Tuesday, October 20, 2015

ಪ್ರಭುತ್ವದ ವರ್ತನೆ, ಸಾಹಿತಿಗಳ ಪ್ರತಿಭಟನೆ ಮತ್ತು ಟೀಕೆ

ಮಂಗಲೇಶ್ ದರ್ಬಾಲ್
ರಾಜೇಶ್ ಜೋಶಿ
ವರ್ಯಮ್ ಸಿಂಗ್ ಸಂಧು
ಜಸ್ವಿಂದರ್
      ಇವರಿಗೆಲ್ಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿರುವುದು ಯಾರ ಅವಧಿಯಲ್ಲಿ? ನಯನತಾರ ಸೆಹಗಲ್-ನೆಹರೂರ ಮೊಮ್ಮಗಳು, ಅಶೋಕ್ ವಾಜಪೇಯಿ- ಕಾಂಗ್ರೆಸ್ ಏಜೆಂಟ್, ಚಂಪಾ- ಎಡಪಂಥೀಯವಾದಿ, ರಹಮತ್ ತರೀಕೆರೆ- ಪ್ರಗತಿ ಪರ, ಮತ್ತೊಬ್ಬರು- ಮೋದಿ ವಿರೋಧಿ.. ಹೀಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮರಳಿಸುತ್ತಿರುವ ಸಾಹಿತಿಗಳನ್ನು ಪಟ್ಟಿ ಮಾಡಿ ಟೀಕಿಸುತ್ತಿರುವ ಮಂದಿ ಹೇಳುತ್ತಿರುವುದೆಲ್ಲ ನಿಜವೇ? ಈಗಾಗಲೇ ಪ್ರಶಸ್ತಿ ಮರಳಿಸಿರುವ ಸುಮಾರು ನೂರರಷ್ಟು ಸಾಹಿತಿಗಳಲ್ಲಿ ಯಾರೊಬ್ಬರಿಗೂ ನೈತಿಕತೆಯೇ ಇಲ್ಲವೇ? ಸಾರಾ ಜೋಸೆಫ್, ಸಚ್ಚಿದಾನಾಂದನ್, ಉದಯ ಪ್ರಕಾಶ್, ಕುಂವೀ.. ಎಲ್ಲರೂ ಕಾಂಗ್ರೆಸ್ಸಿಗರೇ ಅಥವಾ ಎಡಪಂಥೀಯರೇ? ಪ್ರಶಸ್ತಿ ವಾಪಸು ನಿರ್ಧಾರವನ್ನು ಸಲ್ಮಾನ್ ರುಶ್ದಿ ಬೆಂಬಲಿಸಿದ್ದಾರಲ್ಲ, ಅವರು ಯಾರ ಏಜೆಂಟ್? ‘ಭಾರತ ತಾಲಿಬಾನೀಕರಣಗೊಳ್ಳುತ್ತಿದೆ’ ಎಂದು ಮೋದಿ ಸರಕಾರದ ಧೋರಣೆಯನ್ನು ತಸ್ಲೀಮಾ ನಸ್ರೀನ್ ಟೀಕಿಸಿರುವುದು ಯಾರ ಪ್ರಚೋದನೆಯಿಂದ? ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಅಸೂಯೆಯೇ ಕಾರಣವೇ ಅಥವಾ ಇನ್ನಿತರ ಗಂಭೀರ ಕಾರಣಗಳೇನಾದರೂ ಇವೆಯೇ? ಹಾಗಂತ, ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮೊದಲು ಈ ದೇಶದಲ್ಲಿ ಅಹಿತಕರ ಘಟನೆಗಳೇ ನಡೆದಿಲ್ಲ ಎಂದು ಯಾರೂ ಹೇಳುತ್ತಿಲ್ಲ. 1919ರ ಜಲಿಯನ್‍ವಾಲಾ ಬಾಗ್‍ನಿಂದ 2015ರ ದಾದ್ರಿಯ ಅಖ್ಲಾಕ್‍ನ ವರೆಗೆ, 1984 ಸಿಕ್ಖ್ ಹತ್ಯಾಕಾಂಡದಿಂದ ಹಿಡಿದು 2002ರ ಗುಜರಾತ್ ಹತ್ಯಾಕಾಂಡದ ವರೆಗೆ ಈ ದೇಶದಲ್ಲಿ ಕ್ರೌರ್ಯಗಳು ಧಾರಾಳ ನಡೆದಿವೆ. ಇವನ್ನು ಖಂಡಿಸಿ ಆಯಾ ಸಂದರ್ಭಗಳಲ್ಲಿ ಪ್ರತಿಭಟನೆಗಳೂ ವ್ಯಕ್ತವಾಗಿವೆ. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವನ್ನು ಖಂಡಿಸಿ ಗಾಂಧೀಜಿಯವರು ತಮಗೆ ದೊರಕಿದ್ದ ಕೈಸರ್ ಎ ಹಿಂದ್ ಮತ್ತು ಇನ್ನೆರಡು ಪ್ರಶಸ್ತಿಗಳನ್ನು ಬ್ರಿಟಿಷ್ ಸರಕಾರಕ್ಕೆ ಮರಳಿಸಿದ್ದರು. ರವೀಂದ್ರನಾಥ್ ಟಾಗೂರರು ನೈಟ್‍ಹುಡ್ ಪದವಿಯನ್ನೇ ವಾಪಸು ಕೊಟ್ಟಿದ್ದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಶಿವರಾಮ ಕಾರಂತರು ತಮಗೆ ಸಂದಿರುವ ಪ್ರಶಸ್ತಿಯನ್ನು ಮರಳಿಸಿದ್ದರು. ಇಂದಿರಾ ಗಾಂಧಿಯವರ ಸ್ವರ್ಣ ಮಂದಿರ ಕಾರ್ಯಾಚರಣೆಯನ್ನು (ಆಪರೇಶನ್ ಬ್ಲೂ ಸ್ಟಾರ್) ಪ್ರತಿಭಟಿಸಿ 1984ರಲ್ಲಿ ಖುಷ್ವಂತ್ ಸಿಂಗ್‍ರು ಪದ್ಮಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು. ಇದಾಗಿ ಸುಮಾರು 3 ದಶಕಗಳ ಬಳಿಕ ಇದೀಗ ಸಾಹಿತಿಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಇಲ್ಲಿ ಗಮನಾರ್ಹ ಅಂಶವೊಂದಿದೆ. ಅಹಿತಕರ ಘಟನೆಗಳಿಗೆ ಪ್ರಭುತ್ವವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಯಾವಾಗಲೂ ಮಹತ್ವ ಇರುತ್ತದೆ. ಬಿಜೆಪಿಯ ಸಂಸದರಾದ ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್, ಗಿರಿರಾಜ್ ಸಿಂಗ್, ನಿರಂಜನ್ ಜ್ಯೋತಿ,ಸಂಗೀತ್ ಸೋಮ್..  ಮುಂತಾದವರ ಮಾತುಗಳು ಹೇಗಿವೆ? ದಾದ್ರಿ ಘಟನೆಯ ಬಗ್ಗೆ ಬಿಜೆಪಿಯ ಸಂಸದರು ಮತ್ತು ಶಾಸಕರ ಪ್ರತಿಕ್ರಿಯೆಗಳು ಹೇಗಿದ್ದುವು? ಅಹಿತಕರ ಘಟನೆಗಳು ನಡೆಯುವುದು ಬೇರೆ, ಅದನ್ನು ಸಮರ್ಥಿಸುವಂಥ ಪ್ರತಿಕ್ರಿಯೆಗಳನ್ನು ಕೊಡುವುದು ಬೇರೆ. ಬಿಜೆಪಿಗೂ ಇತರ ಆಡಳಿತ ಪಕ್ಷಗಳಿಗೂ ನಡುವೆ ಇರುವ ದೊಡ್ಡ ವ್ಯತ್ಯಾಸ ಇದು. ಆದ್ದರಿಂದಲೇ, ‘ಇತರ ಪಕ್ಷಗಳ ಆಡಳಿತದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದಿಲ್ಲವೇ, ಆವಾಗೇಕೆ ಈ ರೀತಿಯಲ್ಲಿ ಪ್ರಶಸ್ತಿಯನ್ನು ಹಿಂತಿರುಗಿಸಿಲ್ಲ’ ಎಂಬ ಪ್ರಶ್ನೆಗೆ, ‘ಆ ಸಂದರ್ಭದಲ್ಲಿ ಆಡಳಿತ ಪಕ್ಷ ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಹೇಗಿದ್ದುವು..’ ಎಂಬ ಮರು ಪ್ರಶ್ನೆಯೂ ಅಷ್ಟೇ ತೀವ್ರತೆಯಿಂದ ಕೇಳಬೇಕಾಗುತ್ತದೆ. ಯೋಗ, ಮಾಂಸಾಹಾರ, ದಾದ್ರಿ ಅಥವಾ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಬಿಜೆಪಿಯಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆಗಳು ಎಷ್ಟು ಪ್ರಚೋದನಾತ್ಮಕವಾಗಿವೆಯೆಂದರೆ, ಆಡಳಿತ ಪಕ್ಷವಾಗಿ ಗುರುತಿಸಿಕೊಳ್ಳುವುದಕ್ಕೆ ಅದು ಅನರ್ಹ ಎಂದು ಸಾರುವಷ್ಟು. ತನ್ನ ನಿಲುವನ್ನು ಒಪ್ಪದವರನ್ನು ಪಾಕಿಸ್ತಾನಕ್ಕೋ ಅರಬಿ ಸಮುದ್ರಕ್ಕೋ ಕಳುಹಿಸುವ ಮಾತನ್ನು ಅದರ ಸಂಸದರೇ ವ್ಯಕ್ತಪಡಿಸುತ್ತಿದ್ದಾರೆ. ಆಡಳಿತ ಪಕ್ಷವೊಂದು ನಿರ್ದಿಷ್ಟ ಧರ್ಮದ ಅಥವಾ ನಿರ್ದಿಷ್ಟ ಸಿದ್ಧಾಂತದ ಪರವಾಗಿಯಷ್ಟೇ ಮಾತಾಡುವಾಗ, ಅದರ ಅಪಾಯವನ್ನು ಸಾಹಿತ್ಯ ವಲಯ ಗುರುತಿಸಿ, ಪ್ರತಿಭಟಿಸುವುದು ಯಾಕೆ ತಪ್ಪಾಗಬೇಕು? ಸಿಕ್ಖ್ ಹತ್ಯಾಕಾಂಡ, ತುರ್ತು ಪರಿಸ್ಥಿತಿ, ಭಾಗಲ್ಪುರ, ಮುಂಬೈ ಗಲಭೆಗಳ ಸಂದರ್ಭದಲ್ಲಿ ಸಾಹಿತಿಗಳು ಈ ರೀತಿಯಾಗಿ ಪ್ರಶಸ್ತಿ ಹಿಂತಿರುಗಿಸಿಲ್ಲ ಎಂಬುದು, ಈಗ ಹಿಂತಿರುಗಿಸಬಾರದು ಎಂಬುದಕ್ಕೆ ಮಾನದಂಡ ಆಗುತ್ತದೆಯೇ ಮತ್ತು ಆಗಬೇಕೇ? ಈ ಹಿಂದೆ ಮಾಡಿಲ್ಲದ ಯಾವುದನ್ನೂ ಇನ್ನು ಮುಂದೆಯೂ ಮಾಡಬಾರದೇ? ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಸ್ವಚ್ಛ ಭಾರತ ಅಭಿಯಾನ ಮಾಡಿಲ್ಲ ಎಂಬ ಕಾರಣಕ್ಕಾಗಿ ನರೇಂದ್ರ ಮೋದಿಯವರನ್ನು ಟೀಕಿಸಬಹುದೇ? ಮೋದಿಯವರು ವಿದೇಶ ಪ್ರಯಾಣ ಮಾಡಿದಷ್ಟು ವಾಜಪೇಯಿಯವರು ಮಾಡಿಲ್ಲ ಎಂಬುದು ಟೀಕೆಗೆ ಅರ್ಹ ವಿಷಯವೇ? ಮೋದಿಯವರ ಮನ್‍ಕೀ ಬಾತನ್ನು ಈ ಮಾನದಂಡದ ಆಧಾರದಲ್ಲಿ ವಿಶ್ಲೇಷಿಸುವುದಾದರೆ ಏನೆಂದು ಕರೆಯಬೇಕು? ವಾಜಪೇಯಿಯವರು ಮಾಡದೇ ಇರುವುದನ್ನು ಮೋದಿಯವರೇಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಹೇಗಾದೀತು? ಸಾಹಿತಿಗಳು ಈ ಸಮಾಜದ ಭಾಗ ಎಂದು ನಾವು ಒಪ್ಪುವುದಾದರೆ, ಈ ಸಮಾಜದ ತಲ್ಲಣಗಳಿಗೆ ಅವರು