Thursday, July 6, 2017

ಪ್ರತಿದಿನವೂ ಈದ್ - ಯಾರಿಗೆ, ಹೇಗೆ?

1. ಮನಸ್ಸು
2. ಹೃದಯ
3. ಹೊಟ್ಟೆ
4. ಲೈಂಗಿಕತೆ
ಕ್ರಮಸಂಖ್ಯೆ 1 ಮತ್ತು 2ರಲ್ಲಿ ಲೋಪ ಸಂಭವಿಸಿದರೆ, ಉಪವಾಸ ವ್ರತ ಕೆಡುವುದಿಲ್ಲ. ಆದರೆ ಉಪವಾಸಿಗರಿಗೆ ಸಿಗುವ ಪುರಸ್ಕಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಕ್ರಮಸಂಖ್ಯೆ 3 ಮತ್ತು 4 ಹಾಗಲ್ಲ. ಇದರಲ್ಲಿ ತಪ್ಪುಗಳು ಸಂಭವಿಸಿದರೆ ಉಪವಾಸವೇ ಕೆಡುತ್ತದೆ. ಉದ್ದೇಶಪೂರ್ವಕವಾಗಿ ಏನನ್ನಾದರೂ ತಿಂದರೆ ಅಥವಾ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾದರೆ ಅವರ ಉಪವಾಸ ಮುರಿಯುತ್ತದೆ. ನಿಜವಾಗಿ ರಮಝಾನ್ ತಿಂಗಳ ಉಪವಾಸದ ಪ್ರಮುಖ 4 ಮೈಲುಗಲ್ಲುಗಳಿವು. ಈ 4 ಮೈಲುಗಲ್ಲುಗಳನ್ನು ಷರತ್ತಿಗೆ ಒಳಪಟ್ಟು ದಾಟಲು ಯಾರು ಯಶಸ್ವಿಯಾಗುತ್ತಾರೋ ಅವರೇ ನಿಜವಾದ ಉಪವಾಸಿಗರು. ಬಾಹ್ಯ ನೋಟಕ್ಕೆ ಉಪವಾಸ ಭಾರೀ ಕಷ್ಟದ್ದೇನೂ ಅಲ್ಲ. ಕಚೇರಿಗಳಲ್ಲಿ ಕೆಲಸ ಮಾಡುವವರು ಮತ್ತು ದೈಹಿಕ ಶ್ರಮದ ಅಗತ್ಯವಿಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ ಉಪವಾಸ ವ್ರತ ತೀರಾ ಸಲೀಸು. ಶ್ರಮಿಕ ವರ್ಗವನ್ನು ಬಿಟ್ಟರೆ ಉಳಿದಂತೆ ಉಪವಾಸ ವ್ರತದಲ್ಲಿ ತೊಡಗಿಸಿಕೊಂಡವರಲ್ಲಿ ಹೆಚ್ಚಿನವರೂ ಸಹಜವಾಗಿಯೇ ಇರುತ್ತಾರೆ. ಭಾರತದಲ್ಲಿ ಸುಮಾರು 14 ಗಂಟೆಗಳ ಕಾಲ ಉಪವಾಸದ ಅವಧಿಯಿದ್ದರೆ ಗ್ರೀನ್‍ಲ್ಯಾಂಡ್ ದೇಶದ ಕೆಲವು ಪ್ರದೇಶಗಳಲ್ಲಿ 21 ಗಂಟೆ 12 ನಿಮಿಷಗಳಷ್ಟು ದೀರ್ಘಕಾಲ ಉಪವಾಸ ಇರಬೇಕಾಗುತ್ತದೆ. ಐಲ್ಯಾಂಡ್‍ನಲ್ಲಿ 21 ಗಂಟೆಗಳ ಕಾಲ ಉಪವಾಸ ಇರಬೇಕಾಗುತ್ತದೆ. ಫಿನ್ಲೆಂಡ್‍ನಲ್ಲಿ ಸುಮಾರು 20 ಗಂಟೆಗಳ ಅವಧಿ ಯಿದ್ದರೆ ನಾರ್ವೆಯಲ್ಲಿ 19 ಗಂಟೆ 48 ನಿಮಿಷಗಳ ಕಾಲ ಉಪವಾಸ ಇರಬೇಕಾಗುತ್ತದೆ. ನಾರ್ವೆಯ ಬಹುತೇಕ ಪ್ರದೇಶಗಳಲ್ಲಿ ದಿನದ ಮುಕ್ತಾಯ ಮತ್ತು ಬೆಳಗಿನ ಆರಂಭದ ಬಗ್ಗೆ ಯಾವುದೇ ಸೂಚನೆಗಳು ಸಿಗುವುದಿಲ್ಲ. ಜೂನ್ ಮತ್ತು ಜುಲೈ ತಿಂಗಳಲ್ಲಿ ಇಂಥ ಸಂದಿಗ್ಧತೆ ಎದುರಾಗುತ್ತದೆ. ಮಧ್ಯರಾತ್ರಿಯೇ ಸೂರ್ಯ ಉದಯಿಸುವ ಪ್ರಸಂಗ ನಡೆಯುತ್ತದೆ. ಆದ್ದರಿಂದ ಇಂಥ ಪ್ರದೇಶಗಳ ಮಂದಿ ಒಂದೋ ಮಕ್ಕಾದ ಸಮಯಕ್ಕೆ ಅಥವಾ ಹತ್ತಿರದ ರಾಷ್ಟ್ರಗಳ ಸಮಯಕ್ಕೆ ಹೊಂದಿಕೊಂಡು ವ್ರತಾಚರಣೆಯಲ್ಲಿ ತೊಡಗುತ್ತಾರೆ. ಭಾರತದ ಶ್ರಮಿಕ ವರ್ಗಕ್ಕೆ ಹೋಲಿಸಿದರೆ, ಗ್ರೀನ್‍ಲ್ಯಾಂಡ್‍ನ ಶ್ರಮಿಕ ವರ್ಗದ ಉಪವಾಸ ವ್ರತ ದೀರ್ಘ ಅವಧಿಯಿದ್ದು. ಆದರೂ ಮೇಲಿನ 4 ವಿಷಯಗಳಿಗೆ ಸಂಬಂಧಿಸಿ ಉಪವಾಸಿಗ ಷರತ್ತನ್ನು ಪಾಲಿಸದಿದ್ದರೆ ಆ ದೀರ್ಘಾವಧಿಯೂ ವ್ಯರ್ಥವಾಗುತ್ತದೆ. ‘ಯಾರು ಉಪವಾಸವಿದ್ದೂ ಸುಳ್ಳು ಮತ್ತು ಕೆಟ್ಟ ಕೃತ್ಯಗಳಿಂದ ದೂರ ನಿಲ್ಲುವುದಿಲ್ಲವೋ ಅವರು ಅನ್ನ-ಪಾನೀಯವನ್ನು ತ್ಯಜಿಸಬೇಕಾದ ಯಾವ ಅಗತ್ಯವೂ ಇಲ್ಲ’ ಎಂಬ ಪ್ರಸಿದ್ಧ ಪ್ರವಾದಿ ವಚನವೊಂದಿದೆ. ಈ ವಚನ ಮೇಲಿನ 4 ವಿಷಯಗಳನ್ನೂ ಒಳಗೊಳ್ಳುತ್ತದೆ.
