುತ್ತದೆ. ಸಮಾಜದಲ್ಲಿ ಇವತ್ತು ಈ ಎರಡೂ ಭಾವಗಳು ಏಕಪ್ರಕಾರವಾಗಿ ಅಸ್ತಿತ್ವದಲ್ಲೂ ಇವೆ. ನಿಜವಾಗಿ, ಏಕದಲ್ಲಿ ಸ್ವಾರ್ಥಕ್ಕೆ ಅವಕಾಶ  ಹೆಚ್ಚು. ಅನೇಕದಲ್ಲಿ ನಿಸ್ವಾರ್ಥ ಮತ್ತು ವಿಶಾಲ ಭಾವಕ್ಕೆ ಒತ್ತು ಹೆಚ್ಚು. ಇದಕ್ಕೆ ಪವಿತ್ರ ಕುರ್‍ಆನಿನ ಸೂರಃ ಫಾತಿಹಾ ಉತ್ತಮ ಉದಾಹರಣೆ.  ಫಾತಿಹಾವನ್ನೇ ಇಲ್ಲಿ ಉದಾಹರಣೆಯಾಗಿ ಯಾಕೆ ಆಯ್ಕೆ ಮಾಡಲಾಯಿತು ಎಂದರೆ, ಅದು ಪವಿತ್ರ ಕುರ್‍ಆನಿನ ಒಂದು ಭಾಗವಾಗಿ ಮಾತ್ರ  ಉಳಿದಿರುವುದಲ್ಲ. ಅದು ಐದು ಹೊತ್ತಿನ ಕಡ್ಡಾಯ ನಮಾಝïನಲ್ಲಿ ಮುಸ್ಲಿಮರ ಸಂಗಡ ಇರುತ್ತದೆ. ಎಲ್ಲಿಯ ವರೆಗೆ ಎಂದರೆ,

ಅದನ್ನು  ಪಠಿಸದೇ ಇದ್ದರೆ ನಮಾಝï ಸಿಂಧುವಾಗುವುದಿಲ್ಲ. ಆದರೆ, ಈ ಸೂರಃ ಫಾತಿಹಾ ಏಕವನ್ನು ಪ್ರತಿನಿಧಿಸುವುದಿಲ್ಲ ಬದಲು ಅನೇಕತನವನ್ನು  ಪ್ರತಿ ಪಾದಿಸುತ್ತದೆ. ಮನೆಯ ಏಕಾಂತ ಕೋಣೆಯಲ್ಲಿ ಒಂಟಿಯಾಗಿ ನಮಾಝï ಮಾಡುವ ಮಹಿಳೆಯೋರ್ವಳು ದೇವನೊಂದಿಗೆ ಹೇಗೆ  ಸಂವಾದಿಸಬೇಕು? ಆಕೆ ಒಂಟಿ. ಕೋಣೆಯಲ್ಲಿ ಇನ್ನಾರೂ ಇಲ್ಲ. ಇಂಥ ಸಮಯದಲ್ಲಿ ತನ್ನ ದೇವನೊಂದಿಗೆ ಪ್ರಾರ್ಥಿಸುವಾಗ, ‘ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ’ (ಇಯ್ಯಾಕ ನಅïಬುದು) ಎಂದು ಯಾಕೆ ಹೇಳಬೇಕು? ಇಲ್ಲಿ ಬಹುವಚನದ ಅಗತ್ಯ ಏನಿದೆ? ದೇವರು  ಮತ್ತು ಓರ್ವ ದಾಸಿಯ ನಡುವಿನ ಖಾಸಗಿ ಸಂವಾದದಲ್ಲಿ ನಾನು ನಿನ್ನನ್ನು ಆರಾಧಿಸುತ್ತೇನೆ (ಇಯ್ಯಾಕ ಅಅïಬುದು) ಎಂದೇ ಹೇಳಬೇಕಿತ್ತಲ್ಲವೇ? ನಾನೋರ್ವಳೇ ಇರುವಾಗ ನಾವು ಎಂಬ ಬಹುವಚನ ಪ್ರಯೋಗ ಯಾಕೆ? ಇದು ಇಲ್ಲಿಗೇ ನಿಲ್ಲುವುದಿಲ್ಲ. ಇದರ ನಂತರದ  ವಚನ ಕೂಡ ಹಾಗೆಯೇ ಇದೆ. ‘ನಾವು ಕೇವಲ ನಿನ್ನೊಡನೆ ಸಹಾಯ ಯಾಚಿಸುತ್ತೇವೆ’ (ವ ಇಯ್ಯಾಕ ನಸ್ತಈನ್) ಎಂದು ಆ ಒಂಟಿ  ಮಹಿಳೆ ನಮಾಝïನಲ್ಲಿ ಅರಿಕೆ ಮಾಡಿಕೊಳ್ಳುತ್ತಾಳೆ. ಇಲ್ಲೂ ತಕರಾರು ಎತ್ತಬಹುದು. ‘ನಾನು ನಿನ್ನೊಡನೆ ಸಹಾಯ ಯಾಚಿಸುತ್ತೇನೆ’ (ವ  ಇಯ್ಯಾಕ ಅಸ್ತಈನ್) ಎಂದು ಹೇಳುವುದೇ ಸರಿಯಲ್ಲವೇ? ಒಂಟಿ ಮಹಿಳೆಯೋರ್ವಳು ಬಹುವಚನದಲ್ಲಿ ತನ್ನನ್ನು ನಿವೇದಿಸಿಕೊಳ್ಳುವುದೇಕೆ?

    ಮಾನವ ಸಮೂಹವನ್ನು ಸಮೂಹ ಪ್ರಜ್ಞೆಗೆ ತಳ್ಳುವುದೇ ಈ ಬಗೆಯ ಪದಪ್ರಯೋಗದ ಉz್ದÉೀಶ. ಈ ಸಮಾಜವನ್ನು ನಾನುವಿನಿಂದ  ನಾವಾಗಿ ಪರಿವರ್ತಿಸುವುದು. ನಿಜವಾಗಿ,

     ನಾನು ಅನ್ಯವಲ್ಲ. ನಾವು ಅನ್ಯ. ಅನುಮಾನವಿದ್ದರೆ ನಮ್ಮ ಬದುಕಿನಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯನ್ನೂ ಪರಿಶೀಲಿಸಿ  ನೋಡಿಕೊಳ್ಳಿ. ಎಲ್ಲದರಲ್ಲೂ ನಾನೇ ಇರುತ್ತದೆ.
1. ನಾನು ಇಂತಿಂಥ ಶೀರ್ಷಿಕೆಯಲ್ಲಿ, ಇಂತಿಂಥ ಪತ್ರಿಕೆಯಲ್ಲಿ, ಇಂತಿಂಥ ವಿಷಯದಲ್ಲಿ ಅಂಕಣವನ್ನು ಬರೆದಿದ್ದೇನೆ.
2. ನಾನು ಇಂತಿಂಥ ದಿವಸ ಇಂತಿಂಥ ಕಂಪೆನಿಯ, ಇಂತಿಂಥ ಮಾಡೆಲ್‍ನ ಕಾರು ಖರೀದಿಸಿದ್ದೇನೆ.
3. ನಾನು ಇಂತಿಂಥ ಕಡೆ, ಇಂತಿಂಥ ವಸ್ತುಗಳ ವ್ಯಾಪಾರ ಮಳಿಗೆಯನ್ನು ಪ್ರಾರಂಭಿಸಿದ್ದೇನೆ.
4. ನಾನು ಇಂತಿಂಥ ದಿನ, ಇಂತಿಂಥ ಕಡೆ ಪ್ರಯಾಣ ಹೊರಡಲಿದ್ದೇನೆ.
5. ನನ್ನ ಮನೆ ಇಲ್ಲಿದೆ, ನನ್ನ ಮಗ ಇಂತಿಂಥ ದೇಶದಲ್ಲಿ ದುಡಿಯುತ್ತಿದ್ದೇನೆ, ನಾನು ಇಂಥ ಕಂಪೆನಿಯಲ್ಲಿ ಉದ್ಯೋಗ ದಲ್ಲಿದ್ದೇನೆ. ನಾನು  ಭಾಷಣಗಾರ, ನಾನು ಬರಹಗಾರ, ನಾನು ಹಾಡುಗಾರ, ನಾನು ಕವಿ, ನಾನು ನಿರೂಪಕ, ನಾನು ರಾಷ್ಟ್ರಾಧ್ಯಕ್ಷ, ನಾನು ಛಾಯಾಗ್ರಾಹಕ..
ಹೀಗೆ ಬದುಕಿನ ಪ್ರತಿಯೊಂದು ಕ್ಷಣವೂ ನಾನುವಿನಿಂದ ಪ್ರಾರಂಭವಾಗುತ್ತದೆ. ನಾನುವಿನಲ್ಲೇ  ಅಂತ್ಯವಾಗುತ್ತದೆ. ಆದ್ದರಿಂದ, ಮನುಷ್ಯ  ನಾನಾಗುವುದು ಸುಲಭ. ನಾವಾಗುವುದು ಕಷ್ಟ. ಬಹುಶಃ ನಮಾಝïನಲ್ಲಿ ಫಾತಿಹಾವನ್ನು ಕಡ್ಡಾಯಗೊಳಿಸಿರು ವುದರ ಹಿಂದೆ ಈ ಉದ್ದೇಶವೂ ಇರಬಹುದು. ಮಾನವ ಜೀವನದ ಅನುಕ್ಷಣವನ್ನೂ ನಾನು ಆವರಿಸಿರುವಾಗ ಆ ಭಾವದಿಂದ ಕಳಚಿಕೊಳ್ಳುವ ಒಂದು ದಾರಿ ಮತ್ತು  ಎಚ್ಚರಿಕೆಯಾಗಿ ಅಲ್ಲಾಹನು ಫಾತಿಹಾವನ್ನು ಕಡ್ಡಾಯ ಮಾಡಿರಬಹುದು. ಫಾತಿಹಾ ಅಂದರೆ ಅದು ಬಹುವಚನದ ಗುಚ್ಛ. ನನಗೆ ಸನ್ಮಾರ್ಗವನ್ನು ತೋರಿಸು (ಇಹ್ದಿನಿಸ್ಸಿರಾತುಲ್ ಮುಸ್ತಕೀಮ್) ಎಂದು ಒಂಟಿ ವ್ಯಕ್ತಿಯೋರ್ವ ನಮಾಝïನಲ್ಲಿ ಬೇಡಿದರೆ ಅದು ಅಸಿಂಧು  ಕ್ರಮವಾಗುತ್ತದೆ. ಇಹ್ದಿನಸ್ಸಿರಾತುಲ್ ಮುಸ್ತಕೀಮ್ (ನಮಗೆ ಸನ್ಮಾರ್ಗವನ್ನು ತೋರಿಸು) ಎಂದೇ ಆತ/ಕೆ ಹೇಳಬೇಕಾಗುತ್ತದೆ. ‘ಅಸ್ಸಲಾಮು  ಅಲೈನಾ ವಆಲಾ ಇಬಾದಿಲ್ಲಾಹಿ ಸ್ಸಾಲಿಹೀನ್’ - ಅಲ್ಲಾಹನ ರಕ್ಷಣೆ ಮತ್ತು ಶಾಂತಿಯು ನಮ್ಮ ಮೇಲೆಯೂ ಸಜ್ಜನರಾದ ಎಲ್ಲ ದಾಸರ  ಮೇಲೆಯೂ ಇರಲಿ - ಎಂದು ಪ್ರಾರ್ಥಿಸುವುದು ಸಿಂಧು. ಇಲ್ಲಿ, ನಾವು ಇರುವಲ್ಲಿಗೆ ನಾನು ಸೇರಿಸಿದರೆ ಅದು ಅಸಿಂಧು. ಇನ್ನು ಒಂಟಿ  ವ್ಯಕ್ತಿ ಯೋರ್ವ ನಮಾಝïನಿಂದ ವಿರಮಿಸುವಾಗ, ‘ಅಲ್ಲಾಹನ ಅನುಗ್ರಹ ಮತ್ತು ಶಾಂತಿ ನಮ್ಮ ಮೇಲಿರಲಿ’ (ಅಸ್ಸಲಾಮು ಅಲೈಕುಮ್  ವರಹ್ಮತುಲ್ಲಾಹಿ) ಎಂದು ಬಹುವಚನದಲ್ಲೇ ಎಡ ಮತ್ತು ಬಲಗಡೆಗೆ ಕತ್ತು ತಿರುಗಿಸಿ ಹೇಳಬೇಕು. ಹಿಂದುಗಡೆ ಯಾರು ಇದ್ದರೂ ಇಲ್ಲದಿದ್ದರೂ ಏಕವಚನ ಬಳಕೆ ಮಾಡುವಂತಿಲ್ಲ.

     ಮಾನವನು ಏಕನಾಗಿ ಬದುಕಲು ಸಾಧ್ಯವಿಲ್ಲ ಮತ್ತು ಆ ಬಗೆಯ ಚಿಂತನೆ ಸಲ್ಲ ಅನ್ನುವುದನ್ನು ಸಾರುವುದಕ್ಕಾಗಿ ಈ ಬಗೆಯ ನಿಯಮಗಳನ್ನು ಇಸ್ಲಾಮ್ ವಿಧಿಸಿದೆ ಎಂದೇ ಅನಿಸುತ್ತದೆ. ಇಂಥ ಸೂಚನೆಗಳು ಕೇವಲ ಸೂರಃ ಫಾತಿಹಾ ದಲ್ಲಿ ಮಾತ್ರ ಕಾಣಸಿಗುವುದಿಲ್ಲ. ಪವಿತ್ರ  ಕುರ್‍ಆನಿನ ಬೇರೆ ಬೇರೆ ಕಡೆ ಮತ್ತು ಪ್ರವಾದಿ ಬದುಕಿನ ಅನೇಕಾರು ಸಂದರ್ಭಗಳಲ್ಲಿ ಈ ಭಾವವನ್ನು ಕಂಡುಕೊಳ್ಳಬಹುದು. ಪವಿತ್ರ  ಕುರ್‍ಆನಿನ 107ನೇ ಅಧ್ಯಾಯ- ಅಲ್ ಮಾಊನ್‍ನ ಅರ್ಧ ಭಾಗ ಹೀಗಿದೆ,

