Tuesday, November 17, 2015

ಸರಕಾರಿ ಕಾರ್ಯಕ್ರಮವನ್ನು ಬೀದಿಗೆ ತರುವ ಅಗತ್ಯ ಏನಿತ್ತು ಹೇಳಿ?

ಮಸೀದಿ ಮಿನಾರದಲ್ಲಿ
ಗೂಡು ಕಟ್ಟಿದ ಪಾರಿವಾಳ
ಮಂದಿರದಲ್ಲಿ ಧಾನ್ಯ ಕಾಳು
ಹೆಕ್ಕಿ ತಿನ್ನುತ್ತಿತ್ತು.

ಮುಸ್ಲಿಮರು ತಿಂದು ಬಿಸಾಡಿದ
ಮಾಂಸದ ಎಲುಬನ್ನು ತಿಂದ ಬೆಕ್ಕು
ದೇಗುಲ ಪುರೋಹಿತರು ಕೊಟ್ಟ
ಹಾಲನ್ನು ಕುಡಿಯುತ್ತಿತ್ತು.

ಮಂದಿರದ ಮಹಡಿಯಲ್ಲಿ
ಗೂಡು ಕಟ್ಟಿದ ಗುಬ್ಬಚ್ಚಿ
ಮಸೀದಿಯ ಬಾವಿಯ
ನೀರು ಕುಡಿಯುತ್ತಿತ್ತು.

ಆದರೆ ಇವುಗಳಿಗೆ ಪರಸ್ಪರ
ಸಂಬಂಧ ಇಲ್ಲವೆಂಬಂತೆ
ಮಸೀದಿ-ಮಂದಿರಗಳ ಹೆಸರಲ್ಲಿ
ಕಚ್ಚಾಡುತ್ತಿದ್ದಾನೆ ಮನುಜ
ಪ್ರಾಣಿ-ಪಕ್ಷಿಗಳಿಗಿಲ್ಲದ
ಕೋಮು ಬಣ್ಣವ ಕೊಟ್ಟವರಾರು
ಈ ಮನುಜ ಕುಲಕ್ಕೆ
       ವಾಟ್ಸಪ್‍ನಲ್ಲಿ ಓದಿದ ಹೃದ್ಯ ಸಾಲುಗಳಿವು. ಟಿಪ್ಪು ಸುಲ್ತಾನ್ ಜಯಂತಿಯ ದಿನದಿಂದ ರಾಜ್ಯ ಒಂದು ಬಗೆಯ ಆತಂಕದಲ್ಲಿದೆ. ಸಾವು-ನೋವುಗಳಾಗಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಂತೂ ತೀರಾ ಕಂಗೆಟ್ಟು ಹೋಗಿವೆ. ‘ಅಂಬೇಡ್ಕರ್ ಮತ್ತು ಕನಕ ಜಯಂತಿಗೆ ಒಂದೊಂದು ದಿನ ರಜೆಯಾದರೆ ಟಿಪ್ಪು ಜಯಂತಿಗೆ ಒಂದು ವಾರ ಸರಕಾರಿ ರಜೆ’ ಎಂದು ಜನರು ಹಾಸ್ಯವನ್ನೋ ಅಸಹನೆಯನ್ನೋ ವ್ಯಕ್ತಪಡಿಸುವಷ್ಟು ಜಿಲ್ಲೆ ಹಿಂಸಾಪೀಡಿತವಾಗಿದೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ಪ್ರತಿಭಟಿಸಿ  ಸ್ವಾವಿೂಜಿಗಳು, ಮುಸ್ಲಿಮ್ ಧರ್ಮಗುರುಗಳು ಮತ್ತು ಕ್ರೈಸ್ತ ಗುರುಗಳು ಒಟ್ಟಾಗಿ ಕೈಕೈ ಹಿಡಿದು ನಿಂತ ಎರಡ್ಮೂರು ವಾರಗಳೊಳಗೆ ಇಂಥದ್ದೊಂದು ದಿಢೀರ್ ವಿಭಜನೆ ಸಾಧ್ಯವಾದದ್ದು ಹೇಗೆ? ನೇತ್ರಾವತಿ ಯೋಜನೆಯನ್ನು ಖಂಡಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಸಂಘಪರಿವಾರದವರೂ ಇದ್ದರು. ಮುಸ್ಲಿಮ್ ಸಂಘಟನೆಗಳೂ ಇದ್ದುವು. ಕೇಸರಿ ಶಾಲು ಧರಿಸಿದ ವ್ಯಕ್ತಿಯ ಬಳಿ ಬಿಳಿ ಟೊಪ್ಪಿ ಧರಿಸಿದ ವ್ಯಕ್ತಿ ಕುಳಿತ ದೃಶ್ಯವನ್ನು ಹೆಕ್ಕಿ ಅನೇಕ ಮಂದಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡೂ ಇದ್ದರು. ಸೌಹಾರ್ದತೆ, ಅನ್ಯೋನ್ಯತೆಯ ಆ ದೃಶ್ಯಗಳೆಲ್ಲ ಇಷ್ಟು ಬೇಗ ಮಸುಕಾದದ್ದು ಹೇಗೆ ಮತ್ತು ಯಾಕೆ? ನಿಜವಾಗಿ, ಈ ಪ್ರತಿಭಟನೆ, ಹಿಂಸೆಗಳ ಹಿಂದೆ ಇರುವುದು ಹಿಂದೂ ಪ್ರೇಮವೋ, ಟಿಪ್ಪು ವಿರೋಧವೋ, ಟಿಪ್ಪು ಪ್ರೇಮವೋ ಅಥವಾ ಹಿಡನ್ ಅಜೆಂಡಾಗಳೋ? ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವುದಾಗಿ ಘೋಷಿಸಿದ್ದು ಸರಕಾರ. ಹಾಗಂತ, ಟಿಪ್ಪು ಜಯಂತಿಯನ್ನು ಆಚರಿಸಲೇಬೇಕು ಎಂದು ಮುಸ್ಲಿಮ್ ಸಮಾಜ ಒತ್ತಾಯಿಸಿರುವುದೋ ಅದಕ್ಕಾಗಿ ಪ್ರತಿಭಟನೆ ನಡೆಸಿರು ವುದೋ ಎಲ್ಲೂ ನಡೆದಿಲ್ಲ. ಅದಕ್ಕೆ ಮುಖ್ಯ ಕಾರಣ, ಆತ ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ ರಾಜನೇನೂ ಅಲ್ಲ ಎಂಬುದು. ಆತ ಒಂದು ಸಮಾಜದ ಪ್ರತಿನಿಧಿ. ಹಿಂದೂ-ಮುಸ್ಲಿಮ್-ಕ್ರೈಸ್ತ ಸಹಿತ ಸರ್ವರನ್ನೂ ಒಳಗೊಂಡ ಒಂದು ಸಮಾಜವನ್ನು ಆತ ಆಳಿದ್ದಾನೆ. ಹೀಗಿರುವಾಗ, ಈ ಜಯಂತಿಯ ಆಚರಣೆ ಹೇಗಿರಬೇಕಿತ್ತು? ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುವುದಾಗಿ ಘೋಷಿಸಿದಾಗ ಸಮಾಜ ಹೇಗೆ ಪ್ರತಿಕ್ರಿಯಿಸಬೇಕಿತ್ತು? ದುರಂತ ಏನೆಂದರೆ, ತೀರಾ ಸರಕಾರಿ ಕಾರ್ಯಕ್ರಮವಾಗಿ ಮುಗಿಯಬೇಕಾದ ಒಂದು ಆಚರಣೆಗೆ ಹಿಂದೂ ಮತ್ತು ಮುಸ್ಲಿಮರು ಧರ್ಮದ ಬಣ್ಣ ಬಳಿದರು. ಹಿಂದೂಗಳ ಒಂದು ಗುಂಪು ಟಿಪ್ಪು ಜಯಂತಿಯನ್ನು ವಿರೋಧಿಸಿದಾಗ ಮುಸ್ಲಿಮರು ಟಿಪ್ಪು ಆಚರಣೆಯಲ್ಲಿ ವಿಶೇಷ ಆಸಕ್ತಿಯನ್ನು ತೋರಿಸಿದರು. ಟಿಪ್ಪು ವ್ಯಕ್ತಿತ್ವವನ್ನು ವೈಭವೀಕರಿಸಿದರು. ಅತಿರಂಜಿತ ಕತೆಗಳೂ ಹುಟ್ಟಿ ಕೊಂಡವು. ನಿಜವಾಗಿ, ಸರಕಾರಕ್ಕೆ ಟಿಪ್ಪುವಿನ ಮೇಲೆ ಗೌರವ ಇದ್ದಿದ್ದೇ ಆಗಿದ್ದರೆ ಅದು ಜಯಂತಿ ಆಚರಣೆಯ ಹೊಣೆಯನ್ನು ರಾಜ್ಯ ಅಲ್ಪಸಂಖ್ಯಾತ ಇಲಾಖೆಗೆ ವಹಿಸಿಬಿಡುವ ಬದಲು ಸ್ವಯಂ ತಾನೇ ವಹಿಸಿಕೊಳ್ಳಬೇಕಿತ್ತು. ಅಷ್ಟಕ್ಕೂ, ಸರಕಾರ ಎಡವಿತೆಂದೇ ಇಟ್ಟುಕೊಳ್ಳೋಣ. ಆ ತಪ್ಪನ್ನು ಮುಂದುವರಿಸುವ ಅಗತ್ಯ ಮುಸ್ಲಿಮ ರಿಗೇನಿತ್ತು? ತೀರಾ ಸರಕಾರಿ ಕಾರ್ಯಕ್ರಮವನ್ನು ಮುಸ್ಲಿಮರ ಕಾರ್ಯಕ್ರಮವಾಗಿ ಪ್ರತ್ಯೇಕವಾಗಿ ಆಚರಿಸುವ ಅಗತ್ಯವೇನಿತ್ತು? ಟಿಪ್ಪು ಸುಲ್ತಾನ್ ಹೋರಾಡಿದ್ದು ಬ್ರಿಟಿಷರ ವಿರುದ್ಧ. ಸಾಮ್ರಾಜ್ಯ ವಿಸ್ತರಣೆಗಾಗಿಯೋ ಅಥವಾ ಅಧಿಕಾರದ ಉಳಿವಿಗಾಗಿಯೋ ಆತ ಹಿಂದೂ, ಮುಸ್ಲಿಮ್, ಕ್ರೈಸ್ತ ಸಹಿತ ಎಲ್ಲರ ಮೇಲೂ ಕ್ರಮ ಕೈಗೊಂಡಿದ್ದಾನೆ. ಆ ಕ್ರಮ ಧರ್ಮಾತೀತವಾಗಿತ್ತು. ಮುಸ್ಲಿಮರ ಮೊಹರಂ ಮೆರವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನೂ ಆತ ನಿಷೇಧಿಸಿದ್ದ. ಓರ್ವ ರಾಜನೆಂಬ ನೆಲೆಯಲ್ಲಿ ಆತ ತನ್ನ ಇತಿ-ಮಿತಿಯೊಳಗೆ ಕೆಲಸ ಮಾಡಿದ್ದಾನೆ. ಇವು ಮತ್ತು ಇಂಥ ಇನ್ನಿತರ ಸಂಗತಿಗಳನ್ನು ಸಮಾಜದ ಮುಂದಿಡುವುದಕ್ಕೆ ಮುಸ್ಲಿಮರು ಪ್ರತ್ಯೇಕ ಸಭೆಗಳನ್ನು