Tuesday, May 30, 2017

ಮೋಗ್ಲಿ ಗರ್ಲ್ ಮತ್ತು ಮಾಧ್ಯಮ

ಮೋಗ್ಲಿ ಗರ್ಲ್
ಲಕ್ಷಣಗಳು
1. ಪ್ರಾಣಿಗಳಂತೆ ಕೈ-ಕಾಲು ಬಳಸಿ ನಾಲ್ಕು ಕಾಲಿನ ನಡಿಗೆ
2. ಆಹಾರ ಸೇವನೆಗೆ ಕೈ ಬಳಸಲ್ಲ, ನೇರವಾಗಿ ಬಾಯಿಯಿಂದ.
3. ಉದ್ದುದ್ದ ಉಗುರು. ಸಿಕ್ಕುಗಟ್ಟಿದ ಕೂದಲು.
4. ಮೈಮೇಲೆ ಪ್ರಾಣಿಗಳು ಪರಚಿದ ಗಾಯಗಳು.
5. ಮಾತಾಡುವುದಿಲ್ಲ, ಚೀರುತ್ತಾಳೆ.
6. ಪತ್ತೆಯಾಗುವಾಗ ಬೆತ್ತಲೆಯಾಗಿದ್ದಳು..
ಎಪ್ರಿಲ್ 6 ಅಥವಾ 7ರಂದು ಪ್ರಕಟವಾದ ಈ ದೇಶದ ಬಹುತೇಕ ಎಲ್ಲ ಪತ್ರಿಕೆಗಳೂ ಒಂದು ಅಚ್ಚರಿಯ ಸುದ್ದಿಯನ್ನು ಪ್ರಕಟಿಸಿದ್ದುವು. ಈ ಸುದ್ದಿಯು ಮಾಧ್ಯಮಗಳನ್ನು ಎಷ್ಟು ಕುತೂಹಲಕ್ಕೆ ತಳ್ಳಿದ್ದುವೆಂದರೆ, ಬಹುತೇಕ ಎಲ್ಲವೂ ಇದನ್ನು ಮುಖ್ಯ ಸುದ್ದಿಯಾಗಿಯೇ ಪ್ರಕಟಿಸಿದ್ದುವು. ಉತ್ತರ ಪ್ರದೇಶದ ಕಟರ್ನಿಘಾಟ್ ರಕ್ಷಿತಾರಣ್ಯದಲ್ಲಿ ಮಂಗಗಳೊಂದಿಗೆ ವಾಸಿಸುತ್ತಿದ್ದ 8 ವರ್ಷದ ಹೆಣ್ಣು ಮಗುವನ್ನು ಪತ್ತೆ ಹಚ್ಚಲಾಗಿದೆ ಎಂಬುದೇ ಈ ಸುದ್ದಿ. ಸುದ್ದಿಗಳ ಒಟ್ಟು ಸ್ವರೂಪ ಹೀಗಿದೆ..
     ರಕ್ಷಿತಾರಣ್ಯದಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಯಾದವ್‍ರ ಕಣ್ಣಿಗೆ ಅಚಾನಕ್ಕಾಗಿ ಬಿದ್ದ ಈ ಮಗುವನ್ನು ರಕ್ಷಿಸಲು ಅವರು ಬಹಳವೇ ಶ್ರಮ ಪಟ್ಟರು. ಅವರ ಮೇಲೆ ಮಂಗಗಳು ದಾಳಿ ಮಾಡಿದುವು. ತಮ್ಮ ಮಗುವಿನಂತೆ ಅವು ಈ ಮಗುವನ್ನು ಬಾಹುಗಳಲ್ಲಿ ಪಡಕೊಂಡವು. ಆದರೂ ಮಾನವ ಬಲಪ್ರಯೋಗದ ಎದುರು ಮಂಗಗಳು ಅಸಹಾಯಕ ವಾದುವು. ಸಾಕಷ್ಟು ಕಾದಾಟ ನಡೆಸಿದ ಬಳಿಕ ಮಗು ಇನ್ಸ್‍ಪೆಕ್ಟರ್ ಅವರ ವಶವಾಯಿತು. ಅವರು ಮಗುವನ್ನು ನೋಡಿದ್ದು ಮಂಗಗಳ ಜೊತೆ ಮರದಲ್ಲಿ. ಮಗು ವಿವಸ್ತ್ರ ವಾಗಿತ್ತು. ಮಂಗಗಳಂತೆ ಚೀರುವುದನ್ನು ಬಿಟ್ಟರೆ ಬೇರೆ ಮಾತು ಅದಕ್ಕೆ ಬರುತ್ತಿರಲಿಲ್ಲ. ಮನುಷ್ಯರನ್ನು ಕಂಡರೆ ಅದು ಭಯದಿಂದ  ದೂರ ಓಡುತ್ತಿತ್ತು.
