Thursday, March 6, 2014

ಸೇನೆಯ ಸಾಮರ್ಥ್ಯವನ್ನೇ ಪ್ರಶ್ನಿಸುವ ಈ ಅಭಿಮಾನಿಗಳಿಂದ ಏನನ್ನು ನಿರೀಕ್ಷಿಸುತ್ತೀರಿ?

    ಫ್ರ್ರಾಂಕೆನ್‍ಸ್ಪೈನ್ಸ್ ಮಾನ್‍ಸ್ಟರ್
 ಇಂಥದ್ದೊಂದು ಪದ ಹುಟ್ಟಿಕೊಂಡದ್ದೇ 1818ರಲ್ಲಿ. ಕತೆ, ಕಾದಂಬರಿ, ಸಿನಿಮಾ, ನಾಟಕಗಳು ತೀರಾ ಅಪರೂಪವಾಗಿದ್ದ ಮತ್ತು ಜನಸಾಮಾನ್ಯರ ಕೈಗೆ ಎಟುಕದಷ್ಟು ದೂರವಾಗಿದ್ದ ಆ ಕಾಲದಲ್ಲಿ ಬ್ರಿಟನ್ನಿನ 18ರ ಯುವತಿ ಮೇರಿ ಶೆಲ್ಲಿ ಎಂಬಾಕೆ ಕಾದಂಬರಿ ಬರೆಯಲು ಪ್ರಾರಂಭಿಸಿದರು. ವಿಲಕ್ಷಣ ವಿಜ್ಞಾನಿ ವಿಕ್ಟರ್ ಫ್ರಾಂಕೆನ್‍ಸ್ಪೈನ್‍ನನ್ನು ಕೇಂದ್ರವಾಗಿಟ್ಟು ಆಕೆ ಬರೆಯ ತೊಡಗಿದಳು. ವೈಜ್ಞಾನಿಕ ಸಂಶೋಧನೆಗಳ ಕಲ್ಪಿತ ಕಥೆಯನ್ನು ವಸ್ತುವಾಗಿಟ್ಟುಕೊಂಡು ಪ್ರಕಟವಾದ ಮೊದಲ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಕಾದಂಬರಿಯಲ್ಲಿ ನಾಯಕ ಫ್ರಾಂಕೆನ್‍ಸ್ಪೈನನು ಪ್ರಯೋಗಾಲಯದಲ್ಲಿ ಒಂದು ಭೀಕರ ಜೀವಿಯನ್ನು ಸೃಷ್ಟಿಸುತ್ತಾನೆ. ಆದರೆ ಆ ಜೀವಿಗೆ ಆತ ಹೆಸರಿಡುವುದಿಲ್ಲ. ಕ್ರಮೇಣ ಆ ಜೀವಿ ಆತನ ಇಚ್ಛೆಗೆ ವಿರುದ್ಧವಾಗಿ ವರ್ತಿಸ ತೊಡಗುತ್ತದೆ. ಆತ ಮತ್ತು ಆ ಜೀವಿ ಮುಖಾಮುಖಿಯಾಗುವುದು, ಮಾತಿನ ವಿನಿಮಯ ನಡೆಯುವುದು, ಸಿಟ್ಟು, ಹತಾಶೆಗಳು ಕಾಣಿಸಿಕೊಳ್ಳುವುದು... ಎಲ್ಲವೂ ನಡೆಯುತ್ತದೆ. ಇಂಥ ಸಂದರ್ಭಗಳಲ್ಲಿ ಆತ ಈ ಜೀವಿಯನ್ನು ಪಿಶಾಚಿ (Fiend), ಪಾಪಿ (Wretch), ಪೆಡಂಭೂತ (Monster), ಕೆಟ್ಟ ಹುಳ (Insect) ಪ್ರಾಣಿ.. ಎಂದೆಲ್ಲಾ ವಿವಿಧ ಹೆಸರುಗಳಿಂದ ಕರೆಯುತ್ತಾನೆ. ಒಂದು ರೀತಿಯ ಅಸಹನೆ, ಕಿಡಿಕಾರುವಿಕೆಗಳು ಆ ಎಲ್ಲ ಮಾತುಗಳಲ್ಲಿ ವ್ಯಕ್ತವಾಗುತ್ತಿರುತ್ತವೆ. 