Tuesday, June 3, 2014

ಮಾಧ್ಯಮ ವಿಶ್ವಾಸಾರ್ಹತೆಯನ್ನು ಪ್ರಶ್ನಾರ್ಹಗೊಳಿಸಿದ ಚುನಾವಣೆ

   1. Manufacturing consent
   2.Manufacturing dissent
ಮಾಧ್ಯಮಗಳು ಮತ್ತು ಅವುಗಳ ಹೊಣೆಗಾರಿಕೆಗಳ ಕುರಿತಂತೆ ಚರ್ಚೆ ನಡೆಯುವಾಗಲೆಲ್ಲ ಈ ಎರಡು ಪದಗಳ ಉಲ್ಲೇಖವಾಗದೇ ಇರುವುದು ಬಹಳ ಕಡಿಮೆ. ಒಂದು ವಿಷಯದ ಪರ ಮಾತ್ರವೇ ಅಭಿಪ್ರಾಯವನ್ನು ರೂಪಿಸುವ (Manufacturing consent) ಅಥವಾ ಅದರ ವಿರುದ್ಧ ಮಾತ್ರವೇ ಅಭಿಪ್ರಾಯವನ್ನು ರೂಪಿಸುವ (Manufacturing dissent) ಧೋರಣೆಗಿಂತ ಭಿನ್ನವಾದ ನಿಲುವನ್ನು ಮಾಧ್ಯಮಗಳು ಆಯ್ಕೆ ಮಾಡಿಕೊಳ್ಳಬಾರದೇಕೆ? ಪರ ಅಥವಾ ವಿರುದ್ಧ ಎಂಬೆರಡು ಆಯ್ಕೆಗಳಷ್ಟೇ ನಮ್ಮ ಮುಂದಿರುವುದಲ್ಲವಲ್ಲ. ಇದು ಜಾರ್ಜ್ ಬುಶ್‍ರ ನೀತಿ. ಒಂದೋ ನನ್ನ ಪರ ಅಥವಾ ಭಯೋತ್ಪಾದಕರ ಪರ ಎಂಬ ಸ್ಲೋಗನನ್ನು ಅವರು ಇರಾಕ್ ಅತಿಕ್ರಮಣದ ವೇಳೆ ಉದುರಿಸಿದ್ದರು. ಅದನ್ನು ಒಂದು ಮಿತಿ ಯಲ್ಲಿ ವಿಮರ್ಶಿಸಿದ್ದ ಭಾರತೀಯ ಮಾಧ್ಯಮಗಳೇ ಕಳೆದ ಲೋಕಸಭಾ ಚುನಾವಣೆಯ ವೇಳೆ ಮರೆತುವೇಕೆ? ಮನಮೋಹನ್ ಸಿಂಗ್ ಸರಕಾರ ವಿರುದ್ಧ ಮತ್ತು ನರೇಂದ್ರ ಮೋದಿ ಪರ ಎಂಬ ಏಕ ಅಜೆಂಡಾದೊಂದಿಗೆ ಮುಖ್ಯವಾಹಿನಿಯ ಮಾಧ್ಯಮಗಳು ಕಾರ್ಯನಿರ್ವಹಿಸಿದುವಲ್ಲ, ಏಕೆ? ಇಂಡಿಯಾ ಟಿ.ವಿ. ಸಂಪಾದಕ ರಜತ್ ಶರ್ಮಾರಿಂದ ಹಿಡಿದು ಟೈಮ್ಸ್ ನೌನ ಸಂಪಾದಕ ಅರ್ನಾಬ್ ಗೋಸ್ವಾಮಿ ವರೆಗೆ, TV 9ನಿಂದ ಹಿಡಿದು ಸುವರ್ಣ ನ್ಯೂಸ್ 24x7 ವರೆಗೆ.. ಎಲ್ಲರೂ ಒಂದೇ ಭಾಷೆ, ಒಂದೇ ಆವೇಶ, ಒಂದೇ ಅಭಿಪ್ರಾಯದೊಂದಿಗೆ ಮಾತಾಡಿದ್ದು, ಸಂವಾದ ನಡೆಸಿದ್ದೆಲ್ಲ ಏನನ್ನು ಸೂಚಿಸುತ್ತದೆ? ಇಶ್ಯೂ ಕೇಂದ್ರಿತವಾಗಿ ನಡೆಯಬೇಕಾಗಿದ್ದ ಚರ್ಚೆಯನ್ನು ವ್ಯಕ್ತಿ ಕೇಂದ್ರಿತವಾಗಿ ಮಾರ್ಪಡಿಸಿದ್ದು ನರೇಂದ್ರ ಮೋದಿಯಲ್ಲ, ಮಾಧ್ಯಮ. ಮೋದಿಯವರು ಮಾಧ್ಯಮಗಳ ದೌರ್ಬಲ್ಯ, ದುರಾಸೆಯನ್ನು ಬಳಸಿಕೊಂಡರು ಅಷ್ಟೇ. ಮೋದಿಯವರು ಡಿಸೆಂಬರ್ 2012ರಲ್ಲಿ ಗುಜರಾತ್‍ನ ಮುಖ್ಯಮಂತ್ರಿಯಾಗಿ ಮೂರನೇ ಬಾರಿ ಆಯ್ಕೆಯಾದಾಗಲೇ ಮಾಧ್ಯಮಗಳು 2014ರ ಲೋಕಸಭಾ ಚುನಾವಣೆಯ ಪ್ರಚಾರವನ್ನು ಆರಂಭಿಸಿದ್ದುವು. ನರೇಂದ್ರ ಮೋದಿಯವರನ್ನು ಪರ್ಯಾಯ ನಾಯಕ ಎಂದು ಬಿಂಬಿಸುವ ಗಂಭೀರ ಪ್ರಯತ್ನದಲ್ಲಿ ತೊಡಗಿದ್ದುವು. 2013 ಡಿಸೆಂಬರ್‍ನಲ್ಲಿ ಕೇಜ್ರಿವಾಲ್‍ರ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಭೂತಪೂರ್ವ ಜಯ ಗಳಿಸುವವರೆಗೆ ಮಾಧ್ಯಮಗಳಲ್ಲಿ ಮೋದಿಯವರ ಹೊರತಾಗಿ ಇನ್ನಾರಿಗೂ ಹೆಚ್ಚಿನ ಸ್ಪೇಸ್ ಸಿಕ್ಕಿರಲಿಲ್ಲ. ಆ ಬಳಿಕ ಕೇಜ್ರಿವಾಲ್ ಮತ್ತು ಮೋದಿಯವರು ಪ್ರೈಮ್ ಟೈಮನ್ನು ಹಂಚಿಕೊಂಡರು. ಆದರೆ ಕೇಜ್ರಿವಾಲ್ ಯಾವಾಗ ಕಾರ್ಪೋರೇಟ್ ಭ್ರಷ್ಟಾಚಾರ, ಕ್ರೋನಿ ಕ್ಯಾಪಿಟಾಲಿಸಂ, ವಿದ್ಯುತ್ ದರ ನಿಯಂತ್ರಣ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಗುಜರಾತ್‍ಗೆ ಭೇಟಿ ಕೊಟ್ಟು ಅಲ್ಲಿನ ಸ್ಥಿತಿ-ಗತಿಯ ಬಗ್ಗೆ ಮಾತಾಡಿದರೋ ಅಂದಿನಿಂದಲೇ ಮಾಧ್ಯಮಗಳು ಅವರನ್ನು ಖಳನಾಯಕನ ಪಟ್ಟದಲ್ಲಿ ಕೂರಿಸಿದುವು. ಅವರ ಒಂದೊಂದೇ ದೌರ್ಬಲ್ಯಗಳು ಬೆಳಕಿಗೆ ಬರತೊಡಗಿದುವು. ನಿಜವಾಗಿ, ಈ ಬಾರಿಯ ಚುನಾವಣೆಯಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಕ್ಯಾಪಿಟಾಲಿಸಂ, ನಿರುದ್ಯೋಗ.. ಮುಂತಾದುವುಗಳು ಪ್ರಮುಖ ಚರ್ಚೆಗೆ ಒಳಗಾಗಬೇಕಿತ್ತು. ಇವುಗಳಿಗೆ ಸಂಬಂಧಿಸಿ ಮನಮೋಹನ್ ಸಿಂಗ್ ಸರಕಾರದ ವೈಫಲ್ಯ ಮತ್ತು ಅದಕ್ಕಿರುವ ಕಾರಣಗಳನ್ನು ಚರ್ಚೆಗೆ ತರಬೇಕಿತ್ತು. 