Thursday, April 10, 2014

ಗೆಲ್ಲುವ ಸಾಮರ್ಥ್ಯಕ್ಕೆ ಮಾನದಂಡವೇನು ರಾಜನಾಥ್ ಸಿಂಗ್‍ರೇ?

   ಜಾಟರು ಮತ್ತು ರಜಪೂತ್‍ರನ್ನು ಇತರ ಹಿಂದುಳಿದ ಜಾತಿಗಳಲ್ಲಿ (OBC) ಸೇರ್ಪಡೆಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸದ ಅಥವಾ ರಾಜಸ್ಥಾನದ ಗುಜ್ಜರ್‍ಗಳ ವಿೂಸಲಾತಿ ಬೇಡಿಕೆಯ ಪರವಾಗಿರುವ ಬಿಜೆಪಿಯು ಮುಸ್ಲಿಮರ ವಿೂಸಲಾತಿ ಬೇಡಿಕೆಯನ್ನು ಮಾತ್ರ ವಿರೋಧಿಸುತ್ತಿರುವುದೇಕೆ? ಮುಸ್ಲಿಮರ ಸ್ಥಿತಿ-ಗತಿ ದಲಿತರಿಗಿಂತಲೂ ಹೀನಾಯವಾಗಿದೆ ಎಂಬ ಅಧ್ಯಯನಾತ್ಮಕ ವರದಿಯನ್ನು ಕೊಟ್ಟ ‘ಸಾಚಾರ್ ಸಮಿತಿ ವರದಿ'ಯನ್ನು ಬಿಜೆಪಿ ಅಣಕಿಸುತ್ತಿರುವುದೇಕೆ? ಅದನ್ನು ಮುಸ್ಲಿಮ್ ತುಷ್ಟೀಕರಣದ ವರದಿ ಅನ್ನುತ್ತದಲ್ಲ, ಹಾಗಾದರೆ ಜಾಟರು, ಗುಜ್ಜಾರ್‍ಗಳು, ರಜಪೂತರನ್ನೆಲ್ಲ ಓಬಿಸಿಯಲ್ಲಿ ಸೇರ್ಪಡೆಗೊಳಿಸಿರುವುದಕ್ಕೆ ಯಾಕೆ ಅದು ‘ತುಷ್ಟೀಕರಣ' ಪದ ಬಳಸುತ್ತಿಲ್ಲ? ಮುಸ್ಲಿಮರ ಅಭಿವೃದ್ಧಿಯ ದೃಷ್ಟಿಯಿಂದ ಪ್ರಕಟವಾಗುವ ಯಾವ ಯೋಜನೆಗಳಿಗೂ ಅದೇಕೆ ತಡೆ ಒಡ್ಡುತ್ತಿದೆ? ಬಡ ಮುಸ್ಲಿಮ್ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ಕಾಲರ್‍ಶಿಪ್‍ನ ವಿರುದ್ಧ ಸುಪ್ರೀಮ್ ಕೋರ್ಟ್‍ನಲ್ಲಿ ದಾವೆ ಹೂಡಿರುವ ಏಕೈಕ ರಾಜ್ಯ ಗುಜರಾತ್. ಒಂದು ಕಡೆ, ‘ಸಬ್‍ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಮಂತ್ರವನ್ನು ಜಪಿಸುತ್ತಿರುವ ಮೋದಿ ಇನ್ನೊಂದು ಕಡೆ ಮುಸ್ಲಿಮರ ವಿಕಾಸವನ್ನು ಬಯಸದವರಂತೆ ವರ್ತಿಸುತ್ತಿರುವುದೇಕೆ? ಕಳೆದ ಮಾರ್ಚ್ ನಲ್ಲಿ  ಯೋಗಗುರು ಬಾಬಾ ರಾಮ್‍ದೇವ್ ಏರ್ಪಡಿಸಿದ್ದ ಸಭೆಯಲ್ಲಿ ಮೋದಿ ಭಾಗಿಯಾಗಿದ್ದರು. ಕಾಂಗ್ರೆಸನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದ ರಾಮ್‍ದೇವ್‍ರು ಮೋದಿಯ ಪರ ವಹಿಸಿ ಮಾತಾಡಿದ್ದರು. ಆಗ ಮಾತಾಡದಿದ್ದ ಬಿಜೆಪಿಯು ಈಗ ಸೋನಿಯಾ-ಬುಖಾರಿ ಭೇಟಿಯನ್ನು ಪ್ರಶ್ನಿಸುತ್ತಿದೆಯಲ್ಲ, ಏನಿದರ ಅರ್ಥ? ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಕಾಣುತ್ತಿರುವ ಈ ಮಟ್ಟದ ಗೊಂದಲವು ಉದ್ದೇಶಿತವೋ ಅನುದ್ದೇಶಿತವೋ? ಒಂದು ಕಡೆ ಬಿಜೆಪಿಯ ಅಧ್ಯಕ್ಷ ರಾಜನಾಥ್ ಸಿಂಗ್‍ರು ಮುಸ್ಲಿಮರ ಕ್ಷಮೆ ಯಾಚಿಸುತ್ತಿದ್ದಾರೆ. ಇನ್ನೊಂದು ಕಡೆ, ಮುಸ್ಲಿಮರನ್ನು ಇನ್ನಷ್ಟು ಭಯಪಡಿಸುವ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 17% ಮುಸ್ಲಿಮರಿರುವ ಉತ್ತರ ಪ್ರದೇಶದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಇಡೀ ದೇಶದಲ್ಲಿ ಅದು ಕೇವಲ ಐವರು ಮುಸ್ಲಿಮ್ ಅಭ್ಯರ್ಥಿಗಳಿಗಷ್ಟೇ ಟಿಕೆಟು ನೀಡಿದೆ. ಜಮ್ಮು ಕಾಶ್ಮೀರದ ಶ್ರೀನಗರ, ಬಾರಮುಲ್ಲಾ, ಅನಂತ್‍ನಾಗ್, ಬಿಹಾರ ಮತ್ತು ಲಕ್ಷ ದ್ವೀಪ ಹೀಗೆ ಐದು ಕ್ಷೇತ್ರಗಳಲ್ಲಿ ಅದು ಮುಸ್ಲಿಮರನ್ನು ಕಣಕ್ಕಿಳಿಸಿದೆ. ಇವು ಎಲ್ಲವೂ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳು. ಇಷ್ಟಕ್ಕೂ, ‘ಗೆಲ್ಲುವ ಸಾಮರ್ಥ್ಯ ಇರುವ  ಅಭ್ಯರ್ಥಿಗಳನ್ನಷ್ಟೇ ನಿಲ್ಲಿಸಬೇಕಾಗುತ್ತದೆ’ ಎಂಬ ರಾಜನಾಥ್ ಸಿಂಗ್‍ರ ಮಾತಿನ ಇಂಗಿತವಾದರೂ ಏನು? ಬಿಜೆಪಿಯನ್ನು ಬೆಂಬಲಿಸುವ ಹಿಂದೂಗಳು ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿ ಸುವುದಿಲ್ಲ ಎಂದೇ ಅಲ್ಲವೇ? ಇಂಥದ್ದೊಂದು ವಾತಾವರಣವನ್ನು ಬಿಜೆಪಿ ಯಾಕಾಗಿ ತಯಾರಿಸಿ ಇಟ್ಟಿದೆ? ಅದರ ಬೆಂಬಲಿಗರು ಈ ಮಟ್ಟದಲ್ಲಿ ಮುಸ್ಲಿಮ್ ವಿರೋಧಿ ನೀತಿಯನ್ನು ಬೆಳೆಸಿಕೊಂಡಿರುವುದನ್ನು ಅದೇಕೆ ಪ್ರಶ್ನಿಸುತ್ತಿಲ್ಲ? ನಿಜವಾಗಿ, ಇತರ ಯಾವ ರಾಷ್ಟ್ರೀಯ ಪಕ್ಷಗಳಲ್ಲೂ ಇಂಥ ಕಟು ವಾತಾವರಣ ಇಲ್ಲ. ಅದರ ಬೆಂಬಲಿಗರು ಅಭ್ಯರ್ಥಿಯ ಧರ್ಮವನ್ನೇ ಮತದಾನಕ್ಕೆ ಪ್ರಥಮ ಷರತ್ತಾಗಿ ಮುಂದಿಟ್ಟದ್ದೂ ಇಲ್ಲ. ಆದರೆ ಈ ದೇಶದ ನೇತೃತ್ವವನ್ನು ವಹಿಸಿ ಕೊಳ್ಳುವುದಕ್ಕೆ ಉತ್ಸುಕವಾಗಿರುವ ಬಿಜೆಪಿಯು ಪ್ರಜಾತಂತ್ರಕ್ಕೆ ತೀರಾ ವಿರುದ್ಧವಾದ ಇಂಥದ್ದೊಂದು ಬೆಂಬಲಿಗ ವರ್ಗವನ್ನು ಪೋಷಿಸಿ ಬೆಳೆಸುತ್ತಿರುವುದೇಕೆ? ಉತ್ತರ ಪ್ರದೇಶದ ಮುಝಫ್ಫರ್ ನಗರದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದೇ ಡಾ| ಸಂಜೀವ್ ಬಲಿಯಾನ್. ಈತ ಮುಝಫ್ಫರ್ ನಗರ ಗಲಭೆಯಲ್ಲಿ ಸಕ್ರಿಯವಾಗಿ ಭಾಗಿಯಾದ ಆರೋಪಿ. ಅಲ್ಲದೇ ಕೈರಾನಾ ಮತ್ತು ಬಿಜನೂರ್‍ಗಳಲ್ಲೂ ಮುಝಫ್ಫರ್ ನಗರದ ಗಲಭೆಯಲ್ಲಿ ಭಾಗಿಯಾದ ಆರೋಪಿಗಳಿಗೇ ಟಿಕೆಟ್ ನೀಡಲಾಗಿದೆ. ಏನಿವೆಲ್ಲ? ಮುಸ್ಲಿಮರು ತನ್ನನ್ನು ಬೆಂಬಲಿಸಬೇಕೆಂದು ಬಿಜೆಪಿ ಬಯಸುತ್ತಿದೆಯಲ್ಲ, ಅದಕ್ಕೆ ಏನಿವೆ ಸಮರ್ಥನೆಗಳು?
   ದಲಿತರಿಗೆ ವಿೂಸಲಾತಿ ಒದಗಿಸುವ ಮಂಡಲ್ ವರದಿ ಜಾರಿಯ ವಿರುದ್ಧ 1980ರಲ್ಲಿ ಈ ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ಪ್ರಾರಂಭಗೊಂಡದ್ದೇ  ಗುಜರಾತ್‍ನಲ್ಲಿ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಈ ಪ್ರತಿಭಟನೆಯ ನೇತೃತ್ವ ವಹಿಸಿತ್ತು. ಆ ದಿನಗಳಲ್ಲಿ ಬಿಜೆಪಿಯು ದಲಿತರನ್ನು ಅನ್ಯರಂತೆ (Others) ಪರಿಗಣಿಸಿತ್ತು. ‘ವರ್‍ಶಿಪ್ಪಿಂಗ್ ಫಾಲ್ಸ್ ಗಾಡ್' ಎಂಬ ಕೃತಿಯಲ್ಲಿ ಬಿಜೆಪಿಯ ಅರುಣ್ ಶೌರಿಯವರು, ಅಂಬೇಡ್ಕರ್‍ರನ್ನು ಟೀಕಿಸಿದ್ದರು. ‘ದಲಿತರು ಹಿಂದೂ ಧರ್ಮವನ್ನು ಬಿಟ್ಟು ಹೊರ ಬರುವುದೇ ಅಸ್ಪೃಶ್ಯತೆಗೆ ಇರುವ ಮದ್ದು’ ಎಂಬ ಅಂಬೇಡ್ಕರ್‍ರ ಅಭಿಪ್ರಾಯದೊಂದಿಗೆ ಶೌರಿ ತೀವ್ರ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಆದರೆ, ದೆಹಲಿ ಗದ್ದುಗೆಯನ್ನು ವಶಪಡಿಸಿಕೊಳ್ಳಬೇಕಾದರೆ ತನ್ನ ‘ದಲಿತ ನೀತಿ'ಯನ್ನು ಬದಲಿಸಿಕೊಳ್ಳುವುದು ಅನಿವಾರ್ಯ ಎಂಬುದು ಬಿಜೆಪಿಗೆ ಕ್ರಮೇಣ ಮನವರಿಕೆ ಆಗತೊಡಗಿತು. ದಲಿತರು ಅತ್ಯಂತ ಹೆಚ್ಚಿರುವ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಒಟ್ಟು 120ರಷ್ಟು ಲೋಕಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ಹೆಚ್ಚಿನ ಸೀಟುಗಳನ್ನು ಗಳಿಸದ ಹೊರತು ದೆಹಲಿ ದಕ್ಕುವುದಿಲ್ಲ ಎಂಬ ಸತ್ಯವನ್ನು ಅದು ಕಂಡುಕೊಳ್ಳಲಾರಂಭಿಸಿತು. ಅದಕ್ಕಾಗಿ ಅಯೋಧ್ಯಾ ಚಳವಳಿಯನ್ನು ಅದು ಬಳಸಿಕೊಂಡಿತು. ಮಾತ್ರವಲ್ಲ, ದಲಿತರ (Others) ಜಾಗದಲ್ಲಿ ಅದು ಮುಸ್ಲಿಮರನ್ನು ತಂದಿರಿಸಿತು. ಇತರ ಹಿಂದುಳಿತ ವರ್ಗ(OBC)ದ ವಿೂಸಲಾತಿಯು ಹಿಂದೂಗಳಿಗೆ ಮಾತ್ರ ಸೀಮಿತವಾಗಬೇಕಿದ್ದು, ಅದರಲ್ಲಿ ಮುಸ್ಲಿಮರನ್ನು ಸೇರಿಸುವ ಕ್ರಮವನ್ನು ಖಂಡಿಸುವ ಪ್ರಯತ್ನಕ್ಕೆ ಕೈ ಹಾಕಿತು. ದಲಿತರ ವಿೂಸಲಾತಿ ಹಕ್ಕುಗಳನ್ನು ಮುಸ್ಲಿಮರು ಕಬಳಿಸುತ್ತಿದ್ದಾರೆಂಬ ಪುಕಾರು ಹಬ್ಬಿಸಿ, ದಲಿತ ಪ್ರೇಮದ ಹೊಸ ಮುಖವನ್ನು ಪ್ರದರ್ಶಿಸಿತು. ಅದಕ್ಕೆ ಪೂರಕವಾಗಿ ಕಲ್ಯಾಣ್ ಸಿಂಗ್, ಮೋದಿ, ಉಮಾ ಭಾರತಿ, ಬಂಗಾರು ಲಕ್ಷ್ಮಣ್.. ಮುಂತಾದ ಹಿಂದುಳಿದವರನ್ನು ತೋರಿಸಿ ದಲಿತ ವಿರೋಧಿ ಕಳಂಕವನ್ನು ತೊಳೆಯಲು ಯತ್ನಿಸಿತು. ಇದರ ಭಾಗವಾಗಿಯೇ ಮೋದಿಯವರು 2013 ಎಪ್ರಿಲ್‍ನಲ್ಲಿ ಕೇರಳದ ಶಿವಗಿರಿಯಲ್ಲಿರುವ ನಾರಾಯಣ ಗುರು ಮಂದಿರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು. ಅಸ್ಪøಶ್ಯತೆಯನ್ನು ಪ್ರಬಲವಾಗಿ ಖಂಡಿಸಿ ಒಂದು ಪರ್ಯಾಯ ಚಳವಳಿಯನ್ನೇ ಪ್ರಾರಂಭಿಸಿದ್ದ ನಾರಾಯಣ ಗುರು ಕಟ್ಟಿಸಿದ ಮಂದಿರಕ್ಕೆ ‘ಅಸ್ಪøಶ್ಯತೆ'ಯಲ್ಲಿ ಬಲವಾದ ನಂಬಿಕೆಯಿಟ್ಟಿರುವ ಪಕ್ಷವೊಂದರ ನಾಯಕ ಮುಖ್ಯ ಅತಿಥಿಯಾಗುತ್ತಾರೆಂದರೆ, ಅದು ಬಿಜೆಪಿಯ ಮುಖವಾಡದ ಬದುಕಿಗೆ ಹಿಡಿದ ಕನ್ನಡಿ. 2014 ಫೆಬ್ರವರಿಯಲ್ಲಿ ಮೋದಿ ಮತ್ತೆ ಕೇರಳಕ್ಕೆ ಬಂದಿದ್ದರು. ಮಾತ್ರವಲ್ಲ, ‘ಹೊಲೆಯ’ ಎಂಬ ಅತಿ ಹಿಂದುಳಿದ ಜಾತಿಯ ಸಭೆಯಲ್ಲಿ ಭಾಗವಹಿಸಿದ್ದರು. 80ರ ದಶಕದಲ್ಲಿ ವಿೂಸಲಾತಿ ವಿರೋಧಿ ಚಳವಳಿಯನ್ನು ಹಮ್ಮಿಕೊಂಡ ಬಿಜೆಪಿ, 2014ರಲ್ಲಿ ‘ಹೊಲೆಯರ' ಸಭೆಯಲ್ಲಿ ಭಾಗವಹಿಸುವಷ್ಟು ಉದಾರಿಯಾದದ್ದು ಅದರ ಸಮಯ ಸಾಧಕ ರಾಜಕೀಯಕ್ಕೆ ಅತ್ಯುತ್ತಮ ಉದಾಹರಣೆ. ಒಂದು ವೇಳೆ ಅದರ ರಾಜಕೀಯ ಮಹತ್ವಾಕಾಂಕ್ಷೆಯು ದಲಿತರನ್ನು ಹೊರಗಿಟ್ಟರೂ ಸಾಧಿತವಾಗುತ್ತಿದ್ದರೆ, ಇವತ್ತು ಹೊಲೆಯರ ಸಭೆಯಲ್ಲಿ ಭಾಗವಹಿಸುವುದಕ್ಕೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೋರ್ವ ಮುಂದಾಗುತ್ತಲೇ ಇರಲಿಲ್ಲ.
