Thursday, February 4, 2016

  ಉಗ್ರರು ನಿಜಕ್ಕೂ ಯಾರು?

        1. ಜಗತ್ತು ಆಪತ್ತಿನಲ್ಲಿದೆ.
  2. ಶಾಂತಿಯುತ ಹೋರಾಟಗಳಿಂದ ಬದಲಾವಣೆ ಅಸಾಧ್ಯ.
  3. ಆದ್ದರಿಂದ ಕಾನೂನು ಬಾಹಿರ ಮಾರ್ಗ ಸಮ್ಮತಾರ್ಹ.
  4. ಈ ಮಾರ್ಗದಲ್ಲಿ ದೇಹತ್ಯಾಗವು ಗೌರವಾರ್ಹ.
  5. ಈ ಬಗೆಯ ಸಂಘಟಿತ ಪ್ರಯತ್ನಗಳಿಂದ ಆದರ್ಶ ರಾಷ್ಟ್ರದ (ರಾಮರಾಜ್ಯ) ಕಲ್ಪನೆ ಸಾಧ್ಯ..
  ಭಯೋತ್ಪಾದಕರ ಮೇಲೆ ನಡೆದಿರುವ ನೂರಾರು ಸಂಶೋಧನೆಗಳ ಫಲಿತಾಂಶಗಳನ್ನು ಒಂದೆಡೆ ಕೂಡಿಸಿ ನೋಡಿದರೆ ಭಯೋತ್ಪಾದಕರಿಂದ ಬಹುತೇಕ ಈ ಮೇಲಿನ ಉತ್ತರಗಳೇ
ಸಿಗುತ್ತವೆ. ಜರ್ಮನಿಯ ಬಾಡೆರ್-ಮೈನ್‍ಹಾಫ್, ಉಗಾಂಡದ ಲಾರ್ಡ್ ರೆಸಿಸ್ಟೆನ್ಸ್ ಆರ್ಮಿ, ಎಲ್.ಟಿ.ಟಿ.ಇ., ಐಸಿಸ್ ಮುಂತಾದ ಉಗ್ರ ಸಂಘಟನೆಗಳ ಮೇಲೆ ನಡೆಸಿದ ಅಧ್ಯಯನಗಳು ಬಹುತೇಕ ಕೊಟ್ಟಿರುವುದು ಈ ಮೇಲಿನ ಫಲಿತಾಂಶಗಳನ್ನೇ. ಓರ್ವ ಭಯೋತ್ಪಾದಕನ ಮೇಲೆ ಅಥವಾ ಭಯೋತ್ಪಾದಕ ಸಂಘಟನೆಗಳಲ್ಲಿ ಸೇರ್ಪಡೆಗೊಳ್ಳುವವನ ಮೇಲೆ 16 ರೀತಿಯ ವಿಚಾರಗಳು ಪ್ರಭಾವ ಬೀರಿರುತ್ತವೆ ಎಂದು ಹೇಳಲಾಗುತ್ತದೆ. ಅದರಲ್ಲಿ ಸಿನಿಮಾಗಳೂ ಸೇರಿವೆ. ಉಗ್ರಗಾಮಿ ಮನಸ್ಥಿತಿಗೆ ನಿರ್ದಿಷ್ಟ ಧರ್ಮ, ಜಾತಿ, ಭಾಷೆ, ಗ್ರಂಥಗಳ ಹಂಗೇನೂ ಇಲ್ಲ. ಸೊಮಾಲಿಯಾದಲ್ಲಿ 27% ಮಂದಿ ಆರ್ಥಿಕ ಕಾರಣಗಳಿಗಾಗಿ ‘ಅಲ್ ಶಬಾಬ್’ಗೆ ಸೇರ್ಪಡೆಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. 13% ಮಂದಿಯನ್ನು ಬಲವಂತದಿಂದ ಸೇರ್ಪಡೆಗೊಳಿಸಲಾಗುತ್ತಿದೆ ಎಂದೂ ವರದಿಗಳು ಹೇಳುತ್ತವೆ. ಬಡತನ, ಆಡಳಿತ ವೈಫಲ್ಯ, ದೌರ್ಜನ್ಯ, ದಬ್ಬಾಳಿಕೆಗಳೂ ‘ಉಗ್ರರನ್ನು ಉತ್ಪಾದಿಸು’ವಲ್ಲಿ ಪಾತ್ರ ವಹಿಸುತ್ತಿವೆ. ಇಂಟರ್‍ನೆಟ್‍ನ ಈ ಕಾಲದಲ್ಲಿ ಹಿಂಸಾತ್ಮಕ ವೀಡಿಯೋಗಳನ್ನು ವೀಕ್ಷಿಸುವುದು ಕಷ್ಟಕರವೇನೂ ಅಲ್ಲ. ಫೇಸ್‍ಬುಕ್, ಟ್ವೀಟರ್, ಯೂಟ್ಯೂಬ್‍ಗಳು ಜನರಿಗೆ ಅಪರಿಮಿತ ಅವಕಾಶಗಳನ್ನು ತೆರೆದಿಟ್ಟಿವೆ. ಪದೇ ಪದೇ ಹಿಂಸಾತ್ಮಕ ವೀಡಿಯೋಗಳನ್ನು ವೀಕ್ಷಿಸಿದ ವ್ಯಕ್ತಿಯೊಬ್ಬನಲ್ಲಿ ಅದು ಚಿತ್ತ ಚಾಂಚಲ್ಯಕ್ಕೆ ಕಾರಣವಾಗಬಹುದು. ಪಾಶ್ಚಾತ್ಯ ರಾಷ್ಟ್ರಗಳು ತೃತೀಯ ಜಗತ್ತಿನ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿವೆ ಎಂಬ ಸುದ್ದಿಗಳನ್ನು ಪದೇ ಪದೇ ಓದುವ ವ್ಯಕ್ತಿಯೋರ್ವನಲ್ಲಿ, ಕ್ರಮೇಣ ‘ಪಾಶ್ಚಾತ್ಯ’ ಎಂಬ ಪದವೇ ಆಕ್ರೋಶಕ್ಕೆ ಕಾರಣವಾಗಬಹುದು. ಪಾಶ್ಚಾತ್ಯರಿಂದ ಬರುವ ಯಾವುದೇ ವಸ್ತುವಿನಲ್ಲೂ ಸಂಚು ಕಾಣಿಸಬಹುದು. ಮಾನ್ಸಾಂಟೊ ಆಗಲಿ, ಅಣು ಸ್ಥಾವರಗಳಾಗಲಿ, ವಿಶೇಷ ವಿತ್ತ ವಲಯಗಳಾಗಲಿ, ಸಾಂಸ್ಕೃತಿಕ ಆಮದುಗಳಾಗಲಿ, ಉಡುಪು, ಭಾಷೆ, ಆಹಾರ, ಔಷಧ, ಆವಿಷ್ಕಾರ.. ಏನೇ ಆಗಲಿ ಎಲ್ಲವೂ ಅನುಮಾನಿತವಾಗಬಹುದು. ಅದೊಂದು ರೀತಿಯ ಮಾನಸಿಕತೆ. ಪಾಕಿಸ್ತಾನದ ಬಗ್ಗೆ ಈ ದೇಶದ ಒಂದು ಗುಂಪಿನಲ್ಲಿ ಅಂಥದ್ದೊಂದು ಮಾನಸಿಕತೆಯಿದೆ. ಆ ದೇಶದ ಮೇಲಿನ ನಕಾರಾತ್ಮಕ ಭಾವನೆಯು ಆ ಗುಂಪಿನಲ್ಲಿ ಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ, ಪಾಕ್‍ನ ಮೇಲಾಗುವ ಪ್ರತಿ ಹೊಡೆತಕ್ಕೂ ಅದು ಸಂಭ್ರಮ ಪಡುತ್ತದೆ. ಭ್ರಷ್ಟಾಚಾರದಲ್ಲಿ ಪಾಕ್‍ನ ಸ್ಥಾನ ಭಾರತಕ್ಕಿಂತ ಮೇಲಿದ್ದರೆ, ಪಾಕಿಸ್ತಾನವು ಕ್ರಿಕೆಟ್‍ನಲ್ಲೋ  ಹಾಕಿಯಲ್ಲೋ  ದುರ್ಬಲ ಬಾಂಗ್ಲಾ, ನೇಪಾಳ, ಅಫಘಾನಿಸ್ತಾನಗಳ ಎದುರು ಸೋತರೆ, ಪಾಕ್‍ನಲ್ಲಿ ಪ್ರವಾಹ ಬಂದರೆ, ಬಾಂಬ್ ಸ್ಫೋಟಿಸಿದರೆ, ರಾಜಕೀಯ ಅರಾಜಕತೆ ಉಂಟಾದರೆ.. ಹೀಗೆ ಎಲ್ಲವನ್ನೂ ಸಂತಸದಿಂದ ಸ್ವೀಕರಿಸುವ ಗುಂಪಿದು. ಕಳೆದವಾರ ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿಯೊಬ್ಬ ತನ್ನ ಮನೆಯ ಮೇಲೆ ಖುಷಿಯಿಂದ ಭಾರತದ ಧ್ವಜ ಹಾರಿಸಿರುವುದಕ್ಕೆ ಬಂಧನಕ್ಕೀಡಾದುದು ಮತ್ತು 10 ವರ್ಷಗಳ ಶಿಕ್ಷಾ ಭೀತಿಯನ್ನು ಎದುರಿಸುತ್ತಿರುವುದರಲ್ಲಿ ಇದೇ ಮಾನಸಿಕತೆಯನ್ನು ಗುರುತಿಸಬಹುದು. ಒಂದು ವೇಳೆ, ಆತ ಚೀನಾದ್ದೋ  ಸೌದಿಯದ್ದೋ  ಧ್ವಜವನ್ನು ಹಾರಿಸಿರುತ್ತಿದ್ದರೆ ಅದಕ್ಕೆ ಈ ಮಟ್ಟದ ಪ್ರತಿಕ್ರಿಯೆ ಸಿಗುವುದಕ್ಕೆ ಸಾಧ್ಯವೇ ಇರಲಿಲ್ಲ. ಹಾಗಂತ, ಪಾಕ್ ಕ್ರಿಕೆಟ್‍ಗೆ ಮುಹಮ್ಮದ್ ಆಮಿರ್ ಮರಳಿದ ಖುಷಿಯಲ್ಲಿ ಭಾರತೀಯನೊಬ್ಬ ಇಲ್ಲಿ ಪಾಕ್ ಧ್ವಜ ಹಾರಿಸಿರುತ್ತಿದ್ದರೆ ಇಲ್ಲಿನ ವಾತಾವರಣ ಹೇಗಿರುತ್ತಿತ್ತು? ಎಷ್ಟು ಪ್ರತಿಭಟನೆಗಳು ನಡೆಯುತ್ತಿದ್ದುವು? ಎಷ್ಟು ಕೇಸುಗಳನ್ನು ಜಡಿಯಲಾಗುತ್ತಿತ್ತು? ಅದೇ ವೇಳೆ, ನೇಪಾಳದ್ದೋ  ಶ್ರೀಲಂಕಾದ್ದೋ  ಧ್ವಜವನ್ನು ಇಲ್ಲಿ ಹಾರಿಸಿರುತ್ತಿದರೆ ಅದು ಸುದ್ದಿಯೇ ಆಗಲಾರದು. ಈ ದೇಶದಲ್ಲಿ ಎಷ್ಟೋ ದರೋಡೆಗಳು ಸಿನಿಮಾಗಳ ಪ್ರಭಾವದಿಂದ ಆಗಿವೆ. ಕೊಲೆ ಕೃತ್ಯಗಳು, ಸಂಚುಗಳು, ಪ್ರೇಮ ಪ್ರಕರಣಗಳಿಗೆ ಸಿನಿಮಾಗಳನ್ನು ಪ್ರೇರಕವಾಗಿ ಬಳಸಲಾಗಿದೆ. ನಮ್ಮಲ್ಲಿ ನಡೆಯುವ ಕೋಮು ಗಲಭೆಗಳನ್ನೇ ಎತ್ತಿಕೊಳ್ಳಿ. ಒಂದೇ ಧರ್ಮದ ಇಬ್ಬರ ನಡುವಿನ ಜಗಳ ಕೋಮುಗಲಭೆಯಾಗಿ ಮಾರ್ಪಡುವುದಿಲ್ಲ. ಅದೇ ವೇಳೆ, ಅದೇ ವಿಷಯದ ಮೇಲೆ ಹಿಂದೂ-ಮುಸ್ಲಿಮನ ನಡುವೆ ಜಗಳ ನಡೆದರೆ ಅದು ಆ ಇಬ್ಬರನ್ನು ದಾಟಿ ಎರಡು ಸಮುದಾಯದ ಪ್ರತಿಷ್ಠೆಯಾಗಿ ಮಾರ್ಪಡುತ್ತದೆ. ಅಲ್ಲಲ್ಲಿ ಇರಿತಗಳು, ಕಫ್ರ್ಯೂಗಳಿಗೆ ಕಾರಣವಾಗುತ್ತದೆ. ಒಂದು ವೇಳೆ, ಹಿಂದೂ-ಮುಸ್ಲಿಮರ ಬದಲು ಮುಸ್ಲಿಮ್-ಕ್ರೈಸ್ತ ಅಥವಾ ಹಿಂದೂ-ಕ್ರೈಸ್ತರ ನಡುವೆ ಇದೇ ವಿಷಯದ ಮೇಲೆ ಜಗಳ ನಡೆದರೆ ಅದು ಕೋಮುಗಲಭೆಯಾಗಿ ಮಾರ್ಪಡುವ ಸಾಧ್ಯತೆ ಬಹಳ ಕಡಿಮೆ. ಯಾಕೆಂದರೆ, ಇದೊಂದು ಮಾನಸಿಕತೆ. ಆ ಮಾನಸಿಕತೆ ನಕಾರಾತ್ಮಕವಾದುದು. ಮುಸ್ಲಿಮರೆಂದರೆ ಹಾಗೆ, ಹೀಗೆ, ಆಕ್ರಮಣಕೋರರು, ದೇಗುಲ ಭಂಜಕರು, ಹೆಣ್ಣನ್ನು ಪಠಾಯಿಸುವವರು, ಗೋಮಾಂಸ ಭಕ್ಷಕರು, ಉಗ್ರರು, ಕರ್ಮಠರು, ಹಿಂದೂ ವಿರೋಧಿಗಳು.. ಎಂಬಿತ್ಯಾದಿಯಾಗಿ ಅಚ್ಚೊತ್ತಲು ನಿರಂತರವಾಗಿ ಇಲ್ಲಿ ಶ್ರಮಿಸಲಾಗುತ್ತಿದೆ ಮತ್ತು ಅದು ಪ್ರಗತಿಯಲ್ಲಿದೆ. ಹಲವಾರು ದಶಕಗಳಿಂದ ನಡೆಯುತ್ತಿರುವ ಈ ಪ್ರಚಾರಗಳು ಕ್ರಮೇಣ ಸಮಾಜದ ಮೇಲೆ ಪರಿಣಾಮ ಬೀರತೊಡಗಿದೆ. ಆಲಿಸಿದ್ದನ್ನೇ ಮತ್ತೆ ಮತ್ತೆ ಆಲಿಸಿದಾಗ ಮೆದುಳು ಮೃದುವಾಗುತ್ತದೆ. ಇಂಥ ಪ್ರಚಾರಗಳನ್ನು ಸಮರ್ಥಿಸುವುದಕ್ಕಾಗಿ ಪ್ರಚಾರಕರು ತಾಜಾ ಪ್ರಕರಣಗಳನ್ನೂ ಉತ್ಪಾದಿಸುತ್ತಿರುತ್ತಾರೆ. ಯಾವುದೇ ಸಾಮಾನ್ಯ ಘಟನೆಯನ್ನು ಲವ್ ಜಿಹಾದ್ ಆಗಿಯೋ ಗೋಮಾಂಸವಾಗಿಯೋ ಮತಾಂತರವೆಂದೋ ತಿರುಚಿ ವ್ಯಾಖ್ಯಾನಿಸುತ್ತಾರೆ. ಅದಾಗಲೇ ನಿರಂತರ ನಕಾರಾತ್ಮಕ ಪ್ರಚಾರದಿಂದ ಚಾಂಚಲ್ಯಕ್ಕೊಳಗಾಗುವ ಮೆದುಳು ಇವುಗಳಿಂದ ನಿಧಾನಕ್ಕೆ ಪ್ರಭಾವಿತಗೊಳ್ಳತೊಡಗುತ್ತದೆ. ಕೊನೆಗೆ ಅದರ ಉಗ್ರ ಬೆಂಬಲಿಗರಾಗಿಸಿಯೂ ಬಿಡುತ್ತದೆ. ರೋಹಿತ್ ವೇಮುಲ ಪ್ರಕರಣ ಇವತ್ತು ದಲಿತ ಮತ್ತು ಬಲಿತವಾಗಿ ಇಬ್ಭಾಗವಾಗಿರುವುದಕ್ಕೂ ಇಂಥದ್ದೊಂದು ಹಿನ್ನೆಲೆಯಿದೆ. ದಲಿತರು