Monday, March 16, 2015

ಇಂಡಿಯಾಸ್ ಡಾಟರ್ ಮತ್ತು ಇಂಡಿಯಾಸ್ ನಾಗಾಲ್ಯಾಂಡ್

     ‘ನಾಗಾಗಳ ದೌರ್ಬಲ್ಯವನ್ನು ಬಹಿರಂಗಕ್ಕೆ ತಂದ ಘೋರ ಪಾತಕ' ಎಂಬ ಶೀರ್ಷಿಕೆಯ ಬರಹವನ್ನು ಶರೀಫುದ್ದೀನ್ ಖಾನ್‍ನ ಭಾವಚಿತ್ರದೊಂದಿಗೆ ಮಾರ್ಚ್ 4ರಂದು ಮುಖಪುಟದಲ್ಲಿ ಪ್ರಕಟಿಸಿದ ನಾಗಾಲ್ಯಾಂಡ್‍ನ ಪ್ರಮುಖ ಪತ್ರಿಕೆ ದಿ ಮಿರುಂಗ್ ಎಕ್ಸ್ ಪ್ರೆಸ್, ಆ ಬರಹದುದ್ದಕ್ಕೂ ನಾಗಾಗಳ ಸ್ವಾಭಿಮಾನವನ್ನು ಪ್ರಶ್ನಿಸುತ್ತಾ ಹೋಯಿತು. ನಿಜವಾಗಿ, ಅದು ಸುದ್ದಿಯೋ ವರದಿಯೋ ಅಥವಾ ಲೇಖನವೋ ಆಗಿರಲಿಲ್ಲ. ನಾಗಾಲ್ಯಾಂಡ್‍ನ ಪ್ರಭಾವಿ ಸಂಘಟನೆಗಳಾದ ನಾಗಾ ಕೌನ್ಸಿಲ್ ದಿಂಪುರ್ (NCD) ಮತ್ತು ನಾಗಾ ವುಮೆನ್ ಹೋಹೋ ದಿಂಪುರ್ (NWHD) ಎಂಬೆರಡು ಸಂಘಟನೆಗಳು ಹೊರಡಿಸಿದ ಜಂಟಿ ಹೇಳಿಕೆಗಳಷ್ಟೇ ಆಗಿದ್ದುವು. ಸಾಮಾನ್ಯವಾಗಿ, ಸಂಘಟನೆಗಳ ಹೇಳಿಕೆಗಳನ್ನು ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸುವುದಿಲ್ಲ. ಎಲ್ಲ ಪತ್ರಿಕೆಗಳೂ ಅವುಗಳಿಗಾಗಿ ಒಳಪುಟಗಳಲ್ಲಿ ಸ್ಥಳವನ್ನು ವಿೂಸಲಿಟ್ಟಿರುತ್ತವೆ. ಆದರೆ ಮಿರುಂಗ್ ಎಕ್ಸ್ ಪ್ರೆಸ್ ಈ ಸಂಪ್ರದಾಯವನ್ನು ಮುರಿದುದಷ್ಟೇ ಅಲ್ಲ, ಆ ಪತ್ರಿಕಾ ಹೇಳಿಕೆಯನ್ನು ವೈಭವೀಕರಿಸಿತು. ‘ಬಾಂಗ್ಲಾದೇಶಿಗಳ ಅಕ್ರಮ ಒಳ ನುಸುಳುವಿಕೆಯನ್ನು ಮತ್ತು ರಾಜ್ಯದಲ್ಲಿ ಅವರು ನೆಲೆಸುವುದನ್ನು ತಡೆಯುವ ಹೊಣೆಗಾರಿಕೆಯನ್ನು ನಾಗಾಗಳು ವಹಿಸಿಕೊಳ್ಳದಿದ್ದರೆ ನಮ್ಮ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ದಾಳಿಯಲ್ಲಿ ಹೆಚ್ಚಳವಷ್ಟೇ ಆದೀತು' ಎಂದೂ ಬರೆಯಿತು. ‘ನಾಗಾಗಳು ಬರೇ ಖಂಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಅವರೊಂದಿಗೆ ವೈವಾಹಿಕ ಸಂಬಂಧವನ್ನು ಬೆಳೆಸುವುದು ಅಪಾಯಕಾರಿ..' ಎಂದಿತು. NCDಯ ಕೋಶಾಧಿಕಾರಿ ಚಿತೆನ್ ಕೊನ್ಯಾಕ್ ಮತ್ತು NWHDಯ ಅಧ್ಯಕ್ಷೆ ಹುಕೇಲಿ ವೊಟ್ಸಾರ ಸಹಿಯಿದ್ದ ಈ ಜಂಟಿ ಹೇಳಿಕೆಯ ಜೊತೆಜೊತೆಗೇ ಮಾರ್ಚ್ 3ರಂದು ನಾಗಾ ಸ್ಟೂಡೆಂಟ್ ಫೆಡರೇಶನ್ (NSF) ಕೂಡ ಒಂದು ಪ್ರಚೋದನಾತ್ಮಕ ಹೇಳಿಕೆಯನ್ನು ಹೊರಡಿಸಿತು. ಅದರ ಅಧ್ಯಕ್ಷ ತೊಂಗ್‍ಪಾಂಗ್ ಒಝುಕು ಅವರ ಸಹಿ ಇದ್ದ ಹೇಳಿಕೆಯಲ್ಲಿ, ‘ಶರೀಫುದ್ದೀನ್ ಎಸಗಿದ ಅತ್ಯಾಚಾರವು ಇಡೀ ನಾಗಾ ಸಮುದಾಯಕ್ಕೇ ಎಸೆದ ಸವಾಲು' ಎನ್ನಲಾಯಿತು. ‘ಅಕ್ರಮ ಬಂಗ್ಲಾದೇಶಿಗಳಾದ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಿಧಾನವಾಗಿ ಇವರು ನಮ್ಮ ನಾಡಲ್ಲಿ ನಮ್ಮನ್ನೇ ನಿಯಂತ್ರಿಸುವಷ್ಟು ಪ್ರಬಲರಾಗುತ್ತಾರೆ. ಅವರಿಗೆ ನೆಲೆಸಲು ಅವಕಾಶ ನೀಡುವುದೇ ತಪ್ಪು..’ ಎಂದು ಷರಾ ಬರೆಯಿತು. ಅಂದಹಾಗೆ, ಶರೀಫುದ್ದೀನ್‍ನ ಮೇಲೆ ಅತ್ಯಾಚಾರದ ಆರೋಪ ದಾಖಲಾದದ್ದು ಫೆ. 23ರಂದು. ಫೆ. 24ರಂದು ಆತನ ಬಂಧನವಾಗಿತ್ತು. ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾದದ್ದೋ ಮಾರ್ಚ್ 3ರಂದು. ಕಾಕತಾಳೀಯವೇನೆಂದರೆ, ಅಕ್ರಮ ಬಂಗ್ಲಾದೇಶಿ ವಲಸಿಗರ(IBI) ವಿರುದ್ಧ ರಾಜ್ಯವ್ಯಾಪಿ ಅಭಿಯಾನ ಕೈಗೊಳ್ಳುವುದರ ಅಂಗವಾಗಿ ನಾಗಾ ಸ್ಟೂಡೆಂಟ್ ಫೆಡರೇಶನ್ (NSF) ಫೆ. 