Wednesday, November 20, 2013

ಪೇಟೆಯ ಪುಣ್ಯ ಕೋಟಿಗೆ ಮತ್ತೆ ಮತ್ತೆ ತಲೆ ಕೊಡುವ ಕಾಡಿನ ಹುಲಿ

ಗರೋಡಿ
ರಾಜೇಶ್
   '‘1932. ಹಿಟ್ಲರ್ ಅಧಿಕಾರಕ್ಕೆ ಬಂದ ಕಾಲವಾಗಿತ್ತದು. ನನ್ನ ಪ್ರಾಯವಾದರೋ 20. ಅಲ್ಲದೇ ಹಿಟ್ಲರ್ ಜರ್ಮನಿಯಲ್ಲಿದ್ದರೆ ನಾನು ಫ್ರಾನ್ಸ್ ನಲ್ಲಿದೆ. ಯೌವನವಲ್ಲವೇ, ಫ್ರಾನ್ಸ್ ನಲ್ಲಿದ್ದರೂ ನನ್ನ ಮನಸ್ಸು ಜಗತ್ತಿನ ಎಲ್ಲ ಸುದ್ದಿಗಳ ಬಗ್ಗೆಯೂ, ಆ ಸುದ್ದಿಗಳು ಕಟ್ಟಿಕೊಡುವ ನೋವುಗಳ ಸುತ್ತಲೂ ಹೆಜ್ಜೆ ಹಾಕುತ್ತಿತ್ತು. ಫ್ಯಾಸಿಸಮ್‍ನ ವಿವಿಧ ಕ್ರೌರ್ಯಗಳನ್ನು ಓದುವಾಗ ಮನಸ್ಸು ಏನೇನೋ ಆಲೋಚಿಸುತ್ತಿತ್ತು. ಆ ದಿನಗಳಲ್ಲಿ ಅಮೇರಿಕಾವನ್ನು ಆರ್ಥಿಕ ಸಂಕಷ್ಟವು ವಿಪರೀತ ಮಟ್ಟದಲ್ಲಿ ಬಾಧಿಸಿತ್ತು. 70 ಲಕ್ಷ ಮಂದಿ ಉದ್ಯೋಗ ಕಳಕೊಂಡು ಬೀದಿಗೆ ಬಿದ್ದಿದ್ದರು. ಎದೆಹಾಲು ಬತ್ತಿ ಹೋದ ತಾಯಂದಿರು. ಒಂದು ತುಂಡು ರೊಟ್ಟಿಗಾಗಿ ಪರಸ್ಪರ ಜಗಳ ಕಾಯುವ ಮಂದಿ ಅಮೆರಿಕದ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಮಧ್ಯೆ, ಮುಸೋಲಿನಿ ಇಥಿಯೋಪಿಯಾ ವನ್ನು ಆಕ್ರಮಿಸಿದ. ಹಿಟ್ಲರ್ ಮತ್ತು ಮುಸೋಲಿನಿಯ ಸಹಕಾರದಿಂದ ಫ್ರಾಂಕೋ ಸ್ಪೈನನ್ನು ವಶಪಡಿಸಿಕೊಂಡ. ಆ ಕಾಲದಲ್ಲಿ ನಾನು ಮತ್ತು ನನ್ನಂಥ ಯುವಕರು ಕೆಲವೊಮ್ಮೆ ಎಷ್ಟು ನಿರಾಶೆಯಿಂದ ಮಾತಾಡುತ್ತಿದ್ದೆವೆಂದರೆ,
ಜಗತ್ತು ಕೊನೆಗೊಳ್ಳುವ ಸಮಯ ಸಮೀಪಿಸಿದೆ. ಬಹುಶಃ ನಾವು ಅದರ ಕೊನೆಯ ಪೀಳಿಗೆ ಆಗಿರಬಹುದು..' ಎಂದೆಲ್ಲಾ ಹೇಳುತ್ತಿದ್ದೆವು. ಇಷ್ಟಿದ್ದೂ,
  ನಾನು ತುಂಬಾ ಆಶಾವಾದಿಯಾಗಿದ್ದೆ. ಸದ್ಯದ ಸವಾಲುಗಳನ್ನು ಎದುರಿಸುವುದಕ್ಕೆ ನಾನು ಎರಡು ವಿಷಯಗಳಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ನಿಜವಾಗಿ, ನನ್ನ ಹೆತ್ತವರು ಯಾವ ಧರ್ಮದ ವಿಶ್ವಾಸಿಯೂ ಆಗಿರಲಿಲ್ಲ. ಅಲ್ಲದೆ, ಯಾವ ಚಳವಳಿ, ಇಸಂಗಳ ಜೊತೆಯೂ ಗುರುತಿಸಿಕೊಂಡಿರಲಿಲ್ಲ. ಆದರೆ, ನನಗೆ ಅವೆರಡರ ಅಗತ್ಯ ಬಹಳ ಇದೆ ಎಂದು ಅನ್ನಿಸಿತು. ಅದ್ದರಿಂದ, ನಾನು ಕ್ರೈಸ್ತ ಧರ್ಮವನ್ನು ಆಯ್ಕೆ ಮಾಡಿಕೊಂಡೆ. ಇದಾದ ಬಳಿಕ ಕಮ್ಯೂನಿಸಮ್ ಅನ್ನು ಸೇರಿ ಕೊಂಡೆ. ಹೀಗೆ 25 ವರ್ಷಗಳ ಕಾಲ ಕ್ರೈಸ್ತ ಧರ್ಮ ಮತ್ತು ಕಮ್ಯೂನಿಸ್ಟ್ ಸಿದ್ಧಾಂತಗಳ ನಡುವೆ ಸಂವಾದ ನಡೆಸುತ್ತಾ ಬೆಳೆದೆ. ಪ್ರತಿಯೊಂದನ್ನೂ ಪ್ರಶ್ನಿಸಿದೆ. ಫ್ರಾನ್ಸನ್ನು  ಹಿಟ್ಲರ್ ಅಕ್ರಮಿಸಿದಾಗ ಬಂಡಾಯ ಸೇನೆ ಕಟ್ಟಿ ಪ್ರತಿಭಟಿಸಿದೆ. ನಾಝಿ ಸೇನೆಯು ನನ್ನನ್ನು ಬಂಧಿಸಿ 2 ವರ್ಷಗಳ ಕಾಲ ಬಂಧನದಲ್ಲಿರಿಸಿತು. ಬಿಡುಗಡೆ ಗೊಂಡ ಬಳಿಕ ಮತ್ತೆ ಚಳವಳಿಗಳಲ್ಲಿ ಸಕ್ರಿಯನಾದೆ. ಬಂಡವಾಳಶಾಹಿತ್ವದ ವಿರುದ್ಧ ಕಮ್ಯುನಿಸ್ಟ್ ಗೆಳೆಯ ರನ್ನು ಸೇರಿಸಿ ಪ್ರತಿಭಟಿಸಿದೆ. ಫ್ಯಾಸಿಸಮ್‍ಗೆ ವಿರುದ್ಧವಾಗಿ ಜನಜಾಗೃತಿ ಮೂಡಿಸಲು ಯತ್ನಿಸಿದೆ. ನನ್ನ ಪಾಲಿಗೆ ಕ್ರೈಸ್ತ ಧರ್ಮ ಮತ್ತು ಕಮ್ಯುನಿಸಮ್ ಎರಡೂ ಕಾಲದ ವೈರುಧ್ಯಗಳನ್ನು ವ್ಯಾಖ್ಯಾನಿಸುವುದ ಕ್ಕಿರುವ ಎರಡು ಮೆಟ್ಟಲುಗಳಾಗಿತ್ತು. ಬರಬರುತ್ತಾ ಆ ಮೆಟ್ಟಿಲುಗಳಲ್ಲೇ ನಾನಾ ವೈರುಧ್ಯಗಳನ್ನು