Tuesday, December 31, 2019

ಸಮುದಾಯ ಬಹಿಷ್ಕರಿಸಬೇಕಾದದ್ದು ಎನ್‍ ಆರ್ ಸಿಯನ್ನೋ ಅಲ್ಲ, ದಾಖಲೆ ಪತ್ರಗಳನ್ನೋ?



1. ದಾಖಲೆ ಪತ್ರಗಳನ್ನು ಸರಿಪಡಿಸಿಟ್ಟುಕೊಳ್ಳುವಂತೆ ಮುಸ್ಲಿಮ್ ಸಮುದಾಯದಲ್ಲಿ ಈಗಿಂದೀಗಲೇ ಜಾಗೃತಿ ಅಭಿಯಾನವೊಂದು ಪ್ರಾರಂಭವಾಗಬೇಕು.
2. ಮುಸ್ಲಿಮರು ಎನ್‍ ಆರ್ ಸಿಯನ್ನು ಬಹಿಷ್ಕರಿಸಬೇಕು.
ಈ ಎರಡೂ ಅಭಿಪ್ರಾಯಗಳು ಮುಸ್ಲಿಮ್ ಸಮುದಾಯದಲ್ಲಿ ಸದ್ಯ ಚರ್ಚೆಯಲ್ಲಿದೆ. ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಮಸೂದೆಯು ಈಗಾಗಲೇ ಕಾನೂನಾಗಿ ಪರಿವರ್ತನೆಯಾಗಿದೆ. ಈಗದು CAB ಅಲ್ಲ CAA (Citizen Amendment Act). ಇನ್ನೊಂದು ಎನ್‍ ಆರ್ ಸಿ (ರಾಷ್ಟ್ರೀಯ ಪೌರತ್ವ ನೋಂದಣಿ). ಇವೆರಡನ್ನೂ ಜೊತೆಜೊತೆಯಾಗಿಯೇ ಜಾರಿಗೆ ತರುವ ಉದ್ದೇಶವನ್ನು ನೇರವಾಗಿಯೋ ಪರೋಕ್ಷವಾಗಿಯೋ ಕೇಂದ್ರ ಸರಕಾರ ಈಗಾಗಲೇ ವ್ಯಕ್ತಪಡಿಸಿದೆ. 2014 ಡಿಸೆಂಬರ್ 31ರ ಒಳಗಡೆ ಭಾರತದಲ್ಲಿ ವಾಸಿಸಿದ ದಾಖಲೆಯನ್ನು ಸಲ್ಲಿಸುವ ಮುಸ್ಲಿಮೇತರ ಎಲ್ಲ ಧರ್ಮೀಯರಿಗೂ ಪೌರತ್ವ ತಿದ್ದುಪಡಿ ಕಾನೂನಿನ ಪ್ರಕಾರ ಭಾರತೀಯ ಪೌರತ್ವ ಲಭ್ಯವಾಗಲಿದೆ. ಆದರೆ, ಮುಸ್ಲಿಮರಿಗೆ ಈ ಅವಕಾಶ ಇಲ್ಲ. ಪಾಕ್, ಬಾಂಗ್ಲಾ ಮತ್ತು ಅಫಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮರಿಗೆ ಭಾರತೀಯ ನಾಗರಿಕತೆ ನಿರಾಕರಿಸುವುದು ಮತ್ತು ಧಾರ್ಮಿಕ ದೌರ್ಜನ್ಯದಿಂದಾಗಿ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಪೌರತ್ವ ಒದಗಿಸುವುದು ಪೌರತ್ವ ಕಾನೂನಿನ ಉದ್ದೇಶವಾಗಿದೆಯೆಂದು ಕೇಂದ್ರ ಸರಕಾರ ಹೇಳುತ್ತಿದ್ದರೂ ಅಲ್ಲೂ ಗೊಂದಲಗಳಿವೆ. ಮೇಲಿನ ಮೂರೂ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಲ್ಲಿ ಧಾರ್ಮಿಕ ದೌರ್ಜನ್ಯದಿಂದ ಬಂದವರೆಷ್ಟು ಮತ್ತು ಉದ್ಯೋಗವನ್ನರಸಿಕೊಂಡು ಬಂದವರೆಷ್ಟು ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಅನ್ನುವ ಪ್ರಶ್ನೆಗೆ ಕೇಂದ್ರ ಸರಕಾರ ಈವರೆಗೂ ಉತ್ತರಿಸಿಲ್ಲ. ಅದು ಸುಲಭವೂ ಅಲ್ಲ. ನಿಜವಾಗಿ, ಧಾರ್ಮಿಕ ದೌರ್ಜನ್ಯ ಎಂಬುದು ಅತ್ಯಂತ ಜಾಣತನದಿಂದ ಆಯ್ಕೆ ಮಾಡಿದ ಪದ. ಈ ಮೂಲಕ ಒಂದೇ ಕಲ್ಲಿನಿಂದ ಎರಡು ಹಣ್ಣುಗಳನ್ನು ಉರುಳಿಸುವ ಉದ್ದೇಶ ಕೇಂದ್ರ ಸರಕಾರಕ್ಕಿದೆ.
1. ನೆರೆಯ ಮೂರೂ ರಾಷ್ಟ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮುಸ್ಲಿಮೇತರರ ಮೇಲೆ ಧಾರ್ಮಿಕ ದೌರ್ಜನ್ಯವಾಗುತ್ತಿದೆ, ಆ ದೌರ್ಜನ್ಯವನ್ನು ತಡೆಯಲಾಗದೇ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮೇತರರು ಭಾರತಕ್ಕೆ ವಲಸೆ ಬಂದಿದ್ದಾರೆ.
2. ಇಸ್ಲಾಮಿಕ್ ರಾಷ್ಟ್ರಗಳೆಂದರೆ ಮುಸ್ಲಿಮೇತರರ ವಿರೋಧಿ. ಅಲ್ಲಿ ಮುಸ್ಲಿಮೇತರರ ಬದುಕು ಸುರಕ್ಷಿತವಲ್ಲ.
ಧಾರ್ಮಿಕ ದೌರ್ಜನ್ಯ ಎಂಬ ಪದವು ಈ ಎರಡೂ ಸಂದೇಶವನ್ನು ಸೂಚ್ಯವಾಗಿ ರವಾನಿಸುತ್ತದೆ ಮತ್ತು ದೇಶದ ನಾಗರಿಕರಲ್ಲಿ ಮುಸ್ಲಿಮ್ ವಿರೋಧಿ ಭಾವವೊಂದನ್ನು ಅದು ತಾನಾಗಿಯೇ ಸೃಷ್ಟಿಸುತ್ತದೆ. ನಿಜವಾಗಿ, ಇಂಥದ್ದೊಂದು ಧ್ರುವೀಕರಣ ವನ್ನು ಸಾಧಿಸುವುದೇ ಈ ಕಾನೂನಿನ ಮೊದಲ ಗುರಿ. ಇದು ಯಶಸ್ವಿಯಾದರೆ ಆ ಬಳಿಕ ವಲಸಿಗ ಮುಸ್ಲಿಮರಿಗೇಕೆ ಪೌರತ್ವ ಕೊಡುವುದಿಲ್ಲ ಎಂಬ ಪ್ರಶ್ನೆಯೇ ದೇಶದ್ರೋಹಿ ಎನಿಸಿಕೊಳ್ಳುತ್ತದೆ. ಮುಸ್ಲಿಮೇತರರನ್ನು ಹಿಂಸಿಸಿದ ನಾಡಿನಿಂದ ಬಂದವರಿಗೆ ಪೌರತ್ವ ಕೊಡುವುದು ತಪ್ಪು ಎಂದು ಮಾತ್ರವಲ್ಲ, ಹಾಗೆ ಭಾರತಕ್ಕೆ ಬಂದ ಮುಸ್ಲಿಮರೆಲ್ಲ ಮುಸ್ಲಿಮೇತರರಿಗೆ ಹಿಂಸೆ ಕೊಟ್ಟ ಅಪರಾಧಿಗಳು ಎಂಬ ಭಾವ ಹುಟ್ಟಿಕೊಳ್ಳುತ್ತದೆ. ಭಾರತಕ್ಕೆ ಬಂದವರಲ್ಲಿ ಮುಸ್ಲಿಮೇತರರನ್ನು ವಲಸಿಗರು ಎಂಬ ಅನುಕಂಪದ ಪದದಿಂದ ಗುರುತಿಸುವುದು ಮತ್ತು ಮುಸ್ಲಿಮರನ್ನು ಅಕ್ರಮ ನುಸುಳುಕೋರರು ಮತ್ತು ಉಗ್ರರು ಎಂಬ ರಕ್ತದೊತ್ತಡ ಏರಿಸುವ ಪದದಿಂದ ಕರೆಯುವುದೂ ನಡೆಯುತ್ತದೆ. ಮಾತ್ರವಲ್ಲ, ಕ್ರಮೇಣ ಭಾರತಕ್ಕೆ ಬಂದ ಮುಸ್ಲಿಮೇತರರನ್ನು- ಧಾರ್ಮಿಕ ದೌರ್ಜನ್ಯಕ್ಕಾಗಿ ಮತ್ತು ಉದ್ಯೋಗಕ್ಕಾಗಿ- ಎಂಬೆರಡು ವರ್ಗೀಕರಣವನ್ನು ಇದು ಅಳಿಸಿ ಹಾಕುತ್ತದಲ್ಲದೇ ಎಲ್ಲರನ್ನೂ ಧಾರ್ಮಿಕ ದೌರ್ಜನ್ಯದ ಸಂತ್ರಸ್ತರ ಪಟ್ಟಿಗೆ ಸೇರಿಸುತ್ತದೆ. ಸದ್ಯ ಈ ತಂತ್ರ ಬಹುತೇಕ ಯಶಸ್ವಿಯಾಗಿದೆ. ಮುಸ್ಲಿಮ್ ವಲಸಿಗರು ಮಾತ್ರ ಈಗ ಚರ್ಚೆಯಲ್ಲಿದ್ದಾರೆಯೇ ಹೊರತು ಭಾರತಕ್ಕೆ ಬಂದಿರುವ ಮುಸ್ಲಿಮೇತರರಲ್ಲಿ ನಿಜಕ್ಕೂ ಧಾರ್ಮಿಕ ದೌರ್ಜನ್ಯದಿಂದ ಬಂದವರೆಷ್ಟು ಎಂಬ ಬಗ್ಗೆ ಪ್ರಶ್ನೆ ಗಳೇ ಏಳುತ್ತಿಲ್ಲ. ಉದ್ಯೋಗವನ್ನರಸಿಕೊಂಡು ಬಂದವರನ್ನು ಹೇಗೆ ಪತ್ತೆ ಹಚ್ಚುತ್ತೀರಿ ಮತ್ತು ಅವರನ್ನು ಎಲ್ಲಿಗೆ ಕಳುಹಿಸುತ್ತೀರಿ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿಲ್ಲ. ನಿಜವಾಗಿ,
ಪಾಕ್, ಬಾಂಗ್ಲಾ ಮತ್ತು ಅಫಘಾನ್‍ಗಳಿಂದ ಭಾರತಕ್ಕೆ ಬಂದವರಲ್ಲಿ ಉದ್ಯೋಗವನ್ನು ಅರಸಿಕೊಂಡು ಬಂದಿರುವವರ ಸಂಖ್ಯೆಯೇ ಹೆಚ್ಚಿರುವುದು ಖಂಡಿತ. ಭಾರತಕ್ಕೆ ಹೋಲಿಸಿದರೆ ಪಾಕ್, ಬಾಂಗ್ಲಾ ಮತ್ತು ಅಫಘಾನ್‍ಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ರಾಷ್ಟ್ರಗಳು. ನೇಪಾಲ, ಮ್ಯಾನ್ಮಾರ್, ಲಂಕಾಗಳನ್ನೂ ಇವೇ ಸಾಲಿಗೆ ಸೇರಿಸಬಹುದು. ಅಂದಹಾಗೆ, ದುರ್ಬಲ ರಾಷ್ಟ್ರಗಳಿಂದ ಪ್ರಬಲ ರಾಷ್ಟ್ರಗಳಿಗೆ ವಲಸೆ ಹೋಗುವುದು ಇತಿಹಾಸದ ಅದ್ಭುತವೇನೂ ಅಲ್ಲ. ಇತ್ತೀಚೆಗೆ ಅಮೇರಿಕವು ತನ್ನ ಮೆಕ್ಸಿಕೋ ಗಡಿಯನ್ನು ಮುಚ್ಚುವುದಕ್ಕೆ ಮುಂದಾಯಿತು. ಇದಕ್ಕೆ ಕಾರಣ ವಲಸೆ. ಆರ್ಥಿಕವಾಗಿ ಹಿಂದುಳಿದಿರುವ ಮೆಕ್ಸಿಕೋ ದಿಂದ ಜನರು ನೆರೆಯ ಅಮೇರಿಕಕ್ಕೆ ಉದ್ಯೋಗವನ್ನರಸಿಕೊಂಡು ವಲಸೆ ಹೋಗುತ್ತಿದ್ದಾರೆ. ಹಾಗೆಯೇ, ಉದ್ಯೋಗವನ್ನರಸಿಕೊಂಡು ಅಮೇರಿಕ, ಬ್ರಿಟನ್, ಜರ್ಮನಿ, ಅರಬ್ ರಾಷ್ಟ್ರಗಳ ಸಹಿತ ಜಗತ್ತಿನೆಲ್ಲೆಡೆಗೆ ಭಾರತೀಯರು ಹೊರಟು ಹೋಗಿರುವುದು ಮತ್ತು ಇವರಲ್ಲಿ ಅಸಂಖ್ಯ ಮಂದಿ ಆಯಾ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಹಾಕಿ ಪೌರತ್ವ ಪಡೆದುಕೊಂಡಿರುವುದೂ ಇಂಥದ್ದೇ ಒಂದು ಪ್ರಕ್ರಿಯೆ. ಅಷ್ಟಕ್ಕೂ,
ಕೇಂದ್ರ ಸರಕಾರಕ್ಕೆ ಇವೆಲ್ಲ ಗೊತ್ತಿಲ್ಲ ಎಂದಲ್ಲ. ಗೊತ್ತಿದ್ದೇ ಅದು ಈ ಮಸೂದೆಯನ್ನು ಕಾನೂನಾಗಿಸಿದೆ. ಮಾತ್ರವಲ್ಲ, ಪೌರತ್ವ ರದ್ದಾಗುವವರ ಪಟ್ಟಿಯಲ್ಲಿ ಮುಸ್ಲಿಮರ ಹೆಸರು   ಮಾತ್ರ ಇರುವಂತೆ ನೋಡಿಕೊಂಡಿರುವುದರಲ್ಲೂ ಜಾಣತನವಿದೆ. ಅದು ಏನೆಂದರೆ,
