Tuesday, May 30, 2017

ಬಿಲ್ಕೀಸ್, ನಿರ್ಭಯರ ನಡುವೆ..

      1. ಜಸ್ವಂತ್ ಭಾಯಿ ನೈ, ಗೋವಿಂಗ್ ಭಾಯಿ ನೈ, ಶೈಲೇಶ್ ಭಟ್, ರಾಧೇಶ್ಯಾಂ ಶಾ, ಬಿಪಿನ್ ಚಂದ್ರ ಜೋಷಿ, ಕೇಸರ್ ಭಾಯಿ ವೊಹಾನಿಯಾ, ಪ್ರದೀಪ್ ಮೋರ್ಧಿಯಾ, ಬರ್‍ಭಾಯಿ ವೊಹಾನಿಯ, ರಾಜುಭಾಯಿ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನ.
      2. ಅಕ್ಷಯ್, ಪವನ್, ವಿನಯ್ ಶರ್ಮ ಮತ್ತು ಮುಖೇಶ್.
      ಸಂಖ್ಯೆ ಒಂದು - ಗುಜರಾತ್‍ನ ಬಿಲ್ಕೀಸ್ ಬಾನು ಪ್ರಕರಣದಲ್ಲಿ ಮುಂಬೈ ಹೈಕೋರ್ಟ್‍ನಿಂದ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳ ಹೆಸರುಗಳಾದರೆ ಸಂಖ್ಯೆ ಎರಡು - ದೆಹಲಿಯ ನಿರ್ಭಯ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್‍ನಿಂದ ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿಗಳ ಹೆಸರುಗಳಾಗಿವೆ.
ಈ ಎರಡೂ ಪ್ರಕರಣಗಳಲ್ಲಿ ಹೋಲಿಕೆಗಳು ಕಡಿಮೆ. 2002 ಮಾರ್ಚ್‍ನಲ್ಲಿ ಬಿಲ್ಕೀಸ್ ಬಾನು ಪ್ರಕರಣ ನಡೆದಿದ್ದರೆ, 2012 ಡಿಸೆಂಬರ್‍ನಲ್ಲಿ ನಿರ್ಭಯ ಪ್ರಕರಣ ನಡೆದಿದೆ. ಸರಿಸುಮಾರು 10 ವರ್ಷಗಳ ವ್ಯತ್ಯಾಸ. ಬಿಲ್ಕೀಸ್ ಈಗಲೂ ಬದುಕುಳಿದಿದ್ದಾಳೆ. ವಿಶೇಷ ಏನೆಂದರೆ, ನಿರ್ಭಯ ಪ್ರಕರಣಕ್ಕೆ ನಮ್ಮ ನ್ಯಾಯಾಂಗವು ಅಭೂತಪೂರ್ವವಾಗಿ ಸ್ಪಂದಿಸಿದೆ. ಕೇವಲ 5 ವರ್ಷಗಳೊಳಗೆ ಈ ಪ್ರಕರಣ ಹೈಕೋರ್ಟ್‍ನಿಂದ ಸುಪ್ರೀಮ್ ಕೋರ್ಟ್‍ನ ವರೆಗೆ ಚಲಿಸಿ ಅಂತಿಮ ತೀರ್ಪು ಪ್ರಕಟವಾಗಿದೆ. ಅದೇ ವೇಳೆ, ಬಿಲ್ಕೀಸ್ ಬಾನು ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹೈಕೋರ್ಟ್ ತೀರ್ಪು ನೀಡಿದೆ. ಅದೂ ಘಟನೆ ನಡೆದು ದೀರ್ಘ 15 ವರ್ಷಗಳ ಬಳಿಕ. ಇನ್ನು, ವಾದಿ ಅಥವಾ ಪ್ರತಿವಾದಿಗಳಲ್ಲಿ ಯಾರಾದರೂ ಸುಪ್ರೀಮ್ ಕೋರ್ಟ್‍ಗೆ ಮನವಿ ಸಲ್ಲಿಸಿದರೆ ಪ್ರಕರಣದ ಅಂತಿಮ ತೀರ್ಪು ಹೊರಬೀಳಲು ಇನ್ನಷ್ಟು ಸಮಯ ಕಾಯ ಬೇಕಾದೀತು. ಅಷ್ಟಕ್ಕೂ,
