Monday, June 17, 2013

ಸ್ನೋಡೆನ್, ಮಾನ್ನಿಂಗ್ ರಿಗಿರುವ ಧೈರ್ಯವೂ ಈ ಜಾಲತಾಣಗಳಿಗೇಕಿಲ್ಲ?

ಮೈಕ್ರೋಸಾಫ್ಟ್
ಯಾಹೂ
ಗೂಗಲ್
ಫೇಸ್‍ಬುಕ್
ಸ್ಕೈಪ್
ಯೂಟ್ಯೂಬ್..
   ಇವುಗಳೆಲ್ಲ ಏನು, ಇವುಗಳ ಬಳಕೆದಾರರು ಯಾರು ಎಂಬುದೆಲ್ಲ ಎಲ್ಲರಿಗೂ ಗೊತ್ತು. ಫೇಸ್‍ಬುಕ್‍ನಲ್ಲಿ ಗೆಳಯರಾಗದ, ಯೂಟ್ಯೂಬನ್ನು ವೀಕ್ಷಿಸದ, ಸ್ಕೈಪ್‍ನಲ್ಲಿ ಮಾತಾಡದ ಮಂದಿಯೇ ಇಲ್ಲ ಅನ್ನುವಷ್ಟು ಇವು ಜನಪ್ರಿಯವಾಗಿವೆ. ಇವತ್ತಿನ ದಿನಗಳಲ್ಲಿ ಪತ್ರಿಕೆಗಳು, ಟಿ.ವಿ. ಚಾನೆಲ್‍ಗಳಿಗೆ ಅವುಗಳದ್ದೇ ಆದ ಮಿತಿಯಿದೆ. ಬರಹವೊಂದು ಪತ್ರಿಕೆಯಲ್ಲಿ ಪ್ರಕಟವಾಗಬೇಕಾದರೆ; ವಸ್ತು, ವ್ಯಾಕರಣ, ವಾಕ್ಯ ರಚನೆ, ಪದಗಳ ಸಂಖ್ಯೆ... ಎಲ್ಲವೂ ಪರಿಗಣನೆಗೆ ಬರುತ್ತದೆ. ಅಲ್ಲದೆ, ಪತ್ರಿಕೆಗಳಿಗೆ ಅವುಗಳದ್ದೇ ಆದ ನೀತಿ-ನಿಯಮ, ಧೋರಣೆಗಳೂ ಇರುತ್ತವೆ. ಆದ್ದರಿಂದ, ಒಂದು ಬರಹ ಎಷ್ಟೇ ಉತ್ತಮವಾಗಿದ್ದರೂ ಎಲ್ಲ ಪತ್ರಿಕೆಗಳೂ ಅದನ್ನು ಪ್ರಕಟಿಸುವ ಉಮೇದು ತೋರಿಸಬೇಕೆಂದಿಲ್ಲ. ಇನ್ನು ಪ್ರಕಟಿಸಿದರೂ, ಸಂಪೂರ್ಣ ಬರಹವನ್ನು ಹಾಗೆಯೇ ಪ್ರಕಟಿಸಬೇಕೆಂದಿಲ್ಲ. ಪರಿಣತ ಬರಹಗಾರರಿಗೆ ಮಾತ್ರ ಪತ್ರಿಕೆಗಳಲ್ಲಿ ಸ್ಪೇಸ್ ಸಿಗುತ್ತದೆ ಎಂಬ ಮಾತು ಸಾರ್ವಜನಿಕ ವಲಯಗಳಲ್ಲಿ ಹುಟ್ಟಿಕೊಂಡಿರುವುದು ಇಂಥ ಕಾರಣಗಳಿಂದಲೇ. ಬಹುಶಃ, ಸಾಮಾಜಿಕ ಜಾಲ ತಾಣಗಳು ಜನರ ಮಧ್ಯೆ ಅತಿವೇಗವಾಗಿ ಜನಪ್ರಿಯಗೊಂಡಿರುವುದಕ್ಕೆ ಪತ್ರಿಕೆಗಳಿಗಿರುವ ಇಂಥ ಮಿತಿಗಳೇ ಕಾರಣವಾಗಿರಬಹುದು. ಅಷ್ಟಕ್ಕೂ, ಕ್ರಿಕೆಟನ್ನು ಪ್ರೀತಿಸುವ ಸಾಮಾನ್ಯ ವ್ಯಕ್ತಿಯೊಬ್ಬ ಸ್ಟಾಟ್ ಫಿಕ್ಸಿಂಗ್‍ನ ಬಗ್ಗೆ ನಾಲ್ಕು ಗೆರೆಗಳನ್ನು ಗೀಚಿದರೆ, ಯಾವ ಪತ್ರಿಕೆ ತಾನೇ ಪ್ರಕಟಿಸಬಲ್ಲದು? ಹೀಗಿರುವಾಗ, ಜಿಯಾ ಖಾನ್‍ಳ ಆತ್ಮಹತ್ಯೆಯ ಬಗ್ಗೆ, ಸಿದ್ಧರಾಮಯ್ಯರ ಮದ್ಯ ನೀತಿಯ ಕುರಿತು, ಮಳೆಗಾಲಕ್ಕೆ ತಯಾರಿ ನಡೆಸದ ಸ್ಥಳೀಯಾಡಳಿತಗಳ ಬಗ್ಗೆ... ಸಾಮಾನ್ಯನೊಬ್ಬ ತನ್ನ ಭಾವನೆಗಳನ್ನು ಸಾರ್ವಜನಿಕರಿಗೆ ಹೇಗೆ ಮುಟ್ಟಿಸಬೇಕು? ಅದಕ್ಕಿರುವ ಮಾಧ್ಯಮವಾದರೂ ಯಾವುದು? ಬರೆಯುವ ಪರಿಣತಿ ಮತ್ತು ಪದಸಂಗ್ರಹಗಳಿಲ್ಲದ ವ್ಯಕ್ತಿಯಲ್ಲೂ ಅಭಿಪ್ರಾಯಗಳಿರುತ್ತವಲ್ಲವೇ? ಅದನ್ನು ತಮ್ಮದೇ ಭಾಷೆಯಲ್ಲಿ ತಮಗೆ ತಿಳಿದಂತೆ ವ್ಯಕ್ತಪಡಿಸುವುದಕ್ಕೆ ಮತ್ತು ಸಾರ್ವಜನಿಕರಿಗೆ ತಲುಪುವಂತೆ ಮಾಡುವುದಕ್ಕೆ ಏನಿವೆ ಸೌಲಭ್ಯಗಳು? ಇಂಥ ಹುಡುಕಾಟಗಳಿಗೆ ಉತ್ತರವಾದದ್ದೇ ಸಾಮಾಜಿಕ ಜಾಲತಾಣಗಳು. ನಿಮಗೆ ಅನಿಸಿದ್ದನ್ನು ವಾಕ್ಯ, ವ್ಯಾಕರಣ, ಪದಗಳ ಸಂಖ್ಯೆಯ ಚಿಂತೆಯಿಲ್ಲದೇ ವ್ಯಕ್ತಪಡಿಸುವುದಕ್ಕೆ ಫೇಸ್‍ಬುಕ್, ಟ್ವೀಟರ್‍ನಂಥ ತಾಣಗಳು ಧಾರಾಳ ಅವಕಾಶ ಒದಗಿಸಿದುವು. ಗೆಳೆತನಕ್ಕೆ ವೇದಿಕೆ ಒದಗಿಸಿದುವು. ಅಲ್ಲದೇ, Your preivecy our priority - ‘ನಿಮ್ಮ ಖಾಸಗಿತನವೇ ನಮ್ಮ ಆದ್ಯತೆ..’ ಎಂಬ ಸ್ಲೋಗನನ್ನು ತೇಲಿಬಿಟ್ಟು, ಬಳಕೆದಾರರ ಖಾಸಗಿತನವನ್ನು ರಕ್ಷಿಸುವುದಾಗಿ ಘೋಷಿಸಿದುವು. ನಿಜವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಜನರು ನಂಬಿಕೆ ಇಡುವುದಕ್ಕೆ ಇರುವ ಹಲವು ಕಾರಣಗಳಲ್ಲಿ ಈ ಪ್ರೈವೇಸಿಯೂ ಒಂದು. ತನ್ನ Updateಗಳು, ಗೆಳೆಯರೊಂದಿಗಿನ ಮಾತುಕತೆಗಳು, ತನ್ನ ದೂರವಾಣಿ ಸಂಖ್ಯೆ, ಈಮೇಲ್ ಐಡಿ.. ಎಲ್ಲವೂ ತಾನಿಚ್ಛಿಸಿದವರಿಗೆ ಮಾತ್ರ ತಲುಪುವಂಥ ವ್ಯವಸ್ಥೆಯೊಂದನ್ನು ಇವು ಮಾಡಿಟ್ಟಿವೆ ಅನ್ನುವ ಭರವಸೆ ಬಳಕೆದಾರರನ್ನು ಆಕರ್ಷಿಸಿತು. ಆದ್ದರಿಂದಲೇ, ನನ್ನ ಮಿತ್ರನೊಬ್ಬ ನನ್ನೊಂದಿಗೆ ಮಾಡಿದ ಚಾಟಿಂಗು ನನಗೂ ಮತ್ತು ಅವನಿಗಲ್ಲದೇ ಇನ್ನಾರಿಗೂ ಗೊತ್ತಾಗಲು ಸಾಧ್ಯವಿಲ್ಲ ಅನ್ನುವ ನಂಬಿಕೆಯು ಎಲ್ಲ ಬಳಕೆದಾರರಲ್ಲೂ ಇತ್ತು. ಈ ಆಧಾರದಲ್ಲೇ ಅತ್ಯಂತ ಖಾಸಗಿಯಾದ ಈಮೇಲ್‍ಗಳು, ಚಾಟಿಂಗ್‍ಗಳು ಈ ಜಾಲತಾಣಗಳ ಮೂಲಕ ಹರಿದಾಡುತ್ತಿದ್ದುದು. ಆದರೆ,
Your privacy our priorityಯನ್ನು ಯಾವ ಜಾಲತಾಣಗಳೂ ಪಾಲಿಸಿಯೇ ಇಲ್ಲ.
