Wednesday, August 3, 2016

ಇಸ್ಲಾಮ್ ಮತ್ತು ಶಾಂತಿ: ಕಾಡುವ ಪ್ರಶ್ನೆಗಳ ಜೊತೆ..

          ಕೆಲವು ಆರೋಪಗಳಿವೆ
1. ಇಸ್ಲಾಮ್ ಎಂಬುದು ಪರಮಾಧಿಕಾರವನ್ನು ಪ್ರತಿಪಾದಿಸುವ ಧರ್ಮ. ರಾಜಕೀಯ, ಆರ್ಥಿಕ, ಸಾಮಾಜಿಕ, ಸೈನಿಕ ಸಹಿತ ಪ್ರತಿಯೊಂದನ್ನೂ ಧರ್ಮದ ಚೌಕಟ್ಟಿನೊಳಗೆ ತಂದು ವಿಶ್ಲೇಷಿಸುವ ಅಂಧ ಮನಸ್ಥಿತಿಯನ್ನು ಅದು ಪ್ರತಿಪಾದಿಸುತ್ತದೆ.
2. ಇಸ್ಲಾಮ್ ಇತರೆಲ್ಲ ಧರ್ಮಗಳನ್ನು ಮತ್ತು ಸಿದ್ಧಾಂತಗಳನ್ನು ಅಧಮ(ಕೀಳು)ವಾಗಿ ಕಾಣುತ್ತದೆ. ಅದು ಒಮ್ಮೆ ಒಂದು ದೇಶದ ಮೇಲೆ ಪ್ರಾಬಲ್ಯ ಸ್ಥಾಪಿಸಿದರೆ ಬಳಿಕ ತನ್ನ ಸಿದ್ಧಾಂತವನ್ನು ಒಪ್ಪದ ಯಾರನ್ನೂ ಅದು ಸಹಿಸುವುದಿಲ್ಲ.
3. ಮುಸ್ಲಿಮೇತರರಿಗೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆ ಹಲವು ಪಟ್ಟು ವೇಗದಲ್ಲಿ ಹೆಚ್ಚಳಗೊಳ್ಳುತ್ತಿದೆ.
4. ಇಸ್ಲಾಮಿನ ವಿರುದ್ಧದ ಟೀಕೆ, ವಿಮರ್ಶೆ, ವ್ಯಂಗ್ಯ, ವ್ಯಂಗ್ಯಚಿತ್ರ ಇತ್ಯಾದಿಗಳನ್ನು ಮುಸ್ಲಿಮರು ಅಪರಾಧವಾಗಿ ಕಾಣುತ್ತಾರೆ ಮತ್ತು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಇಸ್ಲಾಮಿನಲ್ಲಿ ವಾಕ್‍ಸ್ವಾತಂತ್ರ್ಯವಿಲ್ಲ.
5. ಇಸ್ಲಾಮ್ ಈಗ ಚಾಲ್ತಿಯಲ್ಲಿರುವ ಸಾಮಾನ್ಯ ಕಾನೂನಿನ ಬದಲು ಶರಿಯಾ ಕಾನೂನನ್ನು ಜಾರಿಗೆ ತರಲು ಕರೆ ಕೊಡುತ್ತದೆ. ಅದಾದರೋ ಅತ್ಯಂತ ಕ್ರೂರಿ, ಅಪ್ರಜಾತಾಂತ್ರಿಕ, ಫ್ಯಾಸಿಸ್ಟ್.
6. ಇಸ್ಲಾಮ್ ಅಸ್ತಿತ್ವಕ್ಕೆ ಬಂದಿರುವುದು ಶಾಂತಿಯುತ ಪ್ರಚಾರದಿಂದ ಅಲ್ಲ, ಬದಲು ವಂಚನೆ, ಬೆದರಿಕೆ, ಬಲವಂತ, ಹಿಂಸೆ ಮತ್ತು ಭಯೋತ್ಪಾದನೆಗಳ ಮೂಲಕ.
           ಇವು ಕೆಲವು ಉದಾಹರಣೆಗಳಷ್ಟೇ. ಆರೋಪಗಳ ಪಟ್ಟಿ ಇನ್ನೂ ಉದ್ದವಿದೆ. ಹಾಗಂತ, ಈ ಆರೋಪಗಳನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸುವುದು ತೀರಾ ಸುಲಭ. ಮಾತ್ರವಲ್ಲ, ಕರ್ಮಠ ವಿದ್ವಾಂಸರು ಮತ್ತು ಸಾಮಾನ್ಯ ಮುಸ್ಲಿಮರು ಹೀಗೆ ತಿರಸ್ಕರಿಸುವುದನ್ನೇ ಇಂಥ ಆರೋಪಗಳಿಗೆ ತಕ್ಕ ಉತ್ತರವೆಂದು ನಂಬಿಕೊಂಡು ಬಂದದ್ದೂ ಇದೆ. ಆದರೆ ಹೀಗೆ ತಿರಸ್ಕರಿಸುವಾಗಲೂ ಕೆಲವೊಮ್ಮೆ ತಿರಸ್ಕರಿಸುವವರಲ್ಲೇ ಕೆಲವೊಂದು ಪ್ರಶ್ನೆಗಳು ಮನದೊಳಗೆ ಮೂಡುವುದಿದೆ. ಇಂಥ ಆರೋಪಗಳು ಹುಟ್ಟಿಕೊಂಡದ್ದು ಹೇಗೆ ಮತ್ತು ಯಾಕೆ? ಎಲ್ಲಕ್ಕೂ ಇಸ್ಲಾಮ್ ವಿರೋಧಿ ಪೂರ್ವಗ್ರಹ ಕಾರಣವೇ? ಅಷ್ಟಕ್ಕೂ, ಇಸ್ಲಾಮನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಮಾನದಂಡ ಯಾವುದು- ಕುರ್‍ಆನ್ ಮತ್ತು ಹದೀಸ್ ಮಾತ್ರವೇ? ಅದರ ಅನುಯಾಯಿಗಳು ಅದರ ಮಾನದಂಡವಾಗುವುದಿಲ್ಲವೇ? ಅನುಯಾಯಿಗಳನ್ನು ನೋಡಿಕೊಂಡು ಯಾರಾದರೂ ಇಸ್ಲಾಮನ್ನು ವಿಶ್ಲೇಷಿಸಲು ಹೊರಡುವಾಗ, ‘ನೀವು ಅವರನ್ನು ನೋಡಬೇಡಿ, ಕುರ್‍ಆನನ್ನು ನೋಡಿ..' ಎಂದು ಹೇಳುವುದು ಎಷ್ಟರ ವರೆಗೆ ಸಮರ್ಥನೀಯ? ಇಂಥ ಸಮರ್ಥನೆ ಜನರನ್ನು ಎಲ್ಲಿಯ ವರೆಗೆ ಸಮಾಧಾನಪಡಿಸೀತು? ಹೀಗೆ ಮಾನದಂಡವಾಗದ ಅಥವಾ ಕುರ್‍ಆನ್ ವಿರೋಧಿಯಾದ ಅನುಯಾಯಿಗಳು ಕುರ್‍ಆನ್‍ಗೆ ಹೇಗೆ ಹುಟ್ಟಿಕೊಂಡರು? ಅವರೇಕೆ ಇನ್ನೂ ಕುರ್‍ಆನಿನ ಅನುಯಾಯಿಗಳಾಗಿಯೇ ಗುರುತಿಸಿಕೊಳ್ಳುತ್ತಿದ್ದಾರೆ?... ಇಂಥ ಪ್ರಶ್ನೆಗಳು ಕೂಡ ಉದ್ಭವವಾಗುವುದು ಸಹಜ.
        ಇಸ್ಲಾಮ್ ಅಂದರೆ ಶಾಂತಿ ಎಂದರ್ಥ ಎಂದು ವಾದಿಸುವ ಮೂಲಕ ಇಸ್ಲಾಮ್ ಆಮೂಲಾಗ್ರ ಶಾಂತಿಯುತವಾಗಿದೆ ಎಂದು ಸಮರ್ಥಿಸುವುದು ತೀರಾ ಬಾಲಿಶವಾಗುತ್ತದೆ. ಹೆಸರೊಂದು ಯಾವ ಧರ್ಮವನ್ನೂ ಶಾಂತಿಯುತಗೊಳಿಸುವುದಿಲ್ಲ. ಹೆಸರಿಗೆ ಪೂರಕವಾಗಿ ಅದರ ಸಿದ್ಧಾಂತ, ನೀತಿ-ನಿಲುವುಗಳೂ ಇರಬೇಕು. ಆ ಸಿದ್ಧಾಂತದಂತೆ ಶಾಂತಿಯುತ ಸಮಾಜವನ್ನು ಕಟ್ಟಿ ಬೆಳೆಸಿದ ಒಂದು ಕುರುಹೂ ಇರಬೇಕು. ಇಸ್ಲಾಮಿನ ಮಟ್ಟಿಗೆ ಅಂಥದ್ದೊಂದು ಶಾಂತಿಯುತ ಸಮಾಜವನ್ನು ನಿರ್ಮಿಸಿ ತೋರಿಸಲು ಸಾಧ್ಯವಾಗಿದೆ ಎಂಬುದೇ ಅದರ ಮೇಲಿನ ಆರೋಪವನ್ನು ತಿರಸ್ಕರಿಸುವುದಕ್ಕೆ ನಮ್ಮಲ್ಲಿರುವ ಆಧಾರ. ಇಸ್ಲಾಮ್ 2015ರಲ್ಲಿ ಇರಾಕ್‍ನಲ್ಲೋ, ಸಿರಿಯಾದಲ್ಲೋ, ಅಫಘಾನ್, ಪಾಕ್, ನೈಜೀರಿಯಾ, ಲಿಬಿಯಾದಲ್ಲೋ ಉದ್ಭವವಾದದ್ದಲ್ಲ. ಅದಕ್ಕೊಂದು ದೀರ್ಘ ಇತಿಹಾಸವಿದೆ. ಈ ಇತಿಹಾಸದಲ್ಲಿ ಪ್ರವಾದಿ ಆ್ಯಡಮ್ (ಆದಮ್) ಬರುತ್ತಾರೆ. ನೋಹಾ (ನೂಹ್), ಅಬ್ರಹಾಮ್ (ಇಬ್ರಾಹೀಮ್), ಮೋಸೆಸ್ (ಮೂಸಾ), ಯೇಸು (ಈಸಾ) ಮತ್ತು ಪ್ರವಾದಿ ಮುಹಮ್ಮದ್ ಇರುತ್ತಾರೆ. ಈ ಇತಿಹಾಸದ ಪುರಾತನ ಭಾಗವನ್ನು ಪಕ್ಕಕ್ಕಿಟ್ಟು ಪ್ರವಾದಿ ಮುಹಮ್ಮದ್‍ರಿಂದ ಅವಲೋಕನಕ್ಕೆ ಇಳಿದರೂ ಒಂದು ಶಾಂತಿಯುತ ಮತ್ತು ಅತ್ಯಂತ ಮಾದರಿಯೋಗ್ಯ ಸಮಾಜವೊಂದರ ದರ್ಶನವಾಗುವುದು ಖಂಡಿತ. ಪ್ರವಾದಿ ಮುಹಮ್ಮದ್‍ರ ನೇತೃತ್ವದಲ್ಲಿ ಮದೀನಾದಲ್ಲಿ ಒಂದು ಸರಕಾರ ರಚನೆಯಾಗುತ್ತದೆ. ಆ ಸರಕಾರದ ಸಂವಿಧಾನ ಎಷ್ಟು ಮಾದರೀಯೋಗ್ಯವಾಗಿತ್ತೆಂದರೆ,
1. ಧರ್ಮ, ವರ್ಣ, ಭಾಷೆಯ ಹಂಗಿಲ್ಲದೇ ಎಲ್ಲರೂ ಶಾಂತಿಯಿಂದ ಜೀವನ ಸಾಗಿಸಬೇಕು.
2. ಪ್ರತಿಯೊಬ್ಬರಿಗೂ ಅವರ ನಂಬಿಕೆ ಹಾಗೂ ಆಚರಣೆಗಳಂತೆ ನಡಕೊಳ್ಳುವ ಸ್ವಾತಂತ್ರ್ಯ ಇರುತ್ತದೆ.