ಬಿಜೆಪಿಗೂ ಮುಸ್ಲಿಮರಿಗೂ ನಡುವೆ ಸಂಬಂಧ ಅಷ್ಟಕ್ಕಷ್ಟೇ ತಾನೇ. ಅದು ಬಿಜೆಪಿಯನ್ನು ಬೆಂಬಲಿಸುವವರಿಗೂ ಬೆಂಬಲಿಸ ದವರಿಗೂ ಜೆನ್ನಾಗಿ ಗೊತ್ತಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ಅದು ರಾಜಕೀಯ ಮಾಡುತ್ತಲೂ ಇದೆ. ಮುಸ್ಲಿಮರನ್ನು ಗೋಳು ಹೊಯ್ದುಕೊಂಡಷ್ಟೂ ತನ್ನ ಮತಪೆಟ್ಟಿಗೆ ತುಂಬುತ್ತದೆ ಅನ್ನುವ ಮನೋಭಾವ ಅದರದು. ನಿಜವಾಗಿ, ಹಿಂದೂಗಳಿಗೆ ಭಾರತ ಬಿಟ್ಟು ಅನ್ಯ ದೇಶವಿಲ್ಲ ಎಂಬ ಕೇಂದ್ರ ಸರಕಾರದ ವಾದವು ಪ್ರಾಮಾಣಿಕವೇ ಆಗಿರುತ್ತಿದ್ದರೆ ಪಾಕ್, ಬಾಂಗ್ಲಾ, ಅಫಘಾನ್‍ನಿಂದ ಭಾರತಕ್ಕೆ ಬಂದವರ ಪೈಕಿ ಹಿಂದೂಗಳಿಗೆ ಮಾತ್ರ ಪೌರತ್ವವನ್ನು ಕೊಡಬೇಕಿತ್ತು. ಜೊತೆಗೇ ಫಾರ್ಸಿಗಳಿಗೂ. ಹಾಗಂತ, ಬೌದ್ಧ ಧರ್ಮವನ್ನೇ ಪಾಲಿಸುವ ಹಲವು ರಾಷ್ಟ್ರಗಳು ಭಾರತದ ಸುತ್ತ-ಮುತ್ತಲೇ ಇವೆ. ಥಾೈಲೆಂಡ್, ಮ್ಯಾನ್ಮಾರ್, ಭೂತಾನ್, ಲಂಕಾ, ಮಂಗೋಲಿಯಾ ಇತ್ಯಾದಿ ರಾಷ್ಟ್ರಗಳಲ್ಲಿ ಬೌದ್ಧರು ಬಹುಸಂಖ್ಯಾತರು. ಕ್ರೈಸ್ತರಿಗಂತೂ ಇಂಗ್ಲಂಡ್, ಗ್ರೀಸ್, ಐರ್ಲೆಂಡ್ ಸೇರಿದಂತೆ 15ರಿಂದ ಇಪ್ಪತ್ತರಷ್ಟು ಕ್ರೈಸ್ತ ಧರ್ಮ ಪಾಲನಾ ರಾಷ್ಟ್ರಗಳಿವೆ. ಹೀಗಿರುವಾಗ, ವಲಸೆ ಬಂದ ಬೌದ್ಧರಿಗೂ ಮತ್ತು ಕ್ರೈಸ್ತರಿಗೂ ಹೋಗುವುದಕ್ಕೆ ಬೇರೆ ರಾಷ್ಟ್ರಗಳಿವೆ ಎಂದು ಹೇಳುವುದನ್ನು ಬಿಟ್ಟು (ಇದು ಈ ಲೇಖಕನ ಬಯಕೆಯಲ್ಲ) ಅವರೆಲ್ಲರಿಗೂ ಭಾರತೀಯ ಪೌರತ್ವವನ್ನು ಕೊಡುವುದು ಮತ್ತು ಮುಸ್ಲಿಮರನ್ನು ಮಾತ್ರ ಅದರಿಂದ ಹೊರಗಿಡುವುದು ಅಕ್ಷಮ್ಯವೆನಿಸುತ್ತದೆ. ಒಂದುವೇಳೆ,
ವಲಸಿಗ ಹಿಂದೂಗಳಿಗೆ ಮಾತ್ರ ಪೌರತ್ವದ ಅವಕಾಶವನ್ನು ಕೊಟ್ಟು ಉಳಿದೆಲ್ಲರಿಗೂ ಪೌರತ್ವವನ್ನು ನಿರಾಕರಿಸಿರುತ್ತಿದ್ದರೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನೆಯನ್ನು ಸೃಷ್ಟಿಸುತ್ತಿತ್ತು. ಬ್ರಿಟನ್, ಅಮೇರಿಕ, ಜಪಾನ್, ಚೀನಾದಂತಹ ರಾಷ್ಟ್ರಗಳು ಪ್ರತಿ ಭಟಿಸುತ್ತಿದ್ದವು. ಟ್ರಂಪ್ ದಿಗ್ಬಂಧನದ ಭಾಷೆಯಲ್ಲಿ ಮಾತಾಡುತ್ತಿದ್ದರು. ಅಮಿತ್ ಷಾ ಸಹಿತ ಕೇಂದ್ರ ಸಚಿವ ಸಂಪುಟದ ಹಲವರಿಗೆ ಅಮೇರಿಕ ಮತ್ತಿತರ ರಾಷ್ಟ್ರಗಳು ದಿಗ್ಬಂಧನ ವಿಧಿಸುವ ಸಾಧ್ಯತೆಗಳೂ ಇದ್ದುವು. ವಿದೇಶದಲ್ಲಿರುವ ಭಾರತೀಯ ಹಿಂದೂ ಸಮುದಾಯದ ಉದ್ಯೋಗಿಗಳ ಮೇಲೆ ಮಾನಸಿಕ ಮತ್ತು ದೈಹಿಕ ಆಕ್ರಮಣಗಳೂ ನಡೆಯುತ್ತಿದ್ದುವು. ಅವರ ಉದ್ಯೋಗವು ಅನಿಶ್ಚಿತ ಸ್ಥಿತಿಗೆ ತಲುಪು ವುದಕ್ಕೂ ಅವಕಾಶ ಇತ್ತು. ಅದರ ಜೊತೆಗೇ ಭಾರತದಲ್ಲಿನ ಸ್ಥಿತಿಗತಿಗಳಲ್ಲೂ ವ್ಯತ್ಯಾಸಗಳಾಗುತ್ತಿತ್ತು. ಪೌರತ್ವ ಕಾಯ್ದೆಯನ್ನು ವಿರೋಧಿಸುವವರ ಗುಂಪಿನಲ್ಲಿ ಮುಸ್ಲಿಮ್, ಬೌದ್ಧ, ಕ್ರೈಸ್ತ ಇತ್ಯಾದಿ ವೈವಿಧ್ಯತೆಗಳಿರುತ್ತಿತ್ತು. ಪ್ರತಿಭಟನೆಗಳು ಈಗಿನದಕ್ಕಿಂತ ಹೆಚ್ಚು ವ್ಯಾಪಕವೂ ವೈವಿಧ್ಯವೂ ಆಗಿರುತ್ತಿತ್ತು. ಈ ಎಲ್ಲ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಸರಕಾರ ಪೌರತ್ವ ಕಾಯ್ದೆಯನ್ನು ರೂಪಿಸಿದೆ. ಮುಸ್ಲಿಮರನ್ನು ಮಾತ್ರ ಪೌರತ್ವ ಪಟ್ಟಿಯಿಂದ ಹೊರಗಿಡುವುದರಿಂದ ಅಪಾಯ ಕಡಿಮೆ ಮತ್ತು ರಾಜಕೀಯ ಲಾಭಗಳು ಹೆಚ್ಚು ಎಂಬುದಾಗಿ ಅದು ಲೆಕ್ಕ ಹಾಕಿದೆ. ಆದ್ದರಿಂದ,
ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡೇ ಪೌರತ್ವ ಮತ್ತು ಎನ್‍ಆರ್‍ಸಿಗೆ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು ಎಂಬುದನ್ನು ಚಿಂತಿಸಬೇಕಾಗಿದೆ. ಮುಸ್ಲಿಮರು ದಾಖಲೆಗಳನ್ನು ಸರಿಪಡಿಸಿಟ್ಟುಕೊಳ್ಳುವುದು ಬೇರೆ ಮತ್ತು ಎನ್‍ಆರ್‍ಸಿಗಾಗಿ ದಾಖಲೆ ಪತ್ರಗಳನ್ನು ಸಲ್ಲಿಸದಿರುವುದೇ ಬೇರೆ. ಇವೆರಡನ್ನೂ ಒಂದೇ ಎಂದು ವ್ಯಾಖ್ಯಾನಿಸಿ ದಾಖಲೆ ಪತ್ರಗಳ ಬಗ್ಗೆ ನಿರ್ಲಕ್ಷ್ಯ ತೋರುವುದರಲ್ಲಿ ಅಪಾಯ ಹೆಚ್ಚು. ಎನ್‍ ಆರ್ ಸಿಗಾಗಿ ದಾಖಲೆ ಪತ್ರಗಳನ್ನು ಸಲ್ಲಿಸಬೇಕೋ ಅಥವಾ ಬಹಿಷ್ಕರಿಸಬೇಕೋ ಎಂಬುದು ನಂತರದ ವಿಚಾರ. ಎನ್‍ ಆರ್ ಸಿಗೆ ಅಲ್ಲದಿದ್ದರೂ ಸರಿಯಾದ ದಾಖಲೆ ಪತ್ರಗಳು ನಾಗರಿಕರ ಜೊತೆಯಿರಬೇಕಾದುದು ಕಾನೂನಾತ್ಮಕವಾಗಿಯೂ ಅಗತ್ಯ. ಸರಿಯಾದ ದಾಖಲೆ ಪತ್ರ ಗಳೇ ಇಲ್ಲದಿದ್ದರೆ ಯಾವ ಸಂದರ್ಭದಲ್ಲೂ ಪ್ರಭುತ್ವ ನಿಮ್ಮನ್ನು ಗುರಿ ಮಾಡಬಹುದು. ಅದಕ್ಕೆ ಎನ್‍ಆರ್‍ಸಿಯೇ ಬೇಕೆಂದಿಲ್ಲ. ನಗರ ಪ್ರದೇಶದಲ್ಲಿ ವಾಸಿಸುವ ಮುಸ್ಲಿಮರ ಪೈಕಿ ಹೆಚ್ಚಿನವರಿಗೆ ದಾಖಲೆ ಪತ್ರಗಳ ಮಹತ್ವ ಗೊತ್ತಿದೆ. ಹೆಚ್ಚಿನವರಲ್ಲಿ ಸರಿಯಾದ ದಾಖಲೆಪತ್ರಗಳೂ ಇವೆ. ಆದರೆ ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಮುಸ್ಲಿಮರಲ್ಲಿ ಈ ತಿಳುವಳಿಕೆ ಇಲ್ಲ. ಅವರಲ್ಲಿ ದಾಖಲೆ ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳದವರೂ ಇದ್ದಾರೆ. ಇರುವ ದಾಖಲೆ ಪತ್ರಗಳಲ್ಲೂ ಕ್ರಮಬದ್ಧತೆ ಇಲ್ಲ. ರೇಶನ್ ಕಾರ್ಡ್, ಆಧಾರ್ ಕಾರ್ಡ್, ಮತದಾನದ ಚೀಟಿ, ಜನನ ಸರ್ಟಿಫಿಕೇಟ್ ಇತ್ಯಾದಿ ಇತ್ಯಾದಿಗಳು ಇಲ್ಲದವರೂ ಇರಬಹುದು ಅಥವಾ ಇದ್ದರೂ ಒಂದಕ್ಕೊಂದು ತಾಳೆಯಾಗದ ರೀತಿಯಲ್ಲಿ ಇರುವವುಗಳೂ ಇರಬಹುದು. ಆದ್ದರಿಂದ ‘ಎನ್‍ಆರ್‍ಸಿಯನ್ನು ಬಹಿಷ್ಕರಿಸೋಣ ಮತ್ತು ಯಾರೂ ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳಬೇಡಿ’ ಎಂಬ ಕರೆಯು ಜನಪ್ರಿಯ ಘೋಷಣೆಯಾಗಿ ಬಿಡಬಹುದೇ ಹೊರತು ದೂರದೃಷ್ಟಿಯದ್ದಾಗದು. ಅಲ್ಲದೇ,
ಪ್ರಭುತ್ವದ ಉರುಳು ಬಿಗಿಯಾದಂತೆಯೇ ಸಮುದಾಯದಲ್ಲಿ ಬಿರುಕು ಮೂಡುವುದಕ್ಕೂ ಅವಕಾಶವಿದೆ. ಪ್ರಭುತ್ವವು ಸಮು ದಾಯವನ್ನು ವಿಭಜಿಸುವ ಮೂಲಕ ಸಮುದಾಯದ ಬಹಿ ಷ್ಕಾರದ ಧೋರಣೆಯಲ್ಲಿ ಕಂದಕ ತೋಡುವುದಕ್ಕೂ ಸಾಧ್ಯ  ವಿದೆ. ಎನ್‍ ಆರ್ ಸಿಯಲ್ಲಿ ಭಾಗವಹಿಸದಿದ್ದರೆ ಶಾಲೆಗಳು, ಉದ್ಯಮಗಳು, ಆಸ್ಪತ್ರೆಗಳು ಸಹಿತ ಸಮುದಾಯದ ಮಂದಿ ನಡೆಸುವ ಸರ್ವವೂ ಸ್ಥಗಿತಗೊಳ್ಳುವ ಅಥವಾ ಅವುಗಳಿಗೆ ಬೀಗಮುದ್ರೆ ಹಾಕುವ ಒತ್ತಡದ ಸ್ಥಿತಿಯನ್ನು ಪ್ರಭುತ್ವ ತಂದಿಟ್ಟರೆ ಮತ್ತು ಆ ಕಾರಣದಿಂದ ಸಮುದಾಯದ ಧೋರಣೆಯಲ್ಲಿ ಸಡಿಲಿಕೆ ಉಂಟಾದರೆ, ಅದರ ನೇರ ಪರಿಣಾಮವನ್ನು ಎದುರಿಸ ಬೇಕಾಗಿರುವುದು ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಬಡ ಮುಸ್ಲಿಮರೇ ಹೊರತು ಸರಿಯಾದ ದಾಖಲೆ ಪತ್ರಗಳನ್ನು ಇಟ್ಟುಕೊಂಡಿರುವ ನಗರ ಪ್ರದೇಶದವರಲ್ಲ.
