Wednesday, July 30, 2014

ನ್ಯೂಯಾರ್ಕ್‍ನಲ್ಲಿ ಇಸ್ರೇಲನ್ನು ಸ್ಥಾಪಿಸಿರುತ್ತಿದ್ದರೆ ಅಮೇರಿಕಕ್ಕೂ ಫೆಲೆಸ್ತೀನ್ ಅರ್ಥವಾಗುತ್ತಿತ್ತು..

   “ವಸಾಹತುಶಾಹಿತ್ವಕ್ಕೆ ಬದ್ಧವಾಗಿರುವ ಮತ್ತು ಮಾನವ ಹಕ್ಕು ಉಲ್ಲಂಘನೆಗಳನ್ನು ಎಗ್ಗಿಲ್ಲದೇ ನಡೆಸುತ್ತಿರುವ ಇಸ್ರೇಲ್‍ನೊಂದಿಗೆ ಬ್ರಿಟನ್ನಿನ ಕಂಪೆನಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಂಬಂಧವನ್ನು ಕಡಿದುಕೊಳ್ಳಬೇಕು. ಡೇವಿಡ್ ಕ್ಯಾಮರೂನ್ ನೇತೃತ್ವದ ಸರಕಾರವು ಇಸ್ರೇಲ್‍ಗೆ ದಿಗ್ಬಂಧನ ವಿಧಿಸಬೇಕು..” ಎಂದು ಬ್ರಿಟನ್ನಿನ ಖ್ಯಾತ ಪತ್ರಕರ್ತ ಬೆನ್ ವೈಟ್ ಕಳೆದ ವಾರ ಆಗ್ರಹಿಸಿದ್ದರು. ‘ಇಸ್ರೇಲಿ ಅಪಾರ್ಥೀಡ್: ಎ ಬೆಗಿನ್ನರ್ಸ್ ಗೈಡ್’ ಮತ್ತು 'ಪೆsಲೆಸ್ತೀನಿಯನ್ಸ್ ಇನ್ ಇಸ್ರೇಲ್: ಸೆಗ್ರೆಗೇಶನ್, ಡಿಸ್‍ಕ್ರಿಮಿನೇಶನ್ ಆ್ಯಂಡ್ ಡೆಮಾಕ್ರಸಿ' ಎಂಬೆರಡು ಪುಸ್ತಕಗಳಲ್ಲಿ ಅವರು ಇಸ್ರೇಲಿ ಆಕ್ರಮಿತ ಪಶ್ಚಿಮ ದಂಡೆ ಮತ್ತು ಪೂರ್ವ ಜೆರೋಸಲೇಮ್‍ನಲ್ಲಿ ಫೆಲೆಸ್ತೀನಿಯರ ಬದುಕು-ಬವಣೆಗಳನ್ನು ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ. 1967ರ ಅರಬ್ ಯುದ್ಧದಲ್ಲಿ ಈ ಪ್ರದೇಶಗಳನ್ನು ಆಕ್ರಮಿಸಿಕೊಂಡ ಇಸ್ರೇಲ್, ಇವತ್ತು ಅಲ್ಲಿನ ಫೆಲೆಸ್ತೀನಿಯರನ್ನು ಹೊರಕ್ಕಟ್ಟಿ ಯಹೂದಿಗಳನ್ನು ಕೂರಿಸುತ್ತಿರುವ ಬಗ್ಗೆ, 1970ರ ಮಧ್ಯದಲ್ಲೇ ಸುಮಾರು 70% ಫೆಲೆಸ್ತೀನಿಯರು ತಮ್ಮ ಭೂಮಿಯನ್ನು ಕಳಕೊಂಡ ಬಗ್ಗೆ.. ಅವರು ವಿವರವಾಗಿ ಬರೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇದ ಸರಕಾರಕ್ಕಿಂತ ಇಸ್ರೇಲ್‍ನ ಪ್ರಜಾತಂತ್ರ ಸರಕಾರವೇ ಅತಿ ಕ್ರೂರವಾದದ್ದು ಎಂದಿದ್ದಾರೆ. ಅಷ್ಟಕ್ಕೂ, ಹಾಲೋಕಾಸ್ಟ್ ನಡೆಸಿದ್ದು ಫೆಲೆಸ್ತೀನಿಯರಲ್ಲ. ರಶ್ಯಾದಲ್ಲಿ ನಡೆದ ಕಿಶಿನೋವ್ ಹತ್ಯಾಕಾಂಡಕ್ಕೂ ಅವರು ಕಾರಣರಲ್ಲ. 1492ರಲ್ಲಿ ಸ್ಪೈನ್, 1904-14ರ ಆಸುಪಾಸಿನಲ್ಲಿ ರಶ್ಯಾ, ಲಿಥುವೇನಿಯಾ, ಜರ್ಮನಿ.. ಮುಂತಾದ ರಾಷ್ಟ್ರಗಳಲ್ಲಿ ಯಹೂದಿಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಅರಬ್ ರಾಷ್ಟ್ರಗಳಲ್ಲಿದ್ದ ಯಹೂದಿಯರು ಸುಖವಾಗಿದ್ದರು. 1881ರಲ್ಲಿ ದಕ್ಷಿಣ ಯುರೋಪ್‍ನಲ್ಲಿ ಯಹೂದಿಯರ ಮೇಲೆ ದಬ್ಬಾಳಿಕೆ ನಡೆದು ರಬ್ಬಿ ಎಲಿಜಾ ಬೆನ್ ಸುಲೇಮಾನ್‍ರ ನೇತೃತ್ವದಲ್ಲಿ ಯಹೂದಿಯರ ಒಂದು ತಂಡ ಫೆಲೆಸ್ತೀನ್‍ಗೆ ಆಗಮಿಸಿದಾಗ ಅವರು ವಿರೋಧಿಸಲಿಲ್ಲ. 1492ರಲ್ಲಿ ರಬ್ಬಿ ಯಹೂದ ಹಚ್‍ಸಿಡ್ ಎಂಬಾತ ಸ್ಪೈನ್‍ನಿಂದ 1500 ಯಹೂದಿಯರನ್ನು ಪೆsಲೆಸ್ತೀನ್‍ಗೆ ಕರೆತಂದಾಗಲೂ ಅವರು ಪ್ರತಿಭಟಿಸಲಿಲ್ಲ. ಆದರೆ ಬರಬರುತ್ತಾ ಈ ವಲಸೆ ಹೆಚ್ಚಾಯಿತು. ಫೆಲೆಸ್ತೀನ್‍ನಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯಶಾಹಿತ್ವವು ಈ ವಲಸೆ ಪ್ರಕ್ರಿಯೆ ಹಿಂದಿದೆ ಎಂಬುದು ಬಹಿರಂಗವಾಗುತ್ತಲೇ ಹಲವು ಅನುಮಾನಗಳೂ  ಹುಟ್ಟಿಕೊಂಡವು. ಆಸ್ಟ್ರೇಲಿಯನ್-ಹಂಗೇರಿಯನ್ ಪತ್ರಕರ್ತ ಥಿಯೋಡರ್ ಹರ್ಝಲ್‍ನ ಕನಸಾಗಿರುವ ಇಸ್ರೇಲ್ ರಾಷ್ಟ್ರದ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಸಂಶಯ ಮೂಡತೊಡಗಿದುವು. ಇದನ್ನು ಸಮರ್ಥಿಸುವಂತೆ 1904-14ರ ಮಧ್ಯೆ 40 ಸಾವಿರ ಯಹೂದಿಗಳು ಫೆಲೆಸ್ತೀನ್‍ಗೆ ವಲಸೆ ಬಂದರು. 1919-29ರ ಮಧ್ಯೆ ಒಂದು ಲಕ್ಷದಷ್ಟು ಯಹೂದಿಯರು ಫೆಲೆಸ್ತೀನ್‍ಗೆ ಆಗಮಿಸಿದರು. ಬಳಿಕ ನಾಝಿಝಮ್ ಮತ್ತಿತರ ಕಾರಣಗಳಿಂದ 1930ರ ಬಳಿಕ ಸಾವಿರಾರು ಯಹೂದಿಯರು ಫೆಲೆಸ್ತೀನ್ ಸೇರಿಕೊಂಡರು. ಫೆಲೆಸ್ತೀನಿಯರು ಅಥವಾ ಅರಬರನ್ನು ಸಿಟ್ಟಿಗೆಬ್ಬಿಸಿದ್ದು ಈ ಪ್ರಕ್ರಿಯೆಗಳೇ. ದೌರ್ಜನ್ಯಕ್ಕೀಡಾಗಿರುವ ಜನರಿಗೆ ಆಶ್ರಯ ಒದಗಿಸುವುದು ಬೇರೆ, ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಉದ್ದೇಶದಿಂದಲೇ ನಿರ್ದಿಷ್ಟ ಧರ್ಮೀಯರನ್ನು ಒಂದೆಡೆ ಕಲೆ ಹಾಕುವುದು ಬೇರೆ. ಆದ್ದರಿಂದಲೇ 1936ರಲ್ಲಿ ಫೆಲೆಸ್ತೀನಿಯರು ಈ ಬೆಳವಣಿಗೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯು ಚಳವಳಿಯ ರೂಪ ಪಡೆದು ಮುಂದುವರಿದಾಗ ಯಹೂದಿ ವಲಸೆಗೆ ನಿಯಂತ್ರಣ ಹೇರುವ ಕಾನೂನನ್ನು 1939ರಲ್ಲಿ ಬ್ರಿಟಿಷ್ ಸರಕಾರವು ಜಾರಿಗೊಳಿಸಿತು. ಆದರೂ ತೆರೆಮರೆಯಲ್ಲಿ ವಲಸೆ ನಡೆಯುತ್ತಲೇ ಇತ್ತು. ಇಷ್ಟಿದ್ದೂ ಇರ್ಗುನ್ ಮತ್ತು ಲೆಹಿ ಎಂಬ ಯಹೂದಿ ಸಶಸ್ತ್ರ ಗುಂಪಿನಂತೆ ಫೆಲೆಸ್ತೀನಿಯರು ಬ್ರಿಟಿಷ್ ಸರಕಾರದ ಮೇಲೆ ದಾಳಿ ನಡೆಸಲಿಲ್ಲ. ಅವರು ಬ್ರಿಟಿಷ್ ಸರಕಾರದಿಂದ ನ್ಯಾಯವನ್ನು ನಿರೀಕ್ಷಿಸಿದರು. ಒಂದು ವೇಳೆ ಭಾರತದ ಅರುಣಾಚಲ ಪ್ರದೇಶಕ್ಕೆ ಜಪಾನ್‍ನಿಂದಲೋ ಟಿಬೆಟ್‍ನಿಂದಲೋ ಬೌದ್ಧರನ್ನು ಕರೆ ತರುತ್ತಿದ್ದರೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು? ಫೆಲೆಸ್ತೀನಿನಲ್ಲಿರುವ ಯಹೂದಿಯರ ಬಗ್ಗೆ ಚರ್ಚಿಸುವುದಕ್ಕೆ 1947 ಮೇ 15ರಂದು ವಿಶ್ವಸಂಸ್ಥೆಯು ಸಮಿತಿ ರಚಿಸಿದಂತೆ (UNSCOP) ಈ ಬೌದ್ಧರ ಬಗ್ಗೆ ಚರ್ಚಿಸುವುದಕ್ಕೂ ವಿಶ್ವಸಂಸ್ಥೆ ಸಮಿತಿ ರೂಪಿಸುತ್ತಿದ್ದರೆ ನಮ್ಮ ನಿಲುವು ಏನಿರುತ್ತಿತ್ತು? ಫೆಲೆಸ್ತೀನನ್ನು ಫೆಲೆಸ್ತೀನ್, ಯಹೂದಿ ಮತ್ತು ಸಿಟಿ ಆಫ್ ಜೆರುಸಲೇಮ್ ಎಂಬ ಮೂರು ಪ್ರತ್ಯೇಕ ರಾಷ್ಟ್ರಗಳನ್ನಾಗಿ ವಿಭಜಿಸಬೇಕೆಂದು 1947 ಸೆ. 3ರಂದು ವಿಶ್ವಸಂಸ್ಥೆಗೆ ಆ ಸಮಿತಿ ವರದಿ ಕೊಟ್ಟಂತೆಯೇ, ಭಾರತದ ಬಗ್ಗೆಯೂ ಕೊಡುವಂತಾಗಿದ್ದರೆ ಏನಾಗುತ್ತಿತ್ತು? ‘ಯಹೂದಿ ಏಜೆನ್ಸಿ'ಯ ನಾಯಕ ಡೇವಿಡ್ ಬೆನ್‍ಗುರಿಯನ್ 1948 ಮೇ 14ರಂದು ಸ್ವತಂತ್ರ ಯಹೂದಿ ರಾಷ್ಟ್ರ ಘೋಷಿಸಿದಂತೆಯೇ ಇಲ್ಲಿ ಪ್ರತ್ಯೇಕ ಬೌದ್ಧ ರಾಷ್ಟ್ರ ಘೋಷಿಸಿರುತ್ತಿದ್ದರೆ ನಾವೇನು ಮಾಡುತ್ತಿದ್ದೆವು? 1949 ಮೇ 1ರಂದು ವಿಶ್ವಸಂಸ್ಥೆಯು ಇಸ್ರೇಲ್‍ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ಕೊಟ್ಟಂತೆಯೇ ಅರುಣಾಚಲ ಪ್ರದೇಶಕ್ಕೂ ಕೊಡುತ್ತಿದ್ದರೆ ನಾವು ಸುಮ್ಮನಿರುತ್ತಿದ್ದೆವೇ? ನಮ್ಮ ಪ್ರತಿಭಟನೆಯನ್ನು ಈ ಬೌದ್ಧ ರಾಷ್ಟ್ರವು ಭಯೋತ್ಪಾದನೆಯೆಂದು ಕರೆಯುತ್ತಿದ್ದರೆ ನಾವದನ್ನು ಒಪ್ಪಿಕೊಳ್ಳುತ್ತಿದ್ದೆವೇ? ಸುಭಾಶ್ ಚಂದ್ರ ಬೋಸ್, ಭಗತ್‍ಸಿಂಗ್‍ರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಕರೆಯುವ ನಾವು ಮತ್ತೇಕೆ ಶೈಕ್ ಯಾಸೀನ್, ರಂತೀಸಿ, ಜಅïಬರಿಯನ್ನು ಭಯೋತ್ಪಾದಕರೆಂದು ಕರೆಯುತ್ತಿದ್ದೇವೆ? ಬ್ರಿಟಿಷ್ ಆಡಳಿತವಿದ್ದ ಭಾರತದಲ್ಲಿ ಕಾಂಗ್ರೆಸ್ ಪಕ್ಷ  ನಡೆಸಿರುವುದು ಸ್ವಾತಂತ್ರ್ಯ ಹೋರಾಟವೆಂದಾದರೆ ಮತ್ತೇಕೆ ಇಸ್ರೇಲ್ ಆಡಳಿತದ ಫೆಲೆಸ್ತೀನ್‍ನಲ್ಲಿ ಹಮಾಸ್‍ನ ಹೋರಾಟವು ಭಯೋತ್ಪಾದನೆಯಾಗಬೇಕು?
   1993: ಓಸ್ಲೋ ಒಪ್ಪಂದ
   2000 ಜುಲೈ: ಕ್ಯಾಂಪ್-ಡೇವಿಡ್ ಒಪ್ಪಂದ
   2001 ಜನವರಿ: ತಾಬಾ ಸಭೆ
   2002 ಸೆ. 7: ಶಾಂತಿಗಾಗಿ ನೀಲನಕ್ಷೆ
   2002 ಮಾರ್ಚ್: ಬೈರೂತ್ ಶಾಂತಿ ಸಭೆ
   2007 : ರಿಯಾದ್ ಶಾಂತಿ ಸಭೆ
1948ರ ಬಳಿಕ ಇಂಥ ಹತ್ತು-ಹಲವು ಸಭೆ, ಕರಾರುಗಳು ನಡೆದಿವೆ. ಅಮೇರಿಕ, ರಶ್ಯ ಯುರೋಪಿಯನ್ ಯೂನಿಯನ್, ಸೌದಿ ಅರೇಬಿಯಾ, ಈಜಿಪ್ಟ್, ವಿಶ್ವಸಂಸ್ಥೆಗಳು ಮಧ್ಯಸ್ಥಿಕೆಯನ್ನೂ ವಹಿಸಿವೆ. ಯಾಸರ್ ಅರಾಫತ್, ಯಹೂದ್ ಬರಾಕ್, ಇಝಾಕ್ ರಬಿನ್, ರಾಜಕುಮಾರ ಅಬ್ದುಲ್ಲಾ, ಏರಿಯಲ್ ಶರೋನ್ ಮುಂತಾದವರು ಫೆಲೆಸ್ತೀನ್ ಸಮಸ್ಯೆಯ ಸುತ್ತ ಚರ್ಚೆಯನ್ನೂ ನಡೆಸಿದ್ದಾರೆ. 1967ರಲ್ಲಿ ಇಸ್ರೇಲ್ ವಶಪಡಿಸಿಕೊಂಡ ಅರಬ್ ಭೂಮಿಯಲ್ಲಿ ಯಹೂದಿಯರಿಗಾಗಿ ವಸತಿ ನಿರ್ಮಿಸುವುದನ್ನು ಯುರೋಪಿಯನ್ ಯೂನಿಯನ್ ಈ ಹಿಂದೆಯೇ ಖಂಡಿಸಿದೆ. 2011ರಲ್ಲಿ ವಿಶ್ವಸಂಸ್ಥೆಯೂ ವಿರೋಧಿಸಿತು. ಇದು ಶಾಂತಿ ಮಾತುಕತೆ ಮತ್ತು ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿ ಅಡ್ಡಿಯಾಗುತ್ತಿದೆ ಎಂದಿತು. ಇದನ್ನು ಕಡೆಗಣಿಸಿ 2012ರಲ್ಲಿ ಇಸ್ರೇಲ್ ಮತ್ತೆ ವಸತಿ ನಿರ್ಮಾಣಕ್ಕೆ ಮುಂದಾದಾಗ ಅಂತಾರಾಷ್ಟ್ರೀಯ ಸಮುದಾಯವೇ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಇಸ್ರೇಲ್‍ನ ಕ್ರಮವು ಈ ಹಿಂದಿನ ರೋಡ್‍ಮ್ಯಾಪ್‍ಗೆ ವಿರುದ್ಧ ಎಂದು ಬ್ರಿಟನ್ ಪ್ರತಿಭಟಿಸಿತು. ಆದರೂ ಇಸ್ರೇಲನ್ನು ನಿಯಂತ್ರಿಸಲು ಈ ಯಾವ ರಾಷ್ಟ್ರಗಳಿಗೂ ಸಾಧ್ಯವಾಗುತ್ತಿಲ್ಲ ಅಂದರೆ ಏನೆನ್ನಬೇಕು? ಪ್ರತ್ಯೇಕ ಇಸ್ರೇಲ್‍ನಂತೆ ಪ್ರತ್ಯೇಕ ಫೆಲೆಸ್ತೀನ್ ರಾಷ್ಟ್ರಕ್ಕೂ UNSCOP ಸಮಿತಿಯು ಶಿಫಾರಸ್ಸು ಮಾಡಿದ್ದನ್ನು ವಿಶ್ವಸಂಸ್ಥೆಯೇಕೆ ಈ ವರೆಗೂ ಜಾರಿಗೊಳಿಸಿಲ್ಲ? ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದ ನೆರವಿನೊಂದಿಗೆ ಫೆಲೆಸ್ತೀನ್‍ನಲ್ಲಿ ಮಕ್ಕಳ ಮ್ಯಾಗಸಿನ್ ಪ್ರಕಟವಾಗುತ್ತಿತ್ತು. ಫೆಲೆಸ್ತೀನ್ ಅಥಾರಿಟಿಯ (PLO)  ಬೆಂಬಲವೂ ಅದಕ್ಕಿತ್ತು. ಒಮ್ಮೆ ಅದರಲ್ಲಿ ಹಿಟ್ಲರ್‍ನನ್ನು ಮೆಚ್ಚಿಕೊಂಡು ಲೇಖನವೊಂದು ಪ್ರಕಟವಾಯಿತು. ತಕ್ಷಣ ಯುನೆಸ್ಕೋ ಎಷ್ಟು ಸಿಟ್ಟಾಯಿತೆಂದರೆ ತನ್ನ ನೆರವನ್ನೇ ರದ್ದುಪಡಿಸಿತ್ತು. ಕೇವಲ ಲೇಖನವೊಂದಕ್ಕೆ ಈ ಪರಿ ಪ್ರತಿಕ್ರಿಯೆಯನ್ನು ನೀಡಬಲ್ಲಷ್ಟು ಸೂಕ್ಷ್ಮತೆ ಮತ್ತು ಎಚ್ಚರಿಕೆಯುಳ್ಳ ವಿಶ್ವಸಂಸ್ಥೆಗೆ, ಇಸ್ರೇಲ್‍ನ ನಿಯಮೋಲ್ಲಂಘನೆಯೇಕೆ ಕಾಣಿಸುತ್ತಿಲ್ಲ?
   1948ಕ್ಕಿಂತ ಮೊದಲು ಜಾಗತಿಕ ಭೂಪಟದಲ್ಲಿ ಇಸ್ರೇಲ್ ಎಂಬ ರಾಷ್ಟ್ರವೇ ಇರಲಿಲ್ಲ. ಆದರೆ ಫೆಲೆಸ್ತೀನ್ ಇತ್ತು. ಯಹೂದಿಗಳು ಅತ್ಯಂತ ಹೆಚ್ಚಿದ್ದುದು ಜರ್ಮನಿಯಲ್ಲಿ. ಪಶ್ಚಿಮೇಶ್ಯದಲ್ಲಿ ಅವರ ಸಂಖ್ಯೆ ತೀರಾ ಕಡಿಮೆಯಿತ್ತು. ಆದರೆ ಇವತ್ತು ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ ಇಸ್ರೇಲ್ ಇದೆ, ಫೆಲೆಸ್ತೀನ್ ಇಲ್ಲ. ಆದರೂ ಫೆಲೆಸ್ತೀನಿಯರನ್ನೇ ಭಯೋತ್ಪಾದಕರೆಂದು ಕರೆಯಲಾಗುತ್ತಿದೆ. ಸ್ವತಂತ್ರ ರಾಷ್ಟ್ರವನ್ನು ಹೊಂದುವ ಅವರ ಕನಸನ್ನು ಉಗ್ರವಾದಿ ಕನಸು ಎನ್ನಲಾಗುತ್ತಿದೆ. ನಿಜವಾಗಿ, ಯಹೂದಿಯರಿಗೆ ಅವರದೇ ಆದ ರಾಷ್ಟ್ರವೊಂದರ ಅಗತ್ಯ ಇದೆ ಎಂದಾಗಿದ್ದರೆ, ಅದಕ್ಕೆ ಎಲ್ಲ ರೀತಿಯಲ್ಲೂ ಜರ್ಮನಿಯೇ ಅತ್ಯಂತ ಸೂಕ್ತ ಜಾಗವಾಗಿತ್ತು. ಯಾಕೆಂದರೆ, ಹಾಲೋಕಾಸ್ಟ್ ನಡೆದಿರುವುದು ಅಲ್ಲೇ. ಯಹೂದಿಯರ ಸಂಖ್ಯೆ ಅತ್ಯಂತ ಹೆಚ್ಚಿದ್ದುದೂ ಅಲ್ಲೇ. ಇಷ್ಟಕ್ಕೂ ಇರಾಕಿನಲ್ಲಿರುವ ಕುರ್ದ್‍ಗಳಿಗೆ ಬ್ರಿಟನ್‍ನಲ್ಲಿ ಒಂದು ರಾಷ್ಟ್ರ ಸ್ಥಾಪಿಸಿ ಕೊಡುವುದಕ್ಕೆ ಆ ದೇಶ ಒಪ್ಪಿಕೊಂಡೀತೇ? ಇರಾಕ್‍ನ ಸುನ್ನಿಗಳಿಗೆ ಅಮೇರಿಕದಲ್ಲಿ ಒಂದು ರಾಷ್ಟ್ರ ಸ್ಥಾಪಿಸಿಕೊಡಬಹುದೇ? ಇರಾಕನ್ನು ವಿಭಜಿಸಿ ಕುರ್ದ್, ಸುನ್ನಿ ಮತ್ತು ಶಿಯಾ ರಾಷ್ಟ್ರಗಳನ್ನಾಗಿ ಮಾಡಬೇಕೆಂದು ಪಾಶ್ಚಾತ್ಯ ರಾಷ್ಟ್ರಗಳು ಚರ್ಚಿಸುತ್ತಿವೆಯಾದರೂ ಅವು ತಮ್ಮ ನೆಲದಲ್ಲಿ ಅವರಿಗಾಗಿ ಒಂದು ರಾಷ್ಟ್ರವನ್ನು ಸ್ಥಾಪಿಸುತ್ತಿಲ್ಲ. ಇರಾಕನ್ನೇ ಅದಕ್ಕಾಗಿ ವಿಭಜಿಸುವ ಮಾತಾಡುತ್ತಿವೆ. ಮತ್ತೇಕೆ ಇಸ್ರೇಲನ್ನು ತಂದು ಫೆಲೆಸ್ತೀನ್‍ನಲ್ಲಿ ಸ್ಥಾಪಿಸಲಾಗಿದೆ? ಜರ್ಮನಿಯನ್ನೇ ವಿಭಜಿಸಿ ಒಂದು ಇಸ್ರೇಲ್ ರಾಷ್ಟ್ರ ಮಾಡಬಹುದಿತ್ತಲ್ಲವೇ? ಕುರ್ದ್, ಸುನ್ನಿ, ಶಿಯಾಗಳ ಸಮಸ್ಯೆಗೆ ಕಂಡುಕೊಳ್ಳುವ ಪರಿಹಾರವನ್ನು ಯಹೂದಿಗಳ ವಿಷಯದಲ್ಲೇಕೆ ಕಡೆಗಣಿಸಲಾಯಿತು?