3. ಹಿಂಸೆಯ ಸರ್ವ ಬಾಗಿಲುಗಳನ್ನೂ ಮುಚ್ಚಲಾಗುತ್ತದೆ.
4. ಹೊರಗಿನಿಂದ ನಮ್ಮ ಮೇಲೆ ಯಾರಾದರೂ ಆಕ್ರಮಣ ನಡೆಸಿದರೆ ಅದನ್ನು ಒಗ್ಗಟ್ಟಾಗಿ ಎದುರಿಸಲಾಗುತ್ತದೆ..
       ಎಂಬೆಲ್ಲಾ ಜಾತ್ಯತೀತ ಮತ್ತು ಪರಮ ಸಹಿಷ್ಣುತೆಯಿಂದ ಕೂಡಿದ ಪರಿಚ್ಛೇದಗಳನ್ನು ಅದು ಒಳಗೊಂಡಿತ್ತು. ಇಸ್ಲಾಮ್ ಶಾಂತಿಯ ವಿರೋಧಿ ಮತ್ತು ಪರಮ ಅಸಹಿಷ್ಣುವಾಗಿರುತ್ತಿದ್ದರೆ ಇಂಥದ್ದೊಂದು ಸಂವಿಧಾನವನ್ನು ಪ್ರವಾದಿ ಮುಹಮ್ಮದ್ ಮಂಡಿಸಲು ಸಾಧ್ಯವೇ ಇರಲಿಲ್ಲ. ಪವಿತ್ರ ಕುರ್‍ಆನ್ ಒಂದಕ್ಕಿಂತ ಹೆಚ್ಚು ಕಡೆ ಬಹುಸಂಸ್ಕøತಿಯನ್ನು ಒಪ್ಪಿಕೊಳ್ಳುವ ಮತ್ತು ಅದನ್ನು ಪ್ರಕೃತಿ ಸಹಜವೆಂದು ಸ್ವೀಕರಿಸುವ ವಚನಗಳನ್ನು ಪ್ರಸ್ತಾಪಿಸಿದೆ.
1. ನನ್ನ ಧರ್ಮ ನನಗೆ, ನಿಮ್ಮ ಧರ್ಮ ನಿಮಗೆ (109: 1-6)
2. ಧರ್ಮದಲ್ಲಿ ಯಾವುದೇ ಬಲಾತ್ಕಾರವಿಲ್ಲ (2: 256)
3. ಓ ಮುಸಲ್ಮಾನರೇ, ಅಲ್ಲಾಹನ ಹೊರತು ಇತರರನ್ನು ಪ್ರಾರ್ಥಿಸುತ್ತಿರುವವರನ್ನು ತೆಗಳಬೇಡಿ. (6: 107)
4. ಮುಹಮ್ಮದರೇ, ನೀವು ಉಪದೇಶ ಮಾಡುತ್ತಾ ಸಾಗಿ. ನೀವು ಕೇವಲ ಉಪದೇಶಕರು. ನಿಮ್ಮ ಉಪದೇಶವನ್ನು ಒಪ್ಪದವರ ಮೇಲೆ ನೀವು ಬಲಾತ್ಕಾರ ಮಾಡುವವರಲ್ಲ. (88: 21, 22)
5. ಪ್ರವಾದಿಯವರೇ, ನಿಮ್ಮ ಮೇಲಂತೂ ವಿಷಯವನ್ನು ತಲುಪಿಸಿ ಬಿಡುವ ಹೊಣೆಗಾರಿಕೆ ಮಾತ್ರ ಇದೆ. (42: 48)
6. ದೇವನು ಸೌಜನ್ಯ ನೀತಿಯನ್ನನುಸರಿಸುವವರ ಜೊತೆಗಿದ್ದಾನೆ. (16: 128)
7. ಪೈಗಂಬರರೇ, ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಕಳುಹಿಸಿಕೊಟ್ಟಿದ್ದೇನೆ. (3: 85)
8. ಒಬ್ಬ ಮಾನವನ ಕೊಲೆಯ ಬದಲಿಗೆ ಅಥವಾ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವ ಕಾರಣಕ್ಕಾಗಿ ಹೊರತು ಯಾರಾದರೂ ಒಬ್ಬ ಮನುಷ್ಯನನ್ನು ಕೊಂದರೆ ಅವನು ಸಕಲ ಮಾನವ ಕೋಟಿಯನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ. (5: 32)
9. ಮಾನವರೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು (49: 13)
10. ಅಲ್ಲಾಹನು ನ್ಯಾಯ ಪರಿಪಾಲಕರನ್ನು ಪ್ರೀತಿಸುತ್ತಾನೆ. (49: 9-10)
11. ಸತ್ಯವಿಶ್ವಾಸಿಗಳೇ, ನೀವು ನ್ಯಾಯದ ಧ್ವಜವಾಹಕರಾಗಿರಿ. ನಿಮ್ಮ ನ್ಯಾಯ ಮತ್ತು ಸಾಕ್ಷ್ಯವು ಸ್ವತಃ ನಿಮ್ಮ ಅಥವಾ ನಿಮ್ಮ ಮಾತಾಪಿತರ ಮತ್ತು ನಿಮ್ಮ ಸಂಬಂಧಿಕರ ವಿರುದ್ಧವಾಗಿದ್ದರೂ ಸರಿಯೇ. (4: 135)