24ರಂದೇ ವಿವಿಧ ಸಂಘಟನೆಗಳೊಂದಿಗೆ ಚರ್ಚೆಯನ್ನು ಏರ್ಪಡಿಸಿತ್ತು. NCD, NWHD, ದಿಂಪುರ್ ನಾಗಾ ಮದರ್ಸ್ ಅಸೋಸಿಯೇಶನ್, ದಿಂಪುರ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (DCCI) ಮತ್ತು ದಿಂಪುರ್ ಪಟ್ಟಣದ ಸ್ಥಳೀಯ ನಾಗರಿಕರನ್ನು ಸೇರಿಸಿಕೊಂಡು ನಡೆಸಲಾದ ಆ ಚರ್ಚೆಯಲ್ಲಿ ಬಂಗ್ಲಾದೇಶೀಯರನ್ನು ತಡೆಗಟ್ಟುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಈ ಸಭೆಯ ಮರುದಿನ NSF ನ ಅಧ್ಯಕ್ಷ ತೋಂಗ್‍ಪಾಂಗ್ ಒಝುಕು ಅವರು ಒಂದು ಹೇಳಿಕೆಯನ್ನು ಹೊರಡಿಸಿದರು. ನಾಗಾಲ್ಯಾಂಡ್‍ನಲ್ಲಿ ಪರ್ಯಾಯ ಸರಕಾರದಂತೆ ಕಾರ್ಯಾಚರಿಸುತ್ತಿರುವ ಇಸಾಕ್ ಮುಯಿವಾ ನೇತೃತ್ವದ ನ್ಯಾಶನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (NSCN) ಎಂಬ ಸಶಸ್ತ್ರ ಸಂಘಟನೆಯು ತೆರಿಗೆ ಸಂಗ್ರಹಕ್ಕಾಗಿ ನೂರ್‍ಜಹಾನ್ ಹುಸೇನ್‍ನನ್ನು ನೇಮಿಸಿರುವುದನ್ನು ಆ ಹೇಳಿಕೆಯಲ್ಲಿ ಅವರು ಪ್ರಬಲವಾಗಿ ಖಂಡಿಸಿದರು. ಈ ನೇಮಕದ ಸುದ್ದಿಯು ನಿಜವೇ ಆಗಿದ್ದರೆ ಅದು ಇಡೀ ನಾಗಾಗಳಿಗೆ ಮಾಡುವ ಅವಮಾನ ಎಂದರು. ವಿಶೇಷ ಏನೆಂದರೆ, ಶರೀಫುದ್ದೀನ್ ಖಾನ್‍ನ ಬಂಧನದ ಮೂರು ದಿನಗಳ ಬಳಿಕ ಫೆ. 27ರಂದು ಮೋನ್ ಜಿಲ್ಲೆಯ ಕೊನ್ಯಾಕ್ ಬುಡಕಟ್ಟಿಗೆ ಸೇರಿದ 39 ವರ್ಷದ ನಾಗಾ ವ್ಯಕ್ತಿಯೋರ್ವ 6 ವರ್ಷದ ಬಾಲೆಯ ಮೇಲೆ ಅತ್ಯಾಚಾರ ನಡೆಸಿದ್ದ. ಶವಸಂಸ್ಕಾರ ವೊಂದರಲ್ಲಿ ಪಾಲ್ಗೊಂಡು ಹಿಂತಿರುಗುವ ವೇಳೆ ಆತ ಈ ಕೃತ್ಯವನ್ನು ಎಸಗಿದ್ದ. ಪತ್ರಿಕೆಗಳಲ್ಲಿ ಇದೂ ಸುದ್ದಿಗೀಡಾಗಿತ್ತು. ಆದರೆ ಶರೀಫುದ್ದೀನ್‍ನ ಕುರಿತು ಮಾತಾಡಿದ ಯಾವ ಸಂಘಟನೆಗಳೂ ಈ ಕೃತ್ಯದ ಬಗ್ಗೆ ತಪ್ಪಿಯೂ ಉಲ್ಲೇಖಿಸಲಿಲ್ಲ. ನಾಗಾಗಳ ಸ್ವಾಭಿಮಾನದ ಪ್ರಶ್ನೆಯಾಗಿಯೂ ಅದು ಕಾಡಲಿಲ್ಲ. ಹೀಗಿರುತ್ತಾ, ಈ ಇಡೀ ಘಟನೆಯನ್ನು ನಾವು ‘ಅತ್ಯಾಚಾರ ವಿರೋಧಿ ಸಾರ್ವಜನಿಕ ಆಕ್ರೋಶ'ವಾಗಿ ವ್ಯಾಖ್ಯಾನಿಸುವುದು ಎಷ್ಟು ಸರಿ? ಅತ್ಯಾಚಾರಿಗಳಿಗೆ ತ್ವರಿತವಾಗಿ ಶಿಕ್ಷೆ ಜಾರಿಯಾಗದಿರುವುದನ್ನು ಇದಕ್ಕೆ ಕಾರಣವಾಗಿ ಕೆಲವರು ಮುಂದಿಡುವುದು ಎಷ್ಟರ ಮಟ್ಟಿಗೆ ಸಮರ್ಥನೀಯ? ಅಷ್ಟಕ್ಕೂ, ನಾಗಾ ಸಂಸ್ಕøತಿಯಲ್ಲಿ ಹೆಣ್ಣು ಮಕ್ಕಳಿಗೆ ಗೌರವದ ಸ್ಥಾನವಿದೆ ಎಂಬುದು ಅಥವಾ 2013ರಲ್ಲಿ ಈ ದೇಶದಲ್ಲಿ ದಾಖಲಾದ 33 ಸಾವಿರ ಅತ್ಯಾಚಾರ ಪ್ರಕರಣ ಗಳಲ್ಲಿ 73% ಪ್ರಕರಣಗಳೂ ಬಿದ್ದು ಹೋಗಿವೆ ಎಂಬುದು ನಿಜವೇ ಆಗಿರಬಹುದು. ಆದರೆ ಶರೀಫುದ್ದೀನ್ ಖಾನ್‍ನ ಮೇಲೆ ನಡೆದ ದಾಳಿಯು ಇವುಗಳಿಗಾಗಿ ಖಂಡಿತ ಅಲ್ಲ. ಈ ವಾದವನ್ನು ಸಮರ್ಥಿಸುವುದಕ್ಕೆ ಅತ್ಯಾಚಾರಕ್ಕೀಡಾದ ಆ 6ರ ಬಾಲೆ ಅನುಮತಿಸುವುದೂ ಇಲ್ಲ. ಅಲ್ಲದೇ 2013ರಲ್ಲಿ ನಾಗಾಲ್ಯಾಂಡಿನಲ್ಲಿ ಮಹಿಳಾ ದೌರ್ಜನ್ಯದ 51 ಪ್ರಕರಣಗಳು ನಡೆದಿವೆ ಎಂಬುದೂ ಈ ವಾದವನ್ನು ಅಲ್ಲಗಳೆಯುತ್ತದೆ. ನಿಜವಾಗಿ, ಶರೀಫುದ್ದೀನ್‍ನ ಮೇಲೆ ಮಾಡಲಾದ ದಾಳಿಗೆ ಅತ್ಯಾಚಾರ ಕಾರಣ ಆಗಿರಲಿಲ್ಲ. ಆತನಿಗೆ ತೊಡಿಸಲಾದ ಹೊರಗಿನವ (Outsider) ಎಂಬ ಹಣೆಪಟ್ಟಿಯೇ ಕಾರಣವಾಗಿತ್ತು. ಹಾಗಂತ, ಒಳಗಿನವರು ಮತ್ತು ಹೊರಗಿನವರು ಎಂಬ ಈ ವಿಭಜನೆಯು ನಾಗಾಲ್ಯಾಂಡಿನ ವಿಶೇಷತೆಯೇನೂ ಅಲ್ಲ. ಬಿಜೆಪಿ ಮತ್ತು ಸಂಘಪರಿವಾರ ಈ ದೇಶದಾದ್ಯಂತ ಇವತ್ತು ಇದೇ ಭಾಷೆಯಲ್ಲಿ ಮಾತಾಡುತ್ತಿದೆ. ಮುಸ್ಲಿಮರನ್ನು ಹೊರಗಿನವರೆಂದು ಕರೆಯುತ್ತಾ ಅವರ ಪ್ರತಿ ಅಪರಾಧವನ್ನೂ ಹಿಂದೂ ವಿರೋಧಿಯಂತೆ ಚಿತ್ರಿಸುತ್ತಿದೆ. ಹಿಂದೂ ಯುವತಿಯ ಮೇಲೆ ಹಿಂದೂ ಯುವಕ ಅತ್ಯಾಚಾರ ಮಾಡಿದರೆ ಅದು ಬರೇ ಅತ್ಯಾಚಾರವಾಗಿಯೂ ಮುಸ್ಲಿಮನೋರ್ವ ಅತ್ಯಾಚಾರವೆಸಗಿದರೆ ಅದು ಹಿಂದೂ ಧರ್ಮ, ಸಂಸ್ಕøತಿ, ಗೌರವ, ಸ್ವಾಭಿಮಾನಗಳ ಮೇಲಿನ ಹಲ್ಲೆಯಾಗಿಯೂ ವ್ಯಾಖ್ಯಾನಿಸಲಾಗುತ್ತದೆ. ತೀರ್ಥಹಳ್ಳಿಯ ನಂದಿತಾ, ವಿೂರತ್‍ನ ಪ್ರೇಮ ಪ್ರಕರಣಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ಅಪರಾಧಿಯ ಧರ್ಮವನ್ನು ಪರಿಗಣಿಸಿ ಅಪರಾಧದ ತೀವ್ರತೆಯನ್ನು ಲೆಕ್ಕ ಹಾಕುವ ಈ ರೋಗ ಇವತ್ತು  ಧರ್ಮಗಳ ಹಂಗಿಲ್ಲದೇ ದೇಶದಾದ್ಯಂತ ವ್ಯಾಪಿಸಿದೆ. 1979ರಲ್ಲಿ ಅಸ್ಸಾಮ್‍ನಲ್ಲಿ ಅಸ್ಸಾಮ್ ಗಣ ಪರಿಷತ್ ಎಂಬ ವಿದ್ಯಾರ್ಥಿ ಸಂಘಟನೆಯು ಒಳಗಿನವರು ಮತ್ತು ಹೊರಗಿನವರು (ಅಕ್ರಮ ಬಂಗ್ಲಾದೇಶಿ ವಲಸಿಗರು) ಎಂಬ ವಿಭಜನಾ ಆಂದೋಲನವನ್ನು ಪ್ರಾರಂಭಿಸಿತು. 1983ರಲ್ಲಿ ಅಸ್ಸಾಮ್‍ನ ನೆಲ್ಲಿಯಲ್ಲಿ ನಡೆದ ಮುಸ್ಲಿಮರ ಸಾಮೂಹಿಕ ಹತ್ಯಾಕಾಂಡದಲ್ಲಿ ಈ ವಿಭಜನಾ ಚಳವಳಿಗೆ ದೊಡ್ಡ ಪಾತ್ರವಿತ್ತು. ನಿಜವಾಗಿ, ಅಸ್ಸಾಮ್ ಮತ್ತು ನಾಗಾಲ್ಯಾಂಡ್‍ಗಳು ಪರಸ್ಪರ ಗಡಿಗಳನ್ನು ಹಂಚಿಕೊಳ್ಳುತ್ತಿರುವ ಅಕ್ಕ-ಪಕ್ಕದ ರಾಜ್ಯಗಳು. ಅಲ್ಲದೇ ನಾಗಾಲ್ಯಾಂಡ್ ಎಂಬುದು ಬುಡಕಟ್ಟುಗಳೇ ತುಂಬಿರುವ ರಾಜ್ಯ. ಶರೀಫುದ್ದೀನ್‍ನ ಮೇಲೆ ಹಲ್ಲೆ ನಡೆಸಲಾದ ದಿಂಪುರ್ ಆ ರಾಜ್ಯದ ಏಕೈಕ ವ್ಯಾಪಾರಿ ನಗರ. ಈ ನಗರದಲ್ಲಿ ಪ್ರಮುಖ ವ್ಯಾಪಾರ-ವಹಿವಾಟುಗಳನ್ನೆಲ್ಲ ನಡೆಸುತ್ತಿದ್ದುದು ಹಿಂದಿ ಮಾತಾಡುವ ಉತ್ತರ ಭಾರತೀಯರಾಗಿದ್ದರು. ಈ ಕ್ಷೇತ್ರದಲ್ಲಿ ಸ್ಥಳೀಯ ಬುಡಕಟ್ಟುಗಳ ಪಾತ್ರ ಏನೇನೂ ಇರಲಿಲ್ಲ. ಇಂಥ ಸ್ಥಿತಿಯಲ್ಲಿ ಅಸ್ಸಾಮ್‍ನ ಬರಾಕ್ ಪ್ರದೇಶದ ಮುಸ್ಲಿಮರು ಸಣ್ಣ ವ್ಯಾಪಾರಿಗಳಾಗಿ ದಿಂಪುರ್‍ಗೆ ಆಗಮಿಸಿದರು. 1990ರ ಬಳಿಕ ಸರಕಾರವು ಈ ನಗರದಲ್ಲಿ ಸಾಕಷ್ಟು ಕಮರ್ಷಿಯಲ್ ಕಾಂಪ್ಲೆಕ್ಸ್ ಸ್ಥಾಪಿಸಿತು ಮತ್ತು ಮುಸ್ಲಿಮರು ಅವುಗಳಲ್ಲಿ ವ್ಯಾಪಾರಿ ಮಳಿಗೆಗಳನ್ನು ತೆರೆದರು. ದಿಂಪುರ್‍ನಲ್ಲಿ ಬಹುಸಂಖ್ಯಾತರಾಗಿರುವುದು ಸುಮಿ (ಸೆಮಾ) ಬುಡಕಟ್ಟುಗಳು. ವಿವಿಧ ಉಗ್ರವಾದಿ ಸಂಘಟನೆಗಳಲ್ಲಿ ಹೆಚ್ಚಿರುವವರೂ ಇವರೇ. ಈ ಉಗ್ರವಾದಿ ಸಂಘಟನೆಗಳು ದಿಂಪುರ್‍ನ ಮೇಲೆ ಹಿಡಿತ ಸಾಧಿಸಲು ಆರಂಭದಿಂದಲೂ ಯತ್ನಿಸುತ್ತಿವೆ. ಅದರ ಭಾಗವಾಗಿಯೇ ಮುಸ್ಲಿಮರನ್ನು ಹೊರಗಿನವರೆಂದು ಅವು ವಿಭಜಿಸುತ್ತಾ, ಸುಮಿಗಳ ಹಿತಾಸಕ್ತಿಯನ್ನು ಕಾಪಾಡುವ ಪೋಸು ಕೊಡುತ್ತಿವೆ. ಹೊರಗಿನವರು ಸುಮಿಗಳ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಅವು ನಿರಂತರ ಪ್ರಚಾರ ನಡೆಸುತ್ತಿವೆ. ಈ ಪ್ರಚಾರದ ಫಲಿತಾಂಶವೇ ಶರೀಫುದ್ದೀನ್ ಘಟನೆ. ವಿಶೇಷ ಏನೆಂದರೆ, ಆತನ ಪತ್ನಿ ಓರ್ವ ಸುಮಿ ಬುಡಕಟ್ಟಿನವಳು. ಆತನ ಮೇಲೆ ಅತ್ಯಾಚಾರದ ಕೇಸು ದಾಖಲಿಸಿದ ಯುವತಿಯ ಮನೆಯಂತೂ ಈತನ ಬಾಡಿಗೆ ಮನೆಯ ಪಕ್ಕವೇ ಇದೆ. ಅವರ ನಡುವೆ ಕುಟುಂಬ ಸಂಬಂಧದಂಥ ಸಲುಗೆಯೂ ಇದೆ.
