Friday, April 21, 2017

ಅಸ್ಪೃಶ್ಯರನ್ನು ತಯಾರಿಸುವ ಪ್ರಜಾತಂತ್ರ ಎಷ್ಟು ಪರಿಪೂರ್ಣ?

    ಈ ದೇಶದ ಪ್ರಜಾತಂತ್ರ ವ್ಯವಸ್ಥೆಯು ಪರಿಪೂರ್ಣವೇ? ಈ ದೇಶದ ಎಲ್ಲರನ್ನೂ ಒಳಗೊಳ್ಳುವ ಅಥವಾ ಒಳಗೊಳಿಸುವ ಸಾಮರ್ಥ್ಯ ಇದಕ್ಕಿದೆಯೇ? ಧರ್ಮ, ಜಾತಿ, ಪಂಗಡಗಳಾಗಿ ವಿಭಜನೆಗೊಂಡಿರುವ ದೇಶವೊಂದರ ಜನರನ್ನು ಈ ವ್ಯವಸ್ಥೆ ಹೇಗೆ ಪ್ರತಿನಿಧಿಸಬಲ್ಲುದು? ಅವರೆಲ್ಲರನ್ನೂ ಜೊತೆಗೊಯ್ಯಲು ಮತ್ತು ನ್ಯಾಯ ಕೊಡಿಸಲು ಈ ವ್ಯವಸ್ಥೆ ಶಕ್ತವೇ ಅಥವಾ ಪರ್ಯಾಯ ಚಿಂತನೆಯೊಂದು ನಡೆಯಬೇಕಾಗಿದೆಯೇ?
2014ರಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ತಿಂಗಳ ಹಿಂದೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯು ಈ ಪ್ರಶ್ನೆಯನ್ನು ಸಹಜವಾಗಿಯೇ ಎತ್ತುತ್ತದೆ. ಜೊತೆಗೇ ಈ ದೇಶವನ್ನಾಳುವ ಪಕ್ಷದ ನಿಲುವುಗಳು ಕೂಡ ಈ ಪ್ರಶ್ನೆಯ ಹುಟ್ಟಿಗೆ ಕಾರಣವಾಗಿವೆ. ಪ್ರಸ್ತುತ ಲೋಕಸಭೆಯಲ್ಲಿ 37 ರಾಜಕೀಯ ಪಕ್ಷಗಳಿಗೆ ಸೇರಿದ 543 ಸದಸ್ಯರಿದ್ದಾರೆ. ಇವರಲ್ಲಿ ಮುಸ್ಲಿಮ್ ಸದಸ್ಯರ ಸಂಖ್ಯೆ ಬರೇ 23.`
ಇದಕ್ಕಿಂತಲೂ ಆಘಾತಕಾರಿ ಸಂಗತಿ ಏನೆಂದರೆ, ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದನಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಆಯ್ಕೆಯಾದುದು ಬರೇ 7 ರಾಜ್ಯಗಳಿಂದ. ಪಶ್ಚಿಮ ಬಂಗಾಳದಿಂದ 8, ಬಿಹಾರದಿಂದ 4, ಜಮ್ಮುಕಾಶ್ಮೀರ ಮತ್ತು ಕೇರಳದಿಂದ ತಲಾ 3, ಅಸ್ಸಾಮ್‍ನಿಂದ 2, ತಮಿಳುನಾಢು, ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಿಂದ ತಲಾ ಒಂದು. ಈ 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 179 ಲೋಕಸಭಾ ಕ್ಷೇತ್ರಗಳಿವೆ. ಮಾತ್ರವಲ್ಲ, ಒಟ್ಟು ಮುಸ್ಲಿಮ್ ಜನಸಂಖ್ಯೆಯ 46% ಮಂದಿ ಈ ರಾಜ್ಯಗಳಲ್ಲಿದ್ದಾರೆ. ಅದೇ ವೇಳೆ, ದೇಶದ ಉಳಿದ 22 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಿಗೆ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದ ಇಲ್ಲ. ಇರುವ 23 ಸಂಸದರನ್ನು ಕಾಂಗ್ರೆಸ್ 4, ತೃಣಮೂಲ 4, ಕಾಶ್ಮೀರದ ಪಿಡಿಪಿ 3, ಅಸ್ಸಾಮ್‍ನ ಎಐಯುಡಿಎಫ್, ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್, ಸಿಪಿಐಎಂ ಮತ್ತು ಎನ್‍ಸಿಪಿಗಳು ತ ಲಾ 2, ಓವೈಸಿಯ ಎಐಎಂಐಎಂ, ಎಐಎಡಿಎಂಕೆ, ಲಾಲೂ ಪ್ರಸಾದ್‍ರ ಆರ್‍ಜೆಡಿ ಮತ್ತು ರಾಮ್‍ವಿಲಾಸ್ ಪಾಸ್ವಾನ್‍ರ ಎಲ್‍ಜೆಪಿ ತಲಾ ಒಂದು ಆಗಿ ಹಂಚಿಕೊಂಡಿವೆ. ಆದರೆ ಆಡಳಿತ ಪಕ್ಷವಾದ ಬಿಜೆಪಿ ಮತ್ತು ಮಿತ್ರ ಪಕ್ಷಗಳಾದ ಶಿವಸೇನೆ, ಅಕಾಲಿದಳ, ತೆಲುಗುದೇಶಂ ಪಾರ್ಟಿಗಳು ಮುಸ್ಲಿಮ್ ಸಂಸದರನ್ನು ಹೊಂದಿಲ್ಲ. ಮಾತ್ರವಲ್ಲ, ತೀರಾ ಸೆಕ್ಯುಲರ್ ಆಗಿ ಗುರುತಿಸಿಕೊಳ್ಳುತ್ತಿರುವ ಎಎಪಿ, ಬಿಜು ಜನತಾದಳ (ಬಿಜೆಡಿ), ಸಮಾಜವಾದಿ ಪಾರ್ಟಿ, ಸಿಪಿಐಗಳೂ ಮುಸ್ಲಿಮ್ ಸಂಸದರ ಬರ ಅನುಭವಿಸುತ್ತಿವೆ. ಲೋಕಸಭೆಯಲ್ಲಿ ಮುಸ್ಲಿಮರನ್ನು ಪ್ರತಿನಿಧಿಸದ 22 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶ ಗಳಲ್ಲಿ ಒಟ್ಟು ಮುಸ್ಲಿಮ್ ಜನಸಂಖ್ಯೆಯ ಶೇ. 54 ಮಂದಿ ಇದ್ದಾರೆ. ಜೊತೆಗೇ 364 ಲೋಕಸಭಾ ಸ್ಥಾನಗಳು ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಒಂದು ವೇಳೆ, ಮುಸ್ಲಿಮ್ ಜನಸಂಖ್ಯೆಯ ಅನು ಪಾತವನ್ನು ಆಧರಿಸಿ ಲೋಕಸಭೆಯಲ್ಲಿ ಪ್ರಾತಿ ನಿಧ್ಯವನ್ನು ಪಡೆಯುವುದಾದರೆ ಕನಿಷ್ಠ 77 ಸ್ಥಾನಗಳನ್ನಾದರೂ ಪಡೆಯಬೇಕಿತ್ತು. 