Thursday, July 27, 2017

ತಿಯೋಡರ್ ಶಾನಿನ್ ಭಾರತದಲ್ಲಿರುತ್ತಿದ್ದರೆ ಕೃತಿಯ ಹೆಸರು ಏನಿರುತ್ತಿತ್ತು?

      ಖ್ಯಾತ ಪ್ರೊಫೆಸರ್ ತಿಯೋಡರ್ ಶಾನಿನ್ ಅವರ ‘ರೈತರು ಮತ್ತು ರೈತ ಸಮಾಜಗಳು’ (Peasant and peasant societies) ಎಂಬ ಕೃತಿಯ ಬಗ್ಗೆ ಅರಿತುಕೊಳ್ಳುವ ಸಂದರ್ಭ ಸಿಕ್ಕಿತು. ಈ ಕೃತಿಯ ಮೇಲೆ ನಡೆದ ಚರ್ಚೆ, ವಿಮರ್ಶೆ ಮತ್ತು ರೈತ ಸಮುದಾಯದ ಬಗ್ಗೆ ಕೃತಿಕಾರನ ಆಳ ಅಧ್ಯಯನವು ಯಾರನ್ನೇ ಆಗಲಿ ಪ್ರಭಾವಿತಗೊಳಿಸಬಲ್ಲಷ್ಟು ಪ್ರಾಮುಖ್ಯವಾದವು. ಈ ಕೃತಿಗೆ ಎರಡು ದಶಕಗಳಿಗಿಂತ ಹೆಚ್ಚು ಪ್ರಾಯವಾಗಿದೆ ಮತ್ತು ‘ರಶ್ಯನ್ ಕ್ರಾಂತಿಯಲ್ಲಿ ರೈತರ ಪಾತ್ರ’ ಎಂಬ ವಿಷಯದ ಮೇಲೆ ನಡೆಸಿದ ಅಧ್ಯಯನವು ಈ ಕೃತಿ ರಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂಬ ಎರಡು ಕೊರತೆಗಳನ್ನು ಬಿಟ್ಟರೆ ಇದು ಒಂದು ಬಹು ಪ್ರಭಾವಿ ಕೃತಿ. ವಿಶೇಷ ಏನೆಂದರೆ, ಈ ಕೃತಿಯ ಬಗ್ಗೆ ಓದುತ್ತಾ ಹೋದಂತೆ ಭಾರತದಲ್ಲಿ ಇತ್ತೀಚೆಗೆ ದುರಂತಮಯವಾಗಿ ಅಂತ್ಯ ಕಂಡ ಎರಡು ರೈತ ಪ್ರತಿಭಟನೆಗಳು ಕಣ್ಣ ಮುಂದೆ ತೇಲಿ ಬಂದುವು.
1. ದೆಹಲಿಯ ಜಂತರ್-ಮಂತರ್‍ನಲ್ಲಿ ತಮಿಳುನಾಡು ರೈತರು ನಡೆಸಿದ ಪ್ರತಿಭಟನೆ.
2. ಮಧ್ಯಪ್ರದೇಶದ ಮಂಡಸೂರ್‍ನಲ್ಲಿ ನಡೆದ ರೈತ ಪ್ರತಿಭಟನೆ.
ತಮಿಳುನಾಡಿನ ಸುಮಾರು 100ಕ್ಕಿಂತಲೂ ಅಧಿಕ ರೈತರು 42 ದಿನಗಳ ಕಾಲ ಪ್ರತಿಭಟನೆ ನಡೆಸಿದರು. ಜಂತರ್ ಮಂತರ್ ಅನ್ನು ಈ ರೈತರು ಯಾಕೆ ಆಯ್ಕೆ ಮಾಡಿಕೊಂಡರೆಂದರೆ, ಅವರ ಬೇಡಿಕೆ ತಮಿಳುನಾಡು ಸರಕಾರದ ವ್ಯಾಪ್ತಿಗೆ ಬರುತ್ತಿರಲಿಲ್ಲ. ಕೇಂದ್ರ ಸರಕಾರವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಅವರು ಪ್ರತಿಭಟನೆಗೆ ಗಾಂಧಿ ಮಾರ್ಗವನ್ನು ಆಶ್ರಯಿಸಿದರು. ರೈತರೆಂದರೆ ಗ್ರಾಮೀಣ ಭಾರತದಲ್ಲಿ ಬದುಕುವ ಜನಸಮೂಹ. ಮಣ್ಣು, ಕೆಸರು, ನೀರು ಮುಂತಾದುವುಗಳ ಜೊತೆಗೇ ಹೆಚ್ಚು ಬೆರೆತು ಗೊತ್ತಿರುವ ಮತ್ತು ಪೇಟೆಯ ಥಳಕನ್ನು ಅಂಜಿಕೆಯಿಂದ ನೋಡುವ ಜನರು ಇವರು. ಆದ್ದರಿಂದ ಜಂತರ್ ಮಂತರ್ ಅನ್ನುವುದು ಅವರ ಪಾಲಿಗೆ ತೀರಾ ಹೊಸತು. ದುಡಿಯುವ ವರ್ಗವು, ಪಟ್ಟಣದ ಒಂದು ಕಡೆ ದುಡಿಯದೇ ವಾರಗಟ್ಟಲೆ ಕಳೆಯುವುದೇ ಒಂದು ಹಿಂಸೆ. ಇದು ಅವರ ಪ್ರತಿಭಟನೆಯಲ್ಲೂ ವ್ಯಕ್ತವಾಯಿತು. ಕೇಂದ್ರ ಸರಕಾರ ಈ ಪ್ರತಿಭಟನೆಯನ್ನು ನಿರ್ಲಕ್ಷಿಸ ತೊಡಗಿದಾಗ ಅವರು ಪ್ರತಿಭಟನೆಯ ವಿಧಾನವನ್ನು ಬದಲಿಸಿದರು. ಸ್ವತಃ ತಮ್ಮ ಮೂತ್ರವನ್ನೇ ಕುಡಿಯುವ ಆಘಾತಕಾರಿ ಪ್ರಯೋಗಕ್ಕೆ ಇಳಿದರು. ಪ್ರಧಾನಿ ನಿವಾಸದೆದುರು ಬೆತ್ತಲೆಯಾಗಿ ಓಡಿದರು. ಕಳೆದ ವರ್ಷದ ಅಕ್ಟೋಬರ್‍ನಿಂದ ಆತ್ಮಹತ್ಯೆ ಮಾಡಿಕೊಂಡ ತಮ್ಮ ಪ್ರೀತಿ ಪಾತ್ರ ರೈತರ ಡಮ್ಮಿ ತಲೆಬುರುಡೆಯನ್ನು ಪ್ರದರ್ಶಿಸಿದರು. ರಸ್ತೆಯಲ್ಲಿ ಉಂಡರು. ಇಲಿ ಮತ್ತು ಸತ್ತ ಹಾವನ್ನು ಬಾಯಲ್ಲಿ ಕಚ್ಚಿ ಹಿಡಿದರು. ಹುಚ್ಚರಂತೆ ವೇಷ ತೊಟ್ಟರು.. ಹಾಗಂತ, ಅವರ ಬೇಡಿಕೆಯು ಕೇಂದ್ರ ಸರಕಾರವು ಪುಟ್ಟದೊಂದು ಸಾಂತ್ವನ ಒದಗಿಸದಷ್ಟು ಮತ್ತು ಪ್ರಧಾನಿ ಮೋದಿಯವರ ಮನ್ ಕಿ ಬಾತ್‍ನಲ್ಲಿ ಪ್ರಸ್ತಾಪಿಸಲ್ಪಡದಷ್ಟು ದೇಶದ್ರೋಹಿ ಆಗಿರಲಿಲ್ಲ.
1. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು.
2. ಸೂಕ್ತ ಬರ ಪರಿಹಾರವನ್ನು ಘೋಷಿಸಬೇಕು.
3. ಕಾವೇರಿ ಮ್ಯಾನೇಜ್‍ಮೆಂಟ್ ಬೋರ್ಡ್ ನಿಗದಿಪಡಿಸಿದ ನೀರನ್ನು ಅಡೆತಡೆಯಿಲ್ಲದೇ ಒದಗಿಸಬೇಕು.