   ಕಳೆದ ಜೂನ್ 24ರಂದು ಹಮಾಸ್‍ನ ಅಲ್ ಅಖ್ಸಾ ಟಿವಿ ಚಾನೆಲ್ ಕೆಲವು ದೃಶ್ಯಗಳನ್ನು ಪ್ರಸಾರ ಮಾಡಿತು. ಹಮಾಸ್‍ನ ಸೇನಾ ವಿಭಾಗವು ಚಾಲಕ ರಹಿತ ಅಬಾಬೀಲ್ 1ಎ, ಅಬಾಬೀಲ್ 1ಬಿ ಎಂಬ ವಿಮಾನವನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ಅದು ಘೋಷಿಸಿತು. ಇದು ಇಸ್ರೇಲ್‍ನ ರಕ್ಷಣಾ ಸಚಿವಾಲಯದ ಮೇಲೆ ಹಾರಿ ದೃಶ್ಯಗಳನ್ನು ಸೆರೆ ಹಿಡಿದಿರುವುದಾಗಿಯೂ ಹೇಳಿಕೊಂಡಿತಲ್ಲದೇ ಕೆಲವು ದೃಶ್ಯಗಳ ಪ್ರಸಾರವನ್ನೂ ಮಾಡಿತು. ಕ್ಯಾಮರಾ ಮತ್ತು ರಾಕೆಟ್ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಚಾಲಕ ರಹಿತ ವಿಮಾನವೊಂದನ್ನು ಅಶ್ಕಲೋನ್‍ನಲ್ಲಿ ತಾನು ಹೊಡೆದುರುಳಿಸಿರುವುದಾಗಿ ಆ ಬಳಿಕ ಇಸ್ರೇಲ್ ಹೇಳಿಕೊಂಡಿತ್ತು. ಗಾಝಾದಿಂದ ನೂರು ಕಿಲೋ ವಿೂಟರ್ ದೂರ ಇರುವ ಟೆಲ್‍ಅವೀವ್‍ಗೆ 2012ರಲ್ಲಿ 3 ರಾಕೆಟ್‍ಗಳನ್ನು ಹಾರಿಸಿದ್ದ ಹಮಾಸ್ ಈ ಬಾರಿ 130 ಕಿ.ವಿೂ. ದೂರದ ವಾಣಿಜ್ಯ ನಗರ ಹೈಫಕ್ಕೂ ರಾಕೆಟ್‍ಗಳನ್ನು ಹಾರಿಸಿತು. ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೂ ರಾಕೆಟ್ ಆಕ್ರಮಣದ ಬೆದರಿಕೆ ಉಂಟಾಯಿತಲ್ಲದೇ, ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. 2012ರಲ್ಲಿ ಸಾವಿಗೀಡಾದ ಖಸ್ಸಾಂ ಬ್ರಿಗೇಡ್‍ನ ಕಮಾಂಡರ್ ಅಹ್ಮದ್ ಜಅïಬರಿಯ ಹೆಸರಿನಲ್ಲಿ ರೂಪಿಸಲಾದ ಜೆ. 80 ಎಂಬ ರಾಕೆಟ್‍ಗಳನ್ನು ಟೆಲ್ ಅವೀವ್, ಹೈಫ ಮತ್ತು ಪರಮಾಣು ಸ್ಥಾವರ ಇರುವ ದಿಮೋನ್‍ಗೂ ಹಾರಿಸಲಾಯಿತು. ಈ ಮೊದಲಾಗಿದ್ದರೆ ಗಾಝಾದ ಸವಿೂಪವಿರುವ ಅಶ್ಕಲೋನ್, ಅಶ್‍ದೋದ್, ಸೆದ್‍ರೋತ್ ಮುಂತಾದ ನಗರಗಳಿಗಷ್ಟೇ ಹಮಾಸ್‍ನ ರಾಕೆಟ್‍ಗಳು ಹಾರಬಲ್ಲವಾಗಿದ್ದುವು. ನಿಜವಾಗಿ, ಇಸ್ರೇಲ್‍ನ ದಿಗ್ಬಂಧನ ಕಠಿಣವಾದಂತೆಲ್ಲ ಹಮಾಸ್‍ನ ಪ್ರತಿರೋಧ ಸಾಮರ್ಥ್ಯವೂ ವೃದ್ಧಿಸುತ್ತಿದೆ. ಇದು ಇಸ್ರೇಲ್‍ಗೂ ಗೊತ್ತಾಗಿದೆ. ಆದ್ದರಿಂದಲೇ, ಅದು ಭೂದಾಳಿಗೆ ಮುಂದಾಗಿದೆ. ಒಂದು ವೇಳೆ,
   ಅಮೇರಿಕದ ನ್ಯೂಯಾರ್ಕ್‍ನಲ್ಲೋ ಬ್ರಿಟನ್ನಿನ ಲಂಡನ್ನಿನಲ್ಲೋ ಅಥವಾ ಸೌದಿ ಅರೇಬಿಯಾದ ರಿಯಾದ್‍ನಲ್ಲೋ ಇಸ್ರೇಲ್‍ನ ಸ್ಥಾಪನೆಯಾಗಿರುತ್ತಿದ್ದರೆ ಅವುಗಳಿಗೂ ಫೆಲೆಸ್ತೀನ್‍ನ ನೋವು ಅರ್ಥವಾಗುತ್ತಿತ್ತು.

Tuesday, July 15, 2014

ರದ್ದಿಯಾಗುವ ಸುದ್ದಿಗಳ ಮಧ್ಯೆ ಕಳೆದುಹೋದ ಮಾಧ್ಯಮ ವಿಶ್ವಾಸಾರ್ಹತೆ

    “ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡು (AIMPLB) ಈ ದೇಶದಲ್ಲಿ ಪರ್ಯಾಯ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸಲು ಯತ್ನಿಸುತ್ತಿದ್ದು, ಅದರಿಂದಾಗಿ ಮುಸ್ಲಿಮ್ ಮಹಿಳೆಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಮಾತ್ರವಲ್ಲ, ಶರೀಅತ್‍ನಂತೆ ನ್ಯಾಯ ತೀರ್ಮಾನ ಮಾಡಲಿಕ್ಕಾಗಿ ಕಾಝಿ ಮತ್ತು ಸಹಾಯಕ ಕಾಝಿಗಳ ತರಬೇತಿಗೆ ಶಿಬಿರಗಳೂ ಏರ್ಪಾಡಾಗುತ್ತಿವೆ. ದಾರುಲ್ ಕಝಾವು (ಇತ್ಯರ್ಥ ಗೃಹ) ಶರೀಅತ್‍ನ ಪ್ರಕಾರ ಈಗಾಗಲೇ ತೀರ್ಮಾನಗಳನ್ನು ಮಾಡುತ್ತಿದೆ. ಆದ್ದರಿಂದ ದಾರುಲ್ ಕಝಾ ಮತ್ತು ಶರೀಅತ್ ಕೋರ್ಟ್‍ಗಳನ್ನು ನ್ಯಾಯಬಾಹಿರ (absolutely illegal) ಮತ್ತು ಸಂವಿಧಾನ ವಿರೋಧಿ (unconstitutional) ಎಂದು ಮಾನ್ಯ ನ್ಯಾಯಾಲಯವು ಘೋಷಿಸಬೇಕು ಮತ್ತು ಇವುಗಳ ಮೇಲೆ ನಿಷೇಧ ಹೇರಬೇಕು. ಇವನ್ನು ತೊಲಗಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆಯೇ ಇವು ಹೊರಡಿಸುವ ಫತ್ವಗಳನ್ನು ನಿಷೇಧಿಸಬೇಕು..” ಎಂದು ವಿಶ್ವಲೋಚನ್ ಮದನ್ ಎಂಬ ವಕೀಲರೋರ್ವರು 2005ರಲ್ಲಿ ಸುಪ್ರೀಮ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಚಂದ್ರಮೌಳಿ ಕೃಷ್ಣಪ್ರಸಾದ್ ಮತ್ತು ಪಿನಕಿ ಚಂದ್ರ ಘೋಷ್‍ರನ್ನೊಳಗೊಂಡ ದ್ವಿ ಸದಸ್ಯ ನ್ಯಾಯ ಪೀಠವು ಅರ್ಜಿಯನ್ನು ತಿರಸ್ಕರಿಸುತ್ತಾ (we dispose off the writ petition) ಕಳೆದ ವಾರ ತೀರ್ಪಿತ್ತಿದ್ದು ಹೀಗೆ:
    ‘ದಾರುಲ್ ಕಝಾಗಳು ಪರ್ಯಾಯ ನ್ಯಾಯಾಲಯಗಳಾಗಿ ಕಾರ್ಯಾಚರಿಸುತ್ತಿವೆ ಎಂದು ಅರ್ಜಿದಾರರು ಹೇಳಿರುವುದು ತಪ್ಪುಗ್ರಹಿಕೆ ಮತ್ತು ಅಪಾರ್ಥವಾಗಿದೆ. ದಾರುಲ್ ಕಝಾಗಳ ಅಸ್ತಿತ್ವವಾಗಲಿ ಅದು ಹೊರಡಿಸುವ ಫತ್ವಾಗಳಾಗಲಿ ಕಾನೂನುಬಾಹಿರವಲ್ಲ. ಅದನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದನ್ನು ಸಂಬಂಧ ಪಟ್ಟವರ ವಿವೇಚನೆಗೆ ಬಿಡಲಾಗಿದೆ..’