   ತನ್ನೆಲ್ಲ ಬಳಕೆದಾರರ ಖಾಸಗಿ ವಿವರಗಳನ್ನು 2007 ಸೆಪ್ಟೆಂಬರ್ 11ರಿಂದಲೇ ಮೈಕ್ರೋಸಾಫ್ಟ್ ಅಮೆರಿಕಕ್ಕೆ ಒದಗಿಸುತ್ತಿದೆ. 2008 ಮಾರ್ಚ್ 12ರಿಂದ ಯಾಹೂ,  2009 ಜನವರಿ 14ರಿಂದ ಗೂಗಲ್,  2010 ಸೆಪ್ಟೆಂಬರ್ 24ರಿಂದ ಯೂಟ್ಯೂಬ್,  2011 ಮಾರ್ಚ್ 31ರಿಂದ ಎಬಿಎಲ್,  2009 ಡಿಸೆಂಬರ್ 7ರಿಂದ ಪಾಲ್‍ಟಾಕ್,  2012 ಅಕ್ಟೋಬರ್‍ ನಿಂದ  ಆಪಲ್,  2009 ಜನವರಿ 3ರಿಂದ ಸ್ಕೈಪ್,  2009 ಜನವರಿ 3ರಿಂದ ಫೇಸ್‍ಬುಕ್... ಎಲ್ಲವೂ ತಮ್ಮ ಬಳಕೆದಾರರ ಖಾಸಗಿ ವಿವರಗಳನ್ನು ಅಮೆರಿಕದ ಬೇಹುಗಾರಿಕಾ ಜಾಲವಾದ PRISM ಗೆ ನೀಡುತ್ತಲೇ ಬಂದಿವೆ. ಕಳೆದ ವಾರ ಲಂಡನ್ನಿನ ದಿ ಗಾರ್ಡಿಯನ್ ಮತ್ತು ಅಮೆರಿಕದ ದಿ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಗಳು ಸರಣಿ ಬರಹಗಳ ಮೂಲಕ ಈ ವಿಷಯವನ್ನು ಬಹಿರಂಗಕ್ಕೆ ತರುವವರೆಗೆ ಅಮೆರಿಕವಾಗಲಿ, ಈ ಜಾಲತಾಣಗಳಾಗಲಿ ಇದನ್ನು ಹೇಳಿಕೊಂಡೇ ಇರಲಿಲ್ಲ. ಅಂದಹಾಗೆ, 2007ರಿಂದಲೇ ಜಗತ್ತಿನೆಲ್ಲರ ಖಾಸಗಿ ವಿಚಾರಗಳನ್ನು ಕದ್ದು ನೋಡುತ್ತಿದ್ದ ಅಮೆರಿಕ ಮತ್ತು ಅದಕ್ಕೆ ಅವಕಾಶ ಒದಗಿಸಿ ಕೊಟ್ಟ ಈ ಜಾಲತಾಣಗಳು, ಹೇಗೆ ಇವತ್ತು ತಮ್ಮನ್ನು ಸಮರ್ಥಿಸಿಕೊಳ್ಳಬಲ್ಲುದು? ಬಳಕೆದಾರರಿಗೆ ಮಾಡಿದ ಈ ದ್ರೋಹಕ್ಕೆ ಜಾಲತಾಣಗಳು ಯಾವ ಪರಿಹಾರವನ್ನು ಕೊಡುತ್ತವೆ? ಖಾಸಗಿತನ ಯಾರದ್ದೇ ಆದರೂ ಖಾಸಗಿಯೇ ಅಲ್ಲವೇ? ಅದನ್ನು ಗೋಪ್ಯ ವಾಗಿಡಲು ಸಾಧ್ಯವಿಲ್ಲ ಎಂದಾದರೆ, ಆ ಬಗ್ಗೆ ಬಳಕೆದಾರರಿಗೆ ತಿಳಿಸಬೇಕು. ಅದು ಬಿಟ್ಟು ಬಳಕೆದಾರರ ಚಟುವಟಿಕೆಗಳ ಪ್ರತಿ ವಿವರವನ್ನೂ ಅಮೆರಿಕಕ್ಕೆ ಒದಗಿಸಿಕೊಟ್ಟು, Your privacy our priority  ಎಂದು ಹೇಳಿಕೊಂಡಿದ್ದಾದರೂ ಏಕೆ? ಒಂದು ವೇಳೆ, ಎಡ್ವರ್ಡ್ ಸ್ನೋಡೆನ್ ಎನ್ನುವ 29 ವರ್ಷದ ಮಾಜಿ PRISM ನ ಅಧಿಕಾರಿ 2013 ಮೇ 20ರಂದು ಈ ಇಡೀ ಪ್ರಕರಣವನ್ನು ಬಹಿರಂಗಪಡಿಸದಿರುತ್ತಿದ್ದರೆ ಅಮೆರಿಕದ ಈ ಕಳ್ಳ ಮುಖದ ದರ್ಶನವಾಗುತ್ತಿತ್ತೇ? ಫೇಸ್‍ಬುಕ್‍ಗಳ ದ್ರೋಹ ಗೊತ್ತಾಗುತ್ತಿತ್ತೇ?
   ನಿಜವಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದ್ದೂ, ತನ್ನ ದೇಶದ ಇನ್ನೊಂದು ಮುಖವನ್ನು ಬಹಿರಂಗಕ್ಕೆ ತರುವ ಧೈರ್ಯ ತೋರಿದ್ದು ಸ್ನೋಡೆನ್ ಒಬ್ಬರೇ ಅಲ್ಲ..
   1971 ಜೂನ್ 13ರಂದು ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ವಿಯೆಟ್ನಾಂ ಯುದ್ಧಕ್ಕೆ ಸಂಬಂಧಿಸಿದ ರಹಸ್ಯ ರಕ್ಷಣಾ ದಾಖಲೆಗಳು ‘ಪೆಂಟಗನ್ ಪೇಪರ್’ ಎಂಬ ಹೆಸರಲ್ಲಿ ಪ್ರಕಟವಾಗ ತೊಡಗಿದುವು. 15 ದಿನಗಳಾಗುತ್ತಲೇ ನಿಕ್ಸನ್ ಸರಕಾರ ಕೋರ್ಟು ಮುಖಾಂತರ ಪ್ರಕಟಣೆಗೆ ತಡೆ ಒಡ್ಡಿತು. ಎರಡು ದಿನಗಳ ಬಳಿಕ ವಾಷಿಂಗ್ಟನ್ ಪೋಸ್ಟ್ ಮತ್ತು ಇತರ 17 ಪತ್ರಿಕೆಗಳು `ಪೆಂಟಗನ್ ಪೇಪರ್'ನ ವಿವರಗಳನ್ನು ಪ್ರಕಟಿಸ ತೊಡಗಿದುವು. ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕದಲ್ಲಿ  ಸ್ವಾರ್ಥ ಹಿತಾಸಕ್ತಿ, ಗೆಲ್ಲಲು ಸಾಧ್ಯವಿಲ್ಲವೆಂದು ಸರಕಾರಕ್ಕೆ ಗೊತ್ತಿದ್ದೂ ವರ್ಷಗಟ್ಟಲೆ ಯುದ್ಧವನ್ನು ಮುಂದುವರಿಸಿದ್ದು, ಸಾರ್ವಜನಿಕರನ್ನು ವಂಚಿಸಿದ್ದು... ಎಲ್ಲವೂ ಬಹಿರಂಗಕ್ಕೆ ಬರ ತೊಡಗಿದುವು. ಅಮೆರಿಕನ್ ಆಡಳಿತದ ಕೆಲವು ಮಂದಿಯ ಸ್ವಾರ್ಥಕ್ಕಾಗಿ ವಿಯೆಟ್ನಾಂ ಯುದ್ಧ ನಡೆಯುತ್ತಿದೆ ಅನ್ನುವುದು ಗೊತ್ತಾಗುತ್ತಿರುವಂತೆ ಸಾರ್ವಜನಿಕ ಆಕ್ರೋಶಗಳು ಬಿರುಸುಗೊಂಡುವು. ಒಂದು ರೀತಿಯಲ್ಲಿ, ಆ ಮೊದಲೇ ಯುದ್ಧ ವಿರೋಧಿ ರಾಲಿಗಳು ಅಮೆರಿಕಾದ ಅಲ್ಲಲ್ಲಿ ಜರುಗುತ್ತಿದ್ದುವು. ಅದಕ್ಕೆ ಇಂಬು ಕೊಡುವ ರೂಪದಲ್ಲಿದ್ದ ಈ ದಾಖಲೆಗಳನ್ನು ಬಹಿರಂಗಗೊಳಿಸಿದ್ದಕ್ಕಾಗಿ ಡೇನಿಯಲ್ ಎಲ್ಸ್ ಬರ್ಗ್ ರನ್ನು ರಾಜದ್ರೋಹದ ಆರೋಪ ಹೊರಿಸಿ ಸರಕಾರ ಬಂಧಿಸಿತು. ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯಾಗಿದ್ದ ಇವರು, ಸಾರ್ವಜನಿಕರನ್ನು ವಂಚಿಸಿ ನಡೆಸಲಾಗುತ್ತಿದ್ದ ಆ ಯುದ್ಧದ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದರು. ಎರಡು ವರ್ಷ ವಿಯೆಟ್ನಾಂನಲ್ಲಿದ್ದು ಯುದ್ಧವನ್ನು ಹತ್ತಿರದಿಂದ ನೋಡಿದ್ದುದು ಅವರನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಕವಿ ಗ್ಯಾರಿ ಸ್ನೈಡರ್ ಮತ್ತು  ರಾಂಡಿ  ಕೇಲರ್‍ರ ಜೊತೆ ಸಮಾಲೋಚಿಸಿ ಯುದ್ಧದ ವಿರುದ್ಧ ನಿಲ್ಲುವ ದೃಢ ನಿರ್ಧಾರ ಮಾಡಿದರು. ಯುದ್ಧ ವಿರೋಧಿ ರಾಲಿಗಳನ್ನು ಸಂಘಟಿಸಿದರು. 2003ರಲ್ಲಿ ಇರಾಕ್‍ನ ವಿರುದ್ಧ ಬುಶ್ ಯುದ್ಧ ಘೋಷಿಸಿದಾಗ, ಅದನ್ನು ಮೊಟ್ಟ ಮೊದಲು ಪ್ರಶ್ನಿಸಿದ್ದು ಎಲ್ಸ್ ಬರ್ಗ್ ರೇ. ಅಹ್ಮದಿ ನೆಜಾದ್‍ರ ವಿರುದ್ಧ ಇರಾನ್‍ನಲ್ಲಿ ಸರಕಾರಿ ವಿರೋಧಿ ದಂಗೆಗೆ ಅಮೆರಿಕ ಸ್ಪಾನ್ಸಾರ್ ಮಾಡುತ್ತಿರುವ ವಿವರವನ್ನು ಸೈಮಕ್ ಹಾರ್ಶ್ ಎಂಬ ಪತ್ರಕರ್ತ 2006ರ ಸೆಪ್ಟಂಬರ್‍ನಲ್ಲಿ ದಾಖಲೆ ಸಹಿತ ಬಹಿರಂಗಪಡಿಸಲು ಕಾರಣವೂ ಈ  ಎಲ್ಸ್ ಬರ್ಗ್ ರೇ. ಅಂದಹಾಗೆ, ಅಮೆರಿಕದ ಅನ್ಯಾಯವನ್ನು ಪ್ರತಿಭಟಿಸಿದವರ ಈ ಪಟ್ಟಿಯಲ್ಲಿ ಎಲ್ಸ್ ಬರ್ಗ್  ಒಂಟಿಯಲ್ಲ. 2010 ಮೇಯಲ್ಲಿ ಬ್ರಾಡ್ಲಿ ಮ್ಯಾನ್ನಿಂಗ್ ಎಂಬ ಯೋಧನನ್ನು ಬಗ್ದಾದ್‍ನಲ್ಲಿ ಅಮೆರಿಕ ಬಂಧಿಸಿದಾಗ, ವಿಕ್‍ಲೀಕ್ಸ್ ಮುಖಾಂತರ ಅಮೇರಿಕದ ಕರಾಳ ಮುಖವನ್ನು ಬಹಿರಂಗ ಪಡಿಸಿದ ವ್ಯಕ್ತಿ ಯಾರೆಂಬುದು ಜಗತ್ತಿಗೆ ಗೊತ್ತಾಯಿತು. ಆತನ ವಿರುದ್ಧ ಅಮೆರಿಕ 22 ಪ್ರಕರಣಗಳನ್ನು ದಾಖಲಿಸಿತು. ಬಗ್ದಾದ್‍ನಲ್ಲಿ ನೆರೆದ ಒಂದು ಗುಂಪಿನ ಮೇಲೆ 2007 ಜುಲೈ 12ರಂದು ಅಮೆರಿಕಾದ ಹೆಲಿಕಾಪ್ಟರ್ ಬಾಂಬ್ ಸುರಿಸಿದ್ದು ಮತ್ತು ರಾಯಿಟರ್ಸ್ ಸಂಸ್ಥೆಯ ಪತ್ರಕರ್ತರೂ ಸೇರಿ ಅನೇಕ ಮಂದಿ ಸಾವಿಗೀಡಾದದ್ದು ಮ್ಯಾನ್ನಿಂಗ್‍ನನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ರಕ್ಷಣೆಗೆ ಬಂದ ಅಂಬುಲೆನ್ಸ್ ನ ಮೇಲೂ ಹೆಲಿಕಾಪ್ಟರ್‍ನಿಂದ ಗುಂಡಿನ ಸುರಿಮಳೆಯಾಗಿತ್ತು. ಅಲ್ಲದೇ 2009 ಮೇ 4ರಂದು ಅಫಘನ್ನಿನ ಗ್ರನಾಯಿ ಯಲ್ಲಿ ಅಮೆರಿಕ ಸುರಿಸಿದ ಬಾಂಬಿಗೆ 85 ಮಂದಿ ಅಮಾಯಕ ನಾಗರಿಕರು ಬಲಿಯಾಗಿದ್ದರು. ಮ್ಯಾನ್ನಿಂಗ್ ಇವುಗಳಿಗೆ ಸಂಬಂಧಿಸಿದ ವೀಡಿಯೋ ಮತ್ತು ಇರಾಕ್, ಅಫಘಾನ್ ಯುದ್ಧಕ್ಕೆ ಸಂಬಂಧಿಸಿದ 7 ಲಕ್ಷದಷ್ಟು ಸೇನಾ ಮಾಹಿತಿ, ವರದಿಗಳನ್ನು ವಿಕಿಲೀಕ್ಸ್ ನ ಅಸಾಂಜೆಗೆ ಕಳುಹಿಸಿಕೊಟ್ಟರು.
