Wednesday, May 20, 2015

ಒಂದು ಹೋರಾಟ, ನೂರಾರು ನಿರೀಕ್ಷೆಗಳು...

   ಅಬ್ದುಲ್ ಅಝೀಝ್
 ಯಾಸೀನ್
 ಶರ್ಫುದ್ದೀನ್
 ಆಸಿಫ್ ಹುಸೈನ್
 ಮಕ್ಬೂಲ್ ಅಹ್ಮದ್
  `ಪದಾಧಿಕಾರಿಗಳ ಆಯ್ಕೆ' ಎಂಬ ಶೀರ್ಷಿಕೆಯಡಿ ಸಾಮಾನ್ಯವಾಗಿ ಇಂಥ ಹೆಸರುಗಳು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದಿದೆ. ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ.. ಎಂದು ಮುಂತಾಗಿ ಅವರ ಹೊಣೆಗಾರಿಕೆಯ ವಿವರಗಳೂ ಅದರಲ್ಲಿರುತ್ತವೆ. ಬಹುತೇಕ ಒಂದೇ ವಿಚಾರಧಾರೆಯವರೇ ಇಂಥ ಸಮಿತಿಗಳಲ್ಲಿರುತ್ತಾರೆ. ವಿಶೇಷ ಏನೆಂದರೆ, ಈ ಮೇಲಿನವರ ವಿಚಾರಧಾರೆ ಒಂದೇ ಅಲ್ಲ. ಇವರು ಪ್ರತಿನಿಧಿಸುವ ಸಂಘಟನೆಗಳೂ ಒಂದೇ ಅಲ್ಲ. ಆದರೂ ಇವರೆಲ್ಲ ತಮ್ಮ ಊರನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವುದಕ್ಕಾಗಿ ಜೊತೆಗೂಡಿದ್ದಾರೆ. ‘ಕೆಡುಕು ಮುಕ್ತ ಹೋರಾಟ ಸಮಿತಿ’ ಎಂಬೊಂದು ತಂಡವನ್ನು ಇವರು ರಚಿಸಿ ಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕುದ್ರೋಳಿ ಎಂಬ ಪ್ರದೇಶವನ್ನು ಗುರಿಯಾಗಿಸಿಕೊಂಡು ರಚಿಸಲಾದ ಈ ಸಮಿತಿಯನ್ನು ಎಪ್ರಿಲ್ 17 ರಂದು ಉದ್ಘಾಟಿಸಲಾಗಿದೆ. ಕುದ್ರೋಳಿ ವ್ಯಾಪ್ತಿಯ 5 ಮಸೀದಿಗಳ ಅಧ್ಯಕ್ಷರುಗಳೂ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹಾಗಂತ, ಈ ಮಸೀದಿಗಳ ವಿಚಾರಧಾರೆಗಳು ಒಂದೇ ಅಲ್ಲ. ಅನೇಕ ಬಾರಿ ಈ ವಿಚಾರಧಾರೆಗಳು ಮುಖಾಮುಖಿಯಾಗಿವೆ. ವೈಚಾರಿಕ ಬಿಕ್ಕಟ್ಟುಗಳೂ, ತರ್ಕಗಳೂ ಮತ್ತು ಪರಸ್ಪರರ ನಡುವೆ ಸಣ್ಣ ಮಟ್ಟಿನ ಬೇರ್ಪಡುವಿಕೆಗಳೂ ನಡೆದಿವೆ. ಇಷ್ಟಿದ್ದೂ ಮುಹಮ್ಮದ್ ಬಾಖವಿ, ಉಸ್ಮಾನ್ ದಾರಿಮಿ, ಮುಹಮ್ಮದ್ ರಫೀಕ್ ಮದನಿ, ರಿಯಾಝುಲ್ ಹಕ್ಕ್ ಅನ್ಸಾರಿ, ಮುಫ್ತಿ ಅಬ್ದುಲ್ ಮನ್ನಾನ್.. ಮುಂತಾದ ವಿಭಿನ್ನ ವಿಚಾರಧಾರೆಯ ಧರ್ಮ ಗುರುಗಳು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇಡೀ ಕುದ್ರೋಳಿ ಪ್ರದೇಶವನ್ನು 9 ಮೊಹಲ್ಲಗಳಾಗಿ ವಿಭಜಿಸಲಾಗಿದೆ. ಪ್ರತಿ ಮೊಹಲ್ಲಗಳಿಗೂ ಸಂಚಾಲಕ, ಉಪಸಂಚಾಲಕರನ್ನು ನೇಮಿಸಲಾಗಿದೆ. ಅಲ್ಲದೆ, ಪ್ರದೇಶದ ನಾರಾಯಣ ಕರ್ಕೇರ ಮುಂತಾದವರನ್ನು ಸೇರಿಸಿಕೊಂಡು ‘ಕೆಡುಕು ಮುಕ್ತ ಸೌಹಾರ್ದ ಸಮಿತಿ’ಯನ್ನೂ ರಚಿಸಲಾಗುತ್ತಿದೆ. ಕಾರ್ನರ್ ಮೀಟಿಂಗ್‍ಗಳು, ಹಿರಿಯರ ಸಭೆಗಳು, ಮಹಿಳೆ, ವಿದ್ಯಾರ್ಥಿ ಮತ್ತು ಯುವಕರ ಸಭೆಗಳನ್ನು ನಡೆಸಲಾಗುತ್ತಿದೆ. ಕುದ್ರೋಳಿ ಪರಿಸರದ ಗಾಂಜಾ ಅಡ್ಡೆಗಳಿಗೆ ಸಮಿತಿಯ ಸದಸ್ಯರು ಭೇಟಿ ಕೊಡುತ್ತಿದ್ದಾರೆ. ಮೆಡಿಕಲ್‍ಗಳಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ. ಜಿಲ್ಲಾಧಿಕಾರಿ, ಡಿಸಿಪಿಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇವೆಲ್ಲ ಎಷ್ಟು ಪರಿಣಾಮ ಬೀರಿದೆಯೆಂದರೆ, ಈಗಾಗಲೇ ಗಾಂಜಾದ ಎರಡು ಅಡ್ಡೆಗಳು ಬಾಗಿಲು ಮುಚ್ಚಿವೆ. ಈ ಪ್ರದೇಶದ ಮಾದಕ ಪದಾರ್ಥಗಳ ಮಾರಾಟಗಾರರೂ ಮತ್ತು ಸೇವನೆಗಾರರಲ್ಲಿ ಒಂದು ಬಗೆಯ ಭೀತಿ ಉಂಟಾಗಿದೆ. ಮಾದಕ ಪದಾರ್ಥಗಳ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಮುಖತಃ ಭೇಟಿಯಾಗುವುದು, ಇದರಿಂದ ದೂರ ನಿಲ್ಲಲು ನೆರವು ನೀಡುವುದು ಮತ್ತು ಕೇಳದಿದ್ದರೆ ಕಾನೂನಿನ ಕೈಗೆ ಒಪ್ಪಿಸುವ ಈ ಸಮಿತಿಯ ನಿರ್ಧಾರವು ಸರ್ವತ್ರ ಶ್ಲಾಘನೆಯ ಪಾತ್ರವಾಗಿದೆ. ನಿಜವಾಗಿ, ರಾಜ್ಯದಲ್ಲಿಯೇ ಒಂದು ಅಪರೂಪದ ಬೆಳವಣಿಗೆ ಇದು. ಅಷ್ಟಕ್ಕೂ, ಕೆಡುಕು ಎಂಬುದು ಕುದ್ರೋಳಿ ಪ್ರದೇಶದಲ್ಲಿ ಮಾತ್ರ ಕಾಣುವ ಸಮಸ್ಯೆಯಲ್ಲ. ಮಾದಕ ವ್ಯಸನಕ್ಕೆ ತುತ್ತಾದ ಮತ್ತು ಅದರ ವ್ಯವಹಾರ ಮಾಡುವ ಪ್ರದೇಶಗಳು ಈ ರಾಜ್ಯದಲ್ಲಿ ಅನೇಕ ಕಡೆ ಇವೆ. ಮದ್ಯಪಾನವನ್ನು ಚಟವಾಗಿಸಿ ಕೊಂಡವರು, ಜೂಜಿನಂತಹ ವಿವಿಧ ಕೆಡುಕುಗಳಲ್ಲಿ ತೊಡಗಿಸಿ ಕೊಂಡವರು ಅಸಂಖ್ಯ ಇದ್ದಾರೆ. ಇವರೆಲ್ಲ ಯಾವುದಾದರೊಂದು `ಕುದ್ರೋಳಿ'ಯಲ್ಲಿ ಬದುಕುತ್ತಿರುವವರೇ. ಇಷ್ಟಿದ್ದೂ, ಇವರ ವಿರುದ್ಧ ಸಮಾಜ ಮಾತಾಡಿದ್ದು ಕಡಿಮೆ. ವಿದ್ಯಾರ್ಥಿ-ಯುವಕರು ಈ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದನ್ನು ಪತ್ರಿಕೆಗಳಲ್ಲಿ ಓದಿಯೋ ಕಣ್ಣಾರೆ ಕಂಡೋ ತ್ಚು ತ್ಚು ತ್ಚು ಎಂಬ ಉದ್ಗಾರದೊಂದಿಗೆ ಸುಮ್ಮನಾಗುವ ಸಂಭಾವಿತರೇ ಹೆಚ್ಚಿರುತ್ತಾರೆ. ಹೀಗಿದ್ದೂ  ಈ ಒಂಟಿ ಮನಸುಗಳು ಒಟ್ಟಾಗುವುದಿಲ್ಲ. ಇದಕ್ಕೆ ಭಿನ್ನ ವಿಚಾರಧಾರೆಗಳು, ರಾಜಕೀಯ ಹಿತಾಸಕ್ತಿಗಳು, ಜಾತಿ-ಧರ್ಮಗಳ ಕಟ್ಟುಪಾಡು.. ಮುಂತಾದುವು ಹೇತುವಾಗಿರುತ್ತದೆ. ಆದ್ದರಿಂದಲೇ ಕುದ್ರೋಳಿಯ `ಕೆಡುಕು ಮುಕ್ತ ಹೋರಾಟ ಸಮಿತಿ' ಶ್ಲಾಘನೆಗೆ ಅರ್ಹವಾಗುವುದು. ವಿಚಾರಧಾರೆಯ ಭಿನ್ನತೆಗಿಂತ ಕೆಡುಕಿನ ನಿರ್ಮೂಲನಕ್ಕೆ ಹೆಚ್ಚು ಮಹತ್ವಕೊಟ್ಟ ಈ ಪ್ರದೇಶದ ಮಂದಿ ಅಭಿನಂದನೆಗೆ ಅರ್ಹರೆನಿಸುವುದು.
  `ಸೈಂಟ್‍ಪಿಕ್ ಅಮೇರಿಕನ್' ಎಂಬ ವೆಬ್ ಸೈಟ್‍ನಲ್ಲಿ ಕ್ಯಾಸ್ಸಿ ರೋಡೆನ್‍ಬರ್ಗ್ ಎಂಬವರು 2012 ಎಪ್ರಿಲ್ 30ರಂದು ಓರ್ವ ಯುವಕನ ಮನಮಿಡಿಯುವ ಪತ್ರವೊಂದನ್ನು ಪ್ರಕಟಿಸುತ್ತಾರೆ.