ತಕ್ಷಣಕ್ಕೆ ಒಪ್ಪಿ ಬಿಡುವಂತಹ ಸುಲಭದ ಬೇಡಿಕೆ ಇವು ಅಲ್ಲವಾದರೂ ಪ್ರತಿಕ್ರಿಯೆಗೆ ಅನರ್ಹವಾದಂತಹವುಗಳೇ ಇವು? 42 ದಿನಗಳ ಕಾಲ ಗಾಂಧಿ ಮಾದರಿಯಲ್ಲಿ ಪ್ರತಿಭಟಿಸಿದ ರೈತ ಗುಂಪು ಕೊನೆಗೆ ನಿರಾಶೆಯಿಂದ ಗದ್ದೆಗೆ ಮರಳಿರುವುದು ಏನನ್ನು ಸೂಚಿಸುತ್ತದೆ? ಭಾರತವನ್ನು ಕೃಷಿ ಪ್ರಧಾನ ದೇಶ ಎಂದು ವ್ಯಾಖ್ಯಾನಿಸುವ ಸರಕಾರದ ನೀತಿಗಳು ಎಷ್ಟಂಶ ಕೃಷಿಗೆ ಪೂರಕವಾಗಿವೆ? ಕೃಷಿಯನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ ನೋಡಲು ರಾಜಕೀಯ ಅರ್ಥ ತಜ್ಞರು ಎಲ್ಲಿಯವರೆಗೆ ಯಶಸ್ವಿಯಾಗಿದ್ದಾರೆ? ಗೋವನ್ನು ನಕಲಿ ಗೋರಕ್ಷಕರು ನೋಡುವ ರೀತಿಯಲ್ಲೇ  ಸರಕಾರಗಳು ಕೃಷಿಯನ್ನು ನೋಡುತ್ತಿವೆಯೇ? ಕೃಷಿಯನ್ನು ಪೂಜನೀಯ ಸ್ಥಾನದಲ್ಲಿಟ್ಟು, ರೈತರಿಗೆ ಗುಂಡು ಹೊಡೆಯುವುದು ಕೂಡ ಸಮರ್ಥನೀಯವಾಗುತ್ತಿರುವುದು ಯಾವ ಕಾರಣದಿಂದ? ಜಂತರ್ ಮಂತರ್‍ನ ಬಳಿಕ ನಡೆದ ಮಧ್ಯಪ್ರದೇಶದ ಮಂಡಸೂರ್ ಪ್ರತಿಭಟನೆಯು ಇಂಥ ಪ್ರಶ್ನೆಗಳಿಗೆ ಮತ್ತೊಮ್ಮೆ ಚರ್ಚಾ ವೇದಿಕೆಯನ್ನು ಒದಗಿಸಿದೆ. ನಿಜವಾಗಿ, ಜಂತರ್ ಮಂತರ್‍ಗೆ ಹೋಲಿಸಿದರೆ ಮಂಡಸೂರ್ ಪ್ರತಿಭಟನೆ ಸಂಪೂರ್ಣ ಭಿನ್ನ. ಅಲ್ಲಿ ಹಿಂಸಾಚಾರ ನಡೆದಿದೆ. ಬೆಂಕಿ ಹಚ್ಚಲಾದ ಘಟನೆಗಳು ನಡೆದಿವೆ. ಪೊಲೀಸರ ಗುಂಡಿಗೆ 7ರಷ್ಟು ರೈತರು ಸಾವಿಗೀಡಾಗಿದ್ದಾರೆ. ಜಂತರ್ ಮಂತರ್‍ನ ಗಾಂಧಿ ಮಾದರಿಯ ಪ್ರತಿಭಟನೆಯು ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮವನ್ನು ಬೀರದೇ ನಿರಾಶಾದಾಯಕವಾಗಿ ಕೊನೆಗೊಂಡ ಬಳಿಕ ನಡೆದ ಪ್ರತಿಭಟನೆ ಇದು ಎಂಬ ನೆಲೆಯಲ್ಲಿ ಈ ಪ್ರತಿಭಟನೆ ಮತ್ತು ಅಲ್ಲಿಯ ಹಿಂಸಾಚಾರ ಮುಖ್ಯವಾಗುತ್ತದೆ. ಮಂಡಸೂರ್‍ನಲ್ಲಿ ಸೇರಿದ ರೈತರ ಎದುರು ಜಂತರ್ ಮಂತರ್ ವಿಫಲ ಪ್ರತಿಭಟನಾ ಮಾದರಿಯಿತ್ತು. ಅದೇ ಮಾದರಿಯನ್ನು ಆಯ್ಕೆ ಮಾಡಿಕೊಂಡರೆ ವ್ಯವಸ್ಥೆಯ ದಪ್ಪ ಚರ್ಮಕ್ಕೆ ನಾಟದು ಎಂದು ಅವರು ಭಾವಿಸಿದ್ದರೆ, ಅದರ ಸಂಪೂರ್ಣ ಹೊಣೆಯನ್ನು ಅವರ ಮೇಲೆ ಹೊರಿಸಬೇಕಿಲ್ಲ. ವಿಶೇಷ ಏನೆಂದರೆ, ಕೇಂದ್ರ ಸರಕಾರಕ್ಕೆ ರೈತರು, ಕಾರ್ಮಿಕರು, ಸಂಘಟನೆಗಳು, ಹಕ್ಕು ಕಾರ್ಯಕರ್ತರು, ಭಯೋತ್ಪಾದಕರು.. ಮುಂತಾದುವುಗಳ ವ್ಯತ್ಯಾಸವೇ ಗೊತ್ತಿಲ್ಲ ಅನ್ನುವುದನ್ನು ಮಂಡಸೂರ್ ಎತ್ತಿ ತೋರಿಸಿತು. ರೈತ ಪ್ರತಿಭಟನೆಯನ್ನು ಅದು ನೋಡಿದ್ದು ಕಾನೂನು ಮತ್ತು ಸುವ್ಯವಸ್ಥೆ ಎಂಬ ಕಣ್ಣಿನಿಂದಲೇ. ಆಂತರಿಕ ಭದ್ರತೆಗೆ ರೈತ ಪ್ರತಿ ಭಟನೆಯಿಂದ ಅಪಾಯವಿದೆ ಎಂಬಂತೆ ಅದು ವ್ಯಾಖ್ಯಾನಿಸಿತು. ಈ ಪ್ರತಿಭಟನೆಯ ಹಿಂದೆ ದಂಗೆಕೋರ ಶಕ್ತಿಗಳ, ದೇಶದ್ರೋಹಿಗಳ ಕೈವಾಡ ಇರುವ ಸಾಧ್ಯತೆ ಇದೆ.. ಎಂಬಂತಹ ಅನುಮಾನಗಳನ್ನು ಅದು ಬಿತ್ತುವ ಪ್ರಯತ್ನ ಮಾಡಿತು. ನಿಜವಾಗಿ, ರೈತರು ಪ್ರತಿ ಭಟನೆಯಲ್ಲಿ ಭಾಗವಹಿಸುವುದು ಸಾಮಾನ್ಯವಾಗಿ ಬೆಳೆಗೆ ಸಂಬಂದಿಸಿ ಮಾತ್ರ. ಅತಿವೃಷ್ಟಿ, ಅನಾವೃಷ್ಟಿ, ರಸಗೊಬ್ಬರ, ನೀರು.. ಇತ್ಯಾದಿಗಳ ಬಗ್ಗೆ ದೂರಿಕೊಂಡು ವರ್ಷದಲ್ಲಿ ಅಪರೂಪವಾಗಿ ಅವರು ಬೀದಿಗೆ ಬರುತ್ತಾರೆ. ಇವರು ಭಯೋತ್ಪಾದಕರಲ್ಲ ಅಥವಾ ಇತರ ಪ್ರತಿಭಟನಾಕಾರರಂತೆ ಇವರನ್ನು ಪರಿಗಣಿಸಬೇಕಿಲ್ಲ. ಅವರಿಗೆ ಹೇಳಿಕೊಳ್ಳಲು ಬಿಡಬೇಕು. ಜನಪ್ರತಿನಿಧಿಗಳು ಅವರನ್ನು ಆಲಿಸಬೇಕು. ಅದರ ಜೊತೆ ಜೊತೆಗೇ ಕೃಷಿ ಸಮಸ್ಯೆಯನ್ನು ಅರಿತುಕೊಳ್ಳುವ ಮತ್ತು ಕೃಷಿಗೆ ಸಂಬಂಧಿಸಿದ ಜ್ಞಾನ ಪಡೆದುಕೊಳ್ಳುವ ಮನಸ್ಸೂ ಹೊಂದಿರಬೇಕು. ಕೃಷಿಯನ್ನು ಸಮಸ್ಯೆಯಾಗಿ ಕಾಣುವುದಕ್ಕಿಂತ ಅದನ್ನು ಜೀವನ ಮಾರ್ಗವಾಗಿ ಪರಿಗಣಿಸುವ ಪ್ರಬುದ್ಧತೆ ಬರಬೇಕು. ದುರಂತ ಏನೆಂದರೆ, ಕೃಷಿ ಪ್ರದೇಶದಿಂದ ಆಯ್ಕೆಯಾಗುವ ಜನಪ್ರತಿನಿಧಿಗೂ ಕೃಷಿಯೊಂದಿಗೆ ಸಂಬಂಧ ಇರುವುದು ತೀರಾ ತೆಳು ಮಟ್ಟದಲ್ಲಿ. ನಗರದಲ್ಲಿ ಬೆಳೆದ ವ್ಯಕ್ತಿ ಅಥವಾ ಗದ್ದೆಗೆ ಇಳಿಯಲು ಹೇಸಿಗೆ ಪಡುವ ವ್ಯಕ್ತಿ ಈ ದೇಶದ ಕಾನೂನು ನಿರ್ಮಾತೃ ಆಗುತ್ತಾನೆ. ಕೃಷಿಕರನ್ನು ಆಳುತ್ತಾನೆ. ಬಜೆಟ್ ಮಂಡಿಸುತ್ತಾನೆ. ಕೃಷಿಗೆ ಸಂಬಂಧಿಸಿ ಹಲವಾರು ಸಮಿತಿಗಳು ನೀಡಿರುವ ಅನೇಕ ವರದಿಗಳ ಬಗ್ಗೆ ಏನೇನೂ ಗೊತ್ತಿಲ್ಲದವರೇ ನಮ್ಮ ಶಾಸನ ಸಭೆಗಳಲ್ಲಿ ಹೆಚ್ಚಿದ್ದಾರೆ. ಎಂ.