1818ರಲ್ಲಿ ಫ್ರಾಂಕೆನ್‍ಸ್ಪೈನ್ ಎಂಬ ಹೆಸರಲ್ಲಿ ಪ್ರಕಟವಾದ ಈ ಕಾದಂಬರಿ 1823ರಲ್ಲಿ ಮರು ಮುದ್ರಣಗೊಳ್ಳುತ್ತದೆ. ಮಾತ್ರವಲ್ಲ, ಕ್ರಮೇಣ ಫ್ರಾಂಕೆನ್‍ಸ್ಪೈನ್ಸ್ ಮಾನ್‍ಸ್ಟರ್ (ಫ್ರಾಂಕೆನ್‍ಸ್ಪೈನ್‍ನ ಪೆಡಂಭೂತ) ಎಂಬ ಹೊಸ ಪದ ಪ್ರಯೋಗವೇ ಹುಟ್ಟಿಕೊಳ್ಳುತ್ತದೆ. ತಮಗಾಗದವರನ್ನು ಹೆಸರೆತ್ತದೇ ನಿಂದನೀಯ ಪದಗಳ ಮೂಲಕ ಸಂಬೋಧಿಸುವ ಶೈಲಿಗೆ ಫ್ರಾಂಕೆನ್‍ಸ್ಪೈನ್ಸ್ ಮಾನ್‍ಸ್ಟರ್ ಎನ್ನುವ ಪದಪ್ರಯೋಗ ರೂಢಿಗೆ ಬರುತ್ತದೆ.
   ಅಷ್ಟಕ್ಕೂ, 1818ರ ಕಾದಂಬರಿಯಲ್ಲಿ ಕಾಣಿಸಿಕೊಂಡ ಫ್ರಾಂಕೆನ್‍ಸ್ಪೈನ್ಸ್ ಮಾನ್‍ಸ್ಟರ್ ಶೈಲಿಯನ್ನು ಈ 2014ರಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ.
 ಸಿಕ್ಕುಲರ್, ಲದ್ದಿಜೀವಿ, ದೇಶದ್ರೋಹಿಗಳು, ಹಿಂದೂ ವಿರೋಧಿ, ಜಿಹಾದಿಸ್ಟ್, ತಾಲಿಬಾನಿಗಳು, ಮತಾಂಧರು, ಪಾಕಿಗಳು, ಅಭಿವೃದ್ಧಿ ವಿರೋಧಿಗಳು.. ಇಂಥ ಪದಪ್ರಯೋಗಗಳು ಫೇಸ್‍ಬುಕ್, ಟ್ವೀಟರ್ ಗಳಂಥ ಸೋಶಿಯಲ್ ವಿೂಡಿಯಾಗಳಲ್ಲಿ ಇವತ್ತು ತುಂಬಿಕೊಂಡಿವೆ. ತಮ್ಮ ವಿಚಾರಧಾರೆಗೆ ಸರಿಹೊಂದದ ಸ್ಟೇಟಸ್ ಅನ್ನೋ ಲೇಖನವನ್ನೋ ಪೋಸ್ಟ್ ಮಾಡಿದವರನ್ನು ಒಂದೇ ಮಾತಿಗೆ ತೆಗಳುವ, ಸಾರಾಸಗಟು ನಿಂದಿಸುವ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ನರೇಂದ್ರ ಮೋದಿಯವರನ್ನು ವಿಮರ್ಶಿಸುವ ಲೇಖನಗಳು ಪ್ರಕಟವಾದರೆ, ಇಂಥ ಪದಗಳ ಬಳಕೆ ಅತಿ ಎನ್ನಿಸುವಷ್ಟು ಜೋರಾಗಿರುತ್ತದೆ. ಅಂಥ ಲೇಖನಗಳನ್ನು ಬರೆದವ ಮುಸ್ಲಿಮ್ ಹೆಸರಿನವನಾದರೆ ತಕ್ಷಣ- ಜಿಹಾದಿ, ಹಿಂದೂ ವಿರೋಧಿ, ತಾಲಿಬಾನಿ, ಮತಾಂಧ.. ಎಂದೆಲ್ಲಾ ಕರೆಯಲಾಗುತ್ತದೆ. ಆತನ ಧರ್ಮದ ಬಗ್ಗೆ, ಅದನ್ನು ಅನುಸರಿಸುವವರ ದೌರ್ಬಲ್ಯಗಳ ಬಗ್ಗೆ, ಕಾನೂನು ಕಟ್ಟಳೆಗಳ ಕುರಿತಂತೆ ಹೀನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಲೇಖನವು ಮೋದಿ ಎಂಬ ಓರ್ವ ಅಪ್ಪಟ ರಾಜಕೀಯ ನಾಯಕನ ಕುರಿತಂತೆ ಆಗಿದ್ದರೂ ಕಾಮೆಂಟ್‍ಗಳಂತೂ ಬರೆದವನ ಧರ್ಮದ ಸುತ್ತ ಕೇಂದ್ರಿತವಾಗಿರುತ್ತದೆ. ಮೋದಿಯನ್ನು ವಿಮರ್ಶಿಸುವುದೆಂದರೆ ಹಿಂದೂ ಧರ್ಮವನ್ನು ವಿಮರ್ಶಿಸಿದಂತೆ, ಮೋದಿಯನ್ನು ಟೀಕಿಸುವುದೆಂದರೆ, ಹಿಂದೂ ಧರ್ಮವನ್ನು ಅವಹೇಳನಗೊಳಿಸಿದಂತೆ.. ಎಂಬಂಥ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತದೆ. ಒಂದು ವೇಳೆ ಮೋದಿಯನ್ನು ವಿಮರ್ಶಿಸುವ ಲೇಖನ ಬರೆದವರು ಹಿಂದೂ ಹೆಸರಿನವರಾದರೆ ತಕ್ಷಣ- ಈ ಮಂದಿ ಸಿಕ್ಕುಲರಿಸ್ಟ್, ಲದ್ದಿಜೀವಿ, ನಕ್ಸಲ್ ಬೆಂಬಲಿಗರು.. ಎಂದೆಲ್ಲಾ ನಿಂದಿಸತೊಡಗುತ್ತಾರೆ. ಹಿಂದೂ ವಿರೋಧಿ ಅನ್ನುತ್ತಾರೆ. ಹೀಗೆ ಮೋದಿಯನ್ನು ವಿಮರ್ಶಾತೀತ ಎಂಬ ರೀತಿಯಲ್ಲಿ ಬಿಂಬಿಸುತ್ತಾ, ಫ್ರಾಂಕೆನ್‍ಸ್ಟೈನ್ಸ್ ಮಾನ್‍ಸ್ಟರ್ ಶೈಲಿಯ ಪದಪ್ರಯೋಗದೊಂದಿಗೆ ಮುಗಿಬೀಳುತ್ತಾರೆ. ನಿಜವಾಗಿ, ಇಂಥ ಬೆಳವಣಿಗೆಯನ್ನು ತೀರಾ ನಿರ್ಲಕ್ಷಿಸಿ ಬಿಡುವಂತೆಯೂ ಇಲ್ಲ. ಕೇವಲ ಓರ್ವ ರಾಜಕಾರಣಿಯಷ್ಟೇ ಆಗಿರುವ ಮೋದಿಯ ಸುತ್ತ ಇಂಥದ್ದೊಂದು ಭ್ರಮೆಯನ್ನು ಹುಟ್ಟುಹಾಕುವುದರಿಂದ ಉಂಟಾಗಬಹುದಾದ ದೂರಗಾಮಿ ಪರಿಣಾಮಗಳೇನು? ಮೋದಿ ಏನು ಮಾಡಿದರೂ, ಏನು ಹೇಳಿದರೂ ಸರಿ ಎಂಬೊಂದು ಮನಸ್ಥಿತಿ ಅಂತಿಮವಾಗಿ ಯಾವ ಬಗೆಯ ವಾತಾವರಣವನ್ನು ಉಂಟು ಮಾಡೀತು? ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಬರೇ ರಾಜಕೀಯ ಪಕ್ಷಗಳು ಮಾತ್ರ. ಅದರಾಚೆಗೆ ಈ ಪಕ್ಷಗಳಲ್ಲಿ ದೇವಾಂಶ ಸಂಭೂತರೋ, ಪ್ರವಾದಿಗಳೋ ಯಾರೂ ಇಲ್ಲ. ಭ್ರಷ್ಟಾಚಾರಗಳಲ್ಲಿ ಎರಡೂ ಪಕ್ಷಗಳು ಹೆಸರು ಕೆಡಿಸಿಕೊಂಡಿವೆ. ನೈತಿಕತೆ, ಪ್ರಾಮಾಣಿಕತೆ, ಸಜ್ಜನಿಕೆ.. ಮುಂತಾದುವುಗಳ ಉಲ್ಲಂಘನೆಗಳಲ್ಲಿ ಎರಡೂ ಪಕ್ಷಗಳು ಪರಸ್ಪರ ಸ್ಪರ್ಧಿಸುತ್ತಿವೆ. ಗೋಧ್ರಾದಲ್ಲಿ ರೈಲು ದಹನಗೊಂಡದ್ದು ಮತ್ತು ಆ ಬಳಿಕ ಹತ್ಯಾಕಾಂಡ ನಡೆದದ್ದೆಲ್ಲ ಮೋದಿ ಆಡಳಿತದಲ್ಲೇ. ಅದಾನಿ ಕಂಪೆನಿಗೆ 1 ರೂಪಾಯಿಗೆ ಒಂದು ಎಕರೆ ಭೂಮಿ ಕೊಟ್ಟದ್ದೂ ಮೋದಿಯೇ. 10 ವರ್ಷಗಳ ಕಾಲ ಲೋಕಾಯುಕ್ತರನ್ನು ನೇಮಕಗೊಳಿಸದೇ ಗುಜರಾತ್ ಲೋಕಾಯುಕ್ತ ಇಲಾಖೆಯನ್ನೇ ನಿಶ್ಶಸ್ತ್ರಗೊಳಿಸಿದ್ದೂ ಅವರೇ. ಗೋಧ್ರಾ ಹತ್ಯಾಕಾಂಡ, ನಕಲಿ ಎನ್‍ಕೌಂಟರ್ ಸಹಿತ ಹಲವು ಗುರುತರ ಆರೋಪಗಳನ್ನು ಅವರು ಕಳೆದ ಒಂದು ದಶಕದ ಅವಧಿಯಲ್ಲಿ ಎದುರಿಸುತ್ತಲೇ ಬಂದಿದ್ದಾರೆ. ಇದು ಫ್ರಾಂಕೆನ್‍ಸ್ಟೈನ್ಸ್ ಮಾನ್‍ಸ್ಟರ್ ಶೈಲಿಯಲ್ಲಿ ಮಾತಾಡುವ ಅವರ ಬೆಂಬಲಿಗರಿಗೂ ಗೊತ್ತು. ಹೀಗಿರುವಾಗ ಮೋದಿ ಪ್ರಶ್ನಾತೀತರಾಗುವುದು ಹೇಗೆ? ಅವರನ್ನು ವಿಮರ್ಶೆಗೊಡ್ಡುವ ಲೇಖನಗಳು ಹೆಚ್ಚೆಚ್ಚು ಪ್ರಕಟವಾಗುವುದರಿಂದ ಅವರ ವರ್ಚಸ್ಸಿಗೆ ಧಕ್ಕೆಯಾಗಬಹುದು ಅನ್ನುವ ಭೀತಿಯ ಹೊರತು ಇಂಥ ನಿಂದನೆಗೆ ಬೇರೆ ಯಾವ ಕಾರಣಗಳಿವೆ?