ಕಾಣತೊಡಗಿದೆ. ವಿಯೆಟ್ನಾಂನ ವಿರುದ್ಧ ಅಮೇರಿಕನ್ ಸಾಮ್ರಾಜ್ಯತ್ವವು ನಡೆಸಿದ ಅತಿಕ್ರಮಣದ ವಿರುದ್ಧ ನಾನು ಪ್ರತಿಭಟಿಸಿದಾಗ ಕಮ್ಯೂನಿಸಮ್ ನನ್ನ ಬೆನ್ನಿಗಿತ್ತು. ಆದರೆ, ದಮನಿತರ ಹಕ್ಕುಗಳ ಬಗ್ಗೆ, ಅವರ ಮೇಲಿನ ಕೌರ್ಯಗಳ ಬಗ್ಗೆ ಪ್ರಬಲ ಧ್ವನಿಯಲ್ಲಿ ಮಾತನಾಡುತ್ತಿದ್ದ ಕಮ್ಯುನಿಸಮ್, ಕೊನೆಗೆ ಅದೇ ತಪ್ಪುಗಳನ್ನೆಸಗಲು ಪ್ರಾರಂಭಿಸಿದಾಗ ಮತ್ತು ನಾನು ಪ್ರತಿಭಟನೆ ಸಲ್ಲಿಸಿದಾಗ, ನನ್ನನ್ನೇ ತಪ್ಪಿತಸ್ಥನಂತೆ ನೋಡಲಾಯಿತು. ಕಮ್ಯೂನಿಸ್ಟ್ ಪಾರ್ಟಿಯ 20ನೇ ಅಧಿವೇಶನದಲ್ಲಿ ರಷ್ಯಾದ ಸ್ಟಾಲಿನ್‍ರ ಜನವಿರೋಧಿ ನಿಲುವುಗಳು, ಸರ್ವಾಧಿಕಾರಗಳ ವಿರುದ್ಧ ಮಾತಾಡಿದಾಗ ನನ್ನನ್ನೇ ಪಕ್ಷದಿಂದ ಹೊರ ಹಾಕಲಾಯಿತು. ಅಮೇರಿಕವು ವಿಯೆಟ್ನಾ ಮೇಲೆ ಅತಿಕ್ರಮಣ ನಡೆಸಿದಾಗ ಪ್ರತಿಭಟಿಸಿದ ನಾನು ಸ್ಟಾಲಿನ್‍ರ ರಷ್ಯಾವು ಜೆಕೊಸ್ಲ್ಲೊವಾಕಿಯನ್ನು ವಶಪಡಿಸಿಕೊಂಡಾಗ ಸುಮ್ಮನಿರುವುದಕ್ಕೆ ಸಾಧ್ಯವಿರಲಿಲ್ಲವಲ್ಲ. ಪ್ರತಿಭಟಿಸಿದೆ. ಆದರೆ ವಿಯೆಟ್ನಾಮ್ ಅತಿಕ್ರಮಣವನ್ನು ಖಂಡಿಸಿದ ನನ್ನ ಗೆಳೆಯರೇ ಸ್ಟಾಲಿನ್‍ರನ್ನು ಬೆಂಬಲಿಸಿದರು. ನನ್ನಲ್ಲಿ ಭ್ರಮನಿರಸನವಾಗತೊಡಗಿತು...'
   1. ದಿ ಫೌಂಡಿಂಗ್ ಮಿಥ್ಸ್ ಆಫ್ ಮಾಡರ್ನ್ ಇಸ್ರೇಲ್
   2. ಕೇಸ್ ಆಫ್ ಇಸ್ರೇಲ್: ಎ ಸ್ಟಡಿ ಆಫ್ ಪೊಲಿಟಿಕಲ್ ಝಿಯೋನಿಸಮ್
   3. ದಿ ಕ್ರೈಸಿಸ್ ಇನ್ ಕಮ್ಯೂನಿಸಮ್
   4. ದಿ ಟರ್ನಿಂಗ್ ಪಾಯಿಂಟ್ ಆಫ್ ಸೋಷಿಯಲಿಸಮ್
   5. ಕಾರ್ಲ್‍ಮಾಕ್ಸ್: ದಿ ಇವೊಲ್ಯೂಶನ್ ಆಫ್ ಹಿಸ್ ಥಾಟ್...
