Tuesday, March 3, 2015

ಸುಡುವ ಪ್ರತಿಭಟನೆ ಮತ್ತು ಭಗವದ್ಗೀತೆ

A book is a book
It is paper, ink and print
If you stab it
It won't bleed
If you beat it
It won't bruise
If you burn it
It won't acream.....
  
    ಎಂದು ಆರಂಭವಾಗುವ ಈ ಕವನವನ್ನು ಅಮೇರಿಕದ ಪ್ರಸಿದ್ಧ ಕವಿ ಸ್ಟೀವನ್ ವಿನ್ಸೆಂಟ್ ಬೆನೆಟ್‍ರು 1942ರಲ್ಲಿ ಹಾಡಿದ್ದರು. ರೇಡಿಯೋದಲ್ಲಿ ಪ್ರಸಾರವಾದ ಅವರ ಈ ಹಾಡನ್ನು ಆಲಿಸಿ ಕೇಳುಗರು ಭಾವುಕರಾಗಿದ್ದರು. ‘They burnt the books’ (ಅವರು ಪುಸ್ತಕಗಳನ್ನು ಉರಿಸಿದರು) ಎಂಬ ಶೀರ್ಷಿಕೆಯ ಈ ಹಾಡು ಆ ಕಾಲದಲ್ಲಿ ಬಹು ಪ್ರಸಿದ್ಧಿಯನ್ನು ಪಡೆದಿತ್ತು. ಜನರು ಈ ಹಾಡಿನ ಪ್ರತಿ ಪದವನ್ನೂ ನಾಝಿ ಜರ್ಮನಿಯೊಂದಿಗೆ ತಾಳೆ ಹಾಕಿ ಅನುಭವಿಸಿದರು. ಹಿಟ್ಲರ್, ಗೋಬೆಲ್ಸ್ ರನ್ನು ನೆನೆಸಿಕೊಂಡು ಆ ಪದಗಳಿಗೆ ಜೀವ ತುಂಬಿದರು. ಪುಲಿಟ್ಝರ್ ಪ್ರಶಸ್ತಿ ವಿಜೇತರಾಗಿದ್ದ ಸ್ಟೀವನ್ ವಿನ್ಸೆಂಟ್ ಬೆನೆಟ್‍ರಿಗೆ ಸಾಕಷ್ಟು ಪ್ರಸಿದ್ಧಿಯನ್ನು ತಂದು ಕೊಟ್ಟ ಈ ಕವನದ ರಚನೆಗೆ ಒಂದು ಭಾವುಕ ಹಿನ್ನೆಲೆಯೂ ಇತ್ತು.
    ಜರ್ಮನಿಯ ಮೇಲೆ ಹಿಟ್ಲರ್ ಹಿಡಿತ ಸಾಧಿಸಿದ್ದ ಕಾಲ. ಈ ಹಿಡಿತ ಕೈ ತಪ್ಪದೇ ಇರಬೇಕಾದರೆ ಏನೇನೆಲ್ಲ ಮಾಡಬೇಕು ಎಂಬ ಬಗ್ಗೆ ಗೋಬೆಲ್ಸ್ ಕೆಲವು ಯೋಜನೆಗಳನ್ನು ರೂಪಿಸಿದ್ದ. ಸರ್ವಾಧಿಕಾರವನ್ನು ಖಂಡಿಸುವ ಮತ್ತು ಪ್ರಜಾತಂತ್ರವನ್ನು ಬೆಂಬಲಿಸುವ ಸರ್ವ ಸಾಹಿತ್ಯಗಳನ್ನೂ ಸುಡಬೇಕೆಂಬುದು ಆತನ ಯೋಜನೆಯಾಗಿತ್ತು. ಹಿಟ್ಲರ್ ವಿರೋಧಿ ಚಿಂತನೆಗಳು ಸಮಾಜದಲ್ಲಿ ಬೆಳೆಯದಂತೆ ಮಾಡುವುದಕ್ಕಾಗಿ ಪತ್ರಿಕೆ, ಸಂಗೀತ, ಸಿನಿಮಾ, ರೇಡಿಯೋ ಮುಂತಾದ ಎಲ್ಲವನ್ನೂ ಸೆನ್ಸಾರ್‍ಗೆ ಒಳಪಡಿಸಲು ಆತ ತೀರ್ಮಾನಿಸಿದ. ಸರ್ವಾಧಿಕಾರವನ್ನು ಇಷ್ಟಪಡುವ ಸಾಮಾಜಿಕ ವಾತಾವರಣವನ್ನು ನಿರ್ಮಿಸುವುದು ಆತನ ಉದ್ದೇಶವಾಗಿತ್ತು. ಅದಕ್ಕಾಗಿ ಯಾವ ಉಗ್ರ ನಿಲುವನ್ನು ತೆಗೆದುಕೊಳ್ಳುವುದಕ್ಕೂ ಹಿಂಜರಿಯಬಾರದೆಂದು ಆತ ಹಿಟ್ಲರ್‍ನಿಗೆ ಮನವರಿಕೆ ಮಾಡಿಸಿದ್ದ. ಅದರಂತೆ, ಜರ್ಮನಿಯ ಮಂದಿ ಓದಬಾರದ ಪುಸ್ತಕಗಳ ಪಟ್ಟಿ ಮಾಡುವಂತೆ ನಾಝಿ ವಿದ್ಯಾರ್ಥಿ ಸಂಘಟನೆಗಳು, ನಾಝಿ ಪರ ಪ್ರೊಫೆಸರ್‍ಗಳು ಮತ್ತು ಲೈಬ್ರರಿಯನ್‍ಗಳಿಗೆ ಗೋಬೆಲ್ಸ್ ಆದೇಶಿಸಿದ. ಹೀಗೆ ಪಟ್ಟಿ ಮಾಡಿದ ಬಳಿಕ 1983 ಮೇ 10ರಂದು ಜರ್ಮನಿಯಾದ್ಯಂತದ ಲೈಬ್ರರಿ ಮತ್ತು ಪುಸ್ತಕ ಮಾರಾಟ ಮಳಿಗೆಗಳ ಮೇಲೆ ನಾಝಿಗಳು ದಾಳಿ ಮಾಡಿದರು. ಹಿಟ್ಲರ್ ಪರ ಘೋಷಣೆಗಳನ್ನು ಕೂಗುತ್ತಾ ರಾತ್ರಿ ಟಾರ್ಚ್ ಲೈಟ್‍ನ ಸಹಾಯದಿಂದ ರಾಲಿ ನಡೆಸಿದರು. ದೊಡ್ಡದೊಂದು ಅಗ್ನಿಕುಂಡವನ್ನು ತಯಾರಿಸಿ ಸುಮಾರು 25 ಸಾವಿರಕ್ಕಿಂತಲೂ ಅಧಿಕ ಕೃತಿಗಳನ್ನು ಸುಟ್ಟು ಹಾಕಿದರು. ಜ್ಯಾಕ್ ಲಂಡನ್, ಅರ್ನೆಸ್ಟ್ ಹೆಮಿಂಗ್ವೆ, ಸಿಂಕ್ಲೇರ್ ಲೂವಿಸ್, ಹೆಲೆನ್ ಕೆಲ್ಲರ್, ಐನ್‍ಸ್ಟೀನ್ ಸಹಿತ ಹತ್ತಾರು ಪ್ರಸಿದ್ಧ ಸಾಹಿತಿಗಳ ಕೃತಿಗಳೂ ಅವುಗಳಲ್ಲಿದ್ದುವು. ಈ ಸುಡುವಿಕೆಯ ವಿರುದ್ಧ ಜಾಗತಿಕವಾಗಿಯೇ ಪ್ರತಿಭಟನೆಗಳು ಕಾಣಿಸಿಕೊಂಡವು. ಜಪಾನ್, ಚೀನಾ, ಅಮೇರಿಕ ಮುಂತಾದ ರಾಷ್ಟ್ರಗಳು ಹಿಟ್ಲರ್ ನೀತಿಯನ್ನು ತೀವ್ರವಾಗಿ ಖಂಡಿಸಿದುವು. ಸಾಹಿತಿಗಳು ಬೀದಿಗಿಳಿದರು. ಆದರೆ ಹಿಟ್ಲರ್ ಬೆದರಲಿಲ್ಲ. ಆತ ಶಾಲಾ ಪಠ್ಯದಲ್ಲೂ ಬದಲಾವಣೆಗಳನ್ನು ತಂದ. ನಾಝಿಸಂ ಮತ್ತು ಆತನನ್ನು ಬೆಂಬಲಿಸುವ ಪುಸ್ತಕಗಳನ್ನು ಶಾಲಾ ಪಠ್ಯವಾಗಿ ಸೇರಿಸಿದ. ಅವಸರ ಅವಸರವಾಗಿ ರಚಿತವಾದ ಆ ಪುಸ್ತಕಗಳು ಎಷ್ಟು ಕಳಪೆ ಗುಣಮಟ್ಟದವು ಆಗಿದ್ದುವೆಂದರೆ ನಾಝಿಸಂ ಅನ್ನು ಹೊಗಳುವುದಕ್ಕಿಂತ ಹೊರತಾದ ಯಾವ ಉದ್ದೇಶವೂ ಅವುಗಳಿಗಿರಲಿಲ್ಲ. ಮಕ್ಕಳನ್ನು ನಾಝಿಸಂನ ಬೆಂಬಲಿಗರಾಗಿ ಬೆಳೆಸುವಂತೆ ಶಾಲಾ ಸಭೆಗಳಲ್ಲಿ ಪೋಷಕರೊಂದಿಗೆ ವಿನಂತಿಸಲಾಗುತ್ತಿತ್ತು. ಹಿಟ್ಲರ್ ಹುಟ್ಟಿದ ದಿನವನ್ನು ಮತ್ತು ಅಧಿಕಾರಕ್ಕೇರಿದ ದಿನವನ್ನು ಶಾಲಾ ವಾರ್ಷಿಕ ದಿನಗಳನ್ನಾಗಿ ಆಚರಿಸುವ ವಾತಾವರಣವನ್ನು ಆತ ಹುಟ್ಟು ಹಾಕಿದ್ದ. ಒಂದು ರೀತಿಯಲ್ಲಿ, ತನ್ನ ವಿಚಾರವನ್ನು ಒಪ್ಪದ ಎಲ್ಲವನ್ನೂ ಮತ್ತು ಎಲ್ಲರನ್ನೂ ತಿರಸ್ಕರಿಸುವ ಉಗ್ರ ಮನೋಭಾವವೊಂದನ್ನು ನಾಝಿಸಂ ಪ್ರಚಾರ ಮಾಡುತ್ತಿತ್ತು. ಅದರ ಭಾಗವೇ ಸಾಹಿತ್ಯ ಕೃತಿಗಳ ಸುಡುವಿಕೆ. 1942ರಲ್ಲಿ ಸ್ಟೀವನ್ ವಿನ್ಸೆಂಟ್ ಬೆನೆಟ್‍ರು ‘ದೆ ಬರ್ನ್‍ಂಟ್ ದ ಬುಕ್ಸ್’ ಎಂಬ ಹಾಡನ್ನು ಬರೆಯುವುದಕ್ಕೆ ಕಾರಣವಾದ ಅಂಶವೂ ಇದುವೇ. ‘ಸಾಹಿತ್ಯ ಕೃತಿಗಳಿಗೆ ಬೆಂಕಿ ಕೊಡುವುದರಿಂದ ನೀವು ಏನನ್ನೂ ಸಾಧಿಸಲಾರಿರಿ’ ಎಂಬ ಸಂದೇಶವನ್ನು ಸಾರಿದ ವಿನ್ಸೆಂಟ್‍ರನ್ನು ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ-
    ಕಳೆದೆರಡು ವಾರಗಳಿಂದ ಭಗವದ್ಗೀತೆ ಸುದ್ದಿಯಲ್ಲಿದೆ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಮಾಡಬೇಕು ಎಂಬ ಸುಶ್ಮಾ ಸ್ವರಾಜ್‍ರ ಬಯಕೆಗೆ ಪ್ರತಿರೋಧವೆಂಬಂತೆ ಅದನ್ನು ಸುಡಬೇಕೆಂಬ ಆಗ್ರಹವೊಂದು ಸಾಹಿತ್ಯ ವಲಯದಿಂದ ಕೇಳಿ ಬಂದಿದೆ. ಕೆ.ಎಸ್. ಭಗವಾನ್, ಜಿ.