Thursday, May 8, 2014

ಜಾನುವಾರು ಹತ್ಯೆ, ಮುಸ್ಲಿಮರು ಮತ್ತು ಕೆಲವು ಸುಳ್ಳುಗಳು

   ಗೋಹತ್ಯೆಗೆ ಸಂಬಂಧಿಸಿ 1959 ಮತ್ತು 1961ರ ಮಧ್ಯೆ ಸುಪ್ರೀಮ್ ಕೋರ್ಟ್‍ನ ಮುಂದೆ ಮೂರು ಪ್ರಕರಣಗಳು ದಾಖಲಾಗಿದ್ದುವು. ಮುಹಮ್ಮದ್ ಹನೀಫ್ ಖುರೇಷಿ ಮತ್ತು ಬಿಹಾರ ಸರಕಾರ; ಹಶ್ಮತುಲ್ಲಾ ಮತ್ತು ಮಧ್ಯಪ್ರದೇಶ ಸರಕಾರ; ಅಬ್ದುಲ್ ಹಕೀಮ್ ಮತ್ತು ಬಿಹಾರ ಸರಕಾರಗಳ ನಡುವಿನ ವ್ಯಾಜ್ಯವನ್ನು ವಿಚಾರಣೆಗೆ ಒಳಪಡಿಸುತ್ತಾ ಸುಪ್ರೀಮ್ ಕೋರ್ಟ್ ಅಂತಿಮವಾಗಿ ತೀರ್ಪು ಕೊಟ್ಟದ್ದು ಹೀಗೆ:
 A total ban (on Cattle Slaughter) was not permissable if, Under economic conditions, keeping useless bull or bullock be a burden on the society and therefore not in the public interest  - ಸಮಾಜದ ಮೇಲೆ ಹೊರೆಯಾಗಬಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನೂ ಪ್ರತಿನಿಧಿಸದ ನಿರುಪಯುಕ್ತ ಜಾನುವಾರುಗಳಿರುವಲ್ಲಿ, ಜಾನುವಾರು ಹತ್ಯೆಗೆ ಸಂಪೂರ್ಣ ನಿಷೇಧ ವಿಧಿಸುವುದು ಅನುವದನೀಯವಲ್ಲ.’ (ವಿಕಿಪೀಡಿಯಾ)
 ನಿಜವಾಗಿ, ಒಂದು ಹಸು ಗರಿಷ್ಠ ಅಂದರೆ 14 ವರ್ಷಗಳ ವರೆಗೆ ಹಾಲು ಕೊಡುತ್ತದೆ. ಹಸು ಎಂದಲ್ಲ, ಎಮ್ಮೆ, ಕೋಣ, ಎತ್ತು, ಗೂಳಿಗಳೆಲ್ಲ ಉಪಯೋಗಕ್ಕೆ ಬರುವುದು 14-15 ವರ್ಷಗಳ ವರೆಗೆ ಮಾತ್ರ. ಹಾಗಂತ, ಆ ಬಳಿಕ ಅವು ತಕ್ಷಣ ಸಾಯುತ್ತವೆ ಎಂದಲ್ಲ. ಇನ್ನೂ 10 ವರ್ಷಗಳ ವರೆಗೆ ಬದುಕುವ ಸಾಮರ್ಥ್ಯ  ಅವುಗಳಲ್ಲಿರುತ್ತವೆ. ಆದರೆ ಹಾಲು ಕೊಡದ, ಉಳುಮೆಗೆ ಬಾರದ ಈ ಅಯೋಗ್ಯ ಜಾನುವಾರುಗಳನ್ನು ಸಾಕುವ ಸಾಮರ್ಥ್ಯ  ಎಷ್ಟು ರೈತರಲ್ಲಿದೆ? ಅವುಗಳಿಗೆ ಮೇವು, ಹಿಂಡಿಗಳನ್ನು ಒದಗಿಸುವುದಕ್ಕೆ ವರಮಾನ ಬೇಕಲ್ಲವೇ? ಉಳುಮೆಗೆ ಯೋಗ್ಯವಲ್ಲದ ಎತ್ತು ಕನಿಷ್ಠವೆಂದರೆ, 20ರಿಂದ 30 ಸಾವಿರದಷ್ಟು ಬೆಲೆ ಬಾಳುತ್ತದೆ. ಈ ಎತ್ತನ್ನು ಮಾರದೇ ಓರ್ವ ರೈತ ಉಳುಮೆಗೆ ಯೋಗ್ಯವಾದ ಬೇರೆ ಎತ್ತನ್ನು