ಧ್ವನಿಯಾಗಬಾರದು ಎಂದು ವಾದಿಸುವುದು ಇಬ್ಬಂದಿತನವಾಗುತ್ತದೆ. ಸಮಾಜದ ಆಗು-ಹೋಗುಗಳ ಬಗ್ಗೆ ಜನಸಾಮಾನ್ಯರಿಗಿಂತ ಮುಂಚಿತವಾಗಿ ಅರಿತುಕೊಳ್ಳುವ ಸಾಮರ್ಥ್ಯ ಸಾಹಿತ್ಯ ವಲಯಕ್ಕಿದೆ. ಕಳೆದು ಒಂದು ವರ್ಷದಲ್ಲಿ ನರೇಂದ್ರ ಮೋದಿ ಸರಕಾರ ಸಾಗುತ್ತಿರುವ ದಿಕ್ಕನ್ನು ಪರಿಶೀಲಿಸಿದರೆ, ಸಾಹಿತ್ಯ ವಲಯದಿಂದ ವ್ಯಕ್ತವಾಗಿರುವ ಸಿಟ್ಟು ಆತುರದ್ದು ಎಂದು ಅನ್ನಿಸುತ್ತಿಲ್ಲ. ಪಕ್ಷಪಾತಿಯಾಗಿಯೂ ಕಾಣಿಸುತ್ತಿಲ್ಲ. ನಿರ್ದಿಷ್ಟ ಅಜೆಂಡಾವೊಂದನ್ನು ಆತುರಾತುರವಾಗಿ ಜಾರಿಗೊಳಿಸುವ ತುರ್ತೊಂದು ಈ ಸರಕಾರದಲ್ಲಿ ಕಾಣಿಸುತ್ತಿದೆ. ಈ ಅಜೆಂಡಾ ಎಷ್ಟು ಸಂವಿಧಾನಬದ್ಧ ಮತ್ತು ದೇಶದ ವೈವಿಧ್ಯತೆಗೆ ಎಷ್ಟು ಪೂರಕ ಎಂಬ ಪ್ರಶ್ನೆ ಹಲವಾರು ಬಾರಿ ಎದ್ದಿದೆ. ದಾದ್ರಿ ಪ್ರಕರಣಕ್ಕೆ ಈ ಸರಕಾರದ ಸಂಸದರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಈ ಪ್ರಶ್ನೆಯನ್ನು ಇನ್ನಷ್ಟು ಬಲಗೊಳಿಸಿದೆ. ಅಷ್ಟಕ್ಕೂ, ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರ ಹತ್ಯೆಯಷ್ಟೇ ಸಾಹಿತಿಗಳ ಪ್ರಶಸ್ತಿ ವಾಪಸಾತಿಗೆ ಕಾರಣ ಎಂದು ಯಾವ ಸಾಹಿತಿಯೂ ಹೇಳಿಲ್ಲ. ಸಾಹಿತಿಗಳ ಜೀವದಷ್ಟೇ ಸಾಹಿತ್ಯದ ಓದುಗರು ಮತ್ತು ಓದುಗರಲ್ಲದ ಜನಸಾಮಾನ್ಯರ ಜೀವವೂ ಅಷ್ಟೇ ಮುಖ್ಯ. ಆದ್ದರಿಂದಲೇ ಸಾಹಿತಿಗಳು ದಾದ್ರಿ ಘಟನೆ ಮತ್ತು ಹೆಚ್ಚುತ್ತಿರುವ ಅಸಹಿಷ್ಣು ವಾತಾವರಣವನ್ನು ಪ್ರಶಸ್ತಿ ವಾಪಸಿಗೆ ಕಾರಣವಾಗಿ ಮುಂದಿಟ್ಟಿದ್ದಾರೆ. ಆದರೆ ಬಿಜೆಪಿ ಮತ್ತು ಅದರ ಬೆಂಬಲಿಗರು ಈ ಹಿಂದಿನ ಹಿಂಸಾಕೃತ್ಯಗಳನ್ನು ಎತ್ತಿ ತೋರಿಸಿ ಸಾಹಿತಿಗಳ ನೈತಿಕ ಮಟ್ಟವನ್ನು ಪ್ರಶ್ನಿಸುತ್ತಿದ್ದಾರೆ. ಹಾಗಂತ, ಈ ಹಿಂದಿನ ಸರಕಾರದ ಮಂತ್ರಿಗಳು ಅಂಥ ಕೃತ್ಯಗಳನ್ನು ಸಮರ್ಥಿಸುವ ಧಾಟಿಯಲ್ಲಿ ಮಾತಾಡಿದ್ದರೆ ಎಂಬ ಬಹುಮುಖ್ಯ ಪ್ರಶ್ನೆಯನ್ನು ಅವರು ಜಾಣತನದಿಂದ ಅಡಗಿಸುತ್ತಿದ್ದಾರೆ. ಅಂದಹಾಗೆ,
        1968ರಲ್ಲಿ ಮೆಕ್ಸಿಕೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು.