     ಇಷ್ಟು ಸ್ಪಷ್ಟವಾಗಿರುವ ತೀರ್ಪಿನ ಮೇಲೆ ಮಾಧ್ಯಮಗಳು ಹೇಗೆ ಸುದ್ದಿ ಹೆಣೆಯಬೇಕಿತ್ತು, ಹೇಗೆ ಶೀರ್ಷಿಕೆ ಕೊಡಬೇಕಿತ್ತು ಮತ್ತು ಯಾವ ವಿಷಯಕ್ಕೆ ಪ್ರಾಶಸ್ತ್ಯ ನೀಡಬೇಕಿತ್ತು? ಈ ತೀರ್ಪಿನ ಮರುದಿನ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ನಿರೀಕ್ಷಣಾ ಜಾವಿೂನು ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿತು. ‘ಕಾಶಪ್ಪನವರ್: ಜಾವಿೂನು ನಿರಾಕರಣೆ' ಎಂಬ ಶೀರ್ಷಿಕೆಯಲ್ಲಿ ಮರುದಿನ ಈ ಸುದ್ದಿಯನ್ನು ಪ್ರಕಟಿಸಿದ ಮಾಧ್ಯಮಗಳು ವಿಶ್ವ ಲೋಚನ್ ಮದನ್ ಅವರ ಅರ್ಜಿಯನ್ನು ಸುಪ್ರೀಮ್ ಕೋರ್ಟು ತಿರಸ್ಕರಿಸಿದ ಸುದ್ದಿಯನ್ನು ಹೇಗೆ ಪ್ರಕಟಿಸಬೇಕಿತ್ತು? ಯಾವ ಶೀರ್ಷಿಕೆಯನ್ನು ಕೊಡಬೇಕಿತ್ತು? 'ಶರಿಯತ್ ನಿಷೇಧ: ವಿಶ್ವಮೋಚನ್ ಮದನ್ ಬೇಡಿಕೆಗೆ ಸುಪ್ರೀಮ್ ಕೋರ್ಟ್ ನಕಾರ ಅಥವಾ ಬೇಡಿಕೆ ನಿರಾಕರಣೆ ಅಥವಾ ಅರ್ಜಿ ತಿರಸ್ಕ್ರತ.. ಎಂದಾಗಬೇಕಿತ್ತಲ್ಲವೇ? ಆದರೆ ಅವು ಕೊಟ್ಟ ಶೀರ್ಷಿಕೆಗಳು ಹೇಗಿದ್ದುವು?
ವಿಶ್ವಲೋಚನ್ ಮದನ್
    ‘ಶರಿಯಾಗೇ ಫತ್ವಾ' ಎಂದು ಕನ್ನಡ ಪ್ರಭ ಮುಖಪುಟದಲ್ಲೇ ಬರೆದರೆ, ‘ಶರಿಯಾ ಕೋರ್ಟು ಅಮಾನ್ಯ: ಸುಪ್ರೀಮ್ ಕೋರ್ಟ್' ಎಂದು ಉದಯವಾಣಿ ಪ್ರಕಟಿಸಿತು. Sharia court not legal, cant enforce Fatwas ಎಂದು ಹಿಂದುಸ್ತಾನ್ ಟೈಮ್ಸ್, Fatwas have no legal standing: supreme court ಎಂದು ಟೈಮ್ಸ್ ಆಫ್ ಇಂಡಿಯಾ, Fatwas not binding on anyone: SC ಎಂದು ಪಿಟಿಐ, Fatwas not legal, says SC ಎಂದು ದಿ ಹಿಂದೂ ಪತ್ರಿಕೆ ಶೀರ್ಷಿಕೆಗಳನ್ನು ಕೊಟ್ಟವು. ಟಿ.ವಿ. ಚಾನೆಲ್‍ಗಳ ಶೀರ್ಷಿಕೆಗಳಂತೂ ಭೀಕರವಾಗಿದ್ದುವು. ‘ಶರಿಯಾ ಕೋರ್ಟುಗಳ ಬಗ್ಗೆ ಸುಪ್ರೀಮ್ ಕೋರ್ಟ್‍ನ ತೀರ್ಪು: ಇದು ಧರ್ಮದ ಗುತ್ತಿಗೆದಾರರ ಮೇಲೆ ಪರಿಣಾಮ ಬೀರಬಹುದೇ' ಎಂಬ ಶೀರ್ಷಿಕೆಯಲ್ಲಿ CNN-IBN ಚಾನೆಲ್ ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಂಡರೆ, ‘ಶರೀಅತ್ ಕೋರ್ಟೋ ಕಾಂಗಾರು ಕೋರ್ಟೋ ಎಂಬ ಶೀರ್ಷಿಕೆಯಲ್ಲಿ NDTV  ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಫತ್ವಾಗಳನ್ನು ಬಲವಂತವಾಗಿ ಹೇರುವಂತಿಲ್ಲ' ಎಂಬ ಹೆಸರಲ್ಲಿ ಟೈಮ್ಸ್ ನೌ ಕಾರ್ಯಕ್ರಮವನ್ನು ಬಿತ್ತರಿಸಿತು.
    ಅಷ್ಟಕ್ಕೂ, ಶರಿಯಾ ಕೋರ್ಟುಗಳು ಮತ್ತು ಅವು ಹೊರಡಿಸುವ ಫತ್ವಾಗಳು ಕಾನೂನುಬದ್ಧವಾಗಿವೆ ಎಂದು ವಾದಿಸಿದವರು ಯಾರು? ವಿಶ್ವಲೋಚನ್ ಮದನ್ ಅವರ ಅರ್ಜಿಯ ವಿಚಾರಣೆಯ ವೇಳೆ ಈ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುವಂತೆ- ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್, ಭಾರತ ಸರಕಾರ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಸರಕಾರಗಳೊಂದಿಗೆ ಸುಪ್ರೀಮ್ ಕೋರ್ಟ್ ಕೇಳಿಕೊಂಡಿತ್ತು. ಆಗ, ‘ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ, ಬರೇ ಅಭಿಪ್ರಾಯವನ್ನು ಹೇಳಬಲ್ಲ ಆದರೆ ಜಾರಿ ಮಾಡುವ ಅಧಿಕಾರ ಇಲ್ಲದ ಮತ್ತು ಭಾರತೀಯ ನ್ಯಾಯಾಂಗಕ್ಕೆ ಪರ್ಯಾಯವಲ್ಲದ ಒಂದು ಅನೌಪಚಾರಿಕ ವ್ಯವಸ್ಥೆ' ಎಂದೇ ಅವೆಲ್ಲ ಹೇಳಿದ್ದುವು. ಇದನ್ನು ಕೋರ್ಟೂ ಒಪ್ಪಿಕೊಂಡಿತು. ಹೀಗಿರುತ್ತಾ ಮಾಧ್ಯಮಗಳು, 'ಶರಿಯಾ ಅಮಾನ್ಯ..' ಎಂದೆಲ್ಲಾ ಬರೆದುವೇಕೆ? ಅವು ಕಾನೂನುಬದ್ಧ ಎಂದು ಯಾರೂ ವಾದಿಸಿಯೇ ಇಲ್ಲದಿರುವಾಗ ಅಂಥದ್ದೊಂದು ಶೀರ್ಷಿಕೆಯ ಉದ್ದೇಶ ಏನು? ಶರೀಅತ್ ಕೋರ್ಟು ಅಥವಾ ಫತ್ವಾಗಳ ಬಗ್ಗೆ ಪತ್ರಕರ್ತರಲ್ಲಿರುವ ಅರಿವಿನ ಕೊರತೆ ಇದಕ್ಕೆ ಕಾರಣವೇ ಅಥವಾ ಮಾಧ್ಯಮ ಜಗತ್ತಿನಲ್ಲಿರುವ ಸಹಜ ಪೈಪೋಟಿಯೇ? ಸೆನ್ಸೇಷನಲಿಸಮ್ಮೇ? ಭಯೋತ್ಪಾದನಾ ಪ್ರಕರಣಗಳ ಸಂದರ್ಭಗಳಲ್ಲೂ ಮಾಧ್ಯಮ ಜಗತ್ತಿನಲ್ಲಿ ಇಂಥ ತಪ್ಪುಗಳು ಧಾರಾಳ ಆಗಿವೆ. ಮಾತ್ರವಲ್ಲ, ಅಂಥ ತಪ್ಪುಗಳು ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಲೂ ಇವೆ. ಯಾಕೆ ಹೀಗೆ? ಶರಿಯಾ ಕೋರ್ಟುಗಳು ಮತ್ತು ಫತ್ವಗಳ ಮೇಲೆ ನಿಷೇಧ ಹೇರಲು ಕೋರ್ಟ್ ನಿರಾಕರಿಸಿರುವುದನ್ನು ಮುಖ್ಯ ಸುದ್ದಿಯಾಗಿಸದೇ ಅವುಗಳಿಗೆ ಕಾನೂನು ಮಾನ್ಯತೆಯಿಲ್ಲ ಎಂಬ ಎಲ್ಲರಿಗೂ ಗೊತ್ತಿರುವ ಮತ್ತು ಒಪ್ಪಿರುವ ಸಾಮಾನ್ಯ ಸುದ್ದಿಗೆ ಒತ್ತು ಕೊಟ್ಟುದೇಕೆ? ಅದರ ಹಿಂದಿನ ಉದ್ದೇಶವೇನು? ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ 282 ಸ್ಥಾನಗಳಿಗೆ ಒತ್ತು ಕೊಡದೇ, ‘ಬಿಜೆಪಿ ಬರೇ 31% ಓಟು ಪಡೆಯಿತು' ಎಂಬ ಮುಖ್ಯ ಶೀರ್ಷಿಕೆಯಲ್ಲಿ ಒಟ್ಟು ಚುನಾವಣಾ ಫಲಿತಾಂಶವನ್ನು ಮಾಧ್ಯಮಗಳು ಪ್ರಕಟಿಸಿರುತ್ತಿದ್ದರೆ ಏನಾಗುತ್ತಿತ್ತು? ಮೋದಿ ವಿರೋಧಿ, ಬಿಜೆಪಿ ವಿರೋಧಿಯಾಗಿ ಅವು ಗುರುತಿಸುತ್ತಿರಲಿಲ್ಲವೇ? ಮಾಧ್ಯಮಗಳ ನಕಾರಾತ್ಮಕ ನಿಲುವಿಗೆ ಸರ್ವತ್ರ ಖಂಡನೆಗಳು ವ್ಯಕ್ತವಾಗುತ್ತಿರಲಿಲ್ಲವೇ?
   ಶರೀಅತ್ ಅಥವಾ ದಾರುಲ್ ಕಝಾಗಳೆಂದರೆ ನ್ಯಾಯಾಲಯಗಳೂ ಅಲ್ಲ, ಫತ್ವಾಗಳೆಂದರೆ ಕಾನೂನುಗಳೂ ಅಲ್ಲ. ಫತ್ವಾ ಎಂಬ ಹೆಸರಲ್ಲಿ ಮಾಧ್ಯಮಗಳಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುವ ಸುದ್ದಿಗಳು ಎಷ್ಟು ಹಾಸ್ಯಾಸ್ಪದವಾಗಿರುತ್ತವೆಂದರೆ, ಅದನ್ನು ಹೊರಡಿಸಿದವರು ಆರೋಗ್ಯಪೂರ್ಣವಾಗಿರುವರೇ ಎಂದೇ ಅನುಮಾನ ಮೂಡುತ್ತದೆ. ಆದ್ದರಿಂದಲೇ ಮಾಧ್ಯಮಗಳಲ್ಲಿ ಪ್ರಕಟ ವಾಗುವ ‘ಫತ್ವಗಳು' ಸಾರ್ವಜನಿಕವಾಗಿ ಹೆಚ್ಚು ತಮಾಷೆಗೇ ಒಳಗಾಗಿವೆ. ಮುಸ್ಲಿಮರು ಅದನ್ನು ಗಂಭೀರವಾಗಿ ಪರಿಗಣಿಸುತ್ತಲೂ ಇಲ್ಲ. ಇದಕ್ಕೆ ಇಮ್ರಾನಾ ಪ್ರಕರಣವೇ ಅತ್ಯುತ್ತಮ ಉದಾಹರಣೆ. ಫತ್ವಾಗಳನ್ನು ನಿಷೇಧಿಸಬೇಕೆಂಬ ತನ್ನ ಬೇಡಿಕೆಗೆ ಪುರಾವೆಯಾಗಿ ವಿಶ್ವಲೋಚನ್ ಮದನ್ ಅವರು ಕೋರ್ಟಿನ ಮುಂದೆ ಇಮ್ರಾನಾ ಪ್ರಕರಣವನ್ನು ಉಲ್ಲೇಖಿಸಿಯೂ ಇದ್ದರು. ಉತ್ತರ ಪ್ರದೇಶದ ಮುಝಫ್ಫರ್ ನಗರ್ ಜಿಲ್ಲೆಯ ಚರ್ತವಾಲ್ ಗ್ರಾಮದ ಇಮ್ರಾನಾ ಎಂಬ 5 ಮಕ್ಕಳ ತಾಯಿಯ ಮೇಲೆ ಜೂನ್ 6, 2005ರಂದು ಮಾವ ಅಲಿ ಮಹ್ಮೂದ್ ಅತ್ಯಾಚಾರ ಮಾಡಿದ. ಸ್ಥಳೀಯ ಹಿರಿಯರು ಸಭೆ ಸೇರಿದರು. ಅತ್ಯಾಚಾರದಿಂದಾಗಿ ಇಮ್ರಾನಾ ಮತ್ತು ಪತಿ ನೂರ್ ಇಲಾಹಿಯ ವೈವಾಹಿಕ ಸಂಬಂಧ ಅನೂರ್ಜಿತಗೊಂಡಿದೆ, ಆಕೆ ಇನ್ನು ಪತಿಯನ್ನು ಮಗನಂತೆ ಕಾಣಬೇಕು ಮತ್ತು ಮಾವನನ್ನು ಗಂಡನಾಗಿ ಸ್ವೀಕರಿಸಿ ಒಟ್ಟಿಗೇ ಬಾಳಬೇಕು. ಇಲಾಹಿ ಮತ್ತು ಮಕ್ಕಳನ್ನು ದೂರ ಮಾಡಬೇಕು.. ಎಂದು ಸಭೆ ಫತ್ವ ಹೊರಡಿಸಿರುವುದಾಗಿ ಮಾಧ್ಯಮಗಳು ಬರೆದವು. ಈ ಫತ್ವನ್ನು ದಾರುಲ್ ಉಲೂಮ್ ದೇವ್‍ಬಂದ್ ಮಾನ್ಯ ಮಾಡಿರುವುದಾಗಿಯೂ ಅವು ಹೇಳಿದುವು. ಆದರೆ ಕೇವಲ ಸಾಮಾನ್ಯ ಗೃಹಿಣಿಯಷ್ಟೇ ಆಗಿದ್ದ ಮತ್ತು ಕಾಲೇಜು ಮೆಟ್ಟಿಲನ್ನೂ ಹತ್ತಿಲ್ಲದ ಆಕೆ, ಆ ಫತ್ವವನ್ನು ತಿರಸ್ಕರಿಸಿದಳು. ಮಾವನ ವಿರುದ್ಧ ಕೋರ್ಟಿನಲ್ಲಿ ಸಾಕ್ಷ್ಯ  ನುಡಿದು ಆತನಿಗೆ ಅಕ್ಟೋಬರ್ 19, 2006ರಂದು ಹತ್ತು ವರ್ಷಗಳ ಶಿಕ್ಷೆ ಆಗುವಂತೆ ನೋಡಿಕೊಂಡಳು. ಈಗಲೂ ಪತಿ ಇಲಾಹಿಯೊಂದಿಗೇ ಆಕೆ ಬಾಳುತ್ತಿದ್ದಾಳೆ. ನಿಜವಾಗಿ, ಫತ್ವಾಗಳ ಸಾಮರ್ಥ್ಯ ಇಷ್ಟೇ. ಅದನ್ನು ನೀಡುವವರ ಸ್ಥಾನ-ಮಾನ ಏನು, ಅವರಲ್ಲಿ ತಿಳುವಳಿಕೆ ಎಷ್ಟಿದೆ, ನಿರ್ದಿಷ್ಟ ವಿಷಯಗಳ ಮೇಲೆ ‘ಫತ್ವಾ' ಹೊರಡಿಸುವಷ್ಟು ಅವರು ಪ್ರಬುದ್ಧರಾಗಿರುವರೇ.. ಎಂದು ಮುಂತಾಗಿ ಮಾಧ್ಯಮಗಳು ಚರ್ಚಿಸುವುದಿಲ್ಲ. ಹೇಳಿದ್ದು ಮುಲ್ಲಾ ಎಂದಾದರೆ ಅದು ಫತ್ವಾ ಆಗುತ್ತದೆ ಮತ್ತು ಇಡೀ ಮುಸ್ಲಿಮ್ ಸಮಾಜ ಅದನ್ನು ತಲೆಬಾಗಿ ಅನುಸರಿಸಲೇ ಬೇಕಾಗುತ್ತದೆ ಎಂಬ ಹುಸಿ ಸನ್ನಿವೇಶವನ್ನಷ್ಟೇ ಅವು  ನಿರ್ಮಾಣ ಮಾಡುತ್ತಿವೆ.
   ನಿಜವಾಗಿ, ಶರೀಅತ್ ಕೋರ್ಟ್‍ಗಳೆಂಬುದು ಕುರ್‍ಆನ್ ಮತ್ತು ಪ್ರವಾದಿಯವರ ಬದುಕಿನ ಆಧಾರದಲ್ಲಿ ಹಾಗೂ ವಿವಿಧ ವಿದ್ವಾಂಸರುಗಳ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಜನರ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಕೇಂದ್ರಗಳಷ್ಟೇ ಆಗಿವೆ. ಅವೇ ಅಂತಿಮ ಎಂದಲ್ಲ. ಅಲ್ಲಿ ತಪ್ಪು-ಒಪ್ಪು ಎರಡೂ ಇರಬಹುದು. ಅವು ಪರಿಹಾರವನ್ನು ಸೂಚಿಸಲು ಅಳವಡಿಸಿಕೊಂಡ ವಿಧಾನ, ಆಧಾರ ಪ್ರಮಾಣಗಳ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಪ್ರಶ್ನಿಸಲೂ ಬಹುದು. ಆದ್ದರಿಂದಲೇ, ದಾರುಲ್ ಉಲೂಮ್ ದೇವ್‍ಬಂದ್‍ನ ಎಲ್ಲ ಫತ್ವಾಗಳ ಕೊನೆಯಲ್ಲೂ ‘ಅಲ್ಲಾಹನೇ ಚೆನ್ನಾಗಿ ಬಲ್ಲ' ಎಂಬ ವಾಕ್ಯವೊಂದು ಕಡ್ಡಾಯವಾಗಿ ಇರುತ್ತದೆ. ಅಷ್ಟಕ್ಕೂ, ಫತ್ವಾಗಳ ಹೆಸರಲ್ಲಿ ಪ್ರಕಟವಾಗುವ ಹೆಚ್ಚಿನ ಸುದ್ದಿಗಳು ಕೆಲವು ಮುಲ್ಲಾಗಳ ವೈಯಕ್ತಿಕ ಅಭಿಪ್ರಾಯವಷ್ಟೇ ಆಗಿರುತ್ತದೆ. ಅಲ್ಲದೇ ಫತ್ವಾಗಳನ್ನು ಕೊಡುವುದಕ್ಕಾಗಿ ಅವರು ವ್ಯವಸ್ಥಿತ ತರಬೇತಿಯನ್ನೂ ಪಡೆದಿರುವುದಿಲ್ಲ. ಯಾರಾದರೂ ಏನನ್ನಾದರೂ ಕೇಳಿದಾಗ ತಕ್ಷಣ ಏನು ಅನಿಸುತ್ತದೋ ಅದನ್ನೇ ಹೇಳಿ ಬಿಡುವ ಸಂದರ್ಭಗಳೂ ಧಾರಾಳ ಇವೆ. ಇಮ್ರಾನಾ ಪ್ರಕರಣಕ್ಕೆ ಸಂಬಂಧಿಸಿ ದಾರುಲ್ ಉಲೂಮ್ ದೇವ್‍ಬಂದ್‍ನ ವಿದ್ವಾಂಸರಲ್ಲಿ ಓರ್ವ ಪತ್ರಕರ್ತ ದಿಢೀರ್ ಪ್ರಶ್ನೆ ಕೇಳಿದ್ದು ಮತ್ತು ಅವರು ಅಷ್ಟೇ ದಿಢೀರ್ ಆಗಿ ಉತ್ತರಿಸಿದ್ದೇ  ಆ ಬಳಿಕ ಫತ್ವಾದ ಹೆಸರಲ್ಲಿ ದೇಶಾದ್ಯಂತ ಸುದ್ದಿಯಾಯಿತು. ಫತ್ವಾಗಳ ಸಂದರ್ಭದಲ್ಲಿ ಪಾಲಿಸಲೇ ಬೇಕಾದ ಸಂಯಮ, ನಿಯಮ, ಸಮಾಲೋಚನೆಗಳು ಹೆಚ್ಚಿನ ಬಾರಿ ನಡೆದೇ ಇರುವುದಿಲ್ಲ. ಫತ್ವಾ ನೀಡಲು ಯೋಗ್ಯರಾದ ವಿದ್ವಾಂಸರನ್ನು ಆಯ್ಕೆ ಮಾಡಿ, ಅವರಿಗೆ ವ್ಯವಸ್ಥಿತವಾಗಿ ತರಬೇತಿ ಕೊಡುವ ವ್ಯವಸ್ಥೆಗಳೂ ಜಾರಿಯಲ್ಲಿಲ್ಲ. ಬಹುಶಃ ಇಂಥ ಹಲವಾರು ಕೊರತೆಗಳು ಫತ್ವಾಗಳ ಔಚಿತ್ಯವನ್ನೇ ಕೆಲವೊಮ್ಮೆ ಪ್ರಶ್ನೆಗೀಡು ಮಾಡುತ್ತಿವೆ. ಅದನ್ನು ನೀಡುವವರ ಯೋಗ್ಯತೆಯನ್ನು ಮತ್ತು ಅವರ ಧರ್ಮವನ್ನು ತೇಜೋವಧೆಗೀಡು ಮಾಡಲು ಕಾರಣವಾಗುತ್ತಿವೆ. ಸೆನ್ಸೇಶನಲ್ ಸುದ್ದಿಗಾಗಿ ಕಾಯುತ್ತಿರುವ ಮಾಧ್ಯಮಗಳು ಇಂಥ ಕೊರತೆಗಳ ಭರಪೂರ ಲಾಭವನ್ನು ಪಡಕೊಳ್ಳುತ್ತಲೂ ಇವೆ.