       ಇಂಥ ಇನ್ನೂ ಹತ್ತು-ಹಲವು ಸಹಿಷ್ಣುತೆಯ ಮತ್ತು ಶಾಂತಿ ಪ್ರೇರಕ ವಚನಗಳ ಉದಾಹರಣೆಗಳನ್ನು ಕೊಡಬಹುದು. ಕೆಡುಕುಗಳಿಗೆ ಅತ್ಯುತ್ತಮ ಒಳಿತಿನಿಂದ ಪ್ರತಿಕ್ರಿಯಿಸಿ ಎಂದು ಹೇಳಿ ಕೊಟ್ಟವರು ಪ್ರವಾದಿ ಮುಹಮ್ಮದ್. ಅವರೊಂದು ಪ್ರಾರ್ಥನೆಯನ್ನು ಕಲಿಸಿದ್ದಾರೆ,
       ‘ಅಲ್ಲಾಹನೇ, ನೀನು ಶಾಂತಿಯ ಸಂಕೇತ ಮತ್ತು ಶಾಂತಿಯನ್ನು ದಯಪಾಲಿಸುವವ. ಆದ್ದರಿಂದ ನನಗೆ ಶಾಂತಿಯುತ ಬದುಕನ್ನು ನೀಡು.’ (ಅಲ್ಲಾಹುಮ್ಮ ಅಂತಸ್ಸಲಾಮ್ ವ ಮಿಂಕಸ್ಸಲಾಮ್ ತಬಾರಕ್ತ ಯಾದಲ್ ಜಲಾಲಿ ವಲ್ ಇಕ್ರಾಮ್)
ಪ್ರವಾದಿ ಮುಹಮ್ಮದರು ಮದೀನಾ ಮತ್ತು ಮಕ್ಕಾದಲ್ಲಿ ಸಂಪೂರ್ಣ ಪ್ರಾಬಲ್ಯವನ್ನು ಸ್ಥಾಪಿಸಿದ ಬಳಿಕ ಒಂದು ಘಟನೆ ನಡೆಯುತ್ತದೆ. ಸಿಬಿರಿಕ್ಕಾನ್ ಬಿನ್ ಬದ್‍ರ್ ಎಂಬ ಕವಿ ಪ್ರವಾದಿಯವರನ್ನು ನಿಂದಿಸಿ ಪದ್ಯ ರಚಿಸುತ್ತಾರೆ ಮತ್ತು ಬಹಿರಂಗ ವೇದಿಕೆಯಲ್ಲಿ ಅದನ್ನು ಹಾಡುತ್ತಾರೆ. ಆದರೆ ಪ್ರವಾದಿಯವರು ಅದಕ್ಕೆ ಪ್ರತಿಯಾಗಿ ಖಡ್ಗ ಎತ್ತುವುದಿಲ್ಲ. ಹಸ್ಸಾನ್ ಬಿನ್ ಸಾಬಿತ್ ಎಂಬ ತನ್ನ ಆಪ್ತ ಕವಿಯ ಮೂಲಕ ಆ ಪದ್ಯಕ್ಕೆ ಪ್ರತಿ ಪದ್ಯವನ್ನು ರಚಿಸಿ ಹಾಡಿಸುತ್ತಾರೆ. ಪ್ರವಾದಿಯವರನ್ನು ನಿತ್ಯ ನಿಂದಿಸುತ್ತಿದ್ದ ಅರೇಬಿಯಾದ ಪ್ರಮುಖ ಭಾಷಣಕಾರ ಸುಹೈಲ್ ಬಿನ್ ಅಮ್ರ್ ರ ವಿರುದ್ಧ ಯಾವ ಕ್ರಮವನ್ನೂ ಅವರು ಕೈಗೊಳ್ಳುವುದಿಲ್ಲ. ತನ್ನ ಮೇಲೆ ನಿತ್ಯ ಕಸ ಎಸೆಯುತ್ತಿದ್ದವರ ವಿರುದ್ಧ ಪ್ರವಾದಿ ಏನನ್ನೂ ಮಾಡುವುದಿಲ್ಲ. ಪ್ರವಾದಿಯವರ ಜೀವನದ ಉದ್ದಕ್ಕೂ ತನ್ನ ವಿರೋಧಿಗಳನ್ನು ಕ್ಷಮಿಸಿದ ಮತ್ತು ಟೀಕೆಯನ್ನು ಬದುಕಿನ ಭಾಗವಾಗಿ ಪರಿಗಣಿಸಿದ ಹತ್ತಾರು ನಿದರ್ಶನಗಳಿವೆ. ಅವರು ವೈಚಾರಿಕ ಭಿನ್ನಾಭಿಪ್ರಾಯವನ್ನು ಗೌರವಿಸಿದರೇ ಹೊರತು ದಮನಿಸಲಿಲ್ಲ. ವಾಕ್‍ಸ್ವಾತಂತ್ರ್ಯವನ್ನು ಅವರು ಇಸ್ಲಾಮ್ ವಿರೋಧಿ ಎಂದು ಅಂದುಕೊಂಡಿರಲೂ ಇಲ್ಲ. ಪವಿತ್ರ ಕುರ್‍ಆನ್ ಅಂತೂ ಪ್ರತೀಕಾರಕ್ಕಿಂತ ಕ್ಷಮೆ ಉತ್ತಮವೆಂದು ಪ್ರಬಲವಾಗಿ ಪ್ರತಿಪಾದಿಸುತ್ತದೆ (6:128). ಬಹುಶಃ ಪ್ರವಾದಿಯವರ ಈ ಮಾದರಿಯಿಂದಾಗಿಯೇ ಕೇವಲ ಒಂದು ಶತಮಾನಕ್ಕಿಂತಲೂ ಕಡಿಮೆ ಅವಧಿಯಲ್ಲಿ ಫ್ರಾನ್ಸ್ ನ ಗಡಿಯಿಂದ ಚೀನಾದ ಗಡಿಯವರೆಗೆ ವರ್ಚಸ್ಸು ಬೆಳೆಸಿಕೊಳ್ಳಲು ಇಸ್ಲಾಮ್‍ಗೆ ನೆರವಾದದ್ದು. ಜನರನ್ನು ಸಮಾನತೆಯ ಆಧಾರದಲ್ಲಿ- ಬಣ್ಣ, ಧರ್ಮ ಮತ್ತು ರಾಷ್ಟ್ರೀಯತೆಯ ಹಂಗಿಲ್ಲದೆಯೇ ಜೋಡಿಸಲು ಪ್ರವಾದಿ ಮುಹಮ್ಮದ್ ಯಶಸ್ವಿಯಾಗಿದ್ದರು. ಅವರು ರಾಜಕೀಯ ಮತ್ತು ಜೈವಿಕ ಗಡಿಗಳನ್ನು ಕಿತ್ತೆಸೆದು ಅಪ್ಪಟ ಸಮಾನ ನ್ಯಾಯದ ಸಮಾಜವೊಂದನ್ನು ಕಟ್ಟಿ ತೋರಿಸಿದ್ದರು.
        ಇಸ್ಲಾಮ್ ಒಂದು ಶಾಂತಿಯುತ ಸಮಾಜದ ಭರವಸೆಯನ್ನು ಕೊಡುತ್ತದೆ. ಆ ಭರವಸೆಗೆ ಅದು ಮೂಲ ಆಧಾರವಾಗಿ ಪರಿಗಣಿಸಿರುವುದು ಸಮಾನ ನ್ಯಾಯ ವ್ಯವಸ್ಥೆಯನ್ನು. ಒಂದು ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣಗೊಳ್ಳುವುದು ಅಥವಾ ಎಲ್ಲೆಡೆ ಅತೃಪ್ತಿ ಕಾಣಿಸುವುದು ಆ ಸಮಾಜದಲ್ಲಿ ನ್ಯಾಯವು ತೂಗುಯ್ಯಾಲೆಯಲ್ಲಿದ್ದಾಗ. ನ್ಯಾಯವು ಉಳ್ಳವರು, ಬಲಾಢ್ಯರು, ಅಧಿಕಾರಸ್ಥರು ಇತ್ಯಾದಿ ಇತ್ಯಾದಿಗಳ ಕೈಯಲ್ಲಿ ಸವಕಲು ಆದಾಗ. ನ್ಯಾಯ ಸಮರ್ಪಕವಾಗಿಲ್ಲದ ಕಡೆ ಪ್ರತಿಭಟನೆ, ದಂಗೆ, ಭಯೋತ್ಪಾದನೆ ಕಾಣಿಸಿಕೊಂಡಿರುವುದು ಇತಿಹಾಸದುದ್ದಕ್ಕೂ ಕಾಣಸಿಗುತ್ತದೆ. ಪ್ರತೀ ಕ್ರಾಂತಿಗಳ ಹಿಂದೆಯೂ ನ್ಯಾಯ ನಿರಾಕರಣೆಯ ಇತಿಹಾಸವಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿಂದೆ ಕೆಲಸ ಮಾಡಿರುವುದೂ ಇದುವೇ. ಮೇಲ್ವರ್ಗದ ಮೇಲೆ ದಲಿತರ ಬಂಡಾಯಕ್ಕೆ ಕಾರಣವೂ ಇದುವೇ. ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ಗಳಿಗೆ, ಸಿದ್ಧಲಿಂಗಯ್ಯನವರ ‘ಇಕ್ರಲಾ ಒದಿರ್ಲಾ’ ಹಾಡಿಗೆ, ನಾರಾಯಣಗುರು, ರಾಜಾರಾಂ ಮೋಹನ್ ರಾಯ್, ಅಂಬೇಡ್ಕರ್‍ರ ಪ್ರತಿ ಚಳವಳಿಗಳಿಗೆ ಹಿನ್ನೆಲೆಯಾಗಿರುವುದೂ ಇದುವೇ. ಮೂರು ವರ್ಷಗಳ ಹಿಂದೆ ಅರಬ್ ಜಗತ್ತನ್ನು ತಲ್ಲಣಗೊಳಿಸಿದ ಅರಬ್ ಕ್ರಾಂತಿಯ ಹಿಂದಿರುವುದೂ ಇದುವೇ. ಹೆಚ್ಚೇಕೆ, ಪ್ರವಾದಿ ಮುಹಮ್ಮದ್‍ರನ್ನು ಆ ಸಮಾಜವು ಒಂದು ಭರವಸೆಯಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ ಪ್ರಮುಖ ಕಾರಣವೂ ನ್ಯಾಯ ನಿರಾಕರಣೆಯೇ. ಆದ್ದರಿಂದಲೇ, ಪ್ರವಾದಿ ಮುಹಮ್ಮದ್‍ರು ಬದುಕಿನುದ್ದಕ್ಕೂ ನ್ಯಾಯದ ವಿಷಯದಲ್ಲಿ ನಿಷ್ಠುರ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಪವಿತ್ರ ಕುರ್‍ಆನ್ ಅಂತೂ ನ್ಯಾಯದ ಪರ ಎಷ್ಟು ಪ್ರಬಲವಾಗಿ ಮಾತಾಡುತ್ತದೆಂದರೆ, ‘ನ್ಯಾಯ ನಿಮ್ಮ ಹೆತ್ತವರ ವಿರುದ್ಧ ಇದ್ದರೆ ನೀವು ನ್ಯಾಯದ ಪರ ನಿಲ್ಲಬೇಕೇ ಹೊರತು ಹೆತ್ತವರ ಪರ ಅಲ್ಲ' (4: 135) ಎಂದು ತಾಕೀತು ಮಾಡುತ್ತದೆ. ಪ್ರವಾದಿ ಬದುಕಿನಲ್ಲಿ ಈ ನಿಷ್ಠುರ ನ್ಯಾಯಕ್ಕೆ ಸಾಕಷ್ಟು ಉದಾಹರಣೆಗಳಿವೆ.