ಎಸ್. ಸ್ವಾಮಿನಾಥನ್ ಅವರು ರೈತ ಸಾವನ್ನು ತಡೆಗಟ್ಟುವುದಕ್ಕೆ ಹಲವು ಮಾರ್ಗಗಳನ್ನು ಸೂಚಿಸಿದ್ದಾರೆ. ‘ರೈತನು ಗದ್ದೆಗೆ ಹೂಡುವ ಬೆಲೆಯ ಅರ್ಧದಷ್ಟು ಬೆಂಬಲ ಬೆಲೆಯನ್ನು ಆತನ ಫಸಲಿಗೆ ನೀಡಬೇಕೆಂಬುದು’ ಅವರು ನೀಡಿರುವ ವರದಿಯ ಪ್ರಮುಖ ಅಂಶ. ಮಂಡಸೂರ್ ಪ್ರತಿಭಟನೆಗೆ ಸಂಬಂಧಿಸಿ ಈ ವರದಿ ಅತಿ ಉಪಯುಕ್ತವಾದುದು. ಆದರೆ, ಶಿವರಾಜ್ ಸಿಂಗ್ ಚೌಹಾಣ್‍ರು ಇಡೀ ಪ್ರತಿಭಟನೆಯನ್ನು ಜೋಕ್ ಆಗಿ ಪರಿವರ್ತಿಸಿದರು. ರೈತ ಪ್ರತಿಭಟನೆಗೆ ವಿರುದ್ಧವಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಕುಳಿತರು. ಅಷ್ಟೇ ಶೀಘ್ರವಾಗಿ ಲಿಂಬೆ ಜ್ಯೂಸ್ ಕುಡಿದು ಸತ್ಯಾಗ್ರಹದಿಂದ ಮುಕ್ತವಾದರು. ಒಂದು ಕಡೆ ಪ್ರತಿಭಟನಾಕಾರರ ಮೇಲೆ ಗುಂಡೆಸೆಯುತ್ತಲೇ ಇನ್ನೊಂದು ಕಡೆ ತಾನು ಗಾಂಧಿ ಮಾರ್ಗದಲ್ಲಿದ್ದೇನೆ ಎಂದು ಸಾರುವ ಬುದ್ಧಿವಂತಿಕೆ ಇದು. ಏಕಕಾಲದಲ್ಲಿ ರೈತರನ್ನು ವಿಲನ್‍ಗಳಾಗಿಯೂ ತಾನು ಮತ್ತು ತನ್ನ ಸರಕಾರವನ್ನು ಹೀರೋ ಆಗಿಯೂ ಬಿಂಬಿಸಿಕೊಂಡ ಕ್ಷಣ ಇದು. ಮಾಧ್ಯಮಗಳೂ ಚೌಹಾಣ್‍ರ ಬಲೆಯೊಳಗೆ ಬಿದ್ದುವು. ರೈತರನ್ನು ಗೂಂಡಾಗಳಂತೆ ಮತ್ತು ಆಂತರಿಕ ಸುರಕ್ಷತೆಗೆ ಅಪಾಯಕಾರಿಗಳಂತೆ ಪರೋಕ್ಷವಾಗಿ ಅವು ಸಾರಿದುವು. ರೈತರನ್ನು ಭೇಟಿಯಾಗಲು ಹೋದವರನ್ನು ಸರಕಾರ ಅರ್ಧದಲ್ಲೇ  ತಡೆಯಿತು. ಅದಕ್ಕೆ ಕಾನೂನು ಸುವ್ಯವಸ್ಥೆಯ ಸಬೂಬು ನೀಡ ಲಾಯಿತು. ಒಟ್ಟಿನಲ್ಲಿ ರೈತರನ್ನು ಸಮಾಜದಿಂದ ಪ್ರತ್ಯೇಕಗೊಳಿಸಿ, ಉದ್ರಿಕ್ತವಾಗಬಹುದಾದ ಎಲ್ಲ ಮಾರ್ಗವನ್ನೂ ಮುಕ್ತಗೊಳಿಸಿ, ಕೊನೆಗೆ ಸದೆಬಡಿಯುವ ತಂತ್ರವನ್ನು ಅತ್ಯಂತ ಯಶಸ್ವಿಯಾಗಿ ಮಾಡಿ ಮುಗಿಸಲಾಯಿತು. ಮುಖ್ಯವಾಗಿ, ರೈತರಿಗೆ ರಾಜಕೀಯದ ಒಳ-ಸುಳಿಗಳು ಗೊತ್ತಿಲ್ಲ. ಗದ್ದೆಯಲ್ಲಿ ಅವರು ತಮ್ಮ ಹಣವನ್ನು ಹೂಡುತ್ತಾರೆ. ಅದಕ್ಕಾಗಿ ಬ್ಯಾಂಕುಗಳಿಂದಲೋ ಕೈಗಡವಾಗಿಯೋ ಸಾಲವನ್ನು ಪಡೆಯುತ್ತಾರೆ. ಫಸಲು ನಿರೀಕ್ಷಿಸುತ್ತಾರೆ. ಅವರ ಬಹುತೇಕ ಗಮನ ಗದ್ದೆ-ಫಸಲು, ಬ್ಯಾಂಕುಗಳ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಎಲ್ಲವೂ ಕೈಕೊಟ್ಟಿತು ಅನ್ನುವಾಗ ಬೀದಿಗಿಳಿಯುತ್ತಾರೆ. ಮಂಡಸೂರ್‍ನ ರೈತರ ಪ್ರತಿಭಟನೆಗೆ ಮುಖ್ಯ ಕಾರಣ, ಅತಿವೃಷ್ಟಿ. ಗದ್ದೆಗೆ ಎಷ್ಟು ಹೂಡಿಕೆ ಮಾಡಿದ್ದಾರೋ ಆ ಮೊತ್ತವೂ ಲಭ್ಯವಾಗದಷ್ಟು ಬೆಲೆ ಪಾತಾಳಕ್ಕೆ ಕುಸಿದಿತ್ತು. ಅಲ್ಲದೇ ನೋಟು ಅಮಾನ್ಯವು ರೈತರ ಸಮಸ್ಯೆಗಳಿಗೆ ಉಪ್ಪು-ಖಾರವನ್ನು ಹಚ್ಚಿತ್ತು. ಆದರೆ ಕೇಂದ್ರ ಸರಕಾರವು ಒಟ್ಟು ಬೆಳವಣಿಗೆಯನ್ನು ‘ಭಯೋ ತ್ಪಾದನೆ’ಯ ಕಣ್ಣಲ್ಲಿ ಅಳೆಯುವುದರೊಂದಿಗೆ ಇಡೀ ಸನ್ನಿವೇಶವೇ ಬದಲಾಯಿತು. ರೈತರೆಲ್ಲ ಆಂತರಿಕ ಸುರಕ್ಷತೆಗೆ ಅಪಾಯಕಾರಿಗಳಾಗಿ ಕಂಡುಬಂದರು. ಗುಂಡು ಹಾರಿಸಿದ್ದನ್ನೂ ಸಮರ್ಥಿಸಿಕೊಳ್ಳಲಾಯಿತು. ಇಡೀ ಪ್ರಕರಣವನ್ನು ನಿಭಾಯಿಸುವಲ್ಲಿ ಚೌಹಾಣ್ ಸಂಪೂರ್ಣ ವಿಫಲರಾದರೂ ಅವರ ಸತ್ಯಾಗ್ರಹವೇ ರೈತ ಪ್ರತಿಭಟನೆಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ರಾಜಕಾರಣಿಯೋರ್ವ ರೈತನನ್ನು ಯಾವ ಆಯುಧವೂ ಇಲ್ಲದೇ ಹೇಗೆ ಸೋಲಿಸಬಲ್ಲ ಎಂಬುದಕ್ಕೆ ದೃಷ್ಟಾಂತ ಇದು. ಜಂತರ್ ಮಂತರ್‍ನಲ್ಲಿ ರೈತರನ್ನು ನಿರ್ಲಕ್ಷಿಸುವ ಮೂಲಕ ಕೇಂದ್ರ ಸರಕಾರವು ದಮನಿಸಿದರೆ, ಮಂಡಸೂರ್‍ನ ರೈತರ ಮೇಲೆ ಬಲಪ್ರಯೋಗಿಸುವ ಮೂಲಕ ಅಲ್ಲಿನ ರಾಜ್ಯ ಸರಕಾರ ದಮನಿಸಿತು. ಈ ದಮನವು ಸಾರ್ವ ಜನಿಕ ಚರ್ಚೆಗೆ ಒಳಗಾಗದಂತೆ ನೋಡಿಕೊಳ್ಳುವುದಕ್ಕಾಗಿ ಸತ್ಯಾಗ್ರಹದ ನಾಟಕವೂ ನಡೆಯಿತು. ರೈತರು ರಾಜಕೀಯದಲ್ಲಿ ಪಳಗಿಲ್ಲ ವಾದುದರಿಂದ ಜಂತರ್ ಮಂತರ್ ಮತ್ತು ಮಂಡಸೂರ್ ಎರಡೂ ಕಡೆ ತೀವ್ರ ವೈಫಲ್ಯ ಅನುಭವಿಸಿದರು.
     ಈ ದೇಶದಲ್ಲಿ 40 ಸಾವಿರದಷ್ಟು ವೈವಿಧ್ಯಮಯ ಭತ್ತದ ತಳಿಗಳಿವೆ ಎಂದು ಹೇಳಲಾಗುತ್ತದೆ. ಎಲ್ಲ ಮಣ್ಣಲ್ಲೂ ಎಲ್ಲ ತಳಿಗಳೂ ಹುಲಸಾದ ಫಸಲನ್ನು ಕೊಡಲಾರವು. ಅದಕ್ಕೆ ಮಣ್ಣು ಮ್ಯಾನೇಜ್‍ಮೆಂಟ್‍ನ ಅರಿವು ಇರಬೇಕು. ಕಾಲ-ವಾತಾವರಣಕ್ಕೆ ಸಂಬಂಧಿಸಿ ಬೆಳೆಯಲ್ಲಿ ವೈವಿಧ್ಯತೆಯನ್ನು ತರುವ ಅರಿವು ರೈತ ನಿಗಿರಬೇಕು. ವೈಜ್ಞಾನಿಕ ಕೃಷಿ ಪದ್ಧತಿಯ ಜ್ಞಾನ ಇರಬೇಕು. ಬೆಳೆದ ಫಸಲಿಗೆ ಸೂಕ್ತ ಮಾರುಕಟ್ಟೆ ದರವೂ ದೊರಕಬೇಕು. ಆದರೆ ಕೃಷಿಯನ್ನು ಅಧ್ಯಯನ ನಡೆಸದ ಜನಪ್ರತಿನಿಧಿಗಳು ಮತ್ತು ಕೃಷಿ ಭೂಮಿಯನ್ನು ನಕಲಿ ಗೋರಕ್ಷಕರಂತೆ ನೋಡುವ ಆಡಳಿತಗಾರರು ದೇಶದಲ್ಲಿದ್ದಾರೆ. ಅವರಿಗೆ ರೈತರೂ ಒಂದೇ. ಉಗ್ರರೂ ಒಂದೇ. ದಮನಿಸುವುದೇ ಅವರ ಧರ್ಮ.
ಒಂದು ವೇಳೆ
   ತಿಯೋಡರ್ ಶಾನಿನ್ ಭಾರತದ ಈಗಿನ ರೈತರ ಬಗ್ಗೆ ಬರೆಯುತ್ತಿದ್ದರೆ ಆ ಕೃತಿಗೆ ‘ರೈತರು ಮತ್ತು ರೈತ ಸಮಾಜಗಳು’ ಎಂಬುದರ ಬದಲು ‘ರೈತರು ಮತ್ತು ಭಯೋತ್ಪಾದಕ ಸರಕಾರಗಳು’ ಎಂಬ ಶೀರ್ಷಿಕೆಯನ್ನು ಕೊಡುತ್ತಿದ್ದರೇನೋ.. 

Wednesday, July 19, 2017

ಮಾಂಸ ವಿರೋಧಿ ಧರ್ಮದಲ್ಲಿ ಮಾಂಸಾಹಾರಿಗಳೇ ಬಹುಸಂಖ್ಯಾತರಾಗಿರುವುದೇಕೆ?

 
   ಎರಡು ಪ್ರಶ್ನೆಗಳು ಇತ್ತೀಚಿನ ದಿನಗಳಲ್ಲಿ ನನ್ನನ್ನು ಮತ್ತೆ ಮತ್ತೆ ಕಾಡತೊಡಗಿದೆ.
1. ಮಾಂಸ ಮತ್ತು ಗೋಮಾಂಸ ಸೇವನೆಯನ್ನು ಹಿಂದೂ ಧರ್ಮವು ನಿಷೇಧಿಸಿದೆಯೇ?
2. ಹಿಂದೂ ಧರ್ಮಕ್ಕೆ ಪುರಾತನ ಇತಿಹಾಸ ಇದ್ದೂ ದೇಶದಾದ್ಯಂತ ಬಹುದೊಡ್ಡ ಸಂಖ್ಯೆಯ ಹಿಂದೂಗಳು ಈಗಲೂ ಮಾಂಸಾಹಾರ ಸೇವಕರಾಗಿರುವುದಕ್ಕೆ ಕಾರಣಗಳೇನು?