 "ನಾನು ಜ್ಯಾಕ್. ನನ್ನ ಅದೃಷ್ಟ ಚೆನ್ನಾಗಿದೆ. ನಾನು ಮಾದಕ ವ್ಯಸನದ ಚಟದಿಂದ ನಿಧಾನಕ್ಕೆ ಹೊರಬರುತ್ತಿದ್ದೇನೆ. ಕಳೆದ 10 ತಿಂಗಳಿನಿಂದ ನಾನು ಮಾರಿಜುವಾನ ಸೇವಿಸುತ್ತಿಲ್ಲ. ನಾನು ಮಾದಕ ಪದಾರ್ಥಗಳ ಹೆಸರು ಕೇಳಿದ್ದು ಶಾಲಾ ದಿನಗಳಲ್ಲಿ. ಕೊಕೇನ್, ಹೆರಾಯಿನ್, ಗಾಂಜಾಗಳ ಬಗ್ಗೆ ನಾನು ತರಗತಿಗಳಲ್ಲಿ ಕೇಳಿದ್ದೆ. ಆದರೆ ಮಾರಿಜುವಾನ ಎಂಬ ಹೆಸರು ಕೇಳಿದ ನೆನಪಿಲ್ಲ. ಕೇಳಿದ್ದರೂ ಅದರ ಕುರಿತಂತೆ ಭೀತಿ ಪಡುವ ಯಾವ ಸಂಗತಿಗಳೂ ನನ್ನ ಕಿವಿಗೆ ಬಿದ್ದಿರಲಿಲ್ಲ. ಇಂಥ ಪದಾರ್ಥಗಳು ಯಾರಲ್ಲಾದರೂ ಸಿಕ್ಕರೆ ಪೊಲೀಸರು ಬಂಧಿಸುತ್ತಾರೆ ಎಂಬ ಸುದ್ದಿಯನ್ನಷ್ಟೇ ಕೇಳಿದ್ದೆ. ಪೊಲೀಸರಿಗೆ ಗೊತ್ತಾಗದಿದ್ದರೆ ಸಾಕಲ್ಲವೇ ಎಂಬ ನಿಲುವಷ್ಟೇ ನನ್ನದಾಗಿತ್ತು. ಇದರಾಜೆಗೆ ಈ ಮಾದಕ ಪದಾರ್ಥಗಳ ಅಪಾಯಗಳ ಬಗ್ಗೆ ನನ್ನಲ್ಲಿ ಸಣ್ಣ ಮಾಹಿತಿಯೂ ಇರಲಿಲ್ಲ. ಹೀಗಿರುತ್ತಾ ನನ್ನ ತರಗತಿಯ ಸಹಪಾಠಗಳು ಏನನ್ನೊ ಹೀರುವುದನ್ನು ನಾನು ಕಂಡೆ. ನನಗೂ ಕುತೂಹಲವಾಯಿತು. ಆದರೂ ಒಂದು ಬಗೆಯ ಭಯ. ನಾನು ಇಂಟರ್‍ನೆಟ್ ಮೂಲಕ ಹುಡುಕಾಟ ನಡೆಸಿದೆ. ನನಗೆ ಅದರಲ್ಲಿ ಸಿಕ್ಕ ಮಾಹಿತಿ ನನ್ನನ್ನು ಯಾವ ಬಗೆಯ ನಕಾರಾತ್ಮಕ ಚಿಂತನೆಗೆ ದೂಡಿ ಬಿಟ್ಟಿತೆಂದರೆ ಅದನ್ನು ಪರೀಕ್ಷಿಸಿ ನೋಡುವ ಹುಚ್ಚು ಆಸೆ ಉಂಟಾಯಿತು. ಒಂದು ಕಡೆ ವಯೋ ಸಹಜ ಆವೇಶ ಇನ್ನೊಂದು ಕಡೆ ಕುತೂಹಲ. ಇವೆರಡೂ ಸೇರಿ ನನ್ನನ್ನು ಮಾರಿಜುವಾನದತ್ತ ಕೊಂಡೊಯ್ಯಿತು. ನಾನದನ್ನು ಸೇವಿಸಿದೆ. ಮೊದಲ ಸೇವನೆ ಮುಂದಿನ ಸೇವನೆಗೆ ಪ್ರೇರಣೆ ನೀಡಿತು. ನಾನು ಸೇವಿಸುತ್ತಾ ಹೋದೆ. ಕ್ರಮೇಣ ಸೇವನೆಯ ಪ್ರಮಾಣದಲ್ಲಿ ಹೆಚ್ಚಳವಾಗತೊಡಗಿತು. ಟಿ.