   2013 ಅಕ್ಟೋಬರ್ 13ರಂದು ಚೆನ್ನೈಯ ನಾನಿ ಎಂ. ಪಾಲ್ಖಿವಾಲರ ಸ್ಮರಣಾರ್ಥ ಏರ್ಪಡಿಸಲಾದ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮೋದಿ ಭಾಗಿಯಾಗಿದ್ದರು. India and the World  (ಭಾರತ ಮತ್ತು ವಿಶ್ವ) ಎಂಬ ವಿಷಯದ ಮೇಲೆ ಮಾತಾಡುತ್ತಾ ಅವರು ಹೀಗೆ ಹೇಳಿದ್ದರು:
   ‘ನಾನೊಮ್ಮೆ ರಶ್ಯನ್ ಪ್ರವಾಸದಲ್ಲಿದ್ದೆ. ಆಗ ಅತಿಥಿಗಳಲ್ಲಿ ಟೀ  ಕೇಳಿದೆ. ಅವರಿಗೆ ಅರ್ಥವಾಗಲಿಲ್ಲ. ಆಗ ನಾನು ಚಾಯ್ ಎಂದು ಹೇಳಿದೆ. ತಕ್ಷಣ ಅವರು ಒದಗಿಸಿದರು. ನಮ್ಮ ಹಿರಿಯರು ಈ ಜಗತ್ತಿನೊಂದಿಗೆ ಇಟ್ಟುಕೊಂಡ ಸಂಬಂಧ ಅಂಥದ್ದಾಗಿತ್ತು..' ಎಂದಿದ್ದರು. ಚಾಯ್ ಎಂಬುದು ಈ ದೇಶದ ಸಾಂಸ್ಕøತಿಕ ಪದವಾಗಿದ್ದು ಅದನ್ನು ರಶ್ಯನ್ನರು ಎರವಲು ಪಡಕೊಂಡಿದ್ದಾರೆ ಎಂಬುದು ಮೋದಿಯ ನಿಲುವಾಗಿತ್ತು. ನಿಜವಾಗಿ ಚಾಯ್ ಎಂಬುದು ಭಾರತೀಯ ಪದವಲ್ಲ, ಮಂಡೇರಿಯನ್ ಪದ. Tea ಎಂಬುದು ಕೂಡಾ ಭಾರತೀಯವಲ್ಲ, ಚೀನಾದ್ದು. ಹೀಗೆ ಇತಿಹಾಸವನ್ನು ಹಲವು ಬಾರಿ ತಪ್ಪಾಗಿ ಉಲ್ಲೇಖಿಸಿರುವ ಮೋದಿಯವರಲ್ಲಿ ಉದ್ದಕ್ಕೂ ಕಾಣಿಸುವುದು ಬರೇ ಆವೇಶ, ಆರ್ಭಟ ಮಾತ್ರ. ಕಳೆದ ಫೆ.  