   ಒಂದು ರೀತಿಯಲ್ಲಿ, 6x12 ಅಡಿ ಇರುವ, ಕಿಟಕಿ ಇಲ್ಲದ ಜೈಲಿನ ಒಂಟಿ ಕೋಣೆಯಲ್ಲಿ ಸದ್ಯ ಜೀವಾವಧಿ ಶಿಕ್ಷೆಯ ಸಾಧ್ಯತೆಯೊಂದಿಗೆ ಬದುಕುತ್ತಿರುವ ಮ್ಯಾನ್ನಿಂಗ್‍ನ ಬಗ್ಗೆ ಸ್ನೋಡೆನ್‍ಗೆ ಗೊತ್ತಿಲ್ಲ ಎಂದಲ್ಲ. ರಕ್ಷಣಾ ಗುತ್ತಿಗೆಯನ್ನು ವಹಿಸಿಕೊಳ್ಳುವ Booz Allen Hamilton ಎಂಬ ಸಂಸ್ಥೆಯ ಉದ್ಯೋಗವನ್ನು ನಿಷ್ಠೆಯಿಂದ ಮಾಡುತ್ತಾ, ಎಲ್ಲರಂತೆ ಬದುಕುವ ಸಕಲ ಅವಕಾಶಗಳೂ ಸ್ನೋಡೆನ್‍ಗೂ ಇತ್ತು. ಅಲ್ಲದೇ, ಈಗ ಆತ ತಂಗಿರುವ ಹಾಂಕಾಂಗ್ ಎಂದಲ್ಲ, ಜಗತ್ತಿನ ಎಲ್ಲಿದ್ದರೂ ವಶಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ  ಇರುವ ಅಮೆರಿಕವನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ ಎಂಬುದೂ ಸ್ನೋಡೆನ್‍ಗೆ ಗೊತ್ತಿರಲೇಬೇಕು. ಆದರೂ ಅಮೆರಿಕದಲ್ಲಿ  ಎಲ್ಸ್ ಬರ್ಗ್ ಗಳು, ಮ್ಯಾನ್ನಿಂಗ್‍ಗಳು, ಸ್ನೋಡೆನ್‍ಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮನ್ನು ಸಕಲ ಅಪಾಯಗಳಿಗೂ ಒಡ್ಡಿಕೊಂಡು ದೊಡ್ಡಣ್ಣನಿಗೆ ಸಡ್ಡು ಹೊಡೆಯುತ್ತಾರೆ. ಆದರೂ, ಒಂಟಿ ವ್ಯಕ್ತಿಗಳಿಗಿರುವ ಈ ಧೈರ್ಯ, ಗೂಗಲ್, ಮೈಕ್ರೋಸಾಫ್ಟ್ ನಂಥ ದೈತ್ಯ ಸಂಸ್ಥೆಗಳಿಗಿಲ್ಲ ಎಂದರೆ ಏನೆನ್ನಬೇಕು? ಅಮೆರಿಕ ಕೇಳಿಕೊಂಡ ಕೂಡಲೇ ತನ್ನೆಲ್ಲಾ ಗ್ರಾಹಕರ ಚಟುವಟಿಕೆಗಳನ್ನು ಕದ್ದು ನೋಡುವುದಕ್ಕೆ ಅವಕಾಶ ಒದಗಿಸುವುದೆಂದರೇನು? ಬಳಕೆದಾರರಿಗಾದ ಮೋಸ, ವಿಶ್ವಾಸದ್ರೋಹಕ್ಕೆ ಈ ಸಂಸ್ಥೆಗಳು ಏನುತ್ತರ ಕೊಡುತ್ತವೆ?
   ಕನಿಷ್ಠ, Your privacy our priority, Privacy Setting  ಮುಂತಾದ ಪದಗುಚ್ಛಗಳನ್ನಾದರೂ ಈ ಜಾಲತಾಣಗಳು ತಮ್ಮ ಖಾತೆಯಿಂದ ಕಳಚಿಡಲಿ.


Thursday, June 13, 2013

ಭಯೋತ್ಪಾದಕನ ಅಪ್ಪ ನಾನಲ್ಲ ಎಂದು ಸಾಬೀತುಪಡಿಸಬೇಕಿತ್ತು, ಅಷ್ಟೇ

ಗೋಪಿನಾಥ್ ಪಿಳ್ಳೆ
   “ಈ ಕೇಸಿನಲ್ಲಿ ಕಕ್ಷಿಯಾಗಿ ಸೇರಿಕೋ ಎಂದು ನಾನು ನನ್ನ ಮಗಳಲ್ಲಿ ವಿನಂತಿಸಿದೆ. ಮಗಳು ಸಾಜಿದ ಬಿಕ್ಕಿಬಿಕ್ಕಿ ಅತ್ತಳು. ಇಲ್ಲ ಮಾವ, ದಯವಿಟ್ಟು ಕ್ಷಮಿಸಿ. ಅವರನ್ನು ಸಹಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಮಾವ. ದಯವಿಟ್ಟು...’ ಮಗಳ ಕಣ್ಣೀರಿಗೆ ನಾನು ಕರಗಿ ಬಿಟ್ಟೆ. ಅಷ್ಟಕ್ಕೂ, ಆಕೆಯ ಸ್ಥಾನದಲ್ಲಿ ನಾನಿರುತ್ತಿದ್ದರೆ, ಇದಕ್ಕಿಂತ ಭಿನ್ನವಾಗಿ ಮಾತಾಡುತ್ತಿದ್ದೆನೇ? ಓರ್ವ ಹೆಣ್ಣಾಗಿ ಆಕೆ ಅನುಭವಿಸಿದ ಕಿರುಕುಳಗಳು ಅಂಥ ಮಾತನ್ನಲ್ಲದೇ ಇನ್ನೇನನ್ನು ತಾನೇ ಹೇಳಿಸೀತು? ಇನ್ನೂ ಒಂದು ವರ್ಷ ತುಂಬದ ಪುಟ್ಟ ಮೂಸಾನನ್ನು ಕಂಕುಳಲ್ಲಿ ಇಟ್ಟುಕೊಂಡು ಆಕೆ ಎಷ್ಟು ಬಾರಿ ಗುಜರಾತ್‍ನ ಕ್ರೈಂ ಬ್ರಾಂಚ್ ಪೊಲೀಸ್ ಕಚೇರಿಯ ಮೆಟ್ಟಿಲು ತುಳಿದಿದ್ದಳೋ? ಕಚೇರಿಯ ಹೊರಗೆ ಆಕೆ ಎಷ್ಟೋ ಬಾರಿ ನೆಲದಲ್ಲಿ ಕೂತಿದ್ದಾಳೆ. ಕುಡಿಯಲು ನೀರು ಕೇಳಿದಾಗ ಅವಾಚ್ಯ ಪದಗಳಿಂದ ಪೊಲೀಸರು ಬೈದಿದ್ದರು. ವೇಶ್ಯೆ ಎಂದು ಹಂಗಿಸಿದ್ದರು. ಕೊಡಬಾರದ ಹಿಂಸೆ ಕೊಟ್ಟಿದ್ದರು. ಪುಣೆಯಲ್ಲಿದ್ದ ಆಕೆಯ ಫ್ಲ್ಯಾಟ್‍ಗೆ ನುಗ್ಗಿ ನನ್ನ ಮಗ ದುಬೈಯಿಂದ ತಂದಿದ್ದ ಸೂಟ್ ಕೇಸ್ ಸಹಿತ ವಸ್ತುಗಳನ್ನೆಲ್ಲಾ ನಾಶ ಮಾಡಿ, ಮಕ್ಕಳ ಜನನ ಪ್ರಮಾಣ ಪತ್ರ ಮತ್ತು ರೇಶನ್ ಕಾರ್ಡನ್ನೂ ಕೊಂಡೊಯ್ದಿದ್ದ  ಪೊಲೀಸರು ಆಕೆಯ ಎದೆಯಲ್ಲಿ ಭೀತಿಯನ್ನು ಸೃಷ್ಟಿಸಿದ್ದರೆ ಅದರಲ್ಲಿ ಆಕೆಯದ್ದೇನು ತಪ್ಪಿದೆ..
   ಗೋಪಿನಾಥ ಪಿಳ್ಳೆ ಅಂತರಂಗವನ್ನು ತೆರೆದಿಡುತ್ತಾ ಹೋಗುತ್ತಾರೆ..