10 ವರ್ಷಗಳಲ್ಲಿ ಸಿಂಗ್ ಸರಕಾರ ಏನನ್ನೂ ಮಾಡಿಲ್ಲ ಎಂಬ ಶುದ್ಧ ಸುಳ್ಳು ಪ್ರಚಾರದ ಬದಲು ಯುಪಿಎ ಸರಕಾರದ ಸಾಧಕ-ಬಾಧಕಗಳನ್ನು ವಿಮರ್ಶೆಗೆ ಒಡ್ಡಬೇಕಿತ್ತು. ಒಂದು ಸರಕಾರದ ಸರಿ-ತಪ್ಪುಗಳನ್ನು ನಿಷ್ಠುರ ಚರ್ಚೆಗೆ ಒಳಪಡಿಸದೆಯೇ ತೀರ್ಪು ಕೊಡುವ ಕೆಲಸವನ್ನು ಮಾಧ್ಯಮ ಮಾಡುವುದು ಅಪಾಯಕಾರಿ. ಸಾವಿರಾರು ಪತ್ರಿಕೆಗಳು ಮತ್ತು ನೂರಾರು ನ್ಯೂಸ್ ಚಾನೆಲ್‍ಗಳಿರುವ ಈ ದೇಶದಲ್ಲಿ, ರಾಜಕಾರಣಿಗಳನ್ನು ಜನರ ಬಳಿಗೆ ತಂದಿರುವುದೇ ಮಾಧ್ಯಮಗಳು. ಇವು ಜನರ ಮತ್ತು ರಾಜಕಾರಣಿಗಳ ನಡುವಿನ ಅಂತರವನ್ನು ತೆಳುವಾಗಿಸಿವೆ. ಒಂದು ವೇಳೆ ಈ ಬಾರಿಯಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಧ್ಯಮಗಳು ಮೋದಿಯ ವಿರುದ್ಧ ಏಕಮುಖ ಪ್ರಚಾರ ನಡೆಸಿದರೆ ಬಿಜೆಪಿ ಏನು ಹೇಳಬಲ್ಲುದು? ಮೋದಿ ಸರಕಾರದ ಸಾಧನೆಗಳಲ್ಲಿ ಒಂದನ್ನೂ ಚರ್ಚೆಗೆ ಒಳಪಡಿಸದೆಯೇ ಬರೇ ತಪ್ಪುಗಳನ್ನಷ್ಟೇ ಹೆಕ್ಕಿ ಹೇಳುತ್ತಾ ಈ ಸರಕಾರ 5 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ ಎಂದು ವಾದಿಸತೊಡಗಿದರೆ ಆಗ ಬಿಜೆಪಿಯ ನಿಲುವು ಏನಿದ್ದೀತು?
ಅಂದಹಾಗೆ, ಚುನಾವಣೆಯ ಸಂದರ್ಭದಲ್ಲಿ ಮಾಧ್ಯಮಗಳ ನಿರ್ವಹಿಸಲೇಬೇಕಾದ ಕೆಲವು ಹೊಣೆಗಾರಿಕೆಗಳಿವೆ.
   1. ಚರ್ಚೆಗೊಳಗಾಗಲೇಬೇಕಾದ ವಿಷಯಗಳನ್ನು ಮುನ್ನೆಲೆಗೆ ತಂದು ಮತದಾರರನ್ನು ಎಚ್ಚರಿಸುವುದು.