   2007 ಎಪ್ರಿಲ್‍ನಲ್ಲಿ ಕೇವಲ ಫತ್ವಾಗಳಿಗಾಗಿಯೇ www.darulifta-deoband.org (ದಾರುಲ್ ಇಫ್ತಾ) ಎಂಬ ವೆಬ್‍ಸೈಟನ್ನು ದಾರುಲ್ ಉಲೂಮ್ ದೇವ್‍ಬಂದ್ ಆರಂಭಿಸಿತು. ಇದಾಗಿ ಕೇವಲ 3 ವರ್ಷಗಳಲ್ಲಿ 11,395 ಫತ್ವಾಗಳನ್ನೂ ಪ್ರಕಟಿಸಿತು. ಅಂದರೆ ತಿಂಗಳಿಗೆ 308 ಫತ್ವಾಗಳು ಅಥವಾ ದಿನಕ್ಕೆ 10 ಫತ್ವಾಗಳು. ದಾರುಲ್ ಇಫ್ತಾಗೆ ಪ್ರತಿದಿನ 30ರಿಂದ 40 ಪ್ರಶ್ನೆಗಳು ಬರುತ್ತಿದ್ದು, ಅದು ವಾರದಲ್ಲಿ ನಾಲ್ಕು ದಿನ ಕಾರ್ಯಾಚರಿಸುತ್ತದೆಯಂತೆ. ‘ಮಗ್ರಿಬ್ ನಮಾಝ್‍ನ ಬಳಿಕ ತಲೆ ಬಾಚಬಹುದೇ ಎಂಬಲ್ಲಿಂದ ಹಿಡಿದು ear bud ನಿಂದ ಕಿವಿ ಶುಚಿಗೊಳಿಸಬಹುದೇ ಎಂಬಲ್ಲಿ ವರೆಗೆ.. ವಿವಿಧ ರೀತಿಯ ಪ್ರಶ್ನೆಗಳೂ ಉತ್ತರಗಳೂ ವೆಬ್‍ಸೈಟ್‍ನಲ್ಲಿವೆ. ಹೆಚ್ಚಿನ ಉತ್ತರಗಳು ನಾಲ್ಕೈದು ವಾಕ್ಯಗಳಿಗಿಂತ ಹೆಚ್ಚಿರುವುದೂ ಇಲ್ಲ. ವಿಶೇಷ ಏನೆಂದರೆ, ಈ 11 ಸಾವಿರದಷ್ಟು ಫತ್ವಾಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿರುವ ಫತ್ವಾಗಳು 2% ಮಾತ್ರ. ಅದರಲ್ಲೂ ಕನಸಿನ ಬಗ್ಗೆ, ಹೆಸರಿನ ಬಗ್ಗೆ, ವೈಯಕ್ತಿಕ ವಿಷಯಗಳ ಕುರಿತೇ ಹೆಚ್ಚು ಪ್ರಶ್ನೆಗಳಿವೆ. ಇಷ್ಟಿದ್ದೂ, ಫತ್ವಾಗಳಿಂದ ಮಹಿಳೆಯರೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿಶ್ವಲೋಚನ್ ಮದನ್ ಅವರು ಸುಪ್ರೀಮ್ ಕೋರ್ಟಿನ ಮುಂದೆ ಹೇಳಿಕೊಂಡಿದ್ದರು. ಬಹುಶಃ ಕೋರ್ಟು ಅವರ ವಾದವನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಈ ಅಂಕಿ ಅಂಶಗಳೇ ಕಾರಣ ಆಗಿರಬಹುದು. ಒಂದು ವೇಳೆ, ಫತ್ವಾಗಳ ಕುರಿತಂತೆ ಸಕಾರಾತ್ಮಕ ಸುದ್ದಿಯನ್ನು ಪ್ರಕಟಿಸಬೇಕೆಂದು ಮಾಧ್ಯಮಗಳು ಬಯಸುತ್ತದಾದರೆ ಅದಕ್ಕೆ ಪೂರಕವಾದ ಫತ್ವಾಗಳೂ ದಾರುಲ್ ಇಫ್ತಾದಲ್ಲಿ ಧಾರಾಳ ಇವೆ. ‘ಶಿಕ್ಷಣಕ್ಕಾಗಿ ಬಡ್ಡಿಯಾಧಾರಿತ ಸಾಲ ಪಡಕೊಳ್ಳಬಹುದು’, ‘ಪತ್ನಿಯನ್ನು ದೈಹಿಕವಾಗಿ ದಂಡಿಸುವುದು ತಪ್ಪು’, ‘ಸಹ ಶಿಕ್ಷಣವಾದರೂ ಸರಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇಬೇಕು’, ‘ಬ್ಯಾಂಕಿನ ಬಡ್ಡಿಯ ಬಗ್ಗೆ ಮೃದು ನಿಲುವು’, ‘ತಾಯಿಯ ಜೀವ ಉಳಿಸುವುದಕ್ಕಾಗಿ ಗರ್ಭಪಾತಕ್ಕೆ ಅನುಮತಿ..’ ಸಹಿತ ಅನೇಕ ಫತ್ವಾಗಳು ದಾರುಲ್ ಇಫ್ತಾನಲ್ಲಿ ಇವೆ. ಆದರೆ ಇವಾವುವೂ ಮಾಧ್ಯಮಗಳಲ್ಲಿ ಸುದ್ದಿ ಯಾಗುತ್ತಿಲ್ಲ. ‘ಪ್ರಗತಿಪರ ಫತ್ವಾಗಳು’ ಎಂಬ ಹೆಸರಲ್ಲಿ ಇವು ಶೀರ್ಷಿಕೆಗಳನ್ನೂ ಪಡಕೊಳ್ಳುತ್ತಿಲ್ಲ. ಮಾಧ್ಯಮಗಳು ರೋಚಕತೆಯನ್ನಷ್ಟೇ ಬಯಸುತ್ತವೆ. ಸುದ್ದಿ ಸಕಾರಾತ್ಮಕವಾಗಿದ್ದರೂ ನಕಾರಾತ್ಮಕ ಶೀರ್ಷಿಕೆ ಕೊಟ್ಟು ಆಟ ಆಡುತ್ತವೆ. ಅದರಿಂದಾಗಿ ರವಾನೆಯಾಗಬಹುದಾದ ಸಂದೇಶಗಳ ಬಗ್ಗೆ ಅವು ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೆಳಗ್ಗಿನ ಸುದ್ದಿ ಸಂಜೆಯಾಗುವಾಗ ರದ್ದಿಯಾಗುತ್ತದೆ ಎಂದೇ ಅವು ಬಲವಾಗಿ ನಂಬಿವೆ. ಆದರೆ ಕೆಲವೊಮ್ಮೆ ಸುದ್ದಿಗಳಲ್ಲ ಮಾಧ್ಯಮಗಳು ಮತ್ತು ಅವುಗಳ ವಿಶ್ವಾಸಾರ್ಹತೆಗಳೇ ರದ್ದಿಯಾಗಬಲ್ಲವು ಎಂಬುದಕ್ಕೆ ಕಳೆದ ವಾರದ ತೀರ್ಪೇ ಅತ್ಯುತ್ತಮ ಪುರಾವೆಯಾಗಿದೆ. ಇಷ್ಟಿದ್ದೂ,
      ''ಇಸ್ಲಾಮೀ ಕೋರ್ಟುಗಳ ಮೇಲಿನ ನಿಷೇಧದ ಬೇಡಿಕೆಯನ್ನು ತಳ್ಳಿಹಾಕಿದ ಭಾರತ (India rejects ban on Islamic courts)'' ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿ ನ್ಯಾಯ ನಿಷ್ಠೆಗೆ ಬಲವಾಗಿ ಅಂಟಿಕೊಂಡ ಆಲ್ ಜಸೀರ (Al Jazeera)   ಚಾನೆಲ್ ಅನ್ನು  ಮೆಚ್ಚಿಕೊಳ್ಳುತ್ತಲೇ, ಮಾಧ್ಯಮಗಳ ನಕಾರಾತ್ಮಕ ಮುಖವನ್ನು ವಿಶ್ಲೇಷಣೆಗೆ ಒಡ್ಡಲು ಅವಕಾಶವನ್ನು ಒದಗಿಸಿಕೊಟ್ಟ ವಿಶ್ವಲೋಚನ್ ಮದನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ.




Tuesday, July 8, 2014

ಅವರು ಬಿಡಿಸುವ ಚಿತ್ರದಲ್ಲಿ ‘ನಾವು’ ಹೇಗಿರಬಹುದು?

    ತನಿಖಾ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ ಬುಕಾರೆಸ್ಟ್ ನ ಪೌಲ್ ರಾಡೊ, ಕ್ಯಾಥರಿನ್ ಜೋನ್, ಈಜಿಪ್ಟ್ ನ ಮಾಜಿ ಅಧ್ಯಕ್ಷ ಮುಬಾರಕ್‍ರ ಪತ್ನಿ ಸುಝಾನ್ನೆ, ರುಮೇನಿಯಾದ ಇಮಾನ, ಯೂನಿಸೆಫ್‍ನ ನಿಕೊಲಸ್ ಅಲಿಪುಯಿ... ಮುಂತಾದ 50 ಪ್ರಸಿದ್ಧ ವ್ಯಕ್ತಿಗಳ ಸಂದರ್ಶನವನ್ನು ಒಳಗೊಂಡ ‘Not My Life' ಎಂಬ ಡಾಕ್ಯುಮೆಂಟರಿಯೊಂದು ಕಳೆದವಾರ ದೂರದರ್ಶನದಲ್ಲಿ ಪ್ರಸಾರವಾಯಿತು. ಅದರಲ್ಲಿ ಶೈಲಾ ವೈಟ್ ಅನ್ನುವ ಅಮೇರಿಕದ ಕಪ್ಪು ಮಹಿಳೆ ಮಾತಾಡಿದಳು. ಮಾತಾಡುತ್ತಾ ಕಣ್ಣೀರಿಳಿಸಿದಳು. ಆಂಜಿ ಅನ್ನುವ ಬಿಳಿ ಯುವತಿ ತನ್ನ ಬದುಕನ್ನು ತೆರೆದಿಟ್ಟಳು. ಇನ್ನೂ ನಾಪತ್ತೆ ಆಗಿರುವ ತನ್ನ ಗೆಳತಿಯನ್ನು ಸ್ಮರಿಸಿ ಕಣ್ಣೀರಾದಳು. ಉಗಾಂಡದ ಗ್ರೇಸ್‍ಳದ್ದು ಇನ್ನೊಂದು ಕತೆ. ಉಗಾಂಡ ದೇಶದ ‘ಲಾರ್ಡ್ಸ್  ರೆಸಿಸ್ಟೆನ್ಸ್ ಆರ್ಮಿ'ಯು ಸೈಂಟ್ ಮೇರೀಸ್ ಶಾಲೆಯಿಂದ ಈಕೆಯನ್ನು ಮತ್ತು ಗೆಳತಿ ಮರಿಯಂಳನ್ನು ಅಪಹರಿಸಿತ್ತಲ್ಲದೇ ಬಾಲ ಯೋಧೆಯನ್ನಾಗಿ ನಿಯುಕ್ತಗೊಳಿಸಿತ್ತು. 7 ತಿಂಗಳ ಬಳಿಕ ಈಕೆ ತಪ್ಪಿಸಿಕೊಂಡರೂ ಮರಿಯಂಳಿಗೆ ಈವರೆಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಗ್ರೇಸ್‍ಗೆ ಮದುವೆಯಾಗಿ ಈಗ ಮಕ್ಕಳಾಗಿವೆ. ಮಕ್ಕಳ ಶಿಕ್ಷಣ, ಅವರ ಸಂರಕ್ಷಣೆಗಾಗಿ ಆಕೆ ಕೆಲಸ ಮಾಡುತ್ತಿದ್ದಾರೆ. ‘ಗರ್ಲ್ ಸೋಲ್ಜರ್ಸ್: ಎ ಸ್ಟೋರಿ ಆಫ್ ಹೋಪ್ ಫಾರ್ ನಾರ್ದರ್ನ್ ಉಗಾಂಡಾಸ್ ಚಿಲ್ಡ್ರನ್’ ಎಂಬ ಕೃತಿಯನ್ನು ಆಕೆ ಬರೆದಿದ್ದಾರೆ. ಆಕೆ ತನ್ನ ಬದುಕನ್ನು ಬಿಚ್ಚಿಡುತ್ತಾ ಹೋದಂತೆ ವೀಕ್ಷಕರ ಹೃದಯ ಚಡಪಡಿಸುತ್ತಾ ಹೋಗುತ್ತದೆ. ಮಕ್ಕಳ ಜಗತ್ತಿನ ಯಾತನೆಗಳು ಮತ್ತು ಬರ್ಬರತೆಗಳು ಎಷ್ಟು ನಿಶ್ಶಬ್ದವಾಗಿವೆ ಎಂಬ ಅಚ್ಚರಿಯ ಜೊತೆಗೇ ನಮ್ಮ ಬಗ್ಗೆ ಅಸಹ್ಯವೂ ಆಗುತ್ತದೆ. ಮಕ್ಕಳ ಜಗತ್ತನ್ನು ನಾವೆಷ್ಟು ಅರ್ಥ ಮಾಡಿಕೊಂಡಿದ್ದೇವೆ, ಅವರ ಮೇಲಿನ ದೌರ್ಜನ್ಯಗಳಿಗೆ ನಮ್ಮ ಪೆನ್ನು, ಕ್ಯಾಮರಾ, ಮೈಕು, ವಿಧಾನಸಭೆ, ಲೋಕಸಭೆ, ನ್ಯಾಯಾಲಯಗಳು.. ಎಷ್ಟು ಸ್ಪಂದಿಸಿವೆ, ವಿಜಯಾನಂದ ಕಾಶಪ್ಪನವರ್ ಅವರಿಗೆ, ಶಿರ್ಡಿ ಬಾಬಾರನ್ನು ಎತ್ತಿಕೊಂಡು ವಿವಾದ ಹುಟ್ಟುಹಾಕಿದ ಸ್ವಾವಿೂಜಿಯವರಿಗೆ, ಬ್ರೆಜಿಲ್‍ನ ನೈಮಾರ್, ಅರ್ಜೆಂಟೀನಾದ ಮೆಸ್ಸಿ, ಕೊಲಂಬಿಯಾದ ರಾಡ್ರಿಗಸ್‍ಗೆ ಸಿಕ್ಕ ಮತ್ತು ಸಿಗುತ್ತಿರುವ ಪ್ರಚಾರದ ಎಷ್ಟಂಶ ಮಕ್ಕಳಿಗೆ ಸಿಗುತ್ತಿವೆ? ವರ್ಷದ 365 ದಿನಗಳಲ್ಲಿ ನಾವು ಮಕ್ಕಳ ಮೇಲಿನ ಗಂಭೀರ ಚರ್ಚೆಗೆ ಎಷ್ಟು ದಿನಗಳನ್ನು ವಿೂಸಲಿಡುತ್ತೇವೆ? ಹಿರಿಯರ ಕಡೆಗೆ ತಿರುಗಿಸಿಟ್ಟಿರುವ ಕ್ಯಾಮರಾ ಮತ್ತು ಮೈಕ್‍ಗಳನ್ನು ಮಾಧ್ಯಮ ಮಿತ್ರರು ಮಕ್ಕಳ ಕಡೆಗೆ ತಿರುಗಿಸಬೇಕಾದರೆ ಒಂದೋ ಅವರು ಕೊಳವೆ ಬಾವಿಗೆ ಬೀಳಬೇಕು ಅಥವಾ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆಯಬೇಕು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆಯಲ್ಲ, ಯಾಕೆ? ಹಾಗಂತ, ಸಮಸ್ಯೆ ಕೊಳವೆ ಬಾವಿಯೊಂದರದ್ದೇ ಅಲ್ಲವಲ್ಲ. ಅದರಾಚೆಗೆ ಮಕ್ಕಳ ಜಗತ್ತಿನಲ್ಲಿ ನೂರಾರು ಸಮಸ್ಯೆಗಳಿವೆ. ಕಾಶಪ್ಪರನ್ನೋ ಸ್ವಾವಿೂಜಿಯನ್ನೋ ಒಳಪುಟಕ್ಕೆ ತಳ್ಳಿಬಿಡಬೇಕಾದಷ್ಟು ಭೀಕರ ಕ್ರೌರ್ಯಗಳ ಕತೆ ಮಕ್ಕಳ ಜಗತ್ತಿನಲ್ಲಿ ಇವೆ ಎಂಬುದೂ ನಿಜವಲ್ಲವೇ? ಪಟ್ಟಣಗಳಲ್ಲಿ ಭಿಕ್ಷೆ ಬೇಡುವ ಒಂದೊಂದು ಮಗುವೂ ಒಂದೊಂದು ಧಾರಾವಾಹಿಯಂತೆ. ಚಿಂದಿ ಆಯಲು ಪ್ಲಾಸ್ಟಿಕ್ ಚೀಲಗಳನ್ನು ಹಿಡಿದು ಓಡುವ ಪ್ರತಿ ಮಕ್ಕಳಲ್ಲಿ ಹತ್ತಾರು ಎಪಿಸೋಡ್‍ಗಳಿಗೆ ಸಾಕಾಗುವಷ್ಟು ಕತೆಗಳಿವೆ. ಓದಿನಲ್ಲಿ ನಿರಾಸಕ್ತಿ ತೋರುವ ಹೆಣ್ಣು ಮಗುವಿನಲ್ಲಿ ಪುರುಷ ಜಗತ್ತಿನ ಅಸಹ್ಯಕರ ಅನುಭವಗಳಿರಬಹುದು. ಭಯ್ಯಾ ಮತ್ತು ಅಂಕಲ್‍ಗಳನ್ನು ಭೀತಿಯಿಂದಲೇ ಮಾತಾಡಿಸುವ ಮಕ್ಕಳು ಅಸಂಖ್ಯ ಇದ್ದಾರೆ. ಹೊಟೇಲು, ಕಲ್ಲಿನ ಕೋರೆ, ಇಟ್ಟಿಗೆ ಕಾರ್ಖಾನೆ, ವಿೂನುಗಾರಿಕೆ, ವೇಶ್ಯಾವಾಟಿಕೆಗಳಲ್ಲಿ ಕಂಡುಬರುವ ಬಾಲ/ಲೆಯರ ಎದೆಗೂಡಿನಲ್ಲಿ ಮನ ಮಿಡಿಯುವ ಕತೆಗಳಿವೆ. ಆದರೂ ಇವುಗಳನ್ನೆಲ್ಲಾ ಹುಡುಕಿ ಸಮಾಜದ ಮುಂದಿಡುವ ಪ್ರಯತ್ನಗಳು ಗಂಭೀರವಾಗಿ ನಡೆದಿರುವುದು ತೀರಾ ಕಡಿಮೆ. ಬಾಲ ಕಾರ್ಮಿಕರ ದಿನದಂದು ಇಟ್ಟಿಗೆ ಹೊರುವ ಮಗುವಿನ ಪೋಟೋವನ್ನು ಫೇಸ್‍ಬುಕ್‍ನಲ್ಲಿ ತುಂಬಿದರೆ ಇಪ್ಪತ್ತು ಲೈಕ್‍ಗಳು ಮತ್ತು ಹತ್ತಾರು ಕಮೆಂಟ್‍ಗಳು ಬರುತ್ತವೆ. ಅದರಾಚೆಗೆ ಮಗು ಮುಖ್ಯವಾಗುವುದೇ ಇಲ್ಲ. ಆದ್ದರಿಂದಲೇ, Human traffickers are earning billions of Dollars on the backs and in the beds of our children (ನಮ್ಮ ಮಕ್ಕಳ ‘ಬೆನ್ನು’ ಮತ್ತು ‘ಹಾಸಿಗೆ’ಯಿಂದ ಮಾನವ ಕಳ್ಳಸಾಗಾಣಿಕೆದಾರರು ಬಿಲಿಯಾಂತರ ಡಾಲರ್ ಸಂಪಾದಿಸುತ್ತಿದ್ದಾರೆ) ಅನ್ನುವ Not My Life ನ ನಿರ್ದೇಶಕ ರಾಬರ್ಟ್ ಬೆಲ್‍ಹೇಮರ್ರ  ಮಾತು ಮುಖ್ಯವಾಗುತ್ತದೆ. ಆದ್ದರಿಂದಲೇ, ಬಲವಂತದಿಂದ ವೇಶ್ಯಾಗೃಹಕ್ಕೆ ತಳ್ಳಲ್ಪಟ್ಟ ಆಂಜಿ, ಮೆಲಿಸಾ, ಶೈಲಾರೆಲ್ಲ ಮತ್ತೆ ಮತ್ತೆ ಕಾಡುತ್ತಾರೆ. 83 ನಿಮಿಷಗಳ ಈ ಡಾಕ್ಯುಮೆಂಟರಿಯ ಉದ್ದಕ್ಕೂ ಹೃದಯವನ್ನು ಆರ್ದ್ರಗೊಳಿಸುವ ಸನ್ನಿವೇಶಗಳಿವೆ. ಆಂಜಿ ಹೇಳುತ್ತಾಳೆ, ಆಕೆ ಪ್ರತಿದಿನ 40 ವಿಟಪುರುಷರನ್ನು ತೃಪ್ತಿಪಡಿಸಬೇಕಿತ್ತಂತೆ. ಸೆಕ್ಸ್ ನ ವಿವಿಧ ಪ್ರಕಾರಗಳಿಗೆ ತಕ್ಕಂತೆ 50, 60, 70 ಡಾಲರ್‍ಗಳನ್ನು ಆಕೆಗೆ ನಿಗದಿ ಮಾಡಲಾಗುತ್ತಿತ್ತಂತೆ. ತಗಾದೆ ತೆಗೆದರೆ ಥಳಿತ, ಹಿಂಸೆ. ಒಮ್ಮೆ ಓರ್ವ ಡ್ರೈವರ್‍ನಿಂದ ಆಕೆ ದುಡ್ಡು ಕದ್ದಳು. ಕದಿಯುವ ಭರದಲ್ಲಿ ಆತನ ಜೇಬಿನಿಂದ ಒಂದೆರಡು ಪೋಟೋ ಗಳೂ ಸಿಕ್ಕವು. ಅದು ಆತನ ಮೊಮ್ಮಕ್ಕಳದು. ಆ ಬಳಿಕ ಆಕೆ ಈ ವಿಷಯವನ್ನು ಮೆಲಿಸಾಳೊಂದಿಗೆ ಹಂಚಿಕೊಂಡಾಗ ಆಕೆ ಹೇಳಿದಳಂತೆ, ಆತ ನಮಗೆ ಅಜ್ಜ ಆಗಬಹುದಲ್ವೇ.
   ಆಫ್ರಿಕಾದ ವರ್ಣಭೇದ ನೀತಿಯ ಸುತ್ತ ಬ್ಯಾರಿ ನ್ಯೂಡ್ ಬರೆದಿರುವ ಕತೆಯನ್ನಾಧರಿಸಿ ಕ್ರೈ ಆಫ್  ರೀಸನ್; ಏಡ್ಸ್ ಪೀಡಿತ ರನ್ನು ಎದುರಿಟ್ಟುಕೊಂಡು ‘ಎ ಕ್ಲೋಸರ್ ವಾಕ್' ಹಾಗೂ ಇರಾಕ್ , ಅಫಘಾನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಮೇರಿಕನ್ ಯೋಧರ ಮಾನಸಿಕ ಸ್ಥಿತಿಯನ್ನಾಧರಿಸಿ ಚಿತ್ರ ತೆಗೆಯಲು ಮುಂದಾಗಿರುವ ರಾಬರ್ಟ್ ಬೆಲ್‍ಹೇಮರ್‍ರು; Not My Life ಅನ್ನು 13 ದೇಶಗಳಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಬೇನಿಯಾ, ಬ್ರೆಝಿಲ್, ಕಾಂಬೋಡಿಯಾ, ಭಾರತ, ಘಾನಾ, ಗ್ವಾಟಮಾಲ, ಇಟಲಿ, ಅಮೇರಿಕ, ನೇಪಾಲ, ರುಮಾನಿಯಾ ಮುಂತಾದ ದೇಶಗಳ ಮಕ್ಕಳು ಡಾಕ್ಯುಮೆಂಟರಿಯ ಉದ್ದಕ್ಕೂ ಮನಸ್ಸಿಗೆ ಚುಚ್ಚುತ್ತಾರೆ. ಅಮೇರಿಕದ ಶೈಲಾವೈಟ್  ಶ್ರೀಮಂತ ಮನೆತನದ ಹುಡುಗಿ. ಮನೆಯಿಂದ ತಪ್ಪಿಸಿಕೊಂಡ ಆಕೆ ತಲುಪಿದ್ದು ವೇಶ್ಯಾಗೃಹಕ್ಕೆ. ಆಕೆಯ ಕತೆಯನ್ನು ಕೇಳಿ ಪ್ರಭಾವಿತಗೊಂಡು ‘ಕ್ಲಿಂಟನ್ ಗ್ಲೋಬಲ್ ಇನಿಶಿಯೇಟಿವ್’ ಕಾರ್ಯಕ್ರಮದಲ್ಲಿ ಅಮೇರಿಕದ ಅಧ್ಯಕ್ಷ  ಬರಾಕ್ ಒಬಾಮ ಆಕೆಯನ್ನು ಪ್ರಸ್ತಾಪಿಸಿದ್ದರು. ಘಾನಾದಲ್ಲಿ ಸುಮಾರು 10 ಸಾವಿರದಷ್ಟು ಮಕ್ಕಳು ವಿೂನುಗಾರಿಕೆಯಲ್ಲಿ ತೊಡಗಿದ್ದಾರೆ. ಪ್ರತಿದಿನ 14 ಗಂಟೆಗಳಷ್ಟು ಕಾಲ ದುಡಿತ. ತೀರಾ ಬಡತನದಿಂದಾಗಿ ಹೆತ್ತವರು ಮಕ್ಕಳನ್ನು ಮಧ್ಯವರ್ತಿಗಳ ಕೈಗೊಪ್ಪಿಸುತ್ತಾರೆ. ತಮ್ಮ ಮಕ್ಕಳು ಇತರ ಕಡೆ ಸುಖವಾಗಿರಲೆಂದು ಆಸೆ ಪಡುವ ಅವರಿಗೆ ನವಿರಾದ ಸುಳ್ಳುಗಳ ಮೂಲಕ ಭರವಸೆ ತುಂಬಲಾಗುತ್ತದೆ. ಒಮ್ಮೆ ಮಕ್ಕಳು ತಮ್ಮ ಮನೆಯವರಿಂದ ಪ್ರತ್ಯೇಕಗೊಂಡರೆಂದರೆ ಆ ಬಳಿಕ ಅವರ ಬದುಕು ನರಕಸದೃಶವಾಗುತ್ತದೆ. ತಪ್ಪಿಸಿಕೊಳ್ಳುವಂತಿಲ್ಲ. ತಮ್ಮ ನೋವುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶಗಳೂ ಕಡಿಮೆ. ಮಾಧ್ಯಮಗಳ ಕೃಪೆಯೂ ಇರುವುದಿಲ್ಲ. ಯಾವುದಾದರೂ ಎನ್‍ಜಿಓ, ಸಂಘ-ಸಂಸ್ಥೆಗಳು ಈ ಮಕ್ಕಳ ಕೂಗಿಗೆ ಕಿವಿಯಾಗುವವರೆಗೆ ತಮ್ಮದಲ್ಲದ ಬದುಕನ್ನು (Not My Life) ಅವರು ಬದುಕುತ್ತಿರುತ್ತಾರೆ.