 ಕಳೆದ ವರ್ಷ ಉತ್ತರಾಖಂಡದಲ್ಲಿ ನಡೆದ ಪ್ರವಾಹದ ಸಂದರ್ಭದಲ್ಲಿ ಮೋದಿ ಬೆಂಬಲಿಗರು ಭ್ರಮೆಯ ದೊಡ್ಡದೊಂದು ಅಲೆಯನ್ನೇ ಸೃಷ್ಟಿಸಿದ್ದರು. ಉತ್ತರಾಖಂಡದಲ್ಲಿ ಸಿಲುಕಿರುವ ಗುಜರಾತ್‍ನ ತೀರ್ಥಯಾತ್ರಿಗಳನ್ನು ಹೇಗೆ ಬಚಾವ್ ಮಾಡ ಲಾಗುತ್ತಿದೆಯೆಂಬುದನ್ನು ಅವರು ಸೋಶಿಯಲ್ ವಿೂಡಿಯಾಗಳಲ್ಲಿ ಹೇಳತೊಡಗಿದರು. ಕ್ಷಣಕ್ಷಣಕ್ಕೂ ಹೊಸ ಹೊಸ ಸುದ್ದಿ. ಮೋದಿಯವರು ಸಂತ್ರಸ್ತ ಶಿಬಿರವನ್ನು ಪ್ರಾರಂಭಿಸಿದ್ದು, ಡೆಹ್ರಾಡೂನ್‍ನಿಂದ ಭಕ್ತರು ಸುರಕ್ಷಿತವಾಗಿ ಹಿಂತಿರುಗಲು ವ್ಯವಸ್ಥೆ ಮಾಡಿದ್ದು, ವಿಶೇಷ ರೈಲು ಓಡಿಸುವಂತೆ ರೈಲ್ವೆ ಮಂತ್ರಿಗೆ ಮೋದಿ ಪತ್ರ ಬರೆದಿದ್ದು, ತನ್ನ ಪ್ರಮುಖ ಅಧಿಕಾರಿಗಳನ್ನು ಸಂತ್ರಸ್ತರ ಯೋಗಕ್ಷೇಮ ನೋಡಿಕೊಳ್ಳಲು ನೇಮಿಸಿದ್ದು.. ಮುಂತಾದುವುಗಳನ್ನು ಯಾವ ಬಗೆಯಲ್ಲಿ ಹೇಳಲಾಗುತ್ತಿತ್ತೆಂದರೆ, ಇನ್ನಾರೂ ಇಂಥ ಉಪಕ್ರಮಗಳನ್ನು ಕೈಗೊಂಡೇ ಇಲ್ಲವೇನೋ ಅನ್ನುವ ಧಾಟಿಯಲ್ಲಿ. ಆದರೆ 2013 ಜೂನ್ 23ರ rediff.com ಪ್ರಕಟಿಸಿದ ವರದಿಯನ್ನು ನೋಡಿದರೆ, ಇಂಥ ಪರಿಹಾರ ಕ್ರಮಗಳನ್ನು ಇತರ ರಾಜ್ಯಗಳೂ ಕೈಗೊಂಡಿರುವುದು ಸ್ಪಷ್ಟವಾಗುತ್ತದೆ. ಇವುಗಳಿಗಿಂತಲೂ ಭಯಾನಕ ಉತ್ಪ್ರೇಕ್ಷೆ ಯಾವುದೆಂದರೆ, ಮೋದಿ ಬರೇ ಎರಡೇ ದಿನಗಳಲ್ಲಿ 15 ಸಾವಿರ ಗುಜರಾತಿ ಸಂತ್ರಸ್ತರನ್ನು ರಕ್ಷಿಸಿ ಗುಜರಾತ್‍ಗೆ ತಲುಪಿಸಿದ್ದಾರೆ ಅನ್ನುವುದು. ರಾಷ್ಟ್ರೀಯ ಪತ್ರಿಕೆಗಳು ಒಂದು ಕ್ಷಣ ಇಂಥ ಪ್ರಚಾರಗಳನ್ನು ನಂಬಿಬಿಟ್ಟವು. ಮೋದಿಯನ್ನು ರಾಂಬೋ  ಎಂದು ಅವರ ಅಭಿಮಾನಿಗಳು ಕರೆಯುವಷ್ಟರ ಮಟ್ಟಿಗೆ ಇಂಥ ಭ್ರಮೆಗಳು ಪ್ರಭಾವಿಸಿಬಿಟ್ಟವು. ಒಂದು ಪ್ರಮುಖ ಆಂಗ್ಲ ಪತ್ರಿಕೆಯ ವೆಬ್‍ಸೈಟ್‍ನಲ್ಲಿ ನ್ಯೂಜೆರ್ಸಿಯ ರೋಹಿತ್ ಸಿಂಗ್ ಅನ್ನುವವ ಹೀಗೆ ಟ್ವೀಟ್ ಮಾಡಿದ,
