Tuesday, May 22, 2012

ಮೀಸಲಾತಿ ಕೇಳುತ್ತಾರಲ್ಲ, ಇವರ ಅರ್ಹತೆಯಾದರೂ ಏನು?

         ದೈನಿಕ್ ಜಾಗರಣ್ ಪತ್ರಿಕೆಯ ಹಿರಿಯ ವರದಿಗಾರ ಜರ್ನೈಲ್ ಸಿಂಗ್ ರು  2009 ಎಪ್ರಿಲ್ ನಲ್ಲಿ  ಗೃಹಸಚಿವ ಚಿದಂಬರಮ್   ಮೇಲೆ ಶೂ ಎಸೆದಾಗ, ದೇಶದಾದ್ಯಂತದ ಮಾಧ್ಯಮಗಳು 1984ರ ಸಿಕ್ಖ್ ಹತ್ಯಾಕಾಂಡವನ್ನು ಮತ್ತೊಮ್ಮೆ ಚರ್ಚೆಗೆ ಎತ್ತಿಕೊಂಡವು..
         ಪ್ರಕರಣ ಇದೊಂದೇ ಅಲ್ಲ, 1984 ಅಕ್ಟೋಬರ್ 30ರಂದು ಕಾವಲುಗಾರ ಸತ್ವಂತ್ ಸಿಂಗ್ ನ  ಗುಂಡಿಗೆ ಇಂದಿರಾ ಗಾಂಧಿ ಬಲಿಯಾದ ಬಳಿಕ 3 ದಿನಗಳ ಕಾಲ ದೆಹಲಿಯಲ್ಲಿ ಸಿಕ್ಖರನ್ನು ಹುಡುಕಿ ಹುಡುಕಿ ಕೊಲ್ಲಲಾಯಿತು. ಕಾನ್ಪುರ, ಬೊಕಾರೋಗಳಲ್ಲಿ ಸಿಕ್ಖರ ಮಾರಣಹೋಮ ನಡೆಯಿತು. ಇದಕ್ಕಿಂತ 5 ತಿಂಗಳ ಮೊದಲು ಜೂನ್ 6ರಂದು ಸಿಕ್ಖರ ಪವಿತ್ರ ಕ್ಷೇತ್ರ ಸ್ವರ್ಣಮಂದಿರದ ಮೇಲೆ ಇಂದಿರಾ ಗಾಂಧಿಯವರ ಆದೇಶದ ಮೇರೆಗೆ ಕಮಾಂಡೋ ದಾಳಿ ನಡೆಯಿತು. ಪಂಜಾಬ್ ನ  ಪ್ರತ್ಯೇಕತೆಗಾಗಿ ಸಶಸ್ತ್ರ ದಾಳಿ ನಡೆಸುತ್ತಿದ್ದ ಖಲಿಸ್ತಾನ್ ಪಡೆಯ ಬಿಂದ್ರನ್ ವಾಲೆಯನ್ನು ಮಂದಿರದೊಳಗೇ ಗುಂಡಿಕ್ಕಿ ಕೊಲ್ಲಲಾಯಿತು.. ಆದರೆ ಸಿಕ್ಖರು ಬಿಂದ್ರನ್ ವಾಲೆಯ ಸಾವನ್ನು ಓರ್ವ ಟೆರರಿಸ್ಟ್ ನ  ಸಾವು ಎಂದು ವ್ಯಾಖ್ಯಾನಿಸಿ ಸುಮ್ಮನಾಗಲಿಲ್ಲ. ಜನರನ್ನು ಗುಂಡಿಟ್ಟು ಕೊಂದು, ಪೋಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸ್ವರ್ಣಮಂದಿರದಲ್ಲಿ ಅವಿತು ಕೊಳ್ಳುವ ಅಪರಾಧಿಯನ್ನು ಇಂದಿರಾ ಹತ್ಯೆ ನಡೆಸಿದ್ದಾರೆ ಅನ್ನಲಿಲ್ಲ. ಒಂದು ತಿಂಗಳ ಮೊದಲೇ ದಾಳಿಯ ಸೂಚನೆಯನ್ನು ಸರಕಾರ ಕೊಟ್ಟಿರುವುದರಿಂದ ಬಿಂದ್ರನ್ ವಾಲೆ ಸ್ವರ್ಣಮಂದಿರದಿಂದ ಹೋರಬರ ಬೇಕಿತ್ತು, ತನ್ನ ಭಯೋತ್ಪಾದನಾ ಕೃತ್ಯಗಳಿಗೆ ಮಂದಿರವನ್ನು ಆತ ಅಡ್ಡೆಯಾಗಿ ಬಳಸಿಕೊಂಡದ್ದು ತಪ್ಪು ಎಂದು ವ್ಯಾಖ್ಯಾನಿಸುತ್ತಾ ಅವರು ಸುಮ್ಮನೆ ಕೂರಲಿಲ್ಲ. ಬದಲು,
        ಜಾಗತಿಕವಾಗಿ ಅಪಾರ ಖ್ಯಾತಿ, ಮನ್ನಣೆ ಪಡಕೊಂಡಿರುವ ಹಿರಿಯ ಪತ್ರಕರ್ತ ಖುಷ್ವಂತ್ ಸಿಂಗ್ ರು  ದಾಳಿಯನ್ನು ಖಂಡಿಸಿ ಸರಕಾರ ತನಗೆ ನೀಡಿದ್ದ ಪರಮೊನ್ನತ ಪ್ರಶಸ್ತಿಯನ್ನು ಹಿಂತಿರುಗಿಸಿದರು. ಆಂಧ್ರಪ್ರದೇಶದಲ್ಲಿ I A S  ಅಧಿಕಾರಿಯಾಗಿದ್ದ ಗುರುತೇಜ್ ಸಿಂಗ್, I P S ಅಧಿಕಾರಿಯಾಗಿದ್ದ ಸಿಮ್ರನ್ಜಿತ್ ಸಿಂಗ್ ಮಾನ್ ರು  ದಾಳಿಯನ್ನು ಪ್ರತಿಭಟಿಸಿ ಹುದ್ದೆ ತ್ಯಜಿಸಿದರು. ಬಾಂಗ್ಲಾದೇಶ ರಚನೆಗೆ ಕಾರಣವಾದ 1971ರ ಭಾರತ-ಪಾಕ್ ಯುದ್ಧದ ಹೀರೋ ಜಸ್ಜೀತ್ ಸಿಂಗ್ ಅರೋರ ಬಹಿರಂಗವಾಗಿಯೇ ಸರಕಾರವನ್ನು ತರಾಟೆಗೆ ತೆಗೆದು ಕೊಂಡರು. ಇಷ್ಟಕ್ಕೂ ಬಿಂದ್ರನ್ ವಾಲೆ ನಿರಪರಾಧಿಯೇನೂ ಆಗಿರಲಿಲ್ಲ. ತನ್ನ ಭಯೋತ್ಪಾದನಾ ಕೃತ್ಯಗಳಗೆ ಅಡ್ಡೆಯಾಗಿ ಸ್ವರ್ಣಮಂದಿರವನ್ನು ಬಳಸಿಕೊಂಡಿದ್ದ. ಅಲ್ಲಿ ಶಸ್ತ್ರಾಸ್ತ್ರಗಳನ್ನು ಪೇರಿಸಿಟ್ಟಿದ್ದ. ಆದರೂ ಸಿಕ್ಖರು ಸ್ವರ್ಣಮಂದಿರದ ಮೇಲಿನ ಕಮಾಂಡೋ ದಾಳಿಯನ್ನು ಸಹಿಸಲಿಲ್ಲ. ಮಾತ್ರವಲ್ಲ, 5 ತಿಂಗಳ ಬಳಿಕ ನಡೆದ ಸಿಕ್ಖ್ ಹತ್ಯಾಕಾಂಡವನ್ನು ಅವರೆಷ್ಟು ಪ್ರಬಲವಾಗಿ ಪ್ರತಿಭಟಿಸಿದರೆಂದರೆ, 2009ರ ಲೋಕಸಭಾ ಚುನಾವಣೆಯಲ್ಲಿ ಸಜ್ಜನ್ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ಗೆ  ಕಾಂಗ್ರೆಸ್ ಟಿಕೆಟ್ ಕೊಡದಂತೆ ತಡೆಯಲು ಯಶಸ್ವಿಯಾದರು. ಸಿಕ್ಖ್ ಗಲಭೆಯಲ್ಲಿ ಪಾತ್ರವಿದೆ ಎಂಬ ಆರೋಪವಷ್ಟೇ ಅವರ ಮೇಲಿದ್ದದ್ದು. ಒಂದು ರೀತಿಯಲ್ಲಿ ಕಳೆದ 28 ವರ್ಷಗಳಿಂದ ಸಿಕ್ಖರು ಹತ್ಯಾಕಾಂಡವನ್ನು ಒಂದು ಇಶ್ಯೂ ಆಗಿ ಜೀವಂತವಿಟ್ಟುಕೊಂಡಿದ್ದಾರೆ. ಸರಕಾರದಿಂದ ಪರಿಹಾರ ಪಡಕೊಳ್ಳಲು ಯಶಸ್ವಿಯಾಗಿದ್ದಾರೆ. ಪ್ರಧಾನಿ ಮನವೋಹನ್ ಸಿಂಗ್ ರೆ ಬಹಿರಂಗವಾಗಿ ಸಿಕ್ಖರ ಕ್ಷಮೆ ಯಾಚಿಸಿದ್ದಾರೆ.
ಆದರೆ
       1992ರಲ್ಲಿ ಉರುಳಿದ ಬಾಬರಿ ಮಸೀದಿಯನ್ನು, 2002ರಲ್ಲಾದ ಗುಜರಾತ್ ಹತ್ಯಾಕಾಂಡವನ್ನು, ಭಯೋತ್ಪಾದನೆಯ ಹೆಸರಲ್ಲಿ ಮುಸ್ಲಿಮ್ ಯುವಕರ ಬಂಧನವನ್ನು ಪ್ರತಿಭಟಿಸುವುದಕ್ಕೆ, ಆ ಇಶ್ಯೂವನ್ನು ಚರ್ಚಾ ವಿಷಯವಾಗಿ ಉಳಿಸಿಕೊಳ್ಳುವುದಕ್ಕೆ ಮುಸ್ಲಿಮರಿಗೆ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ? ಬಾಬರಿ ಧ್ವಂಸವನ್ನು ಖಂಡಿಸಿ ಎಷ್ಟು ಮುಸ್ಲಿಮ್ ಸಂಸದರು ಸಂಸತ್ತಿಗೆ ರಾಜೀನಾಮೆ ಕೊಟ್ಟಿದ್ದಾರೆ? ಗುಜರಾತ್ ನರಮೇಧವನ್ನು ಪ್ರತಿಭಟಿಸಿ ತಮ್ಮ ಸರಕಾರಿ ಹುದ್ದೆಯನ್ನು ತ್ಯಜಿಸಿದ ಎಷ್ಟು ಮುಸ್ಲಿಮರಿದ್ದಾರೆ? ಮುಸ್ಲಿಮರಲ್ಲಿ ವಿಶ್ವಾಸವನ್ನು ತುಂಬುವುದಕ್ಕಾಗಿ ಅಹ್ಮದಾಬಾದ್, ಗೋಧ್ರಾ, ನರೋಡಾ ಪಾಟಿಯಾ.. ಮುಂತಾದ ನಗರಗಳಲ್ಲಿ ಎಷ್ಟು ಮುಸ್ಲಿಮ್ ಸಂಸದರು, ಶಾಸಕರು, ಅಧಿಕಾರಿಗಳು ಪೆರೇಡ್ ನಡೆಸಿದ್ದಾರೆ? ಭಯೋತ್ಪಾದನೆಯ ನೆಪದಲ್ಲಿ ಬಂಧನಕ್ಕೀಡಾಗುತ್ತಿರುವ ಮುಸ್ಲಿಮ್ ಯುವಕರ ಬಗ್ಗೆ, ಅದರ ಹಿಂದಿರುವ ಪೂರ್ವಗ್ರಹ, ಷಡ್ಯಂತ್ರಗಳ ಬಗ್ಗೆ ನಮ್ಮ ಸಂಸದರು ಮಾತಾಡಿದ್ದನ್ನು ಎಲ್ಲಾದರೂ ಕೇಳಿದ್ದೇವಾ?