   2. ಈ ವಿಷಯಗಳಲ್ಲಿ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳ ನಿಲುವುಗಳೇನೆಂಬುದನ್ನು ಮತದಾರರಿಗೆ ಗೊತ್ತುಪಡಿಸುವುದು.
   3. ಅಸ್ತಿತ್ವದಲ್ಲಿರುವ ಸರಕಾರಕ್ಕಿಂತ ತಾವು ಹೇಗೆ ಭಿನ್ನ ಎಂಬುದನ್ನು ಹೇಳಿಕೊಳ್ಳುವುದಕ್ಕೆ ಬೇಕಾದಷ್ಟು ಸ್ಪೇಸ್ ಅನ್ನು
ವಿರೋಧ ಪಕ್ಷಗಳಿಗೆ ಒದಗಿಸುವುದು.
   4. ಆಡಳಿತ ಪಕ್ಷದ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕೆ ಅವಕಾಶವನ್ನು ಒದಗಿಸುತ್ತಲೇ ಅದರ ಬಾಧಕಗಳನ್ನು ವಿಮರ್ಶೆಗೆ ಒಡ್ಡುವುದಕ್ಕೆ ವಿರೋಧ ಪಕ್ಷಗಳಿಗೆ ಅವಕಾಶ ಮಾಡಿಕೊಡುವುದು.
   5. ಮತದಾರರು ಪ್ರಬುದ್ಧ ತೀರ್ಮಾನ ಕೈಗೊಳ್ಳುವುದಕ್ಕೆ ಪೂರಕವಾದ ಸನ್ನಿವೇಶವನ್ನು ನಿರ್ಮಿಸುವುದು.
ಬಹುಶಃ ಇನ್ನೂ ಕೆಲವು ಅಂಶಗಳನ್ನು ಈ ಪಟ್ಟಿಗೆ ಸೇರಿಸಬಹುದು. ದುರಂತ ಏನೆಂದರೆ, ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಪತ್ರಿಕೆ ಮತ್ತು ವಾರ್ತಾ ವಾಹಿನಿಗಳು ಈ ರೀತಿಯಾಗಿ ಕಾರ್ಯನಿರ್ವಹಿಸಿಯೇ ಇಲ್ಲ. ‘ಮೋದಿಯವರನ್ನು ಟಿ.ವಿ.ಯಲ್ಲಿ ತೋರಿಸುವುದರಿಂದ TRP ಹೆಚ್ಚುತ್ತದೆ..’ ಎಂದು ಇಂಡಿಯಾ TV ಯ ರಜತ್ ಶರ್ಮಾ ಒಂದು ಸೆಮಿನಾರ್‍ನಲ್ಲಿ ಹೇಳುವಾಗ ಝೀ ಟಿ.ವಿ.ಯ ಸುಭಾಶ್ ಚಂದ್ರರಂತೂ ಬಿಜೆಪಿ ಮೈತ್ರಿಕೂಟಕ್ಕಾಗಿ ಹರ್ಯಾಣದಲ್ಲಿ ಬಹಿರಂಗವಾಗಿಯೇ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು. ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಹೆಚ್ಚಿನ ಪತ್ರಿಕೆಗಳು ಯಾರ್ಯಾರಿಗೆ ಯಾವ್ಯಾವ ಖಾತೆಗಳನ್ನು ನೀಡಬಹುದು ಎಂಬುದನ್ನು ವಿವರಿಸಿದುವು. ಟೈಮ್ಸ್ ಆಫ್ ಇಂಡಿಯಾ ಹೀಗೆ ಬರೆಯಿತು;
   ‘ಗೃಹ, ಹಣಕಾಸು, ವಿದೇಶಾಂಗ ಮತ್ತು ರP್ಷÀಣಾ ಖಾತೆಗಳು ಕೇಂದ್ರ ಸಚಿವ ಸಂಪುಟದ ಪ್ರಮುಖ ಖಾತೆಗಳಾಗಿವೆ. ಇವುಗಳಲ್ಲಿ ಗೃಹಖಾತೆಯನ್ನು ರಾಜನಾಥ್ ಸಿಂಗ್‍ರಿಗೆ ನೀಡಬಹುದು. ಅರುಣ್ ಜೇಟ್ಲಿಗೆ ಹಣಕಾಸು. ಹೀಗೆ ಮಾಡಿದರೆ ಎರಡು ಖಾತೆಗಳು ಉಳಿಯು ತ್ತವೆ. ಇವುಗಳಲ್ಲಿ ಒಂದನ್ನು ಸುಶ್ಮಾಗೆ ಕೊಡಬಹುದು. ಒಂದು ವೇಳೆ ಇವೆರಡರಲ್ಲಿ ಒಂದನ್ನೂ ಸುಶ್ಮಾಗೆ ಕೊಡಲು ಸಾಧ್ಯವಿಲ್ಲ ಎಂದಾದರೆ ಆರೋಗ್ಯ ಖಾತೆಯನ್ನು ನೀಡಬಹುದು. ಹಾಗಂತ ಅದೇನೂ ಸಣ್ಣ ಖಾತೆಯಲ್ಲ. ಬಹುದೊಡ್ಡ, ಮಹತ್ವದ ಖಾತೆಯಾಗಿದೆ..’
