Monday, May 19, 2014

ಗುರುಶರಣ್ ಕ್ಷಮಿಸಿದರೆಂದು ಜನರೇಕೆ ಕ್ಷಮಿಸಬೇಕು ಪ್ರಧಾನಿಗಳೇ?


ಲೆ ವವಡೆ
ಮಾರ್ಕಸ್ ಚ್ಯೂಸೆಸ್ಕ್ಯೂ
ಮಿಖಾಯಿಲ್ ಗೋರ್ಬಚೇವ್
   .. 1987-92 ಮಧ್ಯೆ ಜಾಗತಿಕ ಸುದ್ದಿಯ ಕೇಂದ್ರವಾಗಿದ್ದವರಲ್ಲಿ ಇವರೆಲ್ಲ ಸೇರಿದ್ದರು. ಪೋಲೆಂಡಿನಲ್ಲಿ ನಡೆದ ಕ್ರಾಂತಿಯ ನೇತೃತ್ವವನ್ನು ವವಡೆ ವಹಿಸಿಕೊಂಡಿದ್ದರು. ರುಮೇನಿಯಾದ ಮಂದಿ ಮಾರ್ಕಸ್ ಚ್ಯೂಸೆಸ್ಕ್ಯೂವನ್ನು ಅಧಿಕಾರದಿಂದ ಕೆಳಗಿಳಿಸಿದರು. ಯುಗೋಸ್ಲಾವಿಯಾ, ಬಲ್ಗೇರಿಯಾ, ಚಕೋಸ್ಲವಾಕಿಯಗಳೆಲ್ಲ ಸರಕಾರಿ ವಿರೋಧಿ ಪ್ರತಿಭಟನೆ ಮತ್ತು ದಮನಗಳ ಕಾರಣಕ್ಕಾಗಿ ಸುದ್ದಿಯಲ್ಲಿದ್ದುವು. ರಷ್ಯಾದಲ್ಲಿ ಮಿಖಾಯಿಲ್ ಗೋರ್ಬಚೇವ್‍ರು ಪೆರಸ್ಟ್ರಾಯಿಕಾ ಮತ್ತು ಗ್ಲಾಸ್‍ನೋಸ್ತ್ ಎಂಬ ಎರಡು ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಒಂದು ರೀತಿಯಲ್ಲಿ, ಕಮ್ಯುನಿಸಮ್‍ನ ಹಿಡಿತದಿಂದ ಮುಕ್ತವಾಗುವುದಕ್ಕೆ 1987-92ರ ನಡುವೆ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಪ್ರಯತ್ನಗಳು ನಡೆದುವು. ಕಮ್ಯುನಿಸ್ಟ್ ಪ್ರಭಾವಿತ ಸೋಶಿಯಲ್ ಇಕನಾಮಿಕ್ಸ್ ನಿಂದ ಬಂಡವಾಳಶಾಹಿ ಅರ್ಥವ್ಯವಸ್ಥೆಯಾದ ಲಿಬರಲ್ ಇಕನಾಮಿಕ್ಸ್ ನೆಡೆಗೆ ಅಸೆಗಣ್ಣಿನಿಂದ ನೋಡುವ ಮಂದಿ ಹೆಚ್ಚಾದರು. ಕಮ್ಯೂನಿಸಮ್ ವಿಚಾರಧಾರೆಯಲ್ಲಿ ಸಡಿಲ ಮಾಡಿಕೊಳ್ಳಲು ಅಥವಾ ಪೂರ್ಣವಾಗಿ ಅದರಿಂದ ಹೊರಬರಲು ವಿವಿಧ ರಾಷ್ಟ್ರಗಳು ಪ್ರಯತ್ನದಲ್ಲಿ ತೊಡಗಿದುವು. ಇಂಥ ಸಂದರ್ಭದಲ್ಲೇ ಮನಮೋಹನ್ ಸಿಂಗ್‍ರು ಭಾರತದ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು. 1991ರಲ್ಲಿ ಮನಮೋಹನ್ ಸಿಂಗ್‍ರು ಈ ದೇಶದ ಹಣಕಾಸು ಸಚಿವರಾಗಿ ಆಯ್ಕೆಯಾದ ಹೊತ್ತಲ್ಲಿ ಈ ದೇಶವು ನೆಹರೂ ಅವರ `ಸೋಶಿಯಲ್ ಇಕನಾಮಿಕ್ಸ್' ಅರ್ಥವ್ಯವಸ್ಥೆಯನ್ನೇ ನೆಚ್ಚಿಕೊಂಡಿತ್ತು. 1972 ಮತ್ತು 76ರಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಸಲಹೆಗಾರರಾಗಿ, 90ರಲ್ಲಿ ವಿ.ಪಿ. ಸಿಂಗ್‍ರ ಅಧಿಕಾರಾವಧಿಯಲ್ಲಿ ಹಣಕಾಸು ಖಾತೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಮನ್‍ಮೋಹನ್ ಸಿಂಗ್‍ರಿಗೆ ಇದು ಗೊತ್ತಿಲ್ಲ ಎಂದಲ್ಲ. ಅಲ್ಲದೇ ರಿಸರ್ವ್ ಬ್ಯಾಂಕ್‍ನ ಅಧ್ಯಕ್ಷರು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಅನುಭವ ಪಡೆದಿದ್ದ ಸಿಂಗ್‍ರಿಗೆ ಪಂಡಿತ್ ನೆಹರೂ ಅರ್ಥವಾಗದಿರುವುದಕ್ಕೆ ಸಾಧ್ಯವೂ ಇರಲಿಲ್ಲ. 1947ರಿಂದ 91ರ ವರೆಗಿನ ಸುಮಾರು 4 ದಶಕಗಳ ಅವಧಿಯಲ್ಲಿ ಈ ದೇಶ ಸಾಗಿ ಬಂದ ಹಾದಿ ಮತ್ತು ಸಾಧಿಸಿದ ಅಭಿವೃದ್ಧಿಯ ಕುರಿತಂತೆ ಮನ್‍ಮೋಹನ್ ಸಿಂಗ್‍ರಿಗೆ ಯಾರೂ ವಿವರಿಸಿ ಕೊಡಬೇಕಾದ ಅಗತ್ಯವೂ ಇರಲಿಲ್ಲ. ನೆಹರೂ ಕಲಿತದ್ದೂ ಬ್ರಿಟನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ. ಮನ್‍ಮೋಹನ್ ಕಲಿತದ್ದೂ ಅಲ್ಲೇ. ನೆಹರೂ ಕೇಂಬ್ರಿಡ್ಜ್ ನಲ್ಲಿ ಓರ್ವ ಸಾಮಾನ್ಯ ವಿದ್ಯಾರ್ಥಿಯಾಗಿ ತೇರ್ಗಡೆಯಾದರೆ, ಮನ್‍ಮೋಹನ್ ಅಂತೂ ಆ್ಯಡಂಸ್ಮಿತ್ ಪುರಸ್ಕಾರದೊಂದಿಗೆ 24ನೇ ವಯಸ್ಸಿನಲ್ಲೇ ಅರ್ಥತಜ್ಞನಾಗಿ ಗುರುತಿಸಿಕೊಂಡೇ ತೇರ್ಗಡೆಗೊಂಡರು. ಇಂಥ ಮನ್‍ಮೋಹನ್ ಸಿಂಗ್‍ರನ್ನು 1991ರಲ್ಲಿ ಪಿ.ವಿ. ನರಸಿಂಹರಾವ್‍ರು ಹಣಕಾಸು ಸಚಿವರಾಗಿ ಆಯ್ಕೆ ಮಾಡಿದಾಗ ಸಾಕಷ್ಟು ಅರ್ಥತಜ್ಞರು ಹಲವು ಹೊಗಳಿಕೆಯ ಮಾತುಗಳನ್ನು ಆಡಿದ್ದರು. ಅಮೇರಿಕನ್ ನೇತೃತ್ವದ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಬೆಂಬಲಿಗರು ಮತ್ತು ವಿಶ್ವಬ್ಯಾಂಕ್ ಕೂಡಾ ಸಿಂಗ್‍ರಿಂದ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದುವು. ಅದರಂತೆ ನೆಹರೂ ಅವರ ಸೋಶಿಯಲ್ ಇಕನಾಮಿಕ್ಸ್ ಗೆ ಬದಲಾಗಿ ಈ ದೇಶವನ್ನು ಉದಾರೀಕರಣ ಅರ್ಥವ್ಯವಸ್ಥೆಗೆ ಮನ್‍ಮೋಹನ್ ಸಿಂಗ್ ತೆರೆದಿಟ್ಟರು. ಅಲ್ಲಿಂದ ಈ 2014ರ ವರೆಗೆ 23 ವರ್ಷಗಳು ಸರಿದು ಹೋಗಿವೆ. ಹಣಕಾಸು ಸಚಿವರಿಂದ ಹಿಡಿದು ಪ್ರಧಾನ ಮಂತ್ರಿಯ ವರೆಗೆ ಸಾಗಿ ಮೊನ್ನೆ ಮೊನ್ನೆ ಮನ್‍ಮೋಹನ್ ಸಿಂಗ್ ಇಳಿದು ಹೋಗಿದ್ದಾರೆ. ಹೊಸ ಅರ್ಥ ವ್ಯವಸ್ಥೆಯನ್ನು ಈ ದೇಶಕ್ಕೆ ಪರಿಚಯಿಸಿದ ವ್ಯಕ್ತಿ ಮೊನ್ನೆ ಇಳಿದು ಹೋಗುವಾಗ ಎಷ್ಟು ಅಪರಿಚಿತರಾಗಿದ್ದರೆಂದರೆ, ಅವರನ್ನು ನೆನಪಿಸುವುದಕ್ಕೆ ಅವರ ಪಕ್ಷವೇ ಮುಂದಾಗಲಿಲ್ಲ. ಗಾಂಧೀಜಿಯ ಭಾರತವನ್ನು ನೆಹರೂ ಕೊಲೆಗೈದರೆ ನೆಹರೂರ ಭಾರತವನ್ನು ಮನ್‍ಮೋಹನ್ ಸಿಂಗ್ ಕೊಲೆಗೈದದ್ದಷ್ಟೇ ಅಲ್ಲ, ಭಾರತವನ್ನು ಕಾರ್ಪೋರೇಟ್ ವಲಯಕ್ಕೆ ಮಾರಿ ಹಿಂಬಾಗಿಲಿನಿಂದ ಹೊರಟು ಹೋದರು. ಚುನಾವಣೆಗಿಂತ ಮೊದಲೇ ಸೋಲೊಪ್ಪಿಕೊಂಡ ಈ ದೇಶದ ಪ್ರಪ್ರಥಮ ಪ್ರಧಾನಿ ಎಂಬ ಬಿರುದು ಪಡೆದರು. ಮನ್‍ಮೋಹನ್ ಹೀಗೇಕಾದರು? ಪ್ರಧಾನಿಯ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರು, `ದಿ ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟ್ಟರ್’ ಎಂಬ ಕೃತಿಯನ್ನು ಬಿಡುಗಡೆಗೊಳಿಸದಿರುತ್ತಿದ್ದರೆ ಆ ಚುನಾವಣೆಯ ಸಮಯದಲ್ಲೂ ಅವರು ಸುದ್ದಿಗೆ ಒಳಗಾಗುತ್ತಿದ್ದರೆ? ಅವರ ತಮ್ಮ  ಬಿಜೆಪಿ ಸೇರಿದಾಗ ಅವರು ಎರಡುಗೆರೆಯ ಉಲ್ಲೇಖಕ್ಕೆ ಒಳಗಾಗಿದ್ದನ್ನು ಬಿಟ್ಟರೆ ಉಳಿದಂತೆ ಈ ಚುನಾವಣೆಯ ವೇಳೆ ಅವರ ಉಲ್ಲೇಖ ಶೂನ್ಯ. 10 ವರ್ಷ ದೇಶವನ್ನು ಮುನ್ನಡೆಸಿದ ವ್ಯಕ್ತಿ ಈ ಮಟ್ಟದಲ್ಲಿ ಅಪ್ರಸ್ತುತರಾದರೇಕೆ? ಅವರು ಚುನಾವಣಾ ರಾಜಕೀಯಕ್ಕೆ ಒಗ್ಗಿಕೊಳ್ಳದೇ ಇದ್ದುದೇ? ಜನರ ನಾಡಿಮಿಡಿತ ಗೊತ್ತಿಲ್ಲದ, ಓಟಿಗೂ ನಿಂತಿಲ್ಲದ ಮತ್ತು ಭಾಷಣ ಚಾತುರ್ಯವೂ ಇಲ್ಲದ ಅವರ ದೌರ್ಬಲ್ಯಗಳೇ? ಅಥವಾ..
   ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿಯವರ ಹತ್ಯೆ ಮಾಡಿದವರನ್ನು ಈ ದೇಶ ಬಂಧಿಸಿದ್ದರೂ, ಆ ಹತ್ಯೆಯ ಹಿಂದೆ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಕೈವಾಡ ಇದೆ ಎಂದು ವಾದಿಸುವವರು ಇವತ್ತೂ ಇದ್ದಾರೆ. ಭಾರತವನ್ನು ನೆಹರೂ ಪ್ರಭಾವಿತ ಅರ್ಥವ್ಯವಸ್ಥೆಯಿಂದ ಅಮೇರಿಕನ್ ಮಾದರಿಯ ಅರ್ಥವ್ಯವಸ್ಥೆಗೆ ಹೊರಳಿಸಲು ಈ ಎರಡು ಹತ್ಯೆಗಳನ್ನು ನಡೆಸಲಾಗಿದೆ ಎಂದೂ  ಹೇಳಲಾಗುತ್ತದೆ. ಅದೇನೇ ಇದ್ದರೂ, ಭಾರತಕ್ಕೆ ಉದಾರೀಕರಣದ ಹೊಸ ಅರ್ಥವ್ಯವಸ್ಥೆಯನ್ನು ಪರಿಚಯಿಸಿದ್ದು ಮನ್‍ಮೋಹನ್ ಸಿಂಗ್. ‘59 ವರ್ಷವಾಗುವವರೆಗೆ ನಾನು ರಾಜಕೀಯದ ಬಗ್ಗೆ ಆಲೋಚಿಸಿಯೇ ಇರಲಿಲ್ಲವೆಂದು’ ಬ್ರಿಟಿಷ್ ಪತ್ರಕರ್ತ ಮಾರ್ಕ್ ಟುಲಿಯೊಂದಿಗೆ ಹೇಳಿದ್ದ ಮನ್‍ಮೋಹನ್, 2004ರಲ್ಲಿ ಪ್ರಧಾನಿಯಾದರು. 91ರಲ್ಲಿ ಈ ದೇಶಕ್ಕೆ ಉದಾರೀಕರಣ ನೀತಿಯನ್ನು ಪರಿಚಯಿಸುತ್ತಾ, ‘ದೇಶದ ಬಡತನವನ್ನು ಹೋಗಲಾಡಿಸುವುದಕ್ಕಾಗಿ ಈ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ...’ ಅಂದಿದ್ದರು. ಆದರೆ, ಮೊನ್ನೆ ಆಹಾರ ಭದ್ರತಾ ಕಾಯ್ದೆ ಮತ್ತು ನರೇಗಾ(ಗ್ರಾವಿೂಣ ಉದ್ಯೋಗ ಖಾತ್ರಿ ಯೋಜನೆ)ವನ್ನು ದೇಶಕ್ಕೆ ಕೊಟ್ಟು ಮೌನವಾಗಿ ಇಳಿದು ಹೋದರು. ನಿಜವಾಗಿ, ಅವರ ಉದಾರೀಕರಣ ಅರ್ಥವ್ಯವಸ್ಥೆಯ ದೊಡ್ಡ ವೈಫಲ್ಯ ಇದು. ಉದಾರೀಕರಣ ವ್ಯವಸ್ಥೆಯೇ ಬಡತನವನ್ನು ಹೋಗಲಾಡಿಸುತ್ತದೆ ಎಂದಿದ್ದ ಅವರು, ಅದಾಗಿ 23 ವರ್ಷಗಳ ಬಳಿಕ, ಬಡತನ ಅಳಿದಿಲ್ಲ ಮತ್ತು ಉದ್ಯೋಗ ಸಮಸ್ಯೆ ನಿವಾರಣೆಗೊಂಡಿಲ್ಲ ಎಂಬುದನ್ನು ಈ ಎರಡು