Wednesday, September 23, 2015

ಸಸ್ಯಾಹಾರ ಮಾತ್ರ ಸರಿ ಅನ್ನುವ ವಾದ ಎಲ್ಲಿಯವರೆಗೆ?

    “ನಿಷೇಧಿಸುವುದು ಅಭಿವೃದ್ಧಿಯ ಲಕ್ಷಣವಲ್ಲ, ಅದು ಅಸಹಾಯಕತೆ ಮತ್ತು ದಮನಕಾರಿ ಪ್ರವೃತ್ತಿಯ ಲಕ್ಷಣ. ಆಂತರಿಕ ಗೊಂದಲವನ್ನು ಸೃಷ್ಟಿಸಿ ಆ ಮೂಲಕ ಸಮಸ್ಯೆಗಳಿಂದ ಪಾರಾಗುವುದರ ಸೂಚನೆಯಿದು. ಅಡಾಲ್ಫ್ ಹಿಟ್ಲರನು ತನ್ನನ್ನು ಶುದ್ಧ ಆರ್ಯನ್ ಎಂದು ಘೋಷಿಸಿದ್ದ ಮತ್ತು ಸ್ವಸ್ತಿಕ್ ಅನ್ನು ತನ್ನ ಚಿಹ್ನೆಯಾಗಿ ಆರಿಸಿಕೊಂಡಿದ್ದ. ಆದರೆ ಮಿಲಿಯಾಂತರ ಮಂದಿಯನ್ನೂ ಕೊಂದ. ತನ್ನ ನಾಝಿ ಪಕ್ಷವನ್ನು (NSS) ಹೊರತುಪಡಿಸಿ ಉಳಿದೆಲ್ಲ ಪಕ್ಷಗಳನ್ನೂ ನಿಷೇಧಿಸಿದ. ಬಿಜೆಪಿ ಅದೇ ಹಾದಿಯಲ್ಲಿ ಚಲಿಸುತ್ತಿದೆಯೇ? ಇಲ್ಲ, ಭಾರತದಲ್ಲಿ ಇದು ಯಶಸ್ವಿಯಾಗದು. ಆಹಾರವು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಏನನ್ನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು ಎಂಬುದನ್ನು ಜನರೇ ತೀರ್ಮಾನಿಸಲಿ.." ಎಂದು ಸತ್ಯಮ್ ಎಂಬವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಪತ್ರ ಬರೆದರೆ,
    "ದೈಹಿಕ ಆರೋಗ್ಯ ಮಾತ್ರವಲ್ಲ, ಪರಿಸರದ ಆರೋಗ್ಯದ ದೃಷ್ಟಿಯಿಂದಲೂ ಮಾಂಸಾಹಾರ ಸೇವನೆಯು ಉತ್ತಮವಲ್ಲ ಎಂದು ವಿಜ್ಞಾನಿಗಳೇ ಹೇಳುತ್ತಾರೆ. ಅತ್ಯಂತ ಹೆಚ್ಚು ಮಾಂಸ ಬಳಸುವ ರಾಷ್ಟ್ರವಾದ ಅಮೇರಿಕದ ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಮತ್ತು ಅಮೇರಿಕನ್ ಕ್ಯಾನ್ಸರ್ ಸೊಸೈಟಿಗಳು ಮಾಂಸಾಹಾರದ ವಿರುದ್ಧ ಮಾತಾಡಿವೆ. ಮಾಂಸಾಹಾರವು ಕ್ಯಾನ್ಸರ್, ಜನನ ಸಂಬಂಧಿ ರೋಗಗಳು, ಹೃದಯ ಕಾಯಿಲೆ, ರಕ್ತನಾಳಗಳಲ್ಲಿ ತಡೆ, ಮೆದುಳು ಮತ್ತು ಮಾಂಸಖಂಡಗಳ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಿಂದೂ ಧರ್ಮವು ಇದನ್ನು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಕರೆದು ‘ತಾಮಸ’ ಪಟ್ಟಿಯಲ್ಲಿಟ್ಟಿದೆ. ಮಾಂಸಾಹಾರದಿಂದ ವಾತಾವರಣದ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.." ಎಂದು ಸಂಜಯ್ ಎಂಬವರು ಬರೆದರು. "ಈ ನಿಷೇಧವನ್ನು ನಾವು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಮೊದಲು ನಿಷೇಧಕ್ಕೆ ಒಳಗಾಗಬೇಕಾದದ್ದು ಧೂಮಪಾನವಲ್ಲವೇ? ಯಾಕೆ ಅದನ್ನು ಈ ವರೆಗೂ ನಿಷೇಧಿಸಿಲ್ಲ? ಸಾಮಾನ್ಯವಾಗಿ ಕೊಬ್ಬಿನಂಶವುಳ್ಳ ಯಾವುದೇ ಆಹಾರವು ರಕ್ತನಾಳಗಳ ತಡೆಗೆ (Block) ಕಾರಣವಾಗುತ್ತದೆ. ಅದಕ್ಕೆ ಮಾಂಸವೇ ಆಗಬೇಕಿಲ್ಲ. ಎಣ್ಣೆ, ಬೆಣ್ಣೆಗಳೂ ರಕ್ತನಾಳಗಳ ತಡೆಗೆ ಕಾರಣವಾಗಬಲ್ಲುದು. ಇದಕ್ಕೆ ಆಹಾರ ಕ್ರಮಗಳಲ್ಲಿ ಪಥ್ಯವನ್ನು ಅಳವಡಿಸಿಕೊಳ್ಳಬೇಕೇ ಹೊರತು ನಿಷೇಧವನ್ನಲ್ಲ. ಆಹಾರಗಳ ಮೇಲೆ ನಿಷೇಧ ವಿಧಿಸದೆಯೇ ನಾವಿದನ್ನು ಜಾರಿಗೊಳಿಸಬೇಕು.." ಎಂದು ವೈಶಾಕ್ ಎಂಬವರು ಇದಕ್ಕೆ ಪ್ರತಿಕ್ರಿಯಿಸಿದರು. ಒಂದು ರೀತಿಯಲ್ಲಿ, ಆಂಗ್ಲ ಪತ್ರಿಕೆಗಳ ಇಂಟರ್‍ನೆಟ್ ಆವೃತ್ತಿಯ ತುಂಬ ಓದುಗರ ಇಂತಹ ನೂರಾರು ಪತ್ರಗಳಿವೆ. ಜೈನರ ‘ಪರ್ಯೂಷಣ್’ ಹಬ್ಬದ ಪ್ರಯುಕ್ತ ಮಹಾರಾಷ್ಟ್ರ, ಚತ್ತೀಸ್‍ಗಢ, ಹರ್ಯಾಣ, ಮಧ್ಯಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳ ಬಿಜೆಪಿ ಸರಕಾರಗಳು ಮಾಂಸಾಹಾರದ ವಿರುದ್ಧ ವಿಧಿಸಿದ ನಿಷೇಧ ಕ್ರಮವನ್ನು ಇಲ್ಲಿ ಪ್ರಶ್ನಿಸಲಾಗಿದೆ. ಪರ-ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ. ಭಾರತದಿಂದ ವಿದೇಶಕ್ಕೆ ಗೋಮಾಂಸವನ್ನು ರಫ್ತು ಮಾಡುವ ಅತಿ ದೊಡ್ಡ ಕಸಾಯಿ ಕಂಪೆನಿಯಾದ ಅಲ್ ಕಬೀರ್‍ನ ಮಾಲಿಕರು ಜೈನರಾಗಿದ್ದಾರೆ ಎಂದು ಅಭಿಪ್ರಾಯಪಟ್ಟವರಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ ಶೇ. 