ವಿ. ವೀಕ್ಷಣೆ, ಕ್ರೀಡೆ, ಶಿಕ್ಷಣ, ಗೆಳೆಯರೊಂದಿಗಿನ ಸಂಬಂಧ ಎಲ್ಲವನ್ನೂ ನಿರ್ಲಕ್ಷಿಸುವ ಹಂತಕ್ಕೆ ತಲುಪಿದೆ. ಹೋಮ್‍ವರ್ಕ್ ಮಾಡುತ್ತಿರಲಿಲ್ಲ. ಶಿಕ್ಷಕರ ಪಾಠಕ್ಕಿಂತ ಮಾರಿಜುವಾನಕ್ಕೆ ಆಸೆ ಪಡುತ್ತಿದ್ದೆ. ಗೆಳೆಯರೊಂದಿಗೆ ಬೆರೆತು ಖುಷಿ ಪಡುವುದಕ್ಕಿಂತ ಅಮಲಿನಲ್ಲಿ ತೇಲಾಡುವುದನ್ನು ಇಷ್ಟಪಡುತ್ತಿದ್ದೆ. ನನ್ನೊಳಗೆ ಏನೇನೋ ಆಗುತ್ತಿದ್ದುವು. ಮನಸ್ಸು ನನ್ನ ಹಿಡಿತದಲ್ಲಿರುತ್ತಿರಲಿಲ್ಲ. ಕಾರಣವಿಲ್ಲದೆಯೇ ಆತ್ಮಹತ್ಯೆಗೆ ಮನಸು ಪ್ರಚೋದಿಸುತ್ತಿತ್ತು. ಈ ಒತ್ತಡವನ್ನು ತಡೆಯಲಾಗದೇ ಆತ್ಮಹತ್ಯೆಗೆ ಪ್ರಯತ್ನಿಸ ತೊಡಗಿದೆ. ಶಾಲೆಯಲ್ಲಿರುವಾಗ ಹತ್ತಿರದ ಗಾರ್ಬೆಜ್‍ಗೆ ಜಂಪ್ ಮಾಡುವಂತೆ ಮನಸು ಒತ್ತಾಯಿಸುತ್ತಿತ್ತು. ಮನೆಗೆ ಹೋದರೆ ತಂದೆಯ ಬಂದೂಕಿನಿಂದ ತಲೆಗೆ ಹೊಡೆದು ಕೊಳ್ಳುವಂತೆ ಮನಸ್ಸು ಹೇಳುತ್ತಿತ್ತು. ನಾಚಿಕೆ ಮತ್ತು ಭಯ ನನ್ನಿಂದ ದೂರವಾಗ ತೊಡಗಿತು. ನಾನು ದುಡ್ಡು  ಕದಿಯತೊಡಗಿದೆ. ತಾಯಿಯಿಂದ ಕದಿಯಲು ಪ್ರಾರಂಭವಾಗಿ ಮುಂದೆ ಅದು ಗೆಳೆಯರ ಮತ್ತು ದಾರಿಹೋಕರಲ್ಲಿಗೂ ಬಂದು ತಲುಪಿತು. ನನ್ನ ತಾಯಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಅವರ ಗಮನಕ್ಕೆ ಈ ಕದಿಯುವಿಕೆ ಬಂದದ್ದೇ ತಡ, ಅವರು ನನ್ನನ್ನು ತಪಾಸಣೆ ಒಳಪಡಿಸಿದರು. ಬೆದರಿಸಿದರು. ಒಂದೋ ಚಿಕಿತ್ಸೆಗೆ ಒಪ್ಪಿಕೊಳ್ಳಬೇಕು ಇಲ್ಲವೇ ಪೆÇಲೀಸರ ಕೈಗೊಪ್ಪಿಸುವೆ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ನಾನು ಕೊನೆಗೂ ಚಿಕಿತ್ಸೆಗೆ ಒಪ್ಪಿಕೊಂಡೆ. ಹಾಗೆ ಆ ವ್ಯಸನದಿಂದ ಹೊರಬಂದೆ.."