     ‘ಕರ್ಮಫಲದ ದಿನವನ್ನು ನಿರಾಕರಿಸುವವನನ್ನು ನೀವು ನೋಡಿದಿರಾ? ಆತನು ಅನಾಥನನ್ನು ನಿರ್ಲಕ್ಷಿಸುವವನು ಮತ್ತು ನಿರ್ಗತಿಕರಿಗೆ  ಆಹಾರ ನೀಡಲು ಪ್ರೇರೇಪಿಸದವನಾಗಿದ್ದಾನೆ.’
      ನಮಾಝï ನಿರ್ವಹಿಸುವ ವ್ಯಕ್ತಿಯನ್ನುದ್ದೇಶಿಸಿ ಹೇಳಲಾದ ಈ ಮಾತುಗಳಲ್ಲಿ ಒಳನೋಟಗಳಿವೆ. ನಮಾಝï ನಿರ್ವಹಿಸು ವವನನ್ನೇ  ಧರ್ಮನಿಷೇಧಿ ಎಂದು ಈ ಪೂರ್ಣ ಅಧ್ಯಾಯವು ಸಾರುತ್ತದಲ್ಲದೇ, ಅದಕ್ಕೆ ಕೊಡುವ ಕಾರಣಗಳಲ್ಲಿ ಎರಡು ಕಾರಣಗಳು ಆತ ನಾನು  ಆಗಿರುವುದು ಎಂದಾಗಿರುತ್ತದೆ ಅಥವಾ ಸೂರಃ ಫಾತಿಹಾ ಪ್ರತಿಪಾದಿಸುವ ನಾವು ಎಂಬ ಸಮೂಹ ಪ್ರಜ್ಞೆಗೆ ಆತ ಬದ್ಧನಾಗಿಲ್ಲ  ಎಂದಾಗಿರುತ್ತದೆ. ನಿರ್ಗತಿಕರು ಮತ್ತು ಅನಾಥರನ್ನು ನಿರ್ಲಕ್ಷಿಸುವ ಮೂಲಕ ಆತ ‘ನಾನು’ ಭಾವಕ್ಕೆ ಅಂಟಿಕೊಂಡಿದ್ದಾನೆ ಮತ್ತು ನಾವು ಭಾವದಿಂದ ದೂರ ಹೋಗಿದ್ದಾನೆ ಎಂದು ಪ್ರತಿಪಾದಿಸುತ್ತದೆ. ನಾವು ಎಂಬ ಭಾವದಲ್ಲಿ ನಿರ್ಗತಿಕರೂ ಇರುತ್ತಾರೆ, ಅನಾಥರೂ ಸೇರುತ್ತಾರೆ.  ಯಾಕೆಂದರೆ, ನಾವು ಎಂಬ ಭಾವ ವ್ಯಕ್ತಿಯನ್ನು ಸಮಾಜ ಜೀವಿಯಾಗಿ ಬದಲಾಯಿಸುತ್ತದೆ. ತನ್ನ ಪರಿಸರದಲ್ಲಿ, ಸಮಾಜದಲ್ಲಿ, ತಾನು  ನಡೆದಾಡುವ ರಸ್ತೆಯಲ್ಲಿ, ಹೀಗೆ ತನ್ನ ಕುಟುಂಬದಲ್ಲಿ ಏನೇ ಸಮಸ್ಯೆಗಳು ಕಂಡರೂ ಅದರಲ್ಲಿ ಆತ/ಕೆ ತನ್ನನ್ನು ಕಂಡು ಕೊಳ್ಳುತ್ತಾನೆ. ಅಲ್ಲಿನ  ಸಂಕಟವನ್ನು ತನ್ನ ಸಂಕಟವಾಗಿ ಪರಿಗಣಿಸು ತ್ತಾನೆ. ರಸ್ತೆಯಲ್ಲಿ ಅಸಹಾಯಕವಾಗಿ ಕುಳಿತ ವ್ಯಕ್ತಿಯನ್ನು ನೋಡಿ ನಿರಾಳಭಾವದಿಂದ  ಮುಂದೆ ಹೋಗಲು ಆತನಿಗೆ ಸಾಧ್ಯವಾಗುವುದಿಲ್ಲ. ಆದರೆ, ನಾನು ಭಾವಕ್ಕೆ ಇದು ಸಾಧ್ಯವಿದೆ. ಆದ್ದ ರಿಂದಲೇ, ಅನಾಥ ಮತ್ತು ನಿರ್ಗತಿಕರ ಬಗ್ಗೆ ನಿರ್ಲಕ್ಷ್ಯ  ತಾಳಿದುದನ್ನೇ ಗಂಭೀರ ಅಪರಾಧವಾಗಿ ಅಲ್ ಮಾಊನ್ ಅಧ್ಯಾಯ ಎತ್ತಿ ಹೇಳುವುದು. ಅಂದಹಾಗೆ,  ಮಗುವಿನ ಅಳು ಕೇಳಿದರೆ, ನಮಾಝನ್ನು ಬೇಗನೇ ಮುಗಿಸುವುದು ಪ್ರವಾದಿ ಯವರ(ಸ) ಸ್ವಭಾವವಾಗಿತ್ತು.

     ನಮಾಝನ್ನು ಸುದೀರ್ಘಗೊಳಿಸಬೇಕೆಂಬ ಭಾವನೆಯಿಂದ ನಾನು ನಿಲ್ಲುತ್ತೇನೆ. ಆಗ ನನಗೆ ಪುಟ್ಟ ಮಗುವಿನ ಅಳು ಕೇಳಿಸುತ್ತದೆ. ಆ  ಮಗುವಿನ ಅಳುವಿನಿಂದ ತಾಯಿಗೆ ಆಗುವ ತಳಮಳವನ್ನು ಗ್ರಹಿಸಿ ನಾನು ನಮಾಝïನಲ್ಲಿ ಕಡ್ಡಾಯ ಕ್ರಿಯೆಗಳನ್ನು ಮಾತ್ರ ನಿರ್ವಹಿಸುತ್ತೇನೆ’  ಎಂದು ಪ್ರವಾದಿ ಯವರು(ಸ) ಹೇಳಿರುವುದಾಗಿ ಬುಖಾರಿ  ಹದೀಸ್ ಗ್ರಂಥದಲ್ಲಿದೆ.

     ಪ್ರವಾದಿಯವರು ‘ನಾನು’ವಿನ ಪ್ರತಿನಿಧಿಯಾಗಿದ್ದರೆ, ಆ ತಾಯಿ ಮತ್ತು ಮಗುವಿಗೆ ಮರುಗಬೇಕಾದ ಅಗತ್ಯ ಇರಲಿಲ್ಲ. ಆದರೆ ಅವರು  ನಾವು ಭಾವದ ಎಷ್ಟು ಪ್ರಬಲ ಪ್ರತಿಪಾದಕರಾಗಿದ್ದರೆಂದರೆ, ಇನ್ನೊಬ್ಬರಿಗಾಗಿ ಕಡ್ಡಾಯ ನಮಾಝನ್ನೂ ಮೊಟಕುಗೊಳಿಸು ವಷ್ಟು. ಅದೇವೇಳೆ,  ಅವರು ನಮಾಝನ್ನು ಸಂಘಟಿತವಾಗಿ ನಡೆಸಲು ಆದೇಶಿಸಿದರು. ಅಷ್ಟಕ್ಕೂ, ವ್ಯಕ್ತಿಯೋರ್ವ ಗುಂಪಿನಲ್ಲಿ ಸೇರುವುದಕ್ಕೂ ಒಂಟಿಯಾಗಿ ನಿ ಲ್ಲುವುದಕ್ಕೂ ಬಾಹ್ಯ ವ್ಯತ್ಯಾಸಗಳಷ್ಟೇ ಇರುವುದಲ್ಲ. ಆಂತರಿಕವಾದ ವ್ಯತ್ಯಾಸಗಳೂ ಇವೆ. ಗುಂಪಿನಲ್ಲಿ ಒಬ್ಬನಾಗುವಾಗ ಆತನೊಳಗಿನ ಹಲವು  ಮೇಲರಿಮೆಗಳು ಕುಸಿದು ಹೋಗುತ್ತವೆ. ತನಗಿಂತ  ದೊಡ್ಡವರು ಇz್ದÁರೆ ಎಂದೋ ತಾನು ಏನೂ ಅಲ್ಲ ಎಂದೋ ಆತನಿಗೆ  ಮನವರಿಕೆಯಾಗುತ್ತದೆ. ಆತ ವಿವೇಚನೆಗೆ ತೊಡಗುತ್ತಾನೆ. ಸದಾ ಒಂಟಿಯಾಗಿರುವವರಿಗೆ ಈ ಭಾವ ಬರಲು ಸಾಧ್ಯವಿಲ್ಲ. ಸತ್ಯನಿಷೇಧಿಗಳೊಂದಿಗೂ ಉತ್ತಮವಾಗಿ ವರ್ತಿಸಿರಿ ಎಂದು ಪ್ರವಾದಿ ಇಬ್ರಾಹೀಮ(ಅ)ರಿಗೆ ಅಲ್ಲಾಹನು ಆದೇಶಿಸಿರುವುದಾಗಿ ಪ್ರವಾದಿ ಮುಹಮ್ಮದ್(ಸ)  ಹೇಳಿದ್ದಾರೆ. ಯಾಕೆಂದರೆ,
      ಅದು ಇಸ್ಲಾಮಿನ ಗುಣ. ಪ್ರವಾದಿಯವರು(ಸ) ಈ ಗುಣದ ಅಪ್ಪಟ ಮಾದರಿಯಾಗಿದ್ದರು. ಅವರ ಕಡು ವೈರಿಗ ಳಾಗಿದ್ದಂತಹವರನ್ನೂ ಅವರು ತಮ್ಮ ನಾವುತನದ ಗುಣದಿಂದಾಗಿ ಮಿತ್ರರಾಗಿಯೂ ಆಪ್ತರನ್ನಾಗಿಯೂ ಮಾಡಿ ಕೊಂಡರು. ಉಮರ್ ಬಿನ್  ಖತ್ತಾಬ್, ಖಾಲಿದ್ ಬಿನ್ ವಲೀದ್, ಅಮ್ರ್ ಬಿನ್ ಆಸ್, ಉರ್ವಾ ಬಿನ್ ಮಸ್‍ಊದ್, ಸುಹೈಲ್ ಬಿನ್ ಅಮ್ರ್, ಅಬೂಸುಫ್‍ಯಾನ್,  ಹಿಂದ್, ತುಫೈಲುದ್ದೂಸಿ, ವಹ್ಶಿ ಇತ್ಯಾದಿ ಇತ್ಯಾದಿ ಅನೇಕರು ಅವರ ಆಪ್ತ ವಲಯದಲ್ಲಿ ಸೇರಿಕೊಂಡದ್ದು ಅವರ ‘ನಾವು’ ನೀತಿಯಿಂದಾಗಿತ್ತು. ಮುಹಮ್ಮದರು ಪ್ರವಾದಿಯಾಗಿ 40ನೇ ಪ್ರಾಯದಲ್ಲಿ ನಿಯುಕ್ತರಾದ ಬಳಿಕದ ಬದುಕನ್ನು ಪರಿಶೀಲಿಸಿದರೆ ಅವರು ನಮಗೆ  ಯಾವ ಕಾರಣಕ್ಕಾಗಿ ಮುಖ್ಯವಾಗಬೇಕು ಅನ್ನುವುದು ಸ್ಪಷ್ಟವಾಗುತ್ತದೆ. ನಾನು ಪ್ರವಾದಿ ಎಂದು ಹೇಳಿಕೊಂಡು ಅವರು ಒಂಟಿಯಾಗಿ ನಿಲ್ಲುತ್ತಿದ್ದರೆ ಅವರ ಬಳಿಗೆ ಯಾರೂ ಬರುವ ಸಾಧ್ಯತೆ ಇರಲಿಲ್ಲ. ಅವರು ‘ನಾವು’ ಅಂದರು. ಎಲ್ಲರನ್ನೂ ಒಳಗೊಳ್ಳುವ ವಿಶಾಲ ಗುಣವನ್ನು  ಪ್ರದರ್ಶಿಸಿದರು. ವೈರಿಯನ್ನೂ ದ್ವೇಷಿಸದೇ ಪ್ರೀತಿಸಿದರು. ತನ್ನನ್ನು ಟೀಕಿಸಿದವರನ್ನೂ ದ್ವೇಷಿಸಲಿಲ್ಲ. ಆದ್ದರಿಂದ,

     ಬರೇ ನಮಾಝïನಲ್ಲಿ ಪಠಿಸಿ ಪುನೀತವಾಗುವುದಕ್ಕಾಗಿ ಇರುವ ಅಧ್ಯಾಯವಲ್ಲ, ಫಾತಿಹಾ. ಅದು ಪಠಿಸುವವರನ್ನು ಸ್ವಾರ್ಥ ಮುಕ್ತ  ರಾಗುವಂತೆ ಮತ್ತೆ ಮತ್ತೆ ಒತ್ತಾಯಿಸುವ ಅಧ್ಯಾಯ. ನಮ್ಮೊಳಗಿನ ನಾನನ್ನು ನಾವಾಗಿ ಪರಿವರ್ತಿಸುವುದಕ್ಕೆ ಒತ್ತಡ ಹೇರುವ ಅಧ್ಯಾಯ.  ಅದನ್ನು ಅರಿತು ಪಠಿಸಿದರೆ ಪಠಿಸಿದವರು ವಿಶ್ವಮಾನವರಾಗುತ್ತಾರೆ.

Tuesday, October 23, 2018

ಎ ಜಿಹಾದ್ ಫಾರ್ ಲವ್ ಮತ್ತು ಲವ್ ಜಿಹಾದ್



    ‘ಲವ್ ಜಿಹಾದ್ ಅನ್ನುವ ಪರಿಕಲ್ಪನೆಯಿಲ್ಲ ಮತ್ತು ಅಂಥದ್ದೊಂದು  ಹೆಸರಲ್ಲಿ ಸಂಘಟಿತ ಚಟುವಟಿಕೆಗಳು ನಡೆಯುತ್ತಿಲ್ಲ’ ಎಂದು ಡಿಜಿಪಿ ಜಾಕೊಬ್ ಪೊನ್ನೊಸೆಯವರು ಕೇರಳ ಹೈಕೋರ್ಟ್‍ಗೆ 2009 ನವೆಂಬರ್ ನಲ್ಲಿ ವರದಿ ಸಲ್ಲಿಸುವುದಕ್ಕಿಂತ ಎರಡು ವರ್ಷಗಳ ಮೊದಲು- 2007ರ ಸೆಪ್ಟೆಂಬರ್ ನಲ್ಲಿ- ಕೆನಡಾದ ಟೊರೆಂಟೋದಲ್ಲಿ ನಡೆದ ‘ಟೊರೆಂಟೋ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಸಿನಿಮಾವೊಂದು ಪ್ರದರ್ಶನಗೊಂಡಿತ್ತು. ಹೆಸರು,

ಎ ಜಿಹಾದ್ ಫಾರ್ ಲವ್    
     ಭಾರತದಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರ, ಮಾಧ್ಯಮಗಳು ಮತ್ತು ಬರಹಗಾರರೂ ‘ಲವ್ ಜಿಹಾದ್’ ಎಂಬ ಪದಪುಂಜವನ್ನು ದೊಡ್ಡ ಮಟ್ಟದಲ್ಲಿ ಬಳಕೆಗೆ ತಂದದ್ದು  ಎ ಜಿಹಾದ್ ಫಾರ್ ಲವ್ ಸಿನಿಮಾ ಪ್ರದರ್ಶನದ ನಂತರ. ಹಾಗಂತ, ಎ ಜಿಹಾದ್ ಫಾರ್ ಲವ್‍ಗೂ ಲವ್ ಜಿಹಾದ್‍ಗೂ ಧ್ಯನ್ಯಾರ್ಥದ ಹೊರತಾಗಿ ಯಾವ ಸಂಬಂಧವೂ ಇಲ್ಲ. ಎ ಜಿಹಾದ್ ಫಾರ್ ಲವ್ ಸಂಪೂರ್ಣವಾಗಿ ಲವ್ ಜಿಹಾದ್‍ಗಿಂತ ಭಿನ್ನ. ಅದು ಹೆಣ್ಣು ಗಂಡಿನ ಪ್ರೇಮ ಪ್ರಕರಣದ ಸುತ್ತ ಹೆಣೆದಿರುವ ಸಿನಿಮಾವೂ ಅಲ್ಲ. ಹಿಂದೂ ಯುವತಿ ಮತ್ತು ಮುಸ್ಲಿಮ್ ಯುವಕನ ನಡುವೆ ಅರಳುವ ಪ್ರೇಮವನ್ನು ಮುಂದಿಟ್ಟುಕೊಂಡು ರಚಿಸಲಾದ ಚಿತ್ರ ಕತೆಯೂ ಅದಕ್ಕಿಲ್ಲ. ಅದು ಸಲಿಂಗರತಿಯ ಸುತ್ತ ಹೆಣೆಯಲ್ಪಟ್ಟ ಚಿತ್ರ. ಮಾತ್ರವಲ್ಲ, ಸಿಂಗಾಪುರವೂ ಸೇರಿದಂತೆ ಹೆಚ್ಚಿನೆಲ್ಲ ಮುಸ್ಲಿಮ್ ರಾಷ್ಟ್ರಗಳು ನಿಷೇಧ ಹೇರಿದ ಸಿನಿಮಾವೂ ಹೌದು. ತಮಾಷೆ ಏನೆಂದರೆ,

      ಈ ಸಿನಿಮಾವನ್ನು ತಯಾರಿಸಿದ್ದು ಹಲಾಲ್ ಫಿಲ್ಮ್ಸ್ ಎಂಬ ಸಂಸ್ಥೆ. ಅಲ್ಲದೇ, ಸುಡಾನಿನ ದಿ ಡಾಕ್ಯುಮೆಂಟರಿ ಫಂಡ್, ಬ್ರಿಟನ್ನಿನ ಚಾನೆಲ್ 4 ಟೆಲಿವಿಷನ್, ಜರ್ಮನಿಯ ZDF, ಫ್ರಾನ್ಸ್ ನ Arte, ಅಮೇರಿಕದ Logo, ಆಸ್ಟ್ರೇಲಿಯಾದ SBS ಸಂಸ್ಥೆಗಳೂ ಈ ಸಿನಿಮಾದ ತಯಾರಿಯಲ್ಲಿ ಬೆನ್ನೆಲುಬಾಗಿ ನಿಂತವು. 6 ವರ್ಷಗಳ ಸತತ ಶ್ರಮ ಮತ್ತು ಇರಾಕ್, ಇರಾನ್, ಸೌದಿ, ಪಾಕ್, ಈಜಿಪ್ಟ್, ಬಂಗ್ಲಾ, ಟರ್ಕಿ, ಭಾರತ, ಫ್ರಾನ್ಸ್, ಅಮೇರಿಕ, ಬ್ರಿಟನ್, ದಕ್ಷಿಣ ಆಫ್ರಿಕಾವೂ ಸೇರಿದಂತೆ 12 ರಾಷ್ಟ್ರಗಳಲ್ಲಿ ನಡೆಸಿದ ಚಿತ್ರೀಕರಣದ ಒಟ್ಟು ಫಲಿತಾಂಶವೇ ಎ ಜಿಹಾದ್ ಫಾರ್ ಲವ್. ಅರಬ್ ರಾಷ್ಟ್ರಗಳಲ್ಲಿ ಚಿತ್ರೀಕರಣಕ್ಕಾಗಿ ಅನುಮತಿಯನ್ನೇ ಪಡೆದಿರಲಿಲ್ಲ. ಅನುಮತಿ ಸಿಗಲ್ಲ ಅನ್ನುವುದು ಚಿತ್ರ ತಂಡಕ್ಕೆ ಖಚಿತವಿತ್ತು. ಆದ್ದರಿಂದ ಕದ್ದು ಮುಚ್ಚಿ, ಅನುಮಾನ ಬರದ ರೀತಿಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಸಿನಿಮಾ ನಿರ್ದೇಶಕನ ಹೆಸರೂ ಚೆನ್ನಾಗಿದೆ - ಪರ್ವೇಝ ಶರ್ಮಾ ಮತ್ತು ಸ್ಯಾಂಡಿ ಡುಬುವೋಸ್ಕಿ. ಅಂದಹಾಗೆ,

    ಸಿನಿಮಾಕ್ಕೆ ಬಿಸ್ಮಿಲ್ಲಾ  ಎಂದು ಹೆಸರಿಡಬೇಕೆಂದು ಆರಂಭದಲ್ಲಿ ಪರ್ವೇಝ ಶರ್ಮಾ ನಿರ್ಧರಿಸಿದ್ದರಂತೆ. ಆದರೆ, ವಿವಾದಾತ್ಮಕವಾದೀತು ಅನ್ನುವ ಭಯವು ಎ ಜಿಹಾದ್ ಫಾರ್ ಲವ್ ಎಂದು ನಾಮಕರಣ ಮಾಡುವುದಕ್ಕೆ ಕಾರಣವಾಯಿತು ಎಂದವರು ಹೇಳಿದ್ದಾರೆ. ಅಷ್ಟಕ್ಕೂ,

     ಎ ಜಿಹಾದ್ ಫಾರ್ ಲವ್ ಎಂಬುದರ ಬದಲು ಬಿಸ್ಮಿಲ್ಲಾ ಎಂದು ನಾಮಕರಣ ಮಾಡಿರುತ್ತಿದ್ದರೆ ಏನಾಗುತ್ತಿತ್ತು? ಲವ್ ಜಿಹಾದ್ ಅನ್ನುವ ಪದಪುಂಜ ಅಸ್ತಿತ್ವಕ್ಕೆ ಬರುತ್ತಿತ್ತೇ? ಲವ್ ಜಿಹಾದ್ ಎಂಬುದು ಎ ಜಿಹಾದ್ ಫಾರ್ ಲವ್‍ನಿಂದ ಉತ್ಪತ್ತಿ ಯಾಗಿರಬಹುದೇ? ಹೇಳಲಾಗದು. ಯಾಕೆಂದರೆ,

     ಹೆಚ್ಚಿನ ಚಳವಳಿಗಳನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದೇ ನುಡಿಗಟ್ಟುಗಳು. ಸೆಕ್ಯುಲರಿಸಮ್‍ಗೆ ಅಡ್ವಾಣಿಯವರು ಸ್ಯೂಡೋ ಅನ್ನುವ ಪದವನ್ನು ಸೇರಿಸಿದರು. ಅವರು ಸೇರಿಸಿದ ಈ ಹೆಚ್ಚುವರಿ ಪದವು ನಿಧಾನವಾಗಿ ಸೆಕ್ಯುಲರಿಸಂನ ಗುಣಮಟ್ಟವನ್ನೇ ಕೆಡಿಸುವಲ್ಲಿ ಯಶಸ್ವಿಯಾಯಿತು. ಜಾತ್ಯತೀತತೆ ಅನ್ನುವುದೇ ತಮಾಷೆಗೆ ಒಳಗಾಯಿತು. ಜಾತ್ಯತೀತರೆಂದರೆ, ಸೋಗಲಾಡಿಗಳು, ಅಲ್ಲೊಂದು -ಇಲ್ಲೊಂದು  ನುಡಿಯುವವರು, ಖಚಿತತೆ ಇಲ್ಲದವರು, ಧರ್ಮ ವಿರೋಧಿಗಳು ಇತ್ಯಾದಿ ಇತ್ಯಾದಿ ಐಬುಗಳುಳ್ಳವರು ಎಂಬುದಾಗಿ ಜನಸಾಮಾನ್ಯರನ್ನು ನಂಬಿಸುವುದಕ್ಕೆ ಸ್ಯೂಡೋ ಯಶಸ್ವಿಯಾಯಿತು. ದಶಕಗಳ ಹಿಂದೆ ಸೆಕ್ಯುಲರಿಸಂ ಎಂಬ ಪದವು ಎಷ್ಟು ಶೇಕಡಾ ಬಳಕೆಯಾಗುತ್ತಿತ್ತೋ ಅದರ ಅರ್ಧ ಶೇಕಡಾವೂ ಇವತ್ತು ಬಳಕೆಯಾಗುತ್ತಿಲ್ಲ. ಅದರ ಜಾಗದಲ್ಲಿ, ‘ನಾನು ಇಂತಿಂಥ ಜಾತಿಯವ, ಇಂತಿಂಥ ಧರ್ಮದವ, ನಾನು ಪೂಜಿಸುವ ದೇವ ಇಂಥವನು’ ಎಂಬುದೆಲ್ಲ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಪ್ರಧಾನಿಯವರು ಏಕಾದಶಿ ಉಪವಾಸ ಆಚರಿಸಿದರೋ ಇಲ್ಲವೋ, ಮಂದಿರ ಪ್ರವೇಶದ ಮೊದಲು ಮುಖ್ಯಮಂತ್ರಿಗಳ ಮೆನು ಏನಾಗಿತ್ತು, ಮಾಂಸಾಹಾರ ಸೇವಿಸುವ ವ್ಯಕ್ತಿ ಮಂದಿರ ಪ್ರವೇಶಿಸಬಹುದೇ, ಮಂದಿರ ಆವರಣದಲ್ಲಿ ನಮಾಝ ಮಾಡಬಹುದೇ ಇತ್ಯಾದಿಗಳು ಚರ್ಚೆಯ ಮುನ್ನೆಲೆಗೆ ಬರುವುದರ ಹಿಂದೆ ಅಡ್ವಾಣಿಯವರ ಸ್ಯೂಡೋ ಪದಪುಂಜಕ್ಕೆ ಪಾತ್ರವಿದೆ. ಅದು ಜಾತ್ಯತೀತತೆಯ ಮೂಲ ಗುಣವನ್ನೇ ಪ್ರಶ್ನಿಸುವ ಆಯುಧವಾಗಿ ಮಾರ್ಪಾಟಾಯಿತು. ಬಲಪಂಥೀಯ ಕಾರ್ಯಕರ್ತರು ಆ ಪದವನ್ನು ಸೆಕ್ಯುಲರಿಸಂಗೆ ಹೊಡೆಯುವ ಮೊನೆಯಾಗಿ ಬಳಸಿಕೊಂಡರು. ನೆಹರೂ, ಗಾಂಧೀಜಿಯನ್ನೂ ಆ ಮೊನೆ ಬಿಡಲಿಲ್ಲ. ಸೆಕ್ಯುಲರಿಸಂ ಅನ್ನು ಪ್ರತಿಪಾದಿಸುವ ಪ್ರತಿಯೊಬ್ಬರ ಹುಳುಕುಗಳಿಗೂ ದುರ್ಬೀನು ಹಿಡಿಯುವುದು ಮತ್ತು ಅವರಿಂದ ಆಗಿರಬಹುದಾದ ಮಾನವ ಸಹಜ ಪ್ರಮಾದಗಳನ್ನು ಎತ್ತಿ ಹಿಡಿದು ಈತ ಸ್ಯೂಡೋ ಎಂದು ಫತ್ವ ಹೊರಡಿಸುವುದು ಇವರ ಕಾಯಕವಾಗತೊಡಗಿತು. ಬರಬರುತ್ತಾ ಈ ಪ್ರತಿಪಾದನೆಗೆ ಮಾನ್ಯತೆಯೂ ಲಭ್ಯವಾಗತೊಡಗಿತು. ಕೋಮು ಸೌಹಾರ್ದ ಅನ್ನುವ ಪದಪುಂಜ ಕೂಡ ಇವತ್ತು ವಿರಳವಾಗಿ ಬಳಕೆಗೀಡಾಗುತ್ತಿದೆ. ಒಂದು ಕಾಲದ ಬಹುಪಯೋಗಿ ಪದ ಇದು. ಆದ್ದರಿಂದ,

ಲವ್ ಜಿಹಾದ್‍ಗೂ ದೀರ್ಘಾಯುಷ್ಯವಿದೆ ಎಂದು ಹೇಳಲಾಗದು.

     ಈಗಾಗಲೇ ರಾಷ್ಟ್ರೀಯ ತನಿಖಾ ಆಯೋಗವು (NIA) ಈ ಬಗ್ಗೆ ಷರಾ ಬರೆದಿದೆ. ಅಂತರ್ ಧರ್ಮೀಯ ವಿವಾಹಗಳಲ್ಲಿ ಲವ್ ಮಾತ್ರ ಇದೆ, ಜಿಹಾದ್ ಇಲ್ಲ ಎಂದು ಅದು ಹೇಳಿರುವುದು ಇದನ್ನೇ ಸೂಚಿಸುತ್ತದೆ. ಮಾತ್ರವಲ್ಲ, ಲವ್ ಜಿಹಾದ್ ಅನ್ನು ರಾಜಕೀಯವಾಗಿ ಬಳಸಿಕೊಂಡ ಪಕ್ಷವೇ ಅಧಿಕಾರದಲ್ಲಿರುವಾಗ ಮತ್ತು ಅದರ ಅಧೀನದಲ್ಲೆ  ಈ NIA  ಇರುವಾಗಲೂ ಇಂಥದ್ದೊಂದು ತನಿಖಾ ವರದಿ ತಯಾರಾಗಿದೆ ಅನ್ನುವುದು ಅತ್ಯಂತ ಮಹತ್ವಪೂರ್ಣ. ಇದರಲ್ಲಿ ಎರಡು ಅಂಶಗಳು ಸ್ಪಷ್ಟವಾಗುತ್ತದೆ.

     1. ಲವ್ ಜಿಹಾದ್ ಇದೆ ಎಂಬುದನ್ನು ಸಾಬೀತುಪಡಿಸುವುದು ಬಿಜೆಪಿಯ ಆದ್ಯತಾ ಪಟ್ಟಿಯಲ್ಲಿ ಸೇರಿಲ್ಲ.
     2. ಲವ್ ಜಿಹಾದ್‍ನಿಂದ ಅದು ಏನನ್ನು ಬಯಸಿತ್ತೋ ಅದು ಈಡೇರಿದೆ. ಈಗ ಈ ವಿಷಯ ಅದಕ್ಕೆ ಮುಖ್ಯವಲ್ಲ.