ಹಾಗೆಯೇ, ಕೊನೆಯ ಗಳಿಗೆಯಲ್ಲಿ ಎನ್‍ ಆರ್ ಸಿ ಬಹಿಷ್ಕಾರದಿಂದ ಮುಸ್ಲಿಮ್ ಸಮುದಾಯ ಹೊರಬಂದರೂ ಅದರ ಅಡ್ಡ ಪರಿಣಾಮಕ್ಕೆ ತುತ್ತಾಗುವುದೂ ಈ ಬಡವರೇ. ಯಾಕೆಂದರೆ, ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಅವರು ಆ ಬಳಿಕದಿಂದ ಪ್ರಾರಂಭಿಸಬೇಕು. ಆ ಸಮಯದಲ್ಲಿ ಅದಕ್ಕೆ ಅವಕಾಶ ಇದೆಯೋ ಇಲ್ಲವೋ ಅನ್ನುವುದೂ ಈಗ ಸ್ಪಷ್ಟವಿಲ್ಲ. ಎನ್‍ ಆರ್ ಸಿಯ ಕೊನೆ ದಿನಾಂಕ ಮುಗಿಯುವುದರ ಒಳಗಾಗಿ ಅವರಿಗೆ ಸರಿಯಾದ ದಾಖಲೆ ಪತ್ರಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಈಗ ಹೇಳುವಂತೆಯೂ ಇಲ್ಲ. ಆದರೆ, ನಗರ ಪ್ರದೇಶದ ಮಂದಿಗೆ ಈ ಯಾವ ಸಮಸ್ಯೆಗಳೂ ಎದುರಾಗುವುದಿಲ್ಲ. ಆದ್ದರಿಂದ,
ಒಂದುಕಡೆ ಮುಸ್ಲಿಮ್ ಸಮುದಾಯದ ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳುವ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುತ್ತಲೇ ಇನ್ನೊಂದು ಕಡೆ ಎನ್‍ ಆರ್ ಸಿಯನ್ನು ಬಹಿಷ್ಕರಿಸಬೇಕೋ ಬೇಡವೋ ಎಂಬ ಚರ್ಚೆಗಳು ನಡೆಯುವುದೇ ಸರಿ. ಸರಿಯಾದ ದಾಖಲೆ ಪತ್ರಗಳು ಮುಸ್ಲಿಮ್ ಸಮುದಾಯದ ಎಲ್ಲರ ಜೊತೆಗೂ ಇರಲಿ. ಎನ್‍ ಆರ್ ಸಿಯನ್ನು ಬಹಿಷ್ಕರಿಸುವುದಕ್ಕೂ ಬಹಿಷ್ಕರಿಸದೇ ಇರುವುದಕ್ಕೂ ಮತ್ತು ಈ ದಾಖಲೆ ಪತ್ರಗಳನ್ನು ಸರಿಪಡಿಸುವುದಕ್ಕೂ ಸಂಬಂಧ ಕಲ್ಪಿಸದೇ ಇರೋಣ. ಇವೆರಡೂ ಬೇರೆ ಬೇರೆ. ಇಲ್ಲದಿದ್ದರೆ ಸಮುದಾಯದ ಬಡ ಮತ್ತು ದುರ್ಬಲ ಮುಸ್ಲಿಮರನ್ನು ಹಳ್ಳಕ್ಕೆ ತಳ್ಳಿದಂತಾದೀತು.

Saturday, December 14, 2019

ಎನ್‍ಕೌಂಟರ್: ಸಂಭ್ರಮ ಮತ್ತು ಸೂತಕದ ನಡುವಿನ ಬಿಂದುವಿನಲ್ಲಿ ನಿಂತು...




ಕೆಲವು ಅಂಕಿ-ಅಂಶಗಳು ಹೀಗಿವೆ;
1. ಭಾರತದ ಜೈಲುಗಳಲ್ಲಿ ಸದ್ಯ ಗಲ್ಲು ಶಿಕ್ಷೆಯ ತೀರ್ಪನ್ನು ಪಡೆದುಕೊಂಡ ಮತ್ತು ಯಾವ ಕ್ಷಣದಲ್ಲೂ ನೇಣಿಗೆ ಏರಿಸಲ್ಪಡುವೆವೆಂಬ ಭಯದಲ್ಲಿ 380ರಷ್ಟು ಅಪರಾಧಿಗಳು ತಣ್ಣಗೆ ಬದುಕುತ್ತಿದ್ದಾರೆ. ಹಾಗಂತ, ಇವರೆಲ್ಲ ನಿನ್ನೆ ಮೊನ್ನೆ ಗಲ್ಲು ಶಿಕ್ಷೆ ಪಡಕೊಂಡವರಲ್ಲ. ಇವರಲ್ಲಿ 27 ವರ್ಷದಿಂದ ಗಲ್ಲು ಶಿಕ್ಷೆಯನ್ನು ಎದುರು ನೋಡುತ್ತಿರುವವನೂ ಇದ್ದಾನೆ. ಉಳಿದವರಲ್ಲಿ 5, 10, 15 ವರ್ಷ ಗಳಿಂದ ಗಲ್ಲು ಶಿಕ್ಷೆಯನ್ನು ಕಾಯುತ್ತಿರುವವರೂ ಇದ್ದಾರೆ.
2. 2016ರ ಆರಂಭದಲ್ಲಿ ಈ ದೇಶದಲ್ಲಿ ಒಟ್ಟು 1,18,537 ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದಲ್ಲಿದ್ದುವು. ಆದರೆ, 2016ರ ಕೊನೆಗಾಗುವಾಗ ಈ ಅತ್ಯಾಚಾರ ಪ್ರಕರಣಗಳ ಸಂಖ್ಯೆ 1,33,813ಕ್ಕೆ ಏರಿಕೆ ಕಂಡಿತು. ಇದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(NCRB)ದ ವರದಿ. ನೆನಪಿರಲಿ- 2012ರ ನಿರ್ಭಯ ಪ್ರಕರಣದ ಬಳಿಕದ ಅಂಕಿ ಅಂಶ ಇದು. 2012 ಡಿಸೆಂಬರ್ 16ರ ರಾತ್ರಿ ಬಸ್ ಒಂದರಲ್ಲಿ 23 ವರ್ಷದ ಈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಯಿತು. ಬಳಿಕ ಆಕೆ ಆಸ್ಪತ್ರೆಯಲ್ಲಿ ನಿಧನಳಾದಳು. ಅಪರಾಧಿಗಳನ್ನು ಗಲ್ಲಿಗೇರಿಸ ಬೇಕೆಂದು ವಿಪಕ್ಷ ನಾಯಕಿ ಸುಶ್ಮಾ ಸ್ವರಾಜ್ ಅಂದು ಸಂಸತ್ತಿ ನಲ್ಲಿ ಆಗ್ರಹಿಸಿದ್ದರು. 2013 ಆಗಸ್ಟ್‍ನಲ್ಲಿ 22 ವರ್ಷದ ಪೋಟೋ ಪತ್ರಕರ್ತೆಯ ಮೇಲೆ ಮುಂಬೈಯ ಶಕ್ತಿ ಮಿಲ್ಸ್ ಆವರಣದಲ್ಲಿ ಐವರು ಸಾಮೂಹಿಕ ಅತ್ಯಾಚಾರ ನಡೆಸಿದರು. ಇಂಗ್ಲಿಷ್ ಭಾಷೆಯ ಮ್ಯಾಗಸಿನ್ ಒಂದಕ್ಕೆ ಅಸೈನ್‍ಮೆಂಟ್ ತಯಾರಿಸಲು ತನ್ನ ಗೆಳೆಯನೊಂದಿಗೆ ಹೋಗಿದ್ದ ವೇಳೆ ಈ ಅತ್ಯಾಚಾರ ನಡೆಯಿತು. 2015 ಮಾರ್ಚ್ 14ರಂದು ಪಶ್ಚಿಮ ಬಂಗಾಲದ ರಾಣಾಘಾಟ್‍ನ ಜೀಸಸ್ ಮತ್ತು ಮೇರಿ ಕಾನ್ವೆಂಟ್‍ನಲ್ಲಿ 71 ವರ್ಷದ ನನ್ ಒಬ್ಬರನ್ನು ಅತ್ಯಾಚಾರಗೈಯಲಾಯಿತು. ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದಿನೊಂದಿಗೆ ಸುದ್ದಿಗೀಡಾದ ಮತ್ತು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಗುರಿಯಾದ ಈ ಪ್ರಕರಣಗಳ ಬಳಿಕದ ವರದಿ ಇದು ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಿ.
3. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಓಅಖಃ)ದ ವರದಿಯಲ್ಲಿ ಇನ್ನಷ್ಟು ಅಚ್ಚರಿಗಳಿವೆ. ಅತ್ಯಾಚಾರ ಆರೋಪವು ಶಿಕ್ಷೆಯಾಗಿ ಪರಿವರ್ತನೆಯಾಗುವ ಪ್ರಮಾಣಗಳ ಕುರಿತೂ ಅದು ವಿವರವಾಗಿ ಅಂಕಿ ಅಂಶಗಳನ್ನು ಮುಂದಿಟ್ಟಿದೆ. 2013ರ ವರೆಗಿನ ಅದರ ವರದಿಗಳೇ ಪರಿಸ್ಥಿತಿಯನ್ನು ನಮಗೆ ಮನದಟ್ಟು ಮಾಡಿ ಕೊಳ್ಳಲು ದಾರಾಳ ಸಾಕು. ಇಲ್ಲೂ ಓದುಗರಲ್ಲಿ ಒಂದು ಎಚ್ಚರಿಕೆ ಇರಬೇಕು. ಇಲ್ಲಿ ನೀಡಲಾಗಿರುವ ಅಂಕಿ-ಅಂಶಗಳೆಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡು, ಎಫ್‍ಐಆರ್ ಆಗಿ ಆ ಬಳಿಕ ಅದು ನ್ಯಾಯಾಲಯಕ್ಕೆ ತಲುಪಿದ ಪ್ರಕರಣಗಳು. ಇಂಥ ಯಾವ ಪ್ರಕ್ರಿಯೆಗೂ ಒಳಗಾಗದೇ ಮತ್ತು ಹೊರ ಜಗತ್ತಿನ ಮುಂದೆ ಅನಾವರಣಗೊಳ್ಳದೆಯೇ ಸತ್ತು ಹೋದ ಪ್ರಕರಣಗಳು ಈ ಅಂಕಿ-ಅಂಶಗಳಿಗೆ ಸೇರಿರುವುದಿಲ್ಲ. ಈ ಅಂಕಿ-ಅಂಶಗಳು ಹೀಗಿವೆ:
ಅತ್ಯಾಚಾರ ಆರೋಪವು ಸಾಬೀತುಗೊಂಡು ಶಿಕ್ಷೆಯಾಗಿ ಪರಿ ವರ್ತನೆಯಾದ ಪ್ರಕರಣಗಳು 1973ರಲ್ಲಿ 44.3% ಇದ್ದರೆ, 1983 ರಲ್ಲಿ ಇದು 37.7%ಕ್ಕೆ ಕುಸಿಯಿತು. 2009ರಲ್ಲಿ ಇದು 26.9%ಕ್ಕೆ ಕುಸಿದರೆ, 2010ರಲ್ಲಿ 26.6%, 2011ರಲ್ಲಿ 26.4%, 2012ರಲ್ಲಿ 24.2% ಮತ್ತು 2013ರಲ್ಲಿ 27.1%ಕ್ಕೆ ಕುಸಿಯುತ್ತಾ ಬಂತು. ಹಾಗಂತ, 1973ರಿಂದ 2013ರ ನಡುವೆ ಅತ್ಯಾಚಾರ ಪ್ರಕರಣಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಾ ಬಂದಿದೆ ಎಂಬುದು ಇದರ ಅರ್ಥವಲ್ಲ. ಪ್ರತಿವರ್ಷವೂ ಅತ್ಯಾಚಾರ ಪ್ರಕರಣಗಳಲ್ಲಿ ಭಾರೀ ಅನ್ನುವಂತೆ ಏರಿಕೆ ಕಂಡು ಬರುತ್ತಲೇ ಇದೆ. ಮಾತ್ರವಲ್ಲ, ಅತ್ಯಾಚಾರಗಳು ಬರ್ಬರ ಅನ್ನುವಷ್ಟು ಕ್ರೂರವಾಗುತ್ತಲೂ ಇದೆ. 2012ರ ನಿರ್ಭಯ, 2018 ಜನವರಿ 17ರ ಆಸಿಫಾ, 2019ರ ಪಶು ವೈದ್ಯೆ ಮತ್ತು ಉನ್ನಾವೋ ಯುವತಿ.. ಎಲ್ಲವೂ ಬರ್ಬರತೆ ಯಲ್ಲಿ ಒಂದಕ್ಕಿಂತ ಒಂದನ್ನು ಮೀರುವಂಥವು. ಅತ್ಯಾಚಾರ ಪ್ರಕರಣಗಳಲ್ಲಿ ಏರಿಕೆ ಮತ್ತು ಶಿಕ್ಷಾ ಪ್ರಮಾಣದಲ್ಲಿ ಇಳಿಕೆ- ಇದು 1973ರಿಂದ 2013ರ ವರೆಗಿನ ಆಘಾತಕಾರಿ ಸತ್ಯಗಳು.
4. ಭಾರತದಲ್ಲಿ ಸರಾಸರಿ ಒಂದು ಮಿಲಿಯನ್ ಜನರಿಗೆ ಕೇವಲ 14 ಮಂದಿ ನ್ಯಾಯಾಧೀಶರಿದ್ದಾರೆ. ಇದು ಜಗತ್ತಿನ 65 ರಾಷ್ಟ್ರಗಳ ಪೈಕಿ ಅತ್ಯಂತ ಕಡಿಮೆ ಪ್ರಮಾಣ. ಅತ್ಯಾಚಾರ ಪ್ರಕರಣವನ್ನು ನಿಭಾಯಿಸುವುದಕ್ಕಾಗಿ 2012ರಲ್ಲಿ ದೆಹಲಿ ಸರ್ಕಾರ 4 ತ್ವರಿತಗತಿ ನ್ಯಾಯಾಲಯವನ್ನು ರಚಿಸಿದೆ. ಇದರಿಂದ ಆಗಿರುವ ತೊಂದರೆ ಏನೆಂದರೆ, ಸಾಮಾನ್ಯ ನ್ಯಾಯಾಲಯಗಳಲ್ಲಿ ನ್ಯಾಯಾ ಧೀಶರ ಸಂಖ್ಯೆಗೆ ಕುತ್ತು ಬಂದಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ದಲ್ಲೂ ಅತ್ಯಾಚಾರ ಪ್ರಕರಣವು ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜನರು ನ್ಯಾಯ ವಿಳಂಬದ ಕುರಿತು ಪ್ರತಿಭಟನೆಗಿಳಿದರು. ಆದ್ದರಿಂದ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸ ಲಾಯಿತು. 2011ರ ಲೆಕ್ಕಾಚಾರದಂತೆ, ಒಟ್ಟು ದಾಖಲಾದ ಅತ್ಯಾ ಚಾರ ಪ್ರಕರಣಗಳ ಪೈಕಿ 70ರಿಂದ 95% ಪ್ರಕರಣಗಳೂ ಸಾಬೀತು ಗೊಂಡು ಶಿಕ್ಷೆಯಾಗಿ ಪರಿವರ್ತನೆಯಾಯಿತು. ತ್ವರಿತಗತಿ ನ್ಯಾಯಾಲಯ ಸ್ಥಾಪನೆಯಾಗುವುದಕ್ಕಿಂತ ಮೊದಲು ಅಲ್ಲಿ ಈ ಶಿಕ್ಷೆಯ ಪ್ರಮಾಣ ತೀರಾ ಅತ್ಯಲ್ಪವಾಗಿತ್ತು. ಉದಾ. 1998ರಲ್ಲಿ ಈ ಶಿಕ್ಷೆಯ ಪ್ರಮಾಣ 8.9%ರಷ್ಟೇ ಇತ್ತು.
5. ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವುದರಲ್ಲಿ ಭಾರತಕ್ಕಿಂತಲೂ ಹಿಂದಿರುವ ರಾಷ್ಟ್ರಗಳಿವೆ. ಅತ್ಯಾಚಾರಕ್ಕಾಗಿ 2012ರಲ್ಲಿ ಸ್ವೀಡನ್‍ನಲ್ಲಿ ಶಿಕ್ಷೆಗೀಡಾದವರ ಸಂಖ್ಯೆ 7%, ಫ್ರಾನ್ಸ್ ನಲ್ಲಿ 25% ಮತ್ತು ಸ್ವೀಡನ್ ನಲ್ಲಿ 10%. ಅದೇವೇಳೆ, ಇರಾನ್, ಈಜಿಪ್ಟ್, ಸೌದಿ ಅರೇಬಿಯಾಗಳಲ್ಲಿ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
6. ಇನ್ನೂ ಒಂದು ಲೆಕ್ಕಾಚಾರ ಹೀಗಿದೆ:
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಪ್ರಕಾರ, 2016 ರಲ್ಲಿ ಒಟ್ಟು 38,947 ಲೈಂಗಿಕ ಹಿಂಸೆ (ಅತ್ಯಾಚಾರ) ಪ್ರಕರಣಗಳು ನಡೆದಿದ್ದು, ಇದರಲ್ಲಿ 2167ರಷ್ಟು ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ಇದರ ಪ್ರಕಾರ ಲೆಕ್ಕ ಹಾಕಿದರೆ, ಪ್ರತಿ ಗಂಟೆಗೆ 4 ಹೆಣ್ಣು ಮಕ್ಕಳು ಲೈಂಗಿಕ ಹಿಂಸೆ ಅಥವಾ ಅತ್ಯಾಚಾರಕ್ಕೆ ಗುರಿ ಯಾಗುತ್ತಾರೆ. ಕಳೆದ 10 ವರ್ಷಗಳಿಂದ ಒಟ್ಟು 2.80 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆಘಾತಕಾರಿ ಅಂಶ ಏನೆಂದರೆ, ಇವುಗಳಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಶೇ. 15ಕ್ಕಿಂತಲೂ ಹೆಚ್ಚು. ಹಾಗೆಯೇ ಭಾರತದಲ್ಲಿ ನೇಣಿಗೊಳಗಾಗುವ ಒಟ್ಟು ಪ್ರಕರಣಗಳಲ್ಲಿ ಶೇ. 39ರಷ್ಟು ಪ್ರಕರಣಗಳೂ ಅತ್ಯಾಚಾರಕ್ಕೆ ಸಂಬಂಧಿಸಿದ್ದು. ಆದ್ದರಿಂದ,
ಇಂಥ ಸನ್ನಿವೇಶದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿ, ಆಕೆಯ ಕುಟುಂಬ, ಸಂಬಂಧಿಕರು ಇತ್ಯಾದಿ ಆಪ್ತ ವಲಯವು ಅತ್ಯಾಚಾರದ ಆರೋಪಿಗಳನ್ನು ಸ್ಥಳದಲ್ಲಿಯೇ ಜಜ್ಜಿ ಹಾಕಬೇಕು ಎಂದು ಬಯಸುವುದು ಸಹಜ. ಹೈದರಾಬಾದ್‍ನ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಎನ್‍ಕೌಂಟರ್ ನಡೆಸಿದ ಪೋಲೀಸರು ಅಂಥವರ ಕಣ್ಣಲ್ಲಿ ಹೀರೋಗಳಾಗುವುದೂ ಸಹಜ. ಅವರೊಳಗೆ ಮಡುಗಟ್ಟಿದ ದುಃಖವೇ ಅವರನ್ನು ಅಂಥದ್ದೊಂದು ನಿರ್ಧಾರಕ್ಕೆ ಪ್ರೇರೇಪಿಸಿರುತ್ತದೆ. ಅತ್ಯಾಚಾರಕ್ಕೆ ಅವರು ಸಾಕ್ಷಿಗಳಾಗಿಲ್ಲದಿದ್ದರೂ ಪೊಲೀಸರು ತೋರಿಸಿದ ಆರೋಪಿಗಳನ್ನು ನಿಜ ಅಪರಾಧಿಗಳು ಎಂದೇ ಖಚಿತವಾಗಿ ನಂಬುವಂತೆ ಅವರೊಳಗಿನ ಆಕ್ರೋಶ ಮತ್ತು ನೋವು ಬಲವಂತಪಡಿಸಿರುತ್ತದೆ. ಅವರಿರುವ ಜಾಗ ಮತ್ತು ಪರಿಸ್ಥಿತಿಯಲ್ಲಿ ನಿಂತು ನೋಡಿದರೆ ನಾವೂ ಅಂಥದ್ದೇ ತೀರ್ಮಾನಕ್ಕೆ ಬರುವುದಕ್ಕೂ ಸಾಧ್ಯವಿದೆ. ಅದೇವೇಳೆ, ಎನ್‍ಕೌಂಟರ್ ಗೆ ಒಳಗಾದ ಆರೋಪಿಗಳ ಕುಟುಂಬಗಳ ಭಾವನೆ ಬೇರೆಯದೇ ಆಗಿರುತ್ತದೆ. ಹೈದರಾಬಾದ್‍ನ ವೈದ್ಯೆಯ ಪ್ರಕರಣದಲ್ಲೂ ಇದು ವ್ಯಕ್ತವಾಗಿದೆ. ಅವರಿಗೆ ಎನ್‍ಕೌಂಟರ್ ತಪ್ಪಾಗಿ ಕಾಣಿಸುತ್ತದೆ. ಅವರು ಅದಕ್ಕಾಗಿ ಸಂಭ್ರಮಿಸುವುದೂ ಇಲ್ಲ. ನ್ಯಾಯ ತೀರ್ಮಾನ ವಾಗಬೇಕಾದುದು ನ್ಯಾಯಾಲಯದಲ್ಲಿ ಎಂದವರು ವಿಷಣ್ಣವದನರಾಗಿ ವಾದಿಸುತ್ತಾರೆ. ನಿಜವಾಗಿ,
ಈ ಎರಡು ಗುಂಪುಗಳ ಪ್ರತಿಕ್ರಿಯೆಗಳನ್ನು ನಿರ್ಲಕ್ಷಿಸಿಯೇ ನಾವು ಪೊಲೀಸ್ ಎನ್‍ಕೌಂಟರ್ ಅನ್ನು ವಿಮರ್ಶೆಗೊಡ್ಡಬೇಕು. ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿಗಳ ಕುಟುಂಬ- ಇವೆರಡರ ಪ್ರತಿಕ್ರಿಯೆಯೂ ಪ್ರಬುದ್ಧವಾಗಿರಬೇಕಿಲ್ಲ. ಎನ್ ಕೌಂಟರ್‍ನ ದೂರಗಾಮಿ ಪರಿಣಾಮವನ್ನು ಗ್ರಹಿಸಿ ಅವು ಪ್ರತಿಕ್ರಿಯಿಸಬೇಕೆಂದಿಲ್ಲ. ಕ್ಷಣದ ಆಕ್ರೋಶ, ದ್ವೇಷ, ಮಮತೆ ಇತ್ಯಾದಿಗಳೇ ಈ ಎರಡೂ ಗುಂಪುಗಳ ಸಂಭ್ರಮಕ್ಕೋ ದುಃಖಕ್ಕೋ ಕಾರಣ. ಆದರೆ, ನಾಗರಿಕ ಸಮಾಜದ ಮೇಲೆ ಅಂಥದ್ದೊಂದು ಒತ್ತಡವಿಲ್ಲ. ಆದ್ದರಿಂದಲೇ, ಅದು ವ್ಯಕ್ತಪಡಿ ಸುವ ಪ್ರತಿಕ್ರಿಯೆಯು ಆವೇಶ, ದ್ವೇಷ, ಚಂಚಲತೆಯಿಂದ ದೂರವಿರ ಬೇಕಲ್ಲದೇ, ನ್ಯಾಯಾಲಯಕ್ಕಿಂತ ಹೊರಗೆ ಜಾರಿ ಮಾಡಲಾಗುವ ಶಿಕ್ಷೆಯ ದೂರಗಾಮಿ ಪರಿಣಾಮವನ್ನು ಗ್ರಹಿಸಿದ ರೀತಿಯಲ್ಲಿರಬೇಕು. ಹಾಗಂತ, ಈ ಬರಹದ ಆರಂಭದಲ್ಲಿ ಉಲ್ಲೇಖಿಸಲಾದ ಅಂಕಿ-ಅಂಶಗಳು ನ್ಯಾಯದಾನ ದಲ್ಲಾಗುವ ವಿಳಂಬವನ್ನು ಸ್ಪಷ್ಟಪಡಿಸುತ್ತಿವೆ ಎಂಬುದು ನಿಜ. ಅಷ್ಟೇ ಅಲ್ಲ, ವಿಳಂಬದ ಜೊತೆಗೇ ನ್ಯಾಯ ನಿರಾಕರಣೆಯೂ ನಡೆಯುತ್ತಿದೆ ಅನ್ನುವುದೂ ಸತ್ಯ. ಆದರೆ, ಈ ಸಮಸ್ಯೆಗೆ ಪೊಲೀಸ್ ಎನ್ ಕೌಂಟರ್ ಪರಿಹಾರ ಆಗಬಹುದೇ? ಪೊಲೀಸ್ ವ್ಯವಸ್ಥೆಯು ನ್ಯಾಯಾಂಗ ವ್ಯವಸ್ಥೆಯಂತೆ ಸ್ವತಂತ್ರ ಅಲ್ಲವಲ್ಲ. ಪೊಲೀಸರು ಕ್ಷಣಕ್ಷಣಕ್ಕೂ ಸರಕಾರದ ನಿರ್ದೇಶನದಂತೆ ಕೆಲಸ ನಿರ್ವಹಿಸುತ್ತಾರೆ. ಸರ್ಕಾರವಾದರೋ ಪಕ್ಷಾತೀತವೂ ಅಲ್ಲ ಅಥವಾ ಬಹುಪಕ್ಷೀಯವೂ ಅಲ್ಲ. ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವ ಸರ್ಕಾರವೊಂದು ಪಕ್ಷಾತೀತವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವೂ ಇಲ್ಲ. ಯಾವ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೋ ಆ ಸರ್ಕಾರದ ಅಣತಿಯಂತೆ ಪೊಲೀಸ್ ವ್ಯವಸ್ಥೆ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹೀಗಿರುವಾಗ, ಪೊಲೀಸರು ನಡೆಸುವ ಯಾವುದೇ ಎನ್‍ಕೌಂಟರ್ ಪಕ್ಷಾತೀತವಾಗಿ ಮತ್ತು ಸಂಪೂರ್ಣ ನ್ಯಾಯಯುತವಾಗಿ ನಡೆಯುವುದು ಅನುಮಾನಾಸ್ಪದ. ಜಮ್ಮುವಿನಲ್ಲಿ 8ರ ಹರೆಯದ ಆಸಿಫಾ ಎಂಬ ಮಗುವನ್ನು ಹಿಂಸಿಸಿ ಅತ್ಯಾಚಾರಗೈದು ಹತ್ಯೆ ನಡೆಸಿದ ಆರೋಪಿಗಳ ಪರವೇ ನಿರ್ದಿಷ್ಟ ರಾಜಕೀಯ ಪಕ್ಷದ ಶಾಸಕರು ರ್ಯಾಲಿ ನಡೆಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸರಕಾರವು ತನಗೆ ಬೇಕಾದ ಆರೋಪಿಗಳನ್ನು ಉಳಿಸಿಕೊಂಡು ತನಗಾಗದ ಅಥವಾ ಸಂಬಂಧವಿಲ್ಲದ ಆರೋಪಿ ಗಳನ್ನು ಪೊಲೀಸರ ಮೂಲಕ ಮುಗಿಸುವುದಕ್ಕೂ ಅವಕಾಶವಿದೆ. ಸರ್ಕಾರವೇ ಭಾಗಿಯಾದ ಹಲವಾರು ಹತ್ಯಾಕಾಂಡಗಳು, ಕೌಸರ್‍ಬೀಯಂಥ ಎನ್‍ಕೌಂಟರ್ ಗಳು ಇದಕ್ಕೆ ಸಾಕ್ಷ್ಯವಾಗಿಯೂ ನಮ್ಮ ಮುಂದಿದೆ. ಆದ್ದರಿಂದ,
ಅತ್ಯಾಚಾರವಿರಲಿ, ಇನ್ನಾವುದೇ ಕ್ರೌರ್ಯವಿರಲಿ, ಪೊಲೀಸರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕ್ರಮಕ್ಕೆ ಮುಂದಾಗುವುದನ್ನು ಸಮರ್ಥಿಸಿಕೊಳ್ಳುವುದು ಒಟ್ಟು ಪ್ರಜಾತಂತ್ರದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಬಹುದು. ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿಗಳ ಕುಟುಂಬದಂತೆ ನಾಗರಿಕರೂ ಭಾವಾವೇಶದಿಂದ ಪ್ರತಿಕ್ರಿಯಿಸತೊಡಗಿದರೆ ಅದು ಪೊಲೀಸ್ ಇಲಾಖೆಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಸಾರ್ವಜನಿಕರಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಮತ್ತು ಸರ್ಕಾರದ ಪುರಸ್ಕಾರವನ್ನು ಪಡೆಯುವುದ ಕ್ಕಾಗಿಯೂ ನಕಲಿ ಎನ್‍ಕೌಂಟರ್ ಗಳಿಗೆ ಅದು ದಾರಿಯನ್ನು ತೆರೆದುಕೊಡುತ್ತದೆ. ಅಂದಹಾಗೆ, ನಿರ್ದಿಷ್ಟ ಪೊಲೀಸ್ ಪ್ರಮುಖರನ್ನು ಫ್ಯಾಂಟಮ್‍ನಂತೆ ಚಿತ್ರಿಸಿ, ಹೂಹಾರ ಹಾಕಿ ಹೀರೋನಂತೆ ಸತ್ಕರಿಸುವುದರಿಂದ ಲಾಭವೂ ಇದೆ, ನಷ್ಟವೂ ಇದೆ. ಕೆಲವೊಮ್ಮೆ ಇಂಥ ಸತ್ಕಾರವು ಅವರನ್ನು ಕಾನೂನು ಬಾಹಿರವಾಗಿ ವರ್ತಿಸುವುದಕ್ಕೂ ಪ್ರೇರಣೆ ನೀಡುತ್ತದೆ. ರಾಷ್ಟ್ರಪತಿ ಪದಕ ಸಹಿತ ಇನ್ನಿತರ ಗೌರವಾರ್ಹ ಪುರಸ್ಕಾರ ಪಡೆದವರೂ ಆ ಬಳಿಕ ವಿಲನ್ ಆದ ಇತಿಹಾಸ ಈ ದೇಶದಲ್ಲಿದೆ. ಆದ್ದರಿಂದ,
ಅತ್ಯಾಚಾರಕ್ಕೆ ಸಂಬಂಧಿಸಿ ನ್ಯಾಯಾಂಗದ ನಿಧಾನಗತಿಗೆ ಅಥವಾ ನಿಷ್ಕ್ರಿಯತೆಗೆ ಎನ್‍ಕೌಂಟರ್ ಅನ್ನು ಬೆಂಬಲಿಸುವುದು ಉತ್ತರ ಅಲ್ಲ. ಸ್ವತಃ ಅದುವೇ ಒಂದು ಪ್ರಶ್ನೆ. ದೊಡ್ಡ ಸಂಖ್ಯೆಯಲ್ಲಿ ತ್ವರಿತಗತಿ ನ್ಯಾಯಾಲಯದ ಸ್ಥಾಪನೆ ಮತ್ತು ನಿಗದಿತ ಅವಧಿಯೊಳಗೆ ವಿಚಾರಣೆ ನಡೆಸಿ ಶಿಕ್ಷೆ ಜಾರಿಮಾಡುವುದಕ್ಕೆ ದಾರಿಗಳನ್ನು ಕಂಡುಕೊಳ್ಳುವುದೇ ಇದಕ್ಕಿರುವ ಪರಿಹಾರ. ಇದು ಅಸಾಧ್ಯವೂ ಅಲ್ಲ. ಆದರೆ, ಅದಕ್ಕೆ ಸಂಭ್ರಮದ ಮೂಡ್‍ನಿಂದ ಹೊರಬಂದು ಆಲೋಚಿಸಬೇಕು, ಅಷ್ಟೇ.