ಹೀಗೆ 50ಕ್ಕಿಂತಲೂ ಅಧಿಕ ಕೃತಿಗಳನ್ನು ಬರೆದ ಪ್ರಸಿದ್ಧ ಸಾಹಿತಿ ರಝಾ ಗರೋಡಿಯವರು, ಯುರೋಪಿನಾದ್ಯಂತ ಅತ್ಯಂತ ಚಲನಶೀಲ ಸಾಹಿತಿಯಾಗಿ ಗುರುತಿಸಿಕೊಂಡವರು. ಕ್ರೈಸ್ತ ಧರ್ಮವನ್ನು ಬಿಟ್ಟು 1982ರಲ್ಲಿ ಇಸ್ಲಾಮನ್ನು ಸ್ವೀಕರಿಸಿದರು. ‘ಹಾಲೋಕಾಸ್ಟ್ ಎಂಬುದು ಬಲುದೊಡ್ಡ ಸುಳ್ಳು..’ ಎಂಬ ವಿವರ ಇರುವ The Founding Myths of Modern Isrel  ಎಂಬ ಕೃತಿಯನ್ನು 1996ರಲ್ಲಿ ಅವರು ಬರೆದಾಗ, ಇಸ್ರೇಲ್ ಮಾತ್ರವಲ್ಲ, ಫ್ರಾನ್ಸೂ ಸಿಟ್ಟಿಗೆದ್ದಿತು. ಫ್ರಾನ್ಸ್ ಆ ಪುಸ್ತಕವನ್ನು ನಿಷೇಧಿಸಿತು. 240,000 ಪೌಂಡ್ ದಂಡ ವಿಧಿಸಿತಲ್ಲದೇ, ತಪ್ಪಿದಲ್ಲಿ ಜೈಲು ಶಿಕ್ಷೆಯನ್ನೂ ಘೋಷಿಸಿತು. ಆದರೆ ಗರೋಡಿ ಜಗ್ಗಲಿಲ್ಲ. ಹಾಲೋಕಾಸ್ಟ್ ಅನ್ನು ಮುಂದಿಟ್ಟುಕೊಂಡು ಇಸ್ರೇಲ್ ತನ್ನ ಕ್ರೌರ್ಯವನ್ನು ಅಡಗಿಸುತ್ತಿದೆ ಎಂದು ಅವರು ಮತ್ತೆ ಮತ್ತೆ ಸಾರಿದರು. ಚರ್ಚಿಲ್, ಎಸ್‍ನೋವರ್ ಮತ್ತು ಡಿ ಗುಲ್ಲೆಯೆಂಬ ನಾಯಕರೇ ಹಾಲೋ ಕಾಸ್ಟ್ ನ ಸೂತ್ರದಾರರು ಎಂದು ದಿಟ್ಟವಾಗಿ ಘೋಷಿಸಿದರು. 2001ರಲ್ಲಿ ಅಮೇರಿಕಾದ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಯು ಅಮೆರಿಕನ್ ಪ್ರಾಯೋಜಿತವೆಂದು ಧೈರ್ಯದಿಂದ ಹೇಳಿದರು. ಒಂದು ರೀತಿಯಲ್ಲಿ ಸಾಹಿತಿ ಹೇಗಿರಬೇಕೆಂದು ತೋರಿಸಿಕೊಟ್ಟದ್ದೇ ರಝಾ ಗರೋಡಿ. ಪ್ರಚಲಿತ ಸಮಾಜದ ತಲ್ಲ್ಲಣಗಳಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತಿದ್ದ ಸಾಹಿತ್ಯ ಜಗತ್ತನ್ನೇ ಅವರು ಹಿಡಿದು ಅಲುಗಾಡಿಸಿದರು. ಸರಿ ಕಾಣದ್ದನ್ನು ಪ್ರಶ್ನಿಸಿದರು. ಹಾಗೇ ಪ್ರಶ್ನಿಸುವಾಗ, ಅದು ತನ್ನ ದೇಶ, ತನ್ನ ಭಾಷೆ, ತನ್ನ ಜನ.. ಎಂಬ ಮುಲಾಜನ್ನೂ ಅವರು ಇಟ್ಟುಕೊಳ್ಳಲಿಲ್ಲ. ಆದ್ದರಿಂದಲೇ, ಗಡಿ, ಭಾಷೆ, ಧರ್ಮವನ್ನು ಮೀರಿ ಜನರು ಗರೋಡಿಯವರನ್ನು ಪ್ರೀತಿಸಲು ಕಾರಣವಾದದ್ದು. ಮಾತ್ರವಲ್ಲ, ಪ್ರಚಲಿತ ಸಾಹಿತ್ಯ ಜಗತ್ತು ಗರೋಡಿಯವರನ್ನು ಮುಂದಿಟ್ಟುಕೊಂಡು ಚರ್ಚಿಸಬೇಕು ಎಂದು ಅನ್ನಿಸುವುದು.
