Wednesday, March 19, 2014

ಅವರನ್ನು ಭ್ರಷ್ಟರೆನ್ನುವುದಕ್ಕಾಗಿ ನಾವೇ ಭ್ರಷ್ಟರಾಗುವುದು ಯಾವ ಬಗೆಯ ಜರ್ನಲಿಸಂ?

   ‘ಕುಟುಕು ಪತ್ರಿಕೋದ್ಯಮ’ (Sting Journalism) ಮತ್ತು ‘ಬಲೆಗೆ ಸಿಲುಕಿಸುವ ಕಾರ್ಯಾಚರಣೆ’ (Entrapment Operation) ಇವೆರಡೂ ಒಂದೇ ಅಲ್ಲ. ಇವೆರಡರ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಪ್ರಜಾಪ್ರಭುತ್ವದ ‘ಕಾವಲು ನಾಯಿ’ಯೊಂದು (Watch dog) ಮಾಲಿಕನ ಕಣ್ಣು ತಪ್ಪಿಸಿ ಮನೆಯೊಳಗೆ ಹೊಕ್ಕು ಒಳಗೆ ಕ್ಯಾಮರಾ ಇಡುವುದು ಬೇರೆ, ಮಾಲಿಕನಿಗೆ ಗುರುತೇ ಸಿಗದಷ್ಟು ಅಚ್ಚು ಕಟ್ಟಾಗಿ ವೇಷ ಬದಲಿಸಿ ಕಾವಲು ನಾಯಿಯೊಂದು ಮಾಲಿಕನನ್ನು ಭೇಟಿಯಾಗುವುದು ಮತ್ತು ಆತನಿಗೆ ಆಮಿಷ ಒಡ್ಡಿ ಬಲೆಗೆ ಸಿಲುಕಿಸುವುದು ಬೇರೆ. ಇವತ್ತಿನ ಕುಟುಕು ಕಾರ್ಯಾಚರಣೆಗಳು (Sting Operation) ಯಾವ ಬಗೆಯವು? ಅವು ನಿಜಕ್ಕೂ, ನಾವೆಲ್ಲ ಸಮರ್ಥಿಸುವಷ್ಟು ನೈತಿಕವಾಗಿವೆಯೇ? ಖಾಸಗಿತನ ಎಂಬುದು ಪ್ರತಿಯೋರ್ವರ ಸಾಂವಿಧಾನಿಕ ಹಕ್ಕು. ಬೇಕಾಬಿಟ್ಟಿಯಾಗಿ ಅದರೊಳಕ್ಕೆ ಇಣುಕುವುದು, ಕ್ಯಾಮರ ಇಡುವುದು ಸಂವಿಧಾನ ವಿರೋಧಿ. ಒಂದು ವೇಳೆ ಇಣುಕುವುದು ಅನಿವಾರ್ಯ ಎಂದಾದರೆ ಆ ಅನಿವಾರ್ಯತೆಯನ್ನು ಸಮಾಜದ ಮುಂದೆ ಸ್ಪಷ್ಟಪಡಿಸಬೇಕಾಗುತ್ತದೆ. ಮಾತ್ರವಲ್ಲ, ಸಮಾಜಕ್ಕೂ ಅದು ಅನಿವಾರ್ಯ ಎಂದು ಅನಿಸುವಷ್ಟು ಆ ಸ್ಪಷ್ಟನೆ ಗಂಭೀರವಾಗಿರಬೇಕಾಗುತ್ತದೆ. ಇವತ್ತಿನ ಕುಟುಕು ಕಾರ್ಯಾಚರಣೆಗಳು ಈ ಮಟ್ಟದಲ್ಲಿ ಇವೆಯೇ? ನೂರಾರು ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳು ಇರುವ ಇಂದಿನ ಮಾಧ್ಯಮ ರಂಗದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಗುರಿ ಮತ್ತು ಸವಾಲುಗಳು ಇವೆ. ನೂರಾರು ಮಾಲಿಕರು, ಸಾವಿರಾರು ಪತ್ರಕರ್ತರು ಈ ರಂಗವನ್ನು ಇವತ್ತು ಆಳುತ್ತಿದ್ದಾರೆ. ಓರ್ವ ರಾಜಕಾರಣಿಗೆ ತನ್ನ ಕ್ಷೇತ್ರದ ಮತದಾರರನ್ನು ಸೆಳೆಯುವುದು ಮತ್ತು ಅವರು ಸದಾ ತನ್ನ ಬೆಂಬಲಿಗರಾಗಿರುವಂತೆ ನೋಡಿಕೊಳ್ಳುವುದು ಎಷ್ಟು ಅಗತ್ಯವೋ ಅಂಥದ್ದೇ ಅಗತ್ಯ ಇವತ್ತು ಚಾನೆಲ್‍ಗಳಿಗೂ ಇವೆ. ವೀಕ್ಷಕರನ್ನು ಹಿಡಿದಿಡುವುದಕ್ಕಾಗಿ ಅವು ವಿವಿಧ ಚಾನೆಲ್‍ಗಳೊಂದಿಗೆ ಹೋರಾಡಬೇಕಾಗುತ್ತದೆ. ರಾಜಕಾರಣಿಯೋರ್ವ ತನ್ನ ಪ್ರತಿಸ್ಪರ್ಧಿಯ ಪ್ರಭಾವವನ್ನು ಕುಗ್ಗಿಸುವುದಕ್ಕಾಗಿ ಮಾಡಬಹುದಾದ ತಂತ್ರಗಳಂತೆಯೇ ಚಾನೆಲ್‍ಗಳೂ ತಂತ್ರಗಳನ್ನು ಹೆಣೆಯಬೇಕಾಗುತ್ತದೆ. ಆಗಾಗ ಬ್ರೇಕಿಂಗ್ ನ್ಯೂಸ್‍ಗಳು, ತನಿಖಾ ವರದಿಗಳು, ಮನರಂಜನೆಗಳನ್ನು ಇತರ ಚಾನೆಲ್‍ಗಳಿಗಿಂತ ಭಿನ್ನ ರೂಪದಲ್ಲಿ ಒದಗಿಸುತ್ತಿರಬೇಕಾಗುತ್ತದೆ. ಇಂಥ ಒತ್ತಡಗಳು ಟಿ.ವಿ. ಚಾನೆಲ್‍ಗಳ ಹೆಜ್ಜೆ ತಪ್ಪಿಸಲಾರವೇ? ಸಾರ್ವಜನಿಕ ಹಿತಾಸಕ್ತಿಗಾಗಿ ನಡೆಯಬೇಕಾದ ತನಿಖಾ ವರದಿಯೊಂದು ತಮ್ಮ TRP ಹೆಚ್ಚಿಸಿ ಕೊಳ್ಳುವುದಕ್ಕಾಗಿ ದುರ್ಬಳಕೆಗೆ ಈಡಾಗಲಾರದೇ?
   2007ರಲ್ಲಿ, ದೆಹಲಿಯ ಶಾಲಾ ಶಿಕ್ಷಕಿಯ ಮೇಲೆ ನಡೆಸಲಾದ ಕುಟುಕು ಕಾರ್ಯಾಚರಣೆಯನ್ನು ಲೈವ್ ಇಂಡಿಯಾ ಟಿ.ವಿ. ಚಾನೆಲ್ ಪ್ರಸಾರ ಮಾಡಿತ್ತು. ಶಾಲೆಯ ವಿದ್ಯಾರ್ಥಿಗಳನ್ನು ಈಕೆ ವೇಶ್ಯಾವಾಟಿಕೆಗೆ ಒದಗಿಸುತ್ತಿದ್ದಾಳೆಂದು ಅದು ವಾದಿಸಿತು. ಚಾನೆಲ್‍ನಲ್ಲಿ ಈ ಕುಟುಕು ಕಾರ್ಯಾಚರಣೆ ಪ್ರಸಾರವಾದದ್ದೇ ತಡ, ಜನ ಕುಪಿತರಾದರು. ಶಿಕ್ಷಕಿಯ ಮೇಲೆ ದಾಳಿ ನಡೆಸಿದರು. ಆ ಪರಿಸರದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೇ ಆ ಶಿಕ್ಷಕಿ ಮಾನಗೇಡಿಯಾಗಿ, ಕ್ರೂರಿಯಾಗಿ ಬಿಂಬಿತಗೊಂಡರು. ಆದರೆ ಆ ಬಳಿಕ ಇಡೀ ಕಾರ್ಯಾಚರಣೆಯೇ ನಕಲಿ ಎಂದು ಸಾಬೀತಾಯಿತು. ಪತ್ರಕರ್ತರಿಬ್ಬರನ್ನು ಬಂಧಿಸಲಾಯಿತು. ಆದರೆ, ಆ ದಿನಗಳಲ್ಲಿ ಆ ಶಿಕ್ಷಕಿ ಎದುರಿಸಿರಬಹುದಾದ ಒತ್ತಡವನ್ನೊಮ್ಮೆ ಊಹಿಸಿ. ಹಾಗಂತ, ಒಂದು ಕುಟುಕು ಕಾರ್ಯಾಚರಣೆಯನ್ನು ಒಂದೇ ದಿನದಲ್ಲಿ ಒಂದೇ ಬಾರಿಗೆ ನಡೆಸುವುದಕ್ಕೆ ಸಾಧ್ಯವಿಲ್ಲವಲ್ಲ. ಅದಕ್ಕೆ ಒಂದಕ್ಕಿಂತ ಹೆಚ್ಚು ದಿನಗಳು ಬೇಕಾಗಬಹುದು. ಆ ಸಂದರ್ಭದಲ್ಲಿ ಕುಟುಕು ತಂಡವು ವಿವಿಧ ಬಗೆಯ ಮಾತುಕತೆ, ಒಪ್ಪಂದ, ಕೊಡುಕೊಳ್ಳುವಿಕೆಗಳನ್ನು ಕಾರ್ಯಾಚರಣೆಗೆ ಒಳಗಾಗುವ ವ್ಯಕ್ತಿಯೊಂದಿಗೆ ನಡೆಸಿರಬಹುದು. ತಂಡವು ಅಸಂಖ್ಯ ಸುಳ್ಳುಗಳನ್ನು ಹೇಳಿರಬಹುದು. ಆದರೆ ಆ ಕಾರ್ಯಾಚರಣೆಯನ್ನು ಟಿ.ವಿ. ಚಾನೆಲ್ ಸಂಪೂರ್ಣವಾಗಿ ಇದ್ದ ಹಾಗೇ ಪ್ರಸಾರ ಮಾಡುವುದಿಲ್ಲ. ಅದನ್ನು ಸಂಕ್ಷೇಪಿಸುತ್ತದೆ. ತನಗೆ ಬೇಕಾದ್ದನ್ನು ಮಾತ್ರ ಉಳಿಸಿ ಉಳಿದುದನ್ನು ಕಿತ್ತು ಹಾಕಿ ಪ್ರಸಾರ ಮಾಡುತ್ತದೆ. ವೀಕ್ಷಕರಿಗೆ ಗೊತ್ತಿರುವುದು ಚಾನೆಲ್ ಏನನ್ನು ಪ್ರಸಾರ ಮಾಡಿದೆಯೋ ಅದು ಮಾತ್ರ. ಇದು ಹೇಗೆ ಸಮರ್ಥನೀಯ? ಇಲ್ಲಿ ಚಾನೆಲ್ ಅಳವಡಿಸಿಕೊಂಡಿರುವ ಪಾರದರ್ಶಕತೆ ಯಾವುದು? ಕುಟುಕು ಕಾರ್ಯಾಚರಣೆಗೆ ಒಳಗಾದ ವ್ಯಕ್ತಿಯನ್ನು ಸುಳ್ಳುಗಾರ ಮತ್ತು ಚಾನೆಲನ್ನು ಪ್ರಾಮಾಣಿಕ ಎಂದು ವಿಭಜಿಸುವುದಕ್ಕೆ ಇರುವ ಮಾನದಂಡ ಏನು? ತನ್ನ ಹಿತಾಸಕ್ತಿಗಾಗಿಯೇ ಒಂದು ಚಾನೆಲ್ ಕುಟುಕು ಕಾರ್ಯಾಚರಣೆಯನ್ನು ಆಯೋಜಿಸಬಾರದೆಂದಿದೆಯೇ? ಕಾರ್ಯಾಚರಣೆ ವಿಫಲಗೊಂಡರೂ ತನಗೆ ಬೇಕಾದಂತೆ ಇಡೀ ಕಾರ್ಯಾಚರಣೆಯನ್ನು ತಿರುಚಿ, ಸಂಕ್ಷೇಪಿಸಿ ಪ್ರಸಾರ ಮಾಡುವುದಕ್ಕೂ ಅವಕಾಶ ಇದೆಯಲ್ಲವೇ? ಇಂಥ ತಪ್ಪುಗಳು ನಡೆಯಲ್ಲ ಎಂದು ವೀಕ್ಷಕರನ್ನು ನಂಬಿಸುವುದಕ್ಕೆ ಮಾಧ್ಯಮಗಳು ಏನು ಕ್ರಮಗಳನ್ನು ಕೈಗೊಂಡಿವೆ? ಅಂದಹಾಗೆ, ಚಾನೆಲ್‍ಗಳನ್ನು ನಂಬಬೇಕು ಮತ್ತು ಅದರ ಕಾರ್ಯಾಚರಣೆಗೆ ಒಳಗಾಗುವ ವ್ಯಕ್ತಿಯನ್ನು ನಂಬಬಾರದು ಎಂದು ವಾದಿಸುವುದಕ್ಕೆ ಬರೇ ಅದು ಪ್ರಸಾರ ಮಾಡುವ ದೃಶ್ಯಗಳನ್ನಷ್ಟೇ ಸಮರ್ಥನೆಯಾಗಿ ಬಳಸಿಕೊಳ್ಳಲು ಇಂದಿನ ದಿನಗಳಲ್ಲಿ ಸಾಧ್ಯವಿಲ್ಲ. ಆದ್ದರಿಂದಲೇ ದಿ ಹಿಂದೂವಿನಂಥ ಪ್ರಮುಖ ಪತ್ರಿಕೆಗಳು ಕುಟುಕು ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದು. 2013 ಡಿಸೆಂಬರ್ 16ರಂದು ಪ್ರಕಟವಾದ ಲೇಖನದಲ್ಲಿ (The Dilemmas of Sting Journalism) ಅದು ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಸ್ಟಿಂಗ್ ಅಪರೇಶನ್‍ಗಳ ಸತ್ಯಾಸತ್ಯತೆಯನ್ನು ನಂಬಲು ಸಾಧ್ಯವಿಲ್ಲವಾದ್ದರಿಂದ ತಾವು ಅದಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ ಎಂದು ಅದು ಹೇಳಿಕೊಂಡಿತ್ತಲ್ಲದೇ ಆಮಿಷವೊಡ್ಡಿ ಬಲೆಗೆ ಸಿಲುಕಿಸುವ ಕಾರ್ಯಾಚರಣೆಗೆ ತನ್ನ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು.