ಕರ್ನಾಟಕ
ಮಹಾರಾಷ್ಟ್ರ
ಗುಜರಾತ್
ಮಧ್ಯಪ್ರದೇಶ
ರಾಜಸ್ಥಾನ
ಒರಿಸ್ಸಾ
       ಮುಸ್ಲಿಮ್ ಜನಸಂಖ್ಯೆ ಅತ್ಯಂತ ಹೆಚ್ಚಿರುವ ಮತ್ತು ಭೌಗೋಳಿಕ ವಾಗಿಯೂ ವಿಸ್ತಾರವಾಗಿರುವ ಈ 6 ರಾಜ್ಯಗಳಿಂದ ಕಳೆದ 2009ರ ಲೋಕಸಭಾ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಅಭ್ಯರ್ಥಿ ಪಾರ್ಲಿಮೆಂಟ್ ಗೆ  ಆಯ್ಕೆಯಾಗಿಲ್ಲ. 2004ರಲ್ಲಿ 34 ಮಂದಿ ಮುಸ್ಲಿಮ್ ಎಂ.ಪಿ.ಗಳು ಪಾರ್ಲಿಮೆಂಟ್ ಪ್ರವೇಶಿಸಿದ್ದರೆ, ಈ ಬಾರಿ ಬರೇ 28 ಮಂದಿಯಷ್ಟೇ ಇದ್ದಾರೆ. ಈ ದೇಶವನ್ನು ದೀರ್ಘ ಕಾಲ ಆಳಿದ ಕಾಂಗ್ರೆಸ್ ಪಕ್ಷದವರು ಅವರಲ್ಲಿ ಕೇವಲ 12 ಮಂದಿ. ನಿಜವಾಗಿ ಈ ದೇಶದಲ್ಲಿರುವ ಮುಸ್ಲಿಮ್ ಜನಸಂಖ್ಯೆಯನ್ನು ನೋಡಿದರೆ  72 ಮಂದಿಯಾದರೂ ಪಾರ್ಲಿಮೆಂಟ್ ಪ್ರವೇಶಿಸಬೇಕಿತ್ತು. ಯಾಕೆ ಇದು ಸಾಧ್ಯವಾಗುತ್ತಿಲ್ಲ? ಈ ವೈಫಲ್ಯಕ್ಕೆ ಯಾರನ್ನು ದೂರಬೇಕು?  ಕಳೆದ ಲೋಕಸಭಾ ಚುನಾವಣೆಯಲ್ಲಿ 780 ಮಂದಿ ಮುಸ್ಲಿಮ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದ್ದರಿಂದ ಅಭ್ಯರ್ಥಿಗಳ ಕೊರತೆ, ರಾಜಕೀಯ ನಿರಾಸಕ್ತಿ ಅವರ ಸೋಲಿಗೆ ಕಾರಣ ಖಂಡಿತ ಅಲ್ಲ. ಹಾಗಾದರೆ ಇನ್ನಾವುದು? ಮುಸ್ಲಿಮ್ ಅಭ್ಯರ್ಥಿಗೇ ಓಟು ಹಾಕಬೇಕು ಎಂದು ಕನಿಷ್ಠ  ಮುಸ್ಲಿಮರಿಗಾದರೂ ಅನಿಸುವುದಕ್ಕೆ ಪೂರಕವಾಗಿ ಈ ಅಭ್ಯರ್ಥಿಗಳಲ್ಲಿ ಏನೇನು ಅರ್ಹತೆಗಳಿರಬೇಕು? ಅವರಿಂದ ಮುಸ್ಲಿಮ್ ಸಮಾಜ ನಿರೀಕ್ಷಿಸುವುದೇನು? ಈಗಾಗಲೇ ಪಾರ್ಲಿಮೆಂಟನ್ನೋ ವಿಧಾನಸಭೆ ಯನ್ನೋ ಪ್ರವೇಶಿಸಿದ ಎಷ್ಟು ಎಂ.ಪಿ.,  ಎಂ.ಎಲ್.ಎ.ಗಳು ಈ ನಿರೀಕ್ಷೆಗಳನ್ನು ಪೂರ್ತಿಗೊಳಿಸಿದ್ದಾರೆ? ಮುಸ್ಲಿಮ್ ಎಂ.ಪಿ.ಗೂ ಮುಸ್ಲಿಮೇತರ ಎಂ.ಪಿ.