   ಹಾಗಂತ, ಸಮಕಾಲೀನ ಸಾಹಿತಿಗಳು ಸಮಾಜದ ತಲ್ಲಣಗಳಿಗೆ ಸ್ಪಂದಿಸಿಲ್ಲ ಅಂತ ಹೇಳುತ್ತಿಲ್ಲ..
ಆದರೆ ಸ್ಪಂದನೆಯ ಪ್ರಮಾಣ ಎಷ್ಟರ ಮಟ್ಟಿಗಿದೆ? ಎಷ್ಟಂಶ ಅವು ಪ್ರಭಾವಶಾಲಿಯಾಗಿವೆ? ನಿಜವಾಗಿ, ಸಾಹಿತಿಗಳು ಬರಹಗಳ ಮೂಲಕ ಸ್ಪಂದಿಸಲೇಬೇಕಾದ ಹತ್ತಾರು ಸಮಸ್ಯೆಗಳು ಸಮಾಜದಲ್ಲಿವೆ. ಆದರೆ, ಗರೋಡಿಯವರಂತೆ ಅಂಥ ಸಮಸ್ಯೆಗಳನ್ನು ಎತ್ತಿಕೊಳ್ಳುವ ಮತ್ತು ಸಮಾಜದ ಆತ್ಮಕ್ಕೆ ಚುಚ್ಚುವ ಪ್ರಯತ್ನಗಳು ಆಗುತ್ತಲೇ ಇಲ್ಲ. ಇಲ್ಲಿ ಪ್ರತಿದಿನ ‘ಧರಣಿ ಮಂಡಲ ಮಧ್ಯದೊಳಗೆ..’ ಹಾಡಿನ ಘಟನೆಗಳು ನಡೆಯುತ್ತಲೇ ಇವೆ. ಕಾಡೆಂಬುದು ಹುಲಿಯ ಮನೆ. ಅದರ ಆಹಾರ, ವಿಶ್ರಾಂತಿ, ನಿದ್ದೆ ಎಲ್ಲವೂ ಅಲ್ಲೇ. ತನ್ನ ಪ್ರದೇಶದಲ್ಲಿ ಸುತ್ತಾಡಿ ಅದು ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಹೀಗಿರುವಾಗ, ಪುಣ್ಯಕೋಟಿಯು ಹುಲಿಯ ಈ ಮನೆಗೆ ಅಕ್ರಮ ಪ್ರವೇಶಗೈಯುತ್ತದೆ. ಮಾತ್ರವಲ್ಲ, ತನ್ನ ಅಕ್ರಮ ಪ್ರವೇಶವೇ ಸಕ್ರಮ ಎಂಬ ರೀತಿಯಲ್ಲಿ ಭಾವನಾತ್ಮಕ ಬ್ಲ್ಯಾಕ್‍ಮೇಲ್ ನಡೆಸುತ್ತದೆ. ಅದು ಹುಲಿಯೊಂದಿಗೆ ನಡೆಸುವ ಸಂವಾದವನ್ನು ಹೇಗೆ ಕಟ್ಟಿ ಕೊಡಲಾಗಿದೆಯೆಂದರೆ, ಹುಲಿಯನ್ನು ಖಳನಾಯಕನಾಗಿ ಮತ್ತು ಪುಣ್ಯ ಕೋಟಿಯನ್ನು ಅಪಾರ ಸತ್ಯವಂತವಾಗಿ ಬಿಂಬಿಸಲಾಗಿದೆ. ಒಂದು ರೀತಿಯಲ್ಲಿ, ಪುಣ್ಯ ಕೋಟಿಯು ಹುಲಿಯ ಸಹಜ ಆಹಾರ. ತಪ್ಪು ಪುಣ್ಯಕೋಟಿಯದ್ದೇ ಹೊರತು ಹುಲಿಯದ್ದಲ್ಲ. ಆದರೆ, ಕೊನೆಗೆ ತನ್ನದಲ್ಲದ ತಪ್ಪಿಗೆ ಹುಲಿ ಪ್ರಾಣತ್ಯಾಗ ಮಾಡುವ ಮತ್ತು ಹಾಗೆ ತ್ಯಾಗ ಮಾಡಿದ ಬಳಿಕವೂ ಪುಣ್ಯ ಕೋಟಿಯೇ ಮಹಾ ತ್ಯಾಗಿಯಾಗಿ ಮನದಲ್ಲುಳಿಯುವ ರೀತಿಯಲ್ಲಿ ದರಣಿ ಮಂಡಲ ಹಾಡನ್ನು ಕಟ್ಟಿಕೊಡಲಾಗಿದೆ. ಇಷ್ಟಕ್ಕೂ, ಹುಲಿ ಮತ್ತು ಪುಣ್ಯ ಕೋಟಿಯ ನಡುವೆ ನಡೆಯುವ ಈ ಮಾತುಕತೆಯು ಕಾಲ್ಪನಿಕವಾದದ್ದೇ ಹೊರತು ವಾಸ್ತವವಲ್ಲ ಎಂಬುದು ಎಲ್ಲರಿಗೂ ಗೊತ್ತು. ನಿಜವಾಗಿ, ಇಲ್ಲಿ ಹುಲಿಯು- ಕಾಡನ್ನು ಮನೆ ಮಾಡಿಕೊಂಡಿರುವ ಗೊಲ್ಲರು, ಕೊರಗರು, ಗಿರಿಜನರು, ದಲಿತರ ಸಂಕೇತ. ಪುಣ್ಯ ಕೋಟಿಯು ಮೇಲ್ವರ್ಗದವರ ಸಂಕೇತ. ಮೇಲ್ವರ್ಗದವರಲ್ಲಿ ನ್ಯಾಯದ ಮಾತಾಡುವುದು ಸಾವಿಗೆ ಕಾರಣವಾಗುತ್ತದೆ ಅನ್ನುವ ಸೂಕ್ಷ್ಮ ಸಂದೇಶವನ್ನು ಈ ಹಾಡು ಗುಪ್ತವಾಗಿ ರವಾನೆ ಮಾಡುತ್ತದೆ. ಈ ಹಾಡಿನ ಆಧುನಿಕ ರೂಪವೇ ನಟ ರಾಜೇಶ್. ‘ಹಳ್ಳಿ ಹೈದ ಪೇಟೆಗ್ ಬಂದ’ ಎಂಬ ರಿಯಾಲಿಟಿ ಶೋಗಾಗಿ ಈ ಗಿರಿಜನ ಯುವಕನನ್ನು ಪೇಟೆಗೆ ಕರೆ ತರಲಾಗುತ್ತದೆ. ಆತನ ಮುಗ್ಧತೆಗೆ ಮಾರುಕಟ್ಟೆ ಇದೆ ಎಂದು ಅರಿವಾದದ್ದೇ ತಡ, ಪೇಟೆಯ ಮಂದಿ ಆತನನ್ನು ಎರ್ರಾಬಿರ್ರಿಯಾಗಿ ಬಳಸಿಕೊಳ್ಳುತ್ತಾರೆ. ಇದರ ಜೊತೆಗೆ ಆತನ ಹಠ ಸ್ವಭಾವ, ಒರಟುತನ, ಖಿನ್ನತೆಯ.. ಸುದ್ದಿಗಳೂ ಆಗಾಗ ಮಾಧ್ಯಮಗಳ ಮೂಲಕ ಪ್ರಕಟವಾಗುವಂತೆ ನೋಡಿಕೊಳ್ಳುತ್ತಾರೆ. ಕೊನೆಗೊಂದು ದಿನ ಆತ ಪ್ರಾಣತ್ಯಾಗ ಮಾಡಿದಾಗ, ಆತನನ್ನು ಕಾಡಿನ ಹುಲಿಯಾಗಿಯೂ ಕೊಂದವರು ಪುಣ್ಯ ಕೋಟಿಯಾಗಿಯೂ ಪೋಸು ಕೊಡುತ್ತಾರೆ.