     In 2 days 15000 Gujaratis were identified, airlifted out of the jungle and taken back to Gujarat.  What was our army doing there? Shameful of our whole army could not do this and Modi could get it done in 2 days. Learn from Narendra Modi. - ಕೇವಲ ಎರಡೇ ದಿನಗಳಲ್ಲಿ 15 ಸಾವಿರ ಗುಜರಾತಿಯರನ್ನು ಪತ್ತೆಹಚ್ಚಿ ಉತ್ತರಾಖಂಡದ ಕಾಡಿನಿಂದ ಅವರನ್ನು ವಿಮಾನದಲ್ಲಿ ಸುರಕ್ಷಿತವಾಗಿ ಗುಜರಾತ್‍ಗೆ ಹಿಂತಿರುಗಿಸಲಾಗಿದೆ. ಹಾಗಾದರೆ ನಮ್ಮ ಸೇನೆ ಏನು ಮಾಡುತ್ತಿತ್ತು? ನಮ್ಮ ಇಡೀ ಸೇನೆಗೆ ಮಾಡಲಾಗದಿರುವುದನ್ನು ಮೋದಿ ಕೇವಲ ಎರಡೇ ದಿನಗಳಲ್ಲಿ ಮಾಡಿ ಮುಗಿಸಿದರು. ಇದು ನಮ್ಮ ಸೇನೆಗೆ ನಾಚಿಕೆಗೇಡು. ಮೋದಿಯಿಂದ ಕಲಿಯಿರಿ...'
 ಎರಡು ದಿನಗಳಲ್ಲಿ 15 ಸಾವಿರ ಮಂದಿಯನ್ನು ಉತ್ತರಾಖಂಡ ದಿಂದ ಗುಜರಾತ್‍ಗೆ ರವಾನಿಸಲು ಸಾಧ್ಯವೇ ಎಂಬುದನ್ನು ತರ್ಕಕ್ಕೆ ಒಳಪಡಿಸದೆಯೇ, ‘ಮೋದಿಗೆ ಏನೂ ಸಾಧ್ಯ' ಎಂಬ ಭ್ರಮೆಯಲ್ಲಿ ತೇಲಿದವರ ಸ್ಥಿತಿ ಇದು. ಆ ಬಳಿಕ ಈ ಪ್ರಚಾರ ಎಷ್ಟು ದೊಡ್ಡ ಸುಳ್ಳು ಎಂಬುದು ಬಹಿರಂಗವಾಯಿತು. ನಿಜವಾಗಿ, ಒಂದು ಬಗೆಯ ಅಂಧಾಭಿಮಾನವನ್ನು ಮೋದಿಯ ಸುತ್ತ ಇವತ್ತು ಹರಡಿಬಿಡಲಾಗಿದೆ. ಈ ದೇಶದ ಪ್ರಧಾನಿಯಾಗುವವ ರಾಂಬೋ  ಥರ ಇರಬೇಕು, ಸೂಪರ್ ಹ್ಯೂಮನ್ ಆಗಿರಬೇಕು, ಜೋರು ಮಾತು, ವ್ಯಂಗ್ಯ ಮತ್ತು ಇರಿಯುವ ಪದಗಳು ಗೊತ್ತಿರಬೇಕು.. ಎಂಬೆಲ್ಲಾ ಭ್ರಮೆಗಳನ್ನು ತೇಲಿಸಿ ಬಿಡಲಾಗಿದೆ. ಕಡಿಮೆ ಮಾತಾಡುವ ವ್ಯಕ್ತಿ ನಾಲಾಯಕ್ ಎಂಬುದಾಗಿ ಮನಮೋಹನ್ ಸಿಂಗ್‍ರನ್ನು ತೋರಿಸಿ ಹೇಳಲಾಗುತ್ತಿದೆ. ಮೋದಿಯ ಸುತ್ತ ಹೀಗೆ ಹರಿಬಿಡಲಾಗಿರುವ ಸುಳ್ಳಿನ ಪೊರೆಯನ್ನು ಯಾರಾದರೂ ಕಳಚಲು ಪ್ರಯತ್ನಿಸಿದರೆ, ತಕ್ಷಣ ಅವರನ್ನು ಫ್ರಾಂಕೆನ್‍ಸ್ಟೈನ್ಸ್ ಮಾನ್‍ಸ್ಟರ್ ಶೈಲಿಯಲ್ಲಿ ನಿಂದಿಸಲಾಗುತ್ತದೆ. ಅವರು ಮತಾಂಧರು, ಲದ್ದಿಜೀವಿಗಳು ಆಗಿಬಿಡುತ್ತಾರೆ. ಮೋದಿಯ ಸುತ್ತ ಆರೋಗ್ಯಕರ ಚರ್ಚೆ ನಡೆಯುವುದನ್ನೇ ಇಷ್ಟಪಡದ ಅಂಧಾಭಿಮಾನಿಗಳ ಒಂದು ತಂಡ ಸಕ್ರಿಯವಾಗಿ ಕಾರ್ಯನಿರತವಾಗಿದೆ. ಗೂಗಲ್‍ನಲ್ಲಿ,  NaMo for PM - ಎಂದು ಟೈಪಿಸಿ ಹುಡುಕಿದರೆ ಮೋದಿಯ ನೂರಾರು ಫ್ಯಾನ್ ಕ್ಲಬ್‍ಗಳು ಸಿಗುತ್ತವೆ. ಅಲ್ಲಿ ನಡೆಯುವ ಚರ್ಚೆಗಳಲ್ಲಿ, ‘ಫಿನಿಶ್ ಪಾಕಿಸ್ತಾನ್’, ‘ಮುಸ್ಲಿಮರಿಗೆ ಒಂದು ಪಾಠ ಕಲಿಸಿ’ ಮತ್ತು ‘ಸೋನಿಯಾರನ್ನು ಇಟಲಿಗೆ ಅಟ್ಟಿಬಿಡಿ’, ‘ಪ್ರಧಾನಿ ಮೋದಿ’, ‘ಮೋಡಿಫೈಯಿಂಗ್ ಇಂಡಿಯಾ..’ ಮುಂತಾದ ಒಕ್ಕಣೆಗಳೇ ಗೋಚರಿಸುತ್ತವೆ. ಯಾರನ್ನೋ ಮುಗಿಸಲು, ಯಾರ ಮೇಲೆಯೋ ಏರಿ ಹೋಗಲು, ಯಾರಿಗೋ ಪಾಠ ಕಲಿಸಲು.. ಹೀಗೆ ಹೊಡಿ-ಬಡಿ ವ್ಯಕ್ತಿತ್ವದ ಮೋದಿ ಇವತ್ತು ಅವರ ಅಭಿಮಾನಿ ವರ್ಗಗಳಲ್ಲಿ ನೆಲೆಯೂರಿದ್ದಾರೆ. ಆದ್ದರಿಂದ ಅವರ ಭಾಷೆಯೂ ಹಾಗೆಯೇ ಇದೆ. ಈ ಬಗೆಯ ಭ್ರಮೆಯನ್ನು ಪ್ರಶ್ನಿಸುವವರು ಮತ್ತು ಅದನ್ನು ವಿಮರ್ಶೆಗೊಡ್ಡುವವರನ್ನು ಈ ಮಂದಿ ಅದೇ ಉದ್ವೇಗದಿಂದ ಎದುರಿಸುತ್ತಿದ್ದಾರೆ. ನಿಂದನೆಯ ಮಾತುಗಳ ಮೂಲಕ ಅಂಥ ವಿಮರ್ಶೆಗಳಿಗೆ ತಡೆಯೊಡ್ಡಲು ಯತ್ನಿಸುತ್ತಾರೆ. ಈ ದೇಶದ ಸೇನೆಯ ಸಾಮರ್ಥ್ಯವನ್ನೇ ಪ್ರಶ್ನಿಸುವಷ್ಟು ಈ ಅಂಧಾಭಿಮಾನ ಬೆಳೆದಿರುತ್ತದೆ. ಬಹುಶಃ,
 ಅಂತಿಮವಾಗಿ ಮೋದಿಯ ಸೋಲಿಗೆ ಈ ಅಂಧಾಭಿಮಾನಿಗಳೇ ಕಾರಣಕರ್ತರಾಗುತ್ತಾರೇನೋ..

No comments:

Post a Comment