ಗೂ ಕಾರ್ಯನಿರ್ವಹಣೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂದಾದರೆ; ಆರ್ಥಿಕವಾಗಿ, ಶೈಕ್ಷಣಿಕವಾಗಿ ದಲಿತರಿಗಿಂತಲೂ ಕೆಳಮಟ್ಟದಲ್ಲಿರುವ ಮುಸ್ಲಿಮ್ ಸಮಾಜದ ಬಗ್ಗೆ ವಿಶೇಷ ಕಾಳಜಿಯನ್ನು ಅವರು ತೋರುವುದಿಲ್ಲವೆಂದಾದರೆ ಮತ್ತೇಕೆ ಮುಸ್ಲಿಮ್ ಅಭ್ಯರ್ಥಿಯ ಪರ ಮುಸ್ಲಿಮರು ವಿಶೇಷ ಆಸಕ್ತಿಯನ್ನು ತೋರಬೇಕು?
         ಎರಡು ತಿಂಗಳ ಹಿಂದೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯ ಜಾಮಾ ಮಸೀದಿಯ ಅಬ್ದುಲ್ಲಾ ಬುಖಾರಿಯವರು ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸಿದ್ದರು. ಆ ಪಕ್ಷದಲ್ಲಿ ಮುಸ್ಲಿಮರಿಗೆ ಹಿತವಿದೆ ಎಂಬಂತೆ ಹೇಳಿಕೆಗಳನ್ನು ಕೊಟ್ಟಿದ್ದರು. ಆಗ ಅವರ ಅಳಿಯ ಉಮರ್ ಅಲಿ ಖಾನ್ ಗೆ  ಸಮಾಜವಾದಿ ಪಕ್ಷವು ಸಹರಾನ್ಪುರದ ಬೆಹೆತ್ ನಲ್ಲಿ ಟಿಕೆಟ್ ನೀಡಿತ್ತು. ಆದರೆ ಚುನಾವಣೆಯಲ್ಲಿ ಅಲಿ ಖಾನ್ ಸೋತದ್ದಷ್ಟೇ ಅಲ್ಲ, ಇಡುಗಂಟನ್ನೇ ಕಳಕೊಂಡರು. ಇದಾಗಿ ಎರಡು ತಿಂಗಳ ಬಳಿಕ ಎಪ್ರಿಲ್ ನಲ್ಲಿ, ಇದೇ ಬುಖಾರಿ ಸಮಾಜವಾದಿ ಪಕ್ಷವನ್ನು ದೂರಿದರು. ಪಕ್ಷವು ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಅಂದರು.
     ಆದರೆ ಅವರ ಸಿಟ್ಟಿಗೆ ನಿಜವಾದ ಕಾರಣ ಅದಾಗಿರಲಿಲ್ಲ ಎಂಬುದು ಆ ಬಳಿಕ ಬಹಿರಂಗವಾಯಿತು. ಬುಖಾರಿಯವರಿಗೆ ತನ್ನ ಸಹೋದರನನ್ನು ರಾಜ್ಯ ಸಭೆಗೆ ಕಳುಹಿಸುವ ಆಸೆ ಇತ್ತು. ತನ್ನ ಅಳಿಯನನ್ನು ವಿಧಾನ ಪರಿಷತ್ ಗೆ  ಕಳುಹಿಸಿ ಅಖಿಲೇಷ್ ಮಂತ್ರಿಮಂಡಲದಲ್ಲಿ ಸ್ಥಾನ ದೊರಕಿಸುವ ಬಯಕೆ ಇತ್ತು. ಆದರೆ ಅವೆರಡೂ ಕೈಗೂಡುವ ಸಾಧ್ಯತೆ ಕ್ಷೀಣಿಸಿದಾಗ ಅವರು ಸಕಲ ಮುಸ್ಲಿಮರ ವಕ್ತಾರರಂತೆ ಹೇಳಿಕೆ ಕೊಟ್ಟರು.