2011ರ ಜನಗಣತಿ ಪ್ರಕಾರ, ಈ ದೇಶದಲ್ಲಿ 14.2% ಮುಸ್ಲಿಮರಿದ್ದಾರೆ. ಆದರೆ ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಮುಸ್ಲಿಮ್ ಜನಪ್ರತಿನಿಧಿಗಳ ಸಂಖ್ಯೆ ಇಳಿ ಮುಖವಾಗುತ್ತಲೇ ಹೋಗುತ್ತಿದೆ. ಆದ್ದರಿಂದಲೇ, ಆರಂಭದಲ್ಲಿ ಎತ್ತಲಾದ ಪ್ರಶ್ನೆಗಳು ಮತ್ತೆ ಮತ್ತೆ ಪ್ರಸ್ತುತವಾಗುವುದು. ಸುಮಾರು 15 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮುದಾಯವೊಂದು ಶಾಸಕಾಂಗದ ಪರಿಧಿಯಿಂದ ಮೆಲ್ಲ ಮೆಲ್ಲನೆ ಹೊರಬೀಳುವುದು ಏನನ್ನು ಸೂಚಿಸುತ್ತದೆ? ಇದು ಯೋಜಿತವೇ, ಷಡ್ಯಂತ್ರವೇ, ಸಹಜವೇ ಅಥವಾ ಪ್ರಜಾತಂತ್ರದ ದೌರ್ಬಲ್ಯವೇ? ತಿಂಗಳ ಹಿಂದೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನೇ ಎತ್ತಿಕೊಳ್ಳಿ. ಉತ್ತರ ಪ್ರದೇಶದಲ್ಲಿ ಸುಮಾರು 20%ದಷ್ಟು ಮುಸ್ಲಿಮರಿದ್ದಾರೆ. 2012ರ ವಿಧಾನಸಭಾ ಚುನಾವಣೆಯಲ್ಲಿ 69 ಮುಸ್ಲಿಮ್ ಶಾಸಕರು ಅಲ್ಲಿನ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಬಾರಿ ಬರೇ 24 ಮಂದಿಯಷ್ಟೇ ಆಯ್ಕೆಯಾಗಿದ್ದಾರೆ. ಈ ಬೆಳವಣಿಗೆ ಯನ್ನು ಏನೆಂದು ವಿಶ್ಲೇಷಿಸಬೇಕು? ಒಂದು ಕಡೆ 325 ಸ್ಥಾನಗಳನ್ನು ಪಡೆದು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರಿದ ಬಿಜೆಪಿಯು ಮುಸ್ಲಿಮರನ್ನು ಅಭ್ಯರ್ಥಿಯಾಗಿ ನಿಲ್ಲಿಸುವುದಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಮುಸ್ಲಿಮರಿಗೆ ಸ್ಪರ್ಧಿಸಲು ಟಿಕೆಟ್ ಕೊಡುವು ದಿಲ್ಲ ಎಂದು ಬಹಿರಂಗವಾಗಿಯೇ ಅದು ಹೇಳಿಕೊಂಡಿದೆ. ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಈ ಮುಸ್ಲಿಮ್ ಅಸ್ಪೃಶ್ಯ ನೀತಿಯನ್ನು ಪಾಲಿಸಲಾಗುವುದು ಎಂದು ಯಡಿಯೂರಪ್ಪ ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನೊಂದೆಡೆ, ಮುಸ್ಲಿಮರ ತಲ್ಲಣಗಳು ಚರ್ಚೆಗೊಳಗಾಗುವ ಸಾಧ್ಯತೆಗಳು ದಿನೇ ದಿನೇ ಕ್ಷೀಣಗೊಳ್ಳುತ್ತಿವೆ. 2006ರಲ್ಲಿ ಪಾರ್ಲಿಮೆಂಟ್‍ನಲ್ಲಿ ಮಂಡನೆ ಯಾದ ಸಾಚಾರ್ ವರದಿಯ ಬಗ್ಗೆ ಸದ್ಯ ಯಾವ ರಾಜಕೀಯ ಪಕ್ಷಗಳೂ ಮಾತಾಡುತ್ತಿಲ್ಲ. ಕನಿಷ್ಠ ಆ ವರದಿಯ ಪಾರ್ಲಿಮೆಂಟ್ ಮಂಡನೆಗೆ ಒಂದು ದಶಕವಾದ ನೆಪದಲ್ಲಾದರೂ ಆ ವರದಿಯ ಅಂಶಗಳನ್ನು ನೆನಪಿಸಿಕೊಳ್ಳುವ ಸೌಜನ್ಯವನ್ನೂ ಅವು ತೋರಿಸು ತ್ತಿಲ್ಲ. ಸಾಚಾರ್ ನೇತೃತ್ವದ 7 ಸದಸ್ಯರ ಆಯೋಗವು 2006ರಲ್ಲಿ ತನ್ನ ವರದಿಯನ್ನು ಮಂಡಿಸಿತ್ತು. ಈ ವರದಿಯ ಮೌಲ್ಯಮಾಪನ ಕ್ಕಾಗಿ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯವು 2014ರ ಆರಂಭದಲ್ಲಿ ಕುಂಡು ಸಮಿತಿಯನ್ನು ರಚಿಸಿತ್ತು. ವರದಿ ಯ ಪ್ರಕಾರ, 31% ಭಾರತೀಯ ಮುಸ್ಲಿಮರು ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಸರಕಾರಿ ಉದ್ಯೋಗದಲ್ಲಿ ಮುಸ್ಲಿಮರ ಪ್ರಾತಿನಿಧ್ಯ 4.9%. ಶಿಕ್ಷಣ ಕ್ಷೇತ್ರದಲ್ಲಿ ಈ ದೇಶದ ರಾಷ್ಟ್ರೀಯ ಸರಾಸರಿಯು 64.8% ಆಗಿದ್ದರೆ ಮುಸ್ಲಿಮರು ಶೇ. 59.1ರಷ್ಟು ಸರಾಸರಿಯನ್ನು ಹೊಂದಿದ್ದಾರೆ. ಉನ್ನತ ಶಿಕ್ಷಣ ರಂಗದಲ್ಲಂತೂ ಈ ಸರಾಸರಿ ಇನ್ನಷ್ಟು ಕಳವಳಕಾರಿ. ಖಾಸಗಿ ಮತ್ತು ಸರಕಾರಿ ಬ್ಯಾಂಕುಗಳೆರಡೂ ಮುಸ್ಲಿಮರಿಗೆ ಸಲ ಕೊಡುವುದಕ್ಕೆ ಹಿಂಜರಿ ಯುತ್ತವೆ ಎಂದೂ ವರದಿ ಹೇಳಿತ್ತು. 2013ರಲ್ಲಿ ಬಿಡುಗಡೆ ಯಾದ ವಿಶ್ವಬ್ಯಾಂಕ್‍ನ ವರದಿಯಂತೂ ಈ ವಿವರಗಳನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಿಕೊಂಡಿತ್ತು. ನಗರ ಭಾರತದ 34% ದಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದರೆ ಹಿಂದೂ ಗಳಲ್ಲಿ ಈ ಪ್ರಮಾಣ 19%. 