     ನಿಜವಾಗಿ ಮನಸ್ಸು ಮತ್ತು ಹೃದಯ ಅತ್ಯಂತ ಹೆಚ್ಚು ಬಳಕೆಗಾಗಿ ಒಳಗಾಗುವ ಪದಪುಂಜಗಳು. ಸಾಹಿತ್ಯ ಕ್ಷೇತ್ರವಂತೂ ಈ ಪದಗಳ ಹೊರತಾಗಿ ಇಲ್ಲವೇ ಇಲ್ಲ ಎಂದು ಹೇಳಬಹುದು. ಹೃದಯವನ್ನು ಕೇಂದ್ರೀಕರಿಸಿ ಕವನಗಳು, ಕತೆಗಳು, ಚಿತ್ರಕತೆಗಳು, ಕಾದಂಬರಿ, ನಾಟಕ, ಪ್ರಬಂಧ, ಲಲಿತ ಪ್ರಬಂಧಗಳು, ಸಿನಿಮಾ, ಕವಿಗೋಷ್ಠಿಗಳು ಇತ್ಯಾದಿ ಕೋಟ್ಯಾಂತರ ಪ್ರಮಾಣದಲ್ಲಿ ನಡೆದಿವೆ. ಮನಸ್ಸುಗಳಲ್ಲಿ ಮೃದು ಮನಸು, ಹದ ಮನಸ್ಸು, ಕಠೋರ ಮನಸ್ಸು, ವಂಚಕ ಮನಸ್ಸು, ಕೀಚಕ ಮನಸ್ಸು, ಉಗ್ರ ಮನಸ್ಸು, ಇರಿವ ಮನಸ್ಸು, ಶುದ್ಧ ಮನಸ್ಸು... ಹೀಗೆ ನೂರಾರು ಇವೆ. ಮನುಷ್ಯನ ವರ್ತನೆಗೂ ಮನಸ್ಸಿಗೂ ಸಂಬಂಧ ಇದೆ. ಮನುಷ್ಯನ ಮಾತಿಗೂ ಹೃದಯಕ್ಕೂ ಸಂಬಂಧ ಇದೆ. ಹೃದಯ ಗೆಲ್ಲುವುದು, ಹೃದಯವಂತಿಕೆ, ಮನಸೂರೆಗೊಳ್ಳುವುದು, ಹೃದ್ಯಮಾತು, ಹೃದಯ ಕದಿಯುವುದು... ಹೀಗೆಲ್ಲ ಹೇಳುವುದಿದೆ. ಹರೆಯದಲ್ಲಿ ಹೃದಯಕ್ಕೆ ಮೊದಲು ಸ್ಥಾನ. ವ್ಯವಹಾರಗಳಲ್ಲಿ ಮನಸಿನದ್ದೇ ಪಾರುಪತ್ಯ. ಜಗತ್ತು ಬಹುತೇಕ ಈ ಎರಡರ ಮೇಲೆ ನಿಂತಿದೆ. ನೀವು ಹೇಗೆ ಮಾತಾಡುತ್ತೀರಿ ಅನ್ನುವುದು ಇದರಲ್ಲಿ ಮೊದಲಿನದಾದರೆ, ನೀವು ಎಷ್ಟು ಪರಿಶುದ್ಧರು ಅನ್ನುವುದು ಎರಡನೆಯದು. ಓರ್ವ ವ್ಯಾಪಾರಿ ಮೆದುಳಿನಿಂದಲೂ ಮಾತಾಡಬಹುದು, ಹೃದಯದಿಂದಲೂ ಮಾತಾಡಬಹುದು. ಹೃದಯದಿಂದ ಆಡುವ ಮಾತು ಪ್ರಾಮಾಣಿಕ ವಾಗಿರುತ್ತದೆ ಮತ್ತು ಅದು ಇನ್ನೊಬ್ಬರ ಹೃದಯಕ್ಕೆ ತಟ್ಟುತ್ತದೆ. ಮಾತು ಎಷ್ಟು ಪ್ರಬಲ ಅಂದರೆ ಅದು ಸಂಬಂಧಗಳನ್ನು ಕೆಡಿಸು ತ್ತದೆ. ಸಂಗಾತಿಯನ್ನು ದೂರ ಮಾಡುತ್ತದೆ. ಅಪರಾಧ ಕೃತ್ಯಗಳಿಗೆ ಪ್ರೇರಕವಾಗುತ್ತದೆ. ಕಣ್ಣೀರಿಗೂ, ದ್ವೇಷಕ್ಕೂ ಕಾರಣವಾಗುತ್ತದೆ. ಅನೇಕ ಬಾರಿ ಮಾತು ಮರುಳುಗೊಳಿಸುತ್ತದೆ. ವಂಚಿಸುತ್ತದೆ. ಅಪರಿಚಿತ ವ್ಯಕ್ತಿಯೊಬ್ಬರು ನಮ್ಮನ್ನು ಭೇಟಿಯಾಗುತ್ತಾರೆ. ಮಾತಿನ ಮೂಲಕ ನಮ್ಮನ್ನು ಪ್ರಭಾವಿತಗೊಳಿಸುತ್ತಾರೆ. ಅವರ ಮೇಲೆ ನಾವು ವಿಶ್ವಾಸವಿಡುವುದಕ್ಕೆ ಅವರ ಮಾತುಗಳ ಹೊರತು ಇನ್ನಾ ವುದೂ ಇರುವುದಿಲ್ಲ. ತನ್ನ ಪರ್ಸು ಕಳೆದುಹೋಗಿದೆ, ತನ್ನನ್ನು ಮನೆಯವರು ಹೊರಕ್ಕಟ್ಟಿದ್ದಾರೆ, ತನ್ನ ಮನೆ-ಮಾರು ಬಿದ್ದು ಹೋಗಿದೆ, ಊರಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ... ಮುಂತಾದ ಕಾರಣ ಗಳನ್ನು ಹೇಳುತ್ತಾ ಸಂಕಷ್ಟ ತೋಡಿಕೊಳ್ಳುವ ವ್ಯಕ್ತಿಗೆ- ಅದಕ್ಕೆ ಪುರಾವೆಗಳಿಲ್ಲದಿದ್ದರೂ- ಮಾತಿನ ವೈಖರಿಗೆ ಪ್ರಭಾವಿತಗೊಂಡು ನಾವು ನೆರವಾಗುವುದಿದೆ. ಆತ ಸುಳ್ಳುಗಾರ ಎಂದು ಇನ್ನಾರೋ ನಮ್ಮ ಗಮನಕ್ಕೆ ತಂದಾಗ ನಾವು ವಿಚಲಿತರಾಗುತ್ತೇವೆ. ಮೋಸದ ಅನುಭವವಾಗುತ್ತದೆ. ಪ್ರವಾದಿ ವಚನದ ಮಹತ್ವ ಸ್ಪಷ್ಟವಾಗುವುದು ಇಲ್ಲೇ. ಅಂದಹಾಗೆ,
     ಹೊಟ್ಟೆ ಮತ್ತು ಲೈಂಗಿಕತೆಗೂ ಹತ್ತಿರದ ಸಂಬಂಧ ಇದೆ. ಹೊಟ್ಟೆ ಖಾಲಿ ಇರುವಾತ ಲೈಂಗಿಕ ಚಟುವಟಿಕೆಯಲ್ಲಿ ಪಾಲುಗೊಳ್ಳುವುದು ತೀರಾ ತೀರಾ ಕಡಿಮೆ. ಹೊಟ್ಟೆ ತುಂಬಿದ ಕೂಡಲೇ ಹೊಟ್ಟೆಯ ಹೊರತಾದ ಇತರ ವಿಷಯಗಳು ಮುನ್ನಲೆಗೆ ಬರುತ್ತವೆ. ಇದು ಹಸಿವಾಗುವ ವರೆಗೆ ಮಾತ್ರ. ಹಸಿವು ಪ್ರಾರಂಭವಾದ ತಕ್ಷಣ ಉಳಿದ ವಿಷಯಗಳೆಲ್ಲ ಹಿನ್ನೆಲೆಗೆ ಸರಿದು ಹೊಟ್ಟೆ ತುಂಬಿಸುವುದು ಮುಖ್ಯ ವಿಷಯವಾಗಿ ಬಿಡುತ್ತದೆ. ಪ್ರಯಾಣದಲ್ಲಿದ್ದರೂ, ಆಟದಲ್ಲಿದ್ದರೂ, ಭಾಷಣವನ್ನು ಆಲಿಸುತ್ತಿದ್ದರೂ, ಶ್ರಮದ ದುಡಿಮೆಯಲ್ಲಿದ್ದರೂ ಹಸಿವು ಕಾಣಿಸಿಕೊಂಡಾಕ್ಷಣ ಅವುಗಳಿಂದ ಕಳಚಿಕೊಂಡು ಹೊಟ್ಟೆ ತುಂಬಿಸಲು ಮುಂದಾಗುವುದು ಸಹಜವಾಗಿರುತ್ತದೆ. ನಿಜವಾಗಿ ಉಪವಾಸ ವ್ರತ ಎಂಬುದು ಬಾಹ್ಯ ನೋಟಕ್ಕೆ ಹೊಟ್ಟೆಗೆ ಸಂಬಂಧಿಸಿದ್ದು. ಏನನ್ನೂ ತಿನ್ನದೇ ಮತ್ತು ಕುಡಿಯದೇ ಇರುವುದೇ ಉಪವಾಸ ಎಂಬುದು ಸ್ಪಷ್ಟ. ಹೊಟ್ಟೆ ಖಾಲಿಯಿದ್ದಾಗ ಲೈಂಗಿಕ ಬಯಕೆಗಳು ಕಡಿಮೆಯಾಗಿರುತ್ತದೆ ಎಂಬುದು ಸ್ಪಷ್ಟವಿದ್ದೂ ಲೈಂಗಿಕ ಸಂಬಂಧವು ಉಪವಾಸವನ್ನು ಕೆಡಿಸುತ್ತದೆ ಎಂಬ ವಿಶೇಷ ಉಲ್ಲೇಖವನ್ನು ಮಾಡಿರುವುದಕ್ಕೆ ಕಾರಣವೇನು? ಬಹುಶಃ ಸ್ವಶಿಸ್ತು ಎಂಬ ಮೂಲಭೂತ ಉದ್ದೇಶವೊಂದು ಇದರ ಹಿಂದಿದೆ ಎಂದೇ ಹೇಳಬೇಕಾಗುತ್ತದೆ. ಲೈಂಗಿಕತೆ ಎಂಬುದು ಜೀವಾಸ್ತಿತ್ವದ ಬಹುದೊಡ್ಡ ಬೇಡಿಕೆ. ಅದೇ ವೇಳೆ ಈ ಕ್ಷೇತ್ರದಲ್ಲಾಗುವ ಅಶಿಸ್ತು ಬಹುದೊಡ್ಡ ಅರಾಜಕತೆಗೂ ಹತ್ಯೆ-ಹಗೆತನಗಳಿಗೂ ಕಾರಣವಾಗುತ್ತದೆ. ಉಪವಾಸಕ್ಕೆ ಆರಂಭ ಮತ್ತು ಅಂತ್ಯ ಇದೆ. ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸದಲ್ಲಿ ಕಳೆಯುವ ವ್ಯಕ್ತಿ ಆ ಬಳಿಕ ಮೊದಲಿನಂತಾಗುತ್ತಾನೆ. ಹೊಟ್ಟೆ ತುಂಬುತ್ತದೆ. ಹೀಗೆ ಒಂದು ತಿಂಗಳ ವರಗೆ ಹೊಟ್ಟೆ ಒಂದು ಶಿಸ್ತಿಗೆ ಒಳಪಡುತ್ತದೆ. ದೇಹದ ಒಳಗಿನ ಎಂಜಿನ್‍ಗಳಿಗೆ ಆ ಮೂಲಕ ವಿರಾಮವೂ ಸಿಗುತ್ತದೆ. ಆಹಾರವನ್ನು ಹೊಟ್ಟೆಯೊಳಗೆ ಕಳುಹಿಸುವ, ಜೀರ್ಣಿಸುವ ಮತ್ತು ಸಂಸ್ಕರಣೆಗೊಳಿಸುವ ಎಲ್ಲ ಅಂಗಾಂಗಗಳಿಗೂ ಸುಮಾರು 15 ಗಂಟೆಗಳ ವಿರಾಮದ ಅವಧಿ ಬಹಳ ಉಪಯುಕ್ತ. ಅದೇವೇಳೆ, ಲೈಂಗಿಕವಾಗಿ ಯಾವ ನಿಯಂತ್ರವೂ ಇಲ್ಲದೆ ಇದ್ದರೆ ಮತ್ತು ಲೈಂಗಿಕ ವಿರಾಮ ಎಂಬ ಮನಸ್ಥಿತಿಗೆ ಅವನು/ಳು ಪಕ್ಕಾಗದೆ ಹೋದರೆ ಅದು ಉಪವಾಸ ನಂತರದ ದಿನಗಳಲ್ಲಿ ಶಿಸ್ತು