ಯೋಜನೆಗಳ ಮೂಲಕ ಒಪ್ಪಿಕೊಂಡರು. ಅಷ್ಟಕ್ಕೂ, ಪ್ರಧಾನಿ ಅಂದರೆ ಕಂಪೆನಿ ಮ್ಯಾನೇಜರ್ ಅಲ್ಲವಲ್ಲ. ಮ್ಯಾನೇಜರ್ ಜನರಿಗೆ ಉತ್ತರದಾಯಿಯಲ್ಲ. ಮನ್‍ಮೋಹನ್ ಸಿಂಗ್ ಹಾಗಲ್ಲವಲ್ಲವೇ? ಆದರೂ ಅವರ ವರ್ತನೆ ಹೇಗಿತ್ತು? ಜನರ ನಾಡಿಮಿಡಿತ ಗೊತ್ತಿಲ್ಲದ, ಜನರೊಂದಿಗೆ ಸಂಪರ್ಕ ಇಲ್ಲದ ಮತ್ತು ಓಟಿಗೆ ನಿಲ್ಲದ ವ್ಯಕ್ತಿ ಎಂಬ ಕೊರತೆಗಳನ್ನು ವಿೂರಿ ಬೆಳೆಯಲು ಅವರು ಯತ್ನಿಸಿದ್ದರೇ? ಒಂದು ಬಾವಿಯ ಉದ್ಘಾಟನೆಗೆ ಹೋದರೂ, ಸೆನ್ಸೆಕ್ಸ್, ಜಿಡಿಪಿ, ಅಬಿವೃದ್ಧಿ ಸೂಚ್ಯಂಕಗಳಿಂದ ಭಾಷಣವನ್ನು ಪ್ರಾರಂಭಿಸಿ, ‘ರೂಪಾಯಿ ಮೌಲ್ಯ’ದಲ್ಲಿ ಕೊನೆಗೊಳಿಸುವುದನ್ನು ಹೊರತುಪಡಿಸಿ ಬೇರೇನಾದರೂ ಅವರಿಂದ ನಿರೀಕ್ಷಿಸಲು ಸಾಧ್ಯವಿತ್ತೇ? ನೆಹರೂ, ಇಂದಿರಾ, ವಾಜಪೇಯಿ, ದೇವೇಗೌಡ, ವಿ.ಪಿ.ಸಿಂಗ್, ರಾಜೀವ್ ಗಾಂಧಿ... ಮುಂತಾದವರೆಲ್ಲ ಏನು ಹೇಳುತ್ತಾರೋ ಅದುವೇ ಸುದ್ದಿಯಾಗುತ್ತಿದ್ದರೆ, ಸಿಂಗ್ ಏನಾದರೂ ಹೇಳುತ್ತಾರೆ ಎಂಬುದೇ ಸುದ್ದಿಯಾಗುವಷ್ಟು ಅವರು ಮೌನಿಯಾದರಲ್ಲ, ಯಾಕೆ? ದೇಶವನ್ನು ಮುನ್ನಡೆಸುವ ವ್ಯಕ್ತಿಗೆ ದೇಶದ ಪ್ರಮುಖ ಅಂಗವಾದ ಜನರ ಬಗ್ಗೆ ಯಾವ ಅಭಿಪ್ರಾಯವೂ ಸಂಬಂಧವೂ ಇರಬೇಕಿಲ್ಲ ಎಂಬ ಹೊಸ ರಾಜಕೀಯ ವ್ಯಾಖ್ಯಾನವನ್ನು ಸಿಂಗ್ ಕೊಟ್ಟದ್ದು ಸುಳ್ಳೇ? ನಿಜವಾಗಿ, ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಭಾರತದಲ್ಲೊಬ್ಬ ಮ್ಯಾನೇಜರ್ ಬೇಕಿತ್ತು. ಆತ ಜನರೊಂದಿಗೆ ಬೆರೆಯುವ, ಅವರ ನಾಡಿ ಮಿಡಿತ ಅರಿತು ಮಾತಾಡುವ ವ್ಯಕ್ತಿ ಆಗಬಾರದೆಂಬುದು ಅವರ ಬಯಕೆ. ಆದ್ದರಿಂದಲೇ 2ಜಿ, ಕಲ್ಲಿದ್ದಲು ಹಗರಣದಲ್ಲಿ ಎಲ್ಲವೂ ಗೊತ್ತಿದ್ದೂ ಮನ್‍ಮೋಹನ್ ಯಾವ ಪ್ರಶ್ನೆಗೂ ಉತ್ತರಿಸಲಿಲ್ಲ. ಯಾಕೆಂದರೆ, ಅದು ಮ್ಯಾನೇಜರ್‍ನ ಕಾರ್ಯಕ್ಷೇತ್ರವಲ್ಲ. ಯಾವ ವಿಭಾಗದಲ್ಲಿ ಏನೇನು ನಡೆದಿದೆಯೋ ಅದಕ್ಕೆ ಆಯಾ ವಿಭಾಗದವರೇ ಹೊಣೆಗಾರರು ಮತ್ತು ಅವರೇ ಆ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂಬಂತೆ ಅವರು ವರ್ತಿಸಿದರು. ನಿಜವಾಗಿ, ಮನಮೋಹನ್‍ರು ಮಾತಾಡಬೇಕಾದ ಪ್ರಧಾನಿಯಾಗಿ ಈ ದೇಶದಲ್ಲಿ ಗುರುತಿಸಿಕೊಳ್ಳಲೇ ಇಲ್ಲ. ಹೌದು, ಆರ್‍ಟಿಇ, ಆರ್‍ಟಿಐ, ನರೇಗ, ಆಹಾರ ಭದ್ರತಾ ಕಾಯ್ದೆ.. ಮುಂತಾದ ಜನಪರ ಯೋಜನೆಗಳನ್ನು ಅವರು ಜಾರಿಗೊಳಿಸಿದರು, ನಿಜ. ಆದರೆ ಆರ್‍ಟಿಐ ಕಾರ್ಯಕರ್ತರು ಸಾಲುಸಾಲಾಗಿ ಹತ್ಯೆಗೊಳಗಾಗುತ್ತಿರುವಾಗಲೂ ಅವರ ರಕ್ಷಣೆಗೆ ಯಾವ ಕಾಯ್ದೆಯನ್ನೂ ಅವರು ರೂಪಿಸಲಿಲ್ಲ. ಪೆಟ್ರೋಲಿಯಂ ಕ್ಷೇತ್ರವನ್ನು ಅವರು ರಿಲಯನ್ಸ್ ನಂಥ ಕಾರ್ಪೋರೇಟ್ ಕಂಪೆನಿಗಳ ಕಾಲಬುಡದಲ್ಲಿಟ್ಟರು. ಈ ದೇಶದ ರಕ್ಷಣಾ ರಹಸ್ಯಗಳು ಅಮೇರಿಕಕ್ಕೆ ಸೋರಿಕೆಯಾಗಲು ಅವಕಾಶ ಇರುವ ಅಣು ಒಪ್ಪಂದಕ್ಕೆ ಸಹಿ ಹಾಕಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಅವರಿಗೆ ತಟ್ಟಲೇ ಇಲ್ಲ. ಒಂದು ಕಡೆ ವೇತನದಲ್ಲಿ ಹೆಚ್ಚಳವಾಗುತ್ತಲೇ ಇನ್ನೊಂದು ಕಡೆ ಖರ್ಚಲ್ಲೂ ಹೆಚ್ಚಳವಾಯಿತು. ರೈತರ ಆತ್ಮಹತ್ಯೆ, ಪಟ್ಟಣಕ್ಕೆ ಗ್ರಾವಿೂಣರ ವಲಸೆಯಿಂದಾಗಿ ಕೊಳಚೆಗೇರಿಗಳ ನಿರ್ಮಾಣ, ಉದ್ಯೋಗ ಅನಿಶ್ಚಿತತೆ.. ಸಹಿತ ಹತ್ತು-ಹಲವು ಸಮಸ್ಯೆಗಳಿಗೆ ಮನಮೋಹನ್‍ರ ಅರ್ಥವ್ಯವಸ್ಥೆಯಲ್ಲಿ ಯಾವ ಉತ್ತರವೂ ಇರಲಿಲ್ಲ. ಪೋಟಾವನ್ನು ಹಿಂತೆಗೆದುಕೊಂಡು ಅದಕ್ಕಿಂತಲೂ ಕ್ರೂರ ಎನ್ನಬಹುದಾದ UAPA ಯನ್ನು ಜಾರಿಗೊಳಿಸಿದ್ದೂ ಮನಮೋಹನ್‍ರೇ. ಪಾರ್ಲಿಮೆಂಟ್‍ನಲ್ಲಿ ಚರ್ಚೆ ನಡೆಸದೆಯೇ ಆಧಾರ್ ಎಂಬ ತಲೆಹಿಡುಕ ಬಹುಕೋಟಿ ಯೋಜನೆಯನ್ನು ಜಾರಿಗೊಳಿಸಿದ್ದೂ ಇವರೇ. 