0.36ರಷ್ಟಿರುವ ಜೈನರಿಗೆ ಸರಕಾರಗಳು ಇಷ್ಟರ ಮಟ್ಟಿಗೆ ಸ್ಪಂದಿಸುವುದಾದರೆ ಶೇ. 14ರಷ್ಟಿರುವ ಮುಸ್ಲಿಮರಿಗೆ ಸ್ಪಂದಿಸದೇ ಇರುವುದಕ್ಕೆ ಕಾರಣಗಳೇ ಇಲ್ಲ ಎಂದು ವಾದಿಸಿದವರಿದ್ದಾರೆ. ಮುಸ್ಲಿಮರ ಉಪವಾಸದ 30 ದಿನಗಳಲ್ಲಿ ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲಿ ಬಿಯರ್, ವೈನ್, ಡಾನ್ಸ್ ಬಾರ್‍ಗಳನ್ನು ನಿಷೇಧಿಸಬೇಕೆಂದು ಮುಸ್ಲಿಮ್ ಯುವ ಮೋರ್ಚಾದ ಅಧ್ಯಕ್ಷ ಹುದೈಫಾ ಎಲೆಕ್ಟ್ರಿಕ್‍ವಾಲಾ ಎಂಬವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದನ್ನು ಬೆಂಬಲಿಸಿದವರಿದ್ದಾರೆ. 2014ರ ಚುನಾವಣಾ ಅಭಿಯಾನದ ವೇಳೆ ನರೇಂದ್ರ ಮೋದಿಯು ಘೋಷಿಸಿದ Minimum Government Maximum Governance (ಕನಿಷ್ಠ ಸರಕಾರ ಗರಿಷ್ಠ ಆಡಳಿತ) ಎಂಬ ಸ್ಲೋಗನ್ ಇವತ್ತು Maximum Government Minimum sence  (ಗರಿಷ್ಠ ಸರಕಾರ ಕನಿಷ್ಠ ಪ್ರಜ್ಞೆ) ಆಗಿ ಬದಲಾಗಿದೆ ಎಂದು ಚುಚ್ಚಿದವರಿದ್ದಾರೆ. ನಿಷೇಧಗಳಿಗೆ ನಿಷೇಧ ವಿಧಿಸಿ ಎಂದು ಆಗ್ರಹಿಸಿದವರಿದ್ದಾರೆ. ಅಷ್ಟಕ್ಕೂ,
    ಕಾಂಗ್ರೆಸ್‍ನ ಜಾತ್ಯತೀತತೆಯನ್ನು ಸ್ಯೂಡೋ ಸೆಕ್ಯುಲರಿಸಂ (ನಕಲಿ ಜಾತ್ಯತೀತತೆ) ಎಂದು ಹಂಗಿಸಿದ್ದ ಬಿಜೆಪಿ ಇದೀಗ ಸ್ಯೂಡೋ ರಿಲೀಜಿಯಾಸಿಟಿ (ನಕಲಿ ಧಾರ್ಮಿಕತೆ)ಯನ್ನು ಪ್ರದರ್ಶಿಸುತ್ತಿರುವುದೇಕೆ? 2009 ಎಪ್ರಿಲ್ 20ರಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮನ್‍ಮೋಹನ್ ಸಿಂಗ್ ಸರಕಾರದ ಜಾತ್ಯತೀತ ಸಿದ್ಧಾಂತವನ್ನು ‘ಸ್ಯೂಡೋ ಸೆಕ್ಯುಲರಿಸಂ’ ಎಂದು ಅಂದಿನ ಪ್ರಧಾನಿ ಅಭ್ಯರ್ಥಿಯಾಗಿದ್ದ ಅಡ್ವಾಣಿಯವರು ಟೀಕಿಸಿದ್ದರು. ಬಿಜೆಪಿ ಆ ಪದವನ್ನು ಆ ಬಳಿಕ ನೂರಾರು ಬಾರಿ ಬಳಸಿದೆ. ಅಂತೋನಿ ಎಲಿಂಜಿಮಿತ್ತಮ್ ಎಂಬವರು ತಮ್ಮ ‘ಫಿಲಾಸಫಿ ಏಂಡ್ ಆ್ಯಕ್ಷನ್ ಆಫ್ ದ ಆರೆಸ್ಸೆಸ್ ಫಾರ್ ದ ಹಿಂದ್ ಸ್ವರಾಜ್’ ಎಂಬ ಕೃತಿಯಲ್ಲಿ ಈ ಪದವನ್ನು ಮೊತ್ತಮೊದಲು ಬಳಸಿದ್ದರೂ ಅದನ್ನು ಜನಪ್ರಿಯಗೊಳಿಸಿದ್ದು ಅಡ್ವಾಣಿ. Our  issue is what is genuine  Secularism and pseudo  Secularism. What  we have said is that the Congress practices pseudo Secularism .. (ಅಸಲಿ ಮತ್ತು ನಕಲಿ ಜಾತ್ಯತೀತತೆಯೇ ನಮ್ಮ ನಡುವಿನ ಚರ್ಚಾ ವಿಷಯ. ಕಾಂಗ್ರೆಸ್ ಇವತ್ತು ಏನನ್ನು ಪಾಲಿಸುತ್ತಿದೆಯೋ ಅದು ನಕಲಿ ಜಾತ್ಯತೀತತೆ ಎಂದೇ ನಾವು ಹೇಳುತ್ತೇವೆ) ಎಂದಿದ್ದ ಅಡ್ವಾಣಿಯವರು ಇವತ್ತು ಬಿಜೆಪಿ ಸರಕಾರಗಳ ಧಾರ್ಮಿಕತೆಗೆ ಏನೆನ್ನುತ್ತಾರೆ? ಇದು ನಕಲಿ ಧಾರ್ಮಿಕತನವಲ್ಲವೇ? ಆಹಾರ ಪದ್ಧತಿಯೆಂಬುದು ತೀರಾ ಸಂಕೀರ್ಣವಾದುದು. ಸಾಮಾಜಿಕ, ಆರ್ಥಿಕ, ಭೌಗೋಳಿಕ, ಸಾಂಸ್ಕ್ರಿತಿಕ ಕಾರಣಗಳನ್ನು ಅದು ಒಳಗೊಂಡಿದೆ. ಭೂಮಿಯ ಮುಕ್ಕಾಲು ಭಾಗವೂ ನೀರಿನಿಂದ ಕೂಡಿದೆ ಎಂಬುದು ಸಸ್ಯಾಹಾರವನ್ನು ಪವಿತ್ರ ಎಂದು ಪ್ರತಿಪಾದಿಸುವವರಿಗೆ ಗೊತ್ತಿಲ್ಲದ್ದೇನಲ್ಲ. ಈ ಮುಕ್ಕಾಲು ಭಾಗದಲ್ಲಿ ಅರಬ್ ರಾಷ್ಟ್ರಗಳು ಮರಳಿನಿಂದ ಸುತ್ತುವರಿದಿವೆ. ಯುರೋಪ್ ಖಂಡವನ್ನು ಹಿಮ ಆವರಿಸಿದ್ದರೆ, ಆಫ್ರಿಕಾ ಖಂಡವನ್ನು ಅರಣ್ಯವು ನುಂಗಿದೆ. ಹೀಗೆ ಮರಳು, ಹಿಮ, ಕಾಡು ಮತ್ತು ನೀರುಗಳಿಂದ ಹೊರತಾದ ಈ ತುಂಡು ಭೂಮಿಯಲ್ಲಿ ಕೃಷಿ ಯೋಗ್ಯ ಭೂಮಿ ಎಷ್ಟಿರಬಹುದು ಎಂಬುದನ್ನು ವಿವರಿಸಬೇಕಿಲ್ಲ. ಅದರ ಪ್ರಮಾಣ ತೀರಾ ತೀರಾ ಕಡಿಮೆ. ಇಷ್ಟೊಂದು ಕಡಿಮೆ ಪ್ರದೇಶದಲ್ಲಿ ಬೆಳೆಯುವ ತರಕಾರಿಗಳೋ ಹಣ್ಣು ಹಂಪಲುಗಳೋ ಅಥವಾ ಇನ್ನಿತರ ಸಸ್ಯ ಪ್ರಭೇದಗಳೋ ಭೂಮಿಯ ಸಕಲ ಮನುಷ್ಯರ ಹೊಟ್ಟೆ ತುಂಬಿಸಲು ಸಾಕಾಗಬಲ್ಲುದೇ? ಭೂಮಿಯ 600 ಕೋಟಿಗಿಂತಲೂ ಅಧಿಕ ಮಂದಿಯ ಆಹಾರದ ಬೇಡಿಕೆಯನ್ನು ಪೂರೈಸಲು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುವ ಕೃಷಿ ಭೂಮಿಗಳು ಸಮರ್ಥವೇ? ಮಾಂಸಾಹಾರವೇ ಸರಿ ಎಂದು ವಾದಿಸುವವರು ಉತ್ತರಿಸಬೇಕಾದ ಪ್ರಶ್ನೆಯಿದು. ‘ಭೂಮಿಯಲ್ಲಿರುವ ಒಟ್ಟು ಸಸ್ಯ ಪ್ರಬೇಧಗಳು 3,50,000 ಎಂದು ಹೇಳಲಾಗುತ್ತಿದ್ದು ಇವುಗಳಲ್ಲಿ ಮನುಷ್ಯರು ತಿನ್ನಲು ಯೋಗ್ಯವಾದ ಸಸ್ಯ ಪ್ರಬೇಧಗಳು 80,000 ಮಾತ್ರ. ಇವುಗಳಲ್ಲಿ 150 ಪ್ರಬೇಧಗಳನ್ನು ಮಾತ್ರ ಕೃಷಿಯ ರೂಪದಲ್ಲಿ ಬೆಳೆಯಲಾಗುತ್ತದೆ. ಈ 150 ಪ್ರಬೇಧಗಳಲ್ಲಿ 30 ಪ್ರಬೇಧಗಳು ಮಾತ್ರ 95% ಮನುಷ್ಯರಿಗೆ ಬೇಕಾದ ಕ್ಯಾಲೋರಿ ಮತ್ತು ಪ್ರೊಟೀನ್‍ಗಳನ್ನು ಉತ್ಪಾದಿಸುತ್ತದೆ’ (ಮಾಹಿತಿ: ನೀಲಾ ಕೆ.) ಎಂಬ ಅಭಿಪ್ರಾಯವಿದೆ. ಆಹಾರವನ್ನು ಪವಿತ್ರ ಮತ್ತು ಅಪವಿತ್ರತೆಯ ತಟ್ಟೆಯಲ್ಲಿಟ್ಟು ನೋಡುವವರು ಯಾಕೆ ಇಂಥ ಅಂಕಿ ಅಂಶಗಳ ಬಗ್ಗೆ ಮಾತೇ ಆಡುತ್ತಿಲ್ಲ? ಒಂದು ವೇಳೆ, ಸಸ್ಯಾಹಾರವು ಪವಿತ್ರವೇ ಆಗಿರುತ್ತಿದ್ದರೆ ಮತ್ತು ಪ್ರಾಕೃತಿಕವಾಗಿ ಅದು ಮಾತ್ರ ಸರಿ ಆಗಿರುತ್ತಿದ್ದರೆ ಭೂಮಿಯ ಸಕಲ ಮನುಷ್ಯರಿಗೂ ವಿಫುಲವಾಗಿ ಅದು ಲಭ್ಯವಾಗುವಂತಹ ವಾತಾವರಣ ಇರಬೇಕಿತ್ತಲ್ಲ? ಧರ್ಮವೊಂದು ಸಸ್ಯಾಹಾರವನ್ನು ಮಾತ್ರ ಆಹಾರ ಕ್ರಮವಾಗಿ ಆದೇಶಿಸಿರುತ್ತಿದ್ದರೆ ಆ ಸಸ್ಯಾಹಾರವು ಸ್ಥಳ, ಕಾಲ, ವಾತಾವರಣಗಳಾಚೆಗೆ ಎಲ್ಲೆಡೆಯೂ ಲಭ್ಯವಾಗಬೇಕಿತ್ತು. ಅರಬ್‍ನಲ್ಲೂ, ಆಫ್ರಿಕಾದಲ್ಲೂ, ಆಸ್ಟ್ರೇಲಿಯಾದಲ್ಲೂ, ಯುರೋಪ್ ಖಂಡಗಳಲ್ಲೂ ವಿಫುಲವಾಗಿ ಅದು ಬೆಳೆಯಬೇಕಿತ್ತು ಅಥವಾ ಸಿಗಬೇಕಿತ್ತು. ಧರ್ಮಕ್ಕೆ ನಿರ್ದಿಷ್ಟ ದೇಶ, ವಾತಾವರಣ, ಕಾಲ ಎಂಬ ಸೀಮಿತತೆಯೇನೂ ಇಲ್ಲವಲ್ಲ. ಜೈನ ಅಥವಾ ಹಿಂದೂ ಧರ್ಮೀಯನೋರ್ವ ಅರಬ್ ಖಂಡದ ಯಾವುದೋ ಒಂದು ಮೂಲೆಯಲ್ಲಿ ವಾಸಿಸಬಹುದಲ್ಲವೇ? ಅಲ್ಲೂ ಆತ/ಕೆ/ನಿಗೆ ಸಸ್ಯಾಹಾರ ವಿಫುಲವಾಗಿ ಲಭ್ಯವಾಗಬೇಕಲ್ಲವೇ? ಆದರೆ ಸಸ್ಯಾಹಾರದ ಮಟ್ಟಿಗೆ ಇಂಥದ್ದೊಂದು ವಾತಾವರಣ ಎಲ್ಲೂ ಇಲ್ಲ. ಜಗತ್ತಿನ ಹೆಚ್ಚಿನ ರಾಷ್ಟ್ರಗಳು ಮಾಂಸಾಹಾರವನ್ನೇ ನೆಚ್ಚಿಕೊಂಡಿವೆ. ಸಸ್ಯಾಹಾರ ಅಲಭ್ಯವಾಗಿರುವ ಪ್ರದೇಶಗಳು ಇವೆ.ಅನೇಕ ಕಡೆ ಸಾಮಾನ್ಯ ಮಂದಿ ಸಸ್ಯಾಹಾರವನ್ನು ಖರೀದಿಸದಷ್ಟೂ ಅದು ತುಟ್ಟಿಯಾಗಿದೆ.  ಹೀಗಿದ್ದೂ, ಮಾಂಸಾಹಾರವನ್ನು ಅಧಾರ್ಮಿಕದಂತೆ ಮತ್ತು ಸಸ್ಯಾಹಾರವನ್ನು ಧಾರ್ಮಿಕದಂತೆ ಬಿಜೆಪಿ ವಿಭಜಿಸಿದ್ದು ಯಾಕಾಗಿ? ಇದು ಯಾವ ಬಗೆಯ ಧಾರ್ಮಿಕತೆ? ಮಾಂಸಾಹಾರವನ್ನು ಅಧಾರ್ಮಿಕವಾಗಿ ಕಾಣುವುದು ಒಂದು ರೀತಿಯಲ್ಲಿ ಹಿಂದೂ ಅಥವಾ ಜೈನ ಧರ್ಮವನ್ನು ಭಾರತಕ್ಕೆ ಮಾತ್ರ ಸೀಮಿತಗೊಳಿಸಿದಂತೆ. ಅದರಾಚೆಗೆ ಬೆಳೆಯುವ ಸಾಮರ್ಥ್ಯ ಈ ಧರ್ಮಗಳಿಗೆ ಇಲ್ಲ ಎಂದು ಒಪ್ಪಿಕೊಂಡಂತೆ. ನಿಜವಾಗಿ, ಇದು ಧರ್ಮಗಳಿಗೆ ಮಾಡುವ ಅವಮಾನ. ಧರ್ಮ ಯಾವುದಾದರೊಂದು