ಉಲ್ಲಂಘನೆಗೆ ಕಾರಣವಾಗಲೂ ಬಹುದು. ನಿಯಂತ್ರಣ ಎಂಬುದು ಸುಲಭವಾಗಿ ಯಾರಿಗೂ ದಕ್ಕುವುದಿಲ್ಲ. ವಾಹನವು ನಿಯಂತ್ರಣ ತಪ್ಪುವುದಿದೆ. ವ್ಯಕ್ತಿಯು ನಿಯಂತ್ರಣ ಮೀರುವುದಿದೆ. ಆಟಗಾರ, ಉದ್ಯೋಗಿ, ಮ್ಯಾನೇ ಜರ್, ರಾಜಕಾರಣಿ, ದೇಶಗಳು, ಸಂಘಟನೆಗಳು, ದಂಪತಿಗಳು... ಹೀಗೆ ನಿಯಂತ್ರಣ ಮೀರುವ ಸಂದರ್ಭಗಳು ಮತ್ತು ಅದರಿಂದಾಗಿ ಉಂಟಾಗುವ ಅನಾಹುತಗಳು ಪ್ರತಿನಿತ್ಯವೆಂಬಂತೆ ನಡೆಯುತ್ತಲೇ ಇವೆ. ವಾಹನವು ನಿಯಂತ್ರಣ ಕಳಕೊಂಡಾಗ ಅಪಘಾತವಾಗುತ್ತದೆ. ಸಾವೂ ಸಂಭವಿಸುತ್ತದೆ. ವ್ಯಕ್ತಿಯು ನಿಯಂತ್ರಣ ಕಳಕೊಂಡರೆ ಮಾಡಬಾರದ್ದನ್ನು ಮಾಡುತ್ತಾನೆ. ಆಡಬಾರದ್ದನ್ನು ಆಡುತ್ತಾನೆ. ನೋಡಬಾರದ್ದನ್ನು ನೋಡುತ್ತಾನೆ. ಇದರ ಪರಿಣಾಮ ಆತನ ಮೇಲಷ್ಟೇ ಆಗುವುದಲ್ಲ. ಸಮಾ ಜದ ಮೇಲೂ ಕುಟುಂಬದ ಮೇಲೂ ಆಗುತ್ತದೆ. ಪತಿ-ಪತ್ನಿಯರಲ್ಲಿ ಒಬ್ಬರು ಅಥವಾ ಇಬ್ಬರು ನಿಯಂತ್ರಣ ಕಳ ಕೊಂಡರೂ ಪರಿಣಾಮ ಇಬ್ಬರ ಮೇಲೆ ಮಾತ್ರ ಅಲ್ಲ, ಮಕ್ಕಳಿದ್ದರೆ ಮಕ್ಕಳ ಮೇಲೂ, ಅವರಿಬ್ಬರ ಕುಟುಂಬಗಳ ಮೇಲೂ ಮತ್ತು ಸಮಾಜದ ಮೇಲೂ ಆಗುತ್ತದೆ. ಅವರ ನಿಯಂತ್ರಣ ರಹಿತ ಬದುಕಿನಿಂದಾಗಿ ವಿಚ್ಛೇದನ ಏರ್ಪಡಬಹುದು. ಮಕ್ಕಳಿಗೆ ಅನಾಥತೆಯ ಅನುಭವವಾಗಬಹುದು. ಅವರ ಕುಟುಂಬಿ ಕರಿಗೆ ಮರು ಮದುವೆ ಮಾಡಿಸುವ, ಮಕ್ಕಳಿಗೆ ಅನಾಥತೆಯ ಅನುಭವವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎದುರಾಗ ಬಹುದು. ಆಟಗಾರ ನಿಯಂತ್ರಣ ತಪ್ಪಿ ವರ್ತಿಸಿದರೆ ಇನ್ನೋರ್ವ ಆಟಗಾರನ ಜೀವಕ್ಕೇ ಅಪಾಯವಾಗಬಹುದು. ಸಂಘಟನೆಗಳು ನಿಯಂತ್ರಣ ಕಳಕೊಂಡು ಬಿಟ್ಟರೆ, ಸಾಮಾಜಿಕ ಬಿಕ್ಕಟ್ಟುಗಳು ಎದು ರಾಗಬಹುದು. ಅವು ಹುಟ್ಟಿಕೊಂಡ ಉದ್ದೇಶ ಏನಿದೆಯೋ ಅವನ್ನು ಮರೆತು ಪರಸ್ಪರ ತಪ್ಪುಗಳನ್ನು ಹುಡುಕುವುದನ್ನೇ ಪೂರ್ಣಕಾಲಿಕ ಉದ್ದೇಶವಾಗಿ ಅವು ಆರಿಸಿಕೊಳ್ಳಲೂಬಹುದು. ಹಾಗಂತ ದೇಶಗಳು ನಿಯಂತ್ರಣ ಕಳಕೊಂಡರೆ ಏನಾಗುತ್ತದೆ ಎಂದು ಹೇಳಬೇಕಾದ ಅಗತ್ಯವೇ ಇಲ್ಲ. ನೂರಾರು ಜೀವಗಳು ಕ್ಷಣ ಮಾತ್ರದಲ್ಲಿ ದಿವಂಗತರ ಪಟ್ಟಿಯಲ್ಲಿ ಸೇರುವುದಕ್ಕೆ ಅದು ಕಾರಣವಾಗುತ್ತದೆ. ಆದ್ದರಿಂದಲೇ ಉಪವಾಸ ವ್ರತ ಎಂಬುದು ಬಾಹ್ಯ ನೋಟಕ್ಕೆ ಹೊಟ್ಟೆಯನ್ನು ಕೇಂದ್ರೀಕರಿಸಿಕೊಂಡು ಮಾಡ ಲಾಗುವ ಆಚರಣಾ ವಿಧಾನವಾಗಿ ಕಂಡರೂ ಅದು ಅಷ್ಟೇ ಅಲ್ಲ ಮತ್ತು ಅಷ್ಟಾಗುವುದು ಉಪವಾಸ ವ್ರತವೂ ಅಲ್ಲ. ಮನಸ್ಸು, ಹೃದಯ ಮತ್ತು ಲೈಂಗಿಕ ಭಾವನೆ... ಇವುಗಳೂ ಉಪವಾಸಿ ಯಾಗಿರುತ್ತಾ ಹೊಟ್ಟೆಯ ಜೊತೆಗೆ ಸೇರಿಕೊಳ್ಳಬೇಕು. ಆಗಲೇ ಉಪವಾಸ ವ್ರತ ಪರಿಪೂರ್ಣವಾಗುತ್ತದೆ. ಇವತ್ತಿನ ಮೊಬೈಲ್ ಯುಗದಲ್ಲಿ ಹೊಟ್ಟೆಯ ಉಪವಾಸ ಕಷ್ಟ ಅಲ್ಲ. ಆದರೆ ಉಳಿದ ಮೂರು ವಿಷಯಗಳಿಗೆ ಸಂಬಂಧಿಸಿದ ಉಪವಾಸ ಖಂಡಿತ ಕಷ್ಟ. ಒಂದು ತಿಂಗಳ ವರೆಗೆ ಮನಸ್ಸು, ಹೃದಯ ಮತ್ತು ಲೈಂಗಿಕ ಭಾವನೆಗಳಿಗೆ ನಿಯಂತ್ರಣವನ್ನು ಕಲಿಸುವುದು ಮತ್ತು ಶಿಸ್ತು ಬದ್ಧ ಬದುಕಿಗೆ ಪಕ್ಕಾಗುವುದು ಒಂದು ಪ್ರಬಲ ಸವಾಲು. ಈ ಸವಾಲನ್ನು ಜಯಿಸಿದವರಿಗೆ ಈದ್ ಒಂದು ಅದ್ಭುತ ಅನುಭವ. ಉಪವಾಸ ವ್ರತದಿಂದ ಮುಕ್ತವಾಗಿಯೂ ಅವರು ಸ್ವ ನಿಯಂತ್ರಣದ ಭಾವದಲ್ಲಿರುತ್ತಾರೆ. ಆಡಬಾರದ್ದನ್ನು ಆಡುವುದಿಲ್ಲ. ಮಾಡಬಾರದ್ದನ್ನು ಮಾಡುವುದಿಲ್ಲ. ಹೊಟ್ಟೆ ತುಂಬಿದ್ದರೂ ಹೊಟ್ಟೆ ಖಾಲಿಯಾಗಿದ್ದಾಗಿನ ಸ್ವಶಿಸ್ತು ಅವರಲ್ಲಿರುತ್ತದೆ. ಅಂಥವರಿಗೆ ಪ್ರತಿದಿನವೂ ಈದ್. ಇದುವೇ ಈದ್.

No comments:

Post a Comment