1984ರ ಸಿಕ್ಖ್ ಹತ್ಯಾಕಾಂಡ, 2002ರ ಗುಜರಾತ್ ನರಮೇಧ ಮತ್ತು ಇವುಗಳ ಮಧ್ಯೆ ಹತ್ತಾರು ಕೋಮುಗಲಭೆಗಳು ನಡೆದದ್ದಾಗ್ಯೂ 'ಕೋಮುಗಲಭೆ ತಡೆ ವಿಧೇಯಕ'ವನ್ನು ಜಾರಿಗೊಳಿಸುವುದಕ್ಕೆ ಅವರು ಆಸಕ್ತಿ ತೋರಲಿಲ್ಲ. ಅಣು ಒಪ್ಪಂದವನ್ನು ಜಾರಿಗೊಳಿಸುವುದಕ್ಕೆ ಅವರು ತೋರಿದ ಉತ್ಸಾಹದ ಒಂದು ಅಂಶವನ್ನಾದರೂ ಈ ಬಗ್ಗೆ ತೋರಿದ್ದರೆ ಅದು ಎಂದೋ ಈ ದೇಶದ ಕಾನೂನಾಗಿ ಜಾರಿಯಾಗುತ್ತಿತ್ತು.
   ಬಂಡವಾಳಶಾಹಿ ಅರ್ಥವ್ಯವಸ್ಥೆಯು ಇವತ್ತು ಎಷ್ಟು ಪ್ರಾಬಲ್ಯ ಸಾಧಿಸಿದೆಯೆಂದರೆ, ಜಗತ್ತಿನಲ್ಲಿ ಯಾರೆಲ್ಲ ಅದರ ಜಾರಿಗಾಗಿ ಯತ್ನಿಸುತ್ತಾರೋ ಅವರನ್ನೆಲ್ಲಾ ಅದು ಮಹಾನ್ ಸುಧಾರಕರಂತೆ ಬಿಂಬಿಸುತ್ತದೆ. ಮನಮೋಹನ್ ಸಿಂಗ್‍ರನ್ನು ಬಿಂಬಿಸಿದ್ದೂ ಹಾಗೆಯೇ. ಇಡೀ ಸರಕಾರವೇ ಹಗರಣಗಳಿಂದ ನಲುಗಿ ಹೋಗುತ್ತಿರುವಾಗಲೂ ಮನಮೋಹನ್ ಸಿಂಗ್‍ರನ್ನು ಸಂತನಂತೆ ಬಿಂಬಿಸಲಾಯಿತು. ಇತರ ವಿಷಯಗಳನ್ನು ಮುನ್ನೆಲೆಗೆ ತಂದು ಅವರ ಅರ್ಥವ್ಯವಸ್ಥೆಯ ಸಾಧಕ-ಬಾಧಕಗಳು ಚರ್ಚೆ ಗೊಳಗಾಗದಂತೆ ನೋಡಿಕೊಳ್ಳಲಾಯಿತು. ನಿಜವಾಗಿ, ಇಂಥ ಪ್ರಯತ್ನ ನಡೆದಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡುರನ್ನು ಕೂಡ ಹೀಗೆಯೇ ಬಿಂಬಿಸಲಾಗಿತ್ತು. ವಿಶ್ವಬ್ಯಾಂಕ್‍ನ ‘ಉತ್ತಮ ವ್ಯಕ್ತಿ'ಗಳ ಪಟ್ಟಿಯಲ್ಲಿ ಅವರೂ ಸ್ಥಾನ ಪಡೆದಿದ್ದರು. 