      ನಿರ್ಭಯಾಳಿಗೆ ಅತ್ಯಾಚಾರಿಗಳ ಪರಿಚಯ ಇರಲಿಲ್ಲ. ಬಸ್‍ನಲ್ಲಿ ಅತ್ಯಾಚಾರ ನಡೆಸಲಾಗಿತ್ತು. ಅತ್ಯಾಚಾರಿಗಳು ಕುಡಿತದ ಅಮಲಿನಲ್ಲಿದ್ದರು. ಅತ್ಯಾಚಾರಿಗಳ ಮಾತುಗಾರಿಕೆ, ಹಾವ-ಭಾವಗಳಲ್ಲಿ ಅವರು ಅನಕ್ಷರಸ್ಥರಂತೆ ಕಂಡು ಬರುತ್ತಿದ್ದರು ಎಂದು ನಿರ್ಭಯಳೇ ಹೇಳಿದ್ದಾಳೆ. ಈ ಪ್ರಕರಣ ನಡೆದಿರುವುದು ರಾತ್ರಿಯಲ್ಲಿ. ಅದೇ ವೇಳೆ ಬಿಲ್ಕೀಸ್ ಬಾನುಳ ಮೇಲೆ ಅತ್ಯಾಚಾರ ನಡೆಸಿದವರು ಅಪರಿಚಿತರಾಗಿರಲಿಲ್ಲ. ಗೋಧ್ರೋತ್ತರ ಹತ್ಯಾಕಾಂಡದ ಸಮಯದಲ್ಲಿ ಜೀವ ಉಳಿಸಿಕೊಳ್ಳುವ ಉದ್ದೇಶದಿಂದ ಒಂದು ಟ್ರಕ್‍ನಲ್ಲಿ ಬಿಲ್ಕೀಸ್ ಮತ್ತು ಆಕೆಯ ಕುಟುಂಬದ 17 ಮಂದಿ ಸುರಕ್ಷಿತ ಪ್ರದೇಶಕ್ಕೆ ತೆರಳುತ್ತಿದ್ದ ಸಮಯದಲ್ಲಿ ಈ ಮೇಲೆ ಉಲ್ಲೇಖಿಸಲಾದ ಮಂದಿ ಮಾರ್ಗ ಮಧ್ಯದಲ್ಲಿ ಟ್ರಕ್ ತಡೆದಿದ್ದರು. 11 ಮಂದಿಯನ್ನು ಸಾಯಿಸಿದ್ದರು. ಆಗ ಬಿಲ್ಕೀಸ್‍ಗೆ 19 ವರ್ಷ. 5 ತಿಂಗಳ ಗರ್ಭಿಣಿ. ಕೈಯಲ್ಲಿ 3 ವರ್ಷ ಪ್ರಾಯದ ಮಗಳು ಸಾಲೆಹ್ ಇದ್ದಳು. ಹಲ್ಲೆಕೋರರು ಆಕೆಯ ಕೈಯಿಂದ ಮಗಳನ್ನು ಕಿತ್ತು ಎಸೆದರು. ಮಗು ಬಂಡೆಗೆ ಅಪ್ಪಳಿಸಿತು. ಬಿಲ್ಕೀಸ್‍ಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಆಕೆಯ ಕಣ್ಣೆದುರೇ ತಂಗಿ ಮತ್ತು ತಾಯಿಯ ಮೇಲೆ ಅತ್ಯಾಚಾರ ಎಸಗಿ ಸಾಯಿಸಲಾಯಿತು. ಈಕೆ ಸತ್ತಿದ್ದಾಳೆಂದು ಅವರು ಬಿಟ್ಟು ಹೋದರು. ಪ್ರಜ್ಞೆ ಬಂದಾಗ ಮೈಯಲ್ಲಿ ಬಟ್ಟೆ ಇರಲಿಲ್ಲ. ಒಂದೂವರೆ ದಿನಗಳ ಕಾಲ ಗುಡ್ಡದಲ್ಲಿ ಆಹಾರ-ಪಾನೀಯಗಳಿಲ್ಲದೇ ಅಡಗಿ ಕುಳಿತು ಬಳಿಕ ಬುಡಕಟ್ಟು ಕಾಲನಿಗೆ ತೆರಳಿ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡು ಆಕೆ ಬದುಕುಳಿದಳು. ಇಲ್ಲಿನ ಪ್ರಮುಖ ಅಂಶ ಏನೆಂದರೆ, ಹತ್ಯೆ ಮತ್ತು ಅತ್ಯಾಚಾರ ನಡೆಸಿದ ಮಂದಿ ಆಕೆಯ ಪರಿಚಿತ ವಲಯದವರೇ ಆಗಿದ್ದರು. ಹಲವು ವರ್ಷಗಳಿಂದ ಅವರು ಆಕೆಯ ಮನೆಯಿಂದ ಹಾಲು ಖರೀದಿಸಿ ಕೊಂಡೊಯ್ಯುತ್ತಿದ್ದ ಯುವಕರಾಗಿದ್ದರು. ಆದ್ದರಿಂದ ಅತ್ಯಾಚಾರ ನಡೆಸಿದವರು ಮತ್ತು ಹತ್ಯೆ ನಡೆಸಿದವರ ಗುರುತಿನ ಬಗ್ಗೆ ಆಕೆಯಲ್ಲಿ ಯಾವ ಗೊಂದಲವೂ ಇರಲಿಲ್ಲ. ಅತ್ಯಾಚಾರ ನಡೆಸಿದ ಜಸ್ವಂತ್ ಭಾಯಿ ನೈ, ಗೋವಿಂದ್ ಭಾಯಿ ನೈ ಮತ್ತು ರಾಧೇ ಶ್ಯಾಂ ಶಾರನ್ನು ನೇಣಿಗೇರಿಸಬೇಕೆಂದು ಸಿಬಿಐಯೂ ಒತ್ತಾಯಿಸಿತ್ತು. ಆದರೆ ಇದೀಗ ಹೈಕೋರ್ಟ್ ಎಲ್ಲ 11 ಆರೋಪಿಗಳಿಗೂ ಜೀವಾವಧಿ ಶಿಕ್ಷೆಯನ್ನಷ್ಟೇ ವಿಧಿಸಿದೆ. ಅದೇ ವೇಳೆ, ನಿರ್ಭಯ ಪ್ರಕರಣದ ಆರೋಪಿಗಳಿಗೆ ಸುಪ್ರೀಮ್ ಕೋರ್ಟು ಮರಣ ದಂಡನೆಯನ್ನು ವಿಧಿಸಿದೆ. ಇಲ್ಲೊಂದು ಪ್ರಶ್ನೆಯಿದೆ.
ಸಾಮೂಹಿಕ ಹಲ್ಲೆ, ಸಾಮೂಹಿಕ ಹತ್ಯೆ, ಸಾಮೂಹಿಕ ಅತ್ಯಾಚಾರ ಮುಂತಾದುವುಗಳು ಅಸಾಮೂಹಿಕ ಹಲ್ಲೆ, ಹತ್ಯೆ, ಅತ್ಯಾಚಾರಗಳ ಎದುರು ಕಡಿಮೆ ಮಹತ್ವವನ್ನು ಪಡಕೊಳ್ಳುತ್ತ ದೆಯೇ? ಗುಂಪು ಹಲ್ಲೆ, ಗುಂಪುರಹಿತ ಹಲ್ಲೆಗಿಂತ ಕಡಿಮೆ ಮಹತ್ವದ್ದೇ? ಏಕ ವ್ಯಕ್ತಿ ನಡೆಸುವ ಅತ್ಯಾಚಾರಕ್ಕೂ ಗುಂಪು ನಡೆಸುವ ಅತ್ಯಾಚಾರಕ್ಕೂ ನಡುವೆ ವ್ಯತ್ಯಾಸಗಳನ್ನು ಕಲ್ಪಿಸಬೇಕೇ? ಆ ವ್ಯತ್ಯಾಸ ಯಾವ ತರದ್ದು? ಒಂದು ಗಂಭೀರ ಮತ್ತು ಇನ್ನೊಂದು ಸಾಮಾನ್ಯ ಎಂಬ ರೀತಿಯದ್ದೇ? ಬಿಲ್ಕೀಸ್ ಮತ್ತು ನಿರ್ಭಯ ಪ್ರಕರಣಗಳು ಈ ಪ್ರಶ್ನೆಗಳಿಗಾಗಿ ನಮ್ಮ ನಡುವೆ ಚರ್ಚೆಗೊಳಗಾಗಬೇಕು. ಬಿಲ್ಕೀಸ್‍ಳ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ಕೋರ್ಟು ಒಪ್ಪಿಕೊಂಡಿದೆ. ಮಾತ್ರವಲ್ಲ, ವರದಿಯನ್ನು ತಿರುಚಿದ ಆರೋಪದಲ್ಲಿ ಇಬ್ಬರು ವೈದ್ಯರನ್ನೇ ತಪ್ಪಿತಸ್ಥರೆಂದು ಘೋಷಿಸಿದೆ. ಪೊಲೀಸರನ್ನೂ ಶಿಕ್ಷೆಗೊಳಪಡಿಸಿದೆ. ಬಿಲ್ಕೀಸ್‍ಳ 3 ವರ್ಷದ ಮಗಳೂ ಸಹಿತ ಹಲವರ ಹತ್ಯೆಯನ್ನು ಅದು ಒಪ್ಪಿಕೊಂಡಿದೆ. ಆಕೆಯ ತಂಗಿ ಮತ್ತು ತಾಯಿಯ ಮೇಲೂ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಆದರೂ ಮರಣ ದಂಡನೆ ಶಿಕ್ಷೆಗೆ ಅರ್ಹ ಪ್ರಕರಣವಾಗಿ ಇದನ್ನು ಕೋರ್ಟು ಪರಿಗಣಿಸಿಲ್ಲ. ಅದೇ ವೇಳೆ, ನಿರ್ಭಯ ಪ್ರಕರಣದಲ್ಲಿ ಅದು ಮರಣ ದಂಡನೆಯನ್ನು ಎತ್ತಿ ಹಿಡಿದಿದೆ. ಇದಕ್ಕೆ ಕಾರಣವೇನು? ನಿರ್ಭಯ ಪ್ರಕರಣಕ್ಕೆ ಸಿಕ್ಕ ರಾಷ್ಟ್ರೀಯ ಮಹತ್ವವು ತೀರ್ಪಿನ ಮೇಲೆ ಪ್ರಭಾವ ಬೀರಿರಬಹುದೇ? ನಿಜವಾಗಿ, ಗುಂಪು ದಾಳಿ ಅನ್ನುವುದು ಈ ದೇಶದಲ್ಲಿ ಇತ್ತಿತ್ತಲಾಗಿ ಒಂದು ಟ್ರೆಂಡ್ ಆಗಿ ಚಾಲ್ತಿಯಲ್ಲಿದೆ. ದಾದ್ರಿಯಲ್ಲಿ ಅಖ್ಲಾಕ್‍ರನ್ನು ಕೊಂದದ್ದು ಗುಂಪು. ಮುಝಪ್ಫರ್ ನಗರ್‍ನಲ್ಲಿ ಹತ್ಯೆ-ಅತ್ಯಾಚಾರ ನಡೆಸಿದ್ದೂ ಗುಂಪು. ರಾಜಸ್ಥಾನದಲ್ಲಿ ಪೆಹ್ಲುಖಾನ್‍ರನ್ನು ಕೊಲೆಗೈದದ್ದೂ ಗುಂಪು. ಉಡುಪಿಯ ಕೆಂಜಾರಿನಲ್ಲಿ ಪ್ರವೀಣ್ ಪೂಜಾರಿಯನ್ನು ಥಳಿಸಿ ಕೊಂದುದೂ ಗುಂಪು. ನೈತಿಕ ಪೊಲೀಸ್‍ಗಿರಿಯ ಹೆಸರಲ್ಲಿ, ಅಕ್ರಮ ಗೋಸಾಗಾಟದ ಹೆಸರಲ್ಲಿ, ಮತಾಂತರದ ಹೆಸರಲ್ಲಿ.. ಹೀಗೆ ಎಲ್ಲ ಸಂದರ್ಭಗಳಲ್ಲೂ ಇವತ್ತು ಗುಂಪುಗಳೇ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತಿದೆ. ನಿರ್ಭಯ ಮತ್ತು ಬಿಲ್ಕೀಸ್ ಪ್ರಕರಣಕ್ಕೂ ನಡುವೆ ಇರುವ ಪ್ರಮುಖ ವ್ಯತ್ಯಾಸ ಇದು. ನಿರ್ಭಯದಂಥ ಪ್ರಕರಣ ಧರ್ಮಾಧಾರಿತ ಅಲ್ಲ. ನಿರ್ಭಯಳಿಗೂ ಆಕೆಯನ್ನು ಅತ್ಯಾಚಾರ ನಡೆಸಿದವರಿಗೂ ನಡುವೆ ಹೆಣ್ಣು-ಗಂಡು ಎಂಬ ವ್ಯತ್ಯಾಸದ ಹೊರತು ಇನ್ನಾವ ಪ್ರಮುಖ ವ್ಯತ್ಯಾಸವೂ ಇರಲಿಲ್ಲ. ಕುಡಿತದ ಅಮಲಿನಲ್ಲಿದ್ದ ಅವರಿಗೆ ನಿರ್ಭಯಳೂ ಒಂದೇ ಇನ್ನಾವುದಾದರು ಹೆಣ್ಣೂ ಒಂದೇ. ಅವರಿಗೆ ಹೆಣ್ಣಷ್ಟೇ ಬೇಕಿತ್ತು. ಆದರೆ ಬಿಲ್ಕೀಸ್ ಪ್ರಕರಣ ಹಾಗಲ್ಲ. ಅತ್ಯಾಚಾರಿಗಳು ಒಂದು ಧರ್ಮದವರಾದರೆ, ಅತ್ಯಾಚಾರಕ್ಕೆ ಮತ್ತು ಹತ್ಯೆಗೆ ಒಳಗಾದವರು ಇನ್ನೊಂದು ಧರ್ಮದವರು. ಹಾಗಂತ, ಈ ವ್ಯತ್ಯಾಸ ಕಾಕತಾಳೀಯವೇನೂ ಆಗಿರಲಿಲ್ಲ. ಈ ವ್ಯತ್ಯಾಸವನ್ನು ಗೊತ್ತಿದ್ದೇ ಮಾಡಲಾಗಿತ್ತು. ಈ ಗುಂಪಿನ ಉದ್ದೇಶ ಯಾರನ್ನಾದರೂ ಅತ್ಯಾಚಾರ ಮಾಡುವುದು ಮತ್ತು ಹತ್ಯೆ ನಡೆಸುವುದು ಆಗಿರಲಿಲ್ಲ. ನಿರ್ದಿಷ್ಟ ಧರ್ಮದವರೇ ಅವರ ಗುರಿಯಾಗಿದ್ದರು. ನಿರ್ಭಯ ಪ್ರಕರಣದ ಅಪರಾಧಿಗಳು ಮತ್ತು ಬಿಲ್ಕೀಸ್ ಪ್ರಕರಣದ ಅಪರಾಧಿಗಳು ಮುಖಾಮುಖಿಯಾಗುವುದು ಇಲ್ಲೇ. ಬರೇ ಅತ್ಯಾಚಾರಕ್ಕೂ ನಿರ್ದಿಷ್ಟ ಧರ್ಮದವರನ್ನೇ ಆಯ್ಕೆ ಮಾಡಿ ಮಾಡುವ ಅತ್ಯಾಚಾರಕ್ಕೂ ನಡುವೆ ಯಾವುದು ಹೆಚ್ಚು ಅಪಾಯಕಾರಿ? ಒಂದರಲ್ಲಿ ಅತ್ಯಾಚಾರದ ವಾಂಛೆಯಷ್ಟೇ ಇದ್ದರೆ ಇನ್ನೊಂದರಲ್ಲಿ ಅತ್ಯಾಚಾರದ ಜೊತೆಗೇ ಧಾರ್ಮಿಕ ಅಸಹಿಷ್ಣುತೆ ಮತ್ತು ಜನಾಂಗೀಯ ಮೇಲ್ಮೈ ಯಿದೆ. ತನ್ನ ಕೃತ್ಯದ ಬಗ್ಗೆ ಸ್ಪಷ್ಟ ಅರಿವು ಇದ್ದವರೇ ಈ ಕ್ರೌರ್ಯದಲ್ಲಿ ಪಾಲುಗೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಬಿಲ್ಕೀಸ್ ಪ್ರಕರಣವು ನಿರ್ಭಯ ಪ್ರಕರಣದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಗಂಭೀರವಾದುದು. ಇಲ್ಲಿ ಅತ್ಯಾಚಾರ ಮತ್ತು ಹತ್ಯೆಯಷ್ಟೇ ನಡೆದಿರುವುದಲ್ಲ. ಅಲ್ಲೊಂದು ಮೇಲುತನದ ಅಹಂ ಇದೆ. ಕ್ರೌರ್ಯವೆಸಗುವುದಕ್ಕೆ ಹೆಣ್ಣಿನ ಮೇಲಿನ ದೈಹಿಕ ಆಸೆಗಿಂತಲೂ ಅಪಮಾನಗೊಳಿಸುವ ಕ್ರೂರತನ ಇದೆ. ವಿಷಾದ ಏನೆಂದರೆ, ಇಷ್ಟೆಲ್ಲ ಇದ್ದೂ ನಿರ್ಭಯರು ಇಲ್ಲಿ ಪದೇ ಪದೇ ಗೆಲ್ಲುತ್ತಾರೆ. ಬಿಲ್ಕೀಸ್‍ರು ಮತ್ತೆ ಮತ್ತೆ ಸೋಲುತ್ತಾರೆ. ಯಾಕೆ ಹೀಗೆ? ಗುಂಪು ದಾಳಿ ಇದಕ್ಕೆ ಕಾರಣವೇ? ಎಣಿಕೆಯ ಕೆಲವರು ಅಪರಾಧ ಕೃತ್ಯದಲ್ಲಿ ಪಾಲುಗೊಳ್ಳುವುದಕ್ಕೂ ಅನೇಕ ಮಂದಿಯ ಗುಂಪೊಂದು ಅಪರಾಧ ಕೃತ್ಯದಲ್ಲಿ ಪಾಲುಗೊಳ್ಳುವುದಕ್ಕೂ ವ್ಯತ್ಯಾಸಗಳಿವೆಯೇ? ಅಂಥ ಪ್ರಕರಣಗಳು ನ್ಯಾಯಾಲಯಗಳಲ್ಲಿ ನಿಲ್ಲುವುದಿಲ್ಲವೇ? ಗುಂಪು ದಾಳಿ ಎಂಬುದು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇರುವ ಅಡ್ಡದಾರಿಯೇ? ನಿರ್ಭಯ ಪ್ರಕರಣದಲ್ಲಿ ಭಾಗಿಯಾದುದು ಅನೇಕ ಮಂದಿಯ ಗುಂಪಲ್ಲ. 6 ಮಂದಿಯ ಸಣ್ಣ ತಂಡ. ಆ ಕಾರಣದಿಂದಾಗಿಯೇ ಅದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿ ಪರಿಗಣಿತವಾಯಿತೇ? ಶೀಘ್ರ ತೀರ್ಪು ನೀಡುವುದಕ್ಕೂ ಇದುವೇ ಕಾರಣವೇ? ಅನೇಕ ಮಂದಿಯ ಗುಂಪು ಕ್ರೌರ್ಯದಲ್ಲಿ ಭಾಗಿಯಾದರೆ ಆರೋಪಿಗಳನ್ನು ನಿರ್ದಿಷ್ಟವಾಗಿ ಗುರುತಿಸುವುದಕ್ಕೆ ಕಷ್ಟವೇ? ಎಫ್‍ಐಆರ್ ದಾಖಲಿಸುವಾಗ ಪೊಲೀಸರು ಎಡವುದಕ್ಕೂ ಅವಕಾಶವಿರುತ್ತದೆಯೇ? ಕಾನೂನುಭಂಜಕ ಗುಂಪುಗಳು ಇಂಥ ದೌರ್ಬಲ್ಯಗಳ ಲಾಭ ಪಡೆಯುತ್ತಿದ್ದಾರೆಯೇ ಅಥವಾ ಗುಂಪು ದಾಳಿಯನ್ನು ಸಮರ್ಪಕವಾಗಿ ನಿಭಾಯಿಸುವ ಕಾನೂನುಗಳಿದ್ದೂ ಅದರ ಸರಿಯಾದ ಜಾರಿ ಆಗುತ್ತಿಲ್ಲ ಎಂಬುದು ಕಾರಣವೇ? ಬಿಲ್ಕೀಸ್ ಬಾನು ಪ್ರಕರಣವು 15 ವರ್ಷಗಳ ಬಳಿಕವೂ ತಾರ್ಕಿಕ ಅಂತ್ಯ ಕಾಣದಿರಲು ಕಾರಣವೇನು? ಅಹ್ಮದಾಬಾದ್‍ನ ಹಳ್ಳಿಯ ಓರ್ವ ಸಾಮಾನ್ಯ ಮಹಿಳೆ ಇಷ್ಟೊಂದು ದೀರ್ಘ ಅವಧಿಯನ್ನು ತಾಳಿಕೊಳ್ಳಲು ಸಮರ್ಥಳೇ? ಅಂದಹಾಗೆ, ಈ ಪ್ರಕರಣವು ಹೈಕೋರ್ಟ್ ಹಂತವನ್ನಷ್ಟೇ ಮುಗಿಸಿದೆ. ಇನ್ನಷ್ಟೇ ಸುಪ್ರೀಮ್ ಕೋರ್ಟ್‍ನ ವಿಚಾರಣೆ ಆರಂಭವಾಗಬೇಕಿದೆ. ಈ ಪ್ರಕರಣ ಇಷ್ಟು ವಿಳಂಬವಾಗುವುದಕ್ಕೆ ಏನು ಕಾರಣ? ನಿರ್ಭಯ ಪ್ರಕರಣವು ಇಷ್ಟು ಶೀಘ್ರವಾಗಿ ಅಂತ್ಯ ಕಂಡದ್ದು ಹೇಗೆ? ಗುಂಪು ನಡೆಸುವ ಹತ್ಯೆ ಮತ್ತು ಅತ್ಯಾಚಾರಗಳ ಬಗ್ಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯು ನಿಧಾನಗತಿಯನ್ನು ಅನುಸರಿಸುತ್ತಿದೆಯೇ? ಗುಂಪು ನಡೆಸುವ ಕ್ರೌರ್ಯ ಎಷ್ಟೇ ಭೀಕರವಾಗಿರಲಿ ಅದು ಅಪರೂಪದಲ್ಲಿ ಅಪರೂಪ ಪ್ರಕರಣವಾಗುವುದಕ್ಕೆ ಅವಕಾಶ ಇಲ್ಲವೇ? ಸದ್ಯ ದೇಶದಲ್ಲಿ ನಡೆಯುತ್ತಿರುವ ಗುಂಪು ದಾಳಿಗಳಿಗೆ ಇಂಥದ್ದೊಂದು ಲೆಕ್ಕಾಚಾರದ ಬಲವೂ ಇದ್ದಿರಬಹುದೇ? ಅನೇಕ ಮಂದಿಯ ಗುಂಪು ಥಳಿಸಿದರೂ ಕೊಂದರೂ ಅತ್ಯಾಚಾರ ನಡೆಸಿದರೂ ಅದು ಶೀಘ್ರವಾಗಿ ಇತ್ಯರ್ಥವಾಗಲ್ಲ ಮತ್ತು ನಿರ್ಭಯ ಪ್ರಕರಣದಂತೆ ಅಪರೂಪದಲ್ಲಿ ಅಪರೂಪದ ಪ್ರಕರಣವಾಗಲ್ಲ ಎಂಬ ನಂಬಿಕೆ ಇದಕ್ಕೆ ಕಾರಣವಾಗಿರಬಹುದೇ? ಅಷ್ಟಕ್ಕೂ, ಕಾನೂನನ್ನು ಕೈಗೆತ್ತಿಕೊಳ್ಳುವ ಗುಂಪುಗಳಿಗೆ ಕಠಿಣ ಸಂದೇಶ ಕೊಡುವಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ಯಾಕೆ ಮತ್ತೆ ಮತ್ತೆ ವಿಫಲವಾಗುತ್ತಿದೆ? ಬಿಲ್ಕೀಸ್ ಬಾನು ಪ್ರಕರಣ ಈ ವಿಫಲತೆಗೆ ಮತ್ತೊಂದು ಪುರಾವೆ ಯಾಕಾಗಬಾರದು?
      ಬಿಲ್ಕೀಸ್ ಮತ್ತು ನಿರ್ಭಯ ಪ್ರಕರಣಗಳ ಮಧ್ಯೆ ವ್ಯತ್ಯಾಸಗಳೆಷ್ಟೇ ಇರಲಿ, ‘ನ್ಯಾಯ ಯಾಕೆ ಹೀಗೆ’ ಎಂಬ ಪ್ರಶ್ನೆಯನ್ನಂತೂ ಇದು ಖಂಡಿತ ಹುಟ್ಟುಹಾಕಿದೆ.

No comments:

Post a Comment