Tuesday, November 26, 2013

ಆರೋಪಿಗಳನ್ನು ಸನ್ಮಾನಿಸುವ ಮೊದಲು 'ಲೀಲಾ'ರನ್ನು ನೆನಪಿಸಿಕೊಳ್ಳಿ ಮೋದಿಯವರೇ

    "..ನರೇಂದ್ರ ಮೋದಿಯವರ ಮೇಲೆ ಭರವಸೆ ಇಟ್ಟಿರುವ ಅನೇಕರಲ್ಲಿ ನಾನೂ ಒಬ್ಬ. ಅವರ ನೇತೃತ್ವದಲ್ಲಿ ಈ ದೇಶ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಕಾಣಲಿ ಎಂದು ಪ್ರಾಮಾಣಿಕವಾಗಿ ಆಶಿಸಿದವನು ನಾನು. ಆದರೆ ಅವರ ‘ನಮೋ ಬೆಂಬಲಿಗರು’ ತಾಲಿ ಬಾನಿಗಳಂತೆ ವರ್ತಿಸುತ್ತಿದ್ದಾರೆ. ಕ್ರಿಮಿನಲ್‍ಗಳನ್ನು ಬೆಂಬಲಿಸುತ್ತಿದ್ದಾರೆ. ಇದು ನನ್ನನ್ನು ತೀವ್ರ ಆಘಾತಕ್ಕೆ ಒಳಪಡಿಸಿದೆ. ಮಾತ್ರವಲ್ಲ, ನನ್ನ ನಿಲುವನ್ನು ಮತ್ತೊಮ್ಮೆ ಪರಾಮರ್ಶಿಸುವಂತೆ ಮಾಡಿದೆ. ಅನ್ಯಾಯವನ್ನು ಬೆಂಬಲಿಸುವ ಮತ್ತು ವೈಭವೀಕರಿಸುವ ಧೋರಣೆಯನ್ನು ನಾನೆಂದೂ ಸಹಿಸಲಾರೆ..
ಲೀಲಾ
        ರೋಮೋ ಪಿಂಟೋ  ಮಂಗಳೂರು
 ಹೋಮ್‍ಸ್ಟೇ ಮೇಲಿನ ದಾಳಿಯ ಆರೋಪದಲ್ಲಿ ಬಂಧಿತರಾದವರನ್ನು ಸನ್ಮಾನಿಸುವುದೇ? ಇದು ಹೇಗೆಂದರೆ, ಕಸಬ್ ಮತ್ತು ಉಸಾಮಾಗೆ ನೋಬೆಲ್ ಕೊಟ್ಟಂತೆ. ಆರೋಪಿಗಳನ್ನು ಸನ್ಮಾನಿಸುವ ಇಂಥ ನಾಯಕರು ನಮ್ಮಲ್ಲಿರುವಾಗ, ಪಾಕಿಸ್ತಾನದ ಭಯೋತ್ಪಾದಕರಿಗೆ ಕೆಲಸವಾದರೂ ಏನಿದೆ? ಅವರು ತಮ್ಮ ತಮ್ಮ ಹೊಣೆಗಾರಿಕೆಗಳಿಗೆ ರಾಜೀನಾಮೆ ನೀಡಬಹುದು. ಯಾಕೆಂದರೆ, ಇವರಿರುವಾಗ ಭಾರತವನ್ನು ಧ್ವಂಸ ಮಾಡುವುದಕ್ಕೆ ಅವರ ಅಗತ್ಯವೇ ಇಲ್ಲ. ಭಾರತದ ರಾಜಕೀಯ ನಾಯಕರು; ಭ್ರಷ್ಟಾ ಚಾರ, ಹತ್ಯಾಕಾಂಡ ಮತ್ತು ಇಂಥ ಕೃತ್ಯಗಳ ಮೂಲಕ ದೇಶವನ್ನು ಈಗಾಗಲೇ ಧ್ವಂಸ ಮಾಡುತ್ತಿದ್ದಾರೆ..