    ಈ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಉತ್ತರಗಳಿವೆ. ಒಂದೋ, ಹಿಂದೂ ಧರ್ಮವು ಮಾಂಸ ಮತ್ತು ಗೋಮಾಂಸ ಸೇವನೆಯ ವಿರೋಧಿಯಲ್ಲ ಅಥವಾ ಇವತ್ತು ನಾವು ಯಾರನ್ನೆಲ್ಲ ಹಿಂದೂಗಳು ಎಂದು ಕರೆಯುತ್ತೇವೋ ಅವರೆಲ್ಲ ಮೂಲತಃ ಹಿಂದೂಗಳಲ್ಲ. ಅವರ ಧರ್ಮ ಬೇರೆ. ಅವರ ಆಚಾರ-ವಿಚಾರ ಬೇರೆ. ಅವರ ಸಂಸ್ಕೃತಿ ಬೇರೆ. ಅವರ ಕೌಟುಂಬಿಕ ವಿಧಾನಗಳು ಬೇರೆ. ಅವರ ಆಹಾರ ಕ್ರಮ ಬೇರೆ. ಅವರ ಆರಾಧನಾ ವಿಧಾನ ಬೇರೆ. ಅವರ ದೈವಿಕ ನಂಬಿಕೆಗಳು ಬೇರೆ. ಹೀಗೆ ಅನೇಕಾರು ‘ಬೇರೆ’ಗಳುಳ್ಳ ಬಹುದೊಡ್ಡ ಜನಸಮೂಹವನ್ನು ಹಿಂದೂ ಧರ್ಮದ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ನಂಬಬೇಕಾಗುತ್ತದೆ. ಹಿಂದೂ ಧರ್ಮಕ್ಕೆ ಕ್ರಿಸ್ತಪೂರ್ವ 5000ಕ್ಕಿಂತ ಅಧಿಕ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಆ ಕಾಲದಿಂದಲೇ ಗೋಮಾಂಸ ಸೇವನೆಯನ್ನು ಹಿಂದೂ ಧರ್ಮವು ಪಾಪಕರವೆಂದು ಬೋಧಿಸುತ್ತಾ ಬಂದಿದೆ ಎಂದೂ ವಾದಿಸಲಾಗುತ್ತದೆ. ನಾಲ್ಕು ವೇದಗಳು, ಪುರಾಣಗಳು, ಭಗವದ್ಗೀತೆ.. ಎಲ್ಲವನ್ನೂ ಗೋಮಾಂಸ ಸೇವನೆಯ ವಿರೋಧಕ್ಕೆ ಆಧಾರವಾಗಿ ಆಧುನಿಕ ಗೋರಕ್ಷಕರು ನೀಡುತ್ತಾ ಬಂದಿದ್ದಾರೆ. ಇದು ನಿಜವೇ ಆಗಿದ್ದರೆ ಯಾಕೆ ಗೋಮಾಂಸ ಸೇವಕರಾಗಿ ಬಹುದೊಡ್ಡ ಸಂಖ್ಯೆಯಲ್ಲಿ ಹಿಂದೂ ಧರ್ಮಾನುಯಾಯಿಗಳು ಈಗಲೂ ಇದ್ದಾರೆ? ಹಿಂದೂ ಧರ್ಮದ ಇಷ್ಟು ದೀರ್ಘ ಇತಿಹಾಸವೂ ಅವರನ್ನು ಈವರೆಗೂ ಬದಲಿಸದಿರಲು ಕಾರಣವೇನು? ನಿಜವಾಗಿ ಯಾವುದೇ ಒಂದು ಧರ್ಮದ ಮೂಲಭೂತ ನಿಯಮಗಳು ಸಾರಾಸಗಟು ಅವಜ್ಞೆಗೆ ಒಳಗಾಗಲು ಸಾಧ್ಯವೇ ಇಲ್ಲ. ಉಲ್ಲಂಘನೆಯ ಅಲ್ಲೊಂದು ಇಲ್ಲೊಂದು ಪ್ರಕರಣಗಳು ನಡೆಯಬಹುದು. ಮಾತ್ರವಲ್ಲ, ಯಾರಾದರೂ ಈ ಉಲ್ಲಂಘನೆಯನ್ನು ಪ್ರಶ್ನಿಸುತ್ತಾರೋ ಅನ್ನುವ ಭಯವೂ ಆ ಉಲ್ಲಂಘಕರಲ್ಲಿ ಇದ್ದೇ ಇರುತ್ತದೆ. ಮೂರ್ತಿ ಪೂಜೆ ಹಿಂದೂ ಧರ್ಮದ ಮತಾಚಾರ್ಯರ ಪ್ರಕಾರ ಮೂಲಭೂತ ನಿಯಮ. ವೇದಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಉಲ್ಲೇಖಗಳಿವೆ ಎಂಬ ವಾದವೇನೇ ಇರಲಿ, ಹಿಂದೂ ಧರ್ಮದ ಆಧುನಿಕ ಗುರುಗಳು ಮೂರ್ತಿಪೂಜೆಯನ್ನು ಹಿಂದೂ ಧರ್ಮದ ಪ್ರಮುಖ ಆರಾಧನಾ ವಿಧಾನವಾಗಿ ಪರಿಗಣಿಸಿದ್ದಾರೆ. ಹಾಗಂತ ಮೂರ್ತಿಪೂಜೆಯನ್ನು ಮಾಡದವರೂ ಇರಬಹುದು. ಮೂರ್ತಿಪೂಜೆಯ ಸಿಂಧುತ್ವವನ್ನೇ ಪ್ರಶ್ನಿಸುವವರೂ ಇರಬಹುದು. ಆದರೆ ಇವರೆಂದೂ ಮೂರ್ತಿಯನ್ನು ಬಹಿರಂಗವಾಗಿ ಒಡೆದು ಹಾಕುವುದಾಗಲಿ, ಒಡೆಯುವವರನ್ನು ಬಹಿರಂಗವಾಗಿ ಬೆಂಬಲಿಸುವುದಾಗಲಿ ಎಲ್ಲೂ ಮಾಡಿಲ್ಲ. ಇದು ಹಿಂದೂ ಧರ್ಮದಲ್ಲಿ ಮೂರ್ತಿಪೂಜೆಗಿರುವ ಐತಿಹಾಸಿಕ ಪರಂಪರೆಯನ್ನು ಒತ್ತಿ ಹೇಳುತ್ತದೆ. ವಿಗ್ರಹಕ್ಕೆ ಹಾಲು ಬೇಕೋ, ನೈವೇದ್ಯ ಅರ್ಪಿಸಬೇಕೋ, ಎಳನೀರಿನಿಂದ ಶುದ್ಧಗೊಳಿಸ ಬೇಕೋ.. ಇತ್ಯಾದಿ ಪ್ರಶ್ನೆಗಳೆಲ್ಲದರಲ್ಲೂ ಒಂದು ಒಳ ಸತ್ಯವಿದೆ. ಈ ಪ್ರಶ್ನೆಗಳು ಮೂರ್ತಿಪೂಜೆಯನ್ನು ಪ್ರಶ್ನಿಸುವುದಿಲ್ಲ. ಅದರ ಆರಾಧನಾ ವಿಧಾನವನ್ನಷ್ಟೇ ಪ್ರಶ್ನಿಸುತ್ತದೆ. ಒಂದು ವೇಳೆ, ಗೋಮಾಂಸ ಸೇವನೆಯ ವಿಷಯದಲ್ಲಿ ಹಿಂದೂ ಧರ್ಮವು ಇಷ್ಟೊಂದು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿರುತ್ತಿದ್ದರೆ ಹಿಂದೂ ಧರ್ಮದ ಅನುಯಾಯಿಗಳು ಗೋಮಾಂಸ ಸೇವನೆಯನ್ನು ತಮ್ಮ ಆಹಾರ ಕ್ರಮವಾಗಿ ಪಾಲಿಸುತ್ತಿರಲು ಹೇಗೆ ಸಾಧ್ಯ? ಇದು ಒಂದೋ ಅವರು ಹಿಂದೂಗಳಲ್ಲ ಎಂಬುದಕ್ಕೆ ಸಾಕ್ಷ್ಯ ವಹಿಸುತ್ತದೆ ಅಥವಾ ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆ ನಿಷಿದ್ಧವಲ್ಲ ಎಂದು ಸಾರಿದಂತಾಗುತ್ತದೆ.
     ಒಂದು ರೀತಿಯಲ್ಲಿ, ಹಿಂದೂ ಧರ್ಮದ ನಿಜವಾದ ಪ್ರತಿ ನಿಧಿಗಳು ಯಾರು ಮತ್ತು ಅದಕ್ಕೆ ಬಲವಂತವಾಗಿ ಸೇರ್ಪಡೆಗೊಂಡ ವರು ಯಾರು ಅನ್ನುವುದನ್ನು ಪತ್ತೆ ಹಚ್ಚುವುದಕ್ಕೆ ಗೋವು ಒಂದು ಪರಿಣಾಮಕಾರಿ ಭೂತಗನ್ನಡಿ ಎಂದೂ ಹೇಳಬಹುದು. ಗೋಮಾಂಸ ಸೇವನೆ ಪಾಪಕಾರ್ಯ ಎಂದು ಹೇಳುತ್ತಿರುವುದು ಬ್ರಾಹ್ಮಣ ಸಮೂಹ. ಅದು ಮಾಂಸಾಹಾರವನ್ನೇ ಒಪ್ಪುವುದಿಲ್ಲ. ಇದು ತಪ್ಪು ಎಂದಲ್ಲ. ಆದರೆ ಇದೇ ಸಂದರ್ಭದಲ್ಲಿ ಈ ಬ್ರಾಹ್ಮಣ ಸಮೂಹಕ್ಕಿಂತ ಎಷ್ಟೋ ಪಟ್ಟು ಅಧಿಕ ಸಂಖ್ಯೆಯ ಮಂದಿ ಗೋಮಾಂಸವನ್ನು ಸೇವಿಸುತ್ತಾರೆ. ಮಾಂಸಾಹಾರವನ್ನೂ ಸೇವಿಸುತ್ತಾರೆ. ಅವರೆಲ್ಲರ ಹೆಸರೂ ಹಿಂದೂ ಧರ್ಮದ ಪಟ್ಟಿ ಯಲ್ಲಿದೆ. ಈ ದೇಶದಲ್ಲಿ 80 ಕೋಟಿಗಿಂತ ಅಧಿಕ ಹಿಂದೂ ಧರ್ಮೀಯರಿದ್ದಾರೆ ಎಂದು ಲೆಕ್ಕ ಹಾಕುವಾಗ ಅವರಲ್ಲಿ ಮಾಂಸಾಹಾರಿಗಳು ಮತ್ತು ಗೋಮಾಂಸ ಸೇವಕರೇ ಅಧಿಕವಿದ್ದಾರೆ ಎಂಬುದು ಬಹಿರಂಗ ರಹಸ್ಯ. ಈ ವೈರುಧ್ಯವೇಕೆ? ಇದು ಕೊಡುವ ಸೂಚನೆಯೇನು? ಒಂದೋ ಬ್ರಾಹ್ಮಣರು ನಿಜವಾದ ಹಿಂದೂ ಧರ್ಮವನ್ನು ಪ್ರತಿನಿಧಿಸುತ್ತಿಲ್ಲ ಅಥವಾ ಗೋಮಾಂಸ ಮತ್ತು ಮಾಂಸಾಹಾರವನ್ನು ಸೇವಿಸುವ ಈ ದೇಶದ ಬಹುದೊಡ್ಡ ಜನಸಮುದಾಯವನ್ನು ಅಕ್ರಮವಾಗಿ ಹಿಂದೂ ಧರ್ಮದ ಪಟ್ಟಿ ಯಲ್ಲಿಟ್ಟು ಲೆಕ್ಕ ಹಾಕಲಾಗುತ್ತಿದೆ ಎಂಬುದನ್ನೇ ಅಲ್ಲವೇ? ಅಲ್ಲದೇ ಮಾಂಸಾಹಾರವೇ ನಿಷಿದ್ಧವಾಗಿರುವ ಧರ್ಮವೊಂದರಲ್ಲಿ ಮಾಂಸಾಹಾರ ಸೇವಿಸುವ ಅನುಯಾಯಿಗಳ ಸಂಖ್ಯೆಯೇ ಹೆಚ್ಚಿರುವುದಕ್ಕೆ ಸಾಧ್ಯವೇ ಇಲ್ಲ. ಪ್ರಶ್ನೆಗಳು ಹುಟ್ಟಿಕೊಳ್ಳುವುದೂ ಇಲ್ಲೇ. ಈ ದೇಶದ ಮೂಲ ನಿವಾಸಿಗಳು ಯಾರು? ಅವರ ಧರ್ಮ ಯಾವುದಾಗಿತ್ತು? ಆ ಧರ್ಮದ ಆಹಾರ ಕ್ರಮಗಳಿಗೂ ಇವತ್ತು ಹಿಂದೂ ಧರ್ಮದ ಅಧಿಕೃತ ಪ್ರತಿನಿಧಿಗಳೆಂದು ಹೇಳುವವರ ಆಹಾರ ಕ್ರಮಗಳಿಗೂ ನಡುವೆ ತಾಳಮೇಳವಿದೆಯೇ? ಅವರ ಉಡುಪಿನ ಶೈಲಿ ಹೇಗಿತ್ತು? ಅವರ ಭಾಷೆ ಯಾವುದಾಗಿತ್ತು? ಆರಾಧನಾ ವಿಧಾನಗಳು ಹೇಗಿದ್ದುವು? ಬಹುಶಃ ಆರ್ಯರು ಈ ದೇಶಕ್ಕೆ ದಂಡೆತ್ತಿ ಬಂದರು ಎಂಬ ವಾದ ಬಲ ಪಡೆಯುವುದೂ ಇಲ್ಲೇ. ಈ ದೇಶದ ಮೂಲ ನಿವಾಸಿಗಳ ಧರ್ಮ ಮಾಂಸಾಹಾರ ರಹಿತ ಹಿಂದೂ ಧರ್ಮವಾಗಿರುವ ಸಾಧ್ಯತೆ ತೀರಾ ತೀರಾ ತೀರಾ ಕಡಿಮೆ. ಆರ್ಯರು ಕ್ರಮೇಣ ಈ ಉಪಭೂಖಂಡಕ್ಕೆ ಕಾಲಿಡುವ ಸಮಯದಲ್ಲಿ ಇಲ್ಲಿನ ಮೂಲ ನಿವಾಸಿಗಳು ಮಾಂಸಾಹಾರಿಗಳಾಗಿದ್ದರು. ವಿವಿಧ ಬುಡಕಟ್ಟುಗಳಾಗಿ ಬದುಕುತ್ತಿರುವ ಸಮೂಹವೊಂದರ ಮಧ್ಯೆ ಆರ್ಯರು ಪ್ರಾಬಲ್ಯ ಸ್ಥಾಪಿಸಿದರು. ಆರಂಭದಲ್ಲಿ ಈ ಬುಡಕಟ್ಟುಗಳ ಮನ ಗೆಲ್ಲಲಿಕ್ಕಾದರೂ ಆರ್ಯರು ಮಾಂಸಾಹಾರಿಗಳಾಗಿರಬೇಕಾದ ಅನಿವಾರ್ಯತೆಯೇ ಹೆಚ್ಚು. ಅಲ್ಲದೇ ಪುರಾತನ ಕಾಲದಲ್ಲಿ ಬರೇ ಹಣ್ಣು-ಹಂಪಲುಗಳನ್ನು ಮತ್ತು ಸಸ್ಯಾಹಾರವನ್ನು ಮಾತ್ರ ಸೇವಿಸಿಕೊಂಡು ಬದುಕಬಹುದಾದ ವಾತಾವರಣ ಇತ್ತು ಎಂದು ಹೇಳುವ ಹಾಗಿಲ್ಲ. ಕೃಷಿ ಕ್ರಾಂತಿ ನಡೆಯದ ಕಾಲ ಅದು. ಇವತ್ತಿನಂತೆ ಫಸಲು ಕೈಕೊಟ್ಟರೆ, ಅನಾವೃಷ್ಟಿಯಾದರೆ, ಪ್ರತಿಭಟನೆ ಮಾಡಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾದ ವ್ಯವಸ್ಥಿತ ಸರಕಾರಿ ವ್ಯವಸ್ಥೆಯೂ ಅಂದಿನದಲ್ಲ. ಇವತ್ತಿನಂತೆ ಮಾಧ್ಯಮ ಸೌಲಭ್ಯವೂ ಆ ಕಾಲದ ಜನಸಮೂಹಕ್ಕೆ ಲಭ್ಯವಿದ್ದಿರಲಿಲ್ಲ. ಆದ್ದರಿಂದ ಯಾವ ಪ್ರದೇಶದಲ್ಲಿ ಯಾರು ವಾಸಿಸುತ್ತಾರೋ ಅವರಿಗೆ ಅಲ್ಲಿ ಲಭ್ಯವಿರುವುದೇ ಆಹಾರ. ಅದುವೇ ಅವರ ಧರ್ಮ. ಭಾರತಕ್ಕೆ ಆಗಮಿಸಿದ ಆರ್ಯರು ಇದಕ್ಕಿಂತ ಹೊರತಾಗಿ ಬದುಕಿದರು ಎಂದು ನಂಬುವುದಕ್ಕೆ ಸಾಧ್ಯವಿಲ್ಲ. ಮಾಂಸಾಹಾರವಾಗಲಿ ಸಸ್ಯಾಹಾರವಾಗಲಿ ಲಭ್ಯತೆಯನ್ನು ಹೊಂದಿಕೊಂಡು ಸರಿ-ತಪ್ಪು ಅನ್ನಿಸಿಕೊಳ್ಳುತ್ತದೆ. ಪುರಾತನ ಕಾಲದಲ್ಲಿ ಭಾರತೀಯ ಉಪಭೂಖಂಡದಲ್ಲಿ ಎಲ್ಲೆಡೆಯೂ ಸಸ್ಯಾಹಾರ ವಿಫುಲವಾಗಿತ್ತು ಮತ್ತು ಮಾಂಸಾಹಾರವನ್ನು ಸೇವಿಸದೆಯೇ ಈ ಖಂಡದ ಪ್ರತಿ ತಗ್ಗು-ದಿಣ್ಣೆಗಳಲ್ಲೂ ಬದುಕಬಹುದಾದಂತಹ ಸ್ಥಿತಿಯಿತ್ತು ಎಂದು ವಾದಿಸುವುದು ಹಠಮಾರಿತನವಾಗಬಹುದೇ ಹೊರತು ಅದು ವಾಸ್ತವವನ್ನು ಪ್ರತಿನಿಧಿಸಲಾರದು. ಈ ಉಪಭೂಖಂಡದಲ್ಲಿ ಮಾಂಸಾಹಾರಿಗಳೇ ಅಧಿಕ ಇದ್ದರು. ವಿವಿಧ ಬುಡಕಟ್ಟುಗಳಾಗಿ ಅವರು ಗುರುತಿಸಿಕೊಂಡಿದ್ದರು. ಅದುವೇ ಅವರ ಧರ್ಮ, ಸಂಸ್ಕೃತಿ. ಅವರಿಗೆ ಅವರದೇ ಆದ ರೀತಿಯ ಆರಾಧನಾ ವಿಧಾನಗಳಿದ್ದುವು. ಕಲ್ಲುರ್ಟಿ, ಪಂಜುರ್ಲಿ, ಬಬ್ಬರ್ಯೆ, ಪಿಲಿ ಚಾಮುಂಡಿ, ಕೊಡಮಂತಾಯ.. ಮುಂತಾದ ಹೆಸರಿನ ನೂರಾರು ಆರಾಧ್ಯರು ಗಳನ್ನು ಇವತ್ತಿಗೂ ವಿವಿಧ ಬುಡಕಟ್ಟುಗಳು ಆರಾಧಿಸುತ್ತಿರುವುದು ಇದನ್ನೇ ಸೂಚಿಸುತ್ತದೆ. ಇಲ್ಲಿ ಕೋಲ ನಡೆಯುತ್ತದೆ. ಇಲ್ಲಿನ ಆರಾಧನಾ ಪದ್ಧತಿಯ ವಿಧಾನವೇ ಬೇರೆ. ಮೈಯಲ್ಲಿ ದೆವ್ವ ಬರುವ ವಿಶಿಷ್ಟ ಸಂಪ್ರದಾಯ ಇಲ್ಲಿದೆ. ಕೋಳಿ-ಕುರಿ-ಆಡು ಮತ್ತು ಜಾನುವಾರುಗಳನ್ನು ಬಲಿ ಕೊಡುವ ಪದ್ಧತಿಯೂ ಇಲ್ಲಿದೆ. ಇಲ್ಲಿ ಆರಾಧನಾ ಪದ್ಧತಿಯನ್ನು ನೆರವೇರಿಸಿ ಕೊಡುವ ವ್ಯಕ್ತಿಯ ವೇಷ ವಿಧಾನವು ಬ್ರಾಹ್ಮಣ ಸಮೂಹದ ಪುರೋಹಿತರ ವೇಷ ವಿಧಾನಕ್ಕೆ ಯಾವ ರೀತಿಯಲ್ಲೂ ಹೋಲಿಕೆಯಾಗುವುದಿಲ್ಲ. ಇವರ ನಡುವೆ ಹೆಸರಿನಲ್ಲೂ ಉತ್ತರ-ದಕ್ಷಿಣ ಅನ್ನುವಷ್ಟು ವ್ಯತ್ಯಾಸ ಇದೆ. ಸಾಮಾನ್ಯವಾಗಿ, ಒಂದು ಧರ್ಮದ ಅನುಯಾಯಿಗಳನ್ನು ಅವರ ಹೆಸರಿನ ಮೂಲಕ ಗುರುತಿಸಲಾಗುತ್ತದೆ. ಮುಸ್ಲಿಮ್, ಕ್ರೈಸ್ತ, ಯಹೂದಿ, ಸಿಕ್ಖ್.. ಮುಂತಾದ ಧರ್ಮದ ಅನುಯಾಯಿಗಳನ್ನು ಗುರುತಿಸುವುದಕ್ಕೆ ಬಹಳ ಸಾಹಸ ಪಡಬೇಕಾದ ಅಗತ್ಯ ಇಲ್ಲ. ಬೇರೆ ಬೇರೆ ದೇಶಗಳಲ್ಲಿರುವ ಈ ಧರ್ಮದ ಅನುಯಾಯಿಗಳ ಹೆಸರಿನಲ್ಲಿ ಸಣ್ಣ ವ್ಯತ್ಯಾಸ ಕಂಡು ಬಂದರೂ ಅವರನ್ನು ಗುರುತಿಸಲು ಅಸಾಧ್ಯವಾಗುವಷ್ಟು ಈ ವ್ಯತ್ಯಾಸ ದೊಡ್ಡದಿರುವುದಿಲ್ಲ. ಆದರೆ ಭಾರತದಲ್ಲೇ ಇರುವ ಹಿಂದೂ ಧರ್ಮದ ಅನುಯಾಯಿಗಳ ಹೆಸರನ್ನೊಮ್ಮೆ ಪರಿಶೀಲಿಸಿ. ಅವೆಲ್ಲ ತೀರಾ ತೀರಾ ಭಿನ್ನ. ಬಹುಶಃ, ಇವತ್ತು ಹಿಂದೂ ಧರ್ಮದ ಅನುಯಾಯಿಗಳಾಗಿ ಯಾರೆಲ್ಲ ಗುರುತಿಸಿಕೊಂಡಿದ್ದಾರೋ ಅಥವಾ ಆ ಪಟ್ಟಿಯಲ್ಲಿ ಯಾರನ್ನೆಲ್ಲ ಸೇರ್ಪಡೆಗೊಳಿಸಲಾಗಿದೆಯೋ ಅವರೆಲ್ಲ ಮೂಲತಃ ಹಿಂದೂಗಳಲ್ಲ. ಈಗಲೂ ಅಲ್ಲ. ಅವರವರಿಗೆ ಅವರದೇ ಆದ ಬುಡಕಟ್ಟು ಧರ್ಮ ಇದೆ. ಅವರದೇ ಆದ ಆಹಾರ ಕ್ರಮ ಇದೆ. ಸಾಂಸ್ಕ್ರಿತಿಕ ಹಿನ್ನೆಲೆ ಇದೆ. ಆದರೆ ಅವರ ಮೇಲೆ ಬಲವಂತದಿಂದ ಹಿಂದೂ ಧರ್ಮವನ್ನು ಹೇರಲಾಗಿದೆ ಅಥವಾ ತಮ್ಮದೇ ವಿವಿಧ ಕಾರಣಗಳಿಗಾಗಿ ಅವರು ಈ ಧರ್ಮದ ಐಡೆಂಟಿಟಿಯನ್ನು ಸ್ವೀಕರಿಸಿಕೊಂಡಿದ್ದಾರೆ. ಆದರೆ ಇವರು ಅವರಾಗಿಲ್ಲ. ಯಾಕೆಂದರೆ ಇವರ ಧರ್ಮ ಅದಲ್ಲ. ಆದ್ದರಿಂದಲೇ ಇವರು ಮಾಂಸಾಹಾರ ಸೇವಿಸುತ್ತಾರೆ. ಇಂಥವರ ಸಂಖ್ಯೆಯೇ ಈ ದೇಶದಲ್ಲಿ ಬಹುಸಂಖ್ಯಾತವಾಗಿರುವುದರಿಂದಲೇ ಮಾಂಸಾಹಾರ ಸೇವಿಸದವರ ಸಂಖ್ಯೆ ಕಡಿಮೆಯೂ ಮಾಂಸಾಹಾರಿಗಳ ಸಂಖ್ಯೆ ಅಧಿಕವೂ ಆಗಿರುವುದು. ಒಂದು ವೇಳೆ ಗೋಮಾಂಸ ಮತ್ತು ಮಾಂಸಾಹಾರ ಸೇವನೆ ನಿಷೇಧವು ಹಿಂದೂ ಧರ್ಮದ ಮೂಲಭೂತ ನಿಯಮವಾಗಿ ಇರುತ್ತಿದ್ದರೆ ಆ ಧರ್ಮದಲ್ಲಿ ಕನಿಷ್ಠ ಬಹುಸಂಖ್ಯಾತ ಅನುಯಾಯಿಗಳು ಸಸ್ಯಾಹಾರಿಗಳಾಗಿರಬೇಕಿತ್ತು. ಇಸ್ಲಾಮ್‍ನಲ್ಲಿ ಮದ್ಯಪಾನ ನಿಷಿದ್ಧ. ಅದು ಅದರ ಮೂಲಭೂತ ಬೇಡಿಕೆ. ಇವತ್ತಿಗೂ ಇಸ್ಲಾಮಿನ ಬಹುಸಂಖ್ಯಾತ ಅನುಯಾಯಿಗಳು ಮದ್ಯ ಸೇವಿಸುವುದಿಲ್ಲ. ಬಾರ್ ನಡೆಸುವುದಿಲ್ಲ. ಮದ್ಯಪಾನ ಮಾಡುವ ಮುಸ್ಲಿಮರು ಅಲ್ಲೊಂದು ಇಲ್ಲೊಂದು ಸಿಗಬಹುದಾದರೂ ಮುಸ್ಲಿಮ್ ಸಮುದಾಯ ಈಗಲೂ ಅದನ್ನು ಅತ್ಯಂತ ಪ್ರಬಲ ಕೆಡುಕಾಗಿ ಪರಿಗಣಿಸುತ್ತದೆ. ಮುಸ್ಲಿಮ್ ಮದ್ಯಪಾನಿಯೂ ಕದ್ದು ಮುಚ್ಚಿಯೇ ಅದನ್ನು ಸೇವಿಸುತ್ತಾನೆ. ಉಪವಾಸ ಇಸ್ಲಾಮ್‍ನ ಮೂಲಭೂತ ಬೇಡಿಕೆ. ಇವತ್ತಿಗೂ ಬಹುಸಂಖ್ಯಾತ ಮುಸ್ಲಿಮರು ಅದನ್ನು ನಿಷ್ಠೆಯಿಂದ ಪಾಲಿಸುತ್ತಾರೆ. ಇದಕ್ಕೆ ಅಲ್ಲೊಂ ದು ಇಲ್ಲೊಂದು ಅಪವಾದಗಳಿರ ಬಹುದು. ಆದರೆ ಉಪವಾಸದ ಸಿಂಧುತ್ವವನ್ನು ಪ್ರಶ್ನಿಸುವ ಮತ್ತು ಉಪವಾಸದ ಸಮಯದಲ್ಲಿ ಬಹಿರಂಗವಾಗಿ ತಿನ್ನುವ ಪ್ರಕರಣಗಳು ನಡೆಯುವುದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಆದರೆ ಮಾಂಸಾಹಾರ ಮತ್ತು ಗೋಮಾಂಸ ಸೇವನೆಗೆ ಸಂಬಂಧಿಸಿ ಹಿಂದೂ ಧರ್ಮದಲ್ಲಿ ಅದು ಸಂಪೂರ್ಣ ತದ್ವಿರುದ್ಧ.
ಯಾಕೆ ಹೀಗೆ? ಇದು ರವಾನಿಸುವ ಸಂದೇಶವೇನು?



Thursday, July 6, 2017

ಪ್ರತಿದಿನವೂ ಈದ್ - ಯಾರಿಗೆ, ಹೇಗೆ?

1. ಮನಸ್ಸು
2. ಹೃದಯ
3. ಹೊಟ್ಟೆ
4. ಲೈಂಗಿಕತೆ
ಕ್ರಮಸಂಖ್ಯೆ 1 ಮತ್ತು 2ರಲ್ಲಿ ಲೋಪ ಸಂಭವಿಸಿದರೆ, ಉಪವಾಸ ವ್ರತ ಕೆಡುವುದಿಲ್ಲ. ಆದರೆ ಉಪವಾಸಿಗರಿಗೆ ಸಿಗುವ ಪುರಸ್ಕಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಕ್ರಮಸಂಖ್ಯೆ 3 ಮತ್ತು 4 ಹಾಗಲ್ಲ. ಇದರಲ್ಲಿ ತಪ್ಪುಗಳು ಸಂಭವಿಸಿದರೆ ಉಪವಾಸವೇ ಕೆಡುತ್ತದೆ. ಉದ್ದೇಶಪೂರ್ವಕವಾಗಿ ಏನನ್ನಾದರೂ ತಿಂದರೆ ಅಥವಾ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾದರೆ ಅವರ ಉಪವಾಸ ಮುರಿಯುತ್ತದೆ. ನಿಜವಾಗಿ ರಮಝಾನ್ ತಿಂಗಳ ಉಪವಾಸದ ಪ್ರಮುಖ 4 ಮೈಲುಗಲ್ಲುಗಳಿವು. ಈ 4 ಮೈಲುಗಲ್ಲುಗಳನ್ನು ಷರತ್ತಿಗೆ ಒಳಪಟ್ಟು ದಾಟಲು ಯಾರು ಯಶಸ್ವಿಯಾಗುತ್ತಾರೋ ಅವರೇ ನಿಜವಾದ ಉಪವಾಸಿಗರು. ಬಾಹ್ಯ ನೋಟಕ್ಕೆ ಉಪವಾಸ ಭಾರೀ ಕಷ್ಟದ್ದೇನೂ ಅಲ್ಲ. ಕಚೇರಿಗಳಲ್ಲಿ ಕೆಲಸ ಮಾಡುವವರು ಮತ್ತು ದೈಹಿಕ ಶ್ರಮದ ಅಗತ್ಯವಿಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ ಉಪವಾಸ ವ್ರತ ತೀರಾ ಸಲೀಸು. ಶ್ರಮಿಕ ವರ್ಗವನ್ನು ಬಿಟ್ಟರೆ ಉಳಿದಂತೆ ಉಪವಾಸ ವ್ರತದಲ್ಲಿ ತೊಡಗಿಸಿಕೊಂಡವರಲ್ಲಿ ಹೆಚ್ಚಿನವರೂ ಸಹಜವಾಗಿಯೇ ಇರುತ್ತಾರೆ. ಭಾರತದಲ್ಲಿ ಸುಮಾರು 14 ಗಂಟೆಗಳ ಕಾಲ ಉಪವಾಸದ ಅವಧಿಯಿದ್ದರೆ ಗ್ರೀನ್‍ಲ್ಯಾಂಡ್ ದೇಶದ ಕೆಲವು ಪ್ರದೇಶಗಳಲ್ಲಿ 21 ಗಂಟೆ 12 ನಿಮಿಷಗಳಷ್ಟು ದೀರ್ಘಕಾಲ ಉಪವಾಸ ಇರಬೇಕಾಗುತ್ತದೆ. ಐಲ್ಯಾಂಡ್‍ನಲ್ಲಿ 21 ಗಂಟೆಗಳ ಕಾಲ ಉಪವಾಸ ಇರಬೇಕಾಗುತ್ತದೆ. ಫಿನ್ಲೆಂಡ್‍ನಲ್ಲಿ ಸುಮಾರು 20 ಗಂಟೆಗಳ ಅವಧಿ ಯಿದ್ದರೆ ನಾರ್ವೆಯಲ್ಲಿ 19 ಗಂಟೆ 48 ನಿಮಿಷಗಳ ಕಾಲ ಉಪವಾಸ ಇರಬೇಕಾಗುತ್ತದೆ. ನಾರ್ವೆಯ ಬಹುತೇಕ ಪ್ರದೇಶಗಳಲ್ಲಿ ದಿನದ ಮುಕ್ತಾಯ ಮತ್ತು ಬೆಳಗಿನ ಆರಂಭದ ಬಗ್ಗೆ ಯಾವುದೇ ಸೂಚನೆಗಳು ಸಿಗುವುದಿಲ್ಲ. ಜೂನ್ ಮತ್ತು ಜುಲೈ ತಿಂಗಳಲ್ಲಿ ಇಂಥ ಸಂದಿಗ್ಧತೆ ಎದುರಾಗುತ್ತದೆ. ಮಧ್ಯರಾತ್ರಿಯೇ ಸೂರ್ಯ ಉದಯಿಸುವ ಪ್ರಸಂಗ ನಡೆಯುತ್ತದೆ. ಆದ್ದರಿಂದ ಇಂಥ ಪ್ರದೇಶಗಳ ಮಂದಿ ಒಂದೋ ಮಕ್ಕಾದ ಸಮಯಕ್ಕೆ ಅಥವಾ ಹತ್ತಿರದ ರಾಷ್ಟ್ರಗಳ ಸಮಯಕ್ಕೆ ಹೊಂದಿಕೊಂಡು ವ್ರತಾಚರಣೆಯಲ್ಲಿ ತೊಡಗುತ್ತಾರೆ. ಭಾರತದ ಶ್ರಮಿಕ ವರ್ಗಕ್ಕೆ ಹೋಲಿಸಿದರೆ, ಗ್ರೀನ್‍ಲ್ಯಾಂಡ್‍ನ ಶ್ರಮಿಕ ವರ್ಗದ ಉಪವಾಸ ವ್ರತ ದೀರ್ಘ ಅವಧಿಯಿದ್ದು. ಆದರೂ ಮೇಲಿನ 4 ವಿಷಯಗಳಿಗೆ ಸಂಬಂಧಿಸಿ ಉಪವಾಸಿಗ ಷರತ್ತನ್ನು ಪಾಲಿಸದಿದ್ದರೆ ಆ ದೀರ್ಘಾವಧಿಯೂ ವ್ಯರ್ಥವಾಗುತ್ತದೆ. ‘ಯಾರು ಉಪವಾಸವಿದ್ದೂ ಸುಳ್ಳು ಮತ್ತು ಕೆಟ್ಟ ಕೃತ್ಯಗಳಿಂದ ದೂರ ನಿಲ್ಲುವುದಿಲ್ಲವೋ ಅವರು ಅನ್ನ-ಪಾನೀಯವನ್ನು ತ್ಯಜಿಸಬೇಕಾದ ಯಾವ ಅಗತ್ಯವೂ ಇಲ್ಲ’ ಎಂಬ ಪ್ರಸಿದ್ಧ ಪ್ರವಾದಿ ವಚನವೊಂದಿದೆ. ಈ ವಚನ ಮೇಲಿನ 4 ವಿಷಯಗಳನ್ನೂ ಒಳಗೊಳ್ಳುತ್ತದೆ.