        ಬಶೀರ್ ಬಿನ್ ಉಬೈರಿಕ್ ಎಂಬ ಮುಸ್ಲಿಮ್ ವ್ಯಕ್ತಿ ಓರ್ವ ಮುಸ್ಲಿಮನ ಯುದ್ಧ ಕವಚವನ್ನು ಕದ್ದು ಅದನ್ನು ಯಹೂದಿಯ ಬಳಿ ಅಡವು ಇಡುತ್ತಾನೆ. ಕವಚದ ಮಾಲಿಕ ಹುಡುಕತೊಡಗುತ್ತಾನೆ. ಕೊನೆಗೆ ಆ ಕವಚ ಯಹೂದಿಯ ಬಳಿ ಸಿಗುತ್ತದೆ. ಪ್ರವಾದಿಯವರ ಬಳಿ ದೂರು ಹೋಗುತ್ತದೆ. ಬಶೀರ್ ಬಿನ್ ಉಬೈರಿಕ್ ತಾನು ಕದ್ದಿಲ್ಲ ಅನ್ನುತ್ತಾನೆ. ಯಹೂದಿಯಂತೂ ಬಶೀರ್ ಬಿನ್ ಉಬೈರಿಕ್ ತನ್ನ ಬಳಿ ಅಡವು ಇಟ್ಟ ನಿಜ ಸಂಗತಿಯನ್ನು ಹೇಳುತ್ತಾನೆ. ಆದರೆ ಬಶೀರ್‍ನನ್ನು ಮುಸ್ಲಿಮರ ಒಂದು ದೊಡ್ಡ ಗುಂಪು ಬೆಂಬಲಿಸುತ್ತದೆ. ಅಲ್ಲದೇ ಯಹೂದಿಯ ಪರ ತೀರ್ಪು ಕೊಟ್ಟರೆ ಮುಸ್ಲಿಮರ ಬಗ್ಗೆ ಭರವಸೆ ಕಡಿಮೆಯಾಗಿ ಜನರು ಯಹೂದಿ ಧರ್ಮದ ಬಗ್ಗೆ ಆಕರ್ಷಿತರಾದಾರೆಂದು ಪ್ರವಾದಿಯವರ ಮೇಲೆ ಒತ್ತಡ ಹೇರುತ್ತದೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸುವಾಗ ಪ್ರವಾದಿಯವರಿಗೆ ಬಶೀರ್‍ನದ್ದೇ ನಿಜ ಇರಬಹುದೆಂದು ಅನಿಸುತ್ತದೆ. ಹಾಗೆ ಈತನ ಪರ ತೀರ್ಪು ಕೊಡುವ ಯೋಚನೆಯಲ್ಲಿದ್ದಾಗ ಪ್ರವಾದಿಯವರಿಗೆ ಪವಿತ್ರ ಕುರ್‍ಆನ್ ಅವತೀರ್ಣವಾಗುತ್ತದೆ ಮತ್ತು ಯಹೂದಿಯ ಪರ ನಿಂತು ಅದು ಮಾತಾಡುತ್ತದೆ. (4: 105-112) ಇನ್ನೊಂದು ಪ್ರಮುಖ ಘಟನೆಯೂ ಇದೆ.
        ಪ್ರವಾದಿಯವರ ಬಳಿಗೆ ಕಳ್ಳತನದ ದೂರೊಂದು ಬರುತ್ತದೆ. ಕದ್ದವಳು ಓರ್ವ ಉನ್ನತ ಜನಾಂಗದ ಮಹಿಳೆ. ಸಹಜವಾಗಿಯೇ ಅದು ಆ ಜನಾಂಗದಲ್ಲಿ ಚರ್ಚೆಗೀಡಾಗುತ್ತದೆ. ಕೊನೆಗೆ ಪ್ರವಾದಿಯವರಲ್ಲಿ ಆ ಮಹಿಳೆಯ ಪರ influence  ಮಾಡುವುದೆಂದೂ ಅದಕ್ಕಾಗಿ ಪ್ರವಾದಿಯವರ ಬಳಿ ಅವರ ಪರಿಚಯಸ್ಥರಾದ ಓರ್ವರನ್ನು ಕಳುಹಿಸಿಕೊಡುವುದೆಂದೂ ನಿರ್ಧಾರವಾಗುತ್ತದೆ. ಪ್ರವಾದಿ ಆ influence  ಪ್ರಯತ್ನವನ್ನು ತೀವ್ರವಾಗಿ ಖಂಡಿಸುತ್ತಾರೆ. ‘ಸಮಾಜದಲ್ಲಿ ಅಶಾಂತಿ, ಕ್ರೌರ್ಯಕ್ಕೆ ಮೂಲ ಕಾರಣವೇ ನ್ಯಾಯ ನಿರಾಕರಣೆ. ಹಿಂದಿನ ಕಾಲದಲ್ಲಿ ತಪ್ಪಿತಸ್ಥರು ಪ್ರಭಾವಿಗಳಾದರೆ ಬಿಟ್ಟುಬಿಡಲಾಗುತ್ತಿತ್ತು ಮತ್ತು ಬಡವರಾದರೆ ಉಗ್ರವಾಗಿ ಶಿಕ್ಷಿಸಲಾಗುತ್ತಿತ್ತು’ ಎಂದು ಅವರು ಹೇಳುತ್ತಾರಲ್ಲದೇ, ‘ತನ್ನ ಮಗಳು ಫಾತಿಮಾ ಕದ್ದರೂ ತಾನು ಕಠಿಣ ಶಿಕ್ಷೆ ನೀಡುವೆ’ನೆಂದು ಸಾರುತ್ತಾರೆ. ಆ ಮೂಲಕ ನ್ಯಾಯ ಎಲ್ಲರಿಗೂ ಸಮಾನ - ಅದರಲ್ಲಿ ಶ್ರೀಮಂತ, ಬಡವ, ಯಹೂದಿ, ಮುಸ್ಲಿಮ್ ಎಂಬೀ ಬೇಧವಿಲ್ಲ ಎಂಬ ಪ್ರಬಲ ಸಂದೇಶ ರವಾನಿಸುತ್ತಾರೆ.