22ರಂದು ಅಸ್ಸಾಮ್‍ನ ಸಿಲ್‍ಚೂರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ್ದ ಮೋದಿ, ‘ಬಾಂಗ್ಲಾದಿಂದ ಬರುವ ಹಿಂದೂ ವಲಸಿಗರನ್ನು ರಕ್ಷಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ' ಎಂದಿದ್ದರಲ್ಲದೇ, ಬಾಂಗ್ಲಾದಿಂದ ಬರುವ ‘ಅನ್ಯ ವಲಸಿಗರು' (ಮುಸ್ಲಿಮರು) ಕಾಂಗ್ರೆಸ್‍ನ ಓಟ್‍ಬ್ಯಾಂಕ್ ಷಡ್ಯಂತ್ರದಂತೆ ಬರುತ್ತಿದ್ದಾರೆ ಎಂದಿದ್ದರು (ದಿ ಹಿಂದೂ 2014 ಮಾರ್ಚ್ 19). ಮೋದಿ ಹೋದಲ್ಲೆಲ್ಲ ಮುಸ್ಲಿಮರ ವಿರುದ್ಧ ಒಂದು ಬಗೆಯ ಅಸಹನೆಯನ್ನು ಬಿತ್ತುತ್ತಲೇ ಇದ್ದಾರೆ. ಮುಸ್ಲಿಮರನ್ನು ಅನ್ಯರಂತೆ ಬಿಂಬಿಸುವುದು, ಕುಟುಕುವುದು ಅವರ ಶೈಲಿಯಾಗಿ ಬಿಟ್ಟಿದೆ. ಕಮ್ಯುನಲಿಸಮ್ ಮತ್ತು ಕ್ಯಾಪಿಟಲಿಸಮ್ ಅನ್ನು ಅತ್ಯಂತ ಜಾಣತನದಿಂದ ಮಿಶ್ರ ಮಾಡುವ ಬುದ್ಧಿವಂತಿಕೆಯನ್ನು ಅವರು ಪ್ರದರ್ಶಿಸುತ್ತಿದ್ದಾರೆ. ಪಶ್ಚಿಮ ಬಂಗಾಲದಿಂದ ಟಾಟಾ ಕಂಪೆನಿಯ ನ್ಯಾನೋ ಕಾರು ತಯಾರಿಕಾ ಘಟಕವು ಗುಜರಾತ್‍ಗೆ ವರ್ಗಾವಣೆಯಾದಾಗ, ಅವರು ಅದನ್ನು ಶ್ರೀ ಕೃಷ್ಣನಿಗೆ ಹೋಲಿಸಿದ್ದರು. ಶ್ರೀ ಕೃಷ್ಣ ಹುಟ್ಟಿದ್ದು ಉತ್ತರ ಪ್ರದೇಶದ ಮಥುರಾದಲ್ಲಾದರೂ ಬೆಳೆದದ್ದು ಗುಜರಾತ್‍ನ ದ್ವಾರಕದಲ್ಲಿ, ಹಾಗೆಯೇ ನ್ಯಾನೋ ಕೂಡಾ ಎಂದಿದ್ದರು. ಒಂದು ಕಡೆ ಸ್ವದೇಶಿ ರಾಷ್ಟ್ರೀಯತೆಯ ಬಗ್ಗೆ ಭಾವಾವೇಶದ ಮಾತನ್ನಾಡುತ್ತಲೇ ಇನ್ನೊಂದು ಕಡೆ ರಾಜೀವ್ ದೀಕ್ಷಿತ್‍ರ ಸ್ವದೇಶಿ ಜಾಗರಣ್ ಮಂಚ್ ಅನ್ನು ಗುಜರಾತ್‍ನಿಂದಲೇ ಓಡಿಸಿದ್ದರು.