        ದೀಪಕ್ ಕುಮಾರ್       
 ನಮೋ ಭಾರತ್- ಸಮಾಜದ ಪಾಲಿಗೆ ಎಷ್ಟೊಂದು ಅಪಾಯಕಾರಿ ಎಂಬುದು ಈ ಸನ್ಮಾನ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಹೀಗಿರುವಾಗ, ಇವರ ನಾಯಕ ಮೋದಿ ಪ್ರಧಾನಿಯಾದರೆ ಏನಾದೀತು? ಅವರು ಯಾವ ರೀತಿಯ ಆಡಳಿತವನ್ನು ನೀಡಬಲ್ಲರು? ನಮೋ ಭಾರತ್‍ಗೆ ಕೃತಜ್ಞತೆಗಳು. ಯಾಕೆಂದರೆ, ನೀವೇ ನಿಮ್ಮ ಮುಖವನ್ನು ಅನಾವರಣಗೊಳಿಸಿದ್ದೀರಿ.
        ವಿನ್ಸೆಂಟ್ ರಾಡ್ರಿಗಸ್ ಬೆಂಗಳೂರು
 2013 ಅಕ್ಟೋಬರ್ 22ರಂದು ದಾಯ್ಜಿ ವರ್ಲ್ಡ್  ಡಾಟ್ ಕಾಮ್‍ನಲ್ಲಿ ಪ್ರಕಟವಾದ ಸುದ್ದಿಯೊಂದಕ್ಕೆ ಹರಿದು ಬಂದ ನೂರಾರು ಪ್ರತಿಕ್ರಿಯೆಗಳಲ್ಲಿ ಮೂರಷ್ಟೇ ಇಲ್ಲಿವೆ. ಆ ಸುದ್ದಿ ಹೀಗಿತ್ತು:
    ‘.. ಹೋಮ್‍ಸ್ಟೇ ದಾಳಿ ಪ್ರಕರಣದ ಆರೋಪಿಗಳನ್ನು 2013ರ ನವೆಂಬರ್ ಮೊದಲ ವಾರದಲ್ಲಿ ಸನ್ಮಾನಿಸಲಾಗುವುದೆಂದು ನಮೋ ಭಾರತ್‍ನ ಮುಖ್ಯಸ್ಥ ಡಾ| ಪ್ರಸಾದ್ ಭಂಡಾರಿ ಹೇಳಿದ್ದಾರೆ..
   ಏನು ಹೇಳುತ್ತೀರಿ ಈ ಮನಸ್ಥಿತಿಗೆ? ಸನ್ಮಾನ ಎಂಬ ಪದಕ್ಕೆ ಡಿಕ್ಷ್ ನರಿಯಲ್ಲಿ ‘ವಿಶೇಷವಾದ ಗೌರವ', ಪುರಸ್ಕಾರ.. ಎಂಬಿತ್ಯಾದಿ ಅರ್ಥಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಹೋಮ್ ಸ್ಟೇಯ ಮೇಲೆ 2012ರ ಜುಲೈಯಲ್ಲಿ ನಡೆದ ದಾಳಿಯನ್ನು ‘ಗೌರವಾರ್ಹ' ಎಂದು ನಮೋ ಭಾರತ್ ಪರಿಗಣಿಸಿರುವುದು ಯಾವುದರ ಆಧಾರದಲ್ಲಿ? ಯಾವುದೇ ಒಂದು ಪ್ರಕರಣವನ್ನು ಗೌರವಾರ್ಹ ಅಥವಾ ಖಂಡನಾರ್ಹ ಎಂದು ವಿಭಜಿಸುವುದಕ್ಕೆ ಮಾನದಂಡಗಳು ಇರಬೇಕಲ್ಲ, ಅವು ಯಾವುವು? ಹೆಣ್ಣು ಮಕ್ಕಳ ಮೇಲೆ ಕೈ ಮಾಡುವುದೇ? ಅವರನ್ನು ನಗ್ನಗೊಳಿಸುವುದೇ? ಇಡೀ ದೇಶವೇ ಖಂಡಿಸಿದ, ಛೀ, ಥೂ.. ಅಂದ ದಾಳಿಕೋರರನ್ನು ನಮೋ ಭಾರತ್ ಗೌರವಾರ್ಹರು ಎನ್ನುವುದಾದರೆ, ಈ ಭಾರತದಲ್ಲಿ ಹೆಣ್ಣು ಮಕ್ಕಳ ಗತಿಯೇನು? ಸಂಸ್ಕøತಿಯ ವ್ಯಾಖ್ಯಾನವೇನು? ಒಂದು ವರ್ಷಕ್ಕಿಂತ ಅಧಿಕ ಸಮಯ ಜೈಲಲ್ಲಿದ್ದ ಆರೋಪಿಗಳನ್ನು ಸನ್ಮಾನಿಸ ಬೇಕೆಂದು ಬಯಸುತ್ತಾರಲ್ಲ, ಅವರು ಎಂಥ ದೇಶವನ್ನು ಕಟ್ಟಬಲ್ಲರು?
