Wednesday, December 30, 2015

ರೇಪ್ ಕಲ್ಚರ್ ಮನಸ್ಥಿತಿಗೆ ಕನ್ನಡಿ ಹಿಡಿದ ವಿದ್ಯಾ ದಿನಕರ್

ಪ್ರಭಾ ಬೆಳವಂಗಲ
ಚೇತನಾ ತೀರ್ಥಹಳ್ಳಿ
ವಿದ್ಯಾ ದಿನಕರ್
      ಅತ್ಯಾಚಾರ, ನಿಂದನೆ, ಅಪಹಾಸ್ಯ, ಕೊಲೆ ಬೆದರಿಕೆಗಳೆಲ್ಲ ಹೆಣ್ಣನ್ನೇ ಯಾಕೆ ಹುಡುಕಿಕೊಂಡು ಬರುತ್ತವೆ? ಹೆಣ್ಣು ಎಂಬುದೇ ಇದಕ್ಕೆ ಕಾರಣವೇ ಅಥವಾ ಅದೊಂದು ಮನಸ್ಥಿತಿಯೇ ಅಲ್ಲ ಹೆಣ್ಣಿನ ಬಗೆಗಿರುವ ಕೀಳರಿಮೆಯೇ? ‘ಪ್ರಭಾ ಬೆಳವಂಗಲ ಅವರ ಜುಟ್ಟು ಹಿಡಿದು ಅತ್ಯಾಚಾರ ನಡೆಸಬೇಕು..' ಎಂದು ವಿ.ಆರ್. ಭಟ್ ಎಂಬವ 2014ರಲ್ಲಿ ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯಿಸಿದ್ದ. ಆ ಬಗ್ಗೆ ಪ್ರಭಾ ಕೇಸನ್ನೂ ದಾಖಲಿಸಿದ್ದರು. ಹಾಗಂತ, ಪ್ರಭಾರು ತನ್ನ ಫೇಸ್‍ಬುಕ್ ಪುಟದಲ್ಲಿ ಬರೆದ ಬರಹದಲ್ಲಿ, ಓರ್ವ ವ್ಯಕ್ತಿ ಆ ಮಟ್ಟದಲ್ಲಿ ಉದ್ರಿಕ್ತಗೊಳ್ಳುವುದಕ್ಕೆ ಪೂರಕವಾದದ್ದು ಏನೂ ಇರಲಿಲ್ಲ. ಪುರೋಹಿತಶಾಹಿಯ ವಿರುದ್ಧ ಅವರು ಮಾತೆತ್ತಿದ್ದರು. ಪುರೋಹಿತಶಾಹಿಯನ್ನು ಅನುತ್ಪಾದಕ ಅಂದಿದ್ದರು. ಶಾಲಾ ಕಾಲೇಜುಗಳ ಶಂಕುಸ್ಥಾಪನೆಗೆ, ಆಸ್ಪತ್ರೆಗಳ ಉದ್ಘಾಟನೆಗೆ ಪುರೋಹಿತ ಶಾಹಿಯನ್ನು ಆಶ್ರಯಿಸುತ್ತಿರುವ ಸಮಾಜದ ಮನಸ್ಥಿತಿಯನ್ನು ಅವರು ಪ್ರಶ್ನಿಸಿದ್ದರು. ಕ್ಷಿಪಣಿಗಳನ್ನು ಉಡಾಯಿಸುವ ಮೊದಲು, ಮಂತ್ರಿಗಳು ಕುರ್ಚಿ ಏರುವ ಮೊದಲು, ಪ್ರಾಜೆಕ್ಟುಗಳನ್ನು ಆರಂಭಿಸುವ ಮೊದಲು.. ಹೀಗೆ ಪ್ರತಿಯೊಂದೂ ಪೂಜಾ-ಕೈಂಕರ್ಯಗಳ ಮೂಲಕ ನೆರವೇರುತ್ತಿರುವುದಕ್ಕೆ ತಮ್ಮ ಆಕ್ಷೇಪವನ್ನು ವ್ಯಕ್ತ ಪಡಿಸಿದ್ದರು. ಅವರು ಬಳಸಿದ ಪದಗಳು ಸಭ್ಯತೆಯ ಮೇರೆಯನ್ನು ವಿೂರಿರಲಿಲ್ಲ. ಓದುಗರನ್ನು ರೊಚ್ಚಿಗೆಬ್ಬಿಸುವ ಧಾಟಿಯಲ್ಲೂ ಇರಲಿಲ್ಲ. ಹಾಗಂತ, ಪುರೋಹಿತಶಾಹಿಯನ್ನು ತರಾಟೆಗೆತ್ತಿಕೊಳ್ಳುವ ಬರಹ ಪ್ರಕಟವಾದದ್ದು ಅದು ಮೊದಲ ಬಾರಿಯೇನೂ ಅಲ್ಲ. ಪ್ರಗತಿಪರ ಪುರುಷ ಬರಹಗಾರರು ಪ್ರಭಾರಿಗಿಂತ ಹೆಚ್ಚು ತೀಕ್ಷ್ಣವಾಗಿ ಮತ್ತು ಕಠಿಣ ಪದಗಳಲ್ಲಿ ಅದಕ್ಕಿಂತ ಹಿಂದೆಯೂ ಆ ಬಳಿಕವೂ ಪುರೋಹಿತಶಾಹಿಯನ್ನು ಟೀಕಿಸಿದ್ದಾರೆ. ಲೇಖನಗಳನ್ನು ಬರೆದಿದ್ದಾರೆ. ಕಾದಂಬರಿಗಳಲ್ಲಿ ಪಾತ್ರವಾಗಿಸಿದ್ದಾರೆ. ಆದರೆ ಅವರಾರ ವಿರುದ್ಧವೂ ಕಾಣಿಸಿಕೊಳ್ಳದ ‘ಉದ್ರಿಕ್ತತೆ’ಯೊಂದು ಪ್ರಭಾರ ವಿರುದ್ಧ ಕಾಣಿಸಿಕೊಂಡಿರುವುದಕ್ಕೆ ‘ಹೆಣ್ಣು' ಎಂಬ ಲಿಂಗಾಧಾರಿತ ವರ್ಗೀಕರಣದ ಹೊರತು ಇನ್ನಾವ ಕಾರಣಗಳು ಕಾಣಿಸುತ್ತಿವೆ? ‘ಪುರೋಹಿತಶಾಹಿ ವ್ಯವಸ್ಥೆ ಗಂಡಿನದ್ದು, ಅದನ್ನು ನಿಯಂತ್ರಿಸಬೇಕಾದದ್ದು ಗಂಡು, ಅದರ ಬಗ್ಗೆ ಮಾತಾಡಬೇಕಾದದ್ದು ಗಂಡು, ಟೀಕೆ-ಟಿಪ್ಪಣಿಗಳ ಅವಕಾಶ ಇರುವುದೂ ಗಂಡಿಗೇ’ ಎಂಬ ‘ಹಮ್ಮೇ’ ಇದರ ಹಿಂದಿರುವಂತೆ ತೋರುತ್ತಿದೆ. ಗಂಡಿನ ಭಾಷೆಯಲ್ಲಿ ಮತ್ತು ಗಂಡು ಎತ್ತಿಕೊಳ್ಳುವ ವಿಷಯದಲ್ಲಿ ಹೆಣ್ಣು ಮಾತಾಡಬಾರದು ಎಂಬ ದರ್ಪ ಇದರಲ್ಲಿ ಎದ್ದು ಕಾಣುತ್ತಿದೆ. ಈ ವಿಷಯದಲ್ಲಿ ಪ್ರಭಾ ಒಂಟಿಯಲ್ಲ. ಚೇತನಾ ಮತ್ತು ವಿದ್ಯಾ ದಿನಕರ್‍ರ ಮೇಲೆ ನಡೆದಿರುವ ವಾಗ್ದಾಳಿ, ಬೆದರಿಕೆ, ಅತ್ಯಾಚಾರದ ಮಾತುಗಳೆಲ್ಲ ಈ ಮನಸ್ಥಿತಿಯ ಪ್ರಾಬಲ್ಯವನ್ನೇ ಪ್ರತಿಬಿಂಬಿಸುತ್ತದೆ. ಗೋಮಾಂಸವನ್ನು ಆಹಾರ ಕ್ರಮವಾಗಿ ಬೆಂಬಲಿಸಿದ್ದು ಚೇತನಾ ಮಾತ್ರ ಅಲ್ಲ, ರಾಜ್ಯದಲ್ಲಿ ಅಸಂಖ್ಯ ಮಂದಿ ಮಾಂಸಾಹಾರದ ಪರವಾಗಿ ಮಾತಾಡಿದ್ದಾರೆ. ಗೋಮಾಂಸ ಸೇವನೆಯ ಹೆಸರಲ್ಲಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ್ದಾರೆ. ಬೆಂಗಳೂರಿನಲ್ಲಂತೂ ಮಾಂಸಾಹಾರವನ್ನು ಬಹಿರಂಗವಾಗಿ ಸೇವಿಸುವ ಕಾರ್ಯಕ್ರಮಗಳೂ ನಡೆದಿವೆ. ಆದರೆ ಚೇತನಾರನ್ನು ಈ ಗುಂಪಿನಿಂದ ವಿಂಗಡಿಸಿ, ಒಂಟಿಯಾಗಿಸಿ ನಿಂದನೆ, ಕೊಲೆ ಬೆದರಿಕೆಗಳಿಗೆ ಈಡಾಗಿಸಿದ್ದು ಯಾಕೆ? ಬೆಂಗಳೂರಿನ ಹನುಮಂತ ನಗರ ಪೊಲೀಸು ಠಾಣೆಯಲ್ಲಿ ಮಧುಸೂದನ ಗೌಡ ಎಂಬವನ ಮೇಲೆ ಚೇತನಾ ದೂರು ದಾಖಲಿಸುವಾಗ ಚೇತನಾರ ಭಾಷೆಯಲ್ಲೇ ಮಾತಾಡಿದ ಮತ್ತು ಅವರಂತೆಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುರುಷರು ಯಾವ ಬೆದರಿಕೆಗೂ ಈಡಾಗದೇ ಉಳಿದರಲ್ಲ, ಏನಿದರ ಅರ್ಥ? ಪ್ರತಿಕ್ರಿಯೆಗಳು ಸೆಲೆಕ್ಟಿವ್ ಆಗುತ್ತಿ ವೆಯೇ? ಲಿಂಗಾಧಾರಿತವಾಗುತ್ತಿವೆಯೇ? ಹೆಣ್ಣಿನ ಕ್ಷೇತ್ರ ಇದಲ್ಲ ಎಂದು ದಬ್ಬುವ ಪ್ರಯತ್ನಗಳು ನಡೆಯುತ್ತಿವೆಯೇ?
         ಇತ್ತೀಚೆಗೆ ಲಂಡನ್ನಿನ ದಿ ಇಂಡಿಪೆಂಡೆಂಟ್ ಪತ್ರಿಕೆಯಲ್ಲಿ ರೇಪ್ ಕಲ್ಚರ್ (ಅತ್ಯಾಚಾರದ ಸಂಸ್ಕೃತಿ)ನ ಬಗ್ಗೆ ಲಾರಿ ಫೆನ್ನಿಯವರು ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದರು.
      1970ರಲ್ಲಿ ಮೊಟ್ಟಮೊದಲು ಚಾಲ್ತಿಗೆ ಬಂದ ‘ರೇಪ್ ಕಲ್ಚರ್' ಎಂಬ ಪದ ಆ ಬಳಿಕ ಅಸಂಖ್ಯ ಬಾರಿ ಬಳಕೆಯಾಗಿದೆ. ಹಾಗಂತ, ಅತ್ಯಾಚಾರ ಎಂಬುದು ಹಾಯ್, ಹಲೋ, ಹೇಗಿದ್ದಿ, ಏನ್ ಸಮಾಚಾರ.. ಎಂದು ಮುಂತಾಗಿ ಹೇಳುವಷ್ಟು ಸಾಮಾನ್ಯ ಪದವಲ್ಲವಲ್ಲ. ಅದೊಂದು ಮನಸ್ಥಿತಿಯ ಪ್ರತೀಕ. ಹೆಣ್ಣನ್ನು ಮಣಿಸುವುದಕ್ಕೆ, ಆಕೆಯಲ್ಲಿ ಭೀತಿಯನ್ನು ತುಂಬುವುದಕ್ಕೆ ಪುರುಷ ಪ್ರಧಾನ ಸಮಾಜ ಬಳಸಬಹುದಾದ ಪರಿಣಾಮಕಾರಿ ಪದ. ಹೆಣ್ಣನ್ನು ಮಣಿಸಬಲ್ಲೆ ಎಂಬ ಅಹಂ ಆ ಪದಪ್ರಯೋಗದ ಹಿಂದಿರುತ್ತದೆ. ಹೆಣ್ಣಿಗೆ ಆಕೆಯ ದುರ್ಬಲತೆಯನ್ನು ಮತ್ತು ದ್ವಿತೀಯ ದರ್ಜೆಯನ್ನು ಸೂಚಿಸುವುದಕ್ಕೂ ಈ ಪದ ಪ್ರಯೋಗವಾಗುತ್ತಿದೆ. ಹೆಣ್ಣು ಎಲ್ಲಿ ನಿಲ್ಲಬೇಕು, ಹೇಗೆ ಮಾತಾಡಬೇಕು, ಯಾಕೆ ಮಾತಾಡಬೇಕು, ಯಾವ ವಿಷಯದಲ್ಲಿ ಮಾತಾಡಬೇಕು, ಎಷ್ಟು ಮಾತಾಡಬೇಕು ಎಂಬುದನ್ನೆಲ್ಲ ಈ ಮನಸ್ಥಿತಿ ಪಟ್ಟಿ ಮಾಡಿರುತ್ತದೆ. ಅದನ್ನು ಉಲ್ಲಂಘಿಸುವವರನ್ನು ಈ ಮನಸ್ಥಿತಿ ಪ್ರತಿಭಟಿಸುತ್ತದೆ. ಪುರುಷ ಅಹಮ್ಮಿನ ‘ಪ್ರತಿಮೆ’ಗಳ ಮೂಲಕ ತಿವಿಯುತ್ತದೆ. ಅತ್ಯಾಚಾರದ ಪದ ಪ್ರಯೋಗವು ಇಂಥ ಮನಸ್ಥಿತಿಯಲ್ಲಿ ಸಾಮಾನ್ಯವಾಗಿರುತ್ತದೆ. ಈ ಬಗ್ಗೆ ಪಾಶ್ಚಾತ್ಯ ರಾಷ್ಟ್ರ ಗಳಲ್ಲಿ ಹಲವಾರು ಅಧ್ಯಯನಗಳು ನಡೆದಿವೆ. ಲಾರಿ ಫೆನ್ನಿ, ಜೆನ್ನಿಫರ್ ಪ್ರೋಝ್‍ನರ್, ಎಮಿಲಿ ಮೆ ಮುಂತಾದವರು ಇಂಥವುಗಳ ಅಧ್ಯಯನ ನಡೆಸಿದ್ದಾರೆ. ಆನ್‍ಲೈನ್ ನಲ್ಲಿ ಅತ್ಯಾಚಾರ, ನಿಂದನೆ, ಕೊಲೆ ಬೆದರಿಕೆ ಒಡ್ಡುವವರನ್ನು ಪರಾಮರ್ಶೆಗೆ ಒಳಪಡಿಸಿದ್ದಾರೆ. ಅನಿತಾ ಸರ್ಕೀಸಿಯನ್ ಎಂಬ ಮಹಿಳಾ ವಾದಿಯ ವಿರುದ್ಧ ಅಂತರ್ಜಾಲದಲ್ಲಿ ಪ್ರಕಟವಾದ ಎಲ್ಲ ನಿಂದನಾತ್ಮಕ ಪ್ರತಿಕ್ರಿಯೆಗಳನ್ನೂ ಹಾಗೆಯೇ ಪ್ರಕಟಿಸಿದ್ದಾರೆ. ಅದು ಅಂತರ್ಜಾಲದಲ್ಲಿ ತೀವ್ರ ಸಂಚಲನೆಯನ್ನು ಸೃಷ್ಟಿಸಿತ್ತು. ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಸಾಮಾಜಿಕವಾಗಿ ಆಕ್ರೋಶಗಳು ವ್ಯಕ್ತವಾಗಿದ್ದುವು. ಬ್ರಿಟನ್ನಿನ ತನಿಖಾ ಸಂಸ್ಥೆ ಎಫ್.ಬಿ.ಐ. ಆ ಕುರಿತಂತೆ ತನಿಖೆಯನ್ನೂ ನಡೆಸಿತ್ತು. ನಿಜವಾಗಿ, ಇಂಥ ರೇಪ್ ಕಲ್ಚರ್ ಅನ್ನು ಇಂಗ್ಲೆಂಡಿಗೋ ಅಮೇರಿಕಕ್ಕೋ ನಾವು ಸೀಮಿತಗೊಳಿಸಿ ನೋಡಬೇಕಿಲ್ಲ. ಅದು ದೇಶ ಮತ್ತು ಕಾಲವನ್ನೂ ವಿೂರಿದ ಒಂದು ಕ್ರೂರ ಮನಸ್ಥಿತಿ. 'ರೇಪ್ಸ್ ಇನ್ ಬೋಸ್ನಿಯಾ: ಎ ಮುಸ್ಲಿಮ್ ಸ್ಕೂಲ್ ಗರ್ಲ್ಸ್ ಅಕೌಂಟ್'' ಎಂಬ ಶೀರ್ಷಿಕೆಯಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು 1992 ಡಿಸೆಂಬರ್ 27ರಂದು ಬೋಸ್ನಿಯಾದಲ್ಲಿ ಅತ್ಯಾಚಾರಕ್ಕೊಳಗಾದ ಜಾಸ್ನಾ ಎಂಬ ಯುವತಿಯ ಸಂದರ್ಶನವನ್ನು ಪ್ರಕಟಿಸಿತ್ತು. ಗುಜರಾತ್ ಹತ್ಯಾಕಾಂಡ, ಮುಝಫ್ಫರ್ ನಗರ್ ಗಲಭೆ ಅಥವಾ ಇಂಥ ಇನ್ನಿತರ ಸಂದರ್ಭಗಳಲ್ಲಿ ನಾವು ಈ ಮನಸ್ಥಿತಿಯ ರೌದ್ರಾವತಾರವನ್ನು ನೋಡಿದ್ದೇವೆ. ದಂಗೆಯ ಸಂದರ್ಭದಲ್ಲಿ ಸಾಮೂಹಿಕವಾಗಿ ಕಾಣಿಸಿಕೊಳ್ಳುವ ಈ ಮನಸ್ಥಿತಿ ಸಹಜ ವಾತಾವರಣದಲ್ಲಿ ಬೇರೆಯದೇ ರೂಪದಲ್ಲಿ ಪ್ರತ್ಯಕ್ಷಗೊಳ್ಳುತ್ತದೆ. ವಿದ್ಯಾ ದಿನಕರ್‍ರನ್ನು ಬೆನ್ನಟ್ಟಿಕೊಂಡು ಬಂದಿರುವುದು ಈ ಬಗೆಯದೇ ಮನಸ್ಥಿತಿ. ಇಲ್ಲದಿದ್ದರೆ ದಿಲ್‍ವಾಲೆ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಪೊಲೀಸರಿಗೆ ಅವರು ದೂರು ನೀಡಿದುದನ್ನು ಅಪರಾಧವಾಗಿ ಯಾಕೆ ಕಾಣಬೇಕು? ಓರ್ವ ಸಾಮಾನ್ಯ ನಾಗರಿಕ ಮಾಡಬಹುದಾದ ಕೆಲಸವನ್ನಷ್ಟೇ ಅವರು ಮಾಡಿದ್ದಾರೆ. ಕಾನೂನನ್ನು ಗೌರವಿಸುವ ಮತ್ತು ಅದರ ಉಲ್ಲಂಘಕರನ್ನು ತಡೆಯುವ ಹಕ್ಕು ವಿದ್ಯಾ ಎಂದಲ್ಲ ಪ್ರತಿಯೊಬ್ಬರ ಮೇಲೂ ಇದೆ. ವಿದ್ಯಾ ಆ ಹಕ್ಕನ್ನು