     ನಿಜವಾಗಿ ಮನಸ್ಸು ಮತ್ತು ಹೃದಯ ಅತ್ಯಂತ ಹೆಚ್ಚು ಬಳಕೆಗಾಗಿ ಒಳಗಾಗುವ ಪದಪುಂಜಗಳು. ಸಾಹಿತ್ಯ ಕ್ಷೇತ್ರವಂತೂ ಈ ಪದಗಳ ಹೊರತಾಗಿ ಇಲ್ಲವೇ ಇಲ್ಲ ಎಂದು ಹೇಳಬಹುದು. ಹೃದಯವನ್ನು ಕೇಂದ್ರೀಕರಿಸಿ ಕವನಗಳು, ಕತೆಗಳು, ಚಿತ್ರಕತೆಗಳು, ಕಾದಂಬರಿ, ನಾಟಕ, ಪ್ರಬಂಧ, ಲಲಿತ ಪ್ರಬಂಧಗಳು, ಸಿನಿಮಾ, ಕವಿಗೋಷ್ಠಿಗಳು ಇತ್ಯಾದಿ ಕೋಟ್ಯಾಂತರ ಪ್ರಮಾಣದಲ್ಲಿ ನಡೆದಿವೆ. ಮನಸ್ಸುಗಳಲ್ಲಿ ಮೃದು ಮನಸು, ಹದ ಮನಸ್ಸು, ಕಠೋರ ಮನಸ್ಸು, ವಂಚಕ ಮನಸ್ಸು, ಕೀಚಕ ಮನಸ್ಸು, ಉಗ್ರ ಮನಸ್ಸು, ಇರಿವ ಮನಸ್ಸು, ಶುದ್ಧ ಮನಸ್ಸು... ಹೀಗೆ ನೂರಾರು ಇವೆ. ಮನುಷ್ಯನ ವರ್ತನೆಗೂ ಮನಸ್ಸಿಗೂ ಸಂಬಂಧ ಇದೆ. ಮನುಷ್ಯನ ಮಾತಿಗೂ ಹೃದಯಕ್ಕೂ ಸಂಬಂಧ ಇದೆ. ಹೃದಯ ಗೆಲ್ಲುವುದು, ಹೃದಯವಂತಿಕೆ, ಮನಸೂರೆಗೊಳ್ಳುವುದು, ಹೃದ್ಯಮಾತು, ಹೃದಯ ಕದಿಯುವುದು... ಹೀಗೆಲ್ಲ ಹೇಳುವುದಿದೆ. ಹರೆಯದಲ್ಲಿ ಹೃದಯಕ್ಕೆ ಮೊದಲು ಸ್ಥಾನ. ವ್ಯವಹಾರಗಳಲ್ಲಿ ಮನಸಿನದ್ದೇ ಪಾರುಪತ್ಯ. ಜಗತ್ತು ಬಹುತೇಕ ಈ ಎರಡರ ಮೇಲೆ ನಿಂತಿದೆ. ನೀವು ಹೇಗೆ ಮಾತಾಡುತ್ತೀರಿ ಅನ್ನುವುದು ಇದರಲ್ಲಿ ಮೊದಲಿನದಾದರೆ, ನೀವು ಎಷ್ಟು ಪರಿಶುದ್ಧರು ಅನ್ನುವುದು ಎರಡನೆಯದು. ಓರ್ವ ವ್ಯಾಪಾರಿ ಮೆದುಳಿನಿಂದಲೂ ಮಾತಾಡಬಹುದು, ಹೃದಯದಿಂದಲೂ ಮಾತಾಡಬಹುದು. ಹೃದಯದಿಂದ ಆಡುವ ಮಾತು ಪ್ರಾಮಾಣಿಕ ವಾಗಿರುತ್ತದೆ ಮತ್ತು ಅದು ಇನ್ನೊಬ್ಬರ ಹೃದಯಕ್ಕೆ ತಟ್ಟುತ್ತದೆ. ಮಾತು ಎಷ್ಟು ಪ್ರಬಲ ಅಂದರೆ ಅದು ಸಂಬಂಧಗಳನ್ನು ಕೆಡಿಸು ತ್ತದೆ. ಸಂಗಾತಿಯನ್ನು ದೂರ ಮಾಡುತ್ತದೆ. ಅಪರಾಧ ಕೃತ್ಯಗಳಿಗೆ ಪ್ರೇರಕವಾಗುತ್ತದೆ. ಕಣ್ಣೀರಿಗೂ, ದ್ವೇಷಕ್ಕೂ ಕಾರಣವಾಗುತ್ತದೆ. ಅನೇಕ ಬಾರಿ ಮಾತು ಮರುಳುಗೊಳಿಸುತ್ತದೆ. ವಂಚಿಸುತ್ತದೆ. ಅಪರಿಚಿತ ವ್ಯಕ್ತಿಯೊಬ್ಬರು ನಮ್ಮನ್ನು ಭೇಟಿಯಾಗುತ್ತಾರೆ. ಮಾತಿನ ಮೂಲಕ ನಮ್ಮನ್ನು ಪ್ರಭಾವಿತಗೊಳಿಸುತ್ತಾರೆ. ಅವರ ಮೇಲೆ ನಾವು ವಿಶ್ವಾಸವಿಡುವುದಕ್ಕೆ ಅವರ ಮಾತುಗಳ ಹೊರತು ಇನ್ನಾ ವುದೂ ಇರುವುದಿಲ್ಲ. ತನ್ನ ಪರ್ಸು ಕಳೆದುಹೋಗಿದೆ, ತನ್ನನ್ನು ಮನೆಯವರು ಹೊರಕ್ಕಟ್ಟಿದ್ದಾರೆ, ತನ್ನ ಮನೆ-ಮಾರು ಬಿದ್ದು ಹೋಗಿದೆ, ಊರಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ... ಮುಂತಾದ ಕಾರಣ ಗಳನ್ನು ಹೇಳುತ್ತಾ ಸಂಕಷ್ಟ ತೋಡಿಕೊಳ್ಳುವ ವ್ಯಕ್ತಿಗೆ- ಅದಕ್ಕೆ ಪುರಾವೆಗಳಿಲ್ಲದಿದ್ದರೂ- ಮಾತಿನ ವೈಖರಿಗೆ ಪ್ರಭಾವಿತಗೊಂಡು ನಾವು ನೆರವಾಗುವುದಿದೆ. ಆತ ಸುಳ್ಳುಗಾರ ಎಂದು ಇನ್ನಾರೋ ನಮ್ಮ ಗಮನಕ್ಕೆ ತಂದಾಗ ನಾವು ವಿಚಲಿತರಾಗುತ್ತೇವೆ. ಮೋಸದ ಅನುಭವವಾಗುತ್ತದೆ. ಪ್ರವಾದಿ ವಚನದ ಮಹತ್ವ ಸ್ಪಷ್ಟವಾಗುವುದು ಇಲ್ಲೇ. ಅಂದಹಾಗೆ,
     ಹೊಟ್ಟೆ ಮತ್ತು ಲೈಂಗಿಕತೆಗೂ ಹತ್ತಿರದ ಸಂಬಂಧ ಇದೆ. ಹೊಟ್ಟೆ ಖಾಲಿ ಇರುವಾತ ಲೈಂಗಿಕ ಚಟುವಟಿಕೆಯಲ್ಲಿ ಪಾಲುಗೊಳ್ಳುವುದು ತೀರಾ ತೀರಾ ಕಡಿಮೆ. ಹೊಟ್ಟೆ ತುಂಬಿದ ಕೂಡಲೇ ಹೊಟ್ಟೆಯ ಹೊರತಾದ ಇತರ ವಿಷಯಗಳು ಮುನ್ನಲೆಗೆ ಬರುತ್ತವೆ. ಇದು ಹಸಿವಾಗುವ ವರೆಗೆ ಮಾತ್ರ. ಹಸಿವು ಪ್ರಾರಂಭವಾದ ತಕ್ಷಣ ಉಳಿದ ವಿಷಯಗಳೆಲ್ಲ ಹಿನ್ನೆಲೆಗೆ ಸರಿದು ಹೊಟ್ಟೆ ತುಂಬಿಸುವುದು ಮುಖ್ಯ ವಿಷಯವಾಗಿ ಬಿಡುತ್ತದೆ. ಪ್ರಯಾಣದಲ್ಲಿದ್ದರೂ, ಆಟದಲ್ಲಿದ್ದರೂ, ಭಾಷಣವನ್ನು ಆಲಿಸುತ್ತಿದ್ದರೂ, ಶ್ರಮದ ದುಡಿಮೆಯಲ್ಲಿದ್ದರೂ ಹಸಿವು ಕಾಣಿಸಿಕೊಂಡಾಕ್ಷಣ ಅವುಗಳಿಂದ ಕಳಚಿಕೊಂಡು ಹೊಟ್ಟೆ ತುಂಬಿಸಲು ಮುಂದಾಗುವುದು ಸಹಜವಾಗಿರುತ್ತದೆ. ನಿಜವಾಗಿ ಉಪವಾಸ ವ್ರತ ಎಂಬುದು ಬಾಹ್ಯ ನೋಟಕ್ಕೆ ಹೊಟ್ಟೆಗೆ ಸಂಬಂಧಿಸಿದ್ದು. ಏನನ್ನೂ ತಿನ್ನದೇ ಮತ್ತು ಕುಡಿಯದೇ ಇರುವುದೇ ಉಪವಾಸ ಎಂಬುದು ಸ್ಪಷ್ಟ. ಹೊಟ್ಟೆ ಖಾಲಿಯಿದ್ದಾಗ ಲೈಂಗಿಕ ಬಯಕೆಗಳು ಕಡಿಮೆಯಾಗಿರುತ್ತದೆ ಎಂಬುದು ಸ್ಪಷ್ಟವಿದ್ದೂ ಲೈಂಗಿಕ ಸಂಬಂಧವು ಉಪವಾಸವನ್ನು ಕೆಡಿಸುತ್ತದೆ ಎಂಬ ವಿಶೇಷ ಉಲ್ಲೇಖವನ್ನು ಮಾಡಿರುವುದಕ್ಕೆ ಕಾರಣವೇನು? ಬಹುಶಃ ಸ್ವಶಿಸ್ತು ಎಂಬ ಮೂಲಭೂತ ಉದ್ದೇಶವೊಂದು ಇದರ ಹಿಂದಿದೆ ಎಂದೇ ಹೇಳಬೇಕಾಗುತ್ತದೆ. ಲೈಂಗಿಕತೆ ಎಂಬುದು ಜೀವಾಸ್ತಿತ್ವದ ಬಹುದೊಡ್ಡ ಬೇಡಿಕೆ. ಅದೇ ವೇಳೆ ಈ ಕ್ಷೇತ್ರದಲ್ಲಾಗುವ ಅಶಿಸ್ತು ಬಹುದೊಡ್ಡ ಅರಾಜಕತೆಗೂ ಹತ್ಯೆ-ಹಗೆತನಗಳಿಗೂ ಕಾರಣವಾಗುತ್ತದೆ. ಉಪವಾಸಕ್ಕೆ ಆರಂಭ ಮತ್ತು ಅಂತ್ಯ ಇದೆ. ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸದಲ್ಲಿ ಕಳೆಯುವ ವ್ಯಕ್ತಿ ಆ ಬಳಿಕ ಮೊದಲಿನಂತಾಗುತ್ತಾನೆ. ಹೊಟ್ಟೆ ತುಂಬುತ್ತದೆ. ಹೀಗೆ ಒಂದು ತಿಂಗಳ ವರಗೆ ಹೊಟ್ಟೆ ಒಂದು ಶಿಸ್ತಿಗೆ ಒಳಪಡುತ್ತದೆ. ದೇಹದ ಒಳಗಿನ ಎಂಜಿನ್‍ಗಳಿಗೆ ಆ ಮೂಲಕ ವಿರಾಮವೂ ಸಿಗುತ್ತದೆ. ಆಹಾರವನ್ನು ಹೊಟ್ಟೆಯೊಳಗೆ ಕಳುಹಿಸುವ, ಜೀರ್ಣಿಸುವ ಮತ್ತು ಸಂಸ್ಕರಣೆಗೊಳಿಸುವ ಎಲ್ಲ ಅಂಗಾಂಗಗಳಿಗೂ ಸುಮಾರು 15 ಗಂಟೆಗಳ ವಿರಾಮದ ಅವಧಿ ಬಹಳ ಉಪಯುಕ್ತ. ಅದೇವೇಳೆ, ಲೈಂಗಿಕವಾಗಿ ಯಾವ ನಿಯಂತ್ರವೂ ಇಲ್ಲದೆ ಇದ್ದರೆ ಮತ್ತು ಲೈಂಗಿಕ ವಿರಾಮ ಎಂಬ ಮನಸ್ಥಿತಿಗೆ ಅವನು/ಳು ಪಕ್ಕಾಗದೆ ಹೋದರೆ ಅದು ಉಪವಾಸ ನಂತರದ ದಿನಗಳಲ್ಲಿ ಶಿಸ್ತು ಉಲ್ಲಂಘನೆಗೆ ಕಾರಣವಾಗಲೂ ಬಹುದು. ನಿಯಂತ್ರಣ ಎಂಬುದು ಸುಲಭವಾಗಿ ಯಾರಿಗೂ ದಕ್ಕುವುದಿಲ್ಲ. ವಾಹನವು ನಿಯಂತ್ರಣ ತಪ್ಪುವುದಿದೆ. ವ್ಯಕ್ತಿಯು ನಿಯಂತ್ರಣ ಮೀರುವುದಿದೆ. ಆಟಗಾರ, ಉದ್ಯೋಗಿ, ಮ್ಯಾನೇ ಜರ್, ರಾಜಕಾರಣಿ, ದೇಶಗಳು, ಸಂಘಟನೆಗಳು, ದಂಪತಿಗಳು... ಹೀಗೆ ನಿಯಂತ್ರಣ ಮೀರುವ ಸಂದರ್ಭಗಳು ಮತ್ತು ಅದರಿಂದಾಗಿ ಉಂಟಾಗುವ ಅನಾಹುತಗಳು ಪ್ರತಿನಿತ್ಯವೆಂಬಂತೆ ನಡೆಯುತ್ತಲೇ ಇವೆ. ವಾಹನವು ನಿಯಂತ್ರಣ ಕಳಕೊಂಡಾಗ ಅಪಘಾತವಾಗುತ್ತದೆ. ಸಾವೂ ಸಂಭವಿಸುತ್ತದೆ. ವ್ಯಕ್ತಿಯು ನಿಯಂತ್ರಣ ಕಳಕೊಂಡರೆ ಮಾಡಬಾರದ್ದನ್ನು ಮಾಡುತ್ತಾನೆ. ಆಡಬಾರದ್ದನ್ನು ಆಡುತ್ತಾನೆ. ನೋಡಬಾರದ್ದನ್ನು ನೋಡುತ್ತಾನೆ. ಇದರ ಪರಿಣಾಮ ಆತನ ಮೇಲಷ್ಟೇ ಆಗುವುದಲ್ಲ. ಸಮಾ ಜದ ಮೇಲೂ ಕುಟುಂಬದ ಮೇಲೂ ಆಗುತ್ತದೆ. ಪತಿ-ಪತ್ನಿಯರಲ್ಲಿ ಒಬ್ಬರು ಅಥವಾ ಇಬ್ಬರು ನಿಯಂತ್ರಣ ಕಳ ಕೊಂಡರೂ ಪರಿಣಾಮ ಇಬ್ಬರ ಮೇಲೆ ಮಾತ್ರ ಅಲ್ಲ, ಮಕ್ಕಳಿದ್ದರೆ ಮಕ್ಕಳ ಮೇಲೂ, ಅವರಿಬ್ಬರ ಕುಟುಂಬಗಳ ಮೇಲೂ ಮತ್ತು ಸಮಾಜದ ಮೇಲೂ ಆಗುತ್ತದೆ. ಅವರ ನಿಯಂತ್ರಣ ರಹಿತ ಬದುಕಿನಿಂದಾಗಿ ವಿಚ್ಛೇದನ ಏರ್ಪಡಬಹುದು. ಮಕ್ಕಳಿಗೆ ಅನಾಥತೆಯ ಅನುಭವವಾಗಬಹುದು. ಅವರ ಕುಟುಂಬಿ ಕರಿಗೆ ಮರು ಮದುವೆ ಮಾಡಿಸುವ, ಮಕ್ಕಳಿಗೆ ಅನಾಥತೆಯ ಅನುಭವವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎದುರಾಗ ಬಹುದು. ಆಟಗಾರ ನಿಯಂತ್ರಣ ತಪ್ಪಿ ವರ್ತಿಸಿದರೆ ಇನ್ನೋರ್ವ ಆಟಗಾರನ ಜೀವಕ್ಕೇ ಅಪಾಯವಾಗಬಹುದು. ಸಂಘಟನೆಗಳು ನಿಯಂತ್ರಣ ಕಳಕೊಂಡು ಬಿಟ್ಟರೆ, ಸಾಮಾಜಿಕ ಬಿಕ್ಕಟ್ಟುಗಳು ಎದು ರಾಗಬಹುದು. ಅವು ಹುಟ್ಟಿಕೊಂಡ ಉದ್ದೇಶ ಏನಿದೆಯೋ ಅವನ್ನು ಮರೆತು ಪರಸ್ಪರ ತಪ್ಪುಗಳನ್ನು ಹುಡುಕುವುದನ್ನೇ ಪೂರ್ಣಕಾಲಿಕ ಉದ್ದೇಶವಾಗಿ ಅವು ಆರಿಸಿಕೊಳ್ಳಲೂಬಹುದು. ಹಾಗಂತ ದೇಶಗಳು ನಿಯಂತ್ರಣ ಕಳಕೊಂಡರೆ ಏನಾಗುತ್ತದೆ ಎಂದು ಹೇಳಬೇಕಾದ ಅಗತ್ಯವೇ ಇಲ್ಲ. ನೂರಾರು ಜೀವಗಳು ಕ್ಷಣ ಮಾತ್ರದಲ್ಲಿ ದಿವಂಗತರ ಪಟ್ಟಿಯಲ್ಲಿ ಸೇರುವುದಕ್ಕೆ ಅದು ಕಾರಣವಾಗುತ್ತದೆ. ಆದ್ದರಿಂದಲೇ ಉಪವಾಸ ವ್ರತ ಎಂಬುದು ಬಾಹ್ಯ ನೋಟಕ್ಕೆ ಹೊಟ್ಟೆಯನ್ನು ಕೇಂದ್ರೀಕರಿಸಿಕೊಂಡು ಮಾಡ ಲಾಗುವ ಆಚರಣಾ ವಿಧಾನವಾಗಿ ಕಂಡರೂ ಅದು ಅಷ್ಟೇ ಅಲ್ಲ ಮತ್ತು ಅಷ್ಟಾಗುವುದು ಉಪವಾಸ ವ್ರತವೂ ಅಲ್ಲ. ಮನಸ್ಸು, ಹೃದಯ ಮತ್ತು ಲೈಂಗಿಕ ಭಾವನೆ... ಇವುಗಳೂ ಉಪವಾಸಿ ಯಾಗಿರುತ್ತಾ ಹೊಟ್ಟೆಯ ಜೊತೆಗೆ ಸೇರಿಕೊಳ್ಳಬೇಕು. ಆಗಲೇ ಉಪವಾಸ ವ್ರತ ಪರಿಪೂರ್ಣವಾಗುತ್ತದೆ. ಇವತ್ತಿನ ಮೊಬೈಲ್ ಯುಗದಲ್ಲಿ ಹೊಟ್ಟೆಯ ಉಪವಾಸ ಕಷ್ಟ ಅಲ್ಲ. ಆದರೆ ಉಳಿದ ಮೂರು ವಿಷಯಗಳಿಗೆ ಸಂಬಂಧಿಸಿದ ಉಪವಾಸ ಖಂಡಿತ ಕಷ್ಟ. ಒಂದು ತಿಂಗಳ ವರೆಗೆ ಮನಸ್ಸು, ಹೃದಯ ಮತ್ತು ಲೈಂಗಿಕ ಭಾವನೆಗಳಿಗೆ ನಿಯಂತ್ರಣವನ್ನು ಕಲಿಸುವುದು ಮತ್ತು ಶಿಸ್ತು ಬದ್ಧ ಬದುಕಿಗೆ ಪಕ್ಕಾಗುವುದು ಒಂದು ಪ್ರಬಲ ಸವಾಲು. ಈ ಸವಾಲನ್ನು ಜಯಿಸಿದವರಿಗೆ ಈದ್ ಒಂದು ಅದ್ಭುತ ಅನುಭವ. ಉಪವಾಸ ವ್ರತದಿಂದ ಮುಕ್ತವಾಗಿಯೂ ಅವರು ಸ್ವ ನಿಯಂತ್ರಣದ ಭಾವದಲ್ಲಿರುತ್ತಾರೆ. ಆಡಬಾರದ್ದನ್ನು ಆಡುವುದಿಲ್ಲ. ಮಾಡಬಾರದ್ದನ್ನು ಮಾಡುವುದಿಲ್ಲ. ಹೊಟ್ಟೆ ತುಂಬಿದ್ದರೂ ಹೊಟ್ಟೆ ಖಾಲಿಯಾಗಿದ್ದಾಗಿನ ಸ್ವಶಿಸ್ತು ಅವರಲ್ಲಿರುತ್ತದೆ. ಅಂಥವರಿಗೆ ಪ್ರತಿದಿನವೂ ಈದ್. ಇದುವೇ ಈದ್.