ಕೆ. ಗೋವಿಂದ ರಾವ್, ಅಗ್ನಿ ಶ್ರೀಧರ್, ಬಂಜಗೆರೆ ಜಯಪ್ರಕಾಶ್ ಮುಂತಾದ ಚಿಂತಕರು ಇಂಥದ್ದೊಂದು ವಾದವನ್ನು ಮುಂದಿಡುವ ಮೂಲಕ ಹೊಸ ಬಗೆಯ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ. 1927 ಡಿಸೆಂಬರ್ 27ರಂದು ಬಾಬಾ ಸಾಹೇಬ್ ಅಂಬೇಡ್ಕರ್‍ರು ಮನುಸ್ಮೃತಿಯನ್ನು ಸಾರ್ವಜನಿಕವಾಗಿಯೇ ಸುಟ್ಟು ಹಾಕಿರುವುದನ್ನು ಕೆಲವರು ಈ ಸುಡುವ ಪ್ರತಿಭಟನೆಗೆ ಸಮರ್ಥನೆಯಾಗಿ ನೀಡುತ್ತಿದ್ದಾರೆ. ಶ್ರೇಣೀಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಭಗವದ್ಗೀತೆಯನ್ನು ಸುಡುವುದು ಅದಕ್ಕೆ ತೋರಲಾಗುವ ಸರಿಯಾದ ಪ್ರತಿರೋಧ ಎಂಬ ನಿಲುವು ಸಾಹಿತಿಗಳದ್ದು. ಅಂದಹಾಗೆ, ಭಗವದ್ಗೀತೆಯ ಕುರಿತಂತೆ ಪರ-ವಿರುದ್ಧ ಅಭಿಪ್ರಾಯಗಳೇನೇ ಇರಲಿ, ಸುಡುವ ಹಂತಕ್ಕೆ ಒಂದು ಗ್ರಂಥವನ್ನು ನಾವು ಕೊಂಡೊಯ್ಯಬೇಕೇ? ವಿರೋಧವನ್ನು ವ್ಯಕ್ತಪಡಿಸುವುದಕ್ಕೆ ನೂರಾರು ದಾರಿಗಳಿರುವಾಗ ಬೆಂಕಿಯನ್ನು ಪ್ರತಿಭಟನೆಯ ಅಸ್ತ್ರವಾಗಿ ಆಯ್ಕೆ ಮಾಡಿಕೊಳ್ಳುವುದು ಎಷ್ಟು ಸಮಂಜಸ? ಸುಡುವ ಪ್ರಕ್ರಿಯೆಯಲ್ಲಿ ಒಂದು ಉಗ್ರವಾದವಿದೆ. ಸುಟ್ಟ ಬಳಿಕ ಉಳಿಯುವುದು ಬೂದಿ ಮಾತ್ರ. ಬೂದಿಯಿಂದ ಮತ್ತೆ ಆ ಗ್ರಂಥವನ್ನು ರಚಿಸಲು ಸಾಧ್ಯವಿಲ್ಲ. ಆದ್ದರಿಂದಲೇ ನಾಶ ಮಾಡುವ ಪ್ರತಿಭಟನೆಯು ಸಮಾಜ ವಿರೋಧಿಯಂತೆ ಅನಿಸುತ್ತದೆ. ಭಗವದ್ಗೀತೆಯಲ್ಲಿರುವ ನಿರ್ದಿಷ್ಟ ಶ್ಲೋಕಗಳ ಕುರಿತಂತೆ ಪೇಜಾವರ ಸ್ವಾವಿೂಜಿಗಳಂತಹ ಧರ್ಮಗುರುಗಳು ಯಾವ ವ್ಯಾಖ್ಯಾನವನ್ನು ಕೊಡುತ್ತಾರೋ ಅದನ್ನು ಪ್ರಗತಿ ಪರ ಸಾಹಿತಿಗಳು ಒಪ್ಪುವುದಿಲ್ಲ. ಪ್ರಗತಿಪರರ ಆಲೋಚನೆಗಳನ್ನು ಭಗವದ್ಗೀತೆಯ ಪರ ಇರುವವರೂ ಒಪ್ಪುವುದಿಲ್ಲ. ಇಂಥ ಸ್ಥಿತಿಯಲ್ಲಿ, ಬೆಂಕಿ ಕೊಡುವುದರಿಂದ ವೈಚಾರಿಕ ದಾರಿಯೇ ಮುಚ್ಚಿದಂತಾಗುತ್ತದೆ. ಚಾರ್ಲಿ ಹೆಬ್ಡೋದ ಮೇಲಿನ ದಾಳಿಯನ್ನು ಜಗತ್ತು ಖಂಡಿಸಿರುವುದರಲ್ಲಿ ಈ ಕಾರಣವೂ ಇದೆ. ಚಾರ್ಲಿ ಹೆಬ್ಡೋದ ನಿಲುವನ್ನು ಪ್ರಶ್ನಿಸುವುದಕ್ಕೆ ಬಂದೂಕಿಗಿಂತ ಹೊರತಾದ ಹತ್ತಾರು ದಾರಿಗಳಿದ್ದುವು. ಆ ದಾರಿಗಳ ಮೂಲಕ ಸಮಾಜವನ್ನು ಮುಟ್ಟುವುದಕ್ಕೆ ಹೆಬ್ಡೋ ವಿರೋಧಿಗಳು ಶ್ರಮಿಸಬಹುದಾಗಿತ್ತು. ಸಮಾಜದಲ್ಲಿ ಸಂವಾದದ ವಾತಾವರಣವನ್ನು ನಿರ್ಮಿಸಬಹುದಾಗಿತ್ತು. ಆದರೆ ಬಂದೂಕು ಆ ಅವಕಾಶವನ್ನೇ ಕಸಿದುಕೊಂಡಿತು. ಆ ಬಳಿಕ ನಡೆದ ಚರ್ಚೆಗಳಲ್ಲಿ ಹೆಚ್ಚಿನವು ಮುಸ್ಲಿಮ್ ಉಗ್ರವಾದದ ಸುತ್ತ ಆಗಿತ್ತೇ ಹೊರತು ಚಾರ್ಲಿ ಹೆಬ್ಡೋದ ನಿಂದನಾತ್ಮಕ ಧೋರಣೆಯ ಸುತ್ತ ಆಗಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಲು ತಿಳಿಯದ ಸಮುದಾಯವಾಗಿ ಮುಸ್ಲಿಮ್ ಜಗತ್ತನ್ನು ಹೆಚ್ಚಿನ ಮಂದಿ ಚಿತ್ರೀಕರಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಚಾರ್ಲಿ ಹೆಬ್ಡೋದ ವ್ಯಂಗ್ಯ ಚಿತ್ರಕ್ಕೂ ನಡುವೆ ಇರುವ ಬಹುದೊಡ್ಡ ವ್ಯತ್ಯಾಸವನ್ನು ಗಮನಿಸದಂತೆ ಮಾಡುವುದಕ್ಕೆ ಬಂದೂಕು ಯಶಸ್ವಿಯಾಯಿತು. ಇದೊಂದೇ ಅಲ್ಲ. ಅಮೇರಿಕದ ಫ್ಲಾರಿಡಾದಲ್ಲಿರುವ ಕ್ರಿಶ್ಚಿಯನ್ ಡವ್ ವರ್ಲ್ಡ್ ಔಟ್‍ರೀಚ್ ಸೆಂಟರ್‍ನ ಪಾದ್ರಿ ಟೆರ್ರಿ ಜೋನ್ಸ್ ರು ಪವಿತ್ರ ಕುರ್‍ಆನಿನ 200 ಪ್ರತಿಗಳನ್ನು ಸುಡುವುದಾಗಿ 2010 ಜುಲೈಯಲ್ಲಿ ಘೋಷಿಸಿದರು. ವರ್ಲ್ಡ್  ಟ್ರೇಡ್ ಸೆಂಟರ್ ಉರುಳಿದ ದಿನವಾದ ಸೆ. 11ರಂದು ಈ ಸುಡುವ ಕಾರ್ಯಕ್ರಮ ಇಟ್ಟುಕೊಳ್ಳುವುದಾಗಿ ಅವರು ಹೇಳಿದರು. ಇದರ ವಿರುದ್ಧ ಜಾಗತಿಕವಾಗಿಯೇ ವಿರೋಧ ವ್ಯಕ್ತವಾಯಿತು. 