ಚಲಾಯಿಸಿದ್ದಾರೆ. ಇದರ ಹೊರತಾಗಿ ‘ದಿಲ್‍ವಾಲೆ'ಗೆ ಅಡ್ಡಿಪಡಿಸಿದವರ ವಿರುದ್ಧವಾಗಲಿ, ಅದರ ಹಿಂದಿರಬಹುದಾದ ಶಕ್ತಿಗಳ ವಿರುದ್ಧವಾಗಲಿ ಅವರು ವೈಯಕ್ತಿಕ ಪ್ರತೀಕಾರಕ್ಕೆ ಇಳಿದಿಲ್ಲ. ಅವರನ್ನು ಆನ್‍ಲೈನ್‍ನಲ್ಲಿ ನಿಂದಿಸಿಲ್ಲ. ಜೀವ ಬೆದರಿಕೆ ಹಾಕಿಲ್ಲ. ಮಾನಹಾನಿಕರ ಹೇಳಿಕೆಯನ್ನು ಕೊಟ್ಟಿಲ್ಲ. ಹಾಗಿದ್ದರೂ, ಅವರ ವಿರುದ್ಧ ಅತ್ಯಾಚಾರದ ಬೆದರಿಕೆಗಳೇಕೆ ಬಂದುವು? ವಿದ್ಯಾರು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯನ್ನು ಕಟ್ಟಿಕೊಂಡು ಕಳೆದ ಕೆಲವು ವರ್ಷಗಳಿಂದ ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದಾರೆ. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ (MSEZ) ಯಡಿಯೂರಪ್ಪ ಸರಕಾರವು ಕರಾವಳಿಯ ಸಾವಿರಾರು ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಾಗ ‘ಕೃಷಿ ಭೂಮಿ ಸಂರಕ್ಷÀಣಾ ಸಮಿತಿ’ಯನ್ನು ರಚಿಸಿಕೊಂಡು ಹೋರಾಟದ ಕಣಕ್ಕಿಳಿದವರು ವಿದ್ಯಾ. ಅವರು ವಿಶೇಷ ಆರ್ಥಿಕ ವಲಯಕ್ಕೆ ಸೇರ್ಪಡೆಗೊಳ್ಳುವ ಕೃಷಿ ಭೂಮಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಮನೆಮನೆಗಳಿಗೆ ಭೇಟಿ ನೀಡಿದರು. ಬಜಪೆ, ಪೆರ್ಮುದೆ, ಕಳವಾರು, ಎಕ್ಕಾರು, ಶಿಬರೂರು, ಕುತ್ತೆತ್ತೂರು ಮುಂತಾದ ಪ್ರದೇಶಗಳು ಇವತ್ತು ಭೂಸ್ವಾಧೀನದಿಂದ ತಪ್ಪಿಸಿಕೊಂಡು ಉಳಿದಿದ್ದರೆ ಅದರಲ್ಲಿ ವಿದ್ಯಾರ ಪಾತ್ರ ಬಹಳ ದೊಡ್ಡದು. ಗ್ರೆಗರಿ ಪತ್ರಾವೋ ಎಂಬ ಕೃಷಿಕನನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ತಂದು ನಿಲ್ಲಿಸಿದ್ದು ಇವರ ಛಲಗಾರಿಕೆಯೇ. ಒಂದು ಹಂತದ ವರೆಗೆ ಗ್ರೆಗರಿ ಇಡೀ ಭೂಸ್ವಾಧೀನ ವಿರೋಧಿ ಹೋರಾಟದ ಐಕಾನ್ ಆಗಿ ಮೂಡಿ ಬಂದಿದ್ದರು. ಅವರು ತಮ್ಮ ಮನೆಯ ದನ-ಕರುಗಳು, ಪಾತ್ರೆ-ಪಿಂಗಾಣಿಗಳ ಸಮೇತ ಪ್ರತಿಭಟನೆಗೆ ಇಳಿದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ತನ್ನ ಭೂಮಿಯನ್ನು ಸ್ವಾಧೀನಪಡಿಸದಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಹೂಡಿದ್ದರು. ಈ ಎಲ್ಲದರ ಹಿಂದೆ ವಿದ್ಯಾರ ‘ಕೃಷಿಭೂಮಿ ಸಂರಕ್ಷಣಾ ಸಮಿತಿ’ಯ ಬಹುದೊಡ್ಡ ಪಾತ್ರ ಇದೆ. ‘ಪೇಜಾವರ ಸ್ವಾವಿೂಜಿಗಳನ್ನು ಬಳಸಿಕೊಂಡು ಯಡಿಯೂರಪ್ಪ ಸರಕಾರವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಸಬಹುದು’ ಎಂದು ಆಲೋಚಿಸಿ ಈ ಹೋರಾಟದಲ್ಲಿ ಪೇಜಾವರರು ಸೇರಿಕೊಳ್ಳುವಂತೆ ನೋಡಿಕೊಂಡರು. ಆ ಮೂಲಕ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಹೊಸ ಖದರು, ದಿಕ್ಕನ್ನು ಕೊಟ್ಟರು. ಒಂದು ರೀತಿಯಲ್ಲಿ, ಇದು ಅತ್ಯಂತ ಬುದ್ಧಿವಂತಿಕೆಯ ಹೆಜ್ಜೆಯಾಗಿತ್ತು. ಯಡಿಯೂರಪ್ಪ ಸರಕಾರವನ್ನು ಅದರ ದಾಳದಿಂದಲೇ ಮಣಿಸುವ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿತು. ಭೂಸ್ವಾಧೀನದ ಪಟ್ಟಿಯಿಂದ 2035 ಎಕರೆ ಪ್ರದೇಶವನ್ನು ಹೊರಗಿಟ್ಟು ಸರಕಾರ ಆದೇಶವನ್ನು ಹೊರಡಿಸಿತು. ಅಷ್ಟಕ್ಕೂ, ವಿದ್ಯಾರಿಗೆ ‘ಅತ್ಯಾಚಾರ'ದ ಬೆದರಿಕೆ ಹಾಕಿದವರಿಗೆ ಇದು ಗೊತ್ತಿದೆಯೋ ಇಲ್ಲವೋ ಆದರೆ ಕರಾವಳಿ ಪ್ರದೇಶದ ಮಂದಿಗೆ ಅದರಲ್ಲೂ ‘ವಿಶೇಷ ಆರ್ಥಿಕ ವಲಯ’ದೊಳಗೆ ಸೇರ್ಪಡೆಗೊಳ್ಳಬೇಕಿದ್ದ ಸಾವಿರಾರು ಎಕರೆ ಪ್ರದೇಶದ ಮಂದಿಗೆ ಇದು ಚೆನ್ನಾಗಿ ಗೊತ್ತು. ಈ ಪ್ರದೇಶ ಒಂದೊಮ್ಮೆ ‘ವಿಶೇಷ ಆರ್ಥಿಕ ವಲಯ’ದೊಳಗೆ ಸೇರ್ಪಡೆಗೊಂಡದ್ದೇ ಆಗಿದ್ದಿದ್ದರೆ ಹಲವಾರು ದೈವಸ್ಥಾನಗಳು, ಮಸೀದಿ, ಚರ್ಚ್, ದೇಗುಲಗಳು ಅಸ್ತಿತ್ವ ಕಳಕೊಳ್ಳುತ್ತಿದ್ದುವು. ಈ ಕಾರಣದಿಂದಲಾದರೂ ವಿದ್ಯಾರನ್ನು ‘ದಿಲ್‍ವಾಲೆ' ವಿರೋಧಿಗಳು ಸಹಿಸಿಕೊಳ್ಳಬಹುದಾಗಿತ್ತು ಅಥವಾ ತಮ್ಮ ಪ್ರತಿಭಟನೆಯನ್ನು ಸಭ್ಯ ರೀತಿಯಲ್ಲಿ ವ್ಯಕ್ತಪಡಿಸಬಹುದಾಗಿತ್ತು. ಆದರೆ ನಾಗರಿಕ ಸಮಾಜ ಬಯಸುವ ಸಭ್ಯತೆಯ ಸರ್ವ ಮೇರೆಯನ್ನೂ ಈ ಮಂದಿ ವಿೂರಿದ್ದಾರೆ. ವಿದ್ಯಾರ ವಿರುದ್ಧ ಅತ್ಯಂತ ಅನಾಗರಿಕ ಭಾಷೆಯನ್ನು ಬಳಸಿದ್ದಾರೆ. ಅಂದಹಾಗೆ, ವಿದ್ಯಾರ ಜಾಗದಲ್ಲಿ ಓರ್ವ ದಿನಕರ್ ಇರುತ್ತಿದ್ದರೆ ಈ ಮಟ್ಟದ ವಾಗ್ದಾಳಿ ನಡೆಯುತ್ತಿತ್ತೇ? ನಿಂದನೆ, ಮಾನಹಾನಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿತ್ತೇ? ಅತ್ಯಾಚಾರದ ಬೆದರಿಕೆಯನ್ನು ಒಡ್ಡಲಾಗುತ್ತಿತ್ತೆ ? ಆದ್ದರಿಂದಲೇ,      
       ಈ ರೇಪ್ ಕಲ್ಚರ್ ಮನಸ್ಥಿತಿಯನ್ನು ಖಂಡಿಸಬೇಕಾಗಿದೆ. ವಿದ್ಯಾರನ್ನು ಬೆಂಬಲಿಸಬೇಕಾಗಿದೆ.

1 comment:

  1. ತಮ್ಮ ಮಾತುಗಳನ್ನು ಮುಲಾಜಿಲ್ಲದೇ ಒಪ್ಪಿಕೊಳ್ಳಲು ಇಚ್ಛಿಸುತ್ತೇನೆ.

    ಆದರೆ ಒಂದು ಮಾತು.

    ಕುವೆಂಪು ವಿವಿಯವರೊಬ್ಬರು ಶ್ರೀಮತಿ ರೂಪಾ ಲಕ್ಷ್ಮಿ ಅನ್ನುವವರ ಫೇಸ್ಬುಕ್ ಬರಹವೊಂದಕ್ಕೆ ಬರಹಕ್ಕೆ ಅಶ್ಲೀಲವಾದ ಪ್ರತಿಕ್ರಿಯೆ ಹಾಕಿದಾಗ, ಅದರ ವಿರುದ್ಧ ದಾಖಲಿಸಿದ ದೂರು ಪೋಲೀಸ್ ಠಾಣೆಯಲ್ಲಿ ಧೂಳು ಹಿಡಿಯುವಂತೆ ಹಾಗೂ ಆ ಮನುಷ್ಯ ಠಾಣೆಯನ್ನು ತಲುಪುವ ಮೊದಲೇ ಜಾಮೀನು ಸಿಗುವಂತೆ ಸಹಾಯ ಮಾಡಿರುವ ಸರಕಾರೀ ಹುದ್ದೆಯಲ್ಲಿರುವ ಪ್ರಭಾವಿ ವ್ಯಕ್ತಿಗಳು ಮತ್ತವರ ಬೆಂಬಲಿಗರೂ, ಈ ಮೂರು ಸಬಲೆಯರ ಶೋಷಣೆಯ ವಿರುದ್ಧ ಆಗಾಗ ದನಿ ಎತ್ತುತ್ತಲೇ ಇರುತ್ತಾರೆ. ಅವರೂ ಈ ರೇಪ್ ಮನಸ್ಥಿತಿಯ ವಿರುದ್ಧ ದನಿಗೂಡಿಸುತ್ತಿದ್ದಾರೆ.

    ಇದು ನನಗೆ ಆಶ್ಚರ್ಯ ಉಂಟುಮಾಡುವ ಸಂಗತಿ.

    ReplyDelete