Wednesday, November 25, 2015

ಆಲಿಸುವವರೇ, ಆಲೋಚಿಸಲು ಪ್ರಾರಂಭಿಸಿ..

   ಕವಿಮಿತ್ರ ಜಲೀಲ್ ಮುಕ್ರಿಯವರು ಕಳೆದವಾರ ವಾಟ್ಸಪ್‍ನಲ್ಲಿ ಒಂದು ಕವನವನ್ನು ಕಳುಹಿಸಿಕೊಟ್ಟಿದ್ದರು;
 
    'ನಮ್ಮವನನ್ನು ಪೊಲೀಸರು ಬಂಧಿಸಿದರೆ
    ಅವನು ನಿರಪರಾಧಿ, ನಾವೆಲ್ಲ ವಕೀಲರು
    ಅನ್ಯನನ್ನು ಪೊಲೀಸರು ಬಂಧಿಸಿದರೆ
    ಅವನು ಅಪರಾಧಿ, ನಾವೆಲ್ಲ ನ್ಯಾಯಾಧೀಶರು..'

       ನಮ್ಮೊಳಗಿನ ಇಬ್ಬಂದಿನಕ್ಕೆ ಕನ್ನಡಿ ಹಿಡಿಯುವ ನಾಲ್ಕು ಸಾಲುಗಳಿವು. ಕೋಮು ಸಂಘರ್ಷ ಎಂಬ ಪದಕ್ಕೂ ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸಕ್ಕೂ ನಡುವೆ ಇರುವ ಸಂಬಂಧವನ್ನು ಟಿಪ್ಪು ಜಯಂತಿ ಮತ್ತೊಮ್ಮೆ ತಾಜಾಗೊಳಿಸಿದೆ. ಇಂಥ ಸಂಘರ್ಷಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಏನು ಕಾರಣ? ಧರ್ಮವೇ, ರಾಜಕೀಯವೇ ಅಥವಾ ಟಿಪ್ಪುವಿನಂತಹ ಐತಿಹಾಸಿಕ ವ್ಯಕ್ತಿತ್ವಗಳೇ? 1947ರ ಭಾರತ ಈಗಿನದಲ್ಲ. ಅಭೂತಪೂರ್ವವೆನ್ನಬಹುದಾದ ಅನೇಕಾರು ಬದಲಾವಣೆಗಳನ್ನು ಈ ದೇಶ ಕಂಡಿದೆ. ಕೃಷಿ ಕ್ರಾಂತಿ, ಕೈಗಾರಿಕಾ ಕ್ರಾಂತಿ, ಅಕ್ಷರ ಕ್ರಾಂತಿ, ಸಂವಹನ ಕ್ರಾಂತಿ, ಕಂಪ್ಯೂಟರ್ ಕ್ರಾಂತಿ, ಮಾಧ್ಯಮ ಕ್ರಾಂತಿ.. ಸಹಿತ ಹಳೆ ತಲೆಮಾರು ಅಚ್ಚರಿಪಡುವಂತಹ ಪಲ್ಲಟಗಳು ನಡೆದಿವೆ. 1947ರ ಆಸುಪಾಸಿನಲ್ಲಿದ್ದದ್ದು ಒಂದು- ರೇಡಿಯೋವಾದರೆ, ಇನ್ನೊಂದು ದೂರದರ್ಶನ. ಇವೆರಡನ್ನು ಬಿಟ್ಟರೆ ಜನರಿಗೆ ಮಾಹಿತಿಯನ್ನು ಕೊಡುತ್ತಿದ್ದುದು ಬಹುತೇಕ ನಗರ ಪ್ರದೇಶದ ಮಂದಿಗೆ ದಕ್ಕುತ್ತಿದ್ದ ಕೆಲವೇ ಕೆಲವು ಪತ್ರಿಕೆಗಳು. ಆವತ್ತೂ ಕೋಮು ಸಂಘರ್ಷಗಳಿದ್ದುವು. ನೂರಾರು ಟಿ.ವಿ. ಚಾನೆಲ್‍ಗಳು ಮತ್ತು ಸಾವಿರಾರು ಪತ್ರಿಕೆಗಳಿರುವ ಇವತ್ತೂ ಕೋಮು ಸಂಘರ್ಷಗಳಿವೆ. ಹಾಗಂತ, ಇವುಗಳ ಸಂಖ್ಯೆಯಲ್ಲಿ, ಅವನ್ನು ಕಾರ್ಯರೂಪಕ್ಕೆ ತರುವ ವಿಧಾನಗಳಲ್ಲಿ ಮತ್ತು ಸಾವು-ನೋವುಗಳ ಅಂಕಿ-ಸಂಖ್ಯೆಗಳಲ್ಲಿ ವ್ಯತ್ಯಾಸ ಇರಬಹುದು. ಆದರೂ ಈ ಮನುಷ್ಯ ವಿರೋಧಿ ಮತ್ತು ಧರ್ಮವಿರೋಧಿ ಪಿಡುಗೊಂದು ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಪ್ರಾಬಲ್ಯ ಪಡೆಯುತ್ತಿರುವುದು ಯಾಕೆ? ಜನರು ಅಕ್ಷರಸ್ಥರಾದಂತೆಲ್ಲ ಅಜ್ಞಾನ ಕೊನೆಗೊಳ್ಳುತ್ತಾ ಹೋಗುತ್ತದೆ ಎಂಬುದು ಸಾಮಾನ್ಯ ವಾದ. ಅನಕ್ಷರಸ್ಥರಲ್ಲಿ ಕೆಲವು ಸಹಜ ದೌರ್ಬಲ್ಯಗಳಿರುತ್ತವೆ. ಅವರು ಪುಸ್ತಕವನ್ನು ಓದಲಾರರು. ಸಾಹಿತ್ಯವನ್ನು ಅನುಭವಿಸಲಾರರು. ಎಲ್ಲಕ್ಕಿಂತ ಮಿಗಿಲಾಗಿ ತನ್ನ ಧರ್ಮಗ್ರಂಥ ಏನು ಹೇಳುತ್ತದೆ ಎಂಬುದನ್ನು ಓದಿ ತಿಳಿದುಕೊಳ್ಳುವುದು ಅವರಿಂದ ಸಾಧ್ಯವಿಲ್ಲ. ಕಲ್ಬುರ್ಗಿಯನ್ನೋ ಭೈರಪ್ಪ, ಅನಂತಮೂರ್ತಿಯವರನ್ನೋ, ಕುವೆಂಪು, ಬೇಂದ್ರೆ, ಕಾರಂತರನ್ನೋ ಅಥವಾ ಇನ್ನಿತರ ಯಾರನ್ನೇ ಆಗಲಿ ಓದಿ ತಿಳಿಯಲು ಅವಕಾಶವಿರುವುದಿಲ್ಲ. ಇಂಥವರು ಇನ್ನಾರೋ ಹೇಳಿದ ಮಾತನ್ನು ನಂಬಬೇಕಾಗುತ್ತದೆ. ಕುರ್‍ಆನಿನಲ್ಲಿ ಹಾಗಿದೆ, ಭಗವದ್ಗೀತೆಯಲ್ಲಿ ಹೀಗಿದೆ, ಯಂಗ್ ಇಂಡಿಯಾದಲ್ಲಿ ಗಾಂಧೀಜಿ ಹಾಗೆ ಬರೆದಿದ್ದಾರೆ.. ಎಂದೆಲ್ಲಾ ಯಾರೋ ಹೇಳಿದುದನ್ನು ನಿಜ ಎಂದು ನಂಬಬೇಕಾದ ಪರಿಸ್ಥಿತಿ ಅವರಿಗೆ ಎದುರಾಗುತ್ತದೆ. ಸ್ವಾತಂತ್ರ್ಯಾನಂತರದ ಎರಡ್ಮೂರು ದಶಕಗಳಲ್ಲಿ ನಡೆದ ಕೋಮು ಸಂಘರ್ಷಕ್ಕೆ ನಾವು ಈ ಅನಕ್ಷರತೆಯನ್ನೇ ಕಾರಣವಾಗಿ ಇಟ್ಟು ನೋಡಿದರೂ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಮಾತ್ರವಲ್ಲ, ಈ ಪ್ರಶ್ನೆಗಳು ಎಷ್ಟು ಗಂಭೀರವಾದುದೆಂದರೆ, ಕೋಮು ಸಂಘರ್ಷಕ್ಕೆ ಅಕ್ಷರ-ಅನಕ್ಷರದಲ್ಲಿ ಕಾರಣ ಹುಡುಕುವುದನ್ನೇ ಅಜ್ಞಾನ ಎಂದು ಸಾರುವಷ್ಟು ಪ್ರಮಾಣದಲ್ಲಿರುತ್ತದೆ. ಈ ದೇಶ ಹೆಚ್ಚೆಚ್ಚು ಅಕ್ಷರಸ್ಥ ಆದಂತೆಯೇ ಕೋಮು ಸಂಘರ್ಷದ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಾ ಹೋದುವು. ಅಷ್ಟೇ ಅಲ್ಲ, ಈ ಸಂಘರ್ಷದ ವ್ಯಾಪ್ತಿಯೂ ವಿಸ್ತರಿಸುತ್ತಾ ಹೋದುವು. ತೀರಾ ತೀರಾ ಹಳ್ಳಿ ಪ್ರದೇಶಗಳಲ್ಲೂ ಕೋಮು ಉದ್ವಿಘ್ನ ವಾತಾವರಣ ನಿರ್ಮಾಣವಾದದ್ದೇ ಹಳ್ಳಿಗಳು ಅಕ್ಷರಸ್ಥವಾದ ಬಳಿಕ. ಆದ್ದರಿಂದಲೇ ಕೋಮು ಸಂಘರ್ಷಕ್ಕೆ ಕಾರಣಗಳನ್ನು ಅನಕ್ಷರಸ್ಥತೆಗಿಂತ ಹೊರತಾದುದರಲ್ಲಿ ಹುಡುಕಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರಣಗಳನ್ನು ಹುಡುಕ ಹೊರಟರೆ ಎರಡೇ ಎರಡು ಸಂಗತಿಗಳು ನಮ್ಮ ಎದುರು ನಿಲ್ಲುತ್ತವೆ. ಒಂದೋ ಧರ್ಮ ಇಲ್ಲವೇ ರಾಜಕೀಯ. ದುರಂತ ಏನೆಂದರೆ, ಜನರು ಹೆಚ್ಚೆಚ್ಚು ಅಕ್ಷರಸ್ಥರಾದಂತೆಲ್ಲ ಅದರ ಸಂಪೂರ್ಣ ಲಾಭ ಪಡೆದದ್ದು ಧರ್ಮವಲ್ಲ, ರಾಜಕೀಯ. ಕೋಮು ಸಂಘರ್ಷ ಎಂದು ನಾವು ಇವತ್ತು ಯಾವುದನ್ನೆಲ್ಲ ಗುರುತಿಸುತ್ತೇವೋ ಅವುಗಳಲ್ಲಿ ಪಾಲುಗೊಂಡವರು ಧರ್ಮಾನುಯಾಯಿಗಳು ಮತ್ತು ಅಕ್ಷರಸ್ಥರೂ ಆಗಿರಬಹುದು. ಆದರೆ ಅವರಲ್ಲಿ ಧರ್ಮಗ್ರಂಥವನ್ನು ಸಂಪೂರ್ಣ ಓದಿರುವವರು ತೀರಾ ಕಡಿಮೆ. ಹಾಗಂತ, ನಿರ್ದಿಷ್ಟ ಧರ್ಮಗಳ ಗುರುತುಗಳು ಬಾಹ್ಯನೋಟಕ್ಕೆ ಅವರಲ್ಲಿ ಗೋಚರವಾಗಬಹುದು. ಗಡ್ಡ, ಟೊಪ್ಪಿ, ನಾಮ, ಅಲ್ಲಾಹು ಅಕ್ಬರ್, ಜೈ ಶ್ರೀರಾಮ್.. ಮುಂತಾದ ಘೋಷಣೆಗಳನ್ನು ಅವರು ಮೊಳಗಿಸುತ್ತಿರಬಹುದು. ಆದರೆ ತಮ್ಮ ಅಕ್ಷರ ಜ್ಞಾನವನ್ನು ಧರ್ಮಗ್ರಂಥಗಳ ಅಧ್ಯಯನಕ್ಕೆ ಅವರು ಬಳಸಿಕೊಂಡಿರುವುದು ತೀರಾ ಅಪರೂಪ. ಕಾನೂರು ಸುಬ್ಬಮ್ಮ ಹೆಗ್ಗಡತಿಯಲ್ಲಿ ಕುವೆಂಪು ಹೀಗೆ ಬರೆದಿದ್ದಾರೆ ಎಂದು ಹೇಳಿದರೆ ಆ ಕಾದಂಬರಿಯನ್ನು ಓದಿ ಅದನ್ನು ದೃಢಪಡಿಸಲು ಮುಂದಾಗುವ ವ್ಯಕ್ತಿ, ಮಂದಿರದಲ್ಲೋ ಮಸೀದಿಯಲ್ಲೋ ತಾನು ಉರ ಹೊಡೆಯುವ ಪದಗಳನ್ನು ಧರ್ಮಗ್ರಂಥದಲ್ಲಿ ಹುಡುಕುವ ಉಮೇದು ತೋರುವುದಿಲ್ಲ. ಭೈರಪ್ಪನವರು ‘ಆವರಣ’ದಲ್ಲೋ ‘ದಾಟು’ವಿನಲ್ಲೋ ಏನು ಹೇಳಿದ್ದಾರೆ ಎಂಬುದನ್ನು ಕುತೂಹಲದಿಂದ ಹುಡುಕುವ ವ್ಯಕ್ತಿಗಳಲ್ಲಿ ಹಿಂದುವೂ ಇರಬಹುದು, ಮುಸ್ಲಿಮನೂ ಇರಬಹುದು. ಅಲ್ಲದೇ, ಅವರು ತಂತಮ್ಮ ಧರ್ಮಗಳನ್ನು ಕರ್ಮಠರಾಗಿ ಅನುಸರಿಸುತ್ತಿರಲೂ ಬಹುದು. ಆದರೆ, ‘ಆವರಣ’ದಲ್ಲಿರುವ ಕುತೂಹಲ ಅವರಿಗೆ ಧರ್ಮಗ್ರಂಥದಲ್ಲಿ ಇರುವುದಿಲ್ಲ. ಅವರು ಧರ್ಮಗ್ರಂಥಗಳ ಬಗ್ಗೆ ಇನ್ನಾರೋ ಹೇಳಿದುದನ್ನು ಅಥವಾ ಕೇಳಿದುದನ್ನೇ ಸ್ವೀಕರಿಸಿಕೊಂಡು ಬಹುತೇಕ ಬಾರಿ ಅದನ್ನೇ ಪರಮ ಸತ್ಯ ಎಂದು ನಂಬಿಕೊಂಡೇ ಬದುಕುತ್ತಾರೆ. ಬಹುಶಃ ಅಕ್ಷರಸ್ಥರ ಇಂಥ ದೌರ್ಬಲ್ಯಗಳೇ ಕೋಮು ಸಂಘರ್ಷಗಳಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಅಷ್ಟಕ್ಕೂ,
        ಧರ್ಮಗ್ರಂಥವನ್ನು ಓದಿ ತಿಳಿದುಕೊಳ್ಳುವುದಕ್ಕೂ ಯಾರೋ ಹೇಳಿದುದನ್ನು ನಂಬಿ ಬದುಕುವುದಕ್ಕೂ ವ್ಯತ್ಯಾಸ ಇದೆ. ಬೊಳುವಾರು ಮುಹಮ್ಮದ್ ಕುಂಞಯವರ ‘ಓದಿರಿ’ ಕಾದಂಬರಿಯನ್ನು ಓದಿ ತಿಳಿಯುವುದಕ್ಕೂ ಆ ಕಾದಂಬರಿಯ ಬಗ್ಗೆ ಯಾರೋ ಹೇಳಿದುದನ್ನು ಕೇಳಿ ತನ್ನೊಳಗೆ ಅಭಿಪ್ರಾಯ ರೂಪಿಸಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಭಾರತೀಯ ಅಕ್ಷರಸ್ಥನ ದೊಡ್ಡ ಸಮಸ್ಯೆಯೇನೆಂದರೆ, ಧರ್ಮಗ್ರಂಥಗಳ ಕುರಿತಂತೆ ಓದುವುದನ್ನು ಹೊರತುಪಡಿಸಿ ಉಳಿದೆಲ್ಲ ವದಂತಿಗಳನ್ನು ಅಕ್ಷರಶಃ ನಂಬುವುದು. ಇಸ್ಲಾಮ್ ಹಾಗೆ, ಹೀಗೆ ಎಂದು ಯಾರಾದರೂ ಭಾಷಣ ಮಾಡಿದರೆ ಅಥವಾ ಬರೆದರೆ ಅದನ್ನು ದೃಢಪಡಿಸಿಕೊಳ್ಳುವ ಬದಲು ‘ಆಗಿರಬಹುದು’ ಎಂದು ಅಂದುಕೊಳ್ಳುವುದು. ಭಗವದ್ಗೀತೆಗೂ ಇದೇ ಮಾತನ್ನು ಅನ್ವಯಿಸಬಹುದು. ಮುಸ್ಲಿಮರೆಂದರೆ ಅಷ್ಟು ಕೆಟ್ಟವರು, ಹಿಂದೂಗಳೆಂದರೆ ಇಷ್ಟು ಕೆಟ್ಟವರು, ಮುಸ್ಲಿಮರ ಆಹಾರ ಕ್ರಮ ಹಿಂದೂ ವಿರೋಧಿ, ಅವರ ವೇಷ ಹಿಂದೂ ವಿರೋಧಿ, ಅವರ ನೋಟ ವಿರೋಧಿ, ಸಹವಾಸ ವಿರೋಧಿ, ಅವರ ಅಸ್ತಿತ್ವ ಹಿಂದೂ ವಿರೋಧಿ.. ಹೀಗೆ ಹೇಳುತ್ತಾ ಹೋಗುವುದು ಮತ್ತು ಅದನ್ನು ದೃಢಪಡಿಸುವುದಕ್ಕೆ ಯಾವ್ಯಾವುದೋ ಉದಾಹರಣೆಗಳನ್ನು ಕೊಡುವುದು. ಹಾಗಂತ, ಇಂಥ ಉದಾಹರಣೆಗಳಿಗೂ ಇಸ್ಲಾಮ್ ಧರ್ಮಕ್ಕೂ ಏನು ಸಂಬಂಧವಿದೆ, ಧರ್ಮಗ್ರಂಥದ ಭಾಗವೇ ಈ ಉದಾಹರಣೆ ಎಂದು ಪರಿಶೀಲಿಸುವುದಕ್ಕೆ ಬಹುತೇಕ ಯಾರೂ ಹೋಗುವುದೇ ಇಲ್ಲ. ನಿಜವಾಗಿ, ಸಂಘರ್ಷವನ್ನು ಹುಟ್ಟು ಹಾಕುವುದಕ್ಕೆ ಇಲ್ಲಿಯ ವರೆಗೆ ನೆರವಾಗಿರುವುದು ಇಂಥ ಸಂಗತಿಗಳೇ. ಬರೇ ಆಲಿಸುವವರನ್ನು ಆಟವಾಡಿಸುವುದು ಕಷ್ಟವೇನೂ ಅಲ್ಲ. ಮಸೀದಿಯ ಬಾಗಿಲಲ್ಲಿ ಹಂದಿಯ ತಲೆಯನ್ನು ಹಾಕಲಾಗಿದೆ ಅಥವಾ ಮಂದಿರದ ಬಾಗಿಲಲ್ಲಿ ದನದ ತಲೆಯನ್ನು ಎಸೆಯಲಾಗಿದೆ ಎಂಬ ಸುದ್ದಿಯನ್ನು ಆಲಿಸಿದ ತಕ್ಷಣ ವ್ಯಕ್ತಿ ನಿಂತಲ್ಲಿಯೇ ಉದ್ರಿಕ್ತನಾಗುತ್ತಾನೆ. ಹಾಗಂತ, ಆತ ಹಂದಿಯ ಅಥವಾ ದನದ ತಲೆಯನ್ನು ಮಸೀದಿ-ಮಂದಿರಗಳ ಬಾಗಿಲಲ್ಲಿ ಸ್ವತಃ ನೋಡಿರುವುದೂ ಇಲ್ಲ ಅಥವಾ ಅಂಥ ಸುದ್ದಿಗಳನ್ನು ಆಲಿಸಿದ ತಕ್ಷಣ ಏನು ಮಾಡಬೇಕು ಮತ್ತು ಯಾವ ಪ್ರತಿಕ್ರಿಯೆಯನ್ನು ತೋರಬೇಕು, ಉದ್ರಿಕ್ತಗೊಳ್ಳುವುದು ಅದಕ್ಕೆ ಉತ್ತರವೇ ಎಂಬುದನ್ನು ಧರ್ಮಗ್ರಂಥಗಳ ಆಧಾರದಲ್ಲಿ ಮನನ ಮಾಡಿಕೊಂಡಿರುವುದೂ ಇಲ್ಲ. ಇದು ಆಡಿಸುವವರಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಇವರು ವೇದಿಕೆಯೇರಿ ಅದ್ಭುತ ಡಯಲಾಗ್‍ಗಳನ್ನು ಹೊಡೆಯುತ್ತಾರೆ. ಮಂದಿರದ ಮೇಲಾದ ಅಪವಿತ್ರತೆಯ ಬಗ್ಗೆ ಭಾವನಾತ್ಮಕವಾಗಿ ವಾದ ಮಂಡಿಸುತ್ತಾರೆ. ಗೋವುಗಳ ಬಗ್ಗೆ, ಜನಸಂಖ್ಯೆಯ ಬಗ್ಗೆ, ಮತಾಂತರದ ಬಗ್ಗೆ, ಭಯೋತ್ಪಾದನೆಯ ಬಗ್ಗೆ, ಆಹಾರ-ಉಡುಪು.. ಎಲ್ಲವುಗಳ ಬಗ್ಗೆಯೂ ಅತ್ಯಂತ ಉದ್ರಿಕ್ತವಾಗಿ ಮಾತಾಡುತ್ತಾರೆ. ವೇದಿಕೆಯ ಕೆಳಗಂತೂ ಈ ಮಾತುಗಳು ವಿಪರೀತ ಮಟ್ಟದಲ್ಲಿರುತ್ತವೆ. ಒಂದು ವೇಳೆ, ‘ಇಂಥ ಮಾತುಗಳೆಲ್ಲ ನಿಜವೇ, ದನದ ತಲೆ ಮಂದಿರದ ಬಾಗಿಲಲ್ಲಿ ಕಾಣಿಸಿಕೊಂಡರೆ ಮುಸ್ಲಿಮ್ ಏರಿಯಾಗಳಿಗೆ ಕೊಳ್ಳಿಯಿಡಬೇಕೆಂದು ಹಿಂದೂ ಧರ್ಮ ಆದೇಶಿಸುತ್ತದೆಯೇ..’ ಎಂದು ಆಲಿಸುವವರು ಆಲೋಚಿಸಲು ತೊಡಗಿದರೆಂದಿಟ್ಟುಕೊಳ್ಳಿ. ಅಥವಾ ದನದ ತಲೆ ಮಸೀದಿಯ ವಠಾರದಲ್ಲಿ ಕಾಣಿಸಿಕೊಂಡುದುದಕ್ಕೆ ಏನು ಪ್ರತಿಕ್ರಿಯೆ ವ್ಯಕ್ತಪಡಿಸಬೇಕು ಎಂಬುದಾಗಿ ಧರ್ಮಗ್ರಂಥಗಳ ಹಿನ್ನೆಲೆ ಮತ್ತು ಐತಿಹಾಸಿಕ ಪುರಾವೆಗಳ ಆಧಾರದಲ್ಲಿ ಪರಿಶೀಲಿಸುತ್ತಾರೆಂದಿಟ್ಟುಕೊಳ್ಳಿ. ಪರಿಣಾಮ ಏನಿರಬಹುದು? ಮಂದಿರದಲ್ಲಿ ದನದ ತಲೆ ಕಂಡುಬಂದರೆ ಅದಕ್ಕೆ ಮುಸ್ಲಿಮರೇ ಕಾರಣರಾಗಬೇಕೆಂದೇನೂ ಇಲ್ಲವಲ್ಲ. ಹಾಗೆಯೇ ಮಸೀದಿಯಲ್ಲಿ ಕಂಡುಬಂದ ಹಂದಿ ತಲೆಗೆ ಹಿಂದೂಗಳೇ ಕಾರಣ ರಾಗಬೇಕೆಂದೇನೂ ಇಲ್ಲ. ಇವೆರಡೇ ಅಲ್ಲ, ವೇದಿಕೆಯೇರಿಯೋ ಗುಪ್ತ ಸಭೆ ನಡೆಸಿಯೋ ಹೇಳುವ ಪ್ರತಿ ಉದ್ರಿಕ್ತ ವಿಚಾರಗಳ ಹಿಂದಿನ ಅಸಲಿಯತ್ತನ್ನು ಆಲಿಸುವವರು ಕೆದಕುತ್ತಾ ಹೋಗತೊಡಗಿದರೆ, ಆಡಿಸುವವರು ಬೆತ್ತಲುಗೊಳ್ಳುತ್ತಲೇ ಹೋಗಬೇಕಾಗುತ್ತದೆ. ಅಷ್ಟಕ್ಕೂ, ಹಾಗೆ ಅವರ ಮಾತುಗಳನ್ನು ಆಲಿಸುವಾಗ ಆಲಿಸುವವ ಗುಂಡಿ ಬಿದ್ದ ರಸ್ತೆಯಲ್ಲಿ ಹಲವು ಕಿಲೋವಿೂಟರ್ ನಡೆದು ಆ ಸಭೆಗೆ ಬಂದಿರುತ್ತಾನೆ/ಳೆ. ನಳ್ಳಿಯಲ್ಲಿ ವಾರಕ್ಕೆರಡು ಬಾರಿ ನೀರೂ ಉಳಿದ ದಿನಗಳಲ್ಲಿ ಬರೇ ವಾಯುವೂ ಬರುತ್ತಿರುವುದಕ್ಕೆ ತೀವ್ರ ನೊಂದಿರುತ್ತಾನೆ. ರೇಶನ್ ಕಾರ್ಡ್‍ಗಾಗಿ ಸರತಿ ಸಾಲು ನಿಂತೂ ನಿಂತೂ ಸುಸ್ತಾಗಿರುತ್ತಾನೆ. ಪದವಿ ಸರ್ಟಿಫಿಕೇಟ್ ಇದ್ದೂ ವರ್ಷಗಳಿಂದ ನಿರುದ್ಯೋಗಿಯಾಗಿರುತ್ತಾನೆ. ಬೆಲೆಯೇರಿಕೆಯ ಬಿಸಿಯಿಂದ ಕಂಗಾಲಾಗಿರುತ್ತಾನೆ. ಹಾಸಿಗೆ ಸೇರಿರುವ ಹೆತ್ತವರು, ಮದುವೆಗೆ ನಿಂತಿರುವ ಸಹೋದರಿಯರು, ದುಬಾರಿಯಾಗಿರುವ ಶಿಕ್ಷಣ, ಆಹಾರ ವಸ್ತುಗಳು.. ಎಲ್ಲದರಿಂದಲೂ ಸಂತ್ರಸ್ತನಾಗಿರುತ್ತಾನೆ/ಳೆ. ಒಂದು ವೇಳೆ, ಉದ್ರಿಕ್ತ ಮಾತುಗಾರರನ್ನು ಈ ಆಲಿಸುವವರು ತಿರುಗಿ ಪ್ರಶ್ನಿಸಿದರೆ ಏನಾದೀತು? ಪ್ರಾಣಿಗಳ ತಲೆ, ಮಂದಿರ-ಮಸೀದಿ, ಜನಸಂಖ್ಯೆ, ಮತಾಂತರಗಳಿಂದ ಭಾವುಕ ಗೊಳಿಸುವವನಲ್ಲಿ, ತಮ್ಮೂರಿನ ರಸ್ತೆ, ನೀರು, ನಿರುದ್ಯೋಗ, ಬಡತನಗಳ ಬಗ್ಗೆ ಮಾತಾಡಿ ಎಂದು ಸೂಚಿಸಿದರೆ ಹೇಗಾದೀತು? ಆಲಿಸುವವ ಇಷ್ಟು ಮಾಡಿದರೆ ಸಾಕು ಆಡಿಸುವವರ ಆವೇಶ ಇಳಿಯತೊಡಗುತ್ತವೆ ಮಾತ್ರವಲ್ಲ ಸಮಾಜದ  ಅಚ್ಚೇ ದಿನಗಳು ಆರಂಭವಾಗತೊಡಗುತ್ತವೆ. ಆದ್ದರಿಂದ, ಆಲಿಸುವವರು ಆಲೋಚಿಸಲು ಪ್ರಾರಂಭಿಸಲಿ. ಜೊತೆಗೇ,
        ಜಲೀಲ್ ಮುಕ್ರಿಯವರ ಮೇಲಿನ ನಾಲ್ಕು ಸಾಲುಗಳು ನಾಲ್ಕು ದಿಕ್ಕುಗಳಿಗೂ ಹರಡಲಿ.

No comments:

Post a Comment