Saturday, December 7, 2019

ಅಂಬೇಡ್ಕರ್ ಸಂವಿಧಾನ ಅಲ್ಪಾಯುಷಿ ಎಂದಿದ್ದ ಜೆನ್ನಿಂಗ್ ರ ಸಂವಿಧಾನ ಬದುಕಿ ಬಾಳಿದ್ದು ಬರೇ ಆರು ವರ್ಷ



1. ಮಹಾರಾಷ್ಟ್ರದಲ್ಲಿ ಕೊನೆಗೂ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿ ಸರಕಾರ: ಉದ್ಧವ್ ಮುಖ್ಯಮಂತ್ರಿ
2. Uಜಜhಚಿv ಣo be ಒಚಿhಚಿಡಿಚಿshಣಡಿಚಿ ಅಒ
ನವೆಂಬರ್ 23ರ ಶನಿವಾರದಂದು ಪ್ರಕಟವಾದ ಎಲ್ಲ ಪತ್ರಿಕೆಗಳ ಮುಖಪುಟದ ಶೀರ್ಷಿಕೆ ಬಹುತೇಕ ಹೀಗೆಯೇ ಇತ್ತು ಮಾತ್ರವಲ್ಲ, ದೇಶದ ಬಹುತೇಕ ಎಲ್ಲ ಭಾಷೆಯ ಪತ್ರಿಕೆಗಳ ಮುಖಪುಟದ ಮುಖ್ಯ ಸುದ್ದಿ ಇದುವೇ ಆಗಿತ್ತು. ತನ್ನ ಪತ್ನಿ ರಶ್ಮಿಯೊಂದಿಗೆ ಉದ್ಧವ್ ಠಾಕ್ರೆಯವರು ಕೈ ಮುಗಿದು ಸಾರ್ವಜನಿಕರಿಗೆ ದರ್ಶನ ನೀಡುತ್ತಿರುವ ಫೋಟೋವನ್ನು ಹೆಚ್ಚಿನೆಲ್ಲ ಪತ್ರಿಕೆಗಳು ಈ ಸುದ್ದಿಯೊಂದಿಗೆ ಮುದ್ರಿಸಿದ್ದುವು. ತಮಾಷೆ ಏನೆಂದರೆ, ಶನಿವಾರ ಬೆಳಿಗ್ಗೆ ಓದುಗರು ಈ ಸುದ್ದಿಯನ್ನು ಓದಿ ಓದಿ ನಕ್ಕರು. ಯಾಕೆಂದರೆ, ಪತ್ರಿಕೆಗಳ ಮುಖಪುಟದ ಸುದ್ದಿಗೂ ಮಹಾರಾಷ್ಟ್ರದಲ್ಲಿ ನಡೆದಿರುವ ಬೆಳವಣಿಗೆಗಳಿಗೂ ಸಂಬಂಧವೇ ಇರಲಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯ ಮಂತ್ರಿಯಾಗಿ ಎನ್‍ಸಿಪಿಯ ಅಜಿತ್ ಪವಾರ್ ಅವರು ಅದೇ ದಿನ ಬೆಳಿಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿರುವುದನ್ನು ಟಿವಿ ಚಾನೆಲ್‍ಗಳು ಪ್ರಸಾರ ಮಾಡುತ್ತಿದ್ದುವು. ಶನಿವಾರ ಬೆಳ್ಳಂ ಬೆಳಗ್ಗೆ 5.30ರ ಹೊತ್ತಿಗೆ ಫಡ್ನವಿಸ್ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾದರು. ಸರ್ಕಾರ ರಚಿಸುವ ಹಕ್ಕು ಮಂಡಿಸಿದರು. ತಕ್ಷಣ ರಾಷ್ಟ್ರಪತಿ ಆಳ್ವಿಕೆಯನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಯಿತು. 7.30ರ ಹೊತ್ತಿಗೆ ಪ್ರಮಾಣ ವಚನ ಕಾರ್ಯಕ್ರಮವೂ ನಡೆಯಿತು. ನಿಜವಾಗಿ,
ಇದೊಂದು ದಿಢೀರ್ ಪ್ರಕ್ರಿಯೆ. ಇದೂ ಸಾಧ್ಯ ಅನ್ನುವುದನ್ನು ಈ ದೇಶದ ನಾಗರಿಕರು ಊಹಿಸಿರುವ ಸಾಧ್ಯತೆ ಇಲ್ಲವೇ ಇಲ್ಲ. ಒಂದು ಸರಕಾರ ರಚನೆಗಾಗಿ ರಾಜ್ಯಪಾಲರು ಬೆಳ್ಳಂಬೆಳಗ್ಗೆ ಗಂಟೆ 5.30ಕ್ಕೆ ಚುರುಕಾಗುವುದು, ಅದಕ್ಕೆ ಕೇಂದ್ರ ಸರಕಾರ ಸಾಥ್ ನೀಡುವುದು ಮತ್ತು ಇದಾಗಿ ಎರಡೇ ಗಂಟೆಯೊಳಗೆ ಹೊಸ ಸರಕಾರ ಪ್ರತಿಜ್ಞಾ ವಿಧಿ ಸ್ವೀಕರಿಸುವುದು.. ಇವೆಲ್ಲ ದೇಶದ ಪಾಲಿಗೆ ಅಚ್ಚರಿ ಮತ್ತು ಆಘಾತದ ಸುದ್ದಿ. ಇಷ್ಟೊಂದು ತುರ್ತು ಅಗತ್ಯವಿತ್ತೇ ಅನ್ನುವ ಪ್ರಶ್ನೆಯ ಜೊತೆಗೇ ಸಾಂವಿಧಾನಿಕವಾಗಿ ಇಂಥದ್ದೊಂದು ನಡೆಗೆ ಸಮ್ಮತಿ ಇದೆಯೇ ಎಂಬ ಪ್ರಶ್ನೆಯೂ ನಾಗರಿಕರಲ್ಲಿ ವ್ಯಾಪಕ ಮಟ್ಟದಲ್ಲಿ ಚರ್ಚೆಗೆ ಒಳಗಾಯಿತು. ರಾಜ್ಯ ಪಾಲರ ಅಧಿಕಾರ ವ್ಯಾಪ್ತಿ ಮತ್ತು ಅವರು ಯಾರಿಗೆ ಮತ್ತು ಯಾವುದಕ್ಕೆ ನಿಷ್ಠರಾಗಿರಬೇಕು ಎಂಬ ಬಗ್ಗೆ ತೀವ್ರ ಸಂವಾದಗಳೂ ನಡೆದುವು. ಫಡ್ನವಿಸ್ ಅವರು ಅಜಿತ್ ಪವಾರ್ ಜೊತೆ ಸೇರಿ ಸರಕಾರ ರಚಿಸುವ ಬಗ್ಗೆ ಸಾರ್ವಜನಿಕರಿಗೆ ಯಾವ ಮುನ್ಸೂ ಚನೆಯೂ ಇರಲಿಲ್ಲ. ದೇಶವನ್ನು ಕತ್ತಲಲ್ಲಿಟ್ಟು ಒಂದು ಸರಕಾರ ರಚಿಸುವ ತುರ್ತು ಏನಿತ್ತು? ಮಹಾರಾಷ್ಟ್ರದಲ್ಲಿ ಅಂಥ ಅಪಾಯಕಾರಿ ರಾಜಕೀಯ ಶೂನ್ಯತೆ ಸೃಷ್ಟಿಯಾಗಿತ್ತೇ? ಆಡಳಿತ ಸ್ತಬ್ಧವಾಗಿತ್ತೇ? ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವಾಗ ಕತ್ತಲಲ್ಲಿ ಸರಕಾರ ರಚಿಸುವಷ್ಟು ತುರ್ತನ್ನು ರಾಜ್ಯಪಾಲರು ಪ್ರದರ್ಶಿಸಿದ್ದೇಕೆ? ದೇವೇಂದ್ರ ಫಡ್ನವಿಸ್‍ರಲ್ಲಿ ಸರಕಾರ ರಚಿಸುವಷ್ಟು ಬಹುಮತ ಇದೆ ಎಂಬುದನ್ನು ರಾಜ್ಯಪಾಲರು ಯಾವ ಆಧಾರದಲ್ಲಿ ಸ್ಪಷ್ಟ ಪಡಿಸಿಕೊಂಡರು? ಅಜಿತ್ ಪವಾರ್ ರ ಜೊತೆ ಆ ಮೊದಲು ಬಿಜೆಪಿ ಮಾತುಕತೆ ನಡೆಸಿದ್ದಾಗಲಿ, ಮೈತ್ರಿ ಸಾಧ್ಯತೆಗಳಾಗಲಿ ಸಾರ್ವಜನಿಕವಾಗಿ ಬಹಿರಂಗವಾಗಿರಲಿಲ್ಲ. ಅಂಥದ್ದೊಂದು ಸೂಚನೆ ಮಾಧ್ಯಮಗಳಿಗೂ ದಕ್ಕಿರಲಿಲ್ಲ. ಅದರ ಬದಲು ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್‍ಗಳು ಬಹಿರಂಗವಾಗಿ ಮೈತ್ರಿ ಮಾತು ಕತೆ ನಡೆಸುತ್ತಿದ್ದುವು. ಅವು ಜೊತೆ ಸೇರಿ ಸರಕಾರ ರಚಿಸುವ ಎಲ್ಲ ಸಾಧ್ಯತೆಗಳೂ ದಿನೇ ದಿನೇ ಸ್ಪಷ್ಟವಾಗುತ್ತಲೇ ಇತ್ತು. ಹೀಗಿರುವಾಗ ಈ ಬಹಿರಂಗ ಮೈತ್ರಿಯ ಬದಲು ಅಜಿತ್ ಮತ್ತು ಫಡ್ನವಿಸ್‍ರ ‘ರಾತ್ರಿ ಮೈತ್ರಿ’ಯ ಮೇಲೆ ರಾಜ್ಯಪಾಲರು ವಿಶ್ವಾಸ ತಾಳಿದ್ದು ಯಾಕೆ? ಆ ಬಳಿಕ ಸದನದಲ್ಲಿ ಬಹುಮತ ಸಾಬೀತು ಪಡಿಸಲು ಒಂದು ವಾರಗಳಷ್ಟು ದೀರ್ಘ ಅವಧಿಯನ್ನು ರಾಜ್ಯ ಪಾಲರು ಫಡ್ನವಿಸ್‍ರಿಗೆ ನೀಡಿದ್ದು ಏಕೆ? ಏನಿದರ ಉದ್ದೇಶ? ಒಂದುವೇಳೆ, ಫಡ್ನವಿಸ್‍ರ ಮೇಲೆ ರಾಜ್ಯಪಾಲರಿಗೆ ಅಷ್ಟೊಂದು ವಿಶ್ವಾಸ ಇದ್ದಿದ್ದರೆ ಮರುದಿನವೇ ಸದನದಲ್ಲಿ ವಿಶ್ವಾಸ ಮತ ಕೋರುವಂತೆ ಆದೇಶಿಸಬಹುದಿತ್ತಲ್ಲವೇ... ಇವು ಮತ್ತು ಇಂಥ ಇನ್ನೂ ಅನೇಕ ಪ್ರಶ್ನೆಗಳು ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಮಾತ್ರವಲ್ಲ, ರಾಜ್ಯಪಾಲರು ಈ ಎಲ್ಲ ಚರ್ಚೆಗಳ ಕೇಂದ್ರಬಿಂದುವಾದರು. ಅಂದಹಾಗೆ,
1969ರಲ್ಲಿ ತಮಿಳುನಾಡಿನಲ್ಲಿ ಜಸ್ಟಿಸ್ ಪಿ.ವಿ. ರಾಜಮನ್ನಾರ್ ಸಮಿತಿಯನ್ನು ರಚಿಸಲಾಗಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವಿನ ಸಂಬಂಧ ಸುಧಾರಣೆಯ ಕುರಿತಂತೆ ಪರಾಮರ್ಶೆ ನಡೆಸುವ ಮತ್ತು ಸಲಹೆ ನೀಡುವ ಹೊಣೆಗಾರಿಕೆ ಈ ಸಮಿತಿಯದ್ದು. ರಾಜ್ಯಪಾಲರ ನೇಮಕವು ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವಿನ ಸಮಾಲೋಚನೆಯ ಬಳಿಕ ನಡೆಯಬೇಕು ಎಂದು ಈ ಸಮಿತಿ ಸಲಹೆ ನೀಡಿತ್ತು. ಆದರೆ, ಈ ಸಲಹೆ ಈ ವರೆಗೂ ಪುರಸ್ಕøತಗೊಂಡಿಲ್ಲ ಮತ್ತು ರಾಜ್ಯಪಾಲರೆಂದರೆ, ಕೇಂದ್ರದ ಆದೇಶವನ್ನು ಜಾರಿ ಮಾಡುವ ಸೇವಕ ಎಂಬ ಭಾವನೆ ಸಾರ್ವಜನಿಕವಾಗಿ ಚಾಲ್ತಿಯಲ್ಲಿದೆ. ನಿಜವಾಗಿ,
ಇದು ಸಂವಿಧಾನವನ್ನು ದುರ್ಬಲಗೊಳಿಸುವ ಸ್ಥಿತಿ. ಇಂಥ ಬೆಳವಣಿಗೆಗಳು ಸಂವಿಧಾನವನ್ನು ನಿಧಾನಕ್ಕೆ ಅಪ್ರಸ್ತುತಗೊಳಿಸತೊಡಗುತ್ತದೆ. ಸಂವಿಧಾನದ ಬಗ್ಗೆ ನಾಲಗೆಯಿಂದ ಹೆಮ್ಮೆಯ ಮಾತು ಗಳನ್ನಾಡುತ್ತಾ ಕ್ರಿಯೆಯಿಂದ ಸಂವಿಧಾನವನ್ನೇ ದುರ್ಬಲಗೊಳಿಸುವ ಇಂಥ ಬೆಳವಣಿಗೆಗಳು ಅತ್ಯಂತ ಅಪಾಯಕಾರಿ. ಈ ಜಗತ್ತಿನಲ್ಲಿ ಹುಟ್ಟಿಕೊಂಡ ಅನೇಕ ಲಿಖಿತ ಸಂವಿಧಾನಗಳು ಹುಟ್ಟಿಕೊಂಡಷ್ಟೇ ವೇಗವಾಗಿ ಸಾವಿಗೀಡಾದದ್ದೂ ಇದೆ. ಅದಕ್ಕೆ, ಆ ಸಂವಿಧಾನದಲ್ಲಿ ಉಲ್ಲೇಖಗೊಂಡಿರುವ ವಿಧಿಗಳೋ ಪರಿಚ್ಛೇದಗಳೋ ರಾಜ್ಯ ನಿರ್ದೇಶಕ ತತ್ವಗಳೋ ಕಾರಣ ಅಲ್ಲ. ಅದನ್ನು ಜಾರಿ ಮಾಡ ಬೇಕಾದವರು ಅದರಲ್ಲಿ ವಿಫಲವಾದಾಗ ಮತ್ತು ಸ್ವಾರ್ಥಕ್ಕಾಗಿ ಸಂವಿಧಾನದ ಆಶಯಗಳನ್ನೇ ನಿರರ್ಥಕಗೊಳಿಸುವ ಕ್ರಿಯೆಯಲ್ಲಿ ತೊಡಗಿದಾಗ ಅಂತಿಮವಾಗಿ ಸಂವಿಧಾನಗಳೇ ಸತ್ತು ಹೋಗುತ್ತವೆ. ‘ಲಿಖಿತ ಸಂವಿಧಾನಗಳ ಆಯುಷ್ಯ’ ಎಂಬ ಹೆಸರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ನಡೆದ ಅಧ್ಯಯನ ಮತ್ತು ಅದರಿಂದ ಬಹಿರಂಗಕ್ಕೆ ಬಂದ ಸತ್ಯಗಳು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತವೆ.