   ಬಿಜೆಪಿ ಇವತ್ತು ಯಾವ ಮುಖವನ್ನು ಪ್ರದರ್ಶಿಸುತ್ತಿದೆಯೋ ಅದೇ ಮುಖವನ್ನು ಮೂರ್ನಾಲ್ಕು ದಶಕಗಳ ಹಿಂದೆ ಅದು ತೀವ್ರವಾಗಿ ದ್ವೇಷಿಸಿತ್ತು. ದಲಿತರನ್ನು ಅನ್ಯರ ಪಟ್ಟಿಯಲ್ಲಿಟ್ಟು ಕಂಡದ್ದು ಅದೇ ಪಕ್ಷ.  ಅಂಬೇಡ್ಕರ್‍ರನ್ನು ಅಸಹನೆಯಿಂದ ನೋಡಿದ್ದೂ ಇದೇ ಪಕ್ಷ.. ದಲಿತರಿಗೆ ವಿೂಸಲಾತಿಯನ್ನು ವಿರೋಧಿಸಿದ್ದೂ ಇದೇ ಪಕ್ಷ.  ಆದರೆ ಇದೀಗ ಅದು ಹೊಲೆಯ, ಮಾದಿಗ, ಗಾಣಿಗ.. ಮುಂತಾದ ಎಲ್ಲರನ್ನೂ ತನ್ನವರೆಂದು ಹೇಳುತ್ತಾ ತಿರುಗಾಡುತ್ತಿದೆ. ಮುಸ್ಲಿಮರಲ್ಲಿ ಕ್ಷಮೆ ಯಾಚಿಸುತ್ತಿದೆ. ಆದರೆ ದಲಿತರಿಗೆ ವಿೂಸಲಾತಿ ಇರುವ ಕ್ಷೇತ್ರಗಳನ್ನು ಹೊರತು ಪಡಿಸಿ ಅದು ಇತರ ಕಡೆ ಈ ಹೊಲೆಯ, ಮಾದಿಗ, ಗಾಣಿಗರಿಗೆ ಟಿಕೆಟ್ ಕೊಡುತ್ತಿಲ್ಲ. ಅವರಿಗೆ ಗೆಲ್ಲುವ ಸಾಮರ್ಥ್ಯ  ಇಲ್ಲ ಎಂಬುದನ್ನು ಅದು ಈಗಾಗಲೇ ತೀರ್ಮಾನಿಸಿ ಬಿಟ್ಟಿದೆ. ಅದರ ಮುಸ್ಲಿಮ್ ಪ್ರೀತಿಯೂ ಇದೇ ರೀತಿ. ಅವರಿಗೂ ಗೆಲ್ಲುವ ಸಾಮರ್ಥ್ಯ  ಇಲ್ಲ. ಅಷ್ಟಕ್ಕೂ, ಈ ಗೆಲ್ಲುವ ಸಾಮರ್ಥ್ಯದ  ಮಾನದಂಡವಾದರೂ ಏನು? ಗೆಲ್ಲುವುದಕ್ಕೆ ಓರ್ವ ಅಭ್ಯರ್ಥಿಯಲ್ಲಿ ಏನೆಲ್ಲ ಅರ್ಹತೆಗಳಿರಬೇಕು? ಬಿಜೆಪಿಗೆ ಮತ ಹಾಕುವವರು ಗಾಣಿಗ, ಹೊಲೆಯ, ಮುಸ್ಲಿಮ್ ಎಂಬುದನ್ನೆಲ್ಲಾ ಅರ್ಹತೆಯ ಪಟ್ಟಿಯಲ್ಲಿಟ್ಟು ಪರೀಕ್ಷಿಸುತ್ತಾರೆಯೇ? ಆ ಪರೀಕ್ಷೆಯಲ್ಲಿ ದಲಿತರು ಮತ್ತು ಮುಸ್ಲಿಮರಾಗಿ ಗುರುತಿಸಿಕೊಳ್ಳುವುದು ಅವರ ತಿರಸ್ಕಾರಕ್ಕೆ ಕಾರಣವಾಗುತ್ತದೆಯೇ? ಹಾಗಾದರೆ ಆ ಮತದಾರರ ಮನಸ್ಥಿತಿಯಾದರೂ ಯಾವ ರೂಪದ್ದು? ಅಂಥದ್ದೊಂದು ಬೃಹತ್ ಸಂಖ್ಯೆಯ ಬೆಂಬಲಿಗರನ್ನು ಹೊಂದಿರುವ ಪಕ್ಷವೊಂದು ಈ ಗಾಣಿಗ, ಹೊಲೆಯ, ಮಾದಿಗರ.. ಕಲ್ಯಾಣಕ್ಕಾಗಿ ಕೆಲಸ ಮಾಡಬಹುದೇ? ಅದಕ್ಕೆ ಈ ಬೆಂಬಲಿಗರ ಗುಂಪು ಅವಕಾಶ ಕೊಡಬಹುದೇ?

1 comment:

  1. These fellows should read Voice of India publications books else they go on telling false things. All evil things in India is happened due to Moguls and Britishers. They looted India. And now there shesha is looting. Upper castewala neither have power nor property.

    ReplyDelete