        1968 ಅಕ್ಟೋಬರ್ 16ರಂದು ಬೆಳಿಗ್ಗೆ ಅಮೇರಿಕದ ಕರಿವರ್ಣದ ಓಟಗಾರ ಟೋಮಿ ಸ್ಮಿತ್‍ರು 200 ವಿೂಟರ್ ಓಟವನ್ನು 19.83 ಸೆಕೆಂಡ್‍ಗಳಲ್ಲಿ ಕ್ರಮಿಸಿ ವಿಶ್ವದಾಖಲೆಯೊಂದಿಗೆ ಪ್ರಥಮ ಸ್ಥಾನ ಪಡೆದರು. ಆಸ್ಟ್ರೇಲಿಯಾದ ಬಿಳಿಯ ಓಟಗಾರ ಪೀಟರ್ ನಾರ್ಮನ್ ದ್ವಿತೀಯ ಮತ್ತು ಅಮೇರಿಕದ ಇನ್ನೋರ್ವ ಕರಿವರ್ಣದ ಓಟಗಾರ ಜಾನ್ ಕಾರ್ಲೋಸ್ ತೃತೀಯ ಸ್ಥಾನ ಪಡೆದರು. ಬಳಿಕ ಪ್ರಶಸ್ತಿ ಪಡೆಯುವ ವೇಳೆ ಟೋಮಿ ಸ್ಮಿತ್ ಮತ್ತು ಜಾನ್ ಕಾರ್ಲೋಸ್‍ರು ಕಪ್ಪು ಗ್ಲೌಸ್ ಧರಿಸಿದ್ದ ಕೈಯನ್ನು ಎತ್ತಿ ಹಿಡಿದರು. ಮಾತ್ರವಲ್ಲ, ಪದಕ ವಿತರಣೆಯ ಸಂದರ್ಭದಲ್ಲಿ ರಾಷ್ಟ್ರಪತಾಕೆಯನ್ನು ನೋಡುವ ಬದಲು ನೆಲದತ್ತ ದೃಷ್ಟಿ ನೆಟ್ಟರು. ಒಲಿಂಪಿಕ್ಸ್ ಇತಿಹಾಸದಲ್ಲಿ 'ಬ್ಲ್ಯಾಕ್ ಪವರ್ ಸೆಲ್ಯೂಟ್' ಎಂದೇ ಪ್ರಸಿದ್ಧವಾದ ಘಟನೆ ಇದು. ಪದಕ ಪಡೆಯಲು ಬರುವಾಗ ಅವರಿಬ್ಬರೂ ಶೂ ಕಳಚಿ ಕೇವಲ ಕಪ್ಪು ಸಾಕ್ಸ್ ನಲ್ಲಿ ವೇದಿಕೆಯೇರಿದ್ದರು. ಅಮೇರಿಕದ ಕರಿವರ್ಣೀಯರ ಬಡತನವನ್ನು ಜಗತ್ತಿಗೆ ತಿಳಿಸುವುದಕ್ಕಾಗಿ ಅವರು ಆ ರೀತಿ ವರ್ತಿಸಿದ್ದರು. ಕರಿವರ್ಣೀಯರ ಸ್ವಾಭಿಮಾನದ ಸಂಕೇತವಾಗಿ ತನ್ನ ಕುತ್ತಿಗೆಗೆ ಟೋಮಿ ಸ್ಮಿತ್ ಕಪ್ಪು ಪಟ್ಟಿಯನ್ನು ಧರಿಸಿದ್ದರೆ, ಕಾರ್ಲೋಸ್‍ರಂತೂ ಕರಿವರ್ಣದ ಕಾರ್ಮಿಕರಿಗೆ ನೈತಿಕ ಬೆಂಬಲ ಸಾರುವುದಕ್ಕಾಗಿ ಮತ್ತು ಅವರ ಮೇಲಿನ ದೌರ್ಜನ್ಯವನ್ನು ಖಂಡಿಸುವುದಕ್ಕಾಗಿ ತನ್ನ ಟ್ರ್ಯಾಕ್ ಸ್ಯೂಟ್‍ನ ಝಿಪ್ ಹಾಕದೇ ವೇದಿಕೆಯೇರಿದ್ದರು. ನಾರ್ಮನ್‍ರು ಆಸ್ಟ್ರೇಲಿಯಾ ಸರಕಾರದ ಬಿಳಿಯ ಪರ ಧೋರಣೆಯನ್ನು ಖಂಡಿಸುವ ವ್ಯಕ್ತಿಯಾಗಿದ್ದರು. ಆದ್ದರಿಂದ ಆ ಮೂವರು ಅಥ್ಲೀಟ್‍ಗಳೂ ಮಾನವ ಹಕ್ಕನ್ನು ಪ್ರತಿಪಾದಿಸುವ ಬ್ಯಾಡ್ಜ್ ಅನ್ನು ತಮ್ಮ ಉಡುಪಿನಲ್ಲಿ ಧರಿಸಿಕೊಂಡಿದ್ದರು. ವಿಶೇಷ ಏನೆಂದರೆ, ಸ್ಮಿತ್ ಮತ್ತು ಕಾರ್ಲೋಸ್‍ರು ಒಲಿಂಪಿಕ್ಸ್ ಗಾಗಿ ಅಮೇರಿಕದಿಂದ ಹೊರಡುವಾಗಲೇ ಕರಿವರ್ಣೀಯರ ವಿರುದ್ಧದ ದೌರ್ಜನ್ಯವನ್ನು ಖಂಡಿಸುವುಕ್ಕಾಗಿ ಒಲಿಂಪಿಕ್ಸ್ ವೇದಿಕೆಯನ್ನು ಬಳಸಬೇಕೆಂದು ನಿರ್ಧರಿಸಿದ್ದರು. ಅದಕ್ಕಾಗಿ ಕಪ್ಪು ಗ್ಲೌಸ್ ಧರಿಸಿ ಕೈ ಎತ್ತಬೇಕೆಂದು ತೀರ್ಮಾನಿಸಿದ್ದರು. ಆದರೆ ಕಾರ್ಲೋಸ್‍ರು ಗ್ಲೌಸ್ ಕೊಂಡೊಯ್ಯಲು ಮರೆತರು. ಆದ್ದರಿಂದ ಸ್ಮಿತ್‍ರ ಎಡಗೈಯ ಗ್ಲೌಸ್ ಅನ್ನು ಕಾರ್ಲೋಸ್‍ರು ಧರಿಸಿ ಎಡಗೈ ಎತ್ತುವಾಗ ಸ್ಮಿತ್ ಬಲಗೈ ಎತ್ತಿದರು. ಆ ಇಡೀ ಘಟನೆ ಮರುದಿನ ಜಾಗತಿಕ ಸುದ್ದಿಯಾಯಿತು. ಮಾಧ್ಯಮಗಳ ಮುಖಪುಟದಲ್ಲಿ ಆ ಪದಕ ಪ್ರಧಾನ ಸಮಾರಂಭ ವಿಸ್ತೃತ ಸುದ್ದಿ ಸಹಿತ ಪ್ರಕಟವಾಯಿತು. ಕರಿವರ್ಣೀಯರು ಸಾಂಪ್ರದಾಯಿಕವಾಗಿ ಮಾಡುವ ಸೆಲ್ಯೂಟನ್ನು ಪದಕ ಸ್ವೀಕರಿಸುವ ಸಂದರ್ಭದಲ್ಲಿ ಮಾಡಿದುದಕ್ಕಾಗಿ ಈ ಇಬ್ಬರನ್ನು ಪ್ರೇಕ್ಷಕರು ಗೇಲಿ ಮಾಡಿದರು. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮತಿಯ (IOC) ಅಧ್ಯಕ್ಷ ಅವೇರಿ ಬುಂಡೇಜ್‍ರು ಈ ಇಬ್ಬರ ವರ್ತನೆಯನ್ನು ರಾಜಕೀಯ ಪ್ರೇರಿತ ಎಂದು ಖಂಡಿಸಿದರು. ಅಮೇರಿಕವು ಕೂಡಲೇ ಒಲಿಂಪಿಕ್ಸ್ ತಂಡದಿಂದ ಅವರನ್ನು ಕಿತ್ತು ಹಾಕಬೇಕೆಂದು ಆಗ್ರಹಿಸಿದರು. ಅಮೇರಿಕ ಒಪ್ಪಿಕೊಳ್ಳದಿದ್ದಾಗ ಇಡೀ ಅಥ್ಲೀಟ್ ತಂಡವನ್ನೇ ನಿಷೇಧಿಸುವುದಾಗಿ ಬೆದರಿಸಿದರು. ಕೊನೆಗೆ ಅವರಿಬ್ಬರನ್ನೂ ಅಮೇರಿಕನ್ ಅಥ್ಲೀಟ್ ತಂಡದಿಂದ ಹೊರಹಾಕಲಾಯಿತು. ಅಮೇರಿಕದಲ್ಲಂತೂ ಅವರ ವಿರುದ್ಧ ತೀವ್ರ ಟೀಕೆ-ನಿಂದನೆಗಳು ವ್ಯಕ್ತವಾದುವು. Time ಮ್ಯಾಗಸಿನ್ ಕೂಡ ಇವರಿಬ್ಬರನ್ನು ಖಳನಾಯಕರಂತೆ ಚಿತ್ರಿಸಿತು. ಅವರ ಕುಟುಂಬಕ್ಕೆ ಕೊಲೆ ಬೆದರಿಕೆಯ ಕರೆಗಳು ಬಂದುವು. ಹೀಗೆ ಕರಿವರ್ಣೀಯರ ಮೇಲಿನ ದೌರ್ಜನ್ಯ ಪ್ರಶ್ನಿಸಿದ್ದಕ್ಕಾಗಿ ಮತ್ತು ಸಮಾನ ಮಾನವ ಹಕ್ಕುಗಳನ್ನು ಪ್ರತಿಪಾದಿಸಿದ್ದಕ್ಕಾಗಿ ಅವರಿಬ್ಬರಿಗೆ ಅಘೋಷಿತ ಬಹಿಷ್ಕಾರವನ್ನು ಹೇರಲಾಯಿತು. ಆಸ್ಟ್ರೇಲಿಯಾದ ನಾರ್ಮನ್ ಅಂತೂ ಕೇವಲ ಬ್ಯಾಡ್ಜ್ ಧರಿಸಿದ್ದಕ್ಕಾಗಿ ಆಸ್ಟ್ರೇಲಿಯನ್ ಆಡಳಿತದಿಂದ ತೀವ್ರ ಅವಕೃಪೆಗೆ ಒಳಗಾದರು. 1972 ಒಲಿಂಪಿಕ್ಸ್ ಗಾಗಿ ನಡೆಸಲಾದ ಆಯ್ಕೆ ಪರೀಕ್ಷೆಗಳಲ್ಲಿ 13 ಬಾರಿ ತೇರ್ಗಡೆಯಾದರೂ ಅವರನ್ನು ಕಡೆಗಣಿಸಲಾಯಿತು. ತನ್ನ ಸೈಲೆಂಟ್ ಗೆಸ್ಚರ್ ಎಂಬ ಜೀವನ ಚರಿತ್ರೆಯಲ್ಲಿ ಟೋಮಿ ಸ್ಮಿತ್‍ರು ಆ ದಿನಗಳ ತಲ್ಲಣಗಳನ್ನು ಬಿಡಿಬಿಡಿಯಾಗಿ ತೆರೆದಿಟ್ಟಿದ್ದಾರೆ. ರಾಜಕೀಯ ಕ್ರೌರ್ಯವನ್ನು ಓರ್ವ ಆಟಗಾರ ಪ್ರಶ್ನಿಸಿದರೆ ಆಗಬಹುದಾದ ಅನಾಹುತಗಳ ಚಿತ್ರಣವನ್ನು ಅವರ ಜೀವನ ಚರಿತ್ರೆ ನಮ್ಮ ಮುಂದಿಡುತ್ತದೆ. ಹಾಗಂತ, ಆ ಘಟನೆಯನ್ನು ನಾವು ಅಮೇರಿಕಕ್ಕೆ ಮಾತ್ರ ಸೀಮಿತಗೊಳಿಸಿ ನೋಡಬೇಕಿಲ್ಲ. ಭಾರತದ ಇಂದಿನ ಸ್ಥಿತಿಯೂ ಇದುವೇ. ಕ್ರೀಡಾಪಟುಗಳು ಕ್ರೀಡೆಯ ಬಗ್ಗೆ ಮಾತ್ರ ಮಾತಾಡಬೇಕು, ಸಾಹಿತಿಗಳು ಸಾಹಿತ್ಯ ಬಗ್ಗೆ, ನ್ಯಾಯವಾದಿಗಳು ನ್ಯಾಯದ ಬಗ್ಗೆ, ಮುಸ್ಲಿಮರು ಮುಸ್ಲಿಮರ ಬಗ್ಗೆ, ಬಿಜೆಪಿಗರು ಮೋದಿಯ ಬಗ್ಗೆ.. ಮಾತ್ರ ಮಾತಾಡಬೇಕೆಂದು ಬಿಜೆಪಿ ಮತ್ತು ಅದರ ಬೆಂಬಲಿಗರು ಇವತ್ತು ಬಯಸುತ್ತಿದ್ದಾರೆ. ಆದ್ದರಿಂದಲೇ ಪ್ರಶಸ್ತಿ ವಾಪಸಾತಿಯು ರಾಜಕೀಯ ಪ್ರೇರಿತ ಎಂದು ಟೀಕಿಸುತ್ತಿದ್ದಾರೆ. ಅಲ್ಲದೇ, ಪ್ರಶಸ್ತಿ ಮರಳಿಸಿದ ಸಾಹಿತಿಗಳು ಬಿಜೆಪಿಯ ವಿರೋಧಿಗಳು ಎಂಬ ಹಸಿ ಸುಳ್ಳನ್ನು ಹರಡುತ್ತಿದ್ದಾರೆ. ಅಷ್ಟಕ್ಕೂ,
      ಸಾಹಿತ್ಯ ಪ್ರಶಸ್ತಿಯನ್ನು ಹಿಂತಿರುಗಿಸಿದ ಮಂಗಲೇಶ್ ದರ್ಬಾಲ್, ರಾಜೇಶ್ ಜೋಷಿ, ವರ್ಯಮ್ ಸಿಂಗ್ ಸಂಧು ಮತ್ತು ಜಸ್ವಿಂದರ್‍ರು ವಾಜಪೇಯಿ ಮತ್ತು ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದಿದ್ದರು ಎಂಬ ಸತ್ಯವನ್ನು ಈ ಮಂದಿ ಎಲ್ಲೂ ಉಲ್ಲೇಖಿಸುತ್ತಲೇ ಇಲ್ಲ..

2 comments:

  1. ಸುಳ್ಳು ಹೇಳುವವರಿಗೆ ತರ್ಕದ ಅವಶ್ಯಕತೆಯಿದೆ ಎಂಬ ಮಾತನ್ನು ನಾನು ನಂಬುತ್ತೇನೆ. ಸತ್ಯವನ್ನು ಸದ್ಯವನ್ನು ಗ್ರಹಿಸಲು ಪ್ರತಿಬಾರಿಯೂ ಚರಿತ್ರೆಯನ್ನು ನೆನಪಿಸಿಕೊಳ್ಳುವ ಪುರುಸೊತ್ತು, ಅಗತ್ಯ ಏನಿದೆ?

    ReplyDelete
  2. ಚರಿತ್ರೆ ಬಿಟ್ಟರೆ ತಮ್ಮ hidden agenda ಸಮರ್ತಿಸುವುದಅವರ ಬಳಿಿಇನ್ನೇನಿದೆ?

    ReplyDelete