       ಇಸ್ಲಾಮನ್ನು ಪವಿತ್ರ ಕುರ್‍ಆನ್ ಮತ್ತು ಪ್ರವಾದಿಯವರ ಜೀವನದ ಮೂಲಕ ಅಳೆಯುವುದಾದರೆ, ಅಲ್ಲೊಂದು ಶಾಂತಿಯ ಅನುಭವ ಸಿಗುತ್ತದೆ. ಅಲ್ಲೊಂದು ಆಕರ್ಷಣೆಯಿದೆ. ಸದಾ ಜಗಳವಾಡುತ್ತಿದ್ದ ಮತ್ತು ಯುದ್ಧದಲ್ಲಿ ನಿರತರಾಗುತ್ತಿದ್ದ ಸಮಾಜವನ್ನು ಪ್ರವಾದಿ ಬದಲಾಯಿಸಿದ್ದು ಖಡ್ಗದ ಮೂಲಕವೂ ಅಲ್ಲ, ಹಿಪ್ನೋಟಿಸಂನ ಮೂಲಕವೂ ಅಲ್ಲ, ಅದು ಕೇವಲ ನ್ಯಾಯ ಪ್ರತಿಪಾದನೆಯ ಮೂಲಕ. ಇವತ್ತಿಗೂ ಅದರ ಸೂಚನೆಯನ್ನು ಮುಸ್ಲಿಮರಲ್ಲಿ ಕಾಣಬಹುದು. ಅನ್ಯಾಯವನ್ನು ಸಹಿಸದ ಮನಸ್ಥಿತಿ ಅದು. ತೀರಾ ಬಡವನು ಕೂಡ ಅನ್ಯಾಯವನ್ನು ಪ್ರಶ್ನಿಸುವ, ಪ್ರತಿಭಟಿಸುವ ಛಾತಿಯನ್ನು ತೋರಿಸುತ್ತಾನೆ. ಅರಬ್ ರಾಷ್ಟ್ರಗಳಲ್ಲಿ ಇವತ್ತು ಅಶಾಂತಿಯಿದ್ದರೆ ಅದರ ಹಿಂದೆ ನ್ಯಾಯ ನಿರಾಕರಣೆಯ ಉದ್ದದ ಪಟ್ಟಿಯೇ ಇದೆ. ಅಮೇರಿಕ, ಇಸ್ರೇಲ್, ನ್ಯಾಟೋ, ವಿಶ್ವಸಂಸ್ಥೆ.. ಹೀಗೆ ನ್ಯಾಯ ನಿರಾಕರಿಸಿದವರ ದೊಡ್ಡದೊಂದು ಪಟ್ಟಿಯೊಂದಿಗೆ ಅಲ್ಲಿನ ಮಂದಿ ತಿರುಗಾಡುತ್ತಿದ್ದಾರೆ. ತಮ್ಮನ್ನಾಳುವ ಸರ್ವಾಧಿಕಾರಿಗಳ ಮೇಲೂ ಅವರು ಆರೋಪ ಹೊರಿಸುತ್ತಿದ್ದಾರೆ. ಇದರ ಜೊತೆಗೇ ಇತರ ಕಾರಣಗಳೂ ಸೇರಿಕೊಂಡು ಅರಬ್ ವಲಯ ಅಶಾಂತಿಯಲ್ಲಿದೆ. ನಿಜವಾಗಿ, ಆ ಅಶಾಂತಿಗೆ ಇಸ್ಲಾಮ್ ಕಾರಣ ಖಂಡಿತ ಅಲ್ಲ. ಅದಕ್ಕೆ ಸ್ಥಳೀಯವಾದ ಮತ್ತು ಅಂತಾರಾಷ್ಟ್ರೀಯವಾದ ಹತ್ತಾರು ಕಾರಣಗಳಿವೆ. ಇವತ್ತು ಅರಬ್ ರಾಷ್ಟ್ರಗಳಲ್ಲಿ ರಕ್ತಪಾತವಾಗುತ್ತಿದ್ದರೆ ಅದರ ರಿಮೋಟ್ ಕಂಟ್ರೋಲ್ ಯಾವುದೋ ಶಾಂತಿಯುತ ರಾಷ್ಟ್ರದಲ್ಲಿದೆ. ಹೊರನೋಟಕ್ಕೆ ಮುಸ್ಲಿಮರು ಯುದ್ಧದಾಹಿಗಳಂತೆ ಕಾಣಿಸುತ್ತಿರಬಹುದು. ಆದರೆ ಈ ಯುದ್ಧದಾಹಿಗಳನ್ನು ನಾಚಿಸುವಷ್ಟು ಮತ್ತು ಪರಮ ಕ್ರೂರಿಗಳೆಂದು ಬಣ್ಣಿಸಿದರೂ ಸಾಕಾಗದಷ್ಟು ರಕ್ತದಾಹಿಗಳು ಬೇರೆಡೆ ಶಾಂತಿಯ ಮುಖವಾಡ ತೊಟ್ಟು ಇವರನ್ನು ಆಡಿಸುತ್ತಿದ್ದಾರೆ. ಹೀಗಿದ್ದರೂ,
ಒಂದು ಧರ್ಮವನ್ನು ಅಳೆಯುವ ಮಾಪಕ ಅದರ ಅನುಯಾಯಿಗಳಾಗಿದ್ದಾರೆ ಎಂಬುದನ್ನು ತಿರಸ್ಕರಿಸುವುದು ಖಂಡಿತ ತಪ್ಪು. ಸಾಮಾನ್ಯ ಜನರು ಧರ್ಮವನ್ನು ಓದುವುದಿಲ್ಲ. ಅದರ ಅನುಯಾಯಿಗಳನ್ನಷ್ಟೇ ನೋಡುತ್ತಾರೆ. ಅವರು ವಂಚಕರು, ಪತ್ನಿ ಪೀಡಕರು, ಗಲಭೆಕೋರರು, ಸಮಾಜ ಕಂಟಕರು ಇತ್ಯಾದಿಗಳೆಲ್ಲ ಆಗಿದ್ದರೆ ಅದನ್ನೇ ಅವರ ಧರ್ಮವೆಂದು ನಂಬುತ್ತಾರೆ. ಅವರ ಆಧಾರದಲ್ಲೇ ಅವರ ಧರ್ಮವನ್ನು ವ್ಯಾಖ್ಯಾನಿಸುತ್ತಾರೆ. ಇದು ತಪ್ಪು ನಿಜ. ಆದರೆ ಈ ತಪ್ಪನ್ನು ತಪ್ಪು ಎಂದು ಹೇಳುವುದರಿಂದ ತಿದ್ದಲು ಸಾಧ್ಯವಿಲ್ಲ. ಕುರ್‍ಆನ್‍ನಂತೆ ಬದುಕುವ ಅನುಯಾಯಿಗಳ ತಯಾರಿಯೇ ಇದಕ್ಕಿರುವ ಅತ್ಯುತ್ತಮ ಪರಿಹಾರ. ನಿಜವಾಗಿ, ಇಸ್ಲಾಮ್ ಜಾಗತಿಕವಾಗಿಯೇ ಶಾಂತಿಯುತ ಸಮಾಜವನ್ನು ಕಟ್ಟಲು ಸಕಲ ಸಾಮಥ್ರ್ಯವಿರುವ ಒಂದು ನ್ಯಾಯ ನಿಷ್ಠ ಸಿದ್ಧಾಂತ. ಅದು ಅಸಹಿಷ್ಣುವಲ್ಲ, ಭಯೋತ್ಪಾದಕವೂ ಅಲ್ಲ. ಪ್ರವಾದಿಯವರ 63 ವರ್ಷಗಳ ಬದುಕು ಮತ್ತು ಅವರ ನೇತೃತ್ವದಲ್ಲಿ ರಚನೆಯಾದ ಸರಕಾರದ ಸಾಧನೆಗಳು ಇದನ್ನು ಸ್ಪಷ್ಟಪಡಿಸುತ್ತವೆ. ಹಾಗಂತ, ಶಾಂತಿ ಎಂಬುದಕ್ಕೆ ಸಕಲ ಅನ್ಯಾಯವನ್ನೂ ಸಹಿಸಿಕೊಂಡು, ಗುಲಾಮರಂತೆ ಬದುಕುವುದು ಎಂಬ ಅರ್ಥ ಇಲ್ಲವಲ್ಲ. ಹಾಗಿರುತ್ತಿದ್ದರೆ ಇಲ್ಲಿನ ದಲಿತ ಚಳವಳಿಯನ್ನೇ ಅಶಾಂತಿಯದ್ದೆಂದು ಹೇಳಬೇಕಾಗುತ್ತದೆ. ಈ ಚಳವಳಿಯನ್ನು ಎಲ್ಲ ರೀತಿಯಲ್ಲೂ ದಮನಿಸಿದ ಮತ್ತು ಇವತ್ತಿಗೂ ದಮನಿಸಲು ಯತ್ನಿಸುತ್ತಿರುವವರ ನೀತಿಯನ್ನೇ ಶಾಂತಿಯದ್ದೆಂದು ಸಾರಬೇಕಾಗುತ್ತದೆ. ಶಾಂತಿ ಎಂಬುದು ಸಮಾನ ನ್ಯಾಯ, ಸಮಾನ ಸ್ವಾತಂತ್ರ್ಯ, ಪರಧರ್ಮ ಸಹಿಷ್ಣುತೆ, ಸಮಾನತೆ, ವಾಕ್‍ಸ್ವಾತಂತ್ರ್ಯ ಇತ್ಯಾದಿ ಇತ್ಯಾದಿ ಮೌಲ್ಯಗಳು ಬಲವಾಗಿ ಬೇರೂರಿರುವ ಮತ್ತು ಪಾಲನೆಯಲ್ಲಿರುವ ಒಂದು ಸಾಮಾಜಿಕ ಸ್ಥಿತಿಯ ಹೆಸರು. ಈ ಹಿನ್ನೆಲೆಯಲ್ಲಿ ಆಲೋಚಿಸಿದರೆ, ಇಸ್ಲಾಮ್ ಈ ಶಾಂತಿಯ ಪ್ರಮುಖ ದಾವೇದಾರ. ಅದು ಒಂದು ಶಾಂತಿಯುತ ಜಗತ್ತನ್ನು ಕಟ್ಟಬಯಸುತ್ತದೆ. ಅದರ ಸಿದ್ಧಾಂತ ಜಾಗತಿಕ ಶಾಂತಿಗೆ ಎಷ್ಟು ಪೂರಕವಾಗಿದೆಯೆಂದರೆ, ಅದರ ಹೊರತಾದ ಇನ್ನಾವ ಸಿದ್ಧಾಂತಗಳೂ ಒಂದು ಹಂತದ ವರೆಗೆ ಮಾತ್ರ ಪರಿಪೂರ್ಣವೆಂದು ತೋರುತ್ತದೆ. ಆದರೆ, ಇದನ್ನು ಜಗತ್ತಿಗೆ ಮನದಟ್ಟು ಮಾಡುವಲ್ಲಿ ಅದರ ಅನುಯಾಯಿಗಳು ಪದೇ ಪದೇ ವಿಫಲರಾಗುತ್ತಿದ್ದಾರೆಂಬುದು ಖಂಡಿತ ನಿಜ. ಈ ವೈಫಲ್ಯಕ್ಕೆ ಇಸ್ಲಾಮ್ ಹೊಣೆ ಅಲ್ಲದೇ ಇರಬಹುದು. ಆದರೆ, ಹೀಗೆ ಹೇಳುವುದು ಸಮರ್ಪಕ ಉತ್ತರ ಆಗುವುದಿಲ್ಲ. 1500 ವರ್ಷಗಳಿಂದ ತಮ್ಮ ಬಳಿ ಒಂದು ‘ಜಾಗತಿಕ ಶಾಂತಿ'ಯ ಸಿದ್ಧಾಂತವನ್ನು ಇಟ್ಟುಕೊಂಡಿದ್ದರೂ ಅದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಅವರು ವಿಫಲರಾಗುತ್ತಿದ್ದಾರೆಂಬುದು ಏನನ್ನು ಸೂಚಿಸುತ್ತದೆ? ಈ ವೈಫಲ್ಯವನ್ನು ಇಸ್ಲಾಮಿನ ವೈಫಲ್ಯವೆಂದು ಜನರು ತಿಳಿದುಕೊಳ್ಳಬಾರದೆಂದು ಮುಸ್ಲಿಮರು ವಿನಂತಿಸುವುದು ಎಷ್ಟು ಪರಿಣಾಮಕಾರಿ? ಇದು ಎಷ್ಟರ ಮಟ್ಟಿಗೆ ಜನರನ್ನು ತೃಪ್ತಿಪಡಿಸಬಲ್ಲುದು? ಅಂದಹಾಗೆ,
        ಜಗತ್ತು ಇವತ್ತು ವಿಫಲಗೊಂಡಿರುವುದೇ ಸಿದ್ಧಾಂತಗಳ ಜಾರಿಯಲ್ಲಿ. ಸಮಾಜವಾದ ಮತ್ತು ಬಂಡವಾಳಶಾಹಿತ್ವ ಎರಡೂ ಇವತ್ತು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಮಾತ್ರವಲ್ಲ, ಒಂದು ಅಸುರಕ್ಷಿತ, ಅಸಮಾನ, ಕುದಿಯುವ ಮನಸ್ಸಿನ ಸಮಾಜವನ್ನು ನಿರ್ಮಿಸಿಬಿಟ್ಟಿದೆ. ನಿಜವಾಗಿ, ಇದನ್ನು ವಿೂರಿ ನಿಲ್ಲುವ ಸಾಮರ್ಥ್ಯ ಇಸ್ಲಾಮ್‍ಗಿದೆ. ಸದ್ಯ ಹೇಳಬಹುದಾದದ್ದು ಇಷ್ಟೇ


No comments:

Post a Comment