ಶತಮಾನಗಳಿಂದ ಬಲಿತರ ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಆ ದಬ್ಬಾಳಿಕೆಯ ವಿಧಾನ ಯಾವ ರೀತಿಯದ್ದಾಗಿತ್ತೆಂದರೆ, ಅವರಿಗೆ ಮನುಷ್ಯರ ಐಡೆಂಟಿಟಿಯೇ ಇರಲಿಲ್ಲ. ಮಾನವ ಹಕ್ಕುಗಳ ಸಕಲ ಪರಿಧಿಗಳಿಂದಲೂ ಅವರನ್ನು ಹೊರಗಿಡಲಾಯಿತು. ಅವರ ಮೇಲೆ ಬಲಿತ ದಬ್ಬಾಳಿಕೆಯ ಸಾವಿರಾರು ಕತೆಗಳು ಜನಪದೀಯವಾಗಿಯೂ ಪಾಡ್ದನಗಳು ಮತ್ತಿತರ ರೂಪದಲ್ಲಿಯೂ ಇವತ್ತು ಜೀವಂತವಾಗಿವೆ. ಆದ್ದರಿಂದಲೇ ಈ ‘ಬಲಿತ’ ಸಮಾಜದ ಆಧುನಿಕ ಪೀಳಿಗೆಯು ತಮ್ಮ ಪೂರ್ವಜರ ದಬ್ಬಾಳಿಕೆಯನ್ನು ಮುಂದುವರಿಸದಿದ್ದರೂ ಅಥವಾ ಅದನ್ನು ಅಮಾನವೀಯ ಎಂದು ಪರಿಗಣಿಸುತ್ತಿದ್ದರೂ ಅವರನ್ನು ಸಂಶಯ ದೃಷ್ಟಿಯಿಂದಲೇ ನೋಡುವಂತಹ ಸ್ಥಿತಿಯೊಂದು ಈಗಲೂ ಇದೆ. ಒಂದು ವೇಳೆ ವರ್ಣಾಶ್ರಮ ಪದ್ಧತಿ ಈ ದೇಶದಲ್ಲಿ ಅಸ್ತಿತ್ವದಲ್ಲಿ ಇರದೇ ಇರುತ್ತಿದ್ದರೆ ವೇಮುಲ ಪ್ರಕರಣ ಓರ್ವ ವಿದ್ಯಾರ್ಥಿಯ ಆತ್ಮಹತ್ಯೆಯಾಗಿ ಗುರುತಿಗೀಡಾಗುತ್ತಿತ್ತೇ ಹೊರತು ದಲಿತರು ಮತ್ತು ಮೇಲ್ವರ್ಗವಾಗಿ ವಿಭಜನೆಗೊಳ್ಳುತ್ತಿರಲಿಲ್ಲ.
  ಅಮೇರಿಕದ ಶಾಂತಿಗಾಗಿ ಸಂಸ್ಥೆ ಎಂಬ ತಂಡವು 2010ರಲ್ಲಿ ಒಂದು ಅಧ್ಯಯನ ಕೈಗೊಂಡಿತ್ತು. ಅಲ್ ಕಾಯಿದಾಕ್ಕೆ ಆಕರ್ಷಿತರಾದ 2032 ಯುವಕರ ಮೇಲೆ ನಡೆಸಿದ ಅಧ್ಯಯನವಿದು ಎಂದೂ ಅದು ಹೇಳಿಕೊಂಡಿತ್ತು. ಆ ಅಧ್ಯಯನದ ಫಲಿತಾಂಶ ಏನೆಂದರೆ, ಅಲ್ ಕಾಯಿದಾದೊಂದಿಗೆ ಆ ಯುವಕರು ಗುರುತಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ‘ಗುರುತಿಸಿಕೊಳ್ಳುವ ಚಪಲ’ವಾಗಿತ್ತು. ತಮ್ಮನ್ನು ಎಲ್ಲರೂ ಗುರುತಿಸಬೇಕು, ತಾವು ಪರಿಚಿತ ವ್ಯಕ್ತಿತ್ವವಾಗಬೇಕು ಎಂಬ ಹಂಬಲ ಅವರನ್ನು ಅಲ್‍ಕಾಯಿದಾದೆಡೆಗೆ ಆಕರ್ಷಿತಗೊಳಿಸಿತ್ತು. ನಿಜವಾಗಿ, ಉಗ್ರರಿಗೆ ನಾವು ಇವತ್ತು ಕೊಡುತ್ತಿರುವ ‘ಮತಾಂಧ’ ಎಂಬ ಸಾಮಾನ್ಯ ವ್ಯಾಖ್ಯಾನವೇ ಅಂತಿಮವಲ್ಲ ಎಂಬುದನ್ನು ಸಮರ್ಥಿಸುವ ಅಧ್ಯಯನ ಇದು. ಓರ್ವ ವ್ಯಕ್ತಿ ಉಗ್ರನಾಗುವುದಕ್ಕೆ ಧರ್ಮಾತೀತವಾದ ಹಲವಾರು ಕಾರಣಗಳಿವೆ. ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಪ್ರಾದೇಶಿಕ ಮತ್ತಿತರ ಸಂಗತಿಗಳು ಇವುಗಳಲ್ಲಿ ಮುಖ್ಯವಾದುವು. ದಲಿತರಲ್ಲಿ ಒಂದಷ್ಟು ಮಂದಿ ಇವತ್ತು ಸಂಘಪರಿವಾರದೊಂದಿಗೆ ಸೇರಿ ಕೊಂಡಿರುವುದರ ಹಿಂದೆ ಕೆಲಸ ಮಾಡಿರುವುದೂ ಇವೇ ಕಾರಣಗಳು. ಗುರುತುಹೀನರಾದ ದಲಿತ ಯುವಕರಿಗೆ ಐಡೆಂಟಿಟಿ ಕ್ರೈಸಿಸ್ ಎದುರಾಗುವುದು ಸಹಜ. ಸಮಾಜ ತಮ್ಮನ್ನು ಗುರುತಿಸಬೇಕು ಎಂಬ ಅವರ ಬಯಕೆ ಅಸಾಧುವೂ ಅಲ್ಲ. ಈ ಸಂದರ್ಭವನ್ನು ಸಂಘಪರಿವಾರ ಚೆನ್ನಾಗಿ ದುರುಪಯೋಗಪಡಿಸಿಕೊಂಡಿತು ಮತ್ತು ಈಗಲೂ ದುರುಪಯೋಗಿಸುತ್ತಿದೆ. ಅದು ಅವರೊಳಗೆ ಮುಸ್ಲಿಮ್ ವಿರೋಧಿ ಚಿಂತನೆಗಳನ್ನು ತುಂಬಿಸಿತು. ಅವರಿಗೆ ಸಣ್ಣ ಪುಟ್ಟ ಸ್ಥಾನಮಾನಗಳನ್ನು ಕೊಟ್ಟಿತು. ಸಾಮಾಜಿಕ ಐಡೆಂಟಿಟಿಗಾಗಿ ಹಂಬಲಿಸುತ್ತಿದ್ದ ದಲಿತ ಯುವಕರನ್ನು ಸಂಘಪರಿವಾರದ ಈ ಧೋರಣೆ ಆಕರ್ಷಿಸಿತು. ಸಂಘ ಪರಿವಾರದ ಮುಸ್ಲಿಮ್ ವಿರೋಧಿ ನಿಲುವುಗಳು ಇವರ ಮೇಲೆ ಹೆಚ್ಚೆಚ್ಟು ಪ್ರಭಾವ ಬೀರತೊಡಗಿದಂತೆಯೇ ಇವರ ಗೌರವಗಳೂ ಹೆಚ್ಚಾದುವು. ಇವರು ದಿನೇ ದಿನೇ ನಿರ್ದಿಷ್ಟ ಚಿಂತನೆಗಳ (ಉಗ್ರ) ದಾಸರಾಗತೊಡಗಿದರು. ಇವರ ಲ್ಲೊಂದು ಬಗೆಯ ಹೀರೋಯಿಸಂ ಬೆಳೆಯತೊಡಗಿತು. ಹಿಂದೂಗಳ ಮೇಲೆ ಮುಸ್ಲಿಮರು ಎಸಗಿರುವ ಕ್ರೌರ್ಯದ ಕತೆಗಳನ್ನು (ಸಂಘಪರಿವಾರ ಹೇಳಿಕೊಟ್ಟದ್ದು) ಇವರು ತಮ್ಮ ಗೆಳೆಯರಲ್ಲಿ ಹೇಳುವುದು ಮತ್ತು ಅವರು ಅಚ್ಚರಿಯಿಂದ ಆಲಿಸುವುದೆಲ್ಲ ಇವರಿಗೆ ವಿಚಿತ್ರ ಸುಖ ಕೊಡತೊಡಗಿತು. (ಇಸ್ಲಾಮಿನ ಮೇಲೆ ಪಾಶ್ಚಾತ್ಯರು ಎಸಗುತ್ತಿರುವ ಷಡ್ಯಂತ್ರಗಳ ಹೊಸ ಹೊಸ ಕತೆಗಳನ್ನು ಹೇಳುವ ಕೆಲವು ಯುವಕರಲ್ಲೂ ಇದೇ ಹೀರೋಯಿಸಂನ ತಹತಹಿಕೆ ಇದೆ.) ಸಂದರ್ಭ ಸಿಕ್ಕಾಗಲೆಲ್ಲ ಅಥವಾ ಸಂದರ್ಭವನ್ನು ಸೃಷ್ಟಿಸಿಕೊಂಡೇ ಇವರನ್ನು ಸಂಘಪರಿವಾರ ಕ್ರಮೇಣ ಉಗ್ರಗಾಮಿ ಕೃತ್ಯಗಳಿಗೆ ಬಳಸಿಕೊಳ್ಳತೊಡಗಿತು. ನಿಜವಾಗಿ ‘ಉಗ್ರಗಾಮಿ’ ಮನಸ್ಥಿತಿಯೆಂಬುದು ಐಸಿಸ್, ಅಲ್‍ಕಾಯ್ದಾಗಳಿಗೆ ಸೇರ್ಪಡೆಗೊಳ್ಳುವವರಲ್ಲಿ ಮಾತ್ರ ನಾವು ಹುಡುಕಬೇಕಾದುದಲ್ಲ. ಆ ಮನಃಸ್ಥಿತಿ ಎಲ್ಲೆಡೆಯಿದೆ. ಪಾಶ್ಚಾತ್ಯ ದಬ್ಬಾಳಿಕೆಯನ್ನು ತೋರಿಸಿ ಒಂದು ಕಡೆ ಉಗ್ರಗಾಮಿಗಳನ್ನು ಹುಟ್ಟು ಹಾಕಲಾಗುತ್ತಿದ್ದರೆ ಇನ್ನೊಂದು ಕಡೆ ಮೊಗಲರನ್ನು, ಗೋವನ್ನು, ಮಸೀದಿಗಳನ್ನು ತೋರಿಸಿ ಉಗ್ರಗಾಮಿಗಳನ್ನು ಉತ್ಪಾದಿಸಲಾಗುತ್ತಿದೆ. ವಿಷಾದ ಏನೆಂದರೆ, ಒಂದನ್ನು ಅಪಾಯಕಾರಿಯೆಂದೂ ಮತ್ತು ಇನ್ನೊಂದನ್ನು ದೇಶಪ್ರೇಮಿ ಎಂದೂ ನಾವು ವಿಭಜಿಸಿರುವುದು. ನಿಜವಾಗಿ ‘ಉಗ್ರಗಾಮಿ’ಗೆ ನಿರ್ದಿಷ್ಟ ಧರ್ಮ, ಭಾಷೆ, ವೇಷ-ಭೂಷಣಗಳ ಕಟ್ಟುಪಾಡುಗಳೇನೂ ಇಲ್ಲ. ಗಡ್ಡ ಇದ್ದವನೂ ಉಗ್ರನಾಗಬಲ್ಲ. ನಾಮ ಹಾಕಿದವನೂ ಆಗಬಲ್ಲ. ಆ ಮನಃಸ್ಥಿತಿ ಸಂದರ್ಭವನ್ನಷ್ಟೇ ಕಾಯುತ್ತಿರುತ್ತದೆ. ನಿಜವಾಗಿ, ಕೋಮುಗಲಭೆಯನ್ನು ಬಯಸುವ ಉಗ್ರಗಾಮಿಗಳಷ್ಟೇ ಐಸಿಸ್ ಅನ್ನು ಆರಾಧನಾಭಾವದಿಂದ ಕಾಣುವ ಉಗ್ರಗಾಮಿಗಳೂ ಅಪಾಯಕಾರಿ.
  ನೀವು ಒಪ್ಪಿ-ಬಿಡಿ.

No comments:

Post a Comment