        ನಿಜವಾಗಿ ಇದು ಒಂಟಿ ಘಟನೆಯೇನೂ ಅಲ್ಲ. ಗೆದ್ದು ವಿಧಾನ ಸಭೆಗೋ, ಲೋಕಸಭೆಗೋ ಪ್ರವೇಶಿಸುವ ಮುಸ್ಲಿಮ್ ವ್ಯಕ್ತಿಯೊಬ್ಬ ಮುಸ್ಲಿಮರ ಏಳಿಗೆಗಾಗಿ ಏನೇನೂ ಮಾಡದಿದ್ದರೂ, ಮುಂದಿನ ಬಾರಿ ಪಕ್ಷ ಟಿಕೆಟು ನಿರಾಕರಿಸಿದರೆ ಅದನ್ನು, ‘ಮುಸ್ಲಿಮರಿಗೆ ಮಾಡುವ ಅನ್ಯಾಯ' ಎಂದು ವ್ಯಾಖ್ಯಾನಿಸುವುದಿದೆ. ತನಗೆ ಮಂತ್ರಿಸ್ಥಾನ ಸಿಗದಿದ್ದರೆ, `ಮಂತ್ರಿಮಂಡಲದಲ್ಲಿ ಮುಸ್ಲಿಮರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ' ಅನ್ನುವುದಿದೆ. ಒಂದು ರೀತಿಯಲ್ಲಿ ತಮ್ಮ ತಮ್ಮ ಸ್ವಾರ್ಥವನ್ನೇ ಮುಸ್ಲಿಮ್ ಪ್ರಾತಿನಿಧ್ಯವನ್ನಾಗಿ, ತಮಗೆ ಸಿಗದ ಅವಕಾಶವನ್ನು ಮುಸ್ಲಿಮ್ ಸಮಾಜಕ್ಕೆ ಸಿಗದ ಅವಕಾಶವನ್ನಾಗಿ ಬಿಂಬಿಸಿ ಮುಸ್ಲಿಮ್ ಸಮಾಜವನ್ನು ವಂಚಿಸಿದವರೇ ಹೆಚ್ಚಿದ್ದಾರೆ. ಹೀಗಿರುವಾಗ, ಮುಸ್ಲಿಮರು, ಮುಸ್ಲಿಮ್ ಅಭ್ಯರ್ಥಿಯ ಬಗ್ಗೆ ಆಸಕ್ತಿ ತಾಳಬೇಕಾದರೂ ಯಾಕೆ? ಅವರು ಪಾರ್ಲಿಮೆಂಟನ್ನೋ ಅಸೆಂಬ್ಲಿಯನ್ನೋ ಪ್ರವೇಶಿಸುವುದರಿಂದ ಮುಸ್ಲಿಮರ ಅಭಿವೃದ್ಧಿಯನ್ನು, ಅವರ ಮೇಲಿನ ಅನ್ಯಾಯವನ್ನು ಪ್ರತಿಭಟಿಸುವಲ್ಲಿ, ಅವರ ಧ್ವನಿಯಾಗುವಲ್ಲಿ ಯಾವ ವ್ಯತ್ಯಾಸವೂ ಆಗುತ್ತಿಲ್ಲವೆಂದಾದರೆ, ಅವರನ್ನೇ ಮುಸ್ಲಿಮರೇಕೆ ಆಯ್ಕೆ ಮಾಡಬೇಕು? ಗುಜರಾತ್ ಹತ್ಯಾಕಾಂಡವನ್ನು ಪ್ರತಿಭಟಿಸಿ ಗುಜರಾತ್ ನ  I A S  ಅಧಿಕಾರಿ ಹರ್ಷಮಂದರ್ ತನ್ನ ಹುದ್ದೆಗೇ ರಾಜೀನಾಮೆ ಕೊಟ್ಟರು. ಮೋದಿ  ಸರಕಾರದ ಕಿರುಕುಳ, ಹಿಂಸೆಗಳನ್ನು ಸಹಿಸುತ್ತಾ, ವ್ಯವಸ್ಥೆ ಹೊರಿಸಿದ ಹತ್ತಾರು ಸುಳ್ಳು ಕೇಸುಗಳನ್ನು ಎದುರಿಸುತ್ತಾ ಗುಜರಾತ್ ಹತ್ಯಾಕಾಂಡದ ಬಲಿಪಶುಗಳಿಗಾಗಿ ಜೀವ ಬೆದರಿಕೆಯ ಮಧ್ಯೆಯೂ ಹೋರಾಡುತ್ತಿರುವುದು ತೀಸ್ತಾ ಸೆಟಲ್ವಾಡ್. ಸಂಘಪರಿವಾರದ ಭಯೋತ್ಪಾದನೆಯನ್ನು ಬಹಿರಂಗ ವೇದಿಕೆಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಪ್ರಸ್ತಾಪಿಸಿ, ಮುಸ್ಲಿಮ್ ಯುವಕರ ಬಂಧನ ಸತ್ರವನ್ನು ಖಂಡಿಸಿ ಧೈರ್ಯದಿಂದ ಹೇಳಿಕೆ ಕೊಡುತ್ತಿರುವುದು ಅರ್ಜುನ್ ಸಿಂಗ್. ಇವರೆಲ್ಲ ಮುಸ್ಲಿಮರೇನೂ ಅಲ್ಲ. ಆದರೆ ಇವರ ಧ್ವನಿ, ಕರ್ತೃತ್ವ ಶಕ್ತಿ, ದಮನಿತರ ಬಗೆಗಿನ ಸಹಾನುಭೂತಿ ಓರ್ವ ಮುಸ್ಲಿಮ್ ಸಂಸದರಲ್ಲೋ ಶಾಸಕರಲ್ಲೋ ಅಧಿಕಾರಿಯಲ್ಲೋ ಕಾಣುತ್ತಿಲ್ಲ. ಅಂದಹಾಗೆ ಬಾಬರಿ ಧ್ವಂಸವನ್ನು ಖಂಡಿಸಿ ಎಷ್ಟು ಮಂದಿ ಮುಸ್ಲಿಮ್ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು? ಕಾಂಗ್ರೆಸ್ ಪಕ್ಷದ ದ್ರೋಹವನ್ನು ಕನಿಷ್ಠ ಬಹಿರಂಗವಾಗಿ ಖಂಡಿಸುವುದಕ್ಕಾದರೂ ಇವರಲ್ಲಿ ಯಾರಿಗೆಲ್ಲ ಸಾಧ್ಯವಾಯಿತು? ಮಾತಾಡಲೇಬೇಕಾದ ಸಂದರ್ಭದಲ್ಲೂ ಮೌನ ವಹಿಸುವ ಪ್ರತಿನಿಧಿಗಳಿಂದ ಸಮುದಾಯಕ್ಕೆ ಆಗುವ ಲಾಭವಾದರೂ ಏನು? 15% ಇರುವ ಮುಸ್ಲಿಮರನ್ನು ಸಂತುಷ್ಟಗೊಳಿಸುವುದರಿಂದ ಏನೇನೂ ಲಾಭ ಇಲ್ಲದ, ಒಂದೊಮ್ಮೆ ಓಟಿಗೂ ನಿಂತರೂ ಬರೇ ಮುಸ್ಲಿಮರ ಓಟಿನಿಂದ ಗೆದ್ದು ಬರಲು ಸಾಧ್ಯವೂ ಇಲ್ಲವೆಂಬ ಸತ್ಯಾಂಶ ಗೊತ್ತಿದ್ದೂ ಓರ್ವ ಸಂಜೀವ್ ಭಟ್, ಹರ್ಷಮಂದರ್, ತೀಸ್ತಾ ಸೆಟಲ್ವಾಡ್ ರು  ಅನ್ಯಾಯದ ವಿರುದ್ಧ ಧೈರ್ಯದ ನಿಲುವು ತೆಗೆದುಕೊಳ್ಳುತ್ತಾರೆಂದಾದರೆ, ಅಂಥ ಉದಾಹರಣೆಗಳೇಕೆ ಮುಸ್ಲಿಮರಲ್ಲಿ ಕಾಣಿಸುತ್ತಿಲ್ಲ? ಖುಶ್ವಂತ್ ಸಿಂಗ್, ಸಿಮ್ರನ್ಜಿತ್ ಸಿಂಗ್ ಮಾನ್, ಗುರುತೇಜ್ ಸಿಂಗ್..ರಂಥವರೇಕೆ ನಮ್ಮಲ್ಲಿಲ್ಲ? ವಿಧಾನಸಭೆಗಳಲ್ಲಿ, ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಕಡಿಮೆಯಾಗುತ್ತಿರುವುದರಿಂದ (ಕರ್ನಾಟಕದಲ್ಲಿಪ್ರಸಕ್ತ  ಕೇವಲ 8 ಮುಸ್ಲಿಮ್ ಶಾಸಕರಿದ್ದಾರೆ)  ಅಲ್ಲೂ ಮುಸ್ಲಿಮರಿಗೆ ಮೀಸಲಾತಿ ಸಿಗಬೇಕೆಂಬ ವಾದಗಳು ಪಾರ್ಲಿಮೆಂಟ್ ಗೆ  60 ವರ್ಷವಾದ ಈ ಸಂದರ್ಭದಲ್ಲಿ ಕೇಳಿ ಬರುತ್ತಿರುವಾಗ, ಅಂಥ ಮೀಸಲಾತಿಯಿಂದ ಸಮುದಾಯಕ್ಕೆ ಯಾವ ಲಾಭವಿದೆ ಎಂಬ ಪ್ರಶ್ನೆಯೂ ಪ್ರಸ್ತುತವಾಗಬೇಕು. ಸ್ವಾರ್ಥಿಗಳು ಮೀಸಲಾತಿಯನ್ನು ದುರುಪಯೋಗಿಸದಂತೆ ತಡೆಯದಿದ್ದರೆ ಆ ಮೀಸಲಾತಿಯಿಂದ ಸಮುದಾಯಕ್ಕೆ ಯಾವ ಪ್ರಯೋಜನವೂ ಇಲ್ಲ.
ಸ್ವರ್ಣ ಮಂದಿರದಂತೆ ಭಯೋತ್ಪಾದಕರು ಅಡಗಿರದ, ಶಸ್ತ್ರಾಸ್ತ್ರಗಳಿಲ್ಲದ ಬಾಬರಿಯನ್ನು ಉರುಳಿಸಿದವರು ಇವತ್ತು ಅದಕ್ಕಾಗಿ ಹೆಮ್ಮೆ ಪಡುತ್ತಿದ್ದಾರೆ. ಉರುಳಿ 20 ವರ್ಷಗಳಾದರೂ ಪ್ರಾಥಮಿಕ ಹಂತದಿಂದ ತನಿಖೆ ಇನ್ನೂ ಮೇಲೆ ಬಂದಿಲ್ಲ. ಕಳೆದ 20 ವರ್ಷಗಳಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿದ ಮುಸ್ಲಿಮ್ ಸಂಸದರು ಒಂದುಗೂಡಿ ಇದನ್ನು ಒಂದು ಇಶ್ಯೂ ಆಗಿ ಪರಿಗಣಿಸುತ್ತಿದ್ದರೆ ಈ ಪರಿಸ್ಥಿತಿ ಬರುವ ಸಾಧ್ಯತೆ ಇತ್ತೇ?


No comments:

Post a Comment