    ಇಷ್ಟಕ್ಕೂ, ಇವೆಲ್ಲವನ್ನೂ ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ.
ಸಂಗೀತ್ ಸೋಮ್
ಸುರೇಶ್ ರಾಣಾ
   ಉತ್ತರ ಪ್ರದೇಶದ ಆಗ್ರಾದಲ್ಲಿ ಕಳೆದ ವಾರ ನ. 21ರಂದು ನಡೆದ ಮೋದಿ ರಾಲಿಯಲ್ಲಿ ಈ ಇಬ್ಬರು ಶಾಸಕರನ್ನು ಬಿಜೆಪಿ ಸನ್ಮಾನಿಸಿದೆ. ಸನ್ಮಾನದ ಸಂದರ್ಭದಲ್ಲಿ ಇವರಿಬ್ಬರ ಪಕ್ಕದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡ ಕಲ್‍ರಾಜ್ ಮಿಶ್ರಾ ಕೂತಿದ್ದರು. ‘ಕಭೀ ಕಭೀ ಕ್ರಿಯಾ 1 ಕಿಲೋ ಗ್ರಾಂ ಹೋತೋ ಪ್ರತಿಕ್ರಿಯಾ 1 ಕ್ವಿಂಟಾಲ್ ತಕ್ ಹೋಜಾತೀಹೆ - ಎಂದು ಮುಝಫರ್ ನಗರ ಗಲಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಕಲ್ಯಾಣ್ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಏನಿವೆಲ್ಲ? 60ರಷ್ಟು ಮಂದಿಯ ಸಾವಿಗೆ ಮತ್ತು ಸಾವಿರಾರು ಮಂದಿಯ ನಿರಾಶ್ರಿತ ಬದುಕಿಗೆ ಕಾರಣವಾದ ಮುಜಫ್ಫರ್ ನಗರ್ ಗಲಭೆಯ ಆರೋಪಿಗಳಿಬ್ಬರನ್ನು ಬಿಜೆಪಿ ಯಾವ ಕಾರಣಕ್ಕಾಗಿ ಸನ್ಮಾನಿಸಿದೆ? ಕೋಮುಗಲಭೆಯ ಆರೋಪ ಹೊತ್ತು ಜೈಲಿಗೆ ಹೋಗುವುದು ಸನ್ಮಾನಕ್ಕೆ ಅರ್ಹವಾಗುವಂಥ ಸಂಗತಿಯೇ? ಸಂಗೀತ್ ಸೋಮ್‍ರಂತೂ ಇಡೀ ಗಲಭೆಯ ರೂವಾರಿ ಎಂಬ ಆರೋಪ ಹೊತ್ತು ಕೊಂಡಿದ್ದಾರೆ. ಪಾಕಿಸ್ತಾನದ ಸಿಯಾಲ್ ಕೋಟ್‍ನಲ್ಲಿ ಕಳ್ಳರಿಬ್ಬರನ್ನು ಸಾರ್ವಜನಿಕರು ಥಳಿಸಿ ಕೊಂದ ವೀಡಿಯೋವನ್ನು ತನ್ನ ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿ, ‘ಇದು ಮುಝಫರ್ ನಗರದಲ್ಲಿ ಮುಸ್ಲಿಮರು ಹಿಂದೂ ಯುವಕರನ್ನು ಕೊಂದ ವೀಡಿಯೋ..' ಎಂಬಂತೆ ಬಿಂಬಿಸಿದ್ದಾರೆ. ಓರ್ವ ಜನಪ್ರತಿನಿಧಿ ಈ ಮಟ್ಟಕ್ಕೆ ಇಳಿಯುತ್ತಾರೆಂದರೆ ಅದು ಅರ್ಹವಾಗಬೇಕಾದದ್ದು ಸನ್ಮಾನಕ್ಕೋ ಖಂಡನೆಗೋ? ಯಾಕೆ ಮೋದಿ ಈ ಬಗ್ಗೆ ಮಾತಾಡಿಲ್ಲ? ಮನ ಮೋಹನ್ ಸಿಂಗ್‍ರನ್ನು ‘ಮೌನ' ಮೋಹನ ಎಂದು ಟೀಕಿಸುವ ಮೋದಿ, ತನ್ನದೇ ವೇದಿಕೆಯಲ್ಲಿ ನಡೆದ ಈ ಸನ್ಮಾನದ ಬಗ್ಗೆ ಯಾಕೆ ಮೌನ ವಹಿಸಿದರು? ಈ ಸನ್ಮಾನದ ಬಗ್ಗೆ ಅವರ ನಿಲುವೇನು? ಹಾಗಂತ, ಈ ಸನ್ಮಾನ ಕಾರ್ಯಕ್ರಮ ದಿಢೀರ್ ಬೆಳವಣಿಗೆ ಎಂದೂ ಹೇಳುವಂತಿಲ್ಲ. ಮೋದಿ ರಾಲಿಗಿಂತ ಒಂದೆರಡು ದಿನಗಳ ಮೊದಲೇ ಈ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡಲಾಗಿತ್ತು. ಕಾರ್ಯಕ್ರಮ ಪಟ್ಟಿಯಲ್ಲಿಯೂ ಈ ಸನ್ಮಾನವು ನಮೂದಾಗಿತ್ತು. ಪ್ರಾಮಾಣಿಕತೆ, ಪಾರದರ್ಶಕತೆಯ ಬಗ್ಗೆ ಹೋದಲ್ಲೆಲ್ಲಾ ಮಾತಾಡುವ ಮೋದಿ, ತನ್ನದೇ ಪಕ್ಷದ ಸನ್ಮಾನದ ಬಗ್ಗೆ ಏನೊಂದೂ ಮಾತಾಡದಿರುವುದು ಏನನ್ನು ಸೂಚಿಸುತ್ತದೆ? ಈ ಸನ್ಮಾನ ಕಾರ್ಯಕ್ರಮ ಅವರ ಸಮ್ಮತಿಯಿಂದಲೇ ಜರುಗಿದ್ದೇ? ಅವರನ್ನು ಸನ್ಮಾನಿಸಲೇ ಬೇಕೆಂಬ ಹಠ ಬಿಜೆಪಿಗೆ ಇದ್ದದ್ದೇ  ಆಗಿದ್ದರೆ, ತನಿಖೆ ಮುಗಿಯುವ ವರೆಗೆ ಸನ್ಮಾನವನ್ನು ಮುಂದೂಡಬಹುದಿತ್ತಲ್ಲವೇ? ದೇಶದ ಪ್ರಧಾನಮಂತ್ರಿ ಅಭ್ಯರ್ಥಿಗೆ ಇಂಥದ್ದೊಂದು ಎಚ್ಚರವನ್ನು ಪಾಲಿಸಲು ಸಾಧ್ಯ ವಾಗುತ್ತಿಲ್ಲವೆಂದ ಮೇಲೆ ಮೋದಿಗೂ ನಮೋ ಭಾರತ್‍ನ ಪ್ರಸಾದ್ ಭಂಡಾರಿಗೂ ಏನು ವ್ಯತ್ಯಾಸವಿದೆ?
ಅನಂತಮೂರ್ತಿ
ಚೇತನ ಭಗತ್
ಗಿರೀಶ್ ಕಾರ್ನಾಡ್
ಅರುಂಧತಿ ರಾಯ್
   ಮುಂತಾದವರನ್ನು ಬಿಜೆಪಿ ಉಲ್ಲೇಖಿಸುವುದೇ ಸ್ಯೂಡೋ ಸೆಕ್ಯುಲರಿಸ್ಟಗಳೆಂದು (ನಕಲಿ ಜಾತ್ಯತೀತರು). ಜಾತ್ಯತೀತತೆಗೆ ಅನಂತ ಮೂರ್ತಿಯವರು ಕೊಡುವ ವ್ಯಾಖ್ಯಾನವನ್ನು ಬಿಜೆಪಿ ಮತ್ತು ಅದರ ಬೆಂಬಲಿಗರು ಅಪಹಾಸ್ಯಕ್ಕೆ ಒಳಗಾಗಿಸುತ್ತಲೇ ಬಂದಿದ್ದಾರೆ. ಅವರನ್ನು ಬಿಟ್ಟು ಬಿಡೋಣ. ಬಿಜೆಪಿ ಪ್ರತಿಪಾದಿಸುವ ಸೆಕ್ಯುಲರಿಸಮ್ ಯಾವ ಬಗೆಯದು? ಒಂದು ಕಡೆ, ‘ತನ್ನ ಕಾರಿನಡಿಗೆ ನಾಯಿ ಮರಿ ಬಿದ್ದರೂ ನೋವಾಗುತ್ತದೆ’ ಅನ್ನುವ ಮೋದಿ; ಇನ್ನೊಂದು ಕಡೆ, ಮನುಷ್ಯರನ್ನೇ ಕೊಂದ ಆರೋಪಿಗಳನ್ನು ಸನ್ಮಾನಿಸುವ ಅವರ ಪಕ್ಷ - ಇದು ಬಿಜೆಪಿಯ ಸೆಕ್ಯುಲರಿಸಮ್ಮೇ? ಅನಂತಮೂರ್ತಿಯವರ ಸೆಕ್ಯುಲರಿಸಮ್‍ಗಿಂತ ಈ ಸೆಕ್ಯುಲರಿಸಮ್ ಹೆಚ್ಚು ಉನ್ನತವಾದದ್ದು ಎಂದು ಅದು ಪ್ರತಿಪಾದಿಸುತ್ತದೆಯೇ? ಓರ್ವ ವ್ಯಕ್ತಿ ಪ್ರಧಾನಿ ಸ್ಥಾನಕ್ಕೆ ಅರ್ಹರೋ ಅಲ್ಲವೋ ಎಂದು ತೀಮಾನಿಸ ಬೇಕಾದದ್ದು ಅವರ ಗಡ್ಡ, ಭಾಷಣ ಕಲೆ, ಹಾವ-ಭಾವಗಳನ್ನು ನೋಡಿಯಲ್ಲ. ಗಡ್ಡ ಇರುವ ಮತ್ತು ಇಲ್ಲದ, ಭಾಷಣ ಕಲೆ ಗೊತ್ತಿರುವ ಮತ್ತು ಗೊತ್ತಿಲ್ಲದ, ತನ್ನ ಅಭಿಪ್ರಾಯವನ್ನು ಮೆಚ್ಚುವ ಮತ್ತು ವಿರೋಧಿಸುವ, ತನ್ನ ಧರ್ಮವನ್ನು ಅನುಸರಿಸುವ ಮತ್ತು ಅನುಸರಿ ಸದ.. ಮಂದಿಯ ಬಗ್ಗೆ ಆ ವ್ಯಕ್ತಿಯ ನಿಲುವು ಏನು ಎಂಬುದೇ ಅರ್ಹತೆಯ ಮಾನದಂಡ. ಇಂಥದ್ದೊಂದು ಮಾನದಂಡವನ್ನಿಟ್ಟು ಕೊಂಡು ಮೋದಿಯನ್ನು ಅಳೆಯಲು ಹೋದರೆ, ಉದ್ದಕ್ಕೂ ಅನರ್ಹತೆಯೇ ಎದುರಾಗುತ್ತದೆ. ಕಾಂಗ್ರೆಸ್‍ನ ಭ್ರಷ್ಟಾಚಾರದ ವಿರುದ್ಧ ಮೋದಿ ಈಗಾಗಲೇ ಗಂಟೆಗಟ್ಟಲೆ ಮಾತಾಡಿದ್ದಾರೆ. ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಅನ್ನು ಗೇಲಿ ಮಾಡಿದ್ದಾರೆ. ಆದರೆ ಇದೇ ಮೋದಿ ಮೊನ್ನೆ ಬೆಂಗಳೂರಿಗೆ ಬಂದಾಗ, ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಾದ ಭ್ರಷ್ಟಾಚಾರದ ಬಗ್ಗೆ ಒಂದು ಗೆರೆಯ ಉಲ್ಲೇಖವನ್ನೂ ಮಾಡಲಿಲ್ಲ. ಪಾರದರ್ಶಕತೆ ಅಂದರೆ ಇದೇ ಏನು? ಮೋದಿಯವರ ಸೆಕ್ಯುಲರಿಸಮ್‍ನಲ್ಲಿ ಭ್ರಷ್ಟಾಚಾರವನ್ನೂ ವಿಭಜಿಸಲಾಗಿದೆಯೇ? ಬಿಜೆಪಿಯ ಭ್ರಷ್ಟಾಚಾರ ಸಹ್ಯ, ಕಾಂಗ್ರೆಸ್‍ನದ್ದು ಮಾತ್ರ ಅಸಹ್ಯ ಎಂಬುದು ಮೋದಿ ಸೆಕ್ಯುಲರಿಸಮ್‍ನ ವಿಶೇಷತೆಯೇ?