2004 ಜೂನ್ 15-16ರಂದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯೊಂದು ಪ್ರಕಟವಾಗಿತ್ತು. ಹೆಚ್ಚಿನೆಲ್ಲಾ ಪತ್ರಿಕೆಗಳೂ ಮುಖಪುಟದಲ್ಲೇ ಪೋಟೋವನ್ನು ಪ್ರಕಟಿಸಿದ್ದುವು. ಒಂದು ಹಸಿರು ಟಾಟಾ ಇಂಡಿಕಾ ಕಾರು. ಅದರ ಬಳಿ ಸಾಲಾಗಿ ಮಲಗಿಸಿರುವ 4 ಮೃತ ದೇಹಗಳು. ಆ ಮೃತದೇಹಗಳ ಪಕ್ಕವೇ 4  A.  K . 47 ರೈಫಲ್‍ಗಳು. ಅಲ್ಲದೇ ಗುಜರಾತ್ ಕ್ರೈಂ ಬ್ರಾಂಚ್‍ನ ಮುಖ್ಯಸ್ಥ ವಂಜಾರ ಸಹಿತ ಮತ್ತಿತರ ಅಧಿಕಾರಿಗಳು. 18 ವರ್ಷದ ಇಶ್ರತ್ ಜಹಾಂ, ಅಮ್ಜದಲಿ ಅಕ್ಬರಲಿ ರಾಣಾ, ಅಬ್ದುಲ್ ಗನಿ ಮತ್ತು ಜಾವೇದ್ ಯಾನೆ ಪ್ರಾಣೇಶ್ ಕುಮಾರ್ ಪಿಳ್ಳೆ... ಎಂಬ ಈ ನಾಲ್ಕು ಮಂದಿಯನ್ನು ಬೆಳಗ್ಗಿನ ಜಾವಾ ಎನ್‍ಕೌಂಟರ್‍ನಲ್ಲಿ ಕೊಲೆ ಮಾಡಿ ಮೋದಿಯನ್ನು ಸಂಭಾವ್ಯ ಹತ್ಯೆಯಿಂದ ಪಾರು ಮಾಡಿರುವುದಾಗಿ ವಂಜಾರ ಹೇಳಿಕೊಂಡರು. ಈ ನಾಲ್ವರೂ ಲಷ್ಕರೆ ತ್ವಯ್ಯಿಬದ ಕಾರ್ಯಕರ್ತರು ಅಂದರು. ಮೋದಿಯವರ ಅಹ್ಮದಾಬಾದ್‍ನ ಕಚೇರಿಗಿಂತ 40 ಕಿಲೋ ಮೀಟರ್ ದೂರದ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಎನ್‍ಕೌಂಟರ್ ಮಾಡಿರುವುದಕ್ಕಾಗಿ ವಂಜಾರ ತಂಡವನ್ನು ಮಾಧ್ಯಮಗಳು ಹೊಗಳಿದುವು. ಅವರ ಬುದ್ಧಿವಂತಿಕೆ, ಚಾಣಾಕ್ಷತೆಯನ್ನು ಕೊಂಡಾಡಿದುವು. ಆ,  ಜಾವೇದ್ ಯಾನೆ ಪ್ರಾಣೇಶ್ ಪಿಳ್ಳೆಯ ತಂದೆಯೇ ಗೋಪಿನಾಥ್ ಪಿಳ್ಳೆ. ಈ ಘಟನೆಗಿಂತ ಎರಡು ವರ್ಷಗಳ ಮೊದಲಷ್ಟೇ ಹೃದಯದ ಬೈಪಾಸ್ ಚಿಕಿತ್ಸೆಗೆ ಒಳಗಾಗಿದ್ದ ಮತ್ತು ಕೇಂದ್ರ ಸರಕಾರದ ಹೆವಿ ಎಲೆಕ್ಟ್ರಿಕಲ್ಸ್‍ನಲ್ಲಿ ಸೂಪರ್‍ವೈಸರ್ ಆಗಿ ನಿವೃತ್ತರಾಗಿದ್ದ ಗೋಪಿನಾಥರು ತಾನೋರ್ವ ಭಯೋತ್ಪಾದಕನ ತಂದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವೇ ಇರಲಿಲ್ಲ. ನಾನು ನನ್ನ ಮಗನಿಗೆ ಕಲಿಸಿರುವುದು ಒಳಿತುಗಳನ್ನು ಮಾತ್ರ. ಆತ ಉಗ್ರವಾದಿಯಾಗುವುದು ಸಾಧ್ಯವೇ ಇಲ್ಲ. ಆದ್ದರಿಂದ ವಂಜಾರನನ್ನು ನಾನು ನಂಬುವುದಿಲ್ಲ. ನನಗೆ ನ್ಯಾಯ ಕೊಡಿ ಎಂದು ರಾಷ್ಟ್ರಪತಿ ಸಹಿತ ಎಲ್ಲರಲ್ಲೂ ಕೋರಿಕೊಂಡರು. ಉತ್ತರ ಸಿಗದೇ ಹೋದಾಗ ಸುಪ್ರೀಮ್ ಕೋರ್ಟನ್ನು ಸಂಪರ್ಕಿಸಿದರು. ಅಂತಿಮವಾಗಿ ಕೇಸು ಗುಜರಾತ್ ಹೈಕೋರ್ಟಿಗೆ ವರ್ಗಾವಣೆಯಾಯಿತು. ಘಟನೆಯ ತನಿಖೆಗಾಗಿ ಮೆಟ್ರೋಪಾಲಿಟನ್ ಮ್ಯಾಜಿ ಸ್ಟ್ರೇಟ್ ಎಸ್.ಪಿ. ತಮಂಗಿಯವರನ್ನು ಹೈಕೋರ್ಟು ನೇಮಿಸಿತು. ಅವರು ಸಲ್ಲಿಸಿದ 241 ಪುಟಗಳ ವರದಿಯು ಎಷ್ಟು ಭಯಾನಕ ಅಂಶಗಳನ್ನು ಒಳಗೊಂಡಿತ್ತೆಂದರೆ, ವಂಜಾರರಂಥ ಅಧಿಕಾರಿಗಳು ಹೇಗೆ ಇಡೀ ವ್ಯವಸ್ಥೆಯನ್ನೇ ಕುಲಗೆಡಿಸಿ ಬಿಡಬಲ್ಲರು ಎಂಬುದನ್ನು ವಿವರಿಸಿತು. ಆ ಎನ್‍ಕೌಂಟರೇ ನಕಲಿ ಎಂದಿತು. 4 ಮಂದಿಯನ್ನು ಕೂರಿಸಿ ಹತ್ತಿರದಿಂದ ಗುಂಡಿಟ್ಟು ಕೊಲ್ಲಲಾಗಿದೆ ಎಂದು ತಮಂಗಿಯವರು ಹೇಳಿದರಲ್ಲದೇ ಇದಕ್ಕೆ ಪುರಾವೆಯಾಗಿ ಪೋಸ್ಟ್ ಮಾರ್ಟಮ್ ವರದಿಯನ್ನು ದಾಖಲಿಸಿದರು. ಒಂದು ರೀತಿಯಲ್ಲಿ 2002ರಿಂದ 2007ರ ಮಧ್ಯೆ 21 ಮಂದಿಯನ್ನು ಎನ್‍ಕೌಂಟರ್ ಮಾಡಿ ಕೊಂದಿದ್ದ ವಂಜಾರ ತಂಡದ 'ದೇಶಭಕ್ತಿ' ಕವಚವನ್ನು ಮೊತ್ತಮೊದಲ ಬಾರಿ ಅಧಿಕೃತವಾಗಿ ಕಳಚಿ ಹಾಕಿದ್ದು ಈ ತಮಂಗಿಯವರೇ. ಆದ್ದರಿಂದಲೇ ತಮಂಗಿಯವರನ್ನು ಗೋಪಿನಾಥ ಪಿಳ್ಳೆಯವರು ಸಂಬೋಧಿಸುವುದು ‘ಈಶ್ವರ’ ಎಂದೇ. ಒಂದು ವೇಳೆ ಪಿಳ್ಳೆಯವರು ಕೋರ್ಟು ಮೆಟ್ಟಲೇರುವ ಸಾಹಸವನ್ನು ಮಾಡದೇ ಇರುತ್ತಿದ್ದರೆ ಅವರೀಗಲೂ ಭಯೋತ್ಪಾದಕನ ತಂದೆಯಾಗಿಯೇ ಗುರುತಿಸಿಕೊಳ್ಳುತ್ತಿದ್ದರೇನೋ?
   ‘..ನನ್ನ ಮಗ ಪ್ರಾಣೇಶ ನನ್ನ ಮನೆಗೆ ಕೊನೆಯ ಬಾರಿ ಬಂದದ್ದು 2004  ಮೇ 30ರಂದು. ಮಕ್ಕಳಾದ ಅಬೂಬಕರ್, ಮೂಸಾ, ಝೈನಬ ಮತ್ತು ಪತ್ನಿ ಸಾಜಿದಾಳ ಜೊತೆ ಬಂದಿದ್ದ ಆತ ಒಂದು ವಾರ ಇದ್ದು ಪುಣೆಯಲ್ಲಿರುವ ತನ್ನ ಮನೆಗೆ ವಾಪಸಾಗಿದ್ದ. ನನಗಿರುವುದು ಇಬ್ಬರು ಗಂಡು ಮಕ್ಕಳೇ. ಪ್ರಾಣೇಶ ಮತ್ತು ಅರವಿಂದ. ನನ್ನ ಮಕ್ಕಳಿಬ್ಬರನ್ನೂ ಪೂರ್ಣ ಸ್ವಾತಂತ್ರ್ಯ ಕೊಟ್ಟು ಬೆಳೆಸಿದೆ. ನಾನು ನಿವೃತ್ತಿಯಾಗುವ ಸಮಯದಲ್ಲಿ ಪ್ರಾಣೇಶನಿಗೆ ದುಬೈಯಲ್ಲಿ ಒಳ್ಳೆಯ ನೌಕರಿ ದೊರಕಿತ್ತು. ಈ ಮಧ್ಯೆ ಆತ ಸಾಜಿದಾಳನ್ನು ಪ್ರೀತಿಸಿ ಮದುವೆಯಾದ. ಆದರೆ ಒಂದೆರಡು ವರ್ಷಗಳ ವರೆಗೆ ಅದನ್ನು ಮುಚ್ಚಿಟ್ಟಿದ್ದ. ಅಪ್ಪ ಎಲ್ಲಿ ಬೈಯ್ದು ಬಿಡುತ್ತಾರೋ ಅನ್ನುವ ಭೀತಿ. ನಾನು ಪ್ರಾಣೇಶನನ್ನು ಹತ್ತಿರ ಕೂರಿಸಿ ಎಲ್ಲವನ್ನೂ ಕೇಳಿಸಿಕೊಂಡೆ. ಆತ ಜಾವೇದ್ ಆದ ಕತೆಯನ್ನು ನನ್ನೊಂದಿಗೆ ಹಂಚಿಕೊಂಡ. ನಾನು ಆತನನ್ನು ಅಭಿನಂದಿಸಿದೆ. ಹೆಣ್ಣು ಮಗಳಿಲ್ಲದ ನಾನು ಸಾಜಿದಳನ್ನು ನನ್ನ ಮಗಳಾಗಿ ಸ್ವೀಕರಿಸಿದೆ. ನನ್ನ ಮಗ ಎಲ್ಲಿದ್ದರೂ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದ. ಒಂದು ವಾರ ಇಲ್ಲಿದ್ದು ಪುಣೆಗೆ ವಾಪಸಾದ ಆತ, ಅಲ್ಲಿಂದ ಸಾಜಿದಾಳ ಅಕ್ಕ ವಾಸವಿರುವ ಅಹ್ಮದ್ ನಗರಕ್ಕೆ ಕುಟುಂಬ ಸಮೇತ ಹೋದ. ಅಲ್ಲಿ ಮುಂಜಿನ ಮದುವೆಯಿತ್ತು. ಪತ್ನಿ ಮತ್ತು ಮಕ್ಕಳನ್ನು ಅಲ್ಲಿ ಇಳಿಸಿ ಕಾರಿನಲ್ಲಿ ಅಹ್ಮದ್ ನಗರವಾಗಿ ಹಿಂತಿರುಗುವಾಗ ಪೊಲೀಸರಂತೆ ಕಾಣುವ ಇಬ್ಬರು ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಕೆಳಗಿಳಿದ ಈತನನ್ನು ತಮ್ಮ ವಾಹನಕ್ಕೆ ಹತ್ತಿಸಿಕೊಂಡು ಹೋದರು. ಇದಾಗಿ ಐದು ದಿನಗಳ ಬಳಿಕ ಅವನ ಸಹಿತ 4 ಮಂದಿಯ ಮೃತ ದೇಹವನ್ನು ವಂಜಾರ ಪ್ರದರ್ಶಿಸಿದರು.