    ಹಿಂದಿ ದಿನಪತ್ರಿಕೆಯೊಂದು ಮೊಟ್ಟಮೊದಲು ಈ ಮಗು ವಿನ ಕತೆ ಬರೆದು ‘ಮೋಗ್ಲಿ ಗರ್ಲ್’ ಎಂದು ಹೆಸರು ಕೊಟ್ಟಿತು. ಮೋಗ್ಲಿ ಗರ್ಲ್ ಎಂಬುದು ಖ್ಯಾತ ಕತೆಗಾರ ರುಡ್‍ಯಾರ್ಡ್ ಕಿಪ್ಲಿಂಗ್ ಅವರ ದಿ ಜಂಗಲ್ ಬುಕ್ ಎಂಬ ಕಥಾಸಂಕಲನದ ಒಂದು ಪಾತ್ರ. ಇದೊಂದು ಕಾಲ್ಪನಿಕ ಕಥಾ ಸರಣಿ. ಟಿವಿ ಯಲ್ಲಿ ಧಾರಾವಾಹಿಯಾಗಿ ಅಪಾರ ಜನಪ್ರೀತಿಯನ್ನು ಗಳಿಸಿದ ಕಥೆ ಇದು. ಮನುಷ್ಯರ ಸಂಪರ್ಕ ಇಲ್ಲದೇ ಪ್ರಾಣಿಗಳ    ಜೊತೆಗೆ ಕಾಡಿನಲ್ಲೇ  ಬದುಕುವ ‘ಮೋಗ್ಲಿ’ ಎಂಬ ಈ ಮಗು ಧಾರಾವಾಹಿಯಾಗಿ ಮಕ್ಕಳಿಗೆ ತುಂಬ ಇಷ್ಟ. ವಿಶೇಷ ಏನೆಂದರೆ, ಉತ್ತರ ಪ್ರದೇಶದಲ್ಲಿ ಪತ್ತೆಯಾದ ಈ ಮಗುವಿನ ಸುದ್ದಿಯನ್ನು ಪ್ರಕಟಿಸಿದ ಎಲ್ಲ ಪತ್ರಿಕೆಗಳೂ ದಿ ಜಂಗಲ್ ಬುಕ್‍ನ ಪ್ರಸ್ತಾಪ ಮಾಡಿವೆ. ಅದೇ ವೇಳೆ, ಇನ್ನೊಂದು ಹಿಂದಿ ಪತ್ರಿಕೆಯು ಈ ಮಗುವನ್ನು ವನದೇವಿ ಎಂದು ಕರೆಯಿತು. ಜನರು ಆಕೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಬರತೊಡಗಿದರು. ಕಾಲು ಮುಟ್ಟಿದರು. ಹಣ ನೀಡತೊಡಗಿದರು. ಕೊನೆಗೆ ಆಸ್ಪತ್ರೆಯ ಆಡಳಿತ ಮಂಡಳಿಯು ಜನರ ಸಂದಣಿಯನ್ನು ನಿಭಾಯಿಸುವುದಕ್ಕಾಗಿ ಕಾವಲುಗಾರರನ್ನು ನೇಮಿಸಿತು. ಹಾಗಂತ,
ಈ ಮಗು ನಿಜಕ್ಕೂ ಮೋಗ್ಲಿಯೇ? ವಾನರ ಜೊತೆಗೆ ಮರಗಳಲ್ಲಿ ಬದುಕುತ್ತಿದ್ದುದು ನಿಜವೇ? ಆಕೆಯನ್ನು ಪತ್ತೆ ಹಚ್ಚಿದ್ದು ಯಾರು, ಎಷ್ಟು ಸಮಯಗಳ ಹಿಂದೆ.. ಇತ್ಯಾದಿ ಓದುಗರ ಮನದಲ್ಲಿ ಹುಟ್ಟಿದ ಪ್ರಶ್ನೆಗಳಿಗೆ ಎಪ್ರಿಲ್ 7ರ ಬಳಿಕದ ಯಾವ ಮಾಧ್ಯಮಗಳೂ ಉತ್ತರವನ್ನು ನೀಡಲಿಲ್ಲ. ಆದರೆ ಕುತೂಹಲಭರಿತ ಕೆಲವರು ಆ ಇಡೀ ಪ್ರಕರಣದ ಹಿಂದಿ    ರುವ ರಹಸ್ಯವನ್ನು ಹುಡುಕಲು ಹೊರಟಾಗ ಪತ್ತೆಯಾದ ವಿವರಗಳೇ ಬೇರೆ.