    ಬಹುಶಃ, ಇವೆರಡೂ ಸರಿ ಅನ್ನಿಸುತ್ತದೆ. 2008ರ ಬಳಿಕ ದಿಂದ 2018ರ ನಡುವಿನ ಅವಧಿಯಲ್ಲಾದ ಬೆಳವಣಿಗೆ, ಚರ್ಚೆ, ಥಳಿತ, ರಾಜಕೀಯ ಭಾಷಣಗಳನ್ನು ಅವಲೋಕಿಸಿದರೆ, ಲವ್ ಜಿಹಾದ್ ಬಿಜೆಪಿಗೆ ಏನನ್ನು ಕೊಟ್ಟಿದೆ ಅನ್ನುವುದು ಗೊತ್ತಾಗುತ್ತದೆ. ಈಗ ಅದರ ಕಾವು ಕಡಿಮೆಯಾಗಿದೆ. ಒಂದು ಕಾಲದಲ್ಲಿ ಮುಸ್ಲಿಮ್ ಭಯೋತ್ಪಾದನೆ ಈ ದೇಶದಲ್ಲಿ ಬಹುದೊಡ್ಡ ಚರ್ಚಾ ವಿಷಯವಾಗಿತ್ತು. ಇಂಡಿಯನ್ ಮುಜಾಹಿದೀನ್, ಲಷ್ಕರೆ ತ್ವಯ್ಯಿಬಾ, ಹಿಝ್ಬುಲ್ ಮುಜಾಹಿದೀನ್ ಇತ್ಯಾದಿ ಹೆಸರುಗಳು ಪತ್ರಿಕೆಗಳಲ್ಲಿ ಉಲ್ಲೇಖವಾಗದ ದಿನಗಳೇ ಇದ್ದಿರಲಿಲ್ಲ. ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರವು ಭಯೋತ್ಪಾದನೆಯನ್ನು ಮುಸ್ಲಿಮರ ಜೊತೆಗಿಟ್ಟು ನೋಡುವುದನ್ನು ಕಾಯಕವನ್ನಾಗಿ ಮಾಡಿಕೊಂಡಿತ್ತು. ‘ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ’ ಎಂದು ಅಡ್ವಾಣಿಯವರು ಹೇಳಿದ್ದೂ ಇವೇ ದಿನಗಳಲ್ಲಿ. ಹಾಗಂತ,

    ಇಂಥದ್ದೊಂದು ಚರ್ಚೆ ಮತ್ತು ಭಯ ಹುಟ್ಟಿಕೊಂಡದ್ದು ಶೂನ್ಯದಿಂದಲ್ಲ. ವಿದೇಶಗಳಲ್ಲಿ ಅದಾಗಲೇ ಭಯೋತ್ಪಾದನೆಯು ಬಹುಮುಖ್ಯ ಚರ್ಚಾ ವಿಷಯವಾಗಿತ್ತು. ಇಸ್ಲಾಮ್, ಮುಸ್ಲಿಮ್, ಜಿಹಾದ್, ಟೆರರಿಸಂಗಳು ಅಲ್ಲಿನ ಮಾಧ್ಯಮಗಳ ಇಷ್ಟದ ಪದಪುಂಜಗಳಾಗಿದ್ದುವು. ಗಡ್ಡ, ಮುಂಡಾಸು, ಪೈಜಾಮ ಧರಿಸಿದ ತಾಲಿಬಾನ್‍ಗಳನ್ನು ಮಾಧ್ಯಮಗಳು ಪ್ರತಿದಿನ ಅಚ್ಚು ಹಾಕುತ್ತಿದ್ದುವು. ಅಫಘಾನಿಸ್ತಾನ ಮಹಿಳೆಯರು ಧರಿಸುವ ಶಟಲ್ ಕಾಕ್ ಬುರ್ಖಾವನ್ನು ತಮಾಷೆಯ ವಸ್ತುವಾಗಿ ಬಿಂಬಿಸಲಾಗುತ್ತಿತ್ತು. ಆ ಬುರ್ಖಾವೇ ಮೂಲಭೂತವಾದಿಯಾಯಿತು. ಆಗ ಭಯೋತ್ಪಾದನೆಯನ್ನೇ ಮುಂದಿಟ್ಟು ಬಿಜೆಪಿ ರಾಜಕೀಯ ತಂತ್ರವನ್ನು ಹೆಣೆಯಿತು. ಮುಸ್ಲಿಮರನ್ನು ಪ್ರಶ್ನೆಯ ಮೊನೆಯನ್ನು ನಿಲ್ಲಿಸುವುದು ಮತ್ತು ಅವರ ದೇಶನಿಷ್ಠೆಯನ್ನು ಪ್ರಶ್ನಾರ್ಹಗೊಳಿಸುವುದನ್ನು ವ್ರತದಂತೆ ನಡೆಸಿಕೊಂಡು ಬಂದಿತು. ಒಂದು ರೀತಿಯಲ್ಲಿ, ಜಾಗತಿಕ ಬೆಳವಣಿಗೆಗಳಿಂದ ಪ್ರೇರಿತಗೊಂಡು ಬಿಜೆಪಿ ಭಾರತದಲ್ಲಿ ಅಳವಡಿಸಿಕೊಂಡ ರಾಜಕೀಯ ತಂತ್ರಗಾರಿಕೆ ಇದು. ಆದ್ದರಿಂದಲೇ, ಲವ್‍ಜಿಹಾದ್ ಎಂಬ ಪದಗುಚ್ಛದ ಹುಟ್ಟಿನ ಬಗ್ಗೆ ಅನುಮಾನ ಮೂಡುವುದು.

      ಎ ಜಿಹಾದ್ ಫಾರ್ ಲವ್ ಎಂಬುದು ಸಂಪೂರ್ಣವಾಗಿ LGBT ಸಮುದಾಯವನ್ನೇ ಕೇಂದ್ರೀಕರಿಸಿ ನಿರ್ಮಿಸಲಾದ ಸಿನಿಮಾ. 2008 ಮೇಯಲ್ಲಿ ನಡೆದ ಟೋಕಿಯೋ ಇಂಟರ್ ನ್ಯಾಶನಲ್ ಲೆಸ್ಬಿಯನ್ ಆ್ಯಂಡ್ ಗೇ ಫಿಲ್ಮ್ ಫೆಸ್ಟಿವಲ್‍ನಲ್ಲಿ ಅದು ಪ್ರದರ್ಶನಗೊಂಡಿರುವುದಕ್ಕೂ ಇದುವೇ ಕಾರಣ. ಬರೇ ಇಷ್ಟೇ ಆಗಿದ್ದರೆ ಎ ಜಿಹಾದ್ ಫಾರ್ ಲವ್ ಹೆಸರಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿರಲಿಲ್ಲ. 2007ರ ಕೊನೆಯಿಂದ 2008ರ  ಕೊನೆಯ ನಡುವೆ ಈ ಸಿನಿಮಾವು ಸುಮಾರು ನೂರರಷ್ಟು  ಫಿಲ್ಮ್ ಫೆಸ್ಟಿವಲ್‍ಗಳಲ್ಲಿ ಪ್ರದರ್ಶನವನ್ನು ಕಂಡಿತು. ಬ್ರಿಟನ್‍ನ ದಿ ಗಾರ್ಡಿಯನ್, ಜರ್ಮನಿಯ ಡೇರ್ ಸ್ಪೈಜಲ್, ಅಮೇರಿಕದ ದಿ ನೇಶನ್, ನ್ಯೂಯಾರ್ಕ್ ಟೈಮ್ಸ್, ಸಿನಿಮಾ ಪೊಲಿಟಿಕಾ, ನ್ಯೂಯಾರ್ಕ್ ಮ್ಯಾಗಸಿನ್, ವಾಲ್‍ಸ್ಟ್ರೀಟ್ ಜರ್ನಲ್, ನ್ಯಾಶನಲ್ ಪಬ್ಲಿಕ್ ರೇಡಿಯೋ, ಬೋಸ್ಟನ್ ಸ್ಲಾಬ್, ಸ್ಯಾನ್ ಫ್ರಾನ್ಸಿಸ್ಕೋ ಕ್ರೋನಿಕಲ್, ಡೈಲಿ ನ್ಯೂಸ್ ಈಜಿಪ್ಟ್, ಫಿಲ್ಮ್ ಜರ್ನಲ್ ಇಂಟರ್ ನ್ಯಾಶನಲ್, ದಿ ಸಂಡೇ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಯುರೋಪಿನ ಬಹುತೇಕ ರಾಷ್ಟ್ರಗಳ ದೈನಿಕಗಳು ಈ ಸಿನಿಮಾದ ಬಗ್ಗೆ ವಿಮರ್ಶೆಗಳನ್ನು ಬರೆದುವು. ಭಾರತದಲ್ಲಿ ಎನ್‍ಡಿಟಿವಿ ಈ ಸಿನಿಮಾವನ್ನು ಪ್ರಸಾರ ಮಾಡುವ ಧೈರ್ಯವನ್ನು ಪ್ರದರ್ಶಿಸಿತು. ಬಹುಶಃ,

     ಒಂದೇ ವರ್ಷದೊಳಗೆ ಎ ಜಿಹಾದ್ ಫಾರ್ ಲವ್ ಸಿನಿಮಾಕ್ಕೆ ದಕ್ಕಿರುವ ಈ ಮಟ್ಟದ ಪ್ರಚಾರವು ‘ಲವ್ ಜಿಹಾದ್’ ಪದದ ಹುಟ್ಟಿಗೆ ಕಾರಣವಾಗಿರಬೇಕೆಂದು ಅನಿಸುತ್ತದೆ. ಪರ್ವೇಝ ಶರ್ಮಾರ ಸಿನಿಮಾದ ಶೀರ್ಷಿಕೆಯಿಂದ ತಮಗೆ ಬೇಕಾದಷ್ಟನ್ನು ಮಾತ್ರ ಪಡೆದುಕೊಂಡ ಇಲ್ಲಿನ ಬಲಪಂಥೀಯ ಚಿಂತಕರು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ತಂತ್ರ ಹೂಡಿದರು. ಪದೇ ಪದೇ ಲವ್ ಜಿಹಾದ್ ಎಂದು ಹೇಳತೊಡಗಿದರು. ಇದರ ಪ್ರಭಾವ ಎಷ್ಟಾಯಿತೆಂದರೆ, ಕೇರಳದ ಡಿಜಿಪಿ ಪೊನ್ನೊಸೆಯವರ ವರದಿಯನ್ನು ನ್ಯಾಯಾಧೀಶರಾದ ಕೆ.ಟಿ. ಶಂಕರನ್ ಅವರು ತಿರಸ್ಕರಿಸಿದರು. ಕರ್ನಾಟಕದಲ್ಲೂ ಲವ್ ಜಿಹಾದ್ ಭಯ ಆವರಿಸಿಕೊಂಡಿತು. ಹಿಂದೂ ಹೆಣ್ಮಕ್ಕಳು ಮತಾಂತರವಾಗುತ್ತಿರುವುದು ನಿಜ ಎಂದು 2010ರಲ್ಲಿ ಕರ್ನಾಟಕ ಸರಕಾರವೇ ಆತಂಕ ತೋಡಿಕೊಂಡಿತು. 2012ರಲ್ಲಿ ಕೇರಳ ಪೊಲೀಸರು ಲವ್ ಜಿಹಾದ್ ಎಂಬ ಹೆಸರಲ್ಲಿ ಸಂಘಟಿತ ಮತಾಂತರ ಷಡ್ಯಂತ್ರವಿರುವುದನ್ನು ಪುನಃ ನಿರಾಕರಿಸಿದರು. 2014ರಲ್ಲಿ ಉತ್ತರ ಪ್ರದೇಶದ ಪೊಲೀಸರೂ ಇದನ್ನೇ ಹೇಳಿದರು. ತನಿಖೆಗೆಂದು ಅವರು ಎತ್ತಿಕೊಂಡ 4 ಲವ್ ಜಿಹಾದ್ ಪ್ರಕರಣಗಳಲ್ಲಿ ಯಾವುದೂ ಜಿಹಾದ್ ವ್ಯಾಪ್ತಿಯಲ್ಲಿಲ್ಲ ಎಂದರು. 2017ರಲ್ಲಿ ಹಾದಿಯಾ-ಶಫಿನ್ ಜಹಾನ್ ಮದುವೆಯನ್ನು ಅಮಾನ್ಯಗೊಳಿಸುವ ಮೂಲಕ ಕೇರಳ ಹೈಕೋರ್ಟು ಲವ್ ಜಿಹಾದನ್ನು ಮತ್ತೊಮ್ಮೆ ಚರ್ಚಾರ್ಹಗೊಳಿಸಿತು. ಇದೀಗ NIA  ಈ ಎಲ್ಲ ಚರ್ಚೆಯನ್ನೂ ಬೋಗಸ್ ಎಂದು ತಳ್ಳಿ ಹಾಕಿದೆ. ಅಂದಹಾಗೆ, ಈ ಚರ್ಚೆಯನ್ನು ಹುಟ್ಟು ಹಾಕಿದವರ ಅಧೀನದಲ್ಲೇ  ಈ ತನಿಖಾ ಸಂಸ್ಥೆ ಇದೆ ಅನ್ನುವುದು ಇಲ್ಲಿನ ಬಹು ದೊಡ್ಡ ತಮಾಷೆ. ನಿಜವಾಗಿ,

   ಕೋಬ್ರಾ ಪೋಸ್ಟ್ 2015ರಲ್ಲಿ ನಡೆಸಿದ ಸ್ಟಿಂಗ್ ಆಪರೇಶನ್ ನಲ್ಲಿ ಉತ್ತರ ಪ್ರದೇಶದ ಬಿಜೆಪಿ ನಾಯಕರಾದ ಸಂಜಯ್ ಅಗರ್‍ವಾಲ್ ಮತ್ತು ಓಂಕಾರ್ ಸಿಂಗ್‍ರು ಈ ಸತ್ಯವನ್ನು ಬಾಯಿ ಬಿಟ್ಟಿದ್ದರು. ಲವ್ ಜಿಹಾದ್ ಅನ್ನುವುದು ಬಿಜೆಪಿಯ ರಾಜಕೀಯ ತಂತ್ರ ಅನ್ನುವುದು ಆಗಲೇ ಗೊತ್ತಾಗಿತ್ತು. ಈಗ NIA ಯೂ ಅದನ್ನೇ ಹೇಳಿದೆ. ಅಂದಹಾಗೆ,

      ಒಂದು ದಶಕವನ್ನು ಮುಸ್ಲಿಮ್ ಭಯೋತ್ಪಾದನೆಯೊಂದಿಗೆ ಕಳೆದ ಬಿಜೆಪಿ, ಆ ಬಳಿಕದ ಒಂದು ದಶಕವನ್ನು ಲವ್ ಜಿಹಾದ್ ನೊಂದಿಗೆ ಮುಗಿಸಿದೆ. ಮಾತ್ರವಲ್ಲ, ಇವೆರಡರಿಂದ ಏನನ್ನು ಪಡೆಯಬೇಕೋ ಅವೆಲ್ಲವನ್ನೂ ಪಡೆದಿದೆ. ಅದರಾಚೆಗೆ ಏನೂ ಇಲ್ಲ.

Tuesday, October 9, 2018

ಅವರನ್ನು ಒಪ್ಪಿಸಿದ್ದು ಸೇನೆಗಲ್ಲ, ಕಸಾಯಿಖಾನೆಗೆ!



ಮುಹಮ್ಮದ್ ಶಬೀರ್ ಅಹ್ಮದ್
ಮುಹಮ್ಮದ್ ಯೂನುಸ್
ಮೆಹಬೂಬ್ ಖಾನ್
ಮುಹಮ್ಮದ್ ಸಲಾಮ್
ರಹೀಮುದ್ದೀನ್
ಜಮಾಲ್ ಹುಸೈನ್
ಮುಹಮ್ಮದ್ ಜಮಾಲ್
ಫೋರ್ಬ್ಸ್  ಪಟ್ಟಿಯಲ್ಲಿರುವ ಹೆಸರುಗಳು ಇವಲ್ಲ. ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದವರೂ ಇವರಲ್ಲ. ಅತ್ಯಾಚಾರ, ಹತ್ಯೆ, ಹಲ್ಲೆ, ದರೋಡೆ, ಬ್ಯಾಂಕ್ ವಂಚನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡ ಖತರ್ನಾಕ್ ಕ್ರಿಮಿನಲ್‍ಗಳೂ ಅಲ್ಲ. ಸೆಲೆಬ್ರಿಟಿಗಳೂ ಅಲ್ಲ. ಮ್ಯಾನ್ಮಾರ್ ನಲ್ಲಿ ಸೇನೆ ಎಸಗುತ್ತಿರುವ ದೌರ್ಜನ್ಯವನ್ನು ತಾಳಲಾಗದೇ ಇವರು 2012ರಲ್ಲಿ ಅಸ್ಸಾಮ್ ಪ್ರವೇಶಿಸಿದರು. ಕಾನೂನಿನ ಪ್ರಕಾರ ಇವರ ಪ್ರವೇಶ ಅಕ್ರಮ. ಜಗತ್ತಿನಲ್ಲಿ ಇವರಂತೆ ಪ್ರತಿದಿನ 34 ಸಾವಿರ ಮಂದಿ ತಮ್ಮ ಊರಿನಿಂದಲೇ ಹೊರದಬ್ಬಲ್ಪಡುತ್ತಾರೆ ಮತ್ತು ಸುರಕ್ಷಿತ ಸ್ಥಳವನ್ನು ಹುಡುಕಿಕೊಂಡು ಅಲೆದಾಡುತ್ತಿದ್ದಾರೆ ಅಥವಾ ಇನ್ನೊಂದು ದೇಶದ ಗಡಿಭಾಗದಲ್ಲಿ ಜಮೆಯಾಗುತ್ತಿದ್ದಾರೆ ಎಂದು ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆಯ ಆಯೋಗವು ಅಂಕಿ ಅಂಶಗಳೊಂದಿಗೆ ಜಗತ್ತಿನ ಮುಂದಿಟ್ಟಿದೆ. ಅಂದರೆ, ಜಗತ್ತಿನಲ್ಲಿ ಪ್ರತಿದಿನ 34 ಸಾವಿರ ಮಂದಿ ನಿರಾಶ್ರಿತರಾಗುತ್ತಾ ಇದ್ದಾರೆ. ಇವರ ನಿರಾಶ್ರಿತ ಬದುಕಿಗೆ ಕಾರಣ ಅವರಲ್ಲ, ಪ್ರಭುತ್ವ ಮತ್ತು ಪ್ರಭುತ್ವವನ್ನು ಬೆಂಬಲಿಸುವ ಜನರು ಅಥವಾ ಸೇನೆ. 2005ರಿಂದ 2016ರ ನಡುವೆ 6 ಕೋಟಿ 53 ಲಕ್ಷದಷ್ಟು ಬೃಹತ್ ಜನಸಂಖ್ಯೆಯೊಂದು ನಿರಾಶ್ರಿತವಾಗಿ ಬದುಕುತ್ತಿವೆ ಎಂದರೆ, ಅದರ ಭೀಕರತೆಯ ಊಹೆ ನಿಮಗೇ ಬಿಟ್ಟದ್ದು.

     ನಿರಾಶ್ರಿತ ಎಂಬ ಪದದ ವಿರುದ್ಧ ಪದ ಆಶ್ರಿತ. ಆಶ್ರಿತರೆಂದರೆ, ಇನ್ನಾರದೋ ಕರುಣೆಯೊಂದಿಗೆ ಬದುಕುತ್ತಿರುವವರು ಎಂದರ್ಥವಲ್ಲ. ತನ್ನ ದೇಶ, ತನ್ನ ಊರು, ತನ್ನ ಭೂಮಿ, ತನ್ನ ಜನರು, ತನ್ನ ಮನೆ, ತನ್ನ ಉದ್ಯಮ... ಹೀಗೆ ಒಂದು ಪ್ರದೇಶದಲ್ಲಿ ನೆಮ್ಮದಿಯಿಂದ ಬದುಕು ಕಟ್ಟಿಕೊಂಡವರು. ಅವರಿಗೆ ಅಲ್ಲಿ ಅವರದೇ ಆದ ಸ್ವಂತ ಭೂಮಿಯಿರುತ್ತದೆ. ಮನೆಯಿರುತ್ತದೆ. ಉದ್ಯಮ ಇರಬಹುದು. ಕುಟುಂಬ, ಪರಿವಾರ ಇರಬಹುದು. ಪೌರತ್ವ ಇರುತ್ತದೆ. ದೇಶದ ಪ್ರತಿಯೊಂದು ಆಗು-ಹೋಗುಗಳಲ್ಲೂ ಭಾಗವಹಿಸುವ ಮತ್ತು ಮಾತಾಡುವ ಅಧಿಕೃತ ಹಕ್ಕೂ ಇರುತ್ತದೆ. ಇಂಥ ಜನರು ಒಂದು ದಿನ ಪ್ರಭುತ್ವದ್ದೋ  ಅಥವಾ ಪ್ರಭುತ್ವದ ಬೆಂಬಲಿಗರದ್ದೋ  ದೌರ್ಜನ್ಯಕ್ಕೆ ಒಳಗಾಗಿ ಊರು ಬಿಡಬೇಕಾಗುತ್ತದೆ. ತಮ್ಮೂರಿನ ಎಲ್ಲವನ್ನೂ ಕಳಕೊಂಡು ಬರಿಗೈಯಲ್ಲಿ ಜೀವ ಉಳಿಸಿಕೊಳ್ಳುವುದಕ್ಕಾಗಿ ಓಡಬೇಕಾಗುತ್ತದೆ. ಇಂಥದ್ದೊಂದು  ಓಟವನ್ನು ತೀರಾ ಸಹಜವಾಗಿ ಸ್ವೀಕರಿಸಲೂ ಸಾಧ್ಯವಿಲ್ಲ. ಹುಟ್ಟಿದ ಊರನ್ನು ತೊರೆಯುವುದೆಂದರೆ, ಅದು ನೋವು, ಕಣ್ಣೀರು, ಆತಂಕ ಎಲ್ಲವನ್ನೂ ತರಿಸುತ್ತದೆ. ಅದರಲ್ಲೂ ಹೋಗುವುದೆಲ್ಲಿಗೆ ಎಂಬುದೇ ಅಸ್ಪಷ್ಟವಾಗಿರುವ ಸ್ಥಿತಿಯಲ್ಲಂತೂ ಅಂಥ ತೊರೆಯುವಿಕೆ ಭಯಾನಕವಾಗಿರುತ್ತದೆ. ಒಂದು ಊರನ್ನು ತೊರೆದ ತಕ್ಷಣ ಅವರನ್ನು ಇನ್ನೊಂದು ಊರು ಸ್ವಾಗತಿಸುತ್ತದೆ ಎಂದು ಹೇಳುವ ಹಾಗಿಲ್ಲ. ಆ ಊರಿಗೆ ಜನದಟ್ಟಣೆ, ಉದ್ಯೋಗ ನಷ್ಟ ಇತ್ಯಾದಿ ಸಮಸ್ಯೆಗಳ ಭಯ ಶುರುವಾಗುತ್ತದೆ. ಹೊಸದೊಂದು ಜನಜಂಗುಳಿಯನ್ನು ಸ್ವಾಗತಿಸಿಕೊಂಡು ಸಮಸ್ಯೆಗಳನ್ನು ಯಾಕೆ ಮೈಮೇಲೆ ಎಳೆದುಕೊಳ್ಳಬೇಕು ಅನ್ನುವ ಭಾವನೆ ಆ ಊರನ್ನು ಕಾಡುವುದು ಸಹಜ. ಇನ್ನು,

    ಹೀಗೆ ಊರು ಬಿಟ್ಟು ಬರುವವರಂತೂ ಉಟ್ಟ ಬಟ್ಟೆಯ ಹೊರತು ಬೇರೇನೂ ಇಲ್ಲದೇ ಬರುವವರು. ಹೊಸದಾಗಿ ‘ಅ’ದಿಂದ ಪ್ರಾರಂಭಿಸಬೇಕಾದವರು. ಅದಂತೂ ಸಣ್ಣ ಸವಾಲಲ್ಲ. ಆರಂಭದಲ್ಲಿ ಉಲ್ಲೇಖಿಸಲಾದ 7 ಮಂದಿ 2012ರಲ್ಲಿ ಅಸ್ಸಾಮನ್ನು ಪ್ರವೇಶಿಸುವಾಗ ಬಹುತೇಕ ಇದೇ ಸ್ಥಿತಿಯಲ್ಲಿದ್ದರು. ಅವರು ಅಸ್ಸಾಮ್ ಪ್ರವೇಶಿಸುವುದಕ್ಕೆ ಕಾರಣ, ಅವರ ಹುಟ್ಟಿದೂರು ಮ್ಯಾನ್ಮಾರ್ ನಲ್ಲಿದ್ದ ಕೊಲೆಪಾತಕ ಸನ್ನಿವೇಶ. ದ್ವಿತೀಯ ವಿಶ್ವಯುದ್ಧದ ಬಳಿಕ ಆ ಸ್ಥಿತಿ ಪ್ರಾರಂಭಗೊಂಡಿತ್ತು. ಭಾಷೆ ಮತ್ತು ವಂಶದ ಹೆಸರಲ್ಲಿ ಪ್ರಭುತ್ವ ಇವರನ್ನು ಅಸ್ಪೃಶ್ಯಗೊಳಿಸಿತು. ಬಂಗಾಳಿಗಳು, ನುಸುಳುಕೋರರು ಮತ್ತು ಬ್ರಿಟಿಷರ ಪರ ನಿಂತ ದೇಶದ್ರೋಹಿಗಳು ಎಂಬ ನಾಮಕರಣದೊಂದಿಗೆ ಈ ದಬ್ಬುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರೋಹಿಂಗ್ಯನ್ ಮುಸ್ಲಿಮರು ಎಂಬ ಹೆಸರಲ್ಲಿ ಗುರುತಿಸಿಕೊಂಡಿದ್ದ ಈ ಸಮುದಾಯವು ಬರಬರುತ್ತಾ ಒಂದೊಂದೇ ಹಕ್ಕುಗಳನ್ನು ಕಳಕೊಳ್ಳತೊಡಗಿತು. 1982ರ ಪೌರತ್ವ ಕಾಯ್ದೆಗೆ ಇವರನ್ನು ಅನ್ವಯಗೊಳಿಸುವ ಮೂಲಕ ಪೌರತ್ವ ನಿರಾಕರಣೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಯಿತು. ನಿಜವಾಗಿ,

      ಈ ಮೇಲಿನ 7 ಮಂದಿ ಒಂಟಿಯಲ್ಲ ಮತ್ತು ಜಗತ್ತಿನಲ್ಲಿರುವ ಒಟ್ಟು ನಿರಾಶ್ರಿತರ ಸಂಖ್ಯೆಗೆ ಹೋಲಿಸಿದರೆ ಮ್ಯಾನ್ಮಾರ್ ನಿರಾಶ್ರಿತರ ಸಂಖ್ಯೆ ಒಂದು ಮುಷ್ಠಿಯಷ್ಟೇ ಸಣ್ಣದು. ಒಂದೇ ಒಂದು ದಶಕದಲ್ಲಿ 7 ಕೋಟಿಗಿಂತಲೂ ಅಧಿಕ ನಿರಾಶ್ರಿತರು ಸೃಷ್ಟಿಯಾದರು ಮತ್ತು ಇವರು ಈ ಜಗತ್ತಿನಲ್ಲಿ ಎಲ್ಲೆಲ್ಲೋ ಹೇಗ್ಹೇಗೋ ಏನೇನೋ ಆಗಿ ಬದುಕುತ್ತಿದ್ದಾರೆ ಎಂದರೆ, ಇನ್ನು ಬಾಂಗ್ಲಾ ದೇಶದ ಚಿತ್ತಗಾಂಗ್‍ನ ಕಾಕ್ಸ್ ಬಝಾರ್ ನಲ್ಲಿ ನಿರಾಶ್ರಿತರಾಗಿ ಬದುಕುತ್ತಿರುವ 10 ಲಕ್ಷ ರೋಹಿಂಗ್ಯನ್ ಮುಸ್ಲಿಮರ ಸಂಖ್ಯೆ ಬಹಳ ದೊಡ್ಡದೇ? ಈ ಮಂದಿ ಬರೇ ಬಾಂಗ್ಲಾದೇಶದಲ್ಲಷ್ಟೇ ಆಶ್ರಯ ಪಡಕೊಂಡಿರುವುದಲ್ಲ. ಮಲೇಶ್ಯಾ, ಇಂಡೋನೇಶ್ಯಾ, ಥಾಯ್‍ಲ್ಯಾಂಡ್, ಆಸ್ಟ್ರೇಲಿಯಾ, ಭಾರತ, ಶ್ರೀಲಂಕಾ ಇತ್ಯಾದಿ ರಾಷ್ಟ್ರಗಳಲ್ಲೂ ನುಸುಳುಕೋರರಾಗಿಯೋ ಅಕ್ರಮ ವಾಸಿಗಳಾಗಿಯೋ ಉಳಿದುಕೊಂಡಿದ್ದಾರೆ. ಹಾಗಂತ,


     ಸಕ್ರಮ ವಾಸಿಗಳಾಗಿ ಗುರುತಿಸಿಕೊಳ್ಳುವುದಕ್ಕೆ ಅವರಲ್ಲಿ ಇರುವುದಾದರೂ ಏನು? ಒಂದು ಪ್ರಭಾತದಲ್ಲಿ ಸೂಟ್‍ಕೇಸ್ ತುಂಬಾ ಬಟ್ಟೆ-ಬರೆಗಳನ್ನು ತುಂಬಿಸಿಕೊಂಡು, ಪ್ಯಾಂಟ್-ಕೋಟು-ಶೂ ಧರಿಸಿಕೊಂಡು, ಮನೆಯವರನ್ನೆಲ್ಲಾ  ಆಲಂಗಿಸಿ, ವಿದಾಯ ಕೋರಿ ವಿಮಾನದಲ್ಲಿ ರುಯ್ಯನೆ ಬಂದವರಲ್ಲವಲ್ಲ ಇವರು. ತಮಿಳ್ನಾಡಿನ ಕೆರಂಬಾರ್ ನಲ್ಲಿ ಇಂಥ 22 ಕುಟುಂಬಗಳಿವೆ. ಇವರು ಕೂಡ ಮ್ಯಾನ್ಮಾರ್ ನಿಂದಲೇ ಬಂದವರು. ಮೇಲಿನ 7 ಯುವಕರನ್ನು ಸುಪ್ರೀಮ್ ಕೋರ್ಟ್‍ನ ಆದೇಶದಂತೆ ಕೇಂದ್ರ ಸರಕಾರವು ಮ್ಯಾನ್ಮಾರ್ ಸೇನೆಗೆ ಒಪ್ಪಿಸಿದಂತೆ ಒಂದು ದಿನ ಈ ಕುಟುಂಬ ಪರಿವಾರವನ್ನೂ ಮ್ಯಾನ್ಮಾರ್ ಗೆ ಒಪ್ಪಿಸಿ ಬಿಡುವ ಎಲ್ಲ ಸಾಧ್ಯತೆಗಳೂ ಇವೆ. ಆದರೆ, ಇವರನ್ನು ಸ್ವೀಕರಿಸಲಿರುವ ಮ್ಯಾನ್ಮಾರ್ ಪ್ರಭುತ್ವ ಹೇಗಿದೆ ಎಂಬುದನ್ನು ಊಹಿಸುವಾಗ ದಿಗಿಲಾಗುತ್ತದೆ.

     ಇವರೂ 2012ರಲ್ಲೇ ಮ್ಯಾನ್ಮಾರ್ ನಿಂದ  ತಪ್ಪಿಸಿಕೊಂಡು ಬಂದವರು. ಮ್ಯಾನ್ಮಾರ್ ಸೇನೆಯನ್ನು ಅಷ್ಟು ಸುಲಭದಲ್ಲಿ ಯಾಮಾರಿಸಲು ಈ ಕುಟುಂಬಗಳಿಗೆ ಸಾಧ್ಯವಾಗಲಿಲ್ಲ. ಅವರಿಗೆ ಆಭರಣಗಳ ಜೊತೆಗೇ ಮಾನವನ್ನೂ ಒಪ್ಪಿಸಬೇಕಾಯಿತು. ಹಾಗೇ, ಮ್ಯಾನ್ಮಾರ್ ಗಡಿಯಿಂದ ಬಾಂಗ್ಲಾದೇಶಕ್ಕೆ ಹೇಗೋ ತಲುಪಿಬಿಟ್ಟರು. ಅಲ್ಲಿಂದ ಕೊಲ್ಕತ್ತಾಕ್ಕೆ ಬರಬೇಕಾದರೆ, ಮಧ್ಯ ವರ್ತಿಗಳಿಲ್ಲದೇ ಸಾಧ್ಯವಿಲ್ಲ ಎಂಬ ಸ್ಥಿತಿಯಿದೆ. ಈ ಮಧ್ಯವರ್ತಿಗಳಿಗೆ ದಲಾಲ್ ಎನ್ನುತ್ತಾರೆ. ಅವರಿಗೆ ಹಣ ನೀಡಿ ಉದ್ಯೋಗ ವನ್ನು ಅರಸುತ್ತಾ ಇವರು ಕೊಲ್ಕತ್ತಾಕ್ಕೆ ಬಂದರು. ಅಲ್ಲಿನ   ಹೌರಾ ರೈಲ್ವೇ ಸ್ಟೇಷನ್‍ನಿಂದ ಚೆನ್ನೈ ರೈಲು ಹತ್ತಿ ಅಲ್ಲಿನ ಚಂಡಮಾರುತದ ಅಪಾಯವಿರುವ ಕೆರಂಬಾರ್ ನಲ್ಲಿ ನೆಲೆಸಿದ್ದಾರೆ. ಅವರಲ್ಲಿ ಒಬ್ಬೊಬ್ಬರಲ್ಲೂ ಒಂದೊಂದು ಕತೆ ಇದೆ. ಮ್ಯಾನ್ಮಾರ್  ಸೇನೆ ಇವರನ್ನು ಹೇಗೆ ನಡೆಸಿಕೊಳ್ಳುತ್ತಿತ್ತು ಅನ್ನುವುದಕ್ಕೆ ಕಣ್ಣೀರ ಸಾಕ್ಷಿಗಳಿವೆ.

   ಮ್ಯಾನ್ಮಾರ್ ನಲ್ಲಿ ರೋಹಿಂಗ್ಯನ್ ಸಮುದಾಯವು ಶಿಕ್ಷಣ ಪಡೆಯುವುದನ್ನು ಪ್ರಭುತ್ವವು ತಡೆಯುತ್ತಿತ್ತು. ಮದ್ರಸ ಬಿಟ್ಟರೆ ಬೇರೆ ಶಿಕ್ಷಣ ಪಡೆಯದಂತೆ ಅದು ನೋಡಿಕೊಂಡಿತ್ತು. ವಿವಾಹವು ಅತ್ಯಂತ ಕಷ್ಟದ ಕೆಲಸ. ವಿವಾಹವಾಗಬೇಕಾದರೆ ಸರಕಾರಕ್ಕೆ ಲಕ್ಷಗಟ್ಟಲೆ ಹಣ ಪಾವತಿಸಬೇಕು. ಹಾಗೆ ಹಣ ಪಾವತಿಸಿ ಮದುವೆಯಾದರೆಂದೇ ಇಟ್ಟುಕೊಳ್ಳೋಣ. ಗರ್ಭ ಧರಿಸಿದರೆ ಪುನಃ ಸಮಸ್ಯೆ ಎದುರಾಗುತ್ತದೆ. ಗರ್ಭಕ್ಕೆ ಮತ್ತೆ ತೆರಿಗೆ ಕಟ್ಟ ಬೇಕು. ಈ ಕುಟುಂಬದ ಮಹಿಳೆಯೊಬ್ಬಳು ವಿವಾಹ ತೆರಿಗೆಯನ್ನು ಪಾವತಿಸದೇ ಮದುವೆಯಾದಳು. ಗರ್ಭ ಧರಿಸಿದಳು. ಇದು ಸರಕಾರದ ಗಮನಕ್ಕೆ ಬಂತು. ಸರಕಾರವು ಆಕೆಯನ್ನು 4 ವರ್ಷಗಳ ಕಾಲ ಜೈಲಿನಲ್ಲಿ ಕೂಡಿ ಹಾಕಿತು. ಒಂದು ರೀತಿಯಲ್ಲಿ, ಜನಸಂಖ್ಯೆ ಬೆಳೆಯದಂತೆ ತಡೆಯುವ ಕ್ರೂರ ವಿಧಾನ ಇದು.

     ಇದು ಮ್ಯಾನ್ಮಾರ್ ಒಂದರ ಕತೆಯಲ್ಲ. ಜಗತ್ತಿನ ಬೇರೆ ಬೇರೆ ಕಡೆ ಕೋಟ್ಯಂತರ ಮಂದಿ ಬೇರೆ ಬೇರೆ ದೂರು-ದುಮ್ಮಾನ ಗಳೊಂದಿಗೆ ಎಲ್ಲೆಲ್ಲಿಗೋ  ಅಲೆಯುತ್ತಿದ್ದಾರೆ. ಕೇರಿ, ಟೆಂಟ್‍ಗಳಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇವರೆಲ್ಲರ ಈಗಿನ ಸ್ಥಿತಿ ಹಿಂದಿನದಲ್ಲ. ಹತ್ತು ವರ್ಷಗಳ ಹಿಂದೆ, ಐದು ವರ್ಷಗಳ ಹಿಂದೆ ಅಥವಾ ತಿಂಗಳ ಹಿಂದೆ ಇವರಲ್ಲಿ ಹೆಚ್ಚಿನವರೂ ಧನಿಕರೋ ಮಧ್ಯಮ ವರ್ಗದವರೋ ಆಗಿದ್ದವರು. ಬದುಕಿನ ಬಗ್ಗೆ ಏನೇನೋ ಕನಸುಗಳನ್ನು ಕಂಡಿದ್ದವರು. ಮಕ್ಕಳನ್ನು ತಮ್ಮ ಕನಸಿನಂತೆ ಬೆಳೆಸುವ ಉಮೇದಿನೊಂದಿಗೆ ದುಡಿದಿದ್ದವರು. ತಮ್ಮ ಆದಾಯದಿಂದ ಒಂದಷ್ಟನ್ನು ಉಳಿಸಿಕೊಂಡು ತಮ್ಮದೇ ಕನಸಿನ ಮನೆಯನ್ನೋ ವಾಹನವನ್ನೋ ಖರೀದಿಸಲು ಆಸೆ ಪಟ್ಟಿದ್ದವರು. ಆದರೆ, ಇವತ್ತು ಅವರೆಲ್ಲ ಯಾವುದಾದರೊಂದು ದೇಶದ ಗಡಿಭಾಗದಲ್ಲಿ ಅಂಡಲೆಯುತ್ತಿದ್ದಾರೆ. ಕೆಲವರು ಗಡಿ ದಾಟಿ ಇನ್ನೊಂದು ದೇಶದೊಳಗೆ ಪ್ರವೇಶಿಸಲು ಯಶಸ್ವಿಯಾದರೂ ನುಸುಳುಕೋರರಾಗಿಯೋ ಆಂತರಿಕ ಸುರಕ್ಷತೆಗೆ ಬೆದರಿಕೆಯವರಾಗಿಯೋ ಹೊರದಬ್ಬಲ್ಪಡಬೇಕಾದವರ ಪಟ್ಟಿಯಲ್ಲಿದ್ದಾರೆ. ಇದೊಂದು ಭಯಾನಕ ಸನ್ನಿವೇಶ.

     ಈ ಜಗತ್ತಿನಲ್ಲಿ ಕೇವಲ 10 ವರ್ಷಗಳೊಳಗೆ 7 ಕೋಟಿಗಿಂತಲೂ ಅಧಿಕ ಮಂದಿ ನಿರಾಶ್ರಿತರಾಗಿ ಬದುಕುವಂತಾಗಿದೆ ಅಂದರೆ, ಅದಕ್ಕೆ ಯಾರು ಹೊಣೆ? ಯಾವ ದೇಶಕ್ಕೂ ಇವರನ್ನು ಒಳಗೆ ಬಿಟ್ಟುಕೊಳ್ಳುವುದಕ್ಕೆ ಇಷ್ಟವಿಲ್ಲ. ಸಿರಿಯಾದಿಂದ ಒಂದು ದೊಡ್ಡ ಜನಸಮೂಹ ಸಿಕ್ಕ ಸಿಕ್ಕ ದೋಣಿಯನ್ನು ಹತ್ತಿ ಹೊರಡುತ್ತವೆ. ಅವುಗಳಲ್ಲಿ ಕೆಲವು ನೀರಿನಲ್ಲಿ ಮುಳುಗುತ್ತವೆ. ದೋಣಿಯಲ್ಲಿ ತೇಲಿಕೊಂಡು ದಡ ಮುಟ್ಟಿದರೂ ಸುಖ ಇಲ್ಲ. ಇನ್ನೊಂದು ರಾಷ್ಟ್ರದ ಗಡಿ ಮುಚ್ಚಿಕೊಂಡಿರುತ್ತದೆ. ಹೀಗೆ ಇರಾಕ್, ಫೆಲೆಸ್ತೀನ್, ಯಮನ್, ಲಿಬಿಯಾ, ಅಫಘಾನ್, ಸುಡಾನ್‍ಗಳಿಂದ ಹೊರಬರುವ ಜನಪ್ರವಾಹ ಒಂದು ಕಡೆಯಾದರೆ, ದೇಶಗಳ ಒಳಗಡೆಯೇ ಸೃಷ್ಟಿಯಾಗುವ ನಿರಾಶ್ರಿತ ಗುಂಪುಗಳು ಇನ್ನೊಂದು ಕಡೆ. ಗುಜರಾತ್‍ನಲ್ಲಿ, ಮುಝಫ್ಫರ್ ನಗರ್, ಭಾಗಲ್ಪುರ್, ಕಾಶ್ಮೀರ ಮತ್ತಿತರ ಪ್ರದೇಶಗಳಲ್ಲಿ ನಡೆದ ಗಲಭೆಗಳಿಂದ ನಿರಾಶ್ರಿತರಾದವರು ದೇಶದ ಇನ್ನೆಲ್ಲೋ  ಅತ್ಯಂತ ದಾರುಣವಾಗಿ ಬದುಕುತ್ತಿದ್ದಾರೆ. ಇವರಿಗೆ ಪೌರತ್ವದ ಸಮಸ್ಯೆ ಇಲ್ಲದೇ ಇರಬಹುದು. ಆದರೆ ತಾವು ಕೂಡಿಟ್ಟಿದ್ದ ಹಣ, ಕಟ್ಟಿಕೊಂಡಿದ್ದ ಮನೆ, ವ್ಯಾಪಾರ, ಉದ್ಯೋಗ, ಕೃಷಿ ಇತ್ಯಾದಿ ಎಲ್ಲವನ್ನೂ ಕೈ ಬಿಟ್ಟು ಇನ್ನೆಲ್ಲೋ ಗುರುತು-ಪರಿಚಯ ಇಲ್ಲದ ಪ್ರದೇಶದಲ್ಲಿ ಹೊಸದೇ ಆದ ಬದುಕನ್ನು ಕಟ್ಟಿಕೊಳ್ಳುವುದೆಂದರೆ, ಅದು ಅತ್ಯಂತ ದೊಡ್ಡ ಸವಾಲು. ಹಳತು ಮತ್ತೆ ಮತ್ತೆ ಕಣ್ಣೆದುರು ಬರುತ್ತಲೇ ಇರುತ್ತದೆ. ಕಳಕೊಂಡ ತನ್ನವರು ನೆನಪಿಗೆ ಬಂದು ರಾತ್ರಿಯನ್ನು ನಿದ್ದೆಯಿಲ್ಲದೇ ಕಳಕೊಳ್ಳಬೇಕಾಗುತ್ತದೆ. ಮಕ್ಕಳ ಭವಿಷ್ಯವನ್ನು ಹೊಸದಾಗಿ ಕಟ್ಟುವ ಸವಾಲು ಎದುರಾಗುತ್ತದೆ. ಅಂದಹಾಗೆ,

     ಸುನಾಮಿಯಿಂದಲೋ ಪ್ರವಾಹದಿಂದಲೋ ಸಂತ್ರಸ್ತರಾದವರಂತೆ ಇವರಲ್ಲ. ಇವರೊಂದಿಗೆ ಮಾನವ ನಿರ್ಮಿತ ಕ್ರೌರ್ಯವೊಂದರ ಸ್ಮರಣೆ ಸದಾ ಜೊತೆಗಿರುತ್ತದೆ. ಮರಳಿ ಊರಿಗೆ ಹೋಗಲಾಗದ ಸ್ಥಿತಿಯೊಂದು ನೆಲೆಸಿರುತ್ತದೆ. ನೆರವಿನ ನಿರೀಕ್ಷೆಯೂ ಕಡಿಮೆ. ಕಳಕೊಂಡ ದಾಖಲೆಗಳನ್ನು ಮರಳಿ ಪಡೆದುಕೊಳ್ಳುವ ದಾರಿಯೂ ಸುಲಭದ್ದಲ್ಲ. ಇವರಿಗೆ ಹೋಲಿಸಿದರೆ ಪ್ರಕೃತಿ ವಿಕೋಪದ ಸಂತ್ರಸ್ತರು ಹೆಚ್ಚು ಸುಖಿಗಳು. ಅವರನ್ನು ವ್ಯವಸ್ಥೆಯೇ ಪೋಷಿಸುತ್ತದೆ. ನೆರವೂ ಹರಿದು ಬರುತ್ತದೆ. ಊರು ತೊರೆಯಬೇಕಾದ ಸಂಕಷ್ಟವೂ ಅವರಿಗಿರುವುದಿಲ್ಲ. ಆದ್ದರಿಂದಲೇ,

      ಮ್ಯಾನ್ಮಾರ್ ನ ಸೇನೆಗೆ ಒಪ್ಪಿಸಲಾದ 7 ಯುವಕರು ಕಸಾಯಿಖಾನೆಗೆ ಸಾಗಿಸಲಾದ ಜಾನುವಾರುಗಳಂತೆ ಕಾಣಿಸುತ್ತಾರೆ.



Wednesday, October 3, 2018

ವಿವಾಹೇತರ ಸಂಬಂಧದ ಸರಿ-ತಪ್ಪುಗಳ ಆಚೆ..