ಥಾಮಸ್ ಗಿನ್ಸ್ ಬರ್ಗ್, ಝಾಕರಿ ಎಲ್‍ಕಿನ್ಸ್ ಮತ್ತು ಜೇಮ್ಸ್ ಮೆಲ್ಲನ್ ಅವರನ್ನೊಳಗೊಂಡ ಈ ಅಧ್ಯಯನ ತಂಡವು 1789 ರಿಂದ 2006ರ ವರೆಗಿನ ಸಂವಿಧಾನಗಳ ಬಗ್ಗೆ ಅಧ್ಯಯನ ನಡೆಸಿದೆ. ಈ ಅವಧಿಯಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಎಷ್ಟು ಲಿಖಿತ ಸಂವಿಧಾನಗಳು ಅಸ್ತಿತ್ವಕ್ಕೆ ಬಂದಿವೆ, ಅವು ಎಷ್ಟು ಜೀವಂತವಿವೆ ಮತ್ತು ಎಷ್ಟು ಸಂವಿಧಾನಗಳ ಆಯುಷ್ಯ ಮುಗಿ ದಿವೆ ಎಂಬುದನ್ನು ನಿಖರವಾಗಿ ಈ ಸಮಿತಿ ಪಟ್ಟಿ ಮಾಡಿದೆ. ವಿಶೇಷ ಏನೆಂದರೆ, ಲಿಖಿತ ಸಂವಿಧಾನಗಳ ಆಯುಷ್ಯ ಬಹಳ ಹೃಸ್ವ. 1789ರಿಂದ 2006ರ ನಡುವೆ ಒಟ್ಟು 792 ಸಂವಿಧಾನಗಳು ಈ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಅಸ್ತಿತ್ವಕ್ಕೆ ಬಂದಿವೆ. ಹಾಗಂತ, ಜಗತ್ತಿನಲ್ಲಿ 792 ರಾಷ್ಟ್ರಗಳು ಇವೆ ಎಂದಲ್ಲ. ರಾಷ್ಟ್ರಗಳ ಸಂಖ್ಯೆ ಗಿಂತ ಮೂರು ಪಟ್ಟು ಹೆಚ್ಚು ಸಂವಿಧಾನಗಳು ಅಸ್ತಿತ್ವಕ್ಕೆ ಬಂದುದು ಹೇಗೆಂದರೆ, ಒಂದರ ಜಾಗದಲ್ಲಿ ಇನ್ನೊಂದು. ಅದರ ಜಾಗದಲ್ಲಿ ಮತ್ತೊಂದು. ಹೀಗೆ 518 ಸಂವಿಧಾನಗಳು ಹಳೆ ಸಂವಿಧಾನಗಳನ್ನು ಸಾಯಿಸಿ ಅಸ್ತಿತ್ವಕ್ಕೆ ಬಂದುವು ಎಂದು ಹೇಳಲಾಗಿದೆ. ಈ ನಡುವೆ ಸಂವಿಧಾನಕ್ಕೆ ತಿದ್ದುಪಡಿಗಳ ಮೇಲೆ ತಿದ್ದುಪಡಿಗಳು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ನಡೆಯುತ್ತಲೂ ಇವೆ. ಯಾವ ಲಿಖಿತ ಸಂವಿಧಾನವೂ ದೀರ್ಘಾಯುಷಿಯಲ್ಲ. ಹೆಚ್ಚೆಂದರೆ, 17 ವರ್ಷಗಳಷ್ಟು ಸಂವಿಧಾನಗಳು ಬಾಳುತ್ತವೆ, ಆ ಬಳಿಕ ಅವು ಬದಲಾವಣೆಗೆ ಒಳಗಾಗುತ್ತವೆ, ಬುಡಸಮೇತ ಕುಸಿದು ಬೀಳುತ್ತವೆ, ಅಪ್ರಸ್ತುತಗೊಳ್ಳುತ್ತವೆ ಎಂದು ಅಧ್ಯಯನ ಕಂಡುಕೊಂಡಿದೆ. ಹಾಗಂತ,
ಈ ಅಧ್ಯಯನಕ್ಕಿಂತ ಮೊದಲು ಭಾರತೀಯ ಸಂವಿ ಧಾನದ ಆಯುಷ್ಯದ ಕುರಿತೂ ಈ ಹಿಂದೆ ಚರ್ಚೆಗಳಾಗಿತ್ತು. ಜಗತ್ತಿನ ವಿವಿಧ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ನಡೆಸಿ ಅವುಗಳಲ್ಲಿರುವ ಉತ್ತಮ ಮತ್ತು ಪ್ರಾಯೋಗಿಕ ಅಂಶಗಳನ್ನು ಎತ್ತಿಕೊಂಡು ರಚಿಸಲಾದ ಭಾರತೀಯ ಸಂವಿಧಾನದ ಆಯುಷ್ಯ ಎಷ್ಟು ದೀರ್ಘ ಎಂದು ತಜ್ಜರು ಚರ್ಚೆ ನಡೆಸಿದ್ದರು. ಬ್ರಿಟಿಷ್ ನ್ಯಾಯವಾದಿ, ಅಕಾಡೆಮಿಕ್ ಮತ್ತು ಕೇಂಬ್ರಿಜ್ ವಿವಿಯ ವೈಸ್ ಚಾನ್ಸಲರ್ ಆಗಿದ್ದ ಸರ್ ಐವನ್ ಜೆನ್ನಿಂಗ್ಸ್ ಇಂಥವರಲ್ಲಿ ಒಬ್ಬರು. ಅವರು ಭಾರತೀಯ ಸಂವಿಧಾನದ ಅತಿದೊಡ್ಡ ಟೀಕಾಕಾರರಾಗಿದ್ದರು. ಈ ಸಂವಿಧಾನದ ದೀರ್ಘ ಬಾಳಿಕೆಯ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದರು. ಮದ್ರಾಸ್ ವಿಶ್ವವಿದ್ಯಾಲಯವು 1951ರಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾರತೀಯ ಸಂವಿಧಾನವನ್ನು ವಿಮರ್ಶಿಸಿದ್ದರು.
ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಅವರು ಸರಣಿ ಉಪನ್ಯಾಸ ನೀಡಿದ್ದರು. ಸಂವಿಧಾನ ತಜ್ಞನೆಂಬ ನೆಲೆಯಲ್ಲಿ ಅವರನ್ನು ವಿಶೇಷವಾಗಿ ಉಪನ್ಯಾಸಕ್ಕೆ ಆಹ್ವಾನಿಸಲಾಗಿತ್ತು. ವಿಶೇಷ ಏನೆಂದರೆ, ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರು ಜೆನ್ನಿಂಗ್ ಅವರ ಈ ಎಲ್ಲ ಉಪನ್ಯಾಸಗಳಲ್ಲೂ ಸಭಿಕರಾಗಿ ಪಾಲ್ಗೊಂಡಿದ್ದರು. ಜೆನ್ನಿಂಗ್ ಅವರು ಭಾರತೀಯ ಸಂವಿಧಾನವನ್ನು ‘ತುಂಬಾ ದೀರ್ಘ, ತುಂಬಾ ಸಂಕೀರ್ಣ ಮತ್ತು ಇತಿಹಾಸದ ಬಂಧನದಲ್ಲಿರುವ ಸಂಹಿತೆ’ ಎಂದು ಕರೆದಿದ್ದರು. ಕುತೂಹಲದ ವಿಷಯ ಏನೆಂದರೆ, ಇದೇ ಜೆನ್ನಿಂಗ್ ಅವರು ಸೇರಿ ತಯಾರಿಸಿದ ಶ್ರೀಲಂಕಾದ ಸಂವಿಧಾನವು ಬರೇ ಆರೇ ವರ್ಷಗಳಲ್ಲಿ ಸಾವಿಗೀಡಾದದ್ದು. ನಿಜವಾಗಿ,
ಜೆನ್ನಿಂಗ್ ಅವರ ಮಾತನ್ನು ಸುಳ್ಳು ಮಾಡಿ ಭಾರತೀಯ ಸಂವಿಧಾನವು ನವೆಂಬರ್ 26ರಂದು 70ನೇ ವರ್ಷಕ್ಕೆ ಕಾಲಿಟ್ಟಿದೆ. ಜಗತ್ತಿನ ದೀರ್ಘಾಯುಷ್ಯದ ಲಿಖಿತ ಸಂವಿಧಾನಗಳಲ್ಲಿ ಭಾರತೀಯ ಸಂವಿಧಾನವೂ ಒಂದು. ಆದರೆ, ಈ ಸಂವಿಧಾನವನ್ನು ಅಪ್ರಸ್ತುತ ಗೊಳಿಸುವ ಪ್ರಕ್ರಿಯೆಗಳು ರಾಜಕೀಯವಾಗಿ ಮತ್ತೆ ಮತ್ತೆ ನಡೆಯುತ್ತಲೇ ಇವೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಷ್ಟ್ರಪತಿ ಆಳ್ವಿಕೆಯನ್ನು ರಾತೋರಾತ್ರಿ ರದ್ದುಪಡಿಸುವಂತೆ ರಾಷ್ಟ್ರಪತಿಯವರಿಗೆ ಸೂಚಿಸುವ ವಿಶೇಷಾಧಿಕಾರ ಪ್ರಧಾನ ಮಂತ್ರಿಯವರಿಗೆ ಇರಬಹುದು. ಹಾಗೆಯೇ, ಬೆಳ್ಳಂಬೆಳಗ್ಗೆ 5.30ಕ್ಕೆ ರಾಜ್ಯಪಾಲರು ಚುರುಕಾಗುವುದು ಮತ್ತು ಎರಡು ಗಂಟೆಯೊಳಗೆಯೇ ಸರಕಾರವೊಂದರ ರಚನೆಗೆ ಮುಂದಾಗುವುದೆಲ್ಲ ಸಾಂವಿಧಾನಿಕವಾಗಿ ಸರಿಯೇ ಇರಬಹುದು. ಆದರೆ, ನೈತಿಕವಾಗಿ ಎಷ್ಟು ಸರಿ? ರಾಜ್ಯಪಾಲರು ಆ ಮಟ್ಟದಲ್ಲಿ ಚುರುಕಾಗಲೇ ಬೇಕಾದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿಯೇ ಇರಲಿಲ್ಲವಲ್ಲ. ಬೆಳ್ಳಂಬೆಳಗ್ಗೆ ರಾಷ್ಟ್ರಪತಿ ಆಡಳಿತವನ್ನು ರದ್ದುಪಡಿಸ ಬೇಕಾದ ಸಾಂವಿಧಾನಿಕ ತುರ್ತು ನಿರ್ಮಾಣವಾಗಿಯೇ ಇರಲಿಲ್ಲವಲ್ಲ. ಎರಡು ತದ್ವಿರುದ್ಧ ನಿಲುವಿನ ಪಕ್ಷಗಳು (ಬಿಜೆಪಿ-ಎನ್‍ಸಿಪಿ) ಸರಕಾರ ರಚನೆಯ ಕಾರಣಕ್ಕಾಗಿ ಮೈತ್ರಿ ಮಾತುಕತೆ ನಡೆಸಿರುವುದು ಎಲ್ಲೂ ಬಹಿರಂಗವಾಗಿ ನಡೆದೇ ಇರಲಿಲ್ಲವಲ್ಲ. ಹೀಗಿರುವಾಗ, ರಾಜ್ಯಪಾಲರ ನಡೆಯು ಸಂವಿಧಾನದ ವರ್ಚಸ್ಸಿನ ಮೇಲೆ ಬೀರುವ ಪರಿಣಾಮ ಏನು? ಅವರು ಮಾಡಿದ್ದು ಸಾಂವಿಧಾನಿಕವಾಗಿ ಸರಿ ಎಂದು ಸಮರ್ಥಿಸುವುದರಿಂದ ಸಂವಿಧಾನವನ್ನು ದುರ್ಬಲ ಗೊಳಿಸಿದಂತಾಗುವುದಿಲ್ಲವೇ? ಅಷ್ಟಕ್ಕೂ,
ಸಂವಿಧಾನದ ಅಳಿವು ಮತ್ತು ಉಳಿವು ಅದನ್ನು ಜಾರಿ ಮಾಡು ವವರ ಕೈಯಲ್ಲಿದೆ. ಕೋಶಿಯಾರಿ ಅವರ ನಡೆಯು ಅದರ ಉಳಿವಿಗೆ ಪೂರಕವಾಗಿಲ್ಲ. ಅದು ಜೆನ್ನಿಂಗ್‍ಗಷ್ಟೇ ಸಂತಸ ಕೊಡಬಹುದು.

Thursday, December 5, 2019

ಒಂದುವೇಳೆ, ಹೆಣ್ಣಿನ ಬದಲು ಗಂಡು ಗರ್ಭ ಧರಿಸುವಂತಾಗಿದ್ದರೆ ಹೇಗಿರುತ್ತಿತ್ತು?


ಒಂದುವೇಳೆ, ಹೆಣ್ಣಿನ ಬದಲು ಗಂಡು ಗರ್ಭ ಧರಿಸು ವಂತಾಗಿದ್ದರೆ ಹೇಗಿರುತ್ತಿತ್ತು?
ಅರ್ಥಶಾಸ್ತ್ರಜ್ಞರಾದ ರಿತಿಕಾ ಖೇರಾ, ಜೀನ್ ಡ್ರೇಝ ಮತ್ತು ಸಮಾಜ ವಿಜ್ಞಾನಿ ಅನ್ಮೋಲ್ ಸೊಮಾಂಚಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಸ್ವಯಂ ಸೇವಕರು ಇತ್ತೀಚೆಗೆ ಕೈಗೊಂಡ ತಾಯಿ-ಮಗು  ಸಮೀಕ್ಷೆ (ಜಚ್ಚಾ-ಬಚ್ಚಾ ಸರ್ವೇ)ಯ ಫಲಿತಾಂಶವನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಈ ಮೇಲಿನ ಪ್ರಶ್ನೆಯನ್ನು ಖಂಡಿತ ಕೇಳಿಯೇ ಕೇಳುತ್ತೀರಿ.
ಈ ದೇಶದ ಪ್ರಮುಖ 6 ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‍ಗಢ, ಒಡಿಸ್ಸಾ, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್‍ಗಳ ಒಟ್ಟು 706 ಗರ್ಭಿಣಿ ಹಾಗೂ ಎದೆಹಾಲು ಉಣಿಸುವ  ತಾಯಂದಿರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ 6 ರಾಜ್ಯಗಳ ಪೈಕಿ ಪ್ರತಿ ರಾಜ್ಯದ 6 ಜಿಲ್ಲೆಗಳನ್ನು ಆಯ್ಕೆ ಮಾಡಿ 60 ಅಂಗನವಾಡಿ ಕೇಂದ್ರಗಳ ಮೂಲಕ 342 ಗರ್ಭಿಣಿ ಯರು ಮತ್ತು 364  ಹಾಲು ಉಣಿಸುವ ತಾಯಂದಿರನ್ನು ಈ ಸಮೀಕ್ಷೆಗಾಗಿ ಮಾತಾಡಿಸಲಾಗಿತ್ತು. ವಿಷಾದ ಏನೆಂದರೆ, ಗರ್ಭ ಧರಿಸಿದ ಮತ್ತು ಗರ್ಭ ಧರಿಸಿಲ್ಲದ ಈ ಎರಡು ಸ್ಥಿತಿಗಳಲ್ಲಿ ಹೆಣ್ಣು ಹೇಗಿರುತ್ತಾಳೆ ಅನ್ನುವ ಬಗ್ಗೆ  ಸಾಮಾನ್ಯ ಪುರುಷರಲ್ಲಿ ತಿಳುವಳಿಕೆ ತೀರಾ ಕಡಿಮೆ. ಹಾಗಂತ, ಇವೆರಡೂ ಸ್ಥಿತಿಗಳು ಪರಿಗಣನೆಗೆ ಮತ್ತು ಅಧ್ಯಯನಕ್ಕೆ ಅರ್ಹ ಅನ್ನುವ ಭಾವನೆಯೇ ಇಲ್ಲದ ಪುರುಷರ ಸಂಖ್ಯೆ ಧಾರಾಳ ಇದೆ. ಗರ್ಭ  ಧರಿಸುವುದಕ್ಕಿಂತ ಮುಂಚೆ ಪತ್ನಿ ಹೇಗಿದ್ದಳೋ ಮತ್ತು ಏನೆಲ್ಲ ಸೇವೆಯನ್ನು ಮಾಡುತ್ತಿದ್ದಳೋ ಅವೆಲ್ಲವನ್ನೂ ಗರ್ಭ ಧರಿಸಿದ ಬಳಿಕವೂ ಪುರುಷ ಅಪೇಕ್ಷಿಸುತ್ತಾನೆ. ಆಕೆಯ ಮೂಡ್ ಸ್ವಿಂಗ್ ಸ್ಥಿತಿ, ದೇಹದ  ಚಟುವಟಿಕೆಯಲ್ಲಿ ಆಗುತ್ತಿರುವ ವ್ಯತ್ಯಾಸ, ವಾಂತಿ, ಸುಸ್ತು, ತಲೆ ಸುತ್ತುವಿಕೆಯಂಥ ಹಲವಾರು ಸ್ಥಿತಿಗತಿಗಳ ಕುರಿತು ಪುರುಷ ಜಗತ್ತು ಓದಿಕೊಳ್ಳುವುದು ಕಡಿಮೆ. ಗರ್ಭದಾರಣೆ ಎಂಬುದನ್ನು ಪರಿಗಣಿಸತಕ್ಕ  ವಿಷಯವೇ ಅಲ್ಲವೆಂಬಂತೆ ಬದುಕುವ ಪುರುಷರ ಸಂಖ್ಯೆ ಸಣ್ಣದೇನಲ್ಲ. ಇದಕ್ಕಿರುವ ಕಾರಣಗಳೇನೇ ಇರಲಿ, ಗರ್ಭಿಣಿ ಮತ್ತು ಹಾಲೂಡಿಸುವ ಮಹಿಳೆಯರು ಭಾರತ ದಲ್ಲಿ ಅನುಭವಿಸುವ ಸಮಸ್ಯೆ ಬಹಳ  ದೊಡ್ಡದು ಅನ್ನುವುದನ್ನು ಸಮೀಕ್ಷೆ ಹೇಳುತ್ತದೆ. ನಿಜವಾಗಿ,
ಪ್ರಸವದ ಸಂದರ್ಭದಲ್ಲಿ ಸಾವಿಗೀಡಾದ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ, ನಿಜ. 2007ರಲ್ಲಿ ಭಾರತದಲ್ಲಿ ಪ್ರತಿ ಒಂದು ಲಕ್ಷ ಪ್ರಸವಗಳ ಪೈಕಿ 212 ಮಂದಿಯ  ಸಾವು ಸಂಭವಿಸುತ್ತಿದ್ದರೆ ಇದು 2013ಕ್ಕಾಗುವಾಗ 167ಕ್ಕೆ ಕುಸಿದಿದೆ ಎಂಬುದೂ ನಿಜ. ಭಾರತದಲ್ಲಿ ಪ್ರತಿವರ್ಷ 44 ಸಾವಿರ ಮಂದಿ ಪ್ರಸವದ ಬಳಿಕ ಸಾವಿಗೀಡಾಗುತ್ತಾರೆ ಎಂಬ ಅಂಕಿ ಅಂಶವಿದೆ.  ಅಂದಹಾಗೆ, ಈ ಸಂಖ್ಯೆ ಸಣ್ಣದೇನಲ್ಲ. ಜಗತ್ತಿನ ಒಟ್ಟು ಸಾವುಗಳ ಪೈಕಿ 20% ಸಾವು ಕೇವಲ ಭಾರತದಲ್ಲೇ ನಡೆಯುತ್ತಿದೆ. ಜಾಗತಿಕವಾಗಿ ಪ್ರತಿದಿನ ಪ್ರಸವದ ಬಳಿಕ 800 ಮಹಿಳೆಯರು  ಸಾವಿಗೀಡಾಗುತ್ತಿದ್ದಾರೆ. ವಿಶೇಷ ಏನೆಂದರೆ, ಪ್ರಸವದ ಬಳಿಕದ ಸಾವಿನಲ್ಲಿ ನೈಜೀರಿಯಾ ಮೊದಲ ಸ್ಥಾನದಲ್ಲಿದ್ದರೆ ಭಾರತ ದ್ವಿತೀಯ ಸ್ಥಾನದಲ್ಲಿದೆ. ಈ ಸ್ಥಾನಗಳನ್ನು ಲೆಕ್ಕಿಸದೇ ಈ ಕ್ಷೇತ್ರದ ಬಗ್ಗೆ ನಾವು  ಅಧ್ಯಯನ ನಡೆಸುವಾಗ ಮಹಿಳಾ ಜಗತ್ತಿನ ಬಗ್ಗೆ ಗಂಡು ಸಮಾಜದಲ್ಲಿ ಒಟ್ಟು ನಿರ್ಲಕ್ಷ್ಯ ಭಾವವೊಂದು ಸ್ಪಷ್ಟವಾಗಿ ಕಾಣಿಸುತ್ತದೆ. ಗರ್ಭ ಧರಿಸಿದ ಬಳಿಕ ಸುಮಾರು 13ರಿಂದ 18 ಕಿಲೋ ಗ್ರಾಂನಷ್ಟು ತೂಕ  ಹೆಚ್ಚಿಸಿಕೊಳ್ಳಬೇಕಾದುದು ಆರೋಗ್ಯಪೂರ್ಣ ಮಗುವನ್ನು ಪ್ರಸವಿಸುವ ದೃಷ್ಟಿಯಿಂದ ಗರ್ಭಿಣಿಯ ಪಾಲಿಗೆ ಅಗತ್ಯ. ಆದರೆ ಇದಕ್ಕೆ ಪೌಷ್ಠಿ ಕಾಂಶಯುಕ್ತ ಆಹಾರ ಬೇಕು. ಇಂಥ ಆಹಾರವನ್ನು ಪಡೆದುಕೊಳ್ಳ  ಬೇಕಾದರೆ ಸರಕಾರದ ಸೌಲಭ್ಯಗಳು ತ್ವರಿತವಾಗಿ ಗರ್ಭಿಣಿಯರಿಗೆ ತಲುಪಿಸುವ ವ್ಯವಸ್ಥೆಯಾಗಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಅಂಗನವಾಡಿಯಲ್ಲಿ ಮಹಿಳೆಯರಿದ್ದರೂ ಇವರಿಗೆ ಸೌಲಭ್ಯವನ್ನು  ತಲುಪಿಸುವಲ್ಲಿಂದ ಹಿಡಿದು ಸರಕಾರದ ಮತ್ತು ಆಡಳಿತ ವ್ಯವಸ್ಥೆಯ ಆಯಕಟ್ಟಿನ ಜಾಗದ ವರೆಗೆ ಪುರುಷರ ಪ್ರಾಬಲ್ಯ ಇರುವುದರಿಂದಲೋ ಏನೋ ‘ಪ್ರಧಾನಮಂತ್ರಿ ಮಾತೃವಂದನಾ ಯೋಜನೆ’ಯಾಗಲಿ  ಇನ್ನಾವುದೇ ಕಾರ್ಯಕ್ರಮಗಳಾಗಲಿ ಗರ್ಭಿಣಿಯರನ್ನು ಸಮರ್ಪಕ ವಾಗಿ ತಲುಪುತ್ತಿಲ್ಲ. ಅಂದಹಾಗೆ,
ಕೊರತೆ ಇರುವುದು ಯೋಜನೆಗಳಲ್ಲಲ್ಲ, ಅದನ್ನು ಸಮರ್ಪಕ ವಾಗಿ ಅನುಷ್ಠಾನ ಮಾಡುವುದರಲ್ಲಿ. ಗರ್ಭಧಾರಣೆಯ ಕುರಿತಂತೆ ಪುರುಷ ಅತ್ಯಂತ ಸಂವೇದನಾಶೀಲತೆಯನ್ನು ಪ್ರದರ್ಶಿಸಿದರೆ ಒಟ್ಟು  ವಾತಾವರಣದಲ್ಲೇ ಬದಲಾವಣೆ ಉಂಟಾಗಬಹುದು. ಪ್ರಸವದ ದಿನದ ವರೆಗೆ ಕೂಲಿ ಕೆಲಸ ಮಾಡಿರುವುದಾಗಿ ಓರ್ವಳು ಸಮೀಕ್ಷೆ ಯಲ್ಲಿ ಹೇಳಿಕೊಂಡಿರುವುದು ಇಲ್ಲಿ ಉಲ್ಲೇಖನೀಯ. ಸಾಮಾನ್ಯವಾಗಿ,
ಮನೆಯ ಕೆಲಸ ಕಾರ್ಯಗಳನ್ನು ಮಹಿಳೆಯೇ ಮಾಡುವುದಿದೆ. ಪುರುಷ ಹೊರಗೆ ಹೋಗಿ ದುಡಿಯುವಾಗ ಮನೆಯೊಳಗಿನ ಕೆಲಸಗಳನ್ನು ಸಂಭಾಳಿಸುವುದನ್ನು ಮಹಿಳೆ ವಹಿಸಿಕೊಳ್ಳುತ್ತಾಳೆ. ಶೌಚಾಲಯ  ಸ್ನಾನಗೃಹಗಳನ್ನು ಶುಚೀಕರಿಸುವುದು, ಮನೆ ಗುಡಿಸು ವುದು, ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಮಕ್ಕಳನ್ನು ಶಾಲೆಗೆ ಸಿದ್ಧಗೊಳಿಸುವುದು ಇತ್ಯಾದಿಗಳನ್ನು ಕರ್ತವ್ಯವೆಂಬಂತೆ ಮಾಡುವ ಆಕೆ,  ಗರ್ಭ ಧರಿಸಿದ ಬಳಿಕವೂ ಈ ಕೆಲಸಗಳಿಗೆ ವಿನಾಯಿತಿ ಸಿಗದ ಸ್ಥಿತಿಯಲ್ಲಿದ್ದಾಳೆ ಅನ್ನುವುದಕ್ಕೆ ಏನು ಕಾರಣ? ಇದು ಬರೇ ಅನಿವಾರ್ಯತೆಯೋ ಅಥವಾ ಗರ್ಭದ ಬಗ್ಗೆ ಪುರುಷರಲ್ಲಿ ಇರುವ  ತಿಳುವಳಿಕೆಯ ಕೊರತೆ ಮತ್ತು ಆ ಕಾರಣ ವಾಗಿ ಸೃಷ್ಟಿಯಾಗಿರುವ ಅಸಡ್ಡೆಭಾವವೋ? ನಿಜವಾಗಿ,
ಮನೆಯಲ್ಲಿ ಬಾಲಪಾಠವಾಗಿ ಇಂಥವುಗಳನ್ನು ಮಕ್ಕಳಿಗೆ ಕಲಿಸುವ ಸ್ಥಿತಿ ಇರಬೇಕು. ಗರ್ಭ, ಪ್ರಸವ, ಮಕ್ಕಳ ಪರಿಪಾಲನೆ ಮತ್ತು ಈ ಎಲ್ಲ ಸಂದರ್ಭಗಳಲ್ಲಿ ಹೆಣ್ಣು ಅನುಭವಿಸುವ ವೇದನೆ-ಸಂಕಟ- ತೊಳಲಾಟಗಳನ್ನು ಬಾಲ್ಯದಲ್ಲಿಯೇ ಮಕ್ಕಳು ಅರಿತುಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು. ಹಾಗಂತ, ಇಂಥವು ಮಕ್ಕಳಿಗೆ ಎಷ್ಟು ಅರ್ಥವಾಗುತ್ತವೆ ಎಂಬುದು ಮುಖ್ಯ ಅಲ್ಲ. ಅಲ್ಲೊಂದು  ಕುತೂಹಲದ ಹುಳವನ್ನು ಮಕ್ಕಳ ಮೆದುಳಿಗೆ ಕಳುಹಿಸುವ ಕೆಲಸ ನಡೆದರೂ ಸಾಕು, ಮುಂದೆ ಆ ಮಕ್ಕಳು ಬೆಳೆದಂತೆಲ್ಲ ಈ ಇಡೀ ಪ್ರಕ್ರಿಯೆಯ ಬಗ್ಗೆ ಕುತೂಹಲ ತಾಳುತ್ತಾರೆ. ಅಧ್ಯಯನ ನಡೆಸುತ್ತಾರೆ.  ಗರ್ಭ ಮತ್ತು ಪ್ರಸವ ಇವೆರಡನ್ನೂ ಆಧರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ. ಬಹುಶಃ, ಪವಿತ್ರ ಕುರ್‍ಆನ್ ಈ ಬಗ್ಗೆ ಪರಾಮರ್ಶೆ ನಡೆಸಿರುವುದಕ್ಕೆ ಇವೂ ಕಾರಣ ಇರಬಹುದೇನೋ-
“ಅವನ/ಳ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು/ಳನ್ನು ತನ್ನ ಗರ್ಭದಲ್ಲಿರಿಸಿದಳು ಮತ್ತು ಅವನ/ಳ ಸ್ತನಪಾನ ಬಿಡುವುದರಲ್ಲಿ ಎರಡು ವರ್ಷಗಳು ತಗುಲಿದುವು. ಆದುದರಿಂದ  ನಿನ್ನ ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸು.”