1999ರಲ್ಲಿ ಅಮೇರಿಕದ ಟೈಮ್ಸ್ ಮ್ಯಾಗಸಿನ್ ತನ್ನ ಮುಖಪುಟದಲ್ಲಿ ನಾಯ್ಡುರನ್ನು ಅಚ್ಚು ಹಾಕಿ, ‘ದಕ್ಷಿಣೇಶ್ಯದ ವರ್ಷದ ವ್ಯಕ್ತಿ' ಎಂದು ಕೊಂಡಾಡಿತ್ತು. 2000ದಲ್ಲಿ ಅಮೇರಿಕದ ಅಂದಿನ ಅಧ್ಯಕ್ಷ  ಬಿಲ್ ಕ್ಲಿಂಟನ್ ಮತ್ತು ಬ್ರಿಟನ್ನಿನ ಪ್ರಧಾನಿ ಟೋನಿ ಬ್ಲೇರ್ ಹೈದರಾಬಾದ್‍ಗೆ ಆಗಮಿಸಿ ನಾಯ್ಡುರನ್ನು ಭೇಟಿಯಾಗಿದ್ದರು. ಆಂಧ್ರದಲ್ಲಿ ನಾಯ್ಡು ಸಾಧಿಸಿದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಅವರಿಗೆ ನೋಬೆಲ್ ಪ್ರಶಸ್ತಿ ಸಿಗಬೇಕೆಂದು ಹಲವು ಪತ್ರಕರ್ತರು ಆ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದರು. ಆದರೂ ಜನರು ಕಿತ್ತೆಸೆದರು. ಪಶ್ಚಿಮ ಬಂಗಾಲದಲ್ಲಿ ಜ್ಯೋತಿ ಬಸು ಯಾವ ನೀತಿಯನ್ನು ಅಳವಡಿಸಿಕೊಂಡಿದ್ದರೋ ಅದಕ್ಕೆ ಭಿನ್ನವಾಗಿ ಮನಮೋಹನ್ ನೀತಿಯತ್ತ ಒಲವು ತೋರಿದವರು ಬುದ್ಧದೇವ ಭಟ್ಟಾಚಾರ್ಯ. ಸಿಂಗೂರ್ ಮತ್ತು ನಂದಿಗ್ರಾಮ ಸೃಷ್ಟಿಯಾದದ್ದು ಇವರ ಕಾಲದಲ್ಲೇ. ಜನರು ಬುದ್ಧದೇವ್‍ರನ್ನು ಹೊರಹಾಕಿದರು. ಇದೀಗ ಮನಮೋಹನ್.
  
2004ರಲ್ಲಿ ಮನಮೋಹನ್ ಸಿಂಗ್‍ರು ಪ್ರಧಾನಿಯಾದ ಸಂದರ್ಭದಲ್ಲಿ ಗ್ಯಾಸ್‍ನ ಬೆಲೆ ರೂ. 247 ಆಗಿತ್ತು. ಈ ಬೆಲೆಯನ್ನು ಇನ್ನು ಮುಂದೆ ಹೆಚ್ಚಳಗೊಳಿಸಬಾರದೆಂದು ಅವರ ಪತ್ನಿ ಗುರುಶರಣ್ ಕೌರ್ ಅಂದು ಸಾರ್ವಜನಿಕವಾಗಿಯೇ ವಿನಂತಿಸಿದ್ದರು. ಆದರೆ 10 ವರ್ಷಗಳ ಬಳಿಕ ಇವತ್ತು ಗ್ಯಾಸ್‍ನ ಬೆಲೆ ರೂ. 480 ಆಗಿದೆ. ಬಹುಶಃ ಮಾತು ತಪ್ಪಿದ ಪತಿಯನ್ನು ಕ್ಷಮಿಸುವುದಕ್ಕೆ ಗುರುಶರ್‍ಣ್ ಕೌರ್‍ಗೆ ಅವರದ್ದೇ ಆದ ಅನಿವಾರ್ಯತೆಗಳಿರಬಹುದು. ಹಾಗಂತ, ಜನರಿಗೆ ಅಂಥ ಅನಿವಾರ್ಯತೆಗಳೇನೂ ಇಲ್ಲವಲ್ಲ.

No comments:

Post a Comment