ಖರೀದಿಸುವುದಾದರೂ ಹೇಗೆ? ಖರೀದಿಸದಿದ್ದರೆ ಉಳುಮೆಗೆ ಏನು ಮಾಡಬೇಕು? ನಿಜವಾಗಿ, ಇದು ಕೇವಲ ಎತ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಹಸು, ಎಮ್ಮೆಗಳ ಸುತ್ತಲೂ ಇರುವುದು ಈ ಲೆಕ್ಕಾಚಾರವೇ. ಓರ್ವರು ಹಸುವನ್ನು ಸಾಕುವುದೇ ಹಾಲಿನ ಉದ್ದೇಶದಿಂದ. ಹಾಲಿಗಿರುವ ಮಾರುಕಟ್ಟೆ, ಸರಕಾರಿ ಸಬ್ಸಿಡಿ, ವರಮಾನಗಳೆಲ್ಲ ಓರ್ವರನ್ನು ಹಸು ಸಾಕುವಂತೆ ಪ್ರೇರೇಪಿಸುತ್ತಿದೆಯೇ ಹೊರತು ಬರೇ 'ಶ್ರದ್ಧೆ'ಯಲ್ಲ. ಕೇವಲ 'ಶ್ರದ್ಧೆ'ಗಾಗಿ ಮಾತ್ರ ಹಸುವನ್ನು ಸಾಕುವವರು ಅದನ್ನು ಮಾರುವುದು ಬಿಡಿ, ಅದರ ಹಾಲಿನಿಂದ ವ್ಯಾಪಾರ ಮಾಡಿ ದುಡ್ಡು ಗಳಿಸುವ ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ, 'ಶ್ರದ್ಧಾಬಿಂದು'ವೊಂದು ತನ್ನ ಗೌರವವನ್ನು ಕಳಕೊಳ್ಳುವುದೇ ವ್ಯಾಪಾರೀಕರಣಗೊಂಡಾಗ. ಯಾವಾಗ ಹಾಲು ಲಾಭದಾಯಕ ಉದ್ಯಮ ಅನ್ನಿಸಿಕೊಂಡಿತೋ ಆಗಲೇ ಹಸು 'ಶ್ರದ್ಧಾಬಿಂದು'ವಿನಿಂದ ಹೊರಬಂದು ಲಾಭ-ನಷ್ಟದ ಪ್ರಾಣಿಯಾಗಿ ಬಿಟ್ಟಿತು. ಹಾಲು ಕೊಡದ ಹಸುವನ್ನು ಸಾಕುವುದು ನಷ್ಟದ ವ್ಯಾಪಾರವೆಂದು ಪರಿಗಣಿಸಲಾಯಿತು. ಅಂದ ಹಾಗೆ, ಜಾನುವಾರು ಹತ್ಯೆಯನ್ನು ಖಂಡಿಸುವವರಲ್ಲಿ ಎಷ್ಟು ಮಂದಿ ಇವತ್ತು ಗೋವನ್ನು ಬರೇ ‘ಶ್ರದ್ಧೆ’ಗಾಗಿ ಸಾಕುತ್ತಿದ್ದಾರೆ? ಅವರ ಮನೆಗಳಲ್ಲಿ ಎಷ್ಟು ಹಾಲು ಕೊಡದ ಹಸುಗಳಿವೆ? ಎಷ್ಟು ಗಂಡು ಕರು ಮತ್ತು ಎತ್ತುಗಳಿವೆ? ಹಸು ಒಂದು ದಿನ ತುಸು ಕಡಿಮೆ ಹಾಲು ಕೊಟ್ಟರೂ ನೆತ್ತಿಯಲ್ಲಿ ನೆರಿಗೆಗಳು ಮೂಡುವ ಈ ದಿನಗಳಲ್ಲಿ ಹಾಲೇ ಕೊಡದ ಹಸುವನ್ನು ಅದು ಸಾಯುವವರೆಗೂ ಸಾಕಬೇಕೆಂದು ಬಯಸುತ್ತಾರಲ್ಲ, ಅದು ಎಷ್ಟು ಪ್ರಾಯೋಗಿಕ? ಹಾಲು ಕೊಡದ ಹಸುವನ್ನು ಮಾರಿ ಇನ್ನಷ್ಟು ಕರುಗಳನ್ನೋ ಹಸುಗಳನ್ನೋ ಖರೀದಿಸಿದರೆ ಮಾತ್ರವೇ ಓರ್ವನಿಗೆ ತನ್ನ ಉದ್ದಿಮೆಯನ್ನು ವಿಸ್ತರಿಸಲು ಸಾಧ್ಯ ಅಲ್ಲವೇ? ಗೊಡ್ಡು ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟುತ್ತಾ ಹೋದರೆ ಸಾಕುವುದು ಹೇಗೆ, ಯಾವ ವರಮಾನದಿಂದ? ಅಷ್ಟಕ್ಕೂ, ಹಸುವನ್ನು ಬರೇ ಶ್ರದ್ಧಾಬಿಂದುವಾಗಿ ಮಾತ್ರ ಸಮಾಜ ಕಾಣುತ್ತದೆಂದಾದರೆ ಕೊಟ್ಟಿಗೆಯಲ್ಲಿ ಕೇವಲ ಹೆಣ್ಣು ಕರುಗಳಷ್ಟೇ ಕಾಣುತ್ತಿರುವುದೇಕೆ? ಗಂಡು ಕರುಗಳೆಲ್ಲ ಏನಾಗುತ್ತವೆ? ಹಾಲು ಕುಡಿಯುವುದನ್ನು ನಿಲ್ಲಿಸಿದ ಕೂಡಲೇ ಅದರ ಪೋಷಕರು ಅದನ್ನು ಮಾರುತ್ತಿದ್ದಾರೆ ಎಂದಲ್ಲವೇ ಇದರರ್ಥ? ಈ ಮಾರಾಟವಾದರೂ ಯಾಕಾಗಿ, ಯಾವ ಉದ್ದೇಶದಿಂದ? ಗಂಡು ಕರುವನ್ನು ಸಾಕಿದರೆ ಲಾಭ ಇಲ್ಲ ಎಂಬುದನ್ನು ಬಿಟ್ಟರೆ ಇದಕ್ಕೆ ಬೇರೆ ಯಾವ ಕಾರಣ ಇದೆ?
 ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ...ಈ ಮೂರು ರಾಜ್ಯಗಳನ್ನು ಬಿಟ್ಟರೆ ಉಳಿದಂತೆ ಎಲ್ಲೂ ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿಯೇ ಇಲ್ಲ. ಕೇರಳ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೋರಾಮ್, ನಾಗಾಲ್ಯಾಂಡ್, ತ್ರಿಪುರ, ಲಕ್ಷದ್ವೀಪಗಳಲ್ಲಿ ಜಾನುವಾರು ಹತ್ಯೆಗೆ ಯಾವ ತಡೆಯನ್ನೂ ಹಾಕಲಾಗಿಲ್ಲ. ಉಳಿದ ರಾಜ್ಯಗಳಲ್ಲಿ, ಕರ್ನಾಟಕದಲ್ಲಿ ಈಗ ಇರುವಂಥ (12 ವರ್ಷಕ್ಕಿಂತ ಮೇಲ್ಪಟ್ಟ ನಿರುಪಯುಕ್ತ ಜಾನುವಾರುಗಳ ಹತ್ಯೆ ಮಾಡಬಹುದು) ಕಾನೂನಷ್ಟೇ ಇದೆ. ಗುಜರಾತ್‍ನಲ್ಲಿ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿಗೆ ಬಂದದ್ದೇ  2011ರಲ್ಲಿ. ಇದರ ಆಸು-ಪಾಸಿನಲ್ಲೇ ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಇದು ಜಾರಿಗೆ ಬಂದಿದೆ. ಅಷ್ಟಕ್ಕೂ, 'ಮಧ್ಯ ಪ್ರದೇಶದ ಸದ್ಯದ ಸ್ಥಿತಿ ಹೇಗಿದೆಯೆಂದರೆ, ‘ಹಾಲು ಕೊಡದ, ಉಳುಮೆಗೆ ಬಾರದ ಹಸು, ಎತ್ತುಗಳ ಸಹಿತ ಧಾರಾಳ ಜಾನುವಾರುಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..’ ಎಂದು ಅನುಷಾ ನಾರಾಯಣ್ ದಿ ಹಿಂದೂ ಪತ್ರಿಕೆಯಲ್ಲಿ (5-5-2013) ಬರೆದಿದ್ದರು. ಅದು ಬಿಡಿ, 1998ರಲ್ಲಿ ಬಿಜೆಪಿಯ ವಾಜಪೇಯಿಯವರೇ ದೇಶದ ಪ್ರಧಾನಿಯಾಗಿದ್ದರಲ್ಲ ಮತ್ತು ಆಗ ಈ ದೇಶದಲ್ಲಿ 3500ರಷ್ಟು ಕಸಾಯಿಖಾನೆಗಳಿದ್ದುವಲ್ಲ, ಇವುಗಳನ್ನು ಮುಚ್ಚಿಸಲು ಅವರು ಆಗ ಯಾವ ಕ್ರಮ ಕೈಗೊಂಡಿದ್ದರು? ಕನಿಷ್ಠ ಕಸಾಯಿಖಾನೆಗಳಿಗೆ ನೀಡಲಾಗುವ ಸಬ್ಸಿಡಿಯನ್ನು ನಿಲ್ಲಿಸುತ್ತಿದ್ದರೂ ಹೆಚ್ಚಿನವು ಬಾಗಿಲು ಮುಚ್ಚುತ್ತಿರಲಿಲ್ಲವೇ? ಆದರೂ ಯಾಕೆ ಅವರು ಇಂಥ ಪ್ರಯತ್ನಕ್ಕೆ ಮುಂದಾಗಲಿಲ್ಲ? ಆದರೆ, ಯಾಕೆ ಹೀಗಾಯಿತೆಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತು. ಇದೊಂದು ಲಾಭದಾಯಕ ಉದ್ಯಮ. ಆದ್ದರಿಂದಲೇ ಸಬ್ಸಿಡಿ ಕೊಟ್ಟು ಅದನ್ನು ಉತ್ತೇಜಿಸಲೇಬೇಕಾಗಿದೆ. ಈ ದೇಶದ ದೊಡ್ಡ ಆದಾಯ ಮೂಲವೇ ಮಾಂಸ. 2012ರಲ್ಲಿ 16,80,000 ಮೆಟ್ರಿಕ್ ಟನ್‍ಗಳಷ್ಟು ಮಾಂಸವನ್ನು ರಫ್ತು ಮಾಡಿರುವ ಭಾರತ, ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಬ್ರೆಝಿಲ್ ಮತ್ತು ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿವೆ. ನಿಜವಾಗಿ, ಹಸು ಸಹಿತ ಒಟ್ಟು ಜಾನುವಾರುಗಳು ಉಪಯುಕ್ತ ಮತ್ತು ನಿರುಪಯುಕ್ತಗೊಳ್ಳುತ್ತಾ, ಸಮಾಜದ ಭಾಗವಾಗಿ ಅನಾದಿ ಕಾಲದಿಂದಲೂ ಬದುಕುತ್ತಲೇ ಇವೆ. ಅವು ಹಾಲೂ ಕೊಟ್ಟಿವೆ. ಆಹಾರವಾಗಿಯೂ ಬಳಕೆಯಾಗಿವೆ. ‘ವಸಿಷ್ಠ ಮಹರ್ಷಿಗೆ ಕರುವಿನ ಮಾಂಸವನ್ನು ಆಹಾರವಾಗಿ ಕೊಟ್ಟ ಚರಿತ್ರೆಯು ಸಂಸ್ಕøತ ಮಹಾಕವಿ ಭವಭೂತಿ ಬರೆದ ಉತ್ತರ ರಾಮ ಚರಿತದಲ್ಲಿದೆ.’ (ಅನು: ಎಸ್.ವಿ. ಪರಮೇಶ್ವರ ಭಟ್ಟ- ಪು 309, 310) ಹೀಗಿದ್ದೂ, ‘ಗೋಹತ್ಯೆಯನ್ನು ಪ್ರಾರಂಭಿಸಿದ್ದು ಮುಸ್ಲಿಮರು, ಅವರ ಬಾಯಿ ಚಪಲಕ್ಕೆ ನಮ್ಮ ಶ್ರದ್ಧಾಬಿಂದುವಿನ ಹತ್ಯೆಯಾಗುತ್ತಿದೆ..’ ಎಂಬ ಸುಳ್ಳನ್ನು ಕೆಲವರು ಹಬ್ಬಿಸುತ್ತಿದ್ದಾರೆ. ಒಂದು ವೇಳೆ, ಮುಸ್ಲಿಮರಿಂದಲೇ ಗೋಹತ್ಯೆಯ ಪ್ರಾರಂಭವಾಯಿತು ಎಂದಾದರೆ ಅದನ್ನು ತಿನ್ನಬೇಕಾದದ್ದು ಯಾರು, ಮುಸ್ಲಿಮರು ಮಾತ್ರ ತಾನೇ? ಆದರೆ ಪರಿಸ್ಥಿತಿ ಹಾಗಿದೆಯೇ? ಇವತ್ತು ಈ ದೇಶದಲ್ಲಿ ಗೋಮಾಂಸದ ದೊಡ್ಡ ಗಿರಾಕಿಗಳು ಬಹುಸಂಖ್ಯಾತರೇ ಎಂಬುದನ್ನು ಯಾರು ಅಲ್ಲಗಳೆಯುತ್ತಾರೆ? ಕೇರಳ ಸಹಿತ ಅನೇಕ ರಾಜ್ಯಗಳ ಹಿಂದೂ ಬಾಂಧವರ ಹೊಟೇಲುಗಳಲ್ಲಿ ಇವತ್ತು ಗೋಮಾಂಸ ಲಭ್ಯವಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಅನಾದಿ ಕಾಲದಿಂದಲೂ ಅದು ಜನರ ಆಹಾರವಾಗಿಲ್ಲದಿರುತ್ತಿದ್ದರೆ ಇದು ಸಾಧ್ಯವಿತ್ತೇ? ಹಾಗಂತ, ಮುಸ್ಲಿಮರು ಗೋಮಾಂಸ ಸೇವಿಸುವುದು ಹಿಂದೂಗಳ ಶ್ರದ್ಧಾಬಿಂದುವಿಗೆ ಅಗೌರವ ತೋರಿಸಬೇಕು ಎಂದು ಖಂಡಿತ ಅಲ್ಲ. ಅದನ್ನು ಸೇವಿಸದಿದ್ದರೆ ಅವರ ವಿಶ್ವಾಸಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಸರಕಾರವೇ ನಡೆಸುತ್ತಿರುವ ಕಸಾಯಿಖಾನೆಗಳಲ್ಲಿ ಮಾಂಸ ಲಭ್ಯವಾಗುತ್ತಿರುವುದರಿಂದಲೇ ಅವರು ಅದನ್ನು ಸೇವಿಸುತ್ತಿರುವುದು.ಅಷ್ಟಕ್ಕೂ ಇಲ್ಲಿ ಕಸಾಯಿಖಾನೆಗಳಿಗೆ ಪರವಾನಿಗೆ ಕೊಟ್ಟಿರುವುದು ಮುಸ್ಲಿಮರು ಅಲ್ಲವಲ್ಲ. ಅದರ ವ್ಯಾಪಾರದಲ್ಲಿ ಮುಸ್ಲಿಮರು ತೊಡಗಿಸಿಕೊಂಡಿದ್ದಾರೆಂಬುದು ನಿಜ. ಹಾಗಂತ, ಮುಸ್ಲಿಮರು ಕೇವಲ ಜಾನುವಾರು ವ್ಯಾಪಾರದಲ್ಲಿ ಮಾತ್ರ ತೊಡಗಿಸಿಕೊಂಡಿರುವುದಲ್ಲ, ಸರಕಾರ ಅನುಮತಿಸಿರುವ ಎಲ್ಲ ವ್ಯಾಪಾರ ವ್ಯವಹಾರಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ, ಜಾನುವಾರು ವ್ಯಾಪಾರವನ್ನು ಮುಸ್ಲಿಮರು ತೊರೆಯಬೇಕು ಎಂದೋ ಅಂಥ ವ್ಯಾಪಾರಿಗಳನ್ನು ದೇಶದ್ರೋಹಿಗಳೆಂದು ಪರಿಗಣಿಸಬೇಕು ಎಂದೋ ಕೆಲವರು ವಾದಿಸುತ್ತಿರುವುದು ಎಷ್ಟು ಸರಿ? ಯಾವ ವ್ಯಾಪಾರ ದೇಶಪ್ರೇಮದ್ದು ಮತ್ತು ಯಾವುದು ದೇಶದ್ರೋಹದ್ದು ಎಂದು ತೀರ್ಮಾನಿಸಬೇಕಾದವರು ಯಾರು, ಸರಕಾರವೋ ಅಥವಾ ಸಂಘಟನೆಗಳೋ? ಅಲ್ಲದೇ, ಜಾನುವಾರು ವ್ಯಾಪಾರದಲ್ಲಿ ಮುಸ್ಲಿಮರು ತೊಡಗಿಸಿಕೊಂಡಿದ್ದಾರೆಯೇ ಹೊರತು ಕೇವಲ ಅವರು ಮಾತ್ರವೇ ಅಲ್ಲ. ಹಿಂದೂಗಳೂ ಇದ್ದಾರೆ. ವ್ಯಾಪಾರಿಗಳಿಗೆ ಜಾನುವಾರು ಮಾರಾಟ ಮಾಡುತ್ತಿರುವವರು ಯಾರು? ಅವರ ಕುರಿತೇಕೆ ಯಾರೂ  ಚಕಾರ ಎತ್ತುತ್ತಿಲ್ಲ? ಅವರು ಜಾನುವಾರುಗಳನ್ನು ಮಾರುವುದರಿಂದ ತಾನೇ ಈ ವ್ಯಾಪಾರ ಈ ವರೆಗೆ ಉಳಿದಿರುವುದು? ಹೀಗಿರುವಾಗ, ಮುಸ್ಲಿಮರು ಜಾನುವಾರು ವ್ಯಾಪಾರ ಮಾಡದಿದ್ದರೆ ಅಥವಾ ಮಾಂಸ ತಿನ್ನದಿದ್ದರೆ ಇಲ್ಲಿ ಸಾಮರಸ್ಯ ಉಂಟಾಗುತ್ತದೆ ಎಂದೆಲ್ಲ ಕೆಲವರು ವಾದಿಸುತ್ತಿರುವುದಕ್ಕೆ ಏನರ್ಥವಿದೆ? ಸರಕಾರವೇ ಅನುಮತಿಸಿರುವ ವ್ಯಾಪಾರದ ಮೇಲೆ ಹಿಂದೂ-ಮುಸ್ಲಿಮ್ ಸಾಮರಸ್ಯವನ್ನು ಯಾಕೆ ನಾವು ನೇತು ಹಾಕಬೇಕು? ಜಾನುವಾರು ಹತ್ಯೆಯು ಸಾಮರಸ್ಯಕ್ಕೆ ತೊಡಕಾಗುತ್ತದೆಂದಾದರೆ ಅದನ್ನು ನಿಷೇಧಿಸಬೇಕಾದದ್ದು ಸರಕಾರ. ಇದು ಎಲ್ಲರಿಗೂ ಗೊತ್ತು. ಜಾನುವಾರು ಹತ್ಯೆ ಎಂದಲ್ಲ ಯಾವುದೇ ಹತ್ಯೆ ಅಥವಾ ವ್ಯಾಪಾರವು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತದೆಂದಾದರೆ ಆ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. ಅಲ್ಲದೇ, ಸರಕಾರದ ನಿಲುವನ್ನು ಪ್ರಶ್ನಿಸಿ ಕೋರ್ಟಿಗೆ ಹೋಗುವ ಅವಕಾಶ ಎಲ್ಲರಿಗೂ ಮುಕ್ತವಿದೆ. ಇದು ಬಿಟ್ಟು, ‘ಮುಸ್ಲಿಮರು ಈ ವ್ಯಾಪಾರ ಬಿಡಬೇಕು, ಆ ಆಹಾರವನ್ನು ತಿನ್ನಬಾರದು, ಹಾಗೆ ಮಾಡಬೇಕು, ಹೀಗೆ ಮಾಡಬೇಕು... ಎಂದೆಲ್ಲಾ ಸರಕಾರವೂ ಅಲ್ಲದ, ನ್ಯಾಯಾಲಯವೂ ಅಲ್ಲದ ಕೆಲವು ಖಾಸಗಿ ವ್ಯಕ್ತಿಗಳು ಒತ್ತಾಯಿಸುವುದು ಮತ್ತು ‘ನಾವು ಹೇಳಿದಂತೆ ಕೇಳದಿದ್ದರೆ ಸಾಮರಸ್ಯ ಕೆಡುತ್ತದೆ’ ಎಂದು ಬೆದರಿಸುವುದು ಯಾವುದರ ಸೂಚನೆ?
 ಹೌದು, ಜಾನುವಾರುಗಳ ಅಕ್ರಮ ಸಾಗಾಟವು ಕಾನೂನಿನ ಪ್ರಕಾರವೇ ನಿಷಿದ್ಧವಾಗಿದೆ. ಜಾನುವಾರು ಎಂದಲ್ಲ, ಅಕ್ಕಿ, ಗೋಧಿ, ಬದನೆ, ಬೆಂಡೆಕಾಯಿ... ಸಹಿತ ಯಾವುದೇ ವಸ್ತುಗಳ ಅಕ್ರಮ ಮಾರಾಟ ಮತ್ತು ಸಾಗಾಟವೂ ನಿಷಿದ್ಧವೇ ಆಗಿದೆ. ಇಂಥ ಅಕ್ರಮ ವ್ಯಾಪಾರದಲ್ಲಿ ಮುಸ್ಲಿಮರು ಎಂದಲ್ಲ ಯಾರೇ ತೊಡಗಿಸಿಕೊಂಡರೂ ಅದು ಶಿಕ್ಷಾರ್ಹವೇ. ಇಲ್ಲಿನ ಮುಸ್ಲಿಮರು ಅಕ್ರಮ ಜಾನುವಾರು ಸಾಗಾಟದಾರರ ಪರ ಎಲ್ಲೂ ವಾದಿಸಿಲ್ಲ. ಪ್ರತಿಭಟಿಸಿಲ್ಲ. ಹಾಗೆ ವಾದಿಸುವುದು, ಅಕ್ರಮವನ್ನು ಸಮರ್ಥಿಸುವುದು ಧಾರ್ಮಿಕವಾಗಿಯೇ ನಿಷಿದ್ಧ. ನಿಜವಾಗಿ, ಇಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕೆಲವು ಭ್ರಷ್ಟ ಅಧಿಕಾರಿಗಳು ಕಾರಣವೇ ಹೊರತು ಒಂದು