“ಅವನ/ಳ ತಾಯಿಯು ಬಹಳ ಕಷ್ಟಪಟ್ಟು ಅವನನ್ನು ಗರ್ಭ ದಲ್ಲಿರಿಸಿದಳು ಮತ್ತು ಕಷ್ಟಪಟ್ಟೇ ಅವನನ್ನು ಹೆತ್ತಳು. ಅವನ ಗರ್ಭಾವಧಿಯಲ್ಲಿ ಮತ್ತು ಎದೆಹಾಲು ಬಿಡಿಸುವುದರಲ್ಲಿ 30 ತಿಂಗಳುಗಳು ತಗುಲಿದುವು.”
ಪವಿತ್ರ ಕುರ್‍ಆನ್ ನ ಲುಕ್ಮಾನ್ (34) ಮತ್ತು ಅಅïಕಾಫ್ (15) ಎಂಬೆರಡು ಅಧ್ಯಾಯಗಳ ವಚನಗಳಿವು. ಪವಿತ್ರ ಕುರ್‍ಆನನ್ನು ಸಣ್ಣ ಪ್ರಾಯ ದಲ್ಲೇ ಮಕ್ಕಳಿಗೆ ಕಲಿಸಲಾಗುತ್ತದೆ. ಮಕ್ಕಳ ಮದ್ರಸ ಶಿಕ್ಷಣ ಆರಂಭವಾಗುವುದೇ  ಪವಿತ್ರ ಕುರ್‍ಆನನ್ನು ಅಧ್ಯಯನ ನಡೆಸುವ ಮೂಲಕ. ಹಾಗಂತ, ಪವಿತ್ರ ಕುರ್‍ಆನ್‍ನಲ್ಲಿರುವ ಎಲ್ಲವೂ ಆ ಸಣ್ಣ ಪ್ರಾಯದಲ್ಲೇ ಮಕ್ಕಳಿಗೆ ಜೀರ್ಣವಾಗುತ್ತದೆ ಎಂದಲ್ಲ. ಅದು ಸಾಧ್ಯವೂ ಇಲ್ಲ. ಆದರೆ, ಮಕ್ಕಳ  ಮನಸ್ಸಿಗೆ ಒಮ್ಮೆ ಒಂದು ವಿಷಯ ತಾಕಿಬಿಟ್ಟರೆ ಅವರು ಬೆಳೆಯುತ್ತಲೇ ಆ ವಿಷಯ ಅವರೊಳಗೂ ಬೆಳೆಯುತ್ತದೆ. ಬಳಿಕ ಅದು ಕುತೂಹಲವಾಗಿ ಮಾರ್ಪಡುತ್ತದೆ ಮತ್ತು ಅಧ್ಯಯನಕ್ಕೆ ಒಳಪಡುತ್ತದೆ.  ಇಂಥದ್ದೊಂದು ಪ್ರಕ್ರಿಯೆಗೆ ಮಕ್ಕಳ ಬಾಲ್ಯದಲ್ಲೇ ಆರಂಭವನ್ನು ಕೊಡುವ ಪ್ರಯತ್ನ ನಡೆದರೆ, ಗರ್ಭ ಮತ್ತು ಪ್ರಸವಗಳೆರಡೂ ಪುರುಷ ಜಗತ್ತಿನ ಅಸಡ್ಡೆಯ ಪಟ್ಟಿಯಲ್ಲಿ ಸ್ಥಾನ ಗಳಿಸುವುದು ಸುಲಭ ಅಲ್ಲ.  ಅಷ್ಟಕ್ಕೂ,
ಹೆಣ್ಣಿನ ಬದಲು ಗಂಡು ಗರ್ಭ ಧರಿಸುವಂತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಅನ್ನುವ ಪ್ರಶ್ನೆಯನ್ನು ಪುರುಷ ಸಮಾಜ ಒಮ್ಮೆ ಕಲ್ಪಿಸಿಕೊಂಡರೆ ಸಿಗುವ ಉತ್ತರ ಏನಿದ್ದೀತು? ಗರ್ಭ ಮತ್ತು ತಂದೆತನದ  (ತಾಯ್ತನ) ಸುತ್ತ ಆತ ಏನೆಲ್ಲ ಅಭೂತಪೂರ್ವ ಕತೆಗಳನ್ನು ಕಟ್ಟಬಹುದು? ಮಾನವ ಸೃಷ್ಟಿಯ ಈ ಅತಿವಿಶಿಷ್ಟ ಪ್ರಕ್ರಿಯೆಗೆ ಆತ ಏನೆಲ್ಲ ತಯಾರಿಗಳನ್ನು ನಡೆಸುತ್ತಿದ್ದ? ಸುತ್ತಲಿನ ಸಮಾಜವನ್ನು ಹೇಗೆ ಅದಕ್ಕೆ  ಸಜ್ಜುಗೊಳಿಸುತ್ತಿದ್ದ? ಬಹುಶಃ ಉತ್ತರಗಳು ಸ್ವಾರಸ್ಯಕರವಿದ್ದೀತು. ಆಸ್ಪತ್ರೆಯ ಪ್ರಸವ ಕೋಣೆಗಳಲ್ಲಿ ವಿವಿಧ ವೈದ್ಯಕೀಯ ಉಪಕರಣಗಳು ತುಂಬಿ ತುಳುಕಿರುತ್ತಿತ್ತು. ಕಾಲಿಗೊಂದು, ಕೈಗೊಂದು ಆಳುಗಳು  ಬೇಕಿರುತ್ತಿತ್ತು. ವೈದ್ಯರು 24 ಗಂಟೆ ಆತನ ಪಕ್ಕವೇ ಇರಬೇಕಿತ್ತು. ಪ್ರಸವದ ವಾರಕ್ಕಿಂತ ಮೊದಲೇ ಆಸ್ಪತ್ರೆಯಲ್ಲಿ ದಾಖಲಾಗುವುದು ಅನಿವಾರ್ಯವೆಂಬ ವಾತಾವರಣ ಸೃಷ್ಟಿಯಾಗಿರುತ್ತಿತ್ತು. ಗರ್ಭಸ್ಥನನ್ನು  ಆಸ್ಪತ್ರೆಗೆ ಕೊಂಡೊಯ್ಯುವ ವಾಹನಗಳಿಗೆ ಸೈರನ್ ಅಳವಡಿಸುವುದಕ್ಕೆ ಪರ ವಾನಿಗೆ ಸಿಗುತ್ತಿತ್ತು. ಅಗತ್ಯ ಬಿದ್ದರೆ ಝೀರೋ ಟ್ರಾಫಿಕ್‍ನ ವ್ಯವಸ್ಥೆಯೂ ಆಗುತ್ತಿತ್ತು. ಪ್ರಸವವನ್ನು ಅತೀ ತುರ್ತು ಸ್ಥಿತಿಯೆಂದು  ಸರಕಾರ ಘೋಷಿಸಿ ಬಿಡುತ್ತಿತ್ತಲ್ಲದೇ, ಆಸ್ಪತ್ರೆಯ ವೈದ್ಯರು ಉಳಿ ದೆಲ್ಲ ಚಿಕಿತ್ಸೆಗಳನ್ನು ಬದಿಗೊತ್ತಿ ಪ್ರಸವ ಚಿಕಿತ್ಸೆಗೆ ಮುಂದಾಗಬೇಕೆಂದು ಫರ್ಮಾನು ಹೊರಡಿಸುತ್ತಿತ್ತು. ಗರ್ಭದಾರಣೆಯ ಸಮಯದಿಂದ  ಹಿಡಿದು ಮಗುವಿಗೆ ಹಾಲೂಡಿಸುವ ತನಕ ಸುಮಾರು ಎರಡು ವರ್ಷಗಳವರೆಗಾದರೂ ಸರಕಾರ ಸಂಬಳ ಸಹಿತ ರಜೆಯನ್ನು ಮಂಜೂರು ಮಾಡಿರುತ್ತಿತ್ತು. ಸರಕಾರದ ವತಿಯಿಂದಲೇ ಬಾಣಂತನನ್ನು  ಉಪಚರಿಸುವುದಕ್ಕೆ ಸೇವಕರ ವ್ಯವಸ್ಥೆ ಆಗುತ್ತಿತ್ತು. ಕಾಲಕಾಲಕ್ಕೆ ಪೌಷ್ಠಿಕ ಆಹಾರಗಳನ್ನು ಮನೆ ಮನೆಗೇ ವಿತರಿಸುವ ಮತ್ತು ಇದರಲ್ಲಿ ನಿರ್ಲಕ್ಷ್ಯ ತೋರುವವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸುವ ಕಾನೂ ನನ್ನು ಸರಕಾರ ಜಾರಿಗೆ ತರುತ್ತಿತ್ತು. ಸರಕಾರ ಬಾಣಂತನವನ್ನು ಗೌರವಿಸುವ ದೃಷ್ಟಿಯಿಂದ ವರ್ಷದಲ್ಲೊಂದು ದಿನವನ್ನು ‘ಬಾಣಂತನ ದಿನ’ ಎಂದು ಘೋಷಿಸಿ ಸರಕಾರಿ ರಜೆ ಸಾರುತ್ತಿತ್ತು.  ಗರ್ಭಧಾರಣೆಯಿಂದ ತೊಡಗಿ ಪ್ರಸವದ ವರೆಗೆ ಎಲ್ಲ ಚಿಕಿತ್ಸಾ ವೆಚ್ಚಗಳನ್ನು ಸರಕಾರಿ-ಖಾಸಗಿ ಎನ್ನದೇ ಎಲ್ಲ ಆಸ್ಪತ್ರೆಗಳೂ ಉಚಿತವಾಗಿ ನಿರ್ವಹಿಸಬೇಕೆಂದು ಸರಕಾರಿ ಆದೇಶ ಹೊರಬೀಳುತ್ತಿತ್ತು. ಇನ್ನು, ಮನೆಯ ಅಲೆಮಾರಿನ ತುಂಬಾ ವಿಶೇಷ ಅಡುಗೆ ವಸ್ತುಗಳು ಮತ್ತು ಹಣ್ಣು-ಹಂಪಲುಗಳು ತುಂಬಿರುತ್ತಿತ್ತು. ಯಾವ ಹಣ್ಣಿನ ರಸ ಯಾವಾಗ ತೆಗೆದುಕೊಳ್ಳಬೇಕು ಮತ್ತು ಯಾವ ಸಂದರ್ಭದಲ್ಲಿ ವಿಶ್ರಾಂತಿ,  ಯಾವ ಸಂದರ್ಭದಲ್ಲಿ ಊಟ, ಯಾವ ಸಂದರ್ಭದಲ್ಲಿ ಜನರನ್ನು ಭೇಟಿಯಾಗಬಹುದು ಇತ್ಯಾದಿಗಳನ್ನು ವಿವರಿಸುವ ಪಟ್ಟಿ ಬಾಣಂತನ ಕೋಣೆಯಲ್ಲಿ ತೂಗಾಡುತ್ತಿರುತ್ತಿತ್ತು. ಗರ್ಭಸ್ಥ ಗಂಡಿನ ಬದುಕನ್ನು  ಸುಲಭಗೊಳಿಸುವುದಕ್ಕಾಗಿ ಸರಕಾರವು ಹೊಸ ತಂತ್ರಜ್ಞಾನಗಳ ಉತ್ಪಾದನೆ ಮತ್ತು ಸಂಶೋಧನೆಗೆ ಬಜೆಟ್‍ನಲ್ಲಿ ಇಂತಿಷ್ಟು ಮೊತ್ತವನ್ನು ಘೋಷಿಸಿ ಬಿಡುತ್ತಿತ್ತು. ಗರ್ಭಸ್ಥನಿಗಾಗಿ ಉಚಿತ ಬಸ್‍ಪಾಸ್ ಕೊಡುವುದು ಮತ್ತು ಆಸ್ಪತ್ರೆ, ಸರಕಾರಿ ಕಚೇರಿ, ರೇಶನ್ ಅಂಗಡಿ ಸಹಿತ ಎಲ್ಲೆಡೆಯೂ ಪ್ರತ್ಯೇಕ ಸರತಿ ಸಾಲು ಇರುತ್ತಿದ್ದುವು...
ಪಟ್ಟಿ ತುಂಬಾ ಉದ್ದ ಇದೆ..
ನಿಜವಾಗಿ, ಇದು ಊಹೆಯಂತೆ ಕಂಡರೂ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗದ ಮುಖ್ಯ ನೀತಿ ನಿರೂಪಣೆಯ ಸ್ಥಾನಗಳಲ್ಲಿ ಪುರುಷರೇ ಅಧಿಕವಾಗಿರುವ ಇಂದಿನ  ಸ್ಥಿತಿಯಲ್ಲಿ ಈ ಸಾಧ್ಯತೆಯನ್ನು ನಿರಾಕರಿಸುವ ಹಾಗಿಲ್ಲ. ಗರ್ಭಧಾರಣೆ ಮತ್ತು ಪ್ರಸವ ಇವೆರಡನ್ನೂ ಮತ್ತು ಇವೆರಡರ ನಡುವಿನ ಸಂಕಟಗಳನ್ನೂ ಅನುಭವಿಸದ ಗಂಡು ಮತ್ತು ಅನುಭವಿಸಿದ ಗಂಡು ಇಬ್ಬರೂ ಏಕಪ್ರಕಾರ ಇರಲಾರರು. ಅಂದಹಾಗೆ,
ಪ್ರಸವದ ವೇಳೆ ರಕ್ತಸ್ರಾವವಾಗಿ ಮಹಿಳೆ ಸಾವಿಗೀಡಾದ ಸುದ್ದಿಯನ್ನು ಓದುತ್ತಾ ಇವೆಲ್ಲ ನೆನಪಾಯಿತು.