   ಎನ್‍ಕೌಂಟರ್‍ನ ಬಳಿಕ ವಂಜಾರರ ತಂಡ ಸಾಕಷ್ಟು ಸುಳ್ಳುಗಳನ್ನು ಹೇಳಿದೆ. ಪ್ರಾಣೇಶ್‍ನಿಂದ ಉರುಟು ಧಾನ್ಯದ ರೂಪದಲ್ಲಿ ತಯಾರಿಸಿದ ಸಿಡಿ ಮದ್ದುಗಳನ್ನು (ದಾನೆದಾಲ್ ಬಾರಿದ್) ವಶ ಪಡಿಸಿಕೊಳ್ಳಲಾಗಿದೆ ಎಂಬುದೂ ಅದರಲ್ಲಿ ಒಂದು. ನಿಜವೇನು ಗೊತ್ತೇ? ಜೂನ್‍ನಲ್ಲಿ ಆತ ನನ್ನ ಮನೆಯಿಂದ ಕುಟುಂಬ ಸಮೇತ ಕಾರಿನಲ್ಲಿ ಹೊರಟು ಹೋಗುವಾಗ 4 ಕೆ.ಜಿ. ಕರಿಮೆಣಸನ್ನು ಕೊಂಡೊಯ್ದಿದ್ದ. ದಾನೆದಾಲ್ ಬಾರಿದ್ ಎಂದು ವಂಜಾರ ಹೇಳಿದ್ದು ಇದನ್ನೇ. ಅಲ್ಲದೇ ಇಶ್ರತ್‍ಳನ್ನು ಪ್ರಾಣೇಶ್‍ನ ಪ್ರೇಯಸಿ ಎಂದೂ ವಂಜಾರ ಹೇಳಿದ್ದ. ಅವರ ನಡುವೆ 10 ವರ್ಷಗಳ ಪ್ರೇಮವಿತ್ತಂತೆ. ನಿಜವಾಗಿ, ಎನ್‍ಕೌಂಟರ್‍ಗೀಡಾಗುವಾಗ ಇಶ್ರತ್‍ಳ ವಯಸ್ಸು ಕೇವಲ 18. ಹಾಗಾದರೆ, ವಂಜಾರರ ಊರಿನಲ್ಲಿ ಮಕ್ಕಳು 8 ವರ್ಷಗಳಿರುವಾಗಲೇ ಪ್ರೇಮಿಸಲು ಪ್ರಾರಂಭಿಸುತ್ತಾರಾ? ಸುಳ್ಳು ಹೇಳುವುದಕ್ಕೂ ಒಂದು ಇತಿ-ಮಿತಿ ಬೇಡವೇ? ಪುಣೆಯಲ್ಲಿಯ ನನ್ನ ಮಗನ ಒಂದು ಸಂಸ್ಥೆಯಲ್ಲಿ ಇಶ್ರತ್‍ಳ ತಂದೆ ಕೆಲಸ ಮಾಡುತ್ತಿದ್ದರು. ಒಂದು ದಿನ ಆಯ ತಪ್ಪಿ ಬಿದ್ದ ಅವರಿಗೆ ಗಂಭೀರ ಏಟಾಯಿತು. ತನ್ನ ಕುಟುಂಬದ ಹೊಣೆಯನ್ನು ನೋಡಿ ಕೊಳ್ಳುವಂತೆ ಪ್ರಾಣೇಶ್‍ನಲ್ಲಿ ಸಾಯುವುದಕ್ಕಿಂತ ಮೊದಲು ಅವರು ವಿನಂತಿಸಿದ್ದರು. ಆ ಕಾರಣದಿಂದಾಗಿ ಟ್ರಾವೆಲ್ ಏಜೆನ್ಸಿಯೊಂದನ್ನು ಪ್ರಾರಂಭಿಸಿ ಅದರಲ್ಲಿ ಇಶ್ರತ್‍ಳನ್ನು ನೇಮಿಸಿದ್ದ. ವಂಜಾರ ತಿರುಚಿದ್ದು ಈ ಪರೋಪಕಾರವನ್ನೇ. ಮೂಲಗಳನ್ನು ಆಧರಿಸಿ ಮಾಧ್ಯಮಗಳಲ್ಲಿ ಬರುತ್ತಿದ್ದ ಸುದ್ದಿ ಮತ್ತು ಗುಜರಾತ್ ಪೊಲೀಸರು ನನ್ನೊಂದಿಗೆ ವರ್ತಿಸುತ್ತಿದ್ದ ರೀತಿ, ಈ ಪ್ರಾಯದಲ್ಲೂ ನನ್ನನ್ನು ಕುದಿಯುವಂತೆ ಮಾಡಿತು. ನನ್ನ ಮಗ ಭಯೋತ್ಪಾದಕನಲ್ಲ ಅನ್ನುವುದು ನನಗೆ ನೂರು ಶೇಕಡಾ ಗೊತ್ತು. ಆದರೆ ಅದನ್ನು ಸಾಬೀತುಪಡಿಸಬೇಕಲ್ಲ. ಗುಜರಾತ್ ಪೊಲೀಸರಂತೂ ನಿರಂತರ ಫೋನ್ ಮುಖಾಂತರ ಪೀಡಿಸುತ್ತಿದ್ದರು. ನನ್ನ ಮಗಳಂತಿರುವ ಸಾಜಿದಳನ್ನಂತೂ ಅವರು ಇಂಚಿಂಚಾಗಿ ಕೊಲ್ಲುತ್ತಿದ್ದರು. ಇದಕ್ಕೊಂದು ತಾರ್ಕಿಕ ಅಂತ್ಯ ಸಿಗಲೇಬೇಕೆಂದು ತೀರ್ಮಾನಿಸಿಯೇ ನಾನು ಅಂತಿಮವಾಗಿ ಸುಪ್ರೀಮ್ ಕೋರ್ಟಿನ ಮೆಟ್ಟಲೇರಿದೆ. ಈ ಸಂದರ್ಭದಲ್ಲಿಯೇ ನಾನು ಸಾಜಿದಾಳನ್ನು ದೂರುದಾರಳಾಗಿ ಕೇಸಿನಲ್ಲಿ ಸೇರಿಕೊಳ್ಳುವಂತೆ ವಿನಂತಿಸಿದ್ದು. ಗಂಡನನ್ನು ಕಳಕೊಂಡ ನೋವಿನ ಜೊತೆಗೇ ಪೊಲೀಸರು ಇಂಚಿಂಚಾಗಿ ಕೊಲ್ಲುತ್ತಿರುವ ಅನುಭವಗಳನ್ನು ಹೊಂದಿರುವ ಆ ಮಗಳು, 'ಬೇಡ ಮಾವ' ಎಂದು ಅತ್ತಿದ್ದು ನನ್ನನ್ನು ಕಣ್ಣೀರಾಗಿಸಿತು. ಈ ಮಗಳಿಗಾಗಿಯಾದರೂ ಆ ಕ್ರೂರಿಗಳ ವಿರುದ್ಧ ಹೋರಾಡಲೇಬೇಕು ಎಂದು ತೀರ್ಮಾನಿಸುವಂತೆ ಮಾಡಿತು. ಇಷ್ಟಕ್ಕೂ, ನನ್ನ ಹೋರಾಟದ ಹಾದಿಯೇನೂ ಸುಗಮವಾಗಿರಲಿಲ್ಲ. ನಾನು ವಿಚಾರಣೆಗೆಂದು 18 ಬಾರಿ ಗುಜರಾತ್‍ಗೆ ಪ್ರಯಾಣಿಸಿದೆ. ನನಗೆ ಕೋರ್ಟ್‍ಗೆ ಹಾಜರಾಗಿ ಎಂದು ಗುಜರಾತ್‍ನಿಂದ ಅಂಚೆ ಮೂಲಕ ಸಮನ್ಸ್ ಬರುತ್ತಿದ್ದುದೇ ಎರಡ್ಮೂರು ದಿನಗಳ ಮೊದಲು. ಹೀಗಿರುವಾಗ ರೈಲಿನ ತತ್ಕಾಲ್‍ನಲ್ಲೂ ಟಿಕೇಟು ಸಿಗುತ್ತಿರಲಿಲ್ಲ. ಆದರೂ ನನ್ನ ಮಗ, ಮಗಳಿಗಾಗಿ ನಾನು ಹೋಗಲೇ ಬೇಕಾಗಿತ್ತು. 4 ಬಾರಿ ನಾನು ವಿಮಾನದಲ್ಲಿ ಗುಜರಾತ್‍ಗೆ ಹೋದೆ. ಹಾಗಂತ ನಾನೇನೂ ಯುವಕ ಅಲ್ಲವಲ್ಲ.
   ಗೋಪಿನಾಥ್ ನಿಟ್ಟುಸಿರಿಡುತ್ತಾರೆ..