ನಿರ್ದಿಷ್ಟ ಧರ್ಮವೋ ಅದರ ಅನುಯಾಯಿಗಳೋ ಅಲ್ಲ. ಆದ್ದರಿಂದ, ಇಲ್ಲಿ ಮುಸ್ಲಿಮರ ವಿರುದ್ಧ ಅಲ್ಲ, ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಯಬೇಕಾಗಿದೆ. ಜಾನುವಾರು ಸಾಗಾಟವು ಅಕ್ರಮವಾಗಿ ನಡೆಯುತ್ತದೆ ಮತ್ತು ಅಮಾನವೀಯವಾಗಿ ಜಾನುವಾರುಗಳನ್ನು ವಾಹನಗಳಲ್ಲಿ ಸಾಗಿಸಲಾಗುತ್ತದೆ ಎಂಬ ಅಂಶವು ಒಟ್ಟು ವ್ಯಾಪಾರದ ಮೇಲೆಯೇ ನಿಷೇಧ ಹೇರುವುದಕ್ಕೆ ಕಾರಣ ಆಗುವುದಿಲ್ಲ. ಶೀತ ಆಗಿರುವುದಕ್ಕೆ ಮೂಗನ್ನೇ ಕೊಯ್ಯುವುದು ಪರಿಹಾರ ಅಲ್ಲವಲ್ಲ. ಅದಕ್ಕೆ ಮದ್ದು ಮಾಡಬೇಕಲ್ಲವೇ? ಜಾನುವಾರು ಸಾಗಾಟದಲ್ಲಾಗುವ ಅಕ್ರಮವನ್ನು ತಡೆಗಟ್ಟುವುದಕ್ಕೂ ಇದೇ ಮಾರ್ಗವನ್ನು ಅನುಸರಿಸಬೇಕಾಗಿದೆ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯನ್ನು ನೀಡಬೇಕಾಗಿದೆ. ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳದೇ ಕಾನೂನು ಪಾಲಕರಿಗೆ ಸಹಕಾರ ನೀಡಿದರೆ ಇದು ಖಂಡಿತ ಜಾರಿಗೆ ಬರುತ್ತದೆ. ಅದು ಬಿಟ್ಟು, ಜಾನುವಾರು ಮಾಂಸವನ್ನು ಮುಸ್ಲಿಮರು ತ್ಯಜಿಸುವುದೋ ಅದರ ವ್ಯಾಪಾರ ಮಾಡುವುದನ್ನು ನಿಲ್ಲಿಸುವುದೋ ಒಟ್ಟು ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಯಾಕೆಂದರೆ, 125 ಕೋಟಿ ಜನರಿರುವ ಈ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚೆಂದರೆ 15-16 ಕೋಟಿಯಷ್ಟೇ. ಕೇವಲ ಇಷ್ಟೊಂದು ಸಣ್ಣ ಸಂಖ್ಯೆಯನ್ನು ಆಧರಿಸಿ ಇಲ್ಲಿ ಯಾವ ವ್ಯಾಪಾರವೂ ಉಳಿದುಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಸರಕಾರವು 2011ರಲ್ಲಿ ಜಾನುವಾರು ಸಂರಕ್ಷಣಾ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಮುಂದಾದಾಗ ಅದನ್ನು ಪ್ರತಿಭಟಿಸಿ ಬೆಂಗಳೂರಿನಲ್ಲಿ ಬಹಿರಂಗವಾಗಿ ಜಾನುವಾರು ಮಾಂಸವನ್ನು ಬೇಯಿಸಿ ಹಂಚಲಾಗಿತ್ತು. ಆ ಪ್ರತಿಭಟನೆಯನ್ನು ಏರ್ಪಡಿಸಿದ್ದು ಮುಸ್ಲಿಮರಾಗಿರಲಿಲ್ಲ. ಅಲ್ಲಿ ಪ್ರತಿಭಟಿಸಿದವರು ಯಾರು ಮತ್ತು