    1980ರ ದಶಕದಲ್ಲಿ ಅಸ್ಸಾಮ್‍ನ ಮೇಲಿಗಾಂವ್ ಜಿಲ್ಲೆಯಿಂದ ಬಂಗಾಳಿ ಭಾಷೆ ಮಾತಾಡುವ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ನಾಗಾಲ್ಯಾಂಡ್‍ಗೆ ಆಗಮಿಸಿದರು. ಇದಕ್ಕೆ ಕಾರಣವೂ ಇತ್ತು. ನಾಗಾಲ್ಯಾಂಡ್‍ನಲ್ಲಿ ಬಹುಸಂಖ್ಯಾತರಾಗಿರುವ ಸುಮಿ ಬುಡಕಟ್ಟುಗಳಿಗೆ ಕೃಷಿ, ವ್ಯವಸಾಯ ಗೊತ್ತಿರಲಿಲ್ಲ. ಅವು ಗುಡ್ಡಗಾಡು ಜನಾಂಗವಾಗಿತ್ತು. ಅಸ್ಸಾಮ್-ನಾಗಾ ಗಡಿ ಪ್ರದೇಶದಲ್ಲಿದ್ದ ಸಾವಿರಾರು ಎಕರೆ ಅರಣ್ಯ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುವುದಕ್ಕೆ ಅವರಿಗೆ ಬಂಗಾಳಿ ಮುಸ್ಲಿಮರ ಅಗತ್ಯವಿತ್ತು. ಆ ಉದ್ದೇಶದಿಂದ ಸುಮಿಗಳು ಮುಸ್ಲಿಮರನ್ನು ಕರೆಸಿಕೊಂಡರು. ರೈತಾಪಿ ವರ್ಗವಾಗಿದ್ದ ಮುಸ್ಲಿಮರು ಆ ಅರಣ್ಯ ಪ್ರದೇಶವನ್ನು ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸಿದರು ಮತ್ತು ಅಲ್ಲೇ ನೆಲೆಸಿದರು. ಈ ಕಾರಣದಿಂದಾಗಿ ಮುಸ್ಲಿಮರು ಮತ್ತು ಸುಮಿ ಬುಡಕಟ್ಟುಗಳ ನಡುವೆ ಗಾಢ ವಿಶ್ವಾಸ ಬೆಳೆಯಿತು. ಕೌಟುಂಬಿಕ ಮತ್ತು ವೈವಾಹಿಕ ಸಂಬಂಧಗಳು ಏರ್ಪಟ್ಟವು. ಈ ಸಂಬಂಧ ಎಷ್ಟು ಪರಿಚಿತ ಆಯಿತೆಂದರೆ, ಇವತ್ತಿನ ಹೊಸ ಪೀಳಿಗೆಯು ಸುಮಿಯಾನ್ (ಸುಮಿ+ಮಿಯಾನ್) ಆಗಿ ಗುರುತಿಸಿಕೊಳ್ಳುತ್ತಿದೆ. ಶರೀಫುದ್ದೀನ್ ಸುಮಿ ಬುಡಕಟ್ಟಿನ ಮಹಿಳೆಯನ್ನು ವಿವಾಹವಾಗಿರುವುದಕ್ಕೆ ಇಂಥದ್ದೊಂದು ಹಿನ್ನೆಲೆಯೂ ಇದೆ.. ಇವೆಲ್ಲವನ್ನೂ ಜೊತೆಗಿಟ್ಟು ನೋಡಿದರೆ ನಾಗಾಲ್ಯಾಂಡ್ ಪ್ರಕರಣವು ಅತ್ಯಾಚಾರಕ್ಕೆ ನೀಡಲಾದ ಶಿಕ್ಷೆಯಾಗಿ ಕಾಣಿಸುತ್ತಿಲ್ಲ. ಅದು ಸ್ಪಷ್ಟವಾಗಿ ಜನಾಂಗ ದ್ವೇಷಿ ಪ್ರಚಾರ ಯುದ್ಧದ ಫಲಿತಾಂಶ. ಇಂಥ ಪ್ರಚಾರ ಕೇವಲ ನಾಗಾಲ್ಯಾಂಡಿನಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಅಲ್ಲಿ ಬಂಗಾಳಿ ಭಾಷೆ ಮಾತಾಡುವ ಎಲ್ಲ ಮುಸ್ಲಿಮರನ್ನೂ ಬಂಗ್ಲಾದೇಶಿಗಳು ಎಂದು ದ್ವೇಷಿಸುವಂತೆಯೇ ದೇಶದ ಇತರ ಭಾಗಗಳಲ್ಲಿ ಮುಸ್ಲಿಮರನ್ನು ಅಕ್ರಮಣಕೋರರು ಎಂಬ ರೀತಿಯಲ್ಲಿ ವ್ಯಾಖ್ಯಾನಿಸಿ ದ್ವೇಷಿಸಲಾಗುತ್ತಿದೆ. ಸಾಧ್ವಿ ಪ್ರಾಚಿ, ಬಾಲಿಕಾ ಸರಸ್ವತಿ, ಅವೈದ್ಯನಾಥ್, ಯೋಗಿ ಆದಿತ್ಯನಾಥ್, ತೊಗಾಡಿಯಾ.. ಸಹಿತ ಒಂದು ನಿರ್ದಿಷ್ಟ ಗುಂಪು ಇಂಥದ್ದೊಂದು ಅಭಿಪ್ರಾಯದೊಂದಿಗೆ ದೇಶದಾದ್ಯಂತ ಸುತ್ತುತ್ತಿದೆ. ಮುಸ್ಲಿಮರನ್ನು ದ್ವೇಷಿಸುವಂತೆ, ಅವರೊಂದಿಗೆ ಮಾತಾಡದಂತೆ, ವ್ಯವಹಾರ ಮಾಡದಂತೆ, ಸಂಪರ್ಕ ಇಟ್ಟುಕೊಳ್ಳದಂತೆ ಈ ಗುಂಪು ಕರೆ ಕೊಡುತ್ತಾ ಬರುತ್ತಿದೆ. ಲವ್ ಜಿಹಾದ್, ಗೋಹತ್ಯೆ, ಮತಾಂತರಗಳ  ನೆಪದಲ್ಲಿ ಮುಸ್ಲಿಮರನ್ನೇ ಗುರಿ ಮಾಡುತ್ತಿದೆ. ನಿಜವಾಗಿ, ಇದೊಂದು ಯಶಸ್ವಿ ಪ್ರಚಾರ ತಂತ್ರ. ಗೋಬೆಲ್ಸ್ ಮಾಡಿದ್ದು ಕೂಡ ಇದನ್ನೇ. ಹೀಗೆ ನಿರಂತರವಾಗಿ ನಡೆಯುವ ಅಪಪ್ರಚಾರವು ಸಮಾಜವನ್ನು ಸಕಾರಾತ್ಮಕವಾಗಿ ಬಾಧಿಸುತ್ತದೆ. ಸಮಾಜವು ಅದರ ಪ್ರಭಾವಕ್ಕೆ ಒಳಗಾಗುತ್ತದೆ. ಅಂತಿಮವಾಗಿ ಅದು ಸಮಾಜದಿಂದ ಪಾಪಪ್ರಜ್ಞೆಯಿಲ್ಲದ ಕ್ರೌಯವನ್ನು ಮಾಡಿಸುತ್ತದೆ ಮತ್ತು ಅದನ್ನು ಸಮರ್ಥಿಸಿ ಕೊಳ್ಳುವಂತೆ ಪ್ರಚೋದಿಸುತ್ತದೆ. ಹಿಟ್ಲರ್‍ನ ಜರ್ಮನಿಯಲ್ಲಿ ನಡೆದದ್ದೂ ಇದುವೇ. ನಾಗಾಲ್ಯಾಂಡಿನಲ್ಲಿ ನಡೆದದ್ದೂ ಇದುವೇ. ಭವಿಷ್ಯದ ಭಾರತದಲ್ಲಿ ನಡೆಯಬಹುದಾದದ್ದೂ ಇದುವೇ.
   ಇಂಡಿಯಾಸ್ ಡಾಟರ್‍ಗೆ ನಿಷೇಧ ಬೀಳುವ ದೇಶದಲ್ಲಿ ಇಂಡಿಯಾವನ್ನೇ ನಾಗಾಲ್ಯಾಂಡ್ ಮಾಡಬಯಸುವವರಿಗೆ ಹಾರ-ತುರಾಯಿಯ ಸ್ವಾಗತವಿದೆ ಎನ್ನುವುದಕ್ಕೆ ಏನನ್ನಬೇಕು?

No comments:

Post a Comment