ಪ್ರದೇಶಕ್ಕೆ ಸೀಮಿತಗೊಳ್ಳಬೇಕಾದ ವಿಷಯವಲ್ಲ. ಅದು ಸ್ಥಾವರವಲ್ಲ, ಜಂಗಮ. ಸಸ್ಯಾಹಾರ ಮಾತ್ರ ಸರಿ ಎಂದು ವಾದಿಸುವುದು ಧರ್ಮದ ಈ ಜಂಗಮ ಸ್ವರೂಪವನ್ನೇ ನಿರಾಕರಿಸಿದಂತಾಗುತ್ತದೆ. ಬಹುಶಃ, ಮಾಂಸಾಹಾರ ನಿಷೇಧದ ವಿರುದ್ಧ ಬಿಜೆಪಿ ಬೆಂಬಲಿಗರಿಂದಲೇ ವಿರೋಧ ವ್ಯಕ್ತವಾಗಿರುವುದರ ಹಿಂದೆ ಈ ಸತ್ಯದ ಅರಿವೂ ಕಾರಣವಾಗಿರಬಹುದು. ಹಿಂದೂ ಧರ್ಮವನ್ನು ಜೀವನ ವ್ಯವಸ್ಥೆ ಎಂದು ಈ ಹಿಂದೆ ಸುಪ್ರೀಮ್ ಕೋರ್ಟು ವ್ಯಾಖ್ಯಾನಿಸಿತ್ತು. ಆ ವ್ಯಾಖ್ಯಾನವನ್ನು ಇದೇ ಬಿಜೆಪಿ ಮತ್ತು ಸಂಘಪರಿವಾರಗಳು ದೇಶದಾದ್ಯಂತ ಆಗಾಗ ಹೇಳಿಕೊಳ್ಳುತ್ತಿವೆ. ಜೀವನ ವ್ಯವಸ್ಥೆಯೊಂದು ಅರಬ್‍ನಾಡಿನಲ್ಲಿದ್ದರೂ ಯುರೋಪ್ ಖಂಡದಲ್ಲಿದ್ದರೂ ಆಫ್ರಿಕಾದ ಇನ್ನಾವುದೋ ನಾಡಿನಲ್ಲಿದ್ದರೂ ಪಾಲನೆಗೆ ಯೋಗ್ಯ ಇರಬೇಕಲ್ಲವೇ? ಬರೇ ಸಸ್ಯಾಹಾರವನ್ನೇ ನೆಚ್ಚಿಕೊಂಡು ಈ ಎಲ್ಲ ರಾಷ್ಟ್ರಗಳಲ್ಲಿ ಹಿಂದೂ ಧರ್ಮದಂತೆ ಬದುಕಲು ಸಾಧ್ಯವೇ? ‘ಜೀವನ ವ್ಯವಸ್ಥೆ’ ಎಂಬ ಪದಕ್ಕೆ ‘ಸಕಲ ವಾತಾವರಣ, ಭೂಪ್ರದೇಶಗಳಲ್ಲೂ ಪಾಲಿಸಲು ಯೋಗ್ಯವಾದುದು’ ಎಂಬ ಅರ್ಥ ಇದೆಯೆಂದಾದರೆ ಆ ವಿಶಾಲಾರ್ಥವನ್ನು ಸಂಕುಚಿತಗೊಳಿಸುತ್ತಿರುವುದು ಯಾರು? ಅವರ ಉದ್ದೇಶವೇನು? ಭಾರತದ ಭೂಪ್ರದೇಶದಿಂದ ಹೊರಗೆ ಅಸ್ತಿತ್ವದಲ್ಲಿರಲು ಅಪರ್ಯಾಪ್ತ ಎಂದು ಪರೋಕ್ಷವಾಗಿ ಅವರು ಹಿಂದೂ ಧರ್ಮವನ್ನು ವ್ಯಾಖ್ಯಾನಿಸುತ್ತಿರುವುದು ಏಕೆ? ಮಾಂಸಾಹಾರವನ್ನು ಅಪವಿತ್ರ ಎಂದು ವ್ಯಾಖ್ಯಾನಿಸುವವರು ಒಂದು ರೀತಿಯಲ್ಲಿ ಹಿಂದೂ ಧರ್ಮದ ಯೋಗ್ಯತೆಯನ್ನೇ ಪ್ರಶ್ನಿಸುತ್ತಿದ್ದಾರೆ. ಭಾರತ ಉಪ ಭೂಖಂಡದ ಹೊರಗೆ ಹಿಂದೂ ಧರ್ಮದ ಪಾಲನೆ ಹೇಗೆ ಎಂಬ ಬಹುಮುಖ್ಯ ಪ್ರಶ್ನೆಯನ್ನು ಅವರು ಅಡಗಿಸುತ್ತಿದ್ದಾರೆ. ಹಿಂದೂ ಧರ್ಮವಾಗಲಿ, ಜೈನ ಧರ್ಮವಾಗಲಿ ಅವು ಯಾವುದಾದರೊಂದು ದೇಶಕ್ಕೆ ಸೀಮಿತಗೊಳ್ಳಬೇಕಾದ ಧರ್ಮಗಳು ಅಲ್ಲವೇ ಅಲ್ಲ. ಜಗತ್ತಿನಾದ್ಯಂತ ಹಬ್ಬುವುದಕ್ಕೆ ಮತ್ತು ಪಾಲನೆಗೆ ಅವುಗಳಿಗೆ ಸ್ವಾತಂತ್ರ್ಯ ಇದೆ. ಇದು ಸಾಧ್ಯವಾಗಬೇಕಾದರೆ ಆಹಾರದ ಕುರಿತಂತೆ ಇರುವ ‘ಸುಳ್ಳು'ಗಳಿಗೆ ನಿಷೇಧ ಬೀಳಬೇಕಾಗುತ್ತದೆ. ಸದ್ಯ ಭಾರತದಲ್ಲಿ ಬಿಜೆಪಿಯು ಈ ಸುಳ್ಳುಗಳ ನೇತೃತ್ವವನ್ನು ವಹಿಸಿಕೊಂಡಿದೆ. ಜೈನರ ಪರ್ಯೂಷಣ್‍ನ ನೆಪದಲ್ಲಿ ಸುಳ್ಳನ್ನು ವಿಜೃಂಭಿಸುವುದಕ್ಕೆ ಅದು ದಾರಿಯನ್ನು ಕಂಡುಕೊಂಡಿದೆ. ನಿಜವಾಗಿ, ಆಹಾರದಲ್ಲಿ ಪವಿತ್ರ ಅಥವಾ ಅಪವಿತ್ರ ಎಂದಿರುವುದಕ್ಕೆ ಸಾಧ್ಯವೇ ಇಲ್ಲ. ಮಾಂಸಾಹಾರವಾಗಲಿ ಸಸ್ಯಾಹಾರವಾಗಲಿ ಕೇವಲ ಆಹಾರ ಕ್ರಮಗಳು ಮಾತ್ರ. ಅದಕ್ಕೆ ಭಾವನಾತ್ಮಕತೆ ಯನ್ನೋ ಪವಿತ್ರತೆಯನ್ನೋ ಒದಗಿಸಿದ್ದು ಈ ದೇಶದ ರಾಜಕೀಯ. ತಮ್ಮ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಡುವುದಕ್ಕೆ ಅಥವಾ ರಾಜಕೀಯವಾಗಿ ಬೆಳೆಯುವುದಕ್ಕೆ ಇಂಥ ಇಶ್ಯೂಗಳನ್ನು ರಾಜಕೀಯ ದುರುಪಯೋಗಿಸುತ್ತಲೇ ಬಂದಿದೆ. ಕೆಲವು ನಿಷೇಧಗಳು, ಕೆಲವು ನಿಯಂತ್ರಣಗಳು ಮತ್ತು ಕೆಲವು ವಿವಾದಾತ್ಮಕ ಹೇಳಿಕೆಗಳೇ ಸಾಧನೆಯಾಗಿರುವ ನರೇಂದ್ರ ಮೋದಿ ಸರಕಾರದ ಮಟ್ಟಿಗೆ ಜೈನರ ಪರ್ಯೂಷಣ್ ಒಂದು ಇಶ್ಯೂ ಆಗಬೇಕಾದ ಅಗತ್ಯ ಖಂಡಿತ ಇದೆ. ಆದರೆ ಜೈನ ಧರ್ಮೀಯರಿಗೆ ಅದರ ಅಗತ್ಯವಿದೆಯೇ? ಹಿಂದೂ ಧರ್ಮೀಯರು ಅದನ್ನು ಬಯಸುತ್ತಿದ್ದಾರೆಯೇ? ಅಂದಹಾಗೆ,
     ಕಾಂಗ್ರೆಸ್‍ನ ಜಾತ್ಯತೀತತೆಯನ್ನು ಸ್ಯೂಡೋ ಸೆಕ್ಯುಲರಿಸಂ ಎಂದಿದ್ದ ಅಡ್ವಾಣಿಯವರು ಈಗೇನೆನ್ನುತ್ತಾರೋ?