ಸಾಜಿದಾ ನನ್ನ ಮಗಳು. ಆದ್ದರಿಂದಲೇ ನನ್ನ ಆಸ್ತಿಯನ್ನು ಮಾರಿ ನನ್ನ ಮೂರು ಮೊಮ್ಮಕ್ಕಳಿಗಾಗಿ ಪುಣೆಯಲ್ಲಿ 3 ಫ್ಲಾಟ್‍ಗಳನ್ನು ಖರೀದಿಸಿಕೊಟ್ಟಿದ್ದೇನೆ. ಆದರೆ ಗುಜರಾತ್‍ನ ಅಧಿಕಾರಿಗಳು ಎಷ್ಟು ಸತಾಯಿಸಿದರೆಂದರೆ ಮಗನ ಮರಣ ಪತ್ರಕ್ಕಾಗಿ 6 ವರ್ಷಗಳ ವರೆಗೆ ಅಲೆದಾಡಿಸಿದರು. ಆದರೂ ಕೊಡಲಿಲ್ಲ. ಕೊನೆಗೆ ಪೋಸ್ಟ್ ಮಾರ್ಟಂ ವರದಿಯನ್ನು ಪುರಾವೆಯಾಗಿ ಮಂಡಿಸಿ, ಫ್ಲ್ಯಾಟುಗಳನ್ನು ರಿಜಿಸ್ಟ್ರೇಶನ್ ಮಾಡಿಸಿದೆ. ನಿಜವಾಗಿ, ನನ್ನ ಮಗನನ್ನು ಕೊಲ್ಲುವ ಮೂಲಕ ಹೀರೋ ಆಗಿ ಮೆರೆಯಬಹುದು ಎಂದು ವಂಜಾರ ಭಾವಿಸಿರಬಹುದು. ಲಷ್ಕರೆ ತ್ವಯ್ಯಿಬದವರನ್ನು ಕೊಲ್ಲುವುದೆಂದರೆ ಸಣ್ಣ ಸಂಗತಿ ಅಲ್ಲವಲ್ಲ. ಓರ್ವ ಭಯೋತ್ಪಾದಕನ ತಂದೆಯಾಗಿ ಕದ್ದು ಮುಚ್ಚಿ ಮನೆಯೊಳಗಿರುವಂತೆ ಮಾಡಲು, ಭಯೋತ್ಪಾದಕನ ಪತ್ನಿಯೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡು ಯಾರಿಗೂ ಕಾಣದಂತೆ ಕಣ್ಣೀರಿನೊಂದಿಗೆ ಕಳೆದು ಹೋಗಲು ಮತ್ತು ದೇಶದ್ರೋಹಿ ಇಮೇಜಿನೊಂದಿಗೆ ಇಶ್ರತ್‍ಳ ಕುಟುಂಬ ಬದುಕುವಂತೆ ಮಾಡಲು ವಂಜಾರ ತಂಡಕ್ಕೆ ಒಂದು ಹಂತದ ವರೆಗೆ ಸಾಧ್ಯವಾಯಿತು. ಆದರೆ ಅಂತಿಮವಾಗಿ ವಂಜಾರ ಮತ್ತು ಅವರ ತಂಡವೇ ಈ ಎಲ್ಲ ಹಣೆಪಟ್ಟಿಯೊಂದಿಗೆ ಜೈಲಿನಲ್ಲಿ ಈಗ ಕೊಳೆಯುತ್ತಿದೆ. ಗುಜರಾತ್‍ನ ಸೆಂಟ್ರಲ್ ಜೈಲಿನಲ್ಲಿ 2007ರಿಂದ ವಂಜಾರ ವಿವಿಧ ಆರೋಪಗಳನ್ನು ಹೊತ್ತುಕೊಂಡು ಮುಖ ಮುಚ್ಚಿ ಬದುಕುತ್ತಿದ್ದಾರೆ. ಇದಕ್ಕಿಂತಲೂ ವಿಶೇಷ ಏನು ಗೊತ್ತೇ, 2007ರಿಂದ ಈ ವರೆಗೂ ಗುಜರಾತ್‍ನಲ್ಲಿ ಒಂದೇ ಒಂದು ಎನ್‍ಕೌಂಟರ್ ಆಗಿಲ್ಲ. ಪ್ರಾಣೇಶನ ಸಾವು ಎನ್‍ಕೌಂಟರ್‍ಗಳೆಂಬ ಕಗ್ಗೊಲೆಗಳ ಅಂತ್ಯಕ್ಕೇ ಕಾರಣವಾಯಿತು. ನಾನೀಗ ನಿರಾಳ ವ್ಯಕ್ತಿ. ಎಲ್ಲೆಡೆಗೂ ತಲೆ ಎತ್ತಿ ಆತ್ಮವಿಶ್ವಾಸದಿಂದ ನಡೆಯಬಲ್ಲೆ. ಆದರೆ ವಂಜಾರ ಜೈಲಿನ ಒಳಗಷ್ಟೇ ಅಷ್ಟಿಷ್ಟು ನಡೆಯಬಲ್ಲ. ಅದೂ ಮುಖ ಮುಚ್ಚಿಕೊಂಡು...  
  
ಪತ್ರಕರ್ತ ಮಿತ್ರನಲ್ಲಿ ಹೇಳುತ್ತಾ ಗೋಪಿನಾಥರು ನಿರಾಳವಾಗುತ್ತಾರೆ. ಬಹುಶಃ ಎಲ್ಲ ಮಕ್ಕಳೂ, ತಮಗೆ ಇಂಥ ಅಪ್ಪ ಬೇಕು ಎಂದು ಬಯಸುವಷ್ಟು ಹತ್ತಿರವಾಗುತ್ತಾರೆ.

Monday, June 3, 2013

'ಪದ್ಮಭೂಷಣ'ವನ್ನೇ ಜೋಕರ್ ಆಗಿಸಿದವರು, ಇನ್ನು ಈ ಹೋರಾಟಗಾರರನ್ನು ಬಿಡುತ್ತಾರಾ?

ಕುಡಂಕುಲಂ ಪ್ರತಿಭಟನೆ
1. ನರ್ಮದಾ ಬಚಾವೋ ಆಂದೋಲನ್
2. ಫೋಸ್ಕೊ ಪ್ರತಿರೋಧ್ ಸಂಗ್ರಾಮ್ ಸಮಿತಿ
3. ಪೀಪಲ್ಸ್ ಮೂವ್‍ಮೆಂಟ್ ಅಗೈನ್‍ಸ್ಟ್ ಕುಡಂಕುಲಮ್ ನ್ಯೂಕ್ಲಿಯರ್ ಪ್ರೊಜೆಕ್ಟ್
4. ಜೈತಾಪುರ್ ಜನಹಿತ್ ಸೇವಾ ಸಮಿತಿ
5. ಮಂಗಳೂರು ಕರಾವಳಿ ಜನಾಭಿವೃದ್ಧಿ ವೇದಿಕೆ
   ಇವೆಲ್ಲ ಇವತ್ತು ಏನಾಗಿವೆ? ಎಷ್ಟಂಶ ಜೀವಂತವಿವೆ? ಸರಕಾರದ ಜನವಿರೋಧಿ ಯೋಜನೆಗಳನ್ನು ಪ್ರತಿಭಟಿಸುವುದಕ್ಕೆಂದು ಹುಟ್ಟಿಕೊಂಡ ಈ ಸಂಘಟನೆಗಳೆಲ್ಲ ಉದ್ದೇಶಿತ ಗುರಿಯನ್ನು ಮುಟ್ಟದೇ ಇರುವುದಕ್ಕೆ ಏನು, ಯಾರು ಕಾರಣ? ಜನರೇ, ನಾಯಕರೇ, ಸರಕಾರವೇ ಅಥವಾ ಕಾರ್ಪೋರೇಟ್ ಸಂಸ್ಥೆಗಳೇ? ಒಂದು ಕಡೆ, ಜನರು ಹೆಚ್ಚೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಪ್ರತಿಯೊಂದನ್ನೂ ಸಂದೇಹದ ದೃಷ್ಟಿಯಲ್ಲಿ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರಕಾರ ಯಾವ ಯೋಜನೆಯನ್ನು ಘೋಷಿಸಿದರೂ ತಕ್ಷಣಕ್ಕೆ ಒಪ್ಪಿಕೊಳ್ಳದೇ ಇರುವ, ಸಂದೇಹಿಸುವ ಮನಃಸ್ಥಿತಿ ವ್ಯಾಪಕವಾಗುತ್ತಿದೆ. ಹೀಗಿರುವಾಗ, ಪ್ರತಿಭಟನೆಗಳನ್ನು ಅಸಹಜ ಅನ್ನುವಂತಿಲ್ಲ. ಗುಟ್ಕಾ ನಿಷೇಧವನ್ನು ಅಡಕೆ ಬೆಳೆಗಾರರು ಅನುಮಾನದಿಂದ ನೋಡುತ್ತಿರುವುದು ಈ ಕಾರಣದಿಂದಲೇ. ಆದರೆ, ಈ ಮನಃಸ್ಥಿತಿ ಅಂತಿಮವಾಗಿ ಪ್ರತಿಭಟನಾ ಚಳವಳಿಗಳ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆಯೇ? ಪ್ರತಿಭಟನೆಗಳನ್ನೇ ಅನುಮಾನಿಸುತ್ತಾ, ಅದರ ನಾಯಕರ ಪ್ರಾಮಾಣಿಕತೆಯನ್ನು, ಬದ್ಧತೆಯನ್ನೇ ಸಂದೇಹಿಸುತ್ತಾ ತಿರುಗುವವರ ಹುಟ್ಟಿಗೆ ಇಂಥ ಮನಸ್ಥಿತಿಗಳು ಕಾರಣವಾಗುತ್ತಿದೆಯೇ?