     ಬಯಾಲಜಿ, ಅಂಟೋಲಜಿ ಮತ್ತು ಝುವಾಲಜಿಯಲ್ಲಿ ಪ್ರೊಫೆಸರ್ ಆಗಿರುವ ಹಾಗೂ ಇಂಡಿಯಾನ ಯುನಿವರ್ಸಿಟಿಯಲ್ಲಿ ಲಿಂಗ ಸಂಶೋಧನಾ ವಿಭಾಗವನ್ನು ಸ್ಥಾಪಿಸಿರುವ ಲೈಂಗಿಕ ತಜ್ಞ ಅಮೇರಿಕದ ಅಲ್ಫ್ರೆಡ್ ಕಿನ್ಸೆ ಅವರು ದಶಕಗಳ ಹಿಂದೆ ಅಧ್ಯಯನ ವರದಿಯೊಂದನ್ನು ಬಿಡುಗಡೆಗೊಳಿಸಿದ್ದರು. ಅಮೇರಿಕದ ವಿವಾಹಿತ ದಂಪತಿಗಳ ಪೈಕಿ 50% ಪುರುಷರು ಮತ್ತು 26% ಮಹಿಳೆಯರು ಜೀವನದಲ್ಲಿ ಒಮ್ಮೆಯಾದರೂ ವಿವಾಹೇತರ ಲೈಂಗಿಕ ಸಂಬಂಧವನ್ನು ಅನುಭವಿಸಿದ್ದಾರೆ ಎಂದು ಅವರು ಆ ವರದಿಯಲ್ಲಿ ಹೇಳಿದ್ದರು. ಲೈಂಗಿಕ ಕ್ಷೇತ್ರದಲ್ಲಿ ಸಂಶೋಧಕನಾಗಿ ಮುಂಚೂಣಿಯಲ್ಲಿ ಗುರುತಿಸಿ ಕೊಂಡಿರುವ ಅವರ ಎರಡು ಕೃತಿಗಳು- ಸೆಕ್ಷುವಲ್ ಬಿಹೇವಿಯರ್ ಇನ್ ದ ಹ್ಯೂಮನ್ ಮೇಲ್ ಮತ್ತು ಸೆಕ್ಷುವಲ್ ಬಿಹೇವಿಯರ್ ಇನ್ ದ ಹ್ಯೂಮನ್ ಫಿಮೇಲ್- ಬೆಸ್ಟ್ ಸೆಲ್ಲರ್ ಕೃತಿಗಳಾಗಿ ಜನಪ್ರಿಯವಾಗಿದ್ದುವು. ಹಾಗಂತ,

    ಇವರು ಈ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸುವಾಗ, ಭಾರತದಂತೆ, Adultery is not a crime (ಪರಸಂಗ ಅಪರಾಧ ಅಲ್ಲ) ಎಂದು ಇಡೀ ಅಮೇರಿಕಕ್ಕೆ ಅಮೇರಿಕವೇ ಘೋಷಿಸಿಕೊಂಡಿರಲಿಲ್ಲ. ಅಮೇರಿಕ ಸಂಯುಕ್ತ ಸಂಸ್ಥಾನವೆಂಬ ಅಮೇರಿಕದಲ್ಲಿ 50 ರಾಜ್ಯಗಳಿವೆ. ಈ ರಾಜ್ಯಗಳೆಲ್ಲ ಒಂದು ರೀತಿಯ ಸ್ವಾಯತ್ತ ಸ್ವಾತಂತ್ರ್ಯವನ್ನು ಅನುಭವಿಸುತ್ತಲೂ ಇವೆ. ಅಲ್ಲಿ, ಒಂದು ರಾಜ್ಯದ ಕಾನೂನಿಗೆ ವಿರುದ್ಧವಾದ ಕಾನೂನು ಇನ್ನೊಂದು ರಾಜ್ಯದಲ್ಲಿ ಇವತ್ತಿಗೂ ಚಲಾವಣೆಯಲ್ಲಿ ಇದೆ. ಅಮೇರಿಕದ 20 ರಾಜ್ಯಗಳಲ್ಲಿ ಪರಸಂಗವು ಇವತ್ತೂ ಅಪರಾಧವೇ. ಆದರೆ, ಅಮೇರಿಕನ್ ಜನತೆ ಪರಸಂಗಕ್ಕೆ ಹೇಗೆ ಒಗ್ಗಿ ಹೋಗಿವೆಯೆಂದರೆ, ಪರಸಂಗದ ವಿರುದ್ಧ ಬಗ್ಗೆ ದೂರು ಕೊಡುವವರೇ ಕಡಿಮೆ. ದಕ್ಷಿಣ ಕರೋಲಿನಾ ರಾಜ್ಯದ ರಾಜ್ಯಪಾಲ ಮಾರ್ಕ್ ಸ್ಟಾನ್‍ಫೋರ್ಡ್ ಅವರು 2009ರಲ್ಲಿ ತನ್ನ ವಿವಾಹೇತರ ಸಂಬಂಧವನ್ನು ಬಹಿರಂಗವಾಗಿಯೇ ಒಪ್ಪಿಕೊಂಡರು. ಆ ರಾಜ್ಯದ ಕಾನೂನಿನ ಪ್ರಕಾರ ಇಂಥ ಸಂಬಂಧ ಸ್ವೀಕೃತವಲ್ಲ. ಆದರೆ, ಅವರ ಆ ಒಪ್ಪಿಗೆಗೇ ಆ ಪ್ರಕರಣ ಮುಗಿಯಿತೇ ಹೊರತು ಅದು ಕೋರ್ಟು ವಿಚಾರಣೆಯ ಹಂತಕ್ಕೆ ಬರಲೇ ಇಲ್ಲ. ಕಿನ್ಸೆ ಅವರ ಅಧ್ಯಯನ ವರದಿಯ ಬಳಿಕವಂತೂ ಅನೇಕಾರು ವರದಿಗಳು ಅಮೇರಿಕದಲ್ಲಿ ಬಿಡುಗಡೆಗೊಳ್ಳುತ್ತಲೇ ಇವೆ. ಅಮೇರಿಕದ ವಿವಾಹಿತ ದಂಪತಿಗಳಲ್ಲಿ 85% ಮಹಿಳೆಯರು ತಮ್ಮ ಗಂಡಂದಿರನ್ನು ಮೋಸಗಾರರೆಂದು ಭಾವಿಸುತ್ತಿದ್ದಾರೆ ಮತ್ತು 50% ಪುರುಷರು ತಮ್ಮ ಪತ್ನಿಯರ ಬಗ್ಗೆ ಇಂಥದ್ದೇ ಭಾವನೆಯಲ್ಲಿದ್ದಾರೆಂದು ಕೌಟುಂಬಿಕ ಅಂಕಿ-ಅಂಶಗಳ ವೆಬ್‍ಸೈಟ್ ವರದಿಗಳು ಹೇಳುತ್ತಿವೆ. ವಿವಾಹ ವಿಚ್ಛೇದನಾ ಪ್ರಕರಣಗಳ ಪೈಕಿ 17% ವಿಚ್ಛೇದನಕ್ಕೆ ಪರಸಂಗವೇ ಕಾರಣವೆಂದೂ ವರದಿಗಳು ಹೇಳುತ್ತವೆ. ಅಮೇರಿಕದ ಯುವ ಸಮೂಹದಲ್ಲಿ ಪರಸಂಗ ಮತ್ತು ವ್ಯಭಿಚಾರ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂದೂ ಹೇಳಲಾಗುತ್ತಿದೆ. ಆದ್ದರಿಂದ,

ಪರಸಂಗವನ್ನು ಅಪರಾಧ ಮುಕ್ತಗೊಳಿಸಿದ ಸುಪ್ರೀಮ್ ಕೋರ್ಟಿನ ತೀರ್ಪಿಗೆ ಯಾರಾದರೂ ತಕರಾರು ವ್ಯಕ್ತಪಡಿಸಿದರೆ ಅದನ್ನು ಪುರಾತನ ಮನಃಸ್ಥಿತಿಯಾಗಿ ನೋಡಬೇಕಿಲ್ಲ.

ಸುಪ್ರೀಮ್ ಕೋರ್ಟಿನ ಮುಂದಿದ್ದುದು- ಪರ ಸಂಗಕ್ಕೆ ಸಂಬಂಧಿಸಿ ಪುರುಷನನ್ನು ಮಾತ್ರ ಅಪರಾಧಿಯನ್ನಾಗಿಸುವ 158 ವರ್ಷಗಳ ಪುರಾತನವಾದ ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್ 497ನ್ನು ಅನೂರ್ಜಿತಗೊಳಿಸಬೇಕು ಎಂಬ ಮನವಿ. ಈ ಮನವಿಗೂ ಒಂದು ಕಾರಣ ಇದೆ.

ವಿವಾಹಿತ ಮಹಿಳೆಯರ ಅನುಮತಿ ಪಡೆಯದೇ ಓರ್ವ ವ್ಯಕ್ತಿ ಆಕೆಯನ್ನು ಲೈಂಗಿಕವಾಗಿ ಬಳಸಿದರೆ, ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೆ ಆಕೆ ಶಿಕ್ಷಾರ್ಹಳಾಗುವುದಿಲ್ಲ. ಒಂದು ವೇಳೆ, ಆಕೆಯ ಅನುಮತಿ ಪಡೆದೇ ಓರ್ವ ದೇಹ ಸಂಬಂಧ ಬೆಳೆಸಿದರೂ ಆತ ಶಿಕ್ಷಾರ್ಹ ಅಪರಾಧಿಯಾಗುತ್ತಾನೆ. ಆದರೆ, ಆಕೆ ಅಲ್ಲ. ಇದು ಸೆಕ್ಷನ್ 497ರಲ್ಲಿ ಅಡಕವಾಗಿರುವ ಅಂಶ. ಇದೊಂದು ಅಸಮತೋಲನವುಳ್ಳ ಮತ್ತು ಹೆಣ್ಣು-ಗಂಡಿನ ನಡುವೆ ತಾರತಮ್ಯ ತೋರುವ ವಿಧಿ ಎಂಬುದು ಯಾರಿಗೇ ಆಗಲಿ ಬಾಹ್ಯನೋಟಕ್ಕೇ ಗೊತ್ತಾಗಿ ಬಿಡುತ್ತದೆ. ಒಂದೇ ಕೃತ್ಯಕ್ಕೆ ಬೇರೆ ಬೇರೆ ನಿರ್ಣಯಗಳೇಕೆ ಎಂದು ಮನವಿದಾರರು ಪ್ರಶ್ನಿಸಿದ್ದರು. ಕೋರ್ಟು ಇದನ್ನು ಒಪ್ಪಿಕೊಂಡಿತು ಮತ್ತು ಇಬ್ಬರನ್ನೂ ಅಪರಾಧ ಮುಕ್ತಗೊಳಿಸಿತು. ಇದೇ ವೇಳೆ,

ಇದೊಂದು ಸೂಕ್ಷ್ಮ  ತೀರ್ಪು ಅನ್ನುವುದರಲ್ಲಿ ಎರಡು ಮಾತಿಲ್ಲ. ಇಬ್ಬರನ್ನೂ ಅಪರಾಧ ಮುಕ್ತಗೊಳಿಸುವುದಕ್ಕಿಂತ ಇಬ್ಬರನ್ನೂ ಅಪರಾಧಿಗಳನ್ನಾಗಿಸಿಯೂ ಸಮಾನತೆ ಕಾಯ್ದುಕೊಳ್ಳಬಹುದಿತ್ತಲ್ಲವೇ ಎಂಬ ಜಿಜ್ಞಾಸೆಯೂ ಮುಗ್ಧವಲ್ಲ. ಹೀಗೆ ವಿವಾಹಬಾಹಿರ ಸಂಬಂಧವನ್ನು ಸಿಂಧುಗೊಳಿಸುವುದರಿಂದ ಉದ್ಭವವಾಗಬಹುದಾದ ಕೌಟುಂಬಿಕ, ಸಾಮಾಜಿಕ ಮತ್ತು ಭಾವನಾತ್ಮಕವಾದ ಸಮಸ್ಯೆಗಳ ಕುರಿತಾಗಿ ಕೋರ್ಟಿನ ನಿಲುವು ಏನು, ಅದು ಹೇಗೆ ಈ ಸಮಸ್ಯೆಗಳನ್ನು ನಿಭಾಯಿಸಬಯಸಿದೆ ಎಂಬ ಪ್ರಶ್ನೆಗೂ ಸದ್ಯ ಉತ್ತರ ಸಿಕ್ಕಿಲ್ಲ. ಕಾಗೆಯ ಗೂಡಿನಲ್ಲಿ ಕೋಗಿಲೆಯೊಂದು ಮೊಟ್ಟೆ ಇಟ್ಟಂತಹ ಪ್ರಕೃತಿ ಸಹಜ ಪ್ರಕರಣ ಇದಲ್ಲ. ಈ ವಿವಾಹೇತರ ಸಂಬಂಧ ಭಾವನಾತ್ಮಕವಾದುದು. ವಿಶ್ವಾಸದ್ರೋಹವಾಗಿ ಪರಿಗಣಿತವಾಗುವಂಥದ್ದು. ಕಾನೂನು ಪ್ರಕಾರ ಶಿಕ್ಷೆ ಇಲ್ಲದಿದ್ದರೂ ಗಂಡು ಮತ್ತು ಹೆಣ್ಣು ಇದರ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಬೇಕಾದಂಥದ್ದು. ಇಂಥ ಸಂಬಂಧ ಪತಿ-ಪತ್ನಿಯರ ನಡುವೆ ಹುಟ್ಟು ಹಾಕುವ ಮಾನಸಿಕ ಒತ್ತಡವೂ ನಿರ್ಲಕ್ಷಿಸುವಂಥದ್ದಲ್ಲ. ಹುಟ್ಟಿದ ಮಗುವಿನ ತಂದೆ ಯಾರು ಅನ್ನುವ ಪ್ರಶ್ನೆಯ ಹುಟ್ಟಿಗೂ ಈ ತೀರ್ಪು ಕಾರಣವಾಗಬಹುದು. ನಿಜವಾಗಿ,

ಈಗಾಗಲೇ ಇಂಥ ಸಮಸ್ಯೆ ಯುರೋಪಿಯನ್ ರಾಷ್ಟ್ರಗಳಲ್ಲಿ ದೊಡ್ಡ ಮಟ್ಟದ ತಲೆನೋವಿಗೂ ಕಾರಣವಾಗಿದೆ. ‘ಪರಸಂಗ ಅಪರಾಧವಲ್ಲ’ ಅನ್ನುವ ರಾಷ್ಟ್ರಗಳಾದ ಇಟಲಿ, ಮಾಲ್ಟಾ, ಫ್ರಾನ್ಸ್, ಸ್ಪೈನ್, ಪೋರ್ಚುಗಲ್, ಗ್ರೀಸ್, ಬೆಲ್ಜಿಯಂ, ಸ್ವಿಟ್ಜರ್ಲೆಂಡ್, ಆಸ್ಟ್ರಿಯ, ನಾರ್ವೆ, ಬ್ರೆಝಿಲ್, ಅರ್ಜಂಟೀನ, ನಿಕಾರಾಗ್ವ, ಚಿಲಿ, ಬ್ರಿಟನ್, ಅಮೇರಿಕ ಸಹಿತ ಅನೇಕ ರಾಷ್ಟ್ರಗಳು ಹೊಸ ಹೊಸ ಸಮಸ್ಯೆಗಳನ್ನು ಇವತ್ತು ಕೊರಳಿಗೆ ಹಾಕಿಕೊಂಡಿವೆ. ಇದರಲ್ಲಿ ಬಹುದೊಡ್ಡ ಸಮಸ್ಯೆ ವಿಚ್ಛೇದನದ್ದು. ಒಂದುಕಡೆ, ಹೆಣ್ಣು ಮತ್ತು ಗಂಡಿನ ನಡುವೆ ಲೈಂಗಿಕ ಸಂಬಂಧವನ್ನು ಹೊಂದಲು ಇರುವ ಪರವಾನಿಗೆಯಾಗಿ ಮದುವೆಯನ್ನು ಪರಿಗಣಿಸಲಾಗುತ್ತದೆ. ಧಾರ್ಮಿಕವಾಗಿಯೂ ಪರಂಪರಾಗತ ನಂಬಿಕೆಯಾಗಿಯೂ ಇದು ಅಸ್ತಿತ್ವದಲ್ಲಿದೆ. ಋಗ್ವೇದದ 4.5.5ನೇ ವಚನವು ಪರಸಂಗವನ್ನು ಅಪರಾಧವೆಂದು ಸಾರುತ್ತದೆ. ಬೌದ್ಧ ಧರ್ಮದ ಮೇಲೆ ಅಧ್ಯಯನ ನಡೆಸಿರುವ ವೆಂಡಿ ಡೊನಿಗರ್ ಅವರು, ಬುದ್ಧ ಧರ್ಮದಲ್ಲಿ ಪರಸಂಗವು ಪಾಪಕರ ಎಂದು ಬರೆದಿದ್ದಾರೆ. ಕ್ರಿಸ್ತಪೂರ್ವದ ಹಮ್ಮುರಾಬಿ ಶಾಸನದಲ್ಲಿ, ಮೆಸಪಟೋಮಿಯ- ಬ್ಯಾಬಿಲೋನಿಯನ್ ಕಾನೂನು, ಹರಪ್ಪ-ಮೊಹೆಂಜೋದಾರೋ ಕಾಲದಲ್ಲೂ ಪರಸಂಗವನ್ನು ಶಿಕ್ಷಾರ್ಹವೆಂದೇ ಪರಿಗಣಿಸಲಾಗಿತ್ತು. ಇಸ್ಲಾಮ್, ಕ್ರೈಸ್ತ ಮತ್ತು ಯಹೂದಿ ಧರ್ಮಗಳೂ ವಿವಾಹೇತರ ಸಂಬಂಧವನ್ನು ಅಪರಾಧವೆಂದೇ ಪರಿಗಣಿಸುತ್ತವೆ. ಅಲ್ಲದೇ, ಹೆಣ್ಣು-ಗಂಡು ದೈಹಿಕ ಸಂಬಂಧವನ್ನು ಹೊಂದುವುದಕ್ಕೆ ವಿವಾಹವೇ ರುಜುಮಾರ್ಗ ಎಂಬ ಬಲವಾದ ವಿಶ್ವಾಸ ಇವತ್ತೂ ಇದೆ. ಆದರೆ, ಸುಪ್ರೀಮ್ ಕೋರ್ಟಿನ ತೀರ್ಪು ಈ ನಂಬಿಕೆಯ ಬುಡವನ್ನೇ ಅಲುಗಾಡಿಸುತ್ತದೆ. ಮಾತ್ರವಲ್ಲ, ಗೊಂದಲವನ್ನೂ ಹುಟ್ಟು ಹಾಕುತ್ತದೆ. ಒಂದುವೇಳೆ, ವಿವಾಹದ ಆಚೆಗೆ ಗಂಡು-ಹೆಣ್ಣು ತನ್ನಿಷ್ಟದವರೊಂದಿಗೆ ದೈಹಿಕ ಸಂಬಂಧ ಹೊಂದುವುದು ಸಮ್ಮತ ಎಂದಾದರೆ, ವಿಚ್ಛೇದನಕ್ಕೆ ಈ ಸಂಬಂಧವನ್ನು ಕಾರಣವಾಗಿ ಕೊಡಬಹುದೇ? ಸಮ್ಮತಾರ್ಹವಾದ ಸಂಬಂಧವೊಂದನ್ನು ವಿಚ್ಛೇದನಕ್ಕೆ ಅರ್ಹ ಕಾರಣವಾಗಿ ಪರಿಗಣಿಸಲಾಗುತ್ತದೆಯೇ? ಪತಿಯ ಅಥವಾ ಪತ್ನಿಯ ವಿವಾಹೇತರ ಸಂಬಂಧವನ್ನು ಕಾರಣವಾಗಿ ಕೊಟ್ಟುಕೊಂಡು ಸಂಬಂಧಿತರು ವಿಚ್ಛೇದನಕ್ಕೆ ಮನವಿ ಸಲ್ಲಿಸಬಹುದೇ? ಹಾಗೆ ಮಾಡಿದರೆ ಕೋರ್ಟು ತಪ್ಪಲ್ಲ ಎಂದು ಹೇಳಿದ ಕೃತ್ಯವನ್ನು ತಪ್ಪು ಎಂದು ಪತಿ-ಪತ್ನಿ ಕೋರ್ಟಿನ ಮುಂದೆ ವಾದಿಸಿದಂತಾಗುವುದಿಲ್ಲವೇ? ಅಥವಾ ವಿವಾಹವನ್ನು ಹೆಣ್ಣು-ಗಂಡಿನ ದೈಹಿಕ ಸಂಬಂಧಕ್ಕೆ ಇರುವ ಒಪ್ಪಿಗೆಯಾಗಿ ಸ್ವೀಕರಿಸುವುದಾದರೆ ವಿವಾಹೇತರ ಸಂಬಂಧವು ಅನೈತಿಕವೇ ಆಗಬೇಕಲ್ಲವೇ? ಬಹುಶಃ,

ಪರಸಂಗ ಅಪರಾಧವಲ್ಲ ಎಂದು ತೀರ್ಪು ನೀಡಿದ ಐವರು ನ್ಯಾಯಾಧೀಶರ ಪೀಠದಲ್ಲಿದ್ದ ಇಂದೂ ಮಲ್ಹೋತ್ರರನ್ನು ಇಂಥದ್ದೊಂದು  ಪ್ರಶ್ನೆ ಕಾಡಿರಬೇಕು. ಆದ್ದರಿಂದಲೇ ಅವರು ಪರಸಂಗವು ನೈತಿಕವಾಗಿ ತಪ್ಪು ಎಂದು ಅಭಿಪ್ರಾಯಪಟ್ಟರು.

ದೀಪಕ್ ಮಿಶ್ರಾ
ಅಬ್ದುಲ್ ನಝೀರ್
ಡಿ.ವೈ. ಚಂದ್ರಚೂಡ್
ಇವರೆಲ್ಲ ಬೇರೆ ಬೇರೆ ಸಂದರ್ಭಗಳಲ್ಲಿ ಭಿನ್ನ ನಿಲುವುಗಳನ್ನು ವ್ಯಕ್ತಪಡಿಸಿದವರೇ. ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಎಲ್ಲಾ  ವಯೋಮಾನದ ಮಹಿಳೆಯರು ಪ್ರವೇಶಿಸುವುದು ಸರಿಯೋ ತಪ್ಪೋ ಎಂಬ ವಿಷಯದ ಮೇಲಿನ ತೀರ್ಪಿನಲ್ಲಿ ಇಂದೂ ಮಲ್ಹೋತ್ರ ಇತರೆಲ್ಲ ನ್ಯಾಯಾಧೀಶರಿಗಿಂತ ಭಿನ್ನ ನಿಲುವನ್ನು ತಾಳಿದರು. ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಡಿ.ವೈ. ಚಂದ್ರಚೂಡ್, ಎ.ಎಂ. ಖಾನ್ವಿಲ್ಕರ್ ಅವರು ಏಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ, ನ್ಯಾಯಮೂರ್ತಿ ಇಂದೂ ಮಲ್ಹೋತ್ರ ಅವರು ಪರಂಪರೆಯನ್ನು ಕಾಯ್ದುಕೊಳ್ಳಬೇಕು ಎಂದು ವಾದಿಸಿದರು. ಹೆಣ್ಣಿನ ಮೇಲೆ ಶಬರಿಮಲೆಯಲ್ಲಿ ಯಾವ ನಿರ್ಬಂಧವನ್ನು ಹೇರಲಾಗಿದೆಯೋ ಅದನ್ನು ಗೌರವಿಸಬೇಕು ಮತ್ತು ಧಾರ್ಮಿಕ ವಿಷಯದಲ್ಲಿ ಕೋರ್ಟು ಮಧ್ಯ ಪ್ರವೇಶಿಸುವುದು ಉಚಿತವಲ್ಲ ಎಂಬ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಆಧಾರ್ ಕಾರ್ಡ್‍ನ ವಿಷಯದಲ್ಲಿ ದೀಪಕ್ ಮಿಶ್ರಾ ನೇತೃತ್ವದ ಪಂಚಪೀಠದ ಸದಸ್ಯರಲ್ಲಿ ಒಬ್ಬರಾಗಿದ್ದ ಡಿ.ವೈ. ಚಂದ್ರಚೂಡ್ ಅವರು ಭಿನ್ನ ಧ್ವನಿ ಎತ್ತಿದ್ದರು. ಉಳಿದ ನಾಲ್ಕು ಮಂದಿ ಆಧಾರ್‍ ನ  ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದರೆ, ಚಂದ್ರಚೂಡ್ ಆಕ್ಷೇಪಿಸಿದರು. ಈ ಹಿಂದೆ ತ್ರಿವಳಿ ತಲಾಕ್‍ನ ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆ ಎದುರಾದಾಗಲೂ ಇಂಥದ್ದೊಂದು  ಸನ್ನಿವೇಶ ಎದುರಾಗಿತ್ತು. ಐವರು ನ್ಯಾಯಾಧೀಶರ ಪೀಠದಲ್ಲಿದ್ದ ದೀಪಕ್ ಮಿಶ್ರ ಮತ್ತು ನಝೀರ್ ಅಹ್ಮದ್ ಅವರು ತ್ರಿವಳಿ ತಲಾಕನ್ನು ಅಸಾಂವಿಧಾನಿಕ ಎಂದು ಕರೆಯಲು ನಿರಾಕರಿಸಿದರು. ಆದರೆ ಉಳಿದ ಮೂವರ ಅಭಿಪ್ರಾಯಗಳು ಇದಕ್ಕೆ ವಿರುದ್ಧವಾಗಿದ್ದುದರಿಂದ ತ್ರಿವಳಿ ತಲಾಕನ್ನು ಅಸಾಂವಿಧಾನಿಕವೆಂದು ಘೋಷಿಸಲಾಯಿತು. ಇಂಥದ್ದು ಈ ಹಿಂದೆಯೂ ನಡೆದಿದೆ. ಇದರರ್ಥ,

ಬಹುಮತದ ತೀರ್ಪುಗಳಲ್ಲೂ ಭಿನ್ನಮತಗಳಿವೆ. ತ್ರಿವಳಿ ತಲಾಕ್‍ನ ಸಿಂಧುತ್ವದ ವಿಷಯದಲ್ಲಿ, ಶಬರಿಮಲೆಗೆ ಮಹಿಳಾ ಪ್ರವೇಶ ನಿರ್ಬಂಧದ ವಿಷಯದಲ್ಲಿ, ಪರಸಂಗದ ವಿಷಯದಲ್ಲಿ, ಬೊಕ್ಕಸದ ಕೋಟ್ಯಂತರ ರೂಪಾಯಿಯನ್ನು ಬರಿದು ಮಾಡಿದ ಆಧಾರ್ ಕಾರ್ಡ್‍ನಂಥ ವಿಷಯದಲ್ಲೂ ಉನ್ನತ ನ್ಯಾಯಾಧೀಶರ ನಡುವೆಯೇ ಭಿನ್ನಮತಗಳಿವೆ. ಅಂದರೆ,

ನ್ಯಾಯಾಂಗದ ಯಾವುದೇ ತೀರ್ಪು ಪರಮ ಪವಿತ್ರ ಅಲ್ಲ. ಭಿನ್ನಮತ ವ್ಯಕ್ತಪಡಿಸಬಹುದಾದ ಅಥವಾ ಮಾನವ ಸಹಜ ದೌರ್ಬಲ್ಯಗಳು ನುಸುಳಿರಬಹುದಾದ ಒಂದು ಅದು; ಅಷ್ಟೇ. ಭಾರತೀಯ ದಂಡ ಸಂಹಿತೆಯ 497ನೇ ವಿಧಿಯ ಸಿಂಧುತ್ವವನ್ನು 1985ರಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರಾದ ವೈ.ವಿ. ಚಂದ್ರಚೂಡ್ ಎತ್ತಿ ಹಿಡಿದಿದ್ದರಲ್ಲದೇ, ಪರಸಂಗವನ್ನು ಅಪರಾಧ ಎಂದು ಘೋಷಿಸಿದ್ದರು. ಅದಾದ 33 ವರ್ಷಗಳ ಬಳಿಕ ಅದೇ ಸುಪ್ರೀಮ್ ಕೋರ್ಟ್‍ನಲ್ಲಿ ಅವರದೇ ಮಗ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪರಸಂಗ ಅಪರಾಧವಲ್ಲ ಎಂದು ತೀರ್ಪಿತ್ತರು. ಆ ಮೂಲಕ ಸೆಕ್ಷನ್ 497ನ್ನು ಅನೂರ್ಜಿತಗೊಳಿಸಿದರು. ಖಾಸಗಿತನದ ಹಕ್ಕಿನ ಕುರಿತೂ ಈ ಅಪ್ಪ ಮತ್ತು ಮಗ ತದ್ವಿರುದ್ಧ ನಿಲುವನ್ನು ತಾಳಿದರು. ಈ ವಿಷಯದಲ್ಲಿ ಅಪ್ಪ ಈ ಹಿಂದೆ ಕೊಟ್ಟಿದ್ದ ತೀರ್ಪಿನ ವಿರುದ್ಧ ಮಗ ಇತ್ತೀಚೆಗೆ ತೀರ್ಪು ಕೊಟ್ಟರು. ನಮಾಝ ಮಾಡುವುದಕ್ಕೆ ಮಸೀದಿಯೇ ಬೇಕೆಂದಿಲ್ಲ ಎಂಬ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 1994ರಲ್ಲಿ ನೀಡಿತ್ತು. ಅದಾಗಿ 24 ವರ್ಷಗಳ ಬಳಿಕ ಕಳೆದವಾರ ಈ ಬಗ್ಗೆ ಸುಪ್ರೀಮ್ ಕೋರ್ಟ್‍ನಲ್ಲಿ ಅದರ ಮರು ಅವಲೋಕನ ನಡೆಯಿತು. ಒಂದು ರೀತಿಯಲ್ಲಿ,

ಯಾವ ತೀರ್ಪೂ ಶಾಶ್ವತ ಅಲ್ಲ. ಅಂತಿಮವೂ ಅಲ್ಲ. ಅಲ್ಪಾಯುಷಿ ತೀರ್ಪುಗಳ ಮೇಲೆ ಸಂಭ್ರಮ ಪಡುವ ಅಥವಾ ದುಃಖಿಸುವ ಅಗತ್ಯವೂ ಇಲ್ಲ. ಸಂವಿಧಾನವನ್ನು ರಚಿಸಿದವರೂ ಮನುಷ್ಯರೇ. ಅದನ್ನು ಆಧಾರವಾಗಿಸಿಕೊಂಡು ತೀರ್ಪು ನೀಡುವ ನ್ಯಾಯಾಧೀಶರೂ ಮನುಷ್ಯರೇ. ಹಳೆಯ ತೀರ್ಪನ್ನು ತಪ್ಪು ಎಂದು ಹೇಳಿ ಹೊಸತನ್ನು ಅದರ ಮೇಲೆ ಹೇರುವವರೂ ಮನುಷ್ಯರೇ. ಆದ್ದರಿಂದ, ಇಂಥ ತೀರ್ಪುಗಳ ಮೇಲೆ ವ್ಯಕ್ತವಾಗುವ ಪರ ಮತ್ತು ವಿರುದ್ಧ ಅಭಿಪ್ರಾಯಗಳನ್ನು ಹೀಯಾಳಿಸಬೇಕಿಲ್ಲ. ಉನ್ನತ ನ್ಯಾಯಾಧೀಶರ ನಡುವೆಯೇ ಭಿನ್ನಮತ ಇರುವಾಗ, ಜನಸಾಮಾನ್ಯರಲ್ಲಿ ಪರ-ವಿರುದ್ಧ ಅಭಿಪ್ರಾಯ ಇರುವುದು ಅಸಹಜವೂ ಅಲ್ಲ, ಅಸೂಕ್ಷ್ಮ ವೂ ಅಲ್ಲ. ಪರಸಂಗವನ್ನು ಅಪರಾಧ ಮುಕ್ತಗೊಳಿಸಿದ ಬಗ್ಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ನಾವು ಈ ನೆಲೆಯಲ್ಲೇ  ಪರಿಗಣಿಸಬೇಕು. ಪ್ರಜಾತಂತ್ರವೆಂದರೆ ಇದುವೇ.