Thursday, September 3, 2015

ಹರೆಯದ ಆಕರ್ಷಣೆಗೆ ಕುಸಿದುಹೋಗುವಷ್ಟು ದುರ್ಬಲವೇ ಹಿಂದೂ ಸಂಸ್ಕ್ರಿತಿ?

ಮಂಗಳೂರಿನಲ್ಲಿ  ಕಳೆದವಾರ ನಡೆದ ಅನೈತಿಕ ಗೂಂಡಾಗಿರಿ
  ಇದನ್ನು ಸಂಸ್ಕ್ರಿತಿಯ ರಕ್ಷಣೆ ಎನ್ನಬೇಕೋ ಅಥವಾ ಸಾಂಸ್ಕ್ರಿತಿಕ ಕಾಪಟ್ಯತನ ಎನ್ನಬೇಕೋ?
  1996ರಲ್ಲಿ ‘ವಿಚಾರ್ ವಿೂಮಾಂಸ' ಎಂಬ ಹಿಂದಿ ಪತ್ರಿಕೆಯು ಖ್ಯಾತ ಚಿತ್ರಕಾರ ಎಂ.ಎಫ್. ಹುಸೇನ್‍ರ ಕುರಿತಂತೆ, ‘ಈತ ಚಿತ್ರಕಾರನೋ ಅಥವಾ ಕಸಾಯಿಯೋ’ ಎಂಬ ಅರ್ಥ ಬರುವ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿತು. 1975ರಲ್ಲಿ ಹುಸೇನ್‍ರು ರಚಿಸಿದ್ದ ಚಿತ್ರಗಳು ಆ ಲೇಖನದಲ್ಲಿದ್ದುವು. ಎಲ್ಲವೂ ಹಿಂದೂ ದೇವತೆಗಳನ್ನು ನಗ್ನವಾಗಿ ತೋರಿಸುವ ಚಿತ್ರಗಳೇ. ಈ ಲೇಖನದ ಬಳಿಕ ಅವರ ಚಿತ್ರಗಳ (ಪೇಂಟಿಂಗ್) ಮೇಲೆ ದಾಳಿ ನಡೆಯಿತು. ಅವರಿಗೆ ‘ಹಿಂದೂ ವಿರೋಧಿ' ಎಂಬ ಹಣೆಪಟ್ಟಿಯನ್ನು ಕಟ್ಟಲಾಯಿತು. ದೇಶದ ಸುಮಾರು 8 ಕಡೆಗಳಲ್ಲಿ ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ತಲೆ ಮರೆಸಿಕೊಂಡು ಓಡಾಡಬೇಕಾದ ಸ್ಥಿತಿಗೆ ತಲುಪಿದ ಹುಸೇನ್, ಕೊನೆಗೆ ಸ್ವ ಇಚ್ಛೆಯಿಂದ ದೇಶಾಂತರ ಹೊರಟು ಹೋದರು. 2005 ಮಾರ್ಚ್ 13ರಂದು ಉಡುಪಿ ಜಿಲ್ಲೆಯ ಆದಿ ಉಡುಪಿ ಎಂಬಲ್ಲಿ ಜಾನುವಾರು ವ್ಯಾಪಾರಿಗಳಾದ ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗ ಇಬ್ಬರನ್ನು ಬೆತ್ತಲೆಗೊಳಿಸಿ, ಮೈದಾನದಲ್ಲಿ ಪೆರೇಡ್ ನಡೆಸಲಾಯಿತು. ಬಹುಶಃ, ಕರಾವಳಿ ಭಾಗದಲ್ಲಿ ಗೋವನ್ನು ‘ಪವಿತ್ರ' ಮತ್ತು ಭಾವುಕ ಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಇಲ್ಲಿಂದಲೇ ಎಂದು ಹೇಳಬಹುದು. ಕರಾವಳಿ ಜಿಲ್ಲೆಗಳಲ್ಲಿ ಗೋವಿನ ಹೆಸರಲ್ಲಿ ಹಲ್ಲೆ, ದರೋಡೆ, ಹತ್ಯೆಗಳೆಲ್ಲ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡದ್ದು ಈ ಘಟನೆಯ ಬಳಿಕವೇ. ಹಾಗಂತ, ಅವರಿಬ್ಬರು ಗೋ ಕಳ್ಳ ಸಾಗಾಟಗಾರರೇನೂ ಆಗಿರಲಿಲ್ಲ. ಪರಂಪರಾಗತ ವ್ಯಾಪಾರವನ್ನಷ್ಟೇ ಅವರು ನಡೆಸಿಕೊಂಡು ಬರುತ್ತಿದ್ದರು. ಒಂದು ವೇಳೆ, ಇವರು ನಡೆಸಿದ ವ್ಯಾಪಾರದಲ್ಲಿ ಎಷ್ಟು ಗೋವುಗಳು ಕಸಾಯಿಖಾನೆಗೆ ಹೋಗಿವೆ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದರೆ ಬೆತ್ತಲೆಕೋರರನ್ನೇ ಬೆತ್ತಲೆ ಮಾಡಬೇಕಾದಂತಹ ಸತ್ಯಗಳು ಹೊರಬೀಳುತ್ತಿದ್ದುವು. ಆದರೆ, ಬೆತ್ತಲೆಕೋರರನ್ನು ಪುಣ್ಯಕೋಟಿಗಳಾಗಿಯೂ ಇವರಿಬ್ಬರನ್ನು ಹೆಬ್ಬುಲಿಗಳಂತೆಯೂ ಪ್ರಚಾರ ಮಾಡಲಾಯಿತು. ಹೀಗೆ ಗೋರಕ್ಷಣಾ ಚಳವಳಿಗೆ ಅಭೂತಪೂರ್ವ ಆರಂಭವನ್ನು ಒದಗಿಸಲಾಯಿತು. 2009 ಜನವರಿ 24ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಅಮ್ನೇಶಿಯಾ ಎಂಬ ಹೆಸರಿನ ಪಬ್‍ನ ಮೇಲೆ ದಾಳಿ ನಡೆಯಿತು. ಸಂಘಪರಿವಾರದ ಕಾರ್ಯಕರ್ತರು ಇದರ ನೇತೃತ್ವ ವಹಿಸಿದ್ದರು. ಈ ದಾಳಿಯಲ್ಲಿ ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಹಿಗ್ಗಾ-ಮುಗ್ಗಾ ಥಳಿಸಲಾಯಿತು. ಮಾತ್ರವಲ್ಲ, ಆ ಥಳಿತವನ್ನು ನೈತಿಕತೆಯ ಹೆಸರಲ್ಲಿ ಸಾರ್ವಜನಿಕವಾಗಿಯೇ ಸಮರ್ಥಿಸುವಂಥ ಪ್ರಯತ್ನಗಳು ನಡೆದುವು. ಈ ದಾಳಿಯ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಅವರನ್ನು ಆರತಿ ಎತ್ತಿ ಸ್ವಾಗತಿಸುವಂತಹ ಪ್ರಕ್ರಿಯೆಗಳು ಕಾಣಿಸಿದುವು. ಒಂದು