ರುಡ್‍ಯಾರ್ಡ್ ಕಿಪ್ಲಿಂಗ್ ಅವರ ದಿ ಜಂಗಲ್ ಬುಕ್‍ನ ಮೋಗ್ಲಿಗೂ ಈ ಮಗುವಿಗೂ ಯಾವ ಸಾಮ್ಯತೆಗಳೂ ಇಲ್ಲ. ಈಕೆ ಪತ್ತೆಯಾದದ್ದು ಕಾಡಿನಲ್ಲಲ್ಲ, ಪೊಲೀಸ್ ಔಟ್‍ ಪೋಸ್ಟಿನೆದುರು. ಅದೂ ಜನವರಿ 24ರಂದು. ಪೊಲೀಸ್ ಹೆಲ್ಪ್ ಲೈನ್ ದೂರವಾಣಿ ಸಂಖ್ಯೆ 100ಕ್ಕೆ ಬಂದ ಕರೆಯನ್ನಾಧರಿಸಿ ಮೋತಿ ಪುರದ ಹೆಡ್‍ಕಾನ್‍ಸ್ಟೇಬಲ್ ಸರ್ವಜೀತ್ ಯಾದವ್ ಮತ್ತು ಇಬ್ಬರು ಪೊಲೀಸರು ಈ ಮಗುವನ್ನು ಪತ್ತೆ ಹಚ್ಚಿದರು. ಮಗು ಬೆತ್ತಲೆಯಾಗಿಯೇನೂ ಇರಲಿಲ್ಲ. ಚಡ್ಡಿ ಮತ್ತು ಫ್ರಾಕನ್ನು ತೊಟ್ಟಿತ್ತು. ತೀರಾ ಬಳಲಿದ್ದ ಮತ್ತು ರಸ್ತೆಯಂಚಿನಲ್ಲಿ ಕುಳಿತಿದ್ದ ಮಗು. ಯಾವ ಮಂಗಗಳೂ ಮಗುವಿನ ಬಳಿ ಇರಲಿಲ್ಲ. ಆಕೆ ಪತ್ತೆಯಾದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಜನವಾಸ ಶೂನ್ಯ ಅನ್ನುವಷ್ಟು ಕಡಿಮೆಯಿತ್ತು. ಆಕೆಯನ್ನು ಬಹ್ರೈಕ್‍ನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಹೆಚ್ಚೆಂದರೆ ಆಕೆ 24 ಗಂಟೆಯಷ್ಟು ಹೊತ್ತು ರಸ್ತೆಯಂಚಿನಲ್ಲಿ ಇದ್ದಿರಬಹುದು ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ| ಡಿ.ಕೆ. ಸಿಂಗ್ ಮತ್ತು ಕೆ.ಕೆ. ವರ್ಮಾ ಹೇಳಿದರು. ಇದೇ ಎಪ್ರಿಲ್‍ನಲ್ಲಿ ಆ ಮಗುವನ್ನು ಲಕ್ನೋದ ಮಾನಸಿಕ ಆಸ್ಪತ್ರೆಗೆ ಸೇರಿಸಲಾಯಿತು. ಬಹುಶಃ ಹೆತ್ತವರು ಈ ಮಗುವನ್ನು ರಸ್ತೆಯಂಚಿನಲ್ಲಿ ತೊರೆದು ಹೋಗಿರಬೇಕು. ಒಂದೋ ಮಗು ಕಿವುಡಿ ಮತ್ತು ಮೂಗಿ ಎಂಬ ಕಾರಣಕ್ಕೆ ಅಥವಾ ಮಾನಸಿಕ ಅಸ್ವಸ್ಥತೆಯ ಕಾರಣಕ್ಕೆ ಅಥವಾ ಹೆಣ್ಣು ಮಗು ಎಂಬ ಕಾರಣಕ್ಕಾಗಿ ಅವರು ಮಗುವನ್ನು ತ್ಯಜಿಸಿರಬಹುದು. ಜಂಗಲ್ ಬುಕ್‍ನ ಮೋಗ್ಲಿಗೆ ಈ ಮಗುವನ್ನು ಹೋಲಿಸಿರುವುದಕ್ಕೆ ವೈದ್ಯರು ಅಚ್ಚರಿಪಟ್ಟರು. ಜಂಗಲ್ ಬುಕ್ ಓದಿರಬಹುದಾದ ಪೊಲೀಸರು ಮತ್ತು ಪತ್ರಕರ್ತರು ಸೇರಿಕೊಂಡು ಈ ಮಗುವನ್ನು ಮೋಗ್ಲಿ ಗರ್ಲ್ ಮಾಡಿರಬೇಕು ಅನ್ನುವುದು ದಿನಗಳೆದಂತೆ ಸ್ಪಷ್ಟವಾಗುತ್ತಾ ಹೋಯಿತು. ವಿಶೇಷ ಏನೆಂದರೆ, ವನದೇವಿಯಾಗಿ ಈ ಮಗುವನ್ನು ಹಿಂದಿ ಪತ್ರಿಕೆಯೊಂದು ಚಿತ್ರಿಸಿದ ಬಳಿಕ ಆಸ್ಪತ್ರೆಯಲ್ಲೂ ವಿವಿಧ ಕತೆಗಳು ಹರಿದಾಡತೊಡಗಿದುವು. ಆಸ್ಪತ್ರೆಯ ಕಿಚನ್‍ಗೆ ನಿತ್ಯ ಮಂಗಗಳು ಬರುತ್ತಿತ್ತು. ಆದರೆ ಆ ಮಂಗಗಳು ಈ ಮಗುವನ್ನು ಭೇಟಿ ಮಾಡಲು ಆಸ್ಪತ್ರೆಗೆ ಬರುತ್ತಿವೆ ಎಂದು ವದಂತಿಗಳು ಹಬ್ಬಿಕೊಂಡವು. ಹಾಗಂತ,
ನಾಡಿನಲ್ಲಿರುವ ಮನುಷ್ಯರು ಕಾಡಿನಲ್ಲಿ ಬದುಕಿಯೇ ಇಲ್ಲ ಎಂದಲ್ಲ.