2011 ಮಾರ್ಚ್ 20ರಂದು ಅವರು ತನ್ನ ಚರ್ಚ್‍ನಲ್ಲಿ ‘ಕುರ್‍ಆನ್‍ನ ವಿಚಾರಣೆ' (Trial of Quran) ಎಂಬ ಕಾರ್ಯಕ್ರಮವನ್ನು ಇಟ್ಟುಕೊಂಡರು. ‘ಮಾನವೀಯತೆಯ ವಿರುದ್ಧ ಕ್ರೌರ್ಯವೆಸಗಿದೆ’ (Crime against Humanity) ಎಂಬ ಆರೋಪವನ್ನು ಹೊರಿಸಿ ಅವರು ಕುರ್‍ಆನನ್ನು ಬಹಿರಂಗವಾಗಿಯೇ ಸುಟ್ಟರು. 2010ರಲ್ಲಿ ಇವರು ‘ಇಸ್ಲಾಮ್ ಈಸ್ ಆಫ್ ದ ಡೆವಿಲ್’ (Islam is of the Devil) ಎಂಬ ಕೃತಿಯನ್ನು ಪ್ರಕಟಿಸಿದರಲ್ಲದೇ ಕುರ್‍ಆನನ್ನು ಎತ್ತಿ ಹಿಡಿದು - ‘ಇದು ಧರ್ಮಗ್ರಂಥವಲ್ಲ, ಪಿಶಾಚಿಯ ಗ್ರಂಥ’ ಎಂದು ಹೇಳಿದ ವೀಡಿಯೋವನ್ನು ಯೂಟ್ಯೂಬ್‍ಗೆ ಹಾಕಿದರು. ಆದರೆ ಇದಕ್ಕೆ ಪ್ರತಿಯಾಗಿ ಅಮೇರಿಕನ್ ಮುಸ್ಲಿಮರು ಮಾಡಿದ್ದೇನೆಂದರೆ, ಸೆ. 11ನ್ನು 'ಲವ್ ಜೀಸಸ್ ಡೇ' (Love Jesus day) ಆಗಿ ಆಚರಿಸಿದ್ದು. ಜೀಸಸ್‍ರನ್ನು ಪ್ರವಾದಿಯೆಂದು ಪವಿತ್ರ ಕುರ್‍ಆನ್  ಕರೆದಿರುವುದಾಗಿ ಅವರು ಹೇಳಿದರು. ಅಲ್ಲದೇ ಸೆ. 11ನ್ನು ‘ಪವಿತ್ರ ಕುರ್‍ಆನನ್ನು ಓದುವ ದಿನ'ವಾಗಿ ಮುಸ್ಲಿಮ್ ಸಂಘಟನೆಗಳು ಆಚರಿಸಿದ್ದೂ ನಡೆಯಿತು. ಅಮೇರಿಕನ್ನರ ಮೇಲೆ ಈ ಪ್ರತಿ ಪ್ರತಿಭಟನೆ ಸಾಕಷ್ಟು ಪರಿಣಾಮವನ್ನು ಬೀರಿತು. ಟೆರ್ರಿ ಜೋನ್ಸ್ ರ ಚರ್ಚ್‍ಗೆ ನೀಡಲಾಗಿದ್ದ 1 ಲಕ್ಷದ 40 ಸಾವಿರ ಡಾಲರ್ ಸಾಲವನ್ನು ಶೀಘ್ರವೇ ಮರು ಪಾವತಿಸುವಂತೆ ಅಮೇರಿಕದ ಬ್ಯಾಂಕೊಂದು ಆದೇಶಿಸಿತಲ್ಲದೇ ಚರ್ಚ್‍ನ ಆಸ್ತಿ-ಪಾಸ್ತಿಗಳಿಗೆ ನೀಡಲಾಗಿದ್ದ ಇನ್ಶೂರೆನ್ಸನ್ನು ರದ್ದುಪಡಿಸಿತು. ಕೆನಡ, ಕ್ಯೂಬಾ, ಅಮೇರಿಕ, ಫ್ರಾನ್ಸ್, ಜರ್ಮನಿ, ಇಂಡೋನೇಷಿಯಾ, ವ್ಯಾಟಿಕನ್ ಸಹಿತ ಜಗತ್ತಿನ ಎಲ್ಲ ರಾಷ್ಟ್ರಗಳೂ ಟೆರ್ರಿ ಜೋನ್ಸ್ ರ ಸುಡುವ ಪ್ರತಿಭಟನೆಯನ್ನು ಖಂಡಿಸಿದುವು. ನಿಜವಾಗಿ, ಉಗ್ರವಾದಕ್ಕೆ ಎದುರಾದ ಸೋಲು ಇದು. ಹಾಗಂತ, ಸುಡುವ ಪ್ರತಿಭಟನೆ ಭಾರತದಲ್ಲಿ ನಡೆಯುತ್ತಿಲ್ಲ ಎಂದಲ್ಲ. 2014 ಡಿಸೆಂಬರ್ 27ರಂದು ತಮಿಳು ಸಾಹಿತಿ ಪೆರುಮಾಳ್ ಮುರುಗನ್‍ರ ಮಧೋರುಬಗನ್ ಎಂಬ ಕಾದಂಬರಿಯನ್ನು ಸಂಘಪರಿವಾರದ ಮಂದಿ ಸಾರ್ವಜನಿಕವಾಗಿಯೇ ಸುಟ್ಟು ಹಾಕಿದ್ದರು. ಕಾದಂಬರಿಯು ಅನೈತಿಕತೆಯನ್ನು ಪ್ರಚೋದಿಸುತ್ತದೆ ಮತ್ತು ಅದರಲ್ಲಿ ಶಿವನನ್ನು ಅವಮಾನಿಸಲಾಗಿದೆ ಎಂಬ ಆರೋಪವನ್ನು ಅವರು ಹೊರಿಸಿದ್ದರು. ಅಂತಿಮವಾಗಿ ಪೆಂಗ್ವಿನ್ ಪ್ರಕಾಶನ ಸಂಸ್ಥೆಯು ಕಾದಂಬರಿಯ ಎಲ್ಲ ಪ್ರತಿಗಳನ್ನೂ ಮಾರುಕಟ್ಟೆಯಿಂದ ಹಿಂಪಡೆಯಿತು. ಮಾತ್ರವಲ್ಲ, `ತಾನಿನ್ನು ಬರೆಯುವುದಿಲ್ಲ' ಎಂದು ಮುರುಗನ್ ಪೆನ್ನು ಕೆಳಗಿಟ್ಟರು. 1995ರಲ್ಲಿ ಸಲ್ಮಾನ್ ರುಶ್ದಿಯವರ ‘ದಿ ಮೂರ್ಸ್ ಲಾಸ್ಟ್ ಸೈ' ಕೃತಿಯನ್ನು ಶಿವಸೇನೆ ಮತ್ತು ಕಾಂಗ್ರೆಸ್‍ನ ಕಾರ್ಯಕರ್ತರು ಬಹಿರಂಗವಾಗಿಯೇ ಸುಟ್ಟು ಹಾಕಿದ್ದರು. ಬಾಳಾ ಠಾಕ್ರೆ ಮತ್ತು ನೆಹರೂರವರನ್ನು ಈ ಕೃತಿಯಲ್ಲಿ ಅವಮಾನಿಸಲಾಗಿದೆ ಎಂಬ ಆರೋಪವನ್ನು ಈ ಪಕ್ಷಗಳು ಇದಕ್ಕೆ ಕಾರಣವಾಗಿ ಕೊಟ್ಟಿದ್ದುವು. 1991ರ ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿದ್ದ ರೋಹಿಂಟನ್ ಮಿಸ್ತ್ರಿಯವರ ‘ಸಚ್ ಎ ಲಾಂಗ್ ಜರ್ನಿ' ಕೃತಿಯನ್ನು 2010ರಲ್ಲಿ ಶಿವಸೇನೆಯ ವಿದ್ಯಾರ್ಥಿ ಘಟಕವು ಮುಂಬೈಯಲ್ಲಿ ಸುಟ್ಟು ಹಾಕಿತ್ತು. ಕಾದಂಬರಿಯು ಅಸಭ್ಯ ಮತ್ತು ಅಶ್ಲೀಲವಾಗಿದೆ ಹಾಗೂ ಬಾಳಾ ಠಾಕ್ರೆಯವರನ್ನು ಹಗುರವಾಗಿ ಕಾಣಲಾಗಿದೆ ಎಂದು ವಿದ್ಯಾರ್ಥಿಗಳು ಸುಡುವಿಕೆಗೆ ಕಾರಣವನ್ನು ಕೊಟ್ಟಿದ್ದರು.