ರೀತಿಯಲ್ಲಿ, ಪುಣ್ಯ ಕೋಟಿಯಿಂದ ಸಮಾಜದ ಗಮನವನ್ನು ಹೆಣ್ಣು-ಗಂಡಿನ ಮೇಲೆ ತಿರುಗುವಂತೆ ಮಾಡಿದ ಅಥವಾ ಯೋಜನಾಬದ್ಧವಾಗಿ ಹಾಗೆ ಮಾಡಲಾದ ಘಟನೆ ಇದು. ಲವ್ ಜಿಹಾದ್ ಭಾರೀ ಸದ್ದು ಮಾಡತೊಡಗಿದ್ದು ಈ ಘಟನೆಯ ಬಳಿಕವೇ. ಹಾಜಬ್ಬ-ಹಸನಬ್ಬರನ್ನು ಬೆತ್ತಲೆಗೊಳಿಸುವ ಮೂಲಕ ಗೋವನ್ನು ಪವಿತ್ರಗೊಳಿಸುವಲ್ಲಿ ಯಶಸ್ವಿಯಾದ ಸಂಘಪರಿವಾರವು ಪಬ್ ದಾಳಿ ಮೂಲಕ ‘ಹಿಂದೂ ಸಂಸ್ಕ್ರಿತಿಯ’ ಚರ್ಚೆಯನ್ನು ಹುಟ್ಟು ಹಾಕಿತು. ಹಿಂದೂ ಯುವತಿ, ಮುಸ್ಲಿಮ್ ಯುವಕನೊಂದಿಗೆ ಮಾತಾಡುವುದು ಅಥವಾ ಸ್ನೇಹಿತೆಯಾಗುವುದು ಸಂಸ್ಕøತಿ ವಿರೋಧಿ ಎಂದು ದೊಡ್ಡ ದನಿಯಲ್ಲೇ ಪ್ರಚಾರ ಮಾಡಲಾಯಿತು. ಅಂಥವರಿಗೆ ಥಳಿಸುವುದನ್ನು ಸಂಸ್ಕ್ರಿತಿಯ ರಕ್ಷಣೆ ಎಂದು ಸಮರ್ಥಿಸಿಕೊಳ್ಳಲಾಯಿತು. ಪ್ರತಿ ಥಳಿತಕ್ಕೂ ಭಾವುಕ ಕತೆಯೊಂದನ್ನು ಹೆಣೆಯುವುದು ಮತ್ತು ಅದರ ಆಧಾರದಲ್ಲಿ ಸಮಾಜವೇ ಥಳಿತವನ್ನು ಸಮರ್ಥಿಸುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುವುದು ಆ ಬಳಿಕ ನಡೆಯತೊಡಗಿತು. 2012 ಜುಲೈ 28ರಂದು ಮಂಗಳೂರಿನಲ್ಲಿ ನಡೆದ ಹೋಮ್‍ಸ್ಟೇ ದಾಳಿಯು ರಾಷ್ಟ್ರೀಯವಾಗಿಯಷ್ಟೇ ಅಲ್ಲ, ಅಂತಾರಾಷ್ಟ್ರೀಯವಾಗಿಯೂ ಸುದ್ದಿಗೀಡಾಯಿತು. 7 ಮಂದಿ ಯುವಕರು ಮತ್ತು 5 ಮಂದಿ ಯುವತಿಯರು ಸೇರಿ ಬರ್ತ್‍ಡೇ ಪಾರ್ಟಿ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಘಪರಿವಾರದ ಮಂದಿ ದಾಳಿ ನಡೆಸಿದ್ದರು. ಬಳಿಕ ಬಂಧಿತ ದಾಳಿಕೋರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಇಡೀ ಘಟನೆಗೆ ಸುಳ್ಳು ಕತೆಯೊಂದನ್ನು ಹೆಣೆದರು. ಅದನ್ನು ಗಾಂಜಾ ಪಾರ್ಟಿ, ಅನೈತಿಕತೆಯ ಪಾರ್ಟಿ ಎಂದೆಲ್ಲಾ ಕರೆದು ಸಮಾಜದ ಅನುಕಂಪವನ್ನು ಪಡೆಯಲು ಯತ್ನಿಸಿದರು. ಇದೀಗ ಮಂಗಳೂರಿನಲ್ಲಿ ಮತ್ತೋರ್ವ ಯುವಕ ಬೆತ್ತಲಾಗಿದ್ದಾನೆ. ಈ ಬೆತ್ತಲೆಗೂ ಸುಳ್ಳು ಚಿತ್ರಕತೆಯೊಂದನ್ನು ರಚಿಸಲಾಗಿದೆ. ಅದನ್ನು  ಯುವತಿಯ ಬಾಯಲ್ಲಿ ಬಲವಂತದಿಂದ ಹೇಳಿಸಲಾಗಿದೆ. ಅಷ್ಟಕ್ಕೂ,
  ಸಂಸ್ಕ್ರಿತಿ ಅಂದರೇನು? ಹಿಂದು ಹೆಣ್ಣು ಮಗಳೊಬ್ಬಳು ಮುಸ್ಲಿಮ್ ಯುವಕನೊಂದಿಗೆ ಮಾತಾಡಿದ ಅಥವಾ ಗೆಳೆತನದಲ್ಲಿ ಏರ್ಪಟ್ಟ ಮಾತ್ರಕ್ಕೇ ಹರಿದುಹೋಗುವಷ್ಟು ತೆಳುವಾದುದೇ ಈ ಸಂಸ್ಕ್ರಿತಿ? ಹಿಂದೂ ಧರ್ಮಕ್ಕೆ ಪುರಾತನ ಇತಿಹಾಸವಿದೆಯೆಂದು ಈ ದಾಳಿಕೋರರೇ ಹೇಳುತ್ತಾರೆ. ಸಿಂಧೂ ನದಿಯ ನಾಗರಿಕತೆಯೊಂದಿಗೆ ಹಿಂದೂ ಧರ್ಮವನ್ನು ತಳಕು ಹಾಕುತ್ತಾ ನೋಡುವ ಪರಿಪಾಠ ಈ ದೇಶದಲ್ಲಿದೆ. ಯೋಗ ಈ ದೇಶದ್ದೇ ಕೊಡುಗೆ, ಆಯುರ್ವೇದ ಇಲ್ಲಿಯೇ ಹುಟ್ಟು ಪಡೆದಿದೆ ಎಂದೂ ಹೇಳಲಾಗುತ್ತದೆ. ಇವತ್ತಿನ ಪ್ರನಾಳ ಶಿಶು ಸಂಶೋಧನೆಯು ಹಿಂದೂ ಇತಿಹಾಸದಲ್ಲಿ ಎಂದೋ ಪ್ರಾಯೋಗಿಕವಾಗಿ ಸಾಬೀತುಗೊಂಡಿದೆ ಎಂದು ಸಂಘ ಪರಿವಾರವು ಹೆಮ್ಮೆ ಪಡುತ್ತದೆ. ಒಂದು ರೀತಿಯಲ್ಲಿ, ಹಿಂದೂ ಇತಿಹಾಸದ ಬಗ್ಗೆ ಈ ಮಂದಿ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ನೋಡಿದರೆ ಗೆಳೆತನ, ಪ್ರೇಮ ಪ್ರಕರಣ ಅಥವಾ ಮಾತುಕತೆಗಳಿಂದ ಕಳೆದು ಹೋಗಬಹುದಾದಷ್ಟು ಜುಜುಬಿ ಸಂಸ್ಕ್ರಿತಿ ಹಿಂದೂ ಧರ್ಮದ್ದಲ್ಲ ಎಂದು ಯಾರೇ ಆಗಲಿ ಹೇಳಿಯಾರು. ಇಷ್ಟಿದ್ದೂ, ಸಂಸ್ಕ್ರಿತಿಯ ಹೆಸರಲ್ಲಿ ಸಂಘಪರಿವಾರ ದಾಳಿ ಮಾಡುತ್ತಿರುವುದನ್ನು ಏನೆಂದು ಪರಿಗಣಿಸಬೇಕು? ಸುಮಾರು 80%ದಷ್ಟು ಹಿಂದೂಗಳೇ ಇರುವ ದೇಶವೊಂದರಲ್ಲಿ ಹಿಂದೂ ಯುವತಿ ಮುಸ್ಲಿಮ್ ಯುವಕನೊಂದಿಗೆ ಗೆಳೆತನ ಬೆಳೆಸಿದರೆ ಸಂಸ್ಕ್ರಿತಿಯ ಬಗ್ಗೆ ಭಯ ಪಡಬೇಕಾದದ್ದು ಯಾರು? ಅಸ್ತಿತ್ವದ ಭಯ ಎದುರಾಗಬೇಕಾದದ್ದು ಯಾರಿಗೆ? 