ಆಯೋಜಿಸಬೇಕಿತ್ತೇ? ಟಿಪ್ಪು ಸುಲ್ತಾನನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಸೂಕ್ತ ಉತ್ತರ ಕೊಡಬೇಕಾದ ಕರ್ತವ್ಯ ಸರಕಾರದ್ದು. ಯಾಕೆಂದರೆ, ಜಯಂತಿ ಘೋಷಣೆ ಮಾಡಿದ್ದು ಸರಕಾರವೇ ಹೊರತು ಮೌಲ್ವಿಗಳೂ ಅಲ್ಲ, ಮುಸ್ಲಿಮರ ಧಾರ್ಮಿಕ ಕೇಂದ್ರಗಳೂ ಅಲ್ಲ. ಆದ್ದರಿಂದ, ಸರಕಾರ ಆರೋಪಗಳಿಗೆ ಸೂಕ್ತ ಪ್ರತಿ ಉತ್ತರಗಳನ್ನು ಕೊಟ್ಟು ತನ್ನನ್ನು ಸಮರ್ಥಿಸಿಕೊಳ್ಳಬೇಕಿತ್ತು. ಒಂದು ವೇಳೆ ಟಿಪ್ಪು ಕುರಿತಾದ ಚರ್ಚೆಯು ಸರಕಾರ ಮತ್ತು ಸಂಘ ಪರಿವಾರ ಎಂದು ಎರಡಾಗಿ ವಿಭಜನೆಗೊಳ್ಳುತ್ತಿದ್ದರೆ ಒಟ್ಟು ವಾತಾವರಣ ಹೇಗಿರುತ್ತಿತ್ತು? ನಿಜವಾಗಿ, ಈ ಇಡೀ ಜಯಂತಿಯಲ್ಲಿ ಮುಸ್ಲಿಮರು ಪಾಲುಗೊಳ್ಳಲೇ ಬೇಕೆಂಬುದು ಸಂಘಪರಿವಾರದ ಬಯಕೆ. ಯಾಕೆಂದರೆ, ಈ ಜಯಂತಿಯನ್ನು ಸರಕಾರ v/s ಸಂಘಪರಿವಾರ ಎಂದು ವಿಭಜಿಸುವುದರಿಂದ ಲಾಭ ಕಡಿಮೆ. ಜನರೂ ಆಸಕ್ತಿ ತೋರುವುದಿಲ್ಲ. ಅಲ್ಲದೇ, ಈ ವಿಷಯವನ್ನು ಹೆಚ್ಚು ದಿನ ಚಾಲ್ತಿಯಲ್ಲಿಟ್ಟುಕೊಳ್ಳುವುದಕ್ಕೆ ಸಾಧ್ಯವೂ ಇಲ್ಲ. ಅದು ಬಿಟ್ಟು ಮುಸ್ಲಿಮರು ಈ ಆಚರಣೆಯಲ್ಲಿ ವಿಶೇಷ ಆಸಕ್ತಿಯಿಂದ ಭಾಗಿಯಾದರೆ ಮತ್ತು ಮೆರವಣಿಗೆ ಹಾಗೂ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಆಯೋಜಿಸಿದರೆ, ಅದರಿಂದ ಇಡೀ ಜಯಂತಿಯ ಬಣ್ಣವನ್ನೇ ಬದಲಾಯಿಸಬಹುದು. ಆ ಬಳಿಕ ಸರಕಾರ v/s ಸಂಘಪರಿವಾರ ಎಂಬುದು ಸಂಘಪರಿವಾರ v/s ಮುಸ್ಲಿಮರು ಎಂಬುದಾಗಿ ವಿಭಜನೆಗೊಳಗಾಗುತ್ತದೆ. ಹಾಗೇನಾದರೂ ಆಗಿಬಿಟ್ಟರೆ, ಆ ಬಳಿಕ ರಾಜ್ಯದಾದ್ಯಂತ ಟಿಪ್ಪುವಿನ ನೆಪದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಪ್ರತಿಭಟನೆ ಕೈಗೊಳ್ಳಬಹುದು. ಹಿಂದೂಗಳನ್ನು ಭಾವನಾತ್ಮಕವಾಗಿ ಕಾಡಬಹುದು. ದೇವಸ್ಥಾನವನ್ನು ಧ್ವಂಸಗೊಳಿಸಿದ, ಮತಾಂತರ ಮಾಡಿದ ವ್ಯಕ್ತಿಯನ್ನು ಮುಸ್ಲಿಮರಿಗಾಗಿ ಸರಕಾರ ಓಲೈಕೆ ಮಾಡುತ್ತಿದೆ ಎಂದು ವ್ಯಾಖ್ಯಾನಿಸಬಹುದು. ಬೀದಿಗಿಳಿದಿರುವ ಮುಸ್ಲಿಮರನ್ನು ಮತ್ತು ಅವರ ವಿಪರೀತ ಪ್ರೀತಿಯನ್ನು ಅದಕ್ಕೆ ಪೂರಕವಾಗಿ ಬೊಟ್ಟು ಮಾಡಬಹುದು. ಬಹುಶಃ, ಒಂದು ಹಂತದ ವರೆಗೆ ಸಂಘಪರಿವಾರದ ಈ ಉದ್ದೇಶ ಖಂಡಿತ ಈಡೇರಿದೆ. ಬಿಹಾರದ ಚುನಾವಣೆಯಲ್ಲಿ ಬಿಜೆಪಿಗಾದ ಪರಾಜಯವನ್ನು ರಾಜ್ಯದ ಮಾಧ್ಯಮಗಳು ಚರ್ಚಿಸದಂತೆ ನೋಡಿಕೊಳ್ಳುವಲ್ಲಿಯೂ ಅದು ಯಶಸ್ವಿಯಾಗಿದೆ.
      ಅಷ್ಟಕ್ಕೂ, 200 ವರ್ಷಗಳ ಹಿಂದೆ ಹುಟ್ಟಿ ಮರೆಯಾದ ಓರ್ವ ರಾಜನ ಹೆಸರಲ್ಲಿ ಒಂದು ಸಮಾಜ ಕಿತ್ತಾಡಿಕೊಳ್ಳುತ್ತದೆಂದರೆ ಅದಕ್ಕೆ ಏನೆನ್ನಬೇಕು? ಟಿಪ್ಪು ಸುಲ್ತಾನ್ 200 ವರ್ಷಗಳ ಹಿಂದೆ ಯಾವ ತಪ್ಪುಗಳನ್ನು ಮಾಡಿದ್ದನೋ ಅದಕ್ಕಾಗಿ ಶಿಕ್ಷೆ ಕೊಡುವುದು ಇವತ್ತು ಸಾಧ್ಯವಿಲ್ಲ. ಆತ 200 ವರ್ಷಗಳ ಹಿಂದೆ ಏನೆಲ್ಲ ಒಳಿತು ಮಾಡಿದ್ದನೋ ಅದನ್ನು ಗೌರವಿಸಿ ಇವತ್ತು ಹೂ ಮಾಲೆ ಹಾಕುವುದಕ್ಕೂ ಸಾಧ್ಯವಿಲ್ಲ. ‘ಕನಿಷ್ಠ ಇದುವೇ ಅಂತಿಮ ಸತ್ಯ’ ಎಂದು ಯಾವ ರಾಜನ ಕುರಿತೂ ಹೇಳುವಂತಿಲ್ಲ ಎಂಬುದು ಆತನನ್ನು ವೈಭವೀಕರಿಸುತ್ತಿರುವವರಿಗೂ ತುಚ್ಛೀಕರಿಸುತ್ತಿರುವವರಿಗೂ ಖಂಡಿತ ಗೊತ್ತು. ಇಷ್ಟಿದ್ದೂ ಸಮಾಜದ ವಿಭಜನೆಗೆ ಓರ್ವ ರಾಜನನ್ನು ನೆಪ ಮಾಡಿಕೊಳ್ಳುತ್ತಾರೆಂದಾದರೆ ಆ ವಿಭಜಕರಲ್ಲಿ ಸ್ವಾರ್ಥ ಉದ್ದೇಶಗಳಿವೆ ಎಂಬುದು ಸ್ಪಷ್ಟ. ಟಿಪ್ಪುವಿನ ಹೆಸರಲ್ಲಿ ಅಲ್ಲಲ್ಲಿ ಇರಿತಕ್ಕೊಳಗಾದವರಿಗೆ ಮತ್ತು ಮೃತಪಟ್ಟವರಿಗೆ ಇದು ಗೊತ್ತಿದೆಯೋ ಇಲ್ಲವೋ ಆದರೆ ಇರಿಯಲು ಕತ್ತಿ ಕೊಟ್ಟವರಿಗೆ ಮತ್ತು ಪ್ರಚೋದನಕಾರಿ ಭಾಷಣಗಳನ್ನು ಬಿಗಿಯುವವರಿಗೆ ಇದು ಖಂಡಿತ ಗೊತ್ತು. ಇಲ್ಲಿ ಟಿಪ್ಪು ಒಂದು ನೆಪ ಮಾತ್ರ. ನಾಳೆ ಶಿವಾಜಿಯೂ ಇದಕ್ಕೆ ಬಳಕೆಯಾಗಬಹುದು. ಅಬ್ದುಲ್ ಕಲಾಮ್‍ರು, ಮುಹಮ್ಮದ್ ಅಲಿ, ಸಾವರ್ಕರ್ ಎಲ್ಲರನ್ನೂ ಇದಕ್ಕೆ ಬಳಸಿಕೊಳ್ಳಬಹುದು. ಅಂದಹಾಗೆ, ಈ ರಾಜ್ಯದ ಅನೇಕ ಕಡೆ ಈಗಾಗಲೇ ಬಡಪಾಯಿ ಮೈದಾನಗಳು ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡಿವೆ. ಕ್ರಿಕೆಟ್ ತಂಡಗಳು ಹಿಂದೂ-ಮುಸ್ಲಿಮ್ ಆಗಿವೆ. ಶಾಲೆಗಳೊಳಗೂ ಇಂಥ ವಿಭಜನೆಗಳು ನಡೆಯುತ್ತಿವೆ. ಮಾರುಕಟ್ಟೆಯಲ್ಲಿ, ಬಸ್ ನಿಲ್ದಾಣಗಳಲ್ಲಿ, ಶಾಲಾ ಕ್ಯಾಂಪಸ್‍ಗಳಲ್ಲಿ.. ಯಾರು ಯಾರೊಂದಿಗೆ ಮಾತಾಡಬೇಕು ಎಂಬುದು ಅಲಿಖಿತವಾಗಿ ನಿರ್ಧಾರವಾಗಿಬಿಟ್ಟಿದೆ. ಹಿಂದೂ ಅಂದರೆ ನಾಮ, ಕೇಸರಿ ಬಟ್ಟೆ, ಮತ್ತು ಕೈಗೆ ಕೇಸರಿ ರಿಬ್ಬನ್ ತೊಟ್ಟವ ಎಂಬ ವಾತಾವರಣ ಸೃಷ್ಟಿಯಾಗಿರುವಂತೆಯೇ ಮುಸ್ಲಿಮ್ ಅಂದರೆ ಟೊಪ್ಪಿ, ಗಡ್ಡ, ಪೈಜಾಮ ಧರಿಸಿರುವವ ಎಂಬ ಭಾವನೆಯು ವ್ಯಾಪಕವಾಗುತ್ತಿದೆ. ಈ ವೇಶದಲ್ಲಿ ಹಿಂದೂ ಅಥವಾ ಮುಸ್ಲಿಮ್ ಕಾಣಿಸಿಕೊಂಡರೆ ಆತ ನಿಷ್ಠಾವಂತ ಎಂದೂ ಭಾವಿಸಲಾಗುತ್ತದೆ. ಅಂಥವರನ್ನು ತುಸು ಭಯದಿಂದ ನೋಡಬೇಕಾಗುತ್ತದೆ. ಯುವಕ ಮತ್ತು ಯುವತಿ ಕಾಲೇಜಿನ ಸಹಪಾಠಿಗಳಾದರೂ ಅವರನ್ನು ಕಂಡ ಕೂಡಲೇ ಇವರ ಮಾತು ಅಚಾನಕ್ಕಾಗಿ ನಿಂತು ಹೋಗುತ್ತದೆ. ಅಕ್ಕಪಕ್ಕದ ಮನೆಯವರಾಗಿದ್ದರೂ ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಕುಳಿತುಕೊಳ್ಳುವುದಕ್ಕೆ ಭಯ ಆಗುತ್ತದೆ. ಎಲ್ಲಿ ಹಲ್ಲೆ ನಡೆಯುತ್ತದೋ ಎಂಬ ಭೀತಿಯಿಂದ ಪರಸ್ಪರ ಪರಿಚಯ ಇದ್ದರೂ ಗೆಳೆಯರಾಗಿದ್ದರೂ ಸಹಪಾಠಿಗಳಾಗಿದ್ದರೂ ಅಪರಿಚಿತರಂತೆ ಮತ್ತು ಪರಮ ವೈರಿಗಳಂತೆ ಬಿಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬರುತ್ತದೆ. ನಿಜವಾಗಿ, ಕೇಸರಿ ಬಟ್ಟೆ, ರಿಬ್ಬನ್, ನಾಮ ಹಾಕಿದವರನ್ನು ಅಥವಾ ಟೊಪ್ಪಿ, ಗಡ್ಡ, ಪೈಜಾಮ ಧರಿಸಿದವರನ್ನು ಕಂಡು ಹೆಣ್ಣು-ಗಂಡು ಹೆದರಬಾರದಿತ್ತು. ಸಮಾಜ ಅಂತಹವರನ್ನು ಆತಂಕದಿಂದ ನೋಡಬಾರದಿತ್ತು. ಯಾಕೆಂದರೆ, ಒಂದು ಹಂತದವರೆಗೆ ಅದು ಧರ್ಮವೊಂದರ ಸಂಕೇತ. ಧರ್ಮ ಅಪಾಯಕಾರಿಯಲ್ಲ ಎಂದಾದರೆ ಆ ಚಿಹ್ನೆ ಮತ್ತು ಅದನ್ನು ಧರಿಸಿದವರು ಅಪಾಯಕಾರಿಗಳಾಗಲು ಸಾಧ್ಯವೇ ಇಲ್ಲ. ಅವರು ಸಮಾಜದ ಭರವಸೆಗಳಾಗಬೇಕೇ ಹೊರತು ಬೆದರಿಕೆಯಲ್ಲ. ಅವರನ್ನು ಕಾಣುವಾಗ ಹೆಣ್ಣು-ಗಂಡು, ಗೆಳೆಯ-ಗೆಳತಿ, ಸಹೋದರ-ಸಹೋದರಿ ಎಲ್ಲರಲ್ಲೂ ನೆಮ್ಮದಿಯ ಭಾವ ಉಂಟಾಗಬೇಕು. ಅವರು ತಮ್ಮ ರಕ್ಷಕರು ಎಂಬ ವಾತಾವರಣ ಬೆಳೆಯಬೇಕು. ಆದರೆ ಹಾಗಾಗುತ್ತಿಲ್ಲ ಎಂಬುದೇ ಅವರು ನಿಜ ಧರ್ಮವನ್ನು ಪ್ರತಿನಿಧಿಸುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ಪುರಾವೆ. ಇಂಥವರನ್ನು ಗುರುತಿಸಿ ಸಮಾಜ ತರಾಟೆಗೆತ್ತಿಕೊಳ್ಳದಿದ್ದರೆ ಟಿಪ್ಪು ಎಂದಲ್ಲ ನಾಳೆ ಬದನೆಕಾಯಿ, ಈರುಳ್ಳಿ, ಲಿಂಬೆಹಣ್ಣು, ಬಂಗುಡೆ ಮೀನು ಎಲ್ಲವೂ  ಸಮಾಜವನ್ನು ವಿಭಜಿಸಬಹುದು.
    ಕವನದ  ಸಾಲುಗಳೇಕೋ ಮತ್ತೆ ಮತ್ತೆ ಕಾಡುತ್ತಿವೆ..

No comments:

Post a Comment