 ನಿಜವಾಗಿ, ಇದು ಓರ್ವ `ಜಾಕ್'ನ ಕತೆಯಲ್ಲ. ಇಂಥ ಹತ್ತು ಹಲವು ನಿಜಕತೆಗಳು ಇಂಟರ್‍ನೆಟ್‍ನಲ್ಲಿ ಧಾರಾಳ ಇವೆ. `ಹೈ ಟೈಮ್ಸ್: ಒನ್ ಟೀನ್ಸ್ ಟ್ರು ಸ್ಟೋರಿ ಆಫ್ ಪೋಟ್ ಅಡಿಕ್ಷನ್ ಆಂಡ್ ರಿಕವರಿ’ ಎಂಬ ಶೀರ್ಷಿಕೆಯಲ್ಲಿ ಗ್ರೇಗ್ ಎಂಬ ಮುದ್ದು ಹುಡುಗನ ಮನಮಿಡಿಯುವ ಕತೆಯಿದೆ. `ಕಾನ್‍ಫೆಶ್ಶನ್ ಆಫ್ ಎ ಪೋಟ್ ಎಡಿಕ್ಟ್', `ಮೈ ಮಾರಿಜುವಾನ ಎಡಿಕ್ಷನ್ ಸ್ಟೋರಿ', ‘ಓವರ್ ಕಮಿಂಗ್ ಮೈ ಟೀನೇಜ್ ಡ್ರಗ್ ಎಡಿಕ್ಷನ್...’ ಮುಂತಾದ ಶೀರ್ಷಿಕೆಗಳಲ್ಲಿ ಧಾರಾಳ ಬರಹಗಳಿವೆ. 2013 ಫೆ. 2 ರಂದು ಮಂಗಳೂರಿನ ಪಕ್ಕದ ಪದವಿನಂಗಡಿಯ ಸ್ನೇಹ ಎಂಬ 18ರ ಯುವತಿ ಆತ್ಮಹತ್ಯೆ ಮಾಡಿಕೊಂಡಳು. 9ನೇ ತರಗತಿಯ ವರೆಗೆ ಕಲಿಕೆಯಲ್ಲಿ ಪ್ರಥಮ ಸ್ಥಾನವನ್ನು ಪಡಕೊಂಡಿದ್ದ ಸ್ನೇಹ ಬಳಿಕ ಮಾದಕ ಪದಾರ್ಥದತ್ತ ಅರ್ಕಷಿತಳಾದಳು. ಮನೆಯವರಿಗೆ ಗೊತ್ತಾಗುವಾಗ ಈ ಚಟಕ್ಕೆ ಒಂದೂವರೆ ವರ್ಷಗಳೇ ತಗಲಿತ್ತು. ಮಗು ಎಂದಿನಂತಿಲ್ಲ ಎಂಬ ಅನುಮಾನ ಮೂಡಿ ಹೆತ್ತವರು ಶಾಲೆಯಲ್ಲಿ ವಿಚಾರಿಸಿದಾಗ ದಂಗು ಬಡಿಸುವ ಸತ್ಯಗಳು ಎದುರಾದವು. ಮಗು ಮಧ್ಯಾಹ್ನದ ಬಳಿಕ ಡಿಜೆ ಪಾರ್ಟಿಗಳಿಗೆ ತೆರಳು ತ್ತಿತ್ತು. ಕ್ಲಬ್‍ಗಳಿಗೆ ಹೋಗುತ್ತಿತ್ತು. ತಂದೆ ಗುರುರಾಜ ಉಪಾಧ್ಯಾಯರಿಗೆ ಕುಟುಂಬದೊಂದಿಗೆ ಹೇಳಲು ಅಳುಕು. ಮನೆತನದ ಗೌರವ ಎಲ್ಲಿ ಮಣ್ಣುಪಾಲಾಗುತ್ತೋ ಎಂಬ ಅಂಜಿಕೆ. ಅವರು ಮಗಳನ್ನು ಬೆಂಗಳೂರು ಸಹಿತ ವಿವಿಧ ಆಸ್ಪತ್ರೆಗಳಲ್ಲಿ ತಿಂಗಳುಗಟ್ಟಲೆ ಇರಿಸಿ ಚಿಕಿತ್ಸೆ ಕೊಡಿಸಿದರು. ಡ್ರಗ್ಸ್, ಮದ್ಯಪಾನ, ಗುಟ್ಕಾದಂತಹ ಎಲ್ಲ ಬಗೆಯ ವ್ಯಸನಕ್ಕೂ ತುತ್ತಾಗಿದ್ದ ಮಗಳು ಹಿಂದಿನಂತಾಗಲಿ ಎಂದು ಪ್ರಾರ್ಥಿಸಿದರು. ಆದರೆ ಹೆತ್ತವರಿಗೆ ಗೊತ್ತಾಗದಂತೆ ಮಗಳು ಮನೆಯಿಂದ ತಪ್ಪಿಸಿಕೊಂಡು ಹೊರಗೆ ಹೋಗುತ್ತಿದ್ದಳು. ಕೂಡಿ ಹಾಕಿದರೆ ಮಕ್ಕಳ ಕಲ್ಯಾಣ ಇಲಾಖೆಗೆ ಕರೆ ಮಾಡಿ ದೂರು ಕೊಡುತ್ತಿದ್ದಳು. ಆದರೂ ಈ ಎಲ್ಲವನ್ನೂ ಗುರುರಾಜ್ ಮತ್ತು ಸುನೀತಾ ಎಂಬ ಆ ಹೆತ್ತವರು ಸಹಿಸಿಕೊಂಡಿದ್ದರು. ಫೆ. 2 ರಂದು ತಾಯಿಯೊಂದಿಗೆ ಸ್ನೇಹ
ದುಡ್ಡು ಕೇಳಿದಳು. ನಿರಾಕರಿಸಿದುದಕ್ಕೆ ಸಿಟ್ಟಾಗಿ ಆತ್ಮಹತ್ಯೆ ಮಾಡಿಕೊಂಡಳು.
 ನಿಜವಾಗಿ ಮಾದಕ ವ್ಯಸನವನ್ನು ಅಂಟಿಸಿಕೊಂಡ ‘ಸ್ನೇಹ’ಕ್ಕಿಂತ ಈ ಸಂಗತಿಯನ್ನು ಕುಟುಂಬದ ಮಾನದ ಪ್ರಶ್ನೆಯಾಗಿಸಿಕೊಂಡು ಒಳಗೊಳಗೇ ಕರಗಿದ ಗುರುರಾಜ್ ಹೆಚ್ಚು ಕರುಣೆಗೆ ಅರ್ಹರು. ಮಕ್ಕಳ ಚಟಕ್ಕೆ ಒಳಗೊಳಗೇ ಕೊರಗುತ್ತಾ ಅಯುಷ್ಯ ಕಳೆಯುವ ಹೆತ್ತವರು ನಾವು ವಾಸಿಸುವ ‘ಕುದ್ರೋಳಿ’ಗಳಲ್ಲಿದ್ದಾರೆ. ಆದರೆ ಕುಟುಂಬದ ಗೌರವ, ಮಾನದ ಪ್ರಶ್ನೆಯ ಮುಂದೆ ಅವು ಬಹಿರಂಗಕ್ಕೆ ಬರುತ್ತಿಲ್ಲ. ಅಲ್ಲದೇ, ಇಂಥ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸುವುದಕ್ಕೆ ವಿಚಾರಧಾರೆಗಳು, ಜಾತಿ-ಧರ್ಮಗಳು, ಸಂಘಟನಾ ಗೆರೆಗಳು ಅಡ್ಡ ಬರುತ್ತಿವೆ. ಅಂದಹಾಗೆ, ಕೆಡುಕಿನಲ್ಲಿ ಭಾಗಿಯಾಗಿರುವ ಮಂದಿ ಬಯಸುವುದೂ ಇಂಥ ವಿಭಜನೆಯನ್ನೇ. ಆದ್ದರಿಂದಲೇ,
    ಕುದ್ರೋಳಿಯ `ಕೆಡುಕು ಮುಕ್ತ ಹೋರಾಟ ಸಮಿತಿ' ಇಷ್ಟವಾಗುತ್ತದೆ.

No comments:

Post a Comment