14% ಜನಸಂಖ್ಯೆಯಿರುವ ಮತ್ತು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ಸಮುದಾಯಕ್ಕಲ್ಲದೇ, ರಾಜಕೀಯವಾಗಿಯೂ ಆರ್ಥಿಕವಾಗಿಯೂ ಶೈಕ್ಷಣಿಕವಾಗಿಯೂ ಬಲಾಢ್ಯವಾಗಿರುವ ಸಮುದಾಯಕ್ಕೆ ಭಯ ಎದುರಾಗುತ್ತದೆಯೇ? ಈ ದೇಶವನ್ನು ಇವತ್ತು ಆಳುತ್ತಿರುವುದೇ ಸಂಘಪರಿವಾರ ಬೆಂಬಲಿತ ಬಿಜೆಪಿ ಪಕ್ಷ. ಒಂದು ವೇಳೆ ಬಿಜೆಪಿಯ ಹೊರತಾದ ಕಾಂಗ್ರೆಸ್, ಜೆಡಿಎಸ್, ಶಿವಸೇನೆ, ತೃಣ ಮೂಲಗಳು ಅಧಿಕಾರಕ್ಕೆ ಬಂದರೂ ಅವೇನೂ ಮುಸ್ಲಿಮರೇ ಪ್ರಾಬಲ್ಯ ಪಡೆದಿರುವ ಪಕ್ಷಗಳಲ್ಲವಲ್ಲ. ಪ್ರಾಬಲ್ಯ ಬಿಡಿ, ಕನಿಷ್ಠ, ಸಚಿವ ಸಂಪುಟದಲ್ಲಿ ಒಂದೆರಡು ಸ್ಥಾನಗಳನ್ನು ಪಡೆದುಕೊಳ್ಳುವುದಕ್ಕೂ ತಿಣಕಾಡಬೇಕಾದಷ್ಟು ಜುಜುಬಿ ಪ್ರಭಾವವಷ್ಟೇ ಮುಸ್ಲಿಮರದ್ದಾಗಿದೆ. ಈ ಪಕ್ಷಗಳಲ್ಲಿ ಇರುವವರಲ್ಲಿ ಹೆಚ್ಚಿನವರು ಹಿಂದೂ ಧರ್ಮವನ್ನು ಪಾಲಿಸುವ ಮತ್ತು ಅದರ ಸಂಸ್ಕ್ರಿತಿಯ ಮೇಲೆ ಅಭಿಮಾನ ಪಡುವ ಹಿಂದೂಗಳೇ. ಹೀಗಿದ್ದೂ ಮುಸ್ಲಿಮರಿಂದ ಹಿಂದೂ ಸಂಸ್ಕ್ರಿತಿಗೆ ಅಪಾಯವಿದೆಯೆಂದು ಪ್ರಚಾರ ಮಾಡುವುದು ಎಷ್ಟು ನಿಜ? ವ್ಯವಸ್ಥೆಯ ಯಾವುದೇ ಕ್ಷೇತ್ರದಲ್ಲಿ ಭೂತಗನ್ನಡಿ ಹಿಡಿದರೂ ಕಾಣಿಸದ ಮಂದಿಯಿಂದ ವ್ಯವಸ್ಥೆಯ ಎಲ್ಲ ಕ್ಷೇತ್ರಗಳಲ್ಲೂ ತುಂಬಿ ತುಳುಕುತ್ತಿರುವ ಮಂದಿಗೆ ಅಪಾಯ ಎದುರಾಗುವುದೆಂದರೇನು? ಹಾಗೆ ವಾದಿಸುವುದಕ್ಕೆ ಇರುವ ಆಧಾರಗಳೇನು? ಹರೆಯದ ಯುವಕ-ಯುವತಿಯರ ನಡುವೆ ಉಂಟಾಗಬಹುದಾದ ಪ್ರಾಯ ಸಹಜ ಪ್ರೇಮಕ್ಕೋ ಗೆಳೆತನಕ್ಕೋ ಈ ಸಂಸ್ಕ್ರಿತಿಯನ್ನೇ ಅಳಿಸಿಬಿಡಬಹುದಾದಷ್ಟು ಸಾಮರ್ಥ್ಯ ಇದೆಯೇ? ಹೀಗೆ ಪ್ರೇಮ ಪ್ರಕರಣಗಳು ಒಂದು ಸಂಸ್ಕ್ರಿತಿಯನ್ನೇ ನಾಶ ಮಾಡಿದ ಉದಾಹರಣೆಗಳು ಎಲ್ಲಿವೆ? ಯಾವ ಸಂಸ್ಕ್ರಿತಿಯು ಹೀಗೆ ಹರೆಯದ ಯುವಕ-ಯುವತಿಯರ ಪ್ರಾಯ ಸಹಜ ಆಕರ್ಷಣೆಯಿಂದ ನಾಶವಾಗಿದೆ? ಸಂಸ್ಕ್ರಿತಿ ನಾಶದ ಬಗ್ಗೆ ಭಯ ಬಿತ್ತುವವರು ಯಾಕೆ ಈ ಬಗ್ಗೆ ಯಾವ ಅಂಕಿ ಅಂಶಗಳನ್ನೂ ನೀಡುತ್ತಿಲ್ಲ? ನಿಜವಾಗಿ, ಇಲ್ಲಿ ಅಸ್ತಿತ್ವದ ಮತ್ತು ಸಂಸ್ಕ್ರಿತಿ ನಾಶದ ಭಯ ಎದುರಾಗಬೇಕಾದದ್ದು ಜುಜುಬಿ 14%ದಷ್ಟಿರುವ ಮುಸ್ಲಿಮರಿಗೆ.  ಅವರ ಭಾಷೆ, ಅವರ ಉಡುಪು, ಅವರ ಆಹಾರ, ಅವರ ಮನೆ, ಮದುವೆ, ಶೈಕ್ಷಣಿಕ ಆಲೋಚನೆಗಳು, ಕೌಟುಂಬಿಕ ರೀತಿ-ನೀತಿಗಳು, ಹಣಕಾಸು ವಹಿವಾಟುಗಳು.. ಎಲ್ಲವೂ ಇವತ್ತು ಭಾರತೀಯ ಸಂಸ್ಕ್ರಿತಿಯಿಂದ ಧಾರಾಳ ಪ್ರಭಾವಿತವಾಗಿವೆ. ತಲಾಕ್, ಬಹುಪತ್ನಿತ್ವ, ಮಹಿಳೆಯ ಆಸ್ತಿಯ ಹಕ್ಕು, ಜಿಹಾದ್, ವಧುದಕ್ಷಿಣೆ, ಬಡ್ಡಿರಹಿತ ಹಣಕಾಸು ವ್ಯವಹಾರ.. ಮುಂತಾದುವುಗಳನ್ನು ನಿಜವಾದ ಅರ್ಥದಲ್ಲಿ ಪ್ರತಿನಿಧಿಸಲು ಅವರು ಇನ್ನೂ ಶಕ್ತರಾಗಿಲ್ಲ. ಇವುಗಳ ಬಗ್ಗೆ ಅರ್ಥಕ್ಕಿಂತ ಹೆಚ್ಚು ಅಪಾರ್ಥವೇ ಸಮಾಜದಲ್ಲಿ ತುಂಬಿಕೊಂಡಿದೆ. ಇಸ್ಲಾಮನ್ನು ಪ್ರತಿನಿಧಿಸುವುದಕ್ಕಿಂತ ಭಾರತೀಯ ಸಂಸ್ಕ್ರಿತಿಯನ್ನು ಪ್ರತಿನಿಧಿಸುವ ಮುಸ್ಲಿಮರೇ ಈ ದೇಶದಲ್ಲಿ ಹೆಚ್ಚಿದ್ದಾರೆ. ಇಷ್ಟಿದ್ದೂ, ಸಂಘಪರಿವಾರವು ಹಿಂದೂ ಸಂಸ್ಕ್ರಿತಿಗೆ ಮುಸ್ಲಿಮರಿಂದ ಅಪಾಯವಿದೆಯೆಂದು ಪ್ರಚಾರ ಮಾಡುತ್ತಿರುವುದೇಕೆ? ಸ್ವತಃ ತನ್ನ ಸಂಸ್ಕ್ರಿತಿಯನ್ನೇ ಸರಿಯಾಗಿ ಪಾಲಿಸದ ಸಮುದಾಯವೊಂದು ಇತರ ಸಂಸ್ಕ್ರಿತಿಗೆ ಅಪಾಯಕಾರಿಯಾಗುವುದು ಹೇಗೆ, ಯಾವ ಅರ್ಥದಲ್ಲಿ?
  ಹಾಗಂತ, ಸಂಘಪರಿವಾರ ಇವತ್ತು ಧರ್ಮರಕ್ಷಣೆಯ ಹೆಸರಲ್ಲಿ ಏನೆಲ್ಲ ಕ್ರೌರ್ಯಗಳನ್ನು ಎಸಗುತ್ತಿವೆಯೋ ಅವಕ್ಕೂ ಹಿಂದೂ ಧರ್ಮಕ್ಕೂ ಬಹುತೇಕ ಯಾವ ಸಂಬಂಧವೂ ಇಲ್ಲ. ಹಿಂದೂ ಧರ್ಮ ಅಸ್ತಿತ್ವದ ಭಯವನ್ನು ಎದುರಿಸುತ್ತಲೂ ಇಲ್ಲ, ಅದರ ಸಂಸ್ಕ್ರಿತಿ ಅಪಾಯದ ಅಂಚಿನಲ್ಲೂ ಇಲ್ಲ. ಇದು ಬೆತ್ತಲೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಒಂದೊಮ್ಮೆ ಗೊತ್ತಿಲ್ಲದಿದ್ದರೂ ಆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವವರಿಗೆ ಖಂಡಿತ ಗೊತ್ತು. ಈ ದೇಶದಲ್ಲಿ ಎಲ್ಲೆಲ್ಲ ಕೋಮು ಗಲಭೆಯಾಗಿದೆಯೋ ಅಲ್ಲೆಲ್ಲಾ ರಾಜಕೀಯವಾಗಿ ಬಿಜೆಪಿಗೆ ಲಾಭವಾಗಿದೆ. ಪ್ರತಿ ಬೆತ್ತಲೆಯಿಂದಲೂ ಬಿಜೆಪಿಯ ಕೆಲವು ಸಾವಿರ ಓಟುಗಳು ವೃದ್ಧಿಯಾಗುತ್ತವೆ. ‘ಗೋಸಾಗಾಟದ' ಮೇಲಿನ ಹಲ್ಲೆಗೂ ಈ ಓಟು ವೃದ್ಧಿಸುವ ಸಾಮರ್ಥ್ಯವಿದೆ. ಇದರರ್ಥ, ಸಾಮಾನ್ಯ ಜನರು ಕ್ರೌರ್ಯವನ್ನು ಬೆಂಬಲಿಸುತ್ತಾರೆ ಎಂದಲ್ಲ. ಪ್ರತಿ ‘ಬೆತ್ತಲೆ' ನಡೆದಾಗಲೂ ಆ ಬೆತ್ತಲೆಯನ್ನು ಅನಿ ವಾರ್ಯವೆಂದೂ ಅದುವೇ ಸೂಕ್ತವಾದ ಶಿಕ್ಷೆಯೆಂದೂ ನಂಬಿಸುವಂಥ ಸುಳ್ಳು ಕತೆಯನ್ನು ಬೆತ್ತಲೆಕೋರರು ತೇಲಿಸಿ ಬಿಡುತ್ತಾರೆ. ಹಿಂದೂ ಸಂಸ್ಕ್ರಿತಿ, ಜನಸಂಖ್ಯೆ, ಗೋ ಸಂತತಿಗಳು ತೀವ್ರ ಮಟ್ಟದಲ್ಲಿ ಕುಸಿಯುತ್ತಿರುವ ಬಗ್ಗೆ ಭಾವನಾತ್ಮಕ ಸನ್ನಿವೇಶವನ್ನು ನಿರ್ಮಾಣ ಮಾಡುತ್ತಾರೆ. ಹೆಣ್ಣನ್ನೂ, ಗೋವನ್ನೂ ಅಳಿಯುತ್ತಿರುವ ಪ್ರಬೇಧಗಳಂತೆಯೋ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವ ಸಂಕೇತಗಳಂತೆಯೋ ಬಿಂಬಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಹಿಂದೂ ಹೆಣ್ಣು-ಮುಸ್ಲಿಮ್ ಗಂಡು ವಿವಾಹವಾದ ಮತ್ತು ಮತಾಂತರಗೊಂಡ ಎಲ್ಲಿಯದೋ ಮತ್ತು ಎಂದಿನದೋ ಘಟನೆಯನ್ನು ಈಗ ಮತ್ತು ಇವತ್ತು ನಡೆದ ಘಟನೆಯಂತೆ ವಿವರಿಸಲಾಗುತ್ತದೆ. ಮುಸ್ಲಿಮರ ತಲಾಕ್, ಬಹುಪತ್ನಿತ್ವ, ಜಿಹಾದ್‍ನ ವಿಕೃತ ರೂಪವನ್ನು ಜನರು ಮುಂದಿಡಲಾಗುತ್ತದೆ. ಹೀಗೆ ಧರ್ಮ, ಸಂಸ್ಕ್ರಿತಿ, ಹೆಣ್ಣು, ಗೋವು..ಗಳೆಲ್ಲ ಭಾವುಕವಾಗುತ್ತಾ ಹೋಗುತ್ತದೆ. ಜೊತೆಗೇ ‘ಬೆತ್ತಲೆಗಳು' ಧಾರ್ಮಿಕ ಅಗತ್ಯವಾಗಿ ನಿಧಾನಕ್ಕೆ ಬೆಂಬಲ ಗಿಟ್ಟಿಸಿಕೊಳ್ಳುತ್ತಾ ಹೋಗುತ್ತದೆ. ಇದಕ್ಕಾಗಿಯೇ,
    ಮಂಗಳೂರಿನಲ್ಲಿ ಹಾಡುಹಗಲೇ, ಸಾರ್ವಜನಿಕರೆದುರೇ, ಕವಿೂಷ ನರ್ ಕಚೇರಿಯ ತೀರಾ ಹತ್ತಿರದಲ್ಲೇ ‘ಬೆತ್ತಲೆ' ಶಿಕ್ಷೆ ಜಾರಿಯಾಗಿದೆ.