   ಬಚ್‍ಪನ್ ಬಚಾವೋ ಆಂದೋಲನದ ಮುಖ್ಯಸ್ಥ ಕೈಲಾಶ್ ಸನ್ಯಾರ್ಥಿ ಹೇಳುತ್ತಾರೆ;
  ‘ಒಂದು ದಿನ ಓರ್ವ ಹೆಣ್ಣು ಮಗಳು ನನ್ನಲ್ಲಿ ಪ್ರಶ್ನಿಸಿದಳು,
ಹಾಲು ಕೊಡುವ ಹಸುವಿಗೆ ಎಷ್ಟು ಬೆಲೆಯಿದೆ ಅಂಕಲ್!
ಸುಮಾರು 50ರಿಂದ ಒಂದು ಲಕ್ಷದ ವರೆಗೆ ಇರಬಹುದು ಎಂದೆ. ಅವಳಂದಳು,
ನಾನು 5 ಸಾವಿರ ರೂಪಾಯಿಗೆ ಮಾರಾಟವಾದವಳು ಅಂಕಲ್.
   ಭಾರತದಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ಮಗುವೊಂದು ಕಾಣೆಯಾಗುತ್ತದೆ. ಅಂಥ ಮಕ್ಕಳನ್ನು ಕಾರ್ಖಾನೆ, ವೇಶ್ಯಾಗೃಹಗಳಲ್ಲಿ ಗುಲಾಮಗಿರಿಗೆ ದೂಡಲಾಗುತ್ತದೆ. ಭಿಕ್ಷಾಟನೆಯಲ್ಲೂ ತೊಡಗಿಸಲಾಗುತ್ತದೆ. ಜಾಗತಿಕವಾಗಿ ಇದೊಂದು ದೊಡ್ಡ ಉದ್ಯಮ. ಮಿಲಿಯಾಂತರ ಮಕ್ಕಳನ್ನು ಹೀಗೆ ಪ್ರತಿದಿನ ಅಪಹರಿಸಿಯೋ, ಖರೀದಿಸಿಯೋ ತಂದು ಕೆಲಸಕ್ಕೆ, ಸೆಕ್ಸ್ ಟೂರಿಸಂಗೆ ಬಳಸಲಾಗುತ್ತದೆ. ದೆಹಲಿಯಲ್ಲಿ ಗಾಝಿಪುರ ಎಂಬ ವಿಷಕಾರಿ ಪ್ರದೇಶವಿದೆ. ಮಕ್ಕಳು ಆ ಪ್ರದೇಶಕ್ಕೆ ಕಾಲಿಡಬಾರದೆಂದು ನಿಯಮವೂ ಇದೆ. ಆದರೆ ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಮಕ್ಕಳೇ. ಪ್ರತಿದಿನ ನಾಲ್ಕೂವರೆ ಟನ್‍ಗಳಷ್ಟು ಕಸವನ್ನು ಈ ಪ್ರದೇಶ ಉತ್ಪಾದಿಸುತ್ತದೆ. ಮಕ್ಕಳು ಬೆಳಗ್ಗಿನಿಂದ ರಾತ್ರಿಯ ವರೆಗೆ ಜುಜುಬಿ ಮೊತ್ತಕ್ಕಾಗಿ ದುಡಿಯುತ್ತಾರೆ. ರಕ್ತಹೀನತೆ, ಅಂಗ ಊನತೆ, ಚರ್ಮದ ಕಾಯಿಲೆಗಳಿಂದ ಮಕ್ಕಳು ಬಳಲಿ, ಬೆಂಡಾಗಿ ಕೊನೆಗೊಮ್ಮೆ ಕಾಣೆಯಾಗುತ್ತಾರೆ. ಈ ದೇಶದಲ್ಲಿ ಸುಮಾರು ಹತ್ತು ಲಕ್ಷ  ಮಕ್ಕಳು ವೇಶ್ಯಾ ಗೃಹದಲ್ಲಿದ್ದಾರೆ ಎಂಬ ಅಂದಾಜಿದೆ. ಹಾಗಂತ, ಇವರೆಲ್ಲ ಸ್ವಯಂ ಆಸಕ್ತಿಯಿಂದ ಇಲ್ಲಿಗೆ ಬಂದವರಲ್ಲ. ಅವರನ್ನು ಅಪಹರಿಸಿಯೋ ಖರೀದಿಸಿಯೋ ಅಲ್ಲಿಗೆ ಕರೆತರಲಾಗಿದೆ. ಜೊತೆಗೇ ಭೂತಾನ್, ನೇಪಾಲ್, ಬಂಗ್ಲಾದೇಶಗಳಿಂದ ಇಂಥ ವೇಶ್ಯಾಗೃಹಗಳಿಗೆ ಮಕ್ಕಳನ್ನು ಸರಬರಾಜು ಮಾಡಲಾಗುತ್ತಿದೆ. ಕೆಲವು ಕ್ಷಣಗಳ ಸುಖಕ್ಕಾಗಿ ಕೆಲವು ನಿಮಿಷಗಳನ್ನು ಕಳೆಯುವ ಪುರುಷರು ದುಡ್ಡು ಕೊಟ್ಟು ಹೊರಟು ಹೋಗುತ್ತಾರೆ. ಆದರೆ ಆ ಕ್ಷಣ ಮತ್ತು ನಿಮಿಷಗಳನ್ನು ಜೀರ್ಣಿಸಿಕೊಳ್ಳುವ ವಯಸ್ಸು ಮಕ್ಕಳದ್ದಲ್ಲವಲ್ಲ. ಮಕ್ಕಳಿಗೂ ದೊಡ್ಡವರಿಗೂ ನಡುವೆ ಪ್ರಾಯದಲ್ಲಿ ವ್ಯತ್ಯಾಸ ಇರುವ ಹಾಗೆಯೇ ಮಾನಸಿಕ ಸ್ಥಿತಿಯಲ್ಲೂ ವ್ಯತ್ಯಾಸವಿರುತ್ತದೆ. ಆ ಕೆಲವು ಕ್ಷಣಗಳು ಮಕ್ಕಳ ಮೇಲೆ ಆಘಾತಕಾರಿ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ತಮ್ಮದಲ್ಲದ ಇಂಥ ಅಸಂಖ್ಯ ‘ಕ್ಷಣ'ಗಳನ್ನು ಕಳೆಯಬೇಕಾದ ಮಕ್ಕಳ ಸ್ಥಿತಿ ಹೇಗಿರಬಹುದು? ಅವರೊಳಗಿನ ತಳಮಳ, ಸಂಕಟಗಳಿಗೆ ಯಾರು ಮಾಧ್ಯಮವಾಗಬೇಕು? ತಮ್ಮದಲ್ಲದ ಬದುಕನ್ನು (Not My Life) ಬದುಕುವುದೆಂದರೆ ಅದು ಪ್ರತಿಕ್ಷಣವೂ ಹಿಂಸೆ. ಅದು ಅವರು ಇಚ್ಛಿಸಿದ ಬದುಕಲ್ಲ. ಹೊರ ಪ್ರಪಂಚಕ್ಕೆ ವೇಶ್ಯಾಗೃಹದಲ್ಲಿರುವ ಬಾಲಕಿ, ಇಟ್ಟಿಗೆ ಹೊರುವ ಬಾಲಕ, ಚಿಂದಿ ಆಯುವ ಹುಡುಗ, ಭಿಕ್ಷೆ ಬೇಡುವ ಮಗು, ಗ್ಲಾಸು ತೊಳೆಯುವ ಹುಡುಗ... ಎಲ್ಲರೂ ಮನುಷ್ಯರೇ. ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಾರೆ ಎಂಬ ಉಡಾಫೆಯ ಮಾತುಗಳೂ ನಮ್ಮಿಂದ ಹೊರಡುವುದಿದೆ. ಆದರೆ ಆ ಮಕ್ಕಳು ಹಿರಿಯರಾದ ನಮ್ಮನ್ನು ಏನೆಂದು ಪರಿಗಣಿಸಿಯಾರು? ಮನುಷ್ಯರೆಂದೇ? ಮನುಷ್ಯರೆಂದಾದರೆ ಯಾವ ಪ್ರಕಾರದ ಮನುಷ್ಯರು? ಈ ಮನುಷ್ಯರ ಚಿತ್ರವನ್ನು ಅವರು ಹೇಗೆ ಬಿಡಿಸಬಹುದು? ಆ ಚಿತ್ರದಲ್ಲಿ ಹೃದಯವಿದ್ದೀತೇ? ಇದ್ದರೂ ಅದರ ಹೆಸರು ಏನಿದ್ದೀತು? ಹಲ್ಲುಗಳು ಈಗಿನಂತೆ ಬಿಳಿ-ಸುಂದರವಾಗಿ ಇದ್ದೀತೆ ಅಥವಾ ಕೋರೆ ಹಲ್ಲುಗಳಾಗಿರಬಹುದೇ? ಎಷ್ಟು ಕೈಗಳಿರಬಹುದು? ಎರಡೇ, ನಾಲ್ಕೇ ಅಥವಾ? ಉಗುರುಗಳು ಹೇಗಿರಬಹುದು? ಉದ್ದಕ್ಕೆ ಬಾಗಿಕೊಂಡು ರಕ್ತ ಹೀರುವ ರೂಪದಲ್ಲಿ ಇರಬಹುದೇ? ಕಣ್ಣು? ಅದರಲ್ಲಿ ಕಣ್ಣೀರು ಉಕ್ಕುತ್ತಿರಬಹುದೇ ಅಥವಾ ಕ್ರೌರ್ಯವೇ? ಬಾಯಿಯನ್ನು ಹೇಗೆ ಬಿಡಿಸಬಹುದು? ಪ್ಲಾಸ್ಟರು ಸುತ್ತಬಹುದೇ? ಮೆದುಳು? ವೇಶ್ಯಾ ಗೃಹ, ಇಟ್ಟಿಗೆ ಕಾರ್ಖಾನೆ, ವಿೂನುಗಾರಿಕೆಗಳನ್ನೆಲ್ಲಾ ಸಂಶೋಧಿಸಿದ ದಡ್ಡ ವಸ್ತು ಎಂದಾಗಿರಬಹುದೇ? ಸಣ್ಣವರ ಸಂಕಟಗಳನ್ನು ಗ್ರಹಿಸುವ ಸಾಮರ್ಥ್ಯ  ಇಲ್ಲದ ಮತ್ತು ದೊಡ್ಡವರ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಕ್ಷೇಮಕ್ಕಾಗಿ ಮಾತ್ರ ಕೆಲಸ ಮಾಡುವ ಕ್ರೂರಿ ಅಂಗ ಎಂದೇ?
   ‘ನಮ್ಮ ಮಕ್ಕಳನ್ನು ನಾವಲ್ಲದೇ ಇನ್ನಾರು ರಕ್ಷಿಸಬೇಕು -If we dont protect our children, who will?’- ಎಂಬ ಪ್ರಶ್ನೆಯೊಂದಿಗೆ ಕೊನೆಗೊಳ್ಳುವ Not My Life ಡಾಕ್ಯುಮೆಂಟರಿ ನಮ್ಮನ್ನೇ ಚುಚ್ಚುತ್ತದೆ, ಕಣ್ಣನ್ನು ಆರ್ದ್ರಗೊಳಿಸುತ್ತದೆ.