    ಇವೇನೇ ಇದ್ದರೂ ಸುಡುವ ಪ್ರತಿಭಟನೆಯು ಸಂವಾದದ ವಿರೋಧಿಯಂತೆ ಕಾಣಿಸುತ್ತದೆ. ಆರೋಗ್ಯಕರ ಚರ್ಚೆ, ವೈಚಾರಿಕ ಜಗಳಕ್ಕೆ ಇರುವ ಅವಕಾಶವನ್ನು ಅದು ನಿರಾಕರಿಸಿಬಿಡುತ್ತದೆ. ಆದ್ದರಿಂದಲೇ ಈ ಪ್ರತಿಭಟನಾ ವಿಧಾನವನ್ನು ಪ್ರಶ್ನಿಸಬೇಕಾಗುತ್ತದೆ. ಸಾಹಿತ್ಯ ಕೃತಿಗಳು ಮತ್ತು ಧಾರ್ಮಿಕ ಗ್ರಂಥಗಳ ನಡುವೆ ವ್ಯತ್ಯಾಸಗಳೇನೇ ಇರಲಿ, ಸುಡುವ ಪ್ರತಿಭಟನೆ ಎಷ್ಟು ಆರೋಗ್ಯಪೂರ್ಣ? ಕೃತಿಯೊಂದಕ್ಕೆ ಬೆಂಕಿ ಕೊಡುವುದು ಪ್ರತಿಭಟನೆಯ ಸಾಂಕೇತಿಕ ರೂಪವೇ ಆಗಿರಬಹುದು. ಆದರೆ ಅದು ರವಾನಿಸುವ ಸಂದೇಶವೇನು? ಧರ್ಮಗಳ ಹೆಸರಲ್ಲಿ ಗುಡಿಸಲುಗಳಿಗೆ ಬೀಳುವ ಬೆಂಕಿ ಮತ್ತು ಉದ್ಯಮಿಗಳಿಗೆ ಜಾಗಗಳನ್ನು ಒದಗಿಸುವುದಕ್ಕಾಗಿ ಸ್ಲಂಗಳಿಗೆ ಬೀಳುವ ಬೆಂಕಿಯ ಮಧ್ಯೆ ನಾವು ಗ್ರಂಥಗಳಿಗೂ ಬೆಂಕಿ ಕೊಡಬೇಕೇ? ಅದು ಗ್ರಂಥವೊಂದರ ಮೇಲಿನ ಚರ್ಚೆಯನ್ನು ಅರ್ಥಪೂರ್ಣಗೊಳಿಸಬಲ್ಲುದೇ ಅಥವಾ ಇನ್ನಷ್ಟು ಬೆಂಕಿ ಪ್ರಕರಣಗಳಿಗೆ ಹೇತುವಾಗಬಹುದೇ?
    ಸ್ಟೀವನ್ ವಿನ್ಸೆಂಟ್ ಬೆನೆಟ್‍ರ ಹಾಡು ಯಾಕೋ ಇಷ್ಟವಾಗುತ್ತದೆ.

No comments:

Post a Comment