   ಇವತ್ತಿನ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸುತ್ತಿರುವ ದೊಡ್ಡ ಕೊರತೆಯೂ ಇದುವೇ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಹೊಸ ಕಾದಂಬರಿ, ಕವಿತೆಗಳು ಪ್ರವೇಶಗೈಯ್ಯುತ್ತಿದ್ದರೂ ಅವುಗಳಲ್ಲಿ ಸಾಹಿತ್ಯಿಕ ಒಳನೋಟ ಉಳ್ಳವು ಎಷ್ಟಿವೆ  ಎಂದು ಹುಡುಕಾಡುವಾಗ ನಿರಾಶೆಯಾಗುತ್ತದೆ. ಸಮಾಜದ ಪ್ರಚಲಿತ ಸಮಸ್ಯೆಗಳನ್ನು ಎತ್ತಿಕೊಂಡು ಓದುಗರ ಹೃದಯ ತಟ್ಟುವ ಬರಹಗಳು ಅಪರೂಪವಾಗುತ್ತಿವೆ. ಇವತ್ತಿನ ಬರಹ ಶೈಲಿಗಳಲ್ಲಿ `ಹೇಗೆ' ಎಂಬುದು ಮುಖ್ಯವಾಗುತ್ತಿದೆಯೇ ಹೊರತು `ಯಾಕೆ' ಎಂಬುದಲ್ಲ. ಹೇಗೆ ಬಾಂಬ್ ಸ್ಫೋಟಿಸಬಹುದು, ಹೇಗೆ ಕೋಮುಗಲಭೆ ಎಬ್ಬಿಸಬಹುದು, ಹೇಗೆ ಮೋದಿಯನ್ನು ಗೆಲ್ಲಿಸಬಹುದು, ಹೇಗೆ ಸರಕಾರಿ ಶಾಲೆಗಳನ್ನು ಮುಚ್ಚಬಹುದು.. ಹೀಗೆ. ಇದಕ್ಕೆ ಬದಲು, ಯಾಕೆ ಸ್ಫೋಟಿಸಬೇಕು, ಯಾಕೆ ಮೋದಿಯನ್ನು ಗೆಲ್ಲಿಸಬೇಕು, ಯಾಕೆ ಕೋಮುಗಲಭೆ ಎಬ್ಬಿಸಬೇಕು.. ಎಂಬಿತ್ಯಾದಿಯಾಗಿ ಪ್ರಶ್ನಿಸುವ ಬರಹಗಳು ಅಪರೂಪವಾಗುತ್ತಿವೆ. ಬಹುಶಃ, ಪ್ರಚಲಿತ ವಾತಾವರಣವು ಈ ಮಟ್ಟದಲ್ಲಿ ಕೆಟ್ಟಿರುವುದಕ್ಕೆ ಇಂಥ ಬರಹಗಳ ಕೊರತೆಯ ಪಾತ್ರ ಖಂಡಿತ ಇದೆ ಎಂದು ಅನಿಸುತ್ತದೆ. ಒಂದು ವೇಳೆ,
    2012ರಲ್ಲಿ ತನ್ನ 98ನೇ ಪ್ರಾಯದಲ್ಲಿ ಸಾವಿಗೀಡಾದ ರಝಾ ಗರೋಡಿಯವರು ಈ ನೆಲದಲ್ಲಿ ಇದ್ದಿದ್ದರೆ, ಸಾಹಿತ್ಯ ಕ್ಷೇತ್ರಕ್ಕೆ ತಟ್ಟಿರುವ ಈ ಕಾಯಿಲೆಯ ವಿರುದ್ಧ ಬರೆಯುತ್ತಿದ್ದರೇನೋ...

No comments:

Post a Comment