   ನಿಜವಾಗಿ, 1973ರಲ್ಲಿ ಅಮೆರಿಕದಲ್ಲಿ ತೆರೆಕಂಡ The Sting ಎಂಬ ಸಿನಿಮಾದ ಸುಧಾರಿತ ರೂಪವೇ ಸ್ಟಿಂಗ್ ಆಪರೇಶನ್. ಆ ಸಿನಿಮದಲ್ಲಿ ರಾಬರ್ಟ್ ರೆಡ್‍ಫೋರ್ಡ್ ಮತ್ತು ನ್ಯೂಮನ್‍ರು ನಿರ್ವಹಿಸಿದ ಅದೇ ಪಾತ್ರವನ್ನು ಇವತ್ತು ಪತ್ರಕರ್ತರು ಮಾಡುತ್ತಿದ್ದಾರೆ. ಅಮೇರಿಕದಲ್ಲಿ ಈ ಕುಟುಕು ಕಾರ್ಯಾಚರಣೆಯ ದುರ್ಬಳಕೆ ಪ್ರಾರಂಭವಾದಂತೆಯೇ ಅದು ಹಲವು ಕಾನೂನುಗಳನ್ನು ರೂಪಿಸಿತು. ಕಾನೂನು ಜಾರಿ ಮಾಡುವ ಸಂಸ್ಥೆಗಳು ಮತ್ತು ಪೊಲೀಸ್ ಪರವಾನಿಗೆ ಇರುವ ಗೂಢಚರರಿಗೆ ಮಾತ್ರ ಅದು ಸ್ಟಿಂಗ್ ಆಪರೇಶನ್ ನಡೆಸುವುದಕ್ಕೆ ಅನುಮತಿ ನೀಡಿತು. ಪತ್ರಕರ್ತರಿಗೆ ಅವಕಾಶವನ್ನು ನಿರಾಕರಿಸಲಾಯಿತು. ಸ್ವೀಡನ್ ಅಂತೂ ಕುಟುಕು ಕಾರ್ಯಾಚರಣೆಯನ್ನೇ ನಿಷೇಧಿಸಿತು. ಅಷ್ಟಕ್ಕೂ, ಮಾಧ್ಯಮಗಳಿಗೆ ನೀತಿ ಸಂಹಿತೆ (Ethics) ಎಂಬುದು ಇರಬೇಡವೇ? ಮಾಧ್ಯಮ ರಂಗವು ಈ ಎಥಿಕ್ಸ್ ಅನ್ನು ಪಾಲಿಸಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಸಂಸ್ಥೆ ಯಾವುದು? 2001ರಲ್ಲಿ ಆಪರೇಶನ್ ವೆಸ್ಟ್ ಎಂಡ್ ಎಂಬ ಹೆಸರಿನಲ್ಲಿ ಟೆಹಲ್ಕಾವು ಕುಟುಕು ಕಾರ್ಯಾಚರಣೆ ನಡೆಸಿದಾಗ ಈ ಪ್ರಶ್ನೆಯನ್ನು ಹಲವರು ಎತ್ತಿದ್ದರು. ಅದು ತನ್ನ ಕಾರ್ಯಾಚರಣೆಯ ಭಾಗವಾಗಿ ರಕ್ಷಣಾ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ವೇಶ್ಯೆಯರನ್ನೂ ಮದ್ಯವನ್ನೂ ಒದಗಿಸಿತ್ತು. ಆ ಬಳಿಕ ಮುಂಬೈ ಪ್ರೆಸ್ ಕ್ಲಬ್‍ನಲ್ಲಿ ಅದು ಪತ್ರಿಕಾಗೋಷ್ಠಿಯನ್ನು ನಡೆಸಿ ತನ್ನ ಕ್ರಮವನ್ನು ಸಮರ್ಥಿಸಿಯೂ ಕೊಂಡಿತ್ತು. ಆದರೆ, ಟೆಹಲ್ಕಾದ ಕುಟುಕು ಕಾರ್ಯಾಚರಣೆಯು ಎತ್ತಿರುವ ನೈತಿಕ ಪ್ರಶ್ನೆ ಈಗಲೂ ಜೀವಂತವಾಗಿಯೇ ಇದೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವುದಕ್ಕೆ ಮಾಧ್ಯಮರಂಗ ಆ ಮಟ್ಟಕ್ಕೂ ಇಳಿಯ ಬೇಕೇ? ಸಮಾಜವು ನೈತಿಕತೆಯನ್ನು ಬಯಸುವುದು ಬರೇ ರಾಜಕಾರಣಿಗಳಿಂದ ಮಾತ್ರ ಅಲ್ಲವಲ್ಲ, ಪತ್ರಿಕಾ ರಂಗದಲ್ಲೂ ಅದು ಇರಬೇಕಲ್ಲವೇ? ವೇಶ್ಯೆಯರನ್ನು ಒದಗಿಸುವ ಮನಸ್ಥಿತಿ ಯಾವ ಬಗೆಯದು? ಓರ್ವರ ಭ್ರಷ್ಟತನವನ್ನು ಬಯಲಿಗೆಳೆಯುವುದಕ್ಕೆ ಅಂಥದ್ದನ್ನೆಲ್ಲ ಒದಗಿಸಲು ಒಂದು ಮಾಧ್ಯಮ ಸಂಸ್ಥೆ ಸಿದ್ಧವಾಗುತ್ತದೆಂದರೆ, ಆ ಸಂಸ್ಥೆಯನ್ನು ಎಷ್ಟರ ಮಟ್ಟಿಗೆ ನಂಬಬಹುದು? ಇದೊಂದೇ ಅಲ್ಲ, ಇಲ್ಲಿ ಇನ್ನೊಂದು ಅಚ್ಚರಿಯೂ ಇದೆ. ಭಾರತದಲ್ಲಿ ರಾಜಕಾರಣಿಗಳು ಮಾತ್ರವೇ ಸ್ಟಿಂಗ್ ಆಪರೇಶನ್‍ಗೆ ಗುರಿಯಾಗುತ್ತಿರುವುದೇಕೆ? ಭ್ರಷ್ಟಾಚಾರವು ಕೇವಲ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವೇ? ಉದಾರೀಕರಣಕ್ಕೆ ಈ ದೇಶವು ತೆರೆದುಕೊಂಡ ಬಳಿಕ ಒಟ್ಟು ವಾತಾವರಣವೇ ಬದಲಾಗಿ ಬಿಟ್ಟಿದೆ. ಹೆಸರಿಗೆ ಪ್ರಧಾನಿ, ಹಣಕಾಸು ಸಚಿವ, ರಕ್ಷಣಾ ಸಚಿವ.. ಎಂಬೆಲ್ಲಾ ವಿಂಗಡಣೆಗಳಿದ್ದರೂ ಅವೆಲ್ಲವನ್ನೂ ನೋಡಿಕೊಳ್ಳುವುದು ಮತ್ತು ನಿರ್ವಹಿಸುವುದು ಕಾರ್ಪೋರೇಟ್ ದಣಿಗಳು ಎಂಬ ಮಾತುಗಳು ಎಲ್ಲೆಡೆಯೂ ಹರಿದಾಡುತ್ತಿವೆ. ಅಂಬಾನಿ, ಟಾಟಾ, ಅದಾನಿ, ಐಟಿ ಕಂಪೆನಿಗಳಿಗೆ ಸರಕಾರದ ಮೇಲೆ ಹಿಡಿತವಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕುಟುಕು ಕಾರ್ಯಾಚರಣೆ ನಡೆಸುವ ಮಾಧ್ಯಮ ಸಂಸ್ಥೆಗಳು ಈ ಮಂದಿಯ ಕಚೇರಿಯೊಳಗೆ ಈ ವರೆಗೂ ಕ್ಯಾಮರಾ ಇಟ್ಟಿಲ್ಲವಲ್ಲ, ಯಾಕೆ?
   ನಿಜವಾಗಿ, ಯಾರದೋ ಖಾಸಗಿ ಬದುಕಿಗೆ ಕ್ಯಾಮರಾ ಇಡುವುದು ಸುಲಭ. ಮದ್ಯವನ್ನೋ, ಹೆಣ್ಣನ್ನೋ ಅಥವಾ ಇನ್ನೇನನ್ನೋ ಕೊಟ್ಟು ಓರ್ವರನ್ನು ಸಿಲುಕಿಸುವುದು ಇಂದಿನ ದಿನಗಳಲ್ಲಿ ಭಾರೀ ಕಷ್ಟದ ಸಂಗತಿ ಅಲ್ಲ. ಆದರೆ, ಇದು ಸೃಷ್ಟಿ ಮಾಡುವ ನೈತಿಕ ಪ್ರಶ್ನೆ ಬಹಳ ಗಂಭೀರವಾದುದು. ಒಂದು ತಪ್ಪನ್ನು ಬಹಿರಂಗ ಪಡಿಸುವುದಕ್ಕಾಗಿ ತಪ್ಪಾದ ಮಾರ್ಗವನ್ನು ಅವಲಂಭಿಸುವುದು ಸಮರ್ಥನೀಯವೇ? ಹಾಗಂತ, ಮಾಧ್ಯಮ ಸಂಸ್ಥೆಗಳು ಸಾರ್ವಜನಿಕ ಸೊತ್ತೇನೂ ಅಲ್ಲವಲ್ಲ. ಅದರ ಆಡಳಿತ ಮಂಡಳಿ, ಪತ್ರಕರ್ತರು ಮತ್ತು ಇತರರು ಜನರಿಂದ ಓಟು ಪಡೆದು ಆಯ್ಕೆಯಾದವರೂ ಅಲ್ಲ. ಅಲ್ಲಿ ಎಷ್ಟು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿದೆ ಎಂಬುದು ಜನರಿಗೆ ಗೊತ್ತಾಗುವುದೂ ಇಲ್ಲ. ಹೀಗಿರುವಾಗ, ಮಾಧ್ಯಮ ಸಂಸ್ಥೆಯೊಂದು ತನಿಖಾ ವರದಿಯನ್ನೋ, ಸವಿೂಕ್ಷೆಯನ್ನೋ ಅಥವಾ ಸ್ಟಿಂಗ್ ಅಪರೇಶನ್ ಅನ್ನೋ ಪ್ರಸಾರ ಮಾಡಿದ ಕೂಡಲೇ ಅದನ್ನು ನಾವು ನಂಬಲೇ ಬೇಕಾದ ಅಗತ್ಯ ಏನಿದೆ? ಒಂದು ವೇಳೆ, ಜನರ ವಿಶ್ವಾಸಕ್ಕೆ ಪಾತ್ರವಾದ ತಜ್ಞರ ತಂಡದ ತಪಾಸಣೆಯ ಬಳಿಕವೇ ಮಾಧ್ಯಮ ಸಂಸ್ಥೆಯೊಂದು ತನ್ನ ಪ್ರತಿ ಕಾರ್ಯಾಚರಣೆಯನ್ನೂ ಪ್ರಸಾರ ಮಾಡುವುದಾದರೆ ಅದು ಬೇರೆ ವಿಷಯ. ಆದರೆ ಇಂಥ ಪಾರದರ್ಶಕತೆಯನ್ನು ಇವತ್ತು ಯಾವ ಸಂಸ್ಥೆ ಅಳವಡಿಸಿಕೊಂಡಿದೆ? ಮಾಧ್ಯಮ ರಂಗದಲ್ಲಿರುವ ಪ್ರಾಮಾಣಿಕ ಸಂಸ್ಥೆಗಳನ್ನು ಗೌರವಿಸುತ್ತಲೇ ಈ ಅನುಮಾನವನ್ನು ವ್ಯಕ್ತಪಡಿಸಬೇಕಾಗಿದೆ.
   ಕಳೆದ ವಾರ T V 9 ಮತ್ತು ಸಚಿವ ಡಿ.ಕೆ. ಶಿವಕುಮಾರ್ ನಡುವೆ ಸ್ಟಿಂಗ್ ಅಪರೇಶನ್‍ನ ಕುರಿತಂತೆ ನಡೆದಿರುವ ವಿವಾದವು ಇಂಥದ್ದೊಂದು ಬರಹಕ್ಕೆ ಪ್ರೇರೇಪಿಸಿತು.

No comments:

Post a Comment