   “.. ಓರ್ವ ಮಹಿಳೆಯ ಬದುಕಿನಲ್ಲಿ ಅತ್ಯಂತ ಹೆಚ್ಚು ಸಂತಸ ಪಡುವ ಸಂದರ್ಭ ಯಾವುದು ಗೊತ್ತೇ? ತಾಯಿಯಾಗುವ ಕ್ಷಣ. ತಾಯಿಯ ಬದುಕಿನಲ್ಲಿ ಮಕ್ಕಳು ಬಲು ದೊಡ್ಡ ಕನಸು. ಮನೆಯಲ್ಲಿ ಏನಿಲ್ಲದಿದ್ದರೂ ಮಕ್ಕಳನ್ನು ನೆನೆಸಿಕೊಂಡು ತಾಯಿ ಬದುಕಬಲ್ಲಳು. ಅಂಥದ್ದೊಂದು ಕನಸಾಗಿದ್ದ ನನ್ನ ಮಗ. ನನ್ನ ಕನಸಿನ ರಾಜಕುಮಾರನಾಗಿ ಅವನು ಬೆಳೆದ. ಆದರೆ ನಾನವನನ್ನು ಕಳಕೊಂಡೆ. ನನ್ನ ಬದುಕಿನ ಅತ್ಯಂತ ದುಃಖದ ಸಂದರ್ಭ ಕೂಡ ಇದುವೇ. ಮಗ ಇಲ್ಲವಾಗುವ ಮೂಲಕ ನಾನೆಲ್ಲವನ್ನೂ ಕಳಕೊಂಡೆ. ನನಗೆ ನನ್ನ ಜಗತ್ತು ಇಲ್ಲದಾಯಿತು. ಅವನನ್ನು ಸ್ಮರಿಸಿ ಕಣ್ಣೀರಾಗದ ಒಂದೇ ಒಂದು ದಿನವನ್ನೂ ನಾನು ಕಳೆದಿಲ್ಲ. ಅವನು ನನ್ನ ಹೃದಯದಲ್ಲಿದ್ದಾನೆ. ಆದರೇನು ಮಾಡಲಿ, ಕಣ್ಣೀರಾಗದೆ ನನಗೆ ಬೇರೆ ಯಾವ ದಾರಿಯಿದೆ? ಅವರು ಅವನನ್ನು ಕೊಂದರು. ಅವನನ್ನು ಯಾರು ಕೊಂದಿರುವರೋ ಅವರ ಮೇಲೆ ನನ್ನ ಕಣ್ಣೀರು ತೊಟ್ಟಿಕ್ಕುತ್ತಿದೆ. ರೋಗಿಯಾಗಿರುವ ನಾನು ಶೀಘ್ರದಲ್ಲೇ ಸಾಯಬಹುದು. ಆದರೆ ಈ ಕಣ್ಣೀರು ಅವರನ್ನು ಖಂಡಿತ ತಟ್ಟಲಿದೆ. ಬದುಕಿನಲ್ಲಿ ಯಾವ ನ್ಯಾಯವೂ ಲಭಿಸದ, ಅಸಹಾಯಕ ತಾಯಿಯೋರ್ವಳ ಕಣ್ಣೀರಿದು. ಕಣ್ಣೀರಿನೊಂದಿಗೆ ನಾನಿದನ್ನು ಬರೆಯುತ್ತಿದ್ದೇನೆ. ನೀವು ನ್ಯಾಯಾಲಯವನ್ನೂ ಪೊಲೀಸರನ್ನೂ ಖರೀದಿಸಬಹುದು. ಆದರೆ ಆಕಾಶದಿಂದ ಇವೆಲ್ಲವನ್ನೂ ನೋಡುತ್ತಿರುವ ಒಂದು ಪ್ರಬಲ ಶಕ್ತಿಯಿದೆ. ಆ ಶಕ್ತಿಯ ಪ್ರಹಾರವು ನಿಮ್ಮನ್ನು ಕಾಡಿಯೇ ಕಾಡುತ್ತದೆ- ನೀವು ಕಣ್ಣೀರಾಗಲಿದ್ದೀರಿ..”
   2006 ಮಾರ್ಚ್ ನಲ್ಲಿ ಸಾವಿಗೀಡಾದ ಲೀಲಾ ಎಂಬ ಕೇರಳದ ತಾಯಿಯೋರ್ವರು ಬರೆದ ಆತ್ಮಕಥೆಯಿಂದ ಹೆಕ್ಕಿದ ತುಣುಕಿದು. ಆರ್‍ಟಿಓ ಅಧಿಕಾರಿಯಾಗಿದ್ದ ಅವರ ಏಕೈಕ ಮಗನನ್ನು ಮಾಫಿಯಾ ಬಲಿ ಪಡೆದಿತ್ತು. ನಿಜವಾಗಿ, ಲೀಲಾ ಎಂಬ ಪದವನ್ನು ನಾವು ಒಂದು ನಿರ್ದಿಷ್ಟ ಧರ್ಮದ ಹೆಸರಾಗಿ ಪರಿಗಣಿಸಬೇಕಿಲ್ಲ. ಇಂಥ ತಾಯಂದಿರು ಇವತ್ತು ಗುಜರಾತ್‍ನಲ್ಲಿ, ಮುಝಫರ್ ನಗರದಲ್ಲಿ, ಹೋಮ್ ಸ್ಟೇಯ ಮಂಗಳೂರಿನಲ್ಲಿ ಅಸಂಖ್ಯ ಇದ್ದಾರೆ. ಅವರ ಹೆಸರು ಆಯಿಷಾ, ಸೆಲೆನಾ, ದಮಯಂತಿ.. ಏನೇ ಆಗಿರಬಹುದು. ಅವರೆಲ್ಲರ ಕಣ್ಣೀರು ಒಂದೇ. ಆ ಕಣ್ಣೀರೇ ನಿಜವಾದ ಸೆಕ್ಯುಲರಿಸಮ್. ಸಂಗೀತ್ ಸೋಮ್ ಮತ್ತು ಸುರೇಶ್ ರಾಣಾರನ್ನು ವೇದಿಕೆಯಲ್ಲಿ ಕೂರಿಸಿ ಸನ್ಮಾನಿಸಿದ ಬಿಜೆಪಿ ಮತ್ತು ಹೋಮ್‍ಸ್ಟೇ ಆರೋಪಿಗಳನ್ನು ಸನ್ಮಾನಿಸುವ ಹೇಳಿಕೆ ನೀಡಿದ ನಮೋ ಭಾರತ್‍ಗೆ ಇದು ಅರ್ಥವಾಗಲಿ ಬಿಡಲಿ. ಅಂದಹಾಗೆ,
   2010ರಲ್ಲಿ ಉತ್ತರ ಪ್ರದೇಶದ ಬರೇಲ್ವಿಯಲ್ಲಿ ನಡೆದ ಕೋಮು ಗಲಭೆಯ ಆರೋಪಿ ತೌಕೀರ್ ರಝಾ ಖಾನ್‍ರನ್ನು ಮೊನ್ನೆ ವೇದಿಕೆಯಲ್ಲಿ ಕೂರಿಸಿದ ಸಮಾಜವಾದಿ ಪಕ್ಷದ ನಿಲುವನ್ನು ಖಂಡಿಸು ತ್ತಲೇ ನಾವು ಮೋದಿ ಸೆಕ್ಯುಲರಿಸಮನ್ನು ಪ್ರಶ್ನಿಸಬೇಕಾಗಿದೆ.

No comments:

Post a Comment