ಮಾಂಸವನ್ನು ತಿಂದವರು ಯಾರು ಎಂಬುದು ಎಲ್ಲರಿಗೂ ಗೊತ್ತು. ಈ ದೇಶದ ದೊಡ್ಡದೊಂದು ಗುಂಪು ಇವತ್ತು ಜಾನುವಾರು ಮಾಂಸವನ್ನು ಆಹಾರವಾಗಿ ಬಳಸುತ್ತಿದೆ. ಅವರಲ್ಲಿ ಮುಸ್ಲಿಮರೂ ಸೇರಿದ್ದಾರೆ ಎಂಬುದು ನಿಜವೇ ಹೊರತು ಅವರೆಲ್ಲರೂ ಮುಸ್ಲಿಮರು ಎಂಬುದು ಅಪ್ಪಟ ಸುಳ್ಳು. ಒಂದು ವೇಳೆ, ಈ ದೇಶದ ಶೇ. 15ರಷ್ಟಿರುವ ಮುಸ್ಲಿಮರು ಮಾತ್ರ ಈ ಆಹಾರವನ್ನು ಸೇವಿಸುತ್ತಿದ್ದು ಉಳಿದ 85% ಮಂದಿ ಅದನ್ನು ವಿರೋಧಿಸುತ್ತಿದ್ದಾರೆ ಎಂದಾಗಿದ್ದರೆ ಅದು ಈ ದೇಶದಲ್ಲಿ ಎಂದೋ ನಿಷೇಧಕ್ಕೆ ಒಳಗಾಗುತ್ತಿತ್ತು. ಯಾಕೆಂದರೆ, ಯಾವ ಸರಕಾರವೂ 15% ಮಂದಿಯನ್ನು ತುಷ್ಠೀಕರಿಸುವುದಕ್ಕಾಗಿ 85% ಮಂದಿಯನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರಿಸಲಾರದು. ‘ಮುಸ್ಲಿಮರು ದಲಿತರಿಗಿಂತಲೂ ಹೀನಾಯ ಸ್ಥಿತಿಯಲ್ಲಿದ್ದಾರೆ’ ಎಂಬ ಸಾಚಾರ್ ವರದಿಯ ಅಂಶಗಳೇ ಮುಸ್ಲಿಮರನ್ನು ಇಲ್ಲಿನ ಸರಕಾರಗಳು ಎಷ್ಟರಮಟ್ಟಿಗೆ ಕಡೆಗಣಿಸಿವೆ ಎಂಬುದಕ್ಕೆ ಅತ್ಯುತ್ತಮ ಪುರಾವೆ. ಇಷ್ಟಿದ್ದೂ, ‘ಕಾಂಗ್ರೆಸ್ ಸರಕಾರವು ಮುಸ್ಲಿಮರನ್ನು ತುಷ್ಠೀಕರಿಸುತ್ತದೆ’ ಎಂದೋ ಅಥವಾ ‘ಮುಸ್ಲಿಮರಿಗಾಗಿಯೇ ಜಾನುವಾರು ಹತ್ಯೆಯನ್ನು ಸಕ್ರಮಗೊಳಿಸಲಾಗಿದೆ’ ಎಂದೋ ಹೇಳುವುದಾದರೆ, ಅದಕ್ಕೆ ನಾನೇನೂ ಹೇಳುತ್ತಿಲ್ಲ. ತೀರ್ಮಾನ ಓದುಗರಿಗೆ ಬಿಟ್ಟದ್ದು. ಆದರೂ,
 ಗೋವಿನ ಸಹಜ ಗರ್ಭಧಾರಣೆಯ ಹಕ್ಕನ್ನು ಕಸಿದು ಇಂಜಕ್ಷನ್ ಮುಖಾಂತರ ಕೃತಕ ಗರ್ಭಧಾರಣೆ ಮಾಡಿಸಿ ವರ್ಷದುದ್ದಕ್ಕೂ ಹಾಲು ಪಡೆಯಲು ಪ್ರಯತ್ನಿಸುವ ಮತ್ತು ಗೋವನ್ನು ಅಪ್ಪಟ ವ್ಯಾಪಾರದ ಪ್ರಾಣಿಯಾಗಿ ಮಾರ್ಪಡಿಸಿರುವ ಇಂದಿನ ಆಧುನಿಕ ಭಾರತೀಯರ ಬಗ್ಗೆ, ಅವರಿಂದಾಗಿ ಗೋವಿಗಾಗುತ್ತಿರುವ ಹಿಂಸೆಯ ಬಗ್ಗೆ ಏನೊಂದೂ ಹೇಳದೇ, ಬರೇ `ಹತ್ಯೆಯ’ ಬಗ್ಗೆ ಮತ್ತು ಅಕ್ರಮ ಸಾಗಾಟ ಹಾಗೂ ಮುಸ್ಲಿಮರ ಬಗ್ಗೆ ಮಾತ್ರ ಮಾತುಗಳು ಕೇಳಿ ಬರುತ್ತಿರುವುದನ್ನು ಕಂಡು ಇವೆಲ್ಲವನ್ನೂ ಇಲ್ಲಿ ಹಂಚಿಕೊಳ್ಳಬೇಕೆನಿಸಿತು.

No comments:

Post a Comment