1983ರಿಂದ 2010ರ ನಡುವೆ ನಗರ ಭಾರತದಲ್ಲಿರುವ ಹಿಂದೂಗಳ ಬಡತನದ ಪ್ರಮಾಣವು 52%ಕ್ಕೆ ಇಳಿದಿದ್ದರೆ ಮುಸ್ಲಿಮರ ಮಟ್ಟಿಗೆ 39%ದಷ್ಟು ಮಾತ್ರ ಇಳಿ ಮುಖವಾಗಿವೆ. ಭಾರತದ ಪ್ರತಿ 4 ಭಿಕ್ಷುಕರಲ್ಲಿ ಓರ್ವರು ಮುಸ್ಲಿಮರೆಂಬುದು ಇಲ್ಲಿ ಉಲ್ಲೇಖನೀಯ. ದುರಂತ ಏನೆಂದರೆ, ಇತ್ತಿತ್ತಲಾಗಿ ಮುಸ್ಲಿಮರ ಹಿಂದುಳಿಯುವಿಕೆಯ ಬಗ್ಗೆ ಮಾತೆತ್ತುವು ದಕ್ಕೇ ಸೆಕ್ಯುಲರ್ ಪಕ್ಷಗಳು ಭಯಪಡತೊಡಗಿವೆ. ಒಂದು ವೇಳೆ ಬಾಯಿ ತಪ್ಪಿ ಅವು ಏನಾದರೂ ಹೇಳಿಬಿಟ್ಟರೆ ಅದನ್ನು ಬಿಜೆಪಿಯು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತದೆ. ಮುಸ್ಲಿಮ್ ತುಷ್ಠೀಕರಣ ಎಂದು ವ್ಯಾಖ್ಯಾನಿಸುತ್ತದೆ. ಮುಸ್ಲಿಮರ ಕಲ್ಯಾಣ ಕ್ಕಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವುದು, ಅವರ ಹಿಂದುಳಿ ಯುವಿಕೆಗೆ ಪರಿಹಾರಗಳನ್ನು ಹುಡುಕುವುದೆಲ್ಲ ಸೆಕ್ಯುಲರ್ ಪಕ್ಷಗಳ ಪಾಲಿಗೆ ‘ಓಟು ಕಳಕೊಳ್ಳುವ’ ವಿಷಯವಾಗಿ ಮಾರ್ಪಾಟು ಆಗತೊಡಗಿವೆ. ಈ ವರೆಗೆ ಬಿಜೆಪಿಯ ಉನ್ನತ ನಾಯಕತ್ವವು ಮುಸ್ಲಿಮ್ ಅಸ್ಪೃಶ್ಯ ನೀತಿಯನ್ನು ಸಾರ್ವಜನಿಕವಾಗಿ ನಿರ್ಭಿಡೆಯಿಂದ ಹೇಳಿ ಕೊಳ್ಳುತ್ತಿರಲಿಲ್ಲ. ಇವತ್ತು ಆ ಮುಲಾಜೂ ಹೊರಟು ಹೋಗಿದೆ. ಮಾತ್ರವಲ್ಲ, ಮುಸ್ಲಿಮರನ್ನು ಸಾರ್ವಜನಿಕವಾಗಿ ಜಾಡಿಸುವುದನ್ನೇ ಮತ ಧ್ರುವೀಕರಣದ ಹೊಸ ತಂತ್ರವಾಗಿ ಅದು ಕಂಡುಕೊಂಡಿದೆ. ಪ್ರಧಾನಿಯವರೇ ಅದರ ನೇತೃತ್ವವನ್ನು ವಹಿಸಿ ಕೊಂಡಿದ್ದಾರೆ. ಮಾತ್ರವಲ್ಲ, ಹೀಗೆ ಮಾಡುವುದರಿಂದ ಮುಸ್ಲಿಮೇತರ ಮತಗಳು ಜಾತಿ ಕಟ್ಟುಪಾಡುಗಳನ್ನು ಮರೆತು ಒಂದೇ ಕಡೆ ಸೇರುವುದಕ್ಕೆ ಮತ್ತು ತಮಗೇ ಹೆಚ್ಚು ಲಭ್ಯವಾಗುವುದಕ್ಕೆ ಅವಕಾಶಗಳು ಹೆಚ್ಚಿವೆ ಎಂಬುದನ್ನೂ ಅದು ತಿಳಿದುಕೊಂಡಿದೆ. ಮುಸ್ಲಿಮ್ ಅಸ್ಪೃಶ್ಯ ನೀತಿಯು ಈಗಾಗಲೇ ಅಸ್ಪೃಶ್ಯವಾಗಿರುವ ದಲಿತ ಸಮುದಾಯವನ್ನು ತನ್ನ ಬೆಂಬಲಿಗರಾಗಿಸುವಂತೆ ಮಾಡ ಬಹುದು ಅನ್ನುವ ಅದರ ತಂತ್ರ ಬಲ ಪಡೆಯುತ್ತಲೂ ಇದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಬಿಜೆಪಿಯ ಈ ನೀತಿಗೆ ಜನರು ಒಗ್ಗಿಕೊಳ್ಳುತ್ತಾ ಹೋದರೆ ಅದರ ಪರಿಣಾಮ ಏನಾಗ ಬಹುದು? ಇತರ ರಾಜಕೀಯ ಪಕ್ಷಗಳಿಗೆ ಯಾವ ಅನಿವಾರ್ಯತೆ ಎದುರಾಗಬಹುದು? ಮುಸ್ಲಿಮರ ಹಕ್ಕು, ಸ್ವಾತಂತ್ರ್ಯದ ಬಗ್ಗೆ ಮಾತಾಡುವುದರಿಂದ ಮತ ಕಳಕೊಳ್ಳಬೇಕಾಗುತ್ತದೆ ಎಂದಾದರೆ ಅವು ಯಾವ ನಿರ್ಧಾರ ತಳೆದಾವು? ಮುಸ್ಲಿಮರನ್ನು ಅವು ಕೂಡ ನಿಧಾನವಾಗಿ ನಿರ್ಲಕ್ಷಿಸುವ ನೀತಿಯನ್ನು ಅಳವಡಿಸಿ ಕೊಳ್ಳಲಾರದೇ? ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದುಕೊಂಡೇ ಒಂದು ಬೃಹತ್ ಸಮುದಾಯವನ್ನು ರಾಜಕೀಯವಾಗಿ ಅಸ್ಪೃಶ್ಯಗೊಳಿಸುವುದು ಸಾಧ್ಯವೆಂದಾದರೆ, ಆ ಪ್ರಜಾತಂತ್ರ ಎಲ್ಲಿಯ ವರೆಗೆ ಪರಿಪೂರ್ಣ? ಯಾವುದೇ ಸಮುದಾಯದ ಪಾಲಿಗೆ ರಾಜಕೀಯ ಪ್ರಾತಿನಿಧ್ಯವು ಅತ್ಯಂತ ಅಗತ್ಯ ಮತ್ತು ಅನಿವಾರ್ಯ. ಅದರ ಹೊರತು ಸಾಮಾಜಿಕ ನ್ಯಾಯವನ್ನು ಪಡಕೊಳ್ಳುವುದು ಸುಲಭ ಅಲ್ಲ. ರಾಜಕೀಯ ಪ್ರಾತಿನಿಧ್ಯ ಇದ್ದೂ ಮುಸ್ಲಿಮರು ಹಕ್ಕು ವಂಚಿತರಾಗಿ, ಸುಳ್ಳು ಕೇಸುಗಳಿಗೆ ಒಳಗಾಗಿ ಮತ್ತು ಉದ್ಯೋಗ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿರಳ ಸಂಖ್ಯೆಯಲ್ಲಿರುವಾಗ ಇನ್ನು, ಆ ಪ್ರಾತಿನಿಧ್ಯವೂ ಇಲ್ಲವಾದರೆ ಅದು ಉಂಟು ಮಾಡುವ ಶೂನ್ಯ ಯಾವ ಬಗೆಯದ್ದಾಗಿರಬಹುದು? ಹಿಂದುಳಿದ ಸಮುದಾಯಗಳು ಸಾಮಾಜಿಕವಾಗಿ ಬಲ ಪಡೆಯಬೇಕಾದರೆ ರಾಜಕೀಯ ಪ್ರಾತಿನಿಧ್ಯ ಅನಿವಾರ್ಯ ಎಂಬುದನ್ನು ಸಂವಿಧಾನವೇ ಒಪ್ಪಿಕೊಂಡಿದೆ. ಆದ್ದರಿಂದಲೇ ದಲಿತರಿಗೆ ಮೀಸಲಾತಿಯ ಸೌಲಭ್ಯವನ್ನು ಒದಗಿಸಿದೆ. ಅಲ್ಲದೇ, ಮುಸ್ಲಿಮರ ಮೇಲೆ ರಾಜಕೀಯ ಅಸ್ಪೃಶ್ಯ ನೀತಿಯನ್ನು ಜಾರಿಗೊಳಿಸಿರುವ ಬಿಜೆಪಿಯು ದಲಿತ ತುಷ್ಟೀಕರಣ ನೀತಿಯನ್ನು ಅವಲಂಬಿಸುತ್ತಲೂ ಇದೆ. ದಲಿತ ವಿರೋಧಿ ಎಂಬ ಹಣೆಪಟ್ಟಿಯಿಂದ ಕಳಚಿಕೊಳ್ಳುವುದಕ್ಕೆ ದಲಿತರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೂ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಅವಲೋಕನವೊಂದು ನಡೆಯಬೇಕಾಗಿದೆ.
ಪ್ರಜಾತಂತ್ರ ಎಷ್ಟು ಜನಪರವೋ ಜನಾಂಗ ವಾದಿ ರಾಜಕೀಯ ಪಕ್ಷವೊಂದು ಅದನ್ನು ಅಷ್ಟೇ ಜನವಿರೋಧಿಯಾಗಿ ಮಾರ್ಪಡಿ ಸುವುದಕ್ಕೂ ಅವಕಾಶ ಇದೆ ಅನ್ನುವುದಕ್ಕೆ ಕಳೆದ ಮೂರ್ನಾಲ್ಕು ವರ್ಷಗಳ ರಾಜಕೀಯ ಬೆಳವಣಿಗೆ ಪುರಾವೆಯನ್ನು ಒದಗಿಸುತ್ತದೆ. ಪ್ರಜಾತಂತ್ರ ಯಶಸ್ವಿಯಾಗುವುದಕ್ಕೆ ಜಾಗೃತ ಮತದಾರರ ಪಾತ್ರ ಬಹಳ ಮುಖ್ಯ. ಮತದಾರರು ಜಾಗೃತರೂ ಪ್ರಜ್ಞಾವಂತರೂ ಮತ್ತು ಮನುಷ್ಯ ಪ್ರೇಮಿಗಳೂ ಆಗಿರದಿದ್ದರೆ ಪ್ರಜಾತಂತ್ರ ವ್ಯವಸ್ಥೆ ಸರ್ವಾಧಿಕಾರಿ ವ್ಯವಸ್ಥೆ ಗಿಂತಲೂ ಕ್ರೂರವಾಗುವುದಕ್ಕೂ ಅವಕಾಶ ಇದೆ. ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುವುದೇ ಪ್ರಜಾತಂತ್ರ ಅಲ್ಲ. ಅದು ಅದರ ಯಶಸ್ಸಿನ ಗುರುತೂ ಅಲ್ಲ. ಈ ಪ್ರಜಾತಂತ್ರ ವ್ಯವಸ್ಥೆ ಸರ್ವರನ್ನೂ ಹೇಗೆ ನಡೆಸಿಕೊಳ್ಳು ತ್ತದೆ ಎಂಬುದೇ ಬಹುಮುಖ್ಯ ಅಂಶ. ಮನುಷ್ಯ ವಿರೋಧಿಗಳು ಈ ಪ್ರಜಾತಂತ್ರ ವ್ಯವಸ್ಥೆಯನ್ನೇ ಬಳಸಿಕೊಂಡು ಅಧಿಕಾರ ಕ್ಕೇರಬಲ್ಲರಾದರೆ ಮತ್ತು ಪ್ರಜಾತಂತ್ರದ ಆಶಯಗಳನ್ನೇ ಬುಡ ಮೇಲು ಮಾಡಬಲ್ಲಷ್ಟು ಶಕ್ತರಾಗುತ್ತಾರೆಂದಾದರೆ ಆ ಪ್ರಜಾತಂತ್ರ ಮರು ಅವಲೋಕನಕ್ಕೆ ಒಳಪಡಬೇಕಾದುದು ತೀರಾ ತೀರಾ ಅಗತ್ಯ. ಇವತ್ತು ಮುಸ್ಲಿಮರು ಈ ಸಂದಿಗ್ಧತೆಯನ್ನು ಎದುರಿ ಸುವ ಭೀತಿಯಲ್ಲಿದ್ದಾರೆ. ನಾಳೆ ಅದು ದಲಿ ತರಿಗೂ ಆದಿವಾಸಿ ಗಳಿಗೂ ಕ್ರೈಸ್ತರಿಗೂ ಎದುರಾಗಬಹುದು. ಒಂದೊಂದೇ ಸಮುದಾಯವನ್ನು ರಾಜಕೀಯವಾಗಿ ಅಸ್ಪೃಶ್ಯಗೊಳಿಸುತ್ತಾ ಕೊನೆಗೆ ಒಂದೇ ಸಮುದಾಯ ಸ್ಪೃಶ್ಯವಾಗುವ ಹಂತಕ್ಕೂ ಅದು ತಲುಪಬಹುದು. ಆದ್ದರಿಂದ ಚುನಾವಣೆ ಆಧಾರಿತ ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕಾದ ಅನಿವಾರ್ಯತೆ ಇದೆ. ರಾಜಕೀಯ ಪಕ್ಷಗಳು ನಿರ್ದಿಷ್ಟ ಸಮುದಾಯಕ್ಕೆ ಪ್ರಾತಿ ನಿಧ್ಯ ಕೊಡಲು ನಿರಾಕರಿಸುವ ಸ್ಥಿತಿ ಉಂಟಾದರೆ ಅದಕ್ಕೆ ಪರಿಹಾರ ಏನು ಎಂಬುದು ಚರ್ಚೆಗೊಳಗಾಗಬೇಕು. ‘ನಿರ್ದಿಷ್ಟ ಸಮುದಾಯಕ್ಕೆ ಸ್ಪರ್ಧಿಸಲು ಟಿಕೆಟು ಕೊಡಲ್ಲ’ ಅನ್ನುವ ಪಕ್ಷದ ರಾಜಕೀಯ ಮಾನ್ಯತೆಯನ್ನು ರದ್ದುಪಡಿಸುವ ಅಧಿಕಾರ ಚುನಾ ವಣಾ ಮಂಡಳಿಗೆ ಒದಗಿಸಬಹುದೇ, ಸಮುದಾಯವೊಂದರ ಜನಸಂಖ್ಯೆಗೆ ಅನುಗುಣವಾಗಿ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ವನ್ನು ಒದಗಿಸುವ ಕ್ರಮಗಳನ್ನು ಕೈಗೊಳ್ಳಬಹುದೇ, ಮಹಿಳಾ ಮೀಸಲಾತಿ ಇರುವಂತೆಯೇ ಪ್ರತಿ ರಾಜಕೀಯ ಪಕ್ಷಗಳೂ ಕಡ್ಡಾಯವಾಗಿ ಇಂತಿಷ್ಟೇ ಟಿಕೇಟುಗಳನ್ನು ಜನಸಂಖ್ಯಾಧಾರಿತ ವಾಗಿ ನಿರ್ದಿಷ್ಟ ಸಮುದಾಯಗಳಿಗೆ ನೀಡಲೇಬೇಕೆಂಬ ಕಾನೂನು ರಚಿಸಬಹುದೇ.. ಇತ್ಯಾದಿ ಅಂಶಗಳೂ ಈ ಚರ್ಚೆಯ ವ್ಯಾಪ್ತಿಗೆ ಒಳಪಡಬೇಕು. ನ್ಯಾಯಾಂಗ ಈ ವಿಷಯದಲ್ಲಿ ಮುತುವರ್ಜಿ ವಹಿಸುವ ಅಗತ್ಯವೂ ಇದೆ. ಇಲ್ಲದಿದ್ದರೆ,  
            ಪ್ರಜಾತಂತ್ರವು ಇನ್ನೊಂದು ಸರ್ವಾಧಿಕಾರವಾದೀತು.

Saturday, April 1, 2017

ಬಾಬರಿ: ಮಾತುಕತೆಯ ಆಚೆ..

      ಬಾಬರಿ ಮಸೀದಿಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್‍ನ ಮುಂದೆ ಎರಡು ಪ್ರಮುಖ ಪ್ರಶ್ನೆಗಳಿವೆ.
1. ಬಾಬರಿ ಮಸೀದಿ ಇರುವ ಜಾಗದ ಒಡೆತನ ಯಾರದು?
2. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳಾಗಿ ಗುರುತಿಸಿಕೊಂಡವರನ್ನು ಅಲಹಾಬಾದ್ ಹೈಕೋರ್ಟ್ ದೋಷಮುಕ್ತ ಗೊಳಿಸಿದ್ದು ಸರಿಯೋ ತಪ್ಪೋ?
      ವಿಶೇಷ ಏನೆಂದರೆ, ಈ ಎರಡು ಪ್ರಶ್ನೆಗಳಿಗೂ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯಂ ಸ್ವಾಮಿ ಅವರಿಗೂ ಯಾವ ಸಂಬಂಧವೂ ಇಲ್ಲ. ಬಾಬರಿ ಮಸೀದಿಯ ಒಡೆತನಕ್ಕೆ ಸಂಬಂಧಿಸಿ 1959-61ರ ಮಧ್ಯೆ ಅಲಹಾಬಾದ್ ಹೈಕೋರ್ಟ್‍ನಲ್ಲಿ ಮೂರು ದೂರುಗಳು ದಾಖಲಾದುವು. ಹಿಂದೂ ಮಹಾಸಭಾದ ಅಂಗ ಸಂಸ್ಥೆಯಾದ ಅಖಿಲ ಭಾರತ ರಾಮಾಯಣ ಮಹಾಸಭಾವು 1949 ಡಿಸೆಂಬರ್‍ನಲ್ಲಿ ಅಯೋಧ್ಯೆಯಲ್ಲಿ ಸತತ 9 ದಿನಗಳ ಕಾಲ ರಾಮಚರಿತ ಮಾನಸದ ಪಠಣ ಕಾರ್ಯಕ್ರಮವನ್ನು ಏರ್ಪಡಿಸಿತು. ಇದರಲ್ಲಿ ಗೋರಖ್‍ನಾಥ್ ಮಠ ಮತ್ತು ಸಂತ ದಿಗ್ವಿಜಯ್‍ನಾಥ್‍ರು ಸೇರಿಕೊಂಡರು. 9ನೇ ದಿನವಾದ ಡಿ.22ರಂದು ರಾತ್ರಿ ಬಾಬರಿ ಮಸೀದಿಯ ಒಳಗಡೆ ರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಮಾತ್ರವಲ್ಲ, ಪವಾಡಸದೃಶವಾಗಿ ಆ ವಿಗ್ರಹವು ಮಸೀದಿ ಒಳಗಡೆ ಪ್ರತ್ಯಕ್ಷವಾಗಿದೆ ಎಂಬ ವದಂತಿಯನ್ನೂ ಹಬ್ಬಿಸಲಾಯಿತು. ಪ್ರಧಾನಿ ನೆಹರೂರವರು ಈ ಘಟನೆಗೆ ತಮ್ಮ ತೀವ್ರ ಅತೃಪ್ತಿಯನ್ನು ವ್ಯಕ್ತಪಡಿಸಿದರು. ರಾಮನ ವಿಗ್ರಹವನ್ನು ಮಸೀದಿಯಿಂದ ತೆರವುಗೊಳಿಸುವಂತೆ ಅಯೋಧ್ಯೆಯ ಅಧಿಕಾರಿ ಕೆ.ಕೆ.ಕೆ. ನಾಯರ್ ಅವರಿಗೆ ಆದೇಶಿಸಿದರು. ಆದರೆ ನಾಯರ್ ನಿರಾಕರಿಸಿದರು. ಅವರು ಹಿಂದೂ ಮಹಾಸಭಾದ ನಿಷ್ಠಾವಂತ ಅನುಯಾಯಿಯಾಗಿರುವುದು ಇದಕ್ಕೆ ಕಾರಣವಾಗಿತ್ತು. ಆ ಬಳಿಕ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಯಿತು. ಅವರು ಜನ ಸಂಘವನ್ನು ಸೇರಿಕೊಂಡರು. ಮಸೀದಿಯೊಳಗೆ ವಿಗ್ರಹ ಪ್ರತಿಷ್ಠಾಪನೆ ಯಿಂದಾಗಿ ಸಂಘರ್ಷದ ಸ್ಥಿತಿ ನಿರ್ಮಾಣವಾಯಿತು. ಮಸೀದಿಗೆ ಬೀಗ ಜಡಿಯಲಾಯಿತು. ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರ ಲಾಯಿತು. ಬಳಿಕ ಪ್ರತಿದಿನ ರಾಮನಿಗೆ ಪೂಜೆ ಸಲ್ಲಿಸಲು ಪೂಜಾರಿಗೆ ಅನುಮತಿಯನ್ನು ನೀಡಲಾಯಿತು. ಹೀಗೆ ಮಸೀದಿಯು ಅನಧಿಕೃತವಾಗಿ ದೇವಾಲಯವಾಗಿ ಪರಿವರ್ತಿತವಾಯಿತು. ಈ ಸಂದರ್ಭದಲ್ಲಿ ಮುಹಮ್ಮದ್ ಹಾಶಿಂ ಅನ್ಸಾರಿ (ಈಗ ಅವರಿಲ್ಲ, ನಿಧನರಾಗಿದ್ದಾರೆ)ಯವರೂ ಸೇರಿದಂತೆ 6 ಮಂದಿಯ ತಂಡ ಸುನ್ನಿ ವಕ್ಫ್ ಮಂಡಳಿಯ ಹೆಸರಲ್ಲಿ ಅಲಹಾಬಾದ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತು. ಬಾಬರಿ ಮಸೀದಿಯು ಸುನ್ನಿ ವಕ್ಫ್ ಬೋರ್ಡ್‍ಗೆ ಸಂಬಂಧಿಸಿದ್ದಾಗಿದ್ದು ಅದನ್ನು ಮರಳಿ ತಮಗೆ ಒಪ್ಪಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಬಳಿಕ ನಿರ್ಮೋಹಿ ಅಖಾಡ ಈ ವಿವಾದದಲ್ಲಿ ಕಕ್ಷಿಯಾಗಿ ಸೇರಿಕೊಂಡಿತು. ಆ ಬಳಿಕ ಹಿಂದೂ ಮಹಾಸಭಾವು ಇನ್ನೊಂದು ಕಕ್ಷಿಯಾಗಿ ಈ ವಿವಾದದೊಳಗೆ ಪ್ರವೇಶಿಸಿತು. ನಿಜವಾಗಿ, ಇಲ್ಲಿರುವುದು ಎರಡು ವಿಭಾಗಗಳೇ ಹೊರತು ಮೂರಲ್ಲ. ಹಿಂದೂ ಮಹಾಸಭಾ ಮತ್ತು ನಿರ್ಮೋಹಿ ಅಖಾಡಗಳು ಎರಡಾಗಿ ಈ ಪ್ರಕರಣದಲ್ಲಿ ಸೇರಿಕೊಂಡಿದ್ದರೂ ಅವು ಆಂತರಿಕ ವಾಗಿ ಒಂದೇ. ಅವೆರಡರ ವಾದವೂ ಬಹುತೇಕ ಒಂದೇ. ರಾಮನಿಗೆ ಸಂಬಂಧಿಸಿ ಅವರೆಡರ ವಿಚಾರಧಾರೆಯಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲ. ಆದ್ದರಿಂದಲೇ, 2010 ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿಗೆ ಹೆಚ್ಚಿನ ಮಂದಿ ಅಚ್ಚರಿ ವ್ಯಕ್ತಪಡಿಸಿದ್ದು. ನ್ಯಾಯಾಧೀಶರುಗಳಾದ ಸುಧೀರ್ ಅಗರ್‍ವಾಲ್, ಎಸ್.ಯು. ಖಾನ್ ಮತ್ತು ಡಿ.ವಿ. ಶರ್ಮ ಅವರನ್ನೊಳಗೊಂಡ ಅಲಹಾಬಾದ್ ಹೈಕೋರ್ಟ್‍ನ ಲಕ್ನೋ ಪೀಠವು ಬಾಬರಿ ಮಸೀದಿ ಇರುವ ವಿವಾದಿತ 2.77 ಎಕರೆ ಭೂಮಿಯನ್ನು ಮೂರು ಭಾಗಗಳಾಗಿ ವಿಭಜಿಸಿ, ಒಂದನ್ನು ನಿರ್ಮೋಹಿ ಅಖಾಡಕ್ಕೆ, ಇನ್ನೊಂದನ್ನು ಸುನ್ನಿ ವಕ್ಫ್ ಮಂಡಳಿಗೆ ಮತ್ತು ಇನ್ನೊಂದು ಭಾಗವನ್ನು ಹಿಂದೂ ಮಹಾಸಭಾಕ್ಕೆ ಹಂಚುವ ತೀರ್ಪು ಪ್ರಕಟಿಸಿತು. ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿ ಇದೊಂದು ಅಚ್ಚರಿಯ ತೀರ್ಪು. ಭಾರತದ ಯಾವುದೇ ಸಿವಿಲ್ ನ್ಯಾಯಾಲಯವು ಇಬ್ಬರು ಕಕ್ಷಿದಾರರ ವ್ಯಾಜ್ಯವನ್ನು ಈ ರೀತಿಯಾಗಿ ಬಗೆಹರಿಸಿದ್ದು ಈವರೆಗೂ ನಡೆದಿಲ್ಲ. ಇಬ್ಬರ ನಡುವೆ ಭೂಮಿಯ ಒಡೆತನಕ್ಕೆ ಸಂಬಂಧಿಸಿ ವಿವಾದ ಇದ್ದರೆ ಇಬ್ಬರಲ್ಲಿ ಒಬ್ಬರಿಗೆ ಭೂಮಿಯ ಒಡೆತನ ಸಿಗಬೇಕೇ ಹೊರತು ಇಬ್ಬರಿಗೂ ಸಮಾನವಾಗಿ ಸಿಗುವುದು ವಿವೇಚನೆಗೆ ನಿಲುಕದ ವಿಚಾರ. ಸಹಜವಾಗಿಯೇ ಮೂವರು ಕಕ್ಷಿದಾರರೂ ಈ ತೀರ್ಪನ್ನು ವಿರೋಧಿಸಿದರು. ಇದರ ವಿರುದ್ಧ ಸುಪ್ರೀಮ್ ಕೋರ್ಟಿಗೆ ಮನವಿ ಸಲ್ಲಿಸಿದರು. ಇಲ್ಲೊಂದು ಘಟನೆ ನಡೆದಿತ್ತು. ಅಲಹಾಬಾದ್ ಹೈಕೋರ್ಟ್‍ನ ಲಕ್ನೋ ಪೀಠವು ಈ ತೀರ್ಪನ್ನು ನೀಡುವುದಕ್ಕಿಂತ ಒಂದು ವಾರ ಮೊದಲು ಹೈಕೋರ್ಟ್‍ನ ನ್ಯಾಯಾಧೀಶರೊಬ್ಬರು ಸುಪ್ರೀಮ್ ಕೋರ್ಟ್‍ನ ಬಾಗಿಲು ಬಡಿದಿದ್ದರು. ಹೈಕೋರ್ಟ್‍ನ ಪೀಠವು ತೀರ್ಪು ಕೊಡುವುದನ್ನು ತಡೆ ಹಿಡಿಯಬೇಕೆಂದು ಅವರು ಸುಪ್ರೀಮ್ ಕೋರ್ಟ್‍ನೊಂದಿಗೆ ವಿನಂತಿಸಿದ್ದರಲ್ಲದೇ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಲು ಸಲಹೆ ನೀಡುವಂತೆ ಕೋರಿಕೊಂಡಿದ್ದರು. ಆಗ ಈ ನಡೆಯನ್ನು ಪ್ರಶ್ನಿಸಿದ್ದೇ ಸುನ್ನಿ ವಕ್ಫ್ ಬೋರ್ಡ್‍ನ ಝಫರ್‍ಯಾಬ್ ಜೀಲಾನಿಯವರು. ಇದು ವಿವಾದ ಬಗೆ ಹರಿಯದಂತೆ ತಡೆಯುವ ಯತ್ನ ಎಂದವರು ಟೀಕಿಸಿದ್ದರು. ಬಳಿಕ ಸುಪ್ರೀಮ್ ಕೋರ್ಟು ಈ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿತಲ್ಲದೇ ತೀರ್ಪು ನೀಡುವಂತೆ ಅಲಹಾಬಾದ್ ಹೈಕೋರ್ಟ್‍ಗೆ ಸೂಚಿಸಿತ್ತು.
      ಇಲ್ಲಿ ಉದ್ಭವವಾಗುವ ಪ್ರಶ್ನೆ ಏನೆಂದರೆ, 2010 ಸೆಪ್ಟೆಂಬರ್‍ನಲ್ಲಿ ತಿರಸ್ಕರಿಸಿದ ಮಾತುಕತೆಯ ಪ್ರಸ್ತಾಪವನ್ನು ಈಗ ಸುಪ್ರೀಮ್ ಕೋರ್ಟ್ ಹೇಗೆ ಪರಿಹಾರ ಮಾರ್ಗವಾಗಿ ಸ್ವೀಕರಿಸಿತು ಎಂಬುದು. ಅಲ್ಲದೇ, ಸುಪ್ರೀಮ್ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ಕೇಹರ್ ಅವರ ಮುಂದೆ ಬಾಬರಿ ಮಸೀದಿಯ ಒಡೆತನಕ್ಕೆ ಸಂಬಂಧಿಸಿದ ವಿವಾದ ಇಲ್ಲ ಮತ್ತು ಅವರೀಗ ಮಾತುಕತೆಯ ಸಲಹೆ ಕೊಟ್ಟಿರುವುದು ಆ ವಿವಾದದ ಮೇಲಿನ ವಿಚಾರಣೆಯ ವೇಳೆಯೂ ಅಲ್ಲ. ಸುಬ್ರಹ್ಮಣ್ಯಂ ಸ್ವಾಮಿಯವರು 2016ರಲ್ಲಿ ಮುಖ್ಯ ನ್ಯಾಯಾಧೀಶರ ಎದುರು ಒಂದು ಮನವಿ ಮಾಡಿಕೊಂಡಿದ್ದರು. ಅಯೋಧ್ಯೆಯ ಹೊರಗಿನ ಸರಯೂ ನದಿ ತಟದಲ್ಲಿ ಮಸೀದಿ ನಿರ್ಮಿಸಿಕೊಳ್ಳಲು ಮತ್ತು ಬಾಬರಿ ಮಸೀದಿ ಇರುವ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸಲು ತಾವು ನಿರ್ದೇಶನ ನೀಡಬೇಕೆಂದು ಆ ಮನವಿಯಲ್ಲಿ ಅವರು ಕೋರಿಕೊಂಡಿದ್ದರು. ಆಗ ಸುಪ್ರೀಮ್ ಕೋರ್ಟ್ ಸುಬ್ರಹ್ಮಣ್ಯಂ ಸ್ವಾಮಿಯವರಲ್ಲಿ, ‘ನೀವು ಅಲಹಾಬಾದ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸದೇ ಇಲ್ಲಿಗೆ ಯಾಕೆ ಬಂದಿರಿ’ ಎಂದು ಪ್ರಶ್ನಿಸಿತ್ತು. ಇದೀಗ ಅದೇ ಅರ್ಜಿಯನ್ನು ಪರಿಗಣಿಸಿ ಮುಖ್ಯ ನ್ಯಾಯಾಧೀಶರು ಮಾತುಕತೆಯ ಸಲಹೆಯನ್ನಿಟ್ಟಿದ್ದಾರೆರೆ. ಮಾತ್ರವಲ್ಲ, ಮಧ್ಯಸ್ಥಿಕೆ ವಹಿಸಲೂ ಸಿದ್ಧ ಎಂದೂ ಹೇಳಿದ್ದಾರೆ. ಹೀಗೆ ಹೇಳುವಾಗ, ಎದುರು ಪಕ್ಷದವರ ಅಭಿಪ್ರಾಯ ಏನಿರಬಹುದು ಎಂಬುದನ್ನು ಅರಿತುಕೊಳ್ಳುವ ಉಮೇದನ್ನು ಅವರು ತೋರಿಲ್ಲ. ಮಾತು ಕತೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿಕೊಂಡು ಮಾರ್ಚ್ 31ರೊಳಗೆ ಕೋರ್ಟಿಗೆ ಬರುವಂತೆ ಅವರು ಸ್ವಾಮಿಗೆ ಆದೇಶಿಸಿದ್ದಾರೆ. ಈ ಸಲಹೆಗಿಂತ ಕೆಲವು ದಿನಗಳ ಮೊದಲು ದೆಹಲಿ ಯೂನಿವರ್ಸಿಟಿಯಲ್ಲಿ ಒಂದು ಸೆಮಿನಾರ್ ನಡೆದಿತ್ತು. ಅದರಲ್ಲಿ ಸುಬ್ರಹ್ಮಣ್ಯಂ ಸ್ವಾಮಿಯವರು ಬಾಬರಿ ವಿವಾದವನ್ನು ಪ್ರಸ್ತಾಪಿಸಿದ್ದರು. ‘ಸುಪ್ರೀಮ್ ಕೋರ್ಟ್‍ನಿಂದ ತಮಗೆ ಅನುಕೂಲಕರ ವಾದ ನಿಲುವು ಶೀಘ್ರ ಪ್ರಕಟವಾಗುತ್ತದೆ..’ ಎಂದು ಅವರು ಬಹಿರಂಗವಾಗಿಯೇ ಅಲ್ಲಿ ಹೇಳಿದ್ದರು. ಅಂದಹಾಗೆ, ಓರ್ವ ರಾಜಕಾರಣಿಯಾಗಿ ಮತ್ತು ವಕೀಲರಾಗಿ ಸಾರ್ವಜನಿಕ ಕುತೂಹಲವನ್ನು ಹುಟ್ಟು ಹಾಕುವ ಶ್ರಮ ಅದಾಗಿರಲೂ ಬಹುದು. ಆದರೆ ಅದರ ಬೆನ್ನಿಗೇ ‘ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿ’ ಎಂಬ ಮುಖ್ಯ ನ್ಯಾಯಾಧೀಶರ ಸಲಹೆ ಮತ್ತು ಅವರ ಅತಿ ಉಮೇದು ಅನುಮಾನಕ್ಕಂತೂ ಅವಕಾಶ ಮಾಡಿಕೊಡುತ್ತದೆ. ಇದರ ಜೊತೆಗೇ ಇನ್ನೊಂದು ಅಂಶವನ್ನೂ ಇಲ್ಲಿ ಪರಿಗಣಿಸಬೇಕಾಗುತ್ತದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದ ಮೇಲಿನ ವಿಚಾರಣೆಯನ್ನು ಸುಪ್ರೀಮ್ ಕೋರ್ಟು ಬಿಗಿಗೊಳಿಸಿದೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಟಿಯಾರ್, ಕಲ್ಯಾಣ್ ಸಿಂಗ್ ಸೇರಿದಂತೆ ಬಿಜೆಪಿಯ ಪ್ರಮುಖ 13 ನಾಯಕರ ವಿರುದ್ಧ ಲಕ್ನೋದ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದಲ್ಲಿ ಈ ಹಿಂದೆ ಸಿಬಿಐಯು ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಇವರ ಮೇಲೆ ಅದು ಒಳಸಂಚು ಆರೋಪವನ್ನು ಹೊರಿಸಿತ್ತು. 1997 ಸೆಪ್ಟೆಂಬರ್ 9ರಂದು ಸೆಶನ್ಸ್ ನ್ಯಾಯಾಧೀಶರಾದ ಜಗದೀಶ್ ಪ್ರಸಾದ್ ಶ್ರೀವಾಸ್ತವ್ ಅವರು ಈ ಪ್ರಕರಣದ ಬಗ್ಗೆ ತಮ್ಮ ತೀರ್ಪನ್ನೂ ಕೊಟ್ಟಿದ್ದರು. ‘ಆರೋಪಿಗಳು ಒಳಸಂಚಿನಲ್ಲಿ ಭಾಗಿಯಾಗಿರುವುದನ್ನು ಮತ್ತು 1990ರ ಆರಂಭದಿಂದ 1992 ಡಿ. 6ರ ವರೆಗಿನ ಅವಧಿಯಲ್ಲಿ ವಿವಿಧ ಸ್ಥಳಗಳಲ್ಲಿ ಸಂಚಿನ ಸಭೆ ನಡೆಸಿರುವುದನ್ನು’ ಅವರು ಪ್ರಸ್ತಾಪಿಸಿದ್ದರು. ಆದರೆ ಈ ಅಭಿಪ್ರಾಯವನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿಹಾಕಿತ್ತು. ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಇದರ ವಿರುದ್ಧ ಹಾಜಿ ಮೆಹಬೂಬ್ ಅಹ್ಮದ್ ಮತ್ತು ಸಿಬಿಐಯು ಸುಪ್ರೀಮ್ ಕೋರ್ಟ್‍ನ ಮೊರೆ ಹೋಗಿತ್ತು. ಮುಖ್ಯ ನ್ಯಾಯಾಧೀಶ ಕೇಹರ್ ಅವರು ಸುಬ್ರಹ್ಮಣ್ಯಂ ಸ್ವಾಮಿಯವರ ಮನವಿಗೆ ಸ್ಪಂದಿಸಿ ಮಾತುಕತೆಯ ಸಲಹೆ ನೀಡುವುದಕ್ಕಿಂತ ಒಂದು ವಾರ ಮೊದಲು ಸುಪ್ರೀಮ್ ಕೋರ್ಟ್ ಈ ಧ್ವಂಸ ಪ್ರಕರಣವನ್ನು ವಿಚಾರಣೆಗೆತ್ತಿ ಕೊಂಡಿತ್ತಲ್ಲದೇ, ಆರೋಪಿಗಳ ವಿರುದ್ಧ ಕ್ರಿಮಿನಲ್ ಒಳಸಂಚಿನ ಕುರಿತಂತೆ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸುವಂತೆ ಸಿಬಿಐಗೆ ಆದೇಶಿಸುವ ಒಲವನ್ನೂ ವ್ಯಕ್ತಪಡಿಸಿತ್ತು.
      ಒಂದು ಕಡೆ ಬಾಬರಿ ಮಸೀದಿಯನ್ನು ರಾಜಕೀಯಕ್ಕೆ ಬಳಸಿದ, ಅದರ ಹೆಸರಲ್ಲಿ ರಥಯಾತ್ರೆ ನಡೆಸಿದ ಮತ್ತು ಮಸೀದಿಯನ್ನು ಧ್ವಂಸಗೊಳಿಸಿದ ಆರೋಪ ಹೊತ್ತಿರುವ ಪಕ್ಷವು ಕೇಂದ್ರದಲ್ಲಿ ಮತ್ತು ಬಾಬರಿ ಮಸೀದಿ ಇರುವ ಉತ್ತರ ಪ್ರದೇಶ ದಲ್ಲಿ ಅಧಿಕಾರದಲ್ಲಿದೆ. ಇನ್ನೊಂದು ಕಡೆ, ಅದೇ ಪಕ್ಷದ ಹಿರಿಯ ನಾಯಕರು ಮಸೀದಿ ಧ್ವಂಸದ ಕಾರಣಕ್ಕಾಗಿ ಕಾನೂನಿನ ಬಲೆ ಯೊಳಗೆ ಸಿಲುಕುವ ಸಾಧ್ಯತೆಗಳೂ ಹೆಚ್ಚಾಗುತ್ತಿವೆ. ಇಂಥ ಸ್ಥಿತಿ ಯಲ್ಲಿ, ಮುಖ್ಯ ನ್ಯಾಯಾಧೀಶರ ಬಾಯಿಯಿಂದ ಹೊರಬಿದ್ದ ಮಾತುಕತೆ ಎಂಬ ಸಲಹೆಯಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿ ಗರು ನೆಮ್ಮದಿ ಕಂಡಿರುವುದನ್ನು ಅಸಹಜವೆನ್ನುವಂತಿಲ್ಲ. ಇದರಲ್ಲಿ ಬಿಜೆಪಿಗೆ ಅನುಕೂಲಕರವಾದ ಇನ್ನೊಂದು ಅಂಶವೂ ಇದೆ. ತಾವು ಈ ವಿವಾದವನ್ನು ಬಗೆಹರಿಸುವುದಕ್ಕೆ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದೇವೆ ಎಂಬ ಸಂದೇಶವನ್ನು ಈ ಮೂಲಕ ಜನರಿಗೆ ತಲುಪಿಸಿದಂತೆಯೂ ಆಗುತ್ತದೆ. ಒಂದು ವೇಳೆ ಸುನ್ನಿ ವಕ್ಫ್ ಮಂಡಳಿ ಮಾತುಕತೆಗೆ ಸಿದ್ಧವಾದರೆ, ಅದು ಇನ್ನೊಂದು ಸಾಧ್ಯ ತೆಗೂ ಬಾಗಿಲು ತೆರೆಯಬಹುದು. ಮುಸ್ಲಿಮ್ ಸಮುದಾಯದೊಳಗೆ ಭಿನ್ನಮತ ತಲೆದೋರಬಹುದು. ವಿವಿಧ ಅಭಿಪ್ರಾಯಗಳು ಸಾರ್ವ ಜನಿಕವಾಗಿ ಸುದ್ದಿ ಮಾಡಬಹುದು. ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ಮರೆಯಲ್ಲಿ ನಿಂತು ಅವಕಾಶವಾದಿಗಳು ವಿವಿಧ ಬಾಣಗಳನ್ನು ಹೂಡಬಹುದು. ಸುನ್ನಿ ವಕ್ಫ್ ಮಂಡಳಿಯೊಳಗೆ ಭಿನ್ನಮತ ತಲೆದೋರುವುದಕ್ಕೂ ಕಾರಣವಾಗಬಹುದು. ಅಲ್ಲದೇ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ದಲ್ಲಿರುವುದರಿಂದ ಒತ್ತಡ ತಂತ್ರಗಳೂ ನಡೆಯಬಹುದು. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತೀರಾ ದುರ್ಬಲವಾಗಿರುವ ಹಾಗೂ ಪೋಪ್ ರಂತೆ ಏಕ ನಾಯಕತ್ವವನ್ನು ಹೊಂದಿಲ್ಲದ ಸಮುದಾಯವೊಂದನ್ನು ಮಾತುಕತೆಯ ಹೆಸರಲ್ಲಿ ಚೆಲ್ಲಾಪಿಲ್ಲಿಗೊಳಿಸುವುದು ಕಷ್ಟಕರವೇನೂ ಅಲ್ಲ. ಬಹುಶಃ, ಬಿಜೆಪಿ ಮತ್ತು ಸಂಘಪರಿವಾರಗಳು ಮಾತುಕತೆಯ ಪರ ಒಲವು ವ್ಯಕ್ತಪಡಿಸಿರುವುದರ ಹಿಂದೆ ಈ ತಂತ್ರಗಾರಿಕೆಯೂ ಇದ್ದಿರಬಹುದು ಎನಿಸುತ್ತದೆ. ಇನ್ನೊಂದು ಸಾಧ್ಯತೆ ಏನೆಂದರೆ, ಬಾಬರಿ ಮಸೀದಿ ಇರುವ ಭೂಮಿಯ ಒಡೆತನವು ಮುಸ್ಲಿಮರ ಕೈವಶವಾಗುವ ಭೀತಿ ಅವರನ್ನು ಕಾಡಿರುವುದು ಮತ್ತು ಪ್ರಮುಖ ನಾಯಕರು ತಪ್ಪಿತಸ್ಥರಾಗುವ ಅನುಮಾನ ಅವರನ್ನು ಆವರಿಸಿರುವುದು. ಮಾತುಕತೆಯ ಮೂಲಕ ಈ ವಿವಾದ ಬಗೆಹರಿದರೆ ಈ ಎರಡೂ ಅಪಾಯಗಳಿಂದ ತಪ್ಪಿಸಿ ಕೊಳ್ಳಬಹುದು ಎಂಬ ದೂರದೃಷ್ಟಿ ಅವರದ್ದಾಗಿರಲೂ ಬಹುದು ಅಥವಾ ಮಾತುಕತೆಯ ಹೆಸರಲ್ಲಿ ಪ್ರಕರಣವನ್ನು ಇನ್ನಷ್ಟು ಕಾಲ ಜೀವಂತ ಇರಿಸುವ ಸಂಚೂ ಇರಬಹುದು.    
       ಬಾಬರಿ ಮಸೀದಿ ಇರುವ ಜಾಗ ಯಾರ ಒಡೆತನಕ್ಕೆ ಸೇರಬೇಕು ಎಂಬುದು ಸುಪ್ರೀಮ್ ಕೋರ್ಟ್‍ನ ಮುಂದೆ ಸದ್ಯ ಇರುವ ಮುಖ್ಯ ಪ್ರಶ್ನೆ. ಈ ಪ್ರಶ್ನೆ ಅಲಹಾಬಾದ್ ಹೈಕೋರ್ಟ್‍ನ ಎದುರೂ ಇತ್ತು. ಅದು ಕೊಟ್ಟ ತೀರ್ಪನ್ನು ಮೂವರು ಕಕ್ಷಿದಾರರೂ ಒಪ್ಪಿಕೊಂಡಿಲ್ಲ. ವಿವಾದಿತ ಜಾಗದಲ್ಲಿ ಏನಿರಬೇಕು, ಏನಿರಬಾರದು ಎಂಬುದನ್ನು ಭೂಮಿಯ ಒಡೆತನ ಯಾರಿಗೆ ಸೇರಬೇಕು ಎಂಬುದು ನಿರ್ಧರಿಸುತ್ತದೆ. ಸುಬ್ರಹ್ಮಣ್ಯಂ ಸ್ವಾಮಿಯವರು ಮಸೀದಿ ಅಲ್ಲಿ ಇರಲೇಬಾರದು ಎಂದು ವಾದಿಸುತ್ತಾರೆ. ಇದು ಮಾತುಕತೆಗೆ ಪೂರ್ವಭಾವಿಯಾಗಿ ಅವರು ಒಡ್ಡುವ ಸ್ಪಷ್ಟ ಷರತ್ತು. ಮಾತುಕತೆಗೆ ಮುಸ್ಲಿಮರು ಒಪ್ಪದೇ ಇದ್ದರೆ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತ ಲಭ್ಯವಾಗುವ ವರೆಗೆ ಕಾದು ಬಳಿಕ ಶಾಬಾನು ಪ್ರಕರಣದಲ್ಲಿ ರಾಜೀವ್ ಗಾಂಧಿ ಮಾಡಿದಂತೆ ಮಸೂದೆಯೊಂದನ್ನು ಪಾಸು ಮಾಡಿ ಮಂದಿರ ಕಟ್ಟುವುದಾಗಿ ಅವರು ಧಮ್ಕಿ ಹಾಕುತ್ತಾರೆ. 2024ರ ಒಳಗೆ ಅಯೋಧ್ಯಾ, ಮಥುರಾ, ಕಾಶಿಗಳು ಮುಸ್ಲಿಮರಿಂದ ಮುಕ್ತವಾಗಲಿವೆ ಎಂದೂ ಬೆದರಿಸುತ್ತಾರೆ. ಇವೆಲ್ಲ ಏನು? ಮಾತುಕತೆಗೆ ರಂಗ ಸಜ್ಜುಗೊಳಿಸುವುದು ಹೀಗೆಯೇ? ಬೆದರಿಸಿ, ಒತ್ತಡಕ್ಕೊಳಪಡಿಸಿ ತಮಗೆ ಬೇಕಾದ ಪರಿಹಾರವನ್ನು ಪಡೆಯಬಲ್ಲೆವು ಎಂಬ ದಾರ್ಷ್ಟ್ಯತನವಲ್ಲವೇ ಇದು? ಸುಬ್ರಹ್ಮಣ್ಯಂ ಸ್ವಾಮಿಯವರ ಮಾತು, ಹಾವ-ಭಾವವೇ ಅವರು ಮತ್ತು ಅವರ ಪಕ್ಷವು ಚಪ್ಪಾಳೆ ತಟ್ಟಿ ಸ್ವಾಗತಿಸಿರುವ ಮಾತುಕತೆ ಎಂಬ ಪರಿಹಾರ ಮಾರ್ಗವು ಎಷ್ಟು ಅಪಾಯಕಾರಿ ಎಂಬುದನ್ನು ಸೂಚಿಸುತ್ತದೆ. ಇದಕ್ಕಿಂತ ಕೋರ್ಟೇ ಹೆಚ್ಚು ನಂಬಿಗಸ್ಥ.
       ಅದುವೇ ತೀರ್ಪು ಕೊಡಲಿ.