   2014 ಮಾರ್ಚ್ 23ರಂದು ಬಿಹಾರದ ರಾಪುರಾ ಗ್ರಾಮದಲ್ಲಿ ಬುದ್ಧರಾಮ್ ಪಾಸ್ವಾನ್‍ರನ್ನು ಹತ್ಯೆ ಮಾಡಲಾಯಿತು. ಅರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ರಾಪುರದ ಜನರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಬರುತ್ತಿದ್ದ ವೇಳೆ ಈ ಹತ್ಯೆ ನಡೆಯಿತು. 1998ರಲ್ಲಿ ನಗರಿ ಬಝಾರ್‍ನಲ್ಲಿ ರಣವೀರ ಸೇನೆಯು ನಡೆಸಿದ ದಲಿತರ ಹತ್ಯಾಕಾಂಡದ ವಿರುದ್ಧ ಸಂತ್ರಸ್ತರನ್ನು ಒಟ್ಟು ಸೇರಿಸಿ ಹೋರಾಟ ನಡೆಸುತ್ತಿದ್ದ ವ್ಯಕ್ತಿಯಾಗಿದ್ದರು ಪಾಸ್ವಾನ್. ಸಾಕ್ಷಿಗಳನ್ನು ಕೋರ್ಟಿಗೆ ಹಾಜರುಪಡಿಸುವಲ್ಲಿ ಮತ್ತು ಅವರಲ್ಲಿ ಧೈರ್ಯ ತುಂಬುವಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದರು. ಅವರ ಪ್ರಯತ್ನದಿಂದಲೇ 2010ರಲ್ಲಿ ಸೆಶನ್ ಕೋರ್ಟು ರಣವೀರ ಸೇನೆಯ ಕಾರ್ಯಕರ್ತರಿಗೆ ಶಿಕ್ಷೆ ವಿಧಿಸಿತು. ಆದರೆ 2013ರಲ್ಲಿ ಹೈಕೋರ್ಟು ಶಿಕ್ಷೆಯನ್ನು ರದ್ದುಪಡಿಸಿತು. ಪಾಸ್ವಾನ್ ಛಲ ಬಿಡದೇ ಸಂತ್ರಸ್ತರನ್ನು ಒಟ್ಟು ಸೇರಿಸಿದರು. ಹೈಕೋರ್ಟ್ ಆದೇಶವನ್ನು ಸುಪ್ರೀಮ್ ಕೋರ್ಟ್‍ನಲ್ಲಿ ಪ್ರಶ್ನಿಸುವಂತೆ ಸಂತ್ರಸ್ತರಿಗೆ ಧೈರ್ಯ ತುಂಬಿದರು. ಆದ್ದರಿಂದಲೇ ಪಾಸ್ವಾನ್‍ರ ಹತ್ಯೆಯನ್ನು ರಣವೀರ ಸೇನೆಯು ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ಸಂಭ್ರಮದಿಂದ ಆಚರಿಸಿತು. ಮೋದಿ ಪ್ರಧಾನಿಯಾಗಬೇಕೆಂದು ರಣವೀರ ಸೇನೆಯ ಮುಖ್ಯಸ್ಥನಾಗಿದ್ದ ಬ್ರಹ್ಮೇಶ್ವರ್ ಸಿಂಗ್ ಈ ಹಿಂದೆ ಬಹಿರಂಗವಾಗಿಯೇ ಹಾರೈಸಿದ್ದ. 2012ರಲ್ಲಿ ಬ್ರಹ್ಮೇಶ್ವರ್‍ನ ಹತ್ಯೆಯಾದಾಗ, ಬಿಜೆಪಿಯ ಗಿರಿರಾಜ್ ಸಿಂಗ್‍ರು ಆತನನ್ನು ಗಾಂಧಿ ಎಂದು ಕರೆದಿದ್ದರು. (ದಿ ಹಿಂದೂ ಮಾರ್ಚ್ 27, 2014) ಮೋದಿಯವರನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದೂ ಇದೇ ಗಿರಿರಾಜ್ ಸಿಂಗ್. ದಲಿತರು, ಬುಡಕಟ್ಟುಗಳು ಮತ್ತು ಆದಿವಾಸಿಗಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಮೇಲ್ಜಾತಿಗಳಿಂದ ರೂಪಿಸಲ್ಪಟ್ಟ ತಂಡವೇ ರಣವೀರ ಸೇನೆ. ಆದರೆ ಪಾಸ್ವಾನ್‍ರ ಹತ್ಯೆಯ ಬಳಿಕ ಬಿಹಾರದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ನರೇಂದ್ರ ಮೋದಿಯವರು, ತಾನು ಕೆಳಜಾತಿಯವ ಎಂದರು. ಆದರೂ ಕೆಳಜಾತಿಯವರನ್ನು ರಣವೀರ ಸೇನೆಯು ನಡೆಸಿಕೊಂಡ ಮತ್ತು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತಂತೆ ಯಾವೊಂದು ಮಾತನ್ನೂ ಅವರು ಆಡಲಿಲ್ಲ. ಅಷ್ಟಕ್ಕೂ, ಮೋದಿಯವರಿಗೆ ಅದರ ಅಗತ್ಯ ಇಲ್ಲದೇ ಇರಬಹುದು. ಆದರೆ ಮಾಧ್ಯಮಗಳಿಗೂ ಹಾಗೆಯೇ ಅನಿಸಬಾರದಲ್ಲ. ಕೆಳಜಾತಿಯ ವ್ಯಕ್ತಿಯೋರ್ವರು ಪ್ರಧಾನಿಯಾಗುವಾಗ ಮತ್ತು ಕೆಳಜಾತಿಯವರನ್ನು ದಮನಿಸುವುದಕ್ಕೆಂದೇ ರೂಪುಗೊಂಡ ಮೇಲ್ಜಾತಿಯ ರಣವೀರ ಸೇನೆಯು ಅವರನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿರುವಾಗ ಅವರ ನಿಲುವೇನೆಂಬುದನ್ನು ಅವು ಪ್ರಶ್ನಿಸಬೇಕಿತ್ತಲ್ಲವೇ? ಇದು ಕೇವಲ ರಣವೀರ ಸೇನೆಯ ಪ್ರಶ್ನೆಯಲ್ಲ. ಮೋದಿಯವರನ್ನು ಹತ್ತಾರು ಅನುಮಾನಗಳು ಸುತ್ತಿಕೊಂಡಿವೆ. ಆ ಅನುಮಾನಗಳು ನಿಜವೋ ಸುಳ್ಳೋ ಎಂಬುದು ಸ್ಪಷ್ಟವಾಗಬೇಕಾದರೆ ಮಾಧ್ಯಮಗಳು ಅವನ್ನು ಚರ್ಚೆಗೆ ಎತ್ತಿಕೊಳ್ಳಬೇಕು. ಮನಮೋಹನ್ ಸಿಂಗ್‍ರ ದೌರ್ಬಲ್ಯ, ಸೋನಿಯಾರ ಸರ್ವಾಧಿಕಾರ ಮತ್ತು ರಾಹುಲ್‍ರ ಸಪ್ಪೆತನಗಳು ಚರ್ಚೆಗೆ ಈಡಾದಂತೆಯೇ ಮೋದಿ ಮತ್ತು ಅವರ ಪಕ್ಷದ ಕುರಿತಾಗಿಯೂ ಚರ್ಚೆಗಳಾಗಬೇಕು. ಆದರೆ, ಮಾಧ್ಯಮಗಳು ಇಂಥ ಪ್ರತಿ ಸಂದರ್ಭಗಳನ್ನೂ ಕೈಬಿಟ್ಟುವಲ್ಲ, ಏಕೆ? ಇದು ಅನುದ್ದೇಶಪೂರ್ವಕವೇ? ಬಿಜೆಪಿ ಪರ ಕಾರ್ಪೋರೇಟ್ ಕಂಪೆನಿಗಳು ಮಾಧ್ಯಮ ಕಚೇರಿಗಳನ್ನು ಖರೀದಿಸಿವೆ ಎಂಬ ಆರೋಪಗಳು ಈ ಬಾರಿ ಕೇಳಿ ಬಂದಷ್ಟು ಈ ಹಿಂದೆಂದೂ ಕೇಳಿಬರದಿದ್ದುದು ಸೂಚಿಸುವುದೇನನ್ನು? ಚುನಾವಣಾ ಆಯೋಗಕ್ಕೆ ಈ ಬಾರಿ ಪಾವತಿ ಸುದ್ದಿಯ (Paid News) ಸಾವಿರಾರು ದೂರುಗಳು ಬಂದುವು. ಅವುಗಳಲ್ಲಿ 3053 ಪ್ರಕರಣಗಳ ಕುರಿತಂತೆ ಆಯೋಗವು ಮಾಧ್ಯಮಗಳಿಂದ ವಿವರಣೆಯನ್ನು ಕೋರಿತು. ಈ ಹಿಂದೆಂದೂ ಇಷ್ಟೊಂದು ಪ್ರಮಾಣದಲ್ಲಿ ಪಾವತಿ ಸುದ್ದಿಯ ಕುರಿತಂತೆ ದೂರುಗಳು ಬಂದಿರಲಿಲ್ಲ.
   ಬಹುಶಃ, ಈ ಬಾರಿಯ ಚುನಾವಣೆಯು ಮಾಧ್ಯಮ ವಿಶ್ವಾಸಾರ್ಹತೆಯನ್ನು ತೀವ್ರವಾಗಿ ಪ್ರಶ್ನಾರ್ಹಗೊಳಿಸಿದೆ. ಮೋದಿ ಯೋಗ್ಯ ನಾಯಕರೇ ಇರಬಹುದು. ರಾಹುಲ್ ಅಯೋಗ್ಯರೇ ಆಗಿರಬಹುದು. ಮಾತ್ರವಲ್ಲ, ಕಾಂಗ್ರೆಸ್ ಪಕ್ಷವು ಅತ್ಯಂತ ಕಳಪೆ ಆಡಳಿತವನ್ನು ನೀಡಿರಬಹುದು. ಆದರೆ ಇದನ್ನು ತೀರ್ಮಾನಿಸಬೇಕಾದವರು ಯಾರು, ಹೇಗೆ, ಅವರ ಯೋಗ್ಯತೆಯೇನು? ಆರೋಪಿಗೆ (ಕಾಂಗ್ರೆಸ್) ಸಮರ್ಥಿಸಿಕೊಳ್ಳಲು ಅವಕಾಶವನ್ನೇ ನೀಡದೇ ತಪ್ಪಿತಸ್ಥನೆಂದು ಮುದ್ರೆಯೊತ್ತುವುದು ಎಷ್ಟು ಸರಿ?

No comments:

Post a Comment