ಮರಿಯಾನ ಚಾಪ್‍ಮನ್ ಎಂಬ ಕೊಲಂಬಿಯಾದ ಮಹಿಳೆ ತನ್ನ 4ನೇ ವರ್ಷದಲ್ಲೇ ಕಾಡು ಪಾಲಾಗಿದ್ದಳು. ಮಕ್ಕಳ ಅಪಹರಣಕಾರರು ಆಕೆಯನ್ನು ಅಪಹರಿಸಿ ಕಾಡಿನಲ್ಲಿ ಅಡಗಿಸಿಟ್ಟಿ ದ್ದರು. ಬಳಿಕ ಆಕೆಯನ್ನು ವೇಶ್ಯಾವಾಟಿಕೆಯ ಅಡ್ಡೆಗೆ ಮಾರಿ ದರು. ಅಲ್ಲಿಂದ ಆಕೆ ತಪ್ಪಿಸಿಕೊಂಡ ಬಳಿಕ ತನ್ನ ಇಡೀ ಬದುಕನ್ನು ಹೇಳಿಕೊಂಡರು. ಕಮಲ ಮತ್ತು ಅಮಲ ಎಂಬ 3 ಮತ್ತು 5 ವರ್ಷದ ಮಕ್ಕಳಿಬ್ಬರನ್ನು ಕಾಡಿನಿಂದ ರಕ್ಷಣೆ ಮಾಡಿದ ಕುತೂಹಲಕಾರಿ ಘಟನೆಯು 1920ರಲ್ಲಿ ಭಾರತದಲ್ಲೇ ನಡೆದಿತ್ತು. ಆದರೆ ಆ ಬಳಿಕ ಈ ಎರಡೂ ಮಕ್ಕಳು ಸಾವಿಗೀಡಾದುವು. ಫಿಜಿ ರಾಷ್ಟ್ರದ ಸುಜಿತ್ ಕುಮಾರ್ ಎಂಬವನನ್ನು ಆತನ ಅಜ್ಜ ವರ್ಷಗಳ ತನಕ ಕೋಳಿಗೂಡಿನಲ್ಲಿಟ್ಟು ಬೆಳೆಸಿದ್ದರು. ತಾಯಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ತಂದೆಯು ಈತನನ್ನು ತ್ಯಜಿಸಿದ್ದರು. ಎಲಿಝಬೆತ್ ಕ್ಲೇಟನ್ ಎಂಬವರು ಆತನನ್ನು ರಕ್ಷಿಸಿದರೂ ಮಾನಸಿಕ ಅಸ್ವಸ್ಥತೆಯು ವಿಪರೀತ ಹಂತಕ್ಕೆ ತಲುಪಿ ಆತ ಸಾವಿಗೀಡಾಗಿದ್ದ. ಉಕ್ರೈನ್‍ನ ಜಾಕ್ಸನ್ ಮಲಯ ಎಂಬ ಮಗುವನ್ನು ನಾಯಿಗೂಡಿನಿಂದ 1991ರಲ್ಲಿ ರಕ್ಷಿಸಲಾಯಿತು. 6 ವರ್ಷಗಳ ವರೆಗೆ ಆಕೆ ನಾಯಿಗೂಡಿನಲ್ಲಿ ಬದುಕಿದ್ದಳು. ಆದರೆ ಈ ಯಾರೂ ಕೂಡ ನಾಯಿಗಳಂತಾದುದೋ ಕೋಳಿ ಯಂತಾದುದೋ ಎಲ್ಲೂ ನಡೆದಿಲ್ಲ. ಉತ್ತರ ಪ್ರದೇಶದಲ್ಲಿ ಪತ್ತೆಯಾದ ಮತ್ತು ಮೋಗ್ಲಿ ಗರ್ಲ್ ಎಂದು ಸುದ್ದಿಯಾದ ಈ ಮಗುವಿಗೆ ಮಾನಸಿಕ ಅಸ್ವಸ್ಥತೆ ಇದೆ. ಜೊತೆಗೇ ಬಾಯಿ ಬರುತ್ತಿಲ್ಲ. ಈ ಎರಡು ಲಕ್ಷಣಗಳ ಹೊರತಾದ ಪ್ರಾಣಿ ಲಕ್ಷಣವೊಂದೂ ಈ ಮಗುವಿನಲ್ಲಿಲ್ಲ. ಇರಲಿ, ಮಾಧ್ಯಮಗಳು ಆರಂಭದಲ್ಲಿ ರೋಚಕ ಸುದ್ದಿಯನ್ನು ಕೊಡಲು ಪ್ರಯತ್ನಿಸಿತೆಂದೇ ಇಟ್ಟುಕೊಳ್ಳೋಣ. ಆದರೆ ಬಳಿಕ ಬಹಿರಂಗವಾದ ಸತ್ಯ ಸುದ್ದಿ ಯನ್ನೂ ಅಷ್ಟೇ ಮಹತ್ವ ಕೊಟ್ಟು ಪ್ರಕಟಿಸಬೇಕಿತ್ತಲ್ಲವೇ? ಸುಳ್ಳು ಸುದ್ದಿಯನ್ನು ಓದುಗರಿಗೆ ನೀಡಿದ ಮಾಧ್ಯಮಗಳ ಮೇಲೆ ಇಂಥದ್ದೊಂದು ಹೊಣೆಗಾರಿಕೆ ಇತ್ತಲ್ಲವೇ? ಯಾಕೆ ಅವು ನಿಜ ಸುದ್ದಿಯನ್ನು ನಿರ್ಲಕ್ಷಿಸಿದುವು? ಹೆಣ್ಣು ಮಗು, ಮಾನಸಿಕ ಅಸ್ವಸ್ಥೆ, ತ್ಯಜಿಸಿ ಹೋದ ಮಗು.. ಮುಂತಾದುವುಗಳಲ್ಲಿ ಮೋಗ್ಲಿ ಗರ್ಲ್‍ನ ರೋಚಕತೆ ಇಲ್ಲ ಎಂಬುದು ಈ ನಿರ್ಲಕ್ಷ್ಯಕ್ಕೆ ಕಾರಣವೇ? ಸದ್ಯ ಮಾಧ್ಯಮಗಳು ರೋಚಕ ಸುದ್ದಿಗಳನ್ನು ಇಷ್ಟಪಡುತ್ತವೆ. ಘಟನೆಯೊಂದರ ಬಗ್ಗೆ ಕಪ್ಪು-ಬಿಳುಪು ವರದಿಯು ಓದುಗ ರನ್ನು ಆಕರ್ಷಿಸುವುದಿಲ್ಲ ಎಂಬ ಭಾವನೆ ಸುದ್ದಿ ಮನೆಯಲ್ಲಿದೆ. ಘಟನೆಗೆ ಉಪ್ಪು-ಖಾರವನ್ನು ಸೇರಿಸಿ ಸುದ್ದಿ ಸ್ವರೂಪವನ್ನು ಕೊಟ್ಟರೆ ಅದು ಓದುಗರ ಗಮನ ಸೆಳೆಯುತ್ತದೆ. ನಿಜವಾಗಿ, ಸುದ್ದಿಯನ್ನು ಒಂದಷ್ಟು ಊಹೆ, ಕಾಲ್ಪನಿಕತೆಯೊಂದಿಗೆ ತಯಾರಿಸುವುದೂ ಒಂದು ಬಗೆಯ ಕಲೆ. ಎಲ್ಲ ಪತ್ರಕರ್ತರಿಗೂ ಅದು ಸಿದ್ದಿಸಬೇಕೆಂದಿಲ್ಲ. ಆದರೆ ಅದರಿಂದಾಗಿ ಆಗುವ ಅನಾಹುತ ಏನೆಂದರೆ, ಸತ್ಯವು ಸತ್ತು ಹೋಗಿ ಊಹೆಯೇ ಜನರಲ್ಲಿ ಸತ್ಯವಾಗಿ ಬಿಡುತ್ತದೆ. ಒಂದು ಹತ್ಯಾ ಪ್ರಕರಣವನ್ನೇ ಎತ್ತಿಕೊಳ್ಳಿ. ಈ ಘಟನೆಯನ್ನು ಒಂದಕ್ಕಿಂತ ಹೆಚ್ಚು ವಿಧದಲ್ಲಿ ವರದಿ ಮಾಡುವುದಕ್ಕೆ ಅವಕಾಶ ಇದೆ. ಒಂದು- ನೇರಾತಿನೇರವಾಗಿ ಕಂಡದ್ದನ್ನು ಕಂಡಹಾಗೆ ಸುದ್ದಿ ತಯಾರಿಸುವುದು ಮತ್ತು ಸುದ್ದಿಯಲ್ಲಿ ಯಾವ ಊಹೆ, ಕಲ್ಪನೆಗಳಿಗೆ ಅವಕಾಶವನ್ನು ನೀಡದೇ ಇರುವುದು. ಇನ್ನೊಂದು- ಘಟನೆಗೆ ಸುದ್ದಿ ಸ್ವರೂಪವನ್ನು ಕೊಡುವಾಗ, ನಿರ್ದಿಷ್ಟ ಸಂಘಟನೆಗಳನ್ನೋ ವ್ಯಕ್ತಿಗಳನ್ನೋ ಇಲಾಖೆಗಳನ್ನೋ ಅನುಮಾನಿಸುವ ರೂಪದಲ್ಲಿ ಬರೆಯುವುದು. ಯಾವ ಆಧಾರವೂ ಇಲ್ಲದೇ ಆದರೆ ಇಂಥವರೇ ಆರೋಪಿಗಳು ಆಗಿರಬಹುದೆಂದು ಓದುಗರು ಅಂದುಕೊಳ್ಳುವ ರೀತಿಯಲ್ಲಿ ಸುದ್ದಿಯನ್ನು ತಯಾರಿಸುವುದು. ಇದು ಸುದ್ದಿ ತಯಾರಿಸುವವರ ಮನಸ್ಥಿತಿಯನ್ನು ಹೊಂದಿಕೊಂಡಿರುತ್ತದೆ. ಭಯೋತ್ಪಾದನೆಗೆ ಸಂಬಂಧಿಸಿದ ಸುದ್ದಿಗಳು ಈ ದೇಶದಲ್ಲಿ ಬಹುತೇಕ ಪ್ರಕಟ ವಾದದ್ದು ಈ ರೀತಿಯಲ್ಲಿಯೇ. ಉತ್ತರ ಪ್ರದೇಶದಲ್ಲಿ ಪತ್ತೆಯಾದ ಮಾನಸಿಕ ಅಸ್ವಸ್ಥ ಮಗುವನ್ನು ಮೋಗ್ಲಿ ಗರ್ಲ್ ಮಾಡಿದುದರಲ್ಲೂ ಇದು ಸ್ಪಷ್ಟವಾಗುತ್ತದೆ. ಮಾನಸಿಕ ಅಸ್ವಸ್ಥತೆ ಇರುವವರಲ್ಲಿ ಹುಚ್ಚಾಟಗಳು ಸಹಜ. ಅವರ ಹಾವ-ಭಾವ-ನೋಟ-ದೇಹ ಭಾಷೆ ಎಲ್ಲವೂ ಅಸಹಜ ರೀತಿಯಲ್ಲಿರುತ್ತವೆ. ಇದೇನೂ ಹೊಸ ವಿಷಯವಲ್ಲ. ಆದರೆ ಈ ಮಗುವಿನ ಬಗ್ಗೆ ಪೊಲೀಸರೊಬ್ಬರು ರಚಿಸಿದ ಅರೆ-ಬರೆ ಅಂತೆಕಂತೆಗಳಿಗೆ ಜಂಗಲ್ ಬುಕ್‍ನ ಮೋಗ್ಲಿ ಯನ್ನು ಅಂಟಿಸಿ ಹಿಂದೆ-ಮುಂದೆ ನೋಡದೇ ಸುದ್ದಿಯ ಸ್ವರೂಪವನ್ನು ಕೊಡುವ ಜರೂರತ್ತು ಮಾಧ್ಯಮ ಮಂದಿಗೆ ಏನಿತ್ತು? ಯಾವ ಆಧಾರವೂ ಇಲ್ಲದೇ ಕನಿಷ್ಠ ವೈದ್ಯರ ಹೇಳಿಕೆಯನ್ನೂ ಪಡೆಯದೇ ಸುದ್ದಿ ರಚಿಸುವುದು ಎಷ್ಟು ಸರಿ? ಓದುಗರಿಗೆ ಇದು ರವಾನಿಸುವ ಸಂದೇಶ ಏನು?
ಇವತ್ತು ಸುದ್ದಿ-ಮಾಧ್ಯಮಗಳ ದೊಡ್ಡ ದೌರ್ಬಲ್ಯವೇ ಸುದ್ದಿ ಸ್ಪಷ್ಟತೆಗೆ ಮಹತ್ವ ಕೊಡದೇ ಇರುವುದು. ‘ಮೋಗ್ಲಿ ಗರ್ಲ್’ ಇದಕ್ಕೆ ಇನ್ನೊಂದು ಪುರಾವೆ ಅಷ್ಟೇ.

No comments:

Post a Comment