Tuesday, January 9, 2018

ತಲಾಕ್ ತಲಾಕ್ ತಲಾಕ್ ಹೇಳಬೇಡಿ, ಸುಮ್ಮನೆ ತ್ಯಜಿಸಿಬಿಡಿ!

     
Muslim mens are so stupid. Why say Talaq Talaq Talaq and go to Jail when you can just leave her without saying anything and become the prime minister of India.. -  ‘ಮುಸ್ಲಿಮ್ ಪುರುಷರು ಕಡು ಮೂರ್ಖರು. ಕಾರಣವನ್ನು ನೀಡದೆಯೇ ಪತ್ನಿಯನ್ನು ತ್ಯಜಿಸಲು ಮತ್ತು ಭಾರತದ ಪ್ರಧಾನಿಯಾಗಲು ಅವಕಾಶ ಇರುವಾಗ ಈ ಮುಸ್ಲಿಮ್ ಪುರುಷರು ಯಾಕೆ ತಲಾಕ್ ತಲಾಕ್ ತಲಾಕ್ ಎಂದು ಹೇಳಬೇಕು ಮತ್ತು ಜೈಲಿಗೆ ಹೋಗಬೇಕು..’
   ಗೆಳೆಯ ಕಳುಹಿಸಿಕೊಟ್ಟ ಈ ವಾಟ್ಸ್ಯಾಪ್ ಸಂದೇಶದಲ್ಲಿ ತಮಾಷೆಯನ್ನೂ ಮೀರಿದ ಕಟು ವಾಸ್ತವವಿದೆ. ಕೇಂದ್ರ ಸರಕಾರವು ಏಕಪಕ್ಷೀಯವಾಗಿ ರಚಿಸಿದ ಮತ್ತು ಪಾರ್ಲಿಮೆಂಟಲ್ಲಿ ಮಂಡಿಸಿ ಅನುಮೋದಿಸಿಕೊಂಡ ಮುಸ್ಲಿಮ್ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯು ಸಮತೋಲನದಿಂದ ಕೂಡಿದೆಯೇ? ಈ ಮಸೂದೆಯನ್ನು ರಚಿಸಿದ್ದು ಕೇಂದ್ರ ಸಚಿವ ಸಂಪುಟದ ಆಂತರಿಕ ಸಮಿತಿ. ತ್ರಿವಳಿ ತಲಾಕನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್‍ನ ಬಾಗಿಲು ಬಡಿದ ಶಾಯಿರಾ ಬಾನುವಲ್ಲಾಗಲಿ, ಈ ಪ್ರಕರಣದ ಪ್ರತಿವಾದಿಗಳಲ್ಲಿ ಒಂದಾದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಲ್ಲಾಗಲಿ, ಸಂಘಟನೆಗಳಲ್ಲಾಗಲಿ ಅಥವಾ ಮುಸ್ಲಿಮ್ ಸಮುದಾಯದಲ್ಲಿರುವ ಶರೀಅತ್ ತಜ್ಞರಲ್ಲಾಗಲಿ ಈ ಸಮಿತಿಯು ಸಮಾಲೋಚನೆಯನ್ನೇ ನಡೆಸಿಲ್ಲ. ರಾಜ್ಯಗಳ ಅಭಿ ಪ್ರಾಯವನ್ನೂ ಪಡೆದುಕೊಂಡಿಲ್ಲ. ಅಷ್ಟಕ್ಕೂ, ತ್ರಿವಳಿ ತಲಾಕನ್ನು ಸುಪ್ರೀಮ್ ಕೋರ್ಟ್ ಸಂವಿಧಾನ ಬಾಹಿರ ಎಂದು ಕರೆದಿದೆ ನಿಜ. ಹಾಗಂತ, ಸಂವಿಧಾನ ಬಾಹಿರ ಎಂಬುದಕ್ಕೆ ಅಪರಾಧ (Crime ) ಎಂಬ ಅರ್ಥವೇನೂ ಇಲ್ಲವಲ್ಲ. ಆತ್ಮಹತ್ಯೆಯನ್ನು ಇತ್ತೀಚಿನ ವರೆಗೆ ಈ ದೇಶದಲ್ಲಿ ಅಪರಾಧವಾಗಿಯೇ ಪರಿಗಣಿಸಲಾಗುತ್ತಿತ್ತು. ಆದರೆ ಇದೀಗ ನ್ಯಾಯಾಲಯವು ಅದನ್ನು ಅಪರಾಧದ ವ್ಯಾಪ್ತಿಯಿಂದ ಹೊರಗಿಟ್ಟಿದೆ ಎಂಬುದು ಏನನ್ನು ಸೂಚಿಸುತ್ತದೆ? ವಿವಾಹವೆಂಬುದು ಇಸ್ಲಾಮಿನಲ್ಲಿ ನಾಗರಿಕ ಒಪ್ಪಂದ (Civil Contract). ಹೀಗಿರುವಾಗ ನಾಗರಿಕ ಒಪ್ಪಂದವೊಂದು ಕ್ರಿಮಿನಲ್ ಕೃತ್ಯವಾಗಿ ಮಾರ್ಪಡುವುದು ಎಷ್ಟು ಸರಿ ಮತ್ತು ಎಲ್ಲಿಯವರೆಗೆ ಸರಿ? ಇದು ಬೀರಬಹುದಾದ ಪರಿಣಾಮಗಳು ಏನೇನು? 2011ರ ಜನಗಣತಿ ಪ್ರಕಾರ ಪತಿಯಿಂದ ಪರಿತ್ಯಕ್ತಗೊಂಡ ಹಿಂದೂ ಮಹಿಳೆಯರ ಸಂಖ್ಯೆಯು ತಲಾಕ್‍ಗೊಳಪಟ್ಟ (ತ್ರಿವಳಿಯೂ ಸೇರಿದಂತೆ) ಮುಸ್ಲಿಮ್ ಮಹಿಳೆಯರ ಸಂಖ್ಯೆಗಿಂತ ಎಷ್ಟೋ ಪಾಲು ಹೆಚ್ಚು. ಪ್ರಧಾನಿ ಮೋದಿಯವರಿಂದ ತ್ಯಜಿಸಲ್ಪಟ್ಟು ಏಕಾಂಗಿಯಾಗಿ ಬದುಕುತ್ತಿರುವ ಜಶೋಧ ಬೆನ್ ಇವರಲ್ಲಿ ಒಬ್ಬರು. ಆದರೆ, ಈ ಕಾರಣಕ್ಕಾಗಿ ಶಿಕ್ಷೆಗೊಳಪಟ್ಟ ಹಿಂದೂ ಪುರುಷರು ಇಲ್ಲವೇ ಇಲ್ಲ. ಇದಕ್ಕೆ ತಾಜಾ ಉದಾಹರಣೆ ಪ್ರಧಾನಿ ನರೇಂದ್ರ ಮೋದಿಯವರೇ. ಕಾರಣ ಏನೆಂದರೆ, ಪತ್ನಿಯನ್ನು ತ್ಯಜಿಸುವುದು ಅಥವಾ ಪರಿತ್ಯಕ್ತೆಯಾಗಿ ಮಹಿಳೆ ಬದುಕುವುದು ಅಪರಾಧ ಅಲ್ಲ. ಒಂದು ವೇಳೆ, ಹೀಗೆ ಪರಿತ್ಯಕ್ತಗೊಂಡು ಬದುಕುತ್ತಿರುವ ಆಕೆಯ ಮೇಲೆ ಪತಿ ಸಂಭೋಗ ನಡೆಸಿದರೆ ಅದು ಭಾರತೀಯ ದಂಡಸಂಹಿತೆ 376 ಬಿ ಪ್ರಕಾರ ಅತ್ಯಾ ಚಾರವಾಗಿ ಗುರುತಿಸಿಕೊಳ್ಳುತ್ತದೆ. ಹಾಗಂತ, ಇದು ಅಪರಾಧ ವಾಗುವುದು ಆಕೆ ದೂರು ಕೊಟ್ಟಾಗ ಮಾತ್ರ. ಇನ್ನು, ಪತ್ನಿಯನ್ನು ಹೊಂದಿರುತ್ತಾ ಹಿಂದೂ ಪುರುಷನು ಇನ್ನೊಂದು ಮದುವೆ ಯಾಗುವುದನ್ನು ಭಾರತೀಯ ದಂಡಸಂಹಿತೆಯ 494ನೇ ವಿಧಿಯು ಅಪರಾಧವಾಗಿ ಪರಿಗಣಿಸುತ್ತದೆ. ಆದರೆ ಅದೂ ತಾನಾಗಿಯೇ ಅಪರಾಧವಾಗುವುದಿಲ್ಲ. ಮೊದಲ ಪತ್ನಿಯೋ ಅಥವಾ ಆಕೆಯ ಕುಟುಂಬಿಕರೋ ಆ ಬಗ್ಗೆ ದೂರು ದಾಖಲಿಸಬೇಕಾಗುತ್ತದೆ. ಆದರೆ, ಕೇಂದ್ರ ಮಂತ್ರಿ ರವಿಶಂಕರ್ ಪ್ರಸಾದ್ ಅವರು ಲೋಕಸಭೆಯಲ್ಲಿ ಮಂಡಿಸಿದ ಮುಸ್ಲಿಮ್ ಮಹಿಳಾ ಮಸೂದೆಯಲ್ಲಿ ಈ ಯಾವ ರಿಯಾಯಿತಿಗಳೂ ಇಲ್ಲ. ತ್ರಿವಳಿ ತಲಾಕ್ ಹೇಳುವುದನ್ನು ಜಾಮೀನುರಹಿತ ಮತ್ತು ವಾರಂಟ್ ಅಗತ್ಯವಿಲ್ಲದ (Cognizable) ಅಪರಾಧವಾಗಿ ಈ ಮಸೂದೆ ಪರಿಗಣಿಸುತ್ತದೆ. ಈ ಮಸೂದೆಯ ಧಾಟಿ ನೋಡಿದರೆ ತ್ರಿವಳಿ ತಲಾಕ್ ಎಂಬುದು ತಾನಾಗಿಯೇ ಜೈಲಿಗರ್ಹ ಅಪರಾಧವೆಂಬ ರೀತಿಯಲ್ಲಿದೆ. ಯಾರು ಕೇಸು ಕೊಟ್ಟರೂ ಕೊಡದಿದ್ದರೂ ಮುಸ್ಲಿಮ್ ಪುರುಷರನ್ನು ಮನೆಗೆ ನುಗ್ಗಿ ಎಳೆದುಕೊಂಡು ಹೋಗಬಹುದು ಎಂದು ಭಾವಿಸುವುದಕ್ಕೆ ಈ ಮಸೂದೆ ಪೂರಕವಾದ ರೀತಿಯಲ್ಲಿದೆ. ಯಾರು ದೂರು ಕೊಡಬೇಕು, ದೂರು ಕೊಡದಿದ್ದರೆ ಬಂಧನ ಆಗುವುದಿಲ್ಲವೇ ಅಥವಾ ಪೊಲೀಸರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವರೇ ಎಂಬ ಬಗ್ಗೆ ಮಸೂದೆಯಲ್ಲಿ ಅಸ್ಪಷ್ಟತೆಯಿದೆ. ಕನಿಷ್ಠ ಸಂಸದೀಯ ಮಂಡಳಿಯನ್ನು ರಚಿಸಿ ಈ ಕುರಿತಂತೆ ಚರ್ಚಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನೂ ಕೇಂದ್ರ ಸರಕಾರ ತಿರಸ್ಕರಿಸಿದೆ. ಏನಿದರ ಮರ್ಮ? ಯಾಕಿಷ್ಟು ತುರ್ತು? ಹಿಂದೂ ಕೋಡ್ ಬಿಲ್ ಅನ್ನು ಈ ದೇಶದಲ್ಲಿ ಜಾರಿಗೊಳಿಸುವುದಕ್ಕಿಂತ ಮೊದಲು ಒಂದು ವರ್ಷಕ್ಕಿಂತಲೂ ಅಧಿಕ ಸಮಯಗಳವರೆಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಚರ್ಚೆಗೆ ಒಳಪಡಿಸಲಾಗಿತ್ತು ಎಂಬುದನ್ನು ಇದರ ಜೊತೆ ಹೋಲಿಸಿ ನೋಡಿದರೆ ಏನನಿಸುತ್ತದೆ? ಇದರ ಹಿಂದೆ ಅಡಗಿರುವುದು ಮುಸ್ಲಿಮ್ ಮಹಿಳೆಯರ ಮೇಲಿನ ಕಾಳಜಿಯೋ ಅಥವಾ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಕ್ಕೆ ಪೂರಕವಾದ ವಾತಾವರಣದ ನಿರ್ಮಾಣವೋ? ಒಂದು ಕಡೆ, ಬಿಜೆಪಿ ಮತ್ತು ಅದರ ಮಾತೃ ಸಂಘಟನೆಯು ಭಾರತೀಯರೆಲ್ಲ ಹಿಂದೂಗಳು ಎಂದು ವಾದಿಸುತ್ತಿದೆ. ಭಾರತೀಯ (ಹಿಂದೂ) ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ ಎಂದು ಮುಸ್ಲಿಮರ ಮೇಲೆ ಒತ್ತಡ ಹೇರುತ್ತಿದೆ. ಮುಸ್ಲಿಮ್, ಕ್ರೈಸ್ತ, ಬೌದ್ಧ, ಜೈನರೂ ಸೇರಿ ಹಿಂದೂಗಳಲ್ಲಿರುವ ನೂರಾರು ಜಾತಿಗಳೆಲ್ಲವೂ ಏಕ ನಾಗರಿಕ ಸಂಹಿತೆಯನ್ನು ಬೆಂಬಲಿಸಬೇಕೆಂದು ಅದು ಕರೆ ಕೊಡುತ್ತಿದೆ. ಇನ್ನೊಂದೆಡೆ, ಅತ್ಯಂತ ತುರ್ತಾಗಿ ಮುಸ್ಲಿಮ್ ಮಹಿಳಾ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಲಾಗುತ್ತದೆ. ಇದು ಹುನ್ನಾರದ ಭಾಗವೇ? ಮುಸ್ಲಿಮರ ವೈವಾಹಿಕ ನಿಯಮಗಳು ಕಾಲಬಾಹಿರವಾದುದು ಎಂಬುದನ್ನು ಸಾರುವುದು ಇದರ ಒಳ ಉದ್ದೇಶವೇ? ಕಳೆದ ಆಗಸ್ಟ್‍ನಲ್ಲಿ ನೀಡಿದ ಬಹುಮತದ ತೀರ್ಪಿನಲ್ಲಿ ಸುಪ್ರೀಮ್ ಕೋರ್ಟು ತ್ರಿವಳಿ ತಲಾಕನ್ನು ಸಂವಿಧಾನ ಬಾಹಿರ ಎಂದು ಹೇಳಿದೆಯೇ ಹೊರತು ಅದನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಿಲ್ಲ. ತಲಾಕ್‍ನ ವಿಷಯದಲ್ಲಿ ತಪ್ಪಾದ ಕ್ರಮವನ್ನು ಕೈಬಿಟ್ಟು ಪವಿತ್ರ ಕುರ್‍ಆನ್ ಪ್ರಸ್ತುತಪಡಿಸಿರುವ ಮೂರು ಹಂತಗಳ ಸರಿಯಾದ ಕ್ರಮದ ಕಡೆಗೆ ಮುಸ್ಲಿಮರು ಮರಳಲಿ ಎಂಬ ಭಾವವೇ ಅದರ ತೀರ್ಪಿನಲ್ಲಿ ವ್ಯಕ್ತವಾಗಿತ್ತು. ತಪ್ಪಾದ ಕ್ರಮವನ್ನು ಸರಿಪಡಿಸುವುದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಿ ಎಂದು ಅದು ಕೇಂದ್ರ ಸರಕಾರಕ್ಕೆ ನಿರ್ದೇಶನವನ್ನೂ ನೀಡಿತ್ತು. ಆದರೆ, ಕೇಂದ್ರ ಸರಕಾರ ಈಗ ಮಂಡಿಸಿರುವ ಮುಸ್ಲಿಮ್ ಮಹಿಳಾ ಮಸೂದೆಯು ಕೋರ್ಟ್‍ನ ಉದ್ದೇಶವನ್ನು ಪೂರ್ತಿಗೊಳಿಸುವ ರೀತಿಯಲ್ಲಿದೆಯೇ? ತ್ರಿವಳಿ ತಲಾಕ್‍ಗೆ ಮೂರು ವರ್ಷ ಶಿಕ್ಷೆ ವಿಧಿಸುವುದೆಂದರೇನು? ಹಾಗೆ ಶಿಕ್ಷೆಗೊಳಪಟ್ಟ ಪತಿಯಿಂದ ಸೂಕ್ತ ಪರಿಹಾರಗಳನ್ನು ಪಡಕೊಳ್ಳಲು ಪತ್ನಿಗೆ ಅವಕಾಶ ನೀಡುವುದೆಂದರೇನು? ಮಕ್ಕಳನ್ನು ತನ್ನ ಬಳಿಯೇ ಇರಿಸಿಕೊಳ್ಳುವುದಕ್ಕೆ ಪತ್ನಿಗೆ ಅವಕಾಶ ಕಲ್ಪಿಸುವುದೆಂದರೇನು? ಇದರರ್ಥ ತ್ರಿವಳಿ ತಲಾಕ್ ಎಂಬುದು ಸರಿಯಾದ ತಲಾಕ್ ಎಂದೇ ಅರ್ಥವಲ್ಲವೇ? ಒಂದು ವೇಳೆ, ತ್ರಿವಳಿ ತಲಾಕ್ ಸಂವಿಧಾನ ಬಾಹಿರ ಮತ್ತು ತಪ್ಪಾದ ಕ್ರಮ ಎಂದಾದರೆ ಶಿಕ್ಷೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪತ್ನಿಗೆ ಪರಿಹಾರ ಕೊಡುವ ಮತ್ತು ಮಕ್ಕಳನ್ನು ಆಕೆಯ ವಶದಲ್ಲೇ  ಇರಿಸಿಕೊಳ್ಳುವ ಪ್ರಶ್ನೆಯೂ ಏಳುವುದಿಲ್ಲ. ತಲಾಕ್ ಸಿಂಧುವಾದಾಗ ಮಾತ್ರ ಈ ಎಲ್ಲವೂ ಸರಿ ಎನಿಸಿಕೊಳ್ಳುತ್ತದೆ. ನಿಜವಾಗಿ, ಸುಪ್ರೀಮ್ ಕೋರ್ಟ್ ಹೇಳಿರುವುದು ಸಂವಿಧಾನ ಬಾಹಿರ ತಲಾಕನ್ನು ಸರಿಪಡಿಸಿಕೊಳ್ಳುವು ದಕ್ಕೆ. ಕೇಂದ್ರ ಸರಕಾರವಾದರೋ ಈ ಸಂವಿಧಾನಬಾಹಿರ ತಲಾಕನ್ನೇ ಸಂವಿಧಾನಬದ್ಧಗೊಳಿಸಿದಂತಿದೆ ಮತ್ತು ಅದಕ್ಕೆ ಕಾನೂನು ಮಾನ್ಯತೆಯನ್ನು ನೀಡಿದಂತಿದೆ. ನಿಜಕ್ಕೂ, ಕೇಂದ್ರದ ಉದ್ದೇಶ ತ್ರಿವಳಿ ತಲಾಕನ್ನು ರದ್ದುಗೊಳಿಸುವುದಾಗಿದೆಯೋ ಅಥವಾ ಅದರ ಹೆಸರಲ್ಲಿ ಒಂದಷ್ಟು ಗೊಂದಲವನ್ನು ಹುಟ್ಟು ಹಾಕಿ, ಮುಸ್ಲಿಮ್ ಸಮುದಾಯವನ್ನು ಸತಾಯಿಸುವುದಾಗಿದೆಯೋ? ಪ್ರತಿದಿನ ಮಾಧ್ಯಮಗಳಿಗೆ ರಸವತ್ತಾದ ಸುದ್ದಿಯನ್ನು ಒದಗಿಸುವುದು ಮತ್ತು ಅದರ ಮರೆಯಲ್ಲಿ ನಿಂತು ಸುಖ ಪಡುವುದು ಹಾಗೂ ಸರಕಾರದ ಹರಕು ಬಾಯಿಗಳಿಂದ ಆಗಾಗ ಮುಸ್ಲಿಮ್ ವೈವಾಹಿಕ ನಿಯಮಗಳನ್ನು ಅಣಕಿಸಿ ಹೇಳಿಕೆಗಳನ್ನು ಹೊರಡಿಸುವ ಹುನ್ನಾರ ಇದರ ಹಿಂದಿದೆಯೇ?
      ಪಾಕಿಸ್ತಾನದಲ್ಲಿ ತಲಾಕ್‍ಗೆ ಸಂಬಂಧಿಸಿ ಮುಸ್ಲಿಮ್ ಕೌಟುಂಬಿಕ ಕಾನೂನು ಅಸ್ತಿತ್ವದಲ್ಲಿದೆ.
ಅದರ ಪ್ರಕಾರ, ತಲಾಕ್ ನೀಡಿದ (ಯಾವ ರೀತಿಯಲ್ಲಿ ನೀಡಿದರೂ) ವ್ಯಕ್ತಿ ಅದನ್ನು ಬರಹ ರೂಪದಲ್ಲಿ ಸರಕಾರ ನೇಮಿಸಿದ ಯೂನಿಯನ್ ಕೌನ್ಸಿಲ್‍ನ ಮುಖ್ಯಸ್ಥರಿಗೆ ಸಲ್ಲಿಸಬೇಕು ಮತ್ತು ಕೌನ್ಸಿಲ್‍ನ ಮುಖ್ಯಸ್ಥರು ಆತನ ಪತ್ನಿಗೆ ಅದರ ಒಂದು ಪ್ರತಿ ಯನ್ನು ರವಾನಿಸಬೇಕು. ಈ ಪತ್ರ ಸಿಕ್ಕಿದ 30 ದಿನಗಳೊಳಗೆ ಕೌನ್ಸಿಲ್ ಮುಖ್ಯಸ್ಥರು ಪರಿಹಾರ ಸಮಿತಿಯನ್ನು ರಚಿಸಬೇಕು. ಅದರಲ್ಲಿ ಎರಡೂ ಕಡೆಯ ಒಬ್ಬೊಬ್ಬ ಪ್ರತಿನಿಧಿಗಳಿರಬೇಕು. ರಾಜಿ ಪಂಚಾಯಿತಿಕೆಯೇ ಈ ಸಮಿತಿಯ ಮುಖ್ಯ ಗುರಿ. ಕೌನ್ಸಿಲ್ ಮುಖ್ಯಸ್ಥರು ನೋಟೀಸು ಜಾರಿ ಮಾಡಿದ ದಿನದಿಂದ ಮುಂದಿನ 90 ದಿನಗಳ ವರೆಗೆ ತಲಾಕ್ ಅನೂರ್ಜಿತವಾಗಿಯೇ ಇರುತ್ತದೆ. ಪತ್ನಿ ಗರ್ಭಿಣಿಯಾಗಿದ್ದರೆ ಪ್ರಸವದ ವರೆಗೆ ತಲಾಕ್ ಅನೂರ್ಜಿತ ವಾಗಿರುತ್ತದೆ.’
    ಇದೊಂದು ಉದಾಹರಣೆ ಅಷ್ಟೇ. ಪಾಕಿಸ್ತಾನ ಇಲ್ಲಿ ನೆಪ ಮಾತ್ರ. ನಮಗೆ ಮುಖ್ಯವಾಗಬೇಕಾದುದು ತಲಾಕ್‍ನ ತಪ್ಪಾದ ರೂಪವನ್ನು ಸರಿಯಾದ ರೂಪಕ್ಕೆ ಪರಿವರ್ತಿಸುವುದು ಹೇಗೆ ಎಂಬುದು. ಜೈಲಿಗಟ್ಟುವುದು ಎಂದರೆ ಪತಿ-ಪತ್ನಿಯನ್ನು ಶಾಶ್ವತ ವೈರಿಗಳಾಗಿಸುವುದು ಎಂದೇ ಅರ್ಥ. ಆ ಬಳಿಕ ಅವರಿಬ್ಬರೂ ದಂಪತಿಗಳಾಗಿ ಉಳಿಯುವುದಕ್ಕೆ ಸಾಧ್ಯವೇ ಇಲ್ಲ. ಇದೂ ಒಂದು ಪರಿಹಾರವೇ? ತ್ರಿವಳಿ ತಲಾಕ್ ತಪ್ಪು ಎಂದಾದರೆ ಆ ತಲಾಕನ್ನು ಅನೂರ್ಜಿತಗೊಳಿಸಿ ಸರಿಯಾದ ತಲಾಕ್‍ಗೆ ವೇದಿಕೆ ಸಿದ್ಧಪಡಿಸುವುದು ಅಗತ್ಯವಾಗಿತ್ತಲ್ಲವೇ? ಅಥವಾ ಮಾತುಕತೆ, ರಾಜಿ ಪಂಚಾಯಿತಿಕೆ, ಆಪ್ತ ಸಮಾಲೋಚನೆಗಳಿಗೆ ಅವಕಾಶ ಒದಗಬಹುದಾದಂತಹ ವಾತಾವರಣ ನಿರ್ಮಿಸುವುದು ಮುಖ್ಯವಾಗಿತ್ತಲ್ಲವೇ? ವಿವಾಹ ವಿಚ್ಛೇದನವೆಂಬುದು ಕೊಲೆ ಕೃತ್ಯದಂತೆ ಅಲ್ಲವಲ್ಲ. ಬೇಡವಾದ ವಿವಾಹ ಬಂಧನದಿಂದ ಮುಕ್ತಗೊಳಿಸುವುದನ್ನು ಅಪರಾಧವಾಗಿಯೋ ಸಂಕೀರ್ಣವಾಗಿಯೋ ನೋಡಬೇಕಾಗಿಲ್ಲವಲ್ಲ. ಇದು ಸಂವಿಧಾನ ಬಾಹಿರವಾಗಿರಬಾರದು ಎಂಬುದಷ್ಟೇ ಮುಖ್ಯವಾಗಬೇಕಲ್ಲ. ಇನ್ನು, ಈ ಮಸೂದೆಯಿಂದಾಗಿ, ‘ಸರಿ’ ತಲಾಕನ್ನೇ ತ್ರಿವಳಿ ಎಂದು ಆರೋಪಿಸಿ ದೂರು ದಾಖಲಿಸಬಹುದಾದ ಸಾಧ್ಯತೆಗಳೂ ಇದೆಯಲ್ಲವೇ? ಹೀಗೆ ದುರುಪಯೋಗವಾಗದಂತೆ ತಡೆಯಲು ಈ ಮಸೂದೆಯಲ್ಲಿ ಏನು ಪರಿಹಾರವಿದೆ? ಅಂತಿಮವಾಗಿ ತಲಾಕನ್ನು ಅಸಾಧ್ಯದ ಮಟ್ಟಕ್ಕೆ ಈ ಮಸೂದೆ ತಂದು ಮುಟ್ಟಿಸಲಿದೆಯೇ? ಅಷ್ಟಕ್ಕೂ,
    ಹೈನುದ್ಯಮ ನಡೆಸುವ ವಯೋವೃದ್ಧ ಮುಸ್ಲಿಮರನ್ನೂ ಗೋಹತ್ಯೆಯ ಹೆಸರಲ್ಲಿ ಥಳಿಸಿ ಕೊಲ್ಲುವ ಮತ್ತು ಲವ್ ಜಿಹಾದ್, ನೈತಿಕ ಪೊಲೀಸ್‍ಗಿರಿ ನಡೆಸುವ ಹಾಗೂ ಗೋಮಾಂಸ ಪತ್ತೆಯಲ್ಲಿ ತೊಡಗಿರುವ ಮಂದಿ ಇನ್ನು ಮುಂದಕ್ಕೆ ತ್ರಿವಳಿ ತಲಾಕನ್ನು ಪತ್ತೆ ಹಚ್ಚುವುದಕ್ಕೂ ಮುಂದಾಗಬಹುದೇ? ಯಾವ ಮನೆ, ಯಾವ ಗ್ರಾಮ, ಯಾವ ಪ್ರದೇಶದಲ್ಲಿ ತ್ರಿವಳಿ ತಲಾಕ್ ಪ್ರಕರಣ ನಡೆದಿದೆ ಎಂಬುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ಕೊಡುವುದಕ್ಕೆ ತಂಡ ರಚನೆಯಾಗಬಹುದೇ? ಸರಿ ತಲಾಕನ್ನೂ ತ್ರಿವಳಿ ಎಂದು ವದಂತಿ ಹಬ್ಬಿಸಿ ಬಂಧನವಾಗುವಂತಹ ವಾತಾವರಣವನ್ನು ಹುಟ್ಟುಹಾಕಬಹುದೇ? ಈವರೆಗೆ ಗೋವಿನ ಹೆಸರಲ್ಲಿ ನಡೆಯುತ್ತಿದ್ದ ಮುಸ್ಲಿಮ್ ವಿರೋಧಿ ದೌರ್ಜನ್ಯಗಳ ಪಟ್ಟಿಗೆ ಇನ್ನು ಮುಂದೆ ತಲಾಕೂ ಒಳಪಡಲಿದೆಯೇ?
      ಈ ಮಸೂದೆಗೆ ಸಂಬಂಧಿಸಿ ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಡಿ. 30ರಂದು ಬರೆದ ಸಂಪಾದಕೀಯಕ್ಕೆ Wrong Message (ತಪ್ಪು ಸಂದೇಶ) ಎಂಬ ಶೀರ್ಷಿಕೆಯನ್ನು ಕೊಟ್ಟಿತ್ತು. ನಿಜಕ್ಕೂ, ಈ ಶೀರ್ಷಿಕೆ ಅತ್ಯಂತ ಸೂಕ್ತ ಮತ್ತು ಸಮಯೋಚಿತ. ಆ ಮಸೂದೆ ರವಾನಿಸಿರುವುದು ತಪ್ಪು ಸಂದೇಶವನ್ನೇ.

No comments:

Post a Comment