   2005 ಜೂನ್‍ನಲ್ಲಿ ಕೊರಿಯಾದ ಫೋಸ್ಕೊ ಕಂಪೆನಿಯು ಬೃಹತ್ ಸ್ಟೀಲ್ ಉದ್ದಿಮೆಯನ್ನು ಸ್ಥಾಪಿಸುವ ಕುರಿತಂತೆ ಒಡಿಸ್ಸಾ ಸರಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ಕಂಪೆನಿಯ ಆಡಳಿತ ನಿರ್ದೇಶಕ ಯಂಗ್ ವೋನ್ ಯೂನ್‍ರು ಇಡೀ ಉದ್ದಿಮೆಯ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್‍ರಿಗೆ ಮಾಹಿತಿ ನೀಡುತ್ತಾರೆ. ಒಟ್ಟು 8500 ಎಕ್ರೆಯಷ್ಟು ವಿಸ್ತಾರ ಭೂಮಿಯಲ್ಲಿ ಸ್ಟೀಲ್ ಪ್ಲಾಂಟ್, ಇನ್‍ಫ್ರಾಸ್ಟ್ರಕ್ಚರ್, ಮೈನಿಂಗ್‍ಗಳು ನಡೆಯುವ ನೀಲನಕ್ಷೆಯನ್ನು ಮುಂದಿಡುತ್ತಾರೆ. ಅಪಾರ ಖನಿಜ ಮತ್ತು ಅರಣ್ಯ ಸಂಪತ್ತು ಇರುವ ಒಡಿಸ್ಸಾದಲ್ಲಿ ಈ ಒಪ್ಪಂದ ಕಿಚ್ಚು ಹಚ್ಚುತ್ತದೆ. ಪ್ರತಿಭಟನೆಯ ಕಾವು ಎಷ್ಟು ಜೋರಾಗಿತ್ತೆಂದರೆ, ಪರಿಸರ ಮತ್ತು ಅರಣ್ಯ ಇಲಾಖೆಯು 2008ರಲ್ಲಿ ತನಿಖೆಗೆ ಆದೇಶಿಸುತ್ತದೆ. ಈ ಕಾರಣದಿಂದಲೇ ಎನ್.ಸಿ. ಸಕ್ಸೇನಾ ನೇತೃತ್ವದ 19 ಮಂದಿಯ ತಂಡ ಅಲ್ಲಿಗೆ ಭೇಟಿ ಕೊಡುತ್ತಲ್ಲದೇ ಫೋಸ್ಕೊದ ವಿರುದ್ಧ ಅಸಮಾಧಾನ ಸೂಚಿಸುತ್ತದೆ. ಉದ್ದಿಮೆಗೆ ನೀಡಲಾಗಿರುವ ಅರಣ್ಯ ಪ್ರದೇಶಗಳು ನಾಜೂಕಿನವು ಮತ್ತು ಕಾಪಾಡಿಕೊಳ್ಳಲೇಬೇಕಾದಂಥವು ಅನ್ನುತ್ತದೆ. ಈ ವರದಿಯನ್ನು ಪರಿಗಣಿಸಿ ಪರಿಸರ ಇಲಾಖೆಯು ಅರಣ್ಯ ಭೂಮಿಯ ವರ್ಗಾವಣೆಗೆ ತಡೆ ವಿಧಿಸುತ್ತದೆ. ಒಂದು ರೀತಿಯಲ್ಲಿ ಫೋಸ್ಕೋ ವಿರೋಧಿ ಚಳವಳಿಗೆ ಭಾರೀ ಉತ್ತೇಜನ ಕೊಟ್ಟ ಸಂದರ್ಭವಿದು. ಬಳಿಕ ಸರಕಾರವು ಮೀನಾ ಗುಪ್ತಾ ನೇತೃತ್ವದ 4 ಮಂದಿಯ ಸಮಿತಿಯನ್ನು ರಚಿಸುತ್ತದೆ. 2010 ಅಕ್ಟೋಬರ್‍ನಲ್ಲಿ ಅದು ಸಲ್ಲಿಸಿದ ವರದಿ ಎಷ್ಟು ಭಿನ್ನವಾಗಿತ್ತೆಂದರೆ, ಸಂಪೂರ್ಣ ಉದ್ದಿಮೆಯನ್ನು ಪರಿಸರ ಸಹ್ಯ ಅನ್ನುತ್ತದೆ. ರಾಜ್ಯ ಹೈಕೋರ್ಟೂ ಯೋಜನೆಯ ಪರ ನಿಲ್ಲುತ್ತದೆ. ಪ್ರತಿಭಟನಾಕಾರರ ಸಂಖ್ಯೆಯಲ್ಲಿ ದಿನೇ ದಿನೇ ಕುಸಿತವಾಗತೊಡಗುತ್ತದೆ. ಆರಂಭದಲ್ಲಿ 8 ಜಿಲ್ಲೆಗಳಿಗೆ ವ್ಯಾಪಿಸಿಕೊಂಡಿದ್ದ ಪ್ರತಿಭಟನೆ ಕ್ರಮೇಣ ಯೋಜನೆಯಿಂದ ಸಂಪೂರ್ಣ ಕಣ್ಮರೆಯಾಗಲಿರುವ ಗಡಕುಜಂಗ್ ಮತ್ತು ಧಿಂಕಿಯಾ ಗ್ರಾಮಗಳಿಗೆ ಮಾತ್ರ ಸೀಮಿತಗೊಳ್ಳುತ್ತದೆ. ಸಂತ್ರಸ್ತರು ಸರಕಾರದ ಪರಿಹಾರವನ್ನು ಪಡಕೊಂಡು ಸುಮ್ಮನಾಗತೊಡಗುತ್ತಾರೆ. ಈ ಮಧ್ಯೆ 2011 ಜೂನ್ 14ರಂದು ಧಿಂಕಿಯಾ ಗ್ರಾಮವನ್ನು ಫೋಸ್ಕೋಗೆ ಹಸ್ತಾಂತರಿಸುವ ಉಪಕ್ರಮಕ್ಕೆ ನವೀನ್ ಪಟ್ನಾಯಕ್ ಚಾಲನೆ ಕೊಡುತ್ತಾರೆ. ಅಲ್ಲದೇ ಫೋಸ್ಕೋ ಪ್ರತಿರೋಧ್ ಸಂಗ್ರಾಮ್ ಸಮಿತಿಯನ್ನು ಹುಟ್ಟು ಹಾಕಿ ಅದಕ್ಕೆ ನೇತೃತ್ವ ಕೊಟ್ಟಿದ್ದ ಅಭಯ್ ಸಾಹುರನ್ನು ವರದಕ್ಷಿಣೆ, ಕೊಲೆ ಸಹಿತ ಕೆಲವು ಕ್ರಿಮಿನಲ್ ಆರೋಪಗಳನ್ನು ಹೊರಿಸಿ ಬಂಧಿಸಲಾಗುತ್ತದೆ. ಫೋಸ್ಕೋವನ್ನು ವಿರೋಧಿಸುವವರಂತೆ ಬೆಂಬಲಿಸುವ ಆದಿವಾಸಿಗಳ ಗುಂಪೂ ಹುಟ್ಟಿಕೊಳ್ಳುತ್ತದೆ. ನಿಧಾನವಾಗಿ ಫೋಸ್ಕೋ ಪ್ರಬಲವಾಗುತ್ತಾ, ಪ್ರತಿಭಟನೆಗಳು ಕ್ಷೀಣವಾಗುತ್ತಾ ಸಾಗುತ್ತವೆ..
   ಇಷ್ಟಕ್ಕೂ, ತನಗೆ ಎದುರಾಗಬಹುದಾದ ಅಡೆ-ತಡೆಗಳ ಬಗ್ಗೆ ಯಾವುದೇ ಕಂಪೆನಿ ಮೊದಲೇ ಲೆಕ್ಕ ಹಾಕದೇ ಇರುತ್ತದೆಯೇ? ಅದನ್ನು ಎದುರಿಸುವುದಕ್ಕೆ ತಂತ್ರಗಳನ್ನು ಹೆಣಿಯದಿರುತ್ತದೆಯೇ? ತಮಿಳ್ನಾಡಿನ ತಿರುನೇಲ್ವಲಿ ಜಿಲ್ಲೆಯಲ್ಲಿ ಸ್ಥಾಪನೆಗೊಂಡಿರುವ ಕುಡಂಕುಲಮ್ ಅಣು ವಿದ್ಯುತ್ ಯೋಜನೆಗೆ 1988ರಲ್ಲೇ ರಾಜೀವ್ ಗಾಂಧಿ ಮತ್ತು ಅಂದಿನ ರಷ್ಯಾದ ಅಧ್ಯಕ್ಷ  ಮಿಖಾಯಿಲ್ ಗೋರ್ಬಚೇವ್‍ರು ಸಹಿ ಹಾಕಿದ್ದರು. ಆದರೆ ಆ ಬಳಿಕ ರಷ್ಯಾ ಹೋಳಾದದ್ದು ಮತ್ತು ಅಮೇರಿಕದ ವಿರೋಧದಿಂದಾಗಿ ಯೋಜನೆ ತಡವಾಗಿ 2001ರಲ್ಲಿ ಆರಂಭಗೊಂಡಿತು. ಇಷ್ಟಿದ್ದೂ, ಇಡೀ ಯೋಜನೆಯು ಜನರ ಗಮನಕ್ಕೆ ಬಂದದ್ದು ಎರಡ್ಮೂರು ವರ್ಷಗಳ ಹಿಂದೆ. ಅಣು ರಿಯಾಕ್ಟರ್‍ನ 30 ಕಿಲೋ ಮೀಟರ್ ಸುತ್ತ ಮುತ್ತ ವಾಸಿಸುತ್ತಿರುವ ಒಂದು ಮಿಲಿಯನ್ ಮಂದಿಯ ಆರೋಗ್ಯವು ಗಂಭೀರ ಚರ್ಚೆಗೆ ಒಳಪಟ್ಟದ್ದೂ ಇತ್ತೀಚೆಗೆ. ಯೋಜನೆಯ ನಕ್ಷೆಯನ್ನು ರೂಪಿಸಿದ್ದ (ಡಿಸೈನರ್) ಸೆರ್ಗೆಯಿ  ರಿಸೋವ್‍ರು 2011ರಲ್ಲಿ ವಿಮಾನಾಪಘಾತದಲ್ಲಿ ಸಾವಿಗೀಡಾಗದೇ ಇರುತ್ತಿದ್ದರೆ ಯೋಜನೆ ಈಗಿನಷ್ಟೂ ಪ್ರಚಾರಕ್ಕೆ ಬರುತ್ತಿರಲಿಲ್ಲವೋ ಏನೋ. ಅಲ್ಲದೇ ಸುನಾಮಿಯಿಂದಾಗಿ ಜಪಾನ್‍ನಲ್ಲಿ ನಡೆದ ಅಣು ದುರಂತ ಮತ್ತು ತನ್ನ 17 ಅಣು ರಿಯಾಕ್ಟರುಗಳನ್ನು ಮುಚ್ಚಲು ಜರ್ಮನಿ ತೀರ್ಮಾನಿಸಿರದಿರುತ್ತಿದ್ದರೆ ಕುಡಂಕುಲಮ್‍ನ ಪೀಪಲ್ಸ್ ಮೂವ್‍ಮೆಂಟ್‍ಗೆ ಈಗಿನಷ್ಟು ಜನಬೆಂಬಲ ಸಿಗುವುದಕ್ಕೂ ಸಾಧ್ಯವಿರಲಿಲ್ಲ. ನಿಜವಾಗಿ, 1988ರಿಂದ 2001ರ ವರೆಗಿನ ಈ 13 ವರ್ಷಗಳ ಅವಧಿಯಲ್ಲಿ ಅಣು ವಿದ್ಯುತ್ ಸಂಸ್ಥೆಯು ಸುಮ್ಮನಿತ್ತು ಎಂದು ಹೇಳುವಂತಿಲ್ಲ. ಅದು ಇಡೀ ಯೋಜನೆಗೆ ಎದುರಾಗಬಹುದಾದ ಪ್ರತಿರೋಧ ಮತ್ತು ಸವಾಲುಗಳನ್ನು ನಿರ್ವ ಹಿಸುವುದಕ್ಕೆ ತಕ್ಕ ಏರ್ಪಾಟು ಮಾಡಿಕೊಂಡಿರಬಹುದು. ಜನರಿಗೆ ಗೊತ್ತಾಗದಂತೆ, ಗೊತ್ತಾದರೂ ವಿದ್ಯುತ್ ಕೊರತೆಯನ್ನು ಮುಂದಿಟ್ಟು ಸಮರ್ಥಿಸಿಕೊಳ್ಳುವಂತೆ ಮಾಡುವುದಕ್ಕೆ ಸಕಲ ಏರ್ಪಾಟುಗಳನ್ನೂ ಮಾಡಿರಬಹುದು. ಯೋಜನೆಗೆ ಪೂರಕವಾದ ಮಾಹಿತಿಗಳು ಮಾಧ್ಯಮಗಳಲ್ಲೂ ಬರುವಂತೆ ನೋಡಿಕೊಳ್ಳಲು ತಂಡ ರಚಿಸಿರಬಹುದು. ಹಾಗಂತ ಇವೆಲ್ಲ ಅವಕಾಶಗಳು ಪ್ರತಿಭಟನಾಕಾರರಿಗೆ ಎಲ್ಲಿರುತ್ತದೆ ಹೇಳಿ? ಅವರಿಗೆ ಯೋಜನೆಯ ಬಗ್ಗೆ ಗೊತ್ತಾಗುವಾಗಲೇ ಅಥವಾ ಜನರನ್ನು ಸಂಘಟಿಸುವಾಗಲೇ ವಿದ್ಯುತ್ ಕಂಪೆನಿಯ ಅರ್ಧ ಕೆಲಸ ಮುಗಿದಿರುತ್ತದೆ. ಆ ಕೆಲಸವನ್ನೇ ತೋರಿಸಿ ಯೋಜನೆಯನ್ನು ಮುಂದುವರಿಸುವುದಕ್ಕೆ ಅದು ಕೋರ್ಟು, ಸರಕಾರದೊಂದಿಗೆ ಅನುಮತಿ ಕೇಳುತ್ತದೆ. ಸರಕಾರವಂತೂ ಒಂದೆರಡು ಆಯೋಗಗಳನ್ನು ರಚಿಸಿ ಅದೂ-ಇದೂ ಮಾತಾಡಿ, ಕೆಲವು ಷರತ್ತುಗಳನ್ನು ವಿಧಿಸಿದಂತೆ ಮಾಡಿ ಯೋಜನೆ ಮುಂದುವರಿಸುವುದಕ್ಕೆ ಅನುಮತಿ ಕೊಡುತ್ತದೆ. ಮತ್ತೂ ಪ್ರತಿಭಟಿಸಿದರೆ ಕೇಸು ದಾಖಲಾಗುತ್ತದೆ. ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆ, ಮಹಾರಾಷ್ಟ್ರದ ಜೈತಾಪುರ್ ಅಣು ವಿದ್ಯುತ್ ಅಥವಾ ಸರ್ದಾರ್ ಸರೋವರ್ ಯೋಜನೆಗಳ ವಿರುದ್ಧ ಎದ್ದ ಪ್ರತಿಭಟನೆಗಳೆಲ್ಲ ನಿಧಾನವಾಗಿ ಸಾಗಿ ಬಂದದ್ದು ಇದೇ ರೀತಿಯಲ್ಲಿ. 1979ರ ಸರ್ದಾರ್ ಸರೋವರ್ ಯೋಜನೆಯ ವಿರುದ್ಧ ಮೇಧಾ ಪಾಟ್ಕರ್‍ ನೇತೃತ್ವದಲ್ಲಿ ನರ್ಮದಾ ಬಚಾವೋ ಆಂದೋಲನ್ ಹುಟ್ಟಿಕೊಂಡದ್ದೇ 10 ವರ್ಷಗಳ ಬಳಿಕ, 1989ರಲ್ಲಿ. ನಿಜವಾಗಿ, ವ್ಯವಸ್ಥೆಯು ಜನರನ್ನು ಬಹುತೇಕ ಬಾರಿ ಕತ್ತಲಲ್ಲಿರಿಸಿಯೇ ಜನವಿರೋಧಿ ಯೋಜನೆಗಳಿಗೆ ಚಾಲನೆ ಕೊಡುತ್ತದೆ. ಅದು ಜನರ ಗಮನಕ್ಕೆ ಬಂದು ಪ್ರತಿಭಟನೆಗೆ ಮುಂದಾಗುವಾಗ ಯೋಜನೆಯ ದೊಡ್ಡದೊಂದು ಭಾಗ ಪೂರ್ಣವಾಗಿರುತ್ತದೆ. ಇಂಥ ಹೊತ್ತಲ್ಲಿ, ಪ್ರತಿಭಟನಾಕಾರರು ಮಾಡುವುದಾದರೂ ಏನನ್ನು? ಕೆಲಸಕ್ಕೆ ರಜೆ ಹಾಕಿ ಎಷ್ಟು ದಿನಾಂತ ಅವರು ಪ್ರತಿಭಟಿಸಿಯಾರು? ಪ್ರತಿಭಟನೆಯಿಂದಲೋ, ಕೋರ್ಟು ಕಲಾಪದಿಂದಾಗಿಯೋ ಯೋಜನೆ ಮುಂದೂಡಲ್ಪಟ್ಟರೆ ಸರಕಾರಿ ಸಬ್ಸಿಡಿ ಅಥವಾ ಇನ್ನೇನೋ ಒಳವ್ಯವಹಾರದ ಮೂಲಕ ಕಂಪೆನಿಗಳು ಬದುಕಬಹುದು. ಹಾಗಂತ ಪ್ರತಿಭಟನಾಕಾರರಿಗೆ ಸರಕಾರ ಊಟ ಕೊಡುವುದಿಲ್ಲವಲ್ಲ?
   ಅಷ್ಟಕ್ಕೂ, ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನೇ ಎತ್ತಿಕೊಳ್ಳಿ.
ಇತ್ತೀಚೆಗೆ ಇಂಡಿಯಾ ಟುಡೇ ಪತ್ರಿಕೆ ಬಿಡುಗಡೆಗೊಳಿಸಿದ ಭಾರತದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಅಣ್ಣಾ ಹಜಾರೆಯ ಹೆಸರೇ ಇಲ್ಲ. 2012ರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ವ್ಯಕ್ತಿ, ಕೇವಲ 12 ತಿಂಗಳೊಳಗೆ ಕಾಣೆಯಾಗಿರುವುದಕ್ಕೆ ಏನು ಕಾರಣ? ತನ್ನ ಗ್ರಾಮವಾದ ರಾಲೇಗಾಂವ್ ಸಿದ್ದಿಯನ್ನು ಮದ್ಯ, ತಂಬಾಕು ರಹಿತವಾಗಿಸಿರುವ; ಬಡವರಿಗಾಗಿ ಬ್ಯಾಂಕು, ನೀರಾವರಿ ಯೋಜನೆ ಸಹಿತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದರಿ ಗ್ರಾಮವನ್ನು ಸೃಷ್ಟಿಸಿರುವ ಮತ್ತು ಅದಕ್ಕಾಗಿಯೇ 1992ರಲ್ಲಿ ಪದ್ಮಭೂಷಣ್ ಪ್ರಶಸ್ತಿಯನ್ನು ಪಡಕೊಂಡ ಅಣ್ಣಾ ಹಜಾರೆ, ಅನನುಭವಿಯೇನಲ್ಲ. ಆದರೆ ರಾಷ್ಟ್ರಮಟ್ಟದಲ್ಲಿ ಅವರು ಹುಟ್ಟು ಹಾಕಿದ ಚಳವಳಿ ಅಷ್ಟು ಬೇಗ ಕಾವು ಕಳಕೊಂಡಿತೇಕೆ? ರಾಮಲೀಲಾ ಮೈದಾನದಲ್ಲಿ 24 ಗಂಟೆ ಟೆಂಟು ಹಾಕಿ ಕುಳಿತುಕೊಂಡಿದ್ದ ಮಾಧ್ಯಮಗಳು ಕವರೇಜ್‍ನ ನೆಪದಲ್ಲಿ ಚಳವಳಿಯನ್ನೇ ಕೊಂದವೇ? ಅವುಗಳೊಂದಿಗೆ ವ್ಯವಸ್ಥೆಯೂ ಕೈ ಜೋಡಿಸಿತೇ? ಅಲ್ಲದೇ, ಅಣ್ಣಾ ಚಳವಳಿಯನ್ನು ಪ್ರಸಾರ ಮಾಡುವಾಗ 2ಜಿ ಹಗರಣದಲ್ಲಿ ಹೆಸರು ಕೆಡಿಸಿಕೊಂಡಿದ್ದ ಕಂಪೆನಿಗಳ ಜಾಹೀರಾತುಗಳನ್ನು ಟಿ.ವಿ. ಚಾನೆಲ್‍ಗಳು ಬಳಸಿಕೊಳ್ಳುತ್ತಿದ್ದುದರ ಉದ್ದೇಶವೇನು? ಅಣ್ಣಾ ಹಜಾರೆಯನ್ನು ಕೆಲವರು ತಮ್ಮ ನಿಗೂಢ ಉದ್ದೇಶಕ್ಕಾಗಿ ಬಳಸಿಕೊಂಡರೇ? ಅವರಿಂದ ಸಂವಿಧಾನಕ್ಕೆ ಅನುಗುಣವಲ್ಲದ ಹೇಳಿಕೆಗಳನ್ನು ಹೊರಡಿಸಿ ಜೋಕರ್ ಆಗಿಸಿದರೇ? ‘ಬದುಕಿನಲ್ಲಿ ವೈಫಲ್ಯವನ್ನೇ ಕಾಣದ ವ್ಯಕ್ತಿ’ ಎಂದು ಕಿರಣ್ ಬೇಡಿಯಿಂದ ಹೊಗಳಿಸಿಕೊಂಡ ಅಣ್ಣಾ, ಏಳೆಂಟು ತಿಂಗಳೊಳಗೆ ಕುರುಹೂ ಇಲ್ಲದಷ್ಟೂ ಅಪರಿಚಿತರಾಗಿ ಹೋದರೇಕೆ? ಅವರು ಹುಟ್ಟು ಹಾಕಿದ, 'ಎರಡನೇ ಸ್ವಾತಂತ್ರ್ಯ ಸಂಗ್ರಾಮ' ನಿರೀಕ್ಷಿತ ಪರಿಣಾಮ ಬೀರದಿರಲು ಏನು ಕಾರಣ, ಯಾರು ಕಾರಣ, ಯಾವುದು ಕಾರಣ? ಒಂದು ಜನಪರ ಧ್ವನಿಯನ್ನು ಮಟ್ಟ ಹಾಕುವುದಕ್ಕೆ ವ್ಯವಸ್ಥೆ, ಮಾಧ್ಯಮಗಳು, ಕಾರ್ಪೋರೇಟ್ ಸಂಸ್ಥೆಗಳು ಜೊತೆಯಾಗಿ ಶ್ರಮಿಸಿದರೆ ಏನಾಗಬಹುದು ಎಂಬುದಕ್ಕೆ ಅಣ್ಣಾ ಮತ್ತು ಅವರ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಉದಾಹರಣೆಯಾಗಿ ಯಾಕೆ ಎತ್ತಿಕೊಳ್ಳಬಾರದು? ಅಂದಹಾಗೆ, ಅಣ್ಣಾ ಹಜಾರೆಯವರು ಮಾಧ್ಯಮಗಳಲ್ಲಿ ಈಗ ತಿಂಗಳಿಗೊಮ್ಮೆಯಾದರೂ ಕಾಣಿಸಿ
ಕೊಳ್ಳುತ್ತಿಲ್ಲವಲ್ಲ, ಯಾಕೆ? ಅವರನ್ನು ವ್ಯವಸ್ಥಿತವಾಗಿ ಮುಗಿಸಲಾಯಿತೇ?
  
ಅಣ್ಣಾ ಹಜಾರೆ 
ಜನವಿರೋಧಿ ಯೋಜನೆಗಳ ವಿರುದ್ಧ ಹುಟ್ಟಿಕೊಂಡ ಚಳವಳಿಗಳೆಲ್ಲ ಧ್ವನಿ ಕಳಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಇಂಥದ್ದೊಂದು ಅನುಮಾನ ಕಾಡುವುದರಲ್ಲಿ ಅಚ್ಚರಿಯೇನೂ ಇಲ್ಲ.